ನನ್ನ ಪುಟಗಳು

13 ನವೆಂಬರ್ 2020

10ನೇ ತರಗತಿ ಗದ್ಯ ಪಾಠ-4-ಭಾಗ್ಯಶಿಲ್ಪಿಗಳು(10th Kannada Lesson 4-Bhagya Shilpigalu)

ಗದ್ಯ-4 ಭಾಗ್ಯಶಿಲ್ಪಿಗಳು (ವ್ಯಕ್ತಿಚಿತ್ರ)
(ಈ ಕೆಳಗಿನ ವಿಷಯಗಳಲ್ಲಿ ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್‌ಮಾಡಿ)
************************


*************



******** ಕನ್ನಡ ದೀವಿಗೆ *******




10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಚಿತ್ರ ಸಂಗ್ರಹ

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಂಬಂಧಿಸಿದ ವಿಶೇಷ ಚಿತ್ರಗಳು
ಕುಟುಂಬದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್

ಪಟ್ಟಾಭಿಷಿಕತರಾದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತೈಲವರ್ಣ ಚಿತ್ರ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ

ಲಕ್ಷ್ಮೀ ವಿಲಾಸ ಸನ್ನಿಧಾನ ಶ್ರೀ ಪ್ರತಾಪ ಕುಮಾರಿ ಅಮ್ಮಣ್ಣಿಯವರೊಂದಿಗೆ ವಿವಾಹ



ವಿಶ್ವೇಶ್ವರಯ್ಯ ಅವರ ಜೀವನ ಸಾಧನೆಗಳು ಚಿತ್ರಗಳು

ಕುಟುಂಬದೊಂದಿಗೆ ಸರ್.ಎಂ.ವಿ.

ಮುದ್ದೇನಹಳ್ಳಿಯಲ್ಲಿರುವ ಸರ್ ಎಂ ವಿ   ಅವರ ಮನೆ

 



ಬದುಕಿದ್ದಾಗಲೇ ತಮ್ಮ ಅಂಚೆ ಚೀಟಿಯನ್ನು ತಾವೇ ನೋಡಿದ ಮಹನೀಯರು ಸರ್ ಎಂ ವಿ
  

ಅಂದಿನ ರಾಷ್ಟ್ರಪತಿ ಡಾ॥ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸರ್ ಎಂ ವಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ

ಪ್ರಥಮ ಪ್ರಧಾನಿ ನೆಹರೂ ಅವರೊಂದಿಗೆ ಸರ್ ಎಂ ವಿ
  
ಸರ್ ಎಂ ವಿ ಅವರ 150 ನೇ ಜನ್ಮದಿನದ ಗೌರವಾರ್ಥ ವಿಶೇಷ ಅಂಚೆ ಪತ್ರ ಬಿಡುಗಡೆ


ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ

https://image.jimcdn.com/app/cms/image/transf/dimension=1070x10000:format=jpg/path/sacfca08ff45fbdf4/image/i0b0176b94c914f09/version/1437674814/london-panorama-southwark-bridge.jpg
ಸರ್ ಎಂ ವಿ ಯವರಿಂದ ನಿರ್ಮಿತವಾದ ಲಂಡನ್ ಬ್ರಿಡ್ಜ್

ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ

ಮೈಸೂರು ಗಂಧದ ಸಾಬೂನು ಕಾರ್ಖಾನೆ
 



ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ)
*****************









10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಹೆಚ್ಚುವರಿ ಮಾಹಿತಿ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಹೆಚ್ಚುವರಿ ಮಾಹಿತಿ
(ಮಾಹಿತಿ ಕೃಪೆ: ವಿಕಿಪೀಡಿಯಾ)
ನಾಲ್ವಡಿ ಕೃಷ್ಣರಾಜ ಒಡೆಯರ್

ಜನನ/ ಜೀವನ
ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ್ ಸನ್ನಿಧಾನ ಅವರ ಮೊದಲ ಮಗನಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ೧೮೮೪ ಜೂನ್ ೪ರಂದು ಮೈಸೂರು ಅರಮನೆಯಲ್ಲಿ ಜನಿಸಿದರು. ೧೮೯೪ರಲ್ಲಿ ಕಲ್ಕತ್ತ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಹತ್ತನೇ ಚಾಮರಾಜೇಂದ್ರ ಒಡೆಯರ್ ಗಂಟಲು ನೋವಿನಿಂದಾಗಿ ಆಕಸ್ಮಿಕ ವಾಗಿ ಮರಣ ಹೊಂದಿದರು, ಇನ್ನೂ ಹತ್ತು ವರ್ಷ ವಯಸ್ಸಿನವರಾಗಿದ್ದ ಕೃಷ್ಣರಾಜ ಒಡೆಯರ್ ಅವರು ರಾಜ್ಯಭಾರವನ್ನು ವಹಿಸಿಕೊಳ್ಳಬೇಕಾಯಿತು. ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಕೃಷ್ಣರಾಜ ಒಡೆಯರ್ ೧೯೦೨ರಲ್ಲಿ ೧೮ ವಯಸ್ಸು ತಲುಪುವವರೆಗೆ ರಾಜ್ಯವನ್ನು ರಾಜಪ್ರತಿನಿಧಿಯಾಗಿ ಆಳಿದರು. ೧೯೦೨ ಫೆಬ್ರವರಿ ೨ರಂದು ಕೃಷ್ಣರಾಜ ಒಡೆಯರ್ ಅವರು ತಾಯಿಯಿಂದ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ಆಗಸ್ಟ್ ಎಂಟರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಆಗಿನ ಬ್ರಿಟೀಷ್ ಬಾರತದ ವೈಸ್‍ರಾಯ್ ಲಾರ್ಡ್ ಕರ್ಜನ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿದ್ಯುಕ್ತವಾಗಿ ಮೈಸೂರಿನ ಮಹಾರಾಜರೆಂದು ಘೋಷಿಸಿದರು.

ಮಹಾರಾಜರು ಪಿ. ರಾಘವೇಂದ್ರ ರಾವ್ ಅವರ ನಿರ್ದೇಶನದಡಿಯಲ್ಲಿ ಲೋಕರಾಜನ್ ಅರಮನೆಯಲ್ಲಿ ತನ್ನ ಆರಂಭಿಕ ಶಿಕ್ಷಣ ಮತ್ತು ತರಬೇತಿಯನ್ನು ಹೊಂದಿದರು. ಪಾಶ್ಚಿಮಾತ್ಯ ಅಧ್ಯಯನಗಳು ಜೊತೆಗೆ, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಶಿಕ್ಷಣ ಪಡೆದರು. ಕುದುರೆ ಸವಾರಿ ಮತ್ತು ಭಾರತೀಯ ಮತ್ತು ಪಶ್ಚಿಮ ಶಾಸ್ತ್ರೀಯ ಸಂಗೀತವನ್ನು ಕೂಡ ಕಲಿತರು. ಮುಂದೆ ಅಜ್ಮೀರ್ ನ ಮೇಯೊ ಕಾಲೇಜ್‍ನಲ್ಲಿ ಶಿಕ್ಷಣ ಮುಂದುವರೆಸಿದರು, ಆದರೆ ಅನಾರೋಗ್ಯದ ಕಾರಣ ಮೈಸೂರಿಗೆ ಮರಳಬೇಕಾಯ್ತು. ಬಾಂಬೆ ಸಿವಿಲ್ ಸರ್ವೀಸ್‍ನ ಸರ್ ಸ್ಟುವರ್ಟ್ ಫ್ರೇಸರ್ ಅವರು ಆಡಳಿತ ನಿರ್ವಹಣೆ, ನ್ಯಾಯಶಾಸ್ತ್ರ, ತತ್ವಶಾಸ್ತ್ರ ಬಗ್ಗೆ ಶಿಕ್ಷಣವನ್ನು ನೀಡಿದರು. ಬಳಿಕ ರಾಜ್ಯದಲ್ಲಿ ಪ್ರವಾಸಗಳನ್ನು ಮಾಡುವ ಮೂಲಕ ರಾಜ್ಯದ ಅವಶ್ಯಕತೆ ಹಾಗೂ ಆಡಳಿತದ ಬಗ್ಗೆ ವ್ಯಾಪಕವಾದ ಜ್ಞಾನವನ್ನು ಪಡೆದರು.

ಆಡಳಿತ ಸುಧಾರಣೆ
ಇವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ 'ಪ್ರಜಾ ಪ್ರತಿನಿಧಿ ಸಭೆ'ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು.

ಮೊದಲ ಸಭೆಯಲ್ಲಿ ಅವರು ಮಾತನಾಡುತ್ತಾ, " ಮೈಸೂರು ರಾಜ್ಯದ ಆಡಳಿತದಲ್ಲಿ ನಾವು ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇವೆ. ನಮ್ಮ ಪ್ರಜೆಗಳಿಗೆ ಅಖಂಡ ಸುಖ ಸಂಪತ್ತನ್ನು ಒದಗಿಸಿ ಕೊಡಬೇಕೆಂಬುದು ನನ್ನ ಜೀವನದ ಪರಮೊದ್ದೇಶ" ಎಂದರು. ಅದಕ್ಕಾಗಿ ೧೯೨೩ರರಲ್ಲಿ ಹೊಸ , ಪ್ರಜಾ ಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆಯನ್ನಾಗಿ ಮಾರ್ಪಡಿಸಿದರು.
ಇದು ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು. ಪ್ರಜಾ ಪ್ರತಿನಿಧಿ ಸಭೆಯು ವರ್ಷಕ್ಕೆ ಎರಡು ಬಾರಿ (೧ ಜೂನ್ - ಮಹಾರಾಜರ ವರ್ಧಂತಿ, ೨ ಅಕ್ಟೋಬರ್ - ದಸರಾ ಮಹೋತ್ಸವ ) ಸಮಾವೇಶಗೊಂಡು ಕಲಾಪಗಳನ್ನು ನಡೆಸುತ್ತಿತ್ತು.
ಅಲ್ಲಿ ವಾರ್ಷಿಕ ಆಯ-ವ್ಯಯ ಪರಿಶೀಲನೆ, ಪ್ರಶ್ನೋತ್ತರಗಳು, ಠರಾವುಗಳನ್ನು ಮಂಡಿಸುವುದು ಮುಂತಾದ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು. ಪ್ರತಿನಿಧಿ ಸಭೆಯಲ್ಲಿದ್ದ ೨೭೫ ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು. ಕಾಲಕ್ಕೆ ತಕ್ಕ ಹಾಗೇ ಚುನಾವಣೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ
೧೯೧೮ರಲ್ಲಿ ಸರ್ಕಾರದ ಮುಖ್ಯ ನ್ಯಾಯಾಧೀಶರಾಗಿದ್ದ ಸರ್.ಲೆಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ಎಲ್ಲಾ ಸಮುದಾಯದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರತಿನಿಧ್ಯ ದೊರಕುವಂತೆ ಅಧ್ಯಯನ ಮಾಡಿ, ವರದಿ ನೀಡಲು ಆದೇಶ ಮಾಡಿದರು. ನಂತರ ಆಯೋಗದ ಶಿಫಾರಸ್ಸುಗಳಂತೆ ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರನ್ನು ಹೊರತು ಪಡಿಸಿ ಉಳಿದ ಎಲ್ಲಾ ಜಾತಿಗಳನ್ನು ಹಿಂದೂಗಳೆಂದು ಪರಿಗಣಿಸಿ, ೧೯೨೧ರಲ್ಲಿ ಪ್ರಥಮ ಭಾರಿಗೆ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶೇ.೭೫ ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು "ಮೀಸಲಾತಿಯ ಜನಕ" ಎನ್ನುತ್ತಾರೆ.
"ಮಿಲ್ಲರ್ ಆಯೋಗ" ರಚನೆ ಸಾಮಾಜಿಕ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಯಿತು. ಮಿಲ್ಲರ್ ಆಯೋಗ ಜಾರಿಗೆ ಬರಲಾಗಿ ಮೊಟ್ಟ ಮೊದಲ ಬಾರಿಗೆ ಮೈಸೂರು ಸಂಸ್ಥಾನಕ್ಕೆ ಕಾಂತರಾಜೇ ಅರಸ್ ದಿವಾನರಾಗಲು ಸಾಧ್ಯವಾಯಿತು. ಈ ಕಾಲದಲ್ಲೇ ಒಕ್ಕಲಿಗರ ಸಂಘ, ರೆಡ್ಡಿ ಜನಸಂಘ, ವೀರಶೈವರ ಜಾತಿ ಆಧಾರಿತ ಶಾಲಾ- ಕಾಲೇಜುಗಳು ಆರಂಭವಾದುವು.
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ, ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟುದು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು.
ಇವರ ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದಾರೆ. ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು 1915 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.

ಮೈಸೂರು ಸಂಸ್ಥಾನದ ಬಗೆಗಿನ ಮೆಚ್ಚುಗೆಯ ನುಡಿಗಳು
    ಡಿ.ವಿ.ಜಿಯವರ ಮಾತು- "ನನ್ನ ತಿಳುವಳಿಕೆಯಲ್ಲಿ ೧೮೮೧ ರಿಂದ ೧೯೪೦ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣ ಯುಗ" ಎಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು.
    ಇಂಗ್ಲೆಂಡಿನ ಗ್ರಾಫಿಕ್ ಪತ್ರಿಕೆ- ಮಾದರಿ ಸಂಸ್ಥಾನ ಎಂಬ ಹೆಮ್ಮೆಯ ಹೆಸರಿಗೆ ಮತ್ತ್ಯಾವ ಭಾರತೀಯ ಸಂಸ್ಥಾನಕ್ಕೂ ಆ ಅರ್ಹತೆ ಇಲ್ಲ. (ಮಾರ್ಚ್-೧೦,೧೯೦೬)
    ಎನ್‍ಸೈಕ್ಲೋಪಿಡಿಯಾ ಬ್ರಿಟಾನಿಕಾದ ಬೃಹತ್ ಕೃತಿಯಲ್ಲಿ-ಭಾರತ ಖಂಡದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಮುಂದುವರೆಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ನ್ಯಾಯವಾದ ಅರ್ಹತೆಯನ್ನು ಪಡೆದಿರುವ ಮೈಸೂರು ಮಾದರಿ ಸಂಸ್ಥಾನವಾಗಿದೆ-೧೯೩೮

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಂತಿಮ ಯಾತ್ರೆ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೩೮ ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ ಪ್ರಜೆಗಳಿಂದ "ರಾಜರ್ಷಿ" ಬಿರುದು ಪಡೆದರು. ತಮ್ಮ ಸಂಸ್ಥಾನದ ಏಳಿಗೆಗಾಗಿ, ತಮ್ಮ ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು. ಸಾಮಾಜಿಕ ಪರಿವರ್ತನೆಯ ರೂವಾರಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ ೩, ೧೯೪೦ರಲ್ಲಿ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು.


ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ ಸಾಧನೆ
ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ

         ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಜನಪ್ರಿಯವಾಗಿ ಸರ್ ಎಂ.ವಿ ಎಂಬ ಹೆಸರಿನಿಂದ ಪ್ರಖ್ಯಾತರು, ಕನ್ನಡ ನಾಡಿನ ಕೀರ್ತಿಯ ಭಾವುಟವನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡದು ತೋರಿಸಿದ ಮಹಾನ್ ಮೇಧಾವಿ ನಮ್ಮ ಸರ್ ಎಂ.ವಿಶ್ವೇಶ್ವರಯ್ಯ ಅವರು. ಇವರು ಸೆಪ್ಟೆಂಬರ್ 15, 1860 ರಲ್ಲಿ, ಮೈಸೂರ್ ಪ್ರಾಂತ್ಯ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ್ದರು. ಅಂದಿನ ಮೈಸೂರ್ ಪ್ರಾಂತ್ಯ, ಇಂದಿನ ಕರ್ನಾಟಕ ರಾಜ್ಯವಾಗಿದೆ. ತೆಲುಗು ಬ್ರಾಹ್ಮಣರ ಮನೆತನದ ಆಯುರ್ವೇದಿಕ್ ಪಂಡಿತರು ಆಗಿದ್ದ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮ ಇವರ ತಂದೆ-ತಾಯಿ. ಮೋಕ್ಷಗುಂಡಂ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಹಳ್ಳಿ. ಇವರು ಮಾಡಿದ ಸೇವೆಗಳನ್ನು ಗುರುತಿಸಿ, ಜ್ಞಾಪಕಾರ್ತವಾಗಿ ಇಂದು ನಾವು ಸರ್ ಎಂ.ವಿ ಅವರ ಜನ್ಮ ದಿನವನ್ನು "ಎಂಜಿನಿಯರ್ಗಳ ದಿನ" ಎಂದು ಆಚರಿಸುತ್ತೇವೆ. ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಸಾದನೆಗಳನ್ನು ಮಾಡಿದ ಸರ್ ಎಂ.ವಿ ಅವರಂತಹ ದೇಶಪ್ರೇಮಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವು ಸಹ ಆಗಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರು ಸದಾ ಸ್ಪೂರ್ತಿಯ ನೆಲೆ, ಆಳರಸರನ್ನು ಓಲೈಸಲು ಹೋಗದೆ ನಾಡಿನ ಪ್ರಗತಿಯನ್ನಷ್ಟೇ ಉಸಿರಾಡಿದ ಜೀವ ಅವರದ್ದು.
          ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ, ನಂತರದ ಪ್ರೌಢ ಶಾಲಾ ವ್ಯಾಸಂಗವನ್ನು ಬೆಂಗಳೂರಿನಲ್ಲಿ ಗಳಿಸಿದರು. ಬಿ. ಎ. ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ 1881 ರಲ್ಲಿ ಪಡೆದರು. ಉನ್ನತ ವ್ಯಾಸಂಗ ಸಿವಿಲ್ ಎಂಜಿನಿಯರ್ ಪದವಿಯನ್ನು 1883 ರಲ್ಲಿ ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಪಡೆಯುವುದರ ಮೂಲಕ ಸಾಧನೆಯ ಹೆಜ್ಜೆಗಳತ್ತ ಸಾಗಿದರು. ಮೊದಲಿಗೆ ಬಾಂಬೆ ಸರ್ಕಾರದ (ಇಂದಿನ ಮಹಾರಾಷ್ಟ್ರ), ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಬಾಂಬೆ ಸರ್ಕಾರದ ನಿಯಂತ್ರಣದಲ್ಲಿದ್ದ ಸಿಂಧ್ ಪ್ರಾಂತ್ಯದ, ಸಿಂಧು-ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ದೊರೆಯಿತು. ತಮ್ಮ ಕಷ್ಟ ಫಲ, ಕಾರ್ಯ ನಿಷ್ಠೆ, ಚಮತ್ಕಾರಿಕೆಯ ಕಾರ್ಯವೈಖರಿ ಆಡಳಿತ ಸರ್ಕಾರದ ಗಮನ ಸೆಳೆಯುವಂತೆ ಮಾಡಿತ್ತು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಸಂಪೂರ್ಣ ಗೊಳಿಸಿದರು.
ಈಗಲೂ ಸಹ ಬಹಳಷ್ಟು ಭೂಕಂಪಗಳು ಸಂಭವಿಸಿದ ನಂತರವೂ ಸರ್ ಎಂ.ವಿ ಅವರ ಕಾಮಗಾರಿ ಸುರಕ್ಷಿತವಾಗಿದೆ.
         1903 ರಲ್ಲಿ ಪುಣೆಯ ಬಳಿ 'ಖಡಕ್ ವಾಸ್ಲಾ ಜಲಾಶಯ' ದಲ್ಲಿ, ತಮ್ಮ ವಿಶಿಷ್ಟವಾದ ತಂತ್ರಜ್ಞಾನದಿಂದ ಮಾಡಿದ್ದ ಸ್ವಯಂ ಚಾಲಿತ ಕಣಿವೆಮಾರ್ಗಗಳನ್ನು ಉಪಯೋಗಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ ಸರ್ ಎಂ.ವಿ. 1909 ರಲ್ಲಿ ಹೈದರಾಬಾದ್, ವಿಶಾಖ ಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣಗೊಳಿಸಿದರು. ಜನ ಸಾಗರವನ್ನು ಆಕರ್ಷಿಸುತ್ತಿರುವ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಆಣೆಕಟ್ಟು1911 ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ದ ಆಣೆಕಟ್ಟು ಎಂಬ ಹೆಬ್ಬಳಿಕೆ ರೂಪಿಸಿಕೊಂಡಿತ್ತು.
         ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿದರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರಿಟ್ ನಿಂದ ನಿರ್ಮಾಣವಾಗಿದ್ದರೆ, ಕೆ.ಆರ್.ಎಸ್. ಆಣೆಕಟ್ಟು ಸರ್ ಎಂ.ವಿ. ಯವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣ ದಿಂದ ಕಟ್ಟಿದ ಗಟ್ಟಿ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿಗೆ  ಜೀವಜಲವನ್ನು ನೀಡುತ್ತಿರುವ ವಾಸ್ತುಶಿಲ್ಪವಾಗಿದೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತನ್ನಷ್ಟಕ್ಕೆ ತಾನೆ ತೆರೆದು ಕೊಂಡು ಮುನ್ನುಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು  ಮುಂದಾಲೋಚನೆಯಿಂದ ಆಣೆಕಟ್ಟು ನಿರ್ಮಿಸುವಾಗಲೇ ಆಳವಾದ ಆಲೋಚನೆಯಿಂದ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಲ್ಲಿ ಬರುವ ಕೃಷ್ಣ ರಾಜ ಸಾಗರ ಆಣೆಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಏಕರೆ ಕೃಷಿ ಭೂಮಿಗೆ ನೀರುಣಿಸಿ, ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿದ ಭಾರತದ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಮರೆಯುವಂತಿಲ್ಲ. ಬೃಂದಾವನ ಉಧ್ಯಾನ ವನದಲ್ಲಿ ವೈವಿಧ್ಯಮಯ ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು, ಪುಷ್ಪಕಾಶಿ ಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.
          ಸರ್ ಎಂ.ವಿ ಎಂದೊಡನೆ, ಅಸಾಧಾರಣ ಎಂಜಿನಿಯರ್, ಅನನ್ಯ ರಾಷ್ಟ್ರಪ್ರೇಮ, ಕರ್ತವ್ಯನಿಷ್ಠ ಅಧಿಕಾರಿ, ದಕ್ಷ ಆಡಳಿತಗಾರ, ಭವ್ಯ ಭಾರತ ನಿರ್ಮಾಣದ ಕನಸುಗಾರ. 'ಕೈಗಾರಿಕೆ ಇಲ್ಲವೇ ಸರ್ವನಾಶ' ಎಂದು ಎಚ್ಚರಿಸಿದ ರಾಷ್ಟ್ರಚಿಂತಕ. ನಿಸ್ಸ್ವಾರ್ತಿ, ಛಲವಾದಿ, ಎಂಬ ವಿಚಾರಗಳು ನಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತವೆ. ಇಷ್ಟೇ ಅಲ್ಲದೇ ಸರ್ ಎಂ.ವಿ ಅವರು ಮಾನವೀಯತೆಯುಳ್ಳ ದಯಾಳು ಹೃದಯದ ಮನುಷ್ಯ ಸಹ ಆಗಿದ್ದರು. ಅವರ ಚಿಕ್ಕಂದಿನಿಂದಲೂ ನಮ್ಮ ಸಂಸ್ಕೃತಿ ಸಂಪ್ರದಾಯಗಳಿಗೆ ಗೌರವ ಕೊಡುತ್ತಿದರು. ಸರ್ ಎಂ.ವಿ ಅವರು ಮೈಸೂರು ಸಂಸ್ಥಾನದ ದಿವಾನರು ಆಗಿದ್ದ ಕಾಲದಲ್ಲಿ, ಅವರ ಸಂಭಂದಿಕರು ಒಬ್ಬರು ಇವರ ಬಳಿ ಬಂದು ಮೈಸೂರು ಮಹಾರಾಜರ ಬಳಿ ಹೇಳಿ ಒಂದು ಒಳ್ಳೆಯ ಸಂಬಳದ ಕೆಲಸ ದಕ್ಕಿಸಿಕೊಡುವುದಾಗಿ ಕೇಳಿದ್ದರಂತೆ. ಸರ್ ಎಂ.ವಿ ಅವರು ಒಂದೇ ಮಾತಿನಲ್ಲಿ "ಆಗೋಲ್ಲ" ಅಂತ  ಹೇಳಿ ಜೊತೆಗೆ ಪ್ರತಿ ತಿಂಗಳು ಅವರ ಸ್ವಂತ ದುಡ್ಡಿನಲ್ಲಿ ಅವರ ಸಂಬಂದಿಕನಿಗೆ 100 ರುಪಾಯಿ ಕಳೆಹಿಸುತ್ತಿದ್ದಂತ ಸಹೃದಯರು. ಅವರ ಅಧಿಕಾರವನ್ನು ಅವರು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ಅವರು ದೀವನರು ಆಗಿದ್ದ ಅವಧಿ ಅಲ್ಲಿ, ನಮ್ಮ ಸರ್ಕಾರ ಅವರಿಗೆ ಅಂತ ಒಂದು ಕಾರನ್ನು ಕೊಟ್ಟಿತ್ತು. ಅವರು ಕೇವಲ ಕಚೇರಿಯ ಉಪಯೋಗಕ್ಕೆ ಮಾತ್ರ ಆ ಕಾರನ್ನು ಬಳೆಸುತ್ತಿದ್ದು ಅವರ ವೈಯಕ್ತಿಕ ಕೆಲಸಗಳಿಗೆ ಅವರ ಸ್ವಂತ ಕಾರನ್ನು ಉಪಯೋಗಿಸುತ್ತಿದ್ದರು. ಜೊತೆಗೆ ಸರ್ಕಾರದ ಕಾಗದ-ಪೆನ್ನನ್ನು ಸಹ ಅವರ ವೈಯಕ್ತಿಕ ವಿಷಯಗಳಿಗೆ ಉಪಯೋಗಿಸುತ್ತಿರಲಿಲ್ಲ. ಇದರಂದಿಲೀ ಅವರ ಕೆಲಸದ ಪ್ರಾಮಾಣಿಕತೆ ತಿಳಿದುಕೊಳ್ಳ ಬಹುದು. ಸರ್ ಎಂ.ವಿ ಅವರು ಶಿಸ್ತಿನ ಸಿಪಾಯಿ ಸಹ ಆಗಿದ್ದರು. ಪ್ರತಿನಿತ್ಯ ರಾತ್ರಿ 10 ಘಂಟೆಗೆ ಮಲಗಿ, ಬೆಳಿಗ್ಗೆ 6 ಘಂಟೆಗೆ ಎದ್ದು, 7 ಘಂಟೆಗೆಲ್ಲಾ ಕೆಲಸಕ್ಕೆ ಹೊರಡುತ್ತಿದ್ದರು.
           ಸರ್ ಎಂ.ವಿ ಅವರ ಸಾದನೆಗಳು ಅಪಾರ, ಅನಿಯಮಿತ ಹಾಗೂ ಅಸ೦ಖ್ಯಾತ. ಸರ್ ಎಂ.ವಿ ಅವರ ಹೆಸರಿನಲ್ಲಿ ಹಲವಾರು ಖಾರ್ಕನೆಗಳು, ಶಾಲಾ-ಕಾಲೇಜುಗಳು ಬಂದವು. 1955 ರಲ್ಲಿ ಅತ್ಯುತ್ತಮ ಪ್ರಶಸ್ತಿ ಭಾರತ ರತ್ನ ದೊರಕಿತು. ಹಲವು ಬಾರಿ ಡಾಕ್ಟರೇಟ್ ಪ್ರಶಸ್ತಿಯನ್ನು ದೊರಕಿಸಿ ಕೊಂಡ ಕೀರ್ತಿ ಸರ್ ಎಂ.ವಿ ಅವರದ್ದು. ಏಪ್ರಿಲ್ 14, 1962 ರಂದು ಸರ್ ಎಂ.ವಿ ಅವರು, ನಮ್ಮನ್ನು ಅಗಲಿ, ವಿಧಿವಶರಾದರು. ಇಂದಿನ ಆಧುನಿಕ ಎಂಜಿನಿಯರ್ ಗಳಿಗೆ ಸ್ಪೂರ್ತಿಯ ನೆಲೆ ಆಗಿದ್ದಾರೆ, ಸರ್ ಎಂ.ವಿ.  [ಲೇಖನ ಕೃಪೆ: ಪ್ರಶಾಂತ್ ಬ್ಲಾಗ್]




***************

10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಟಿಪ್ಪಣಿಗಳು

ಮಹಾರಾಣಿ ವಾಣಿ ವಿಲಾಸ : ಇವರು ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಮಹಾರಾಣಿ.  ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿ. ಇವರ ನಿಜವಾದ ಹೆಸರು ಕೆಂಪನಂಜಮ್ಮಣ್ಣಿ, ನಂತರ ವಾಣಿವಿಲಾಸ ಸನ್ನಿಧಾನ ಎಂದು ಹೆಸರಾಗಿದ್ದರು.

*****

ರೀಜೆಂಟ್ : ಇದು ಆಂಗ್ಲ ಭಾಷೆಯ ಪದ, ರೀಜೆಂಟ್ ಎಂದರೆ ರಾಜಪ್ರತಿನಿಧಿ. ಪಟ್ಟಾಭಿಷಿಕ್ತರಾದ ರಾಜರು ಅಪ್ರಾಪ್ತ ವಯಸ್ಕರಾಗಿದ್ದಾಗ, ರಾಜಕಾರ್ಯ ನಿಮಿತ್ತ ವಿದೇಶ / ಬೇರೆ ರಾಜ್ಯ ಪ್ರವಾಸದಲ್ಲಿದ್ದಾಗ ಅಥವಾ ತೀವ್ರತರವಾದ ಕಾಯಿಲೆಯಿಂದ ಕೂಡಿದ್ದಾಗ ರಾಜಕಾರ್ಯಗಳನ್ನು ನೋಡಿಕೊಳ್ಳಲು ನೇಮಿಸಲ್ಪಡುತ್ತಾರೆ. ರಾಜರು ಅಧಿಕಾರ ವಹಿಸಿಕೊಳ್ಳುವವರೆಗೆ ರಾಜ್ಯದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.
*****
ಸರ್.ಕೆ. ಶೇಷಾದ್ರಿ ಅಯ್ಯರ್ : 
ಕೆ. ಶೇಷಾದ್ರಿ ಅಯ್ಯರ್
ಇವರ ಮೂಲ ಕೇರಳ. ಇವರು ಮೈಸೂರು ಅರಸರ ಬಳಿ ದಿವಾನರಾಗಿ ೧೮೮೩ ರಿಂದ ೧೯೦೧ ರ ವರೆಗೆ ಸೇವೆಸಲ್ಲಿಸಿದರು. ಅವರೊಬ್ಬ ಸಮರ್ಥ ವಕೀಲರು. 'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಸರಕಾರ' ಒಡೆಯರ್ ರಾಜಪರಿವಾರಕ್ಕೆ ತಾನು ಹಿಂದೆ ಕಸಿದುಕೊಂಡಿದ್ದ ರಾಜ್ಯದ ಎಲ್ಲಾ ಅಧಿಕಾರವನ್ನು ಮತ್ತೆ ಒಪ್ಪಿಸಿ ಆಗಿನ ರಾಜರನ್ನು ಸಿಂಹಾಸನವನ್ನೇರಲು ಆದೇಶ ನೀಡಿದ್ದು, ೧೮೮೧ ರಲ್ಲೇ. ಆಸಮಯದಲ್ಲಿ ನೇಮಿಸಲ್ಪಟ್ಟ (ಮುಖ್ಯ ಮಂತ್ರಿ)(ಅಮಾತ್ಯ) ಅಥವಾ ದಿವಾನರಲ್ಲಿ 'ಶೇಷಾದ್ರಿ ಅಯ್ಯರ್' ಎರಡನೆಯವರು. ಮೈಸೂರು ರಾಜ್ಯದಲ್ಲಿ ಅತಿಹೆಚ್ಚು ಸಮಯ ಅಧಿಕಾರದಲ್ಲಿದ್ದ ದಿವಾನರೆಂಬ ಹೆಸರಿಗೆ ಪಾತ್ರರಾಗಿದ್ದರು. ಬೆಂಗಳೂರನ್ನು ಆಧುನಿಕರಣಮಾಡಲು ಪ್ರಯತ್ನಿಸಿ ಸಫಲರಾದರು.
*****

ವರ್ಧಂತಿ : ಜಯಂತಿ, ಹುಟ್ಟುಹಬ್ಬ
*****

ಆಯವ್ಯಯ : ಬಜೆಟ್, ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಆ ವರ್ಷದ ಖರ್ಚು ವೆಚ್ಚಗಳ ಅಂದಾಜನ್ನು ಯೋಜನಾಬದ್ಧವಾಗಿ ಹಾಗೂ ವಿವರವಾಗಿ ಸಿದ್ಧಪಡಿಸುವುದು ಹಾಗೂ ಅದನ್ನು ಸರ್ಕಾರದ ಎಲ್ಲಾ ಜನಪ್ರತಿನಿಧಿಗಳ ಎದುರು ಮಂಡಿಸಲಾಗುವುದು.
*****
ಠರಾವು : ನಿರ್ಣಯ, ತೀರ್ಮಾನ
*****
ಮೇಲ್ಮನೆ : ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ - ವಿಧಾನ ಪರಿಷತ್ತು;   ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ - ರಾಜ್ಯಸಭೆ
*****
ಆಡಳಿತ ವಿಕೇಂದ್ರೀಕರಣ : ಮೇಲ್ಮಟ್ಟದಲ್ಲಿ ಹಲವು ಅಧಿಕಾರಗಳು ಕೆಲವೇ ಅಧಿಕಾರಿಗಳ ಕೈಯಲ್ಲಿದ್ದಾಗ ಆಡಳಿತ ಹಾಗೂ ಅದರ ಅನುಷ್ಠಾನ ಕ್ಲಿಷ್ಟವಾಗುವುದಲ್ಲದೆ ಅಭಿವೃದ್ಧಿ ಕಾರ್ಯಗಳು ನಿಧಾನವಾಗುತ್ತದೆ. ಆದ್ದರಿಂದ ಅಧಿಕಾರವನ್ನು ಹಲವು ವಿಭಾಗಗಳಾಗಿ - ಉಪವಿಭಾಗಗಳಾಗಿ ವಿಂಗಡಿಸುವುದು. 
        ಉದಾಹರಣೆಗೆ : ಇಡೀ ಜಿಲ್ಲೆಗೆ ಜಿಲ್ಲಾ ಪಂಚಾಯತಿ ಇದ್ದರೂ ಅದರ ಅಧಿಕಾರವನ್ನು ತಾಲೂಕುವಾರು ವಿಂಗಡಿಸಿ ಆಡಳಿತವನ್ನು ಸುಗಮಗೊಳಿಸಲು ಪ್ರತಿ ತಾಲೂಕಿಗೂ ತಾಲೂಕು ಪಂಚಾಯಿತಿಯನ್ನು ಸ್ಥಾಪಿಸಲಾಗಿದೆ ಹಾಗೆಯೇ ಅದನ್ನು ಮತ್ತೆ ವಿಭಾಗಿಸಿ ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಲಾಗಿದೆ - ಇದೇ ಆಡಳಿತ ವಿಕೇಂದ್ರೀಕರಣ.
*****
ದೇವದಾಸಿ ಪದ್ಧತಿ / ಬಸವಿ ಪದ್ಧತಿ / ಗೆಜ್ಜೆ ಪೂಜೆ
        ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತಿತ್ತು. ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ. ಪ್ರಾಚೀನ ಬ್ಯಾಬಿಲೋನಿಯ, ಸೈಪ್ರೆಸ್, ಫಿನಿಷಿಯ, ಗ್ರೀಸ್, ಮೆಸಪೊಟೇಮಿಯ, ಈಜಿಪ್ಟ್, ಸಿರಿಯ ಅರೇಬಿಯ, ಮುಂತಾದ ಮಧ್ಯಪ್ರಾಚ್ಯಗಳಲ್ಲಿ ಹಾಗೂ ಆಗ್ನೇಯ ಏಷ್ಯದಲ್ಲಿ ಈ ಪದ್ಧತಿ ರೂಡಿಯಲ್ಲಿತ್ತು. ಒಂದು ಕಾಲಕ್ಕೆ ಸಮಗ್ರ ಭಾರತದಲ್ಲೆಲ್ಲ ಈ ಪದ್ಧತಿ ಪ್ರಚಾರದಲ್ಲಿದ್ದಿರಬೇಕೆಂದು ಕಾಣುತ್ತದೆ. ಉತ್ತರ ಭಾರತದಲ್ಲಿ ಇದರ ಪ್ರಚಾರ ವಿಶೇಷವಾಗಿತ್ತೆಂದು ಹೇಳಲು ಸಮರ್ಥನೀಯ ದಾಖಲೆಗಳು ಇಲ್ಲವಾಗಿವೆ.
        ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗ ಎಂಬ ಮಾತುಗಳು ಬರುತ್ತವೆ. ವಿಗ್ರಹದ ದೇಹಕ್ಕೆ ಸಲ್ಲುವ ಭೋಗ, ಎಂದರೆ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಇತ್ಯಾದಿಗಳು ಅಂಗಭೋಗಗಳು. ಗರ್ಭಗುಡಿಯ ಮುಂದಿನ ರಂಗದ ಮೇಲೆ ಎಂದರೆ ದೇವತಾ ಮೂರ್ತಿಯ ಮುಂದೆ ಸುಂದರಿಯರಿಂದ ನಡೆಯುವ ಗೀತ, ನೃತ್ಯಗಳೇ ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಉಪಕರಣಗಳು ಎಂಬುದಾಗಿ ಎಂ. ಚಿದಾನಂದಮೂರ್ತಿಯವರು ಅಭಿಪ್ರಾಯಪಡುತ್ತಾರೆ. ಈ ಸಂಪ್ರದಾಯವನ್ನು ಮೊದಮೊದಲು ಬ್ರಾಹ್ಮಣರು ವಿರೋಧಿಸಿದರೂ ರಾಜರು ಒತ್ತಾಯ ಪೂರ್ವಕವಾಗಿ ಇದನ್ನು ಜಾರಿಗೆ ತಂದಿದ್ದರ ಫಲವಾಗಿ ಅವರ ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗಲಿಲ್ಲವೆಂದು ಆಳ್ತೇಕರ್ ಅವರ ಅಭಿಪ್ರಾಯ.
        ದೇವದಾಸಿ ಪದ್ಧತಿ ಯಾವ ಮಹತ್ತ್ವದ ಉದ್ದೇಶಗಳನ್ನಿಟ್ಟುಕೊಂಡು ಹುಟ್ಟಿತೋ ಆ ಉದ್ದೇಶಗಳೆಲ್ಲ ಈಗ ನಿರ್ನಾಮವಾಗಿ ಹೋಗಿವೆ. ಈಗ ಈ ವೃತ್ತಿ ತನ್ನ ಗೌರವವನ್ನು ಕಳೆದುಕೊಂಡು ವೇಶ್ಯಾವೃತ್ತಿ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಕಲೆ ಹಾಗೂ ದೇವರ ಹೆಸರಿನಲ್ಲಿ ವಿಷಯಸುಖವನ್ನು ಪ್ರಧಾನ ಮಾಡಿಕೊಂಡು ಬೆಳೆದು ನಿಂತ ಈ ಪದ್ಧತಿಯನ್ನು ಜನತೆಯೇ ಮೂಲೋಚ್ಚಾಟನೆಗೊಳಿಸಲು ಸಿದ್ಧವಾಯಿತು. 1934 ರಲ್ಲಿ ಭಾರತೀಯ ದಂಡವಿಧಾನದ 373 ಮತ್ತು 375 ರ ವಿಧಿಗಳನ್ನು ದೇವದಾಸಿ ಪದ್ಧತಿಯ ಮೇಲು ಅನ್ವಯಿಸುವ ದಿಶೆಯಲ್ಲಿ ಸಂಶೋಧನೆ ನಡೆಸಿತು. 1937 ರಲ್ಲಿ ಮದ್ರಾಸ್ ವಿಧಾನ ಪರಿಷತ್ತು ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡಲು ಸರ್ವಾನುಮತದಿಂದ ವಿಧೇಯಕವೊಂದನ್ನು ಅಂಗೀಕರಿಸಿತು. ಅದರಲ್ಲಿ ಗೌರವಾನ್ವಿತ ಸೇವದಾಸಿಯರನ್ನು ದಾಸ್ಯದಿಂದ ಮುಕ್ತಗೊಳಿಸಡುವ ಸಲಹೆ ನೀಡಲಾಯಿತು. ಆ ಬಳಿಕ ಹಿಂದೂ ದೇವಾಲಯಗಳಲ್ಲಿ ಸ್ತ್ರೀಯರನ್ನು ಸೇವೆಗಾಗಿ ಅರ್ಪಿಸುವ ಪದ್ಧತಿಯನ್ನು ಕಾನೂನಿನಿಂದ ಕೊನೆಗೊಳಿಸುವ ಕ್ರಮವನ್ನು ಕೈಗೊಳ್ಳಲಾಯಿತು. ಅಲ್ಲದೆ ದೇವದಾಸಿಯರಾಗಿ ಕೆಲಸ ಮಾಡುತ್ತಿದ್ದ ಸ್ತ್ರೀಯರಿಗೆ ವಿಧಿಸಮ್ಮತ ವಿವಾಹಕ್ಕೆ ವ್ಯವಸ್ಥೆಗಳನ್ನು ಏರ್ಪಡಿಸಿತು. ಭಾರತದ ಇತರ ಸಂಸ್ಥಾನಗಳು ಈ ಕ್ರಮವನ್ನು ಜರೂರಾಗಿ ಅನುಸರಿಸಲು ಮುಂದೆ ಬಂದವು. ಹೀಗಿದ್ದರೂ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇದರ ಚಿಹ್ನೆಗಳು ಈಗಲೂ ಉಳಿದಿವೆ. ಏಕೆಂದರೆ ಈ ಪದ್ಧತಿಗಿರುವ ಧಾರ್ಮಿಕ ಪರಿವೇಷ ಇದನ್ನು ತೊಡೆದುಹಾಕಲು ಕಷ್ಟಸಾಧ್ಯವನ್ನಾಗಿಸಿದೆ.

*****
ಜನ್ಮ ಶತಮಾನೋತ್ಸವ : ವಯಸ್ಸು ನೂರು ವರ್ಷ ಪೂರ್ಣಗೊಂಡಾಗ ಮಾಡುವ ಉತ್ಸವ ಅಥವಾ ಹುಟ್ಟುಹಬ್ಬ
*****
ಇಂಟರ್ ಮೀಡಿಯಟ್ : ಎಸ್.ಎಸ್.ಎಲ್.ಸಿ. ನಂತರದ ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ)
*****
ಮುಕ್ತಕಂಠ : ತೆರೆದ ಮನಸ್ಸು, ಮನಸ್ಸಿನಲ್ಲಿ ಒಂದು ಬಾಯಿಯಲ್ಲಿ ಇನ್ನೊಂದನ್ನು ಹೇಳದೆ ಹೃದಯ ಪೂರ್ವಕವಾಗಿ ಹೇಳುವ ಮಾತು, ಸ್ವಾಭಾವಿಕವಾದ ಮೆಚ್ಚುಗೆಯ ಮಾತು. ಎಂಬ ಅರ್ಥಗಳಲ್ಲಿ ಬಳಸಲಾಗುತ್ತದೆ.
*****
ಮಾರಿಕಣಿವೆ ಜಲಾಶಯ : ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸಮೀಪದಲ್ಲಿದೆ. ಈ ಜಲಾಶಯದ ಹೆಸರು "ವಾಣಿವಿಲಾಸ ಸಾಗರ",  ಜಲಾಶಯದ ಮೇಲೆ ಒಂದು ಕೋನದಲ್ಲಿ ನಿಂತು ನೋಡಿದರೆ ನಿಂತಿರುವ ನೀರು ಭಾರತದ ನಕ್ಷೆಯಂತೆ ಕಾಣುತ್ತದೆ.


************
ಸಂಜೀವಿನಿ :  ಅಂದು. ಲಕ್ಷ್ಮಣನು ಯುದ್ದದಲ್ಲಿ ಅಸುನೀಗಿದಾಗ ಆತನನ್ನು ಮರುಜೀವಗೊಳಿಸಲು ರಾಮನ ಭಂಟನಾದ ಕೇಸರಿತನಯ, ಮಹಾಜ್ಞಾನಿ, ಮಹಾಬುದ್ದಿವಂತನೆಂದು ಕರೆಸಿಕೊಳ್ಳುವ ಹನುಮಂತನು ಹೊತ್ತು ತಂದ ಸಂಜೀವಿನಿ ಪರ್ವತದಲ್ಲಿದ್ದ ಸಸ್ಯದಿಂದಾಗಿ ಪ್ರಾಣ ಉಳಿಯಿತು. ಎನ್ನುವ ವಿಚಾರ ತಿಳಿದೇ ಇದೆ!! ಕೇವಲ 5 ಬಗೆಯ ಔಷಧೀಯ ಸಸ್ಯವನ್ನು ತರುವ ಬದಲು ಈಡೀ ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಹನುಮಂತನು ಆ ಪರ್ವತವನ್ನು ಏಕೆ ತಂದನು ತಿಳಿದಿದೆಯೇ? 


    ಸಂಜೀವಿನಿ ಸಸ್ಯವನ್ನು ತರಲು ಹೊರಟ ಹನುಮಂತನಿಗೆ, ಹಿಮಾಲಯದಲ್ಲಿರುವ ಸಂಜೀವಿನಿ ಪರ್ವತ ತಲುಪಿದಾಗ ಆತನಿಗೆ ಅಲ್ಲಿರುವ ಎಲ್ಲ ಸಸ್ಯಗಳು ಕೂಡ ಸಂಜೀವಿನಿಯಂತೆಯೇ ಗೋಚರಿಸಿದವು. ಭಾರತದಲ್ಲಿರುವ ಸುಮಾರು 18,000 ಪುಷ್ಪಸಸ್ಯಗಳ ರಾಶಿಯಿಂದ 'ಸಂಜೀವಿನಿ' ಎಂಬ ಏಕೈಕ ಪ್ರಭೇದವನ್ನು ಹುಡುಕುವುದು ಸರಳವಾದ ವಿಚಾರವೇನಲ್ಲ. ಹಾಗಾಗಿ ಈಡೀ ಷರ್ವತವನ್ನೇ ಹೊತ್ತು ತಂದ ಹನುಮಂತನು ಲಕ್ಷ್ಮಣನನ್ನು ಮಾತ್ರ ಅಲ್ಲದೇ ತಮ್ಮ ಸೈನ್ಯದಲ್ಲಿ ಅಸುನೀಗಿದ ಅದೆಷ್ಟೋ ಸೈನಿಕರ ಪ್ರಾಣವನ್ನು ಉಳಿಸುವಲ್ಲಿ ಸಹಕಾರಿಯಾಗುವಂತೆ ಮಾಡಿದೆ!!

*****ಪೂರಕ ಮಾಹಿತಿ ಕೃಪೆ: ಕಹಳೆ ನ್ಯೂಸ್****

ಆಡು ಮುಟ್ಟದ ಸೊಪ್ಪಿಲ್ಲ : ಇದು ಒಂದು ಗಾದೆಮಾತು, ಹಸು, ಎಮ್ಮೆ, ಕುರಿ, ಕುದುರೆ ಮುಂತಾದ ಸಸ್ಯಾಹಾರಿ ಪ್ರಾಣಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ವಿಧದ ಹುಲ್ಲು, ಸೊಪ್ಪುಗಳನ್ನು ಮೇಯುವ ಪ್ರಾಣಿ ಆಡು ಅಥವಾ ಮೇಕೆ. ಆದ್ದರಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಬಗ್ಗೆ ಮಾತನಾಡುವಾಗ ಈ ಗಾದೆ ಮಾತನ್ನು ಬಳಸುತ್ತಾರೆ. ಹೇಗೆ ಆಡು ಮುಟ್ಟದ ಸೊಪ್ಪಿಲ್ಲವೋ ಹಾಗೆಯೇ ವಿಶ್ವೇಶ್ವರಯ್ಯನವರು ಬಹುಮುಖ ವ್ಯಕ್ತಿತ್ವ ಎಂದು ತಿಳಿಸುವಾಗ ಈ ಗಾದೆಯನ್ನು ಉಲ್ಲೇಖಿಸಲಾಗಿದೆ.
 ********

ಭಾರತ ರತ್ನ : ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇರಬಹುದು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.
ಹೆಚ್ಚಿನ ಮಾಹಿತಿಗಾಗಿ ಈ ಚಿತ್ರವನ್ನು ಕ್ಲಿಕ್ ಮಾಡಿ
ಭಾರತ ರತ್ನ ಪದಕ

************
ಗೌರವ ಡಾಕ್ಟರೇಟ್ :  ಸಾಮಾನ್ಯವಾಗಿ ಡಾಕ್ಟರೇಟ್ ಪಡೆಯಬೇಕಾದರೆ ಪಿ.ಎಚ್.ಡಿ. ಅಧ್ಯಯನ ಮಾಡಿ ಮಹಾ ಪ್ರಬಂಧ ಮಂಡಿಸಬೇಕು. ಆದರೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಸಾಧಕರಿಗೆ ವಿಶ್ವವಿದ್ಯಾನಿಲಯಗಳು ಈ ಪದವಿಯನ್ನು ನೀಡುತ್ತವೆ. ಹೀಗೆ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ವಿಶ್ವವಿದ್ಯಾನಿಲಯಗಳು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಂತಾಗುತ್ತದೆ.
************

ಮೆಮೋರೀಸ್ (memories) ಆಫ್ ಮೈ ವರ್ಕಿಂಗ್ ಲೈಫ್ : ಇದು ವಿಶ್ವೇಶ್ವರಯ್ಯನವರ ಆತ್ಮಕಥೆ. ಈ ಕೃತಿಯಲ್ಲಿ ಸರ್.ಎಂ.ವಿ. ಅವರು ತಮ್ಮ ಸೇವಾವಧಿಯಲ್ಲಿನ ವಿಸ್ತಾರವಾದ ಅನುಭವ ಹಾಗೂ ಘಟನಾವಳಿಗಳನ್ನು ವಿವರಿಸಿದ್ದಾರೆ. ಇದು ಆಂಗ್ಲಭಾಷೆಯಲ್ಲಿದೆ.
************










10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಲೇಖಕರ ಪರಿಚಯ

ಲೇಖಕರ ಪರಿಚಯ: ಡಿ.ಎಸ್.ಜಯಪ್ಪಗೌಡ

ಶ್ರೀ ಡಿ.ಎಸ್.ಜಯಪ್ಪಗೌಡ

    ಡಿ. ಎಸ್. ಜಯಪ್ಪಗೌಡ (೧೯೪೭) ಇವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯವರು. ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಎಂಬುದು ಇವರ ಪೂರ್ಣಹೆಸರು. 
    'ಕರ್ನಾಟಕ ಗ್ರಾಮೀಣ ಸಂಸ್ಥೆಗಳು', 'ಕರ್ನಾಟಕದ ಕಡಲಾಚೆಯ ಸಂಪರ್ಕಗಳು', 'ಮೈಸೂರು ಒಡೆಯರು', 'ಜನಪದ ಆಟಗಳು', 'ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು'  ಮುಂತಾದವು ಇವರ ಪ್ರಮುಖ ಕೃತಿಗಳು. 
    'ಕರ್ನಾಟಕದ ಕಡಲಾಚೆಯ ಸಂಪರ್ಕಗಳು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೆ ಭಾಜನರಾಗಿದ್ದಾರೆ.


************