ನನ್ನ ಪುಟಗಳು

26 ಸೆಪ್ಟೆಂಬರ್ 2023

10ನೇ ತರಗತಿ ಪದ್ಯಪಾಠ-7 ವೀರಲವ-ವ್ಯಾಕರಣ/ಛಂದಸ್ಸು (10th-Veeralava-Grammar)

ಭಾಷಾ ಚಟುವಟಿಕೆ
೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
    ೧. ಸೊಲ್ಗೇಳಿ - ಸೊಲ್ಲನ್ನು + ಕೇಳಿ = ಕ್ರಿಯಾಸಮಾಸ
    ೨. ನಲ್ಗುದುರೆ - ನಲ್ಲಿತು + ಕುದುರೆ = ಕರ್ಮಧಾರಯಸಮಾಸ
    ೩. ಬಿಲ್ಗೊಂಡು - ಬಿಲ್ಲನ್ನು + ಕೊಂಡು = ಕ್ರಿಯಾಸಮಾಸ.
    ೪. ಬಿಲ್ದಿರುವನೇರಿಸಿ - ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ.
    ೫. ಪೂದೋಟ - ಪೂವಿನ + ತೋಟ = ತತ್ಪುರುಷಸಮಾಸ.
    ೬. ಲಿಖಿತವನೋದಿ - ಲಿಖಿತವನ್ನು + ಓದಿ = ಕ್ರಿಯಾಸಮಾಸ
    ೭. ಯಜ್ಞತುರುಗ - ಯಜ್ಞದ + ತುರುಗ = ತತ್ಪುರುಷಸಮಾಸ.
    ೮. ಕದಳಿದ್ರುಮ - ಕದಳಿಯ + ದ್ರುಮ = ತತ್ಪುರುಷಸಮಾಸ.
    ೯. ಅಬ್ಧಿಪ - ಅಬ್ಧಿಗೆ (ಸಮುದ್ರಕ್ಕೆ) ಪತಿ (ಒಡೆಯ) ಯಾರೋ ಆತ (ವರುಣ) = ಬಹುವ್ರೀಹಿಸಮಾಸ.

೨. ತತ್ಸಮ-ತದ್ಭವ ಬರೆಯಿರಿ.
    ೧. ವೀರ - ಬೀರ
    ೨. ಯಜ್ಞ - ಜನ್ನ 
    ೩. ಬಂಜೆ - ವಂದ್ಯಾ 
    ೪. ಕುವರ - ಕುಮಾರ 
    ೫. ಲೋಕ - ಲೋಗ

೩. ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
    ೧. ಚರಿಸುತಧ್ವರದ - ಚರಿಸುತ + ಅಧ್ವರದ = ಲೋಪಸಂಧಿ.
    ೨. ನಿಜಾಶ್ರಮ - ನಿಜ + ಆಶ್ರಮ = ಸವರ್ಣಧೀರ್ಘಸಂಧಿ.
    ೩. ಲೇಖನವನೋದಿ - ಲೇಖನವನು + ಓದಿ = ಲೋಪಸಂಧಿ.
    ೪. ತೆಗೆದುತ್ತರೀಯಮಂ - ತೆಗೆದು + ಉತ್ತರೀಯಮಂ = ಲೋಪಸಂಧಿ.
    ೫. ಬೇಡಬೇಡರಸುಗಳ - ಬೇಡಬೇಡ + ಅರಸುಗಳ = ಲೋಪಸಂಧಿ.
    ೬. ನಿಂತಿರ್ದನ್ - ನಿಂತು + ಇರ್ದನ್ = ಲೋಪಸಂಧಿ.
    ೭. ಪೂದೋಟ - ಪೂ + ತೋಟ = ಆದೇಶಸಂಧಿ.
    ೮. ಸೊಲ್ಗೇಳಿ - ಸೊಲ್ಲು + ಕೇಳಿ = ಆದೇಶಸಂಧಿ.

೪. ಪ್ರಸ್ತಾರಹಾಕಿ ಗಣ ವಿಭಾಗ ಮಾಡಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ.
    5            5          5        5
_  u   _     _  _ u  uuuuu  _  _ u
ಉರ್ವಿಯೊಳ್ | ಕೌಸಲ್ಯೆ | ಪಡೆದಕುವ | ರಂರಾಮ|
    5            5          5        5
_  u   _   _ u _   uu_u   uuuuu
ನೊರ್ವನೇ | ವೀರನಾ | ತನಯಜ್ಞ | ತುರಗಮಿದು|
    5            5          5        5          5         5        2
_  uuu   _ u _   _  uu_    uuu _    _ u _   uuu _    _
ನಿರ್ವಹಿಸ | ಲಾರ್ಪರಾ | ರಾದೊಡಂ | ತಡೆಯಲೆಂ | ದಿರ್ದಲೇ | ಖನವನೋ |ದಿ
                                                    ಛಂದಸ್ಸು : ವಾರ್ಧಕ ಷಟ್ಪದಿ

ವಾರ್ಧಕ ಷಟ್ಪದಿಯ ಲಕ್ಷಣಗಳು:
* ಆರು ಸಾಲುಗಳಿರುತ್ತವೆ.
* ೧, ೩, ೪ ಮತ್ತು ೫ ನೆಯ ಸಾಲುಗಳು ತಲಾ ೨೦ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ.
* ೩ ಮತ್ತು ೬ ನೆಯ ಸಾಲುಗಳು ತಲಾ ೩೨ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೬ ಗಣಗಳೊಂದಿಗೆ ಒಂದು ಗುರು ಇರುತ್ತದೆ.
* ಮೊದಲನೆಯ ಸಾಲಿನನ ಗಣವಿನ್ಯಾಸ : 5/5/5/5/


ಬಹು ಆಯ್ಕೆ ಪ್ರಶ್ನೆಗಳು:
೧. ’ರಗಳೆ’ ಪದದ ತದ್ಭವ ರೂಪವಿದೆ.
    ಎ) ರಘಟಾ     ಬಿ) ರಗಳಾ     ಸಿ) ರಾಗಟ     ಡಿ) ರಂಗಗೀತೆ
೨. ಇವುಗಳಲ್ಲಿ ಬಹುಪಾದಗಳುಳ್ಳ ಪದ್ಯ :
    ಎ) ಕಂದ         ಬಿ) ಷಟ್ಟದಿ     ಸಿ) ವೃತ್ತ         ಡಿ) ರಗಳೆ
೩. ವಾರ್ಧಕ ಷಟ್ಪದಿಯ ಒಂದು ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ :
    ಎ) ೧೦೨         ಬಿ) ೧೪೦     ಸಿ) ೧೪೪         ಡಿ) ೬೪
೪. ಇವುಗಳಲ್ಲಿ ಯಾವುದು ರಗಳೆಯ ವಿಧವಾಗಿಲ್ಲ :
    ಎ) ಉತ್ಸಾಹ     ಬಿ) ಲಲಿತ     ಸಿ) ಸರಸಿ     ಡಿ) ಮಂದಾನಿಲ
೫. ವಾರ್ಧಕ ಷಟ್ಪದಿಯಲ್ಲಿ ಪ್ರತಿ ಗಣವು ಎಷ್ಟು ಮಾತ್ರೆಗಳಿಂದ ಕೂಡಿರುತ್ತದೆ?
    ಎ) ೩         ಬಿ) ೬         ಸಿ) ೫         ಡಿ) ೪
೬. ‘ನೆತ್ತಿಯೊಳ್’ ಇದು ಈ ವಿಭಕ್ತಿಗೆ ಉದಾಹರಣೆಯಾಗಿದೆ.
    ಎ) ಪ್ರಥಮ     ಬಿ) ದ್ವಿತೀಯ     ಸಿ) ತೃತೀಯ     ಡಿ) ಸಪ್ತಮಿ
೭. ‘ಲಿಖಿತಮಂ’ ಇಲ್ಲಿರುವ ವಿಭಕ್ತಿ :
    ಎ) ಪ್ರಥಮ     ಬಿ) ದ್ವಿತೀಯ     ಸಿ) ತೃತೀಯ     ಡಿ) ಚತುರ್ಧಿ
೮. ‘ಕುವರಂ’ ಇಲ್ಲಿರುವ ಅಕ್ಷರಗಣ :
    ಎ) ಭ-ಗಣ     ಬಿ) ಸ-ಗಣ     ಸಿ) ಮ-ಗಣ     ಡಿ) ತ-ಗಣ
೯. ’ಉರ್ವಿಯೊಳ್’ ಪದದಲ್ಲಿರುವ ಕಾರಕಾರ್ಥ :
    ಎ) ಕರ್ಮಾರ್ಥ     ಬಿ) ಸಂಪ್ರದಾನ     ಸಿ) ಅಪಾದಾನ     ಡಿ) ಅಧಿಕರಣ
೧೦. ‘ಅಗಡು’ ಪದದ ಹೊಸಗನ್ನಡ ರೂಪ ಇದಾಗಿದೆ :
    ಎ) ಅಡಗಿಕೋ      ಬಿ) ಶೌರ್ಯ      ಸಿ) ಕುದುರೆ      ಡಿ) ಹಡಗು

[ಉತ್ತರಗಳು: ೧. ಎ) ರಘಟಾ ೨. ಡಿ) ರಗಳೆ ೩. ಸಿ) ೧೪೪ ೪. ಸಿ) ಸರಸಿ ೫. ಸಿ) ೫ ೬. ಡಿ) ಸಪ್ತಮಿ ೭. ಬಿ) ದ್ವಿತೀಯ
೮. ಬಿ) ಸ-ಗಣ ೯. ಡಿ) ಅಧಿಕರಣ ೧೦. ಬಿ. ಶೌರ್ಯ]

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ:
೧. ಭಾಮಿನಿ : ೧೦೨ : : ವಾರ್ಧಕ : ___________
೨. ವೃತ್ತಗಳು : ಅಕ್ಷರಗಣ : : ರಗಳೆ : ___________
೩. ಸೊಲ್ಗೇಳಿ : ಕ್ರಿಯಾ ಸಮಾಸ : : ಪೂದೋಟ : ___________
೪. ಬಿಲ್ದಿರುವನೇರಿಸಿ : ಕ್ರಿಯಾ ಸಮಾಸ : : ನಲ್ಗುದುರೆ : ___________
೫. ನೃ : ರಾಜ : : ಅಬ್ಧಿಪ : ___________
೬. ಸೊಲ್ಗೇಳಿ : ಸೊಲ್ಲನ್ನು+ಕೇಳಿ : : ನಲ್ಗುದುರೆ : ___________
೭. ವೀರ : ಬೀರ : : ಬಂಜೆ : ___________
೮. ಗಳ : ಕೊರಳು : : ವಾಜಿ : ___________

[ಉತ್ತರಗಳು: ೧) ೧೪೪ ೨) ಮಾತ್ರಾಗಣ ೩) ತತ್ಪುರುಷ ಸಮಾಸ ೪) ಕರ್ಮಧಾರಯ ೫) ವರುಣ ೬) ನಲ್ಲಿತು+ ಕುದುರೆ
೭) ವಂಧ್ಯಾ ೮) ಕುದುರೆ]






******** ಕನ್ನಡ ದೀವಿಗೆ ******

10ನೇ ತರಗತಿ ಪದ್ಯ ವೀರಲವ- ಸಾರಾಂಶ (10th-Veeralava-Saramsha)

ವೀರಲವ ಪದ್ಯದ ಹೊಸಗನ್ನಡ ರೂಪ
ಹಿನ್ನೆಲೆ ಕಥೆ:- ರಾವಣನನ್ನು ಸಂಹರಿಸಿದ ಶ್ರೀರಾಮನು ಸೀತಾ ಲಕ್ಷ್ಮಣ ಸಮೇತರಾಗಿ ಅಯೋಧ್ಯೆಗೆ ಮರಳಿ ರಾಜ್ಯಭಾರ ಮಾಡುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯ ಪ್ರಜೆಯೊಬ್ಬನು ಸೀತೆಯ ಕುರಿತು ಕ್ಷುಲ್ಲಕವಾಗಿ ಮಾತನಾಡುವನು. ಪ್ರಜೆಗಳ ಅಭಿಪ್ರಾಯವೇ ಸರ್ವಸ್ವವೆಂದೂ ಕುಲಗೌರವ ಕಾಪಾಡುವುದು ತನ್ನ ಕರ್ತವ್ಯವೆಂದು ನಿಶ್ಚಯಿಸಿದ ರಾಮನು ತುಂಬು ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಕಳಿಸುವ ನಿರ್ಧಾರ ಮಾಡುವನು. ಅಣ್ಣನ ಆಣತಿಯಂತೆ ಲಕ್ಷ್ಮಣನು ಸೀತೆಯನ್ನು ಕಾಡಿನಲ್ಲಿ ಏಕಾಂಗಿಯಾಗಿ ಬಿಟ್ಟುಬಂದಾಗ, ಅಲ್ಲಿ ಅವಳ ರೋದನವನ್ನು ಕೇಳಿ ಆಗಮಿಸಿದ ವಾಲ್ಮೀಕಿ ಮಹರ್ಷಿಗಳು ಸೀತೆಯನ್ನು ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಆಶ್ರಮದಲ್ಲಿ ಅವಳು ಅವಳಿ ಮಕ್ಕಳಿಗೆ ಜನ್ಮನೀಡುತ್ತಾಳೆ. ಅವರಿಗೆ ಲವ ಕುಶರೆಂದು ನಾಮಕರಣ ಮಾಡಿದ ಮಹರ್ಷಿಗಳು ಅವರಿಬ್ಬರನ್ನು ಸಕಲ ವಿದ್ಯಾ ಪಾರಂಗತರಾಗಿ ಮಾಡುತ್ತಾರೆ. ರಾವಣನ ವಧೆಯಿಂದ ಉಂಟಾದ ಬ್ರಹ್ಮಹತ್ಯಾ ದೋಷ ಬಂದಿರುವುದೆಂದು ಹೇಳಿದ ಮಹರ್ಷಿಗಳ ಆದೇಶದಂತೆ ಶ್ರೀರಾಮನು ಅಶ್ವಮೇಧ ಯಾಗವನ್ನು ಕೈಗೊಳ್ಳುತ್ತಾನೆ. ಶತ್ರುಘ್ನನ ಬೆಂಗಾವಲಿನೊಂದಿಗೆ ದೇಶ ದೇಶಗಳನ್ನು ಸುತ್ತಿದ ಅಶ್ವಮೇಧದ ಕುದುರೆಯು ವಾಲ್ಮೀಕಿ ಆಶ್ರಮದ ಆವರಣ ಪ್ರವೇಶಿಸಿದಾಗಶ್ರೀರಾಮನೇ ತನ್ನ ತಂದೆಯೆಂದು ತಿಳಿಯದ ಲವನು ಕುದುರೆಯನ್ನು ಕಟ್ಟುತ್ತಾನೆ.ಅದು ಪ್ರಸ್ತುತ ಪದ್ಯದಲ್ಲಿ ವ್ಯಕ್ತಗೊಂಡಿದೆ.

ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು ||
ಪುಲ್ಗಳ ಪಸುರ್ಗೆಳಸಿ ಪೊಕ್ಕೊಡಾ ತೋಟಗಾ|
ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆ ಮಿಗೆ |
ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರಲವನು || ೧ ||


         ಬಲಶಾಲಿಗಳಾದ ರಾಜರೂ ಸಹ ಶ್ರೀರಾಮನ ಶ್ರೇಷ್ಠತೆಯ ವಿಚಾರವನ್ನು ಕೇಳಿಯೆ ಕುದುರೆಯನ್ನು ಕಟ್ಟಲು ಹೆದರಿ ,ಅದಕ್ಕೆ ನಮಸ್ಕರಿಸಿ ಅದನ್ನು ತಡೆಯದೇ ಇರಲು ,ಶ್ರೀರಾಮನ ಯಜ್ಞಾಶ್ವದ ಪ್ರೀತಿಯ ಕುದುರೆಯು ಇಡೀ ಭೂಮಂಡಲದಲ್ಲಿ ಚಲಿಸುತ್ತ, ವಾಲ್ಮೀಕಿಯ ತಪೋವನದ ಉಪವನದಲ್ಲಿ ಬೆಳೆದು ನಿಂತಿದ್ದ ಹುಲ್ಲಿನ ಹಸುರಿಗೆ ಮನಸೋತು ಆಕರ್ಷಣೆಗೆ ಒಳಗಾಗಿ ಅದನ್ನು ಪ್ರವೇಶಿಸಿತು. ಅಲ್ಲಿ ತನ್ನ ಸ್ನೇಹಿತರೊಡನೆ (ಒಡನಾಡಿಗಳೊಡನೆ ) ಆಟವಾಡಿ ಮುಗಿಸಿ ಬಿಲ್ಲಿನ ಸಮೇತನಾಗಿ ಬರುತ್ತಿದ್ದ ವೀರ ಲವನು ಆಶ್ರಮವನ್ನು ಪ್ರವೇಶಿಸಿದ್ದ ಪೂಜಿತ (ಪೂಜಿಸಲ್ಪಟ್ಟಿದ್ದ)ಸುಂದರ ಕುದುರೆಯನ್ನು ಕಂಡನು.

ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ|
ತೊತ್ತಳದುಳಿದುದು ವಾಲ್ಮೀಕಿ ಮುನಿನಾಥನೇ |
ಪೊತ್ತುಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ ||
ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ
ನುತ್ತ ಹಯದೆಡೆಗೆ ನಡೆತಂದು ನೋಡಲ್ಕದರ |
ನೆತ್ತಿಯೊಳ್ ಮೆರವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು || ೨ ||


ಉಪವನದೊಳಕ್ಕೆ ನುಗ್ಗಿದ ಕುದುರೆಯನ್ನು ನೋಡಿದ ಲವನು ಎಲ್ಲಿಯ ಕುದುರೆಯಿದು ? ಉಪವನಕ್ಕೆ ನುಗ್ಗಿ ಹೂದೋಟವನ್ನು ಹಾಳು ಮಾಡಿದೆಯಲ್ಲ ! ವಾಲ್ಮೀಕಿ ಮುನಿಶ್ರೇಷ್ಠರು ವರುಣನು ಕರೆದಿದ್ದರಿಂದ ಅಲ್ಲಿಗೆ ಹೋಗುವಾಗ ನನಗೆ ಈ ಉಪವನವನ್ನು ಕಾಯಲು ಹೇಳಿ ಹೋಗಿದ್ದರು. ಮತ್ತೆ ಅವರು ವರುಣನ ಲೋಕದಿಂದ ಹಿಂದಿರುಗಿ ಬಂದಾಗ ಈ ಹೂದೋಟವು ಹಾಳಾದುದನ್ನು ನೋಡಿ ಮುನಿಸಿಕೊಳ್ಳುವರು ಎಂದು ಯೋಚಿಸುತ್ತ ಕುದುರೆಯೆಡೆಗೆ ಬಂದನು. ಆಗ ಲವನು ಅದರ ಹಣೆಯ ಮೇಲೆ ಬರೆಹದ ಪಟ್ಟಿಯು ಇದ್ದುದನ್ನು ನೋಡಿ ಅದನ್ನು ಓದತೊಡಗಿದನು.

ಊರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ |
ನೋರ್ವನೇ ವೀರನಾತನ ಯಜ್ಞತುರಗಮಿದು |
ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ ||
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ|
ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ|
ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು|| ೩ ||


        ಈ ಭೂಮಿಯಲ್ಲಿ ಕೌಸಲ್ಯೆಯು ಪಡೆದ ಮಗನಾದ ಶ್ರೀರಾಮನೊಬ್ಬನೇ ವೀರ. ಅವನ ಯಜ್ಞ ತುರಗವಿದು. ಇದನ್ನು ನಿರ್ಸುವಹಿಸುವ ಸಮರ್ಥರು ಯಾರಾದರೂ ಇದ್ದರೆ ಈ ಕುದುರೆಯನ್ನು ತಡೆಯಿರಿ ಎಂದಿದ್ದನ್ನು ನೋಡಿ, "ಓಹೋ ! ಅವನ (ಶ್ರೀರಾಮನ) ಗರ್ವವನ್ನು ಮುರಿಯದಿದ್ದರೆ ನನ್ನ ತಾಯಿಯನ್ನು ಎಲ್ಲರೂ ಬಂಜೆಯೆಂದು ಕರೆಯದಿರುವರೇ ? ಅಲ್ಲದೇ ನನ್ನ ಶ್ರೇಷ್ಠವಾದ ತೋಳುಗಳಿದ್ದೂ ಏನು ಪ್ರಯೋಜನ ?" ಎಂದು ಪ್ರತಿಜ್ಞೆಯನ್ನು ಮಾಡಿ ಲವನು ಉರಿದೆದ್ದನು.

ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ |
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ |
ಮಿಗೆ ನಡುಗಿ ಬೇಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು ||
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ |
ನಗಡುತನದಿಂದೆ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು || ೪ ||


         ಲವನು ತನ್ನ ಉತ್ತರೀಯವನ್ನು ಹೊಸೆದು, ಅದನ್ನು ಕುದುರೆಯ ಕೊರಳಿಗೆ ಬಿಗಿದು ಬಾಳೆಯ ಗಿಡಕ್ಕೆ ಕಟ್ಟಲು ಮುನಿಸುತರು ಬಹಳ ನಡುಗುತ್ತಾ, "ಬೇಡ ಬೇಡ ಅರಸರ ಕುದುರೆಯನ್ನು ಬಿಟ್ಟುಬಿಡು, ಇಲ್ಲವಾದರೆ ನಮ್ಮನ್ನು ಹೊಡೆಯುವರು " ಎಂದರು ಅದಕ್ಕೆ ಲವನು ನಗುತ್ತ "ಬ್ರಾಹ್ಮಣರ ಮಕ್ಕಳು ಅಂಜುವರೆಂದರೆ ಜಾನಕಿಯ ಮಗನು ಇದಕ್ಕೆ ಹೆದರುವನೇ? ಹೋಗಿ ನೀವು" ಎಂದು ಶೌರ್ಯದಿಂದ ಬಿಲ್ಲನ್ನು ಹೆದೆಗೇರಿಸಿ, ತೀಡಿ ಜೇಂಕಾರ ಮಾಡಿ ನಿಂತಿದ್ದನು.
  
(ಕೃಪೆ: ಪ್ರತೀಕ್ಷಾ_ಮಮತಾ ಭಾಗವತ್)


******* ಕನ್ನಡ ದೀವಿಗೆ ******

10ನೇ ತರಗತಿ ಪದ್ಯಪಾಠ-7 ವೀರಲವ-ಪೂರಕ ಮಾಹಿತಿ/ಟಿಪ್ಪಣಿಗಳು (10th-Veeralava-tippani)

ಕಥಾ ಹಿನ್ನೆಲೆ :    ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ಅನೇಕ ಸಾಹಸಿಗಳಾದ ಬಾಲಕರ ಕಥೆಗಳು ಇವೆ. ಅಂತಹವುಗಳಲ್ಲಿ ಲವನ ಕತೆಯೂ ಒಂದು. ರಾವಣನನ್ನು ಸಂಹರಿಸಿ, ಅಯೋಧೈಗೆ ಸೀತಾಸಮೇತನಾಗಿ ಬಂದ ರಾಮ ಪ್ರಜಾನುರಾಗಿಯಾಗಿ ರಾಜ್ಯಭಾರ ಮಾಡುತ್ತಿದ್ದನು. ಗರ್ಭಿಣಿಯಾದ ಸೀತೆ ಒಂದು ದಿನ ವಾಲ್ಮೀಕಿ ಮಹರ್ಷಿಗಳ ಆಶ್ರಮವನ್ನು ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಕಾಕತಾಳೀಯವಾಗಿ ಅದೇ ರಾತ್ರಿ ಪ್ರಜೆಯೊಬ್ಬ ಸೀತೆಯ ಬಗ್ಗೆ ಅವಮಾನದ ನುಡಿಗಳನ್ನು ಆಡುತ್ತಾನೆ. ಇದನ್ನು ತಿಳಿದ ರಾಮನು ತಮ್ಮನಾದ ಲಕ್ಷ್ಮಣನನ್ನು ಕರೆದು ತುಂಬುಗರ್ಭಿಣಿಯಾದ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರುವಂತೆ ಆಜ್ಞಾಪಿಸುತ್ತಾನೆ. ಪ್ರಜೆಗಳ ಅಭಿಪ್ರಾಯವೇ ಸರ್ವಸ್ವವೆಂದು ತಿಳಿದ ರಾಮನ ಈ ಆಜ್ಞೆಯಂತೆ ಲಕ್ಷ್ಮಣ ವಾಲ್ಮೀಕಿ ಆಶ್ರಮಕ್ಕೆ ಹೋಗುವ ನೆಪದೊಂದಿಗೆ ಸೀತೆಯನ್ನು ಕಾಡಿಗೆ ಕೊಂಡೊಯ್ಯುತ್ತಾನೆ. 

    ಕಾಡಿನಲ್ಲಿ ಏಕಾಂಗಿಯಾಗಿದ್ದ ಸೀತೆ ದುಃಖಿಸುತ್ತಿರುವ ಸಂದರ್ಭದಲ್ಲಿ ಆ ಪ್ರದೇಶಕ್ಕೆ ಬಂದ ವಾಲ್ಮೀಕಿ ಮಹರ್ಷಿಗಳು ಸೀತೆಯನ್ನು ತಮ್ಮಾಶ್ರಮಕ್ಕೆ ಕರೆದೊಯ್ಯುತ್ತಾರೆ. ಆಶ್ರಮದಲ್ಲಿ ಕೆಲವೇ ದಿನಕ್ಕೆ ಸೀತೆ ಅವಳಿ ಮಕ್ಕಳನ್ನು ಹಡೆಯುತ್ತಾಳೆ. ವಾಲ್ಮೀಕಿ ಮಹರ್ಷಿಗಳು ಈ ಮಕ್ಕಳಿಗೆ ಕುಶ, ಲವರೆಂದು ನಾಮಕರಣ ಮಾಡಿ ಸಕಲ ವಿದ್ಯಾಪಾರಂಗತರನ್ನಾಗಿ ಮಾಡುತ್ತಾರೆ. 

    ಇತ್ತ ಸೀತೆಯ ಅಗಲುವಿಕೆಯಿಂದ ರಾಮ ಮಾನಸಿಕವಾಗಿ ದುಃಖಕ್ಕೀಡಾಗುತ್ತಾನೆ. ರಾವಣನ ವಧೆಯಿಂದ ಬ್ರಹ್ಮಹತ್ಯಾದೋ? ಬಂದಿರುವುದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಮಹರ್ಷಿಗಳ ಆದೇಶದಂತೆ ರಾಮ ಅಶ್ವಮೇಧವನ್ನು ಕೈಗೊಂಡು, ಸಂಚಾರಕ್ಕೆ ತೆರಳಿದ ಕುದುರೆಯ ಬೆಂಗಾವಲಿಗೆ ಶತ್ರುಘ್ನನನ್ನು ಕಳುಹಿಸುತ್ತಾನೆ. ದೇಶದೇಶಗಳನ್ನು ಸುತ್ತಾಡಿದ ಅಶ್ವಮೇಧದ ಕುದುರೆ ಒಂದು ದಿನ ವಾಲ್ಮೀಕಿ ಆಶ್ರಮಕ್ಕೆ ಬರುತ್ತದೆ. ಶ್ರೀರಾಮನೇ ತನ್ನ ತಂದೆ ಎಂದು ತಿಳಿಯದ ಲವ ಕುದುರೆಯನ್ನು ಕಟ್ಟುವ ಸನ್ನಿವೇಶವೇ ಈ ಪಾಠ ಭಾಗ. 

ರಘು : ಸೂರ್ಯ ವಂಶದ ಅರಸ. ತನ್ನ ಪರಾಕ್ರಮದಿಂದ ಭೂಮಂಡಲವನ್ನು ಗೆದ್ದು ’ವಿಶ್ವಜಿತ್’ ಎಂಬ ಯಾಗ ಮಾಡಿ ಸರ್ವಸ್ವವನ್ನು ದಾನಮಾಡಿ ಪ್ರಸಿದ್ಧನಾದ. ಸೂರ್ಯವಂಶದ ಶ್ರೇ? ಅರಸನಾದ ಕಾರಣ ಈತನ ಕಾಲಾನಂತರ ಸೂರ್ಯವಂಶಕ್ಕೆ ರಘುವಂಶ ಎಂಬ ಹೆಸರು ಬಂತು. 

ವಾಲ್ಮೀಕಿ : ಒಬ್ಬ ಬ್ರಹ್ಮರ್ಷಿ. ದಾರಿಗಳ್ಳನಾಗಿದ್ದ ಬೇಡ. ನಾರದ ಮಹರ್ಷಿಗಳ ಬೋಧನೆಯಿಂದ ರಾಮನಾಮ ಜಪಿಸುತ್ತಿದ್ದಾಗ ಈತನ ಮೈಮೇಲೆ ಹುತ್ತ (ವಲ್ಮೀಕ) ಬೆಳೆಯಿತು. ನಾರದ ಮಹರ್ಷಿಗಳಿಂದಾಗಿ ವಲ್ಮೀಕದಿಂದ ಹೊರಗೆ ಬಂದ ಈತನು ವಾಲ್ಮೀಕಿ ಎಂದು ಪ್ರಸಿದ್ಧನಾದನು. ಆದಿಕಾವ್ಯ ರಾಮಾಯಣವನ್ನು ರಚಿಸಿ ಕೀರ್ತಿವಂತನಾದ. 

ವರುಣ : ಅ?ದಿಕ್ಪಾಲಕರಲ್ಲಿ ಒಬ್ಬನಾದ ಈತ ಪಶ್ಚಿಮದಿಕ್ಕಿಗೆ ಒಡೆಯ. ಜಲಾಧಿಪತಿ ಎಂದು ಪ್ರಸಿದ್ಧನಾದವ. 

ಲವ : ಶ್ರೀರಾಮನಿಂದ ಸೀತೆಯಲ್ಲಿ ಜನಿಸಿದ ಅವಳಿ ಮಕ್ಕಳಲ್ಲಿ ಚಿಕ್ಕವ. ಶ್ರೀರಾಮನಿಂದ ಪರಿತ್ಯಕ್ತಳಾದ ತುಂಬುಗರ್ಭಿಣಿ ಸೀತೆ ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆದ ಸಂದರ್ಭದಲ್ಲಿ ಜನಿಸಿದವ. ವಾಲ್ಮೀಕಿಯಿಂದ ರಚಿತವಾದ ರಾಮಾಯಣವನ್ನು ಅಣ್ಣ ಕುಶನ ಜೊತೆ ಸೇರಿ ಹಾಡುತ್ತಿದ್ದ. 

ಅಬ್ಧಿಪ : ಅಬ್ಧಿ - ಸಮುದ್ರ, ಪ - ಒಡೆಯ, ಅಬ್ಧಿಪ - ಸಮುದ್ರದ ಒಡೆಯ - ವರುಣ 

ಜೇಗೆಯ್ : ಬಿಲ್ಲಿಗೆ ಕಟ್ಟುವ ಹಗ್ಗವನ್ನು ಹೆದೆ ಎಂದು ಕರೆಯುತ್ತಾರೆ. ಈ ಹೆದೆಯನ್ನು ಬೇಕಾದಾಗ ಮಾತ್ರ ಬಿಗಿಯಲಾಗುತ್ತದೆ. ಉಳಿದ ಸಂದರ್ಭದಲ್ಲಿ ಬಿಲ್ಲಿನ ಒಂದು ತುದಿಯಲ್ಲಿ ಮಾತ್ರ ಕಟ್ಟಿರುತ್ತಾರೆ. ಯುದ್ಧಕ್ಕೆ ಸನ್ನದ್ಧನಾದಾಗ ಬಿಲ್ಲುಗಾರ ತನ್ನ ಬಿಲ್ಲಿನ ಹೆದೆಯನ್ನು ಅದರ ಇನ್ನೊಂದು ತುದಿಗೆ ಬಿಗಿಯಾಗಿ ಕಟ್ಟುತ್ತಾನೆ. ಈ ಹೆದೆಯ ಬಿಗಿತ ಸರಿಯಾಗಿದ್ದರೆ ಮಾತ್ರ ಬಾಣ ಗುರಿ ಮುಟ್ಟುತ್ತದೆ. ಅದಕ್ಕಾಗಿ ಬಿಲ್ಲುಗಾರ ಬಿಲ್ಲಿನ ಹೆದೆಯನ್ನು ಆಕರ್ಣಾಂತ (ಕಿವಿಯವರೆಗೆ) ಎಳೆದು ಬಿಡುತ್ತಾನೆ. ಆಗ ಆ ಹೆದೆ ಮೊದಲಿದ್ದ ಸ್ಥಳಕ್ಕೆ ಹೋಗುವಾಗ ’ಝೇಂ’ ಎಂಬ ಧ್ವನಿ ಮಾಡುತ್ತದೆ. ಈ ಧ್ವನಿಯ ಸಹಾಯದಿಂದ ಬಿಲ್ಲುಗಾರ ಹೆದೆಯ ಬಿಗಿತ ಸರಿಯಾಗಿದೆಯೇ ಎಂದು ಪರೀಕ್ಷಿಸುತ್ತಾನೆ. ಈ ಕ್ರಿಯೆಗೆ ’ಜೇಗೆಯ್ಯು’ವುದು ಎಂದು ಹೇಳಲಾಗುತ್ತದೆ. 

ಯಜ್ಞಾಶ್ವ :



ವಾಲ್ಮೀಕಿ ಋಷಿಗಳಿಂದ ಲವ-ಕುಶರಿಗೆ ವಿದ್ಯಾಭ್ಯಾಸ:









******* ಕನ್ನಡ ದೀವಿಗೆ ******

10ನೇ ತರಗತಿ ಪದ್ಯ ವೀರಲವ- ಕವಿ-ಕೃತಿ ಪರಿಚಯ(0th-Veeralava-Kavi-kruthi)

ಲಕ್ಷ್ಮೀಶ ಕವಿ ಮತ್ತು ಆತನ ಕೃತಿ ಪರಿಚಯ

    ಪೋಷಕರ ಅಸೆಯನ್ನು ನೆರೆವೆರಿಸುವ ಮಕ್ಕಳನ್ನು ನೀವು ಕಂಡಿರಬಹುದು. ಕರ್ನಾಟಕದ ಸಾಹಿತ್ಯದ ಇತಿಹಾಸದಲ್ಲಿ ತಂದೆಯ ಆಸೆಯಂತೆ ಮಗನು ಜೈಮಿನಿ ಋಷಿಗಳು ಸಂಸ್ಕೃತದಲ್ಲಿ ಬರೆದ ಭಾರತವನ್ನು ಕನ್ನಡದಲ್ಲಿ ರಚಿಸಿದ. ಪಂಪ, ರನ್ನ ಮತ್ತು ಕುಮಾರವ್ಯಾಸರನ್ನು ನೀಡಿದ ಕನ್ನಡ ಸಾಹಿತ್ಯಕ್ಕೆ ತನ್ನದೇ ಅದ ವಿಶಿಷ್ಟ ರೀತಿಯಲ್ಲಿ ಗುರುತಿಸಿ ಕೊಂಡ ಮಹಾಕವಿ ಯಾರು ಗೊತ್ತೇ . ಆತನೇ ಚಿಕ್ಕಮಗಳೂರಿನ ಕಡೂರು ತಾಲೂಕು ದೇವನೂರು ಗ್ರಾಮದ ಶ್ರೀಕಾಂತ ಮುಂದೆ `ಲಕ್ಷ್ಮೀಶ' ಎಂದು ಪ್ರಸಿದ್ಧಿ ಪಡೆದು 'ಜೈಮಿನಿ ಭಾರತ' ಕೃತಿಯನ್ನು ರಚಿಸಿದ.

ಸಾಲ ಸಾಲಂಗಳಿಂ ಬಕುಳ ಕುಳ ದಿಂದೆ ಹಿಂ
ತಾಳ ತಾಳಗಳಿಂ ಮಾದಲದಲರ್ಗಳಿಂ ತ
ಮಾಲ ಮಾಲತಿಗಳಿಂ ಸಂರಂಭ ರಂಭ ದಿಂದ ಮಂದ ಮಂದಾರದಿಂದೆ….


         ಈ ಮೇಲಿನ ಪದ್ಯ ನೋಡಿದರೆ ಒಂದು ಸ್ವಾರಸ್ಯ ಇದೆ. ಒಂದೇ ಪದ ವನ್ನ ಎರಡು ಬಾರಿ ಉಪಯೋಗಿಸಿರುವುದು. ಸಾಲ, ತಾಳ, ದಲ ಕುಳ, ಮಾಲ, ರಂಭ. ಇದು ವಾರ್ಧಕ ಷಟ್ಪದಿಯಲ್ಲಿ ಅನುಪ್ರಾಸ ಅಲಂಕಾರದಲ್ಲಿ ನಿಬಧ್ಧ ವಾಗಿರುವ ಒಂದು ಪದ್ಯದ ಮೂರು ಸಾಲುಗಳು. ಇಂತಹ ಸುಂದರವಾದ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ, ಕರ್ನಾಟ ಕವಿ ಚೂತವನ ಚೈತ್ರ ಎಂದು ಬಿರುದಾಂಕಿತ ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಲಕ್ಷ್ಮೀಶನ ಜನ್ಮ ಸ್ಥಳ. ಅಣ್ಣಯ್ಯ ದಂಪತಿಗಳಿಗೆ ಚೈತ್ರ ಶುಧ್ಧ ಹುಣ್ಣಿಮೆಯಂದು ಜನಿಸಿದ ಶ್ರೀಕಾಂತ ಮುಂದೆ ಲಕ್ಷ್ಮೀಶನಾಗಿ ಪ್ರಸಿಧ್ಧಿ ಹೊಂದಿದ. ತಂದೆಗೆ ಮಗ ಕೀರ್ತಿಶಾಲಿಯಾಗಬೇಕು ಮತ್ತು ತನಗೆ ಪ್ರಿಯವಾದ ಜೈಮಿನಿ ಭಾರತವನ್ನು ಕನ್ನಡದಲ್ಲಿ ಬರೆಯಬೇಕು ಎಂಬ ಮಹದಾಸೆಯಿಂದ ಮಗನಿಗೆ ದಿನಕ್ಕೊಂದು ಕತೆ ಹೇಳಿ ಮಗನ ಯೋಚನಾ ಶಕ್ತಿಗೆ ನೀರೆರೆದ. ಜೈಮಿನಿ ಎಂಬ ಋಷಿ ಸಂಸ್ಕೃತದಲ್ಲಿ ಬರೆದದನ್ನು ಕನ್ನಡದಲ್ಲಿ ಬರೆ,ಇದು ನನ್ನ ಆಸೆ ಎಂದ ಮಗನಲ್ಲಿ ತನ್ನ ಮನದಾಳದ ಇಂಗಿತವನ್ನು ಮತ್ತು ಅವನ ಜೀವನದ ಉದ್ದೇಶವನ್ನು ತಿಳಿಸಿದ.
          ದೇವರ ಅನುಗ್ರಹದಿಂದ ಮತ್ತು ಪ್ರಾರ್ಥನೆಯಿಂದ ಅವನಿಗೆ ಚಮತ್ಕಾರವಾಗಿ ಜೈಮಿನಿ ಕವಿಯ ಭಾರತದ ಪ್ರತಿ ಸಿಗುತ್ತದೆ. ಅವನ ಅಂತರಂಗದಲ್ಲಿ “ನೀನು ದೇವನೂರಿಗೆ ಹೋಗಿ ದೇವರಗುಡಿಯಲ್ಲೇ ಬರೆ, ನೀನು ಕವಿಯಾಗಬಲ್ಲೆ ” ಎಂದು ಕೇಳಿಸುತ್ತದೆ. ಕವಿ ಕಾವ್ಯ ರಚನೆಯನ್ನು ಶುರುಮಾಡುತ್ತಾನೆ.

"ವೀಣೆಯಿಂ ಗಾನಮಂ ನುಡಿಸವಂದೊಳೆನ್ನ ವಾಣಿಯಿಂ ಕವಿತೆಯಂ ಪೇಲಿಸಿದ" ಎಂದು ನಾರಾಯಣನೆ ಕರ್ತೃ ಎಂದು ಹೇಳುತ್ತಾನೆ.
           ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು.ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಈ ಕಾವ್ಯದಲ್ಲಿ ೩೪ ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ ೧೯೩೬ ಕಾವ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ.ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ದೈವಿಕತೆಯನ್ನು ಸ್ಥಾಪಿಸುವ ಮತ್ತು ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ.
          ಲಕ್ಷ್ಮೀಶನು ಷಟ್ಪದಿ ಪ್ರಕಾರದಲ್ಲಿ ಅಪಾರ ಸಾಧನೆ ಮಾಡಿದ್ದ ಕುಮಾರವ್ಯಾಸ, ರಾಘವಾಂಕ, ಚಾಮರಸ ಮುಂತಾದವರ ಸವಾಲನ್ನು ಎದುರಿಸಬೇಕಾಗಿತ್ತು. ರಾಮಾಯಣ ಮತ್ತು ಮಹಾಭಾರತಗಳ ಹಲವು ಸಾಧ್ಯತೆಗಳನ್ನು ಅವನಿಗಿಂತ ಹಿಂದಿನ ಹಿರಿಯ ಕವಿಗಳು ಸೂರೆ ಮಾಡಿದ್ದರು. ಆದ್ದರಿಂದಲೇ ಈ ಕವಿಯು, ತನ್ನ ಕಾವ್ಯವಸ್ತುವಾಗಿ, ಮಹಾಭಾರತ ಯುದ್ಧದ ನಂತರದ ಘಟನೆಗಳನ್ನು ಆರಿಸಿಕೊಂಡನು.

ಲಕ್ಷ್ಮೀಶ ಕಾವ್ಯಗಳಲ್ಲಿ ಬರುವ ವಿಶೇಷತೆಗಳು:

ಸುರ್ರನೆ, ಕಿರ್ರನೆ, ಕರ್ರನೆ, ಘರ್ರನೆ, ತಿರ್ರನೆ ಸರ್ರನೆ ಎಂಬ ಪದಗಳಿಂದ ರಣರಂಗದ ಭೀಭತ್ಸವನ್ನು ಹೀಗೆ ವರ್ಣಿಸುತ್ತಾನೆ.

ಸುರ್ರನೆ ಸುಲಿದು ಸುತ್ತಿ ಬೆಂ ಡಾಗೆ ಕುದುರೆಗಳ್
ಕಿರ್ರನೆ ಕಪಿಶ್ವರ್ಮ್ ಪಲಿರಿದು ಚೀರಲ್ಕೆ
ಕರ್ರನೆ ಕವಿಯೇ ಕತ್ತಲೆ ಶಿರೋಭ್ರಮನೆಯಿಂ ಕೃಷ್ಣಾ ಫಳುಗುನರ್ಗೆ ….
ಮೇಲಿನ ಕಾವ್ಯ ಅರ್ಜುನ ಮತ್ತು ಬಬ್ರುವಾಹನರ ನಡುವಿನ ಯುದ್ಧದ ವರ್ಣನೆಯ ಬಗೆ

ತೇರ ವಂಗ ಡದ ಜರ್ಜಾವರಂ ಗಜದ ಘಂಟಾರವಂ
ಹಾಯದ ಹೆಷಾರವಂ ನಡೆವ ಸೇನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ …

ರವಂ ಪದ ಹೇಗೆ ಪ್ರಯೋಗಿಸಿಧ್ಧನೆ ಎಂಬುದನ್ನು ನೋಡಬಹುದು.

ಪದಲಾಲಿತ್ಯದ ಕೆಲ ಸಾಲುಗಳನ್ನು ನೋಡೋಣ

ಈ ವನದ ನಡುನಡುವೆ ಕೊಳ ತೊಳ ಗುತಿರುತಿಹ ಸ
ವರದೊಲೆರೋ ಬೆಳೆ ಬೆಳೆದು ರಾ
ಜೀವದಳರಲರ ತುಳಿತುಳಿದಿಡಿದಿಡಿದ ಬಂಡ ನೋಡ ನೋಡನೆ ಸವಿದು ಸವಿದು

ಸವಿಯೇ ಪ್ರಿಯರಾಗಮದರಾಗಮದರಾಗಮದ
ನ ವಿಳಾಸ ಮೆಂದು ತಾಂಬೂಲಮಂ ತೋರ್ಪರ್ಮು
ಡಿವೊಡೆ ಬೇಕಾದಳರ್ಕಾದಲರ್ಕಾದಲರ್ಕಂಗಜಾಹವದೊಳೆಂದು


ಅಶ್ವಮೇಧ ಯಾಗದ ಕಥೆಯ ಸೂತ್ರದಲ್ಲಿ ಅನೇಕ ಸಣ್ಣ ಕಥೆಗಳನ್ನುಪೋಷಿಸಿದ ಜೈಮಿನಿ ಭಾರತ. ಇದರಲ್ಲಿ ಮರುತ್ತನ ಕತೆ, ಅನುಸಾಲ್ವನ ಕಾಳಗ ಸ್ವಾಹ ಪರಿಣಯ ಬಬ್ರುವಾಹನನ ಕಾಳಗ, ವೀರವರ್ಮನ ಕತೆ, ಚಂದ್ರಹಾಸನ ಕತೆ ಮುಂತಾದವು ಇವೆ. ಯುದ್ಧಗಳ ವರ್ಣನೆ ಸ್ತ್ರೀ ಹಾಗು ಪ್ರಕೃತಿ ವರ್ಣನೆಗಳು ಕಾವ್ಯದಲ್ಲಿ ವಿಸ್ತಾರವಾಗಿ ಬಂದಿವೆ.

ಲಕ್ಷ್ಮೀಶನಿಗೆ ಹುಟ್ಟಿದ ಸ್ಥಳದ ಬಗ್ಗೆ ತುಂಬಾ ಪ್ರೇಮ. ” ಸ್ವರ್ಗಕ್ಕಿಂತಲೂ ನಾನ ಓರೆ ನನಗೆ ದೊಡ್ಡದು , ದೇವನೂರೆ ಕೈಲಾಸ ” ಎಂದು ಹಲವು ಬಾರಿ ತನ್ನ ಊರನ್ನು ಕೊಂಡಾಡಿದ್ದಾನೆ. ಹುಟ್ಟಿದ ಊರಿಗೆ ಅಷ್ಟಿಷ್ಟು ಸೇವೆ ಸಲ್ಲಿಸ ಬೇಕೆಂಬುದು ಕವಿಯ ಆಸೆ. ಅದಕ್ಕಾಗಿ ಊರ ಮುಂದೆ ಸುಂದರವಾದ ತೋಟ ಮಾಡಿಸಿದ, ನೀರಿಗಾಗಿ ಬಾವಿಗಳನ್ನು ತೊಡಿಸಿದ, ಕೆರೆ ತುಂಬಲು ಕಾಲುವೆಗಳನ್ನು ತೆಗೆಸಿದ. ಲಕ್ಷ್ಮೀಶನ ಗುಡಿಯಲಿ ಒಂದು ಕೀರ್ತಿ ಮಂಟಪ ಮಾಡಿಸಿದ. ಜನರನ್ನು ಮತ್ತು ಕವಿಗಳನ್ನು ಸತ್ಕರಿಸಿದ. ಅಭಿಮಾನಿಗಳು ನೀಡಿದ ಧನ ಕನಕ ವಸ್ತುಗಳನ್ನು ಜನ ಸೇವೆಗೆ ನೀಡಿದ ಉದಾರ ಕವಿ ನಮ್ಮ ಲಕ್ಷ್ಮೀಶ.

'ಜೈಮಿನಿ ಭಾರತ' ಕುರಿತು
ಕಾವ್ಯದ ಹೆಸರು: ಜೈಮಿನಿ ಭಾರತ
ಕವಿಯ ಹೆಸರು: ಲಕ್ಷ್ಮೀಶ
ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
ಸ್ಥಳ/ಸ್ಥಳಗಳು: ಚಿಕ್ಕಮಗಳೂರು ಜಿಲ್ಲೆಯ ದೇವನೂರು. (ಗುಲ್ಬರ್ಗ ಜಿಲ್ಲೆಯ ಸುರಪುರ.
ಮತ-ಧರ್ಮ: ಬ್ರಾಹ್ಮಣ
ಆಶ್ರಯದಾತರು: ಯಾವ ರಾಜನೂ ಇಲ್ಲ
ಬಿರುದುಗಳು: ಕರ್ನಾಟ ಕವಿಚೂತವನ ಚೈತ್ರ, ಉಪಮಾಲೋಲ.
ಸಾಹಿತ್ಯಪ್ರಕಾರ: ಕಾವ್ಯ
ಛಂದೋರೂಪ: ವಾರ್ಧಕ ಷಟ್ಪದಿ.
ಹಸ್ತಪ್ರತಿಗಳು: ಓಲೆಯ ಗರಿ ಮತ್ತು ಕಾಗದ
ಪ್ರಕಟವಾದ ವರ್ಷ: 1848, (ಕಲ್ಲಚ್ಚಿನ ಪ್ರತಿ), 1875, ವ್ಯಾಖ್ಯಾನಸಹಿತವಾಗಿ (ಕಲ್ಲಚ್ಚಿನ ಪ್ರತಿ)
ಸಂಪಾದಕರು: ವೆಂಕಟ ರಂಗೋ ಕಟ್ಟಿ (1875)(ಕಲ್ಲಚ್ಚಿನ ಪ್ರತಿ), ಹೊಳಕಲ್ ಶ್ರೀನಿವಾಸ ಪಂಡಿತ, 1875, ಮುದ್ರಿತ ಪ್ರತಿ.
ಪ್ರಕಾಶಕರು: ಕೃಷ್ಣರಾಜ ಮುದ್ರಾಕ್ಷರ ಶಾಲೆ, ಮೈಸೂರು.

ಕಿರು ಪರಿಚಯ: ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಜೈಮಿನಿ ಭಾರತವು ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದಾಗಿತ್ತು. ಗಮಕ ಪರಂಪರೆಯ ನೆರವಿನಿಂದ ಹಳ್ಳಹಳ್ಳಿಗಳಲ್ಲಿಯೂ ಪ್ರಚುರವಾಗಿದ್ದ ಈ ಕಾವ್ಯದ ಅನೇಕ ಸನ್ನಿವೇಶಗಳು ನಾಟಕರೂಪವನ್ನೂ ಪಡೆಯುತ್ತಿದ್ದವು. ಜೈಮಿನಿ ಭಾರತವು, ಸಂಸ್ಕೃತದಲ್ಲಿ ಜೈಮಿನಿ ಎಂಬ ಋಷಿಯಿಂದ ರಚಿತವಾದ ಕಾವ್ಯ. ಲಕ್ಷ್ಮೀಶನ ಕಾವ್ಯವು ಯಾವುದೇ ಅರ್ಥದಲ್ಲಿಯೂ ಮೂಲದ ಕನ್ನಡ ಅನುವಾದವಲ್ಲ. ಕವಿಯು ತನಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಿ ಅನೇಕ ನೀರಸವಾದ ಭಾಗಗಳನ್ನು ಬಿಟ್ಟಿದ್ದಾನೆ ಮತ್ತು ತನ್ನದೇ ಆದ ಹೊಸ ಾಯಾಮಗಳನ್ನು ಸೇರಿಸಿದ್ದಾನೆ. ಈ ಕಾವ್ಯದಲ್ಲಿ 34 ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ 1936 ಪದ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ. ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ಕೃಷ್ಣನ ದೈವಿಕತೆಯನ್ನು ಖಚಿತವಾಗಿ ಸ್ಥಾಪಿಸುವ ಮತ್ತು ಅರ್ಜುನನಂತಹ ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ. ಅಶ್ವಮೇಧಯಾಗವನ್ನು ಮಾಡಬೇಕೆಂಬ ಧರ್ಮರಾಯನ ತೀರ್ಮಾನ ಮತ್ತು ಅದರ ಪೂರ್ವಸಿದ್ಧತೆ, ಪರಿಣಾಮಗಳನ್ನು ಬಹಳ ವಿವರವಾಗಿ ನಿರೂಪಿಸಲಾಗಿದೆ. ಅರ್ಜುನನು ತನಗಿಂತಲೂ ಎಷ್ಟೋ ಪಟ್ಟು ಬಲಶಾಲಿಗಳಾದ, ಆದರೆ ಕೃಷ್ಣನ ಬಗ್ಗೆ ಪ್ರಶ್ನಾತೀತವಾದ ಗೌರವವನ್ನು ಹೊಂದಿರುವ ಅನೇಕ ವೀರರನ್ನು ಅರ್ಜುನನು ಭೇಟಿಯಾಗುತ್ತಾನೆ. ಸುಧನ್ವ, ಹಂಸಧ್ವಜ, ಯೌವನಾಶ್ವ ಮುಂತಾದ ಅನೇಕ ವೀರರು ಅರ್ಜುನನನ್ನು ಸೋಲಿನ ಅಂಚಿಗೆ ತರುತ್ತಾರೆ. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಅವನು ಕೃಷ್ಣನ ಅನುಗ್ರಹದಿಂದ ಗೆಲುವು ಪಡೆಯುತ್ತಾನೆ ಮತ್ತು ಮರೆಯಲಾಗದ ಪಾಠವನ್ನು ಕಲಿಯುತ್ತಾನೆ. ಆದ್ದರಿಂದ ಜೈಮಿನಿ ಭಾರತವು ಪರಾಕ್ರಮವನ್ನು ಹಿನ್ನೆಲೆಗೆ ಸರಿಸಿ, ಭಕ್ತಿಯನ್ನು ಮುಂದೆಮಾಡುವ ಭಕ್ತಿಯುಗದ ಉತ್ಪನ್ನವೆಂದರೂ ತಪ್ಪಿಲ್ಲ.
         ಆದರೆ, ಲಕ್ಷ್ಮೀಶನ ಕೃತಿಯ ಜನಪ್ರಿಯತೆಗೆ, ತನ್ನ ಕಾವ್ಯವಸ್ತುವಿನ ನಿರ್ವಹಣೆಯಲ್ಲಿ ಕವಿಯು ತೋರಿಸಿರುವ ಅನುಪಮವಾದ ಕುಶಲತೆಯೇ ಕಾರಣ. ವಾಸ್ತವವಾಗಿ ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು. ಯಾಗದ ಕುದುರೆಯ ಹಿಂದೆ ಚಲಿಸುತ್ತಾ ಲೋಕಪರ್ಯಟನೆ ಮಾಡುವ ಅರ್ಜುನನು ಈ ಕಥೆಗಳನ್ನು ಪೋಣಿಸುವ ದಾರ. ಆದರೆ, ಈ ಕಾವ್ಯದ್ದು, ಬಿಡುಬೀಸಾಗಿ ಚಲಿಸುವ ನಿಧಾನಗತಿಯೇ ವಿನಾ ಯುದ್ಧಕಾತರವಾದ ನಾಗಾಲೋಟವಲ್ಲ. ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಅವನು ನಿಸರ್ಗಸೌಂದರ್ಯವನ್ನು ಗುರುತಿಸಬಲ್ಲ. ಅಂತೆಯೇ ಮನುಷ್ಯಸ್ವಭಾವದ ಆಳವಾದ ಪರಿಚಯವೂ ಅವನಿಗಿದೆ. ಈ ಕಾವ್ಯದಲ್ಲಿ ಬರುವ ಸೀತಾಪರಿತ್ಯಾಗದ ಹೃದಯಸ್ಪರ್ಶಿಯಾಗಿದ್ದು, ಸರಿಯಾಗಿ ವ್ಯಾಖ್ಯಾನ ಮಾಡಿದಾಗ ಅದು ಸ್ತ್ರೀವಾದೀ ಆಯಾಮಗಳನ್ನು ಪಡೆಯಬಲ್ಲುದು. ಚಂಡಿ-ಉದ್ಧಾಲಕರ ಪ್ರಸಂಗದಲ್ಲಿ ಲಕ್ಷ್ಮೀಶನ ಹಾಸ್ಯಪ್ರಜ್ಞೆಯು ಪ್ರಖರವಾಗಿ ಕಂಡುಬರುತ್ತದೆ. ಚಂದ್ರಹಾಸನ ಕಥೆಯು ಕನ್ನಡ ಓದುಗರಿಗೆ ಪ್ರಿಯವಾದ ಇನ್ನೊಂದು ಸಂದರ್ಭ. ಕವಿಯು ತನ್ನ ಕಾವ್ಯದಲ್ಲಿ ವೀರ, ಶೃಂಗಾರ, ಕರುಣ, ಹಾಸ್ಯ ಮುಂತಾದ ರಸಗಳನ್ನು ಅಂತೆಯೇ ಭಕ್ತಿಯಂತಹ ಭಾವನೆಗಳನ್ನು ನಿರೂಪಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾನೆ. ಈ ಕವಿಯ ಪ್ರತಿಭೆಯು ಅವನು ಬಳಸುವ ಉಪಮೆಗಳಲ್ಲಿ ಹಾಗೂ ಸಂಗೀತಕ್ಕೆ ಸಮೀಪವೆನ್ನುವಷ್ಟು ಮಧುರವಾದ ಭಾಷೆಯ ಬಳಕೆಯಲ್ಲಿ ನಿರ್ದಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವನನ್ನು ‘ಉಪಮಾಲೋಲ’, ‘ನಾದಲೋಲ’ ಎಂದೇ ಕರೆಯಲಾಗಿದೆ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಕುವೆಂಪು, ಬೇಂದ್ರೆ, ಮಾಸ್ತಿ, ಕುರ್ತಕೋಟಿ, ಚಿ.ಎನ್. ರಾಮಚಂದ್ರನ್ ಅವರು ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.

******* ಕನ್ನಡ ದೀವಿಗೆ ******