ನನ್ನ ಪುಟಗಳು

18 ಅಕ್ಟೋಬರ್ 2014

ಪದಚರಿತೆ-3



ಪದಚರಿತೆ: ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ - 3

ಕಳ್ಳ: ಇದು ದ್ರಾವಿಡ ಪದ; ಕಳ್ ಎಂಬ ಧಾತುವಿಗೆ 'ಅ' ಎಂಬ ಪ್ರತ್ಯಯ ಹತ್ತಿ ರೂಪಿತವಾದುದು. ಕಳ್ ಎಂಬ ಧಾತುವಿಗೆ ಅಪಹರಿಸು ಎಂಬ ಅರ್ಥವಿದೆ. ತಮಿಳು ಮತ್ತು ಮಲಯಾಲಂಗಳಲ್ಲಿ ಕಳ್ಳ ಎಂಬ ರೂಪಲ್ಲಿಯೂ, ತುಳುವಿನಲ್ಲಿ ಕಳುವೆ ಎಂಬ ರೂಪದಲ್ಲಿಯೂ ಈ ಶಬ್ದ ಬಳಕೆಯಲ್ಲಿದೆ. ಕಳ್ಳತನ ಮಾಡುವವನು ಎಂಬುದನ್ನು ಸೂಚಿಸುವ ಈ ಶಬ್ದ ಹಳೆಯದು: ”ಎಲ್ಲಮಂ ಕಳ್ಳರ್ ಕೊಂಡುಪೋದರ್" ಎಂಬ ಪ್ರಯೋಗ 'ವಡ್ಡಾರಾಧನೆ'ಯದು. ಇದು ಕಳ ಎಂಬ ರೂಪದಲ್ಲಿಯೂ ಪ್ರಾಚೀನ ಕಾವ್ಯ-ಶಾಸನಗಳಲ್ಲಿ ದೊರೆಯುತ್ತದೆ. ಇದರ ಭಾವನಾಮರೂಪವೇ ಕಳವು ಅಥವಾ ಕಳ್ಳತನ. ನಿಷೇಧಾರ್ಥದಲ್ಲಿ ಕಳ್ಳದ ಎಂಬ ರೂಪವೂ ದೊರೆಯುತ್ತದೆ: ಪಂಚಾಣುವ್ರತಗಳಲ್ಲಿ ಒಂದಾದ ಅಸ್ತೇಯವನ್ನು 'ವಡ್ಡಾರಾಧನೆ'ಯು 'ಕಳ್ಳದ ವ್ರತ' ಎನ್ನುತ್ತದೆ. ಕಳ್ಳಕಾಕ ಎಂಬ ಶಬ್ದವೂ ಇದೆ, 'ಕಳ್ಳನ ಮಗ' ಅಥವಾ 'ಕಳ್ಳ ನನ್ನ ಮಗ' ಎಂಬುದು ಒಂದು ಸಾಮಾನ್ಯ ಬೈಗುಳ.
ಕಳ್ಳ ಎಂಬ ವಿಶೇಷಣವು ಮೋಸದ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಕಳ್ಳಗಂಡಿ ಎಂದರೆ ಗೊತ್ತಾಗದಂತೆ ಹೋಗಬಹುದಾದ ಕಳ್ಳಬಾಗಿಲು. ಹಾಗೆಯೇ ಕಳ್ಳಜ್ವರ ಎಂಬುದು ನಟನೆಯ ಜ್ವರ ಎಂಬರ್ಥವನ್ನು ಸೂಚಿಸುತ್ತದೆ. ಕಳ್ಳಕಿಂಡಿ ಎಂದರೆ ಕಳ್ಳರು ಹಾಕಿದ ಕನ್ನ ಎಂದು. ಕನ್ನ ಹಾಕಿ ಕದಿಯುವವನನ್ನು "ಸುಕುಮಾರಚರಿತೆ'ಯಲ್ಲಿ ಕನ್ನಗಳ್ಳ ಎಂದು ಕರೆದಿದೆ. ಕದ್ದಿರುವ ವಸ್ತುವನ್ನು ಕಳ್ಳಮಾಲು ಎನ್ನುವುದು ಸಾಮಾನ್ಯ. ಅನಧಿಕೃತ ಮಾರಾಟ ಮಾಡುವ ಜಾಗವೇ ಕಳ್ಳಪೇಟೆ ಅಥವಾ ಕಳ್ಳಸಂತೆ. ಕೆಲವೆಡೆ ಕಳ್ಳಕುಪ್ಪಸ ಎಂಬ ಮಾತನ್ನು ಬಳಸುತ್ತಾರೆ: ಮೊದಲ ಸಲ ಬಸಿರಿಯಾದ ಮಗಳಿಗೆ ತವರಿವನರು ಗುಟ್ಟಾಗಿ ಕುಪ್ಪಸ ಕೊಡುವ ಶಾಸ್ತ್ರವನ್ನಿದು ಸೂಚಿಸುತ್ತದೆ.
ಅಧಿಕೃತವಲ್ಲದ ನಾಣ್ಯಗಳನ್ನು ಹಿಂದಿನ ಕಾವ್ಯಗಳು ಕಳ್ಳವಣ ಎಂದು ಕರೆಯುತ್ತವೆ. ಬಸವಣ್ಣನ ಒಂದು ವಚನದಲ್ಲಿ "ಕಳ್ಳನಾಣ್ಯ ಸಲುಗೆಗೆ ಸಲ್ಲದು" ಎಂಬ ವಾಕ್ಯವಿದೆ. ದ್ರಮ್ಮ ಎಂಬುದು ಹಿಂದೆ ಪ್ರಚಲಿತವಿದ್ದ ಒಂದು ನಾಣ್ಯ. ಒಂದು ವಚನದಲ್ಲಿ "ಹಾದರಕ್ಕೆ ಹೋದರೆ ಕಳ್ಳದ್ರಮ್ಮವಾಯಿತ್ತು" ಎಂಬ ಮಾತಿದೆ. ದ್ರಮ್ಮ ಎಂಬ ನಿರ್ದಿಷ್ಟ ನಾಣ್ಯದ ಅನಧಿಕೃತ ರೂಪವನ್ನಿದು ಸೂಚಿಸುತ್ತದೆ.
=====
ಕಳ್ಳು: ಕಳ್ ಎಂಬುದು ಇದರ ಮೂಲ ರೂಪ; ಇದೊಂದು ನಾಮಪದ. ಹೆಂಡ ಎಂಬುದು ಇದರರ್ಥ. ಈ ಶಬ್ದ ತಮಿಳಿನಲ್ಲಿ ಕಳ್ ಎಂದೂ, ತೆಲುಗಿನಲ್ಲಿ ಕಲ್ಲು ಎಂದೂ, ಮಲಯಾಳಂನಲ್ಲಿ ಕಳ್, ಕಳ್ಳು ಎಂದೂ, ತುಳುವಿನಲ್ಲಿ ಕಲಿ ಎಂದೂ ಬಳಕೆಯಲ್ಲಿದೆ. ನಾಗವರ್ಮನ 'ಆಭಿಧಾನ ವಸ್ತುಕೋಶ'ವೆಂಬ ನಿಘಂಟಿನಲ್ಲಿ "ಮದಿರೆ ಸುರೆ ಕಳ್ಳುಂ" ಎಂಬ ಸಮಾನಾರ್ಥಕಗಳನ್ನು ಕೊಡಲಾಗಿದೆ. ಕಳ್ಗುಡಿ ಎಂದರೆ ಹೆಂಡ ಕುಡಿ ಎಂದು. "ಕಳ್ಗುಡಿದವರಂದಂ ಇಂತು ಸಿರಿ ಸಾರ್ತರೆ ಸಾರ್ವುದು" ಎಂಬುದು 'ಪಂಪಭಾರತ'ದ ಪ್ರಯೋಗ. ಹೆಂಡ ಕುಡಿಯುವವನು 'ಕಳ್ಕುಣಿ' ("ಖಳನುಂ ಕಳ್ಕುಣಿಯುಂ ಘುಳುಮ್ಮನಿೞಿಗುಂ ಶ್ವಭ್ರಾಂತಮಂ ತಾಪಿನಂಕ" - ಪಂಪನ 'ಆದಿಪುರಾಣ'), ಕಳ್ಗುಡಿಹ ("ಶುಂಡಾಪನಂ ಕಳ್ಗುಡಿಹಕ" 'ಆಭಿಧಾನ ವಸ್ತುಕೋಶ') ಅಥವಾ 'ಕಳ್ಗುಡುಕಿ' ("ಕಳ್ಗುಡಿಕಿಗಳುಂ ನಿರ್ದಯರುಂ ಮಾಡದ ಪಾಪಮಿಲ್ಲ_ - ನಯಸೇನನ 'ಧರ್ಮಾಮೃತ'). ಹೆಂಡ ಕುಡಿಯುವ ಹವ್ಯಾಸವನ್ನು ಕೆಲವೆಡೆ 'ಕಳ್ಗುಡುಹಿತನ' ಎಂದು ಕರೆಯಲಾಗಿದೆ. ಕಳ್ಳನ್ನು ಮಾಡಿ ಮಾರುವವನನನ್ನು 'ಕಳ್ಳವಳ' ಎನ್ನುತ್ತಿದ್ದರು ("ಆ ಪೊಳಲ ಕಳ್ಳವಳನೊರ್ವಂಕ" - ಕರ್ಣಪಾರ್ಯನ 'ನೇಮಿನಾಥ ಪುರಾಣ'). ಮತ್ತೊಂದು ಕಾವ್ಯದಲ್ಲಿ (ನೇಮಿನಾಥನ 'ಅರ್ಧನೇಮಿ ಪುರಾಣ') 'ಕಳ್ಳಸಿಗ' ಎಂದು ಕರೆಯಲಾಗಿದೆ. ಅಂಥ ಹೆಂಗಸನ್ನು 'ಕಳ್ಳವತಿ' ಎಂದು ಅದೇ ಕಾವ್ಯದಲ್ಲಿ ಕರೆದಿದೆ ("ಕೌಶಂಬಿಯ ಕಳ್ಳವತಿ ಮಂಡೋದರಿಯ ಮಗ"). ಹೆಂಡ ಮಾರುವವರ ಕೇರಿಯನ್ನು 'ಕಳ್ಳಸಿಗಗೇರಿ' ಎಂದು ಕರೆಯುತ್ತಿದ್ದರು ("ಕಳ್ಳಸಿಗಗೇರಿಯೊಳಗಣ ಕಳ್ಳೆಲ್ಲಮಮಂ ಎಱೆದು ತರಿಸಿ"  - ನಯಸೇನನ 'ಧರ್ಮಾಮೃತ').
ಪಂಪ ತನ್ನ 'ಪಂಪಭಾರತ'ದಲ್ಲಿ "ಮುನೂಱಱುವತ್ತು ಜಾತಿ ಕಳ್ಗಳಂ" ಎನ್ನುತ್ತಾನೆ. ಬಾಹುಬಲಿ ಎಂಬ ಕವಿಯು ತನ್ನ 'ಧರ್ಮನಾಥಪುರಾಣ'ದಲ್ಲಿ "ಸಿರಿ ಸಿಂಬಿ ತಂಪುಗಂ ಬಬ್ಬರಿ ಗಂಗಾಸಾಗರಂ ಸುರಾಳಂ ಸೋಮಂ ವರವಾಣಿ ಮಾಳವೋದರಿ ಮರವಟ್ಟಿಗೆಯೆಂಬ ಕೆಲವು ಪೆಸರಿನ ಕಳ್ಳಂ" ಉಲ್ಲೇಖಿಸುತ್ತಾನೆ. ಹೆಂಡದ ಮಾರಯ್ಯನೆಂಬೊಬ್ಬ ವಚನಕಾರನು ಹೆಂಡವಿಳಿಸುವ ರೂಪಕದ ಮೂಲಕವಾಗಿಯೇ ತನ್ನ ಆಧ್ಯಾತ್ಮಿಕ ಸಾಧನೆಯನ್ನು ವರ್ಣಿಸುತ್ಥಾನೆ.
=====
ಕಾಂಚಾಣ: ಈ ಶಬ್ದ ಕಾಂಚನ ಎಂಬ ಸಂಸ್ಕೃತ ಶಬ್ದದ ಕನ್ನಡೀಕರಣಗೊಂಡ ರೂಪ ಅಥವಾ ತದ್ಭವ. ಚಿನ್ನ ಎಂಬುದು ಮೂಲಾರ್ಥ; ಆದರೆ ಹಳದಿ ಬಣ್ಣದ ಬಹು ವಸ್ತುಗಳಿಗೆ ಅನ್ವಯಿಸುವಂತೆ ಇದರ ಅರ್ಥ ವಿಸ್ತಾರಗೊಂಡಿದೆ: ಸಂಸ್ಕೃತದಲ್ಲಿಯೇ ಕಾಂಚನ ಎಂಬುದಕ್ಕೆ ಸಂಪಿಗೆ, ದತ್ತೂರಿ, ನಾಗಕೇಸರ, ಪುನ್ನಾಗ ಮುಂತಾದ ವಿವಿಧ ಮರಗಳು ಮತ್ತು ಹೂವು ಎಂಬರ್ಥ ಪ್ರಾಪ್ತವಾಗಿದೆ. ಚಿನ್ನದ ಡಾಬನ್ನು ಕಾಂಚೀ ಕಾಂಚೀಲತೆ, ಕಾಂಚೀಪಟ್ಟಿಕೆ, ಕಾಂಚೀದಾಮ ಮುಂತಾದ ಹೆಸರುಗಳಿಂದ ಕನ್ನಡ ಕಾವ್ಯಗಳೂ ಕರೆಯುತ್ತವೆ. ಸೀತಾರಾಮರನ್ನು ಆಕರ್ಷಿಸಲು ಮಾರೀಚನು ಬಂದುದು 'ಕಾಂಚನಮೃಗ'ದ ರೂಪದಲ್ಲಿ. ಕಾಂಚನವರ್ಣ ಎಂದರೆ ಚಿನ್ನದ ಬಣ್ಣ ಅಂದರೆ ಹಳದಿ. ಆ ಲೋಹದ ಆಕರ್ಷಣೆಯೇ ಅದರ ಬಣ್ಣವಾದ್ದರಿಂದ ಚಿನ್ನವನ್ನು 'ಸುವರ್ಣ' ಅಥವಾ ಸ್ವರ್ಣ ಎಂದು ಕರೆದರು. ಅತ್ಯಂತ ಶ್ರೇಷ್ಠವಾದ ಚಿನ್ನದ ಪರ್ವತವೆಂದು ಹೇಳಲಾದ ಮೇರುವನ್ನು ಕಾಂಚನಾದ್ರಿ ಎಂದೇ ಕಾವ್ಯಗಳು ಕರೆಯುತ್ತವೆ. ಹೊನ್ನಿನ ಬಣ್ಣದ ಬಾಳೆಯನ್ನು 'ಮಲ್ಲಿನಾಥ ಪುರಾಣ'ವೆಂಬ ನಾಗಚಂದ್ರನ ಕಾವ್ಯದಲ್ಲಿ 'ಕಾಂಚನಕದಳೀ' ಎಂದು ಕರೆಯಲಾಗಿದೆ.
ಕಾಂಚಾಣ ಎಂಬುದು ಕನ್ನಡದಲ್ಲಿ ದುಡ್ಡು ಎಂಬರ್ಥದಲ್ಲಿ ಬಳಕೆಯಾಗಿದೆ. ಕನ್ನಡ ನಾಡಿನಲ್ಲಿ ಹಿಂದೆ ಚಿನ್ನದ ನಾಣ್ಯಗಳು ಚಲಾವಣೆಯಲ್ಲಿದ್ದುವು; ಗದ್ಯಾಣ, ಪೊನ್, ವರಹ ಮುಂತಾದ ಹೆಸರಿನಲ್ಲಿ ಬಕೆಯಲ್ಲಿದ್ದುವು; ಹೀಗಾಗಿ ಆ ಶಬ್ದಕ್ಕೆ ದುಡ್ಡು ಎಂಬ ಅರ್ಥ ಬಂದಿದೆ. ಇದು ತದ್ಭವ ಶಬ್ದವಾದರೂ ಅದನ್ನು ಸಂಸ್ಕೃತ ಶಬ್ದವೆಂಬಂತೆ "ಕಾಂಚಾಣಂ ಕಾರ್ಯಸಿದ್ಧಿಃ" ಎಂಬ ವಾಕ್ಯವನ್ನು ಮಾಡಿಕೊಂಡು, ದುಡ್ಡು ಕೊಟ್ಟರೆ (ಲಂಚವಿತ್ತರೆ) ಏನು ಬೇಕಾದರೂ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಮಾಡಲು ಕೆಲವರು ತಮಾಷೆಯಾಗಿ ಹೇಳುತ್ತಾರೆ. ಹಣಕ್ಕೆ ಅರ್ಥಾತ್ ಹಣವಂತರಿಗೆ ಭಾವನೆಗಳಿಲ್ಲ ಎಂದು ಸೂಚಿಸಲು 'ಕುರುಡು ಕಾಂಚಾಣ' ಎಂಬ 'ನುಡಿಗಟ್ಟು' ಬಂದಿದೆ. ಬೇಂದ್ರೆಯವರ ತುಂಬ ಪ್ರಸಿದ್ಧವಾದ ಪದ್ಯದ ಹೆಸರೇ 'ಕುರುಡು ಕಾಂಚಾಣ'. ನಾನಾ ನೆಲೆಗಳಲ್ಲಿ ವ್ಯಕ್ತವಾಗುವ ಹಣವಂತರ ಸೊಕ್ಕನ್ನು ಕಂಡು ಕೆರಳುವ ಕವಿಯು "ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ ಅಂಗಾತ ಬಿತ್ತೋ ಹೆಗಲೊಳಗೆತ್ತೋ" ಎಂದು ಕರೆ ಕೊಡುತ್ತಾರೆ. ಕಾಂಚಾಣ ಪದದಲ್ಲಿನ ಣ ಮತ್ತು ಲೋಹದ ನಾಣ್ಯಗಳು ಬಿದ್ದಾಗ ಟಣ್ ಎಂದು ಸದ್ದುಮಾಡುವುದರಿಂದ ಝಣಝಣ ಎಂಬ ಅನುಕರಣಪದವೂ ಹಣವನ್ನು ಸೂಚಿಸುತ್ತದೆ.
=====
ಕಾಕತಾಳೀಯ: ತರ್ಕಶಾಸ್ತ್ರದಲ್ಲಿ ಹೇಳುವ ಅನೇಕ ಲೌಕಿಕ 'ನ್ಯಾಯ'ಗಳಲ್ಲಿ ಇದೂ ಒಂದು. ನ್ಯಾಯ ಎಂದರೆ ಎರಡು ವಸ್ತುಗಳ ನಡುವಣ ವಿಶಿಷ್ಟ ಸಂಬಂಧವೆಂದು ಸ್ಥೂಲವಾಗಿ ಹೇಳಬಹುದು. ಕಾಕತಾಳೀಯ ಎಂದರೆ ಆಕಸ್ಮಿಕ ಘಟನೆ ಎಂದರ್ಥ. ಇದರಲ್ಲಿ ಒಂದು ಪುಟ್ಟ ಕತೆಯೇ ಅಡಕವಾಗಿದೆ. ತಾಳವೃಕ್ಷದಿಂದ ಒಂದು ಹಣ್ಣು ಕೆಳಗೆ ಬೀಳುವ ಹೊತ್ತಿಗೆ ಸರಿಯಾಗಿ ಕಾಗೆಯೊಂದು ಅಲ್ಲಿಗೆ ಹಾರಿ ಬಂದಿತು, ಆ ಹಣ್ಣನ್ನು ಕಾಗೆಯು ತಿಂದಿತು. ಕಾಗೆ ಬರುವುದಾಗಲೀ ಹಣ್ಣು ಬೀಳುವುದಾಗಲೀ ಪೂರ್ವನಿಶ್ಚಿತ ಘಟನೆಗಳಲ್ಲ. ಆದರೆ ಎರಡೂ ಒಂದೇ ಹೊತ್ತಿಗೆ ಸಂಭವಿಸಿದವು. ಇದೇ ಕಾಕತಾಳೀಯ. ಇದನ್ನು ಕಾಕತಾಳನ್ಯಾಯ ಎಂಬ ಶಬ್ದದಿಂದಲೂ ಸೂಚಿಸಲಾಗುತ್ತದೆ.
ಕಾಕತಾಳೀಯ ಅಥವಾ ಕಾಕತಾಳನ್ಯಾಯ ಎಂಬ ಶಬ್ದಗಳು ಸಂಸ್ಕೃತ ಮೂಲದಿಂದ ಬಂದವು. ಆ ಭಾಷೆಯಲ್ಲಿ ಅವುಗಳ ರೂಪವು ಕ್ರಮವಾಗಿ ಕಾಕತಾಲೀಯ ಮತ್ತು ಕಾಕತಾಲನ್ಯಾಯ ಎಂದು. ಸಂಸ್ಕೃತ ಶಬ್ದಗಳು ಹೇರಳ ಸಂಖ್ಯೆಯಲ್ಲಿ ಕನ್ನಡ ಶಬ್ದಕೋಶದಲ್ಲಿ ಬಂದು ಸೇರಿಕೊಂಡಿವೆ. ಹಾಗೆ ಸೇರುವಾಗ ಸಂಸ್ಕೃತ ಶಬ್ದಗಳಲ್ಲಿ ಬರುವ 'ಲ' ಕಾರಕ್ಕೆ ಕನ್ನಡದಲ್ಲಿ 'ಳ'ಕಾರ ಬರುತ್ತದೆ. ಮಂಗಲ > ಮಂಗಳ, ಬಲ > ಬಳ, ಕಲಭ > ಕಳಭ ಇತ್ಯಾದಿ. ಹೀಗೆ ಸಂಸ್ಕೃತ ಶಬ್ದಗಳಲ್ಲಿನ ಲಕಾರಕ್ಕೆ ಕನ್ನಡದಲ್ಲಿ ಬರುವ ಳ ಕಾರವನ್ನು 'ಕ್ಷಳ' ಎಂದು ಹಳಗನ್ನಡ ವ್ಯಾಕರಣಕಾರರು ಕರೆಯುತ್ತಾರೆ. ಳ ವರ್ಣಕ್ಕೆ ಹತ್ತಿರವಾಗಿ ಉಚ್ಚಾರಗೊಳ್ಳುವ ಎರಡು ಬಗೆಯ ವರ್ಣಗಳು ಮೂಲತಃ ಕನ್ನಡದಲ್ಲಿಯೇ ಇವೆ: ಳ (ಇದನ್ನು ಱಳ ಎನ್ನುತ್ತಾರೆ) ಮತ್ತು ಳ (ಇದನ್ನು ಕುಳ ಎನ್ನುತ್ತಾರೆ). 'ೞ' ವರ್ಣದ ಉಚ್ಚಾರ ಹೇಗಿತ್ತೋ ನಮಗೆ ತಿಳಿಯದು. ಆದರೆ ಬರಬರುತ್ತ ಇವೆರಡೂ ಳ ಎಂಬಂತೆಯೇ ಉಚ್ಚಾರವಾಗತೊಡಗಿ ಈಗ ಒಂದೇ ಎನ್ನಿಸಿಬಿಟ್ಟಿತು. ೞ ಮತ್ತು ಳ ವರ್ಣಗಳ ಉಚ್ಚಾರ ಒಂದೇ ಎಂದು ಕ್ರಿಸ್ತಶಕ ಹದಿಮೂರನೆಯ ಶತಮಾನದ ಹರಿಹರಕವಿಯೇ ಹೇಳುತ್ತಾನೆ. ಆ ಕಾರಣದಿಂದ ಹಳಗನ್ನಡದಲ್ಲಿನ ೞ ಅಕ್ಷರ ಈಗ ಬಳಕೆಯಲ್ಲಿಲ್ಲ. ಬಾಳೆ, ಬಾೞೆ - ಇಂಬಿವುಗಳು ಹಳಗನ್ನಡದಲ್ಲಿ ಬೇರೆ ಬೇರೆ ಅರ್ಥಗಳನ್ನು ಹೊಂದಿದ್ದ ಬೇರೆ ಬೇರೆ ಪದಗಳು: ಮೊದಲನೆಯದು ಮೀನು ಎಂಬುದನ್ನೂ, ಎರಡನೆಯದು ಬಾಳೆಯ ಗಿಡ ಅಥವಾ ಹಣ್ಣು ಎಂಬುದನ್ನೂ ಸೂಚಿಸುತ್ತಿದ್ದವು. ಈಗಾದರೆ ಕನ್ನಡ ನಿಘಂಟುಗಳಲ್ಲಿ ಬಾಳೆ ಎಂಬ ಶಬ್ದಕ್ಕೆ ಈ ಎರಡು ಅರ್ಥಗಳೂ ಇವೆ ಎಂದು ಹೇಳುತ್ತವೆ.
*****
ಕಾಡು1: ಮುಖ್ಯ ದ್ರಾವಿಡ ಭಾಷೆಗಳಲ್ಲೆಲ್ಲ ಈ ರೂಪವೇ ಇರುವ ಈ ಶಬ್ದಕ್ಕೆ ಅಡವಿ ಎಂಬುದು ಅರ್ಥ. 'ಶಬ್ದಮಣಿ ದರ್ಪಣ'ವು ಕ್ರಿಯಾರ್ಥವನ್ನು ಕೊಡುವುದರ ಜೊತೆಗೆ "ಕಾಡು- .. .. ಅರಣ್ಯೇಚ" ಎಂದು ಹೇಳುತ್ತದೆ. "ವಿಯೋಗಿ ಜನಕ್ಕೆ ಬೇಟಮಂ ಬಳೆವುದು ನಾಡ ಕಾಡ ಬೆಳಸಿಂ ಬೆಳಸಾ ವಿಷಯಾಂತರಾಳದೊಳ್" ಎಂಬುದು 'ಪಂಪಭಾರತ'ದ ಮಾತು. "ಕೆಲವು ವಾಯಸಂಗಳ್ ಬಿಱಿತೋಡಿ ಕಾಡೊಳ್ಕೂಡಿರ್ದುವೆಲ್ಲಂ ಬಂದು" ಎಂಬುದು 'ಪಂಚತಂತ್ರ'ದಲ್ಲಿನ ಮಾತು. "ಕರುಬರಿದ್ದೂಂದೆ ಕಾಡೊಳ್ಳಿತು" ಎಂಬುದು 'ಜೈಮಿನಿ ಭಾರತ'ದಲ್ಲಿನ ವಾಕ್ಯ.
ಕಾಡಿನಲ್ಲಿನ ಪ್ರಾಣಿಗಳು ಕಾಡುಮೃಗಗಳು. "ಅರಸಂ ಕಾಡಾನೆಯಂ ಪಿಡಿಯಲೈದಿ" ಎಂಬ ಮಾತು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. "ಬಾಯ ಚೆಲ್ವನಪ್ಪ ಬನಮಂ ಕಾಡಾನೆ ಪೊಕ್ಕಂತೆ" ಎಂಬುದು 'ಪಂಪಭಾರತ'ದಲ್ಲಿನ ಗಾದೆ. ಕೃಷಿ ಮಾಡದೆ ತಾವಾಗಿ ತಾನಾಗಿ ಬೆಳೆದ ಸಸ್ಯಗಳು ಕಾಡುಸಸ್ಯಗಳು. ಕಾಡರಳೆ, ಕಾಡಮಾದಲ, ಕಾಡಮಲ್ಲಿಗೆ, ಕಾಡವರೆ ಇತ್ಯಾದಿ. "ವನಪೂರ ಬೀಜಕಃ-ಕಾಡಮಾದಲ" ಎನ್ನುತ್ತದೆ 'ಓಷಧಿಕೋಶ'. "ಕಾಡವರೆ ಮಣಲು ಸುಣ್ಣಮೀ ವೀಡಿತ ವಜ್ರೋಪಮಾನ ತಿವುರೆನಿಸಿರ್ಕುಂ" ಎಂದು 'ಖಗೇಂದ್ರಮಣಿದರ್ಪಣ'ವು ವಿಷಚಿಕಿತ್ಸೆಯ ಸಂದರ್ಭದಲ್ಲಿ ಹೇಳುತ್ತದೆ. "ಹಿತ್ತಿಲಲ್ಲಿ ಬೆಳೆದಿದ್ದಾವೆ ಕಾಡು ಗಿಡಗಂಟಿ ಮೆಳೇ" ಎಂಬುದು ಗಂಗಾಧರ ಚಿತ್ತಾಲರ ಕವನವೊಂದರ ಸಾಲು.
ಕಾಡು-ನಾಡು ಒಂದು ಬಗೆಯ ವಿರುದ್ಧಾರ್ಥದ ಜೋಡಿಶಬ್ದ. ಕಾಡು ಎಂಬುದು ಒರಟು, ಅನಾಗರಿಕ ಎಂಬ ಅರ್ಥವನ್ನು ಹೊಂದುತ್ತದೆ. ಅನಾಗರಿಕ ಪರಾಕ್ರಮವನ್ನು 'ಶ್ರೀ ರಾಮಾಯಣ ದರ್ಶನಂ'ನಲ್ಲಿ 'ಕಾಡದಟು' ಎನ್ನಲಾಗಿದೆ ("ನಮಗೀಗಳೇಕೀ ಕಪಿಧ್ವಜರ ಕಾಡದಟಿನೊಂದು ಹಂಗು?"). ಕಾಡುಮನುಷ್ಯನನ್ನು ಮುದ್ದಣನ 'ರಾಮಾಶ್ವಮೇಧ'ವು ಕಾಡಾಡಿ ಎನ್ನುತ್ತದೆ: "ಕಾಡಾಡಿರಾಯನೊಂದು ಗೆಯ್ಮೆಯಂ."
ಭೂಮಿ ಎಂಬ ಅರ್ಥವೂ ಈ ಶಬ್ದಕ್ಕಿದೆ. "ಐವತ್ತು ಮತ್ತರ್ ಕೆಸುಕಾಡುಂ ಕೀೞ್ಕೆಱೆ ಮೂವತ್ತಿರ್ಮಡಿ ಕಾಡುಂ" ಎಂಬ ಮಾತು ಒಂಬತ್ತನೆಯ ಶತಮಾನದ ಶಾಸನವೊಂದರಲ್ಲಿ ಬಂದಿದೆ. ಇಲ್ಲಿನ ಕೆಸುಕಾಡು ಎಂಬುದಕ್ಕೆ ಕಿಸುಕಾಡು ಅಥವಾ ಕಿಸುಗಾಡು (ಕೆಚ್ಚನೆಯ ಕಾಡು) ಎಂಬ ಪರ್ಯಾಯ ರೂಪವೂ ಇದೆ: "ಕಿಸುಗಾಡ ನೆಲಂಗಳ್ ಎಳದಳಿರ ಬಣ್ಣಮಂ ಕೆಯ್ಕೊಂಡು" ('ಪಂಪಭಾರತ'). 'ಕಾಡಾರಂಬ' ಅಥವಾ 'ಕಾಡಾರಂಭ' ಎಂಬುದು ಕುಷ್ಕಿ ಜಮೀನಿಗೆ ಅನ್ವಯಿಸುತ್ತಿದ್ದ ಹೆಸರು: "ಚತುಸ್ಸೀಮೆವೊಳಗಾದ .. .. ಕಾಡಾರಂಭ ನೀರಾರಂಭ"ಗಳ ಪ್ರಸ್ತಾಪ ಶಾಸನವೊಂದರಲ್ಲಿದೆ. (ನೀರಾರಂಭ ಎಂದರೆ ನೀರಾವರಿ). ಇವುಗಳ ಮೇಲಿನ ತೆರಿಗೆಯನ್ನೂ ಈ ಹೆಸರುಗಳಿಂದಲೇ ಕರೆಯುತ್ತಿದ್ದರೆಂಬುದಕ್ಕೂ ಶಾಸನಾಧಾರಗಳಿವೆ: "ಬಾಲಗೆರೆ ಮಗ್ಗದೆರೆ ಕಾಡಾರಂಬ ನೀರಾರಂಬ" ಎಂಬುದು ಹದಿನೈದನೆಯ ಶತಮಾನದ ಶಾಸನವೊಂದರ ಪ್ರಯೋಗ.
=====
ಕಾಡು2: ಕಾಡು ಎಂಬ ಧಾತುವಿಗೆ ಪೀಡಿಸು ಎಂಬ ಅರ್ಥವಿದೆ. 'ಶಬ್ದಮಣಿದರ್ಪಣ'ವು "ಕಾಡು-ಅವಹೇಳನೇ" ಎನ್ನುತ್ತದೆ. "ಪೆಂಡತಿಯಾಗೆಂದು ಕೈಯಂ ಪಿಡಿದು ಕಾಡುತ್ತಿರ್ಪನ್ನೆಗಂ" ಎಂಬುದು 'ವಡ್ಡಾರಾಧನೆ'ಯ ಮಾತು. "ಕೋಡಗಂ ಱೋಡಾಡಿ ಕಾಡುರ್ತಿರ್ಪುದುಂ" ಎಂಬುದು ದುರ್ಗಸಿಂಹನ 'ಪಂಚತಂತ್ರ'ದ ಮಾತು. "ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು" ಎಂಬುದು ಬಸವಣ್ಣನ ಮಾತು. ಇನ್ನೊಂದು ಕಡೆ "ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿ ಕಾಡಿತ್ತು ಶಿವನ ಡಂಗುರ" ಎಂಬ ಅವನದೇ ಮಾತಿದೆ. "ಕಾಡಿ ಬೇಡಿ ಉಂಬವರೆಲ್ಲರು ಬ್ರಹ್ಮನ ಸಂಪ್ರದಾಯ" ಎಂದು ಅಲ್ಲಮ ಹೇಳುತ್ತಾನೆ. "ಗೋಪಿಕೆಯರ ಸೆರಗ ಹಿಡಿದು ಕಾಡುತ್ತಿದ್ದೆ ನಿತ್ಯವೂ" ಗೋಪಾಲಕೃಷ್ಣ ಅಡಿಗರ 'ನನ್ನ ಅವತಾರ' ಕವನದ ಸಾಲು.
'ಕಾಡು' ಶಬ್ದದ ನಾಮರೂಪವೇ ಕಾಟ. ತೊಂದರೆ ಅಥವಾ ಪೀಡೆ ಎಂಬುದು ಈ ಶಬ್ದದ ಅರ್ಥ. "ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕಂ ಅಳ್ಕದ" ಎಂದು 'ಪಂಪಭಾರತ'ದಲ್ಲಿದೆ.  "ನರಿಯ ಕಾಟಕ್ಕೆ ಬೇಸತ್ತುವೊಂದು ದಿವಸಮಾ ನರಿಯಂ ಕೊಲಲುಪಾಯಮಂ ಕಂಡು" ಎಂಬ ಮಾತು 'ಪಂಚತಂತ್ರ'ದ್ದು.
ಕಾಟ ಎಂಬುದು ಒಂದು ಕ್ಷುದ್ರದೈವದ ಹೆಸರು. "ವರಮೀಗುಮೆ ಮೈಲಾರಂ ಕೇತಂ ಕಾಟಂ ಮಾರಿಗೆ ಮಸಣಿಗೆಯೆನಿಪ್ಪ ಕೊೞೆದೆಯ್ವಂಗಳ್" ಎಂಬುದು ಬ್ರಹ್ಮಶಿವನ 'ಸಮಯ ಪರೀಕ್ಷೆ'ಯ ಪ್ರಶ್ನೆ. ಇದನ್ನು ವ್ಯಕ್ತಿನಾಮವಾಗಿಯೂ ಬಳಸುತ್ತಿದ್ದರು. 'ಶಬ್ದಮಣಿದರ್ಪಣ'ದಲ್ಲಿ "ಅಂಕಿತನಾಮಕ್ಕೆ-ಕಾಟಂ, ಕಸವಂ, ದೂಡಿಗಂ" ಎಂದು ಉದಾಹರಣೆಗಳನ್ನು ಕೊಟ್ಟಿದೆ. ಪ್ರಾಯಶಃ ಇದರ ಮತ್ತೊಂದು ರೂಪ 'ಕಾಟುಗ'. "ಕಾಟುಗ ಕೆತ್ತುಗ ಪೋಲುಗ ಎಂಬುದು ಎನ್ನ ಹೆಸರು" - ಈ ಸಾಲು ಬಸವಣ್ಣನ ಒಂದು ವಚನದ್ದು. 'ಕಾಟಿ' ಎಂಬುದು ಸ್ತ್ರೀ ಕ್ಷುದ್ರದೇವತೆ: "ಹೂಂಕೃತಿಗೈವ ಭೈರವಂ ನೊಸಲುಗಣ್ಣನಾಳ್ವ ಚೌಡೇಶ್ವರಿ ಕೂಂಕಿಱಿದಾರ್ವ ಕಾಟಿಯುಂ" ('ಪಾರ್ಶ್ವನಾಥಪುರಾಣ').
ಕಾಟಕ ಎಂದರೆ ಕಾಟ ಕೊಡುವವನು: "ಕೌರವರ್ ಕಾಟಕರ ಸೊಲ್ಲುಗಳ್ಕೇಳ್ದು" ಎಂಬ ಮಾತು 'ತುರಂಗಭಾರತ'ದಲ್ಲಿದೆ. ಕಾಟಕ ಎಂದರೆ ಬೇಟೆಗಾರ ಎಂಬರ್ಥವೂ ಇದೆ; ಕಾಟನಾಯಕ ಎಂಬ ಹೆಸರು ಸಾಮಾನ್ಯ; ಹಾಗೆಯೇ 'ಕಾಟಣ್ಣ' ಬೇಡರ ದೇವತೆ. ಕಾಟಕೊಡುವ ಸ್ವಭಾವವೇ 'ಕಾಟಕತನ'. 'ಕಾಟಕಾಯಿ' ಎಂದರೆ ಕೊಳ್ಳೆ ಅಥವಾ 'ದರೋಡೆ': "ಆ ತುದಿಯಿನೀ ತುದಿವರಂ ಕಾಟಕಾಯಿಗಳನೆಬ್ಬಿಸದೆ ಬಿಡುವನೇನು" ಎಂಬುದು ಗೋವಿಂದ ಪೈ ಅವರ 'ಗೊಲ್ಗೊಥ'ದ ಸಾಲು. 'ಕಾಟಾಚಾರ' ಎಂಬುದು ಕಾಟ ತಪ್ಪಿಸಿಕೊಳ್ಳಲು ಮಾಡುವ ಕೆಲಸ. ಕಾಟ ಶಬ್ದವನ್ನೊಳಗೊಂಡ ಇಂತಹ ಇನ್ನೂ ಅನೇಕ ಶಬ್ದಗಳಿವೆ.
=====
ಕಾಲು: ಇದೊಂದು ದ್ರಾವಿಡ ಪದವಾಗಿದ್ದು, ಕನ್ನಡ ತಮಿಳು ಮಲಯಾಳಂಗಳಲ್ಲಿ ಮೂಲರೂಪ ಕಾಲ್ ಎಂದೂ, ತೆಲುಗಿನಲ್ಲಿ ಕಾಲು ಎಂದೂ ತುಳುವಿನಲ್ಲಿ ಕಾರ್ ಎಂದೂ ಇದೆ. ಸಾಮಾನ್ಯವಾಗಿ, ಪ್ರಾಣಿಗಳ ಮೊಳಕಾಲಿನಿಂದ ಕೆಳಗಿನ ಭಾಗ ಎಂಬರ್ಥ ಈ ಶಬ್ದಕ್ಕಿದೆ. "ಕೈಕಾಲ್ ನಡೆನುಡಿಯುಳ್ಳ ಮನುಷ್ಯನಿಂದೆಂತುಂ ಕಾರ್ಯಮುಂಟು" (ದುರ್ಗಸಿಂಹನ 'ಪಂಚತಂತ್ರ') ಎಂಬುದರಲ್ಲಿ ಇದು ಸ್ಪಷ್ಟವಾಗಿದೆ. ನಡೆಯಲು ತೊಡಗುವ ಮಗುವಿಗೆ 'ಕಾಲು ಬಂತು' ಎನ್ನುವುದು ವಾಡಿಕೆ. ಮಂಚ, ಸ್ಟೂಲು, ಮೇಜು ಮುಂತಾದವುಗಳನ್ನು ಹೊತ್ತ ಮರದ ತುಂಡುಗಳನ್ನೂ ಕಾಲ್ ಎನ್ನುತ್ತಾರೆ ("ಪಗೆವರಂ ಎನ್ನ ಮಂಚದ ಕಾಲೊಳ್ ಕಟ್ಟಿದೆಂ" 'ಪಂಪಭಾರತ'). ಆದರೆ "ನಿಮ್ಮ ಕಾಲಂ ತೊಳವೆ" ಎಂಬ 'ವಡ್ಡಾರಾಧನೆ'ಯ ಪ್ರಯೋಗದಲ್ಲಿ ಇದಕ್ಕೆ ಪಾದವೆಂಬ ಅರ್ಥವಿದೆ. 'ಕಾಲೂರು' ಎಂದರೆ ನೆಲೆನಿಲ್ಲು ಎಂದರ್ಥ ("ಕಾರಮುಗಿಲೊಡ್ಡು ಕಾಲೂಱಿದಂತಿರ್ಪುದು" - ಜನ್ನನ 'ಅನಂತನಾಥ ಪುರಾಣ'). ಕಾಲನ್ನು ಪ್ರಾಣಿಗಳು ಮುಂದೆ ಹೋಗಲು ಬಳಸುವುದರಿಂದಾಗಿಯೋ ಏನೋ ಹರಿಯುವ ನದಿ ಹಳ್ಳ ಕಾಲುವೆಗಳಿಗೂ ಕಾಲ್ ಎಂಬರ್ಥ ಬಂತು ("ತೊಱೆ ಪೊರ್ದಿದ ಕಾಲ್ ತಾಂ ಕುಲ್ಯಾಹ್ವಂ" - 'ಅಭಿಧಾನ ವಸ್ತುಕೋಶ'). ಕಾಲ್ ಈಗಿನ ಕಾಲುವೆ.
ಕಾಲ್ಗಾಪು (ಕಾಲ್+ಕಾಪು) ಎಂದರೆ ಪದಾತಿ (ನಡೆಯುವ ಸೈನ್ಯ ಅಥವಾ ಸೈನಿಕ) ಎಂದರ್ಥ. ಕಾಲಾಳ್ ಎಂಬುದೂ ಇದೇ. ಹಳಗನ್ನಡದಲ್ಲಿ 'ಕಾಲ್ವಟ್ಟೆ' ಎಂದರೆ ಕಾಲು ದಾರಿ ("ಕಾಡೊಳಿರ್ದ ಕಾಲ್ವಟ್ಟೆಗಳೆಲ್ಲಂ ಎಯ್ದುವುವು ನೀರ್ನೆಲೆಯಂ" - 'ಸೂಕ್ತಿಸುಧಾರ್ಣವ'). ಇಂಗ್ಲಿಷಿನ ಫುಟ್‍ಪಾತ್ ಎಂಬುದಕ್ಕೆ ಈಗ ಸಂವಾದಿ. 'ಕಾಲಿಗೆ ಬೀಳು' ಎಂದರೆ ನಮಸ್ಕರಿಸು ಎಂದೂ, 'ಕಾಲುಹಿಡಿ' ಎಂದರೆ ಬೇಡಿಕೊ ಎಂದೂ ಅರ್ಥ. ಕಾಲಕಸ ಎಂದರೆ ಕೆಲಸಕ್ಕೆ ಬಾರದ್ದು ಎಂದರ್ಥ. 'ಕಾಲಿಗೆ ಬುದ್ಧಿ ಹೇಳು' ಎಂದರೆ ಪಲಾಯನ ಮಾಡು ಎಂದರ್ಥ.
ಪ್ರಾಣಿಗಳು ನಿಲ್ಲುವುದು ನಾಲ್ಕು ಕಾಲುಗಳ ಮೇಲೆ; ಹೀಗಾಗಿಯೋ ಏನೋ ಕಾಲು ಎಂಬುದಕ್ಕೆ ನಾಲ್ಕನೇ ಒಂದು ಭಾಗ ಎಂದೂ ಅರ್ಥ ಬಂದಿದೆ. "ಓದು ಕಾಲು ಬುದ್ಧಿ ಮುಕ್ಕಾಲು" ಎಂಬುದೊಂದು ಗಾದೆ. ಕಾಲ್ ಎಂದರೆ ಚಿಕ್ಕ ಎಂಬ ಅರ್ಥವೂ ಇದೆ; ಕಾಲೂರ್ ಎಂದರೆ ಸಣ್ಣ ಹಳ್ಳಿ: "ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು.. .. ಕಾಲೂರ್ಗಳಿಂ ಕೆಯ್ಗಳಿಂ" (ಆಂಡಯ್ಯನ 'ಕಬ್ಬಿಗರ ಕಾವ').
=====
ಕುದುರು: ಕನ್ನಡದ ಈ ಶಬ್ದವು ಕಣಜ ಎಂಬರ್ಥದ ಸಂಸ್ಕೃತದ 'ಕೃದರ'ದ ತದ್ಭವ. ಕುದಿರ್, ಕುದಿರು ಕುದುರು ಮುಂತಾದ ರೂಪಗಳಲ್ಲಿ ಬಳಕೆಯಾಗಿರುವ ಇದರ ಅರ್ಥವು ಭಿನ್ನವಾಗಿದೆ. "ಕುಶೂಳಂ ಕುದಿರ್ ಅಱಿಗೆ" ಎನ್ನುತ್ತದೆ 'ಅಭಿಧಾನ ವಸ್ತುಕೋಶ'. ಬಿದಿರಿನ ತಟ್ಟಿಯನ್ನು ಗುಂಡಗೆ ಕಟ್ಟಿ ಮಣ್ಣು ಲೇಪಿಸಿದ ಕಣಜವೇ ಕುದುರು. "ಕುದುರನೇಸು ತೊಳೆದಡೆಯೂ ಕೆಸರು ಮಾಬುದೆ?" ಎಂಬ ಬಸವಣ್ಣನ ಪ್ರಶ್ನೆ ಇದನ್ನು ಸೂಚಿಸುತ್ತದೆ. ಕುದಿರ್ ಎಂಬುದಕ್ಕೆ ಗೋಡೆ ಎಂಬರ್ಥವೂ ಇದೆ: "ಕುದಿರೊಳ್ ಕಳ್ಳವನಿಕ್ಕಿಸಿ"  'ಯಶೋಧರ ಚರಿತೆ'). ದವಸವನ್ನು ಕುಟ್ಟುವಾಗ ಒರಳಿನಿಂದ ಹೊರಚೆಲ್ಲದಂತೆ ಇಡುತ್ತಿದ್ದ ಬಿದಿರು ಅಥವಾ ಮರದ ಸುತ್ತು ಕುದುರು. ಹಗ್ಗದ ಸಿಂಬೆಯನ್ನೂ ಕುದಿರು ಎಂಬ ಶಬ್ದ ಸೂಚಿಸುತ್ತದೆ. ಕಣ್ಣ ಕುದುರು ಎಂಬ ಸಮಾಸದಲ್ಲಿನ ಕುದುರು ಶಬ್ದಕ್ಕೆ ಕುಳಿ ಎಂಬ ಅರ್ಥವಿದೆ. ಕುದುರು ಎಂಬುದನ್ನು ನದಿಯ ಪಾತ್ರ ಎಂಬರ್ಥದಲ್ಲಿ ಕುವೆಂಪು 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಬಳಸುತ್ತಾರೆ ("ಕೋಟಿ ಕಣ್ಣುಗಳೊಡ್ಡಿದೊಂದು ಕುದುರಿಗೆ ಕೆಡೆದು"). ತುಳುವಿನಲ್ಲಿ ಈ ಶಬ್ದಕ್ಕೆ ಸಣ್ಣದ್ವೀಪ ಎಂಬರ್ಥವಿದೆಯಂತೆ. ಕನ್ನಡದಲ್ಲೂ ಇದರ ಬಳಕೆಯಿದೆ. ಒರಳಿನ ಸುತ್ತ ಇರುವ ಕುದುರು ಎಂಬುದು ಇದರಿಂದ ಪ್ರೇರಿತವಾಗಿರಬಹುದೇ?
ನೆಲೆಯಾಗು ಎಂಬ ಕ್ರಿಯಾರ್ಥದಲ್ಲಿ ಕುದುರು ಎಂಬ ಶಬ್ದ ಬಳಕೆಯಾಗುತ್ತದೆ. ತಮಿಳಿನಲ್ಲಿದು ಕುದಿರ್ ಆದರೆ ತೆಲುಗಿನಲ್ಲಿ ಕುದುರು ಎಂದೂ ತುಳುವಿನಲ್ಲಿ ಕುದುರುಣಿ ಎಂದೂ ಆಗುತ್ತದೆ. ಸ್ತಿಮಿತಕ್ಕೆ ಬರು ಎಂಬರ್ಥವೂ ಇದಕ್ಕಿದೆ. "ವ್ಯಾಪಾರ ಕುದುರಿತು" ಎಂಬಂತಹ ಕಡೆ ಇದನ್ನು ಕಾಣಬಹುದು. ಒಪ್ಪಿಗೆಯಾಗು ಎಂಬರ್ಥವು "ಮದುವೆ ಕುದುರಿತು" ಎಂಬಂತಹ ಕಡೆಗಳಲ್ಲಿ ಕಾಣಬಹುದು.
ಕುದುರಿಸು ಎಂಬ ಪ್ರೇರಣಾರ್ಥದಲ್ಲಿಯೂ ಈ ಶಬ್ದದ ಬಳಕೆಯಿದೆ. ಏಳಿಗೆ ಹೊಂದು ಎಂಬರ್ಥ ಇದರದ್ದು. 'ವಿದ್ಯಾಗಳಲ್ಲಿ ಆಸಕ್ತಿ ಕುದುರಿಸುವುದು' ಎಂಬಂತಹ ಪ್ರಯೋಗವಿದೆ. 'ಕುದುರುಗೊಳಿಸು' ಎಂಬುದನ್ನು ಸರಿಹೊಂದಿಸು ಎಂಬರ್ಥದಲ್ಲಿ ಬಳಸುವುದುಂಟು. ಸರಿಹೊಂದುವ ಕ್ರಮವೇ 'ಕುದುರುಗೊಳ್ಳು'. ವ್ಯವಸ್ಥೆಗೊಳಿಸು ಎಂಬರ್ಥದಲ್ಲಿ 'ಕುದುರುಪಾಟು' ಎಂಬ ಸಮಾಸದ ಬಳಕೆಯಿದೆ.
=====
ಕುದುರೆ: ಈ ಶಬ್ದವು ತಮಿಳಿನಲ್ಲಿ ಕುದಿರೈ ಎಂದೂ, ಮಲಯಾಳಂನಲ್ಲಿ ಕುದಿರ ಎಂದೂ ತುಳುವಿನಲ್ಲಿ ಕುದುರೆ ಎಂದೂ ತೆಲುಗಿನಲ್ಲಿ ಕುದಿರ, ಗುಱ್ಱ ಎಂದೂ ಬಳಕೆಯಲ್ಲಿದೆ. ಕನ್ನಡದಲ್ಲಿಯೂ ಕುದಿರೆ ಎಂಬ ರೂಪವೂ ಬಳಕೆಯಲ್ಲಿತ್ತು. ಸಮಾನಾರ್ಥಗಳನ್ನು ಕೊಡುವ 'ಅಭಿಧಾನ ವಸ್ತುಕೋಶ'ವು "ತುರಗಂ ಯಯು ಸಪ್ತಿ ಹಯಂ ತುರಂಗಮಂ ವಾಜಿ ವಾಹಂ ಅಶ್ವಂ ತಾಕ್ಷ್ರ್ಯಂ ಹರಿ ಘೋಟಕ ಮರ್ವಾಖ್ಯಂ ತುರಂಗಮೆನೆ ಕುದಿರೆ" ಎಂದು ಹೇಳುತ್ತದೆ. "ಬಿಲ್ವಿಲ್ಲಳ್ಕುದುರೆ ಕುದುರೆಯೊಳ್ಕಿಟ್ಟ  ಅತಿತುಮುಲ ಕಾಳಗ ಪೆೞ್ಚಿ" ಎಂದು ಕ್ರಿಶ 800 ರ ಶಾಸನವೊಂದರಲ್ಲಿ ಬರುವ ಇದರ ಉಲ್ಲೇಖವೇ ಪ್ರಾಯಶಃ ಕನ್ನಡದಲ್ಲಿ ಅತ್ಯಂತ ಪ್ರಾಚೀನವಾದುದು. "ಕುದುರೆ ನಾಯ್ ಒಟ್ಟೆ ಉಡುವುಂ" ಎಂಬುದು 'ವಡ್ಡಾರಾಧನೆಯ' ಉಲ್ಲೇಖ. "ಕುದುರೆಯ ಪಂದಿಯ ವಿಷ್ಠೆ"ಯನ್ನು ಬಾಳೆಗೊನೆಯು ದೊಡ್ಡದಾಗಿ ಬೆಳೆಯಲು ಬಳಸಿಕೊಳ್ಳುವ ವಿಧಾನವನ್ನು 'ಲೋಕೋಪಕಾರ' ವಿವರಿಸುತ್ತದೆ.
ಈ ಶಬ್ದಕ್ಕೆ ಈ ಪ್ರಾಣಿಯಲ್ಲದೆ ಬೇರೆ ಬೇರೆ ಅರ್ಥಗಳೂ ಇವೆ. ಹಿಂದಿನ ಕಾಲದ ಚತುರಂಗ ಸೈನ್ಯದಲ್ಲಿ ಕುದುರೆಯೂ ಒಂದಾದುದರಿಂದ ಅದನ್ನನುಕರಿಸಿ ಆಡುವ ಆಟವಾದ ಚತುರಂಗ ಅಥವಾ ಚದುರಂಗದಲ್ಲಿ ಒಂದು ಕಾಯಿಯ ಹೆಸರು ಕುದುರೆ. ಬಂದೂಕಿನ ಕೀಲನ್ನೂ (ಟ್ರಿಗರ್) ಕುದುರೆ ಎನ್ನುತ್ತಾರೆ. ಹಸಿರು ಬಣ್ಣದ ಮಿಡಿತೆಯ ಪ್ರಭೇದವೊಂದನ್ನೂ ಕುದುರೆ ಎನ್ನುತ್ತಾರೆ. ಕುದುರೆಯಾಕಾರದ ರಚನೆಯನ್ನು ಸೊಂಟದಲ್ಲಿ ಧರಿಸಿ ನಡೆದಾಡುವುದೇ ಕೀಲುಕುದುರೆಯಾಟ.
ಕುದುರೆ ಶಬ್ದವನ್ನೊಳಗೊಂಡ ಅನೇಕ ನುಡಿಗಟ್ಟುಗಳಿವೆ. "ಕುದುರೆ ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು" ಎಂಬ ಬಸವಣ್ಣನ ಮಾತಿನಲ್ಲಿ ಇದು ಅಧಿಕಾರಸ್ತರು ಎಂಬ ಅರ್ಥ ಹೊಮ್ಮುತ್ತದೆ. ಕೋಟೆಯಲ್ಲಿ ಕುದುರೆ ನುಗ್ಗುವಷ್ಟು ಜಾಗವನ್ನು 'ಕುದುರೆಗಂಡಿ' ಎನ್ನುತ್ತಿದ್ದರು ("ನೀರಕಂಡಿಯ ಕುದುರೆಗಂಡಿಯ ತೆರಪುಗಳುಮಂ ವಸುಷೇಣಂ ಬಳಸಿ ನೋಡುತ್ತುಂ" - 'ಅನಂತನಾಥ ಪುರಾಣ'). ಕುದುರೆಗಳನ್ನು ಬೆಳೆಸುತ್ತಿದ್ದ ಜಾಗ ಕುದುರೆಗಾವಲ್ ("ಕುದುರೆಗಾವಲ ಸುಭಟರನಿತರೊಳೊದಗಿ ಬಂದು" 'ಜೈಮಿನಿ ಭಾರತ'). ಕುದುರೆಯಂತೆ ಹೆಜ್ಜೆಯಿಡುವುದನ್ನು 'ಧರ್ಮಾಮೃತ'ವು 'ಕುದುರೆಗಾಲಿಕ್ಕು' ಎನ್ನುತ್ತದೆ ("ಮೂರುಂ ದೇವರಂ ಬಂದಿಸುತ್ತುಂ ಮತ್ತಂ ಕುದುರೆಗಾಲಿಕ್ಕುತ್ತುಂ"). ಕುದುರೆಯ ಮೇಲೆ ಹಾಕುತ್ತಿದ್ದ ಸುಂಕವನ್ನು ಶಾಸನಗಳು 'ಕುದುರೆಯ ಸೇಸೆ' ಎನ್ನುತ್ತವೆ ("ಕುದುರೆಯ ಸೇಸೆ ಗ 5 ಪ 9 ಹಾ 3ಖ) (ಗ=ಗದ್ಯಾಣ, ಪ=ಪಣ, ಹಾ=ಹಾಗ ಎಂಬ ನಾಣ್ಯಗಳು). "ಏರಿದೇರಿದನೇರಿ ಗಾಳಿಗುದುರೆ ಸವಾರಿ ಸೂರ್ಯ ಸೇರಿ" ಎಂದು ಬೇಂದ್ರೆಯವರು ಬುದ್ಧನ ಆಧ್ಯಾತ್ಮಿಕ ಸಾಧನೆಯನ್ನು ವರ್ಣಿಸುವಾಗ ಬಳಸುವ 'ಗಾಳಿಗುದುರೆ' ಅತೀವ ವೇಗವನ್ನು ಸೂಚಿಸುತ್ತದೆ. 'ಸಾವಿರ ಕುದುರೆ ಸರದಾರ, ಮನೆ ಹೆಂಡ್ತಿ ಕಾಸ್ದಾರ' ಎಂಬುದು ಜನಜನಿತವಾದ ಗಾದೆ.
=====
ಕುಪ್ಪೆ: ರಾಶಿ ಎಂಬರ್ಥದ ಈ ದ್ರಾವಿಡ ಶಬ್ದವು ತಮಿಳಿನಲ್ಲಿ ಕುಪ್ಪಂ, ಕುಪ್ಪೈ ಎಬ ರೂಪಗಳಲ್ಲಿಯೂ, ತೆಲುಗು ಮಲಯಾಳಂನಲ್ಲಿ ಕುಪ್ಪ ಎಂಬರೂಪದಲ್ಲಿಯೂ, ತುಳುವಿನಲ್ಲಿ ಕುಪ್ಪೆ, ಗುಪ್ಪೆ ರೂಪಗಳಲ್ಲಿಯೂ ಬಳಕೆಯಲ್ಲಿದೆ. "ಕಸಕುಪ್ಪೆಯೊಳ್ ತಾಮರೆ ಮೂಡಿದುದಂ ಸಮುದ್ರಂ ಮೇಱೆದಪ್ಪಿದುದುಮಂ" ಎಂಬ ಪ್ರಯೋಗ 'ವಡ್ಡಾರಾಧನೆ'ಯದು. ಕುಪ್ಪೆ ಎಂದರೇ ಕಸ ಎಂಬರ್ಥವೂ ಇತ್ತು: "ನೊಳವಿಂಗೆ ಕುಪ್ಪೆವರಮೇಂ ತ್ರಿಳೋಕಮೊಂದಾಗಿ ಬಂದು ತಾಗುವೊಡಕ್ಕುಂ" - ಜನ್ನನ 'ಅನಂತನಾಥ ಪುರಾಣ'. 'ಕುಪ್ಪೆಗೊಳ್' ಎಂದರೆ ರಾಶಿಯಾಗು ಎಂದರ್ಥ ನೇಮಿನಾಥನ 'ನೇಮಿನಾಥ ಪುರಾಣ'ದಲ್ಲಿನ "ಕೆಲದೊಳ್ ಕುಪ್ಪೆಗೊಂಡ ಮಾಣಿಕಂಗಳ ಬೆಳಗಿನೊಡನೆ ಬಾಳಕನ ಮೆಯ್ವೆಳಗು ದಳವೇಱಿ" ಎಂಬಲ್ಲಿ ಕಾಣಿಸುತ್ತದೆ. ಹಾಗೆಯೇ 'ಕುಪ್ಪು' ಎಂದರೆ ರಾಶಿಮಾಡು ಎಂದರ್ಥ: "ಕುಪ್ಪು-ಪಂಜೀಕರಣೇ" - 'ಶಬ್ದಮಣಿದರ್ಪಣ'. 'ಕುಪ್ಪಿಸು' ಎಂದರೆ ಒಟ್ಟುಗೂಡಿಸು, ರಾಶಿಮಾಡು ಎಂದರ್ಥ: "ಮುಂದೆ ಕುಪ್ಪಿಸಿ ಕುಪ್ಪೆಯಾಗಿ ಮಾನಸರಂ ತೆಗಿಸಿ ರಕ್ಕಸರ ಮುಂದೆ ರಾಸಿಗೆಯ್ದಂತೆ" 'ಲೀಲಾವತಿ'. 'ಕುಪ್ಪೆಗೆಯ್' ಎಂದರೂ ರಾಶಿಮಾಡು ಎಂದರ್ಥ: "ಪೊಮ್ಮಗದಪ್ಪುದು ಗುಡಿಸಿ ಕುಪ್ಪೆಗೆಯ್ವಂ ಬರ್ಪುದು" - ತಿರುಮಲಾರ್ಯನ 'ಚಿಕದೇವರಾಜವಿಜಯ'.
ಈ ಶಬ್ದವು 'ಗುಪ್ಪೆ' ಎಂಬ ರೂಪದಲ್ಲಿಯೂ ಬಳಕೆಯಲ್ಲಿದೆ. "ಅಡಕೆಯ ಗುಪ್ಪೆಯಷ್ಟಾಭರಣಂಗಳುಂಟು" ಎಂಬುದು 'ಭರತೇಶವೈಭವ'ದ ಮಾತು. "ಬೆಚ್ಚಗಿನ ನೆಲಕೆ ಕುಸಿದ ಮಣ್ಣಿನ ಗುಪ್ಪೆ ಹಳೆ ನೆಹುಗಳನೆಲ್ಲ ಹುಗಿದಿಟ್ಟುಕೊಂಡು ಬಿದ್ದಿತ್ತು ತಬ್ಬಲಿಯಾಗಿ" ಎಂಬಿವು ಗಂಗಾಧರ ಚಿತ್ತಾಲರ 'ಘಾಟಿ' ಕವನದ ಸಾಲುಗಳು. ರಾಶಿಯಾಗು ಎಂಬರ್ಥದಲ್ಲಿ 'ಗುಪ್ಪೆಗೊಳ್' ಎಂಬ ರೂಪ ಪ್ರಯೋಗವಾಗುತ್ತದೆ: "ಮಡುಗಟ್ಟಿದ ನೆತ್ತರ ಪೆರ್ವೊನಲಿಂ ಕುಪ್ಪಳಿಸಿ ಗುಪ್ಪೆಗೊಂಡ ದೊಂಡೆಗರುಳ್ಗಳಿಂ" ಎಂಬುದು ಷಡಕ್ಷರನ 'ರಾಜಶೇಖರ ವಿಳಾಸ'ದ ಮಾತು. ಗುಪ್ಪೆ ಎಂದರೆ ದಿಣ್ಣೆ ಎಂದರ್ಥವಿದೆ: ಮಕ್ಕಳು ಮರಳನ್ನು 'ಗುಪ್ಪೆಮಾಡಿ' ಆಡುವುದನ್ನು ನೋಡಬಹುದು. 'ಜಾರುಗುಪ್ಪೆ' (ಜಾರೋಬಂಡೆ) ಎಂಬ ಪದವನ್ನು ನೋಡಬಹುದು: "ಕಾಮನ ಬಿಲ್ಲಿನ ಜಾರುಗುಪ್ಪೆಯೊಳು ಜಾರುತ ಬಂದಳು ಮುಗಿಲಿಂದ" ಎಂಬುದು ಪುತಿನ ಅವರ 'ಅಹಲ್ಯೆ' ಗೀತನಾಟಕದ ಸಾಲು. ಕುಪ್ಪೆ ಅಥವಾ ಗುಪ್ಪೆ ಎಂಬುದು ಊರಿನ ಹೆಸರಿನ ಕೊನೆಯಲ್ಲಿ ಬರುವ ಅನೇಕ ನಿದರ್ಶನಗಳಿವೆ: ಬೆಂಗಳೂರಿನಲ್ಲಿ ಸೇರಿಹೋಗಿರುವ ಅತ್ತಿಗುಪ್ಪೆ, ಕತ್ತರಿಗುಪ್ಪೆ, ತಟ್ಟುಗುಪ್ಪೆ ಮುಂತಾದುವನ್ನು ನೋಡಬಹುದು. ಈ ಊರುಗಳು ತಮ್ಮ ಸುತ್ತಮುತ್ತಲಲ್ಲಿ ಎತ್ತರವಾದ ಜಾಗದಲ್ಲಿರುವುದನ್ನು ಗಮನಿಸಬಹುದು.
=====
ಕೂಡಲಸಂಗಮದೇವ: ಎಲ್ಲರಿಗೂ ಪರಿಚಿತವಾದ ಶಬ್ದವಿದು. ಬಸವಣ್ಣನ ವಚನಗಳ ಅಂಕಿತ ಅಥವಾ ಮುದ್ರಿಕೆ. ಇದರಲ್ಲಿ ಮೂರು ಭಾಗಗಳಿವೆ: ಕೂಡಲ್, ಸಂಗಮ ಹಾಗೂ ದೇವ. ಕೂಡಲ್ ಅಥವಾ ಕೂಡಲು ಎಂಬುದು ಕನ್ನಡ ಶಬ್ದ; ಉಳಿದೆರಡು ಸಂಸ್ಕೃತ ಶಬ್ದಗಳು. ಕೂಡಲ್ ಎಂಬುದಕ್ಕೆ ಷಷ್ಠೀವಿಭಕ್ತಿ ಪ್ರತ್ಯಯ ಸೇರಿಸಿದಾಗ ಆಗುವ ಕೂಡಲ ಅಥವಾ ಕೂಡಲಿನ ಸಂಗಮದೇವ ಎಂದೂ ಅರ್ಥವಾಗವಾಗಬಹುದು, ಕೂಡಲಸಂಗಮದ ಅಧಿವ ಎಂದೂ ಅರ್ಥವಾಗಬಹುದು. ಕೂಡು ಎಂದರೆ ಎಂದರೆ ಸೇರುವಿಕೆ, ಸಂಗಮ ಎಂದರೂ ಸೇರುವಿಕೆ; ಸಾಮಾನ್ಯವಾಗಿ ಎರಡು ಅಥವಾ ಹೆಚ್ಚಿನ ನದಿಗಳ ಸೇರುವಿಕೆಯನ್ನು ಕೂಡಲು ಎನ್ನುತ್ತಾರೆ. ಕೂಡಲಿ, ಕೂಡಲು ಕೂಡಲೂರ್ ಎಂಬ ಊರುಗಳಿವೆ. ಕೂಡುವುದರ ಭಾವವೇ ಕೂಟ. ಅನೇಕರು ಸೇರುವ ಸಂಸ್ಥೆ ಎಂಬ ಹೆಸರಿನಲ್ಲಿಯೂ ಈ ಶಬ್ದದ ಬಳಕೆಯಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿಗಳು ಸೇರುವ ಬಹು ಪ್ರಸಿದ್ಧ ಕ್ಷೇತ್ರವನ್ನು ಕೂಡಲಸಂಗಮ ಎಂದು ಕರೆಯುತ್ತಾರೆ. ಬಸವಣ್ಣನ ಆರಾಧ್ಯವ ಅಲ್ಲಿಯ ಕೂಡಲಸಂಗಮೇಶ್ವರ, ಹಾಗಾಗಿ ತನ್ನ ವಚನಗಳ ಮುದ್ರಿಕೆಯನ್ನಾಗಿ ಆ ಶಬ್ದವನ್ನೇ ಬಳಸುತ್ತಾನೆ. ಈ ಕ್ಷೇತ್ರಕ್ಕೆ ಕಪ್ಪಡಿ ಸಂಗಮ ಎಂದೂ ಕರೆಯುತ್ತಿದ್ದರು. ತನ್ನ ಹುಟ್ಟೂರಾದ ಇಂಗುಳೇಶ್ವರ ಬಾಗೇವಾಡಿಯಿಂದ ಬಂದ ಬಸವಣ್ಣನ ಪ್ರಸಂಗವನ್ನು ಹೇಳುವಾಗ ಹರಿಹರಕವಿಯು ತನ್ನ 'ಬಸವರಾಜದೇವರ ರಗಳೆ'ಯಲ್ಲಿ "ಮಲಪ್ರಹರಿ ಕೃಷ್ಣವೇಣಿಗಳ ಸಂಗಸುಖಮಂ ಪಿಂಗದ ಕೂಡಲಸಂಗಮೇಶ್ವರನಿಪ್ಪ ಕಪ್ಪಡಿಯ ಸಂಗಮಮಂ ಪೊಕ್ಕು" ಎಂದು ವರ್ಣಿಸುತ್ತಾನೆ. ಕಪ್ಪಡಿ ಎನ್ನುವುದು ಸಂಸ್ಕೃತದ 'ಕರ್ಪಟಿನ್' ಎಂಬ ಶಬ್ದದ ತದ್ಭವ (ತದ್ಭವವೆಂದರೆ ಕನ್ನಡೀಕರಣಗೊಂಡ ಸಂಸ್ಕೃತ ಶಬ್ದ ಎಂದರ್ಥ); ಕರ್ಪಟ ಅಥವಾ ಹರಕಲು ಬಟ್ಟೆ ತೊಟ್ಟವನು ಕರ್ಪಟಿನ್; ಹಾಗಿರುವವನು ಸಾಧಕ.  ಕೂಡಲ ಸಂಗಮವು ಹಿಂದಿನಿಂದಲೂ ಸಾಧಕರ ಕ್ಷೇತ್ರವಾಗಿತ್ತು; ಸಾಧಕರು ದೂರದೆಡೆಗಳಿಂದ ಇಲ್ಲಿಗೆ ಬಂದು ತಮ್ಮ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿರುತ್ತಿದ್ದರು. ಅದಕ್ಕೇ ಈ ಜಾಗಕ್ಕೆ ಈ ಹೆಸರಾಯಿತು.
ಮೈಸೂರು ಜಿಲ್ಲೆಯಲ್ಲಿ ತಿರುಮಕೂಡಲು ನರಸೀಪುರ ಎಂಬ ಊರಿದೆ. ಈ ಎರಡು ಹೆಸರುಗಳಲ್ಲಿ ಮೊದಲನೆಯದು ತಿರು+ಮುಕ್ಕೂಡಲು ಸೇರಿ ಆದುದು. ತಿರು ಎಂಬುದು ಶ್ರೀ ಎಂಬುದರ ತದ್ಭವರೂಪ, ಶ್ರೇಷ್ಠವಾದ, ಪವಿತ್ರವಾದ ಎಂಬ ಅರ್ಥ ಹೊಂದಿದೆ. ಅಂತಹ ಮುಕ್ಕೂಡಲು ಅದು; ಅಲ್ಲಿ ಸೇರುವುದು ಕಾವೇರಿ ಮತ್ತು ಕಪಿಲಾ ನದಿಗಳೂ, ಜೊತೆಗೆ ಅಂತರ್ವಾಹಿನಿಯೊಂದೂ ಹರಿಯುತ್ತದೆ (ಪ್ರಯಾಗದಲ್ಲಿ ಗಂಗಾ ಯಮುನೆಯರ ಜೊತೆ ಸರಸ್ವತಿ ಅಂತರ್ಗಾಮಿಯಾಗಿ ಹರಿಯುತ್ತದೆ ಎಂಬಂತೆ) ಎಂದು ನಂಬಿಕೆ. ಹೀಗಾಗಿ ಅದು ಮೂರು ನದಿಗಳ ಸಂಗಮ; ಇದೇ ಮುಕ್ಕೂಡಲ್ (ಮೂರ್+ಕೂಡಲ್).
=====
ಕೂದಲು: ಕೇಶ ಎಂಬರ್ಥದ ಈ ಶಬ್ದದ ಹಳಗನ್ನಡ ರೂಪ ಕಕೂಂದಲ್ಕಿ ಎಂದು. ತಮಿಳು ಮಲಯಾಳಂಗಳಲ್ಲಿದು 'ಕೂಂತಲ್' ಎಂಬ ರೂಪದಲ್ಲಿಯೂ ತುಳುವಿನಲ್ಲಿ ಕುಜಲ್' ಎಂಬ ರೂಪದಲ್ಲಿಯೂ ಸಿಕ್ಕುತ್ತದೆ. (ತೆಲುಗಿನಲ್ಲಿ ವೆಂಡ್ರುಕ ಎಂಬುದು ಗ್ರಾಂಥಿಕ ರೂಪವಾಗಿದ್ದರೂ ಆಡುಮಾತಿನಲ್ಲದು 'ಎಂಟಿಕಲು' ಎಂದಾಗುತ್ತದೆ). ಇದು ಸಂಸ್ಕೃತದ 'ಕುಂತಲ' ಶಬ್ದದ ರೂಪಾಂತರವೆಂದು ಹೇಳುವುದುಂಟು. (ಕುಂತಲ ಶಬ್ದವೂ ಹಳಗನ್ನಡದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿತ್ತು). ಹಳಗನ್ನಡದಲ್ಲಿ 'ಕೂಂದಲ್' ಮತ್ತು 'ಕೂದಲು' ಎರಡು ರೂಪಗಳೂ ದೊರೆಯುತ್ತವೆ. "ಸೋಗೆ ಕೂಂದಲ್ವೊಯಂ ಕಾಳೋರಗಂಗೆತ್ತು ಎಳಸಿದಪುದು" ಎಂಬುದು ನೇಮಿಚಂದ್ರನ 'ಲೀಲಾವತಿ'ಯ ವರ್ಣನೆ. ಹನ್ನೊಂದನೆಯ ಶತಮಾನದ ಚಾವುಂಡರಾಯನ 'ಲೋಕೋಪಕಾರ'ದಲ್ಲಿ "ಬೆಲ್ಲದ ನೀರಾದೊಡಂ ಬೆಲ್ಲವತ್ತದ ಕಾಯ ತಿರುಳಾದೊಡಂ ತಲೆಯಂ ಪೂಸಲ್ ಜಡೆಗೊಂಡ ಕೂಂದಲ್ ಮಾಣ್ದು ಚೆನ್ನಪ್ಪುದು" ಎಂದು ಒಂದು ಪದ್ಯಕ್ಕೆ ಟೀಕೆಯಿದೆ (ಈ ಟೀಕೆಯನ್ನು ಕೃತಿಕಾರನೇ ಬರೆದನೋ, ಅಥವಾ ಬೇರೆ ಯಾರು, ಯಾವಾಗ ಬರೆದರೋ ತಿಳಿಯದು). "ತಲೆಯಲಿ ಕರಿದು ಕೂಂದಲುಗಳೌಷಧಿಗಿಲ್ಲ" ಎಂಬುದು ಕನಕದಾಸನ 'ಮೋಹನತರಂಗಿಣಿ' ಕಾವ್ಯದ ಮಾತು. "ಮೂದಲೆಯ ಮಾತು ಕೂದಲ ಕೀಲಿನಂತಲ್ಲದರಿಯಬಾರದು" ಎಂಬುದು ಚಂದಿಮರಸ ಎಂಬೊಬ್ಬ ವಚನಕಾರನ ಮಾತು. ಇಲ್ಲಿನ 'ಕೂದಲ ಕೀಲು' ಪ್ರಾಯಶಃ ಕೂದಲಿನ ಬುಡವನ್ನು ಸೂಚಿಸುತ್ತದೆ. "ನವಿರೆಂದು ಕೂದಲು" ಎಂದು 'ಶಬ್ದಮಣಿದರ್ಪಣ'ದಲ್ಲಿ ಅರ್ಥ ಹೇಳಿದೆ. "ತುಱುಕಱು ಕೂದಲು ತುಱುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ" ಎಂಬುದು ಪುರಂದರದಾಸನ ಮಾತು.
ಕುಮಾರವ್ಯಾಸ 'ಕೂದಲು ಹಱಿ' ಎಂಬುದನ್ನು ಒಂದು ನುಡಿಗಟ್ಟಾಗಿ ಬಳಸುತ್ತಾನೆ: "ಬಿಸುಡು ಚಕ್ರವನೆನ್ನ ಕಾಯದಲಿ ಅಳುಕಿ ಕೂದಲು ಹಱಿದುದಾದರೆ ಬಳಿಕ ನಾ ಡಿಂಗರಿಗನಲ್ಲ" ಎಂಬಲ್ಲಿ ಈ ನುಡಿಗಟ್ಟಿಗೆ ಈಗಿನ 'ಕೂದಲೂ ಕೊಂಕಲಾರದು' ಎಂಬರ್ಥವಿದೆ. ನಾವೀಗ ಕೂದಲು ಶಬ್ದವನ್ನೊಳಗೊಂಡ ಇನ್ನೂ ಅನೇಕ ನುಡಿಗಟ್ಟುಗಳನ್ನು ಬಳಸುತ್ತೇವೆ. 'ಕೂದಲೆಳೆಯಷ್ಟು' ಎಂದರೆ ತೀರ ಕಡಿಮೆ ಅಂತರ ಎಂಬರ್ಥವಿದ್ದರೆ, ಕೃತ್ರಿಮ ನಯಗಾರಿಕೆಯಿಂದ ಮಾತನಾಡುವುದನ್ನು 'ಬೆಣ್ಣೆಯೊಳಗೆ ಕೂದಲು ತೆಗೆದಂತೆ' ಎಂದು ಹೇಳುವುದು ವಾಡಿಕೆ.
======
ಕೃಷಿ: ಕೃಷಿ ಎಂಬ ಸಂಸ್ಕೃತ ಪದಕ್ಕೆ ಬೇಸಾಯ ಎಂಬ ಅರ್ಥವಿದೆ. ಕೃಷಿಕ ಎಂಬುದು ರೈತ ಮತ್ತು ನೇಗಿಲ ಗುಳ ಎರಡನ್ನೂ ಸೂಚಿಸುತ. ಕೃಷೀವಲ ಎಂದರೂ ರೈತನೇ. ಪಂಪನ 'ಆದಿಪುರಾಣ'ದಲ್ಲಿ ಈ ಕೃಷಿ, ಕೃಷೀವಲ ಎರಡೂ ಒಂದೆಡೆಯೇ ಸಿಕ್ಕುತ್ತವೆ: "ಕೃಷೀವಲ ಕುಲೋಚಿತಮಪ್ಪ ಕೃಷಿಯುಮಂ". ನಾಗವರ್ಮನ 'ಅಭಿಧಾನ ವಸ್ತುಕೋಶ'ವೆಂಬ ನಿಘಂಟಿನಲ್ಲಿ "ಕೃಷಿಕಂ ಕ್ಷೇತ್ರಾಜೀವಂ, ಕೃಷೀವಳಂ ಕರ್ಷಕಂ, ಕುಟುಂಬಿನಿಯೆನಿಕ್ಕುಂ, ಕೃಷಿ ತತ್ಕರ್ಮಮದಕ್ಕುಂ" ಎಂಬ ವಿವರಣೆಯಿದೆ. ಕೃಷಿಯಲ್ಲಿ ತೊಡಗಿದವನೇ 'ಕೃಷಿನಿರತ' ("ಕೃಷಿನಿರತನಂತೆ ರಾಸಿಯಂ ನಿಲಿಸಿ" - ಶಾಂತಿನಾಥನ 'ಸುಕುಮಾರಚರಿತೆ'). ಅದರಲ್ಲಿ ಆಸಕ್ತಿ ತಾಳಿದವನೇ 'ಕೃಷಿಕುತೂಹಳ' ("ಕೃಷೀಕುತೂಹಳಜನಂ ಮರವಟ್ಟಿರುತಿರ್ದುದು" - ಕಮಲಭವನ 'ಶಾಂತೀಶ್ವರಪುರಾಣ'). ಕೃಷಿ ಶಬ್ದಕ್ಕಿರುವ ಬೇಸಾಯ ಎಂಬ ಅರ್ಥವು ವಿಸ್ತಾರಗೊಂಡು ಈಗ ಯಾವುದೇ ರಂಗದಲ್ಲಿಮಾಡುವ ಸಾಧನೆ ಎಂಬುದನ್ನು ಸೂಚಿಸುವ ಪದವಾಗಿದೆ; ಸಾಹಿತ್ಯಕೃಷಿ ಎಂಬಂತೆ. ಮೋಳಿಗೆ ಮಾರಯ್ಯನ ವಚನದವೊಂದರಲ್ಲಿ "ವಾಣಿಜ್ಯ ಮುಂತಾದ ಕೃಷಿಯ ಮಾಡುವಾಗ" ಎಂಬ ಮಾತಿದೆ.
ಬೇಸಾಯದ ಆರಂಭದ ಬಗ್ಗೆ ಪಂಪನ 'ಆದಿಪುರಾಣ'ವು ಕೆಲವು ಕುತೂಹಲಕರ ವಿವರಗಳನ್ನು ಒಳಗೊಂಡಿದೆ. ಅದು ಆದಿ ತೀರ್ಥಂಕರನ ತಂದೆಯಾದ ನಾಭಿರಾಜನ ಆಳ್ವಿಕೆಯ ಕಾಲ. ಪ್ರಕೃತಿಯಲ್ಲಿ ಸಿಕ್ಕುವುದನ್ನೇ  ಅವಲಂಬಿಸಿದ್ದ ಜನರಿಗೆ ಬರಬರುತ್ತ ಬೇಕಾದಷ್ಟು ಆಹಾರ ಸಿಗುತ್ತಿರಲಿಲ್ಲ. ಅಕೃಷ್ಟಪಚ್ಯ(ಬೇಸಾಯವಿಲ್ಲದೆ ತಾವಾಗಿ ಬೆಳೆದ ಆಹಾರಧಾನ್ಯ)ಗಳನ್ನು ಅವರು ಹುಲ್ಲುಗಳೆಂದು ತಿಳಿದಿದ್ದರು. ಜನ ನಾಭಿಯಲ್ಲಿಗೆ ಬಂದಾಗ, ಅಕೃಷ್ಟಪಚ್ಯಗಳ ಧಾನ್ಯವನ್ನು ಪಡೆದು, ಸಂಸ್ಕಾರ ಮಾಡಿ ಸೇವಿಸುವ ಬಗೆಯನ್ನು ಆತ ಜನರಿಗೆ ತಿಳಿಸಿಕೊಟ್ಟನಂತೆ. ಮುಂದೆ ಅವನ ಮಗ ಆದಿದೇವನ ಕಾಲದ ಹೊತ್ತಿಗೆ ಅದೂ ಸಾಲದೆ ಹೋಯಿತು. ಆಗ ಆದಿದೇವನು ಪ್ರಜೆಗಗಳಿಗೆ ಬೇಸಾಯ ಮಾಡುವ ಕ್ರಮವನ್ನು ತಿಳಿಸಿಕೊಟ್ಟು, ಜನರನ್ನು ವರ್ಣಗಳಾಗಿ ವಿಂಗಡಿಸಿ, ವೈಶ್ಯವರ್ಗಕ್ಕೆ "ಪಾಶುಪಾಲ್ಯ ಕೃಷೀ ಪಣ್ಯಕರ್ಮ"ಗಳನ್ನು ನಿಯೋಜಿಸಿದನಂತೆ. ಆಗಿನಿಂದ ಭೋಗಭೂಮಿಯಾಗಿದ್ದುದು ಕರ್ಮಭೂಮಿಯಾಯಿತಂತೆ; ಕೃತಯುಗ ಆರಂಭಗೊಂಡಿತಂತೆ.
=====
ಕಳೆ: ಈ ಪದವು ಕ್ರಿಯಾರ್ಥ ಹಾಗೂ ನಾಮಾರ್ಥಗಳಲ್ಲಿ ಬಳಕೆಯಾಗುತ್ತದೆ. ಈ ಶಬ್ದವು ತಮಿಳಿನಲ್ಲಿ 'ಕಳೈ' ಎಂದೂ ಮಲಯಾಳಂನಲಲ್ಲಿ 'ಕಳ' ಎಂದೂ ತುಳುವಿನಲ್ಲಿ 'ಕಳೆ' 'ಕಳ' ಎಂದೂ ಬಳಕೆಯಲ್ಲಿವೆ. ಕಳೆ ಎಂದರೆ ಬೇಕಾದ ಬೆಳೆಯ ನಡುವೆ ಬೆಳೆಯುವ ಅಪ್ರಯೋಜಕ ಸಸ್ಯ ಎಂಬರ್ಥವಿದೆ. "ಬೆಳೆಯ ಭೂಮಿಯಲೊಂದು ಪ್ರಳಯದ ಕಳೆ ಹುಟ್ಟಿ" ಎಂಬ ಬಸವಣ್ಣನ ವಚನದಲ್ಲಿ ಬೆಳೆ ಕಳೆಗಳ ಸಂಬಂಧ ಸ್ಪಷ್ಟವಾಗಿದೆ. ವಿಪುಲವಾಗಿ ಬೆಳೆದ ಕಳೆಯನ್ನು ಮೋಳಿಗೆ ಮಾರಯ್ಯನೆಂಬ ವಚನಕಾರ 'ಕಳೆಮೆಳೆ' ಎಂಬ ಶಬ್ದದಿಂದ ಸೂಚಿಸುತ್ತಾನೆ (ಮೆಳೆ=ದಟ್ಟವಾದ ಪೊದೆ): "ಕಳೆಮೆಳೆಯ ಕಿತ್ತಲ್ಲದೆ ಹೊಲ ಶುದ್ಧವಲ್ಲ," ಬೇಸಾಯಕ್ರಮದಲ್ಲಿ 'ಕಳೆ ಕೀಳು'ವುದು ಸಾಮಾನ್ಯ ಕ್ರಿಯೆ. ಇದನ್ನು ಬಸವಣ್ಣ 'ಕಸವ ಕೀಳು' ಎನ್ನುತ್ತಾನೆ ("ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ"). ಇದಕ್ಕನುಗುಣವಾಗಿಯೇ ಇಂದು ನಾವು ನಿಷ್ಪ್ರಯೋಜಕವಾದುದನ್ನು ಕಕಳೆಕಿ ಎಂಬ ಮಾತಿನಿಂದ ಸೂಚಿಸುತ್ತೇವೆ.
'ಕಳೆ' ಎಂಬ ಶಬ್ದಕ್ಕೆ ತೀರ ಬೇರೆಯೇ ಆದ ಅರ್ಥವೊಂದೂ ಇದೆ; ಇದು ಒಂದು ಕಾಲ ಪರಿಮಾಣವನ್ನು ಸೂಚಿಸುವ ಶಬ್ದವೆಂದು 'ಅಭಿಧಾನ ವಸ್ತುಕೋಶ' ಹೇಳುತ್ತದೆ: "ಹದಿನೆಂಟು ನಿಮೇಷದಿನಂತದೊಂದು ತಾಂ ಕಾಷ್ಠೆ ಕಾಷ್ಠೆ ಮೂವತ್ತಾದಂದದು ಕಳೆ ಕಳೆಗಳ್ ಮೂವತ್ತದು ಕ್ಷಣಂ".
ಸಂಸ್ಕೃತದ 'ಕಲಾ' ಕನ್ನಡದಲ್ಲಿ 'ಕಲೆ' ಎಂದಾಗಿ ಅದರಲ್ಲಿನ ಲಕಾರ ಳಕಾರವಾಗುತ್ತದೆ (ಇಂತಹ ಳಕಾರವನ್ನು ಕ್ಷಳ ಎನ್ನುತ್ತಾರೆ).  ಅರ್ಥ ಅದೇ. ಹೀಗಾಗಿ ಆ ಶಬ್ದಕ್ಕಿರುವ ಕಾಂತಿ ಎಂಬ ಅರ್ಥವೇ ಕನ್ನಡದಲ್ಲಿಯೂ ಇದೆ: "ಕಳೆ ಪೊಳೆಪು" ಎಂದು ಒಂದು ನನಿಘಂಟು ಅರ್ಥ ನೀಡುತ್ತದೆ. ಚಂದ್ರನ ಹದಿನಾರನೇ ಒಂದು ಭಾಗ ಕಳೆ ("ಚಂದ್ರನಂಶಂ ಕಳೆ" - 'ಅಭಿಧಾನ ವಸ್ತುಕೋಶ').
ಕಳೆ ಕ್ರಿಯಾರೂಪದಲ್ಲಿ ಅನೇಕ ಅರ್ಥಚ್ಛಾಯೆಗಳನ್ನು ಪಡೆದಿದೆ. ಬಿಟ್ಟುಬಿಡು ಎಂಬುದು ಇದರ ಒಂದು ಅರ್ಥ "ಕಳೇ-ವಿಸರ್ಜನೇ" - 'ಶಬ್ದಮಣಿದರ್ಪಣ'). ನಿವಾರಿಸು, ಕಳಿಸು ಎಂಬರ್ಥದಲ್ಲಿ ಈ ಶಬ್ದ 'ಪಂಪಭಾರತ'ದಲ್ಲಿ ಬಳಕೆಗೊಂಡಿದೆ ("ಕುಂಚದ ಅಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದು"). ಹಾಗೆಯೇ ಹೋಗಲಾಡಿಸಿ, ಅಳಿಸಿಹಾಕು ಎಂಬರ್ಥದಲ್ಲಿ 'ಆದಿಪುರಾಣ'ವು ಈ ಶಬ್ದವನ್ನು ಬಳಸುತ್ತದೆ: "ಬರೆಯಿಸಿದಂ ಪೂರ್ವಮಹೀಶ್ವರರನಾಮಮಂ ಎಯ್ದೆ ಕಳೆದು ವೃಷಭಾಚಲದೊಳ್ ಭರತಂ ನಿಜನಾಮಮಂ". 'ಪಂಚತಂತ್ರ'ದಲ್ಲಿ ತೆಗೆದುಹಾಕು ಎಂಬರ್ಥದಲ್ಲಿ ಈ ಶಬ್ದದ ಪ್ರಯೋಗವಿದೆ: "ಕೃತಕ ಪುರುಷಾಕಾರಚಿಹ್ನಂಗಳಂ ಕಳೆಯಲ್ ಮಱೆದು". ಕಳೆ ಶಬ್ದದಿಂದ 'ಕಳೆದಿಡು' (ನೀಗಿಕೊ) ("ಕಳೆದಿಡುವುದೆ ಕಷ್ಟಂ ಭೂತಳರಾಜ್ಯವಿಮೋಹಂ" - 'ಆದಿಪುರಾಣ'); 'ಕಳೆದುಕೊ' (ತೆಗೆದುಕೊ) ("ಆ ಲೇಖನಮಂ ಕಳೆದುಕೊಂಡು ನಿಮಿರ್ಚಿ ನೋಳ್ಪನ್ನೆಗಂ" - 'ಕರ್ಣಾಟಕ ಕಾದಂಬರಿ') ಮುಂತಾದ ಕ್ರಿಯಾಸಮಾಸಗಳನ್ನೂ ಸೃಷ್ಟಿಸಿಕೊಳ್ಳಲಾಗಿದೆ. 

1 ಕಾಮೆಂಟ್‌:

  1. ಕುದುರು- ಪದದ ವಿವರ ಬಹಳ ಸಹಾಯಕವಾಯಿತು ಫೇಸ್ಬುಕ್ ಪದಾರ್ಥ ಚಿಂತಾಮಣಿ ಸಮೂಹದಲ್ಲಿ ವೆವರಣೆಗೆ. ಧನ್ಯವಾದಗಳು ಕನ್ನಡ ದೀವಿಗೆಗೆ.

    ಪ್ರತ್ಯುತ್ತರಅಳಿಸಿ