ನನ್ನ ಪುಟಗಳು

31 ಡಿಸೆಂಬರ್ 2021

ವಡ್ಡಾರಾಧನೆ - ಸಿರಿದಿಣ್ಣ ಭಟ್ಟಾರರ ಕಥೆ | Vaddaradhane-Siridinna bhatarara kathe

 ಸಿರಿದಿಣ್ಣ ಭಟ್ಟಾರರ ಕಥೆಯಂ ಪೇೞ್ವೆಂ :

        ಗಾಹೆ || ಸೀದೇಣ ಪುವ್ವವೇರಿಯ ದೇವೇಣ ವಿಗುವ್ವಿದೇಣ ಘೋರೇಣ
                    ಸಂಸಿತ್ತೋ ಸಿರಿದಿಣ್ಣೋ ಪಡಿವಣ್ಣೋ ಉತ್ತಮಂ ಅಟ್ಠಂ ||

*ಸೀದೇಣ – ಅಯ್ಕಿಲಿಂದಂ, ಪುವ್ವವೇರಿಯ ದೇವೇಣ – ಮುನ್ನಿನ ಭವದ ಪಗೆವನಪ್ಪ ದೇವನಿಂದಂ, ವಿಗುವ್ವಿದೇಣ – ವಿಗುರ್ವಿಸೆಪಟ್ಟುದಱಂದಂ, ಘೋರೇಣ – ಆದಮಾನುಂ ಕಡಿದಪ್ಪುದಱಂದಂ, ಸಂಸಿತ್ತೋ – ತಿಳಿಯಪಟ್ಟೊನಾಗಿ, ಸಿರಿದಿಣ್ಣೋ – ಸಿರಿದಿಣ್ಣನೆಂಬ ಭಟಾರಕಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನಚಾರಿತ್ರಾರಾಧನೆಯಂ*

    ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳಂಗಮೆಂಬುದು ನಾಡಲ್ಲಿ ಚಂಪಾನಗರಮೆಂಬುದು ಪೊೞಲದನಾಳ್ವೊನಗಮ ಸಮ್ಯಗ್ದೃಷ್ಟಿಶ್ರಾವಕಂ ಸಿಂಹರಥನೆಂಬೊನರಸಂ ಮತ್ತಿತ್ತ ಮಗಧೆಯೆಂಬುದು ನಾಡಲ್ಲಿ ಸಾಕೇತವೆಂಬುದದನಾಳ್ವೊಂ ಶ್ರಾವಕಂ ಸುಮಂತನೆಂಬೊನರಸಂ ಮತ್ತಿತ್ತ ಮಂಗಳಾವತಿಯೆಂಬುದು ನಾಡಲ್ಲಿ ಇಳಾಪಟ್ಟಣಮೆಂಬುದು ಪೊೞಲದನಾಳ್ವೊನಗಮ ಸಮ್ಯಗ್ ದೃಷ್ಟಿ ಶ್ರಾವಕಂ ಜಿತಶತ್ರುವೆಂಬೊನರಸನಾತನರಸಿ ಇಳಾ ಮಹಾದೇವಿಯೆಂಬೊಳಾ ಅರಸನ ದಾದಿ ವಿನಯಮತಿಯೆಂಬೊಳಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಕಾಲಂ ಸಲೆ ಘಾಲ್ಗುನ ನಂದೀಶ್ವರಂ ಬಂದೊಡೆ ಮೂವರುಂ ಮಂಡಲಿಕರುಂ ತಂತಮ್ಮ ಪೊೞಲ್ಗಳೊಳೆಂಟು ದಿವಸಮರ್ಹದ್ಭಟ್ಟಾರಕರ್ಗೆ ಮಹಾಮಹಿಮೆಗಳಂ ಮಾಡಲ್ ತೊಡಗಿದರಿತ್ತ ಜಿತಶತ್ರುವುಂ ತನ್ನ ಪೊೞಲೊಳೆಂಟು ದಿವಸಂ ಜಿನಮಹಾಮಹಿಮೆಯಂ ಮಾಡಲ್ ತೊಡಗಿದನ್

        ಸಿರಿದಿಣ್ಣ ಭಟಾರರ ಕಥೆಯನ್ನು ಹೇಳುವೆನು – (ಸಿರಿದಿಣ್ಣನೆಂಬ ಋಷಿಯು ಹಿಂದಿನ ಜನ್ಮದ ಶತ್ರುವಾದ ವ್ಯಂತರದೇವನಿಂದ ಮಾಯೆಯ ಸೃಷ್ಟಿಯಾದ ಕಠಿನವಾದ ಶೀತದಿಂದ ಕೂಡಿದ ಗಾಳಿ ಮಳೆಗಳಿಂದ ಸೇಚಿಸಲ್ಪಟ್ಟವನಾದರೂ ಶ್ರೇಷ್ಠವಾದ ದರ್ಶನ ಜ್ಞಾನಚಾರಿತ್ರಗಳ ಆರಾಧನೆಯನ್ನು ಮಾಡಿ ಮೋಕ್ಷ ಹೊಂದಿದನು.) ಅದು ಹೇಗೆಂದರೆ : – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಅಂಗ ಎಂಬ ನಾಡಿದೆ. ಅಲ್ಲಿ ಚಂಪಾನಗರವೆಂಬ ಪಟ್ಟಣವನ್ನು ಸಮ್ಯಕ್ ದೃಷ್ಟಿಯನ್ನು ಪಡೆದ ಜೈನಗೃಹಸ್ಥನಾದ ಸಿಂಹರಥನೆಂಬ ರಾಜನು ಆಳುತ್ತಿದ್ದನು. ಇನ್ನೊಂದೆಡೆ ಮಗಧೆಯೆಂಬ ನಾಡಿನಲ್ಲಿ ಸಾಕೇತವೆಂಬ ಪಟ್ಟಣವಿದೆ. ಅದನ್ನು ಶ್ರಾವಕನಾದ ಸುಮಂತನೆಂಬ ರಾಜನು ಆಳುತ್ತಿದ್ದನು. ಇತ್ತ ಇನ್ನೊಂದೆಡೆ ಮಂಗಳಾವತಿ ಎಂಬ ನಾಡಿನಲ್ಲಿ ಇಳಾ ಎಂಬ ಪಟ್ಟಣವಿದೆ. ಅದನ್ನು ಸಮ್ಯಗ್ ದೃಷ್ಟಿಯನ್ನು ಸಂಪಾದಿಸಿರತಕ್ಕ ಶ್ರಾವಕನಾದ ಜಿತಶತ್ರು ಎಂಬ ರಾಜನು ಆಳುತ್ತಿದ್ದನು. ಜಿತಶತ್ರುವಿನ ಹೆಂಡತಿ ಇಳಾ ಮಹಾದೇವಿ ಎಂಬವಳು. ಆ ಅರಸನಿಗೆ ವಿನಯಮತಿ ಎಂಬ ಒಬ್ಬಳು ದಾದಿ ಇದ್ದಳು. ಅಂತು ಅವರೆಲ್ಲರೂ ತಮ್ಮ ಇಷ್ಟ ವಿಷಯದ ಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗೆಯೇ ಕಾಲ ಕಳೆಯಿತು. ಒಮ್ಮೆ ಫಾಲ್ಗುಣ ಮಾಸದ ನಂದೀಶ್ವರ ಹಬ್ಬ ಬಂತು. ಆಗ ಮೂವರು ಮಾಂಡಲಿಕ ರಾಜರೂ ತಮ್ಮ ತಮ್ಮ ಪಟ್ಟಣಗಳಲ್ಲಿ ಎಂಟು ದಿವಸವೂ ಜೈನ ತೀರ್ಥಂಕರರಿಗೆ ಮಹತ್ತಾದ ಉತ್ಸವಗಳನ್ನು ಮಾಡತೊಡಗಿದರು. ಇತ್ತ ಜಿತಶತ್ರುವೂ ತನ್ನ ಪಟ್ಟಣದಲ್ಲಿ ಎಂಟು ದಿವಸವೂ ಜಿನ ಮಹೋತ್ಸವಗಳನ್ನು ಮಾಡಲು ಉಪಕ್ರಮಿಸಿದನು. 

        ತನ ದಾದಿ ವಿನಯಮತಿಯೆಂಬೊಳ್ ಗುಜ್ಜಿ ವಿರಳದಂತೆ ಆದಮಾನುಂ ವಿರೂಪೆ ಪೇಸೆಪಡುವಳ್ ನೋಡಿದ ಜನಕ್ಕೆ ಭಯಮಂ ಪಡೆವೊಳ್ ನಾಣಿಸೆಪಡುವೊಳಂತಪ್ಪಾಕೆ ಅರಸನೊಡೆನೆ ಜಿನಮಹಾಮಹಿಮೆಯಂ ನೋಡಲ್ ಪೋಪಾಗಳರಸನೆಂದೊನಬ್ಬಾ ನೀಮುಂ ಮಹಿಮೆಗೆ ಬರಲ್ವೇಡ ನಿಮ್ಮಂ ಕಂಡು ಮಹಿಮೆಗೆ ವಂದ ನೆರವಿಯಂಜುಗುಂ ಪೇಸುಗುಮಮಂಗಳಮೆಂಗುಮದಱಂ ನೀಮುಂ ಮನೆಯೊಳಿರಿಮೆಂದಿರಿಸಿ ತಾನುಂ ಸಹಸ್ರಕೂಟಮೆಂಬ ಚೈತ್ಯಾಲಯಕ್ಕೆ ಮಹಾಮಹಿಮೆಯಂ ಮಾಡಲ್ ಪೋದನ್ ಇತ್ತ ದಾದಿಯುಂ ಮಗನ ಮಾಡುವ ಮಹಾಮಹಿಮೆಯಂ ನೋಡಲ್ ಪೆತ್ತೆನಿಲ್ಲೆಂದುಬ್ಬೆಗಂ ಬಟ್ಟು ತನ್ನಂ ತಾಂ ಪೞದು ನಂದೀಶ್ವರದೆಂಟು ದಿವಸಮಭಿಷೇಕಮುಮರ್ಚನೆಯುಮಷ್ಟೋಪ ವಾಸಮುಮಂ ಮಾಡಿ ದೇವರಂ ಬಂದಿಸುತ್ತಂ ಪೂಜಿಸುತ್ತಿರ್ದಳಿತ್ತರಸನುಮೆಂಟು ದಿವಸಂ ಮಹಾಮಹಿಮೆಯಭಿಷೇಕ ಮುಮಂ ಮಾಡಿ ಸವೆಯಿಸಿದ ಬೞಕ್ಕ ದಾದಿಗೆ ಬೞಯಟ್ಟಿವರಿಸಿ ಇಂತೆಂದನಬ್ಬಾ ನೀಮಿಂತೇಕೆ ಕರಂ ಬಡಪಟ್ಟಿರ್ದ್ದಿರೆಂದೊಡೆ ದಾದಿಯಿಂತೆಂದಳ್ ಮಗನೆ ಎಂಟು ದಿವಸಸಮುಪವಾಸಂ ಗೆಯ್ದು ಮನೆಯೊಳ್ ದೇವರ್ಗ್ಗಭಿಷೇಕಮುಂ ಪೂಜೆಯುಮಂ ಮಾಡಿಸುತ್ತಿರ್ದೆನೆಂದೊಡೆ ಅದಂ ಕೇಳ್ದಾದಮಾನುಮರಸನೊಸೆದು ಬಡವಾದುದುಮಂ ಕಂಡು ಕರುಣಿಸಿ ಅಬ್ಬಾ ನಿಮಗೊಸೆದೆಂ ವರಮಂ ಬೇಡಿಕೊಳ್ಳಿಮೆಂದೊಡಾಕೆಯಿಂತೆಂದಳ್ ಮಗನೆ ನೀನೆನಗೊಸೆದೆಯಪ್ಪೊಡೆನಗೆಂದು ಮತ್ತಮೆಂಟುದಿವಸಂ ದೇವರ್ಗ್ಗೆ ಮಹಾಮಹಿಮೆಯಂ ಮಾಡೆಂದು ಪೇೞ್ದೊಡಂತೆಗೆಯ್ವೆನೆಂದರಸಂ

    ಅವನ ದಾದಿಯಾದ ವಿನಯಮತಿಯೆಂಬವಳು, ಕುಬ್ಜೆಯೂ ವಿರಳವಾದ ಹಲ್ಲುಗಳುಳ್ಳವಳೂ ಅತಿಶಯವಾಗಿ ಕೆಟ್ಟರೂಪಿನವಳೂ ಆಗಿ ಇತರರಿಂದ ಹೇಸಲ್ಪಡುವವಳಾಗಿದ್ದಳು. ನೋಡಿದ ಜನರಿಗೆ ಹೆದರಿಕೆಯುಂಟುಮಾಡುವವಳಾಗಿದ್ದಳು, ನಾಚಿಕೆಯುಂಟು ಮಾಡುವವಳಾಗಿದ್ದಳು. ಅಂತಹ ಆಕೆ ಅರಸನೊಡನೆ ಜಿನೇಂದ್ರನ ಮಹೋತ್ಸವವನ್ನು ನೋಡಲು ಹೋಗುತ್ತಿರುವಾಗ ಅರಸನು ಅವಳೊಡನೆ ಹೀಗೆಂದನು – “ಅಮ್ಮಾ ನೀವು ಉತ್ಸವಕ್ಕೆ ಬರುವುದು ಬೇಡ. ಉತ್ಸವಕ್ಕೆ ಬಂದ ಜನಸಂದಣಿ ನಿಮ್ಮನ್ನು ಕಂಡು ಹೆದರೀತು, ಹೇಸಿಗೆ ಪಟ್ಟೀತು, ಅಶುಭವೆಂದು ಹೇಳೀತು. ಆದುದರಿಂದ ನೀವು ಮನೆಯೊಳಗೆ ಇದ್ದು ಬಿಡಿ.“ ಹೀಗೆ ಹೇಳಿ ಅವಳನ್ನು ಮನೆಯಲ್ಲೇ ನಿಲ್ಲಿಸಿ ರಾಜನು ಮಹಾಉತ್ಸವವನ್ನು ನೆರವೇರಿಸುವುದಕ್ಕಾಗಿ ಸಹಸ್ರಕೂಟವೆಂಬ ಚೈತ್ಯಾಲಯಕ್ಕೆ (ಜಿನಾಲಯಕ್ಕೆ) ತೆರಳಿದನು. ಇತ್ತದಾದಿಯು ತನ್ನ ಮಗನು ಮಾಡುವ ಮಹೋತ್ಸವವನ್ನು ನೋಡಲಾರದೆ ಹೋದೆನೆಂದು ತನ್ನನ್ನು ತಾನೇ ನಿಂದಿಸಿದಳು. ನಂದೀಶ್ವರ ಹಬ್ಬದ ಎಂಟು ದಿವಸವೂ ಅಭಿಷೇಕ, ಅರ್ಚನೆ, ಎಂಟು ದಿನಗಳ ಉಪವಾಸ – ಇವನ್ನೆಲ್ಲ ಮಾಡಿ, ದೇವರಿಗೆ ವಂದನೆ ಸಲ್ಲಿಸುತ, ಪೂಜಿಸುತ್ತ ಇದ್ದಳು. ಇತ್ತ ರಾಜನು ಎಂಟು ದಿವಸವೂ ಮಹಾಉತ್ಸವದ ಅಭಿಷೇಕವನ್ನು ಮಾಡಿ ಮುಗಿಸಿದ ಮೇಲೆ ದಾದಿಗೆ ಹೇಳಿ ಕಳುಹಿಸಿ, ಆಕೆಯನ್ನು ಬರಮಾಡಿ ಹೀಗೆಂದನು – “ನೀವು ಹೀಗೆ ಏಕೆ ಬಹಳ ಬಡವಾಗಿದ್ದೀರಿ?“ ಆಗ ಅದಕ್ಕೆ ದಾದಿಯು ರಾಜನೊಡನೆ – “ಮಗನೇ, ನಾನು ಎಂಟು ದಿವಸ ಉಪವಾಸ ಮಾಡಿ, ಮನೆಯಲ್ಲಿಯೇ ದೇವರಿಗೆ ಅಭಿಷೇಕವನ್ನೂ ಪೂಜೆಯನ್ನೂ ಮಾಡಿಸುತ್ತ ಇದ್ದೆನು“ ಎಂದಳು. ರಾಜನು ಅದನ್ನು ಕೇಳಿ ಅತಿಶಯವಾಗಿ ಪ್ರೀತಿ ತಾಳಿದನು. ಆಕೆ ಬಡಕಲಾದುದನ್ನು ಕಂಡು ಕರುಣೆಗೊಂಡು – “ಅಮ್ಮಾ ನಾನು ನಿಮಗೆ ಪ್ರೀತಿಗೊಂಡೆನು ( ಮೆಚ್ಚಿದೆನು). ಇಷ್ಟಾರ್ಥವನ್ನು ಬೇಡಿಕೊಳ್ಳಿ“ ಎಂದನು. ಆಗ ಆಕೆ ರಾಜನೊಡನೆ – “ಮಗನೆ, ನೀನು ನನಗೆ ಮೆಚ್ಚಿದೆಯಾದರೆ, ನನಗಾಗಿಯೇ ಇನ್ನು ಎಂಟು ದಿವಸ ದೇವರಿಗೆ ಮಹೋತ್ಸವವನ್ನು ಮಾಡು“ ಎಂದು ಹೇಳಿದಳು. “ ಹಾಗೆಯೇ ಮಾಡುವೆನು“ ಎಂದು ರಾಜನು 

  ದಾದಿಕಾರಣಮಾಗಿ ಮತ್ತಮೆಂಟು ದಿವಸಂ ಮಹಾಮಹಿಮೆಯಂ ಮಾಡಲ್ ತೊಡಂಗಿದೊಡೆನ್ನ ಮಹಾಮಹಿಮೆಯೊಳೆಂತುಣ್ಬೆನೆಂದು ಪಾರಿಸದೆ ಮತ್ತಮಷ್ಟೋಪ ವಾಸಂಗೆಯ್ದು ಪಾರಣೆಯ ದಿವಸದಿಂದಾಕೆಯ ಶ್ರಮಮುಂ ಸೇದೆಯುಮಂ ಹಿಮವಂತ ಪರ್ವತದ ಪದ್ಮೆಯೆಂಬ ಕೊಳದೊಳ್ ವಸಿಯಿಸಿರ್ಪ ಶ್ರೀಯಾದೇವತೆ ಕಂಡಱದು ತನ್ನ ಪರಿವಾರ ಸಹಿತಂ ವಿಮಾನಂಗಳನೇಱ ಮಹಾವಿಭೂತಿಯಿಂ ಬಂದು ಸ್ವರ್ಣಪೀಠದೊಳ್ ದಾದಿಯನಿರಿಸಿ ಸುಗಂಧೋದಕಗಳಿಂ ತೀವದ ಸುವರ್ಣಕಲಶಗಳಿಂದಮಭಿಷೇಕಂಗೆಯ್ದು ನಮೇರು ಮಂದಾರ ಸಂತಾನಕ ಪಾರಿಯಾತ್ರಕಮೆಂಬ ಪೂಗಳಂ ಸುರಿದು ಕಮ್ಮಿತಪ್ಪ ತಂಬೆಲರ್ ವೀಸಿ ದೇವದುಂದುಭಿಗಳಂ ಬಾಜಿಸಿ ಶ್ರೀಯಾದೇವತೆ ತನ್ನಾವಾಸಕ್ಕೆ ವೋದಳ್ ಇತ್ತ ದಾದಿಯುಂ ಶ್ರೀಯಾದೇವತೆಯ ವಿಭೂತಿಯಂ ಕಂಡು ನಿದಾನಂಗೆಯ್ದು ಕೆಲವು ದಿವಸದಿಂ ಕಾಲಂಗೆಯ್ದೀ ಜಂಬೂದ್ವೀಪದ ಹಿಮವಂತ ಪರ್ವತದ ಪದ್ಮೆಯೆಂಬ ಕೊಳದೊಳ್ ಶ್ರೀಯಾದೇವತೆಯಾಗಿ ಪುಟ್ಟಿ ಇಳಾಪಟ್ಟಣಕ್ಕೆ ಬಂದಾ ಪೊೞಲ ಜನಂಗಳ್ಗೆಲ್ಲಮಿರುಳ್ ಕನಸಿನೊಳಾಂ ಶ್ರೀಯಾದೇವತೆಯೆಂ ನಿಮ್ಮ ಪೊೞಲ್ಗೆವಂದೆನೆನಗೆ ಶ್ರೀ ವಿಹಾರಮಂ ಮಾಡಿ ಎನ್ನ ಪ್ರತಿಮೆಯನಿಟ್ಟು ಪೂಜಿಸುತ್ತುಮೋಲಗಿಸುತ್ತುಮಿರಿಮಾನುಂ ನಿಮಗೆ ಬೇಡಿದ ವರವನೀವೆನೆಂದು ಕನಸಿನೊಳ್ ತೋಱಿದೊಡೆ 

        ಹೇಳಿ ಆ ದಾದಿಯ ಕಾರಣದಿಂದಲೇ ಮತ್ತೆ ಎಂಟು ದಿವಸ ಮಹೋತ್ಸವವನ್ನು ಆಚರಿಸಲು ತೊಡಗಿದನು. ವಿನಯಮತಿ ದಾದಿಯು ನನ್ನ ಪರವಾಗಿರುವ ಮಹೋತ್ಸವದಲ್ಲಿ ನಾನು ಹೇಗೆ ಊಟ ಮಾಡುವೆನು? ಎಂದು ಉಪವಾಸಾಂತ್ಯದ ಪಾರಣೆಯನ್ನು ಆಚರಿಸಲಿಲ್ಲ; ಮತ್ತೂ ಎಂಟು ದಿವಸ ಉಪವಾಸ ಮಾಡಿದಳು. ಪಾರಣೆಯ ದಿವಸ ಅವಳ ಶ್ರಮವನ್ನೂ ಆಯಾಸವನ್ನೂ ಹಿಮಾಲಯ ಪರ್ವತದ ಪದ್ಮ ಎಂಬ ಕೊಳದಲ್ಲಿ ವಾಸಿಸತಕ್ಕ ಶ್ರೀಯಾದೇವತೆ ಕಂಡು, ತಿಳಿದುಕೊಂಡಳು. ಆಕೆ ತನ್ನ ಪರಿವಾರದವರನ್ನು ಕೂಡಿಕೊಂಡು ವಿಮಾನಗಳನ್ನು ಹತ್ತಿ ಬಹಳ ವೈಭವದಿಂದ ಬಂದು ದಾದಿಯನ್ನು ಚಿನ್ನದ ಆಸನದಲ್ಲಿ ಕುಳ್ಳರಿಸಿ ಸುವಾಸನೆಯುಳ್ಳ ನೀರಿನಿಂದ ತುಂಬಿದ ಚಿನ್ನದ ಕಲಶಗಳಿಂದ ಅಭಿಷೇಕ ಮಾಡಿ ಸುರಪುನ್ನಾಗ, ಮಂದಾರ, ಸಂತಾನಕ, ಪಾರಿಯಾತ್ರಕ ಎಂಬ ದಿವ್ಯ ಪುಷ್ಪಗಳನ್ನು ಮಳೆಗರೆದಳು. ಪರಿಮಳಯುಕ್ತವಾದ ತಂಗಾಳಿಯನ್ನು ಬೀಸಿದಳು. ದೇವಲೋಕದ ಭೇರಿಗಳನ್ನು ಬಾಜಿಸಿ (ಬಜಾವಣೆ ಮಾಡಿ) ಶ್ರೀಯಾದೇವತೆ ತನ್ನ ವಾಸಸ್ಥಾನಕ್ಕೆ ತೆರಳಿದಳು. ಇತ್ತ ದಾದಿ (ವಿನಯಮತಿ) ಶ್ರೀಯಾದೇವತೆಯ ವೈಭವವನ್ನು ಕಂಡು ನಿಶ್ಚಯವನ್ನು ಮಾಡಿ ಕೆಲವು ದಿವಸಗಳಲ್ಲಿ ಕಾಲವಾದಳು. ಆಕೆ ಈ ಜಂಬೂದ್ವೀಪದ ಹಿಮಾಲಯ ಪರ್ವತದ ಪದ್ಮೆ ಎಂಬ ಕೊಳದಲ್ಲಿ ಶ್ರೀಯಾದೇವತೆಯಾಗಿ ಹುಟ್ಟಿ, ಇಳಾ ಪಟ್ಟಣಕ್ಕೆ ಬಂದು ಆ ಪಟ್ಟಣದ ಜನರಿಗೆಲ್ಲ ರಾತ್ರಿಯಲ್ಲಿ ಕನಸಿನಲ್ಲಿ ಕಾಣಿಸಿಕೊಂಡು ಹೀಗೆಂದಳು – “ನಾನು ಶ್ರೀಯಾದೇವತೆಯಾಗಿರುವೆನು ನಿಮ್ಮ ಪಟ್ಟಣಕ್ಕೆ ಬಂದಿರುವೆನು. ನನಗೆ ಶ್ರೀವಿಹಾರ ಎಂಬ ದೇವಾಲಯವನ್ನು ಮಾಡಿ, ನನ್ನ ಪ್ರತಿಮೆಯನ್ನು ಇಟ್ಟುಕೊಂಡು ಪೂಜಿಸುತ್ತ ಸೇವೆ ಮಾಡುತ್ತ ನೀವಿರಬೇಕು. ನಾನು ನಿಮಗೆ ಬೇಡಿದ ಇಷ್ಟಾರ್ಥವನ್ನು ಕೊಡುವೆನು ” ಈ ರೀತಿಯಾಗಿ ಅವಳು ಕನಸಿನಲ್ಲಿ ಕಾಣಿಸಿದಳು.

            ಪೊೞಲ ಜನಮೆಲ್ಲಂ ನೆರೆದು ಶ್ರೀವಿಹಾರಮಂ ಮಾಡಿ ಶ್ರೀಮಾದೇವತೆಯ ಪ್ರತಿಮೆಯಂ ಸ್ಥಾಪಿಸಿ ಮಹಿಮೆಯಂ ಮಾಡುತ್ತಂ ಪೂಜಿಸುತ್ತಮೋಲಗಿಸುತ್ತ ಮಿರ್ಪುದುಂ ಕಂಡಿಳಾಮಹಾದೇವಿ ಅಪುತ್ರಿಕೆ ಮಕ್ಕಳಂ ಬೇಡಿ ಪನ್ನೆರಡು ವರುಷಂ ಬರೆಗಂ ನಿಚ್ಚಲುಂ ಶ್ರೀವಿಹಾರಕ್ಕೆ ವೋಗಿ ಶ್ರೀಯಾದೇವತೆಯನರ್ಚಿಸುತ್ತಂ ಪೂಜಿಸುತ್ತಂ ಮಹಾಮಹಿಮೆಯಂ ಮಾಡುತ್ತಂ ಆಡುತ್ತಂ ಪಾಡುತ್ತಮೋಲಗಿಸುತ್ತಮಿರೆಯದಂ ಕಂಡಱದು ಶ್ರೀಯಾದೇವತೆ ಪೂರ್ವವಿದೇಹಕ್ಕೆ ಪೋಗಿ ಸ್ವಯಂಪ್ರಭರೆಂಬ ತೀರ್ಥಂಕರ ಪರಮದೇವರಂ ಕಂಡೆಱಗಿ ಪೊಡೆಮಟ್ಟಿಂತೆಂದು ಬೆಸಗೊಂಡಳ್ ಭಟಾರಾ ಎನ್ನ ಪೊೞಲೊಳಿರ್ಪ ಇಳಾಮಹಾದೇವಿಗೆ ಮಕ್ಕಳೇನಕ್ಕುಮೊ ಎಂದು ಬೆಸಗೊಂಡೊಡೆ ಭಟಾರರಿಂತೆಂದರ್ ಸ್ವರ್ಗದಿಂದೆ ಬೞಬಂದಿಲ್ಲಿ ಓರ್ವ ದೇವಂ ಇಳಾಮಹಾದೇವಿಗೆ ಮಗನಾಗಿ ಪುಟ್ಟಿಗುಮೆಂದೊಡದಂ ಕೇಳ್ದು ಭಟ್ಟಾರರ್ಗ್ಗೆಱಗಿ ಪೊಡೆವಟ್ಟು ಇಳಾಪಟ್ಟಣಕ್ಕೆ ಪೋಗಿ ಇಳಾಮಹಾದೇವಿಗೆ ಕನಸಿನೊಳಿಂತೆಂದು ಪೇೞ್ದಳಿಳಾಮಹಾದೇವಿ ನಿನಗೆನ್ನ ಪ್ರಸಾದದೆ ಸೌಧರ್ಮಕಲ್ಪದೊಳ್ ಮೇಘಮಾಲಮೆಂಬ ವಿಮಾನದಿಂ ಬೞ ವರ್ಧಮಾನನೆಂಬ ದೇವಂ ಬಂದು ನಿನಗೆ ಮಗನಾಗಿ ಪುಟ್ಟುಗುಮೆಂದು ಶ್ರೀಯಾದೇವತೆ ಪೇೞ್ದೊಡಿಳಾ ಮಹಾದೇವಿಯಾದಮಾನುಂ ಸಂತಸಂಬಟ್ಟಿರ್ದು ಕೆಲವು ದಿವಸದಿಂ ಗರ್ಭಮಾಗಿ ನವಮಾಸಂ ನೆಱೆದು ಮಗನಂ ಪೆತ್ತೊಡೆ 

         ಇದರಿಂದ ಪಟ್ಟಣದ ಜನರೆಲ್ಲರೂ ಒಟ್ಟಾಗಿ ಶ್ರೀವಿಹಾರವೆಂಬ ದೇವಾಲಯವನ್ನು ನಿರ್ಮಿಸಿದರು. ಅಲ್ಲಿ ಶ್ರೀಯಾದೇವತೆಯ ಪ್ರತಿಮೆಯನ್ನು ಪ್ರತಿಷ್ಠೆಮಾಡಿ, ಉತ್ಸವವನ್ನು ಮಾಡುತ್ತ ಪೂಜಿಸುತ್ತ ಸೇವೆಗಳನ್ನು ಜರುಗಿಸುತ್ತ ಇದ್ದರು. ಮಕ್ಕಳಿಲ್ಲದವಳಾದ ಇಳಾ ಮಹಾದೇವಿ ಇದನ್ನು ಕಂಡು ತನಗೆ ಮಕ್ಕಳಾಗಲಿ ಎಂದು ಪ್ರಾರ್ಥಿಸುತ್ತ, ಹನ್ನೆರಡು ವರ್ಷಗಳವರೆಗೆ ನಿತ್ಯವೂ ಶ್ರೀವಿಹಾರಕ್ಕೆ ಹೋಗಿ ಶ್ರೀಯಾದೇವತೆಯನ್ನು ಅರ್ಚನೆ ಮಾಡುತ್ತ ಪೂಜಿಸುತ್ತ ದೊಡ್ಡ ಉತ್ಸವವನ್ನು ಮಾಡುತ್ತ ಆಡುತ್ತ ಹಾಡುತ್ತ ಸೇವೆಸಲ್ಲಿಸುತ್ತಿದ್ದಳು. ಶ್ರೀಯಾದೇವತೆ ಅದನ್ನು ನೋಡಿ ತಿಳಿದು ಪೂರ್ವವಿದೇಹ ರಾಜ್ಯಕ್ಕೆ ಹೋಗಿ ಸ್ವಯಂಪ್ರಭರೆಂಬ ತೀರ್ಥಂಕರ ದೇವರನ್ನು ಕಂಡು ವಂದಿಸಿ ಸಾಷ್ಟಾಂಗ ಪ್ರಣಾಮ ಮಾಡಿ ಹೀಗೆ ಕೇಳಿದಳು – “ಪೂಜ್ಯರೇ, ನನ್ನ ಪಟ್ಟಣದಲ್ಲಿರುವ ಇಳಾ ಮಹಾದೇವಿಗೆ ಮಕ್ಕಳಾಗುವರೇ ಏನು? ” ಹೀಗೆ ಕೇಳಿದಾಗ ಋಷಿಗಳು – “ಒಬ್ಬ ದೇವನು ಸ್ವರ್ಗದಿಂದ ಜಾರಿ ಬಂದು ಇಲ್ಲಿ ಇಳಾಮಹಾದೇವಿಗೆ ಮಗನಾಗಿ ಜನಿಸುವನು” ಎಂದು ಹೇಳಿದರು. ಅದನ್ನು ಕೇಳಿ ಋಷಿಗಳಿಗೆ ನಮಿಸಿ ಅಡ್ಡಬಿದ್ದು ಶ್ರೀಯಾದೇವತೆ ಇಳಾ ಪಟ್ಟಣಕ್ಕೆ ಹೋದಳು. ಇಳಾಮಹಾದೇವಿಗೆ ಕನಸಿನಲ್ಲಿ ಕಾಣಿಸಿ ಹೀಗೆಂದಳು – “ ಎಲೈ ಇಳಾ ಮಹಾದೇವಿ, ನನ್ನ ಅನುಗ್ರಹದಿಂದ ವರ್ಧಮಾನನೆಂಬ ದೇವನು ಸೌಧರ್ಮ ಎಂಬ ಸ್ವರ್ಗದಲ್ಲಿ ಮೇಘಮಾಲ ಎಂಬ ವಿಮಾನದಿಂದಿಳಿದು ಬಂದು ನಿನಗೆ ಮಗನಾಗಿ ಜನಿಸುವನು ” – ಹೀಗೆಂದು ಶ್ರೀಯಾದೇವತೆ ಹೇಳಿದಾಗ ಇಳಾಮಹಾದೇವಿ ಅತಿಶಯವಾದ ಸಂತೋಷವನ್ನು ತಾಳಿದಳು. ಹೀಗೆಯೇ ಇದ್ದು ಕೆಲವು ದಿನಗಳನಂತರ ಅವಳಿಗೆ ಗರ್ಭವುಂಟಾಯಿತು. ಒಂಬತ್ತು ತಿಂಗಳು ತುಂಬಿ ಗಂಡುಮಗುವನ್ನು ಹೆತ್ತಳು. 

            ಶ್ರೀಯಾದೇವತೆ ಮಗನಂ ಕೊಟ್ಟಳೆಂದು ಕೂಸಿಂಗೆ ತಾಯುಂ ತಂದೆಯುಂ ನಂಟರುಮೆಲ್ಲಂ ನೆರೆದು ಸಿರಿದಿಣ್ಣನೆಂದು ಪೆಸರನಿಟ್ಟರ್ ಆತನುಂ ಶುಕ್ಲಪಕ್ಷದ ಚಂದ್ರನಂತೆ ಕ್ರಮಕ್ರಮದಿಂ ಬಳೆದು ನವಯೌವನನುಂ ಸರ್ವಕಳಾ ಕುಶಳನುಮಾಗಿರ್ಪನ್ನೆಗಮಿತ್ತ ಸಾಕೇತ ಪುರಾಪತಿಯಪ್ಪ ಸುಮಂತನೆಂಬರಸನ ಮಗಳ್ ಸುಮತಿಯೆಂಬೊಳಾಕೆಯ ಸ್ವಯಂವರಕ್ಕರಸುಮಕ್ಕಳೆಲ್ಲಂ ನೆರೆದಿರ್ದಲ್ಲಿಗೆ ಸಿರಿದಿಣ್ಣಂಗಂ ಬೞಯಟ್ಟಿ ಬರಿಸಿದೊಡೆ ಸ್ವಯಂಭರದೊಳ್ ಸುಮತಿಯೆಲ್ಲರಂ ನೋಡಿಯಾರುಮಂ ಮೆಚ್ಚದೆ ಸಿರಿದಿಣ್ಣಂಗೆ ಮಾಲೆಸೂಡಿದೊಡೆ ಮದುವೆಯಾಗಿ ಕೆಲವು ದಿವಸಮಲ್ಲಿರ್ದು ಮಾವನವರಂ ಬೆಸಗೊಂಡಿಳಾ ಪಟ್ಟಣಕ್ಕೆ ವೋಪೆಮೆಂದೊಡಾತಂ ತನ್ನ ಮಗಳಪ್ಪ ಸುಮತಿಗೆ ಬೞವೞಗೊಟ್ಟು ಮಗಳೊಡನೆ ವಾಚಾಳನಪ್ಪ ಗಿಳಿಯುಮನಟ್ಟಿದೊಡವರ್ಗಳುಂ ಕತಿಪಯ ದಿವಸಂಗಳಿಂದಿಳಾಪಟ್ಟಣಕ್ಕೆ ಪೋಗಿ ಸುಖದಿಂದಿರೆ ಮತ್ತೊಂದು ದಿವಸಂ ಗಿಳಿಯಂ ಸಾಕ್ಷಿಮಾಡಿ ಇರ್ವರುಂ ಚದುರಂಗಮಾಡುತ್ತಿರೆ ಅರಸಿಯರಸನಂ ಗೆಲ್ದೊಡೆ ಗಿಳಿ ನೆಲದೊಳೆರಡು ಬರೆಯಂ ಬರೆಗುಮರಸನರಸಿಯಂ ಗೆಲ್ದೊಡೆ ಒಂದು ಬರೆಯಂ ಬರೆಗುಮಿಂತು ಪಿರಿದುಂ ಬೇಗಮಾಡಿ ಅರಸನರಸಿಯಂ ಗೆಲ್ದೊಡೆರಡು ಬರೆಯಂ ತೆಗೆದುಕನರಸಂ ಕಂಡು ಕಡುಮುಳಿದದಱ ಗೋಣಂ ಮುಱದೊಡಾ ಗಿಳಿಯುಂ ಸತ್ತಾ ಪೋೞಲ ಬಹಿರುದ್ಯಾನವನದೊಳ್ ವ್ಯಂತರದೇವನಾಗಿ ಪುಟ್ಟುತಿಂತಿರ್ವರುಂ ಪಲಕಾಲಮಿಷ್ಟವಿಷಯ

            ಶ್ರೀಯಾದೇವತೆ ಮಗನನ್ನು ಕೊಟ್ಟಳೆಂದು ಆ ಮಗುವಿಗೆ ತಾಯಿ, ತಂದೆ, ನಂಟರು ಎಲ್ಲರೂ ಸೇರಿಕೊಂಡು ಸಿರಿದಿಣ್ಣ ಎಂದು ಹೆಸರಿಟ್ಟರು. ಸಿರಿದಿಣ್ಣನು ಶುಕ್ಲಪಕ್ಷದ ಚಂದ್ರನ ಹಾಗೆ ಅನುಕ್ರಮವಾಗಿ ಬೆಳೆದು ಹೊಸ ಜವ್ವನಿಗನೂ ಎಲ್ಲಾ ಕಲೆಗಳಲ್ಲಿ ಪರಿಣತನೂ ಆಗಿದ್ದನು. ಹೀಗಿರಲು ಇತ್ತ ಸಾಕೇತವೆಂಬ ಪಟ್ಟಣದ ಒಡೆಯನಾದ ಸುಮಂತನೆಂಬ ರಾಜನಿಗೆ ಸುಮತಿ ಎಂಬ ಮಗಳಿದ್ದಳು. ಆಕೆಯ ಸ್ವಯಂವರಕ್ಕೆ ರಾಜಕುಮಾರರೆಲ್ಲ ಬಂದು ಸೇರಿದ್ದರು. ಅಲ್ಲಿಗೆ ಸಿರಿದಿಣ್ಣನನ್ನೂ ಕರೆಕಳುಹಿಸಿ ಬರಮಾಡಿದ್ದರು. ಸ್ವಯಂವರದಲ್ಲಿ ಸುಮತಿ ಎಲ್ಲರನ್ನೂ ನೋಡಿ ಯಾರೊಬ್ಬರನ್ನೂ ಮೆಚ್ಚದೆ ಸಿರಿದಿಣ್ಣನಿಗೆ ವರಣಮಾಲಿಕೆಯನ್ನು ತೊಡಿಸಿದಳು. ಸಿರಿದಿಣ್ಣನು ಅವಳನ್ನು ವರಿಸಿ ಕೆಲವು ದಿನ ಅಲ್ಲೆ ಇದ್ದು, ಮಾವನವರನ್ನು ಕೇಳಿ, ತಾನು ಇಳಾಪಟ್ಟಣಕ್ಕೆ ಹೋಗುವೆನು – ಎಂದನು. ಸುಮಂತನು ತನ್ನ ಮಗಳಾದ ಸುಮತಿಗೆ ಬಳುವಳಿಕೊಟ್ಟು, ಮಗಳೊಡನೆ ಒಳ್ಳೆ ಮಾತುಗಾರಿಕೆ ಬಲ್ಲ ಒಂದು ಗಿಳಿಯನ್ನೂ ಕಳುಹಿಸಿದನು. ಅವರು ಕೆಲವು ದಿವಸಗಳಲ್ಲಿ ಇಳಾಪಟ್ಟಣಕ್ಕೆ ಹೋಗಿ ಅಲ್ಲಿ ಸುಖವಾಗಿದ್ದರು. ಹೀಗಿರುತ್ತ ಆ ಮೇಲೆ ಒಂದು ದಿನ ಇಬ್ಬರೂ ಗಿಳಿಯನ್ನು ಸಾಕ್ಷಿಯಾಗಿ ಮಾಡಿಕೊಂಡು ಚದುರಂಗವನ್ನು ಆಡುತ್ತಿದ್ದರು. ಆಗ ರಾಣಿಯು ರಾಜನನ್ನು ಗೆದ್ದರೆ, ಗಿಳಿ ನೆಲದಲ್ಲಿ ಎರಡು ಗೆರೆಯನ್ನು ಎಳೆಯುತ್ತಿತ್ತು. ರಾಜನು ರಾಣಿಯನ್ನು ಗೆದ್ದರೆ, ಒಂದೇ ಗೆರೆಯನ್ನು ಬರೆಯುತ್ತಿತ್ತು. ಹೀಗೆ ಬಹಳ ಹೊತ್ತಿನವರೆಗೆ ಆಡಿ ರಾಜನು ರಾಣಿಯನ್ನು ಗೆದ್ದಾಗ ಗಿಳಿ ಎರಡು ಗೆರೆಯನ್ನು ಬರೆದುಬಿಟ್ಟಿದ್ದಿತು. ಇದನ್ನು ಸಿರಿದಿಣ್ಣರಾಜನು ಕಂಡು ಅತ್ಯಂತ ಕೋಪಾವಿಷ್ಟನಾಗಿ ಅದರ ಕತ್ತನ್ನು ಮುರಿದನು. ಆ ಗಿಳಿ ಸತ್ತು ಆ ಪಟ್ಟಣದ ಹೊರಗಿನ ಉದ್ಯಾನದಲ್ಲಿ ವ್ಯಂತರ ದೇವನಾಗಿ ಹುಟ್ಟಿತು. ಹೀಗೆ ಇಬ್ಬರೂ ಹಲವು ಕಾಲ ತಮ್ಮ ಇಷ್ಟ ವಿಷಯದ

        ಕಾಮಭೋಗಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಂ ಸಪ್ತತಳಪ್ರಾಸಾದದ ಮೇಗಿರ್ವರುಂ ದಿಶಾವಳೋಕನಂ ಗೆಯ್ಯುತ್ತಿರ್ಪನ್ನೆಗಂ ಸಹಸ್ರಕೂಟಾಕಾರಮಪ್ಪುದೊಂದು ಮುಗಿಲಂ ಕಂಡಿಂತುಟೊಂದು ಚೈತ್ಯಾಲಯಮಂ ಮಾಡಿಸುವೆನೆಂದು ಪಲಗೆಯೊಳ್ ರೇಖೆಗೊಂಡು ಮತ್ತೆ ನೋೞ್ಪನ್ನೆಗಂ ಕರಗಿದುದಂ ಕಂಡದುವೆ ನಿರ್ವೇಗಕ್ಕೆ ಕಾರಣಮಾಗಿ ತಾಯುಂ ತಂದೆಯುಂ ನಂಟರುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ವರಧರ್ಮ ಭಟ್ಟಾರರ ಪಕ್ಕದೆ ತಪಂಬಟ್ಟು ಪನ್ನೆರಡು ವರುಷಂಬರೆಗಂ ಗುರುಗಳನಗಲದಿರ್ದು ದ್ವಾದಶಾಂಗ ಚರ್ತುದಶ ಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಬೞಕ್ಕೆ ಗುರುಗಳಂ ಬೆಸಗೊಂಡವರನುಮತದಿಂದೇಕವಿಹಾರಿಯಾಗಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಮಾಘಮಾಸದಂದಿಳಾಪಟ್ಟಣಕ್ಕೆ ವಂದಾ ಪೊೞಲ ಬಹಿರುದ್ಯಾನವನದೊಳಿರ್ದು ರಾತ್ರಿ ಪ್ರತಿಮಾಯೋಗದೊಳ್ ನಿಂದರ್ ಅನ್ನೆಗಂ ಮುನ್ನವರ ಕೈಯೊಳ್ ಸತ್ತ ಗಿಳಿ ವ್ಯಂತರದೇವನಾಗಿ ಅಲ್ಲಿ ಪುಟ್ಟಿರ್ದುದು ಕಂಡೇನುಂ ಕಾರಣಮಿಲ್ಲೆನ್ನಂ ಕೊಂದನೆಂದು ಮುಳಿದಾದಮಾನುಂ ಘೋರಮಪ್ಪ ವಾತಮುಂ ಶೀತಮುಮಂ ವಿಗುರ್ವಿಸಿ ನೀರ್ಗಳಂ ಮೇಗೆ ಸುರಿದು ಬೀಸುತ್ತಮಿಂತು ನಾಲ್ಕು ಜಾವಮುಂ ಘೋರಾಕಾರಮಾಗಿಯುಪಸರ್ಗಮಂ ಮಾಡೆ ಭಟಾರರುಂ ದೇವೋಪಸರ್ಗಮೆಂಬುದನಱದು 

            ಕಾಮಸುಖಗಳನ್ನು ಅನುಭವಿಸುತ್ತ ಇದ್ದರು. ಆಮೇಲೆ ಒಂದು ದಿವಸ ಅವರಿಬ್ಬರೂ ಏಳು ಉಪ್ಪರಿಗೆಗಳುಳ್ಳ ಕಟ್ಟಡದ ಮೇಲೆ ಇದ್ದು ದಿಕ್ಕುಗಳನ್ನು ನೋಡುತ್ತಿರುವಾಗ ಸಾವಿರ ಶಿಖರದ ಆಕಾರವುಳ್ಳ ಒಂದು ಮೋಡವನ್ನು ಕಂಡು, ಸಿರಿದಿಣ್ಣನು “ ಈ ರೀತಿಯಿರುವ ಒಂದು ಜಿನಾಲಯವನ್ನು ಮಾಡಿಸುವೆನು” ಎಂದು ಹೇಳಿಕೊಂಡು, ಚಿತ್ರದ ಹಲಗೆಯ ಮೇಲೆ ರೇಖಾಚಿತ್ರವನ್ನು ಬರೆದು, ಮತ್ತೆ ನೋಡುವ ಹೊತ್ತಿಗೆ ಅದು ಕರಗಿಹೋದುದನ್ನು ಕಂಡನು. ಅದುವೇ ಅವನಿಗೆ ವೈರಾಗ್ಯಕ್ಕೆ ಕಾರಣವಾಯಿತು. ತಾಯಿ, ತಂದೆ, ನಂಟರನ್ನು ಅಗಲಿ, ಮಾಯಾಶಲ್ಯ, ಮಿಥ್ಯಾಶಲ್ಯ, ನಿದಾನಶಲ್ಯ, ಎಂಬ ಮೂರುಬಗೆಯ ಶಲ್ಯಗಳನ್ನು ಬಿಟ್ಟು, ಬಾಹ್ಯ ಪರಿಗ್ರಹಗಳನ್ನೂ (ಭೂಮಿ, ಮನೆ, ಧನ, ಧಾನ್ಯ, ದ್ವಿಪದ, ಚತುಷ್ಪದಗಳು, ವಾಹನ, ಶಯ್ಯೆ, ಆಸನ, ಕ್ಷುದ್ರಲೋಹಪಾತ್ರೆ, ಮಡಕೆ – ಎಂಬ ಹತ್ತು) ಮಿಥ್ಯಾತ್ವ, ಕಾಮಾಭಿಲಾಷೆ, ದ್ವೇಷ, ಅಪಹಾಸ್ಯ ಮುಂತಾದ ಅಂತರಂಗ ಪರಿಗ್ರಹಗಳನ್ನೂ ತೊರೆದು ವರಧರ್ಮ ಋಷಿಗಳ ಬಳಿ ತಪಸ್ಸನ್ನು ಸ್ವೀಕರಿಸಿದನು. ಹನ್ನೆರಡು ವರ್ಷಗಳವರೆಗೂ ಗುರುಗಳೊಡನಿದ್ದು ಹನ್ನೆರಡು ಅಂಗಗಳಿಂದಲೂ ಹದಿನಾಲ್ಕು ಪೂರ್ವಗಳಿಂದಲೂ ಕೂಡಿದ ಶಾಸ್ತ್ರಗಳನ್ನೆಲ್ಲ ಕಲಿತು, ಆಮೇಲೆ ಗುರುಗಳನ್ನು ಕೇಳಿ ಒಪ್ಪಿಗೆ ಪಡೆದು ಸಿರಿದಿಣ್ಣ ಋಷಿಗಳು ಒಬ್ಬರೇ ಸಂಚರಿಸುತ್ತ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಮಾಘಮಾಸದಲ್ಲಿ ಇಳಾಪಟ್ಟಣಕ್ಕೆ ಬಂದರು. ಬಂದು, ಆ ಪಟ್ಟಣದ ಬಾಹ್ಯೋದ್ಯಾನದಲ್ಲಿದ್ದು ರಾತ್ರಿಯಲ್ಲಿ ಪ್ರತಿಮಾಯೋಗದಲ್ಲಿ ನಿಂತರು. ಅಷ್ಟರಲ್ಲಿ ಪೂರ್ವಜನ್ಮದಲ್ಲಿ ಅವರು ಕೊಂದ ಗಿಳಿ ವ್ಯಂತರದೇವತೆಯಾಗಿ ಅಲ್ಲಿ ಹುಟ್ಟಿದ್ದುದು ಅವರನ್ನು ಕಂಡಿತು. “ಏನು ಕಾರಣವಿಲ್ಲದೆ ನನ್ನನ್ನು ಕೊಂದಿದ್ದಾನೆ” ಎಂದು ಕೋಪಗೊಂಡು ಬಹಳ ಭಯಂಕರವಾದ ಗಾಳಿಯನ್ನೂ ಶೈತ್ಯವನ್ನೂ ಮಾಯೆಯಿಂದ ಸೃಷ್ಟಿಸಿತು. ಧಾರಾಕಾರವಾಗಿ ಮೇಲಿನಿಂದ ಮಳೆಯನ್ನು ಸುರಿಸುತ್ತ, ಗಾಳಿಬೀಸುತ್ತ ಹೀಗೆ ನಾಲ್ಕು ಜಾವ (ಅರ್ಧದಿನ) ಭಯಂಕರವಾದ ರೀತಿಯಲ್ಲಿ ಉಪಸರ್ಗ (ತಪಸ್ಸಿಗೆ ವಿಘ್ನ)ವನ್ನು ಮಾಡಿತು. ಆಗ ಸಿರಿದಿಣ್ಣ ಋಷಿಗಳು – ಇದು ದೇವೋಪಸರ್ಗ ಎಂದು ತಿಳಿದರು.

        ಗಾಹೆ || ಖಮ್ಮಾಮಿ ಸವ್ವಜೀವಾಣಂ ಸವ್ವೇಜೀವಾ ಖಮಂತು ಮೇ
                    ಮೆತ್ತೀ ಮೇ ಸವ್ವಭೂದೇಸು ವೇರಂ ಮಜ್ಝಣ ಕೇಣ ಚಿ

    ಶ್ಲೋಕ || ಅಚ್ಛೇದ್ಯೋ – ನಂತ ಸೌಖ್ಯೋ – ಹಂ ವೇತ್ತಾ – ಪೊರ್ವೋ ನಿರಂಜನಃ
                  ಸರ್ವದುಃಖಾಕರಂ ದೇಹಂ ತ್ಯಜಾಮೇತತ್ ಪರಿಸುಟಂ ||

ಎಂದಿಂತು ಸಮತ್ವೀಭಾವನೆಯಂ ಭಾವಿಸಿ ಶುಕ್ಲಧ್ಯಾನಮಂ ಜಾನಿಸಿ ಎಂಟು ಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆವೋದರ್ ಮತ್ತಂ ಪೆಱರುಂ ರತ್ನತ್ರಯಂಗಳನಾರಾಸುವ ಭವ್ಯರ್ಕಳ್ ಸಿರಿದಿಣ್ಣ ಭಟ್ಟಾರರಂ ಮನದೊಳ್ ಬಗೆದು ದೇವೋಪಸರ್ಗ ಮನುಷ್ಯೋಸರ್ಗ ತಿರಿಕೋಪಸರ್ಗಮಚೇತನೋಪ ಸರ್ಗಮೆಂದಿತುಂ ಚತುರ್ವಿಧಮಪ್ಪುಪಸರ್ಗಮುಮಂ ಪಸಿವು ನೀರೞ್ಕೆ ಮೊದಲಾಗೊಡೆಯವಿರ್ಪತ್ತೆರಡು ಪರೀಷಹಂಗಳಂ ಸೈರಿಸಿ ವ್ಯಾಗಳಿಂದಪ್ಪ ವೇದನೆಯಂ ಸೈರಿಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

     (ನಾನು ಎಲ್ಲ ಜೀವಗಳನ್ನೂ ಕ್ಷಮಿಸುತ್ತೇನೆ. ಎಲ್ಲ ಜೀವಗಳೂ ನನ್ನನ್ನು ಕ್ಷಮಿಸಲಿ. ಎಲ್ಲ ಪ್ರಾಣಿಗಳಲ್ಲಿಯೂ ನನಗೆ ಮೈತ್ರಿಯಿದೆ. ನನಗೆ ಎಲ್ಲಿಯೂ ದ್ವೇಷವಿಲ್ಲ.)(ನನ್ನನ್ನು ಕತ್ತರಿಸಲು ಸಾಧ್ಯವಿಲ್ಲ. ನಾನು ಕೊನೆಯಿಲ್ಲದ ಸುಖವುಳ್ಳವನು. ತಿಳಿದವನು, ಅನಾದಿ, ಕರ್ಮಲೇಪವಿಲ್ಲದವನು. ಎಲ್ಲ ದುಃಖಗಳಿಗೂ ಆಶ್ರಯವಾಗಿರುವ ಶರೀರವನ್ನು ತೊರೆಯುತ್ತೇನೆ – ಇದು ನಿಶ್ಚಯ) ಈ ರೀತಿ ಸುಖದುಃಖ ಸಮಭಾವವನ್ನು ಭಾವಿಸಿ, ಶುಕ್ಲಧ್ಯಾನವನ್ನು ಮಾಡಿ ಎಂಟು ಕರ್ಮಗಳನ್ನು ನಾಶಮಾಡಿ, ಮೋಕ್ಷವನ್ನೆಯ್ದಿದರು. ರತ್ನತ್ರಯವನ್ನು ಆರಾಧನೆ ಮಾಡುವ ಬೇರೆ ಭವ್ಯರು ಕೂಡ, ಸಿರಿದಿಣ್ಣ ಋಷಿಗಳನ್ನು ಮನಸ್ಸಿನಲ್ಲಿ ಭಾವಿಸಿ ದೇವ – ಮಾನವ – ತಿರ್ಯಕ್ಕು – ಅಚೇತನ ಎಂಬ ನಾಲ್ಕು ಬಗೆಯವರಿಂದ ಒದಗುವ ಉಪಸರ್ಗಗಳನ್ನೂ ಹಸಿವು – ಬಾಯಾರಿಕೆ ಮೊದಲಾಗಿ ಉಳ್ಳ ಇಪ್ಪತ್ತೆರಡು ಪರೀಷಹಗಳನ್ನು ಸಹಿಸಿಕೊಂಡು, ರೋಗಗಳಿಂದ ಉಂಟಾಗುವ ನೋವನ್ನೂ ಸಹಿಸಿ, ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯಲಿ !

*****ಕೃಪೆ: ಕಣಜ****



ವಡ್ಡಾರಾಧನೆ - ಧರ್ಮಘೋಷ ಭಟಾರರ ಕಥೆ | Vaddaradhane-Dharmaghosha Bhatarara kathe

 ಧರ್ಮಘೋಷ ಭಟಾರರ ಕಥೆಯಂ ಪೇೞ್ವೆಂ :

ಗಾಹೆ || ಚಂಪಾ ಎ ಮಾಸಖವಣಂ ಕರಿತ್ತು ಗಂಗಾತಟಮ್ಹಿ ಎ
ಘೋರಾ ಎ ಧಮ್ಮಘೋಷೋ ಪಡಿವಣ್ಣೋ ಉತ್ತಮಂ ಅಟ್ಠಂ ||

*ಚಂಪಾ ಎ – ಚಂಪೆಯೆಂಬ ಪೊೞಲೊಳ್, ಮಾಸಖವಣಂ ಕರಿತ್ತು – ಮಾಸೋಪವಾಸಂ ಗೆಯ್ದು. ಗಂಗಾ ತಟಮ್ಹಿ – ಗಂಗಾ ಮಹಾನದಿಯ ತಡಿಯೊಳ್, ತಣ್ಹಾ ಎ – ನೀರೞ್ಕೆಯಿಂದಂ, ಘೋರಾಎ – ಆದಮಾನುಂ ಕಡಿದಪ್ಪುದಱಂದಂ, ಧಮ್ಮಘೋಸೋ – ಧರ್ಮಘೋಷನೆಂಬ ಭಟ್ಟಾರಕಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯುಂ*

ಅದೆಂತೆಮದೊಡೆ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಕೌಶಂಬಿಯೆಂಬುದು ನಾಡಲ್ಲಿ ವಾರಣಾಸಿಯೆಂಬುದು ಪೊೞಲದನಾಳ್ರ್ವೆಂ ಕೀರ್ತಧರನೆಂಬೊನರಸನಾತನ ಮಹಾದೇವಿಯರ್ಕಳ್ ಆರತಿ ರತಿಯೆಂಬೊರಾ ಇರ್ವರ್ಗಂ ಮಕ್ಕಳ್ ದರ್ಮಘೋಷನುಂ ಧರ್ಮಕೀರ್ತಿಯುಮೆಂಬೊರಂತವರ್ಗಳಿಷ್ಪ ಮಿಷಯಕಾಮಭೋಗಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಂ ಗ್ರ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರಾ ವಾರಣಾಸಿಗೆ ವಂದು ಬಹಿರುದ್ಯಾನವನದೊಳ್ ಸಟಿಕ ಶಿಲಾತಲದ ಮೇಗೆ ಪಂಥಾತಿಚಾರ ನಿಮಯಮಂಗೆಯ್ದಿರ್ದಗುಣೋತ್ತವ್ಮರೆಂಬ ಭಟಾರರಂ ವನಕ್ರೀಡೆಗೆ ವೋದ ಧರ್ಮಘೋಷನುಂ ಧರ್ಮಕೀರ್ತಿಕುಮಾರನುಂ ಕಂಡು ಬಂದಿಸಿ ಭಟಾರಾ ಎಮಗೆ ಧರ್ಮಮಂ ಪೇೞಮೆಂದೊಡೆ ಭಟಾರರಿಂತೆಂದು ಧರ್ಮಮಂ ಪೇೞ್ದರ್ :

ಧರ್ಮಘೋಷ ಋಷಿಗಳ ಕಥೆಯನ್ನು ಹೇಳುವೆನು – (ಧರ್ಮಘೋಷನೆಂಬ ಋಷಿ ಚಂಪಾಪುರದಲ್ಲಿ ಮಾಸೋಪವಾಸವನ್ನು ಮಾಡಿ, ಗಂಗಾ ಮಹಾನದಿಯ ತೀರದಲ್ಲಿ ಅತ್ಯಂತ ತೀವ್ರವಾಗಿರುವ ಬಾಯಾರಿಕೆಯಿಂದ ಕೂಡಿ ಶ್ರೇಷ್ಠವಾದ ದರ್ಶನ ಜ್ಞಾನಚಾರಿತ್ರದಲ್ಲಿ ಕೌಶಂಬಿಯನ್ನು ಮಾಡಿದನು.) ಅದು ಹೇಗೆಂದರೆ – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕೌಶಂಬಿಯೆಂಬ ನಾಡಿದೆ. ಅಲ್ಲಿ ವಾರಣಾಸಿಯೆಂಬ ಪಟ್ಟಣವಿದೆ. ಅದನ್ನು ಕೀರ್ತಿಧರನೆಂಬ ರಾಜನು ಆಳುತ್ತಿದ್ದನು. ಅವನಿಗೆ ಆರತಿ, ರತಿ ಎಂಬವರು ರಾಣಿಯರು. ಈ ಇಬ್ಬರು ರಾಣಿಯರಲ್ಲಿ ಧರ್ಮಘೋಷ, ಧರ್ಮಕೀರ್ತಿ, ಎಂಬಿಬ್ಬರು ಮಕ್ಕಳು. ಅಂತು ಅವರು ತಮಗೆ ಇಷ್ಟವಾದ ವಿಷಯದಲ್ಲಿ ಬಯಸಿದ ಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗಿರಲು ಗುಣೋತ್ತಮರೆಂಬ ಋಷಿಗಳು ಗ್ರ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳೆಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಬರತಕ್ಕವರು, ವಾರಾಣಸಿಗೆ ಬಂದರು. ಅಲ್ಲಿ, ಪಟ್ಟಣದ ಹೊರಗಿನ ಉದ್ಯಾನದಲ್ಲಿ ಚಂದ್ರಕಾಂತ ಶಿಲಾತಳದ ಮೆಲೆ ಕುಳಿತು ತಮ್ಮ ದಾರಿಯಲ್ಲಿ ಆಗಿರಬಹುದಾದ ಅತಿಚಾರ (ಧರ್ಮವಿರುದ್ಧವಾದ ಕೃತ್ಯ)ಗಳ ಪ್ರಾಯಶ್ಚಿತ್ತಗಳೆನಿಸಿದ ಪಂಥಾತಿಚಾರ ನಿಯಮಗಳನ್ನು ಆಚರಿಸುತ್ತಿದ್ದರು. ಆ ವೇಳೆಯಲ್ಲಿ ಉದ್ಯಾನ ಕೇಳಿಗೆಂದು ಹೋಗಿದ್ದ ಧರ್ಮಘೋಷನೂ ಧರ್ಮಕೀರ್ತಿಯೂ ಋಷಿಗಳನ್ನು ಕಂಡು ವಂದನಗೈದರು. “ಪೂಜ್ಯರೇ, ನಮಗೆ ಧರ್ಮೋಪದೇಶವನ್ನು ಮಾಡಿ” ಎಂದು ಕೇಳಿಕೊಂಡರು. ಆಗ ಭಟಾರರು ಈ ರೀತಿಯಾಗಿ ಧರ್ಮವನ್ನು ವಿವರಿಸಿ ಹೇಳಿದರು –

ವೃತ್ತ || ಕೋ ಧರ್ಮಪ್ರವರೋ ದಯಾತ್ಮಸುಭಗಃ ಕಃ ಸ್ಯಾನ್ನರಃ ಪಂಡಿತಃ
ಕಾ ಯೋಷಿದ್ವಶಗಾ ಕಲಿಷ್ಕಯತಿ (?) ಚೇತ್ ಕ್ರೋಧೋ – ಶುಭಸ್ಯೋದಯಃ
ಕಾ  ಲಕ್ಷ್ಮೀರವಿಚಾರ ಕಾರ್ಯಘಟನಾ ಕಿಂ ಮಿತ್ರಮಾತ್ಯಾ –  ತ್ಮನಃ
ಕಿಂ ಸೌಡ್ಯಿಂ ಭುವಿ ಶಾಸ್ತ್ರವಾಚನಮತಿಃ ಕಾ ವಾ ಗತಿರ್ನಿರ್ವೃತಿಃ ||

ಸಮ್ಯಕ್ತ್ವೋತ್ತಮ ಹಸ್ತಿ ಮಸ್ತಕ ಗತಃ ಸ್ಮಜ್ಞಾನಕೇತು ವ್ರಜೋ
ನಾನಾಶೀಲಗುಣವ್ರತತೋರುಪೃತನಃ ಸ್ವಾಧ್ಯಾಯ ಶಂಖಧ್ವನಿಃ
ಭಾಸ್ವತ್ಸಂವರ ಭೂರಿ ಚಾರುಕವಚೋ ನಾತೀವ ತೀಕ್ಷ್ಣಾಯುಧಃ
ಸೇವ್ಯೋ ಧರ್ಮಮಹಾನೃಪೋ ಬುಧಭಗಟೈಃ ಸ್ವರ್ಮೋಕ್ಷವೃತ್ತಿಪ್ರದಃ ||

ಶ್ಲೋಕ || ಧರ್ಮಾರ್ಥಕಾಮಮೋಕ್ಷಾಣಾಂ ಯಸ್ಯೈಕೋ – ಪಿ ನ ವಿದ್ಯತೇ
ಅಜಾಗಲ ಸ್ತನಸ್ಯೈವ ತಸ್ಯ ಜನ್ಮ ನಿರರ್ಥಕಂ ||

ವೃತ್ತ || ಯೇಷಾಂ ನ ವಿದ್ಯಾ ನ ತಪೋ ನ ದಾನಂ
ನಾಪ್ಯೇವ ಶೀಲಂ ನ ಗುಣೋ ನ ಧರ್ಮಃ
ತೇ ಮರ್ತ್ಯಲೋಕೇ ಭುವಿ ಭಾರಭೂತಾ
ಮನುಷ್ಯರೂಪೇಣ ಮೃಗಾಶ್ಚರಂತಿ ||

         – ಧರ್ಮದಲ್ಲಿ ಅತ್ಯಂತ ಶ್ರೇಷ್ಠನು ಯಾರು ? – ದಯೆಯಿಂದ ಕೂಡಿದ ಆತ್ಮ ಸೌಭಾಗ್ಯವುಳ್ಳವನು. ಮನುಷ್ಯನು ಯಾವನು ? – ಪಾಂಡಿತ್ಯವುಳ್ಳವನು. ಹೆಂಗಸು ಯಾವಳು ? – ವಶವರ್ತಿಯಾಗಿರುವವಳು. ಕೋಪದಿಂದ ಎನಾಗುತ್ತದೆ? – ಅಶುಭವುಂಟಾಗುತ್ತದೆ. ಅಲಕ್ಷ್ಮಿ(ದಾರಿದ್ರ್ಯ)ಯಾವುದು? – ವಿಚಾರವಿಲ್ಲದೆ ಕೆಲಸ ಮಾಡುವುದು. ತನ್ನ್ನ ಮಿತ್ರನು ಯಾವನು? – ತಾನೇ. ಲೋಕದಲ್ಲಿ ಸುಖ ಯಾವುದು? – ಶಾಸ್ತ್ರವನ್ನು ಓದುವ ಬುದ್ಧಿ. ಗತಿ (ಗುರಿ)ಯಾವುದು? – ಮೋಕ್ಷವು. ಸಮ್ಯಕ್ತ್ವವೆಂಬ ಆನೆಯ ತಲೆಯ ಮೆಲೆ ಕುಳಿತಿರುವ, ಸುಜ್ಞಾನವೆಂಬ ಧ್ವಜಸಮೂಹವುಳ್ಳ, ಹಲವು ಬಗೆಯ ಶೀಲ ಗುಣವ್ರತಗಳೆಂಬ ಸೈನ್ಯವುಳ್ಳ, ಶಾಸ್ತ್ರಾಭ್ಯಾಸವೆಂಬ ಶಂಖಧ್ವನಿಯುಳ್ಳ, ಹೊಳೆಯುವ ಸಂವರವೆಂಬ ಅತಿಸುಂದರವಾದ ಕವಚವುಳ್ಳ, ಅತಿ ತೀಕ್ಷ್ಣವಾದ ಆಯುಧಗಳಿಲ್ಲದ, ಸ್ವರ್ಗ ಮೋಕ್ಷಗಳ ಸ್ಥಿತಿಯನ್ನು ಕೊಡುವ, ಧರ್ಮವೆಂಭ ಮಹಾರಾಜನು ವಿದ್ವಾಂಸರೆಂಬ ಸೈನಿಕ್ಪರಿಂದ ಸೇವೆಗೊಳ್ಳವುವನಾಗಿದ್ದಾನೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ವಿಧದ ಪುರುಷಾರ್ಥಗಳಲ್ಲಿ ಒಂದು ಕೂಡಾ ಯಾರಿಗೆ ಇಲ್ಲವೋ ಅವನ ಜನ್ಮ ಮೇಕೆಯ ಕೊರಳ ಮೊಲೆಯಂತೆ ಪ್ರಯೋಜನವಿಲ್ಲದುದು. ಯಾರಿಗೆ ವಿದ್ಯೆಯಿಲ್ಲವೋ ತಪಸ್ಸಿಲ್ಲವೋ ದಾನಗುಣವಿಲ್ಲವೋ ಶೀಲ ಕೂಡ ಇಲ್ಲವೋ ಧರ್ಮವಿಲ್ಲವೋ ಅವರು ಮೈತಿಹೊಂದುವ ಸ್ವಭಾವವುಳ್ಳ ಈ ಲೋಕದಲ್ಲಿ ಭಾರವಾಗಿ ಪರಿಣಮಿಸಿರುವವರು. ಅವರು ಮನುಷ್ಯರ ರೂಪದಲ್ಲಿರುವ ಮೃಗಗಳಾಗಿ ವರ್ತಿಸುತ್ತಾರೆ. ಒಂದನ್ನು ಮತ್ತೊಂದು ತಿನ್ನುತ್ತ ಕ್ರಿಮಿಗಳು ಬದುಕುತ್ತ ಇರುವುದಿಲ್ಲವೇನು? ಪರಲೋಕದ ಪ್ರಾಪ್ತಿಗೆ ವಿರೋಧವಾಗದ ರೀತಿಯಿಂದ ಯಾವನು ಜೀವಿಸುತ್ತಾನೋ ಅವನು ಸಾರ್ಥಕವಾಗಿ ಜೀವಿಸುತ್ತಾನೆ. ಯಾವ ಕಾರ್ಯದಿಂದ ಜನನಿಂದೆಯುಂಟಾಗುವುದೋ

ಶ್ಲೋಕ || ಕ್ರಿಮಯಃ ಕಿಂ ನ ಜೀವಚಿತಿ ಭಕ್ಷಯಿತ್ವಾ ಪರಸ್ಪರಂ
ಪರಲೋಕಾವಿರುದ್ಧೇನ ಯೋ ಜೀವತಿ ಸ ಜೀವತಿ ||
ಅಪವಾದೋ ಭವೇದ್ಯೇನ ಯೇನ ಚಾಪ್ರತ್ಯಯೋ ಭವೇತ್

ನರಕೋ ಗಮ್ಮತೇ ಯೇನ ತತ್ಕರ್ಮ ನ ಸಮಾಚರೇತ್ ||

        ಇಂತು ಸಂಕ್ಷೇಪದಿಂ ಭಟಾರರ್ ಧರ್ಮಮಂ ಪೇೞೆ ಕೇಳ್ದಿರ್ವ್ವರ್ಗ್ಗಂ ವೈರಾಗ್ಯಮಾಗಿ ತಾಯುಂ ತಂದೆಯುಂ ಸ್ವಜನ ಬಂಧುವರ್ಗಮುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂ ಗಳಂ ತೊಱೆದು ಗುಣೋತ್ತಮ ಭಟಾರರ ಪಕ್ಕದೆ ತಪಂಬಟ್ಟು ಪನ್ನೆರಡು ವರ್ಷಂಬರೆಗಂ ಗುರುಗಳೊಡನಿರ್ದು ಪ್ರಥಮನುಯೋಗ ಚರಣಾನುಯೋಗ ಕರಣಾನುಯೋಗ ದ್ರವ್ಯಾನು ಯೋಗಂಗಳಂ ಕಲ್ತು ಶಾಸ್ತ್ರಪಾರರಗರಾಗಿ ಭಟಾರರಂ ಬೆಸಗೊಂಡವರನುಮತದಿಂದಿರ್ವರುಂ ಬೇಱೆ ವೇಱೆ ವಿಹಾರಿಸಲ್ ತಗುಳ್ದು ಗ್ರಾಮ ನಗರಖೇಡ ಖರ್ವಡ ಮಡಂಬ ಪತ್ತನ ದ್ರೋಣಾ ಮುಖಂಗಳಂ ವಿಹಾರಿಸುತ್ತಂ ಚಂಪಾನಗರಕ್ಕೆ ಪೋಗಿ ತಾಮರೆಗೊಳದ ತಡಿಯ ಮಱೆಯೊಳಿರ್ವರುಂ ಮಾಸೋಪವಾಸಮಗೆಯ್ದು ಪಾರಣೆಯ ದಿವಸದಂದು ಚಂಪಾನಗರದ ಶ್ರಾವಕರ್ಕಳೆಲ್ಲಂ ನಮ್ಮ ನೋಂತುದನಱವರದು ಕಾರಣದಿಂ ನಮಗೆ ಪಾರಣೆಯಂ ಮಾೞಗಳಯಥಾಕರ್ಮದ ದೋಷಂ ಸಾರ್ತರ್ಕುಮದಱಂ ನಾಮಿಲ್ಲಿ ಚರಿಗೆವುಗದೆ ಗಂಗೆಯ ತಡಿಯೊಳಿರ್ದ ತುಱುಪಟ್ಟಿಗೆ ಪೋಪಮೆಂದಿರ್ವರುಂ ಪೋಪರ್ ಅನ್ನೆಗಮಾ ತುರುಪಟ್ಟಿಯುಮಲ್ಲಿಂದೆರ್ದು ನಾಡೆ ಗೆಂಟು ಪೋದತ್ತು

            ಮತ್ತೆ ಯಾವ ಕಾರ್ಯದಿಂದ ನರಕಕ್ಕೆ ಹೋಗಬೇಕಾಗುವುದೋ ಆ ಕಾರ್ಯವನ್ನು ಮಾಡಬಾರದು. ಹೀಗೆ ಸಂಕ್ಷೇಪವಾಗಿ ಋಷಿಗಳು ಧರ್ಮವನ್ನು ತಿಳಿಸಿದರು. ಅದನ್ನು ಕೇಳಿದ ಇಬ್ಬರಿಗೂ ವೈರಾಗ್ಯವುಂಟಾಯಿತು. ಅವರು ತಮ್ಮ ತಾಯಿ, ತಂದೆ, ಸ್ವಜನರು, ಬಂಧುಗಳ ಸಮೂಹವನ್ನು ಬಿಟ್ಟು, ಅವರಿಗೆ ಮನೋವ್ಯಥೆಯಿಲ್ಲದಂತೆ ಮಾಡಿ ಬಾಹ್ಯ ಮತ್ತು ಆಭ್ಯಂತರ ಎಂಬ ಎರಡೂ ಬಗೆಯ ಪರಿಗ್ರಹಗಳನ್ನು ತೊರೆದರು. ಗುಣೋತ್ತಮ ಋಷಿಗಳ ಬಳಿಯಲ್ಲಿ ದ್ವಾದಶವಿಧದ ತಪಸ್ಸನ್ನು ಸ್ವೀಕರಿಸಿದರು . ಹನ್ನೆರಡು ವರ್ಷಗಳವರೆಗೂ ಗುರುಗಳ ಒಟ್ಟಿಗಿದ್ದು ಪ್ರಥಮಾನುಯೋಗ, ಚರಣಾನುಯೋಗ, ಕರಣಾನುಯೋಗ, ದ್ರವ್ಯಾನುಯೋಗಗಳನ್ನು ಕಲಿತು ಶಾಸ್ತ್ರಗಳಲ್ಲಿ ಪಾರಂಗತರಾದರು. ಆಮೇಲೆ ಋಷಿಗಳನ್ನು ಕೇಳಿಕೊಂಡು ಅವರ ಅನುಮತಿಯನ್ನು ಪಡೆದು ಇಬ್ಬರೂ ಬೇರೆ ಬೇರೆಯಾಗಿ ಸಂಚಾರಮಾಡಲು ಹೊರಟರು. ಗ್ರಾಮ, ನಗರ, ಬೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಚಂಪಾನಗರಕ್ಕೆ ಹೋದರು. ಅಲ್ಲಿ ತಾವರೆಕೊಳದ ತೀರದಲ್ಲಿ ಮರೆಯಾಗಿ ಇಬ್ಬರೂ ಒಂದು ತಿಂಗಳ ಉಪವಾಸವನ್ನು ಮಾಡಿದರು. “ಪಾರಣೆಯ ದಿವಸ ಚಂಪಾನಗರದ ಶ್ರಾವಕರೆಲ್ಲರೂ ನಾವು ವ್ರತಮಾಡಿರುವುದನ್ನು ತಿಳಿದಾರು. ಅದರಿಂದಾಗಿ ನಮಗೆ ಪಾರಣೆಮಾಡುವಾಗ ಸರಿಯಾದ ರೀತಿಯಲ್ಲಿ ಕರ್ಮವನ್ನು ಮಾಡದೆ ದೋಷ ಬಂದು ಸೇರುವುದು. ಆದುದರಿಂದ ನಾವು ಇಲ್ಲಿ ಭಿಕ್ಷೆಗಾಗಿ ಮನೆಗಳನ್ನು ಪ್ರವೇಶಿಸುವುದು ಬೇಡ. ನಾವು ಗಂಗಾತೀರದಲ್ಲಿದ್ದ ಹಸುಗಳ ಹಟ್ಟಿಗೆ ಹೋಗೋಣ” – ಎಂದುಕೊಂಡು ಅವರಿಬ್ಬರೂ ಗಂಗಾತೀರಕ್ಕೆ ಹೋದರು. ಅಷ್ಟರಲ್ಲಿ ಗಂಗಾತೀರದ ಹಸುಗಳ ಹಟ್ಟಿ ಆ ಸ್ಥಳದಿಂದ ಬೇರೊಂದು ಕಡೆಗೆ ಬಹಳ ದೂರಕ್ಕೆ ಹೋಗಿದ್ದಿತು. 

            ಪೋದೊಡೆ ಧರ್ಮಕೀರ್ತಿ ಭಟಾರರ್ ಪೆಱತೊಂದು ತುಱುಪಟ್ಟಿಗೆ ಪೋದರ್ ಧರ್ಮಘೋಷಭಟಾರರ್ ಪೋಗಲಾಱದೆ ಗಂಗೆಯ ತಡಿಯ ಮರದ ಕೆೞಗೆ ಪಸಿವು ನೀರೞ್ಕೆಯಿಂ ಸೇದೆಗೆಟ್ಟು ಬಸಮೞದಿರ್ದೊರಂ ಗಂಗಾದೇವತೆ ಕಂಡನುಕಂಪೆಯುಂ ಭಕ್ತಿಯುಂ ಕರಣಾಗಿ ಸರ್ವಾಭರಣ ಭೂಷಿತೆಯಾಗಿ ದಿವ್ಯಮಪ್ಪ ಶ್ವೇತವಸ್ತ್ರಮನುಟ್ಟು ಸುವರ್ಣಮಯಮಪ್ಪ ಪಿರಿಯ ಕರಗಮಂ ತೆಕ್ಕನೆ ತೀವಿ ತಣ್ಣೆದವುಂ ಸುಗಂಧಮಪ್ಪ ನೀರ್ಗಳಂ ತಂದು ಧರ್ಮಘೋಷ ಭಟಾರರನಿಂತೆದಳ್ ಭಟಾರಾ ಪ್ರಾಸುಕಮಪ್ಪ ನೀರಂ ಪೊೞ್ತದೊಳ್ ಬಂದುದಂ ಕುಡಿದು ನಿಮ್ಮ ಸೇದೆಯನಾಱಸಿಂ ನಿಮಗರಮನೆಗೆ ಪೋಗಿ ಕೂೞಂ ತಂದಪೆನನ್ನೆವರಂ ನೀರಂ ಕುಡಿದು ತೃಷೆಯಂ ಪಿಂಗಿಸುವ್ಯದೆಂದೊಡೆ ಭಟಾರರಾಮೊಲ್ಲೆವಬ್ಬಾ ಕುಡಿಯಲ್ಕಾಗದೆಂದೊಡೆ ಗಂಗಾದೇವತೆ ಪೂರ್ವವಿದೇಹಕ್ಕಿ ಪೋಗಿ ಸೀಮಂಧರ ತೀರ್ಥಂಕರ ಪರಮದೇವರಂ ಕಂಡು ಬಂದಿಸಿ ಇಂತೆಂದು ಬೆಸಗೊಂಡಳ್ ಭಟಾರಾ ಒರ್ವರ್ ಋಷಿಯರ್ ನೀರೞ್ಕೆಯಿಂದಂ ಕರಂ ಸೇದೆಗೆಟ್ಟು ಬಸಮೞದಿರ್ದೊರಂ ಕಂಡು ಪಿರಿದೊಂದು ಪೊನ್ನ ಕರಗಮಂ ತೆಕ್ಕನೆ ತೀವಿಯದಮಾನುಂ ತಣ್ಣಿದುವುಂ ಕಮ್ಮಿದುವುಮಪ್ಪ ನೀರ್ಗಳಂ ಪೊೞ್ತದೊಳ್ ಕೊಂಡು ಪೋಗಿ ಕುಡುಯಲೆಱೆಯೆ ಕೊಳ್ದರಿಲ್ಲೆಂದೊಡೆ ಭಟಾರರೆಂದರ್ ಪ್ರಾಸುಕಮಾದೊಡಂ ಪೊೞ್ತದೊಳ್ ತಂದೊಂಡಂ ದೇವರ್ಕ್ಕಳ ದೇವಿಯರ್ಕ್ಕಳ ಕೈಯೊಳ್ ಋಷಿಯರ್ಕ್ಕಳ್ಗುಣಲುಂ ಕುಡಿಯಲುಂ ತಗದು 

            ಹಾಗೆ ಹೋದುದರಿಂದ ಧರ್ಮಕೀರ್ತಿ ಮುನಿಗಳು ಬೇರೆ ಒಂದು ಹಸು ಹಟ್ಟಿಗೆ ಹೋದರು. ಧರ್ಮಘೋಷಭಟಾರರು ಬೇರೆ ಕಡೆ ಹೋಗಲಾರದೆ ಗಂಗಾನದೀ ತೀರದ ಮರದ ಬುಡದಲ್ಲಿ ಹಸಿವು ಬಾಯರಿಕೆಗಳಿಂದ ಆದ ಆಯಾಸದಿಂದ ಕೆಟ್ಟು ಶಕ್ತಿಗುಂದಿದ್ದರು. ಅವರನ್ನು ಗಂಗಾದೇವಿ ನೋಡಿ ದಯೆಯ ಕಾರಣವಾಗಿ ಎಲ್ಲ ಆಭರಣಗಳಿಂದ ಅಲಂಕಾರಮಾಡಿಕೊಂಡು ದಿವ್ಯವಾದ ಬಿಳಿಯುಡುಪನ್ನು ಧರಿಸಿಕೊಂಡು ಚಿನ್ನದ ದೊಡ್ಡಕಲಶವನ್ನು – ಅದರಲ್ಲಿ ತಣ್ಣಗಾದುದೂ ಸುವಾಸನಾಯುಕ್ತವೂ ಆದ ನೀರನ್ನು ಪೂರ್ಣವಾಗಿ ತುಂಬಿಸಿಕೊಂಡು, ತೆಗೆದುಕೊಂಡು ಬಂದು ಧರ್ಮಘೋಷ ಭಟಾರರೊಡನೆ ಹೀಗೆಂದಳು – “ಋಷಿಗಳೇ, ಜೀವರಹಿತವಾಗಿರುವ ನೀರನ್ನು, ಚಿನ್ನದ ಪಾತ್ರೆಯಲ್ಲಿ ಬಂದುದನ್ನು ಕುಡಿದು ನಿಮ್ಮ ಆಯಾಸವನ್ನು ಶಮನಮಾಡಿಕೊಳ್ಳಿರಿ. ನಿಮಗಾಗಿ ನಾನು ಅರಮನೆಗೆ ಹೋಗಿ ಅನ್ನವನ್ನು ತರುವೆನು. ಅಲ್ಲಿಯವರೆಗೆ ನೀರನ್ನು ಕುಡಿದು ಬಾಯಾರಿಕೆಯನ್ನು ಪರಿಹಾರಮಾಡಿಕೊಳ್ಳಿರಿ “ ಹೀಗೆ ಗಂಗಾದೇವತೆ ಹೇಳಿದಾಗ ಧರ್ಮಘೋಷ ಮುನಿಗಳು” ನಾವು ಅದನ್ನು ಸ್ವೀಕರಿಸಲೊಲ್ಲೆವಮ್ಮಾ! ಕುಡಿಯಲಿಕ್ಕಾಗದು“ ಎಂದರು. ಆಗ ಗಂಗಾದೇವತೆ ಪೂರ್ವವಿದೇಹ ರಾಜ್ಯಕ್ಕೆ ಹೋಗಿ ಸೀಮಂಧರ ತೀರ್ಥಂಕರರನ್ನು, ಶ್ರೇಷ್ಠ ದೇವರಾದ ಅವರನ್ನು ಕಂಡು ನಮಸ್ಕರಿಸಿ ಹೀಗೆ ಕೇಳಿದಳು – “ಪೂಜ್ಯರೇ, ಒಬ್ಬರು ಋಷಿಗಳು ಬಾಯಾರಿಕೆಯಿಂದ ಬಹಳ ಆಯಾಸಗೊಂಡು ಶಕ್ತಿಗುಂದಿದ್ದರು. ಅವರನ್ನು ನಾನು ಕಂಡು, ತಣ್ಣಗಾದ ಮತ್ತು ಸುವಾಸನೆಯುಳ್ಳ ನೀರನ್ನು ದೊಡ್ಡದಾದ ಒಂದು ಚಿನ್ನದ ಕಲಶದಲ್ಲಿ ಪೂರ್ಣವಾಗಿ ತುಂಬಿಸಿಕೊಂಡು ತೆಗೆದುಕೊಂಡು ಹೋದೆನು. ಕುಡಿಯುವುದಕ್ಕಾಗಿ ನೀರನ್ನು ಹೊಯ್ದಾಗ ಅವರು ನೀರನ್ನು ಸ್ವೀಕರಿಸಲಿಲ್ಲ” ಎಂದಳು. ಆಗ ಸೀಮಂಧರ ಸ್ವಾಮಿಗಳು – “ನೀನು ಕೊಂಡುಹೋದ ನೀರು ಪ್ರಾಸುಕ (ಜೀವರಹಿತ) ವಾಗಿದ್ದರೂ ಚಿನ್ನದ ಪಾತ್ರೆಯಲ್ಲಿ ಕೊಂಡುಹೋಗಿದ್ದರೂ ಋಷಿಗಳು ದೇವರುಗಳ ಮತ್ತು ದೇವಿಯರುಗಳ ಕೈಯಿಂದ ಬಂದುದನ್ನು ಉಣ್ಣಬಾರದು, ಕುಡಿಯಲೂ ಬಾರದು. 

      ನಿಮಗೆ ಸಮ್ಯಕ್ತ್ವಮುಂ ಪೂಜೆಯುಂ ಋಷಿಯರ್ಕಳ್ಗೆ ಪ್ರಾತಿಹಾರ್ಯಮಂ ಗೆಯ್ವುದುಂ ನಿಮ್ಮಭಿಪ್ರಾಯಮಿನಿತೆಯೆಂದು ಪೇೞ್ದೊಡೆ ತೀರ್ಥಂಕರ ಪರಮದೇವರ ಮಾತಂ ಕೇಳ್ದು ಬೇಗಂ ಗಂಗಾದೇವತೆ ಧರ್ಮಘೋಷಭಟಾರರ್ಗೆ ತಣ್ಣಿತಪ್ಪ ಗಾಳಿಯುಂ ಸುಗಂಧಜಲವರ್ಷಮುಮಂ ಮಾಡಿದೊಡಾಪ್ಯಾಯನಮಾಗಿ ಶುಕ್ಲಧ್ಯಾನಮಂ ಧ್ಯಾನಿಸಿ ಘಾತಿಕರ್ಮಂಗಳಂ ಕಿಡಿಸಿ ಕೇವಲಜ್ಙಾನಿಯಾದೊಡೆ ಚತುರ್ವಿಧಮಪ್ಪ ದೇವನಿಕಾಯಂ ಬಂದರ್ಚಿಸಿ ಪೂಜಿಸಿ ಪೋದೊಡವರುಂ ಬೞಕ್ಕಘಾತಿಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದರ್ ಮತ್ತಮವರಿಂ ಕಿಱಯರ್ ಧರ್ಮಕೀರ್ತಿ ಭಟಾರರ್ ಪೆಱತೊಂದು ತುಱುಪಟ್ಟಗೆ ಪೋದೊಡಾ ತುಱುಪಟ್ಟಿಯುಮಲ್ಲಿಂದೆರ್ದು ಪೆಱತೊಂದು ದೆಸೆಗೆ ನಾಡೆ ಗೆಂಟು ಪೋದೊಡೆ ನಿರಾಶೆಯಾಗಿ ಪಸಿವುಂ ನೀರೞ್ಕೆಯಿಂದಂ ಬಾದಿಸೆಪಟ್ಟೊರಾಗಿ ಸೇದೆಗೆಟ್ಟು ಬಸಮೞದು ಶುಭಪರಿಣಾಮಕ್ಕೆ ಸಂದೊರಂ ಮುನ್ನಿನ ದೇವತೆ ಕಂಡಱದು ಪ್ರತಿಬೋಧಿಸಲ್ ತಗುಳ್ದವರುಂ ತಿಳಿಪಲಾಱದೆ ಮತ್ತೆ ಪೂರ್ವವಿದೇಹಕ್ಕೆ ಪೋಗಿ ಸೀಮಂಧರ ತೀರ್ಥಕರ ಪರಮಸ್ವಾಮಿಯಂ ಕಂಡು ಪೊಡೆವಟ್ಟು ಅವರ ಸಮಾವಸ್ಥೆಯೆಲ್ಲಮಂ ಭಟಾರರ್ಗ್ಗೆ ಪೇೞ್ದು ಸಮಾಸಂಧಾನೋಪಾಯಮಂ ಬೆಸಗೊಂಡೊಡೆ 

        ನಿಮ್ಮಂಥವರು ಜೈನಧರ್ಮವನ್ನು ತಿಳಿಯಬಹುದು. ಪೂಜೆಮಾಡಬಹುದು, ಋಷಿಗಳಿಗೆ ದೇವತೆಗಳು ಮಾಡತಕ್ಕ ಪ್ರಜೆ ಮಾಡಬಹುದು. ಇಷ್ಟು ಮಾತ್ರವೇ ನಿಮಗೆ ಅರ್ಹತೆ” ಯೆಂದರು. ಗಂಗೆಯು ಅವರ ಮಾತನ್ನು ಕೇಳಿ ಬೇಗ ಹೋದಳು. ಧರ್ಮಘೋಷಮುನಿಗಳಿಗೆ ತಂಗಾಳಿಯನ್ನೂ ಸುವಾಸನೆಯ ನೀರಿನ ಮಳೆಯನ್ನೂ ಉಂಟುಮಾಡಿದಳು. ಆಗದು ಧರ್ಮಘೋಷರಿಗೆ ಹಿತವಾಯಿತು. ಅವರು ಶುಕ್ಲಧ್ಯಾನವನ್ನು ಮಾಡಿ, ಘಾತಿಕರ್ಮಗಳನ್ನು ನಾಶಪಡಿಸಿ ಕೇವಲ ಜ್ಞಾನವನ್ನು ಪಡೆದರು. ನಾಲ್ಕು ವಿಧವಾದ ದೇವತೆಗಳ ಸಮೂಹವು ಅಲ್ಲಿಗೆ ಬಂದು ಭಟಾರರ್ನನು ಅರ್ಚಿಸಿ ಪೂಜಿಸಿ ಹಿಂದೆರಳಿದರು. ಧರ್ಮಘೋಷ ಋಷಿಗಳು ಆಮೇಲೆ ಅಘಾತಿಕರ್ಮಗಳನ್ನೂ ನಾಶಪಡಿಸಿ ಮೋಕ್ಷವನ್ನೈದಿದರು. ಅನಂತರ, ಅವರ ತಮ್ಮಂದಿರಾದ ಧರ್ಮಕೀರ್ತಿ ಭಟಾರರು ಬೇರೊಂದು ತುರು(ಹಸು) ಹಟ್ಟಿಗೆ ಹೋದಾಗ, ಆ ತರುಹಟ್ಟಿ ಅಲ್ಲಿಂದ ಎದ್ದು ಬೇರೊಂದು ಕಡೆಗೆ ಬಹಳವಾಗಿ ದೂರಕ್ಕೆ ಹೋಗಿದ್ದಿತು. ಇದರಿಂದ ಅವರಿಗೆ ನಿರಾಶೆಯುಂಟಾಯಿತು. ಹಸಿವು ಬಾಯಾರಿಕೆಗಳು ಅವರನ್ನು ಬಾಸಿದವು. ಆಯಾಸದಿಂದ ಕೆಟ್ಟು, ಶಕ್ತಿಗುಂದಿ ಅವರು ಶುಭಫಲವನ್ನು ಪಡೆದುಕೊಂಡಿರಲು, ಹಿಂದಿನ ಗಂಗಾದೇವತೆ ಕಂಡು, ತಿಳಿದು, ಅವರಿಗೆ ಅರಿವನ್ನು ಉಂಟುಮಾಡಲು ತೊಡಗಿದರೂ ತಿಳಿಸಲಾರದವಳಾದಳು. ಆಕೆ ಹಿಂದಿನಂತೆ ಪೂರ್ವವಿದೇಹಕ್ಕೆ ಹೋಗಿ ಪರಮಸ್ವಾಮಿಯಾದ ಸೀಮಂಧರ ತೀರ್ಥಂಕರರನ್ನು ಕಂಡು ಸಾಷ್ಟಾಂಗವಂದನೆ ಮಾಡಿ, ಅವರ ಸಮ್ಮತೆಯ ಸ್ಥಿತಿಯೆಲ್ಲವನ್ನೂ ಹೇಳಿದಳು. ಅವರನ್ನು ಏಕಾಗ್ರತೆಗೆ ಸೇರಿಸುವ ಉಪಾಯವೇನೆಂದು ಕೇಳಿದಳು. 

       ಸರ್ವಜ್ಞರಿಂತೆಂದು ಪೇೞ್ದರಾಸನ್ನಭವ್ಯರ್ ಮೂಱನೆಯ ಭವದೊಳ್ ಮೋಕ್ಷಕ್ಕೆ ವೋಪರೆಂದು ಸೀಮಂಧರ ತೀರ್ಥಂಕರ ಪರಮದೇವರ್ ಪೇೞ್ದರೆಂಬುದಂ ಕೇಳ್ದಾಗಡೆ ಅಶುಭ ಪರಿಣಾಮಮಂ ತೊಱೆದು ನೀಗಿ ಶುಭ ಪರಿಣಾಮದೊಳ್ ಕೂಡಿ ಸಮಾಯನೊಡೆಯರಪ್ಪರ್ ನೀಂ ಬೇಗಂ ಪೋಗಿ ಪ್ರತಿಬೋಸೆಂದು ಪೇೞ್ದೊಡೆ ಗಂಗಾದೇವತೆಯಂತೆಗೆಯ್ವೆನೆಂದು ಪೊಡೆವಟ್ಟು ಪೋಗಿ ಆ ರಿಸಿಯರನೆಯ್ದಿ ಇಂತೆಂದಳ್ ಭಟಾರಾ ನೀಮೀ ಭವದಿಂ ತೊಟ್ಟು ಮೂಱನೆಯ ಭವದೊಳ್ ಕರ್ಮಕ್ಷಯಂ ಗೆಯ್ದು ಕೇವಳ ಜ್ಞಾನಿಯಗಿ ಮೋಕ್ಷಕ್ಕೆ ವೋದಪಿರೆಂದು ಸೀಮಂಧರ ತೀರ್ಥಂಕರ ಪರಮದೇವರ್ ಪೇೞ್ದರೆಂದೊಡಾ ಮಾತಂ ಧರ್ಮಕೀರ್ತಿ ಭಟಾರರ್ ಕೇಳ್ದು ಉನ್ಮಾರ್ಗದಿಂದ ಮನಮನುಡುಗಿ ಸನ್ಮರ್ಗದೊಳ್ ನಿಱಸಿ :

        ಗಾಹೆ || ಹಾ ದುಟ್ಠು ಕಯಂ ಹಾ ದುಟ್ಠು ಕಾರಿಯಂ ಹಾ ದುಟ್ಠು ಅಣುಮೋದಿಯಂ
                     ಜೀವೋ ಅಂತೋ ಅಂತೋ ದಜ್ಝ ಇ ಪಚ್ಛತ್ತಾವೇಣ ವೇವಂತೋ

        ಎಂದು ಪೊಲ್ಲದಂ ಬಗೆದೆನೆಂದು ತನ್ನಂ ತಾಂ ಪೞಯುತ್ತಂ ಸೀಮಂಧರ ಸ್ವಾಮಿಗಳ ನಮಗ್ರಹಣಂಗೊಂಡಾಗಳಾ ಶುಭಪರಿಣಾಮದಿಂ ಪಿಂಗಿ ಶುಭ ಶುದ್ಧ ಪರಿಣಾಮದೊಳ್ ಕೂಡಿ ಮಿಕ್ಕ ರತ್ನತ್ರಯಂಗಳನಾರಾಸಿ ಪದಿನಾಱನೆಯ ಕಲ್ಪದೊಳ್ ಉತ್ಕೃಷ್ಟಮಪ್ಪ ಇರ್ಪ್ಪತ್ತೆರಡು ಸಾಗರೋಪಮಾಯುಷ್ಯಮನ್ರೆಡೆಯೊನಚ್ಚುತೆಂದ್ರನಾಗಿ ಪುಟ್ಟಿದಂ ಮತ್ತಂ ಪೆಱರುಮಾರಾಧ ಕರಪ್ಪವರ್ಗಳ್ ಧರ್ಮಘೋಷಭಟಾರರಂ ಮನದೊಳ್ ಬಗೆದು ಪಸಿವುಂ ನೀರೞ್ಕೆ ಮೊದಲಾಗೊಡೆಯ ಪರೀಷಹಂಗಳಂ ಸೈರಿಸಿ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ

        ಅಗ ತೀರ್ಥಂಕರರು ಹೀಗೆಂದರು – “ಧರ್ಮಕೀರ್ತಿ ಮುನಿಗಳು ಅಸನ್ನ ಭವ್ಯರು (ಮೋಕ್ಷಕ್ಕೆ ಹೋಗಲು ಅರ್ಹರು). ಮೂರನೆಯ ಜನ್ಮದಲ್ಲಿ ಮೋಕ್ಷಕ್ಕೆ ಹೋಗುವರೆಂದು ಸೀಮಂಧರ ತೀರ್ಥಂಕರ ಪರಮದೇವರು ಹೇಳಿದರು – ಎಂಬುದನ್ನು ಕೇಳಿದ ಕೂಡಲೇ ಅಶುಭವನ್ನೆಲ್ಲ ತೊರೆದುಬಿಟ್ಟು ಶುಭಫಲದಲ್ಲಿ ಸೇರಿ ಚಿತ್ತೈಕಾಗ್ರತೆಯನ್ನು ಉಳ್ಳವರಾಗುವರು. ನೀನು ಬೇಗನೆ ಹೋಗಿ ಅವರಿಗೆ ಎಚ್ಚರಿಸು ( ಈ ಅರಿವನ್ನುಂಟುಮಾಡು)“. ಹಾಗೆ ತೀರ್ಥಂಕರು ಹೇಳಲು ಗಂಗಾದೇವಿ “ಹಾಗೆಯೇ ಮಾಡುವೆನು” ಎಂದು, ನಮಸ್ಕರಿಸಿ ಹೋಗಿ ಆ ಋಷಿಗಳ ಬಳಿಗೆ ಹೋಗಿ ಹೀಗೆಂದಳು – “ಪೂಜ್ಯರೇ, ನೀವು ಈ ಜನ್ಮದಿಂದ ತೊಡಗಿ ಮೂರನೆಯ ಜನ್ಮದಲ್ಲಿ ಕರ್ಮವನ್ನು ನಾಶಗೊಳಿಸಿ ಕೇವಲಜ್ಞಾನವನ್ನು ಪಡೆದು ಮೋಕ್ಷಕ್ಕೆ ಹೋಗುವಿರಿ – ಎಂದು ಸೀಮಂಧರ ತೀರ್ಥಂಕರ ಪರಮದೇವರು ಹೇಳಿದ್ದಾರೆ ” – ಹೀಗೆ ಗಂಗಾದೇವತೆ ಹೇಳಲು ಆ ಮಾತನ್ನು ಧರ್ಮಕೀರ್ತಿ ಋಷಿಗಳು ಕೇಳಿ, ದುಷ್ಟಮಾರ್ಗದಿಂದ ಮನಸ್ಸನ್ನು ಹಿಂದೆಗೆದು ಸನ್ಮಾರ್ಗದಲ್ಲಿ ನೆಲೆಗೊಳಿಸಿದರು. (ಅಯ್ಯೋ ದುಷ್ಟಕಾರ್ಯ ಮಾಡಲ್ಪಟ್ಟಿತು, ಅಯ್ಯೋ ದುಷ್ಟಕಾರ್ಯ ಮಾಡಿಸಲ್ಪಟ್ಟಿತು, ಅಯ್ಯೋ ದುಷ್ಟಕಾರ್ಯವು ಅನುಮೋದಿಸಲ್ಪಟ್ಟಿತು. ಇವನು ಒಳಗೊಳಗೆ ನಡುಗುತ್ತ ಪಶ್ಚಾತ್ತಾಪದಿಂದ ಸುಡುತ್ತ ಇರುತ್ತಾನೆ.) ಹೀಗೆನ್ನುತ್ತ, ಕೆಟ್ಟುದನ್ನು ಯೋಚಿಸಿದೆನೆಂದು ತನ್ನನ್ನು ತಾನೇ ನಿಂದಿಸುತ್ತ ಸೀಮಂಧರ ಸ್ವಾಮಿಗಳ ಹೆಸರನ್ನು ಕೇಳಿದಾಗ ಅಮಂಗಳಕರವಾದ ಫಲವು ಪರಿಹಾರವಾಗಿ ಮಂಗಲವೂ ಶುದ್ಧವೂ ಆದ ಫಲದಲ್ಲಿ ಸೇರಿ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳೆಂಬ ರತ್ನತ್ರಯವನ್ನು ಆಚರಿಸಿ ಹದಿನಾರನೆಯ ಸ್ವರ್ಗದಲ್ಲಿ ಅತ್ಯಂತ ಶ್ರೇಷ್ಠವೆನಿಸುವ ಇಪ್ಪತ್ತೆರಡು ಸಾಗರಕ್ಕೆ ಸಮಾನವಾದ ಆಯುಷ್ಯವನ್ನುಳ್ಳ ಅಚ್ಚುತೇಂದ್ರನಾಗಿ ಹುಟ್ಟಿದರು. ಆರಾಧಕರಾಗಿರತಕ್ಕ ಬೇರೆಯವರು ಕೂಡ, ಧರ್ಮಘೋಷಭಟಾರರನ್ನು ಮನಸ್ಸಿನಲ್ಲಿ ಭಾವಿಸಿ, ಹಸಿವು ಬಾಯಾರಿಕೆ ಮುಂತಾಗಿ ಇರುವ ಪರೀಷಹಗಳನ್ನು ಸಹಿಸಿ, ಸಮ್ಯಗ್ ದರ್ಶನ, ಸಮ್ಯಗ್ ಜ್ಞಾನ, ಸಮ್ಯಗ್ ಚಾರಿತ್ರಗಳನ್ನು ಸಾಸಿ ಸ್ವರ್ಗಮೋಕ್ಷ ಸುಖಗಳನ್ನು ಪಡೆಯಲಿ !

*****ಕೃಪೆ: ಕಣಜ****