ನನ್ನ ಪುಟಗಳು

23 ಅಕ್ಟೋಬರ್ 2018

ಓ ಹೆಣ್ಣೆ

ಹೆಣ್ಣೆ ಓ ಹೆಣ್ಣೆ ನೀನೇಕೆ ಈ ರೀತಿ ಸೊನ್ನೆ
ನೀನಾದೇ ಸಂಸಾರದ ಕಣ್ಣೇ
ಆದರೂ ನಿನಗೇಕಿಲ್ಲ ಮನ್ನಣೆ.

ನೀ ಹುಟ್ಟಿದ್ದೆ ಒಂದು ಪುಣ್ಯೇ
ನೀ ಬೆಳದಿದ್ದು ಹೆದರಿಕೆಯಲ್ಲಿಲ್ಲವೇನೆ.?
ನೀ ಬೆಳೆಯುತ್ತಿದ್ದಂತೆ
ಸಮಾಜದ ವಕ್ರ ದೃಷ್ಠಿಗೆ ಗುರಿಯಾಗಲಿಲ್ಲವೇನೆ.?

ನಿನಗೇಕಿಲ್ಲ ಸ್ವಾತಂತ್ರ್ಯದ ಬಾಳು?
ನಿನ್ನ ಜೀವನ ಬರಿ ಗೋಳು
ಸಂಸಾರದ ಹಾದಿಯಲ್ಲೇ ನಡೆದೆ ನೀನು
ಕಳೆದೆ ಇದರಲ್ಲಿಯೇ ಜೀವನದ ಅರ್ಧ ಪಾಲು.

ಸಮಾಜದ ಸಂಪ್ರದಾಯಗಳಿಗೆ ಬಲಿಯಾಗಿ ನೀನು
ಬೆಂದು ಬಸವಳಿಯುತ್ತಿರುವೆಯಲ್ಲ ಹಗಲಿರುಳು
ಕೊನೆಗೆ ಬರುವದು ನಿನಗೆ ಮುಪ್ಪು
ನೀನಾಗುವೆ ಆಗ ವೃದ್ಧಾಶ್ರಮದ ತೊತ್ತು..

         ರಚನೆ:- ಮುಸ್ತಾಕಅಹ್ಮದ. ಬಸರೀಕಟ್ಟಿ  
                    ದೂರವಾಣಿ ಸಂಖ್ಯೆ:- 9008978684

ಹೊಲಸು ಮಂದಿಯ ಹೊಲಸಾಟ...!

ಹೊಲಸು ಮಂದಿಯ ದೊಂಬರಾಟ,
ಊರನೇ ಮೆಚ್ಚುವಂತಿತ್ತು,
ಟೊಳ್ಳು ಮಂದಿಯ ಪೊಳ್ಳು ಮಾತಿಗೆ,
ಲೋಕವೇ ಬೆರಗಾಗಿ ಸುಮ್ಮನಿತ್ತು....

ಬಣ್ಣ-ಬಣ್ಣದ ಬುಳ್ಳು ಭಾಷಣ,
ಭರತಸಂತತಿಯ ಬಾಯಿಗೊಷ್ಟು ಮಣ್ಣು ಹಾಕಿತು...

ನೋಟು ಕೊಟ್ಟು ಹೊಡೆದಾಡಿಸುವವನು,
ಎಣ್ಣೆ ಕೊಟ್ಟು ಯಾಮಾರಿಸುವವನು,
ಪ್ರಜಾಪ್ರಭುತ್ವದ ಪಾಲಕನೇ..???

ಬಾಯಿತುಂಬಾ ಸುಳ್ಳನಿಟ್ಟು,
ರಂಗು-ರಂಗಿನ ವೇಷ ತೊಟ್ಟು,
ಸ್ವಾರ್ಥದ ಸೀಮೆ ಸೃಷ್ಠಿಸುವ ಅವನು ಪ್ರಜೆಗಳ
ಪರಿಪಾಲಕನೇ...???

ಹಣದ ಆಸೆಗೆ ಹಂಗು ತೊರೆದು,
ಯೆಂಡಕ್ಕಾಗಿ ಹಿಂದೆ ಸುತ್ತಿ,
ಮೂರನ್ನು ದೂರವಿಟ್ಟು,
ಮತವ ಮಾರಿಕೊಳ್ಳುತ್ತಿರುವ,
ಮತಿಗೇಡಿಗಳಾಗುತಿರುವ ಪ್ರಜೆಗಳು,
ಭರತ ಖಂಡದ ಮಕ್ಕಳೇ...???
ದೇಶ ಕಟ್ಟುವ ದೇಶ ಪ್ರೇಮಿಗಳೇ...???
ದೇಶದ ಬೆನ್ನೆಲುಬುಗಳೇ...???
           ರಚನೆ:-  ಕೆ.ಜೆ.ಕೊಟ್ರೇಶ್ ಗೌಡ, ತೂಲಹಳ್ಳಿ
(ಮೂರನ್ನು=ಮಾನ,ಮರ್ಯಾದೆ,ಅಂಜಿಕೆ)

ಸಂತೇಬೆನ್ನೂರಿನ ರಾಮತೀರ್ಥ ಪುಷ್ಕರಣಿ

ಸಂತೇಬೆನ್ನೂರಿನ ರಾಮತೀರ್ಥ ಪುಷ್ಕರಣಿ

ನಮಗೆಲ್ಲರಿಗೂ ಕಲ್ಯಾಣಿ ಅಥವಾ ಪುಷ್ಕರಣಿ ಎಂದಾಕ್ಷಣ ನೆನಪಾಗುವುದು ಸುತ್ತಲೂ ಮೆಟ್ಟಿಲುಗಳು ಮಧ್ಯೆ ನೀರು ಅದರ ನಡುವೆ ಒಂದು ಗೋಪುರ. ಅದೇ ರೀತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿರುವ ರಾಮತೀರ್ಥ ಪುಷ್ಕರಣಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಇಲ್ಲಿನ ರಮಣೀಯ ದೃಶ್ಯಗಳು ನೋಡುಗರ ಕಣ್ಣಿಗೆ ತಂಪನ್ನು ನೀಡುತ್ತವೆ. ಸಂಜೆ ವಿಹರಿಸುವುದಕ್ಕೂ ಇದೊಂದು ಸೂಕ್ತ ಮತ್ತು ಸುಂದರ ತಾಣ. ಒಳಗೆ ಹೋಗಿ ಹುಲ್ಲಿನ ಹಾಸಿನ ಮೇಲೆ ಮಲಗಿದರೆ ಎದ್ದು ಬರುವ ಮನಸ್ಸು ಬರುವುದೇ ಇಲ್ಲ. ಊರಿನವರಿಗೂ ಇದು ಒಂದು ಒಳ್ಳೆಯ ತಾಣವಾಗಿ ಮಾರ್ಪಟ್ಟಿದೆ. 

ಇತಿಹಾಸ - 
ಊರಿನ ಇತಿಹಾಸವೇ ರೋಚಕವಾಗಿದೆ . ಇತಿಹಾಸಕಾರರು ತುಂಬಾ ಊಹೆಗಳನ್ನು ಮಾಡಿದ್ದಾರೆ. ಕೆಲವು ಇತಿಹಾಸಕಾರರ ಪ್ರಕಾರ, ಹದಿನಾರನೇ ಶತಮಾನದಲ್ಲಿ ಈ ಊರನ್ನು ಬೆನ್ನೂರು ಈ ಊರು ತದನಂತರ ವ್ಯಾಪಾರ ಕೇಂದ್ರವಾಗಿದ್ದರಿಂದ ಸಂತೇಬೆನ್ನೂರು ಎಂದು ಮರುನಾಮಕರಣ ಹೊಂದಿತು. ಕೆಲವರ ಪ್ರಕಾರ ಈ ಪುಷ್ಕರಣಿಯು ವಿಜಯನಗರ ಅರಸರ ಆಳ್ವಿಕೆಯಲ್ಲಿ ಕಟ್ಟಲಾಯಿತು ಎನ್ನುತ್ತಾರೆ. ದುರದೃಷ್ಟವಶಾತ್ ಇದನ್ನು ಬಿದನೂರು ಸಂಸ್ಥಾನದವರು ಯುದ್ಧದ ಸಮಯದಲ್ಲಿ ಕೆಲವು ಭಾಗಗಳನ್ನು ವಿರೂಪಗೊಳಿಸಿದ್ದರು ಎಂದು ಕೆಲವರ ಅಭಿಪ್ರಾಯ. ಮೈಸೂರು ಸಂಸ್ಥಾನದ ಮಹಾರಾಜರುಗಳು ತಮ್ಮ ರಾಣಿಯರನ್ನು ಕರೆದುಕೊಂಡು ರಾಮತೀರ್ಥ ಪುಷ್ಕರಣಿಗೆ ವಿಶ್ರಾಂತಿಗೆಂದು ಬರುತ್ತಿದ್ದರು ಎಂಬ ದಂತಕಥೆಗಳು ಇನ್ನು ಬಾಯಿಯಲ್ಲಿ ಹರಿದಾಡುತ್ತಿವೆ. 

 ವಿನ್ಯಾಸ ಹಾಗೂ ವಾಸ್ತುಶಿಲ್ಪ -  
ಇಡೀ ಪುಷ್ಕರಣಿಯು ಸಣ್ಣ ಸಣ್ಣ ಗೋಪುರಗಳಿಂದ ಸುತ್ತುವರಿದಿದೆ. ಎಲ್ಲಾ ಗೋಪುರಗಳು ಕಲ್ಲಿನಿಂದ ಮಾಡಿದೆ. ಸುಂದರ ಕಲ್ಲುಗಳಿಂದ ಮಾಡಿದ ಮೆಟ್ಟಿಲುಗಳು ಸುತ್ತಲೂ ಇವೆ . ಪ್ರವಾಸಿಗರು ನಾಲ್ಕು ಕಡೆಯಿಂದಲೂ ನೀರಿಗೆ ಇಳಿಯಬಹುದು. ಇದು ಒಟ್ಟಾರೆ ಎಂಟು ಸಣ್ಣ ಗೋಪುರಗಳು ಮತ್ತು ನೀರಿನ ಮಧ್ಯೆ ಒಂದು ದೊಡ್ಡ ಗೋಪುರವಿದೆ. 
   ಪುಷ್ಕರಣಿಯಲ್ಲಿ ನೀರು ಖಾಲಿಯಾದಾಗ ಮಾತ್ರ ಗೋಪುರವನ್ನು ಪ್ರವೇಶಿಸುವ ಅವಕಾಶವಿರುತ್ತದೆ. ನೀರಿನ ಮಧ್ಯೆ ಇರುವ ಗೋಪುರವನ್ನು ವಸಂತ ಮಂಟಪ ಎಂದು ಕರೆಯುತ್ತಾರೆ . ಗೋಪುರ ನಾಲ್ಕು ಮಹಡಿ ಇದ್ದು ಐವತ್ತು ಅಡಿ ಎತ್ತರ ಇದೆ ಇದರ ತಳಪಾಯ ಮತ್ತು ಕಟ್ಟಡವನ್ನು ಪೂರ್ತಿ ಕಲ್ಲು ಮತ್ತೆ ಗಾರೆಯಿಂದ ಕಟ್ಟಿದ್ದಾರೆ. ಗೋಪುರದ ಮೇಲೆ ಹೋಗಿ ನಿಂತರೆ ಬಾಲ್ಕನಿಯಲ್ಲಿ ನಿಂತ ಅನುಭವವಾಗುತ್ತದೆ. ಎಲ್ಲಾ ಗೋಡೆಗಳ ಮೇಲೆ ಪಕ್ಷಿ ಪ್ರಾಣಿಗಳ ಚಿತ್ರಣವಿದೆ. ಅದು ಗೋಪುರಕ್ಕೆ ಆಕರ್ಷಣೆ ಮತ್ತು ಸೊಬಗನ್ನು ನೀಡುತ್ತದೆ .

 ಮುಸಾಫಿರ್ ಖಾನ :- 
ಪುಷ್ಕರಣಿಯ ಆವರಣದ ಒಳಗೆ ಅದರ ಎದುರು ಒಂದು ದೊಡ್ಡದಾದ ಕೋಣೆ ಇದೆ ಅದನ್ನು ಮುಸಾಫಿರ್ ಖಾನಾ ಎಂದು ಕರೆಯುತ್ತಾರೆ (ಅತಿಥಿ ಗೃಹ ) ಈ ಅತಿಥಿ ಗೃಹವೂ ಬಿಜಾಪುರ ಸುಲ್ತಾನರ ಸೇನಾಧಿಪತಿ ರನದುಲ್ಲಾ ಖಾನ್ ಶತಮಾನದ ಹಿಂದೆಯೇ ಕಟ್ಟಿಸಿದ್ದ ಎನ್ನುತ್ತಾರೆ ಇತಿಹಾಸಕಾರರು . ಈಗ ಇದು ಒಂದು ಖಾಲಿ ಕೋಣೆ ಯಂತಿದೆ ಇದನ್ನು ಪುಷ್ಕರಣಿ ಅಗತ್ಯ ವಸ್ತುಗಳನ್ನು ಇಡಲು ಬಳಸುತ್ತಾರೆ ತುಂಬಾ ಅಚ್ಚುಕಟ್ಟಾದ ವಾಸ್ತುಶಿಲ್ಪ ಇದಕ್ಕಿದೆ. ಹಿಂದೂ ಮತ್ತು ಮುಸ್ಲಿಮರ ಬಾಂಧವ್ಯಕ್ಕೆ ಇದು ಹೆಸರಾಗಿದೆ ಮತ್ತು ಸಂಕೇತವೂ ಆಗಿದೆ.

ಹೋಗುವುದು ಹೇಗೆ :-
ಸಂತೇಬೆನ್ನೂರಿನಿಂದ ಚನ್ನಗಿರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಇದು ಕಾಣಸಿಗುತ್ತದೆ. ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರದಿಂದ ಕ್ರಮವಾಗಿ ನಲವತ್ತು ಮತ್ತು ಇಪ್ಪತ್ತು ಕಿಲೋಮೀಟರುಗಳು. 

ಪ್ರಮುಖ ಆಕರ್ಷಣೆ:- 
ಪುಷ್ಕರಣಿಯು ಅಂದಕ್ಕೆ ಎಷ್ಟು ಜನಪ್ರಿಯವೋ ಅಷ್ಟೇ ಮೀನುಗಳಿಗೂ ಜನಪ್ರಿಯ , ಹಲವಾರು ಪುರವಣಿಗರು ಬಂದು ನಿತ್ಯವೂ ಮೀನುಗಳಿಗೆ ಆಹಾರ ಹಾಕುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೀನುಗಳೇ ಒಂದು ದೊಡ್ಡ ಆಕರ್ಷಣೆ. ಹುಲ್ಲು ಹಾಸಿಗೆಳನ್ನು ಇಲ್ಲಿ ಮಾಡಿದ್ದಾರೆ ಅಲ್ಲಿ ಕೂತು ವಿರಮಿಸಬಹುದು. ಪುಷ್ಕರಣಿಗೆ ಒಬ್ಬ ನಿರ್ವಾಹಕನನ್ನು ಸರ್ಕಾರವು ನೇಮಿಸಿದೆ ಅವರು ನೀರಿನ ಸುಚಿತ್ವ ಮತ್ತು ನೀರಿಗೆ ಇಳಿದು ಅಪಘಾತ ಮಾಡಿಕೊಳ್ಳದ ಹಾಗೆ ತಡೆಯುತ್ತಾರೆ. ಒಳಗೆ ಪ್ರವೇಶ ಮಾಡಲು ಯಾವುದೇ ಶುಲ್ಕವಿರುವುದಿಲ್ಲ ನೆನಪಿರಲಿ ನೀರಿಗೆ ಇಳಿಯದಿದ್ದರೆ ಒಳ್ಳೆಯದು ಎಲ್ಲರೂ ಒಮ್ಮೆ ನೋಡಲೇಬೇಕಾದ ಸ್ಥಳ ನೀವು ಒಮ್ಮೆ ನೋಡಿ ಬನ್ನಿ. 

            ಲೇಖನ ಕಳುಹಿಸಿದವರು:- ಹರ್ಷ ಆರ್ ಬಿ, ಸಂತೇಬೆನ್ನೂರು.

ಬೆಳಗುತಿರು

 ಬೆಳಗುತಿರು 
ಅವನಂತೆ ನಾನಿಲ್ಲ
ಭವವೆಲ್ಲ ಬದಲಿಹುದು
ಭುವನಾದಿ ಜೀವಿಗಳನಳೆಯಬಹುದೇ??
ಜವರಾಯನೆಳೆದಾಗ
ಭವದೊಳಿಹ ಬವಣೆಗಳು
ಭಯಬೀಳುತಳಿದುಳಿದು ನಿಲಲುಬಹುದೇ?

ಸಂಚರಿಪ ಹಾದಿಯೊಳು
 ಮಿಂಚು ಸಿಡಿಲುಗಳಿರಲಿ
ವಂಚನೆಯ ವಾಸನೆಗೆ ನೀ ಸಿಲುಕದೆ|
ಹೊಂಚು ಹಾಕುವ ಮಂದಿ
ಸಂಚಾರಗೈದಿಹರು
ಚಂಚು ಕುಕ್ಕಿದರೇನು ನಡೆ ಮರುಗದೆ||

ಪರರ ತೆಗಳಿಕೆ ಮಂತ್ರ
ಜರೆದು ನಿಂದಿಪ ತಂತ್ರ
ಸರಿದಾರಿಯೊಳು ನಡೆವ ನಿನಗಲ್ಲವು|
ಹರಕೆಗಳು ನಿನಗುಂಟು
ಹಿರಿದು ಗುರಿ ಮುಂದಿಹುದು
ಚರಿತೆಯಲಿ ಚಿರಕಾಲ ರಾರಾಜಿಸು||

ಆಸೆಗಳ ಕೂಪದೊಳ್
ವಾಸ ಮಾಡುತ ಕಳೆದು
ವೇಷಗಳ ಬದಲಿಸಲು ಫಲವೇನಿದೆ?
ಮೋಸವೆಸಗುವ ಬದಲು
 ಪೂಷನಂತೆಹೆ ಬೆಳಗು
ದೋಷಕಳೆಯತ ಸಾಗು ತಮವ ಕಳೆದು||
                ರಚನೆ:- ನಾಖಾರ್ವಿ
(ಛಂದಸ್ಸು: ಕುಸುಮ ಷಟ್ಪದಿ )
...........................
ಅರ್ಥಗಳು 
ಜರೆ=ಬೈಯು 
ಚಂಚು=ಕೊಕ್ಕು 
ಜವರಾಯ=ಯಮರಾಜ 
ಚರಿತೆ=ಚರಿತ್ರೆ 
ಪೂಷ=ಸೂರ್ಯ 
ತಮ=ಕತ್ತಲು

24. ಚಿಕ್ಕದರಲ್ಲಿಯೇ ದೊಡ್ಡ ಶಕ್ತಿ ಅಡಗಿದೆ

ಚಿಕ್ಕದರಲ್ಲಿಯೇ ದೊಡ್ಡ ಶಕ್ತಿ ಅಡಗಿದೆ

ದೊಡ್ಡದು ಆಲೋಚನೆ ಮಾಡುತ್ತಾ
ದೊಡ್ಡದು ಬಯಸುವ ನಾವುಗಳು
ತೃಪ್ತಿ ಯಾವುದರಲ್ಲಿ ಎಷ್ಟೆಷ್ಟಿರಬೇಕೋ
ಅಷ್ಟರಲ್ಲಿಯೇ ಇರುವುದು
ಅದರಲ್ಲಿಯೇ ನಮಗೆ ಆನಂದ ಸಿಗುವುದು

ಅದರಲ್ಲಿಯೇ ಸಿಗುವುದು ನೆಮ್ಮದಿಗಳು

ಸೂಜಿ ಚಿಕ್ಕದಿರುವುದರಿಂದಲೆ
ತಾಯಾರಾಗುವುದು ನಾವು ಧರಿಸುವ ಬಟ್ಟೆಗಳು
ಕಣ್ಣುಗಳು ಚಿಕ್ಕವು ಇರುವುದರಿಂದಲೆ ಆಗುವುದು
ಜಗವ ನೋಡುವ ನೋಟಗಳು
ಬೆಳಗುವ ದೀಪ ಚಿಕ್ಕವು ಇರುವುದರಿಂದಲೆ
ಕತ್ತಲು ಕಳೆದು ಪಸರಿಸುವುದು ಬೆಳಕುಗಳು

ಅವರವರ ದೃಷ್ಟಿಗೆ ತಕ್ಕಂತೆ
ನಡೆಯುತ್ತಿರುವುದು ಬದುಕುಗಳು
ಸಮಂಜಸವಾಗಿ ನಡೆದುಕೊಳ್ಳುವುದರಿಂದ
ತಿಳಿಯುವುದು ನಮ್ಮ ಇರುವಿಕೆಗಳು
                                -ರಾಮು ಎಚ್

ಬೇಂದ್ರೆ ತಾತನಿಗೊಂದು ನಮನ

ಬೇಂದ್ರೆ ತಾತನಿಗೊಂದು ನಮನ 
 
ಬೆಂದರೆ ಬೇಂದ್ರೆಯಾಗುತಿ ಎಂದೇಳಿದ
ಬೇಂದ್ರೆ ತಾತನಿಗೆ ನಮನಗಳು

ಬದುಕಿನ ಅರಿವನು
ಅಕ್ಕರಗಳಲಿ ಅವಿತಿರಿಸಿದ
ಪದಮಾಂತ್ರಿಕನಿಗೊ ನಮನಗಳು

ಗಂಗಾವತರಣದಿ
ಕನ್ನಡಕೆ ಕಾಣ್ಕೆಯಿತ್ತ
ಆಡುನುಡಿಯ ವರಕವಿಗಿದೊ ನಮನಗಳು

ಹೃದಯ ಸಮುದ್ರದಲಿ
ನಾದಲೀಲೆಯ ನುಡಿಸಿದ
ಸಾಧನಕೇರಿಯ ತಾತನಿಗಿದೋ ನಮನಗಳು

ಚಿತ್ತಿಮಳೆಯ ಸ್ವಾತಿ ಮುತ್ತಾದ
ಜೀವನದ ನಾಕುತಂತಿಗೆ
ಜ್ಞಾನಪೀಠದ ಗರಿಯನು
 ಕನ್ನಡ ದೇವಿಗೆ ಇರಿಸಿದ
 ಅಂಬಿಕಾತನಯರಿಗಿದೊ ನಮನಗಳು

          - ಕೆ.ಪಿ.ರುದ್ರೇಶಮೂರ್ತಿ ಸಹ ಶಿಕ್ಷಕರು ಶ್ರೀ.ಜ.ಜ.ಮು.ಪ್ರೌಢಶಾಲೆ. ದಾವಣಗೆರೆ


****