ನನ್ನ ಪುಟಗಳು

04 ನವೆಂಬರ್ 2017

ಅಕ್ಷರ ಜಾತ್ರೆ

ಸುಖನಿದ್ರೆಯೊಳು ನಿದ್ರಿಸುತಿರಲು ನಸುಕಿನ ಕನಸೊಳು
 ಅಕ್ಷರ ಜಾತ್ರೆಯಲಿ ತಾಯಿ ಭುವನೇಶ್ವರಿಯ ನುಡಿತೇರು
ವೈಭವದೋಳು ಭರದಿಂ ಸಾಗುತ್ತಿತ್ತು//1//

ನುಡಿತೇರನೆಳೆಯುವಾಸೆಯಿಂದ ಕರಚಾಚಿದೆನಾನಾಗ
 ಎನ್ನೊಳಮನಸು ಕೇಳಿತು
 ಶ್ರೀವಿಜಯ ಬಸವ ಮುದ್ದಣ್ಣ ಕುವೆಂಪು ಬರಗೂರರಂತೆ
ಆರ ತರದಿ ನೀ ಎಳೆವೆಯೆಂದು?
ಶ್ರೀವಿಜಯನೆಂತೆಳೆಯಲು ಅಮೋಘವರ್ಷನ ಆಶ್ರಯವಿಲ್ಲ
 ಬಸವರೆಂತೆಳೆಯಲು ಶರಣರ ಸಂಗವಿಲ್ಲ
ಮುದ್ದಣ್ಣರಂತೆಳೆಯಲು ಮನೋರಮೆಯಂತ ಮಡದಿಯಿಲ್ಲ
ಕುವೆಂಪುರಂತೆಳೆಯಲು ವಿಶ್ವ ಬ್ರಾತೃತ್ವವಿಲ್ಲ
ಇನ್ನು ಬರಗೂರರಂತೆಳೆಯಲು ಬಂಡಾಯದ ಗುಂಡಿಗೆ ಎನಗಿಲ್ಲ
ನುಡಿತೇರನೆಳೆವಶಕ್ತಿ ಎನಗಿಲ್ಲ//2 ॥

ಅಷ್ಟಭುಜಗಳಿಗೊಂದರಂತೆ
ಅಷ್ಟಜ್ಞಾನಪೀಠಗಳಿಂದ ಶೋಭಿಸುತ್ತಿರುವ
ಕನ್ನಡಾಂಬೆಯ ಭವ್ಯ ಮೂರ್ತಿಗೆ ಪೂಜಿಪಲೊರಟಾಗ
ಮತ್ತೆ ಎನ ಒಳ ಮನಸೇ ಕೇಳಿತು
ಪಂಪ ಕೇಶಿರಾಜ ನಾಗವರ್ಮ ಕುಮಾರವ್ಯಾಸ
ಆರ ತೆರದಿ ನೀ ಪೂಜಿಪೆಯೆಂದು ಪಂಪನ ತೆರದಿ ಪೂಜಿಪಲು ನಾ ಕವಿಯು ಅಲ್ಲ
ಕಲಿಯೂ ಅಲ್ಲ ಕೇಶಿರಾಜನ ತೆರದಿ ಸ್ವರಾಭಿಷೇಕ ಮಾಡಲು ವ್ಯಾಕರಣ ತಿಳಿದಿಲ್ಲ
ನಾಗವರ್ಮನ ತೆರದಿ ಛಂದೋಮಾಲೆಯಾಕಲು ನಿಯಮಗಳು ಗೊತ್ತಿಲ್ಲ
ಕುಮಾರವ್ಯಾಸನಂತೆ ಹಾಡಿ ಹೊಗಳಲು ಗಾಯನಕಲೆ ತಿಳಿದಿಲ್ಲ//3//

ತೃಣಸಮಾನ ಜ್ಞಾನ ತುಂಬಿಹ
ಎನಮಸ್ತಿಷ್ಕದೊಳು ಸರ್ವಜ್ಞನಂತೆ
ನಿನ ಮೂರ್ತಿಗೆ ಪೂಜಿಪ ಪುಣ್ಯ ಎನಗಿಲ್ಲವೆಂದು ಕೊರಗುತಿರಲು
ನೆರೆದಿದ್ದ ಜನಸ್ತೊಮ ಜೈಕಾರವಾಕಿದಾಗ
ಕನಸೆಂಬುದ ಮರೆತು ಎನಗರಿಯದೆ ನಾ ಕೂಗಿದ್ದೆ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ//4//

ರಚನೆ:- ಕಾಂತರಾಜು ಬುಕ್ಕಪಟ್ಟಣ 
ಪ.ಪ್ರಾ.ಶಿಕ್ಷಕ 
ಉ.ಸ.ಹಿ.ಪ್ರಾ.ಪಾಠಶಾಲೆ, ಮಧ್ಯವೆಂಕಟಾಪುರ 
ಕೊರಟಗೆರೆ ತಾ. ಮಧುಗಿರಿ ಶೈ.ಜಿಲ್ಲೆ


*********

ಮಾನವ ಕೃತ್ಯ

ಮೂಡಣದಿ ಬಾನು ರಂಗೇರುತಿರುವಾಗ
ಅರುಣನ ದರ್ಶನವು ಸೂರ್ಯನ ಜೊತೆಗಾಗ
ಜಗವೆಲ್ಲ ಎಚ್ಚೆತ್ತು ಚೈತನ್ಯ ಮೂಡುವುದು
ಬರಿಗಣ್ಣಿಗಿದುವೆ ಬರಿಯ ಬೆಳಕಾಗಿಹುದು ||ಪ||

ಮೌನದಿಂ ಜೀವಿಗಳು ಎಚ್ಚತ್ತುಕೊಂಡಿರಲು
ಪಕ್ಷಿಗಳ ಇಂಚರವು ಸುಪ್ರಭಾತವಾಗಿರಲು
ಮಾನವನ ದಿನಚರಿಯು ಮನದಿ ಬುಗಿಲೆದ್ದಿಹುದು
ಇಗೋ ನೋಡಿ ಈಗ ಸೂರ್ಯೋದಯವಾಗಿಹುದು ||1||

ರಾತ್ರಿ ಮೌನದಿ ಕಳೆದು ಚೀರಾಟದೆಡೆಗಳಲಿ
ಸಿಲುಕಿಹುದು ಈ ಜಗವು ಮತ್ತೆ ಗಲಭೆಯಲಿ
ಮಾನವನ ಕೃತ್ಯಕಿದು ಕೊನೆಯಿಲ್ಲದಿಂದಿಲ್ಲ
ಪಕ್ಷಿಗಳ ಜೀವನವು ಇದಕು ಲೇಸು ಸಲ್ಲ ||2||

ಕರ್ತೃ:-
ಚರಣ್ ರಾಜ್ ಯಡಾಡಿ
8904502305
ಶಾನುಭೋಗರಬೆಟ್ಟು ಯಡಾಡಿ ಮತ್ಯಾಡಿ ಅಂಚೆ
 ಕುಂದಾಪುರ ತಾಲೂಕು 
ಉಡುಪಿ ಜಿಲ್ಲೆ 576222
charanrajk.30@gmail.com 


*****