ನನ್ನ ಪುಟಗಳು

02 ಅಕ್ಟೋಬರ್ 2015

ಪೊನ್ನ

ಪೊನ್ನ
       ಪೊನ್ನನು ಹಳೆಗನ್ನಡದ ಮೂವರು ರತ್ನತ್ರಯರಲ್ಲಿ ಒಬ್ಬನು. (ಇತರ ಇಬ್ಬರೆಂದರೆ ಪಂಪ ಹಾಗು ರನ್ನ). ಈತನ ಕಾಲ ಕ್ರಿ.ಶ.೯೫೦. ರಾಷ್ಟ್ರಕೂಟ ಚಕ್ರವರ್ತಿ ೩ನೆಯ ಕೃಷ್ಣನ ಆಸ್ಥಾನದಲ್ಲಿ(೯೩೯-೯೬೫) ಪೊನ್ನನು ಆಸ್ಥಾನ ಕವಿಯಾಗಿದ್ದನು. ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ಉಭಯ ಕವಿಚಕ್ರವರ್ತಿ’ ಎಂದು ಕರೆಯಲಾಗುತ್ತಿತ್ತು. ಈತನು ತನ್ನನ್ನು ‘ಕುರುಳ್ಗಳ ಸವಣ’ ಎಂದು ಕರೆದುಕೊಂಡಿದ್ದಾನೆ. ಆದುದರಿಂದ ಈತನು ಸನ್ಯಾಸಿಯಂತೆ ಇದ್ದನೆಂದು ಭಾವಿಸಬಹುದು.

ಪೊನ್ನನ ಕೃತಿಗಳು ಪೊನ್ನನು ೪ ಕಾವ್ಯಗಳನ್ನು ರಚಿಸಿದ್ದಾನೆಂದು ಹೇಳಲಾಗುತ್ತಿದೆ. ಲಭ್ಯವಿರುವ ಕಾವ್ಯಗಳು ಎರಡು:
  • ಶಾಂತಿಪುರಾಣ
  • ಜಿನಾಕ್ಷರಮಾಲೆ
‘ಭುವನೈಕ ರಾಮಾಭ್ಯುದಯ’ ಹಾಗು ‘ಗತಪ್ರತ್ಯಾಗತ’ ಈ ಕಾವ್ಯಗಳು ಲಭ್ಯವಿಲ್ಲ.

೧.ಶಾಂತಿ ಪುರಾಣ -ಇದಕ್ಕೆ 'ಪುರಾಣ ನಾಮ ಚೂಡಾಮಣಿ'ಎಂಬ ಪರ್ಯಾಯನಾಮವಿದೆ. ೧೨ ಆಶ್ವಾಸಗಳಲ್ಲಿ ರಚನೆಯಾಗಿರುವ ಈ ಚಂಪೂ ಕಾವ್ಯ ೧೬ನೆಯ ತೀರ್ಥಂಕರನಾದ ಶಾಂತಿನಾಥನನ್ನು ಕುರಿತದ್ದು. ಈ ಕಾವ್ಯದಲ್ಲಿ ಪೊನ್ನನ ವಿದ್ವತ್ತು, ಪ್ರೌಢಿಮೆ, ಭಾಷೆ, ಛಂದಸ್ಸುಗಳ ಮೇಲೆ ಇರುವ ಹಿಡಿತ ಎದ್ದು ಕಾಣುತ್ತದೆ. ತೀರ್ಥಂಕರನಾಗಲಿರುವವನು ೬ನೆಯ ಜನ್ಮದಲ್ಲಿ 'ಅಪರಾಜಿತ'ನಾಗಿ ಹುಟ್ಟಿದಂದಿನಿಂದ ಕಥೆ ಆರಂಭವಾಗಿ, ಕೊನೆಯ ೩(೧೦-೧೨) ಆಶ್ವಾಸಗಳಲ್ಲಿ ಶಾಂತಿನಾಥನ ಸ್ವಂತ ಜೀವನವೂ, ಸಿದ್ಧಿಯೂ ವರ್ಣಿಸಲ್ಪಟ್ಟಿದೆ. ಜೈನಧರ್ಮದ ತತ್ವಗಳನ್ನು ಕವಿ ಕಾವ್ಯದುದ್ದಕ್ಕೂ ಪ್ರತಿಪಾದಿಸಿದ್ದಾನೆ.

೨.ಜಿನಾಕ್ಷರಮಾಲೆ-೩೬ ಕಂದಪದ್ಯಗಳಿರುವ ಕೃತಿ. 'ಕ'ಕಾರದಿಂದ ಹಿಡಿದು 'ಳ'ಕಾರದವರೆಗೂ ಕ್ರಮವಾಗಿ ಒಂದೊಂದು ಪದ್ಯಾಕ್ಷರ ಆರಂಭವಾಗುತ್ತದೆ.

೩.ಭುವನೈಕ ರಾಮಾಭ್ಯುದಯ-ಇದು ೧೪ ಆಶ್ವಾಸಗಳ ಚಂಪೂ ಕಾವ್ಯ. ಈ ಗ್ರಂಥವು ಲಭ್ಯವಿಲ್ಲವಾದ್ದರಿಂದ ಇದರ ಕಥಾವಸ್ತು ಚಕ್ರವರ್ತಿ ಕೃಷ್ನನ ಸಾಮಂತರಾಜ ಶಂಕರಗಂಡನ ಕುರಿತದ್ದೊ, ಅಥವಾ ರಾಮಕಥೆಯನ್ನು ಕುರಿತದ್ದೊ, ಇಲ್ಲವೇ ತನ್ನನ್ನು 'ಕೋದಂಡರಾಮ'ನೆಂದು ಕರೆದುಕೊಳ್ಳುತ್ತಿದ್ದ ಚೋಳರಾಜ ರಾಜಾದಿತ್ಯನ ಮೇಲೆ ಮುಮ್ಮಡಿಕೃಷ್ಣ ತಕ್ಕೋಲದಲ್ಲಿ ವಿಜಯ ಸಾಧಿಸಿದ ಕಥೆಯೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.

ಮಲ್ಲಪನ ಮಗಳಾದ 'ದಾನಚಿಂತಾಮಣಿ' ಅತ್ತಿಮಬ್ಬೆಯು ಶಾಂತಿ ಪುರಾಣ ಕೃತಿಯ ಸಾವಿರ ಪ್ರತಿಗಳನ್ನು ಮಾಡಿಸಿ, ಧರ್ಮಶ್ರದ್ಧೆಯುಳ್ಳವರಿಗೆ ಹಂಚಿದಳಂತೆ.

ಪೊನ್ನನಿಗಿದ್ದ ಬಿರುದುಗಳು: 
ಪೊನ್ನನನ್ನು ಕುರುಳ್ಗಳ್ ಸವಣ ಎಂದು ಕರೆಯುತ್ತಿದ್ದರು.
ಕವಿಚಕ್ರವರ್ತಿ ಎಂಬ ಬಿರುದನ್ನು ತನ್ನ ಅರಸನಿಂದ ಪಡೆದಿದ್ದನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ