ನನ್ನ ಪುಟಗಳು

13 ಸೆಪ್ಟೆಂಬರ್ 2019

ನಾನಿನ್ನೂ ಬದುಕೇ ಇದ್ದೇನೆ..!


ನೀವು ನನ್ನನ್ನು ಬಿಟ್ಟುಹೋದ
ಆಸ್ಪತ್ರೆಯ ಕಾರ್ಪೋಷನ್
ಕಸದ ತೊಟ್ಟಿಯ ಬಳಿ
ಅವರಿವರು ಬಿಸಾಡಿದ
ಅಳಸಿದ ಅನ್ನವನ್ನುಂಡು
ಊರಿನ ಕಲ್ಮಶವನ್ನೆಲ್ಲಾ ಹೊತ್ತು
ತರುವ ಮೋರಿಯ ನೀರುಕುಡಿದು
ಬದುಕಿದ್ದೇನೆ, ಬದುಕುತ್ತಲೇ ಇದ್ದೇನೆ

ನನ್ನೆಡೆಗೆ ತಿರುಗಿ ನೋಡುವ
ಮೊಗಗಳಲ್ಲಿ ಅಪ್ಪ-ಅಮ್ಮನ
ನೋಟಗಳಿಗೆ ಪರಿತಪಿಸುತ್ತಿದ್ದೇನೆ.
ತುಂಡು ಬ್ರೆಡ್ಡು ಕೊಡುವ ಕೈಗಳನ್ನು
ಕನಿಕರದಿ ಕಾಸು ಕೊಡುವ ಕೈಗಳನ್ನು
ಮುಟ್ಟಿ ಮುಟ್ಟಿ ನೋಡುತ್ತಿದ್ದೇನೆ
ಕಳೆದುಕೊಂಡ ನನ್ನವರ ಗುರುತು ಹಿಡಿಯಲು.

ಈ ಉಸಿರು ನಿಂತು
ದೇಹ ಹುಳು ತಿಂದು
ಮಣ್ಣಾಗುವವರೆಗೂ ಈ ಸಣ್ಣ
ಜೀವವನ್ನು ಬಿಗಿಹಿಡಿದು
ಇಲ್ಲಿಯೇ ಕಾಯುತ್ತಿರುವೆನು
ಅಷ್ಟರಲ್ಲಿ ಒಮ್ಮೆಯಾದರೂ
ನನ್ನ ನೆನಪಾದರೆ ಬಂದು ಬಿಡಿ
          -- ಡಾ. ಮಂಜಣ್ಣ ಮಾರಮ್ಮನಹಳ್ಳಿ

                   ಮಾರಮ್ಮನಹಳ್ಳಿ, ಕೊಂಡ್ಲಹಳ್ಳಿ (ಪೋ),  
                   ಮೊಳಕಾಲ್ಮೂರು (ತಾ), ಚಿತ್ರದುರ್ಗ (ಜಿ)





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ