ನನ್ನ ಪುಟಗಳು

21 ಡಿಸೆಂಬರ್ 2016

ಎಸ್.ಎಸ್.ಎಲ್.ಸಿ. ಕನ್ನಡ ಕಲಿಕಾ ಕಾರ್ಡುಗಳು(2023-24)(ಪಾಸಿಂಗ್ ಪ್ಯಾಕೇಜ್) Kannada Passing Package

ಮುನ್ನುಡಿ
ಪ್ರಿಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಮಿತ್ರರೇ,
    ಡೌನ್‌ಲೋಡ್ ಮಾಡುವ ಮುನ್ನ ತಪ್ಪದೇ ಈ ಲೇಖನವನ್ನು ಒಮ್ಮೆ ಓದಿ.
    ಎಸ್.ಎಸ್.ಎಲ್.ಸಿ. ಕನ್ನಡ ಕಲಿಕಾ ಕಾರ್ಡುಗಳನ್ನು(ಪಾಸಿಂಗ್ ಪ್ಯಾಕೇಜ್) ಹೊಂದಿರುವ 'ಸೊಡರು' ಸಿದ್ಧವಾಗಿವೆ. ಕಾರ್ಡುಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ನನ್ನ ಈ ಮನದಾಳದ ಮಾತುಗಳನ್ನು ಒಮ್ಮೆ ಓದಿ. ಇದು ನಿಮ್ಮ ಮನದಾಳದ ಮಾತೂ ಆಗಿರಬಹುದು ಎಂದು ನಾನು ಭಾವಿಸುತ್ತೇನೆ.
    ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಇಂದು ಹತ್ತು-ಹಲವು ಕಾರಣಗಳಿಂದಾಗಿ ಮಹತ್ವದ ವಿಷಯವಾಗಿ ಪರಿಣಮಿಸಿರುವುದು ನಮಗೆಲ್ಲ ಈಗಾಗಲೇ ವೇದ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, ಶಾಲೆಯ ಫಲಿತಾಂಶದ ದೃಷ್ಟಿಯಿಂದ  ಅಷ್ಟೇ ಅಲ್ಲದೇ ಕೆಲವರ ಪ್ರತಿಷ್ಠೆಯ ದೃಷ್ಟಿಯಿಂದ ಎಸ್.ಎಸ್.ಎಲ್.ಸಿ. ಕನ್ನಡ  ಫಲಿತಾಂಶ ಎಂಬ 'ಬೆದರುಬೊಂಬೆ' ಇಂದು ದೈತ್ಯಾಕಾರವಾಗಿ ಬೆಳೆದು ನಿಂತಿದ್ದು; ಯಾವ ಪರೀಕ್ಷೆಗಳಿಗೂ ಇಲ್ಲದ ಭವ್ಯತೆಯನ್ನು ತಾನು ಪಡೆದುಕೊಂಡಿದೆ; ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಶಿಕ್ಷಕರು, ಪಾಲಕರು ಅಲ್ಲದೆ ಈ ಶೈಕ್ಷಣಿಕ ವ್ಯಾಪ್ತಿಗೆ ಒಳಪಡುವ ಹಲವು ಅಧಿಕಾರಿಗಳ ನಿದ್ದೆಗೆಡಿಸಿದೆ.
     ತರಬೇತಿಗಳಲ್ಲಿ, ಕಾರ್ಯಾಗಾರಗಳಲ್ಲಿ 'ಗುಣಾತ್ಮಕ ಶಿಕ್ಷಣ'ದ ಮಂತ್ರ ಪಠಿಸುವ; ಉದ್ದುದ್ದ ಭಾಷಣ ಮಾಡುವ ಅನೇಕರು ದುರದೃಷ್ಟವಶಾತ್ ಇಂದು ಮೂರು ಗಂಟೆಗಳಲ್ಲಿ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ 'ಪರಿಮಾಣಾತ್ಮಕ' ಪರೀಕ್ಷಾ ಪದ್ಧತಿಗೆ ಜೋತು ಬಿದ್ದಿದ್ದು "ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ. ಅಂಕಗಳಿಕೆ....." ಎಂದು ಹುಯಿಲೆಬ್ಬಿಸಿದ್ದಾರೆ. ಆ ಮೂಲಕ "ಅಂಕಗಳಿಕೆಯೇ ನಮ್ಮ ಶಿಕ್ಷಣದ ಗುರಿ" ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.
    ಪ್ರಪಂಚದ ಯಾವುದಾದರೂ ಮೂಲೆಯಲ್ಲಿ 'ತಳಪಾಯ' ಇಲ್ಲದ ಅಥವಾ 'ತಳಪಾಯ' ಇದ್ದರೂ 'ಭದ್ರವಾದ ತಳಪಾಯ' ಇಲ್ಲದ ನೆಲದ ಮೇಲೆ 'ದೊಡ್ಡ ಕಟ್ಟಡ' ನಿರ್ಮಾಣ ಮಾಡುವ 'ಇಂಜಿನಿಯರ್' ನೋಡಿದ್ದೀರಾ...! ಅಂತಹ  'ಇಂಜಿನಿಯರ್' ಏನಾದರೂ ಇದ್ದಲ್ಲಿ ಅದು 'ಕರ್ನಾಟಕದ ಸರ್ಕಾರಿ ಪ್ರೌಢಶಾಲೆ'ಗಳಲ್ಲಿ...!! 
    "ಪ್ರೌಢಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇಕಡ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸರಿಯಾಗಿ ಓದುವ, ಬರೆಯುವ, ಲೆಕ್ಕಮಾಡುವ ಸಾಮಾನ್ಯ ಸಾಮರ್ಥ್ಯವೂ ಇಲ್ಲ" ಎಂದು ಗೋಳಾಡುತ್ತಿರುವ ಶಿಕ್ಷಕರ ಅಳಲು ಕೇವಲ 'ಅರಣ್ಯ ರೋಧನ'ವಾಗಿದೆ.
    ಏಳೆಂಟು ವರ್ಷ ಏನೂ ಕಲಿಯದೇ ಬಂದ ಶೇಕಡ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ; ಒಂದು ತಿಂಗಳ ಸೇತುಬಂಧ, ನಂತರದ ಕೆಲವು ತಿಂಗಳುಗಳಲ್ಲಿ ನಿಗದಿಪಡಿಸಲಾದ ಪಠ್ಯಬೋಧನೆಯ ನಡುವೆ ಸಮಯ ಹೊಂದಿಸಿಕೊಂಡರೆ ದೊರೆಯುವ ಕೆಲವೇ ಕೆಲವು ಅವಧಿಗಳಲ್ಲಿ ಮಾಡಬಹುದಾದ ಪರಿಹಾರ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಮೇಲೆ ತರಬೇಕೆಂದು ಶಿಕ್ಷಕರು ದಿನನಿತ್ಯ ಹೆಣಗಾಡುತ್ತಿದ್ದಾರೆ. ಕಟ್ಟಪ್ಪಣೆ ಮಾಡುವವರು ವಸ್ತುಸ್ಥಿತಿಯನ್ನು ಅರಿತಿರುವರೇ? ಅರಿತಿದ್ದೂ ಹೀಗೆ ಆಜ್ಞೆ ಮಾಡುತ್ತಿರುವರೇ? ಎಂಬ ಪ್ರಶ್ನೆಗಳು ಶಿಕ್ಷಕರನ್ನು ಕಾಡುತ್ತಿವೆ.
    ಎಲ್ಲಿಯವರೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿ ಮೇಲ್ಮಟ್ಟದ ತರಗತಿಗೆ ಬಂದ ನಂತರ "ಅಂಕಗಳಿಕೆ" ಯ ಹುಯಿಲೆಬ್ಬಿಸುವ ಬದಲು ತಳಮಟ್ಟದಿಂದ ಸರಿಪಡಿಸುವ ಬಗ್ಗೆ ಚಿಂತನೆ ಮಾಡುವುದಿಲ್ಲವೋ..... ಮೇಲ್ಮಟ್ಟದ ವಿದ್ಯಾರ್ಥಿ ಕನಿಷ್ಠ ಅಂಕಗಳಿಸದಿರಲು ಅವನಿಗೆ ತಳಮಟ್ಟದಲ್ಲಿ ಸರಿಯಾದ ಬುನಾದಿ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಬುಡಮಟ್ಟದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ 'ಧೈರ್ಯ' ತೋರುವುದಿಲ್ಲವೋ.... ಅಲ್ಲಿಯವರೆಗೆ ಈ ಸಮಸ್ಯೆಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ, ಶಿಕ್ಷಕರ ಮೇಲೆ ಹೇರಲಾಗುತ್ತಿರುವ ಒತ್ತಡಕ್ಕೆ ಕೊನೆ ಎಂಬುದಿಲ್ಲ.
   ದಿನನಿತ್ಯ 'ದೊಡ್ಡವರ ಆಜ್ಞೆ', 'ನಿಯಮಗಳ ಸಂಕೋಲೆ', 'ಕಡತಗಳ ಸಾಗರ'ದಲ್ಲಿ ಶಿಕ್ಷಕರು ಹೈರಾಣಾಗಿದ್ದಾರೆ; ಕೆಲವರಂತು ಇಂತಹ ಒತ್ತಡಗಳಿಂದಾಗಿ ಮಾನಸಿಕ ನೆಮ್ಮದಿ/ಆರೋಗ್ಯ ಕಳೆದುಕೊಂಡಿದ್ದಾರೆ. 
ಅಲ್ಲವೇ ಮತ್ತೆ....!! ತಳಪಾಯವಿಲ್ಲದ ನೆಲದ ಮೇಲೆ ಸೌಧ ನಿರ್ಮಿಸುವುದೆಂದರೆ....!! ಸಾಮಾನ್ಯದ ಮಾತಾಯಿತೇ...!!
    ಅದೇನೇ ಇರಲಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ 'ಅಂಕಗಳಿಕೆ' ಯ ಕಡೆ ನಮ್ಮೆಲ್ಲರ ಚಿತ್ತವಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು 'ಉತ್ತೀರ್ಣರಾಗುವಂತೆ ಮಾಡುವ' ಆದ್ಯಕರ್ತವ್ಯ ನಮ್ಮದಾಗಿದೆ. ಎಲ್ಲ ಒತ್ತಡಗಳನ್ನು ಹಗುರಾಗಿಸಿಕೊಂಡು; ಯಾವ ಯಾವ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಅವರು ಉತ್ತೀರ್ಣರಾಗಲು ಬೇಕಾಗುವ ಅಂಕಗಳಿಕೆಗೆ ಮಾರ್ಗದರ್ಶನ ಮಾಡಬೇಕು ಎಂಬುದರ ಕಡೆ ನಮ್ಮ ಪ್ರಯತ್ನವಿರಬೇಕು.
    ಈ ನಿಟ್ಟಿನಲ್ಲಿ 'ಸೊಡರು' ಎಂಬ ಕಲಿಕಾ ಕಾರ್ಡುಗಳನ್ನು 2023-24 ರ ಪಠ್ಯವನ್ನಾಧರಿಸಿ ಪರಿಷ್ಕರಣೆ  ಮಾಡಲಾಗಿದ್ದು, ಅದನ್ನು 'ಕನ್ನಡ ದೀವಿಗೆ'ಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ.
    ಅಲ್ಲದೆ 560 ಬಹು ಆಯ್ಕೆ ಪ್ರಶ್ನೆಗಳು ಮತ್ತು 400 ಸಂಬಂಧೀಕರಿಸಿ ಬರೆಯುವ ಪ್ರಶ್ನೆಗಳನ್ನೊಳಗೊಂಡ ‘ಪ್ರಶ್ನಾ ದೀವಿಗೆ’ ಎಂಬ ಪ್ರಶ್ನಾಕೋಠಿಯನ್ನು ನೀಡುತ್ತಿದ್ದೇನೆ. ಇವನ್ನೆಲ್ಲಾ  A4 ಅಳತೆಯ ಡ್ರಾಯಿಂಗ್ ಹಾಳೆಗಳಿಗೆ ನೇರವಾಗಿ ಮುದ್ರಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ ಬಳಸಿಕೊಳ್ಳಬಹುದಾಗಿದೆ. 
       ಶುಭ ಹಾರೈಕೆಗಳೊಂದಿಗೆ,
                                            - ಎಸ್.ಮಹೇಶ್. 'ಕನ್ನಡ ದೀವಿಗೆ'





***************