ನನ್ನ ಪುಟಗಳು

22 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ವೃಕ್ಷಸಾಕ್ಷಿ - ಚಿತ್ರಗಳ ಸಂಗ್ರಹ

 
ಗುಂಡ್ಮಿ ಚಂದ್ರಶೇಖರ ಐತಾಳರು ಸಂಪಾದಿಸಿರುವ 'ದುರ್ಗಸಿಂಹನ ಕರ್ಣಾಟಕ ಪಂಚತಂತ್ರಂ'

ಗುಂಡ್ಮಿ ಚಂದ್ರಶೇಖರ ಐತಾಳ



ವ್ಯಾಪಾರಕ್ಕೆ ಹೋಗುತ್ತಿರುವ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ

ಸಾಕಷ್ಟು ಹಣಸಂಪಾದಿಸಿದ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ


ಹಣವನ್ನು ಮರದ ಬುಡದಲ್ಲಿ ಹೂಳೋಣವೆಂದು ದುಷ್ಟಬುದ್ಧಿಯ ಸಲಹೆ

ಹಣವನ್ನು ಮರದ ಬುಡದಲ್ಲಿ ಹೂಳುತ್ತಿರುವ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ

ದುಷ್ಬುದ್ಧಿಗೆ ತಿಳಿಯದಂತೆ ತಾನೊಬ್ಬನೇ ಬಂದು ಹೊನ್ನನ್ನು ತೆಗೆದುಕೊಳ್ಳುತ್ತಿರುವ ದುಷ್ಟಬುದ್ಧಿ

 ಧರ್ಮಾಧಿಕರಣರ ಬಳಿ ನ್ಯಾಯ ಕೊಡಿಸಬೇಕೆಂದು ಕೇಳುತ್ತಿರುವ ದುಷ್ಟಬುದ್ಧಿ ಮತ್ತು ಧರ್ಮಬುದ್ಧಿ

ತಾನೇ ಹೊನ್ನನ್ನು ತೆಗೆದುಕೊಂಡಿದ್ದರೂ ಧರ್ಮಬುದ್ಧಿಯೇ ಹೊನ್ನನ್ನು ಕದ್ದಿರುವನೆಂದು ಸುಳ್ಳುಹೇಳುತ್ತಿರುವ ದುಷ್ಟಬುದ್ಧಿ..
ತಾನು ತೆಗೆದುಕೊಂಡಿಲ್ಲವೆನ್ನುತ್ತಿರುವ ಧರ್ಮಬುದ್ಧಿ

ವಟವೃಕ್ಷವೇ ಸಾಕ್ಷಿ ಎಂದು ಹೇಳುತ್ತಿರುವ ದುಷ್ಬಬುದ್ಧಿ

ಧರ್ಮಬುದ್ಧಿಯೇ ಹೊನ್ನನ್ನೆಲ್ಲಾ ಕದ್ದನೆಂದು ಹೇಳುತ್ತಿರುವ ಮರ

ಮರ ಮಾತನಾಡುತ್ದತಿರುವುದನ್ನು ಹಾಗೂ ಸಾಕ್ಷಿ ಹೇಳಿದ್ದನ್ನು ಕೇಳಿ ವಿಸ್ಮಿತರಾದ ಧರ್ಮಾಧಿಕರಣರು

ಮರ ಮಾತನಾಡುತ್ದತಿರುವುದನ್ನು ಹಾಗೂ ಸಾಕ್ಷಿ ಹೇಳಿದ್ದನ್ನು ಕೇಳಿ ವಿಸ್ಮಯಗೊಂಡ ಧರ್ಮಬುದ್ಧ

ಈ ಮರದಲ್ಲಿ ಅಡಗಿಸಿಟ್ಟಿರುವ ಹೊನ್ನನ್ನು ಕೊಡವುದಾಗಿ ಧರ್ಮಾಧಿಕರಣರಿಗೆ ಹೇಳಿ ಉಪಾಯ ಯೋಚಿಸಿದ ಧರ್ಮಬುದ್ಧಿ

ಮರದ ಪೊಟರೆಗೆ ಬೆಂಇ ಹಾಕಿ ಹೊಗೆ ಬರಿಸಲು ಕಟ್ಟಿಗೆ ತಂದ ಧರ್ಮಬುದ್ಧಿ

ಮರದ ಪೊಟರೆಗೆ ಬೆಂಕಿ ಹಚ್ಚಿ ಹೊಗೆ ಎಬ್ಬಿಸಿದ ಸನ್ನಿವೇಶ

ಬೆಂಕಿ ಉರಿಯುತ್ತಿರುವ ಸನ್ನಿವೇಶ

ಹೊಗೆ ಮತ್ತು ಉರಿಯನ್ನು ತಾಳಲಾರದೆ ಹೊರಗೆ ಬಂದ ಪ್ರೇಮಮತಿ

************




10ನೇ ತರಗತಿ-ಕನ್ನಡ-ಗದ್ಯ-06-ವೃಕ್ಷಸಾಕ್ಷಿ - ಕವಿ ಪರಿಚಯ

ದುರ್ಗಸಿಂಹನ ದೇಶ, ಕಾಲ, ವ್ಯಕ್ತಿವಿಚಾರ

(ಪರೀಕ್ಷಾ ದೃಷ್ಟಿಯಿಂದ ಕಿರು ಪರಿಚಯ)
ಕಾಲ:- ಸು.ಕ್ರಿ.ಶ. ೧೦೩೧ 
ಸ್ಥಳ:- ಕಿಸುಕಾಡುನಾಡಿನ ಸೈಯಡಿ (ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿಗೆ ಸೇರಿರುವ ಸವಡಿ) 
ಆಶ್ರಯ:- ಕಲ್ಯಾಣದ ಚಾಲುಕ್ಯ ವಂಶದ ಒಂದನೇ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು. 
ಕೃತಿ:- ‘ಕರ್ಣಾಟಕ ಪಂಚತಂತ್ರಂ’ಕೃತಿಯ ಮೂಲ:- ಗುಣಾಢ್ಯನು ಪೈಶಾಚಿಕ ಭಾಷೆಯಲ್ಲಿ ರಚಿಸಿರುವ ಬೃಹತ್ಕಥೆಯನ್ನು ಆಧಾರವಾಗಿಟ್ಟುಕೊಂಡು ವಸುಭಾಗಭಟ್ಟನು ಸಂಸ್ಕೃತದಲ್ಲಿ ‘ಪಂಚತಂತ್ರ’ ಎಂಬ ಕೃತಿಯನ್ನು ರಚಿಸಿದ್ದಾನೆ. ಈ ಸಂಸ್ಕೃತ ಕೃತಿಯನ್ನಾಧರಿಸಿ ‘ಕರ್ಣಾಟಕ ಪಂಚತಂತ್ರಂ’ ಎಂಬ ಕೃತಿಯನ್ನು ರಚಿಸಿರುವುದಾಗಿ ತಾನೇ ಹೇಳಿಕೊಂಡಿದ್ದಾನೆ.

*********
ಕವಿಯ ಬಗ್ಗೆ ಮತ್ತಷ್ಟು ವಿಚಾರ:- 
    ದುರ್ಗಸಿಂಹನು ತನ್ನವಿಚಾರವನ್ನು ತನ್ನಕೃತಿಯಲ್ಲಿ ಕನ್ನಡದ ಆದಿ ಕವಿ ಪಂಪನ ಹಾಗೆ ವಿವರವಾಗಿ ನಿವೇದಿಸಿಕೊಂಡಿರುವುದರಿಂದ ಕವಿಚರಿತೆಯನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಅವನು ತನ್ನ ಊರು ಕರ್ನಾಟಕದ ಸಯ್ಯಡಿಯ ಅಗ್ರಹಾರ (ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿಗೆ ಸೇರಿರುವ ಸವಡಿ) ಎಂದು ಹೇಳಿದ್ದಾನೆ. ‘ಛಂದೋಂಬು ಯನ್ನು ಬರೆದ ನಾಗವರ್ಮನ ಊರು ಅದೇ ಆಗಿದೆ. ಅದು ಕಿಸುಕಾಡುನಾಡಿನಲ್ಲಿದೆ ಎಂದು ಅವನು ಹೇಳಿದ್ದಾನೆ. ಆ ಸಯ್ಯಡಿಯಲ್ಲಿ ತನ್ನ ಚಕ್ರವರ್ತಿಯ ಆಜ್ಞೆಯಂತೆ ಹರಿಹರಭವನಗಳನ್ನು ದುರ್ಗಸಿಂಹನು ಕಟ್ಟಿಸಿದನಂತೆ, ಸಯ್ಯಡಿ ಇಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿದೆ.
         ದುರ್ಗಸಿಂಹನ ಪದ್ಯಗಳು ‘ಸೂಕ್ತಿ ಸುಧಾರ್ಣವ’ ದಲ್ಲಿ ದೊರಕುವುದರಿಂದ ದುರ್ಗಸಿಂಹನು ಕ್ರಿ.ಶ. ೧೧೩೯ ರಿಂದ ಕ್ರಿ.ಶ. ೧೧೪೯ರ ವರೆಗೆ ಆಳಿದ ಚಾಲುಕ್ಯ ಜಗದೇಕಮಲ್ಲನಲ್ಲಿ ಸಂಧಿವಿಗ್ರಹಿಯಾಗಿದ್ದಿರಬೇಕೆಂದೂ ಆದರಿಂದ ಇವನ ಕಾಲವು ಕ್ರಿ.ಶ.ಸು. ೧೧೪೫ ಆಗಿದ್ದಿರಬೇಕೆಂದೂ ಕವಿಚರಿತ್ರೆಯ ಪ್ರಥಮ ಸಂಪುಟದಲ್ಲಿ ಶ್ರೀ ಆರ್. ನರಸಿಂಹಾಚಾರ್ಯರು ನಿರ್ಣಯಿಸಿದ್ದರು. ಈ ಅಭಿಪ್ರಾಯವನ್ನೇ ಶ್ರೀ ಎಸ್. ಜಿ. ನರಸಿಂಹಾಚಾರ್ಯರ ಆವೃತ್ತಿಯ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಶ್ರೀ ರಾಜಪುರೋಹಿತರು ಒಂದನೆಯ ಜಗದೇಕಮಲ್ಲ ಜಯಸಿಂಹನ ಆಳ್ವಿಕೆಯ ಕಾಲದಲ್ಲಿ ಎಂದರೆ ಕ್ರಿ.ಶ. ೧೦೩೭-೧೦೪೨ರ ಅವಯಲ್ಲಿ ದುರ್ಗಸಿಂಹನು ತನ್ನ ಕೃತಿಯನ್ನು ರಚಿಸಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ರಂ. ಶ್ರೀ. ಮುಗಳಿಯವರು ಸು.ಕ್ರಿ.ಶ. ೧೦೩೦ ಎನ್ನುತ್ತಾರೆ. ಕರ್ಣಾಟಕ ಕವಿಚರಿತ್ರೆಯ ೧೯೬೧ರ ಪರಿಶೋತ ಮುದ್ರಣದಲ್ಲಿ ದುರ್ಗಸಿಂಹನ ಕಾಲವನ್ನು ಕ್ರಿ.ಶ. ಸು. ೧೦೨೫ ಎಂದು ಹೇಳಿದೆ.
       ಪಂಚತಂತ್ರದ ಆರಾ ಪ್ರತಿಯಲ್ಲಿ ದೊರಕಿದ ಒಂದು ಪದ್ಯ ದುರ್ಗಸಿಂಹನ ಕಾಲ ನಿರ್ಣಯ ಮಾಡಲು ಸಹಕಾರಿಯಾಯಿತು. 
ಪದ್ಯ ಹಿಗಿದೆ :
  ಅತಿ ಸಂಪನ್ನತೆವೆತ್ತ ಸದ್ಗೃಹನಿವಾಸಸ್ಥಾನಮಾದ ಪ್ರಜಾಪತಿ
  ಸಂವತ್ಸರ ಚೆತ್ರಮಾಸಸಿತಪಕ್ಷ ದ್ವಾದಶೀ ತಾರಕಾ ಪತಿವಾರಂ
  ಬರೆ ಪಂಚತಂತ್ರಮೆಸೆದತ್ತೀ ಧಾತ್ರಿಯೂಳ್ ದುರ್ಗನಿರ್ಮಿತಮುದ್ಯತ್
  ಕವಿಶೇಖರ ಪ್ರಮದ ಲೀಲಾಪುಷ್ಥಿತಾಮ್ರದ್ರುಮಂ ||

  ವಸುಭಾಗಭಟ್ಟ ಕೃತಿಯಂ
  ವಸುಧಾದಿಪ ಹಿತಮನಖಿಲ ವಿಬುಧಸ್ತುತಮಂ
  ಪೊಸತಾಗಿರೆ ವಿರಚಿಸುವೆಂ
  ವಸುವ್ಮತಿಯೊಳ್ ಪಂಚತಂತ್ರಮಂ ಕನ್ನಡದಿಂ ||


     ಈ ಪದ್ಯವನ್ನು ಆಧರಿಸಿ ರಾಷ್ಥ್ರಕವಿ ಗೋವಿಂದ ಪೈ ಅವರು ಜಯಸಿಂಹ ಜಗದೇಕಮಲ್ಲನ ಕಾಲ ಕ್ರಿ.ಶ. ೧೦೧೫-೧೦೪೨ ಎಂದು ಅವನಲ್ಲಿಯೇ ದುರ್ಗಸಿಂಹನು ಸಂವಿಗ್ರಹಿಯಾಗಿರಬೇಕೆಂದೂ, ಮೇಲಿನ ಪದ್ಯದಲ್ಲಿ ಹೇಳಿದ ಶಕ ಸಂವತ್ಸರ ೯೫೩ ನೆಯ ಪ್ರಜಾಪತಿ ಸಂವತ್ಸರ ಚೈತ್ರಶುದ್ದ ೧೨ ಸೋಮವಾರವು ಕ್ರಿ.ಶ. ೧೦೩೧ನೆಯ ಮಾರ್ಚ್ ಎಂಟನೆಯ ತಾರೀಕು ಆಗುತ್ತದೆ ಎಂದೂ ನಿರ್ಣಯಿಸಿದ್ದಾರೆ. ಇದನ್ನು ದುರ್ಗಸಿಂಹನ ಕೃತಿ ರಚನೆಯ ಕಾಲ ಎಂದು ಒಪ್ಪಬಹುದು.

ದುರ್ಗಸಿಂಹನು ತನ್ನ ಗ್ರಂಥದ ಆದಿಭಾಗದಲ್ಲಿ ಸುಮಾರು ೬೨ ಪದ್ಯಗಳಲ್ಲಿ ತನ್ನ ವಿಚಾರವನ್ನು ವಿವರವಾಗಿ ತಿಳಿಸಿದ್ದಾನೆ. ಅದು ಹೀಗಿದೆ.

   ಕರ್ಣಾಟಕದ ಕಿಸುಕಾಡಿನಲ್ಲಿ ಸಯ್ಯಡಿಯೆಂಬ ಅಗ್ರಹಾರದಲ್ಲಿ ‘ಸಕಲ ಧರ್ಮಕ್ಕೆಲ್ಲಂ ಕಯ್ಕಾಲ್ ಮೂಡಿದಂತೆ,’ದುರ್ಗಸಿಂಹನೆಂಬ ಬ್ರಾಹ್ಮಣನಿದ್ದನು. ಆತನ ಹೆಂಡತಿ ರೇವಕಬ್ಬೆ. ಇವರ ಮಗ ‘ಮನ್ವಾದಿ ಪುರಾಣ ಮುನಿಗಣ ಪ್ರಣುತ ಶ್ರುತಿವಿಹಿತ ವಿಶುದ್ದಮಾರ್ಗನುಂ ನಿತ್ಯಹೋವ್ಮಧಯನಾನೇಕ ಯಾಗಾವಭೃತಸ್ನಾನ ಪವಿತ್ರಗಾತ್ರನುಂ, ಭಗವನ್ನಾರಯಣ ಚರಣಾಂಬುಜ ಸ್ಮರಣ ಪರಿಣತಾಂತ:ಕರಣನುಂ, ತರ್ಕವ್ಯಾಕರಣ ಕಾವ್ಯ ನಾಟಕ ಭರತ ವಾತ್ಸ್ಯಯನಾದ್ಯಶೇಷ ವಿದ್ಯಾಸಮುದ್ರತರಣಗುಣೈಕಪುಣ್ಯನುಂ ಧರಾಮರಾಗ್ರಗಣ್ಯನುಂ, ಅದ ದುರ್ಗಮಯ್ಯನಿದ್ದನು. ಅವನ ಮಗನಾದ ‘ದೇವದ್ವಿಜ ಗುರುಜನಪದಸೇವಾನಿರತ, ನದ ಈಶ್ವರಾರನಿದ್ದನು. ಅವನ ಹೆಂಡತಿ ರೇವಾಂಬಿಕೆ ಇವರಿಬ್ಬರ ಮಗ ಪ್ರಸ್ತುತ ಕವಿಯಾದ ದುರ್ಗಸಿಂಹ. ಈತನು ಬ್ರಾಹಣ. ಕಮ್ಮೆ ಕುಲದವನು ಗೌತಮ ಗೋತ್ರ ಸಂಭೂತನು. ಇವನ ಗುರು ‘ಮಹಾಯೋಗಿ, ಯಾದ ಶಂಕರಭಟ್ಟ. ‘ಸತ್ಯಾಶ್ರಯ ಕುಲತಿಲಕಂ. ಚೋಳ ಕಾಲಾನಲಂ, ಎಂಬ ಬಿರುದುಗಳುಳ್ಳ ಜಗದೇಕಮಲ್ಲ ಜಯಸಿಂಹ ಎಂಬ ರಾಜನಲ್ಲಿ ಶ್ರೀ ಗಂಡಭೂರಿಶ್ರಯನೆಂಬ ಬಿರುದುಳ್ಳ ಸಿಂಹಸನ್ನಾಹನೆಂಬ ದಂಡನಾಯಕನಿದ್ದನು. ಅವನ ಪಾದಕಮಲಭೃಂಗನಾದ ಚಕ್ರವರ್ತಿಯದಂಡಾದೀಶ, ಕೋದಂಡರಾಮಾಪ ಮೊದಲಾದ ಬಿರುದುಳ್ಳ ಕುಮಾರಸ್ವಾಮಿಯು ಕವಿಗೆ ಜಗದೇಕಮಲ್ಲನಲ್ಲಿ ಸಂವಿಗ್ರಹಿ ಪದವಿಯನ್ನು ಕೊಡಿಸಿದನು. ಇವನು ತನ್ನ ಚಕ್ರವರ್ತಿಯ ಅಜ್ಞೆಯ ಸಯ್ಯಡಿಯಲ್ಲಿ ‘ಹರಿಹರಭವನ, ಗಳನ್ನು ಮಾಡಿಸಿದಂತೆ.

    ಈತನು ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸರನ್ನೂ ‘ನಾಭೇಯಂ ಸುರಾಮಾತ್ಯನಿಂದ್ರನದೀನಂದನನುದ್ದವಂ ಮನುವಿಶಾಲಕ್ಷೇಭದಂತಂ ಕುಬೇರನಜಾತಪ್ರಿಯಪುತ್ರ, ಎಂಬ ನೀತಿಶಾಸ್ತ್ರ ಪ್ರವರ್ತಕರನ್ನೂ, ಚಂದ್ರಗುಪ್ತನಿಗೆ ರಾಜ್ಯವನ್ನು ಸಂಪಾದಿಸಿಕೊಟ್ಟ ನೀತಿವಿದನಾದ ವಿಷ್ಣುಗುಪ್ತನನ್ನೂ, ಗುಣಾಡ್ಯ, ವರರುಚಿ, ಕಾಳಿದಾಸ, ಬಾಣ, ಮಯೂರ, ಧನಂಜಯ, ‘ವಾಮನಕುಮಾರನುದ್ಬಟ ಭೀಮಂಭವಭೂತಿ ಭಾರವೀ ಭಟ್ಟಿ ವಚಶ್ರೀಮಾಘ ರಾಜಶೇಖರ ಕಾಮಂದಕರು, ದಂಡಿ ಮೊದಲಾದ ಸಂಸ್ಕೃತ ಕವಿಗಳನ್ನು ಸ್ಮರಿಸಿರುವನು. ಕನ್ನಡದ ಕವಿಗಳಲ್ಲಿ ಶ್ರೀವಿಜಯ, ಕನ್ನಮಯ್ಯ, ಅಸಗ, ಮನಸಿಜ, ಚಂದ್ರ, ಪಂಪ, ಗಜಾಂಕುಶ, ಕವಿತಾವಿಲಾಸರನ್ನು ಸ್ಮರಿಸಿದ್ದಾನೆ. ತನ್ನ ಗ್ರಂಥವನ್ನು‘ ಕವಿ ಗಮಕಿ ವಾದಿ ವಾಗ್ಮಿಪ್ರವರ,ನಾದ ಶ್ರೀಮಾದಿರಾಜ ಮುನಿಪುಂಗವನ್ನು ತಿದ್ದಿದನೆಂದು ಹೇಳಿದ್ದಾನೆ.

     ದುರ್ಗಸಿಂಹನು ತನ್ನ ಗುಣಾವಳಿಗಳನ್ನು ಹೀಗೆ ಹೇಳಿಕೊಂಡಿದ್ದಾನೆ: ನಿರ್ದುಷ್ಟವಾದ ನಡತೆಗೆ ಉದಾಹರಣನು, ಪ್ರಕಾಶಮಾನವಾದ ಕೀರ್ತಿಗೆ ಆಧಾರ, ಸ್ವಾಮಿ ಕಾರ‍್ಯಕ್ಕೆ ಹನುಮಂತ, ತನ್ನ ವಂಶಕ್ಕೆ ಅಲಂಕಾರರತ್ನ, ಸೆನ್ಯ ಸಮುದ್ರವನ್ನು ದಾಟುವುದರಲ್ಲಿ ಶೋಭಾಯಮಾನ, ಸಿದ್ದ ಇಷ್ಟ ಶಿಷ್ಟರ ಸಮೂಹಕ್ಕೆ ದೋಣಿ ಎಂದು ದುರ್ಗಸಿಂಹನನ್ನು ವಿದ್ವಜ್ಜನರು ಹೊಗಳುವರು. ವಿನಯಕ್ಕೆ ಆಶ್ರಯನು ಉತ್ತಮನೂ ಸತ್ಕುಲಸಂಭವನ ಸ್ವಾಮಿಕಾರ‍್ಯಧುರೀಣನೂ ಮನುಧರ್ಮದ ಮಾರ್ಗದಲ್ಲಿರುವವನೂ ಎಂದು ದುರ್ಗಸಿಂಹ ಪ್ರಸಿದ್ದನಲ್ಲವೇ, ಜ್ಞಾನಕ್ಕೆ ಆಶ್ರಯಸ್ಥಾನ, ಒಳ್ಳೆಯ ಗುಣಕ್ಕೆ ಕಣಿ, ಶ್ಮಚಿಗೆ ಆಧಾರ, ಜಾಣತನಕ್ಕೆ ದಿಣ್ಣೆ, ಒಳ್ಳೆಯ ಮಾತಿಗೆ ಒಡೆಯ, ಪರಾಕ್ರಮಕ್ಕೆ ಆಶ್ರಯ, ಸಾಮರ್ಥ್ಯಕ್ಕೆ ಆಟದ ಮನೆ, ಧರ್ಮಕ್ಕೆ, ಗುರಿ, ವಿನಯಕ್ಕೆ ತವರು ಮನೆ, ಸತ್ಯಕ್ಕೆ ಆಶ್ರಯಸ್ಥಾನ ಎಂದು ಬುದ್ದಿಗೆ ಮೀರಿ ಪ್ರೀತಿಸಿ ದುರ್ಗಸಿಂಹನನ್ನು ಪ್ರಪಂಚವು ಹೊಗಳುವುದು. ಚಂಚಲಚಿತ್ತರನ್ನು ದುಷ್ಟರನ್ನು, ಪಡೆದ ದೋಷಕ್ಕೆ ಪ್ರಾಯಶ್ಚಿತ್ತವೆಂಬ ಸರ್ವವಿದ್ವಜ್ಜನಆಶ್ರಯನಾದ ದುರ್ಗಸಿಂಹನನ್ನು ವಿ ಪಡೆದನು ವಿನಯ ಸಮುದ್ರ, ಶಿಷ್ಟಕಲ್ಪವೃಕ್ಷ, ಸತ್ಯವ್ರತ, ಬ್ರಾಹ್ಮಣವಂಶವೆಂಬ ಆಕಾಶಕ್ಕೆ ಸೂರ‍್ಯ, ವಾಗ್ವನಿತೆಯ ಮನೋರಮ, ಎಂದೆಷ್ಟೋ ರೀತಿಯಲ್ಲಿ ತನ್ನ ವಂಶದ ಕೀರ್ತಿಯೆಂಬ ದುರ್ಗಸಿಂಹನನ್ನು ಪ್ರಪಂಚ ಬಣ್ಣಿಸುವುದಂತೆ. ಜಗತ್ತಿನಲ್ಲಿ ಸ್ವಾಮಿಹಿತದಲ್ಲಿ ಪ್ರಸಿದ್ದನಾದ ಕರ್ಣನಿಗಿಂತ, ಹನುಮಂತನಿಗಿಂತ ಗರುಡನಿಗಿಂತ ದುರ್ಗಸಿಂಹನು ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐದುಮಡಿ ದೊಡ್ಡವನಂತೆ !
      ಪರಮಾತ್ಮನು ಪರಮೇಶ್ವರ, ವಿಷ್ಣುವು ದೆವ, ಮಹಾಯೋಗಿಗಳಾದ ಶಂಕರಭಟ್ಟರು ಗುರುಗಳು, ಚೆನ್ನಾಗಿ ಘೋಷಿಸಿದವನು ಶ್ರೀ ಚೋಳಕಾಳಾನಲ ಎಂಬ ಬಿರುದುಳ್ಳ ರಾಜಶ್ರೇಷ್ಟನೂ, ಚಕ್ರವರ್ತಿತಿಲಕನ್ನೂ ಚೆನ್ನಾಗಿ ಸೊಕ್ಕಿದ ವೆರಿಗಳೆಂಬ ಆನೆಗಳಿಗೆ ಸಿಂಹಸ್ವರೂಪನೂ ಅದ ಜಗದೇಕಮಲ್ಲ ಜಯಸಿಂಹನು ಒಡೆಯನು ಎಂದ ಮೇಲೆ ದುರ್ಗಸಿಂಹನ ದೊಡ್ಡತನವನ್ನು ಏನೆಂದು ವರ್ಣಿಸಲಿ !

********






10ನೇ ತರಗತಿ-ಕನ್ನಡ-ಗದ್ಯ-06-ವ್ಯಾಘ್ರಗೀತೆ - ವ್ಯಾಕರಣ : ತದ್ಧಿತಾಂತಗಳು

ತದ್ಧಿತಾಂತಗಳು
ತದ್ಧಿತಾಂತಗಳನ್ನು ತಿಳಿಯುವ ಮೊದಲು ನಾಮಪ್ರಕೃತಿಗಳ ಬಗ್ಗೆ ತಿಳಿಯುವುದು ಸೂಕ್ತ.
ನಾಮಪ್ರಕೃತಿ : ನಾಮಪದದ ಮೂಲರೂಪವನ್ನು ನಾಮ ಪ್ರಕೃತಿ ಅಥವಾ ಪ್ರಾತಿಪದಿಕ ಎನ್ನುವರು. 
ಉದಾ: ಮರ, ಗಿಡ, ಮನುಷ್ಯ, ಲೆಕ್ಕಿಗ, ಗಾಣಗಿತ್ತಿ, ಸಿರಿವಂತ ಇತ್ಯಾದಿ.

ನಾಂ ಪ್ರಕೃತಿಗಳಲ್ಲಿ ಪ್ರಮುಖವಾಗಿ ಎರಡು ವಿಧ : ೧) ಸಹಜ ನಾಮಪ್ರಕೃತಿ  ೨) ಸಾಧಿತ ನಾಮಪ್ರಕೃತಿ
೧) ಸಹಜ ನಾಮಪ್ರಕೃತಿ : ಸ್ವಾಭಾವಿಕವಾಗಿ ಬಳಕೆಯಲ್ಲಿರುವ; ಯಾವುದೇ ಬದಲಾವಣೆ ಮಾಡದಿರುವ; ಬೇರೆ ಬೇರೆ ಪದಗಳ ಸಂಯೋಜನೆ ಇಲ್ಲದ ನಾಮಪದದ ಮೂಲ ರೂಪವನ್ನು ಸಹಜ ನಾಮಪ್ರಕೃತಿ ಎನ್ನುವರು.
ಉದಾ: ಗಿಡ, ಮರ, ಬಳ್ಳಿ, ಬೆಟ್ಟ, ಗುಡ್ಡ, ನದಿ, ಕಪ್ಪು, ಪೂರ್ವ, ಒಂದು, ನೂರು, ಅವನು, ಅದು ಇತ್ಯಾದಿ
೨) ಸಾಧಿತ ನಾಮಪ್ರಕೃತಿ : ಭಾವವಾಚಕ ಪದಗಳು, ಕೃದಂತಗಳು, ತದ್ಧಿತಾಂತಗಳು

[ಈ ಮೇಲಿನ ಮಾಹಿತಿಗಳನ್ನು ನೋಡಿದಾಗ ಕೃದಂತ, ತದ್ಧಿತಾಂತಗಳು ನಾಮಪದವನ್ನು ಸೃಷ್ಟಿ ಮಾಡುವ ವ್ಯಾಕರಣದ ಕ್ರಿಯೆಗಳೆಂದು ಹೇಳಬಹುದು. ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಧಾತುಗಳಿಗೆ ಕೃತ್ ಪ್ರತ್ಯಯಗಳನ್ನು ಸೇರಿಸಿ ಕೃದಂತಗಳಾಗುತ್ತವೆ. ಹಾಗೆಯೇ ಸಹಜ ನಾಮ ಪ್ರಕೃತಿಗಳಿಗೆ ತದ್ಧಿತ ಪ್ರತ್ಯಯಗಳನ್ನು ಸೇರಿಸಿ ಪಡೆಯುವ ಪದಗಳೇ ತದ್ಧಿತಾಂತಗಳು. 
    ಆದ್ದರಿಂದ ಕೃದಂತ ತದ್ಧಿತಾಂತಗಳನ್ನು ಗುರುತಿಸುವಾಗ  ಯಾವ ಪದದಲ್ಲಿ ಧಾತು ಅಥವಾ ಕ್ರಿಯೆ ಇದೆಯೋ ಅದು 'ಕೃದಂತ' ಎಂದೂ ಯಾವ ಪದದಲ್ಲಿ ನಾಮಪದ ಅಡಗಿದೆಯೋ ಅದು ತದ್ಧಿತಾಂತವೆಂದೂ ಗುರುತಿಸಬಹುದು.
*********

ತದ್ಧಿತಾಂತಗಳು : ನಾಮಪದಗಳ ಮೇಲೆ ಬೇರೆಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ಇಕ ಮುಂತಾದ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳಾಗುತ್ತವೆ. ಗಾರ‍್ತಿ, ಕಾರ‍್ತಿ, ಇತ್ತಿ, ವಂತೆ.

ತದ್ಧಿತಾಂತಗಳಲ್ಲಿ ಮೂರು ವಿಧಗಳಿವೆ :
೧) ತದ್ಧಿತಾಂತನಾಮ
೨) ತದ್ಧಿತಾಂತ ಭಾವನಾಮ 
೩) ತದ್ಧಿತಾಂತ ಅವ್ಯಯ

೧] ತದ್ಧಿತಾಂತ ನಾಮಗಳು : ನಾಮಪದಗಳಿಗೆ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಪದಗಳೇ ತದ್ಧಿತಾಂತನಾಮಗಳು. 

ಉದಾ:- (ಪುಲ್ಲಿಂಗರೂಪದಲ್ಲಿ) 
ಬಳೆಯನ್ನು + ಮಾರುವವನು = ಬಳೆಗಾರ 
ಕೋಲನ್ನು + ಹಿಡಿಯುವವನು = ಕೋಲುಕಾರ 
ಕನ್ನಡವನ್ನು + ಬಲ್ಲವನು = ಕನ್ನಡಿಗ 
ಸಿರಿಯನ್ನು + ಉಳ್ಳವನು = ಸಿರಿವಂತ 
ಪ್ರಮಾಣವನ್ನು + ಉಳ್ಳವನು = ಪ್ರಾಮಾಣಿಕ 

(ಸ್ತ್ರೀಲಿಂಗರೂಪದಲ್ಲಿ) 
ಬಳೆಯನ್ನು + ಮಾರುವವಳು = ಬಳೆಗಾರ‍್ತಿ 
ಕೋಲನ್ನು + ಹಿಡಿಯುವವಳು = ಕೋಲುಕಾರ‍್ತಿ 
ಕನ್ನಡವನ್ನು + ಬಲ್ಲವಳು = ಕನ್ನಡಿತಿ 
ಸಿರಿಯನ್ನು + ಉಳ್ಳವಳು = ಸಿರಿವಂತೆ 

ಹೀಗೆ_ 
ಇತಿ, ಇತ್ತಿ, ಗಿತ್ತಿ, ತಿ, ಎ ಇತ್ಯಾದಿ ಸ್ತ್ರೀಲಿಂಗ ರೂಪದ ತದ್ಧಿತ ಪ್ರತ್ಯಯಗಳು ಸೇರಿ ಸ್ತ್ರೀಲಿಂಗದ ತದ್ಧಿತಾಂತಗಳಾಗುತ್ತವೆ. 
(ಇತರೆ ಉದಾಹರಣೆಗಳು : ಕುಂಬಾರ, ಗಾಣಿಗ, ಚಾಲಕ, ಲೆಕ್ಕಿಗ, ಗಾಣಗಿತ್ತಿ, ಹಾವಾಡಿಗ .... ಇತ್ಯಾದಿ )

೨] ತದ್ಧಿತಾಂತ ಭಾವನಾಮಗಳು : ನಾಮಪದಗಳ ಮುಂದೆ ಭಾವಾರ್ಥದಲ್ಲಿ - ತನ,- ಇಕೆ, -ಪು, - ಮೆ ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತ ಭಾವನಾಮಗಳೆನಿಸುವುವು. 

ಉದಾ:- ಜಾಣನ (ಭಾವ) ತನ - ಜಾಣತನ, [ಜಾಣನ (ಭಾವ) ಮೆ - ಜಾಣ್ಮೆ]
ಚೆಲುವಿನ (ಭಾವ) ಇಕೆ - ಚೆಲುವಿಕೆ 
ಕರಿದರ (ಭಾವ) ಪು - ಕಪ್ಪು 
ಪಿರಿದರ (ಭಾವ) ಮೆ - ಪೆರ್ಮೆ
ಒಳ್ಳೆಯದರ (ಭಾವ) ಇತು - ಒಳಿತು

(ಇತರೆ ಉದಾಹರಣೆಗಳು : ಒಲುಮೆ, ಬಲ್ಮೆ, ಹಿರಿಮೆ, ಕೆಡುಕು, ಕೆಂಪು, ಬಿಳಿಪು, ಅರಿಮೆ, ತಿಳಿವಳಿಕೆ, ಬಡತನ, ಸಿರಿತನ, ಸಿರಿವಂತಿಕೆ... ಇತ್ಯಾದಿ)

೩] ತದ್ಧಿತಾಂತಾವ್ಯಯ :
    ನಾಮಪದಗಳ ಮುಂದೆ ಅಂತೆ, ವೊಲ್, ವೋಲು, ತನಕ, ವರೆಗೆ, ಇಂತ, ಆಗಿ, ಓಸುಗ ಮುಂತಾದ ಪ್ರತ್ಯಯಗಳು ಸೇರಿ ತದ್ಧಿತಾಂತಾವ್ಯಯಗಳಾಗುತ್ತವೆ. ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿ ಪ್ರತ್ಯಯಗಳು ಲೋಪವಾಗುವುದಿಲ್ಲ. 

ಉದಾಹರಣೆಗೆ: 
    ಅಂತೆ : ಚಂದ್ರನಂತೆ, ಅವನಂತೆ 
    ವೊಲ್ : ಚಂದ್ರನವೊಲ್, ಅವನವೊಲ್ 
    ವೊಲು : ನನ್ನವೊಲು, ಅವಳವೊಲು 
    ವೋಲು : ಮನೆಯವೋಲು, ಇದರವೋಲು 
    ವೋಲ್ : ಕರಡಿಯವೋಲ್, ನದಿಯವೋಲ್ 
    ತನಕ : ಮನೆಯತನಕ, ಹಿಮಾಲಯದತನಕ 
    ವರೆಗೆ : ಶಾಲೆಯವರೆಗೆ, ಪಟ್ಟಣದವರೆಗೆ 
    ಮಟ್ಟಿಗೆ : ಇವಳಮಟ್ಟಿಗೆ, ಸುಂದರನಮಟ್ಟಿಗೆ 
    ಓಸ್ಕರ : ನನಗೋಸ್ಕರ, ಬೆಕ್ಕಿಗೋಸ್ಕರ 
    ಸಲುವಾಗಿ : ಅರ್ಜುನನ ಸಲುವಾಗಿ, ಕಟ್ಟಡದ ಸಲುವಾಗಿ 
    ಇಂತ : ರಾಧೆಗಿಂತ, ಅದಕ್ಕಿಂತ 
    ಆಗಿ : ನಿನಗಾಗಿ, ಇದಕ್ಕಾಗಿ 
    ಓಸುಗ : ಮದುವೆಗೋಸುಗ, ಕಾಗೆಗೋಸುಗ 

*************


೬-ವ್ಯಾಘ್ರಗೀತೆ_ಪ್ರಶ್ನೋತ್ತರ (Notes) ವೀಕ್ಷಣೆ & ಡೌನ್ಲೋಡ್

>>> Download             
           

****************





10ನೇ ತರಗತಿ-ಕನ್ನಡ-ಗದ್ಯ-06-ವ್ಯಾಘ್ರಗೀತೆ - ವೀಡಿಯೋಗಳು

ಗದ್ಯ ಪಾಠಕ್ಕೆ ಸಂಬಂಧಿಸಿದ ಪೂರಕ ವೀಡಿಯೋಗಳು
ಪುಣ್ಯಕೋಟಿ - ವೀಡಿಯೋ

ಸಂವೇದ ತರಗತಿ ವ್ಯಾಘ್ರಗೀತೆ ಭಾಗ-1

ಸಂವೇದ ತರಗತಿ ವ್ಯಾಘ್ರಗೀತೆ ಭಾಗ-2

ಸಂವೇದ ತರಗತಿ ವ್ಯಾಘ್ರಗೀತೆ ಭಾಗ-3

****************






10ನೇ ತರಗತಿ-ಕನ್ನಡ-ಗದ್ಯ-06-ವ್ಯಾಘ್ರಗೀತೆ - ಪೂರಕ ಮಾಹಿತಿ

   ಪುಣ್ಯಕೋಟಿ ಗೋವಿನ ಹಾಡು

(Punyakoti Govina Haadu Lyrics)

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೇ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಇತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ?
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು?

ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯೊಡಹುಟ್ಟುಗಳಿರಾ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು?
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
 
ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರೈ

ಈವನು ಸೌಭಾಗ್ಯ ಸಂಪದ
ಭಾವಜಪಿತ ಕೃಷ್ಣನು
ಪುಣ್ಯಕೋಟಿ ಹಸು ಮತ್ತು ಅರ್ಬುತ ಎಂಬ ಹುಲಿ
***************





10ನೇ ತರಗತಿ-ಕನ್ನಡ-ಗದ್ಯ-06-ವ್ಯಾಘ್ರಗೀತೆ - ಚಿತ್ರಗಳ ಸಂಗ್ರಹ

ಎ ಎನ್ ಮೂರ್ತಿರಾವ್

ಪುಣ್ಯಕೋಟಿ ಕಥೆಗೆ ಸಂಬಂದಿಸಿದ ಚಿತ್ರಗಳು

 
 
 

















****************