ನನ್ನ ಪುಟಗಳು

18 ಅಕ್ಟೋಬರ್ 2014

ಪದಚರಿತೆ-2



ಪದಚರಿತೆ: ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ - 2

ಪಂಚಮಹಾಪಾತಕ: ಇದೊಂದು ಸಂಸ್ಕೃತ ಸಮಾಸಪದ, ಐದು ದೊಡ್ಡ ಪಾತಕಗಳನ್ನು ಹೇಳುತ್ತದೆ. ಅತಿಮಾನುಷವೆಂದು ನಂಬಲಾದ ಶಕ್ತಿಯನ್ನು ಕೆರಳಿಸುವ ಭಾವನೆಯನ್ನೋ ಕಾರ್ಯವನ್ನೋ ಸ್ಥೂಲವಾಗಿ ಪಾತಕ ಎಂದು ಹೇಳಬಹುದು. ಪಾತಕದ ಕಲ್ಪನೆ ವೇದಗಳಷ್ಟೇ ಹಳೆಯದು. ಮನುಷ್ಯ ಪಾತಕವನ್ನು ಮಾಡಲು ಕಾರಣ ವಿಧಿ, ಮಾದಕ ದ್ರವ್ಯಗಳು, ಕೋಪ, ದ್ಯೂತ, ಅಜಾಗರೂಕತೆ ಅಥವಾ ಸ್ವಪ್ನಸ್ಥಿತಿ ಎಂದು ಋಗ್ವೇದದಲ್ಲಿ ಹೇಳಿದೆ. ನಾನಾ ಬಗೆಯ ಪಾತಕಗಳಿದ್ದರೂ ಛಾಂದೋಗ್ಯ ಉಪನಿಷತ್ತಿನ ಕಾಲದ ಹೊತ್ತಿಗೆ ಅತ್ಯಂತ ದೊಡ್ಡ ಪಾತಕಗಳೆಂದು ಭಾವಿಸಲಾದ ಬ್ರಹ್ಮಹತ್ಯೆ, ಸುರಾಪಾನ, ಬ್ರಾಹ್ಮಣಸುವರ್ಣಾಪಹರಣ, ಗುರುತಲ್ಪಗಮನ ಮತ್ತು ಈ ನಾಲ್ಕು ಪಾತಕಗಳಲ್ಲಿ ಒಂದನ್ನಾದರೂ ಮಾಡಿದವನ ಸಹವಾಸ - ಇವುಗಳು 'ಪಂಚಮಹಾಪಾತಕ' ಎಂದು ಪರಿಗಣಿತವಾಗಿದ್ದವು.
ಮುಂದೆ 'ಪಂಚಮಹಾಪಾತಕ' ಎಂಬುದು ನುಡಿಗಟ್ಟಿನಂತಾಗಿ ವಿವಿಧ ಧರ್ಮಗಳವರು ವಿವಿಧ ಪಟ್ಟಿಗಳನ್ನು ಪರಿಗಣಿಸಿದರು. ಜೈನ ದೃಷ್ಟಿಕೋನದ ಗ್ರಂಥವಾದ 'ವಡ್ಡಾರಾಧನೆ'ಯಲ್ಲಿ "ಬಾಲವಧೆ ಸ್ತ್ರೀವಧೆ ಗೋವಧೆ ಬ್ರಾಹ್ಮಣವಧೆ ಋಷಿವಧೆಯೆಂದೀ ಪಂಚಮಹಾಪಾತಕಂಗಳಂ" ಎಂಬ ವಿವರ ಸಿಕ್ಕುತ್ತದೆ. ಬೌದ್ಧರಲ್ಲಿ ಪಂಚಾಂತರಾಯಗಳಾದ ಮಾತೃವಧೆ, ಪಿತೃವಧೆ, ಅರ್ಹತ್‍ವಧೆ, ಬೌದ್ಧನೊಬ್ಬನ ರಕ್ತಪಾತ ಮತ್ತು ಪುರೋಹಿತವರ್ಗದಲ್ಲಿ ಭೇದವುಂಟುಮಾಡುವುದನ್ನೇ ಪಂಚಪಾತಕಗಳೆಂದು ಪರಿಗಣಿಸಲಾಗುತ್ತಿತ್ತು. ವಚನಕಾರರು ವಿವಿಧ ರೀತಿಗಳಲ್ಲಿ 'ಪಂಚಮಹಾಪಾಕ'ಗಳನ್ನು ಅರ್ಥೈಸಿದರು. ಉದಾಹರಣೆಗೆ ಜೇಡರ ದಾಸಿಮಯ್ಯನು "ದರುಶನ ತಪ್ಪುಕ ಪ್ರಥಮ ಪಾತಕ, ಸ್ಪರ್ಶನ ತಪ್ಪುಕ ದ್ವಿತೀಯ ಪಾತಕ, ಗುರು ತಪ್ಪುಕ ತೃತೀಯ ಪಾತಕ, ಪರದಾರ ಚತುರ್ಥ ಪಾತಕ, ಮಾಂಸಾಹಾರ ಪಂಚಮ ಮಹಾಪಾತಕ" ಎಂದರೆ; ಚೆನ್ನಬಸವಣ್ಣನು "ಭವಿಪಾಕವೆಂಬುದು ಪ್ರಥಮ ಪಾತಕ, ಪ್ರತಿಮಾದಿಗಳಿಗೆರಗಿದಡೆ ಎರಡನೆಯ ಪಾತಕ, ಗುರುವಾಕ್ಯವ ಮೀರಿದಡೆ ಮೂರನೆಯ ಪಾತಕ, ಪರಧನಪರಸ್ತ್ರೀಗಳುಪಿದಡೆ ನಾಲ್ಕನೆಯ ಪಾತಕ, ಶಿವನಿಂದೆಯ ಕೇಳಿದಡೆ ಐದನೆಯ ಪಾತಕ" ಎನ್ನುತ್ತಾನೆ. ಮತ್ತೂ ಕೆಲವು ವಚನಕಾರರ ವಿಭಿನ್ನ ಹೇಳಿಕೆಗಳಿವೆ. ಈಗಲೂ ಈ ನುಡಿಗಟ್ಟು ಬಳಕೆಯಲ್ಲಿದೆ.
=====
ಪಂಚಮಹಾವಾದ್ಯ: ದೇವಸ್ಥಾನಗಳಲ್ಲಿಯೂ ಮಹಾಗಣ್ಯರ ಸ್ವಾಗತಕ್ಕೂ ಬಳಸುತ್ತಿದ್ದ ಐದು ವಾದ್ಯಗಳನ್ನು 'ಪಂಚಮಹಾವಾದ್ಯ' ಅಥವಾ 'ಪಂಚವಾದ್ಯ'ಗಳೆಂದು ಕರೆಯುವುದು ರೂಢಿ. ಇದನ್ನು ಕಪಂಚಮಹಾಶಬ್ದಕಿ ಎಂಬ ಮಾತಿನಿಂದಲೂ ಕರೆಯಲಾಗುತ್ತಿತ್ತು. ಕನ್ನಡ ನಾಡಿನ ಪ್ರಾಚೀನ ಶಾಸನಗಳಲ್ಲಿ ರಾಜರುಗಳನ್ನು ಹಲವು ವೇಳೆ ಕಸಮಧಿಗತಪಂಚಮಹಾಶಬ್ದಕಿ ಎಂಬ ವಿಶೇಷಣದಿಂದ ವರ್ಣಿಸಲಾಗಿದೆ. ಖಸ್ವಸ್ತಿ ಸಮಧಿಗತ ಪಞ್ಚಮಹಾಶಬ್ದ ಮಹಾಸಾಮನ್ತಾಧಿಪತಿ ಪ್ರಭೂತ ವರಿಷ ಶ್ರೀಮಾನ್ಗೋಯಿನ್ದರಸರ್ಖ ಎಂಬ ಒಕ್ಕಣೆ ಎಂಟನೆಯ ಶತಮಾನದ ಶಾಸನದಲ್ಲಿದೆ. ಖಸಮನೆನಿಸುವರ್ ಪ್ರಶಸ್ತಿಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಸಾಮಂತರೆನಲ್ ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್ಖ ಎಂಬುದು 'ಪಂಪಭಾರತ'ದಲ್ಲಿ ಅರಿಕೇಸರಿಯನ್ನು ವರ್ಣಿಸುವ ಪದ್ಯ. ದೊಡ್ಡವರನ್ನು ಸನ್ಮಾನ ಮಾಡುವ ರೀತಿಯೂ ಇದೇ ಅಗಿದ್ದಿತೆಂದು ಕಾಣುತ್ತದೆ: ಏಕೆಂದರೆ ಬಸವಣ್ಣನ ವಚನವೊಂದು ಖಹೊಲೆಯ ಮಾದಿಗ ಭಕ್ತನಾದಡೆ ಆತನ ಮನೆಯ ಸೊಣಗಂಗೆ ಪಂಚಮಹಾವಾದ್ಯದಲಿ ಸನ್ಮಾನವ ಮಾಡೆನೆ?ಖ ಎಂಬ ಮಾತಿದೆ.
'ಪಂಚಮಹಾವಾದ್ಯ'ಗಳೆಂದು ಕರೆದರೂ ಎಲ್ಲ ಕಾಲಗಳಲ್ಲಿಯೂ ಮತ್ತು ಸ್ಥಳಗಳಲ್ಲಿಯೂ ಐದು ವಾದ್ಯಗಳ ಪಟ್ಟಿ ಒಂದೇ ಆಗಿರದೆ, ವ್ಯತ್ಯಾಸಗೊಂಡಿರುವುದನ್ನು ಗುರುತಿಸಬಹುದು. ನಂಜನಗೂಡಿನ ಶಾಸನವೊಂದು ತಿವಿರಿ, ದಟ್ಟ, ಖಂಡಿಕ್ಕೆ, ಜಯಗಂಟೆ ಮತ್ತು ಕಾಳೆಗಳನ್ನು 'ಪಂಚಮಹಾವಾದ್ಯ'ಗಳೆಂದು ಹೆಸರಿಸಲಾಗಿದೆ. 'ವಿವೇಕ ಚಿಂತಾಮಣಿ'ಯು ಶೃಂಗ, ತಮ್ಮಟ, ಶಂಖ, ಭೇರಿ, ಜಯಗಂಟೆಗಳನ್ನು 'ಪಂಚಮಹಾವಾದ್ಯ'ಗಳೆಂದು ಹೇಳಿದೆ. ಕೆಲವು ವೇಳೆ ನಾಲ್ಕು ವಾದ್ಯಗಳೊಡನೆ ಮನುಷ್ಯಧ್ವನಿಯೂ ಸೇರುತ್ತಿತ್ತೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಕೇವಲ ಸಾರ್ವಜನಿಕ ಸನ್ಮಾನಗಳಲ್ಲಿ ಮಾತ್ರವಲ್ಲದೆ ಬೇರೆ ಸಂದರ್ಭದಲ್ಲಿಯೂ ಬಳಸುತ್ತಿದ್ದ ಐದು ವಾದ್ಯಗಳ ಸಮೂಹವನ್ನು ಈ ಮಾತಿನಿಂದ ಕರೆಯುತ್ತಿದ್ದರು: 'ಆದಿಪುರಾಣ'ದಲ್ಲಿ ಪಂಪನು ಭರತ ಚಕ್ರವರ್ತಿಯು ಬೆಳಿಗ್ಗೆ ಏಳುವ ಹೊತ್ತಿಗೆ "ಪಂಚಮಹಾವಿಜೃಂಭಿತಧ್ವನಿ ಲಸದ್ಗಾಂಧಾರನಾದಂ" ಎಂದು ವರ್ಣಿಸುವುದರಿಂದ ಅರಮನೆಯಲ್ಲಿ ಬೆಳಿಗ್ಗೆ ಈ ವಾದ್ಯಗಳ ಧ್ವನಿಯನ್ನು ಮಾಡಲಾಗುತ್ತಿತ್ತೆಂದು ಭಾವಿಸಬಹುದು. ಇವುಗಳ ಜೊತೆಗೆ ಇತರ ವಾದ್ಯಗಳೂ ಇರುತ್ತಿದ್ದವು: "ಪಂಚಮಹಾಶಬ್ದಂಗಳುಂ ಬದ್ದವಣದ ಪಱೆಗಳುಂ ಬಾಜಿಸೆ ಅರಮನೆಯಂ ಪೊಕ್ಕು" ಎಂಬ ವರ್ಣನೆ 'ವಡ್ಡಾರಾಧನೆ'ಯಲ್ಲಿದೆ. ಈ ವಾದ್ಯಗಳ ಬಜಾವಣೆ ಮೊದಲು ದೇವಸ್ಥಾನಗಳಲ್ಲಿ ವಾಡಿಕೆಯಲ್ಲ್ಲಿದ್ದು ಆನಂತರ ರಾಜಮರ್ಯಾದೆಗೆ ವಿಸ್ತಾರಗೊಂಡಿರಬೇಕು.
======
ಪಂಚಾಂಗ: ಇದೊಂದು ಸಂಸ್ಕೃತ ಪದ; ಪಂಚ+ಅಂಗ=ಐದು ಭಾಗ ಎಂಬ ಅರ್ಥವುಳ್ಳದ್ದು. ಸಾಮಾನ್ಯವಾಗಿ ಇದು ದಿನದ ಐದು ಅಂಶಗಳನ್ನು ಸೂಚಿಸುವಂಥದು. ಅವುಗಳೆಂದರೆ ತಿಥಿ, ವಾರ, ನಕ್ಷತ್ರ, ಕರಣ ಮತ್ತು ಯೋಗ. ಹೀಗಾಗಿ ವರ್ಷದ ಎಲ್ಲ ದಿನಗಳ ಈ ಐದರ ವಿವರಣೆಗಳನ್ನು ನೀಡುವ ಪುಸ್ತಕವನ್ನೂ ಪಂಚಾಂಗ ಎಂದೇ ಕರೆಯುತ್ತಾರೆ. ದಿನದ ಈ ಅಂಶಗಳಲ್ಲಿ ಯಾವುದೇ ದೋಷವಿಲ್ಲದಿರುವುದನ್ನು ಪಂಚಾಂಗಶುದ್ಧಿ ಎನ್ನುತ್ತಾರೆ. ಹೊಸವರ್ಷದ ಆರಂಭದಲ್ಲಿ ಮುಂಬರುವ ವರ್ಷದ ಶುಭಾಶುಭ ಫಲಗಳನ್ನು ಹೇಳುವುದು ಮತ್ತು ಕೇಳವುದು ಪಂಚಾಂಗಶ್ರವಣ ಎನಿಸಿಕೊಳ್ಳುತ್ತದೆ. ಈ ಫಲಗಳೇ ಪಂಚಾಂಗಫಲ. ಇದನ್ನು ವಚನಕಾರರು ವಿಡಂಬಿಸುತ್ತಾರೆ. 'ಪಂಚಾಂಗಬಿಚ್ಚು' ಎಂಬ ಈಗಿನ ಮಾತೂ ಬುರುಡೆ ಹೇಳು ಎಂಬರ್ಥದಲ್ಲಿ ಬಳಕೆಯಾಗುತ್ತಿದೆ.
ಪಂಚಾಂಗವೆಂಬ ಶಬ್ದವು (ಆಯುರ್ವೇದ) ಔಷಧದ ತಯಾರಿಕೆಯಲ್ಲಿ ಬಳಸುವ ಸಸ್ಯದ ಐದು ಭಾಗಗಳನ್ನು ಸೂಚಿಸುತ್ತದೆ: ತೊಗಟೆ, ಎಲೆ, ಹೂವು, ಬೇರು ಮತ್ತು ಹಣ್ಣು. ದೋಷರಹಿತವಾದ ಈ ಐದು ಅಂಶಗಳನ್ನು ನೋಡುವುದನ್ನು ಶಾಂತಿನಾಥನ 'ಸುಕುಮಾರಚರಿತೆ'ಯು 'ಪಂಚಾಂಗಶುದ್ಧಿ' ಎನ್ನುತ್ತದೆ ("ವೈದ್ಯನಂತೆ ಪಂಚಾಂಗಶುದ್ಧಿಯಂ ನೋಡಿ").
ರಾಜನೀತಿಯ ಐದು ಅಂಶಗಳನ್ನೊಳಗೊಂಡ ಸಮಾಲೋಚನೆಯನ್ನು 'ಪಂಚಾಂಗಮಂತ್ರ' ಎಂದು ಕೆಲವು ಕಡೆಗಳಲ್ಲಿ ಹೇಳಲಾಗಿದೆ: "ವಿಭವಮಂ ಪಂಚಾಂಗಮಂತ್ರಂ ಚತುರ್ಬಲಮಂ ಪ್ರಾಭವಂ ಎಯ್ದೆ ಮಾಡೆ" ಎಂಬುದು ಪೊನ್ನನ 'ಶಾಂತಿಪುರಾಣ'ದಲ್ಲಿ ಬರುವ ಮಾತು. ಕರ್ಮಾರಂಭೋಪಾಯ, ಪುರುಷದ್ರವ್ಯಸಂಪತ್ತು, ದೇಶಕಾಲವಿಭಾಗ, ವಿನಿಪಾತಪ್ರತೀಕಾರ ಮತ್ತು ಕಾರ್ಯಸಿದ್ಧಿ - ಎಂಬಿವು ರಾಜನೀತಿಯ ಐದು ಅಂಶಗಳು.
ಷಡಕ್ಷರದೇವನ 'ರಾಜಶೇಖರವಿಳಾಸ' ಕಾವ್ಯದಲ್ಲಿ ಐದು ಅಕ್ಷರಗಳ ಶ್ರೇಷ್ಠ ಮಂತ್ರ ಎಂಬರ್ಥದಲ್ಲಿ ('ನಮಃಶಿವಾಯ' ಎಂಬ ಐದಕ್ಷರದ ಮಂತ್ರ) 'ಪಂಚಾಂಗಸನ್ಮಂತ್ರ' ಎಂಬ ಮಾತನ್ನು ಬಳಸಿದಂತಿದೆ: "ಅರಿವರ್ಗಧ್ವಂಸಮಂ ಪೂಣ್ದೆಸಗಿ ಕಳೆದು ತಳೆದು ಪಂಚಾಂಗ ಸನ್ಮಂತ್ರಮಂ .. .. ತಾಳ್ದು".
=====
ಪಡು: ಇದೊಂದು ಕ್ರಿಯಾಪದ, ದ್ರಾವಿಡ ಮೂಲದ್ದು. ತಮಿಳಿನಲ್ಲಿ ಪಟು, ಎಂದೂ, ತುಳುವಿನಲ್ಲಿ ಪಡ ಎಂದೂ, ಮಲಯಾಳಂನಲ್ಲಿ ಪಟುಕ ಎಂದೂ, ತೆಲುಗಿನಲ್ಲಿಯೂ ಪಡು ಎಂದು ಬಳಕೆಯಲ್ಲಿದೆ. ಇದಕ್ಕೆ ಅನೇಕ ಅರ್ಥಗಳಿವೆ. ಕ್ರಿಯಾಪದವಾಗಿ ಈ ಶಬ್ದಕ್ಕೆ ಕೇಶಿರಾಜನು ಎರಡು ಅರ್ಥಗಳನ್ನು ನೀಡುತ್ತಾನೆ: ಮಲಗು (ನಿದ್ರಿಸು) ಹಾಗೂ ಸಾಯು ಎಂದು ("ಪಡು-ಮರಣೇ, ಶಯನೇ ಚ"). ಅನುಭವಿಸು ಎಂಬ ಅರ್ಥವು ಆಯಾಸಪಡು, ಕಷ್ಟಪಡು. ಸಂತೋಷಪಡು ಮುಂತಾದ ಕ್ರಿಯಾಸಮಾಸಗಳಲ್ಲಿ ಕಾಣಿಸುತ್ತದೆ. ಬೀಳು ಎಂಬರ್ಥದಲ್ಲಿ ಈ ಪದವು 'ಪಂಪಭಾರತ'ದಲ್ಲಿದೆ ("ಧರ್ಮನಂದನನ ಕಾಲ ಮೇಲೆ ಕವಿದು ಪಟ್ಟು"). ಮಲಗು ಎಂಬುದು ರೂಪಕವಾಗಿ ಕೂಡು ಅಥವಾ (ಲೈಂಗಿಕಕ್ರಿಯೆಯಲ್ಲಿ) ಸೇರು ಎಂಬ ಅರ್ಥವನ್ನೂ ಪಡೆಯುತ್ತದೆ. ಈ ಅರ್ಥದಲ್ಲಿ ಬ್ರಹ್ಮಶಿವ ತನ್ನ 'ಸಮಯಪರೀಕ್ಷೆ'ಯಲ್ಲಿ "ಪರಲಲನೆಯೊಳಂ ಪಡುಗೆ ಶಿವಭಕ್ತನಾಗಿರ್ದೊಡೆ ಪೊರ್ದವು ಪಾಪಮೆಂಬರ್ ಆಱಡಿಕಾರರ್" ಎನ್ನುತ್ತಾನೆ. (ಪಡುಗೆ=ನೆರೆಯಲಿ). ಪಡು ಎಂಬುದಕ್ಕಿರುವ ಮಲಗು ಎಂಬ ಅರ್ಥವು ರೂಪಕವಾಗಿ ಸೂರ್ಯನು ಮುಳುಗುವುದನ್ನು (ಸೂರ್ಯ ಮಲಗುವುದನ್ನು) ಸೂಚಿಸುತ್ತದೆ. "ನೇಸರ್ ಪಟ್ಟೊಡೆ ಕಿತ್ತಯ್ಯಂಗೆ ಆಸನ್ನಕಾಲಮಾದುದು" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲಿದೆ. ಈ ಅರ್ಥಗಳೆಲ್ಲವೂ ತೆಲುಗು ತಮಿಳುಗಳಲ್ಲಿಯೂ ಇವೆ.
ಪಡು ಎಂಬುದು ವಿಶೇಷಣವಾಗಿಯೂ ಬಳಕೆಯಲ್ಲಿದೆ: ಪಡುಕೋಣೆ ಎಂದರೆ ಮಲಗುವ ಮನೆ (ಈ ಹೆಸರಿನ ಊರೊಂದಿದೆ); ಈ ಅರ್ಥದಲ್ಲಿ ಪಡುವೋವರಿ ಎಂಬ ಶಬ್ದವು 'ಸುಕುಮಾರಚರಿತೆ'ಯಲ್ಲದೆ ("ಆ ಕನ್ಯೆ ಧನದೇವನ ಪಡುವೋವರಿಯ ಮನೆಯನೆಯ್ದಿ"). 'ಪಡುನೇಸರ್' ಎಂದರೆ ಅಸ್ತಮಿಸುತ್ತಿರುವ ಸೂರ್ಯ; ಸೂರ್ಯ ಮುಳುಗುವ ದಿಕ್ಕು ಎಂಬರ್ಥದಲ್ಲಿ ಪಡುವು ಎಂಬ ಶಬ್ದ 'ಪಂಪಭಾರತ'ದಲ್ಲಿದೆ ("ನರನ ರಥಮಂ ಪಡುವು ಎಣ್ಗಾವುದುವರಂ ಸಿಡಿಲ್ವಿನಂ ಎಚ್ಚು"). ಪಡುವಣ ಎಂಬು ಇದರ ಇನ್ನೊಂದು ರೂಪ. ಸೂರ್ಯ ಮುಳುಗುವಾಗಿನ ಕೆಂಪು ಬಣ್ಣವನ್ನು ಕುವೆಂಪು ಪಡುಗೆಂಪು ಎನ್ನುತ್ತಾರೆ; 'ಶ್ರೀ ರಾಮಾಯಣ ದರ್ಶನಂ'ನಲ್ಲಿ "ರವಿ ಮುಳುಗಿ, ಮೂಡಣ ದೆಸೆಗೆ ಪಡುಗೆಂಪು ಪಸರಿಸುತ್ತಿರೆ" ಎಂಬ ಸಾಲಿದೆ.
=====
ಪಡುವಲಕಾಯಿ: ಈ ಶಬ್ದದ ಮೊದಲ ಭಾಗ ಪಡುವಲ ಎಂಬುದನ್ನು ನೋಡಿದರೆ ಇದು ಪಡುವಲ ಅಥವಾ ಪಶ್ಚಿಮ ದೇಶದಿಂದ ಬಂದಿರುವ ಪರಂಗಿ ಅಥವಾ ಟೊಮೆಟೋಗಳಂತಹ ತರಕಾರಿಯಾಗಿರಬಹುದೇ ಎಂಬ ಅನುಮಾನ ಹುಟ್ಟಿಸುವಂತಿದೆ. ಆದರೆ ಹಾಗೇನಿಲ್ಲ; ಇದು ದೇಶೀಯ ಬಳ್ಳಿ ಮತ್ತು ಅದರ ಕಾಯಿಯನ್ನು ಸೂಚಿಸುತ್ತದೆ. ಇದು ಸಂಸ್ಕೃತದ ಪಟೋಲ ಎಂಬ ಶಬ್ದದ ತದ್ಭವರೂಪ. ಈ ಕಾಯಿಯಲ್ಲಿ ಎರಡು ಬಗೆ: ಕಹಿ ಮತ್ತು ಕಹಿಯಲ್ಲದ್ದು. ಕಹಿಯಾದ ಪ್ರಭೇದಕ್ಕೆ 'ಪಟೋಲ' (ಈ ಶಬ್ದ ಪುಲ್ಲಿಂಗ ಶಬ್ದ) ಎಂಬ ಹೆಸರಿದ್ದರೆ ಕಹಿಯಲ್ಲದ್ದಕ್ಕೆ 'ಪಟೋಲಿಕಾ' (ಇದು ಸ್ತ್ರೀಲಿಂಗ ಶಬ್ದ) ಎಂಬ ಹೆಸರಿದೆ. ಅದೇ ಕನ್ನಡದಲ್ಲಿ 'ಪಟಲ' ಎಂದಾಗಿ 'ಪಡಲ' ಎಂದೂ 'ಪಡಳ' ಎಂದೂ ಆಗಿದೆ. ಹಳಗನ್ನಡದಲ್ಲಿನ ಅನೇಕ ಶಬ್ದಗಳ 'ಪ'ಕಾರವು ನಡುಗನ್ನಡದಲ್ಲಿ 'ಹ'ಕಾರವಾಗುವಂತೆ ಪಡಲ ಎಂಬುದು 'ಹಡಲ' ಎಂಬ ರೂಪವನ್ನೂ ಪಡೆಯುತ್ತದೆ; ಈ ರೂಪವು ಅನೇಕ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿದೆ.  ಕ್ರಿಶ 1025 ರಲ್ಲಿ ರಚಿತವಾದ ಚಾವುಂಡರಾಯನ 'ಲೋಕೋಪಕಾರ' ಎಂಬ ಕೃತಿಯಲ್ಲಿ ಪಡಲದ ಕಾಯಿ ಉಲ್ಲೇಖಗೊಂಡಿದೆ; ಪಡಲದ ಕಹಿಯನ್ನು ಹೋಗಲಾಡಿಸುವ ಪರಿಯನ್ನು ಅಲ್ಲಿ ತಿಳಿಸಲಾಗಿದೆ. ಅಂದರೆ ಈ ತರಕಾರಿಯ ಉಪಯೋಗ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಟೋಲ ಎಂಬ ಶಬ್ದವು ಪ್ರಾಕೃತದಲ್ಲಿ ಪಡೋಲ ಎಂದಾಗುತ್ತದೆ, ತಮಿಳಿನಲ್ಲಿ ಪುಟಲ್ ಎಂದೂ, ಪುಟಲೈ ಎಂದೂ  ತೆಲುಗಿನಲ್ಲಿ ಪೊಟ್ಲ ಎಂದೂ ಪಟಲ ಎಂದೂ, ತುಳುವಿನಲ್ಲಿ ಪಟ್ಲ ಎಂದೂ, ಮಲಯಾಳಂನಲ್ಲಿ ಪುಟ್ಟಲ್ ಅಥವಾ ಪಿಟ್ಟಲ್ ಅಥವಾ ಪುಟೋಲ್ ಎಂದೂ ಆಗುತ್ತದೆ. ಪಡುವಲ ಕಾಯಿ ಬೂದುಬಣ್ಣವಾಗಿರುತ್ತದೆ; ಒಂದು ಪ್ರಭೇದದಲ್ಲಿ ಉದ್ದುದ್ದು ಪಟ್ಟೆಗಳೂ ಇರುತ್ತವೆ. ಪಡುವಲ ಕಾಯಿಯು ಸಣಕಲಾಗಿ ಉದ್ದವಾಗಿದ್ದು ಹಾವಿನ ಆಕಾರವನ್ನು ಹೋಲುವುದರಿಂದ ಇಂಗ್ಲಿಷ್‍ನಲ್ಲಿ ಇದನ್ನು 'ಸ್ನೇಕ್ ಗೌರ್ಡ್' ಎಂದೇ ಕರೆಯುತ್ತಾರೆ. ಆದರೆ ಈಚೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದರ ಆಕಾರವನ್ನು ಪರಿಷ್ಕರಿಸಿ ಗಿಡ್ಡದಾಗಿ ಮಾಡಲಾಗಿದೆ.
======
ಪದ1:  ವೇದಮಂತ್ರಗಳನ್ನು ಉಚ್ಚರಿಸುವ ಒಂದು ಬಗೆಯನ್ನು ಪದ ಎನ್ನುತ್ತಾರೆ. ವೇದಮಂತ್ರಗಳನ್ನು ಬಿಡಿಸಿ ಹೇಳುವ ಗ್ರಂಥವನ್ನು ಪದಪಾಠ ಎನ್ನುತ್ತಾರೆ. ಪದ ಎಂಬುದು ಶಬ್ದ ಎಂಬುದಕ್ಕೆ ಸಂವಾದಿಯಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ಹಾಗೆಯೇ 'ಪದಕ್ರಮಕ' ಎಂದರೆ ವೇದದ ಪದ ಮತ್ತು ಕ್ರಮಪಾಠಗಳನ್ನು ಅಧ್ಯಯನ ಮಾಡುವವನು ಹಾಗೂ ತಿಳಿದಿರುವವನು ಎಂದರ್ಥ. 'ಪದಕ' ಎಂದರೆ ವೇದಪಾಠವನ್ನು ಅಧ್ಯಯನ ಮಾಡುವವನು ಎಂದು. ವ್ಯಾಕರಣದ ಪ್ರಕಾರ ಕಪ್ರಯೋಗಕ್ಕೆ ಅರ್ಹವಾದ ಅರ್ಥವತ್ತಾದ ವರ್ಣಗಳುಕಿ ಪದ ಎನ್ನಿಸಿಕೊಳ್ಳುತ್ತದೆ; ಆದರೆ ವ್ಯಾಕರಣದಲ್ಲಿ "ಪ್ರಕೃತಿ ಪ್ರತ್ಯಯಂಗಳೆರಡುಂ ಕೂಡೆ ಪದಮಕ್ಕುಂ" ಎಂದು ಕೇಶಿರಾಜನೆಂಬ ಹದಿಮೂರನೆಯ ಶತಮಾನದ ವೈಯಾಕರಣಿ ಹೇಳುತ್ತಾನೆ. "ಹಲಗೆ ಬಳಪವ ಹಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ" ಎಂದು ಕುಮಾರವ್ಯಾಸ ಹೇಳಿಕೊಳ್ಳುವ ಮಾತು ಕಾವ್ಯವನ್ನು ತಾನು ಎಲ್ಲಿಯೂ ಅಳಿಸದೆ ಸರಾಗವಾಗಿ ಬರೆದುಕೊಂಡು ಹೋಗುತ್ತೇನೆಂದು ಹೆಮ್ಮೆಪಡುವಾಗ ಹೇಳುವಾಗಿನದು. ಹಳಗನ್ನಡ ಕಾವ್ಯಗಳಲ್ಲಿ, ವಿಶೇಷವಾಗಿ ಚಂಪೂ ಕಾವ್ಯಗಳ ವೃತ್ತಗಳಲ್ಲಿ ಅನೇಕ ಶಬ್ದಗಳು ಕೂಡಿ ದೀರ್ಘ ಸಮಾಸಗಳಾಗಿರುವುದುಂಟು. ಅಂಥದರ ಅರ್ಥ ಹೇಳಲು ಅಲ್ಲಿರುವ ವಿವಿಧ ಪದಗಳನ್ನು ಬಿಡಿಸಿ ಹೇಳುವ ರೂಢಿಯನ್ನು 'ಪದವಿಭಾಗ' ಅಥವಾ 'ಪದಚ್ಛೇದ' ಎನ್ನುತ್ತಾರೆ. 'ಪದಸಂಚಯ' ಎಂದರೆ ಶಬ್ದಗಳ ಸಮೂಹ; "ಕೆಟ್ಟುದು ಈಗಡೀಗಡಿನ ಕವಿವ್ರಜಕ್ಕೆ ಪದಸಂಚಯಂ" ಎಂದು ಪೊನ್ನನೆಂಬ ಹತ್ತನೆಯ ಶತಮಾನದಕವಿ ತನ್ನ 'ಶಾಂತಿಪುರಾಣ'ದಲ್ಲಿ ಹೇಳುತ್ತಾನೆ! ಈ ಪದಗಳ ಬಗೆಗಿನ ಶಾಸ್ತ್ರವೇ ಪದಾಗಮ; ಅದನ್ನು ತಿಳಿದವನೇ ಪದಾಗಮಜ್ಞ. ಪದಾರ್ಥ ಎಂಬುದು ಈಗ ವಸ್ತು ಎಂಬ ಅರ್ಥವನ್ನು ಪಡೆದಿದ್ದರೂ ಅದರಲ್ಲಿ 'ಪದ+ಅರ್ಥ' ಎಂಬೆರಡು ಶಬ್ದಗಳು ಸೇರಿ ಅಭಿಪ್ರಾಯ ಎಂಬುದನ್ನು ಸೂಚಿಸುತ್ತದೆ. ಪದಗಳಿಗೆ ಅರ್ಥಗಳನ್ನು ಸೂಚಿಸುವ ಗ್ರಂಥವೇ 'ಪದಕೋಶ' ಅಥವಾ ನಿಂಟು. 'ಪದವಿದ್ಯೆ' ಎಂದರೆ ವ್ಯಾಕರಣ.
ಪದ ಎಂಬುದು ಹಾಡು ಎಂಬರ್ಥದಲ್ಲಿಯೂ ಕನ್ನಡದಲ್ಲಿ ಬಳಕೆಯಲ್ಲಿರುವ ಶಬ್ದ. 'ಒಂದು ಪದ ಹೇಳು' ಎಂದರೆ ಒಂದು ಹಾಡು ಹೇಳು ಎಂದರ್ಥ. ಹರಿದಾಸರ ಕೀರ್ತನೆಗಳನ್ನು ದಾಸರ ಪದಗಳು ಎಂದೇ ಕರೆಯುವ ರೂಢಿಯಿದೆ. ಹಾಡುವುದಕ್ಕೆಂದೇ ರಚಿತವಾದ ಕಾವ್ಯವನ್ನು ಹಿಂದೆ 'ಪದಕವಿತೆ' ಎನ್ನುತ್ತಿದ್ದರು. 'ಪದಗಾರ್ತಿ' ಎಂಬುದನ್ನು ಹಾಡು ಹೇಳುವವಳು ಎಂಬರ್ಥದಲ್ಲಿ ಕಾವ್ಯಗಳಲ್ಲಿ ಬಳಸಲಾಗಿದೆ. ಗೀತರಚನೆಯಲ್ಲಿನ ಒಂದು ವಿಶಿಷ್ಟ ಪ್ರಭೇದವನ್ನೂ ಪದ ಎಂದು ಕರೆಯುತ್ತಾರೆ: ಶೃಂಗಾರಪ್ರಧಾನವಾಗಿದ್ದು, ದೇವರ ಲೀಲಾವಿನೋದಗಳನ್ನು ಒಳಗೊಂಡು ಭರತನಾಟ್ಯಕ್ಕೆ ಮೀಸಲಾದ ಸಾಹಿತ್ಯರಚನೆಗಳೇ ಈ ಪದಗಳು, ಜಾವಳಿ ಮುಂತಾದವು.
=====
ಪದ2: ಈ ಶಬ್ದದ ಮತ್ತೊಂದು ನೆಲೆಯ ಅರ್ಥಗಳನ್ನೀಗ ನೋಡೋಣ. ಇದರ ಮೂಲಪದ 'ಪದ್' ಎಂಬುದು, ಅದರರ್ಥ ಪಾದ, ಚರಣ, ಕಾಲು ಎಂದು. ಪದ ಎಂದರೂ ಅದೇ ಅರ್ಥಗಳಿವೆ. ಹಾಗೆಯೇ ಕಾಲಿನ ಹೆಜ್ಜೆ, ಅಡಿ ಎಂಬ ಅರ್ಥಗಳೂ ಇವೆ. ಪಾದ ಎಂಬುದು ಈ ಶಬ್ದದ ಸಮಾನಾರ್ಥಕ ಪದ. ಕಾಲಿಗೆ ಸಂಬಂಧಿಸಿದುದು ಎಂದು ಸೂಚಿಸಲು ಇದನ್ನು ಪೂರ್ವಪದವಾಗುಳ್ಳ ಅನೇಕ ಸಮಾಸಗಳು ರೂಢಿಯಲ್ಲಿವೆ. ಪದಾತಿ ಅಥವಾ ಪದಾಜಿ ಎಂಬುದು ಚತುರಂಗ ಸೈನ್ಯದ ಕಾಲಾಳು ದಳವನ್ನು ಸೂಚಿಸುತ್ತದೆ. ಪದಪದ್ಧತಿ, ಪದನ್ಯಾಸಗಳು ಹೆಜ್ಜೆಯ ಗುರುತನ್ನು ಸೂಚಿಸುತ್ತವೆ. ಪದಕಟಕ ಎಂಬ ಶಬ್ದವನ್ನು ಷಡಕ್ಷರ ಕವಿ ಕಾಲ್ಗಡಗ ಎಂಬರ್ಥದಲ್ಲಿ ಬಳಸಿದ್ದಾನೆ. ಪದಪೀಠ ಎಂಬ ಶಬ್ದವು ಪಾದಗಳನ್ನಿರಿಸಿಕೊಳ್ಳಲು ಬಳಸುತ್ತಿದ್ದ ಪೀಠವನ್ನು ಸೂಚಿಸುತ್ತದೆ. ಪದ್ಯ ಎಂಬ ಶಬ್ದವು ಪದದಿಂದಲೇ ಬಂದುದು. ಇದಕ್ಕೆ ಸಂಸ್ಕೃತ ನಿಘಂಟುಗಳು ಎರಡು ಅರ್ಥಗಳನ್ನು ಹೇಳುತ್ತವೆ. ದೇವರ ಪಾದದಿಂದ ಹುಟ್ಟಿದ ನಾಲ್ಕನೆಯ ವರ್ಣದವನು ಎಂಬುದು ಒಂದು ಅರ್ಥವಾದರೆ ನಾಲ್ಕು ಪಾದಗಳುಳ್ಳ ಶ್ಲೋಕ ಎಂಬುದು ಮತ್ತೊಂದು.
ಪದ ಎಂಬುದು ಛಂದಶ್ಶಾಸ್ತ್ರದಲ್ಲಿಯೂ ಬಳಕೆಯಲ್ಲಿರುವ ಶಬ್ದ. ಛಂದ ಎಂದರೇ ನಡಿಗೆ; ನಡಿಗೆಯಲ್ಲಿ ಪಾದಗಳದ್ದೇ ಮುಖ್ಯ ಪಾತ್ರ. ಛಂದಸ್ಸು ಎಂಬುದು ಪದ್ಯಗಳ ನಡೆಯನ್ನು, ಪದ ಎಂಬುದು ಅಲ್ಲಿನ ಸಾಲನ್ನು ಸೂಚಿಸುತ್ತದೆ. ಸಂಸ್ಕೃತದ ಅನುಷ್ಟುಬ್ ಅಥವಾ ಶ್ಲೋಕದ ನಾಲ್ಕನೇ ಒಂದು ಭಾಗವನ್ನು ಪದ ಎಂದು ಕರೆಯುತ್ತಾರೆ; ಶ್ಲೋಕಕ್ಕೆ ನಾಲ್ಕು ಸಾಲುಗಳು. ಮುಂದೆ ಯಾವುದೇ ಪದ್ಯಜಾತಿಯ ಸಾಲನ್ನು ಪದ ಎಂದೇ ಕರೆಯುವ ರೂಢಿ ಬಂತು. ಸರಸ್ವತಿ ಮತ್ತು ಕಾವ್ಯ ಎರಡನ್ನೂ ಕವಿರಾಜಮಾರ್ಗಕಾರನು "ಚತುರರುಚಿರ ಪದರಚನೆ" ಎಂದು ಶ್ಲೇಷೆಯಿಂದ ವರ್ಣಿಸುತ್ತಾನೆ. ಸರಸ್ವತಿಯ ಕಾಲು ಹಾಗೂ ಕಾವ್ಯದ ಪದ್ಯದ ಸಾಲು ಎರಡೂ ಅರ್ಥಗಳನ್ನಿದು ಒಳಗೊಂಡಿದೆ.
ಪದ ಎಂಬುದು ಸ್ಥಾನವನ್ನೂ ಸೂಚಿಸುತ್ತದೆ. ಪದವಿ ಎಂಬುದು ಇದರ ಇನ್ನೊಂದು ರೂಪ; ಇದಕ್ಕ ಮಾರ್ಗ ಹಾಗೂ ಸ್ಥಾನ ಎಂಬ ಅರ್ಥಗಳಿವೆ. ಪದಚ್ಯುತ ಎಂದರೆ ಸ್ಥಾನವನ್ನು ಕಳೆದುಕೊಂಡವನು ಎಂಬರ್ಥವಿದೆ. ಹಾಗೆಯೇ ಅಧಿಕಾರದಲ್ಲಿ ಮೇಲಿನ ಹಂತಕ್ಕೇರುವುದನ್ನು 'ಪದೋನ್ನತಿ' ಎಂಬ ಶಬ್ದದಿಂದ ಸೂಚಿಸುತ್ತಾರೆ.
=====
ಬಾಳು1: ಹಳಗನ್ನಡದಲ್ಲಿ ಬಾೞ್ ಮತ್ತು ಬಾಳ್ ಎಂಬ ಎರಡು ರೂಪಗಳೂ ಬೇರೆ ಬೇರೆ ಅರ್ಥದಲ್ಲಿದ್ದವು. ಈಗ ಇವೆರಡೂ ಒಂದೇ ರೂಪದಲ್ಲಿವೆ: ಅದೇ ಬಾಳು. ಇದರ ಮೂಲ ಸ್ವರೂಪವಾದ ಬಾೞ್ ಎಂಬುದು ತಮಿಳಿನಲ್ಲಿ ವಾೞ್ ಎಂದೂ ಮಲಯಾಳಂನಲ್ಲಿ ವಾೞು ಎಂದೂ ತುಳುವಿನಲ್ಲಿ ಬಾಳು ಎಂದೂ ದೊರಕುತ್ತದೆ. ಬಾೞ್ ಹಳಗನ್ನಡದಲ್ಲಿ ಕ್ರಿಯಾರ್ಥ ಮತ್ತು ನಾಮವಾಚಕಗಳಾಗಿ ಬಳಕೆಯಲ್ಲಿತ್ತು. ಮೊದಲಿಗೆ ಇದರ ಕ್ರಿಯಾರೂಪದನ್ನು ವಿವೇಚಿಸಬಹುದು. ಜೀವಿಸು ಎಂಬುದು ಇದರರ್ಥ. "ಇಂತು ಬಾೞ್ವುದೆ ಚೋದ್ಯಂ" ಎಂಬ ಮಾತು 'ಕವಿರಾಜಮಾರ್ಗ'ದಲ್ಲಿಯೇ ಇದೆ. "ಜೋಳಕ್ಕೆ ತಪ್ಪಿಯುಂ ಇಂ ಬಾೞ್ವುದೆ, ಪೂಣ್ದು ನಿಲ್ಲದಿಕೆಯಿಂ ಬಾೞ್ವಂತು ವಿಖ್ಯಾತಕೀರ್ತಿಯವೊಲ್ ಈ ಒಡಲ್ ಅಬ್ಬೆ ಪೇೞಿಮೆನಗೇಂ ಕಲ್ಪಾಂತರಸ್ಥಾಯಿಯೇ" ಎಂಬ 'ಪಂಪಭಾರತ'ದ ಪ್ರಖ್ಯಾತ ವಾಕ್ಯದಲ್ಲಿ ಈ ಪದ ಎರಡು ಬಾರಿ ಬಳಕೆಯಾಗಿದೆ. ಕೃದಂತರೂಪದಲ್ಲಿ ಆದಿದೀರ್ಘವು ಹ್ರಸ್ವವಾಗುತ್ತದೆ. "ತನ್ನ ಸಂತತಿಗೆ ಮಕ್ಕಳಿಲ್ಲದಳ್ ಬೞ್ದು ಬಾೞ್ವಳ್" ಎಂಬಲ್ಲಿ 'ಬೞ್ದು' ಎಂದಾಗಿ ಬದುಕಿ ಎಂಬರ್ಥವನ್ನು ಪಡೆಯುತ್ತದೆ. ಬಾೞ್ ಎಂದರೆ ಸುಖವಾಗಿರು ಎಂಬ ಅರ್ಥವೂ ಧ್ವನಿಸುತ್ತದೆ: "ಅರವಿಂದಮಿತ್ರನ ಬಲದಿಂ ಕಾದಿ ಕೊಂದೆವಪ್ಪೊಡೆ ಸುಖದಿಂ ಬಾೞ್ವೆವು" ಎಂಬ 'ಪಂಚತಂತ್ರ'ದ ಮಾತು ಇದಕ್ಕೆ ಉದಾಹರಣೆ. ಹಾಗೆಯೇ ಜೀವನ ಮಾಡು ಎಂಬರ್ಥವೂ ಇದಕ್ಕಿದೆ. "ಜೀವಿತಮಂ ಕೊಂಡು ಬಾೞ್ವನೆಂಬವಂ ಪ್ರಾಣಮಂ ಕುಡಲ್ವೇೞ್ಕುಂ" ಎಂಬ ಅದರದ್ದೇ ಮತ್ತೊಂದು ವಾಕ್ಯದಲ್ಲಿ ಇದು ಸ್ಪಷ್ಟವಾಗುತ್ತದೆ. 'ಶಬ್ದಮಣಿದರ್ಪಣ'ವು "ಬೞ್ದಂ (ಬಾೞ್ದಂ)=ಜೀವಿಸಿದಂ, ಒಕ್ಕಲಾದಂ" ಎಂಬ ಅರ್ಥವನ್ನು ಕೊಡುತ್ತದೆ.
ಮುಂದಿನ ಬರವಣಿಗೆಯಲ್ಲಿ ೞಕಾರ ಳಕಾರವಾಯಿತು; ಜೊತೆಗೆ ವ್ಯಂಜನಾಂತವು ಸ್ವರಾಂತವಾಯಿತು; ಹೀಗಾಗಿ ಇದರ ರೂಪ ಬಾಳು ಎಂದಾಯಿತು. ನಡುಗನ್ನಡ ಕಾವ್ಯಗಳು 'ಬಾಳ್' ಎಂಬ ಶಬ್ದಕ್ಕಿರುವ ಅರ್ಥಗಳಲ್ಲಿ ಈ ರೂಪವನ್ನೇ ಬಳಸುತ್ತವೆ. ಬದುಕಿರುವ ಹೆಣ ಎಂಬರ್ಥದಲ್ಲಿ ಬಸವಣ್ಣ 'ಬಾಳುವೆಣ' ಎಂಬ ರೂಪವನ್ನು ಸೃಷ್ಟಿಸಿಕೊಳ್ಳುತ್ತಾನೆ: "ಬಾಳುವೆಣನ ಬೀಳುವೆಣನ ಸಂಸಾರವೇನವನ?" "ವನಿತೆ ನಿನ್ನಂ ಬಾಳಲೀಯೆವು" ಎಂಬುದು 'ಬಸವಪುರಾಣ'ದ ವಾಕ್ಯ. ಹೊಸಗನ್ನಡದಲ್ಲೂ ಇದೇ ರೂಢಿ ಮುಂದುವರಿಯಿತು. "ತಾಯೆ - ಬಾಳಮ್ಮ, ಬಾಳು" ಎಂಬುದು ಬಿಎಂಶ್ರೀ ಅವರ 'ಕನ್ನಡ ತಾಯ್ ನೋಟ'ದ ಸಾಲು. ಇಲ್ಲಿರುವುದು ಹಾರೈಕೆ. ಹಳಗನ್ನಡದಲ್ಲಿ ಕೃದಂತ ರೂಪದಲ್ಲಿ ಆದಿ ಹ್ರಸ್ವವಾಗದೆ ಹೊಸಗನ್ನಡದಲ್ಲಿ ದೀರ್ಘವೇ ಉಳಿದುಕೊಳ್ಳುತ್ತದೆ: ಅದೇ ಪದ್ಯದ "ಬಾಳ್ವವರು ಮೆರೆವವರು" ಎಂಬ ರೂಪವನ್ನು ನೋಡಬಹುದು.
=====
ಬಾಳು2: ಈಗ ಈ ಶಬ್ದದ ನಾಮರೂಪವನ್ನು ಪರಿಶೀಲಿಸೋಣ. ಕ್ರಿಯಾರ್ಥದಲ್ಲಿ ಯಾವ ಯಾವ ಅರ್ಥಛಾಯೆಗಳನ್ನು ಪಡೆದಿತ್ತೋ ಆ ಎಲ್ಲ ಅರ್ಥಛಾಯೆಗಳ ನಾಮರೂಪವಿದು. ಕರ್ಣಪಾರ್ಯನ 'ನೇಮಿನಾಥಪುರಾಣ'ದ ಮಾತು ಹೀಗಿದೆ: "ಶಂಕಾತಂಕದ ಸುತ್ತಿನೊಳಗುೞಿದುೞಿ ನಮೆವ ಬಾೞುಂ ಬಾೞೆ". "ಮಂತ್ರಪದವಿಯಂ ಬಾೞುಮಂ ಪ್ರತಿಪತ್ತಿಯುಮಂ ಕೊಟ್ಟುದಂ" ಎಂಬುದು 'ವಡ್ಡಾರಾಧನೆ'ಯ ಮಾತು. ಈ ಶಬ್ದದಿಂದ ಹಳಗನ್ನಡದಲ್ಲಿ ಅನೇಕ ಸಮಾಸಗಳನ್ನು ಸೃಷ್ಟಿಸಿಕೊಂಡು ಹೊಸ ಪರಿಕಲ್ಪನೆಗಳನ್ನು ತುಂಬಲಾಯಿತು. ಕನ್ನಡದ ಮೊತ್ತ ಮೊದಲ ಶಾಸನ (ಹಲ್ಮಿಡಿ)ದಲ್ಲಿ "ವಿಜ ಅರಸನ್ಗೆ ಬಾೞ್ಗೞ್ಚು ಪಲ್ಮಿಡಿಉಂ ಮೂವಳ್ಳಿಉಂ ಕೊಟ್ಟಾರ್" ಎಂಬ ವಾಕ್ಯವಿದೆ. ಗೆಲವನ್ನು ತಂದಿತ್ತ ವೀರನಿಗೆ ಸಾರ್ವಜನಿಕವಾಗಿ ಅವನ ಕತ್ತಿಯನ್ನು ತೊಳೆದು ಮಾಡುವ ಗೌರವವೇ 'ಬಾೞ್ಗೞ್ಚು'. ಬದುಕು ಎಂಬರ್ಥದಲ್ಲಿ ಬಾೞ್ಕೆ ಎಂಬ ಪ್ರಯೋಗವೂ ಇದೆ: "ಸತ್ತೊಡೆ ಪುಟ್ಟರೆ ತನಗಿದೇಕೆ ಬಾೞ್ಕೆಯ ಮೋಹಂ" ('ಧರ್ಮಾಮೃತ'). ಇಷ್ಟ ಎಂಬರ್ಥದಲ್ಲಿ ಬಾೞ್ತೆ ಎಂಬ ಪ್ರಯೋಗವೂ ಇದೆ ("ನಿಮಗೆ ಬಾೞ್ತೆಯಪ್ಪುದಂ ಬೇಡಿಕೊಳ್ಳಿಂ" - 'ಪಂಪಭಾರತ').  ಇದನ್ನೇ ಬೆಳೆಸಿ ಉಪಯುಕ್ತವಾಗು ಎಂಬರ್ಥದಲ್ಲಿ 'ಬಾೞ್ತೆಯಾಗು' ಎಂಬ ಪ್ರಯೋಗ 'ಪಂಚತಂತ್ರ'ದಲ್ಲಿದೆ ("ಅರಸುಗೆಯ್ವಾತಂಗೆ ಎಂತಪ್ಪನುಂ ಬಾೞ್ತೆಯಾಗದನಿಲ್ಲಂ"). ಉಂಬಳಿ ಕೊಡುವುದನ್ನು ನಾಗಚಂದ್ರನ 'ಮಲ್ಲಿನಾಥ ಪುರಾಣ'ದಲ್ಲಿ 'ಬಾೞ್ಕೆಗೊಡು' ಎಂದಿದೆ ("ಕರುಣಾಗ್ರಾಮಮಂ ಈ ಮಾಮರಕ್ಕೆ ಮಧು ಬಾೞ್ಕೆಗೊಟ್ಟು"). ಜನ್ನನ 'ಅನಂತನಾಥಪುರಾಣ'ದ "ಕೋಳ್ಗುದಿ ಬಾೞ್ಗುದಿಯಾಗಿ" ಬಲ್ಲಿನ ಬಾಳ್ಗುದಿ ಎಂದರೆ ಪ್ರಾಣಸಂಕಟ. ಫಲವತ್ತಾದ ನೆಲ ಎಂಬರ್ಥದಲ್ಲಿ 'ಲೀಲಾವತಿ'ಯು ಬಾೞ್ನೆಲ ಎಂಬ ಶಬ್ದವನ್ನು ಬಳಸುತ್ತದೆ ("ಫಲಭರದಿಂದ ಅಲ್ಲಾಡುವ ಬಳ್ಳಿವನದ ಬಾೞ್ನೆಲದಿಂ ತೆರಳ್ದು"). ಬಾೞ್ದಲೆವಿಡಿ ಎಂದರೆ ಜೀವಂತವಾಗಿ ಸೆರೆಹಿಡಿ ಎಂಬರ್ಥ ("ಪೆಱೆಯಂ ಬೀರದಿನಾ ಗೊರವನೆಯ್ದೆ ಬಾೞ್ದಲೆವಿಡಿದಂ" - 'ಕಬ್ಬಿಗರ ಕಾವ'). ಬಾೞ್ಮೊದಲ್ ಎಂದರೆ ಬಂಡವಾಳ ಎಂಬರ್ಥವು "ಅಂಗಜಂಗೆ ಬಾೞ್ಮೊದಲ್ ಅದು ಚಿತ್ತಜಂಗೆ ಕುಲವಂ" ಎಂಬ 'ಆದಿಪುರಾಣ'ದ ಮಾತಿನಲ್ಲಿದೆ. ಗಟ್ಟಿ ಎಂಬರ್ಥದಲ್ಲಿಯೂ ಈ ಶಬ್ದದ ಬಳಕೆಯಾಗಿದೆ ("ಇದು ಬಾೞ್ಮೊಸರ್ ಇದು ಕಳಲ್ ಇಂತಿದು ರುಚಿವೆತ್ತಿರ್ದ ಪಾನಂ" - 'ಶಾಂತಿಪುರಾಣ').
ಹೊಸಗನ್ನಡದಲ್ಲಿ ಜೀವನ ಎಂಬರ್ಥದಲ್ಲಿ ಬಾಳು, ಬಾಳ್ವೆ ರೂಪಗಳು ವ್ಯಾಪಕವಾಗಿ ಬಳಕೆಯಾಗುತ್ತದೆ. "ಇಂಥ ಬಾಳಿಗೆ ಒಲವೆ, ನಿನ್ನ ಕನಸು?" ಗ ಕೆಎಸ್ನ; "ಬಾಳ್ಗೆ ಬಾಳನು ಬೆಸೆದೆವು" ಗ ಜಿಎಸ್ಎಸ್; "ಮೇಲು ಬಾಳಿನ ಆಸೆ ಹೊತ್ತು ತನ್ನಿರಿ, ಅಣ್ಣ" - ಅಡಿಗ; "ನೀನೆ ಕಣಾ ನಮ್ಮ ಬಾಳ್ವೆ" ಗೋವಿಂದ ಪೈ ಇತ್ಯಾದಿ.
=====
ಪುರಾಣ: ಇದೊಂದು ಸಂಸ್ಕೃತ ಪದ, ಕನ್ನಡದಲ್ಲಿಯೂ ವ್ಯಾಪಕವಾಗಿಯೂ ವಿವಿಧಾರ್ಥಗಳಲ್ಲಿಯೂ ಬಳಕೆಯಲ್ಲಿದೆ. ಪುರಾಣ ಎಂದರೆ ಹಳೆಯದು, ಪುರಾತನವಾದದ್ದು ಎಂಬುದು ಮೂಲಾರ್ಥ. "ಪುರಾಣಮಿತ್ಯೇವ ನ ಸಾಧು ಸರ್ವಂ| ನಚಾಪಿ ಸರ್ವಂ ನವಮಿತ್ಯವದ್ಯಂ" ಎಂಬ ಕಾಳಿದಾಸನ ಮಾತು ಪ್ರಸಿದ್ಧ. ಹಳೆಯದೆಲ್ಲ ಶ್ರೇಷ್ಠವಲ್ಲ, ಹೊಸತೆಲ್ಲ ಕನಿಷ್ಠವಲ್ಲ ಎಂಬುದು ಇದರ ಸ್ಥೂಲಾರ್ಥ. ದೇವರನ್ನು ಪುರಾಣಪುರುಷ ಎಂದು ಕರೆಯುತ್ತಾರೆ (ಈ ಶಬ್ದಕ್ಕೆ ಮುದುಕ ಎಂಬರ್ಥವೂ ಇದೆ). ಕೆಲವು ಹಳಗನ್ನಡ ಕಾವ್ಯಗಳಲ್ಲಿಯೂ ಈ ಪದ ಈ ಅರ್ಥದಲ್ಲಿಯೇ ಬಳಕೆಯಾಗಿದೆ: ಪುರಾಣಕವಿ ಎಂಬ ಮಾತು 'ಕವಿರಾಜಮಾರ್ಗ'ದಲ್ಲಿ ಹಾಗೂ 'ಪಂಪಭಾರತ'ಗಳಲ್ಲಿದ್ದರೆ, ಪುರಾಣಕೂಪ (ಹಳೆಯ ಬಾವಿ) ಎಂಬುದು ದುರ್ಗಸಿಂಹನ 'ಪಂಚತಂತ್ರ'ದಲ್ಲಿ ಬಂದಿದೆ. ವಿಷ್ಣುವು ತಳೆದನೆನ್ನಲಾದ ಕೂರ್ಮಾವತಾರವನ್ನು 'ಲೀಲಾವತಿ' ಎಂಬ ಕಾವ್ಯದಲ್ಲಿ 'ಪುರಾಣಕಮಠ' ಎಂದು ಕರೆಯಲಾಗಿದೆ.
ಆನಂತರ ಹಿಂದೆ ನಡೆದ ಕತೆ, ದೇವತೆಗಳ ಸಂಕಥನ ಎಂಬರ್ಥದಲ್ಲಿ ಪುರಾಣ ಎಂಬ ಶಬ್ದ ಬಳಕೆಯಾಯಿತು. ವ್ಯಾಸನು ಹದಿನೆಂಟು ಪುರಾಣಗಳನ್ನೂ, ಹದಿನೆಂಟು ಉಪಪುರಾಣಗಳನ್ನೂ ಬರೆದನೆಂಬ ಪ್ರತೀತಿಯಿದೆ. ವೈದಿಕ ಪುರಾಣದ ಲಕ್ಷಣಗಳನ್ನು ಹೀಗೆ ಹೇಳುತ್ತಾರೆ: "ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿ ಚ| ವಂಶಾನುಚರಿತಂ ಚೇತಿ ಲಕ್ಷಣಾನಾಂತು ಪಂಚಕಂ" (ಸೃಷ್ಟಿ, ವಿಕಾಸ, ಋಷಿವಂಶವರ್ಣನೆ, ಮನುಗಳ ಕಾಲಾವಧಿ, ರಾಜವಂಶಾವಳಿಯ ಕಥನ). ಇಂಗ್ಲಿಷ್‍ನಲ್ಲಿ ಇದನ್ನು ಮೈಥಾಲಜಿ ಎನ್ನುತ್ತಾರೆ (ಗ್ರೀಕ್ ಭಾಷೆಯಲ್ಲಿ ಮೈಥಾಸ್ ಎಂದರೆ ಕಟ್ಟು ಕತೆ ಎಂದರ್ಥ). ವಿವಿಧ ಧರ್ಮಗಳಿಗೆ ಸಂಬಂಧಿಸಿದಂತೆ ಪುರಾಣಗಳ ಲಕ್ಷಣಗಳು ಬದಲಾಗುತ್ತವೆ: ಜೈನ ಪುರಾಣ, ವೀರಶೈವಪುರಾಣ ಹೀಗೆ. ಆಯಾ ಮತಧರ್ಮದ ಪುರಾಣಗಳಲ್ಲಿ ಅವಕ್ಕೆ ಸಂಬಂಧಿಸಿದ ಆಚರಣೆಗಳು, ಚಾರಿತ್ರಿಕ ಪುರುಷರ ದೈವೀಕರಣ, ಸಾಮೂಹಿಕ ಸ್ವಭಾವ, ನೀತಿಬೋಧೆಗಳಿರುತ್ತವೆ ಎಂದು ವಿದ್ವಾಂಸರು ವಿಶ್ಲೇಷಿಸುತ್ತಾರೆ. 
ಪುರಾಣ ಹೇಳುವವನು ಪೌರಾಣಿಕ, ಪುರಾಣವನ್ನು ಕೇಳುವುದು ಪುರಾಣಶ್ರವಣ, ಹಿಂದಿನಕಾಲದಿಂದ ನಡೆದ ಬಂದ ರೀತಿಯೇ ಪುರಾಣಮಾರ್ಗ. ಪುರಾಣ ಕತೆಗಳಿಗೆ ಆಧಾರವಿಲ್ಲದ್ದರಿಂದ ಅದಕ್ಕೆ ಸುಳ್ಳು ಎಂಬರ್ಥವೂ, ಕಾಲಹರಣದ ಹರಟೆ ಎಂಬರ್ಥವೂ ಬಂದಿದೆ. ಅಪ್ಪಟ ಸುಳ್ಳಿನ ಕತೆಯನ್ನು 'ಬುರುಡೆ ಪುರಾಣ' ಎಂದೇ ಗೇಲಿಮಾಡುತ್ತಾರೆ.
=====
ಪಂಚಪ್ರಾಣ: ಶರೀರದಲ್ಲಿನ ಐದು ಬಗೆಯ ವಾಯುಗಳಿಗೆ ಒಟ್ಟಾರೆ ಈ ಹೆಸರಿದೆ; ಅವನ್ನು ಪ್ರಾಣವಾಯುಗಳೆಂದು ಕರೆಯುವ ವಾಡಿಕೆಯೂ ಇದೆ. ಅವುಗಳನ್ನು 'ಅಮರಕೋಶ'ವು "ಪ್ರಾಣೋಪಾನಸ್ಸಮಾನಶ್ಚೋದಾನವ್ಯಾನೌ ಚ ವಾಯವಃ" ಎಂದು ಹೆಸರಿಸುತ್ತದೆ (ಪ್ರಾಣ ಉಪಾನ ಸಮಾನ ಉದಾನ ಮತ್ತು ವ್ಯಾನ). ಇವು ಕ್ರಮವಾಗಿ ದೇಹದಲ್ಲಿ ಹೃದಯ, ಗುದಪ್ರದೇಶ, ನಾಭಿ, ಕಂಠ ಹಾಗೂ ಶರೀರದ ಎಲ್ಲ ಭಾಗಗಳಲ್ಲೂ ಇರುವುದೆಂದು ಹೇಳುತ್ತಾರೆ. ಪ್ರಾಣವಾಯುವು ಉಚ್ಛ್ವಾಸ-ನಿಶ್ವಾಸ, ಅಪಾನವಾಯುವು ಮಲಮೂತ್ರವಿಸರ್ಜನೆ, ಸಮಾನವಾಯುವು ಆಹಾರಪಚನ, ಉದಾನವಾಯುವು ಮಾತನಾಡುವಿಕೆ ಅಥವಾ ಉದ್ಗಾರ, ವ್ಯಾನವಾಯುವು ಕಣ್ಣುರೆಪ್ಪೆ ಮಿಟುಕಿಸುವುದು - ಈ ಕಾರ್ಯಗಳನ್ನು ನೆರವೇರಿಸುವುವೆಂದು ಹೇಳುತ್ತಾರೆ. "ಪ್ರಾಣವಾಯುಗಳವರು ಸುಭಟಶ್ರೇಣಿದೇಹಕೆ" ಎಂಬುದು ಕುಮಾರವ್ಯಾಸನ ಪ್ರಯೋಗ. ಕೃಷ್ಣನು "ಮಮ ಪ್ರಾಣಾಹಿ ಪಾಂಡವಾಃ" ಎಂದು ಮಹಾಭಾರತದಲ್ಲಿ ಹೇಳುತ್ತಾನೆ. 'ಪ್ರಾಣಸಂಯಮ' ಎಂದರೆ ಉಸಿರಾಟದ ಹತೋಟಿ. ದೇಹ ಮತ್ತು ಪ್ರಾಣವಾಯುಗಳ ಸಂಬಂಧವೇ ಜೀವನ; ಪ್ರಾಣವಾಯುವನ್ನು ದೇಹದಲ್ಲಿ ತಡೆದು ನಿಲ್ಲಿಸಿದಷ್ಟು ಕಾಲವೂ ಮನುಷ್ಯ ಬದುಕಿರಬಹುದು ಎಂಬ ಕಾರಣದಿಂದ ಅದನ್ನು ಒಂದು ಕ್ರಮದಲ್ಲಿ ವ್ಯವಸ್ಥೆಗೊಳಿಸುವುದನ್ನೇ ಯೋಗಶಾಸ್ತ್ರದಲ್ಲಿ 'ಪ್ರಾಣಾಯಾಮ' ಎನ್ನುತ್ತಾರೆ. "ವಿಪ್ರೋತ್ತಮರನುಮತದಿಂ ಪ್ರಾಣಾಯಾಮಮಂ ಮಂತ್ರಿಸಿ" ಎಂಬುದು ಹರಿಹರನ 'ಗಿರಿಜಾ ಕಲ್ಯಾಣ'ದಲ್ಲಿ ಬರುವ ಮಾತು. ಐದು ಉಪವಾಯುಗಳನ್ನೂ ಹೆಸರಿಸುತ್ತಾರೆ. ಅವೆಂದರೆ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ಎಂಬವು.
ದ್ವಿಜರು ಊಟಕ್ಕೆ ಕುಳಿತಾಗ ಪ್ರತಿನಿತ್ಯವೂ ಪಂಚಪ್ರಾಣಗಳ ಅಧಿದೇವತೆಗೆ ಪೂಜೆಯನ್ನು ಸಮರ್ಪಿಸುತ್ತಾರೆ. ಇದನ್ನು ಬಸವಣ್ಣನು "ಪ್ರಾಣಲಿಂಗ ಪ್ರಸಾದವ ಮುಂದಿಟ್ಟುಕೊಂಡು ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ ಎಂಬ ಕರ್ಮಿಗಳನೇನೆಂಬೆ" ಎಂದು ಲೇವಡಿ ಮಾಡುತ್ತಾನೆ. ಬೇಂದ್ರೆಯವರು ತಮ್ಮ 'ನಾನು' ಎಂಬ ಕವನದಲ್ಲಿ ವಿಶ್ವಮಾತೆ, ಭೂಮಾತೆ, ಭರತಮಾತೆ, ಕನ್ನಡತಾಯಿ ಹಾಗೂ ಹಡೆದವ್ವ ಎಂಬ "ಈ ಐದು ಐದೆಯರೆ ಪಂಚಪ್ರಾಣಗಳಾಗಿ ಈ ಜೀವದೇವನಿಹನು" ಎಂದು ಹೇಳಿಕೊಳ್ಳುತ್ತಾರೆ. 'ಪಂಚಪ್ರಾಣ' ಎಂಬುದು ತುಂಬ ಇಷ್ಟವೆಂದು ಹೇಳಲು ಈಗ ಬಳಸುವ ಸಾಮಾನ್ಯ ನುಡಿಗಟ್ಟಾಗಿದೆ.
=====
ಪ್ರಾಣ: ಇದೊಂದು ಸಂಸ್ಕೃತ ಶಬ್ದ. ಇದಕ್ಕೆ ಕನ್ನಡದಲ್ಲಿ ತದ್ಭವವಾಗಿ 'ಹರಣ' ಎಂಬ ರೂಪವಿದೆ; ಆದರೆ ಪ್ರಾಣ ಶಬ್ದವೇ ಹೆಚ್ಚು ಬಳಕೆಯಲ್ಲಿದೆ. ಪ್ರಾಣ ಎಂದರೆ ಉಸಿರು ಎಂದರ್ಥ. ಉಸಿರಾಟ ಜೀವವಿರುವ ಲಕ್ಷಣವಾದದ್ದರಿಂದ ಪ್ರಾಣ ಎಂದರೆ ಜೀವ ಎಂಬ ಅರ್ಥವೂ ಇದೆ. "ನಿನ್ನನಗಲ್ವಗಲ್ಕೆಯುಂ ಪ್ರಾಣದಗಲ್ಕೆಯುಂ ಸಮಂ" ('ಆದಿಪುರಾಣ'). ಹೀಗಾಗಿ ತುಂಬ ಪ್ರೀತಿಪಾತ್ರ ಎಂಬರ್ಥವೂ ಪ್ರಾಪ್ತವಾಗುತ್ತದೆ.  ("ಪ್ರಾಣದಿನಧಿಕ ಎನಗೆ ನೀಂ" 'ಪಾರ್ಶ್ವನಾಥ ಪುರಾಣ'). 'ಅಮರಕೋಶ'ದಲ್ಲಿ ಈ ಶಬ್ದಕ್ಕೆ ಶಕ್ತಿ, ಪರಾಕ್ರಮ ಎಂಬರ್ಥಗಳನ್ನೂ ಹೇಳಿದೆ ("ಶಕ್ತಿಃ ಪರಾಕ್ರಮಪ್ರಾಣೌ"). ಪ್ರಾಣ ಎಂಬುದು ಐದು ಬಗೆಯ ವಾಯುಗಳಲ್ಲಿ ಒಂದು. ಈ ಶಬ್ದಕ್ಕೆ ಬ್ರಹ್ಮ ಎಂಬರ್ಥವೂ ಇದೆ. "ಪ್ರಾಣದೇವರು', 'ಮುಖ್ಯಪ್ರಾಣ', 'ಪ್ರಾಣೇಶ', 'ಪ್ರಾಣನಾಥ', 'ಪ್ರಾಣರಾಯ' ಮುಂತಾದವಕ್ಕೆ ಆಂಜನೇಯ ಎಂಬರ್ಥವಿದೆ _ ಈ ಎಲ್ಲ ಶಬ್ದಗಳನ್ನೂ ಈ ಅರ್ಥದಲ್ಲಿ ಪುರಂದರದಾಸರು ತಮ್ಮ ಕೀರ್ತನೆಗಳಲ್ಲಿ ಬಳಸುತ್ತಾರೆ.
'ಪ್ರಾಣನ' ಎಂದರೆ ಬದುಕಿಸುವುದು ಎಂದರ್ಥ ("ಎನ್ನ ತಂದೆ .. .. ಮತ್ ಪ್ರಾಣನ ಪ್ರಯತ್ನ ತತ್ಪರನಾಗಿ" - 'ಕರ್ಣಾಟಕ ಕಾದಂಬರಿ'). "ಪ್ರಾಣೋಪಕಾರ' ಎಂದರೆ ಜೀವವನ್ನುಳಿಸುವಂಥ ಉಪಕಾರ ("ನೀಮೆನಗೆ ಪ್ರಾಣೋಪಕಾರಂಗೆಯ್ದಿರ್" - 'ಪಂಚತಂತ್ರ'). 'ಪ್ರಾಣಂಬಡೆ' ಎಂದರೆ ಜೀವವನ್ನು ಹೊಂದು ಎಂದರ್ಥ ("ವೀರಭಕ್ತಿಯೊಳಟ್ಟೆಯಲಿ ತಲೆ ಸೇರಿಸಲು ಪ್ರಾಣಂಬಡೆದನು" - ಭೀಮಕವಿಯ 'ಬಸವಪುರಾಣ'). 'ಪ್ರಾಣಾಹುತಿ' ಎಂದರೆ ಬಲಿ ("ಗಾಳದ ತುದಿಯೊಳಿಪ್ಪ ಭೂನಾಗನಂ ಕಂಡು ಪ್ರಾಣಾಹುತಿಯೆಂದು ಸವಿವ" - ಕನಕದಾಸರ ಕೀರ್ತನೆ). 'ಪ್ರಾಣತೆಗೆ' ಎಂದರೆ ಕೊಲ್ಲು ಎಂಬರ್ಥದ ಜೊತೆಗೆ ಕಾಟ ಕೊಡು ಎಂಬರ್ಥವೂ. 'ಸುಮ್ಮನೆ ನನ್ನ ಪ್ರಾಣ ತೆಗೀಬೇಡ' ಎಂಬಂತಹ ಮಾತುಗಳನ್ನು ಗಮನಿಸಿ. 'ಪ್ರಾಣಹಿಂಡು' ಎಂದರೂ ಇದೇ ಅರ್ಥವೇ. 'ಪ್ರಾಣ ಕಳೆದುಕೋ' 'ಪ್ರಾಣ ಹೋಗು' 'ಪ್ರಾಣಾಂತಕ, 'ಪ್ರಾಣಯಾತನೆ' ಮುಂತಾದ ನುಡಿಗಟ್ಟುಗಳು ಬಳಕೆಯಲ್ಲಿವೆ. 'ಪ್ರಾಣವಲ್ಲಭ' 'ಪ್ರಾಣವಲ್ಲಭೆ' ಅಥವಾ 'ಪ್ರಾಣೇಶ್ವರ' 'ಪ್ರಾಣೇಶ್ವರಿ' ಎಂದರೆ ಪ್ರಿಯಪ್ರೇಯಸಿಯರು. "ಬಿಡದೆ ಪೊಗೆ ಸುತ್ತೆ ತೋಳಂ ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂದೊಡಗಳೆದರ್ ಓಪರೋಪರೊಳ್ ಒಡಸಾಯಲ್ ಪಡೆದರ್ ಇನ್ನವೇಂ ಸದಯ್ಪೊಳವೇ" ಎಂಬುದು ಪಂಪನ 'ಆದಿಪುರಾಣ'ದ ಪದ್ಯ. ವೀರಶೈವದಲ್ಲಿ 'ಪ್ರಾಣಲಿಂಗ'ದ ಪರಿಕಲ್ಪನೆಯಿದೆ.
ಪ್ರಾಣವುಳ್ಳುದೇ 'ಪ್ರಾಣಿ'. 'ಪ್ರಾಣಿ ಜಂತು ದೇಹಿಯೆನಿಕ್ಕುಂ" ಎಂದು 'ಅಭಿಧಾನ ವಸ್ತುಕೋಶ'ದ ವಿವರಣೆ. ಪ್ರಾಣಿಯನ್ನು ಕೊಲ್ಲುವುದೇ 'ಪ್ರಾಣಿವಧೆ' "ಪ್ರಾಣಿವಧೆಯೆ ಪರಮಪಾತಕವೆಂಬುದಂ" - 'ಪಂಚತಂತ್ರ'). ಪ್ರಾಣಿಗಳ ಬಗ್ಗೆ ತಿಳಿಸುವ ವಿಜ್ಞಾನವೇ 'ಪ್ರಾಣೀಶಾಸ್ತ್ರ' ಅಥವಾ 'ಪ್ರಾಣಿವಿಜ್ಞಾನ'.
======
ಬಂಡವಾಳ: ಇದರ ಮೂಲ ಸಂಸ್ಕೃತದ 'ಭಾಂಡ' ಎಂಬಂತೆ ತೋರುತ್ತದೆ. ಅದರ ಅರ್ಥ ಸರಕು ಅಥವಾ ಸಾಮಗ್ರಿ ಇಡುವ ಉಗ್ರಾಣ ಅಥವಾ ಪಾತ್ರೆ ಎಂದು. ಭಾಂಡಾಗಾರ ಎಂಬುದೂ ಉಗ್ರಾಣವನ್ನು ಸೂಚಿಸುತ್ತದೆ. ಮುಂದೆ ಅದು ಹಣವಿರುವ ಕೋಶ ಎಂರ್ಥವನ್ನೂ ಪಡೆದಂತೆ ಕಾಣುತ್ತದೆ. ಭಾಂಡಾಗಾರ>ಭಾಂಡಾರ>ಭಂಡಾರ ಎಂದಾಗಿದೆ. 'ಭಂಡ' ಕನ್ನಡದಲ್ಲಿ ಅಲ್ಪಪ್ರಾಣವಾಗಿ ಬಂಡ ಎಂಬ ರೂಪ ತಳೆಯಿತು. ಮಾರಾಟದ ಸರಕು ಎಂಬರ್ಥದಲ್ಲಿ ಈ ಶಬ್ದ 'ವಡ್ಡಾರಾಧನೆ'ಯಲ್ಲೇ 'ಭಂಡ' ಹಾಗೂ 'ಬಂಡ' ಎರಡು ರೂಪಗಳಲ್ಲೂ ಬಂದಿದೆ ("ತಮ್ಮ ಕೊಂಡುಪೋದ ಭಂಡಮಂ " ಹಾಗೂ "ಬಂಡಮುಮೆಳ್ತುಗಳುಂ ಮೊದಲಾಗೆಲ್ಲಮಂ ಕಳ್ಳರ್ ಕೊಂಡು ಪೋದರ್").
ವ್ಯಾಪಾರದ ಮೂಲಧನ ಎಂಬರ್ಥದಲ್ಲಿ ಬಂಡವಾಳ ಶಬ್ದವು ಬಂಡ ಮತ್ತು (ಕರವಾಲ, ಭಿಂಡಿವಾಳ ಮುಂತಾದೆಡೆಗಳಲ್ಲಿರುವಂತೆ) ವಾಲ ಎಂಬುದರೊಡನೆ ಸೇರಿರಬೇಕು. ಈ ಶಬ್ದವು ಭಂಡವಾಳ, ಭಂಡವಲು, ಬಂಡವಲ, ಬಾಂಡವಲು ಮುಂತಾದ ರೂಪಗಳನ್ನು ತಳೆಯುತ್ತದೆ. ಹದಿನಾಲ್ಕನೆಯ ಶತಮಾನದ ನಾಗರಾಜನ ಕೃತಿಯಾದ 'ಪುಣ್ಯಾಸ್ರವ'ದಲ್ಲಿ "ವ್ಯವಹಾರಿಸುವಂಗೆ ಬಂಡವಲಮಿಲ್ಲದೆಂತು ಪೋದಪ್ಪೆ" ಎಂಬ ವಾಕ್ಯವಿದೆ. ಮೊದಲು ಸರಕು ವ್ಯಾಪಾರದ ಮೂಲವಾಗಿದ್ದರೆ ಬರಬರುತ್ತ, ಹಣದ ಬಳಕೆ ಹೆಚ್ಚಾದಂತೆ, ಹಣವಾಯಿತು. ಹೀಗಾಗಿ ಎಲ್ಲದಕ್ಕೂ ಮೂಲವಾದುದನ್ನೂ ಬಂಡವಾಳ ಎಂಬ ಹೆಸರಿನಿಂದಲೇ ಸೂಚಿಸುವಂತಾಯಿತು. 'ಮಾತೇ ಅವನ ಬಂಡವಾಳ' ಎಂಬಂತಹ ಕಡೆಗಳಲ್ಲಿ ಈ ಅರ್ಥವಿದೆ. ಮುಂದೆ ಅದು ಸಾಮರ್ಥ್ಯವನ್ನೂ ಸೂಚಿಸುವಂತಾಯಿತು: ಸಾಮರ್ಥ್ಯವಿಲ್ಲದೆ ಕೊಚ್ಚಿಕೊಳ್ಳುವುದನ್ನು ಸೂಚಿಸುವ 'ಬಂಡವಾಳ್ವಿಲ್ಲದ ಬಡಾಯಿ' ಎಂಬ ನಾಣ್ಣುಡಿಯೇ ಇದೆ. ಆ ಹೆಸರಿನ ಟಿ.ಪಿ. ಕೈಲಾಸಂ ಅವರ ನಾಟಕ ಪ್ರಸಿದ್ಧವಾಗಿದೆ.
ಹಣವಿರುವವನು 'ಬಂಡವಾಳಗಾರ' ಅಥವಾ 'ಬಂಡವಾಳಿಗ'ನಾದರೆ, ಹಣಗಳಿಕೆಗೇ ಪ್ರಾಶಸ್ತ್ಯವೀಯುವ ಪ್ರವೃತ್ತಿ ಬಂಡವಾಳಶಾಹಿ ಬುದ್ಧಿ. ಮಿತಿಯಿಲ್ಲದ ಹಣಗಳಿಕೆಗೆ ಅವಕಾಶವೀಯುವ ಸರ್ಕಾರದ ಧೋರಣೆ ಬಂಡವಾಳಶಾಹಿ ಪ್ರಭುತ್ವ. ಇಂಗ್ಲಿಷ್ನ 'ಕ್ಯಾಪಿಟಲಿಸ್ಮ್' ಎಂಬುದಕ್ಕಿದು ಸಂವಾದಿ.
=====
ಬಡ್ಡಿ: ಸಾಲವಾಗಿ ಪಡೆದ ಹಣದ ಮೇಲೆ ಹೆಚ್ಚಿಗೆ ನೀಡಬೇಕಾದ ಮೊತ್ತವನ್ನು ಬಡ್ಡಿ ಎಂದು ಕರೆಯುವುದು ಎಲ್ಲರಿಗೂ ತಿಳಿದ ವಿಷಯ. ತಮಿಳು ಮಲಯಾಳಂಗಳಲ್ಲಿ ವಟ್ಟಿ ಎಂಬ ರೂಪದಲ್ಲಿಯೂ ತೆಲುಗಿನಲ್ಲಿ ವಡ್ಡಿ ಎಂಬ ರೂಪದಲ್ಲಿಯೂ ದೊರೆಯುತ್ತದಾದರೂ ಇದು ದ್ರಾವಿಡ ಮೂಲದ ಶಬ್ದವಾಗಿರದೆ ಸಂಸ್ಕೃತದ 'ವೃದ್ಧಿ' ಎಂಬುದರ ತದ್ಭವವಾಗಿದೆ. ಈ ಶಬ್ದಕ್ಕೆ ಆ ಭಾಷೆಯಲ್ಲಿ ಮೂಲತಃ ಹೆಚ್ಚುವುದು, ಬೆಳೆಯುವುದು ಎಂಬ ಅರ್ಥವಿದೆ. ಪ್ರಾಚೀನ ಕನ್ನಡ ಶಾಸನಗಳಲ್ಲಿ 'ವ್ರಿದ್ಧಿ' ಎಂಬ ರೂಪ ದೊರೆಯುತ್ತದೆ. (ವಯಸ್ಸು) ಹೆಚ್ಚಾದ ಅಥವಾ ವೃದ್ಧಿಯಾದ ಎಂಬರ್ಥದಲ್ಲಿ ಮುದುಕನನ್ನು ಸಂಸ್ಕೃತದಲ್ಲಿ ವೃದ್ಧ ಎಂದು ಕರೆದಂ ಕಾಣುತ್ತದೆ. ಸಾಲದ ಹಣ ಹೆಚ್ಚಾಗುವುದರಿಂದಾಗಿ ಆ ಹೆಚ್ಚಿನದನ್ನು ವೃದ್ಧಿ ಎಂದು ಕರೆದಂತೆ ತೋರುತ್ತದೆ. ಹಣವನ್ನು ಬಡ್ಡಿಗೆ ಕೊಟ್ಟು ಜೀವಿಸುವವನನ್ನು 'ವೃದ್ಧಿಜೀವಿಕಾ' ಎಂದೇ ಕರೆಯುತ್ತಿದ್ದರು. 'ಕಡಬಡ್ಡಿ' (ಸಾಲ ಬಡ್ಡಿ) ಎಂಬುದು ಒಟ್ಟಿಗೆ ಬಳಕೆಯಾಗುತ್ತಿದ್ದ ಪದ. ಕನ್ನಡ ಕಾವ್ಯಗಳಲ್ಲಿ ಕೆಲವೆಡೆ 'ಬಡ್ಡಿಕಾರ' ಎಂದು ಇದೇ ಅರ್ಥದಲ್ಲಿ ಬಳಸಲಾಗಿದೆ. 'ಬಡ್ಡಿಯುಣ್' ಎಂಬ ಮಾತನ್ನು ಬಡ್ಡಿಯ ಹಣದಿಂದ ಜೀವಿಸು ಎಂಬರ್ಥದಲ್ಲಿ ಬಳಸಲಾಗಿದೆ. ಹಡೆದೊಡವೆಯ ಮೃಡಭಕ್ತರಿಗಲ್ಲದೆ ಕಡಬಡ್ಡಿಯ ಕೊಡಲಾಗದು ಎಂಬುದು ಬಸವಣ್ಣನ ಮಾತು (ಭಕ್ತನು ತನ್ನಲ್ಲಿರುವ ಹಣವನ್ನು ಇತರ ಭಕ್ತರಿಗಾಗಿ ಬಳಸಬೇಕೇ ಹೊರತು ಬಡ್ಡಿಯ ಆಸೆಯಿಂದ ಸಾಲವಾಗಿ ಕೊಡಬಾರದು ಎಂಬುದು ಇಲ್ಲಿನ ಆಶಯ).
ಆಧುನಿಕ ಸನ್ನಿವೇಶದಲ್ಲಿ ಬಡ್ಡಿಯ ಪ್ರಭೇದಗಳನ್ನು ಗುರುತಿಸುತ್ತೇವೆ: ಸರಳ ಬಡ್ಡಿ, ಚಕ್ರ ಬಡ್ಡಿ - ಹೀಗೆ. 'ಚಕ್ರವೃದ್ಧಿ' ಎಂಬ ಮಾತು ಸಂಸ್ಕೃತದಲ್ಲಿಯೂ ದೊರೆಯುತ್ತದೆ. ಕೊಡಲು ತಡಮಾಡುವುದರಿಂದ ತೆರಬೇಕಾದ ಹೆಚ್ಚಿನ ಬಡ್ಡಿಯನ್ನು 'ಸುಸ್ತಿ ಬಡ್ಡಿ' ಎನ್ನುತ್ತಾರೆ. 'ಬಡ್ಡಿ ವ್ಯವಹಾರ' ಈಗ ಸಾಮಾನ್ಯ.
'ಬಡ್ಡಿಮಗ' ಎಂಬ ಒಂದು ಬೈಗುಳದ ಮಾತಿದೆ. ಇದಕ್ಕೂ ಬಡ್ಡಿಗೂ ಏನೇನೂ ಸಂಬಂಧವಿಲ್ಲ. ಈ ಸಮಾಸಪದದ ಮೊದಲ ಭಾಗವಾದ 'ಬಡ್ಡಿ' ಎಂಬುದು 'ಬೊಡ್ಡಿ' ಎಂಬುದರ ವ್ಯತ್ಯಸ್ತ ರೂಪ. ಅದು ಪೊಡ್ಡಿ< ಪೋಟಿ ಎಂಬ ಶಬ್ದದಿಂದ ಬಂದಿದೆ; ಈ ಶಬ್ದಕ್ಕೆ ಸೂಳೆ ಎಂಬರ್ಥವಿದೆ. (ತಮಿಳಿನಲ್ಲಿ ಪೊಟ್ಟಿ, ಮಲಯಾಳಂನಲ್ಲಿ ಪಟ್ಟಿ, ತುಳುವಿನಲ್ಲಿ ಪಡಪೆ, ಪಡಪ್ಪೆ ರೂಪಗಳಿವೆ). ಈಗ ಬೈಗುಳದ ಅರ್ಥ ಸ್ಪಷ್ಟವಾಗುತ್ತದಲ್ಲವೇ!
=====
ಬಯಕೆ: ಆಸೆ ಎಂಬರ್ಥದ ಈ ಶಬ್ದವು ತಮಿಳಿನಲ್ಲಿ 'ವಯಮ್' ಎಂದೂ ತೆಲುಗಿನಲ್ಲಿ 'ಬಯ್ಯಂಕ' ಎಂದೂ ತುಳುವಿನಲ್ಲಿ ಬಯಕೆ' ಎಂದೂ ಬಳಕೆಯಲ್ಲಿದೆ. "ಬಯಕೆ ತೀರದ ಕಾರಣದಿಂ ವಿಪರ್ಯಯಂ" ಎಂಬ ಮಾತು 'ಕವಿರಾಜಮಾರ್ಗ'ದ್ದು. "ಸಾಮದೊಳಂ ಪದವಡದೊಡೆ ಬೞಿಕಿರ್ದಪ್ಪುದಲ್ತೆ ಮದವಡಿಸಲೆನ್ನ ಬಯಕೆಯ ದಂಡಂ" ಎಂಬ 'ಆದಿಪುರಾಣ'ದ ಮಾತಿನಲ್ಲಿ ಈ ಶಬ್ದಕ್ಕೆ ಇಷ್ಟ ಎಂಬರ್ಥ ಬಂದಿದೆ. ನೇಮಿಚಂದ್ರ ತನ್ನ 'ಲೀಲಾವತಿ'ಯಲ್ಲಿ ಈ ಶಬ್ದವನ್ನು ಆಸೆಬುರುಕ ಎಂಬರ್ಥದಲ್ಲಿ ಬಳಸುವಂತೆ ತೋರುತ್ತದೆ: "ಅಹಂಕಾರದೊಳ್ ಬಾತು ಬಲ್ಮೆಗೆ ಹಾರೈಸುವರೇಕೆ ಬಯಕೆಗವಿಗಳ್" (ಬಯಕೆ+ಕವಿ). "ಹುಲುಬಯಕೆ ಬಾ ಎನಲು ಓ ಎಂದು ಬಾರದಿರು ವಾತಾಪಿಯಂದದೊಳು ಬಾಳನೊಡೆದು" ಎಂಬ ಆಶಯ ನುಡಿ ಪುತಿನ ಅವರ 'ಅಹಲ್ಯೆ' ನಾಟಕದ್ದು. ಮಧುರಚೆನ್ನರ 'ನನ್ನ ನಲ್ಲ' ಎಂಬ ಪ್ರಸಿದ್ಧ ಕವನದಲ್ಲಿ "ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು, ಬಯಕೆ ಬರುವದರ ಕಣ್ಸನ್ನೆ ಕಾಣೋ" ಎಂಬ ಸಾಲುಗಳಿವೆ.
ಈ ಶಬ್ದವು 'ಬಯಕ್ಕೆ' ಎಂಬ ರೂಪದಲ್ಲಿಯೂ ಬಳಕೆಗೊಂಡಿದೆ. "ಸೂಡುಶಯ್ಯೆಗಳ ಬಯಕ್ಕೆ ಜೊಂಪಲರ್ದವು" ಎಂಬ ಮಾತು 'ಪಂಪಭಾರತ'ದಲ್ಲಿನದು. ಹಾಗೆಯೇ "ಭವಸಂತಾನಂಗಳೊಳ್ ಕೂರ್ಪ ಕೂಡುವ ತೞ್ತಿರ್ಪ ಬಯಕ್ಕೆಯಂ ಬಯಸುಗುಂ" ಎಂಬ ಮಾತು ಪೊನ್ನನ 'ಶಾಂತಿಪುರಾಣ'ದಲ್ಲಿದೆ. ಈ ಶಬ್ದಕ್ಕೆ 'ಬಯ್ಕೆ' ಎಂಬ ರೂಪವೂ ಇದೆ. "ಚದುರರ ಮೆಚ್ಚು ಭಾವುಕರ ಕೈಪಿಡಿ ಜಾಣರ ಬಯ್ಕೆ" ಎಂಬ ಮಾತು 'ಸೂಕ್ತಿಸುಧಾರ್ಣವ'ದ ಒಂದು ಪದ್ಯದಲ್ಲಿನ ಮಾತು.
ಈ ಮಾತನ್ನು ವಿಶೇಷವಾಗಿ ಬಸುರಿ ಹೆಂಗಸಿನ ಅಭೀಪ್ಸೆಗಳಿಗೆ ಅನ್ವಯಿಸುವುದುಂಟು. "ಗರ್ಭಿಣಿಗಳಪ್ಪ ಕಾಮಿನಿಯರ್ ಬಯಸುವ ಬಯಕೆ ದೋಹಲಂ ದೌಹೃದಮುಂ" ಎಂದು 'ಅಭಿಧಾನ ವಸ್ತುಕೋಶ'ವು ವಿವರಣೆ ನೀಡುತ್ತದೆ. "ಆಕೆಗೆ ಎಲ್ಲ ಜೀವಂಗಳಂ ದಯೆಗೆಯ್ವ ಬಯಕೆಯಾದುದು" ಎಂದು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. ಗರ್ಭಿಣಿ ಹೆಂಗಸನ್ನು ನಯಸೇನನ 'ಧರ್ಮಾಮೃತ'ದಲ್ಲಿ ಬಯಕೆವೆಂಡಿರ್ ಎಂದು ಕರೆದಿದೆ: "ಬಯಕೆವೆಂಡಿರಂತೆ ಉಗುಳುತ್ತುಂ". ಮುದ್ದಣನು ತನ್ನ 'ರಾಮಾಶ್ವಮೇಧ'ದಲ್ಲಿ ಅಕ್ಷಯಪಾತ್ರೆಯನ್ನು 'ಬಯಕೆವಟ್ಟಲ್' ಎಂದು ಕರೆದಿದ್ದಾನೆ. ಈಗಲೂ ಗರ್ಭಿಣಿಯರ ಸೀಮಂತವನ್ನು 'ಬಯಕೆ ಮಾಡು' ಎನ್ನುತ್ತಾರೆ. ಬಯಕೆಗಪ್ಪು ಅಥವಾ ಬೈಕೆಗಪ್ಪು ಬಸುರಿಯರಿಗೆ ಹಚ್ಚುವ ಕಾಡಿಗೆ. ಆಸೆ ಎಂಬರ್ಥದಲ್ಲಿ 'ಬಯಕ್ಕೆ' ಎಂಬ ರೂಪವೂ ಬಳಕೆಯಲ್ಲಿತ್ತು. "ಜಿನಭವನಂಗಳಂ ಮಾಳ್ಪ .. .. ಚತುರ್ವಿಧ ದಾನಮಂ ಮಾಳ್ಪ ಬಯಕ್ಕೆಯಾಯ್ತು ಜಿನದತ್ತೆಗೆ" ಎಂಬುದು ನೇಮಿಚಂದ್ರನ 'ಆರ್ಧನೇಮಿಪುರಾಣ'ದ ಮಾತು.
ಈ ಶಬ್ದ ಹಾಗೂ ಇದರ ರೂಪಾಂತರಗಳು ಹಿಂದೆ ಮತ್ತೊಂದು ಆರ್ಥದಲ್ಲಿಯೂ ಬಳಕೆಯಲ್ಲಿತ್ತು. ಅದೆಂದರೆ ನಿಧಿ ಎಂಬುದು. "ಕವರಲ್ ಬಂದಂಗೆ ಬಯಕೆಯಂ ತೋದರೆಂಬಂತೆ" ಎಂಬುದು 'ಧರ್ಮಾಮೃತ'ದ ಮಾತು.. "ಸತ್ತ ಹೆಣ ಕೂಗಿದುದುಂಟು ಬೈತಿಟ್ಟ ಬಯಕೆ ಕರೆದುದುಂಟು ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು" ಎಂಬುದು ಮಹಾದೇವಿಯಕ್ಕನ ಒಂದು ವಚನದ ಭಾಗ. 'ಬೈಕೆ' ರೂಪಕ್ಕೂ ಈ ಅರ್ಥವಿದೆ: "ಇವರ ಬಯ್ತ ಬೈಕೆಯಂ ಆ ಪೊಳಲ ಕಳ್ಳನೊರ್ವಂ .. .. ಕಂಡು" ಎಂಬ ವಾಕ್ಯಖಂಡ ಕರ್ಣಪಾಯನ 'ನೇಮಿನಾಥಪುರಾಣ'ದ್ದು. "ಬೈಚಿಟ್ಟ ಬೈಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ ಸ್ವಾಮಿದ್ರೋಹಿಕೆಯಲ್ಲವೇ?" ಎಂಬುದು ಅರಿವಿನ ಮಾರಿತಂದೆಯ ವಚನದ ಸಾಲು. ಬ್ರಹ್ಮಶಿವ ತನ್ನ 'ಸಮಯ ಪರೀಕ್ಷೆ'ಯಲ್ಲಿ 'ಬಯ್ಕೆ' ರೂಪವನ್ನು ಬಳಸುತ್ತಾನೆ. "ಫಣಿಕಟಕನ ಕೆೞಗೆ ಬಯ್ಕೆಯಿರ್ದಪುದೆಂಬರ್". ಈ ಶಬ್ದ ವಿಸ್ತಾರಗೊಂಡು ಒತ್ತೆಯಿಡು ಎಂಬರ್ಥದಲ್ಲಿ 'ಬೈಕೆಗೊಡು' ಎಂಬ ರೂಪದಲ್ಲಿ ಬಳಕೆಯಾಗಿದೆ: "ಬಗೆಗೆ ಬಂದೊಡಮೆಯಂ ಒಲ್ದಾ ನೆರೆದಾಗಳೆ ಕುಡಿ ಎಂದಾ ನೃಪತಿಗೆ ಕೈಕೆ ಬೈಕೆಗೊಟ್ಟಳ್ ಮೆಚ್ಚಂ" ಎಂಬುದು 'ಪಂಪರಾಮಾಯಣ'ದ ಮಾತು.  'ಸಮಯಪರೀಕ್ಷೆ'ಯು 'ಬಯ್ಕೆಗೊಳ್' ರೂಪವನ್ನು ಅಡಗಿಸಿಕೊ ಎಂಬರ್ಥದಲ್ಲಿ ಬಳಸುತ್ತದೆ: "ಮುನಿವಂದು ಅಧಿಕಂ ಗಡ ದೇವನಿಕಾಯದೆ ಬಯ್ಕೆಗೊಂಡು .. .. ಬಸಿಳಿಕ್ಕಿದಂ ಶಸ್ತ್ರಚಯಮುಮಂ".
ಈ ಶಬ್ದಕ್ಕೆ 'ಬಯ್' ಎಂಬ ಧಾತು ಮೂಲ. ತಮಿಳಿನಲ್ಲಿದು 'ವೈ' ಎಂದೂ, ಮಲಯಾಳಂನಲಲ್ಲಿ 'ವೆಕ್ಕ' ಎಂದೂ, ತೆಲುಗಿನಲ್ಲಿ 'ವೇಯು' ಎಂದೂ ಬಳಕೆಯಲ್ಲಿದೆ. ಅದರರ್ಥ ಮರೆಮಾಚು, ಅಡಗಿಸು ಎಂದು. "ಬಯ್-ನಿಕ್ಷೇಪೇ" ಎಂದು 'ಶಬ್ದಮಣಿದರ್ಪಣ' ಅರ್ಥ ನೀಡುತ್ತದೆ. "ಅದನಾತಂ ಬಯ್ದೊನಲ್ಲ ನಾಂ ಬಯ್ದೆಂ" ಎಂಬುದು 'ವಡ್ಡಾರಾಧನೆ'ಯಲ್ಲಿನ ಪ್ರಯೋಗ. "ವಿಷಾನಿಲದಂಷ್ಟ್ರಂ ಶ್ವಯುವಾಗಿ ಪುಟ್ಟಿ ಸುೞಿಗುಂ ಮುಂ ಬಯ್ತ ಭಂಡಾರದೊಳ್" ಎಂಬ ಪಂಪನ 'ಆದಿಪುರಾಣ'ದ ಸಾಲಿನಲ್ಲಿಯೂ ಈ ಅರ್ಥವಿದೆ. ಇದು ಕೂಡ ಕಬೈಕಿ ಎಂಬ ರೂಪದಲ್ಲಿ ಬಳಕೆಯಲ್ಲಿತ್ತು: "ನಾರಾಯಣ ಬಾಹುದಡದಳವಂ ನೋಡಲ್ ಗದಾದಂಡದಿಂ ಹಲಂ ಕೂಡಿದ ಚಾಪ ದಂಡಯುಗಮಂ ಬೈತಲ್ಲಿ ಕಾದಿರ್ಪುದುಂ" ಎಂಬ ವಾಕ್ಯ ನಾಚಂದ್ರನ 'ಪಂಪರಾಮಾಯಣ'ದಲ್ಲಿ  ಬಂದಿದೆ. ಈ ಶಬ್ದವು 'ಬಯ್ಚಿಡು' ಎಂಬ ರೂಪದಲ್ಲಿಯೂ ಬಳಕೆಯಲ್ಲಿದೆ. "ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು" ಎಂಬುದು ಬಸವಣ್ಣನ ವಚನದ ಸಾಲು.
ಒಂದೇ ಶಬ್ದದ ವಿವಿಧ ರೂಪಗಳು ದೊರೆಯುವುದೇತಕ್ಕೆ? ಪ್ರಾಯಶಃ ಅದರ ಉಚ್ಚಾರಣೆ ವಿವಿಧವಾಗಿರಬಹುದು, ಹಾಗಿರುವುದು ಹೆಚ್ಚು ಸಾಧ್ಯ. ಆಡುಮಾತಿನ ಬಳಕೆಯ ಶಬ್ದಗಳೇ ಗ್ರಾಂಥಿಕಗೊಂಡು ಶಿಷ್ಟೀಕರಣಗೊಳ್ಳುತ್ತವೆ. ಅಂದರೆ ವಿವಿಧ ರೂಪಗಗಳಲ್ಲಿ ಉಚ್ಚಾರಣೆಯಲ್ಲಿದ್ದ ಶಬ್ದದ ಬರವಣಿಗೆಯ ರೂಪವು ಅದನ್ನು ಬಳಸುವ ವ್ಯಕ್ತಿಯನ್ನು ಅವಲಂಬಿಸುತ್ತದೇನೋ. ಅಂದರೆ ಹೆಚ್ಚು ಗೌರವಾನ್ವಿತನಾದವನ ಬಳಕೆಯನ್ನು ಜನರು ಅನುಸರಿಸುವುದು ರೂಢಿ. ಆದರೂ ಕೆಲ ಕವಿಗಳು ಅದರ ವಿಭಿನ್ನ ರೂಪಗಳನ್ನೂ ಬಳಸುವುದಕ್ಕೆ ಪ್ರಾಯಶಃ ಕಾರಣ, ಛಂದಸ್ಸಾಗಿರಬಹುದು, ತನ್ನ ಕಾವ್ಯದ ಭಾಷೆಗೆ ತಕ್ಕುದಾಗಿರಬಹುದು ಅಥವಾ ತನಗೇ ಅದು ಸರಿಯೆನ್ನಿಸಿದ್ದಿರಬಹುದು. ಜನರ ಬಳಕೆಯಲ್ಲಿ ಯಾವ ರೂಪಗಳಿದ್ದುವು, ಯಾವಾಗ ಬರವಣಿಗೆಯಲ್ಲಿ ಈ ರೂಪಗಳು ಬಂದುವು ಎಂದು ಹೇಳವುದು ಅಸಾಧ್ಯದ ಮಾತು, ಏಕೆಂದರೆ ನಮಗೀಗ ದೊರೆಯುವುದು ಬರಹದ ರೂಪವೇ ಹೊರತು, ಆಡು ಮಾತಿನ ರೂಪಗಳಲ್ಲ. ಹಾಗಾಗಿ ಇದನ್ನು ನಾವು ತಾರ್ಕಿಕ ಮಂಡನೆಯಿಂದಲೇ ಊಹಿಸಬೇಕಾಗುತ್ತದೆ.
ಈಗ ಈ ಶಬ್ದದ ವಿವೇಚನೆಗೆ ಬರೋಣ. ಬಯಕೆ ಎಂಬ ಶಬ್ದದ ಎರಡೂ ಅರ್ಥದ - ಆಸೆ ಮತ್ತು ನಿಧಿ - ನಾಮರೂಪಗಳಿಗೆ ಒಂದೇ ಮೂಲವಿರಬಹುದೇ? ಅಂದರೆ 'ಬಯ್' ಎಂಬ ಧಾತುವೇ ಎರಡಕ್ಕೂ ಮೂಲವಾಗಿರಬಹುದೇ ಎಂಬ ಅನುಮಾನ ಮೂಡುತ್ತದೆ. ಸಾಮಾನ್ಯವಾಗಿ ಒಂದು ಶಬ್ದದ ಎರಡು ಅರ್ಥಗಳಲ್ಲಿ ಒಂದು ಇಂದ್ರಿಯಗ್ರಾಹ್ಯವಾಗಿದ್ದು, ಮತ್ತೊಂದು ಅಮೂರ್ತವಾದುದಾಗಿದ್ದರೆ, ಮೊದಲ ಅರ್ಥವು ಮೊದಲು ರೂಪಿತವಾಗಿ ಆನಂತರ ಎರಡನೆಯದು ಬಂದಿರುವುದು ಹೆಚ್ಚು ಸಂಭಾವ್ಯ. ಇದನ್ನೊಂದು ಉದಾಹರಣೆಯಿಂದ ಸ್ಪಷ್ಟಪಡಿಸಬಹುದು. 'ಮಂಕು' ಎಂಬ ಶಬ್ದಕ್ಕೆ ಎರಡರ್ಥವಿದೆ: ಕಾಂತಿ ಕಡಿಮಯಾಗುವುದು ಮತ್ತು ದಡ್ಡತನ ಎಂದು. ಉರಿಯುವ ದೀಪ ಬರಬರುತ್ತ (ಕಾರಣ ಯಾವುದೇ ಇರಲಿ) ತನ್ನ ಬೆಳಕನ್ನು ಕಡಿಮೆ ಮಾಡಿಕೊಳ್ಳುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಸ್ಥಿತಿಯನ್ನು ಮುಂದೆ ಅಮೂರ್ತ ಕಲ್ಪನೆಗೆ, ಅಂದರೆ ಕಾಣದ ಬುದ್ಧಿಯ ಕಾಂತಿಹೀನತ್ವಕ್ಕೆ ಅನ್ವಯಗೊಳಿಸಿರಬೇಕು. ಅಂದರೆ ಕಾಲಕ್ರಮೇಣ ಅದೊಂದು ರೂಪಕವಾಗಿ ಮಾರ್ಪಾಟಾಗುತ್ತದೆ. ಮೊದಲು ಅಮೂರ್ತವಾದುದಕ್ಕೆ ಪದ ರೂಪಿತವಾಗಿ ಆನಂತರ ಸ್ಪಷ್ಟವಾದದ್ದಕ್ಕೆ ಅನ್ವಯಿಸಿರುವುದು ಪ್ರಾಯಶ ಅಸಂಭವ.
ಇದರಂತೆಯೇ ಕಣ್ಣಿಗೆ ಕಾಣುವ  ಹಣ, ಒಡವೆ, ಅಥವಾ ವಸ್ತುಗಳನ್ನು ಕಾಣದಂತೆ ಅಡಗಿಸಿಡುವ ಕ್ರಿಯೆಗೆ ಮೊದಲು ಬಯ್ ಎಂಬ ರೂಪ ಬಳಕೆಗೆ ಬಂದು, ಆ ಕ್ರಿಯೆಯ ನಾಮರೂಪವಾದ ಬಯ್ಕೆ ಮತ್ತದರ ರೂಪಾಂತರಗಳು ಬಂದಿರಬಹುದು. ಇನ್ನು, ಆಸೆ ಎಂಬರ್ಥವು ಅದರ ಮುಂದಿನ ಹಂತವಿರಬೇಕು. ಅಂದರೆ ಮನಸ್ಸಿನಲ್ಲಿ ಇತರರಿಗೆ ಕಾಣದಂತಿರಿಸಿಕೊಳ್ಳುವ ಭಾವನೆ, ಅಂದರೆ 'ಆಸೆಪಡು' ಎಂಬರ್ಥದಲ್ಲಿ ಅಮೂರ್ತವಾದುದಕ್ಕೆ ಈ ಧಾತು ಅನ್ವಯಗೊಂಡು, ಅದು ಮುಂದೆ ಆಸೆ ಎಂಬ ಅರ್ಥದ ಬಯ್ಕೆ ಎಂಬ ನಾಮರೂಪವನ್ನು ಪಡೆದಿರಬೇಕು ಅನ್ನಿಸುತ್ತದೆ. ಈಗ ನಿಧಿ ಎಂಬರ್ಥದಲ್ಲಿ 'ಬಯಕೆ' ಅಥವಾ 'ಬೈಕೆ' ಶಬ್ದ ಬಳಕೆಯಲ್ಲಿಲ್ಲ. ಇದಕ್ಕೆ ಕಾರಣ 'ನಿಧಿ' 'ನಿಧಾನ' ಮುಂತಾದ ಸಂಸ್ಕೃತ ಶಬ್ದಗಳೇ ವ್ಯಾಪಕ ಬಳಕೆಯಲ್ಲಿ ಬಂದಿರಬೇಕು.
'ಬಯ್' ಧಾತುವಿಗೆ ಇನ್ನೂ ಒಂದರ್ಥವಿದೆ, ಅವಹೇಳನ ಮಾಡು ಎಂದು. ಈ ಅರ್ಥದಲ್ಲಿ 'ವೈ' ಎಂಬ ರೂಪ ತಮಿಳಿನಲ್ಲಿದೆಯಂತೆ. ತೆಲುಗು ತಮಿಳುಗಳಲ್ಲಿ ತೆಗಳು ಎಂಬರ್ಥದಲ್ಲಿ 'ತಿಟ್ಟು' ಎಂಬ ಶಬ್ದವಿದೆ. ಕನ್ನಡದಲ್ಲೂ ಈ ಪದ ಅಲ್ಪಸ್ವಲ್ಪ ಬಳಕೆಯಲ್ಲಿದೆ.  ಬೈಗುಳ ಬೇರೆಯವರ ಬಗ್ಗೆ ಮುಚ್ಚಿಟ್ಟುಕೊಂಡ ಭಾವನೆಯ ಹೊರ ರೂಪವೇ ತಾನೇ! ಹಾಗಾಗಿ ಇದೂ ಅದೇ ಮೂಲದಿಂದ ಬಂದಿರಬಹುದೇ? ಅಲ್ಲದೆ, ಹೀಗೆ ಒಂದೇ ಶಬ್ದರೂಪಕ್ಕೆ ಬೇರೆ ಬೇರೆ ಅರ್ಥಗಳು ಬರುವುದಕ್ಕೇನು ಕಾರಣ ಎಂಬುದೂ ವಿಚಾರಣೀಯವೇ.
=====
ಬಸವ: ಇದು ಸಂಸ್ಕೃತ ಶಬ್ದವಾದ 'ವೃಷಭ' ಎಂಬುದರ ತದ್ಭವ. ಇದರ ಮೂಲ ಅರ್ಥ ಹೋರಿ ಅಥವಾ ಎತ್ತು ಎಂದು. ಈ ಅರ್ಥದಲ್ಲಿ ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಈ ಶಬ್ದ ಬಳಕೆಗೊಂಡಿದೆ: "ಬಸವಂ ಸತ್ತಿರ್ದಡೆ ಸಂತಸದಿಂದಂ ಮೀಸಿ ಪೂಜಿಸುತೆ .. .." ದೇವರಿಗೆ ಮೀಸಲಿಡುವ ಹೋರಿಯನ್ನೂ ಬಸವ ಎಂದು ಕರೆಯುತ್ತಾರೆ. ಇಂತಹ ಹೋರಿಗಳ ಮೈಮೇಲೆ ಗುರುತುಮಾಡುವ ಪರಿಪಾಟವೂ ಉಂಟು: "ಬೀದಿಯ ಬಸವಂಗೆ ದೇವಾಲಯದ ಪಶುವಿಂಗೆ ಹುಟ್ಟಿದ ಕರು ಬಸವಗಳಪ್ಪುವೇ ಲಿಂಗಮುದ್ರಯನೊತ್ತದನ್ನಕ್ಕರ" ಎಂಬುದು ಚೆನ್ನಬಸವಣ್ಣನ ವಚನದ ಮಾತು. ಇದಕ್ಕೆ 'ಬಸವನ ಮುದ್ರೆ' ಎಂದೇ ಕರೆಯುತ್ತಿದ್ದರು: "ಮುದ್ದು ಮಾಡಿ ಸಾಕಿ ಮಗನಿಗೆ ಬಸವನ ಮುದ್ರೆಯ ಒತ್ತಿದ್ಯೇನೇ" ಎಂಬುದು ಪುರಂದರದಾಸರ ಹಾಡಿನ ಮಾತು. ಮುಂದೆ ಅದು ದೇವರ ಮೀಸಲ ಇತರ ಪ್ರಾಣಿಗಳಿಗೂ ಅನ್ವಯವಾಯಿತು, ಮನುಷ್ಯರಿಗೂ ಅನ್ವಯವಾಯಿತು. ಬಸವ ನಂದಿಯ ವಾಹನ ಎಂಬ ಕಾರಣದಿಂದ ಅದು ಜನರಿಗೆ ಪೂಜ್ಯವೂ ಆಯಿತು. 'ಬಸವ ನೋಂಪಿ'ಯ ಪ್ರಸ್ತಾಪ ಅನೇಕ ಕಡೆಗಳಲ್ಲಿದೆ.
ಕನ್ನಡ ತೆಲುಗುಗಳಲ್ಲಿ ಬಸವ ಎಂಬುದು ವ್ಯಕ್ತಿಯ ಅಂಕಿತನಾಮವೂ ಆಗಿದೆ. ಬಸವ ಎಂಬ ಪದಕ್ಕೆ ಅಣ್ಣ, ಅಪ್ಪ, ಅಯ್ಯ ಮುಂತಾದ ಸಂಬಂಧಸೂಚಕ ಪದಗಳೂ ಸೇರುತ್ತವೆ. ಬಸವಣ್ಣ ಕನ್ನಡ ಸಂಸ್ಕೃತಿಯ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲೊಬ್ಬ. ಹರಿಹರ ಕನ್ನಡದಲ್ಲಿ 'ಬಸವರಾಜದೇವರರಗಳೆ' ಎಂಬ ಕಾವ್ಯವನ್ನು ಬರೆದರೆ, ಪಾಲ್ಕುರಿಕೆ ಸೋಮನಾಥನು ತೆಲುಗಿನಲ್ಲಿ 'ಬಸವ ಪುರಾಣಮು'ವನ್ನು ರಚಿಸಿದ. ಮೊದಲಿನಿಂದ ಬಂದ ಬಸವಪೂಜೆಯ ಜೊತೆ ಹೊಂದಿಸಿ ಬಸವಣ್ಣನ ಹುಟ್ಟಿದ ದಿನವೆಂದು ಪುರಾಣಗಳಲ್ಲಿ ಉಕ್ತವಾದ ವೈಶಾಖ ಶುದ್ಧ ತದಿಗೆಯನ್ನು 'ಬಸವಜಯಂತಿ'ಯಾಗಿ ಆಚರಿಸುವ ಸಂಪ್ರದಾಯ ಉಂಟಾಯಿತು. ಬಸವ ಎಂಬ ತದ್ಭವ ಶಬ್ದಕ್ಕೆ ಈಶ್ವರ ಸೇರಿಸಿದರೆ ಬಸವೇಶ್ವರ ಎಂಬ ರೂಪವಾಗುತ್ತದೆ, ಹಾಗೆಯೇ ಬಸವಪ್ರಭು. ಬಸವನಗೌಡ ಮುಂತಾದೆಡೆಗಳಲ್ಲಿ ಬಸವಣ್ಣ ಎಂಬುದರ ಕೊನೆಯ ದ್ವಿತ್ವ ಸವಕಳಿಗೊಂಡಿದೆ. ಯಜಮಾನನ ಮಾತಿಗೆ ತಲೆಯಾಡಿಸುವ ಅಲಂಕೃತ ಎತ್ತನ್ನು 'ಕೋಲೆ ಬಸವ' (<ಕೌಲೆ<ಕವಿಲೆ) ಎನ್ನುತ್ತಾರೆ; ಎಲ್ಲದಕ್ಕೂ ಒಪ್ಪುವವನಿಗೂ ಈ ಹೆಸರು ಸಲ್ಲುತ್ತದೆ.
=====
ಬಿಟ್ಟಿ: ಬಿಟ್ಟಿ ಎಂಬುದು ಈಗ ಪುಕ್ಕಟೆ, ಪ್ರತಿಫಲವಿಲ್ಲದ ಎಂಬರ್ಥದಲ್ಲಿ ಬಳಕೆಗೊಳ್ಳುತ್ತಿರುವ ಶಬ್ದ. ಇದು 'ವಿಷ್ಟಿ' ಎಂಬ ಸಂಸ್ಕೃತ ಶಬ್ದದ ತದ್ಭವ. ಇದು ಪ್ರಾಕೃತದಲ್ಲಿ ವಿಟ್ಠಿ ಎಂಬ ರೂಪದಲ್ಲಿ ದೊರೆಯುತ್ತದೆ. ಯುದ್ಧಕಾಲದಲ್ಲಿ 'ಕೂಲಿಯಿಲ್ಲದೆ ನಿರ್ಬಂಧದಿಂದ ಮಾಡಿಸುತ್ತಿದ್ದ ಕೆಲಸ'ವನ್ನು ಬಿಟ್ಟಿ ಎನ್ನುತ್ತಿದ್ದರು. ವಿಷ್ಟಿ ಶಬ್ದವು ಮೊದಲು ಕಾಣಿಸಿಕೊಳ್ಳುವುದು ಕೌಟಿಲ್ಯನ 'ಅರ್ಥಶಾಸ್ತ್ರ'ದಲ್ಲಿ. "ಶಿಬಿರ ಮಾರ್ಗ ಸೇತು ಕೂಪ ತೀರ್ಥ ಶೋಧನಕರ್ಮ, ಯಂತ್ರಾಯುಧೋಪಕರಣ ಗ್ರಾಸ ವಹನಂ, ಅಯೋಧನಾಚ್ಯ ಪ್ರಹರಣಾವರಣ ಪ್ರತಿವಿದ್ದ ಅಪನಯನಮಿತಿ ವಿಷ್ಟಿಕರ್ಮಾಣಿ" ಎಂಬುದು ಅಲ್ಲಿನ ವಿವರಣೆ. ಎಂದರೆ ಶಿಬಿರ, ದಾರಿ, ಸೇತುವೆ, ಬಾವಿ, ನೀರು ಇವುಗಳನ್ನು ಸರಿಪಡಿಸುವುದು ಶೋಧನ ಕರ್ಮ ಎಂಬ ಬಿಟ್ಟಿ; ಆಯುಧಗಳು, ಯಂತ್ರಗಳು, ಆವರಣಗಳು, ಉಪಕರಣಗಳು ಆಹಾರ - ಇವುಗಳನ್ನು ಹೊತ್ತು ಸಾಗಿಸುವುದು ವಹನಕರ್ಮ ಎಂಬ ಬಿಟ್ಟಿ; ಯುದ್ಧದಲ್ಲಿ ಸತ್ತವರನ್ನು ಅಥವಾ ಗಾಯಗೊಂಡವರನ್ನು ಹೊತ್ತೊಯ್ಯುವುದು ಅಪನಯನ ಕರ್ಮ ಎಂಬ ಬಿಟ್ಟಿ. ಹೀಗೆ ಬಿಟ್ಟಿಗಳು ಮೂರು ಬಗೆಯಾದ್ದರಿಂದ ಕನ್ನಡದಲ್ಲಿ ಅದನ್ನು ಮೂವಿಟ್ಟಿ ಎನ್ನುತ್ತಿದ್ದರು (ಮೂರು+ಬಿಟ್ಟಿ). ಕನ್ನಡದಲ್ಲಿ 'ಮೂವಿಟ್ಟಿ' ಎಂಬ ಪದವು 'ಪಂಪಭಾರತ'ದಲ್ಲಿಯೇ ಬಂದಿದೆ. ಅಲ್ಲಿನ 'ಮೂವಿಟ್ಟಿಯ ಒಕ್ಕಲ್' ಎಂಬ ಮಾತಿಗೆ ಮೂವಿಟ್ಟಿ ಮಾಡುವ ಜನ ಎಂದರ್ಥ.
ಯುದ್ಧಕಾಲದಲ್ಲಿ ರಾಜನ ಸೈನ್ಯವು ಸಾಗುವ ದಾರಿಯ ಅಕ್ಕಪಕ್ಕದ ಊರುಗಳಲ್ಲಿನ ಯುವಕರನ್ನು ಕರೆಸಿಕೊಂಡು ಈ ಬಿಟ್ಟಿ ಕೆಲಸಗಳನ್ನು ಮಾಡಿಸುತ್ತಿದ್ದರು. ಇದಕ್ಕೆ ಕೂಲಿಯಿಲ್ಲದ್ದರಿಂದಾಗಿ ಜನರಿಗೆ ಬಿಟ್ಟಿ ಎಂದರೆ ಹೆದರಿಕೆಯಿರುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಬಿಟ್ಟಿಬೆಸ, ಬಿಟ್ಟಿಗೆಯ್ಮೆ, ಬಿಟ್ಟಿಗೆಲಸ ಎಂಬ ಶಬ್ದಗಳೂ ಹಳೆಯ ಕಾವ್ಯಗಳಲ್ಲಿ ಸಿಕ್ಕುತ್ತದೆ. ಪುಕ್ಕಟೆ ಕೆಲಸಕ್ಕೆ ಹೋಗುವುದನ್ನು 'ಬಿಟ್ಟಿವೋಗು' ಎಂದೇ ಕರೆಯುತ್ತಿದ್ದರು. ಕೆಲವು ವೇಳೆ ರಾಜನು (ಯುದ್ಧಕಾಲದಲ್ಲಿ?) ಕೊಟ್ಟಣದಲ್ಲಿ ಬತ್ತ ಕುಟ್ಟಿಸುತ್ತಿದ್ದ, ಅದೂ ಕೂಲಿಯಿಲ್ಲದೆ. ಇದನ್ನು 'ಕೊಟ್ಟಣ ಹಾಕಿಸು' ಎಂದು ಶಾಸನಗಳು ಕರೆಯುತ್ತವೆ. ಹೀಗಾಗಿ ಬಿಟ್ಟಿ ಎಂದರೆ ವ್ಯರ್ಥ ಎಂಬ ಅರ್ಥವೂ ಪ್ರಾಪ್ತವಾಯಿತು. 'ಬಿಟ್ಟಿವೇಳ್' ಎಂದರೆ ವ್ಯರ್ಥವಾದ ಮಾತಾಡು ಎಂಬ ರೂಪವು ಬಂದಿದೆ. ಭಕ್ತಿಯಿಲ್ಲದೆ ಮಾಡುವ ಪೂಜೆಯನ್ನು ಬಸವಣ್ಣನು 'ಅರಸಯದ ಬಿಟ್ಟಿ' ಎನ್ನುತ್ತಾನೆ. ಯುದ್ಧಕಾಲದಲ್ಲಿ ರಾಜನಿಗೆ ಅವನ ಕಣ್ಣಿಗೆ ಬೀಳುವಂತೆ ಬಿಟ್ಟಿಯ ಮೂಲಕ ಸಹಾಯ ಮಾಡಿದರೆ ಶಾಂತಿಕಾಲದಲ್ಲಿ ಅವನು ಸಹಾಯಮಾಡಿಯಾನು; ಆದರೆ ರಾಜನಿಗೆ ತಿಳಿಯದೆ ಮಾಡಿದ ಬಿಟ್ಟಿ ವ್ಯರ್ಥ ಎಂಬುದು ಬಸವಣ್ಣನ ಮಾತಿನ ಅರ್ಥ.
=====
ಬಿಸಿಲು: ಸೂರ್ಯನ ಬೆಳಕನ್ನು ತಿಳಿಸುವ ಕನ್ನಡದ ಈ ಶಬ್ದ ತಮಿಳು ಮಲಯಾಳಂಗಳಲ್ಲಿ 'ಚೆಯಿಲ್' ಎಂದೂ, ತುಳುವಿನಲ್ಲಿ 'ಬಿಸುಲು' ಎಂದೂ ಬಳಕೆಯಲ್ಲಿದೆ. "ನಡುವಗಲ ಬಿಸಿಲ್ ತನ್ನಂ ಸುಡೆ ವನಕರಿ .. .. ಪೊಕ್ಕುದಾಗ ಬಗೆದಾ ಕೊಳನಂ" ಎಂಬುದು 'ಕವಿರಾಜಮಾರ್ಗ'ದ ಮಾತು. ಖಬಿಸಿಲಂ ಬೆಳ್ದಿಂಗಳುಮಂ ಪಸರಿಸೆ ಕೞ್ತಲೆ ತೆರಳ್ದು" ಎಂಬ ವರ್ಣನೆ 'ಆದಿಪುರಾಣ'ದ್ದು. ವಿಶಿಷ್ಟವಾಗಿ ತಯಾರಿಸಿದ "ತಿಲತೈಲಮನಲ್ಲಿ ಪೊಯ್ದು ಬೞಿಕೇಳುದಿನಂ ಬಿಸಿಲೊಳದನಿಟ್ಟು ಚಂಪಕಕುಸುಮದಿನಿಂಬಾಗೆ" ಪ್ರತಿವಾಸನೆಯಿತ್ತರೆ ಚಂಪಕತೈಲವೆನಿಸುತ್ತದೆ ಎಂಬುದು 'ಲೋಕೋಪಕಾರಂ'ನ ವಿವರಣೆ. "ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ" ಎಂಬ ಬೆಡಗಿನ ಮಾತು ಅಲ್ಲಪ್ರಭುವಿನದು. ಗುರುಕರುಣೆಯಾದಾಗ ಪ್ರಾಪಂಚಿಕತೆಯು "ಬಿಸಿಲ ಮುಂದಣ ಮಂಜಿನಂತಾಯಿತ್ತು" ಎಂದು ಕೋಲಶಾಂತಯ್ಯನೆಂಬ ವಚನಕಾರ ವರ್ಣಿಸುತ್ತಾನೆ. ಇದರಂತೆಯೇ ಆತನು "ಮಂಜಿನ ಹರಿಗೆಯ ಬಿಸಿಲಂಬು ತಾಗಿದಂತಾಯಿತ್ತು" ಎಂದು ಮತ್ತೊಂದೆಡೆ ಹೇಳುತ್ತಾನೆ. "ಬಿಸಿನಿ ಬಿಸಿಲಂ ಉಟ್ಟಳೆಂಬಂತೆ" ಎಂಬ ಸುಂದರ ಚಿತ್ರವನ್ನು 'ರಾಜಶೇಖರವಿಳಾಸ'ದಲ್ಲಿ ಕಾಣಬಹುದು.
'ಬಿಸಿಲುಗೊಳ್' ಎಂದರೆ ಪ್ರಕಾಶಮಾನವಾಗು ಎಂದು: "ದೇವನ ದಿವ್ಯಚ್ಛಾಯೆ ಪ್ರತಿಬಿಂಬಿಸೆ ಬಿಸಿಲುಗೊಂಡು ಸೋಂಕಿದ ಕಣ್ಣಂ ತುಳ್ಕೆ" - ಪೊನ್ನನ 'ಶಾಂತಿಪುರಾಣ'ದ್ದು. ಕವಿಗಳು ಬಿಸಿಲು ಶಬ್ದದಿಂದ ಅನೇಕ ಸಮಾಸಗಳನ್ನು ಸೃಷ್ಟಿಸಿಕೊಂಡರು. 'ಬಿಸಿಲ್ಗುದುರೆ' ಎಂದರೆ ಮರೀಚಿಕೆ, ಭ್ರಾಂತಿ: "ಘೋಳಾಯ್ಲರ್ ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ ಪೊಳೆವ ಕಡುಗುದುರೆಗಳುಮಂ" - 'ಪಂಪಭಾರತ'. 'ಬಿಸಲ್ಮೞೆ' ಬಿಸಿಲು ಮಳೆ ಎಡರೂ ಒಟ್ಟಿಗಿರುವುದು: "ಅರಲಂ ಸುಱಿದಪುದೆನೆ ಸುರಿವ ಬಿಸಿಲ್ಮಗಳೆಸೆದುವಭ್ರಾಂಗಣದೊಳ್" 'ಜಗನ್ನಾಥ ವಿಜಯ'. ಹಗಲು ಜೊತೆಯಾಗಿರುವ ಚಕ್ರವಾಕ ಪಕ್ಷಿಯನ್ನು 'ಬಿಸಿಲ್ವಕ್ಕಿ' ಎಂದು ಕರೆಯುತ್ತಾನೆ ವೆಂಕಾಮಾತ್ಯ ತನ್ನ 'ರಾಮಾಯಣ'ದಲ್ಲಿ: "ಬನವಂ ಪಗಲಂ ಬಿಸಿಲ್ವಕ್ಕಿ ಸೋಗೆ ಕಾರ್ಮುಗಿಲಂ:. 'ಬಿಸಿಲ್ದೊರೆ' (ಬಿಸಿಲಿನ ನದಿ) ಎಂಬ ರೂಪಕ ಕುವೆಂಪು ಅವರದು: "ಮಿಥ್ಯೆ ತಾಂ ಪುಸಿಸಾಸದ ಬಿಸಿಲ್ದೊರೆಯ ಬೇಂಟೆಯಿಂ ಬೇಸತ್ತು" 'ಶ್ರೀ ರಾಮಾಯಣ ದರ್ಶನಂ". "ಬಿಸಿಲ್ಹಣ್ಣು ಕಂಡೀದಿ ಬೆಳದಿಂಗಳ ಕಂಡೀದಿ" ಎಂದು ಕಷ್ಟವನ್ನು 'ಬಿಸಿಲ್ಹಣ್ಣು' ಎಂದವರು ಬೇಂದ್ರೆ ('ಬಿಸಿಲು ಬಾಳೆಹಣ್ಣು' ಇಂದಿಗೂ ಇದೆ). "ಬೆನ್ನು ಹೆಂಚನು ಬಗಿದು ಬಿಸಿಲುಕೋಲಂತಿಳಿದು ಬಂದವರು ಮಾವನವರೇ?" ಎಂಬುದು 'ಬಿಸಿಲ ಕೋಲು' ಎಂಬ ಕೆಎಸ್‍ನ ಕವನದ ಸಾಲು. "ಮೇಲಿಂದ ಬಿಸಿಲುಗಳು ಕಾಯಿಸಲು ಬಯಲಲ್ಲಿ" - ಇಲ್ಲಿ ವಿಸೀ ಈ ಶಬ್ದದ ಬಹುವಚನ ಬಳಸುತ್ತಾರೆ.
=====
ಬೀಜ: ಇದೊಂದು ಸಂಸ್ಕೃತ ಶಬ್ದ. ಬೀಜ ಶಬ್ದಕ್ಕೆ 'ಅಮರಕೋಶ'ವು ಒಂದೆಡೆ "ಹೇತುರ್ನಾ ಕಾರಣಂ ಬೀಜಂ" ಎಂದರೆ, ಮತ್ತೊಂದೆಡೆ "ಶುಕ್ರಂ ತೇಜೋ ರೇತಸೀಚ ಬೀಜವೀರ್ಯೇಂದ್ರಿಣಿಯಾಣಿ ಚ" ಎನ್ನುತ್ತದೆ; ಅಂದರೆ ಕಾರಣ ಹಾಗೂ ಸಂತಾನೋತ್ಪತ್ತಿ ಸತ್ವ. "ಹೇತು ನಿದಾನಂ ಬೀಜಂ" ಎಂದೇ 'ಅಭಿಧಾನ ವಸ್ತುಕೋಶ' ಅರ್ಥ ಕೊಡುತ್ತದೆ. "ರಾಜಬೀಜ ಸಂಜನಿತ ಗುಣಂ ಮದಂ" ಎಂಬುದು 'ಪಂಪಭಾರತ'ದ ವಾಕ್ಯ. ಬೇಂದ್ರೆಯವರ 'ಸಖೀಗೀತ'ದಲ್ಲಿ ಬರುವ "ಚೈತ್ರ ವೈಶಾಖಗಳು ಜೈತ್ರಯಾತ್ರೆಗೆ ಹೊರಟು ಪ್ರಾಯವ ಕೈಸೆರೆಗೊಳಿಸುತಿರೆ; ಮೈತ್ರಿಯ ಬೀಜವು ಮದುವೆ ಮುಹೂರ್ತಕೆ ಆಗಾಗ ಕಲ್ಲೊಳು ಬೀಳುತಿದೆ" ಎಂಬ ಮಾತಿನಲ್ಲಿಯೂ ಈ ಅರ್ಥ ಸೂಚಿತವಾದಂತಿದೆ. "ನಿನ್ನದೇ ಬೀಜ; ಸಂತಾನ ನಿನ್ನದೆನ್ನುವುದಕ್ಕೆ ಅಭ್ಯಂತರವೆ ಇಲ್ಲ" ಎಂಬ ಗೋಪಾಲಕೃಷ್ಣ ಅಡಿಗರ ಸಾಲಿನಲ್ಲಿ ಈ ಅರ್ಥ ಸ್ಪಷ್ಟವಾಗಿದೆ. ಬೀಜ ಉತ್ಪತ್ತಿಯಾಗುವ ವೃಷಣವನ್ನೂ ಬೀಜ ಎನ್ನುವುದು ವಾಡಿಕೆ; ಸಂತಾನವೃದ್ಧಿಗಾಗಿ ಮೀಸಲಾದ ಹೋರಿ 'ಬೀಜದ ಹೋರಿ'.
"ಲೋಕದ ಚೇಷ್ಟೆಗೆ ರವಿ ಬೀಜವಾದಂತೆ" ಎಂಬ ಅಕ್ಕಮಹಾದೇವಿಯ ಮಾತಿನಲ್ಲಿ ಈ ಶಬ್ದಕ್ಕೆ ಕಾರಣ ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲಿ ಬೀಜ ಶಬ್ದಕ್ಕೆ ಈ ಅರ್ಥಗಳು ಇವೆಯಾದರೂ ವ್ಯಾಪಕವಾಗಿ ಸಸ್ಯಗಳಿಗೆ ಅನ್ವಯಿಸುವಂತೆ ಈ ಮಾತಿನ ಬಳಕೆಯಿದೆ. "ಬೀಜವಿಲ್ಲದೆ ವೃಕ್ಷ ಬೇಳೆಯಬಲ್ಲುದೆ" ಎಂಬುದು ಅಮುಗೆ ರಾಯಮ್ಮನೆಂಬ ವಚನಕಾರ್ತಿಯ ಪ್ರಶ್ನೆ. "ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು?" ಎಂಬ ಕೌತುಕಪೂರ್ಣ ಪ್ರಶ್ನೆಯನ್ನು ಕೇಳುವವಳು ಮೋಳಿಗೆ ಮಹಾದೇವಿ ಎಂಬ ಮತ್ತೊಬ್ಬ ವಚನಕಾರ್ತಿ. "ಬೀಜದಿಂದಾಯಿತ್ತು ಅಂಕುರವೆಂದೆಂಬರು; ಆ ಬೀಜಕ್ಕೆ ಅಂಕುರವೆ ಪ್ರಾಣವೆಂದರಿಯರು" ಎಂಬ ಗಾಢಾರ್ಥದ ಮಾತು ಚೆನ್ನಬಸವಣ್ಣನದು. ಮತ್ತೊಂದು ವಚನದಲ್ಲಿ ಈತ "ಬಿತ್ತಿದ ಬೀಜದ ಫಲವು ವಿಪರೀತ ನೋಡಾ" ಎಂದು ಹೇಳುವಾಗ ಬೀಜದಿಂದಲೇ ಫಲ ಎಂಬುದನ್ನೂ ಸೂಚಿಸುತ್ತಿದ್ದಾನೆ. ವಾಸ್ತವ ನೆಲೆಯಲ್ಲಿ ಮಾತನಾಡುವ 'ಲೋಕೋಪಕಾರಂ' ಹಣ್ಣುಗಳನ್ನು ಬಿಡುವ ಮರಗಳ "ಕೊಂಬು ಬೀಜಮಂ ಸೆಗಣದೊಳಗೞ್ದಿ ಬಿತ್ತುಗೆ" ಎಂದು ಸಲಹೆ ನೀಡುತ್ತದೆ. ಬಿತ್ತನೆಯನ್ನು ಕಾವ್ಯಗಳು 'ಬೀಜಾವಾಪ' ಎನ್ನುತ್ತವೆ: "ಅದಿಂ ಬೀಜಾವಾಪಮೆನೆ ಜನ್ಮಲತೆಗೆ ಕಲಾಪಿಸ್ತ್ರೀಯುದರದಲ್ಲಿ ವಿಂಧ್ಯದೊಳೊಗೆದಂ" - ಜನ್ನನ 'ಯಶೋಧರ ಚರಿತೆ'.
ಹಣ್ಣು ಕಾಯಿಗಳಲ್ಲಿರುವ ಕಾಳನ್ನೂ ಬೀಜ ಎನ್ನುತ್ತಾರೆ. "ಆ ದಾಡಿಮದ್ರುಮದೊಳ್ ಬಿಡೆ ಸವಿಯಲ್ ಬೀಜಮನುಗಿವೆಡೆಯೊಳ್ ಚಂಚೂಪುಟಂಗಳಂ ಬಿಡದೆಂತುಂ" ಎಂಬುದು 'ಕುಸುಮಾವಳೀ ಕಾವ್ಯ'ದ ವರ್ಣನೆ. 'ಬೀಜಕೋಶ'ವೆಂದರೆ ಅಂಡಾಶಯ: "ವರಾಳಕಂ ಬೀಜಕೋಶಮದು ಕರ್ನ್ನಿಕೆಯುಂ" - 'ಅಭಿಧಾನ ವಸ್ತುಕೋಶ'. 'ಬೀಜವೃಕ್ಷನ್ಯಾಯ' ಎಂಬುದು ಕಾರ್ಯಕಾರಣಗಳ ಸಾತತ್ಯವನ್ನು ಸೂಚಿಸುವ ಪರಿಕಲ್ಪನೆಯಾಗಿದೆ.
=====
ಬೆಳಗು1: ಕನ್ನಡದಲ್ಲಿ ಇದರ ಇನ್ನೊಂದು ರೂಪ ಬೆಳಕು. ಈ ಶಬ್ದ ಕ್ರಿಯಾರ್ಥ ಹಾಗೂ ನಾಮವಾಚಕವಾಗಿ ಬಳಕೆಯಲ್ಲಿದೆ. ನಾಮವಾಚಕವಾಗಿ ಇದು ತಮಿಳು ಮಲಯಾಳಂಗಳಲ್ಲಿ ವಿಳಕ್ಕು ಎಂದೂ, ತೆಲುಗಿನಲ್ಲಿ ವೆಲುಗು ಎಂದೂ ರೂಢಿಯಲ್ಲಿದೆ. ಇದರ ಅರ್ಥ ಕಾಂತಿ, ಹೊಳಪು ಎಂದು "ಅಱಿಗೆ ಬೆಳಗುಂ ದ್ಯುತಿಯುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ತೋರ ಮಾಣಿಕಂಗಳ ಬೆಳಗಿಟ್ಟಳಂ ತನಗೊಡಂಬಡೆ" ಎಂಬುದು 'ಪಂಪಭಾರತ'ದ ಮಾತು. "ಬೆಳಗುವ ಜ್ಯೋತಿಯ ತಿರುಳಿನಂತೆ ಕಂಗಳ ಕಾಂತಿ" ಎಂಬ ಅಲ್ಲಮನ ಸುಂದರ ಮಾತಿನಲ್ಲಿಯೂ ಈ ಅರ್ಥವಿದೆ. ಹಗಲು ಎಂಬರ್ಥದಲ್ಲಿಯೂ ಬೆಳಗು ಶಬ್ದಕ್ಕೆ ಅರ್ಥವಿದೆ. "ಬೆಳಗಿನೊಳಂ ಕಾಣದು ನಿಶೆಯೊಳ್ ಕಾಣ್ಬುದು ಪೆಗ್ಗಣಕ್ಕೆ" ಎಂಬ ವಾಕ್ಯ 'ಧರ್ಮಾಮೃತ'ದ್ದು. "ಚೋರಂಗೆ ಬೆಳಗು ಗುಣವಪ್ಪುದೆ" ಎಂಬ ಘಟ್ಟಿವಾಳಯ್ಯನೆಂಬ ವಚನಕಾರನ ಮಾತಿನಲ್ಲಿಯೂ ಇದೇ ಅರ್ಥವೇ ಇದೆ. 'ಬೆಳಗಪ್ಪ ಜಾವ' ಅಥವಾ 'ಬೆಳುಗು ಜಾವ' ಹಗಲಿನ ಆರಂಭದ ದೆಸೆಯನ್ನು ಸೂಚಿಸುತ್ತದೆ: "ಬೆಳಗಪ್ಪ ಜಾವದೊಳ್ ಪದಿನಾರು ಕನಸುಗಳಂ ಕಂಡೆಂ" ಎಂಬುದು 'ಆದಿಪುರಾಣ'ದ ಮಾತಾದರೆ, "ಬೆಳಗಪ್ಪ ಜಾವದಲ್ಲಿ ಲಿಂಗವ ಮುಟ್ಟಿ ಪೂಜಿಸಿ" ಎಂಬುದು ಅಲ್ಲಮನ ಮಾತು. ಇದಕ್ಕೆ ಜ್ಞಾನ ಎಂಬರ್ಥವೂ ಸೂಚಿತವಾಗುತ್ತದೆ: "ಬೆಳಗಿನೊಳಗಣ ರೂಪ ತಿಳಿದು ನೋಡಿಯೆ ಕಳೆದು ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ - ಆತ ಲಿಂಗಪ್ರಸಾದಿ" ಎಂಬುದೂ ಅಲ್ಲಮನ ಮಾತು. "ಬೆಳಗು ಬೆಳಗು ಹಳಚುವಲ್ಲಿ ಕತ್ತಲೆ ಉಳಿಯಬಲ್ಲುದೆ ಅಯ್ಯಾ?" ಎಂಬ ಅದ್ಭುತವಾದ ಪ್ರಶ್ನೆಯು ಸಿದ್ಧರಾಮನದು. 'ಬೆಳಗಾಗು' ಎಂದರೆ ಹಗಲು ಆರಂಭವಾಗು ಎಂದರ್ಥ. "ಬೆಳಗಾಗದಿರಲಯ್ಯ ಭಗವಂತ ಬೆಳಗಾಗದಿರಲಿ, ಒಂದು ದಿನ, ಒಂದೇ ಒಂದು ದಿನವಾದರೂ ಈ ರಾತ್ರಿ ಮುಗಿಯದಿರಲಿ" ಎಂಬುದು ಜಿ.ಎಸ್. ಶಿವರುದ್ರಪ್ಪನವರ 'ಬೆಳಗು'ಕವನದ ಆರಂಭದ ಸಾಲುಗಳು. 
ಬೆಳಕು ಎಂಬ ರೂಪವೂ ಬಳಕೆಯಲ್ಲಿತ್ತು, ಈಗಲೂ ಇದೆ: "ಬೆಳಕೆನೆ ದೀಪಂ" ಎಂಬುದು ರನ್ನನ ನನಘಂಟಿನ ಅರ್ಥ. ಮನೆಗೆ ಬೆಳಕನ್ನು ತರುವ ಗವಾಕ್ಷವನ್ನು ವೃತ್ತವಿಲಾಸನ 'ಧರ್ಮಪರೀಕ್ಷೆ'ಯು 'ಬೆಳಕಂಡಿ' ಎನ್ನುತ್ತದೆ: "ನೆಲನಗಲಕೆ ತೀವಿದ ಕೞ್ತಲೆಯಂ ಕಳೆಯಲ್ಕೆ ಗಗನದೊಳ್ ಪಲವುಂ ಬೆಳಕಂಡಿಗಳಂ ಸಮೆದಂ"." "ಜ್ಞಾನದೀಪದ ಬೆಳಕಲಿ ಓಡಾಡಬೇಕು" ಎಂಬ ಪುರಂದರದಾಸರ ಮಾತಿನಲ್ಲಿ ಈ ಶಬ್ದಕ್ಕೆ ಜ್ಜಾನ ಎಂಬರ್ಥ ಸ್ಪಷ್ಟವಾಗಿಯೇ ಇದೆ. 'ಬೆಳಕು ಹರಿ' ಎಂದರೆ ಬೆಳಗಾಗು ಎಂದರ್ಥ. "ಬಾಗಿಲು ತೆರೆದೂ ಬೆಳಕು ಹರಿದೂ ಜಗವೆಲ್ಲ ತೊಯ್ದಾ" ಎಂಬುದು ಬೇಂದ್ರೆಯವರ 'ಬೆಳಗು' ಎಂಬ ಪ್ರಸಿದ್ಧವಾದ ಪದ್ಯದ ಸಾಲು. 'ಬೆಳಕಿಗೆ ತಾ' (ಪ್ರಕಟಗೊಳಿಸು), ಬೆಳಕು ಚೆಲ್ಲು (ಸ್ಪಷ್ಟವಾಗಿಸು), ಬೆಳ್ಳಂಬೆಳಕು (ತೀರ ಸ್ಪಷ್ಟ) ಮುಂತಾದ ಅನೇಕ ನುಡಿಗಟ್ಟುಗಳನ್ನು ಬೆಳಕು ಶಬ್ದದಿಂದ ಸೃಷ್ಟಿಸಿಕೊಳ್ಳಲಾಗಿದೆ.
======
 ಬೇಸರ: ಇದರ ಮೂಲ ಕನ್ನಡದಲ್ಲಿ 'ಬೇಸರು'. ಇದು ಹಳಗನ್ನಡದಲ್ಲಿ ಬೇಜಾರುಮಾಡಿಕೋ ಮತ್ತು ಬೇಜಾರು ಎಂಬ ಕ್ರಿಯಾರ್ಥಕ ಹಾಗೂ ನಾಮವಾಚಕಗಳಾಗಿ ಬಳಕೆಯಲ್ಲಿತ್ತು. ತಮಿಳಿನಲ್ಲಿದು 'ವೇಚರು' ಆಗಿದ್ದರೆ, ತೆಲುಗಿನಲ್ಲಿ 'ವೇಸರು'  ಎಂದೂ ಮಲಯಾಳಂ ಮತ್ತು ತುಳುಗಳಲ್ಲಿ ನಾಮವಾಚಕವಾಗಿ ಕ್ರಮವಾಗಿ 'ವೇಚರು' ಹಾಗೂ 'ಬೇಸರ್' ಎಂದೂ ಬಳಕೆಯಲ್ಲಿದೆ. ಕ್ರಿಯಾರ್ಥದಲ್ಲಿ 'ಕವಿರಾಜಮಾರ್ಗ'ದಲ್ಲಿಯೇ ಇದರ ಪ್ರಯೋಗವಿದೆ: "ವಾಸುಗಿಯುಂ ಬೇಸರುಗುಂ ದೇಶಿ ಬೇವೇರಪ್ಪುದಂ". ಈ ಅರ್ಥದಲ್ಲಿಯೇ "ಬೇಸಱಿಸು' ಎಂಬ ರೂಪವೂ ಬಳಕೆಯಲ್ಲಿತ್ತು: "ಪಿರಿದುಂ ಬೇಸಱಿಸಿದುವು ಬಿರಯಿಯಂ ಜಳದಂಗಳ್" (ಅಗ್ಗಳನ 'ಚಂದ್ರಪ್ರಭಪುರಾಣ'). ಈ ಅರ್ಥದಲ್ಲಿಯೇ ರನ್ನನು 'ಬೇಸಱೆಯ್' ಎಂದು ಪ್ರಯೋಗಿಸುತ್ತಾನೆ: "ಒನಲಂ ಅಳ್ಕಂ ಚಳವಳಿಸಂ ಚಪ್ಪರಿಸಂ ತಳವಳಿಸಂ ಬೇಸಱೆಯ್ದು ಬೆಳ್ಮೊಗದಿನಿರಂ" ('ಅಜಿತಪುರಾಣ'). ನಡುಗನ್ನಡಲ್ಲಿ ಕೊಳ್ ಪ್ರತ್ಯಯವನ್ನು ಪಡೆದು ಕ್ರಿಯಾರ್ಥದಲ್ಲಿ ಬಳಕೆಗೆ ಬಂತು: ಕನಕದಾಸರ 'ಮೋಹನ ತರಂಗಿಣಿ'ಯಲ್ಲಿ "ಬೇಸರುಗೊಂಬ ತತ್ಕುವರಿಯ ಮನದೊಳಗಾಸರು ಬಹಳ ವೆಗ್ಗಳಿಸಿ" ಎಂಬ ಮಾತಿದೆ. 'ಬೇಸರು' ಎಂಬ ಮಾತಿಗೆ ಆಲಸ್ಯ ಎಂಬ ಅರ್ಥವೂ ಇದೆ ("ಬೇಸರು-ಆಲಸ್ಯೇ" 'ಶಬ್ದಮಣಿದರ್ಪಣ').
ನಾಮಪದವಾಗಿಯೂ ಇದರ ಬಳಕೆ ಹಿಂದಿನಿಂದಲೂ ಇದೆ. ಪಂಪನ 'ಆದಿಪುರಾಣ'ದಲ್ಲಿ "ತನ್ನ ಸೂಳೆಯ ಬೇಸಱಂ ಕೆಳೆಯಂಗಿಂತೆಂದಂ" ಎಂಬ ಪ್ರಯೋಗವಿದೆ. 'ಕುಮಾರವ್ಯಾಸ ಭಾರತ'ದಲ್ಲಿ "ಘನಸಂಗರಕೆ ಬೇಸರು ತೋಱಿತೇ" ಎಂಬ ಮಾತಿದೆ. ಕನಕದಾಸರು ತಮ್ಮ 'ನಳಚರಿತ್ರೆ'ಯಲ್ಲಿ 'ಬೇಸರ' ರೂಪವನ್ನು ಬಳಸುವುದುಂಟು: "ಸತಿಯರ ಮನ್ನಣೆಗೆ ಮೈಗೊಡವಿ ಬಲುಬೇಸರದಿ ಬಳಲುವಳು".
ಆಸರು-ಬೇಸರು ಎಂಬಿವು ಕೆಲವೇಳೆ ಜೋಡಿಪದವಾಗಿ ಬರುತ್ತದೆ. ಬೇಸರು ಮಾನಸಿಕ ಸ್ಥಿತಿಯಾದರೆ ಆಸರು ಎಂದರೆ ದೇಹದ ದಣಿವು. "ಈ ಗತಿಯುಡುಗದಾರದೆ ಬೇಸರದೆ" ಎಂಬುದು ಭೀಮಕವಿಯ 'ಬಸವಪುರಾಣ'ದ ಪ್ರಯೋಗ. "ಅಲ್ಲಮಲಿಂಗನಿದಿರಲಿ ಸೂಸಿದರು ತಮ್ಮೊಡತಿಯಾಸರುಬೇಸಲ್ಲವನು" ಎಂಬುದು ಚಾಮರಸನ 'ಪ್ರಭುಲಿಂಗಲೀಲೆ'ಯ ಮಾತು.
'ಬ್ಯಾಸರ' ಎಂಬುದು ಆಡುಮಾತಿನ ರೂಪ. "ಕವಿಜೀವದ ಬ್ಯಾಸರ ಹರಿಸಾಕ ಹಾಡ ನುಡಿಸಾಕ ಹೆಚ್ಚಿಗೇನು ಬೇಕ ಒಂದ ಹೂತ ಹುಣಿಸೇಮರ ಸಾಕ" ಎಂಬುದು ಬೇಂದ್ರೆಯವರ ಕವನವೊಂದರ ಸಾಲು. ಬ್ಯಾಸರಿಕೆ ಎಂಬ ರೂಪವೂ ಬಳಕೆಯಲ್ಲಿದೆ.
=====
ಬೇಸಾಯ: ಇದು ಸಂಸ್ಕೃತದ 'ವ್ಯವಸಾಯ' ಎಂಬ ಶಬ್ದದ ತದ್ಭವ. ಇದು ಹಿಂದಿನ ಕಾವ್ಯಗಳಲ್ಲಿ ಬೆವಸಾಯ, ಬವಸ, ಬವಸು ಮುಂತಾದ ರೂಪಗಳಲ್ಲಿಯೂ ದೊರೆಯುತ್ತದೆ. "ಎರಡಾರ ಬೆವಸಾಯಂ; ಹತ್ತು ಹಸುಕಱೆಹ" ಎಂಬುದು 'ಪಂಚತಂತ್ರ'ದ ಮಾತು. "ಬೆವಸಾಯವ ಮಾಡಿ ಬೀಯಕ್ಕೆ ಬತ್ತವಿಲ್ಲರ್ದಿಡೆ" ಎಂಬುದು ಅಲ್ಲಮಪ್ರಭುವಿನ ವಚನದ ಭಾಗ. "ಬವಸೆಂದು ವ್ಯವಸಾಯಂ" ಎಂದು 'ಶಬ್ದಮಣಿದರ್ಪಣ' ಅರ್ಥ ಕೊಡುತ್ತದೆ. "ದಾರುಣ ಸಂಸರಣ ವಿಷೋರ್ವೀರುಹಮಂ ಕೀಳ್ವ ಬವಸೆಯಿಂದಿರ್ದಪನೀ ಧೀರಂ" ಎಂಬುದು 'ಪಂಪರಾಮಾಯಣ'ದಲ್ಲಿ ಬರುವ ಮಾತು.  "ಗೆಲವೇನಿಲ್ಲದ ಯುದ್ಧ ಪಾಳುನೆಲದೊಳ್ ಬೇಸಾಯ" ಎಂಬುದು 'ಸೋಮೇಶ್ವರ ಶತಕ'ದ ಮಾತು. ಹನ್ನೆರಡನೆ ಶತಮಾನದ ಶಾಸನವೊಂದರಲ್ಲಿ "ಆತನ ಬ್ಯವಸಾಯ ಬ್ಯವಹಾರವೆನ್ತೆನೆ" ಎಂಬ ಪ್ರಯೋಗವಿದೆ. ಬೇಸಾಯ ಮಾಡುವವನೇ 'ಬೇಸಾಯಗಾರ'. ಎಂ.ಆರ್. ಶ್ರೀ. ವಚನಕಾರರನ್ನು "ಅಚ್ಚಗನ್ನಡದ ಬೇಸಾಯಗಾರರು" ಎಂದು ಕರೆಯುತ್ತಾರೆ.
ಬೆವಸಾಯ ಎಂಬ ಶಬ್ದವನ್ನು 'ಧರ್ಮಾಮೃತ'ವು ಪ್ರಯತ್ನ ಎಂಬರ್ಥದಲ್ಲಿ ಬಳಸುತ್ತದೆ: "ಪುಣ್ಯಮಿಲ್ಲದೆ ಬೆವಸಾಯದಿಂ ಸಿರಿಯಕ್ಕುಮೆಂದೆಯಪ್ಪೊಡೆ". 'ಪಂಪಭಾರತ'ದಲ್ಲಿ "ಬೆವಸಾಯಂಗೆಯ್' ಎಂಬ ನುಡಿಗಟ್ಟಿನ ಅರ್ಥ ಪ್ರಯತ್ನ ಮಾಡು ಎಂದು: "ಬೆವಸಾಯಂಗೆಯಲ್ ಇನ್ನುಮುಂಟು ಎಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂಡವರಂ ಗೆಲ್ವುದಸಾಧ್ಯಮಾಯ್ತೇ". ಸಿದ್ಧತೆಯನ್ನು ಶಾಸನವೊಂದು 'ಬವಸ' ಎನ್ನುತ್ತದೆ: "ಕವಿದುರ್ಗ್ಗಂ ಚಾತುರಂಗಂ ಬವಸ ದಳವುಳಂ" (ಹನ್ನೊಂದನೆಯ ಶತಮಾನದ ಶಾಸನ). ವೃತ್ತಿ, ಕೆಲಸ ಎಂಬರ್ಥದಲ್ಲಿ ಬವಸ ಎಬ ಶಬ್ದವನ್ನು ಅಗ್ಗಳನ 'ಚಂದ್ರಪ್ರಭಪುರಾಣ' ಬಳಸುತ್ತದೆ: "ಎನಗೆ ಮನೋಭವನೆ ದೇವಂ ಬಸನಮೆ ಬವಸಂ ಬಲವೆ ಕುಲಧನಂ".
ವ್ಯವಸಾಯ ಶಬ್ದವೂ ಬಳಕೆಯಲ್ಲಿದೆ. ಮೂಲತಃ ಈ ಅರ್ಥಕ್ಕೆ ಸಂಸ್ಕೃತದಲ್ಲಿ ಪ್ರಯತ್ನ, ನಿಶ್ಚಯ, ಆಚರಣೆ ಮುಂತಾದ ಅರ್ಥಗಳಿವೆ. ಈ ಪದಕ್ಕೆ ಕನ್ನಡದಲ್ಲಿ ಕೃಷಿ ಎಂಬರ್ಥದ ಜೊತೆಗೆ ಪ್ರಯತ್ನ ಎಂಬರ್ಥವಿದೆ. "ಈತನ ಭಕ್ತಿಗಂ ವ್ಯವಸಾಯಕ್ಕಂ ಮೆಚ್ಚಿ ತನ್ನ ತಂದ ಎರ್ಮ್ಮೆಗಳೊಳೊಂದುಮಂ ಕೊಳ್ಳದೆ" ಎಂಬ ಶಾಂತಿನಾಥನ 'ಸುಕುಮಾರಚರಿತೆ'ಯ ಮಾತಿನಲ್ಲಿ ಈ ಅರ್ಥವಿದೆ. ಪ್ರಯತ್ನ ಮಾಡದವನನ್ನು 'ಸಮಯ ಪರೀಕ್ಷೆ' "ಬೆವಸಾಯಹೀನ" ಎಂದು ಕರೆಯುತ್ತದೆ. ಅದೇ ಉತ್ಸಾಹದಿಂದ ಕೆಲಸಮಾಡುವವನನನ್ನು 'ಮಹಾವ್ಯವಸಾಯಿ' ಎನ್ನುತ್ತದೆ: "ಭುವನೈಕಮಲ್ಲದೇವನ ಭವನದೊಳಂ ತಾನೆ ಮಾನಸಂ ತಾನೆ ಮಹಾವ್ಯವಸಾಯಿ". ವ್ಯವಸಾಯ ಮಾಡುವವನೇ ವ್ಯವಸಾಯಗಾರ.
=====
ಭೋಗ1: ಈ ಸಂಸ್ಕೃತಮೂಲದ ಶಬ್ದವು ವ್ಯಾಪಕವಾಗಿ ಬಿಡಿಯಾಗಿಯೂ ಸಮಾಸಗಳಲ್ಲಿಯೂ ಬಳಕೆಯಲ್ಲಿದೆ. "ಭೋಗಂ ವಿಷಯಾನುಭವಂ" ಎಂದು ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸೂತ್ರಬದ್ಧವಾಗಿ ಹೇಳುತ್ತದೆ. ವಿಷಯಾನುಭವ ಎಂದರೆ ಇಂದ್ರಿಯಾನುಭವಗಳು. ಹೀಗಾಗಿ ಸುಖವನ್ನು ತರುವ ವಸ್ತುಗಳೂ ಭೋಗಗಳೇ: "ಅಮರಾಧಿಪಪ್ರಹಿತಸುರತರುಪ್ರಸೂನಗ್ರತ .. .. ಸುರಭಿವಿಲೇಪನ ಪ್ರಮುಖ ಭೋಗೋಪಭೋಗಂಗಳೊಳಂ" ಎಂಬುದು 'ಆದಿಪುರಾಣ'ದ ಮಾತು. ಇಲ್ಲಿ ಬಂದಿರುವ 'ಉಪಭೋಗ'ವೂ ವಿಷಯಸುಖ ಎಂಬರ್ಥವುಳ್ಳದ್ದು. 'ಅಭಿಧಾನ ವಸ್ತುಕೋಶ'ದಲ್ಲಿಯೇ "ಅನುಭವಂ ಉಪಭೋಗಂ" ಎಂಬರ್ಥ ಹೇಳಿದೆ. ಹೀಗೆ ಅನುಭವಿಸಬಹುದಾದುದೇ 'ಉಪಭೋಗ್ಯ'. ಪಂಪನ 'ಆದಿಪುರಾಣ'ದಲ್ಲಿನ "ಎನಗೊರ್ವಂಗುಪಭೋಗ್ಯಮಲ್ತು ವಸುಧಾ ಸಾಮ್ರಾಜ್ಯಂ ಓರಂತೆ ನಿಮ್ಮನಿಬರ್ಗಂ" ಎಂಬ ಮಾತನ್ನು ಗಮನಿಸಿ. 'ಅನುಭೋಗ' ಎಂದರೂ ವಿಷಯಸುಖವೇ. "ತನ್ನ ಸತಿಯುಂ ತಾನುಂ ಸುರತಾನುಭೋಗದಲಿ" ಎಂಬುದು ಭೀಮಕವಿಯ 'ಬಸವಪುರಾಣ'ದ ಮಾತು. ಭೋಗವನ್ನು ಅನುಭವಿಸಬೇಕೆಂಬ ತೀವ್ರವಾದ ಆಸೆಯೇ 'ಭೋಗತೃಷ್ಣೆ': "ತನ್ನ ಭೋಗತೃಷ್ಣೆಯಂ ತಾನೆ ತನ್ನ ಮನದೊಳ್ ನಿಂದಿಸುತ್ತುಂ" ('ಆದಿಪುರಾಣ'). ಭೋಗಿಸುವವನೇ 'ಭೋಗಿ', ಅಂದರೆ ರಸಿಕ. "ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೇ" ಎಂಬುದು ಜನ್ನನ 'ಅನಂತನಾಥಪುರಾಣ'ದ ಮಾತು.
ಭೋಗವನ್ನು ಅನುಭವಿಸುವ ಭೂಮಿಯೇ 'ಭೋಗಭೂಮಿ'. ಸತ್ತಮೇಲೆ ಪುಣ್ಯಫಲಗಳನ್ನು ಅನುಭವಿಸುವ ಸ್ವರ್ಗವನ್ನೇ ಭೋಗಭೂಮಿ ಎನ್ನುತ್ತಿದ್ದರು. ಅಗ್ಗಳನು ತನ್ನ 'ಚಂದ್ರಪ್ರಭಪುರಾಣ'ದಲ್ಲಿ "ಭೋಗಭೂತಲ' ಎಂಬ ಶಬ್ದವನ್ನು ಈ ಪದಕ್ಕೆ ಸಮಾನಾರ್ಥಕವಾಗಿ ಬಳಸಿದ್ದಾನೆ: "ತನ್ನೊಳೆ ಸರಿದೊರೆ ಸುರರೇಂ ಭೋಗಭೂತಲಂ ಸುಖಮಯಮೋ". ಹೀಗಾಗಿ ಪುಣ್ಯವಂತರು ಹುಟ್ಟುವ ಪ್ರದೇಶವನ್ನು ಪೊನ್ನ ತನ್ನ 'ಶಾಂತಿಪುರಾಣ'ದಲ್ಲಿ ಈ ಹೆಸರಿನಿಂದ ಕರೆದಿದ್ದಾನೆ: "ಈ ಭರತಾವನಿ ಭೋಗಭೂಮಿ ಭೂಭಾಗಿ ಸುಖಾವಾಪ್ತಿಯಂ ಪಡೆದುದು". ಪಂಪನು 'ಆದಿಪುರಾಣ'ದಲ್ಲಿ 'ಭೋಗಭೂಮಿ'ಯನ್ನು ಒಂದೆಡೆ 'ಸುಖದ ಭೂಮಿ' ಎಂಬರ್ಥದಲ್ಲಿ ಬಳಸಿದರೂ ("ಉತ್ತರಕುರುವೆಂಬ ಭೋಗಭೂಮಿಯೆ ಜನ್ಮಭೂಮಿಯಾದುದು") ಅದನ್ನು ಬೇರೆ ರೀತಿಯಲ್ಲಿಯೂ ಆರ್ಥೈಸುತ್ತಾನೆ: "ಭೋಗಭೂಮಿವಿರಾಮದೊಳ್ ಈ ಕರ್ಮಭೂಮಿ ಪ್ರಾರಂಭದೊಳ್" ಎಂಬ ಮಾತುಗಳಲ್ಲಿ ಮನುಷ್ಯರಿಗೆ ಪ್ರಕೃತಿಯಲ್ಲಿ ತಾನಾಗಿ ಆಹಾರ ಸಿಕ್ಕುತ್ತಿದ್ದ ಸ್ಥಿತಿಯನ್ನು 'ಭೋಗಭೂಮಿ' ಎಂದೂ ಗೆಯ್ಮೆ ಮಾಡಿ ಆಹಾರ ಬೆಳೆದುಕೊಳ್ಳಬೇಕಾದ ಸ್ಥಿತಿಯನ್ನು 'ಕರ್ಮಭೂಮಿ' ಎಂದೂ ವಿಭೇದ ಮಾಡುತ್ತಿದ್ದಾನೆ.
=====
ಭೋಗ2: ಭೋಗ ಎಂಬ ಶಬ್ದಕ್ಕೆ ಹಾವು ಹಾಗೂ ಹೆಡೆ ಎಂಬರ್ಥಗಳೂ ಇವೆ. "ಭೋಗಂ ನಾಗನ ಶರೀರಮುಂ ತತ್ಫಣಮುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ಶ್ರೀಮನ್ನಾಗೇಂದ್ರಭೋಗ ಸ್ಫುರದರುಣಮಣಿದ್ಯೋತಿ ಸಂಧ್ಯಾನಿಬದ್ಧಪ್ರೇಮಂ" ಎಂಬುದು 'ಕರ್ಣಾಟಕ ಕಾದಂಬರಿ'ಯ ಮಾತು. 'ಭೋಗ' (ಹೆಡೆ)ವನ್ನುಳ್ಳದ್ದು 'ಭೋಗಿ': "ಉರಗಂ ಭೋಗಿ" ('ಅಭಿಧಾನ ವಸ್ತುಕೋಶ'). "ತತ್ ಭೋಗಿ ಫಣಾದ್ಯುತಿಯೆ ಕೞ್ತಲೆಯಂ ತಲೆದೋರಲೀಯದು" 'ಪಂಪಭಾರತ'). 'ಭೋಗಿನಿ' ಎಂದರೆ ಹೆಣ್ಣು ಹಾವು "ಪೆಡೆಯುಡುಗಿದ ಭೋಗಿನಿಯೆಮೆ ಮಿಡುಕಂ ಸಂಗಳಿಸಿದಮರಿ" (ಅಗ್ಗಳನ 'ಚಂದ್ರಪ್ರಭಪುರಾಣ'). ಈ ಶಬ್ದಕ್ಕೆ ರಾಜನ ಭೋಗದ ಹೆಣ್ಣು ಎಂಬರ್ಥವನ್ನೂ 'ಅಮರಕೋಶ' ನೀಡುತ್ತದೆ: "ಭೋಗಿನ್ಯೋನ್ಯಾ ನೃಪಸ್ತ್ರಿಯಃ".  ಭೋಗೀಂದ್ರ ಎಂದರೆ ನಾಗಗಳ ಒಡೆಯ ನಾಗರಾಜ: "ಇಂದ್ರನೆ ಭೋಗೀಂದ್ರನೆ ಖಚರೇಂದ್ರನೆ ದಲ್ ಭೂಪೇಂದ್ರನೆಂಬನ್ನೆಗಂ" ('ಆದಿಪುರಾಣ').
ಪಂಪನು ಹಾವಿನ ಹೆಡೆಯನ್ನು 'ಭೋಗಿಭೋಗ' ಎಂಬ ಶಬ್ದದಿಂದಲೂ ಸೂಚಿಸುತ್ತಾನೆ: "ಸಂಸೃತಿಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್". 'ಭೋಗರತ್ನ' ಎಂಬುದು ಹಾವಿನ ಹೆಡೆಯಲ್ಲಿರುತ್ತದೆಂದು ನಂಬಲಾಗಿದ್ದ ಮಣಿ: "ಮಿಕ್ಕಂ ವಿಷವಹ್ನಿಯಿಂ ವಿಳಯಕಾಲಜ್ವಾಲೆಯಂ ಭೋಗರತ್ನದ ಚೆಲ್ವಿಂ ದ್ಯುತಿಮಾಲೆಯಂ ಮಸಕದಂಭೋಳಿಯಿಂ ಕಾಳಿಯಂ" ಎಂಬುದು ರುದ್ರಭಟ್ಟನ 'ಜಗನ್ನಾಥವಿಜಯ'ದ ಪ್ರಯೋಗ. 'ಭೋಗವತಿ' ಎಂಬುದು ನಾಗಲೋಕದ ರಾಜಧಾನಿ ಹಾಗೂ ಅಲ್ಲಿನ ಹೊಳೆಯ ಹೆಸರುಗಳು: "ನದೀನಗರ್ಯೋರ್ನಾಗಾನಾಂ ಭೋಗವತ್ಯಥ ಸಂಗರೇ" ('ಅಮರಕೋಶ').
ಭೋಗತಲ್ಪ ವಿಷ್ಣು ಮಲಗಿರುವನೆಂದು ನಂಬಲಾದ ಹಾವಿನ ಹಾಸುಗೆಯನ್ನು ಸೂಚಿಸುತ್ತದೆ: "ಭೋಗತಲ್ಪದ ಹರಿಯೊಲಿಹ ಶತಯಾಗಸುತನನು" ಎಂಬುದು ಕುಮಾರವ್ಯಾಸನ ಮಾತು. ಭೋಗಿಶಯನ ಎಂದರೆ ವಿಷ್ಣು "ಭೋಗಿಶಯನ ಶ್ರೀ ಪುರಂದರವಿಠಲನ" ಎಂಬುದು ಪುರಂದರದಾಸರ ವರ್ಣನೆ. ಹಾವುಗಳನ್ನೇ ತನ್ನ ಕಟಕ (ಕಂಕಣ) ಗಳನ್ನಾಗಿ ಮಾಡಿಕೊಂಡಿರುವವನು ಭೋಗಿಕಟಕ, ಶಿವ: "ಭೋಗಿಕಟಕನ ಗಾಣಪತ್ಯಕೆ ಹೋಗನೇ ತಂತ್ರಂ ಬೆರಸಿ" ಎಂಬ ಮಾತು 'ಬಸವಪುರಾಣ'ದಲ್ಲಿ ಬಂದಿದೆ. 'ಭೋಗಿವಿಭೂಷ' ಎಂದರೆ ಹಾವಿನ ಆಭರಣ; ಅದನ್ನು ಧರಿಸಿದವನೇ ಶಿವ: "ಅಪರ್ಣೆಯ ವಕ್ತ್ರಮನೊರ್ಮೆ ನೇಹದುತ್ಸವದೊಳೆ ನೋಡುತುಂ .. .. ಭೋಗಿವಿಭೂಷನೊಪ್ಪಿದಂ" (ಷಡಕ್ಷರದೇವನ 'ಶಬರಶಂಕರವಿಲಾಸ').
=====
ಮಂತ್ರ1: ತುಂಬ ವ್ಯಾಪಕವಾದ ಬಳಕೆಯ ಸಂಸ್ಕೃತ ಶಬ್ದವಿದು. "ವೇದಭೇದೇ ಗುಪ್ತವಾದೌ ಮಂತ್ರಃ" ಎಂದು 'ಅಮರಕೋಶ'ದಲ್ಲಿ ಹೇಳಿದೆ. ಇದರ ಪ್ರಕಾರ 'ಮಂತ್ರ' ಎಂದರೆ ವೇದದ ಭಾಗ, ರಹಸ್ಯವಾಗಿ ಹೇಳುವುದು ಎಂದರ್ಥ. ಇದಕ್ಕೆ ಬ್ರಾಹ್ಮಣವನ್ನುಳಿದು ಸಂಹಿತೆಯು ಸೇರಿದ ವೇದ ಎಂಬ ವಿವರಣೆಯೂ ಇದೆ. ಹಾಗೆಯೇ  ದೇವತೆಗಳನ್ನು ಒಲಿಸಿಕೊಳ್ಳಲು ಹೇಳುವ ಮಾತು ಎಂಬರ್ಥವೂ ಇದೆ: ಅಸ್ತ್ರಗಳ "ಪ್ರಯೋಗಸಂಹಾರವಿಭಕ್ತಮಂತ್ರಂ"ದ ಉಲ್ಲೇಖ ಕಾಳಿದಾಸನ 'ರಘುವಂಶ'ದಲ್ಲಿದೆ. "ಮಗಳೆ ಬಾ ಕೊಳ್ ಐದು ಮಂತ್ರಾಳಿಗಳಂ" ಎಂಬುದು 'ಕುಮಾರವ್ಯಾಸಭಾರತ'ದ ಮಾತು. ಧಾರ್ಮಿಕ ಆಚರಣೆಗಳಲ್ಲಿ ಮಂತ್ರ-ತಂತ್ರ ಎಂಬೆರಡು ಭಾಗಗಳಲ್ಲಿ 'ಮಂತ್ರ' ಎಂದರೆ ಹೇಳುವ ಅಕ್ಷರಸಮೂಹ ಎಂಬರ್ಥ ಪ್ರಾಪ್ತವಾಗುತ್ತದೆ. ಕಾಲಕ್ರಮದಲ್ಲಿ ಸಂಸ್ಕೃತದ ಶ್ಲೋಕಗಳನ್ನೆಲ್ಲ 'ಮಂತ್ರ' ಎಂಬ ಶಬ್ದದಿಂದ ಸೂಚಿಸುವ ಪರಿಪಾಟವುಂಟಾಯಿತು.
ಮಂತ್ರದ್ರಷ್ಟಾರನಾದ ಋಷಿಯನ್ನು 'ಮಂತ್ರಕೃತ್' ಎನ್ನುತ್ತಾರೆ. ಮಂತ್ರದ ಅಭಿಮಾನಿ ದೇವತೆಯನ್ನು ಪೊನ್ನನ 'ಶಾಂತಿಪುರಾಣ'ದಲ್ಲಿ 'ಮಂತ್ರದೇವತೆ' ಎನ್ನಲಾಗಿದೆ ("ಮನಸಿಜಮಂತ್ರದೇವತೆಯರಂಗನೆಯರ್"). ಮಂತ್ರದಿಂದ ಪಾವನಗೊಂಡವನು 'ಮಂತ್ರಪೂತ' ("ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯಚ್ಛೃಂಗಮಂ ಆ ಶತಶೃಂಗಮಂ" - 'ಪಂಪಭಾರತ'). ಮಂತ್ರಶಕ್ತಿಯನ್ನು ಕೈವಶಮಾಡಿಕೊಂಡವನು 'ಮಂತ್ರಸಿದ್ಧ' ("ಮಹನೀಯಂ ಮಂತ್ರಸಿದ್ಧಂ ಬಿಡೆ ಪಿಡಿದ ಮಹಾಮುದ್ರೆಯಂ" 'ಪಾರ್ಶ್ವನಾಥಪುರಾಣ'). "ಆತ್ಮನೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗಟ್ಟಿ ಕಚ್ಚೆ .. .. ಮಂತ್ರಸಿದ್ಧರ ಮಂತ್ರ ಮರೆದು ಹೋದವು" ಎಂದು ಅಲ್ಲಮಪ್ರಭು ಒಂದೆಡೆ ಗೇಲಿಮಾಡುತ್ತಾನೆ.
ವೀರಶೈವರ 'ಅಷ್ಟಾವರಣ'ಗಳಲ್ಲಿ (ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ತಿ ಮತ್ತು 'ಮಂತ್ರ') ಇದೂ ಒಂದು. 'ಮನ್' (ಆಲೋಚಿಸು) ಮತ್ತು ತ್ರ' (ಕಾಪಾಡು) ಎಂದರೆ ಇದನ್ನು ಉಸುರುವವರನ್ನು ಕಾಪಾಡುವಂಥದು "ಮನನಾತ್ ತ್ರಾಯತೇ ಇತಿ ಮಂತ್ರಃ" - ಎಂಬರ್ಥವನ್ನು ಹೇಳಲಾಗುತ್ತದೆ. ಇದು ಶಿವಮಂತ್ರ; "ಶಿವಮಂತ್ರಕ್ಕೆ ಸರಿ  ಬೇರೆ ಮಂತ್ರವಿಲ್ಲ" ಎಂಬುದು ಬಸವಣ್ಣನ ಮಾತು. ಶಿವಮಂತ್ರಕ್ಕೆ ಎರಡು ರೂಪ. 'ನಮಃಶಿವಾಯ' ಎಂಬುದು ಪಂಚಾಕ್ಷರ ಮಂತ್ರ; ಅದಕ್ಕೆ ಮೊದಲು 'ಓಂ' ಸೇರಿದರೆ ಷಡಕ್ಷರಮಂತ್ರ. "ಮಂತ್ರವೆ ಅವಯವಂಗಳಾಗುಳ್ಳ ಶಿವ" ಎಂದು ಚೆನ್ನಬಸವಣ್ಣ ವರ್ಣಿಸುತ್ತಾನೆ. "ಮಂತ್ರವ ತನ್ನಲ್ಲಿ ಸಯವ ಮಾಡಲರಿಯದ ಮಂತ್ರಭ್ರಷ್ಟರ ನೋಡಾ" ಎಂದು ಚೆನ್ನಬಸವಣ್ಣ ತನ್ನೊಂದು ವಚನದಲ್ಲಿ ಹೇಳುತ್ತಾನೆ. ಮಂತ್ರಗಳ ಗುಟ್ಟನ್ನು ವಿವರಿಸುವುದೇ 'ಮಂತ್ರಗೋಪ್ಯ'.
======
ಮಂತ್ರ2: ಮಂತ್ರ ಎಂಬುದು ರಹಸ್ಯವಾದುದು ಎಂಬರ್ಥವನ್ನೂ ಪಡೆದಿದ್ದುದರಿಂದ ಗ್ರಹ ದೆವ್ವ ಪಿಶಾಚಿ ಬೇತಾಳಗಳಿಂದ ಪೀಡಿತರಾದವರನ್ನು ರಕ್ಷಿಸಲು ಬಳಸುವ ಅಕ್ಷರಸಮೂಹವನ್ನೂ ಮಂತ್ರ ಎಂಬ ಶಬ್ದದಿಂದ ಕರೆಯುವ ರೂಢಿ ಇತ್ತು ಮತ್ತು ಇದೆ. ಕನ್ನಡದಲ್ಲಿ ಇಂತಹ ಪೀಡಕ ಸತ್ವಗಳನ್ನು 'ಗಾಳಿ' ಎಂದೂ ಕರೆಯುತ್ತಿದ್ದರು. ಇವುಗಳನ್ನು ಹೋಗಲಾಡಿಸಬಲ್ಲವರನ್ನು ಮಂತ್ರವಿದರೆಂದೂ ಮಂತ್ರವಾದಿಗಳೆಂದೂ ಮಾಂತ್ರಿಕರೆಂದೂ ಕರೆಯುತ್ತಿದ್ದರು. "ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ, ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ" (ಗರ=ಗ್ರಹ) ಎಂಬ ಬಸವಣ್ಣನ ಮಾತಿನಲ್ಲಿ ಮಂತ್ರವಾದಿಗಳು ಗ್ರಹಪೀಡಿತರಲ್ಲಿ ಸೇರಿಕೊಂಡ ಗ್ರಹಗಳೊಡನೆ ವ್ಯವಹರಿಸಬಲ್ಲರೆಂಬ ಅರ್ಥವಿದೆ. ಬಸವಣ್ಣನ ಮತ್ತೊಂದು ವಚನದಲ್ಲಿ "ಶೂರತ್ವವುಳ್ಳವನಾತನೇ ಮಾಂತ್ರಿಕನು" ಎಂಬ ಮಾತಿದೆ. ಮಂತ್ರ ಹಾಗೂ ತಂತ್ರಸಿದ್ಧಿಗಳನ್ನು ಹಿಂದೆ ಅರುವತ್ತನಾಲ್ಕು (ಚೌಷಷ್ಟಿ) ವಿದ್ಯೆಗಳಲ್ಲಿ ಸೇರಿಸಿದ್ದರು.
ಇಂಥವರು ಕ್ಷುದ್ರದೈವಗಳನ್ನು ತಮ್ಮ ಕೈವಶಮಾಡಿಕೊಂಡವರು ಎಂಬ ನಂಬಿಕೆಯಿತ್ತು. ಅವುಗಳಿಂದ ಬೇಕಾದಾಗ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವುದು ಹಾಗೂ ಜನರನ್ನು ಮೆಟ್ಟಿದ ಗ್ರಹಗಳನ್ನು ಓಡಿಸುವುದನ್ನು ಮಾಡುತ್ತಿದ್ದರು. ಇದನ್ನು ಮಾಟ ಅಥವಾ ಅಭಿಚಾರ ಎನ್ನುತ್ತಿದ್ದರು. ದುರ್ಯೋಧನನು ಪಾಂಡವರ ವಿರುದ್ಧ ಮಾಟಮಾಡಿಸಿದ ಪ್ರಸಂಗ 'ಪಂಪಭಾರತ'ದಲ್ಲಿದೆ. ಮನುಷ್ಯನನ್ನು ಮೆಟ್ಟಿದ ದೆವ್ವವು ಮಂತ್ರವಾದಿಯನ್ನು ಎದುರಿಸಲಾಗದು ಎಂಬ ಭಾವನೆಯಿತ್ತು ("ಮಂತ್ರವಾದಿಯಂ ಕಂಡ ಗ್ರಹದಂತೆ ಸಮ್ಮುಖದೊಳ್ ನೋಡಲಣ್ಮದಿರೆಯುಂ" - 'ಪಂಚತಂತ್ರ'). ಹೀಗೆ ಮಾಡಬಲ್ಲವರು ಮಾಟಗಾರರೆಂದೂ ಹೆಸರನ್ನು ಪಡೆದವರು. ಇವರು ಹಲವು ವೇಳೆ ಪಿಶಾಚಿಗಳ ಬಾಧೆಯಿಂದ ರಕ್ಷಿಸಲು 'ಯಂತ್ರ'ಗಳನ್ನು ಕಟ್ಟುತ್ತಿದ್ದರು. ಹಾಗಾಗಿ ಇಂಥವರು 'ಯಾಂತ್ರಿಕ'ರೆಂಬ ಹೆಸರಿಗೂ ಪಾತ್ರವಾಗುತ್ತಿದ್ದರು. "ಯಾಂತ್ರಿಕನ ಯಂತ್ರ ಮಂತ್ರ ಸಂಬಂಧದಿಂದ ಪಿಶಾಚಗ್ರಸ್ತನ ಪಿಶಾಚಿಯು ಪಲಾಯನವಪ್ಪ ತೆರನಂತೆ" ಎಂಬ ಮಾತು ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಸ್ತ್ರೀ ಮಾಂತ್ರಿಕಳನ್ನು 'ಮಾಟಗಾತಿ' ಎನ್ನುತ್ತಿದ್ದರು. ತಮಗೆ ರೋಗ ಬಂದಾಗ ಮಾಟಗಾತಿಯಲ್ಲಿಗೆ ಹೋಗಿ ಗ್ರಹಗಳಿಗೆ ಶಾಂತಿಕರ್ಮ ಮಾಡಿಸುತ್ತಿದ್ದುದನ್ನು ಮಡಿವಾಳ ಮಾಚಯ್ಯ ಎಂಬ ವಚನಕಾರ ಟೀಕಿಸುತ್ತಾನೆ.
ಯಕ್ಷಿಣಿಯನ್ನು 'ಮಂತ್ರವಾದ'ವೆನ್ನುತ್ತಿದ್ದರು: "ಜ್ಯೋತಿಷ್ಯಂ ಮಂತ್ರವಾದಂ ಮೊದಲಾಗೊಡೆಯ  ಶಾಸ್ತ್ರಂಗಳೆಲ್ಲಮುಮಂ ಈ ಕೂಸನೋದಿಸಿದಾ" ಎಂಬುದು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. ಇದನ್ನು ಮಾಡುವವರನ್ನು ಮಂತ್ರವಾದಿಯೆನ್ನುತ್ತಿದ್ದರು: "ಕೊಟ್ಟಂ ಅರ್ಥಿಜನಕ್ಕಾ ದಿವಿಜೇಂದ್ರಂ ಬಳವಿಯ ಮಂತ್ರವಾದಿಯೆನೆ ಮಕುಟಬದ್ಧ ಸಮಾಜಂ" ಎಂಬ ಮಾತು ಪೊನ್ನನ 'ಶಾಂತಿಪುರಾಣ'ದ್ದು. ಯಕ್ಷಿಣಿಗಾರರು ಹಿಡಿದುಕೊಳ್ಳುತ್ತಿದ್ದ ಕೋಲೇ 'ಮಂತ್ರದಂಡ'.
=====
ಮಂತ್ರ3: ಹಾವು ಮುಂತಾದ ವಿಷಜಂತುಗಳ ವಿಷವನ್ನಿಳುಹಲು ಮಂತ್ರವನ್ನು ಬಳಸುತ್ತಿದ್ದರು. ವಸುಮಿತ್ರನೆಂಬ ಬಾಲಕನಿಗೆ ಹಾವು ಕಚ್ಚಿದಾಗ ಮಂತ್ರವಾದಿಯೊಬ್ಬ 'ಪಱೆಗುಟ್ಟಿ ಮಂತ್ರಿಸಿ' ಅವನನ್ನು ಬದುಕಿಸುವ ಸನ್ನಿವೇಶ 'ವಡ್ಡಾರಾಧನೆ'ಯಲ್ಲಿದೆ. ರಾಜಕುಮಾರನ್ನು ಹಾವು ಕಚ್ಚಿದಾಗ ಶಿವಭೂತಿ ಎಂಬುವವನು "ಗುಂಡಿಗೆಯ ನೀರನಭಿಮಂತ್ರಿಸಿ ತಳಿಯಲೊಡಂ ಕುಮಾರಂ" ನಿರ್ವಿಷನಾದನೆಂದು 'ಪಂಚತಂತ್ರ'ದಲ್ಲಿ ವರ್ಣಿತವಾಗಿದೆ. ಹನ್ನೊಂದನೆಯ ಶತಮಾನದ ಚಾವುಂಡರಾಯನ 'ಲೋಕೋಪಕಾರಂ'ನಲ್ಲಿ ವಿಷವೈದ್ಯ ಪ್ರಕರಣದಲ್ಲಿ ವಿಷವನ್ನಿಳುಹುವ ಎರಡು ಬಗೆಯ ಚಿಕಿತ್ಸೆಗಳ ಬಗ್ಗೆ ವಿಸ್ತಾರವಾದ ಪ್ರಸ್ತಾಪವಿದೆ: "ಓಂ ಹ್ರೀಂ ವಃ ಎಂಬ ಮಂತ್ರದಿನಭಿಮಂತ್ರಿಸಿ ಜಲಮಂ ಮೊಗದೊಳ್ ತಳಿಯೆ ಸಾಧ್ಯಮೆಂದಱಿಗೆ ತೆಱೆದೊಡಕ್ಷಿದ್ವಯಮಂ" ಎಂದೂ, ಗಾರುಡ, ವಾಯು ಹಾಗೂ ಗಗನಮಂತ್ರಗಳಿಂದ ಅಭಿಮಂತ್ರಿಸಿದ ನೀರನ್ನು ಚಿಮುಕಿಸಿ ಅಥವಾ ಮಂತ್ರಗಳಿಂದ ಅಭಿಮಂತ್ರಿಸಿದ ನೀರನ್ನು ಕುಡಿಸಿ ವಿಷವಿಳಿಸುವುದು ಒಂದು ಬಗೆಯಾದರೆ, "ಪಾವು ಕೊಳೆ ಕರ್ಣಮಲಮಂ ತೀವುಗೆ ಮೇಣ್ ಕೊಯ್ದು ಕಳೆಗೆ ಪಿಂಡುಗೆ ರಕ್ತಸ್ರಾವಂ ಮಾಡುಗೆ ಚುರ್ಚುಗೆ ನೀವುಗೆ ವಿಷಹರಣಮಲ್ತೆ ತಾತ್ಕಾಲಿಕದೊಳ್" ಎಂದು ಹಾವು ಕಚ್ಚಿದ ಜಾಗದಲ್ಲಿ ಗಾಯಮಾಡಿ ರಕ್ತ ಹೊರತೆಗೆಯುವುದು ಇನ್ನೊಂದು ಬಗೆ.  ಇವುಗಳನ್ನು ಬಸವಣ್ಣ ಕ್ರಮವಾಗಿ 'ಮಂತ್ರವೈದ್ಯಕಿ ಕಶಸ್ತ್ರವೈದ್ಯ' ಎಂದು ಕರೆಯುತ್ತಾನೆ: "ಗುರೂಪದೇಶ ಮಂತ್ರವೈದ್ಯ, ಜಂಗಮೋಪದೇ ಶಸ್ತ್ರವೈದ್ಯ ನೋಡಾ". ಹಾವು ಕಚ್ಚಿದ ವ್ಯಕ್ತಿಯೂ ಮಂತ್ರವನ್ನು ಉಚ್ಚರಿಸಿದರೆ ವಿಷ ಇಳಿಯುತ್ತದೆಂಬ ನಂಬಿಕೆಯಿತ್ತು: "ಸಂಸಾರವೆಂಬ ಸರ್ಪ ಮುಟ್ಟಲು ಪಂಚೇಂದ್ರಿಯ ವಿಷಯವೆಂಬ ವಿಷದಿಂದ ಆನು ಮುಂದುಗೆಟ್ಟೆನಯ್ಯಾ; .. .. ಓಂ ನಮಶ್ಶಿವಾಯ ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯಾ" ಎಂಬುದು ಬಸವಣ್ಣನ ಇನ್ನೊಂದು ವಚನ.
ಹಾವನ್ನು ಹಿಡಿಯುವಾಗ ಅದು ಮತ್ತಿಗೊಳಗಾಗುವಂತೆ ಮಂತ್ರವನ್ನು ಹೇಳುತ್ತಿದ್ದರಂತೆ; ಆಗ ಅದರ ಹಲ್ಲಿನ ವಿಷ ಹೋಗುತ್ತಿತ್ತು. "ಪಾವಿನ ಪಲ್ಲ ನಂಜು ಕಿಡುವಂತಿರೆ ಮಾಂತ್ರಿಕ ಮಂತ್ರಶಕ್ತಿಯಿಂ" ಎಂಬ ಹೋಲಿಕೆ ನಾಗಚಂದ್ರನ 'ಪಂಪರಾಮಾಯಣ'ದಲ್ಲಿ ಬರುತ್ತದೆ. ಇದೇ ಕಾವ್ಯದಲ್ಲಿ ಮತ್ತೊಂದೆಡೆ ಹಾವಿನಂತೆ ಗೆರೆಯನ್ನು ಬರೆದು ಮಂತ್ರಶಕ್ತಿಯಿಂದ ವ್ಯಕ್ತಿಯನ್ನು ಮೂರ್ಚೆಗೊಳಿಸುತ್ತಿದ್ದ ಬಗೆಯೂ ವರ್ಣಿತವಾಗಿದೆ: "ಬರೆದು ಉರಗಲೇಖೆ ಮೂರ್ಛಾಪರಿಣತಿಯಂ ಮಂತ್ರಶಕ್ತಿಯಿಂ ಪುಟ್ಟಿಪವೋಲ್". ವಿಷವಿಳಿಸುವ ಮಂತ್ರವನ್ನು ರಚಿಸಿದವನು ಗರುಡನಾದ್ದರಿಂದ ಇದಕ್ಕೆ 'ಗಾರುಡಮಂತ್ರ'ವೆಂಬ ಹೆಸರು ಜನಜನಿತವಾಯ್ತು. ಅದನ್ನು ಬಲ್ಲವನು 'ಗಾರುಡಿಗ'. "ಓರ್ವ ನಿರ್ಬುದ್ಧಿ ಗಾರುಡಿಗಂ ಗಾರುಡಮಂ ಕಲ್ತು ವಿದ್ಯಾಪ್ರಚಯಮಂ ನೋಡಲೆಂದು ಸರ್ಪದಷ್ಟನಂ ಅರಸುತ್ತುಂ" ಹೋಗುವ ಪ್ರಸ್ತಾಪ 'ಪಂಚತಂತ್ರ'ದಲ್ಲಿ ಬರುತ್ತದೆ.
=====
ಮಂತ್ರ4: ಮಂತ್ರ ಎಂದರೆ ಸಮಾಲೋಚನೆ ಎಂಬರ್ಥವೂ ಇದೆ. "ಸತ್ಯವತಿ ತಾನುಂ ಆತನುಂ ಆಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣ್ವಪಾಯನನಂ ನೆನೆದು: ಎಂಬುದು 'ಪಂಪಭಾರತ'ದ ಮಾತು. 'ಮಂತ್ರಗುಪ್ತಿ' ಎಂಬ ಶಬ್ದವನ್ನೂ ಸಮಾಲೋಚನೆ ಎಂಬರ್ಥದಲ್ಲಿ ಪಂಪ ಬಳಸಿದ್ದಾನೆ: "ಆ ಮುನಿನಾಥಂ ತ್ರಿಗುಪ್ತಿಯೊಳ್ ನೆರೆದಂ ಈ ಮಹೀನಾಥಂ ಮಂತ್ರಗುಪ್ತಿಯೊಳ್ ನೆರೆದಂ" ('ಆದಿಪುರಾಣ'). ರಾಜರುಗಳು ಸಮಾಲೋಚನೆಯಲ್ಲಿ ತೊಡಗುವ ಕೋಣೆಯನ್ನು ಪಂಪನು 'ಮಂತ್ರಾವಾಸ' ಎನ್ನುತ್ತಾನೆ ("ಮಂತ್ರಾವಾಸದೊಳ್ ಮಂತ್ರನಿಶ್ಚಿತನಾಗಿ" 'ಪಂಪಭಾರತ'). ಇದನ್ನು 'ಮಂತ್ರಶಾಲೆ' ಎಂದೂ ಕರೆಯಲಾಗುತ್ತಿತು: "ವಾಲಿ ಮಂತ್ರಶಾಲೆಯಂ ಸುಗ್ರೀವಂಬೆರಸು ಪೊಕ್ಕು ಮಂತ್ರಿಮಂಡಲಮಂ ಆಪ್ತಪರಿಜನಮುಮಂ ಬರಿಸಿ" ('ಪಂಪರಾಮಾಯಣ'). ಇದನ್ನು 'ಚಂದ್ರಪ್ರಭಪುರಾಣ'ದಲ್ಲಿ 'ಮಂತ್ರಾಗಾರ' ಎಂದಿದೆ ("ಮಂತ್ರಾಗಾರದಿಂದಂ ಕ್ಷಿತಿಪತಿ ಪೊರಮಟ್ಟಂ").
ರಾಜನ ಮೂರು ಬಗೆಯ ಶಕ್ತಿಗಳೆಂದರೆ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿ ಎಂಬಿವುಗಳೆಂದು 'ಪಂಚತಂತ್ರ'ದಲ್ಲಿ ಹೇಳಿದೆ; ಮಂತ್ರಶಕ್ತಿ ಎಂದರೆ "ಹಿತರ್ ಅರ್ಥಶಾಸ್ತ್ರಕುಶಲರ್ ಚತುರುಪಧಾವಿಶುದ್ಧರೆನಿಪ ಸಚಿವರೊಳ್ ಅನ್ವಿತಮಾಗೆ ಮಾಳ್ಪ ಕಾರ್ಯಂ ಪತಿಗೆಂದುಂ ಮಂತ್ರಶಕ್ತಿ ಮನುಮುನಿಮತದಿಂ" ಎಂದು ಅದೇ ಕಾವ್ಯದಲ್ಲಿ ವಿವರಿಸಲಾಗಿದೆ. ವಿಶೇಷವಾಗಿ ಯುದ್ಧಸಮಯಗಳಲ್ಲಿ ಇಂತಹ ಸಮಾಲೋಚನೆ ಅತ್ಯಂತ ಆವಶ್ಯಕ ಎಂಬ ಅಭಿಪ್ರಾಯದಲ್ಲಿ 'ಪಂಚತಂತ್ರ'ವು "ಚತುರಂಗಬಲಮೇವುದೋ ಸನ್ಮಂತ್ರಮೆ ಸಾಲ್ಗುಂ ಪುಸಿಗುಮೆ ದೇವ ಮಂತ್ರಮೂಲೋಹಿ ವಿಜಯಃ ಎಂಬೀ ವಾಕ್ಯಂ" ಎಂದು ವಿವರಿಸಿದೆ. ಇಂತಹ ಸಮಾಲೋಚನೆಯಲ್ಲಿ ದಾರಿತಪ್ಪಿದವನನ್ನು 'ಕುಮಾರವ್ಯಾಸ ಭಾರತ'ವು 'ಮಂತ್ರಭ್ರಮಿತ' ಎನ್ನುತ್ತದೆ ("ಸಮರಜಯಸಾಧಕರು ಮಂತ್ರಭ್ರಮಿತರಾಯ್ತಪಜಯವಧೂವಿಭ್ರಮಕಟಾಕ್ಷದ ಘಾಯದಲಿ ಕಳವಳಿಸದವರಾರು").
ಸಮಾಲೋಚನೆ ನಡೆಯಿಸುವುದೇ 'ಮಂತ್ರಾಲೋಚನೆ' ("ವಿಶಾಖಭೂತಿ ಮಂತ್ರಾಲೋಚನೆಯೊಳ್ ಯುವರಾಜಂಗೆ ಬೞಿಯನಟ್ಟಿ" 'ಶಾಂತಿಪುರಾಣ'). ಯಾವ ಸಂದರ್ಭಗಳಲ್ಲಿ ಮಂತ್ರಾಲೋಚನೆ ಆವಶ್ಯಕ ಎಂಬುದನ್ನು 'ಪಂಚತಂತ್ರ'ವು ಹೀಗೆ ವಿವರಿಸುತ್ತದೆ: "ಆಗಿರ್ದ ಕಾರ್ಯದ ಪೆರ್ಚುಗೆಗಂ ಮುಂತಪ್ಪ ಕಜ್ಜಮುಮಂ ಮಾಳ್ಪುದರ್ಕಂ ಅನರ್ಥಕಮಪ್ಪ ಕಜ್ಜದ ಪ್ರತೀಕಾರಕ್ಕಂ ಆವುದಾನೊಂದಾಲೋಚನೆಗೆಯ್ದು ಮಾಳ್ಪುದುತ್ತಮ ಮಂತ್ರಂ". ಅಂತೆಯೇ ಮಂತಾಲೋಚನೆಯ ನಿರ್ಣಯವನ್ನು ಗೋಪ್ಯವಾಗಿಡುವುದೂ ಆವಶ್ಯಕವೆಂದು 'ಪಂಚತಂತ್ರ'ವು ಹೇಳುತ್ತದೆ: "ಮಂತ್ರವು ಹೊರಪಟ್ಟಲ್ಲಿ ಕಾರ್ಯವು ಕಿಡುವುದು; ಅದುಕಾರಣಮದು ಎಲ್ಲಾ ಕಡೆಯಿಂದಲೂ ಗೋಪ್ಯವಾಗಿ ರಕ್ಷಿಸಲ್ಪಡತಕ್ಕುದು".
=====
ಮಂತ್ರಿ:  ಯಾವುದೇ ಬಗೆಯ ಅರ್ಥದಲ್ಲಿ ಮಂತ್ರವನ್ನು ಅರಿತವನು 'ಮಂತ್ರಿ' ಎನ್ನಿಸಿಕೊಳ್ಳುತ್ತಾನಾದರೂ ರಾಜನ ಸಮಾಲೋಚನೆಯಲ್ಲಿ ಸೇರುವವನನ್ನು ಈ ಶಬ್ದದಿಂದ ಕರೆಯುವುದು ಈಗಿನ ರೂಢಿ. "ಮಂತ್ರೀ ಧೀಸಚಿವೋ ಅಮಾತ್ಯೋ" ಎಂದು ಸಮಾನಾರ್ಥಕಗಳನ್ನು ಸೂಚಿಸುವ 'ಅಮರಕೋಶ'ವು ಮಂತ್ರಿಯನ್ನು 'ಧೀಸಚಿವ' ಎಂದಿರುವುದು ಗಮನಾರ್ಹ. ಅವನು ರಾಜ್ಯದ ಆಲೋಚನೆಯನ್ನು ಹೇಳುವವನು. "ನರಪತಿಯ ಬುದ್ಧಿಸಚಿವಂ ನಯಶಾಸ್ತ್ರನಪ್ಪವಂ ಮಂತ್ರಿ" ಎಂದು 'ಅಭಿಧಾನ ವಸ್ತುಕೋಶ'ವು ಹೇಳುತ್ತದೆ. ಸಚಿವನಿಗಿರಬೇಕಾದ ಅರ್ಹತೆಗಳ ಕುರಿತು 'ಮನುಸ್ಮೃತಿ'ಯಲ್ಲಿ ದೀರ್ಘವಾಗಿ ಪ್ರಸ್ತಾಪಿಸಲಾಗಿದೆ. ಸತ್ತ ಮಂತ್ರಿಯ ಸ್ಥಾನವನ್ನು ರಾಜನು ಅವನ ಮಕ್ಕಳಿಗೆ ನೀಡುತ್ತಿದ್ದ ಪದ್ಧತಿ ಒಂದು ಕಾಲದಲ್ಲಾದರೂ ಇದ್ದಂತೆ ಕಾಣುತ್ತದೆ: ಅತಿಬಳ ಅರಸನ ಮಂತ್ರಿ ಸೋಮಶರ್ಮಖನೆಂಬುವವನು ಸತ್ತಾಗ ಅವನ ಮಕ್ಕಳಿಗೆ ಆ ಸ್ಥಾನ ನೀಡುವ ಬಗ್ಗೆ ರಾಜ ಆಲೋಚಿಸುವ ಪ್ರಸಂಗವು 'ವಡ್ಡಾರಾಧನೆ'ಯಲ್ಲಿದೆ. ಮಂತ್ರಿಗಳಿಗಿರಬೇಕಾದ ಗುಣಗಳೇ 'ಮಂತ್ರಿಗುಣ'; ಇವುಗಳು ಯಾವುವೆಂಬುದನ್ನು 'ಪಂಚತಂತ್ರ' ಹೀಗೆ ವಿವರಿಸುತ್ತದೆ: "ಗೂಢಲಕ್ಷಣ ಭಿನ್ನಪ್ರತಿಸಂಧಾನ ಸಂಧಿದೂಷಣ ಪರಿಚಿತ್ತ ಪರೀಕ್ಷಾಲಕ್ಷಣಮೆಂಬ ಮಂತ್ರಿಗುಣಂಗಳು". ತನ್ನ ಕಾವ್ಯವು ವಿವಿಧ ಬಗೆಯ ಜನರಿಗೆ ಅವರಿಗೆ ಬೇಕಾದುದನ್ನು ನೀಡುತ್ತದೆ ಎಂದು ಹೇಳುವಾಗ ಕುಮಾರವ್ಯಾಸನು "ಮಂತ್ರೀಜನಕ್ಕೆ ಬುದ್ಧಿಗುಣ" ಎಂಬುದನ್ನೂ ಸೇರಿಸುತ್ತಾನೆ.
ರಾಜ್ಯವೊಂದರ "ಸ್ವಾಮಿ ಅಮಾತ್ಯ ಜನಪದ ದುರ್ಗ ಸುಹೃತ್ ಕೋಶ ದಂಡಮೆಂಬ ಏಳಂಗ"ಗಳಲ್ಲಿ ರಾಜನಾದ ಮೇಲೆ ಮಹತ್ವ ಪಡೆಯುವವನು 'ಅಮಾತ್ಯ' ಅಥವಾ ಮಂತ್ರಿಯೇ. ರಾಜನ ಬಳಿ ಒಬ್ಬರಿಗಿಂತ ಹೆಚ್ಚು ಮಂತ್ರಿಗಳಿರುತ್ತಿದ್ದರು; ಅವರೆಲ್ಲ ಸೇರಿ 'ಮಂತ್ರಿಮಂಡಲ'ವಾಗುತ್ತಿತ್ತು: "ವಾಲಿ ಮಂತ್ರಶಾಲೆಯಂ ಪೊಕ್ಕು ಸುಗ್ರೀವಂಬೆರಸು ಮಂತ್ರಿಮಂಡಲಮುಂ ಆಪ್ತಪರಿಜನಮುಮಂ ಬರಿಸಿ" 'ಪಂಪರಾಮಯಣ'). ಅನೇಕ ಶಾಸನಗಳಲ್ಲಿ ಮಂತ್ರಿಗಳನ್ನು 'ಪ್ರಧಾನ'ರು ಎಂದೂ ಕರೆಯಲಾಗಿದೆ; ವಚನಗಳಲ್ಲಿ 'ಪ್ರಧಾನಿ' ಎಂಬ ರೂಪವೂ ದೊರೆಯುತ್ತದೆ. ಶಾಸನಗಳೆಲ್ಲ ಎಲ್ಲ ಮಂತ್ರಿಗಳನ್ನೂ ದಂಡನಾಯಕ ಎಂಬ ವಿಶೇಷಣದಿಂದ ಕರೆಯುತ್ತವೆ. ದುಷ್ಟಮಂತ್ರಿಯನ್ನು ತೆಗೆದುಹಾಕಬೇಕೆಂದು 'ಪಂಚತಂತ್ರ'ವು ಶಾಸ್ತ್ರಗ್ರಂಥವೊಂದನ್ನು ಉಲ್ಲೇಖಿಸಿ ಹೇಳುತ್ತದೆ: "ಪಗೆಯಪ್ಪ ಭೃತ್ಯನಂ, ಅಲುಗಾಡುವ ಹಲ್ಲಂ ದುಷ್ಟನಪ್ಪ ಮಂತ್ರಿಯಂ ಬೇರ್ವೆರಸಿ ಕೀಳ್ವುದೇ ಸುಖಂ" ವ್ಯಕ್ತಿಯೊಬ್ಬನಿಗೆ ಅವನ ಅಂತಃಕರಣಗಳೇ ಬುದ್ಧಿವಾದವನ್ನು ಹೇಳಬಲ್ಲವು ಎಂಬರ್ಥದಲ್ಲಿ ಜೋದರ ಮಾಯಣ್ಣ ಎಂಬ ವಚನಕಾರನು "ಅಂತಃಕರಣಚತುಷ್ಟಯಂಗಳೇ ನಿಮ್ಮ ಮಂತ್ರಿಗಳಯ್ಯ" ಎನ್ನುತ್ತಾನೆ.
=====
ಮಂದಾಸನ: ಇದು ಸಂಸ್ಕೃತದ 'ಮಂಜೂಷಾ' ಮತ್ತು 'ಆಸನ' ಎಂಬೆರಡು ಶಬ್ದಗಳಿಂದ ಆದ ಹಾಗೆ ತೋರುತ್ತದೆ. ಸಂಸ್ಕೃತದಲ್ಲಿ ಮಂಜೂಷಾ ಎಂದರೆ ಪೆಟ್ಟಿಗೆ: "ಪಿಟಕಃ ಪೇಟಕಃ ಪೇಟಾ ಮಂಜೂಷಾ" ಎಂದು 'ಅಮರಕೋಶ'ದಲ್ಲಿದೆ. "ಪೇೞಿಗೆಯದು ಮಂಜೂಷೆ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ ('ಪೇೞಿಗೆ' ಎಂಬುದು 'ಪೇಟಿಕಾ'ದ ತದ್ಭವ). 'ಮಂದಸು' ಎಂಬ ಶಬ್ದವನ್ನು 'ಚಾವುಂಡರಾಯಪುರಾಣ' ಪೆಟ್ಟಿಗೆ ಎಂಬರ್ಥದಲ್ಲಿ ಬಳಸಿದೆ: "ಮಂದಸಿನೊಳಿರ್ದ ತಳಾರನ ಸಾಕ್ಷಿ ನುಡಿಯಿಸಿದೊಡಂ". 'ಮಂದಾಸ' ಎಂಬ ರೂಪವು 'ಜೀವಸಂಬೋಧನೆ'ಯಲ್ಲಿದೆ: "ಮೇಗೆ ನೆಗೆದ ಮಂದಾಸಂ ಸಿಡಿಲ್ ಬಡಿಯೆ ಸುಭೌಮಂ ಸತ್ತು". ಕರ್ಣಪಾರ್ಯನ 'ನೇಮಿನಾಥಪುರಾಣ'ದಲ್ಲಿ ಬರುವ "ಕುಮಾರನಂ ಆಗಳೆ ಕೊಂಡು ಬಂದವರ್ ಸೊಗಯಿಸುತಿರ್ಪ ಮಂದಸಿನೊಳಿಕ್ಕಿ" ಎಂಬ ವಾಕ್ಯವನ್ನು ಗಮನಿಸಿದರೆ 'ಮಂದಸು' ಪದಕ್ಕೆ ಪೆಟ್ಟಿಗೆ ಎಂಬರ್ಥ ಮಾಡುವುದಕ್ಕಿಂತ ತೊಟ್ಟಿಲು ಎಂದು ಅರ್ಥೈಸುವುದು ಹೆಚ್ಚು ಸೂಕ್ತವಾಗಿ ಕಾಣುತ್ತದೆ. 'ಮಂದಾಸು' ಎಂಬ ರೂಪವು ಮೂರನೆಯ ಮಂಗರಸನ 'ನೇಮಿಜಿನೇಶಸಂಗತಿ'ಯಲ್ಲಿದೆ: "ಆ ಸುಕುಮಾರನನೊಂದು ಮಂದಾಸಿನೊಳ್ ರಾಸಿ ಮಾಡಿದ ರತ್ನಸಹಿತ ಆ ಸಹಚರಿಯರಿಸಿ". ಇಲ್ಲಿಯೂ 'ಮಂದಾಸು'ವಿಗೆ ಪೆಟ್ಟಿಗೆ ಎಂಬುದಕ್ಕಿಂತ ತೊಟ್ಟಿಲು ಎಂಬರ್ಥ ಹೆಚ್ಚು ಸೂಕ್ತವಾಗಿ ಕಾಣುತ್ತದೆ. ಬಾಹುಬಲಿಯ 'ನಾಗಕುಮಾರಚರಿತೆ' ಎಂಬ ಕಾವ್ಯದಲ್ಲಿ 'ಮಂದಾಸು' ಶಬ್ದವನ್ನು ಪ್ರಾಣಿಗಳನ್ನಿಡುವ ಬೋನು ಎಂಬರ್ಥದಲ್ಲಿ ಬಳಸಲಾಗಿದೆ: "ಘೋಟದರಸು ಅಟ್ಟಿದ ಮಂದಾಸಿನೊಳು ಶಕಟದ ಮೇಲಿಟ್ಟು". ಈಗ ಮಂದಸು ಎಂಬ ಶಬ್ದ ಸ್ವತಂತ್ರವಾಗಿ ಬಳಕೆಯಲ್ಲಿಲ್ಲದಿದ್ದರೂ 'ಮಂದಾಸನ' ಎಂಬುದು ಸರ್ವಸಾಮಾನ್ಯ ಬಳಕೆಯ ಶಬ್ದವಾಗಿದೆ,  ಮಂದಾಸನ ಎಂದರೆ ದೇವರ ವಿಗ್ರಹವನ್ನು ಪೂಜೆಗಾಗಿ ಇಡುವ ಪೆಟ್ಟಿಗೆ ಅಥವಾ ಮಂಟಪದಾಕಾರದ ಮರದ ರಚನೆಗೆ ಅನ್ವಯಿಸುತ್ತದೆ. ಹೀಗಾಗಿ, ಪ್ರಾಯಶಃ ಪೆಟ್ಟಿಗೆಯಾಕಾರದ ಎಲ್ಲ ವಸ್ತುಗಳನ್ನೂ ಮಂದಸ ಎಂಬುದರೊಡನೆ ಸಮೀಕರಿಸುವ ಹಾಗೆ ಕಾಣುತ್ತದೆ. ಮಂಜೂಷಾ>ಮಂದಸ ಆದ ಮೇಲೆ ಕನ್ನಡದಲ್ಲಿ ಈ ತದ್ಭವಕ್ಕೇ 'ಆಸನ' ಎಂಬ ಶಬ್ದವನ್ನು ಸೇರಿಸಿ ಸವರ್ಣಸಂಧಿಯಾಗಿಸಿ 'ಮಂದಾಸನ'ವಾಗಿ ಮಾಡಿಕೊಂಡಿರುವಂತೆ ಕಾಣುತ್ತದೆ. ಆದ್ದರಿಂದ 'ಮಂದಾಸನ' ಎಂಬ ಶಬ್ದಕ್ಕೆ ಮಂದಸ+ಆಸನ=ಮಂದಸಾಸನ>ಮಂದಾಸನ ಎಂಬ ವ್ಯತ್ಪತ್ತಿಯನ್ನು ಹೇಳಬಹುದೆಂದು ಕಾಣುತ್ತದೆ.

=====
ಮಗು: ಇದೊಂದು ದ್ರಾವಿಡ ಪದ. ಇದರರ್ಥ ಶಿಶು ಎಂದು. ತಮಿಳಿನಲ್ಲಿ ಮಕ, ತುಳುವಿನಲ್ಲಿ ಮಗೆ, ಮಲಯಾಳಂನಲ್ಲಿ ಮಗನ್ ಎಂಬ ರೂಪಗಳಿವೆ. ಸಂತಾನ ಎಂಬರ್ಥದಲ್ಲಿ ಮಗ, ಮಗಳು ಎಂಬ ಶಬ್ದಗಳು ಬಳಕೆಯಲ್ಲಿವೆ. ಮಗು+ಅನ್=ಮಗನ್>ಮಗ ಎಂದೂ ಮಗು+ಅಳ್+ಮಗಳ್ (ಅವನ್, ಅವಳ್ ಎಂಬ ಸರ್ವನಾಮಗಳು ಗಂಡು-ಹೆಣ್ಣು ಎಂದು ಸೂಚಿಸುವ ಅನ್, ಅಳ್ ಎಂಬ ಪ್ರತ್ಯಯಗಳಾಗಿವೆ) ಎಂದೂ ಆಗಿವೆ. ಮಗ ಎಂಬುದು ಪುಂವಾಚಿಯಾಗಿ (ಗಂಡು ಎಂಬುದನ್ನು ಸೂಚಿಸಲು) ಮಗವಾಡು ಆಲುಮಗ ಮುಂತಾಗಿ ತೆಲುಗಿನಲ್ಲಿ ಬಳಕೆಯಾಗುತ್ತದೆ; ಮಗಡು ಎಂಬುದು ಅಲ್ಲಿ ಗಂಡನನ್ನು ಸೂಚಿಸುತ್ತದೆ. ಕನ್ನಡದಲ್ಲಿ ಮಗು ಎಂಬುದಕ್ಕೆ (ಕ)ಗಳ್ ಎಂಬ ಬಹುವಚನ ಪ್ರತ್ಯಯ ಹತ್ತಿಸಿ ಮಗುಗಳ್>ಮಕ್ಕಳ್ ಎಂಬ ರೂಪವನ್ನು ಮಾಡಿಕೊಳ್ಳುತ್ತೇವೆ.
ಚಿಕ್ಕವರನ್ನು ಅಕ್ಕರೆಯಿಂದ ಕರೆಯುವಾಗ 'ಮಗು' ಎಂದು ಸಂಬೋಧಿಸುವ ರೂಢಿಯಿದೆ. ಮಗು ಪುಂಸ್ತ್ರೀವಾಚಿಯಾದ (ಹೆಣ್ಣು ಗಂಡು ಎರಡಕ್ಕೂ ಅನ್ವಯಿಸುವ) ಪದವಾದುದರಿಂದ ಕನ್ನಡದಲ್ಲಿ ಅದರ ಹಿಂದೆ ಗಂಡು ಹೆಣ್ಣು ಎಂದು ಸೇರಿಸಿ ಗಂಡುಮಗು, ಹೆಣ್ಣು ಮಗು ಎಂದು ಮಾಡಿಕೊಳ್ಳುವ ಪರಿಪಾಟವಿದೆ: ಮಗ, ಮಗಳು ಎಂಬುದು ಸಿದ್ಧವಾದ ಮೇಲೆ ಬಹುವಚನವನ್ನು ಸೂಚಿಸಲು 'ಅಂದಿರು' ಎಂಬ ಪ್ರತ್ಯಯ ಸೇರಿಸಿದಾಗ ಮಗಂದಿರು, ಮಗಳಂದಿರು ಎಂಬ ರೂಪಗಳುಂಟಾಗುತ್ತವೆ. ಕ್ರಿಶ ಹತ್ತನೆಯ ಶತಮಾನದ ಗದ್ಯಕಾವ್ಯ 'ಚಾವುಂಡರಾಯಪುರಾಣ'ದಲ್ಲಿ "ಸಾಗರದತ್ತನುಂ ಸಮುದ್ರದತ್ತನುಂ ಎಂಬ ಮಗಂದಿರುಂ" ಎಂಬ ಹಾಗೂ ಹೆಣ್ಣುಮಕ್ಕಳು ಎಂಬರ್ಥದಲ್ಲಿ 'ಮಗಳ್ದಿರ್" ಎಂಬ ಪ್ರಯೋಗಗಳಿವೆ.
ಸಮಾಸಪದಗಳಲ್ಲೂ ಮಗ ಶಬ್ದವನ್ನು ಬಳಸಿ, ಮದುಮಗ, ಮದುಮಗಳು, ಮದುಮಕ್ಕಳು ಎಂಬ ರೂಪಗಳನ್ನು ಮಾಡಿಕೊಳ್ಳುತ್ತೇವೆ. ಮಕ್ಕಳಾಟ ಎಂಬುದು ಹುಡುಗಾಟವನ್ನು ಸೂಚಿಸುವಂತೆಯೇ ಗಂಭಿರವಾಗಿ ಪರಿಗಣಿಸದುದನ್ನೂ ಧ್ವನಿಸುತ್ತದೆ. ಹೀಗೆಯೇ ಮಕ್ಕಳಾಟಿಕೆ ಎಂಬುದು ಆಟದ ಸಾಮಾನು ಮತ್ತು ಮಕ್ಕಳು ಆಟವಾಡುವುದು ಹಾಗೂ ಗಂಭೀರವಾಗಿ ಪರಿಗಣಿಸದ ಮನೋಭಾವವನ್ನು ಸೂಚಿಸುತ್ತದೆ.
=====
ಮಜ್ಜನ: ಈ ಸಂಸ್ಕೃತ ಶಬ್ದದ ಮೂಲಾರ್ಥ ನೀರಲ್ಲಿ ಮುಳುಗುಹಾಕುವುದು ಎಂದು. ಕನ್ನಡದಲ್ಲಿದು ಸ್ನಾನ ಎಂಬ ವಿಶಾಲಾರ್ಥವನ್ನು ಪಡೆದಿದೆ. "ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದ .. .. ನೀರರುಹ ಎಂಬ ಮಾತು 'ಪಂಪಭಾರತ'ದಲ್ಲಿದೆ. "ಮಜ್ಜನಕೀಗಳೆ ರಾಜಪುತ್ರಿ ನೀಂ ನಡೆ" ಎಂಬ ವಾಕ್ಯ 'ಕರ್ಣಾಟಕ ಕಾದಂಬರಿ'ಯದು. 'ಮಜ್ಜನಂಬುಗು' ಎಂದರೆ ಸ್ನಾನಮಾಡು ಎಂದರ್ಥ: "ಉದಿತೋದಿತಂ ದಿಗಿಭಗಳೆಂಟುಂ ಒಳ್ಪೊಡರಿಸಿ ಮಜ್ಜನಂಬುಗುಸೆ" ('ಪಂಪಭಾರತ'). 'ಮಜ್ಜನಂಬೊಗು' ಎಂಬ ರೂಪವೂ ಸಿಕ್ಕತ್ತದೆ: "ಮಜ್ಜನಂಬೊಕ್ಕು ದಿವ್ಯವಸ್ತ್ರಮನುಟ್ಟು ಮಗುಳ್ದು ಬಂದು" (ನಯಸೇನನ 'ಧರ್ಮಾಮೃತ'). 'ಮಜ್ಜನವಳ್ಳ' ಎಂದರೆ ಸ್ನಾನ ಮಾಡಿಸುವವನು ("ಮಜ್ಜನಪೀಠಂ ಸುರಗಿರಿ ಮಜ್ಜನಜಳವಮೃತಜಳಧಿಜಳವು ಅಮರೇಂದ್ರಂ ಮಜ್ಜನವಳ್ಳಂ" ('ಆದಿಪುರಾಣ'). ಹಾಗೆಯೇ ಸ್ನಾನಮಾಡಿಸುವವಳು 'ಮಜ್ಜನವಳ್ತಿ': "ಅಮರ್ತ್ಯೆಯರೆ ಮಜ್ಜನವಳ್ತಿಯರಾಗಿ" (ಅಗ್ಗಳನ 'ಚಂದ್ರಪ್ರಭಪುರಾಣ'). ಸ್ನಾನ ಮಾಡುವಾಗ ಕುಳಿತುಕೊಳ್ಳುವ ಮಣೆಯನ್ನು 'ಮಜ್ಜನಪೀಠ' ಎನ್ನುತ್ತಿದ್ದರು: "ವಿಭವಂ ಜನ್ಮಾಭಿಷೇಕಕ್ಕೆ ತಾನೆ ವಲಂ ಮಜ್ಜನಪೀಠಮಾದತಿಶಯಂ ಹೇಮಾದ್ರಿಗುನ್ಮುದ್ರಿತಂ" (ನಾಗಚಂದ್ರನ 'ಮಲ್ಲಿನಾಥ ಪುರಾಣ'). ಸ್ನಾನದ ಮನೆ 'ಮಜ್ಜನ ಗೃಹ': "ವಸುಧಾರಕಮೆಂಬ ಕೋಷ್ಠಾಂಗಾರಮುಂ ಜೀಮೂತಮೆಂಬ ಮಜ್ಜನಗೃಹಮುಂ" ('ಆದಿಪುರಾಣ') ಎಂಬ ಮಾತಿನಲ್ಲಿ ಅರಮನೆಗಳಲ್ಲಿ ವಿವಿಧ ಕೋಣೆಗಳಿಗೆ ಬೇರೆ ಬೇರೆ ಹೆಸರುಗಳನ್ನಿಡುತ್ತಿದ್ದ ಪರಿಪಾಟವೂ ತಿಳಿದುಬರುತ್ತದೆ.
ಮೇಲೆ ಉಲ್ಲೇಖಿಸಿದ 'ಪಂಪಭಾರತ' 'ಆದಿಪುರಾಣ' 'ಮಲ್ಲಿನಾಥ ಪುರಾಣ'ಗಳ ಸಾಲುಗಳಲ್ಲಿ 'ಮಜ್ಜನ' ಶಬ್ದಕ್ಕೆ ಅಭಿಷೇಕ ಎಂಬರ್ಥವೂ ಪ್ರಾಪ್ತವಾಗುವುದು ಸ್ಪಷ್ಟವಾಗುತ್ತದೆ. ಈ ಅರ್ಥದಲ್ಲಿ ಈ ಶಬ್ದವು ವೀರಶೈವ ಪರಿಭಾಷೆಯಲ್ಲಿ ಸೇರಿಹೋಗಿದೆ. ಲಿಂಗಕ್ಕೆ ಅಭಿಷೇಕ ಮಾಡು ಎಂಬರ್ಥದಲ್ಲಿ ಬಸವಣ್ಣನ ವಚನಗಳಲ್ಲಿ "ಬಂಡಿ ತುಂಬ ಪತ್ರೆಯ ತಂದು ಕಂಡಕಂಡಲ್ಲಿ ಮಜ್ಜನಕ್ಕೆರೆವಿರಿ" "ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ" ಎಂಬಂತಹ ಮಾತುಗಳು ಸಿಗುತ್ತವೆ. ಜಂಗಮದ ವಿಷಯದಲ್ಲಾದರೆ 'ಮಜ್ಜನ ಮಾಡಿಸು' ಶಬ್ದಕ್ಕೆ ಸ್ನಾನಮಾಡಿಸು ಎಂಬ ಅರ್ಥ ಪ್ರಾಪ್ತವಾಗುತ್ತದೆ: "ನಾನು ಮಜ್ಜನವ ಮಾಡುವ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ" ಎಂಬ ಮಹಾದೇವಿಯಕ್ಕನ ಮಾತಿನಲ್ಲಿ ಈ ಅರ್ಥವಿದೆ. ಅಷ್ಟಾವರಣಗಳಲ್ಲಿ ಒಂದಾದ ಪಾದೋಕವೆಂದರೆ, ಚೆನ್ನಬಸವಣ್ಣ ಮಾತುಗಳಲ್ಲಿ, "ಪಾದೋದಕವೆಂಬುದು ಲಿಂಗಕ್ಕೆ ಮಜ್ಜನಕ್ಕೆರೆದುದು". ಅಲ್ಲದೆ "ಪಾದೋದಕದಲ್ಲಿ ಮುಖಪ್ರಕ್ಷಾಲನ ಮಾಡುವುದು" ಎಂದು ಅವನು ವಿಧಿಸುತ್ತಾನೆ. ಹರಿಹರನು 'ಮಹಮಜ್ಜನ' ಎಂಬ ಶಬ್ದವನ್ನು ಬಳಸುತ್ತಾನೆ: "ಚರಿತದಿಂ ಮನೆಗೆ ಬಿಜಯಂಗೆಯ್ಸಿ ತಂದಂದು| ಪರಿಮಳೋದಕದಿಂದೆ ಮಹಮಜ್ಜನಕ್ಕೆರೆದು".
=====
ಮಡಿ: 'ಹಿಮ್ಮಡಿ' ಮುಮ್ಮಡಿಗಳ ಕಾರುಬಾರು
ಮಠಮಾನ್ಯಗಳಳ್ಲಿ ಪಾಠಪೀಠಗಳಲ್ಲಿ ಹಿಮ್ಮಡಿ (ಹಿಂದೆಯೂ ಮಡಿ) ಮುಮ್ಮಡಿ (ಮುಂದೆಯೂ ಮಡಿ) ಪಾರುಪತ್ಯೆ ಮಾಡುವುದು ನಮ್ಮೆಲ್ಲರ ಅನುಭಕ್ಕೆ ಬಂದಿರುವಂಥದೇ. ಹೌದು, ಇದು ಮಡಿ ಪುರಾಣವನ್ನು ಕುರಿತದ್ದೇ. ಅಲ್ಲದೆ, ಮಡಿಮೈಲಿಗೆಗಳು ಅವಳಿಜವಳಿಗಳು, ಹೀಗಾಗಿ ಇದು ಜೋಡಿ ಸಂಕಥನವೂ ಹೌದು.
ಮಡಿ ದ್ರಾವಿಡ ಮೂಲದ್ದೇ; ಈ ಶಬ್ದ ಸಂಸ್ಕೃತದಲ್ಲಿ ಕಾಣಸಿಗುವುದಿಲ್ಲ. ತಮಿಳಿನಲ್ಲಿ ಮಟಿ ಎಂದೂ, ತೆಲುಗಿನಲ್ಲಿ ಮಡಿ, ಮಡುಗು ಎಂದೂ, ತುಳುವಿನಲ್ಲಿ ಮಡಿ ಎಂದೂ ಇದರ ರೂಪಗಳು ದೊರೆಯುತ್ತವೆ. ಎಲ್ಲ ಭಾಷೆಗಳಲ್ಲೂ ಅರ್ಥ ಸುಮಾರು ಒಂದೇ; ಪರಿಶುದ್ಧತೆ, ಒಗೆದ ಬಟ್ಟೆ, ನಾರುಡೆ, ಹತ್ತಿಯ ಅಥವಾ ರೇಷ್ಮೆ ಬಟ್ಟೆ ಹಾಗೂ ಧಾರ್ಮಿಕ ಶುಚಿತ್ವ ಎಂಬರ್ಥಗಳಿವೆ. ಪ್ರಾಯಶಃ ಇವೆಲ್ಲ ಮೊದಲಿನಿಂದಲೂ ಇದ್ದುವಾಗಿರದೆ, ಕ್ರಮೇಣ ಈ ಶಬ್ದದ ಅರ್ಥ ವಿಸ್ತಾರಗೊಂಡಂತೆ ಕಾಣುತ್ತದೆ. ಏಕೆಂದರೆ, ಕನ್ನಡದ ನಿದರ್ಶನಗಳನ್ನು ತೆಗೆದುಕೊಂಡರೆ, ಮಡಿ ಎಂಬುದು ಬಟ್ಟೆ ಒಗೆಯುವುದು ಎಂಬರ್ಥದಲ್ಲಿಯೂ, ಬಟ್ಟೆ ಒಗೆಯುವ ವೃತ್ತಿಯವನು ಎಂಬರ್ಥದಲ್ಲಿ ಮಡಿವಳ, ಮಡಿವಾಳ, ಮಡಿವಳ್ಳ ಎಂಬ ಶಬ್ದಗಳೂ ಮೊದಲಿನಿಂದಲೇ ಬಳಕೆಯಲ್ಲಿವೆ. ಹೀಗಾಗಿ ಮೊದಲು ಬಟ್ಟೆ ಶುದ್ಧಿಗೆ ಅನ್ವಯಿಸುತ್ತಿದ್ದ ಅರ್ಥವು ಬರಬರುತ್ತ ವ್ಯಾಪಕತೆಯನ್ನು ಪಡೆಯಿತು.
"ಬಗೆಯುತ್ತುಮಿರ್ದ ಮಡಿವಳನ ಮುಂದಣ ಮಡಿಯುಮಂ ತನ್ನೊಡನೆಯ ಗೋವಳಿಗರುಟ್ಟ ಮೈಲಿಗೆಯುಮಂ ಮಧುಸೂದನಂ ಕಂಡು" ಎಂಬ ನೇಮಿಚಂದ್ರನ 'ನೇಮಿನಾಥ ಪುರಾಣ'ದಲ್ಲಿ ಮಡಿ ಎಂಬುದಕ್ಕೆ ಶುಭ್ರವಾದ ಬಟ್ಟೆ ಎಂಬುದು ಅದಕ್ಕೆ ವಿರುದ್ಧವಾದ ಮೈಲಿಗೆಯ ಉಲ್ಲೇಖದಿಂದ ಸ್ಪಷ್ಟವಾಗುತ್ತದೆ. ಅಂತೆಯೇ "ಮಂಡೆಯ ಬೋಳಿಸಿಕೊಂಡು ಮಡಿದು ಗೋಸಿಯ ಕಟ್ಟಿದಡೇನು?" ಎಂಬ ಜೇಡರ ದಾಸಿಮಯ್ಯನ ಮಾತಿನಲ್ಲೂ ಶುಭ್ರವಾದ (ಮಡಿದು=ಮಡಿಯಾದ) ಬಟ್ಟೆ ಎಂಬರ್ಥವಿದೆ. 'ಬಸವ ಪುರಾಣ'ದಲ್ಲಿ ಉಬ್ಬ ಹಾಕುವ ರೀತಿ ವರ್ಣಿತವಾಗಿದೆ: "ಕುದಿಸಿ ಉದಕದೊಳುಲುಬಿ ಬೀಸುತ್ತೊಗೆದು ಪರಡಿ ಮಡಿಗಳಹುದಕ್ಕಟಾ ಮುನಿದೆ". ಆದರೆ 'ಪಂಪಭಾರತ'ದ "ತನ್ನುಡುವುಪ್ಪಟಂಗಳ್ ಮಡಿಯೊಳಾಗೆಯುಂ" ಎಂಬಲ್ಲಿಯೂ 'ಧರ್ಮಾಮೃತ' "ಮಡಿಯನುಡುವಂತೆ ಸಮೆದಾಭರಣಮಂ ತೊಡುವಂತೆ" ಎಂಬಲ್ಲಿ ರೇಷ್ಮೆ ಎಂಬರ್ಥವಿರುವಂತೆ ತೋರುತ್ತದೆ. 'ಮಡಿ' ದ್ರಾವಿಡ ಪದ, ಆದರಿದು ಕ್ವಚಿತ್ತಾಗಿ ಸಂಸ್ಕೃತದಲ್ಲಿಯೂ ಬಳಕೆಯಾದಂತಿದೆ: ಇಡಿಯಾದ ಬಟ್ಟೆ ಎಂಬರ್ಥದಲ್ಲಿ ಜೈನ ಕಾವ್ಯಗಳಲ್ಲಿದು ಬಳಕೆಯಾಗಿದೆಯೆಂದು ಕೆಲವು ವಿದ್ವಾಂಸರ ಸಂಶೋಧನೆ.
ಕೇವಲ ಒಗೆದು ಶುಭ್ರಗೊಂಡ ಬಟ್ಟೆ ಎನ್ನುವುದು ಬರಬರುತ್ತ ವೈಯಕ್ತಿಕ ಶೌಚ ಎಂಬರ್ಥದಲ್ಲಿ ಅಮೂರ್ತ ಕಲ್ಪನೆಯಾಯಿತು. ಕನ್ನಡದ ಮಡಿ ಶಬ್ದ ಈ ಅರ್ಥದಲ್ಲಿ ಬಳಕೆಗೊಂಡುದು ಈಚಿನ ಶತಮಾನಗಳಲ್ಲಿ. "ಮಡಿಮಡಿಯೆಂದು ಅಡಿಗಡಿಗ್ಹಾರುವೆ ಮಡಿಮಾಡುವ ಬಗೆ ಬೇರುಂಟು" ಎಂಬಂತಹ ಕಡೆಗಳಲ್ಲಿ, ಅಂದರೆ ಬ್ರಾಹ್ಮಣ ಬರಹಗಳಲ್ಲಿ. ಈ ಆಚರಣೆ ಮೊದಲಿನಿಂದಲೂ ಇರಬಹುದು, ಆದರೆ ಬ್ರಾಹ್ಮಣರಲ್ಲಾದ್ದರಿಂದಲೂ, ಬ್ರಾಹ್ಮಣೇತರರ ರಚನೆಗಳಲ್ಲಿ ಈ ಅರ್ಥದಲ್ಲಿ ಇದನ್ನು ಬಳಸುವ ಪ್ರಮೇಯ ಬಂದಿಲ್ಲ. ಪಂಚಸೂತಕಗಳ ಪರಿಕಲ್ಪನೆಯಲ್ಲಿ ಮಡಿಯಾದ ವ್ಯಕ್ತಿ ಇತರರನ್ನು ಮುಟ್ಟಿಕೊಳ್ಳದಿರುವುದು ಮುಖ್ಯವಾಯಿತು. ಜಾತಿಸೂತಕ, ಜನನಸೂತಕ, ಪ್ರೇತಸೂತಕ, ಉಚ್ಚಿಷ್ಟಸೂತಕ ಮತ್ತು ರಜಸ್ಸೂತಕಗಳೇ ಇವು. ಸೂತಕ ಎಂಬ ಶಬ್ದದಲ್ಲಿನ 'ಸೂತ' ಎಂಬುದು ಹುಟ್ಟನ್ನು ಸೂಚಿಸುತ್ತದೆ; ಹಾಗಾಗಿ ಜಾತಿಯನ್ನೂ ಸೂಚಿಸುತ್ತದೆ. ಮಗು ಹುಟ್ಟಿದಾಗ ಅಥವಾ ಗರ್ಭಪಾತವಾದಾಗ ತಂದೆತಾಯಿಯರಿಬ್ಬರೂ ಅಶೌಚವನ್ನಾಚರಿಸಬೇಕೆಂದು ಗೌತಮ, ವಾಸಿಷ್ಠರಂತಹ ಧರ್ಮಶಾಸ್ತ್ರಕಾರರು ನಿಯಮಿಸುತ್ತಾರೆ; ಆದರೆ ಇದು ಅನ್ವಯಿಸುವುದು ಮೇಲುವರ್ಣದವರಿಗೆ, ಅದರಲ್ಲೂ ಬ್ರಾಹ್ಮಣರಿಗೆ. ಇದು ಮಾನಸಿಕ ಶುಚಿತ್ವದ ಜೊತೆಗೆ ದೇಹಸ್ಥಿತಿಯ ಶುಭ್ರತೆ ಹಾಗೂ ಹುಟ್ಟಿನ ಶ್ರೇಷ್ಠತೆಗಳಿಗೂ ಅನ್ವಯಿಸಿತ್ತು. ಧಾರ್ಮಿಕಾಚರಣೆಗಳಲ್ಲಿ ಮಡಿಗೆ ವಿಶೇಷಪ್ರಾಧಾನ್ಯ: ಪೂಜೆ, ಯಜ್ಞ, ವ್ರತ ಮುಂತಾದವುಗಳನ್ನು ಮಾಡುವವನು ಮಡಿ ಉಡಬೇಕು. ಮಡಿ ವ್ಯಕ್ತಿ ಎಂದರೆ ಪವಿತ್ರ; ಆದ್ದರಿಂದ ಅಪವಿತ್ರನನ್ನು ಮುಟ್ಟಿಕೊಂಡರೆ ಸ್ನಾನಮಾಡಬೇಕೆಂಬ ನಿಯಮ ಬಂತು. ಗಂಡನನ್ನು ಕಳೆದುಕೊಂಡ ವಿಧವೆ (ಪ್ರಾಯಶಃ ಸದಾ ಪಾವಿತ್ರ್ಯವನ್ನುಳಿಸಿಕೊಳ್ಳಬೇಕೆಂಬ ನಿರೀಕ್ಷೆಯಿಂದ) ತಲೆ ಬೋಳಿಸಿಕೊಂಡು 'ಮಡಿ'ಯಾಗುವ ಸಂಪ್ರದಾಯ ಬಂತು. 'ಮಡಿ ಹೆಂಗಸು' ಬ್ರಾಹ್ಮಣವರ್ಗದಲ್ಲಿ ವ್ಯಾಪಕ ಬಳಕೆಯ ಶಬ್ದ. 'ಮಡಿ ಗಂಡಸು' ಎಂಬ ಶಬ್ದವಿಲ್ಲ!
ಮಡಿಯಲ್ಲಿರುವ ವ್ಯಕ್ತಿ ಅದಕ್ಕೆಂದೇ ಒಗೆದು ಹಾಕಿದ ಬಟ್ಟೆಯನ್ನೋ, ರೇಷ್ಮೆ ವಸ್ತ್ರವನ್ನೋ ನಾರುಮಡಿಯನ್ನೋ ಧರಿಸುತ್ತಾನೆ. ಸಂಸ್ಕೃತದ 'ವಲ್ಕಲ' ಎಂದರೆ ನಾರುವಸ್ತ್ರ; ವಲ್ಕಲ, ಅದು ಮರದ ತೊಗಟೆಯನ್ನೂ ನಾರಿನಿಂದ ಮಾಡಿದ ವಸ್ತ್ರವನ್ನೂ ಸೂಚಿಸುತ್ತದೆ; ತಪಸ್ವಿಗಳು ಉಡುತ್ತಿದ್ದ ಬಟ್ಟೆ. ಕನ್ನಡದಲ್ಲಿ ನಾರು, ನಾರುಡೆ, ನಾರುಡು, ನಾರಸೀರೆ ಮುಂತಾದ ಶಬ್ದಳ ಬಳಕೆಯಿತ್ತು; ನಾರುಮಡಿ ಪ್ರಾಯಶಃ ಈಚಿನ ರೂಪ. ನಾರಿನಿಂದ ತಯಾರಿಸಿದ ಬಟ್ಟೆ ಎಂರ್ಥದ ಜೊತೆಗೆ, ನಾರೇ ಮಡಿ ಎಂಬ ಭಾವನೆ ಇದರಲ್ಲಿ ಸೇರಿರುವಂತಿದೆ.
ಭಾಷೆಯಲ್ಲಿ ಸಾಮಾನ್ಯವಾಗಿ ಒಂದು ಪರಿಕಲ್ಪನೆಗೆ ವಿರುದ್ಧವಾದ ಮತ್ತೊಂದು ಇದ್ದೇ ಇರುತ್ತದೆ, ಅದಕ್ಕನುಗುಣವಾದ ಶಬ್ದವೂ ಸೃಷ್ಟಿತವಾಗುತ್ತದೆ. ಹೀಗೆ ಕನ್ನಡದಲ್ಲಿ 'ಮೈಲಿಗೆ' ಎಂಬುದು 'ಮಡಿ'ಯ ವಿರುದ್ಧ ಪರಿಕಲ್ಪನೆಯ ಶಬ್ದ. ಈ ಶಬ್ದವು ಮೈಲಗೆ ಹಾಗೂ ಮೈಲಿಗೆ ಎಂಬೆರಡೂ ರೂಪಗಳಲ್ಲಿ ದೊರೆಯುತ್ತದೆ. 'ಮಡಿ' ಯಾವ್ಯಾವ ನೆಲೆಗಳಲ್ಲಿ ಬಳಕೆಯಾಯಿತೋ ಆ ಎಲ್ಲ ನೆಲೆಗಳಲ್ಲಿ ಅದರ ವಿರುದ್ಧವಾದ ಮೈಲಿಗೆಯೂ ಬಳಕೆಯಾಗಿದೆ. ರನ್ನನ 'ಅಜಿತ ಪುರಾಣ'ದಲ್ಲಿ "ಅಗಲೊಳಿಕ್ಕಿದ ಉಳ್ಳುಣಿಸಮೇಧ್ಯಮೆಂ ಎಂಜಲುಂ ಅಪ್ಪುದು, ಉಟ್ಟ ಪುಟ್ಟುಗೆಗಳುಂ ಅಂತೆ ಮೈಲಗೆಗಳಪ್ಪುವು" ಎಂಬ ವಾಕ್ಯವಿದೆ. ಇಲ್ಲಿ ಉಟ್ಟು ಬಿಟ್ಟ ಬಟ್ಟೆ ಎಂಬರ್ಥ ಇಲ್ಲದೆ. ಇದು 'ಹರಿಶ್ಚಂದ್ರ ಕಾವ್ಯ'ದಲ್ಲಿ ನೇರವಾಗಿಯೇ ಬಂದಿದೆ: "ಉಟ್ಟು ಕಳೆದ ಮೈಲಿಗೆಗೆ ಸವಿದೊಗಡಿಸಿದ ಕೂಳ್ಗೆ ಕೈಯಾಂತವಂ ಬೇರೆ ಸಂದೆಗವಿಲ್ಲ". ಆಗಲೇ ನೋಡಿದ 'ನೇಮಿನಾಥ ಪುರಾಣ'ದ ಉಲ್ಲೇಖದಲ್ಲಿನ "ಗೋವಳಿಗರುಟ್ಟ ಮೈಲಿಗೆಯುಮಂ ಕಂಡು" ಎಂಬಲ್ಲಿ ಕೊಳಕು ಬಟ್ಟೆ ಎಂಬರ್ಥವಿದೆ. ಈ ಅರ್ಥ ಕನಕದಾಸರ 'ನಳಚರಿತ್ರೆ'ಯಲ್ಲಿ ಸ್ಪಷ್ಟವಾಗಿಯೇ ಇದೆ: "ಮೈಲಿಗೆಯ ಸೀರೆಯನುಟ್ಟು ತನು ಕಳೆತೆಗೆಯೆ ಕೈಗಲ್ಲದಲಿ ನಿಂದಿಹ ಸತಿಯನೀಕ್ಷಿಸಿದ". ಅಂದರೆ ಒಗೆಯಬೇಕಾದ ಬಟ್ಟೆ ಎಂಬ ಒಟ್ಟರ್ಥವು "ಧರ್ಮಾಮೃತ'ದ "ಮೈಲಿಗೆಯಂತೊಗೆಹಕ್ಕೆ ವಂದು" ಎಂಬ ವಾಕ್ಯಖಂಡದಲ್ಲಿ ಸ್ಪಷ್ಟವಾಗಿದೆ.
ಮುಂದೆ, ಈ ಶಬ್ದ ಮಾನಸಿಕ ಅಪವಿತ್ರತೆ ಎಂಬ ಅರ್ಥದಲ್ಲಿ ಹಿಗ್ಗಲಿಕೆಯಾಯಿತು. "ಮನದ ಮೈಲಿಗೆಯ ಕಳೆಯ ಬಂದನಯ್ಯಾ ಮಡಿವಾಳನು" ಎಂಬ ಬಸವಣ್ಣನ ವಚನದ ಮಾತಿನಲ್ಲಿದು ವೇದ್ಯವಾಗುತ್ತದೆ. "ಮತ್ಸರಮತಿಯ ಮೈಲಿಗೆ ಬಿದ್ದುದಾತ್ಮಜ್ಞಾನದೃಷ್ಟಿಯಲಿ" ಎಂಬ ಕುಮಾರವ್ಯಾಸನ ಮಾತೂ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಇದು ಧಾರ್ಮಿಕಾಚರಣೆಯ ಪರಿಕಲ್ಪನೆಯ ಆರ್ಥದಲ್ಲಿ ಕಾಣಿಸಿಕೊಳ್ಳುವುದು ಪುರಂದರದಾಸರ ಮಾತಿನಲ್ಲಿ: "ಮಡಿಯುಂ ನೀನೆ ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಸಿ". ಆ ಮೊದಲು ರೂಢಿಯಲ್ಲಿರದಿದ್ದ ಮಡಿ-ಮೈಲಿಗೆಯ ಪರಿಕಲ್ಪನೆ ಬ್ರಾಹ್ಮಣರು ಅಂದರೆ ಮೇಲುವರ್ಣದವರಲ್ಲಿ ಬುದ್ಧನ ನಂತರ ಆರಂಭವಾಗಿರಬೇಕು ಎಂದು ಡಾ. ಶ್ಯಾಮಾಶಾಸ್ತ್ರಿಗಳು ಅಭಿಪ್ರಾಯಪಡುತ್ತಾರೆ.
======
ಮದ್ದು: ಕನ್ನಡದಲ್ಲಿ ಈ ಶಬ್ದಕ್ಕೆ ಔಷಧಿ ಎಂಬ ಅರ್ಥವಿದೆ. ಇದು ದ್ರಾವಿಡ ಪದ (ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಮುಖ್ಯವಾದ ದ್ರಾವಿಡ ಭಾಷಾ ಕುಟುಂಬದಲ್ಲಿರುವ ಪದ). ಇದರ ಮೂಲ ರೂಪ ಕನ್ನಡದಲ್ಲಿ  ಮರ್ದು ಎಂದು. ತಮಿಳಿನಲ್ಲಿ ಮರುಂದು, ತೆಲುಗಿನಲ್ಲಿ ಮಂದು, ಮಲಯಾಳಂನಲ್ಲಿ ಮರುನ್ನು, ತುಳುವಿನಲ್ಲಿ ಮರ್ದ್ ಎಂಬ ರೂಪಗಳಿವೆ. ತುಂಬ ಹಿಂದಿನ ಕನ್ನಡ ಕಾವ್ಯಗಳಲ್ಲಿಯೂ ಔಷಧಿ ಎಂಬ ಅರ್ಥದಲ್ಲಿ ಈ ಶಬ್ದದ ಪ್ರಯೋಗವಿದೆ. "ಮರ್ದುಂ ಮಂತ್ರಮುಂ" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲಿದ್ದರೆ, ಚಿಕಿತ್ಸೆಯ ಎರಡು ಕ್ರಮಗಳಾದ ಔಷಧಪ್ರಯೋಗ ಮತ್ತು ಮಂತ್ರ ಹಾಕುವುದು ಇವುಗಳನ್ನಿದು ಸೂಚಿಸುತ್ತದೆ. "ಕುತ್ತಕ್ಕೆ ಮರ್ದು ಮಾಡದೆ ಕುತ್ತಂ ಪೋಗೆಂದೊಡಂತೆ ಪೋಕುಮೇ" ಎಂದು ಬ್ರಹ್ಮಶಿವನ 'ಸಮಯ ಪರೀಕ್ಷೆ' ಯಲ್ಲಿ ಹೇಳಿದೆ. ಮದ್ದು ರೋಗನಿವಾರಣೆಗಾಗಿ ಬಳಸುವ ವಸ್ತು ಎಂಬುದು ಸ್ಪಷ್ಟವಾದ ಅರ್ಥ.
ಮರ್ದು ಎಂಬ ಶಬ್ದವನ್ನು ವಿಷ, ನಂಜು ಎಂಬರ್ಥದಲ್ಲಿಯೂ ಬಳಸುತ್ತಿದ್ದರು. 'ಸಮಯಪರೀಕ್ಷೆ'ಯಲ್ಲಿಯೇ "ಮಕ್ಕಳಿಗೆ ಬೆಣ್ಣೆಯೊಳ್ ಮರ್ದಿಕ್ಕುವವೊಲ್" ಎಂದು ಹೇಳಿದೆ. ಕೈಮದ್ದು ಎಂದೂ ಇದನ್ನು ಕರೆಯುತ್ತಾರೆ. ಕೈಮಸಕ ಅಥವಾ ಕೈಮಸಕು ಎಂಬ ಶಬ್ದಗಳನ್ನೂ ಈ ಅರ್ಥದಲ್ಲಿ ಬಳಸುತ್ತಾರೆ. ಆರೋಗ್ಯ ಹಾಳು ಮಾಡಲು ಆಹಾರದೊಡನೆ ಬೆರೆಸುವ ಮದ್ದನ್ನಿದು ಸೂಚಿಸುತ್ತದೆ. ಮಸಕ ಎಂದರೆ ಕೆಲಸ ಎಂಬ ಅರ್ಥವೂ ಇರುವುದರಿಂದ, ಕೈಮಸಕ ಎಂದರೆ ಕೈಚಳಕ ಎಂಬ ಅರ್ಥವೂ ಆಗಬಹುದೇನೋ. ಏಕೆಂದರೆ ಇದು ಬಹಿರಂಗವಾಗಿ ಮಾಡುವಂಥ ಕಾರ್ಯವಲ್ಲವಲ್ಲ. ಅಪರಿಚಿತರು ಕೊಡುವ ಏನನ್ನೂ ತಿನ್ನಬೇಡ ಎಂದು ಚಿಕ್ಕ ವಯಸ್ಸಿನಲ್ಲಿ ಹಳ್ಳಿಯಲ್ಲಿ ನಮ್ಮ ಹಿರಿಯರು ಹೇಳುತ್ತಿದ್ದರು. ಕೆಲವರಿಗೆ ಹೀಗೆ ಕೈಮಸಕವಿಕ್ಕುವುದು ಅನಿವಾರ್ಯ ಎಂಬ ನಂಬಿಕೆಯಿತ್ತು; ಯಾರಿಗಾದರೂ ಅದನ್ನು ಹಾಕಲೇಬೇಕಂತೆ; ಇಲ್ಲದಿದ್ದರೆ ಅವರಿಗೇ ಕೇಡು. ಆಹಾರದಲ್ಲಿ ಬೆರಸಿದ ಏನೋ ವಿಷಪದಾರ್ಥ ಹೊಟ್ಟೆಯಲ್ಲೇ ಉಳಿದು ತಿಂದವವನ್ನು ಕೃಶಗೊಳಿಸುತ್ತದೆ ಎಂಬ ನಂಬಿಕೆ. "ನವನೀತಮುಮಂ ಶುಕತುಂಡವುಮಂ ಮೇಣ್ ಬಿಸಿಯ ನೀರುಮಂ ಕೋಳದ ಮೂಳವುಮಂ ಮರವಸಲೆಯ ಪತ್ರೆ ತೊಳಸಿ ಸೇವಿಸುಗೆ ಪಿಂಗುಗುಂ ಕೆಯ್ಮಸಕಂ" ಎಂದು ಚಾವುಂಡರಾಯನ 'ಲೋಕೋಪಕಾರ'ದಲ್ಲಿ ಇಂಥ ವಿಷವನ್ನಿಳಿಸುವ ಉಪಾಯವು ಸೂಚಿತವಾಗಿದೆ. ಆನೆಗನ ತಿಗುಡನ್ನು ಅರೆದು ಬೆಣ್ಣೆಯಲ್ಲಿ ಕಲಸಿ ತಿನ್ನುವುದು, ಅಂಕೋಲೆಯ ಬೇರನ್ನು ಬಿಸಿನೀರಲ್ಲಿ ತೇಯ್ದು ಕುಡಿಸುವುದು ಅಥವಾ ಬಸಲೆಸೊಪ್ಪನ್ನು ತುಳಸಿಗಳನ್ನು ಮೆಲ್ಲವುದು ಇದಕ್ಕೆ ಪರಿಹಾರ ಎಂದು ಅರ್ಥ. ಇಲ್ಲಿ ಸೂಚಿತವಾದ ಸಸ್ಯಗಳನ್ನು ಗುರುತಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ..
======
ಮರ1: ತಮಿಳು ಮಲಯಾಳಗಳಲ್ಲಿ 'ಮರಂ' ಎಂದೂ, ತೆಲುಗಿನಲ್ಲಿ 'ಮ್ರಾನು' ಎಂದೂ, ಕನ್ನಡ ತುಳುಗಳಲ್ಲಿ 'ಮರ' ಎಂದೂ ಇರುವ ಈ ಶಬ್ದವು ದೊಡ್ಡ ಗಿಡ ಎಂಬರ್ಥದಲ್ಲಿದೆ. "ಆಮೋದ ಕುಮುದಸಮಿತಿಯನಾ ಮರಂಗಳೊಳಾಯ್ದು ಕೊಯ್ದುಮಿಲ್ಲಿಗೆ ಬರ್ಪೆಂ" ಎಂಬುದು 'ಕವಿರಾಜಮಾರ್ಗ'ದಲ್ಲಿಯ ಸಾಲು. "ಕಜ್ಜಂ ಪಲಸಿನ ಮರದಂತೆ ಫಲಮನೆತ್ತಿಕೊಂಡು ಬರಲಕ್ಕುಂ" ಎಂಬುದು 'ಪಂಚತಂತ್ರ'ದ ವಾಕ್ಯ. ಮರಗಳಿಂದ ಕೂಡಿದ ದಟ್ಟ ಕಾಡಿನ ಕತ್ತಲೆಯನ್ನು 'ಮರಗಳ್ತಲೆ' ಸೂಚಿಸುತ್ತದೆ: "ತುರುಗೆದೆಗಣ್ಣ ಕಾಂತಿ ಮರಗಳ್ತಲೆಯಂ ಬೆದರಟ್ಟೆ" ಎಂಬುದು 'ಜಗನ್ನಾಥವಿಜಯ' ಸಾಲು. ಇಂತಹ ಕಾಡನ್ನು ಕುಮಾರವ್ಯಾಸ 'ಮರಗಾಡು' ಎನ್ನುತ್ತಾನೆ: "ಮರಗಾಡಿನಲಿ ಮೃಗಗಣದ ನೆಲೆಯಲಿ ಕಾಣಿರೆಲೆ ನೀವು" ಎಂಬುದು ಅವನ ಪ್ರಯೋಗ. 'ಮರಗಟ್ಟು' ಎಂದರೆ ಮರದ ಬುಡದ ಪಾತಿ: "ಮರಗಟ್ಟೆಂಬಂತೆ ಸುತ್ತುಂ ಮೊದಲೊಳ್ ಅಜಗರಂ .. .. ನೀಳ್ದಂತಿರೆ" 'ಕರ್ನಾಟಕ ಕಾದಂಬರಿ'. 'ಮರಮೊದಲ್' ಎಂದರೆ ಮರದ ಬುಡ: "ಮುನೀಂದ್ರಂ ಬೇರೂಱಿದ ಬೀಳಲಂತೆ ಮರಮೊದಲಿರ್ದಂ" - 'ಚಂದ್ರಪ್ರಭಪುರಾಣ'. 'ಮರಗೊಂಬು' = ಮರದ ಕೊಂಬೆ: "ಮರಗೊಂಬಿನೊಳವುಂಕಿದ ಸೆಲ್ಲದ ಮುಷ್ಟಿ" - ಆಚಣ್ಣನ 'ವರ್ಧಮಾನಪುರಾಣ'. ಈ ಶಬ್ದಕ್ಕೆ ಮರಕೋತಿಯಾಟ ಎಂಬ ಅರ್ಥವೂ ಇದೆ: "ವಿನೋದರಸದ ಬಸದಿಂ ಮರಗೊಂಬನಾಡುತಿರ್ದ ವೀರಜಿನಕುಮಾರನಂ" ಎಂಬುದೂ ಅಲ್ಲಿಯದೇ ಪ್ರಯೋಗ. 'ಮರದುರುಗಲ್' ಎಂದರೆ ತೋಪು: "ಪರ್ವತದ ಮೇಲೆ ಕರಂಗಿ ಕಳ್ತಲಿಸಿದ ಮರದುರುಗಲ ನಡುವೆ" - 'ಪಂಪಭಾರತ'. 'ಮರವಕ್ಕಿ' ಎಂದರೆ ಮರಕುಟಿಗ ಪಕ್ಷಿ: "ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಜಿಂಕೆಗಳು" ಎಂಬ ಸಾಲು ಏಲೇಶ್ವರ ಕೇತಯ್ಯನ ವಚನದ್ದು. 'ಮರವಡೆ' ಎಂಬುದು ಮರಗಳ ಆದಾಯದ ಮೇಲೆ ಹಾಕುತ್ತಿದ್ದ ತೆರಿಗೆಯೆಂಬಂತೆ ಶಾಸನಗಳಲ್ಲಿ ಬಂದಿದೆ: "ತೋಟ ತುಡಿಗೆ ಗದೆ ಬೆದಲು ಮಾವಡೆ ಮರವಡೆ ನಿಧಿ ನಿಕ್ಷೇಪ .. ..." ಎಂಬುದು ಹದಿನಾರನೆಯ ಶತಮಾನದ ಶಾಸನವೊಂದರ ಉಲ್ಲೇಖ.
"ಮರ ಬೇರು ಸಾರದಿಂದ ನಾನಾ ಶಾಖೆಗಳು ಪಲ್ಲವಿಸುವ ತೆರನಂತೆ .. .. ಮರಕ್ಕೆ ಬೇರು ನಷ್ಟದಿಂದ ಶಾಖೆ ನಷ್ಟ" ಎಂಬ ಉಪಮೆ ಅಂಬಿಗರ ಚೌಡಯ್ಯನ ವಚನದಲ್ಲಿದೆ. ಬಸವಣ್ಣ "ಮರನೇರಿದ ಮರ್ಕಟನಂತೆ" ಎಂದು ಚಂಚಲ ಮನಸ್ಸನ್ನು ವರ್ಣಿಸುತ್ತಾನೆ. ಮತ್ತೊಂದೆಡೆ "ಮರಕ್ಕೆ ಬೇರು ಬಾಯೆಂದು ತಳಯಿಂಕೆ ನೀರನೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ" ಎಂದು ಜಂಗಮದ ಶ್ರೇಷ್ಠತೆಯನ್ನು ವರ್ಣಿಸುತ್ತಾನೆ. "ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ" ಎಂದು ಕನಕದಾಸರು 'ಮರ'ವನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತಾರೆ. "ಮರದ ಇಂಬಿಗೆ ಬಾಗಿ ಬಳುಕುತಿರುವೆಳಲತೆಯು ತಳಿರ ತೂಗುಯ್ಯಾಲೆ ಹೂ ತೊಂಗಲು" ಎಂಬುದು ವಿಸೀಯವರು ನೀಡುವ ಚಿತ್ರ. "ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ, ಕೊಂಬೆರೆಂಬೆಗಳಿರಲಿ ಇದ್ದ ಹಾಗೆ" ಎಂಬ ಸಾಲು ದೇಶದ ಸ್ಥಿತಿ ವರ್ಣಿಸುವ ಗೋಪಾಲಕೃಷ್ಣ ಅಡಿಗರ 'ಇಂದು ನಮ್ಮೀ ನಾಡು - 3ಕ' ಕವನದ್ದು.
=====
ಮರ2: ಮರ ಶಬ್ದವನ್ನು ಕಾಷ್ಠ, ಒಣಮರದ ತುಂಡು ಎಂಬರ್ಥದಲ್ಲಿಯೂ ಬಳಸುತ್ತೇವೆ, "ಅರದಿದಾರ್ಪುದೆನ್ನದೆ ತಗುಳ್ದು ಮರಂಗಳನೊಟ್ಟಿ" ಎಂಬುದು 'ಸುಕುಮಾರಚರತೆ' ಕಾವ್ಯದ ಸಾಲು. "ಕೀಲಂ ಬೆಟ್ಟಿರ್ದ ಮರನಂ ಕಂಡದರ ಮೇಲೆ ಕುಳ್ಳಿರ್ದು" ಎಂಬುದು 'ಪಂಚತಂತ್ರ'ದ ಸಾಲು. ಈ ಶಬ್ದವು ಅನೇಕ ಭಾವಗಳನ್ನು ಸೂಚಿಸಲು ಬಳಕೆಯಾಗಿದೆ. "ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ" ಎಂಬಲ್ಲಿ ಜೇಡರ ದಾಸಿಮಯ್ಯ ವಿಸ್ಮಯವನ್ನು ಸೂಚಿಸಿದರೆ, "ಮರದೊಳಗಣ ಕಿಚ್ಚು ಮರನ ಸುಟ್ಟಂತಾದೆನಯ್ಯಾ" ಎಂಬ ಅಲ್ಲಮಪ್ರಭುವಿನ ಮಾತು ಲಿಂಗಪೂಜೆಯ ಪರಿಣಾಮವನ್ನು ಹೇಳಲು ಬಳಕೆಯಾಗಿದೆ. 
 "ಮರಮರ ಮಥನಿಸಿ ಕಿಚ್ಚು ಹುಟ್ಟಿ" ಎಂಬ ಮಹಾದೇವಿಯಕ್ಕನ ವಚನದ ಸಾಲಿನಲ್ಲಿ ಮರದ ತುಂಡುಗಳನ್ನು ಉಜ್ಜಿಯೋ ಕಡೆದೋ ಬೆಂಕಿ ಮಾಡಿಕೊಳ್ಳುತ್ತಿದ್ದ ಅರ್ಥವಿದೆ. ಮರದಿಂದ ಅನೇಕ ವಸ್ತುಗಳನ್ನು ಮಾಡಿಕೊಳ್ಳುವ ರೂಢಿ ಹಿಂದಿನದು. ಮರಗೋಲಿನ ಉಲ್ಲೇಖ 'ಧರ್ಮಾಮೃತ'ದಲ್ಲಿದೆ: "ಜಾತ್ಯಶ್ವಮಂ ಬಿಟ್ಟು ಮರಗಾಲಂ ಕೊಳ್ವ." ಬಸವಣ್ಣನೂ ಇದನ್ನು ಉಲ್ಲೇಖಿಸುತ್ತಾನೆ: "ಮರಗಾಲಲಟ್ಟಿ ಸದೆದು ನೋಡಯ್ಯಾ". ಮರದಿಂದ ಮಾಡಿದ ಮುಖವಾಡವನ್ನು 'ಮರಮೊಗ' ಎಂಬ ಶಬ್ದದಿಂದಲೇ ಕರೆಯುತ್ತಿದ್ದರು. "ಲೋಗರ್ ಪಗರಣಿಗರಾಗಿ ಎನಿತಾನುಂ ತೆರದ ರೂಪುಗಳುಮಂ ಕೈಕೊಂಡು ಮರಮೊಗಂಗಳನಿಟ್ಟು" ಎಂಬುದು 'ವಡ್ಡಾರಾಧನೆ'ಯಲ್ಲಿನ ಮಾತು. ಮರವಾಳ್ ಎಂದರೆ ಮರದ ಕತ್ತಿ: "ಕರವಾಳಂ ಮಸೆವಂದದೆ ಮರವಾಳಂ ಮಸೆಯೆ ಕೂರಿತಮಕ್ಕುಮೇ" - 'ಗದಾಯುದ್ಧ'. ಮರದ ಬಿಲ್ಲೇ 'ಮರವಿಲ್': "ತೊಟ್ಟ ಎಕ್ಕವಡಂ ಮರವಿಲ್ ಕಟ್ಟಿದ ಪಣೆಕಟ್ಟು" - 'ಪಂಪಭಾರತ'.  ಮರದಿಂದ ಮಾಡಿದ ಮಣಿಯೇ 'ಮರವಣೆ'; "ಮರವಣೆಗಂ ಬೀಣೆಗಮಂತರಮಾವುದೋ" ಎಂಬುದು 'ಕಾವ್ಯಾವಲೋಕನ'ದಲ್ಲಿನ ಪದ್ಯವೊಂದರ ಸಾಲು.
ಮರವನ್ನು ಪೂರ್ವಪದವಾಗಿಟ್ಟುಕೊಂಡು ಅನೇಕ ನುಡಿಗಟ್ಟುಗಳು ರಚಿತವಾಗಿವೆ. ಹಳಗನ್ನಡ ಕಾವ್ಯಗಳಲ್ಲಿ 'ಮರವಡು' ಎಂಬ ಪ್ರಯೋಗ ಮೊದಲು ಚಲನೆಯಿಲ್ಲದಿರು ಎಂಬರ್ಥದಲ್ಲಿ ಪ್ರಯೋಗವಾಗಿದೆ. ಇದು ಪಂಪನ 'ಆದಿಪುರಾಣ'ದಲ್ಲಿ "ಮರವಟ್ಟು ಕುಡದೆ ಕಲ್ಪಮಹೀಜಂ ನಿಂದುವು" ಎಂಬಲ್ಲಿ ಸ್ಪಷ್ಟವಾಗಿದೆ. ಆದರೆ ಇದೇ ರೂಪವು ರೂಪಕವಾಗಿ ಜಡ್ಡುಗಟ್ಟು ಎಂಬ ಅರ್ಥದಲ್ಲಿ 'ಪಂಪಭಾರತ'ದಲ್ಲಿ ಪ್ರಯೋಗವಾಗಿದೆ: "ಅತ್ತ ಸುಭದ್ರೆಯುಮೊಡಲುರಿಯುತ್ತಿರೆ ಮರವಟ್ಟು ವಿಜಯನಿರ್ದತ್ತಲೆ ನೋಡುತ್ತಿರೆ". ಅಂತೆಯೇ "ಅಂತಃಪೀಡಾಕ್ರಾಂತಿಯನೊಂದಿನಿತು ಪೊಳ್ತು ಮರವಟ್ಟಿರ್ದಳ್" ಎಂಬುದು 'ಕರ್ಣಾಟಕ ಕಾದಂಬರಿ'ಯಲ್ಲಿನ ವರ್ಣನೆ. ಮರವಾನಸ, ಮರವಾನಸಿ, ಮರವಾನಸೆ ಮುಂತಾದವು ಮರದಿಂದ ಮಾಡಿದ ಗಂಡು-ಹೆಣ್ಣು ಬೊಂಬೆಗಳನ್ನು ಸೂಚಿಸುತ್ತವೆ: "ಪೊಯ್ವ ಸಿಡಿಲ್ ಕಾರಿರೊಳಗುರ್ವಂ ಪಡೆದಿರೆ ಮರವಾನಸನೆನೆ ತಪಸ್ವಿ ಮರದ ಮೊದಲಿರ್ದಂ" ('ಪಂಪಭಾರತ'); "ನೋಡ ಮಾನಸೆಯಣಮಲ್ಲಮೀಕೆ ಮಾರವಾನಸಿಯಾಗಿಯುಂ .. .." ('ಆದಿಪುರಾಣ'); "ಅರವಿಂದವಕ್ತ್ರೆ  ಕೋಮಳೆ ಕಡುಗಾಡಿಕಾರ್ತಿ ಮರವಾನಿಸೆಯೆಂಬುದನುಮಟುಮಾಡಿದೌ" ('ಧರ್ಮಾಮೃತ') ಎಂಬ ಪ್ರಯೋಗಗಳನ್ನು ನೋಡಬಹುದು. ಬಿರುಸನ್ನು ಸೂಚಿಸಲೂ ಮರ ಬಳಕೆಯಾಗಿದೆ: ಕಾಡುಬಾಳೆಯನ್ನು ಮರವಾೞೆ ಎನ್ನುತ್ತಿದ್ದರು: "ಕಾಷ್ಠಕದಳೀ-ಮರವಾೞೆ" ಎಂದು 'ಓಷಧಿಕೋಶ'ದಲ್ಲಿ ಅರ್ಥ ಹೇಳಿದೆ. ಮರಗೆಣಸು, ಮರಗಬ್ಬು ಇತ್ಯಾದಿ. ಮರಗಟ್ಟು ಎಂದರೆ ಜೋಮು ಹಿಡಿ; ನಾಲಗೆ ಮರವಾಗು ಎಂದರೆ ರುಚಿಯಿಲ್ಲದಾಗು ಎಂದರ್ಥ ಇತ್ಯಾದಿ.
ಮರವಲಗೆ ಎಂಬುದು ಒಣಮರದ ಹಲಗೆ. "ಶರದೀಮಧ್ಯದಿ ಹಡಗೊಡೆದು ಮುಳುಗಲಾ ಮರವಲಗೆಯ ಪಿಡಿದವನು ಭರದಿ ತಡಿಯ ಸಾರ್ದು" ಎಂಬ ಮಾತು 'ಜೀವಂಧರ ಸಾಂಗತ್ಯ'ದಲ್ಲಿದೆ.
=====
ಮರುಗು: ಇದರ ಮೂಲ ರೂಪ 'ಮಱು'ಗು ಎಂದು; ಇದೊಂದು ದ್ರಾವಿಡ ಕ್ರಿಯಾಪದ, ತಮಿಳಿನಲ್ಲಿ ಮಱುಕು (ತಮಿಳಿನಲ್ಲಿ ಪದಮಧ್ಯದ 'ಕ' ವು 'ಗ' ಎಂದೇ ಉಚ್ಚಾರವಾಗುತ್ತದೆ), ತೆಲುಗಿನಲ್ಲಿ ಮಱುಗು ಹಾಗೂ ತುಳುವಿನಲ್ಲಿ ಮರ್ಕುನಿ ಎಂಬ ರೂಪಗಳಲ್ಲಿ ದೊರೆಯುತ್ತದೆ. ಇದರ ಮೂಲಾರ್ಥ ಕುದಿ, ಮರಳು ಎಂಬುದು. "ಮಱುಗುವ ಪಾಲ್ಗೆ ಅಳೆಯ ಪನಿಗಳಂ ಬೆರೆಸಿದವೋಲ್" (ಅಳೆ=ಮಜ್ಜಿ) ಎಂಬ ಉಪಮೆ 'ಕವಿರಾಜಮಾರ್ಗ'ದಲ್ಲಿಯೇ ಇದೆ. ಇದು ಮುಂದೆ ರೂಪಕವಾಗಿ ಮಾನಸಿಕವಾಗಿ ಕುದಿಯುವುದಕ್ಕೆ, ಅಂದರೆ ಕಳವಳಗೊಳ್ಳುವುದಕ್ಕೆ ಅನ್ವಯವಾಯಿತು. "ಮಗನಳಲೊಳ್ ಕರಂ ಮಱುಗುತ್ತಿರ್ಪಿನಂ" ಎಂಬುದು 'ಪಂಪಭಾರತ'ದ ಮಾತು. ಈ ಅರ್ಥವೂ ವಿಸ್ತಾರಗೊಂಡು ಬೇರೆಯವರ ದುಃಖ ಕಂಡು ಪಡುವ ಸಹಾನುಭೂತಿಗೂ ಅನ್ವಯಿಸುವಂತಾಯಿತು, "ಸುಧನ್ವಂಗೆ ಮಱುಗುವಂತೆ ಸಚಿವನಿಂತೆಂದಂ" ಎಂಬುದು ಜೈಮಿನಿ ಭಾರತದ ಮಾತು. ಈ ಅರ್ಥ ಮುಂದೆ ಪ್ರೀತಿಸು ಎಂಬರ್ಥವನ್ನೂ ಪಡೆಯುತ್ತದೆ; 'ಶಬ್ದಮಣಿದರ್ಪಣ'ದಲ್ಲಿ "ಮಱುಗಿದಂ-ಕೂರ್ತಂ" ಎಂದು ಅರ್ಥ ಕೊಡಲಾಗಿದೆ.
ಪ್ರೇರಣಾರ್ಥದಲ್ಲಿ ಎಂದರೆ ಕುದಿಯುವ ಹಾಗೆ ಮಾಡು ಎಂಬರ್ಥದಲ್ಲಿ ಇದು ಮಱುಗಿಸು ಎಂಬ ರೂಪ ಪಡೆಯುತ್ತದೆ. "ಪಾಲಂ ಅರ್ಧಮಪ್ಪಿನಂ ಮಱುಗಿಸಿ" ಎಂಬ ಸಾಲು 'ಲೋಕೋಪಕಾರ'ದಲ್ಲಿ. ಇದೂ ಮಾನಸಿಕವಾಗಿ ಕೋಟಲೆಗೊಳಿಸು ಎಂಬರ್ಥವನ್ನು ಪಡೆಯುತ್ತದೆ: "ಮನುಷ್ಯಜನ್ಮಮಂ ಮಱುಗಿಸಿ ನಿನ್ನೀ ಪದಕೆ ತಂದುದು ಮುನ್ನಿನ ಗೆಯ್ದ ದೋಷಂ" ಎಂಬ ವಾಕ್ಯ ಕಮಲಭವ ಎಂಬ ಕವಿಯ 'ಶಾಂತೀಶ್ವರ ಪುರಾಣ'ದಲ್ಲಿದೆ.
ಇದರ ನಾಮರೂಪವೇ ಮಱುಕ ಅಥವಾ ಈಗಿನ ಮರುಕ, ಅಂದರೆ ಕುದಿಯುವಿಕೆ. ಹಿಂದೆ ಹೇಳಿದ 'ಲೋಕೋಪಕಾರ'ದಲ್ಲಿ ಈ ಶಬ್ದ ಇದೇ ಅರ್ಥದಲ್ಲಿ ಬಳಕೆಯಾಗಿದೆ. ಇಂತಹ ಮಾನಸಿಕ ಸ್ಥಿತಿಯೂ ಮರುಕವೇ, ದುಃಖ, ತಳಮಳ ಎಂದು. "ಮಱುಕಂ ಅಮಾಯಮಪ್ಪ ಅಪಮೃತ್ಯುವೆಂಬಲ್ಲಿಗೆ ಪೊಱಗೆ" ಎಂಬ ಮಾತು ಪಂಪನ 'ಆದಿಪುರಾಣ'ದಲ್ಲಿದೆ. "ಎನಗೆ ಮನದ ಮಱುಕಂ ಪಿರಿದುಮಾಹಾರಕ್ಕೆಂತು ಚಿಂತೆಗೆಯ್ವೆಂ" ಎಂಬ 'ಧರ್ಮಾಮೃತ'ದ ಮಾತಿನಲ್ಲಿ ಈ ಶಬ್ದಕ್ಕೆ ಚಿಂತೆ ಎಂಬರ್ಥವಿದೆ. ಈ ಅರ್ಥ ಮತ್ತಷ್ಟು ವಿಸ್ತಾರಗೊಂಡು ಸಹಾನುಭೂತಿಪರವಾದ ಕಳವಳಕ್ಕೂ ಅನ್ವಯಸಿ ಕರುಣೆ ಎಂಬರ್ಥವನ್ನು ಪಡೆಯುತ್ತದೆ.: "ವಾಸರಪತಿ ಬಿಸುಗದಿರಂ ಪೇಸದೆ ತವೆ ಪೀರ್ಗುಮೆಂಬ ಮಱುಕದೊಳಂಭೋಜಾಸನನಂಬುಜವನಮಂ ಬಾಸಣಿಸಿದನೆನಿಪುವಿಡಿದ ತಾವರೆಯಗೆಲೆಗಳ್" ಎಂಬುದು 'ಕಾವ್ಯಾವಲೋಕನ'ದ ಒಂದು ಪದ್ಯದ ಸಾಲು. ವ್ಯಾಮೋಹ ಎಂಬರ್ಥದಲ್ಲಿ 'ಜಯನೃಪ ಕಾವ್ಯ'ವು ಈ ಶಬ್ದವನ್ನು ಬಳಸುತ್ತದೆ: "ಎನ್ನವರನ್ನಿಗರೆನುತಂ ಮಱುಕಂ ಮಚ್ಚರಗೊಳ್ಳದ ಸತ್ಯಕ್ಕೆಱೆವಟ್ಟೆನಿಸುವ ಸಾಧುಸಮಿತಿಗತಿಸಮಿತಿಯೊಳೆಱಗುವೆನು". ಹೀಗೆ ಇನ್ನೂ ಅನೇಕ ಅರ್ಥಚ್ಛಾಯೆಗಳು ಈ ಶಬ್ದಕ್ಕೆ ಒದಗುತ್ತವೆ.
=====
ಮಲ್ಲಿಗೆ: ಕನ್ನಡನಾಡಿನಲ್ಲಿ ಸುಪ್ರಸಿದ್ಧವಾದ ಕಂಪಿನ ಹೂ ಮತ್ತು ಅದು ಬಿಡುವ ಬಳ್ಳಿಯ ಹೆಸರು. ಇದು ಸಂಸ್ಕೃತದ ಮಲ್ಲಿಕಾ ಎಂಬುದರ ತದ್ಭವ. "ತೃಣಶೂಲಂ ತು ಮಲ್ಲಿಕಾ ಭೂಪದೀ ಶೀತಭಿರುಶ್ಚ ಸೈವಾಸ್ಫೋಟಾ ವನೋದ್ಭವಾ" ಎಂದು 'ಅಮರಕೋಶ'ದಲ್ಲಿ ವಿವಿಧಾರ್ಥಗಳನ್ನು ಹೇಳಿದೆ. "ಮಲ್ಲಿಗೆ ವಿಚಕಿಳಂ" ಎಂದು 'ಅಭಿಧಾನ ವಸ್ತುಕೋಶ' ಹೇಳುತ್ತದೆ. ತನಗೆ ಬನವಾಸಿಯ ನೆನಪನ್ನು ತರುವ ವಸ್ತುಗಳಲ್ಲಿ 'ಬಿರಿದ ಮಲ್ಲಿಗೆ'ಯೂ ಒಂದು ಎನ್ನುತ್ತಾನೆ ಪಂಪ ("ಬಿರಿದ ಮಲ್ಲಿಗೆಗಂಡೊಡಂ .. .. ನೆನೆವುದೆನ್ನ ಮನಂ ಬನವಾಸಿ ದೇಶಮಂ" - 'ಪಂಪಭಾರತ'). ಇದರಲ್ಲಿ ಸೂಜಿಮಲ್ಲಿಗೆ, ದುಂಡು ಮಲ್ಲಿಗೆ ಮುಂತಾದ ಭೇದಗಳಿವೆ; ಅಲ್ಲದೆ ಮೈಸೂರ ಮಲ್ಲಿಗೆ, ಆಂಬೂರು ಮಲ್ಲಿಗೆ ಮುಂತಾದ ಪ್ರಾದೇಶಿಕ ಪ್ರಭೇದಗಳೂ ಇವೆ. ಕೆಎಸ್‍ನ ಅವರ 'ಮೈಸೂರ ಮ್ಲಲಿಗೆ' ಅತ್ಯಂತ ಜನಪ್ರಿಯ ಕವನ ಸಂಕಲನ.
ಮನ್ಮಥನ ಬಾಣಗಳು ಹೂಗಳೇ ಎಂಬುದು ಹಿಂದಿನವರ ನಂಬಿಕೆ. "ಅರವಿಂದಂ ಅಶೋಕಂ ಚ ಚೂತಂ ಚ ನವಮಲ್ಲಿಕಾ ನೀಲೋತ್ಪಲಂ ಚ ಪಂಚೈತೆ ಪಂಚಬಾಣಸ್ಯ ಸಾಯಕಾಃ". ಮಲ್ಲಿಕಾಮಾಲೆ ಎಂಬುದು ಪ್ರಾಚೀನ ಕನ್ನಡ ಚಂಪೂ ಕವಿಗಳ ಪ್ರಿಯವಾದ ಒಂದು ಅಕ್ಷರ ವೃತ್ತದ ಹೆಸರು. ಮಲ್ಲಿಗೆಯ ಸುವಾಸನೆಯಂತೆ ಹರಡಿದ ಕೀರ್ತಿಯುಳ್ಳವನು ಎಂಬ ಅರ್ಥದ 'ಮಲ್ಲಿಕಾಮೋದ' ಎಂಬ ಬಿರುದು ಶಾಸನಗಳಲ್ಲಿ ಉಲ್ಲೇಖಗೊಂಡಿದೆ ("ಚಾಳುಕ್ಯಾಭರಣಂ ಮಲ್ಲಿಕಾಮೋದಂ"). ಮಲ್ಲಿಕಾವೃತಿ ಎಂದರೆ ಮಲ್ಲಿಗೆಯ ಪೊದೆ ("ಮಲ್ಲಿಕಾವೃತಿಯೊಳ್ ವಲ್ಲಭೆಯಯಂ ತೊಳಲ್ದರಸಿದಂ ವಿದ್ಯಾವಧೂವಲ್ಲಭಂ" - ನೇಮಿಚಂದ್ರನ 'ಲೀಲಾವತಿ').
ಮಲ್ಲಿಕಾರ್ಜುನ ಶ್ರೀಶೈಲದ ಅಧಿದೈವ. 'ಚೆನ್ನ ಮಲ್ಲಿಕಾರ್ಜುನ' ಎಂಬುದು ಮಹಾದೇವಿಯಕ್ಕನ ಅಂಕಿತವಾದರೆ, 'ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬುದು ಸಿದ್ಧರಾಮನ ವಚನಾಂಕಿತ. ಮಲ್ಲಿಕಾರ್ಜುನ ಎಂಬ ಹೆಸರು ಕನ್ನಡೀಕರಣಗೊಂಡು ಮಲ್ಲಯ್ಯ, ಮಲ್ಲಣ್ಣ, ಮಲ್ಲಪ್ಪ, ಮಲ್ಲೇಶಪ್ಪ, ಮಲ್ಲಾರಾಧ್ಯ ಮುಂತಾದ ವ್ಯಕ್ತಿನಾಮಗಳಾಗಿವೆ. ಆದರೆ ಮಲ್ಲಿಕಾ+ಅರ್ಜುನ ಎಂಬ ಪದವಿಭಜನೆಯು ಶಿವನಿಗೆ ಹೇಗೆ ಅನ್ವಯವಾಗುತ್ತದೆ? ತಮಿಳು ಪಂಡಿತರೊಬ್ಬರು ಈ ಶಬ್ದದ ವ್ಯುತ್ಪತ್ತಿಯನ್ನು 'ಮಲೈಕ್ಕು ಅರಸನ್' ಎಂದು ಹೇಳುತ್ತಾರೆಂದು ನನ್ನ ಗೆಳೆಯರೊಬ್ಬರು ಹೇಳಿದರು. ಮಲ್ಲಿಕಾರ್ಜುನ ಬೆಟ್ಟದ ದೈವವಾದ್ದರಿಂದ ಈ ವ್ಯತ್ಪತ್ತಿ ವಿಚಾರಯೋಗ್ಯ.
=====
ಮಾಡು ಶಬ್ದದ ಮೂರಾರು ಅವತಾರಗಳು
ಕನ್ನಡ ಮಾತನಾಡುವ ನೀವು ಒಂದು ದಿನ ನಿಮ್ಮ ಮಾತಿನಲ್ಲಿ 'ಮಾಡು' ಶಬ್ದದ ಯಾವ ರೂಪವನ್ನೂ ಬಳಸುವುದಿಲ್ಲ ಎಂದು ಪಂತ ಕಟ್ಟಿ ನೋಡಿ; ಗೆಲ್ಲುವಿರೋ ಸೋಲುವಿರೋ ಗೊತ್ತಾಗುತ್ತದೆ! ಏಕೆಂದರೆ ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಹತ್ತಾರು ಬಾರಿ 'ಮಾಡು'ವನ್ನೊಳಗೊಂಡ ಶಬ್ದರೂಪಗಳನ್ನು ಬಳಸುವುದು ಅನಿವಾರ್ಯ; ಅದರ ಬಳಕೆ ಅಷ್ಟೊಂದು ಸಾಮಾನ್ಯವಾದುದು, ಅನಿವಾರ್ಯವಾದುದು. ಅದರ ಸಹಾಯದಿಂದ ಬಹಳ ಅಭಿವ್ಯಕ್ತಿರೂಪಗಳನ್ನು ಸಾಧಿಸಿಕೊಳ್ಳುತ್ತೇವೆ; ಅದು ನಾನಾ ಬಗೆಯ ಕಾರ್ಯಗಳನ್ನು ನಿರ್ವಹಿಸುತ್ತದೆ.
'ಮಾಡು' ಎಂಬ ಶಬ್ದಕ್ಕೆ ಕೇಶಿರಾಜನು ತನ್ನ 'ಶಬ್ದಮಣಿದರ್ಪಣ'ದಲ್ಲಿ ಧಾತುಗಳಿಗೆ ಅರ್ಥ ಕೊಡುವಾಗ ಎಸಗು ಎಂಬ ಕ್ರಿಯಾರ್ಥ ಹಾಗೂ ಗೋಡೆ (ಕುಡ್ಯ) ಎಂಬ ನಾಮಾರ್ಥವನ್ನು ಕೊಡುತ್ತಾನೆ ("ಮಾಡು-ಕರಣೇ ಕುಡ್ಯ ವಿಶೇಷೇ ಚ"). ಆದರೆ ಗೂಡು ಎಂಬರ್ಥದ ಮಾಡ ಮುಂದೆ ಮಾಡು ಎಂದಾಗಿದೆ: ಪುರಂದರ ದಾಸರ "ಮಾಡು ಸಿಕ್ಕದಲ್ಲ, ಮಾಡಿನ ಗೂಡು ಸಿಕ್ಕದಲ್ಲ" ಎಂದು ಆರಂಭವಾಗುವ ಪ್ರಸಿದ್ಧ ಕೀರ್ತನೆಯ ಪಲ್ಲವಿಯಿದು. ಈ ನಾಮವಾಚಿ ಅರ್ಥಗಳು ಅಷ್ಟಕ್ಕೇ ಸೀಮಿತವಾದ. ಆದರೆ ಅದರ ಕ್ರಿಯಾರ್ಥ ಮಾತ್ರ ವ್ಯಾಪಕವಾದ ಪ್ರಭಾವ ಹೊಂದಿದೆ. 'ಮಾಡು ಇಲ್ಲ ಮಡಿ' ಎಂಬುದು ನಲವತ್ತೇಳರ ಸ್ವಾತಂತ್ರ್ಯ ಚಳವಳಿಯ ಮೂಲ ಮಂತ್ರವಾಗಿತ್ತು. ಈ ಪದ ಬಳಕೆ ಆರಂಭದಿಂದ ಇಂದಿನವರೆಗೂ ಹೀಗೆಯೇ ಇದೆ, ಹೆಚ್ಚುತ್ತಲೂ ಇದೆ. "ಕೇಡಡಸಿದೊಡಂ ಬಗೆಯುಂ ಕೂಡದು ಕೂಡಿದುದುಮದು ವಿಪರೀತಮುಮಂ ಮಾಡುಗುಂ" ಎಂಬ 'ಕವಿರಾಜಮಾರ್ಗ'ದ ವಾಕ್ಯದಿಂದ ಹಿಡಿದು, "ಮಾಡು ದಾನ ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ" ಎಂಬ ಕನಕದಾಸರ ಮಾತನ್ನೊಳಗೊಂಡು, "ವಾನರನ ಮಾಡಮಾಡುತ್ತಲಿ ವಿನಾಯಕನ ಮಾಡಿಬಿಟ್ಟರು ಸರಿಯೆ" ಎಂಬ ಗೋಪಾಲಕೃಷ್ಣ ಅಡಿಗರ 'ಏನಾದರೂ ಮಾಡುತಿರು ತಮ್ಮ' ಎಂಬ ಕವನದ ಸಾಲಿನವರೆಗೆ ಇದನ್ನು ಸಾಮಾನ್ಯಾರ್ಥದಲ್ಲಿ ಅಸಂಖ್ಯ ಕಡೆ ಬಳಸಲಾಗಿದೆ.
ವಿಧ್ಯರ್ಥದಲ್ಲಿ (ಆಜ್ಞೆ, ಕೋರಿಕೆ, ಆಶಯ) ಮಧ್ಯಮ ಪುರುಷದಲ್ಲಿ (ನೀನು, ನೀವು) 'ಕೊ' ('ಕೊಳ್' ಎಂಬುದರಲ್ಲಿ ಕೊನೆಯ ವ್ಯಂಜನ ಲೋಪವಾಗಿ) ಸೇರಿ ಇದು 'ಮಾಡಿಕೊ' ಆಗುತ್ತದೆ, ಪುರಂದರದಾಸರ "ದಾಸನ್ನ ಮಾಡಿಕೊ ಎನ್ನ, ಇಷ್ಟು ಘಾಸಿ ಮಾಡುವರೇನೊ ಕರುಣಾಸಂಪನ್ನ" ಎಂಬ ಸಾಲಿನಲ್ಲಿನಂತೆ. ಪ್ರಥಮ ಪುರುಷ (ಅವನು, ಅವಳು, ಅವರು, ಅದು, ಅವು)ದಲ್ಲಿ 'ಮಾಡುಗೆ' ಎಂಬುದು ಹಳಗನ್ನಡದಲ್ಲಿ ಬಳಕೆಯಲ್ಲಿತ್ತು  "ಪ್ರೋದ್ಭಾಸಿ ಚಂದ್ರಂ ತ್ರಿಭುವನಜನಕಾನಂದಮಂ ಮಾಡುಗೆಂದುಂ" - 'ಕರ್ಣಾಟಕ ಕಾದಂಬರಿ'). ಹೊಸಗನ್ನಡದಲ್ಲಿದು 'ಮಾಡಲಿ' ಎಂದಾಗುತ್ತದೆ: 'ಇಸು' ಪ್ರತ್ಯಯ ಸೇರಿದಾಗ ಇದು ಪ್ರೇರಣಾರ್ಥವನ್ನು ಪಡೆಯುತ್ತದೆ, ಅಂದರೆ ಕ್ರಿಯೆಯನ್ನು ಮಾಡುವಂತೆ ಮಾಡುವ ಅರ್ಥ ಪಡೆಯುತ್ತದೆ. "ಬೀಡುಬಿಡುವಿಂಬು ಕದಳಿ ತೆಂಗಿನ ತಾಣಂ ಜಾಣಿಂ ನೀರ್ದಾಣಮೆಂದೆಡೆಯಱಿದುಂ ಮಾಡಲ್ ಮಾಡಿಸಲ್ ಪಡೆ ನೀಂ ಬಲ್ಲೆ ನೀಂ ಮೆಚ್ಚೆ ಹರಿಗ ಕೇಳಾನೆ ಬಲ್ಲೆಂ" ಎಂಬುದು 'ಪಂಪಭಾರತ'ದ ಪದ್ಯವಾದರೆ, "ತನ್ನಾಶ್ರಯದ ರತಿಸುಖವನು ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ? ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ" ಎಂಬುದು ಬಸವಣ್ಣನ ವಚನ. ಈ ಶಬ್ದ ಮಾಡುವ ಕ್ರಿಯೆ ಎಂಬರ್ಥದಲ್ಲಿ 'ಮಾಡುಹ' ಎಂಬ ಕೃನ್ನಾಮವಾಗುತ್ತದೆ. ಇದಕ್ಕೆ ಉದಾಹರಣೆ ದುರ್ಗಸಿಂಹನ 'ಪಂಚತಂತ್ರ'ದ ಈ ವಾಕ್ಯ: "ನೋಡದೆಯಿರುಹವುಂ, ಪ್ರೀತಿಪೂರ್ವಕವಹಂತಹುದ ಕಿಡಿಸುವಹವುಂ, ವಿವಾದಮಂ ಮಾಡುಹವುಂ, ನುಡಿಯದಿರುಹವುಂ, ವಿಸ್ಮಯವಿಲ್ಲದಿರುಹವುಂ, ಇಂತಿಹವು ಸ್ನೇಹವಿಲ್ಲದ ಜನದ ಲಕ್ಷಣವೆಂದವುದು". ಆಧುನಿಕ ಕನ್ನಡದಲ್ಲಿ ಇದು 'ಮಾಡುವಿಕೆ' ಎಂದಾಗುತ್ತದೆ. ಇದು ಕೆಲಸ ಎಂಬರ್ಥದ 'ಮಾಡಿಕೆ' ಎಂದೂ ಆಗುತ್ತದೆ. ಮಾಡು ಎಂಬುದಕ್ಕೆ 'ಅಣ' ಎಂಬ ಪ್ರತ್ಯಯ ಸೇರಿಸಿದಾಗ (ಮಾಡು+ಅಣ) ಮಾಡುವಣ>ಮಾಡೋಣ  ಎಂಬ ಕೃದಂತ ಭಾವಾನಾಮರೂಪ ಬರುತ್ತದೆ: "'ಈಗೇನು ಮಾಡೋಣ' ಮತ್ತೆ ಕೇಳುವೆಯಲ್ಲ, ಹೊಕ್ಕ ಮನೆಯನ್ನೆಲ್ಲ ಹೊಸ ಮನೆಯೆಂದೆ ಕರೆಯೋಣ" ಎಂಬುದು ಕೆಎಸ್ನ ಅವರ ಕವನದ ಸಾಲು.
ವಾಕ್ಯದಲ್ಲಿ ಮಾಡು ಎಂಬುದರ ಹಿಂದೆ ಬರುವ ದ್ವಿತೀಯಾವಿಭಕ್ತಿಯ ನಾಮಪದದಿಂದಾಗಿ ಬೇರೆ ಬೇರೆ ಅರ್ಥಛಾಯೆಗಳನ್ನು ಪಡೆಯುತ್ತದೆ. 'ವಡ್ಡಾರಾಧನೆ'ಯಲ್ಲಿನ "ಮುಂಜಿಬಂಧನ ಕ್ರಿಯೆಯಂ ಮಾಡಿದ ಬೞಿಕ್ಕೆ" ಎಂಬ ವಾಕ್ಯಖಂಡದಲ್ಲಿ ಮಾಡು ಎಂಬುದಕ್ಕೆ ನೆರವೇರಿಸು ಎಂಬರ್ಥ ಬಂದಿದೆ; "ವಿರಕ್ತಿಯಂ ಮಾಡುವುದುಂ ನಾಡೆಯುಂ ಗಹನಂ" ಎಂಬ 'ಪಂಚತಂತ್ರ' ಮಾತಿನಲ್ಲಿ ಇದಕ್ಕೆ ಕೈಗೊಳ್ಳುವುದು ಎಂಬರ್ಥ ಬಂದಿದೆ; "ಮಡಕೆಯ ಮಾಡುವಡೆ ಮಣ್ಣೇ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು" ಎಂಬ ಬಸವಣ್ಣನ ಮಾತಿನಲ್ಲಿ ಈ ಶಬ್ದಕ್ಕೆ ತಯಾರಿಸು ಎಂಬರ್ಥವಿದೆ; "ಅತಿ ಅಭ್ಯಾಗತರಿಗೆ ಅನ್ನವನ್ನೆ ಇಕ್ಕುವರು ಆಯುತ ವೃತ್ತಿಯನ್ನೆ ಮಾಡುವರು" ಎಂಬ ಪುರಂದರದಾಸರ ಮಾತಿನಲ್ಲಿ ಇದಕ್ಕೆ ಆಚರಿಸು ಎಂಬರ್ಥ ಪ್ರಾಪ್ತವಾಗುತ್ತದೆ.
'ಮಾಡು' ಧಾತು ಮತ್ತೊಂದು ಪದದ ಮುಂದೆ ಬಂದು ಸಂಯುಕ್ತ ಧಾತುವಾದಾಗ ಅದರ ಅರ್ಥದ ಬಣ್ಣಗಳು ಬದಲಾಗುತ್ತ ಹೋಗುತ್ತವೆ. ಈ ಬಗೆಯಲ್ಲಿ ಸಾಧಿತವಾಗುವ ಧಾತುಗಳನ್ನು ನಾಲ್ಕು ಮುಖ್ಯ ವರ್ಗಗಳಾಗಿ ವಿಂಗಡಿಸಬಹುದು: (1) ಕನ್ನಡ ನಾಮವಾಚಕಗಳ ಜೊತೆ ಸೇರಿ, (2) ಸಂಸ್ಕೃತ ಶಬ್ದಗಳ ಜೊತೆ ಸೇರಿ ಮತ್ತು (3) ಇಂಗ್ಲಿಷ್ ಧಾತುಗಳ ಮುಂದೆ ಬಂದು, (4) ಸಂಸ್ಕೃತ ಮತ್ತು ಇಂಗ್ಲಿಷ್ ಮತ್ತಿತರ ಅನ್ಯದೇಶ್ಯ ನಾಮಪದಗಳ ಜೊತೆಗೂಡಿ. ಮೇಲೆ ನೋಡಿದಂತೆ, ವಾಕ್ಯಗಳಲ್ಲಿ ದ್ವಿತೀಯಾವಿಭಕ್ತಿಯ 'ಮಾಡು'ವಿಗೆ ಆಯಾ ಪೂರ್ವಪದದ ಕಾರಣದಿಂದ ಬೇರೆ ಬೇರೆ ಆರ್ಥ ಬರುತ್ತದೆ. ಆದರೆ ಸಾಮಾನ್ಯ ಮಾತಿನಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯವಾದ 'ಅನ್ನು' ಕೈಬಿಟ್ಟು ಮಾಡು ಜೊತೆಯಲ್ಲಿ ಸೇರಿಸುವುದು ರೂಢಿಯಲ್ಲಿದೆ; ಇದು ಬರವಣಿಗೆಯಲ್ಲಿಯೂ ಕಾಣಿಸಿಕೊಳ್ಳುತ್ತದೆ. "ದೇವ ನಿನ್ನಂಘ್ರಿಯನು ಪೂಜೆಮಾಡುವೆವೆಂದು" ಎಂಬ ಸಾಲಿನಲ್ಲಿ 'ಪೂಜೆಮಾಡು' ಒಂದೇ ಪದವಾಗಿ ಸಂಯುಕ್ತಧಾತುವಾಗುತ್ತದೆ. "ಮರುಳುಮಾಡಾಕ ಹೋಗಿ ಮರುಳಸಿದ್ಧನ ನಾರಿ ಮರುಳಾಗ್ಯಾಳ ಜಂಗಮಯ್ಯಗ" ಎಂಬ ಬೇಂದ್ರೆಯವರ ಮಾತನ್ನೂ ನೋಡಬಹುದು; "ಇಡಿಯ ಕೊಡವನ್ನೆಲ್ಲ ಬರಿದುಮಾಡುವ ಆಸೆ" ಎಂಬ ಚಂದ್ರಶೇಖರ ಕಂಬಾರರ ನುಡಿಯನ್ನು ಉದಹರಿಸಬಹುದು. ಹೀಗೆಯೇ ಹಣ, ರಾಡಿ, ಕೀಟಲೆ, ಮುದ್ದೆ, ಸುರುಳಿ, ಕಳ್ಳತನ, ಮಣ್ಣು ಮುಂತಾದ ನಾಮಪದಗಳೊಡನೆ 'ಮಾಡು' ಸೇರಿಸಿ ಸಂಯುಕ್ತಧಾತುವನ್ನಾಗಿ ಮಾಡಿಕೊಳ್ಳುತ್ತೇವೆ.
ಹೀಗೆಯೇ ಸಂಸ್ಕೃತ ಶಬ್ದಗಳು ಹಾಗೂ ತದ್ಭವಗಳೊಡನೆ ಸೇರಿಸಿಯೂ ಇಂತಹ ಸಂಯುಕ್ತಧಾತುಗಳಳನ್ನು ಮಾಡಿಕೊಳ್ಳುತ್ತೇವೆ. "ಸ್ನಾನಮಾಡಿದರೆನ್ನ ದೇಹ ತಾಳದು ಎಂದು ಕಳ್ಳನಾಮವ ತಿದ್ದುವೆ" ಎಂಬ ಪುರಂದರದಾಸರ ಸಾಲಿನಲ್ಲಿನ 'ಸ್ನಾನಮಾಡು' ಇಂತಹ ರಚನೆ. "ಕಟ್ಟಿದ ಲಿಂಗವ ಕಿರಿದುಮಾಡಿ ಬೆಟ್ಟದ ಲಿಂಗವ ಹಿರಿದುಮಾಡುವ ಪರಿಯ ನೋಡ!" ಎಂಬ ಅಂಬಿಗರ ಚೌಡಯ್ಯ ಮಾತಿನಲ್ಲಿ ಇಂತಹ ರಚನೆಯಿದೆ. ದಾನ, ಕರ್ಮ, ಕೃತ್ಯ, ಚೇಷ್ಟೆ ಮುಂತಾದ ಸಂಸ್ಕೃತದ ನಾಮಪದಗಳ ಜೊತೆ 'ಮಾಡು' ಸೇರುತ್ತದೆ. ಹೀಗೆಯೇ ತದ್ಭವಗಳ ಜೊತೆ ಕೂಡ. "ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮೋಸಮಾಡಿ" ಎಂಬ ಕನಕದಾಸರ ಮಾತು (ಮೋಸ <ಮೋಷ), "ಹೆಣ ಹೊತ್ತು ಮಸಣ ಮುಟ್ಟಿಸಿ ಸುಟ್ಟು ಬೂದಿಮಾಡಿ" ಎಂಬ ಗಂಗಾಧರ ಚಿತ್ತಾಲರ ಸಾಲು (ಬೂದಿ<ಭೂತಿ) ಮುಂತಾದುವನ್ನು ನೋಡಬಹುದು. ಹೀಗೆಯೇ ಕತೆ (ಕಥಾ), ಜಾತ್ರೆ (ಯಾತ್ರಾ), ಹಬ್ಬ (ಪರ್ವನ್) ಮುಂತದ ಶಬ್ದಗಳಿಗೂ ಮಾಡು ಸೇರುತ್ತದೆ.
ಇತರ ಅನ್ಯಭಾಷಾ ಶಬ್ದಗಳಿಗೂ ಹಲವೆಡೆ ಮಾಡು ಸೇರಿ ಧಾತುವಾಗುತ್ತದೆ. ಇಂಗ್ಲಿಷ್‍ನ ಕೆಲವು ನಾಮಪದಗಳಿಗೆ ಮಾಡು ಸೇರುವ ಉದಾಹರಣೆಗಳನ್ನು ನೋಡೋಣ: "ಜೋಕ್ ಮಾಡಿ ಪೀಡಿಸ್ತಾನೆ ಕಣೆ, ಹಿತವಾಗಿರತ್ತೆ" ಎಂಬ ನಿಸಾರ್ ಅಹಮದ್ರ ವಾಕ್ಯದಲ್ಲಿನ 'ಜೋಕ್ ಮಾಡು'; "ಆಗಾಗ ಸುಣ್ಣ ಬಣ್ಣ ಹೊಡೆದು ರಿಪೇರಿ ಮಾಡಿದರೆ ಇನ್ನರ್ಧ ಶತಮಾನ ಗ್ಯಾರಂಟಿ" ಎಂಬ ಜಿಎಸ್ಎಸ್ ಅವರ ಸಾಲಿನಲ್ಲಿರುವ 'ರಿಪೇರಿಮಾಡು' ಇಂಥವುಗಳು. ಹೀಗೆಯೇ ಐರನ್‍ಮಾಡು, ಪರ್ಮಿಟ್ ಮಾಡು, ಸ್ಟಡಿಮಾಡು (ಇಂಥವು ಧಾತುಗಳೂ ಹೌದು) ಇತ್ಯಾದಿ. ಇಂಗ್ಲಿಷ್‍ನ ಧಾತುಗಳಿಗೂ ಮಾಡು ಸೇರುತ್ತದೆ: ಟೈಪ್ ಮಾಡು, ಡ್ರೈವ್ ಮಾಡು, ಕಂಡಕ್ಟ್ ಮಾಡು, ಸರ್ವ್‍ ಮಾಡು ಇತ್ಯಾದಿ. ಅರೆಬಿಕ್, ಪರ್ಷಿಯನ್, ಉರ್ದುವಿನಂತಹ ಭಾಷೆಗಳಿಂದ ಬಂದ ನಾಮಪದಗಳಿಗೂ ಮಾಡು ಸೇರಿ ಸಂಯುಕ್ತಧಾತುವಾಗುತ್ತದೆ: "ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ ಹುಸಿನಗುತ್ತ ಎದುರಿಸುವುದಿದೆಯಲ್ಲ" (ತನಿಖೆ<ತನಕೀಹ್, ಅರೆಬಿಕ್); "ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ" (ಮೆಹರುಬಾನಿ<ಮೆಹರ್ಬಾನಗಿ, ಪರ್ಷಿಯನ್) ಮುಂತಾದ ನಿಸಾರ್ ಅಹಮದ್ ಅವರ ಕವನದ ಸಾಲುಗಳನ್ನು ನೋಡಬಹುದು. ಹೀಗೆಯೇ ಜುಲುಮೆಮಾಡು, ಕಬ್ಜಮಾಡು, ಮನ್ನಾ ಮಾಡು, ವಸೂಲುಮಾಡು ಮುಂತಾದ ಹಲವಾರು ಉದಾಹರಣೆಗಳನ್ನು ಕೊಡಬಹುದು. ಈಗ ಹೇಳಿ, 'ಮಾಡು'ವಿಲ್ಲದೆ ಒಂದು ದಿನವಾದರೂ ಕನ್ನಡವನ್ನು ಮಾತನಾಡಬಹುದೇ? ಟ್ರೈ ಮಾಡಿ ನೋಡಿ.
=====
=====
ಮಾಟ: ಇದು ಮಾಡು ಎಂಬ ಕ್ರಿಯಾಪದದ ನಾಮರೂಪ. ಅಂದರೆ ಇದರರ್ಥ ಮಾಡಿದುದು, ಕೆಲಸ ಎಂದು. ಮಲಯಾಳಂನಲ್ಲಿ ಮಾಟ್ಟಂ ಎಂದೂ ತುಳುವಿನಲ್ಲಿ ಮಾಟ ಎಂಬ ರೂಪದಲ್ಲಿಯೂ ಈ ಶಬ್ದವಿದೆ. ಮೂಲವಾದ ಕೆಲಸ ಎಂಬರ್ಥದಲ್ಲಿ 'ಕರ್ಣಾಟಕ ಕಾದಂಬರಿ'ಯಲ್ಲಿ ಈ ಶಬ್ದದ ಪ್ರಯೋಗವಿದೆ: "ನುಡಿಯೊಂದು ಮಾಟವೊಂದು ಎನಿಸಿದ ಮಾನವಂಗೆ". ಪಂಪನ 'ಆದಿಪುರಾಣ'ದಲ್ಲಿ ಇದಕ್ಕೆ ನಿರ್ಮಿತಿ, ರಚನೆ ಎಂಬ ಅರ್ಥವಿದೆ: "ಲಲಿತೋನ್ನತ ಮಣಿಮಯ ಮಾಟದಂದದಮದು ಪಲವುಂ ದೇಸೆಯ ಮಾಟದಂದಂ". ಪಂಪನ 'ಆದಿಪುರಾಣ'ದಲ್ಲಿ "ಮಾಟದ ಕುರುಳ್' ಎಂಬಲ್ಲಿಯೂ ನಾಗಚಂದ್ರನ 'ಪಂಪರಾಮಾಯಣ'ದಲ್ಲಿನ "ಮಾಟಕೂಟಂಗಳಿಂ ನವರತ್ನೋಪಲ ಕರ್ಮದಿಂ" ಎಂಬ ವಾಕ್ಯಖಂಡದಲ್ಲಿಯೂ ಈ ಶಬ್ದಕ್ಕೆ ಸುಂದರವಾದ ಎಂಬ ಅರ್ಥ ಬಂದಿದೆ.
ಮಾಡಿದುದು ಎಂದರೆ ಸಹಜವಲ್ಲದ್ದು, ಅಂದರೆ ಕೃತಕವಾದುದು ಎಂಬರ್ಥವೂ ಈ ಶಬ್ದಕ್ಕೆ ಪ್ರಾಪ್ತವಾಯಿತು. ನಯಸೇನನು ತನ್ನ 'ಧರ್ಮಾಮೃತ'ದಲ್ಲಿ "ಮಾಟದ ಮುಡಿಯಂತೆ ಕಟ್ಟಿದ ಪಲ್ಲಿನಂತೆ ಪೀಲಿಯ ಕಣ್ಣಂತೆ" ಎಂಬ ವಾಕ್ಯವನ್ನು ಬರೆಯುತ್ತಾನೆ. 'ಪಂಪರಾಮಾಯಣ'ದಲ್ಲಿ ಈ ಶಬ್ದವು ಕಣ್ಕಟ್ಟು, ಮಾಯೆ ಎಂಬರ್ಥದಲ್ಲಿಯೂ ಬಳಕೆಗೊಂಡಿದೆ: "ಭವದೀಯ ಪ್ರಸಾದದಿಂ ಎನಗೆ ಬಲ್ವಲಮಪ್ಪ ಬವರಮಿಲ್ಲದಾವನಾನುಮೊರ್ವಂ ಮಾಯಾವಿಯ ಮಾಟಮಕ್ಕುಂ"
ಕ್ಷುದ್ರದೇವತೆಯ ಸಹಾಯದಿಂದ ತನ್ನ ಶತ್ರುಗಳಿಗೆ ಮಾಡಿಸುವ ವಾಮಾಚಾರ ಅಥವಾ ಕೇಡುಗೆಲಸವನ್ನು ಮಾಟ ಅಥವಾ ಅಭಿಚಾರ ಎಂಬ ಮಾತಿನಿಂದ ಕರೆಯುತ್ತಿದ್ದರು. ಕನಕಸ್ವಾಮಿಯೆಂಬುವನಿಂದ ಪಾಂಡವರ ವಿರುದ್ಧ ದುರ್ಯೋಧನನು ಅಭಿಚಾರ ಮಾಡಿಸಿದ ಪ್ರಸಂಗ 'ಪಂಪಭಾರತ'ದಲ್ಲಿದೆ. ಮಾಟಮಾಡುವವನು 'ಮಾಟಗಾರ'; ಅಂಥ ಹೆಂಗಸು ಮಾಟಗಾರ್ತಿಯ ಉಲ್ಲೇಖ ಮಡಿವಾಳ ಮಾಚಯ್ಯನ ವಚನವೊಂದರಲ್ಲಿದೆ. ಮಾತಿನಿಂದಲೋ, ಒನಪು ವಯ್ಯಾರಗಳಿಂದಲೋ ಆಕರ್ಷಣೆ ಮಾಡಬಲ್ಲವರನ್ನೂ 'ಮಾಟಗಾರ' 'ಮಾಟಗಾತಿ' ಎಂಬ ಮಾತುಗಳಿಂದ ಕರೆಯುವುದು ರೂಢಿ.
=====
ಮಾವು: 'ಹಣ್ಣುಗಳ ರಾಜ' ಎನಿಸಿಕೊಂಡ ಮಾವು ಎಲ್ಲ ದ್ರಾವಿಡ ಭಾಷೆಗಳಳ್ಲೂ 'ಮಾ' ಇಂದಲೇ ಆರಂಭಗೊಳ್ಳುತ್ತದೆ. ಪಂಪನಿಗೆ ಚಿಗುರಿದ ಮಾವು ಎಂದರೆ ತುಂಬ ಇಷ್ಟ. ಸುಂದರ ಕಾವ್ಯವೆಂದರೆ "ಎಳಮಾವು ಕೆಂದಳಿರ ಪೂವಿನ ಬಿಣ್ಪೊಱೆಯಿಂ ಬಳಲ್ದು ತುಂಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳ್ ಒಪ್ಪುವಂತೆ" ಇರುತ್ತದಂತೆ ('ಪಂಪಭಾರತ'). ಮಾವಿನ ಕಾಯಿಯೇ ಮಾಂಗಾಯ್ ("ಪೂವಂ ಮಾಂಗಾಯಂ .. .. ಒಲವಿಂ ತೋಂಟಿಗಂ ಕೊಟ್ಟನೊರ್ವಂ" - ಆಂಡಯ್ಯನ 'ಕಬ್ಬಿಗರ ಕಾವ').  ಮಾವಿನ ಚಿಗುರು 'ಮಾಂಗೊನರ್' ("ಮಾಂಗೊನರ ರಸಮಂ .. .. ಉಂಡ ಗಂಡುಗೋಗಿಲೆಖ ಲೀಲಾವತಿ"). 'ಮಾವಿನ ಕೋಡು' ಎಂದರೆ ಮಾವಿನ ಕೊನೆ, ಎಲ್ಲ ಶುಭ ಸಂದರ್ಭಗಳಲ್ಲೂ ಎಲೆಗಳುಳ್ಳ ಕೊನೆ ಬಳಕೆಗೆ ಬರುವಂಥದು. "ಅಭಿಷೇಕಂ ಮಾಡುವರೊಲ್ದುಂ ಮಾವಿನ ಕೋಡಿಂ" ಎಂಬುದು ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಉಕ್ತವಾದ ಪದ್ಧತಿ. ಮಾವಿನೆಲೆಯ ತುದಿಯನ್ನು ಪವಿತ್ರವಾದ ನೀರಲ್ಲದ್ದಿ ಪ್ರೋಕ್ಷಣೆ ಮಾಡುವ ಪದ್ಧತಿ ಈಗಲೂ ಇದೆ. ಮಾವಿನ ಕಸುಗಾಯಿಯೇ 'ಮಾಮಿಡಿ': "ಮಾಮಿಡಿಗಳಂ ತೆಗೆದು ಪಚ್ಚೆಸಾರಮನಿಕ್ಕಿ ಪೂಮಿಡಿಗಳೊಳ್ ತಳಿರ ಲಂಬಣಮನೆಳಲಿಕ್ಕಿ" - ನೇಮಿಚಂದ್ರನ 'ಲೀಲಾವತಿ').
ಹದಿನಾರನೆಯ ಶತಮಾನಕ್ಕೆ (ಅಂದರೆ ಕಸಿ ಮಾಡುವ ವಿಧಾನ ಬರುವ) ಮುಂಚೆ ನಮ್ಮಲ್ಲಿದ್ದುದು ಹುಳಿಮಾವು ಮಾತ್ರ; ಅದನ್ನು ಸಾವಿರ ವರ್ಷದ ಹಿಂದೆ ಹುಳಿಗಾಗಿ ಬಳಸುತ್ತಿದ್ದರು (ಏಕೆಂದರೆ ಹುಣಿಸೆ ಆಗ ಈ ದೇಶದಲ್ಲಿರಲಿಲ್ಲ), ಅದಕ್ಕೋ ಏನೋ ಸಂಸ್ಕೃತದಲ್ಲಿ ಮಾವು ಎಂಬುದನ್ನು 'ಆಮ್ರ' ಎಂದು ಕರೆಯುತ್ತಾರೆ ಎಂಬುದು ಬಿಜಿಎಲ್ ಸ್ವಾಮಿಯವರ ವಾದ. ಆದರೆ ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಸಿಹಿಮಾವಿನ ಉಲ್ಲೇಖವಿದೆ: "ತನಿವಣ್ಣಾಗಿರ್ದುದು ಇಮ್ಮಾವು ಕಳ್ತಲಿಸಿದತ್ತೆಳವಳ್ಳಿ" ಎಂಬುದು ಪಂಪನ 'ಆದಿಪುರಾಣ'ದ ಮಾತು. (ಇನಿದು ಮಾವು=ಇಮ್ಮಾವು)
ಮಾವಿನ ಕಾಯಿಯ ಆಕಾರದ ಆಭರಣಗಳನ್ನೂ ಅದೇ ಹೆಸರಿನಿಂದ ಕರೆಯುತ್ತಿದ್ದರು ("ಚೆಂಬೊನ್ನ ಮಾಂಗಾಯ ಗೊಂಚಲ್ಗಳ" (ಚೆಂಬೊನ್=ಚಿನ್ನ) 'ಲೀಲಾವತಿ'. ಹಳಗನ್ನಡ ಕಾವ್ಯಗಳಲ್ಲಿ ಮಾವಿನ ಮರಕ್ಕೆ ಹತ್ತಿದ ಮಲ್ಲಿಗೆಯ ಬಳ್ಳಿ ನಲ್ಲನಲ್ಲೆಯರ ಸಂಕೇತ.
=====
ಮೀನು: ಇದೊಂದು ದ್ರಾವಿಡ ಪದ; ಪ್ರಮುಖವಾದ ದ್ರಾವಿಡ ಭಾಷೆಗಳಲ್ಲೆಲ್ಲ 'ಮೀನ್' ಎಂಬ ರೂಪವೇ ಇದೆ. ಇದೊಂದು ಜಲಚರ. ಇದು ದ್ರಾವಿಡ ಭಾಷಾ ವರ್ಗದಿಂದ ಸಂಸ್ಕೃತಕ್ಕೆ ಹೋದ ಒಂದು ಶಬ್ದವೆಂದು ಕಾಲ್ಡ್‍ವೆಲ್ ಅಭಿಪ್ರಾಯಪಡುತ್ತಾರೆ. 'ಮೀಂಗುಲಿ' ಅಥವಾ 'ಮೀಂಗುಲಿಗ' ಎಂದರೆ ಮೀನು ಹಿಡಿಯುವವನು, ಬೆಸ್ತ. ಮೀನ್+ಕುಲಿಗ (ಮೀನನ್ನು ಕೊಲ್ಲುವವನು, ಹಿಡಿಯುವವನು) "ಮೀಂಗುಲಿಗರ್ ಬಲೆಯಂ ತೆಗೆದು ನೋಡಿ" ಎಂಬುದು ದುರ್ಗಸಿಂಹನ 'ಪಂಚತಂತ್ರ'ದ ವಾಕ್ಯ. 'ಮೀಂಗುಲಿಗೆ' ಎಂದರೆ ಬೆಸ್ತ ಹೆಂಗಸು ("ವ್ಯಾಸನ ತಂದೆ ಮೀಂಗುಲಿಗೆಯೊಳ್" - ಬ್ರಹ್ಮಶಿವನ 'ಸಮಯ ಪರೀಕ್ಷೆ'). ಮೀನನ್ನು ತಿನ್ನುವ ಪಕ್ಷಿಯೇ 'ಮೀಂಗುಲಿಗವಕ್ಕಿಕ'. "ಮೀಂಗುಲಿಗವಕ್ಕಿ ಕೊಳದೊಳ್ ಮೀಂಗೆಱಗುವ ತೆಱದಿನೆಱಗಿ" ಎಂಬ ಮಾತು ರನ್ನನ 'ಗದಾಯುದ್ಧ'ದಲ್ಲಿ ಬರುತ್ತದೆ. 'ಮೀನಂಬುಳು' ಎಂಬ ಶಬ್ದವನ್ನು 'ಅನಂತನಾಥಪುರಾಣ'ದಲ್ಲಿ ಬಕಪಕ್ಷಿ ಎಂಬರ್ಥದಲ್ಲಿ ಬಳಸಲಾಗಿದೆ. 'ಮೀಂಚುಳ್ಳಿ' ಮೀನನ್ನು ಹಿಡಿದು ತಿನ್ನುವ ವಿಶಿಷ್ಟ ಹಕ್ಕಿಗೆ (ಕಿಂಗ್‍ಫಿಶರ್) ಇರುವ ಹೆಸರು. ಮೀನಿನ ಮಾಂಸವನ್ನು 'ಸುಕುಮಾರ ಚರಿತೆ' ಯಲ್ಲಿ 'ಮೀಂಬೊಲಸು' ಎಂದಿದೆ ("ಮೀಂಬೊಲಸು ನಾರ್ಪ ಮೆಯ್ಗಂ"). ಮೀನನ್ನು ಹಿಡಿಯಲು ಬಳಸುವ ಸಾಧನವೇ 'ಮೀನ ಗಾಳ'. ಆಕರ್ಷಣೆಗೊಳಗಾಗು ಎಂಬರ್ಥದಲ್ಲಿ 'ಮೀನು ಗಾಳಕ್ಕೆ ಬಿತ್ತು' ಎಂಬ ನಾಣ್ಣುಡಿಯನ್ನು ಬಳಸುವುದು ರೂಢಿ.
ಮೀನ ಶಬ್ದವು ಸಂಸ್ಕೃತದಲ್ಲಿಯೂ ಬಳಕೆಯಲ್ಲಿದ್ದು ಬಹುತೇಕ ಸಮಾಸಗಳಲ್ಲಿ ಮಾತ್ರ ಬರುತ್ತದೆ. 'ಮೀನ' ಎಂಬುದು ದ್ವಾದಶ ರಾಶಿಗಳಲ್ಲೊಂದು. ಅನುಮಾನ ಪಡುವುದನ್ನು 'ಮೀನ ಮೇಷ ಎಣಿಸು' ಎಂಬುದು ಕನ್ನಡದ ನುಡಿಗಟ್ಟು. ಮೀನಕೇತು ಎಂದರೆ ಮೀನಿನ ಗುರುತಿನ ಬಾವುಟ(ವುಳ್ಳವನು) ಎಂದರೆ ಮನ್ನಥ. ("ಮೀನಕೇತುವೆತ್ತಿಸಿದ ಸಮುಲ್ಲಸ ಝಷಪತಾಕೆ"  ಅಗ್ಗಳನ 'ಚಂದ್ರಪ್ರಭಪುರಾಣ'). ಮೀನಧ್ವಜ, ಮೀನಕೇತನ, ಮೀನಾಂಕ ಮುಂತಾದ ಶಬ್ದಗಳೆಲ್ಲ ಇದೇ ಅರ್ಥದವು. ಮೀನಿನಾಕಾರದ ಕಣ್ಣುಳ್ಳವಳು ಎಂಬರ್ಥದಲ್ಲಿ ಸುಂದರಿಯನ್ನು 'ಮೀನಾಕ್ಷಿ' 'ಮೀನಲೋಚನೆ' 'ಮೀನನೇತ್ರೆ' ಮುಂತಾದ ಶಬ್ದಗಳಿಂದ ಕವಿಗಳು ವರ್ಣಿಸುತ್ತಾರೆ.
=====
ಮುತ್ತುಗ: ಇದೊಂದು ಮರ; ಅಗಲವಾದ ಎಲೆಗಳಿಂದಲೂ ಕಡುಗೆಂಪು ಹೂಗಳಿಂದಲೂ ಕೂಡಿರುವುದು. ಇದು ದ್ರಾವಿಡ ಪದ: ಇದನ್ನು ಕನ್ನಡದಲ್ಲಿ ಮುತ್ತ, ಮುತ್ತಕ, ಮುತ್ತಲ, ಮುತ್ತಲು, ಮುತ್ತುಕ ಮುಂತಾದ ಹೆಸರುಗಳಿಂದಲೂ ಕರೆಯುವ ರೂಢಿಯಿದೆ. ತಮಿಳಿನಲ್ಲಿ ಈ ಮರವನ್ನು ಮರುಕ್ಕು ಎಂದೂ, ಮಲಯಾಳಂನಲ್ಲಿ ಮುರಿಕ್ಕು ಎಂದೂ, ತೆಲುಗಿನಲ್ಲಿ ಮೋದುಗ, ಮ್ರೋದುಗು, ಮೋದುವು ಎಂದೂ, ತುಳುವಿನಲ್ಲಿ ಮುತ್ತಕ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಈ ಮರವನ್ನು ಪಲಾಶ ಎಂದೂ ತಾಪಿಚ್ಛ ಎಂದೂ ಕರೆಯುತ್ತಾರೆ. "ಮುೞ್ತುಗಮೆಂದು ಒಂದು ಮರಂ" ಎಂದು 'ಶಬ್ದಮಣಿದರ್ಪಣ'ದಲ್ಲಿ ಹೇಳಿದ್ದರೆ, 'ಅಭಿಧಾನ ವಸ್ತುಕೋಶ'ದಲ್ಲಿ ಖಪಲಾಶಮಾಖ್ಯಂ ಮುತ್ತಂ" ಎಂದಿದೆ. ಮುಳ್ಳುಗಳಿರುವ ಈ ಮರದ ಪ್ರಭೇದವೇ ಮುಳ್ಮುಳ್ತುಗ ಅಥವಾ ಮುಳ್ಮುತ್ತುಗ. "ಸುತ್ತಲುಂ ಪೂತ ಮುಳ್ಮುಳ್ತುಗದ ಮರಂಗಳೊಳಂ" ಎಂಬುದು 'ಕಬ್ಬಿಗರ ಕಾವ'ದ ಮಾತು.
ಆಗಲೇ ಹೇಳಿದಂತೆ ಈ ಮರದ ಹೂಗಳು ಕಡುಗೆಂಪಿನ ದೊಡ್ಡ ಗಾತ್ರದವು. ಇಂತಹ ಅಸಂಖ್ಯಾತ ಹೂಗಳು ಉದುರಿದ್ದುದನ್ನು ಕವಿ ಜನ್ನನು ತನ್ನ 'ಯಶೋಧರ ಚರಿತೆ'ಯಲ್ಲಿ (ಮಾರಿಬಲಿಯ ವರ್ಣನೆಯ ಹಿನ್ನೆಲೆಯಲ್ಲಿ) ವಸಂತನು ಶಿಶಿರನನ್ನು ಹಿಡಿದು "ಕುಸುರಿದದಡಗಿನಂತೆವೊಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್" ಎಂದು ವರ್ಣಿಸುತ್ತಾನೆ. ಮುತ್ತುಗದ ಹೂಗಳು ಕತ್ತರಿಸಿದ ಮಾಂಸದ ತುಂಡುಗಳಂತಿದ್ದುವಂತೆ!
ಈ ಮರದ ಎಲೆಗಳೂ ಅಗಲವಾಗಿರುತ್ತವೆ, ಮಂದವಾಗಿರುತ್ತವೆ, ಸಾಮಾನ್ಯವಾಗಿ ಮೂರೆಲೆಗಳು ಒಟ್ಟಿಗೇ ಇರುತ್ತವೆ, ಈ ಎಲೆಗಳನ್ನು ಒಣಗಿಸಿ ಬೇಕಾದಾಗ ನೀರಲ್ಲದ್ದಿ ಮೃದು ಮಾಡಿಕೊಂಡು ಹಂಚಿಕಡ್ಡಿಯಿಂದ ಹಚ್ಚಿ ದೊಡ್ಡದಾದ ಊಟದೆಲೆಗಳನ್ನು ಮಾಡುವ ರೂಢಿಯಿದೆ. ಈ ಎಲೆಗಳನ್ನು ಇಸ್ತ್ರೆಲೆಗಳೆಂದೂ ಕರೆಯುತ್ತಾರೆ (ಇಸ್ತ್ರ+ಎಲೆ). ತೆಲುಗಿನಲ್ಲಿ 'ಇಸ್ತ್ರಾಕು' ಎಂಬ ಶಬ್ದವಿದೆ. ಇಸ್ತ್ರ ಎಂಬುದು ವಿಸ್ತರ ಎಂಬ ಸಂಸ್ಕೃತ ಪದದ ವ್ಯತ್ಯಸ್ತ ರೂಪವಿರಬಹುದು ಎಂದು ಊಹಿಸಲಾಗಿದೆ. ಮುಂಜಿಯ ಕಾಲದಲ್ಲಿ ವಟುವು ಮುತ್ತುಗದ ರೆಂಬೆಯನ್ನು ಹಿಡಿದುಕೊಳ್ಳುವ ಸಂಪ್ರದಾಯವಿದೆ.
=====
ಮೂಡಲಗಿರಿ: ಇದರಲ್ಲಿ ಎರಡು ಪದಗಳು ಸೇರಿವೆ ಗ ಮೂಡಲ ಮತ್ತು ಗಿರಿ; ಮೊದಲ ಶಬ್ದ ಅಚ್ಚಗನ್ನಡದ್ದಾದರೆ ಎರಡನೆಯದು ಸಂಸ್ಕೃತದ್ದು. ಮೂಡು ಎಂದರೆ ಹುಟ್ಟು, ಕಾಣಿಸಿಕೋ ಎಂದು ಅರ್ಥ. ಹೀಗಾಗಿ ಸೂರ್ಯ ಹುಟ್ಟುವ ದಿಕ್ಕನ್ನು ಮೂಡು ಎಂದು ಕರೆಯುವ ರೂಢಿ ಉಂಟಾಯಿತು. ಹತ್ತನೆಯ ಶತಮಾನದ ಕನ್ನಡ ಶಾಸನದಲ್ಲಿಯೇ ಇದರ ಪ್ರಯೋಗವಿದೆ. ಇದು ಮೂಡಣ್, ಮೂಡಲ್ ಎಂಬ ರೂಪಗಳನ್ನೂ ಪಡೆಯುತ್ತದೆ. ಕಮೂಡಣ್ಕಿ ಎಂಬ ಪ್ರಯೋಗ ಪಂಪಭಾರತದಲ್ಲಿಯೇ ದೊರೆಯುತ್ತದೆ. ಆ ದಿಕ್ಕಿಗೆ ಎದುರು ಅಥವಾ ಅಭಿಮುಖ ಎಂಬರ್ಥದಲ್ಲಿ ಮೂಡಮೊಗ ಎಂಬ ಪ್ರಯೋಗವೂ ಪಂಪಭಾರತದಲ್ಲಿಯೇ ಇದೆ. ಹಳಗನ್ನಡದ ವ್ಯಂಜನದಿಂದ ಕೊನೆಯಾಗುವ ಶಬ್ದಗಳು ಬರಬರುತ್ತ ಸ್ವರಾಂತ್ಯಗೊಳ್ಳುವುದಕ್ಕೆ ಅನುಗುಣವಾಗಿ ಮೂಡಲ್ ಎಂಬುದು ಮೂಡಲು ಎಂದಾಯಿತು. ಈ ರೂಪಗಳು ಹನ್ನೊಂದು ಹನ್ನೆರಡನೇ ಶತಮಾನದ ಕನ್ನಡ ಚಂಪೂ ಕಾವ್ಯಗಳಲ್ಲಿಯೇ ದೊರೆಯುತ್ತವೆ. ಈ ರೂಪಗಳಿಗೆ ಕಅಕಿ ಎಂಬ ಷಷ್ಠೀವಿಭಕ್ತಿ ಪ್ರತ್ಯಯ ಸೇರಿದರೆ ಮೂಡಣ, ಮೂಡಲ ಎಂಬ ರೂಪಗಳಾಗುತ್ತವೆ; ಎರಡರ ಅರ್ಥವೂ ಪೂರ್ವದಿಕ್ಕಿನ, ಪೂರ್ವದಿಕ್ಕಿಗೆ ಸೇರಿದ ಎಂದಾಗುತ್ತದೆ. ಮೂಡಲಗಿರಿ ಎಂದರೆ ಸೂರ್ಯ ಹುಟ್ಟುವ ದಿಕ್ಕಿನ ಬೆಟ್ಟ ಎಂದಾಗಬಹುದು; ಅಥವಾ ಪೂರ್ವದಿಕ್ಕು ಎಂಬ ಬೆಟ್ಟ ಎಂಬ ರೂಪಕವೂ ಆಗಬಹುದು. ಸೂರ್ಯೋದಯವನ್ನು ರೇಖೆಗಳಲ್ಲಿ ಚಿತ್ರಿಸುವಾಗ ಎರಡು ಬೆಟ್ಟಗಳ ನಡುವೆ ಸೂರ್ಯ ಕಾಣಿಸಿಕೊಳ್ಳುವಂತೆ ಬರೆಯುತ್ತಾರಲ್ಲವೇ! ಮೂಡಲಗಿರಿ ಎಂಬರ್ಥದಲ್ಲಿ ಮೂಡುವೆಟ್ಟ, ಮೂಡುವೆಟ್ಟು ಎಂಬ ಎಂಬ ಶಬ್ದಗಳೂ ಮುಂದೆ ಬಳಕೆಯಾಗಿವೆ.
ಮೂಡಲಗಿರಿಯಪ್ಪ, ಮೂಡಲಪ್ಪ, ಮೂಡಲಯ್ಯ ಎಂಬಿವು ಈಗಲೂ ಕನ್ನಡ ನಾಡಿನಲ್ಲಿ ಸಾಮಾನ್ಯವಾದ ವ್ಯಕ್ತಿಯ ಅಂಕಿತನಾಮ. ಮೂಡಲಗಿರಿ ಎಂಬುದಕ್ಕೆ ಅಪ್ಪ ಎಂಬ ಸಂಬಂಧವಾಚಿ ಸೇರಿದೆ. ಅಪ್ಪ ಎಂದರೆ ತಂದೆ, ಒಡೆಯ ಎಂಬ ಅರ್ಥ. ಹೀಗಾಗಿ ಮೂಡಲಗಿರಿಯಪ್ಪ ಎಂದರೆ ಆ ದಿಕ್ಕಿನ ಒಡೆಯನಾದ ಸೂರ್ಯ ಎಂದಾಗುತ್ತದೆ. ಈ ಬಗೆಯ ರಚನೆ ಕನ್ನಡದಲ್ಲಿ ಸಾಮಾನ್ಯ. ಎಡೆಯೂರು ಪ್ರಸಿದ್ಧ ಕ್ಷೇತ್ರ; ಅದರ ಒಡೆಯನಾದ ವ ಎಡೆಯೂರಪ್ಪ; ಮೈಲಾರ ಎಂಬ ಊರಿನ ಒಡೆಯನಾದ ದೈವ ಮೈಲಾರಪ್ಪ ಹೀಗೆ.
======
ಮೈದುನ:  ಹಿಂದೆ ಈ ಪದವನ್ನು ಮೆಯ್ದುನ, ಮಯ್ದುನ, ಮಯಿದುನ ಎಂದು ಮುಂತಾಗಿ ಬರೆಯುತ್ತಿದ್ದುದು ರೂಢಿ. ಇದೊಂದು ದ್ರಾವಿಡ ಪದ: ತಮಿಳಿನಲ್ಲಿ ಮೈತುನನ್, ಮಚ್ಚಾನ್. ಮಚ್ಚುನನ್ ಎಂಬ ರೂಪಗಳಲ್ಲಿಯೂ, ಮಯಲಯಾಳಂನಲ್ಲಿ ಮಚ್ಚುನನ್, ಮಚ್ಚಿನನ್, ಎಂದೂ, ತೆಲುಗಿನಲ್ಲಿ ಮೇನ ಎಂದೂ, ತುಳುವಿನಲ್ಲಿ ಮೈತಿನೆ ಅಥವಾ ಮಯದಿನೆ ಎಂದೂ ರೂಪಗಳನ್ನು ತಾಳುತ್ತದೆ. ಇದರ ಅರ್ಥ ತಂಗಿಯ ಗಂಡ, ಸೋದರಮಾವನ (ತನಗಿಂತ ಚಿಕ್ಕವನಾದ) ಮಗ, ಗಂಡನ ಅಥವಾ ಹೆಂಡತಿಯ ತಮ್ಮ ಎಂಬಿವುಗಳು. ತೆಲುಗಿನಲ್ಲಿ 'ಮರದಿ' ಎಂಬುದು ಈ ಸಂಬಂಧವನ್ನು ಸೂಚಿಸುವ ರೂಢಿಯ ಶಬ್ದ. "ಕಾಶ್ಯಪಿಯೆಂಬೊಳೆನಗೆ ತಂಗೆಯುಮಿಲ್ಲ ಸೋಮಶರ್ಮನೆಂಬೊಂ ಮಯ್ದುನನುಮಿಲ್ಲ" ಎಂಬ ವಾಕ್ಯ 'ವಡ್ಡಾರಾಧನೆ'ಯ 'ಸುಕುಮಾರಸ್ವಾಮಿಯ ಕಥೆ'ಯಲ್ಲಿ ಸಿಕ್ಕುತ್ತದೆ. "ಎನ್ನ ಮೆಯ್ದುನನಪ್ಪ ವಜ್ರಬಾಹುಗಂ ಎನ್ನ ತಂಗೆಯಪ್ಪ ವಸುಂಧರೆಗಂ" ಎಂಬುದು ಪಂಪನ 'ಆದಿಪುರಾಣ'ದ ಮಾತು. ಮಇದು ಎಂಬ ರೂಪವನ್ನೂ ಕೆಲವು ಶಾಸನಗಳಲ್ಲಿ ಕಾಣಬಹುದು. "ಸಹೋದರಿ ಗಿರಿಜೆ ಮೈದುನನು ಶಂಕರನು ಸುರರೆಲ್ಲ ಕಿಂಕರರು" ಎಂಬ ಮಾತು  ಕನಕದಾಸನ 'ಹರಿಭಕ್ತಿಸಾರ'ದಲ್ಲಿದೆ. ಸಾಮಾನ್ಯರ ನುಡಿಯಲ್ಲಿ ಇದು ಮೈದ ಎಂಬ ರೂಪವನ್ನೂ ಪಡೆಯುತ್ತದೆ. 'ಬಾವಮೈದುನ', ಎಂಬುದು ಸಾಮಾನ್ಯರ ಮಾತಿನಲ್ಲಿ ಬಾಮೈದ' ಎಂದಾಗುತ್ತದೆ.
ಮೆಯ್ದುನಿಸು ಎಂಬ ಅಪರೂಪದ ರೂಪವು ಮೈದುನನ ಜೊತೆಯ ಸಲಿಗೆಯಿಂದ ನಡೆದುಕೊಳ್ಳುವುದನ್ನು ಸೂಚಿಸುತ್ತದೆ. ನೇಮಿಚಂದ್ರನೆಂಬ ಕ್ರಿಶ. 1170 ರ ಕವಿಯ 'ಅರ್ಧನೇಮಿಪುರಾಣದ'ಲ್ಲಿ ಈ ವಾಕ್ಯ ದೊರೆಯುತ್ತದೆ: "ವಧು ಮೆಯ್ದುನಿಸುತುಮಡ್ಡಂ ಬಂದಳ್". ಇದರ ಭಾವನಾನ ರೂಪದಲ್ಲಿ ಕುಮಾರವ್ಯಾಸನು 'ಮೈದುನತನ' ಎಂಬ ಮಾತನ್ನು ಬಳಸುತ್ತಾನೆ. ಕರ್ಣನ ದುರ್ಯೋಧನನಿಷ್ಠೆಯ ಮನಸ್ಸನ್ನು ಒಡೆಯಲು ಬಂದ ಕೃಷ್ಣನು ಮೊದಲು "ಇನತನೂಜನ ಕೂಡೆ ಮೈದುನತನದ ಸರಸವನೆಸಗು"ತ್ತಾನಂತೆ.
=====
ರಾಜ: ಇದರ ಮೂಲ ಸಂಸ್ಕೃತ ರೂಪ ರಾಜನ್ ಎಂಬುದು. "ಅವನೀಪತಿ ರಾಜಂ ಪಾರ್ಥಿವಂ ನೃಪಂ ಕ್ಷತ್ರಿಯಂ ಜನಾಧಿಪಂ ಅರಸಂ" ಎಂದು ಮುಂತಾಗಿ ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸಮಾನಾರ್ಥಕಗಳನ್ನು ನೀಡುತ್ತದೆ. ರಾಜರಲ್ಲಿ ವಾರ್ಷಿಕ ವರಮಾನದ ಆಧಾರದಿಂದ ಸಾಮಂತ, ಮಾಂಡಲಿಕ, ರಾಜನ್, ಮಹಾರಾಜ, ಸ್ವರಾಟ್, ಸಮ್ರಾಟ್, ವಿರಾಟ್, ಸಾರ್ವಭೌಮ ಎಂಬ ಬಗೆಗಳನ್ನು ಕಶುಕ್ರನೀತಿಸಾರಕಿವು ಹೇಳುತ್ತದೆ. ಆದರೆ ಈ ವರ್ಗೀಕರಣವು ರೂಢಿಯಲ್ಲೇನೂ ಇರಲಿಲ್ಲ. ಪಂಪನ 'ಆದಿಪುರಾಣ'ದಲ್ಲಿ ಬಾಹುಬಲಿಯು ರಾಜಾಧಿರಾಜ ಎಂಬುದನ್ನು 'ಅಡಕಿಲ್ವೆಸರ್' (ಒಂದರ ಮೇಲೊಂದು ಪೇರಿಸಿದ ಹೆಸರು) ಎಂದು ಹಾಸ್ಯಮಾಡುತ್ತಾನೆ.
ರಾಜನನ್ನು ಸೃಷ್ಟಿಸುವಾಗ ದೇವರು ಅವನಲ್ಲಿ ಅಷ್ಟದಿಕ್ಪಾಲಕರ ಅಂಶಗಳನ್ನು ಸೇರಿಸಿರುವನೆಂದು ಮನು ಹೇಳುತ್ತಾನೆ. ರಾಜನಿಗಿರಬೇಕಾದ ಯೋಗ್ಯತೆಗಳೇ 'ರಾಜಲಕ್ಷಣ'; ನಾಲ್ಕು ಉಪಾಯಗಳು, ಐದು ಬಗೆಯ ತಂತ್ರಗಳು, ಮೂರು ಬಗೆಯ ಶಕ್ತಿಗಳು, ಚತುರಂಗಬಲ, ಸಪ್ತಾಂಗಗಳು - ಇವುಗಳ್ನು 'ವಿವೇಕ ಚಿಂತಾಮಣಿ'ಯು ರಾಜಲಕ್ಷಣಗಳೆಂದು ಕರೆಯುತ್ತದೆ. 'ರಾಜಸಭೆ' ಎಂದರೆ ರಾಜನು ಮಂತ್ರಿ ಮತ್ತಿತರ ಗಣ್ಯರ ಜೊತೆ ಸಮಾಲೋಚನೆ ಮಾಡುತ್ತಿದ್ದ ಸಭೆ; ಇದನ್ನು ಕನ್ನಡದಲ್ಲಿ ಒಡ್ಡೋಲಗ ಎನ್ನುತ್ತಿದ್ದರು. ರಾಜನ ಏಳು ಮೂಲಭೂತ ಆಧಾರಗಳನ್ನು ಬಂಧುವರ್ಮನ 'ಹರಿವಂಶಾಭ್ಯುದಯ'ವು ರಾಜ್ರಕೃತಿಗಳೆಂದು ಕರೆಯುತ್ತದೆ. ಅವುಗಳೆಂದರೆ, ಸ್ವಾಮಿ ಅಮಾತ್ಯ ಜನಪದ ದುರ್ಗ ದಂಡ ಕೋಶ ಮತ್ತು ಮಿತ್ರ. ಪಂಪನ 'ಆದಿಪುರಾಣ'ದಲ್ಲಿ ಒಳ್ಳೆಯ ರಾಜನಿರುವ ನಾಡನ್ನು 'ರಾಜನ್ವತಿ' ಎಂದೂ, ಹೆಸರಿಗೆ ಮಾತ್ರ ರಾಜನಿರುವ ನಾಡನ್ನು 'ರಾಜವತಿ' ಎಂದೂ ಕರೆದಿದೆ: "ರಾಜವತಿಯಕ್ಕುಮಲ್ಲದೆ ರಾಜನ್ವತಿಯಾಗದಲ್ತೆ ಧರೆ". ರಾಜನ ಅರಮನೆಯಿದ್ದು ಆಡಳಿಕೇಂದ್ರವಾಗಿರುವ ಪಟ್ಟಣವೇ 'ರಾಜಧಾನಿ'.
ಮುಖ್ಯವೆಂದು ಸೂಚಿಸುವೆಡೆಯಲ್ಲೆಲ್ಲ ರಾಜ ಎಂಬ ಪೂರ್ವಪದವನ್ನು ಸೇರಿಸುವುದು ರೂಢಿ: ರಾಜಬೀದಿ, ರಾಜಮರ್ಯಾದೆ, ರಾಜವೈಭವ ಇತ್ಯಾದಿ. ರಾಜ ಎಂಬುದಕ್ಕೆ ಚಂದ್ರ ಎಂಬ ಅರ್ಥವೂ ಇದೆ. ರಾಜಶೇಖರ (ಚಂದ್ರನನ್ನು ತೆಯಲ್ಲಿ ಧರಿಸಿರುವವನು, ಶಿವ) ಎಂಬುದು ಇದಕ್ಕೆ ಉದಾಹರಣೆ.
=====
ರೂಪಾಯಿ: ಇದು ಭಾರತದ ಒಂದು ನಾಣ್ಯ ಎಂಬುದು ಎಲ್ಲರಿಗೂ ಗೊತ್ತು. ಕನ್ನಡದಲ್ಲಿ ಇದನ್ನು ರೂಪಾಯಿ ಎಂದು ಕರೆಯುವಂತೆ, ಇದರ ವ್ಯತ್ಯಸ್ತ ರೂಪಗಳು ಇತರ ಭಾಷೆಗಳಲ್ಲಿ ಬಳಕೆಯಲ್ಲಿವೆ. ಉದಾಹರಣೆಗೆ ಹಿಂದಿಯಲ್ಲಿ ಇದನ್ನು ರೂಪ್ಯಾ, ರುಪಯ್ಯಾ ಎನ್ನುತ್ತಾರೆ, ಕೆಲವರು ಮಾತನಾಡುವಾಗ ರೂಪಾ ಎಂದಷ್ಟೇ ಉಚ್ಚರಿಸುತ್ತಾರೆ. ತಮಿಳು ಮಲಯಾಳಂ ಭಾಷಿಕರಲ್ಲಿ ಪದಮಧ್ಯದ ಪ ವರ್ಣವು ಬ ಎಂದು ಉಚ್ಚಾರವಾಗುವುದರಿಂದ ಇದು ರುಬಾ ಅಥವಾ ರೂಬಾ ಎಂದಾಗುತ್ತದೆ. ಇಂಗ್ಲಿಷಿನಲ್ಲಿ ಇದನ್ನು ರುಪೀ ಎಂದರು.
ಈ ಎಲ್ಲದರ ಮೂಲದಲ್ಲಿರುವುದು ಸಂಸ್ಕತದ 'ರೌಪ್ಯ' ಎಂಬ ಶಬ್ದ. ಅದರ ಅರ್ಥ ಬೆಳ್ಳಿ ಎಂದು. ಇದು ರೂಪ್ಯ ಎಂಬ ರೂಪದಲ್ಲಿಯೂ ಸಿಕ್ಕುತ್ತದೆ. ಬೆಳ್ಳಿಬೆಟ್ಟ ಎಂಬರ್ಥದಲ್ಲಿ ಹಿಮಾಲಯವನ್ನು ರೂಪ್ಯಾಚಲ ಎನ್ನುತ್ತಿದ್ದರು. ಹಿಂದಿನ ಕಾಲದಲ್ಲಿ ವಿವಿಧ ಲೋಹಗಳಿಂದ ಮಾಡಿದ ವಿವಿಧಾಕಾರದ ನಾಣ್ಯಗಳೇ ಬಳಕೆಯಲ್ಲಿದ್ದುದು. ಚಿನ್ನ ಬಹು ಬೆಲೆಬಾಳುವ ಲೋಹ, ಅದಾದನಂತರ ಬೆಳ್ಳಿ. ಈಚೆಗಿನ ಪ್ರಮಾಣೀಕೃತ ನಾಣ್ಯ ಎಂದರೆ ರೂಪಾಯಿಯೇ. ಪೈಸೆ ಬರುವ  ಮುಂಚೆ ಅದನ್ನು ಹದಿನಾರು ಭಾಗ ಮಾಡಿ ಒಂದೊಂದಕ್ಕೂ ಆಣೆ ಎನ್ನುತ್ತಿದ್ದರು; ಒಂದು ಆಣೆಗೆ ಹನ್ನೆರಡು ಕಾಸುಗಳು; ಹೀಗಾಗಿ ಒಂದು ರೂಪಾಯಿಗೆ ತೊಂಬತ್ತಾರು ಕಾಸುಗಳಾಗಿದ್ದವು. ಇವುಗಳಿಗೆ ಬೇರ ಬೇರೆಯೇ ಆಕಾರದ ಲೋಹಗಳ ನಾಣ್ಯಗಳಿದ್ದುವು. ಜೊತೆಗೆ ನಾಲ್ಕು ಆಣೆಗಳ ಪಾವಲಿ ಮತ್ತು ಎರಡು ಪಾವಲಿ ಬೆಲೆಯ ಎಂಟಾಣೆ ನಾಣ್ಯಗಳೂ ಇದ್ದವು. ಒಂದೆರಡು ದಶಕಗಳಿಂದ ಈಗಿನ ದಶಾಂಶ ಪದ್ಧತಿ ಜಾರಿಗೆ ಬಂದಿದೆ; ಒಂದು ರೂಪಾಯಿಗೆ ನೂರು ಪೈಸೆಗಳು. ಬಂದ ಹೊಸತರಲ್ಲಿ ಇದನ್ನು ನಯಾಪೈಸಾ ಎಂದೇ ಕರೆಯುತ್ತಿದ್ದರು.
ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ, ಕಳೆದ ಶತಮಾನದ ಮೊದಲಲ್ಲಿ ಅವರ ರಾಣಿ ವಿಕ್ಟೋರಿಯ. ಆಗ ಅವಳ ಚಿತ್ರವಿದ್ದ ಬೆಳ್ಳಿಯ ರೂಪಾಯಿಗಳು ಚಲಾವಣೆಯಲ್ಲಿದ್ದುವಂತೆ; ಒಂದು ತೊಲ ತೂಕದ ಅಪ್ಪಟ ಬೆಳ್ಳಿಯ ನಾಣ್ಯ ಅದು. ಬರಬರುತ್ತ ರೂಪಾಯಿಯ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತ ಅದರ ಲೋಹ, ತೂಕ, ಆಕಾರಗಳು ಬದಲಾಗುತ್ತ ಬಂದವು; ಜೊತೆಗೆ ಕಾಗದದ ನೋಟು ಕೂಡ ಬಂತು. ಕನ್ನಡದಲ್ಲಿ ರೂಪಾಯಿಯನ್ನು ಸೂಚಿಸಲು ರೂ ಎಂದು ಬರೆಯುವ ವಾಡಿಕೆಯಿದೆ; ಇಂಗ್ಲಿಷ್‍ನಲ್ಲಿ ಒಂದನ್ನು ಸೂಚಿಸುವಾಗ Re. ಎಂದೂ ಹೆಚ್ಚಿನದನ್ನು ಸೂಚಿಸುವಾಗ   Rs. ಎಂದೂ ಈಚಿನವರೆಗೆ ಬರೆಯುತ್ತಿದ್ದರು. ಈಚೆಗೆ ಭಾಷೆ ಯಾವುದೇ ಇರಲಿ ರೂಪಾಯಿಯನ್ನು ಸೂಚಿಸುವ ` ಎಂಬ ಏಕರೂಪದ ಸಂಕೇತವೊಂದನ್ನು ಭಾರತ ಅಂಗೀಕರಿಸಿ ಎಲ್ಲೆಡೆ ಬಳಕೆಯಲ್ಲಿದೆ.
=====
ವಚನ: ಇದೊಂದು ಸಂಸ್ಕೃತ ಶಬ್ದ, ಇದರ ಅರ್ಥ ಮಾತು ಎಂದು. ವಚ ಎಂದರೆ ಮಾತನಾಡುವ ಪಕ್ಷಿ, ಗಿಣಿ ಎಂಬರ್ಥವಿದೆ. ವಚಕ್ನಿ ಎಂಬುದು ಚೆನ್ನಾಗಿ ಮಾತನಾಡಬಲ್ಲವನನ್ನು ಸೂಚಿಸುತ್ತದೆ. ನುಡಿನಿಪುಣತೆಯನ್ನು ನಾಗಚಂದ್ರ ತನ್ನ 'ಮಲ್ಲಿನಾಥ ಪುರಾಣ'ದಲ್ಲಿ 'ವಚನಪ್ರೌಢಿ' ಎನ್ನುತ್ತಾನೆ. ವ್ಯಾಕರಣದಲ್ಲಿ ಇದು ಸಂಖ್ಯೆಯನ್ನು ಸೂಚಿಸುವ ಪಾರಿಭಾಷಿಕ ಶಬ್ದವಾಗಿದೆ: ಏಕವಚನ, ದ್ವಿವಚನ, ಬಹುವಚನ.
ಕನ್ನಡ ಚಂಪೂ ಕಾವ್ಯಗಳಲ್ಲಿ ಪದ್ಯಗಳ ನಡುವೆ ಬರುವ ಗದ್ಯವನ್ನು ವಚನ ಎಂದು ಕರೆಯುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ಬಂದ ಬಸವಾದಿ ಶಿವಶರಣರು ರಚಿಸಿದ ಕೃತಿಗಳನ್ನು ವಚನ ಎಂಬ ಮಾತಿನಿಂದ ಸೂಚಿಸುವ ಪರಿಪಾಟ ವಚನಕಾರರಲ್ಲಿಯೇ ಕಾಣಬರುತ್ತದೆ. ನಮಗೆ ತಿಳಿದ ಮೊದಲ ವಚನಕಾರ ಜೇಡರ ದಾಸಿಮಯ್ಯನು 'ಆದ್ಯರ ವಚನ'ವನ್ನು ಉಲ್ಲೇಖಿಸುತ್ತಾನೆ. ಪ್ರಾಯಶಃ ಇದು ಹಿರಿಯ ಭಕ್ತರು ಆಡಿದ ಮಾತು ಎಂಬರ್ಥವನ್ನು ಹೊಂದಿದೆ. "ಎರಡೆಂಬತ್ತು ಕೋಟಿ ವಚನಗಳ ಹಾಡಿ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು" ಎಂಬುದು ಅಲ್ಲಮನ ಮಾತು.. "ಆನು ಒಲಿದಂತೆ ಹಾಡುವೆ" ಎಂಬ ಬಸವಣ್ಣನ ಮಾತಿನಲ್ಲಿ ವಚನಗಳ ಹಾಡುವಿಕೆಯು ನಿರ್ದಿಷ್ಟತೆಯಿಂದ ಕೂಡಿರದೆ ಭಾವಸಂವಾದಿಯಾದುದು ಎಂಬ ಅರ್ಥವು ಸೂಚಿತವಾಗಿದೆ. ಸಿದ್ಧರಾಮನು "ವಚನಾನುಭವ, ವಾಗ್ರಚನೆಯಲ್ಲ" ಎನ್ನುತ್ತಾನೆ. ವಚನಗಳು ಅನುಭ(ಭಾ)ವದ ಅಭಿವ್ಯಕ್ತಿಯೇ ಹೊರತು, ಕೇವಲ ಮಾತಿನ ಜೋಡಣೆಯಲ್ಲ ಎಂಬ ಅರ್ಥ ಇಲ್ಲಿದ್ದಂತಿದೆ.
ವಚನ ಕೊಡು ಎಂಬುದು ಮಾತು ಕೊಡು ಎಂಬ ಅರ್ಥದಲ್ಲಿಯೂ ಬಳಕೆಯಲ್ಲಿದೆ. ಮಾತಿಗೆ ತಪ್ಪಿದವನನ್ನು 'ವಚನಭ್ರಷ್ಟ' ಎಂದೇ ಕರೆಯುತ್ತಾರೆ. ಮಾತಿನ ಮಲ್ಲ ಎಂಬರ್ಥದಲ್ಲಿ ಕುಮಾರವ್ಯಾಸನು 'ವಚನಶೂರ' ಎಂಬ ಶಬ್ದವನ್ನು ಬಳಸುತ್ತಾನೆ ("ವಚನಶೂರರು ನಾವು ಪಾವನಿಚಯವೇ ಭುಜಶೂರರು"). ಮಾತು ಕೊಡು ಎಂಬರ್ಥದಲ್ಲಿ 'ವಚನಿಸು' ಎಂಬ ಪ್ರಯೋಗವೂ ಕುಮಾರವ್ಯಾಸನಲ್ಲಿಯೇ ಇದೆ ("ವಚನಿಸಿ ಮಾಡದಿಹ ಬಾಹಿರರು ನಾವಲ್ಲ"). ಕಂಠಪಾಠ  ಅಥವಾ ಗಟ್ಟಿಮಾಡಿಕೊಳ್ಳುವುದು 'ವಚೋವಿಧೇಯತೆ' ಎಂದು ಕರೆಯುತ್ತಾರೆ; ಹಾಗೆ ಮಾಡಿಕೊಂಡಿರುವವನಿಗೆ ವಿಷಯ 'ವಚೋವಿಧೇಯ'ವಾಗಿರುತ್ತದೆ.
=====
ವೀಳ್ಯ: ಸಂಸ್ಕೃತದ ವೀಟಿ ಹಾಗೂ ವೀಟಿಕಾಗಳು ವೀಳೆಯದೆಲೆಯ ಹಂಬು ಮತ್ತು ಎಲೆಗಳನ್ನು ಸೂಚಿಸುತ್ತವೆ. ವೀಟಿಕಾ>ವೀಟಿಕೆ>ವೀಳೆಯ>ವೀಳ್ಯ ಆಗಿದೆ. ವೀಟಿಕೆ ವೀಳಿಗೆಯಾಗುತ್ತದೆಂದು 'ಶಬ್ದಮಣಿದರ್ಪಣ' ಹೇಳುತ್ತದೆ.  ಈ ಬಳ್ಳಿಗೆ ಸಂಸ್ಕೃತದಲ್ಲಿ 'ತಾಂಬೂಲವಲ್ಲೀ ತಾಂಬೂಲೀ ನಾಗವಲ್ಲಿ' ಎಂಬ ಹೆಸರುಗಳನ್ನೂ 'ಅಮರಕೋಶ' ಹೇಳುತ್ತದೆ. ಅಡಿಕೆ ಮತ್ತು ಸುಣ್ಣಗಳೊಡನೆ ಸೇರಿ 'ಎಲೆಯಡಿಕೆ' ಆಗುತ್ತದೆ; ಇದೇ ತಾಂಬೂಲ. ತಾಂಬೂಲಚರ್ವಣವು ಎರಡು ಸಾವಿರ ವರ್ಷಗಳಷ್ಟು ಹಳೆಯದೆಂದೂ, ಪೂರ್ವದೇಶಗಳ ಜೊತೆಗೆ ಭಾರತವು ಸಂಪರ್ಕ ಪಡೆದ ಮೇಲೆ ಇಲ್ಲಿಯೂ ಬಳಕೆಗೆ ಬಂತೆಂದೂ ವಿದ್ವಾಂಸರು ಹೇಳುತ್ತಾರೆ. ಇದು ಜೀರ್ಣಕಾರಿಯೆಂಬ ಭಾವನೆಯಿದ್ದುದನ್ನು ಆಲ್ಬೆರೂನಿ ಎಂಬ ಪ್ರವಾಸಿ ಹೇಳುತ್ತಾನಂತೆ. ನಯಸೇನ ತನ್ನ 'ಧರ್ಮಾಮೃತ'ದಲ್ಲಿ ಕರ್ಪೂರ ಬೆರೆಸಿದ ವೀಳೆಯವನ್ನು ಉಲ್ಲೇಖಿಸುತ್ತಾನೆ. ("ಕಿಯರ್ಪಿರಿಯರೆನ್ನದೆ ಮನ್ನಣೆಯಿಂ ಕರ್ಪುರಸಹಿತಂ ವೀಳೆಯಂಗೊಟ್ಟು") 'ಕರ್ಪುರ ವೀಳೆಯ'ದ ಉಲ್ಲೇಖ ಆದಯ್ಯನ ವಚನವೊಂದರಲ್ಲಿಯೂ ಇದೆ.
ಗೌರವಸೂಚಕವಾಗಿ ಇದನ್ನು ದೇವರಿಗೆ ಹಾಗೂ ಹಿರಿಯರಿಗೆ ವೀಳೆಯ ಅರ್ಪಿಸುವುದು ಹಳೆಯ ಪದ್ಧತಿ. ಮದುವೆಯಂತಹ ಶುಭಸಮಾರಂಭಗಳಲಿ ಸುವಾಸಿನಿಯರು ಬಂದ ಹೆಣ್ಣುಮಕ್ಕಳಿಗೆ ಹೂವು ತಾಂಬೂಲಗಳನ್ನು ನೀಡುತ್ತಿದ್ದ 'ಹೂದಂಬುಲ'ದ ಪದ್ಧತಿಯನ್ನು ವಚನಗಳು ಹೇಳುತ್ತವೆ. ಇದೇ ಈಗಿನ 'ಹೂವೀಳ್ಯ'. ವೀರಶೈವರಲ್ಲಿ ವಿಭೂತಿಯೊಡನೆ ವೀಳೆಯ ಕೊಡುವುದನ್ನು ವಚನಗಳು 'ವಿಭೂತಿವೀಳೆಯ' ಎನ್ನುತ್ತವೆ. ಮದುವೆ ನಿಶ್ಚಯದ ಸಂದರ್ಭದಲ್ಲಿ ವೀಳ್ಯ ಬದಲಾಯಿಸುವ ಪದ್ಧತಿ ಈಗಲೂ ಇದೆ.
ಯುದ್ಧದಂತಹ ಮಹತ್ವದ ಜವಾಬ್ದಾರಿಯನ್ನು ವಹಿಸಿ ತಾಂಬೂಲ ಕೊಡುವುದರ ಉಲ್ಲೇಖ ಕಾವ್ಯಗಳಲ್ಲಿದೆ. "ವೀಳೆಯಗೊಂಡುಕ" ಮೆರೆದ ಸುಧನ್ವನ ಚಿತ್ರ 'ಜೈಮಿನಿಭಾರತ'ದಲ್ಲಿದೆ. ಇದೇ ಈಗಿನ 'ಸುಪಾರಿ ಕೊಡು'ವುದು. ಎಲ್ಲ ಪರಿಕರಗಳನ್ನು ಸೇರಿಸಿ ಮೆಲ್ಲಲು ಸಿದ್ಧಪಡಿಸುವುದನ್ನು 'ವೀಳ್ಯಕಟ್ಟು'ಎನ್ನುವುದು ವಾಡಿಕೆ.
=====
'ಶಾಸ್ತ್ರೀಯ ಭಾಷೆ ಕನ್ನಡ' - ಹಾಗಂದರೇನು? ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಕಸ್ಥಾನ-ಮಾನಕಿ ಬಂದಿರುವ ವಿಷಯ ಈಗ ಇತಿಹಾಸವೆಂಬುದು ನಿಜ. ಅದಕ್ಕೆ ಕಾರಣವಾದ ಹಿನ್ನೆಲೆಯೂ ಸಾಕಷ್ಟು ಜನಕ್ಕೆ ತಿಳಿದಿರಬೇಕು. ಆದರೆ ಈ ಕಶಾಸ್ತ್ರೀಯಕಿ ಎನ್ನುವ ವಿಶೇಷಣದ ಅರ್ಥವೇನು, ಅದರ ಸ್ವರೂಪವಾವುದು ಎಂಬುದು ಜನಗಳಿಗೆ ತಿಳಿಯದು, ಯಾಕಂದರೆ ವಿದ್ವಾಂಸರಿಗೇ ಆ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ.
ಕನ್ನಡಕ್ಕೆ ಯಾವುದೋ ವಿಶೇಷಣವನ್ನು ಸೇರಿಸಿ ಹೇಳುವ ರೂಢಿ ಇಂದಿನದೇನಲ್ಲ, ಹಿಂದೆಯೂ ಇತ್ತು. 'ಕವಿರಾಜಮಾರ್ಗ'ದಲ್ಲಿ (ಕ್ರಿಶ 850) ಕನ್ನಡ ಶಬ್ದವನ್ನು ನಾಡು ಮತ್ತು ನುಡಿ ಎರಡೂ ಅರ್ಥಗಳಲ್ಲಿ ಬಳಸಲಾಗಿದೆ. 'ಕನ್ನಡಂಗಳ್' ಎಂಬ ಶಬ್ದ ಅಲ್ಲಿ ತನ್ನ ಕಾಲದ ಕನ್ನಡದ ಪ್ರಾದೇಶಿಕ ಉಪಭಾಷೆಗಳನ್ನು ಸೂಚಿಸುತ್ತಿದ್ದ ಶಬ್ದ. ಅಲ್ಲಿ ಒಂದೆಡೆ "ಅದಱೊಳಂ ಕಿಸುವೊಳಲಾ ವಿದಿತ ಮಹಾ ಕೊಪಣ ನಗರದಾ ಪುಲಿಗೆಯಾ ಸದಭಿಸ್ತುತಮಪ್ಪ ಒಂಕುಂದದ ನಾಡೆ ನಾಡೆ ಕನ್ನಡದ ತಿರುಳ್" ಎಂಬ ಮಾತಿದೆ. ಪಟ್ಟದಕಲ್ಲು, ಕೊಪ್ಪಳ, ಲಕ್ಷ್ಮೇಶ್ವರ ಒಕ್ಕುಂದ _ ಊರುಗಳ ನಡುವಣ ಪ್ರದೇಶ ಕನ್ನಡದ ಸಾರಪ್ರದೇಶ ಎಂದು ಇದರ ಅರ್ಥ (ಇಲ್ಲಿ ಎರಡು ಬಾರಿ 'ನಾಡೆ' ಎಂದು ಬಳಸಲಾಗಿದೆ; ಮೊದಲನೆಯದು ಪ್ರದೇಶವೇ ಎಂಬ ಅವಧಾರಣೆಯ ಅರ್ಥವನ್ನು ಪಡೆದಿದ್ದರೆ, ಎರಡನೆಯದು 'ವಿಶೇಷವಾಗಿ' ಎಂಬ ಅರ್ಥದಲ್ಲದೆ). ಇಲ್ಲಿ ಸ್ಪಷ್ಟವಾಗಿ ತಿರುಳ್ ಎಂಬುದು ನಾಡನ್ನು ಸೂಚಿಸುತ್ತದೆ. ಆದರೆ ಮತ್ತೊಂದೆಡೆ ಈ ಕೃತಿಯಲ್ಲಿ "ಪಳಗನ್ನಡಮಂ ಪೊಲಗೆಡಿಸಿ ನುಡಿವರ್ ಆಗಮ ಬಲಹೀನರ್" ಎಂಬ ಮಾತಿದೆ. ಇಲ್ಲಿ ತನಗಿಂತ ಹಿಂದಿನ ಕನ್ನಡವನ್ನು ಹಳಗನ್ನಡ ಎನ್ನುವ ಗ್ರಂಥಕರ್ತೃವು ಅದನ್ನು ಕೆಲವರು ಕೆಡಿಸಿ 'ನುಡಿವರ್' ಎನ್ನುತ್ತಾನೆ (ಎಂದರೆ ಬರೆಯುವರು ಎಂದೇ ಅರ್ಥ). ಇಲ್ಲಿಯದು ನುಡಿಯ ಬಗೆಗಿನ ಉಲ್ಲೇಖ. ಮುಂದೆ ಕ್ರಿಶ. ಹತ್ತನೆಯ ಶತಮಾನದ ಪಂಪನು ತನ್ನ 'ವಿಕ್ರಮಾರ್ಜುನ ವಿಜಯ'ದ ಕೊನೆಯಲ್ಲಿ "ರಾಜದ್ರಾಜಕಮೆನಿಸಿದ ಸಾಜದ ಪುಲಿಗೆಯ ತಿರುಳ ಕನ್ನಡದೊಳ್" ರಚಿಸಿದುದು ತನ್ನ ಕವಿತೆ ಎಂದು ಹೇಳಿಕೊಳ್ಳುತ್ತಾನೆ. ಪುಲಿಗೆ ಎಂಬುದು ಈಗಿನ ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಹಿಂದೆ ಇದ್ದ ಹೆಸರು. ಅಲ್ಲಿನ ಕನ್ನಡವನ್ನು ಪಂಪ ಸಾಜದ ಕತಿರುಳ ಕನ್ನಡಕಿ ಎನ್ನುತ್ತಿದ್ದಾನೆ. ಕವಿರಾಜಮಾರ್ಗಕಾರನೂ ಪುಲಿಗೆಯನ್ನು ಹೆಸರಿಸಿದ್ದ. ಹಾಗಾಗಿ ಅವನ ದೃಷ್ಟಿಯಲ್ಲಿಯೂ ಪ್ರದೇಶದ ಜೊತೆಗೆ ನುಡಿಯನ್ನೂ ಸೂಚಿಸುವ ಉದ್ದೇಶವಿದ್ದಿರಬಹುದು ಎನ್ನಿಸುವುದು ಸಹಜ.
ಮುಂದೆ ಹನ್ನೆರಡನೆಯ ಶತಮಾನದ ನಯಸೇನನು ಹೇಳುವ "ಪೊಸಗನ್ನಡದೊಳ್ ವ್ಯಾವರ್ಣಿಸುವೆಂ ಸತ್ಕೃತಿಯಂ" ಎಂಬ ಮಾತಿನಲ್ಲಿ ಹೊಸಗನ್ನಡ ಎಂಬ ಶಬ್ದವಿದೆ. ಅವನ ದೃಷ್ಟಿಯಲ್ಲಿ ತನ್ನ ಕಾಲದಲ್ಲಿ ಬರೆಯುತ್ತಿದ್ದ ಕನ್ನಡದ ಸ್ವರೂಪ ಹೊಸಗನ್ನಡ (ನಾವು ಯಾವುದೇ ಭಾಷೆಯ ಪೂರ್ವ ಸ್ವರೂಪದ ಬಗ್ಗೆ ಮಾತನಾಡುವಾಗ, ಧ್ವನಿಮುದ್ರಣ ಆರಂಭಗೊಳ್ಳುವವರೆಗಿನ ಕಾಲದವರೆಗೂ, ಅನಿವಾರ್ಯವಾಗಿ ಬರವಣಿಗೆಯನ್ನೇ ಅವಲಂಬಿಸಬೇಕು). ಈಚೆಗೆ ಕಳೆದ ಶತಮಾನದಿಂದ ಕನ್ನಡ ಭಾಷೆಯು ಬೆಳೆದು ಬಂದ ವಿವಿಧ ಘಟ್ಟಗಳನ್ನು ಕುರಿತು ಹೇಳುವಾಗ, ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮಾತುಗಳನ್ನು ಬಳಸುವುದು ರೂಢಿಯಲ್ಲಿ ಬಂದಿದೆ. ಆದರೆ ಈಗ ಎಂಟು ವರ್ಷಗಳಿಂದ, ಅದರಲ್ಲೂ ಈಚಿನ ನಾಲ್ಕು ವರ್ಷಗಳಿಂದ, ಅದರಲ್ಲಿಯೂ ಕಳೆದ ಒಂಬತ್ತು ತಿಂಗಳುಗಳಿಂದ ಶಾಸ್ತ್ರೀಯ ಕನ್ನಡದ ಬಗ್ಗೆ ಮಾತನಾಡುತ್ತಿದ್ದೇವೆ. ಅದಕ್ಕೆ ಹಿಂದೆ ಈ ಮಾತನ್ನು ಕನ್ನಡಕ್ಕೆ ಅನ್ವಯಿಸಿ ಹೇಳುತ್ತಿರಲಿಲ್ಲ, ಅಥವಾ ಯಾವುದೇ ಭಾಷೆಗೆ ಅನ್ವಯಿಸುತ್ತಿರಲಿಲ್ಲ.
2004 ರಲ್ಲಿ ನಡೆದ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡಾಗ ಡಿಎಂಕೆ ಹಾಕಿದ ಒಂದು ಷರತ್ತೆಂದರೆ, ಅಧಿಕಾರಕ್ಕೆ ಬಂದ ತಕ್ಷಣ ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಬೇಕು ಎಂಬುದು; ಕಾಂಗೆಸ್ ಇದಕ್ಕೆ ಒಪ್ಪಿತು. ಈ ಮೈತ್ರಿಕೂಟ ವಿಜಯದುಂದುಭಿ ಮೊಳಗಿಸಿತು. ತಮಿಳು ನಾಡು ಸರ್ಕಾರ ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಲು ಒತ್ತಾಯಿಸಿತು. ಆದರೆ ಆವರೆಗೆ ಶಾಸ್ತ್ರೀಯ ಭಾಷೆಯ ಬಗ್ಗೆ ಯಾರಿಗೂ ಪರಿಕಲ್ಪನೆಯಿರಲಿಲ್ಲ, ತಮಿಳರಿಗೂ. ತಮ್ಮದು ಜಗತ್ತಿನಲ್ಲಿಯೇ ಅತಿಶಯದ ಭಾಷೆ, ಅದರಂತೆ ಮತ್ತೊಂದಿಲ್ಲ ಎಂದು ಅವರು ಹೇಳಿಕೊಳ್ಳಬೇಕಾಗಿತ್ತು, ಅಷ್ಟೆ; ಅದಕ್ಕೇ ತಮಿಳನ್ನು Classical Language ಎಂದು ಕರೆಯಬೇಕೆಂಬ ಒತ್ತಾಯ. ಹಾಗೆ ಕರೆಯಲು ಕಾರಣ ಬೇಕಲ್ಲ, ಕೇಂದ್ರ ಸರ್ಕಾರವು ಭಾಷೆಯೊಂದನ್ನು Classical ಎಂಬ ವಿಶೇಷಣದಿಂದ ಸಂಬೋಧಿಸಲು ಅದಕ್ಕಿರಬೇಕಾದ ಲಕ್ಷಣಗಳನ್ನು ನಿಗದಿ ಪಡಿಸಲು ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಕೇಳಿಕೊಂಡಿತು.
ಅಕಾಡೆಮಿಗೆ ತಲೆ ನೋವು ಶುರುವಾಯಿತು, ಏಕೆಂದರೆ Classical Language ಪರಿಕಲ್ಪನೆ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಭಾಷಾವಿಜ್ಞಾನದಲ್ಲಿಯೂ, ಈಗ ಜನಬಳಕೆಯಲ್ಲಿಲ್ಲದೆ, ಕೇವಲ ಗ್ರಾಂಕ ಸಾಹಿತ್ಯವನ್ನು ಹೊಂದಿರುವ ಸಂಸ್ಕೃತ, ಲ್ಯಾಟಿನ್, ಪಾಲಿ ಮುಂತಾದವುಗಳಂತೆ ಪ್ರಾಚೀನ ಭಾಷೆ ಎಂಬ ಅಸ್ಪಷ್ಟ ಭಾವನೆ ಇತ್ತು; ಯಾರೂ ಜನಬಳಕೆಯ ಭಾಷೆಯನ್ನು Classical ಎಂಬ ವಿಶೇಷಣದಿಂದ ಕರೆಯುತ್ತಿರಲಿಲ್ಲ. ಆದರೆ ಶ್ರೇಷ್ಠ ಕೃತಿ, ಪ್ರಾಚೀನವಾದದ್ದಿರಬಹುದು, ಆಧುನಿಕವಿರಬಹುದು, Classic ಎನ್ನಿಸಿಕೊಳ್ಳುತ್ತದೆ. ಹೀಗಾಗಿ ಅಕಾಡೆಮಿ ಏನನ್ನೂ ಮಾಡಲಿಲ್ಲ, ಅದಕ್ಕೆ ಗೊಂದಲ; ಆದರೆ ಡಿಎಂಕೆ ಒತ್ತಾಯ. ಹೀಗಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಕೇಳಿದಾಗ, ಅಕಾಡೆಮಿಯು ಒಂದು ಸಮಿತಿಯನ್ನು ರಚಿಸಿತು, ಅದು ತಮಿಳಿಗೆ ಹೊಂದುವಂತಹ ನಾಲ್ಕು ಲಕ್ಷಣಗಳನ್ನು ಗುರುತಿಸಿ ಹೇಳಿತು. ಅದಕ್ಕನುಗುಣವಾಗಿ ಕೇಂದ್ರ ಸರ್ಕಾರ 12-10-2004 ರಂದು ತಮಿಳನ್ನು Classical Language ಎಂದು ಘೋಷಿಸಿತು. ಒಂದು ವರ್ಷದ ನಂತರ ಸಂಸ್ಕೃತವನ್ನೂ ಹಾಗೆ ಕರೆಯಿತು. ಈ ನಾಲ್ಕೂ ಲಕ್ಷಣಗಳಿದ್ದ ಕನ್ನಡ ಮತ್ತು ತೆಲುಗು ಭಾಷೆಗಳವರು ತಮ್ಮದೂ Classical Language ಗಳೇ ಎಂದು ಘೋಷಿಸಲು ವರಾತ ಆರಂಭಿಸಿದರು. ಏನೇನೋ ಅಡಚಣೆಗಳು, ಗೊಂದಲಗಳು, ಕೊನೆಗೆ ಈ ಎರಡಕ್ಕೂ Classical Language 'ಸ್ಥಾನಮಾನ' ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಮುಂದಿಟ್ಟಾಗ, ಹಿಂದೆ ನಿಗದಿಪಡಿಸಿದ್ದ 'ಒಂದು ಸಾವಿರ ವರ್ಷದ ಇತಿಹಾಸ' ಎಂಬ ಲಕ್ಷಣವನ್ನು ಸಮಿತಿಯು '1500 ರಿಂದ 2000 ವರ್ಷಗಳು' ಎಂದು ಬದಲಾಯಿಸಿತು. ಆಗಲೂ ಈ ಎರಡು ಭಾಷೆಗಳಿಗೆ ಆ ಲಕ್ಷಣವಿದ್ದುದರಿಂದ ಅಳೆದು ಸುರಿದೂ 31-10-2008 ರಂದು ಕನ್ನಡ ತೆಲುಗುಗಳನ್ನೂ ಶಾಸ್ತ್ರೀಯ ಭಾಷೆಗಳು ಎಂದು ಘೋಷಿಸಲಾಯಿತು. (ಈ ಮಧ್ಯೆ ಸಂಸ್ಕೃತಕ್ಕೆ ಆ ಪಟ್ಟ ಕಟ್ಟಲಾಯಿತು. ಇದೀಗ ಮಲಯಾಳಂಗೂ ಕೇಳದೆಯೇ ಆ ಪಟ್ಟ ದೊರೆತಿದೆ).
ಮುಂದೆಯೂ ಏನೇನೋ ಅಡಚಣೆಗಳು; ಕೊನೆಗೆ ಆ ಗೌರವ ಪಡೆದ ಕನ್ನಡ ಭಾಷೆಯ ಅಧ್ಯಯನಕ್ಕೆ ಒಂದು ಉನ್ನತ ಸಂಸ್ಥೆಯ ಸ್ಥಾಪನೆ ಮಾಡಬೇಕಾಗಿದ್ದು, 18-12-2011 ರಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ 'ಶಾಸ್ತ್ರೀಯ ಕನ್ನಡದ ಉನ್ನತ ಅಧ್ಯಯನ ಕೇಂದ್ರಕ' (Centre of Excellence for the Study of Classical Kannada) ಉದ್ಘಾಟನೆಗೊಂಡಿತು; ಕಳೆದ ನಾಲ್ಕಾರು ತಿಂಗಳಿಂದ ಹಣಸಹಾಯವೂ ದೊರೆಯುತ್ತಿದೆ. ಆದರೆ ಶಾಸ್ತ್ರೀಯ ಕನ್ನಡ ಅಂದರೆ ಏನು ಎಂಬುದರ ಸ್ಪಷ್ಟ ಪರಿಕಲ್ಪನೆ ಈಗಲೂ ಇಲ್ಲ. (ಹೀಗಾಗಿಯೇ ಏನು ಮಾಡಬೇಕೆಂದು ತೋಚದೆಯೋ ಏನೋ ಬಹುಪಾಲು ಹಣ ಬಳಕೆಯಾಗುತ್ತಲೇ ಇಲ್ಲ). ಒಬ್ಬೊಬ್ಬ ವಿದ್ವಾಂಸರದು ಒಂದೊಂದು ಅಭಿಪ್ರಾಯ. ಆದರೂ ಅದರ ಅಧ್ಯಯನಕ್ಕೆ ಒಂದು ಸಂಸ್ಥೆ ಆಗಿದೆ, ಅದರ ವತಿಯಿಂದ ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. ಹೀಗಾಗಿ ಏನಾದರೂ ಮಾಡಬೇಕಲ್ಲ.
ಶಾಸ್ತ್ರೀಯ ಭಾಷೆಗಿರಬೇಕಾದ ನಾಲ್ಕು ಲಕ್ಷಣಗಳಲ್ಲಿ ನಾಲ್ಕನೆಯದು "ಶಾಸ್ತ್ರೀಯ ಭಾಷಾ ಸಾಹಿತ್ಯಗಳು ಆಧುನಿಕವಾದುದಕ್ಕಿಂತ ಭಿನ್ನವಾದುದಾಗಿದ್ದು, ಶಾಸ್ತ್ರೀಯ ಭಾಷೆ ಹಾಗೂ ಈಚಿನ ಅವಸ್ಥಾಂತರಗಳ ನಡುವೆ ಕಂದರವಿರಬಹುದು" ಎಂಬುದು. ತಮಿಳು ವಿದ್ವಾಂಸರೇ ರೂಪಿಸಿದ್ದರಿಂದ ಈ ಲಕ್ಷಣವೂ ಸೇರಿಕೊಂಡಿದೆ ಎನ್ನಬಹುದು. ಏಕೆಂದರೆ ಕ್ರಿಸ್ತಶಕದ ಆರಂಭಕಾಲದಲ್ಲಿತ್ತೆಂದು ಹೇಳಲಾದ ತಮಿಳಿನ ಚಂಗಕಾಲದ ನಂತರ ಅನೇಕ ಶತಮಾನಗಳ ಕಾಲ ತಮಿಳು ಕೃತಿಗಳು ಕ್ರಿಶ ಒಂಬತ್ತನೇ ಶತಮಾನದವರೆಗೆ ದೊರೆಯದಿರಲು ಕಾರಣ ಅವನ್ನೆಲ್ಲ ನಾಶಮಾಡಿದ ಕಳಪ್ಪರ್ ಎಂಬ ಶತ್ರುಗಳು ಕಾರಣ ಎಂಬ ವಾದ ಮಾಡಿ, ತಮಿಳು ಸಾಹಿತ್ಯದಲ್ಲಿ ನಿರಂತರತೆ ಕಾಣುತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಕನ್ನಡದಲ್ಲಿ ಕ್ರಿಶ. 450 ರ ಹಲ್ಮಿಡಿ ಶಾಸನದಿಂದ ಇಲ್ಲಿಯವರೆಗೂ ಬರವಣಿಗೆ ಹಾಗೂ ಕ್ರಿ 850 ರ 'ಕವಿರಾಜಮಾರ್ಗ'ದಿಂದ ಸಾಹಿತ್ಯ ಕೃತಿಗಳು ನಿರಂತರವಾಗಿ ದೊರೆಯುತ್ತವೆ. ಸರ್ಕಾರ ನಿಗದಿಪಡಿಸಿದ ಲಕ್ಷಣಕ್ಕನುಗುಣವಾಗಿ ತಾನೇ ಕನ್ನಡ ಶಾಸ್ತ್ರೀಯ ಭಾಷೆಯನ್ನು ಗುರುತಿಸಬೇಕಾದದ್ದು? ಹಾಗಾಗಿ ಒಂದು ನಿರಂತರ ಧಾರೆಯಾಗಿ ಒಂದು ಚೌಕಟ್ಟಿನಲ್ಲಿ, ಒಂದೇ ರೂಪದ ಕನ್ನಡವನ್ನು ಬಳಸಿ ಆರಂಭದಿಂದ ಹನ್ನೆರಡನೆಯ ಶತಮಾನದವರೆಗೆ ಊರ್ಜಿತವಾಗಿದ್ದ ಚಂಪೂ ಪರಂಪರೆಯನ್ನು ಕನ್ನಡದ ಶಾಸ್ತ್ರೀಯ ಸಾಹಿತ್ಯ ಎಂದೂ, ಅದರಲ್ಲಿ ಬಳಕೆಯಾದ ಈಗ ನಾವು ಹಳಗನ್ನಡ ಎನ್ನುವ ಭಾಷಾಸ್ವರೂಪವನ್ನು ಶಾಸ್ತ್ರೀಯ ಕನ್ನಡ ಎಂದೂ ಕರೆಯುವುದು ಸಮಂಜಸವೆನ್ನಿಸುತ್ತದೆ. ಉನ್ನತ ಅಧ್ಯಯನ ಕೇಂದ್ರಗಳ ಈಗಿನ ಕರ್ತವ್ಯವೆಂದರೆ ಅವುಗಳಿಗೆ ಸಂಬಂಧಿಸಿದ ಸಂಶೋಧನೆ ನಡೆಸಲು ಯುವಕರನ್ನು ಸಜ್ಜುಗೊಳಿಸುವುದಕ್ಕಾಗಿ 'ಶಾಸ್ತ್ರೀಯ ಕನ್ನಡ'ದ ವಿಶೇಷ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕಾದುದು. ಕನ್ನಡಕ್ಕೆಂದು ಬೇರೆಯೇ ಆದ ಇಲಾಖೆಯಿದ್ದು ಕೋಟ್ಯಂತರ ರೂಪಾಯಿಗಳನ್ನು ಬಜೆಟ್‍ನಲ್ಲಿ ನಿಗದಿಪಡಿಸಿರುವ ಕನ್ನಡ ನಾಡಿನ ಸರ್ಕಾರ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕು; ಅಲ್ಲದೆ ಶಾಸ್ತ್ರೀಯ ಕನ್ನಡದ ಉನ್ನತ ಅಧ್ಯಯನ ಕೇಂದ್ರ'ವನ್ನು ಭಾರತೀಯ ಭಾಷಾ ಸಂಸ್ಥಾನದಿಂದ ಸ್ವತಂತ್ರಗೊಳಿಸಿ, ತಮಿಳಿನ ಸಂಸ್ಥೆಯಿರುವಂತೆ ಅದನ್ನು ಕನ್ನಡ ನಾಡಿನ ಸರ್ಕಾರದ ವ್ಯಾಪ್ತಿಯಲ್ಲಿ ತಂದು, ವಿದ್ವಾಂಸರೊಡನೆ ಸಮಾಲೋಚಿಸಿ ವಿವಿಧ ಯೋಜನೆಗಳನ್ನು ತ್ವರಿತವಾಗಿ ರೂಪಿಸಿ, ಕೇಂದ್ರದಿಂದ ಹಣ ಸಹಾಯ ಪಡೆದು ಅವುಗಳನ್ನು ಕಾರ್ಯರೂಪಕ್ಕಿಳಿಸುವುದು.
=====
ಷೋಡಶೋಪಚಾರ: ಈ ಸಂಸ್ಕೃತ ಸಮಾಸ ಪದದಲ್ಲಿ ಎರಡು ಭಾಗಗಳಿವೆ: ಷೋಡಶ ಮತ್ತು ಉಪಚಾರ. ದೇವರಿಗೆ ಮಾಡಬೇಕಾದ ಹದಿನಾರು ಬಗೆಯ ಸೇವೆಯನ್ನು ಇದು ಹೇಳುತ್ತದೆ: ವಚನಗಳಿಗಿಂತ ಹೆಚ್ಚು ಪ್ರಾಚೀನವಾದ ಕನ್ನಡ ಕಾವ್ಯಗಳಲ್ಲಿ ಇದರ ಉಲ್ಲೇಖವಿದ್ದಂತಿಲ್ಲ; ಹಿಂದಿನವು ಜೈನ ಕಾವ್ಯಗಳಾದುದರಿಂದಲೂ, ಮೂಲತಃ ಜೈನರಲ್ಲಿ ದೇವರ ಕಲ್ಪನೆಯಾಗಲೀ ಪೂಜೆಯ ಕಲ್ಪನೆಯಾಗಲೀ ಇಲ್ಲದಿದ್ದುದರಿಂದ ೀ ರೀತಿಯಾಗಿರಬಹುದು. ಹೀಗಾಗಿ ಇದು ಈಚಿನ ಪರಿಕಲ್ಪನೆಯಿರಬಹುದು. ಬಸವಣ್ಣನ ವಚನವೊಂದರಲ್ಲಿ "ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು" ಎಂಬ ಮಾತು ದೊರೆಯುತ್ತದೆ. ಹಾಗೆಯೇ "ಅಷ್ಟವಿಧಾರ್ಚನೆ ಷೋಡಶೋಪಚಾರ ಸನ್ನಿಹಿತಂಗೆ ಅವಗುಣಗಳುಂಟೆ" ಎಂಬ ವಾಕ್ಯ ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಸೋಮದೇವನ 'ಉದ್ಭಟಕಾವ್ಯ'ದಲ್ಲಿ  "ಷೋಡಶೋಪಚಾರದಿಂದೆ ಪೂಜೆಗೈದು ಶೀತರುಕ್ಚೂಡ ನೀಲಕಂಠದೇವನಂ" ಎಂಬ ವಾಕ್ಯವಿದೆ.  ಆದಯ್ಯನೆಂಬೊಬ್ಬ ವಚನಕಾರನು 'ಷೋಡಶೋಪಚರ್ಯ' ಎಂಬ ರೂಪವನ್ನು ಬಳಸುತ್ತಾನೆ ("ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದ ಇಷ್ಟಲಿಂಗಧಾರಣದಿಂದಪ್ಪುದು ಧಾರಣಯೋಗ"). ಭೀಮಕವಿಯ 'ಬಸವ ಪುರಾಣ'ದಲ್ಲಿ 'ಷೋಡಶೋಚಾರ' ("ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ" ಎಂಬ ಪ್ರಯೋಗದ ಜೊತೆ "ಷೋಡಶೋಪಚರಣೆ' ("ಷೋಡಶೋಪಚರಣೆಯೆಸೆಯೆ ಶಿವರಾತ್ರಿವಿಧಿಯಲಿ") ಎಂಬ ರೂಪವೂ ದೊರೆಯುತ್ತದೆ. ವಾಹನ, ಆಶನ, ಪಾದ್ಯ, ಅರ್ಘ್ಯ, ಸ್ನಾನ, ಉದ್ವರ್ತನ, ವಸ್ತ್ರ, ಉಪವೀತ, ಗಂಧ, ಧೂಪ, ದೀಪ, ನೈವೇದ್ಯ, ಆಚಮನ, ಫಲ, ತಾಂಬೂಲ ಮತ್ತು ಪ್ರದಕ್ಷಿಣಗಳು 'ಗೌತಮ ಧರ್ಮಸೂತ್ರ'ವು ಹೇಳುವ ಹದಿನಾರು ಬಗೆಯ ಉಪಚಾರಗಳು. 'ಧರ್ಮಸಿಂಧು'ವಿನಲ್ಲಿ ಇದಕ್ಕೆ ಭಿನ್ನವಾದ ವಿವರವಿದೆ. ಮಹಾದೇವಿಯಕ್ಕನ ವಚನವೊಂದರಲ್ಲಿ ಇದರ ಪಟ್ಟಿ ಹೀಗಿದೆ: ಮಜ್ಜನ, ದೇವಾಂಗ, ಪರಿಮಳ, ಅಕ್ಷತೆ, ಪುಷ್ಪ, ಧೂಪ, ಆರತಿ, ಮೃಷ್ಟಾನ್ನ, ಪಾನ, ಹಸ್ತಪ್ರಕ್ಷಾಲನ, ತಾಂಬೂಲ, ಆಸನ, ಸಂಗೀತವಾದ್ಯ, ಭೂಷಣ, ವಾಹನ ಮತ್ತು ಗೃಹ "ಇಂತೀ ಹದಿನಾರು ತೆರದ ಭಕ್ತಿಯನು ಚರಲಿಂಗಕ್ಕೆ ಕೊಟ್ಟು ಆ ಚರಲಿಂಗಮೂರ್ತಿ ಭೋಗಿಸಿದ ಬಳಿಕ" ತಾನು ಭೋಗಿಸುವುದಾಗಿ ಹೇಳಿದೆ. ಎಂದರೆ ಇವುಗಳನ್ನೆಲ್ಲ ತಾನು ಅನುಭವಿಸುವುದಕ್ಕೆ ಮುಂಚೆ ಜಂಗಮನಿಗೆ ಅರ್ಪಿಸಬೇಕು ಎಂಬುದು ಭಕ್ತನ ನಿಲವು. ಕನ್ನಡದಲ್ಲಿ ವೀರಶೈವ ಕಾವ್ಯಗಳಲ್ಲಿ ಮಾತ್ರ 'ಷೋಡಶೋಪಚಾರ'ದ ಉಲ್ಲೇಖ ಬಂದಿರುವುದನ್ನು ಗಮನಿಸಿದರೆ ಇದು ವೀರಶೈವಕ್ಕೆ ವಿಶಿಷ್ಟವಾದ ಪರಿಕಲ್ಪನೆಯಿರಬಹುದೇ ಎಂಬ ಅನುಮಾನ ಬರುತ್ತದೆ.
=====
ಸಾಮಾನ್ಯ: ಇದು ಸಮಾನ ಎಂಬುದರಿಂದ ರೂಪಿತವಾದ ವಿಶೇಷಣ. 'ಎಲ್ಲಕ್ಕೂ ಅನ್ವಯಿಸುವ' ಎಂದು ಇದರರ್ಥ. "ಸಾಮಾನ್ಯವಾಚಿಗಳನೀ ತೆರದಿಂದ" ಎಂಬ 'ಅಭಿಧಾನ ವಸ್ತುಕೋಶ'ದ ಮಾತಿನಲ್ಲಿ ಈ ಅರ್ಥವಿದೆ. 'ಸಾಮಾನ್ಯಂ ಸರ್ವಶಾಸ್ತ್ರೇಷು' ಎಂಬುದನ್ನು ದುರ್ಗಸಿಂಹನು 'ಪಂಚತಂತ್ರ'ದಲ್ಲಿ "ಎಲ್ಲಾ ಶಾಸ್ತ್ರಂಗಳಲ್ಲಿ ಸಾಧಾರಣಂ" ಎಂದು ಅನುವಾದಿಸುತ್ತಾನೆ. "ಸಾಮಾನ್ಯಜನಂಗಳನತಿಕ್ರಮಿಸಲೋಸ್ಕರಮಾಗಿ ಅಳಿಪಿಲ್ಲದೆ ಉದ್ಯೋಗಂಗೆಯ್ವ ಮನುಷ್ಯರ ತೊಡೆಯ ಮೇಲೆ ಲಕ್ಷ್ಮೀ ನೆಲಸಿಹಳು" ಎಂಬುದೂ ದುರ್ಗಸಿಂಹನ ಮಾತು. ಸಾಮಾನ್ಯನಿಯಮ, ಸಾಮಾನ್ಯಲಕ್ಷಣ ಮುಂತಾದ ಸಮಾಸಗಳಲ್ಲಿಯೂ ಇದು ಸ್ಫುಟವಾಗುತ್ತದೆ. ವಿಶೇಷವಲ್ಲದ್ದು ಸಾಮಾನ್ಯ. "ಯುಯು ಎಂಬುದು ಅಶ್ವಮೇಧದ ಹಯಮುಂ ಸಾಮಾನ್ಯ ಹಯಮುಮಕ್ಕುಂ" ಎಂಬುದೂ ಅಲ್ಲಿಯದೇ ವಿವರಣೆ. ಸಾಧಾರಣವಾದುದು ಎಂಬರ್ಥವೂ ಈ ಶಬ್ದಕ್ಕಿದೆ ("ಸಾವಭೃತಂ ಸಾಮಾನ್ಯಂ ಕೇವಳಂ" - 'ಅಭಿಧಾನ ವಸ್ತುಕೋಶ'). "ಅಬ್ಜದಳಾಕ್ಷೀ ಪೇಳ ಸಾಮಾನ್ಯಮೇ ಬಗೆಯೆ ಭವತ್ಕೇಶಪಾಶಪ್ರಪಂಚಂ" ಎಂಬ ಮಾತಿನಲ್ಲಿಯೂ ಈ ಅರ್ಥವಿದೆ. 'ಸಾಮಾನ್ಯಮೇ' ಎಂಬುದು ಸಾಮಾನ್ಯವಲ್ಲ ಎಂಬುದನ್ನು ಧ್ವನಿಸುತ್ತದೆ. "ಸಾಮಾನ್ಯನಲ್ಲನಾತಂ ನೀಮಿದನವಧರಿಪುದು" ಎಂಬ ನೇಮಿನಾಥನ 'ಅರ್ಧನೇಮಿಪುರಾಣ'ದ ಮಾತಿನಲ್ಲಿ ಸಾಮಾನ್ಯ ಎಂಬುದಕ್ಕೆ ಸಾಮಾನ್ಯ ವ್ಯಕ್ತಿ ಎಂಬ ಅರ್ಥ ಹೊಮ್ಮುತ್ತದೆ. "ಸುಖಿಜಂಗಮ ಸಾಮಾನ್ಯ ಜಂಗಮ ಉಂಟೆ ಕೂಡಲಸಂಗಮದೇವ" ಎಂಬ ಬಸವಣ್ಣನ ಮಾತಿನಲ್ಲಿಯೂ ಈ ಅರ್ಥವಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧಾರಣ ಪ್ರಜೆಗೂ ಹೆಚ್ಚಿನ ಮೌಲ್ಯ ಪ್ರಾಪ್ತವಾದ ಕಾರಣ ಇಂಗ್ಲಿಷ್‍ನಲ್ಲಿ ಸಾಮಾನ್ಯ ಪ್ರಜೆಯನ್ನು 'ಮಿಸ್ಟರ್ ಕಾಮನರ್' ಎಂದು ಕರೆಯುವ ವಾಡಿಕೆ ಬಂತು. ಇದಕ್ಕೆ ಸಂವಾದಿಯಾಗಿ  ಕನ್ನಡದಲ್ಲಿ 'ಶ್ರೀ ಸಾಮಾನ್ಯ' ಎಂದು ಬಳಸಿದವರು ಕುವೆಂಪು. 'ಶ್ರೀ ಸಾಮಾನ್ಯರ ದೀಕ್ಷಾಗೀತೆ' ಎಂಬ ತಮ್ಮ ಕವನದಲ್ಲಿ ಅವರು "ಶ್ರೀಸಾಮಾನ್ಯನೆ ಭಗವತ್ ಮಾನ್ಯಂ ಶ್ರೀ ಸಾಮಾನ್ಯನೆ ಭಗವದ್ ಧನ್ಯಂ ಸಾಮಾನ್ಯತೆ ಭಗವಂತನ ರೀತಿ ಸಾಮಾನ್ಯತೆ ದಿಟ ಭಗವತ್ ಪ್ರೀತಿ" ಎಂದು ಹೇಳಿದರು. ಇಲ್ಲಿ ಕುವೆಂಪು ಸಾಮಾನ್ಯತೆ ಎಂಬ ಶಬ್ದವನ್ನೂ ರೂಪಿಸಿಕೊಂಡಿದ್ದಾರೆ. ಸಾಮಾನ್ಯ ಎಂಬುದರ ವಿರುದ್ಧಾರ್ಥಕವಾಗಿ ಅಸಾಮಾನ್ಯ ಎಂಬ ಪದವೂ ರೂಪಗೊಂಡಿದೆ. ಸಾಧಾರಣವಲ್ಲದ್ದು ಎಂಬುದು ಇದರರ್ಥ. "ಅಂದಾ ಮಹಿಮೆಯುತ್ಸವಮೆಂಬುದು ಅಸಾಮಾನ್ಯಂ ಅದೃಷ್ಟಂ ಅಪೂರ್ವಂ ಅಶ್ರುತಮಪೂರ್ವಂ" ಎಂಬುದು ಪೊನ್ನನ 'ಶಾಂತಿಪುರಾಣ'ದ ಮಾತು.
=====
ಸೂತಕ: ಇದೊಂದು ಸಂಸ್ಕೃತ ಶಬ್ದ. ಇದರ ಮೂಲಾರ್ಥ ಹುಟ್ಟು ಅಥವಾ ಜನನ ಎಂದು. "ಮನೆಗೆ ತಂದು ತನ್ನ ನಲ್ಲಳ ಸೋಂಕಿನೊಳ್ ಕೂಸನಿಟ್ಟೊಡೆ ರಾಗಿದಿಂ ಸುತನ ಸೂತಕಮಂ ಕೊಂಡಾಡೆ" ಎಂಬ ಮಾತು 'ಪಂಪಭಾರತ'ದದಲ್ಲಿ ಬರುತ್ತದೆ. ಜನನವೀಯುವವಳು ಸೂತಿಕೆ ಅಥವಾ ಬಾಣಂತಿ. ಸೂತಿಕಾಗೃಹ ಎಂದರೆ ಹೆರಿಗೆಮನೆ; 'ಅಮರಕೋಶ' ಇದನ್ನು ಹೆಸರಿಸುತ್ತದೆ. ಸೂತಿಕಾಗಾರ ಎಂಬ ಶಬ್ದವೂ ಇದೆ. "ಮಂಗಳಾಸ್ಪದಮಾಗಿರ್ದ ಸೂತಿಕಾಗಾರ ದ್ವಾರಕ್ಕೆ ಬಂದು" 'ಕುಸುಮಾವಳಿ ಕಾವ್ಯಂ'; ಸೂತಿಕಾಸದನ ("ಅಂತು ಸೂತಿಕಾಸದನಮಂ ಪೊಕ್ಕು ದೇವಕಿಯ ಮುಂದೆ ಪಟ್ಟಿರ್ದ ಶಿಶುವಿನ" 'ಜಗನ್ನಾಥವಿಜಯ'); ಸೂತಿಕಾಸದ್ಮ ("ಖಚರೇಂದ್ರನಿಂತು ಪುಗುತಂದಂ ಸೂತಿಕಾಸದ್ಮಮಂ" 'ಶಾಂತೀಶ್ವರಪುರಾಣ') ಎಂದರೂ ಇದೇ. ಸೂತೀಜನ ಎಂದರೆ ಸೂಲಗಿತ್ತಿಯರು ("ಸೂತೀಜನ ಸಖಿಜನಮೆನಿತನಿತುಮಂ ಅವನಿಪತಿ ನಿಯೋಜಿಸಿ ತಳರ್ದಂ" 'ಪುಷ್ಪದಂತ ಪುರಾಣ').
ಸೂತಕ ಎಂಬುದು ಹುಟ್ಟು, ಗರ್ಭಪಾತ ಮತ್ತು ಸಾವುಗಳ ಕಾಲದ ಮೈಲಿಗೆಯನ್ನೂ ಸೂಚಿಸುತ್ತದೆ. ಈ ಕಾಲದಲ್ಲಿ ತಂದೆತಾಯಿಗಳಿಬ್ಬರೂ ಮೈಲಿಗೆ (ಅಶೌಚ) ಆಚರಿಸಬೇಕೆಂದು ಗೌತಮ, ವಾಸಿಷ್ಠ ಮುಂತಾದ ಧರ್ಮಶಾಸ್ತ್ರಕಾರರು ನಿಯಮಿಸುತ್ತಾರೆ. ತಮ್ಮ ಕಾಲದಲ್ಲಿ ವೈದಿಕ ಸಂಪ್ರದಾಯದಲ್ಲಿ ಆಚರಿಸುತ್ತಿದ್ದ ಐದು ಬಗೆಯ ಮೈಲಿಗೆಯ ಆಚರಣೆಯನ್ನು ವಚನಗಳು 'ಪಂಚಸೂತಕಕ' ಎಂಬ ಮಾತಿನಿಂದ ಸೂಚಿಸುತ್ತವೆ. ಅವುಗಳೆಂದರೆ ಜಾತಿ ಸೂತಕ (ಜಾತಿಯ ಕಾರಣದಿಂದ ಮೈಲಿಗೆ ಆಚರಣೆ), ಜನನ ಸೂತಕ (ಮಗು ಹುಟ್ಟಿದಾಗಿನ ಮೈಲಿಗೆ) ಪ್ರೇತಸೂತಕ (ಯಾರಾದರೂ ಸತ್ತರೆ), ಉಚ್ಚಿಷ್ಟ ಸೂತಕ (ಎಂಜಲು) ಮತ್ತು ರಜಸ್ಸೂತಕ (ಹೆಣ್ಣು ಬಿಹಿಷ್ಠೆಯಾದಾಗ). ಇವುಗಳ ಆಚರಣೆಯನ್ನು ವಚನಕಾರರು ಟೀಕಿಸಿದರು. ಈ ಐದಲ್ಲದೆ ಚೆನ್ನಬಸವಣ್ಣ 'ಭ್ರಾಂತು ಸೂತಕ' 'ವರ್ಣ ಸೂತಕ'ಗಳನ್ನೂ ಸೇರಿಸಿ "ಇವರೆಂತು ಭಕ್ತರಹರು?" ಎಂದು ಪ್ರಶ್ನಿಸುತ್ತಾನೆ. ಪಂಚಸೂತಕಗಳನ್ನು ಬಿಟ್ಟ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ ಎಂಬುದು ಅವನ ಹೇಳಿಕೆ. ಬೇರೊಂದೆಡೆ ಆರು ಸ್ಥಲಗಳಿಗೆ ಸಂಬಂಧಿಸಿದಂತೆ ಕುಲ, ಛಲ, ತನು, ಮನ, ನೆನಹು, ಭಾವಸೂತಕಗಳನ್ನು ಹೆಸರಿಸುತ್ತಾನೆ. ಬೇರೆ ವಚನಕಾರರು ತ್ಯಜಿಸಬೇಕಾದ ಇನ್ನೂ ಅನೇಕವನ್ನು ಸೂತಕ ಎಂದೇ ಕರೆಯುತ್ತಾರೆ. "ಕಿವಿಯ ಸೂತಕ ಹೋಯಿತ್ತು ಸದ್ಗುರುವಿನ ವಚನದಿಂದ" ಮುಂತಾಗಿ ಬಸವಣ್ಣ ಹೇಳುತ್ತಾನೆ. ಲಿಂಗವನ್ನು "ಧರಿಸಿ ಪರಿಶುದ್ಧವಾದೆವೆಂದು ತಿಳಿಯದೆ ಸೂತಕವನಾಚರಿಸುವ ವ್ರತಗೇಡಿಗಳ ಎನಗೆ ತೋರದಿರಯ್ಯಾ" ಎಂಬುದೂ ಚೆನ್ನಬಸವಣ್ಣನ ಮಾತು.
ಸೂತಕ ಶಬ್ದಕ್ಕೆ ಪಾದರಸ ("ರಸ ಪಾರದ ಸೂತಕ" - 'ಅಭಿಧಾನ ವಸ್ತುಕೋಶ') ಎಂಬರ್ಥವೂ ಇದೆ.
=====
ಸುಂಕ: ವ್ಯಾಪಾರದಲ್ಲಿ ಸರಕುಗಳ ಮೇಲೆ ಹಾಕುವ ತೆರಿಗೆಯೇ ಸುಂಕ. ಈ ಶಬ್ದವು ಸಂಸ್ಕೃತದ 'ಶುಲ್ಕ' ಎಂಬುದರ ತದ್ಭವ. ಪ್ರಾಕೃತದಲ್ಲಿಯೂ ಇದು ಸುಂಕ ಎಂದಾಗಿದೆ; ತೆಲುಗು, ತುಳುಗಳಲ್ಲಿಯೂ ಇದೇ ರೂಪವಿದೆ. ತಮಿಳಿನಲ್ಲಿ ಚುಙ್ಕ ಚುಕ್ಕ ಎಂದೂ, ಮಲಯಾಳಂನಲ್ಲಿ ಚುಂಗ ಎಂದೂ ಆಗುತ್ತದೆ.  ಈಗ ಸರಕಾರವು ಮಾಡುವ ರೀತಿಯಲ್ಲಿ ಹಿಂದೆ ರಾಜನೂ ಸುಂಕ ವಿಧಿಸುತ್ತಿದ್ದ. ಇದು ಪ್ರಾಚೀನ ಪದ್ಧತಿ. ಖವರ್ಷಕ್ಕೆ ಮರದಲೊಂದಡಕೆ ಎಲೆಯ ಸುಂಕಖ ಎಂಬ ಮಾತು ಹನ್ನೊಂದನೇ ಶತಮಾನದ ಶಾಸನದಲ್ಲಿದೆ.
ಸುಂಕ ವಸೂಲಿಗೆಂದು ನೌಕರರಿರುತ್ತಿದ್ದರು, ನಿರ್ದಿಷ್ಟ ಜಾಗವೂ ಇರುತ್ತಿತ್ತು. "ಸುಂಕವೆರ್ಗಡೆ ಮಲ್ಲಿಯಣ ದಂಡನಾಯಕ"ನ ಉಲ್ಲೇಖ ಹತ್ತನೆಯ ಶತಮಾನದ ಶಾಸನದಲ್ಲಿದೆ. ಇದು ಮುಂದೆ ನಡಗನ್ನಡದಲ್ಲಿ 'ಸುಂಕದ ಹೆಗ್ಗಡೆ' ಎಂದಾಗಿದೆ "ಸುಂಕದ ಹೆಗ್ಗಡೆ ಬೊಪ್ಪಡೆ ಒಳಗಾಗಿ" ಎಂಬ ಪ್ರಯೋಗವು ಹನ್ನೆರಡನೆಯ ಶತಮಾನದ ಶಾಸನದಲ್ಲಿದೆ. ಹೆಸರೇ ಸೂಚಿಸುವಂತೆ ಈ ಹೆಗ್ಗಡೆ ಪ್ರಾಯಶಃ ಹಿರಿಯ ಅಧಿಕಾರಿ. ಆದರೆ ಸಾಮಾನ್ಯ ನೌಕರನನ್ನು 'ಚಾವುಂಡರಾಯಪುರಾಣ'ವು 'ಸುಂಕಿ' ಎನ್ನುತ್ತದೆ ("ಮೊಕ್ಕಳಂ ಒಡಮೆವಡೆದು ಪೊಳಲಂ ಪುಗುವಲ್ಲಿ ಸುಂಕಿಗಳ್ಗಳ್ಕಿ ಮಗುಳ್ದು ಬಂದು"). 'ಸುಂಕಿಗ' ಎಂಬುದು ಇದರ ಇನ್ನೊಂದು ರೂಪ. ಊರಲ್ಲಿನ ಅಂಗಡಿ ಮುಂತಾದವುಗಳಿಂದ ಸುಂಕ ವಸೂಲು ಮಾಡುತ್ತಿದ್ದವನೇ 'ಹೊಳಲ ಸುಂಕಿಗ'. ಈ ಮಾತನ್ನು ಮಹಾದೇವಿಯಕ್ಕ ಬಳಸುತ್ತಾಳೆ. ಸುಂಕದ ಬಂಕಣ್ಣ ಎಂಬೊಬ್ಬ ವಚನಕಾರ ತನ್ನೊಂದು ವಚನದಲ್ಲಿ 'ಹೊರೆಸುಂಕ' 'ಪಸರಸುಂಕ'ಗಳನ್ನು (ಪಸರ=ಅಂಗಡಿ) ಹೆಸರಿಸುತ್ತಾನೆ. ಸುಂಕ ವಸೂಲಿ ಮಾಡುವುದೇ 'ಸುಂಕಂಗೊಳ್' ("ಒದ್ದಾಯನಮಹಾರಾಜನ ಬಿಂಕಮಂ ಸುಂಕಂಗೊಂಡು"- ನಯಸೇನನ 'ಧರ್ಮಾಮೃತ').
ಸುಂಕ ವಸೂಲು ಮಾಡುವ ನಿಗದಿತ ಜಾಗ ಅಥವಾ ಉಕ್ಕಡವೇ 'ಸುಂಕದ ಕಟ್ಟೆ'. ಈ ಪದವು ಈಚಿನದೆಂದು ತೋರುತ್ತದೆ. ಹಿಂದೆ ಇಂತಹ ಜಾಗವನ್ನು 'ಡಂಗ' ಎಂದು ಕರೆಯುತ್ತಿದ್ದರು. ಇದನ್ನು ಹತ್ತೊಂಬತ್ತನೆ ಶತಮಾನದ ಶಾಸನವೊಂದು 'ಸುಂಕಠಾಣೆ' ಎನ್ನುತ್ತದೆ. ಸುಂಕ ಕೊಟ್ಟವರಿಗೆ ರಸೀದಿಯನ್ನು ಕೊಡುತ್ತಿದ್ದರು. ಇದನ್ನು ಕೋಲಶಾಂತಯ್ಯ ಎಂಬ ವಚನಕಾರನು 'ಒಪ್ಪದ ಚೀಟು' (ಒಪ್ಪ=ಸಹಿ) ಎನ್ನುತ್ತಾನೆ. ಸುಂಕವನ್ನು ತಪ್ಪಿಸಿಕೊಳ್ಳಲು ಕೆಲವರು ರಾತ್ರಿ ಕಾಲದಲ್ಲಿ ಪಯಣಿಸುತ್ತಿದ್ದರು ("ಇರುಳೆಲ್ಲ ನಡೆದನಾ ಸುಂಕಕಂಜಿ" - ಜೇಡರ ದಾಸಿಮಯ್ಯನ ವಚನ). "ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು .. .. ಕಳ್ಳನಾಣ್ಯವ ಸಲ್ಲಲೀಯರಯ್ಯಾ" ಎಂಬ ಬಸವಣ್ಣನ ಮಾತಿನಲ್ಲಿ ಸುಂಕ ಕೊಡುವಾಗ ಕಳ್ಳನಾಣ್ಯದ ಚಲಾವಣೆಗೆ ಪ್ರಯತ್ನಿಸುತ್ತಿದ್ದ ಸೂಚನೆಯಿದೆ.
=====
ಸೋಗೆ: ಇದು ತೋಕೆ ಎಂಬುದರ ವ್ಯತ್ಯಸ್ತ ರೂಪ. ದ್ರಾವಿಡ ಪದವಾದ ಇದು ತಮಿಳಿನಲ್ಲಿ 'ತೋಕೈ' ಎಂದೂ, ಮಲಯಾಳಂ ಹಾಗೂ ತೆಲುಗುಗಳಲ್ಲಿ ತೋಕ ಎಂದೂ, ತುಳುವಿನಲ್ಲಿ ಸೋಗೆ ಎಂದೂ ಆಗುತ್ತದೆ. ತೋಕೆ ಎಂದರೆ ಬಾಲ ಎಂಬರ್ಥವಿದೆ. ತೋಕೆಗೋಧಿ ಎಂಬುದು ನೀಳವಾದ ಗೋಧಿಯ ಒಂದು ಪ್ರಭೇದ. ಸೋಗೆ ಎಂದರೆ ನವಿಲಿನ ನೀಳವಾದ ಪುಚ್ಛ. ("ಸೋಗೆಯಂ ಪರಪಿ .. .. ತಾಂಡವಮೆಸೆದುದು" - 'ಆದಿಪುರಾಣ'). ನವಿಲುಗರಿಯೇ 'ಸೋಗೆ' ("ಮೊಗಮಂ ತಾವರೆ ಕಣ್ಣಂ ಉತ್ಪಳದಳಂ ಧಮ್ಮಿಲ್ಲಮಂ ಸೋಗೆ .. .. ಪೋಲ್ತುವು" 'ಆದಿಪುರಾಣ'). ಸೋಗೆಯನ್ನು ಹರಹಿ ನರ್ತಿಸುವ ಗಂಡುನವಿಲನ್ನೂ 'ಸೋಗೆ' ಎಂಬ ಪದದಿಂದ ನಿರ್ದೇಶಿಸುತ್ತಾರೆ: "ಕಾರ್ಗಾಲದ ಸೋಗೆಯಂತೆ ಸೊಗಯಿಸೆ" ಎಂಬುದು 'ಪಂಪಭಾರತ'ದ ಮಾತು. ಆದರೆ ಅದನ್ನು 'ಸೋಗೆನವಿಲು' ಎಂದೂ ಕರೆಯುವುದುಂಟು ("ಸೋಗೆನವಿಲ್ ಒಯ್ಯನೆ ಕರ್ಕಡೆಗಾಸಿಯಾಗಿ ಪಾರುವುದುಂ" - 'ಪಂಪಭಾರತ'). ಹೆಣ್ಣು ನವಿಲನ್ನು 'ಸೋಗೆವೆಣ್' ಎಂದು ಎರಡನೆಯ ಗುಣವರ್ಮನ 'ಪುಷ್ಪದಂತ ಪುರಾಣ'ದಲ್ಲಿ ಕರೆದಿದೆ ("ಮಿಂಚಿನಂಚೆಯಂ ಪಳಂಚಲೆಯದಂಚೆಯಿಲ್ಲ ಕುಮಾರರ ಮಯೂರಮಂ ಕೂರಿಸದ ಸೋಗೆವೆಣ್ಣಿಲ್ಲ").
ತೆಂಗು, ತಾಳೆ, ಅಡಿಕೆ ಮುಂತಾದ ಮರಗಳ ಗರಿಯನ್ನೂ 'ಸೋಗೆ' ಎನ್ನುತ್ತಾರೆ. "ಎಸೆವ ಸೋಗೆಗಳ ಸೀಗುರಿಗಳ ಮಿಗೆ ಮೆಱೆವ ತೆಂಗುಗಳ ಸತ್ತಿಗೆಗಳಿಂ" ಎಂಬುದು ಪದ್ಮಣಾಂಕನ 'ಪದ್ಮರಾಜ ಪುರಾಣ'ದ ಮಾತು. ಅಂತೆಯೇ ಕಬ್ಬಿನ ನೀಳವಾದ ಗರಿಗಳೂ ಸೋಗೆಗಳೇ ("ಬೆಳೆದ ರಸದಾಳಿಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ ಪರ್ವುತಿಹುದು" 'ಜೈಮಿನಿ ಭಾರತ'). ನೀಳವಾದ ಜೊಂಪೆಯನ್ನೂ ಈ ಹೆಸರಿನಿಂದಲೇ ಸೂಚಿಸುವ ವಾಡಿಕೆಯಿದೆ ("ಕರುಳ ಸೋಗೆಯುಂ ಕವಿದವವನಿಗಾ ಯತಿಪತಿಯಾ" - ಆಚಣ್ಣನ 'ವರ್ಧಮಾನ ಪುರಾಣ'). ಉದ್ದವಾದ ತುರುಬು 'ಸೋಗೆದುರುಬು' ("ಸೋಗೆದುರುಭಿನ ಸರಸವಚನದ" 'ತೊರವೆ ರಾಮಾಯಣ'). ಸೀರೆಯ ನೀಳವಾದ ಸೆರಗೂ ಸೋಗೆಯೇ ("ಅಚ್ಚರಸೆಯ .. .. ಎಳಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ" ('ಆದಿಪುರಾಣ'). ಇದನ್ನು ಜನ್ನ 'ಸೋಗೆನಿ' ಎನ್ನುತ್ತಾನೆ ("ಸೆಳೆದು ಮರಳ್ಚಿ ಸೋಗೆನಿಯಂ .. .. ಮಳಯಸಮೀರಣಂ ಸರಸವಾಡಿದಂ" 'ಅನಂತನಾಥಪುರಾಣ'. ಇದಕ್ಕೆ ಮಡಿಲು ಎಂಬರ್ಥವೂ ಇದೆ ("ಶುಕ್ತಿಕೆಯ ಸೋಗೆಯೊಳ್ ನವಮುಕ್ತಾಫಲದಂತೆ"  - 'ಅನಂತನಾಥ ಪುರಾಣ').
=====
ಸ್ಥಳ: ಇದು ಸಂಸ್ಕೃತದ 'ಸ್ಥಲ' ಎಂಬುದರ ಕನ್ನಡ ರೂಪ; ಸಂಸ್ಕೃತದ ಪದಗಳಲ್ಲಿನ ಲಕಾರಕ್ಕೆ ಬದಲಾಗಿ ಅನೇಕ ವೇಳೆ ಕನ್ನಡದಲ್ಲಿ ಳಕಾರ ಬರುತ್ತದೆ (ಇದನ್ನು ಕ್ಷಳ ಎನ್ನುತ್ತಾರೆ). ಈ ಶಬ್ದದ ಮೂಲಾರ್ಥ ಭೂಮಿ, ಪ್ರದೇಶ ಎಂದು. ದುರ್ಗಸಿಂಹನು ತನ್ನ 'ಕರ್ಣಾಟಕ ಪಂಚತಂತ್ರ'ದಲ್ಲಿ ಮಹಾಸ್ಥಲವನ್ನು ಹೆಸರಿಸುತ್ತಾನೆ. "ಸರೋವರಪರಿವೃತಮಪ್ಪ ಭೂಪ್ರದೇಶಂ ಮಹಾಸ್ಥಲಮೆಂಬುದಕ್ಕುಂ" ಎಂಬುದು ಅವನ ವಿವರಣೆ; ಇದು ಜಲದುರ್ಗದ ಒಂದು ಪ್ರಭೇದ. ನೆಲದಾವರೆಯನ್ನು ನಾಗಚಂದ್ರನ 'ಮಲ್ಲಿನಾಥ ಪುರಾಣ'ವು 'ಸ್ಥಲಕಮಳ' ಎಂದು ಕರೆಯುತ್ತದೆ ("ಜಳಕಮಳಂ ಮೇಣ್ ಸ್ಥಲಕಮಳಮಲ್ತು") ಇದೇ ಕಮಲಭವನ 'ಶಾಂತೀಶ್ವರಪುರಾಣ'ದಲ್ಲಿನ 'ಸ್ಥಲನಳಿನಿ' ("ಸ್ಥಳನಳಿನೀಮಯಂ ಅದು ಆ ವಿಷಯದಿಳೆಯೆಲ್ಲಂ"). ಅಗ್ಗಳನ 'ಚಂದ್ರಪ್ರಭಪುರಾಣ'ದಲ್ಲಿ 'ಸ್ಥಲೀಕ' ಎಂದರೆ ನೆಲಗಟ್ಟು ("ನೀಲಬದ್ಧ ಸ್ಥಲೀಕಂ ಮರಕತಜಗತೀ ಮಂಡಲಂ"). ನೆಲದ ಮೇಲೆ ವ್ಯಾಪಾರಕ್ಕೆಂದು ಮಾಡುವ ಪ್ರಯಾಣ 'ಸ್ಥಳಯಾತ್ರೆ' ("ಸ್ಥಳಯಾತ್ರೆಗೆ ಪೋಗಿ ಸಂಖ್ಯಾತೀತ ಸಾರಧನಮಂ ಪಡೆದು ಬರ್ಪೆಡೆಯೊಳ್" - ಪೊನ್ನನ 'ಶಾಂತಿಪುರಾಣ').
ವೀರಶೈವದಲ್ಲಿ 'ಸ್ಥಲ' ಎಂಬುದು ಸಾಧಕಜೀವವು ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆಯ ಒಂದು ಹಂತ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಈ ಹಂತಗಳು ಆರು, ಒಟ್ಟಾರೆ ಇವನ್ನು ಷಟ್ಸ್ಥಲಗಳೆಂದು ಸೂಚಿಸುವುದು ರೂಢಿ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಇವು. ಇವುಗಳನ್ನು ಪುನಃ ಒಳವಿಂಗಡಣೆ ಮಾಡಿ ನೂರೊಂದುಸ್ಥಲ ಅಥವಾ ಏಕೋತ್ತರಶತಸ್ಥಲಗಳೆಂದೂ ಕರೆಯಲಾಗುತ್ತದೆ. ಹರಿಹರನು ತನ್ನ ದೀರ್ಘ ರಗಳೆಗಳ ವಿಭಾಗಗಳನ್ನು ಸ್ಥಲ ಎಂದೇ ಕರೆಯುತ್ತಾನೆ. ಪ್ರಾಯಶಃ ತನ್ನ ರಗಳೆಗಳ ನಾಯಕರು ಸಾಧಕರು, ಅವರ ಸಾಧನೆಯ ವಿವಿಧ ಘಟ್ಟಗಳನ್ನೇ ತನ್ನ ರಗಳೆ ವರ್ಣಿಸುವುದು ಎಂಬುದರಿಂದಾಗಿ ಅವನು ಈ ರೀತಿ ಕರೆದಿರಬಹುದು.
ಸ್ಥಳ ಎಂದರೆ ಈಗ ಜಾಗ (ಸೀಟ್) ಎಂಬರ್ಥವೂ ಬಂದಿದೆ; ರೈಲುಬಸ್ಸುಗಳಲ್ಲಿ 'ಸ್ಥಳ ಕಾದಿರಿಸುವ' ಪದ್ಧತಿಯಿದೆ. ಸ್ಥಳ ಊರನ್ನೂ ಸೂಚಿಸುತ್ತದೆ: "ನಿಮ್ಮ ಸ್ಥಳ ಯಾವುದು?"  ಎಂಬುದು ಸಾಮಾನ್ಯ ಪ್ರಶ್ನೆ. 'ಪರಸ್ಥಳದವರು' ಎಂಬಲ್ಲಿಯೂ ಇದೇ ಅರ್ಥವಿದೆ. ನಿರ್ದಿಷ್ಟ ಪ್ರದೇಶವಾಸಿಯನ್ನು 'ಸ್ಥಳವಂದಿಗ' 'ಸ್ಥಳೀಯ' ಎಂಬ ಶಬ್ದಗಳಿಂದ ಸೂಚಿಸುತ್ತೇವೆ. ಕಟ್ಟಡವನ್ನೋ ಮತ್ತೇನನ್ನೋ ನಿರ್ಮಿಸುವ ಮುನ್ನ 'ಸ್ಥಳ ಪರಿಶೀಲನೆ' ಮಾಡುವುದು ರೂಢಿ.
=====
ಹಗರಣ: ಇದು ಸಂಸ್ಕೃತದ ಪ್ರಕರಣ ಎಂಬ ಶಬ್ದದ ಕನ್ನಡ ರೂಪ. ಪ್ರಕರಣ>ಪಗರಣ>ಹಗರಣ ಎಂಬುದಾಗಿ ಬದಲಾಗಿದೆ. ಹಗರಣ ಮತ್ತು ಪ್ರಕರಣ ಈ ಎರಡೂ ಪದಗಳು ಕನ್ನಡದಲ್ಲೀಗ ಬಳಕೆಯಲ್ಲಿವೆ, ಆದರೆ ಭಿನ್ನ ಅರ್ಥಗಳಲ್ಲಿ. ಪಗರಣ ಎಂಬುದು ಹಳಗನ್ನಡದಲ್ಲಿ ಮಾತ್ರ ದೊರೆಯುತ್ತದೆ. ಪ್ರಕರಣ ಎಂಬುದು ಮೂಲಕತಃ ಹತ್ತು ರೂಪಕಗಳಲ್ಲಿನ ಒಂದು ಪ್ರಭೇದ; ಕಲ್ಪಿತ ವಸ್ತು, ಧೀರಪ್ರಶಾಂತ ಎಂಬ ಬಗೆಯ ನಾಯಕ, ಶೃಂಗಾರರಸಪ್ರಧಾನವಾದ ನಗೆನಾಟಕ ಎಂಬರ್ಥದಲ್ಲಿ ಕನ್ನಡ ಕಾವ್ಯಗಳಲ್ಲಿ ಈ ಶಬ್ದ ಪ್ರಯೋಗಗೊಂಡಿದೆ. ಈ ಅರ್ಥದಲ್ಲಿ 'ಕವಿರಾಜಮಾರ್ಗ'ದಲಿಯ್ಲೇ ಪಗರಣ ಎಂಬ ಶಬ್ದ ಪ್ರಯೋಗವಾಗಿದೆ ("ಪಗರಣದೊಳ್ ಉೞಿದ ಮೂಱುಂ ನಗಿಸುಗುಮಪ್ಪುದಱಿಂ ಅದೋಷಂ"). ವೀರಶ್ರೀ ಎಂಬ ವಿಷಾದಭರಿತಳನ್ನು ವಿಚಿತ್ರ ವೇಷದಿಂದ ಒಬ್ಬ ನಗಿಸುತ್ತಾನೆ: ಆಗ "ಬಾದುಬ್ಬೆಯ ಪರ್ವಮುಂ ಪಗರಣದಾಟಮುಂ ಆದುವು" ಎಂದು 'ವಡ್ಡಾರಾಧನೆ'ಯ 'ಕಾರ್ತಿಕಋಷಿಯ ಕತೆ'ಯಲ್ಲಿ ಹೇಳಿದೆ. ಇದು ಏನನ್ನು ಸೂಚಿಸುವುದೋ ಹೇಳುವುದು ಕಷ್ಟ; ಆದರೆ ಪಗರಣ ಎಂಬುದು ನಗಿಸುವಂಥದು ಎಂಬ ಅರ್ಥ ಸ್ಪಷ್ಟವಾಗಿದೆ. 'ಶಬ್ದಮಣಿದರ್ಪಣ'ದಲ್ಲಿ ನಾಳ್ಪಗರಣ ಮತ್ತು ರಕ್ಕಸವಗರಣ ಎಂಬ ಪ್ರಭೇದಗಳನ್ನು ಹೇಳಿದೆ. ಹೀಗೆ ವೇಷ ಹಾಕುವವನೇ 'ಪಗರಣಿಗ'; ಈ ಪ್ರಯೋಗವೂ ಅಲ್ಲಿಯೇ ಇದೆ. 'ಪಗರಣದರಸ' ಎಂಬ ಪ್ರಯೋಗವು ಪಂಪನ 'ಆದಿಪುರಾಣ'ದಲ್ಲಿ ವೇಷಧಾರಿ ಎಂಬ ಅರ್ಥದಲ್ಲಿ ಬಂದಿದೆ ("ಬೆಸೆವವರ್ ಅರಸದೆಂತೊ ಪಗರಣದರಸಂ"). ಹಾಗೆಯೇ ಪಗರಣ ಎಂಬುದು ಕೃತಕ, ಕೃತ್ರಿಮ ಎಂಬರ್ಥದಲ್ಲಿಯೂ ಬಳಕೆಯಲ್ಲಿತ್ತು. 'ಧರ್ಮಾಮೃತ'ದಲ್ಲಿ 'ಪಗರಣದಾನೆ' ಎಂಬ ಪ್ರಯೋಗವಿದೆ.
ಈಗ ಪ್ರಕರಣ ಎಂಬ ಶಬ್ದವು ಪ್ರಸಂಗ ಅಥವಾ ಘಟನೆ ಎಂಬ ಸರಳ ಅರ್ಥದಲ್ಲಿ ಬಳಕೆಯಲ್ಲಿದ್ದರೂ, ಹಗರಣ ಎಂಬುದು ಮಾತ್ರ ಮೋಸ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಅಕ್ಕಮಹಾದೇವಿಯು 'ನಗೆಹಗರಣ' (ಪ್ರಾಯಶಃ ನಗೆಪಾಟಲು)ದ ಬಗ್ಗೆ ಪ್ರಸ್ತಾಪಿಸುತ್ತಾಳೆ. ಈ ಅರ್ಥದಲ್ಲಿ ಈ ಶಬ್ದವನ್ನು ಪುರಂದರದಾಸರೂ ಬಳಸುತ್ತಾರೆ (ನಗೆಯು ಬರುತಿದೆ .. .. ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು). ಈಗಂತೂ ಈ ಶಬ್ದ ಇಂಗ್ಲಿಷ್‍ನ  scam ಎಂಬರ್ಥದಲ್ಲಿ ಬಳಕೆಯಾಗುತ್ತಿದೆ.
=====
ಹಗಲು: ಇದರ ಮೂಲರೂಪ 'ಪಗಲ್'. ತಮಿಳು, ಮಲಯಾಳಂಗಳಲ್ಲಿ ಇದು 'ಪಕಲ್', ತೆಲುಗಿನಲ್ಲಿ 'ಪಗಲು' 'ಪವಲು' ತುಳುವಿನಲ್ಲಿ 'ಪಗೆಲ್' ಎಂದಾಗುತ್ತದೆ. ಇದರ ಅರ್ಥ ದಿವಸ ಎಂದು ("ದಿವಸಂ ದಿನಂ .. .. ಪಗಲ್" - ನಾಗವರ್ಮನ 'ಅಭಿಧಾನ ವಸ್ತುಕೋಶ'). ಸೂರ್ಯನನ್ನು ಕೆಲವು ಕಾವ್ಯಗಳು 'ಪಗಲಾಣ್ಮ' ಎನ್ನುತ್ತವೆ ("ಪಗಲಾಣ್ಮನ ಮೆಯ್ ಬಿಸುಪೇ ಮಾಗಿ ಚೆಚ್ಚರದೊಳೆ ಪಾ" - ಆಂಡಯ್ಯನ 'ಕಬ್ಬಿಗರ ಕಾವ'). ಸೂರ್ಯನನ್ನು ಸೋಮದೇವನ 'ಉದ್ಭಟಕಾವ್ಯವು' 'ಪಗಲೆಱೆಯ' ಎನ್ನುತ್ತದೆ ("ಪಗಲೆರಙೆಯನುದಯಮಂ ಬಯಸಿ ಕಡು ಪೆರ್ಚುತುಂ"). ಉಲ್ಕೆಯನ್ನು ಕಾವ್ಯಗಳು ಪಗಲುಳ್ಕ ಎನ್ನುತ್ತವೆ ("ಮಿಱುಗಿದುವು ಪಗಲುಳ್ಕಂಗಳ್ ದೆಸೆಯೊಳ್" - ಅಗ್ಗಳನ 'ಚಂದ್ರಪ್ರಭ ಪುರಾಣ'). ಇರುಳುಪಗಲು ನಿರಂತರೆಯನ್ನು ಸೂಚಿಸುವ ಸಮಾಸಪದ ("ನೆನೆದಿರುಳುಂ ಪಗಲುಂ ನಿನ್ನನೆ" - 'ಕವಿರಾಜಮಾರ್ಗ'). ನಾಗಚಂದ್ರನ 'ಪಂಪರಾಮಾಯಣ'ವು ದಿನದ ಬೆಳಕನ್ನು 'ಪಗಲ ಸಿರಿ' ಎಂದು ವರ್ಣಿಸುತ್ತದೆ ("ಪಗಲಸಿರಿಗೆ ಕಣ್ದೆಱವಿ ಮಾಡೆ").
ನಡುಗನ್ನಡ-ಹೊಸಗನ್ನಡಗಳಲ್ಲಿ 'ಪಗಲು' 'ಹಗಲು' ಎಂದಾಗುತ್ತದೆ. ದುರ್ಗಸಿಂಹನ 'ಪಂಚತಂತ್ರ'ದಲ್ಲಿಯೇ ಈ ರೂಪವಿದೆ ("ಹಗಲಿರುಳು, ಉದಯಬೈಗುಗಳು"). ಚೆನ್ನಬಸವಣ್ಣ ಹಗಲನ್ನು ವಾರ ಎನ್ನುತ್ತಾನೆ: "ಹಗಲೊಂದು ವಾರ ಇರುಳೊಂದು ವಾರ, ಭಕ್ತನೊದು ಕುಲ ಭವಿಯೊಂದು ಕುಲ". "ನಿಗಿನಿಗಿ ಮುಗಿಲು ನಿಗಿನಿಗಿ ಹಗಲು ಕೆಂಡವ ಕಾರುವದು" ಎಂಬುದು ಬೇಂದ್ರೆಯವರ ಸಾಲು. ಸೂರ್ಯನನ್ನು ಗೋವಿಂದಪೈ ತಮ್ಮ 'ಗೊಲ್ಗೊಥಾ'ದಲ್ಲಿ 'ಹಗಲಿನ ದೀಪ' ಎನ್ನುತ್ತಾರೆ ("ಹಗಲಿನ ದೀಪವಾರಿತೇನೆಂದು ನೆರೆದವರೆಲ್ಲರೆದೆ ನಡುಗೆ").
'ಹಗಲುಗನಸು' ಎಚ್ಚರಸ್ಥಿತಿಯಲ್ಲಿ ಮಾಡಿಕೊಳ್ಳುವ ರಮ್ಯಕಲ್ಪನೆ. 'ಹಗಲುಗನಸುಗಳು' ಎಂಬುದು ಎ.ಎನ್. ಮೂರ್ತಿರಾಯರ ಸುಂದರವಾದ ಲಲಿತಪ್ರಬಂಧ. ಈ ಶಬ್ದವನ್ನು ಭ್ರಮೆ, ಸುಳ್ಳು, ವ್ಯರ್ಥಕಲ್ಪನೆ ಎಂಬರ್ಥದಲ್ಲಿಯೂ ಬಳಸುತ್ತೇವೆ. 'ಹಗಲುವೇಷದವರು' ಎಂಬ ಒಂದು ಪಂಗಡವು ವೇಷ ಹಾಕಿ ಜೀವನ ನಡೆಸುವವರು. ಎಲ್ಲರಿಗೂ ಗೊತ್ತಾಗುವ ಹಾಗೆಯೇ ಮಾಡುವ ಮೋಸವನ್ನು 'ಹಗಲು ದರೋಡೆ' ಎನ್ನುತ್ತಾರೆ.
=====
ಹಣತೆ: ಪ್ರಾಯಶಃ ಇದು ಸಂಸ್ಕೃತದ 'ಪ್ರಣಿತ' ಎಂಬ ಶಬ್ದದ ತದ್ಭವ.; 'ಪ್ರಣೀತಾ'ದ ತದ್ಭವ ಎಂದೂ ಕೆಲವರು ಹೇಳುತ್ತಾರೆ.  "ಪ್ರಣಿತಃ ಸಂಸ್ಕೃತೋನಲಃ" (ಮಂತ್ರದಿಂದ ಸಂಸ್ಕರಿಸಲ್ಪಟ್ಟ ಅಗ್ನಿ) ಎಂದು 'ಅಮರಕೋಶ'ವು ಅರ್ಥ ನೀಡುತ್ತದೆ. ಕನ್ನಡದಲ್ಲಿ ಇದು ಪಣತಿ, ಪಣಿತೆ, ಪ್ರಣತಿ, ಪ್ರಣತೆ, ಹಣತೆ ಮುಂತಾದ ಹಲವು ರೂಪಗಳನ್ನು ತಾಳುತ್ತದೆ; ಮಣ್ಣಿನ ಅಥವಾ ಲೋಹದ ಸೊಡಲು ಎಂಬುದು ಇದರ ಅರ್ಥ. ಈ ಶಬ್ದ ಹನ್ನೆರಡನೆಯ ಶತಮಾನದಿಂದೀಚೆಗೆ ವ್ಯಾಪಕ ಬಳಕೆಗೆ ಬಂದಿರಬಹುದು; ಏಕೆಂದರೆ ಪ್ರಾಚೀನ ಚಂಪೂ ಕಾವ್ಯಗಳಲ್ಲಿ ಈ ಯಾವ ರೂಪಗಳೂ ಈ ಅರ್ಥದಲ್ಲಿ ದೊರೆಯುವುದಿಲ್ಲ. ಆದರೆ ಕ್ರಿಶ 1112 ರಚಿತವಾದ ನಯಸೇನನ 'ಧರ್ಮಾಮೃತ'ದಲ್ಲಿ ಮಾತ್ರ "ಹಣಿತೆಯೊಳ್ ಕೂಡಿ ಬತ್ತಿಯಿಂದೆಣ್ಣೆಯಿಂದಂ ಬೆಂಕಿಯಿಂದಂ ಬೆಳಗಿಂದಂ ಸೊಡರೆಂತೊಪ್ಪುಗುಂ" ಎಂಬ ಉಪಮೆಯೊಂದು ದೊರೆಯುತ್ತದೆ. ವಚನಗಳಲ್ಲಿ ಈ ಶಬ್ದದ ವಿವಿಧ ರೂಪಗಳು ಬಳಕೆಗೊಂಡಿವೆ. "ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬೊ ತೈಲವನೆರೆದು" ಎಂದು ಆರಂಭವಾಗುವ ಅಲ್ಲಮನ ವಚನ ಸುಪ್ರಸಿದ್ಧವಾದುದು. "ಪ್ರಣಿತೆಯೂ ಇದೆ, ಬತ್ತಿಯೂ ಇದೆ ಜ್ಯೋತಿಯ ಬೆಳಗುವರೆ ತೈಲವಿಲ್ಲದೆ ಎಂತಪ್ಪುದಯ್ಯಾ" ಎಂಬುದು ಅಲ್ಲಮನ ಮತ್ತೊಂದು ವಚನ. "ಮೂಗಿನ ಕಪ್ಪು ಪಣಿತೆಯ ಕತ್ತಲೆ ಜ್ಯೋತಿಯೆಂಬರು" ಎಂಬುದು ಸರ್ವಜ್ಞನ ಒಂದು ತ್ರಿಪದಿಯ ಸಾಲು. ಅಲ್ಲದೆ, ಹಳಗನ್ನಡ ಪದಗಳ ಆದಿಯ ಪಕಾರ ನಡುಗನ್ನಡದಲ್ಲಿ ಹಕಾರವಾದಂತೆ ಇಲ್ಲಿಯೂ ಆಗಿ, ಹಣತೆ ಎಂದಾಗುತ್ತದೆ. ಹಳಗನ್ನಡ ವ್ಯಾಕರಣಗ್ರಂಥವಾದ 'ಶಬ್ದಮಣಿದರ್ಪಣ'ದಲ್ಲಿಯೇ "ಪ್ರಣಿತ=ಹಣತೆ" ಎಂದು ಅರ್ಥ ಕೊಟ್ಟಿದೆ. ಈ ಗ್ರಂಥದ ಕಾಲ ಹದಿಮೂರನೆಯ ಶತಮಾನದ ಕೊನೆ: ಆ ಹೊತ್ತಿಗೆ ವಚನ ಚಳವಳಿ ನಡೆದಿತ್ತು. ಅದರ ಪ್ರಭಾವದಿಂದ ಆ ಪದ ಇಲ್ಲಿ ಕಾಣಿಸಿಕೊಂಡಿರಬೇಕು. ಅಂಬಿಗರ ಚೌಡಯ್ಯನ ವಚನವೊಂದರಲ್ಲಿ 'ಹಣತಿ' ಎಂಬ ರೂಪ ದೊರೆಯುತ್ತದೆ: "ಹಣತಿ ನೆಕ್ಕುವ ಮಠಪತಿ ಪಂಚಮಠಕ್ಕೆ ಸಲ್ಲ" ಎಂಬುದು ಅಲ್ಲಿನ ಮಾತು.
 ಹೊಸಗನ್ನಡದಲ್ಲಿ 'ಹಣತೆ' ಎಂಬ ರೂಪದ ಬಳಕೆ ಸಾಮಾನ್ಯ. "ಗುಡಿಕತ್ತಲೆಯೊಳು ಹಣತೆಗಳೆಸೆದಿವೆ ತಮವೇ ಪುಷ್ಪಿತವಾದಂತೆ" ಎಂಬ ಚಿತ್ರ ಪುತಿನ ಅವರ 'ಯದುಗಿರಿಯ ಮೌನವಿಕಾಸ' ಕವಿತೆಯದು. "ಎಣ್ಣೆ ತೀರುತ್ತಲಿರೆ ಒಡಕು ಹಣತೆಯ ಮುಂದೆ ಬತ್ತಿ ಹೊಸೆತ" ಎಂಬ ವ್ಯರ್ಥತೆಯ ಪ್ರತೀಕ ಗೋಪಾಲಕೃಷ್ಣ ಅಡಿಗರ 'ಭೂಮಿಗೀತ' ಕವನದಲ್ಲಿ ಬರುತ್ತದೆ. ಚೆನ್ನವೀರ ಕಣವಿಯವರ 'ನೆಲಮುಗಿಲು' ಕವನದ "ಹಳತು ಹೊಸತನು ಹಿಂಜಿ ಹೊಸೆದು ಹೊತ್ತಿಸಿ ಹಿಡಿದ ಶಾಂತಿಪಣತಿ" ಎಂಬಲ್ಲಿ ಹಳೆಯ ರೂಪವೇ ಇದೆ.
=====
ಹಸಿವು: ಇದು ಪಸಿ ಎಂಬ ಧಾತುವಿನಿಂದ ರೂಪಿತವಾದ ಶಬ್ದ. ಪಸಿ ಎಂದರೆ ಹಸಿವಾಗುವುದು: "ಪೆಣ್ಬುಲಿ ಪಲವು ದಿವಸಂ ಆಹಾರಮಂ ಪೆಱದೆ ಪಸಿದು ಮಮ್ಮಲ ಮಱುಗುತ್ತಿರ್ದು" - ಎಂಬುದು 'ವಡ್ಡಾರಾಧನೆ'ಯ ಪ್ರಯೋಗ. "ಕ್ಷುಧಾಶನಾಯಾಗ್ರಾಸೇಚ್ಛಂ ಕ್ಷುದ್ಭುಭುಕ್ಷೆಗಳ್ ಪಸಿವೆನಿಕುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ವಿಚಿತ್ರಮೇಂ ಕಾಣಲೊಡಂ ಪಸಿವುಂ ತೃಷೆಯುಂ ಕೆಡುವುದು ರಸಋದ್ಧಿಯಿನಾ ಮುನೀಂದ್ರಚಂದ್ರನ ಮುಖಮಂ" - ಜನ್ನನ 'ಅನಂತನಾಥ ಪುರಾಣ'. "ಭದ್ರಬಾಹು ಭಟ್ಟಾರರ್ .. .. ಪಲವು ದಿವಸದಿಂದಂ ಪಸಿವುಂ ನೀಱೞ್ಕೆಮಂ ಸೈರಿಸಿ" - 'ವಡ್ಡಾರಾಧನೆ'.
ನಡುಗನ್ನಡದಲ್ಲಿ ಹಸಿವು ಎಂಬ ರೂಪ ಕಾಣಿಸಿಕೊಂಡಿತು. ಆದರೆ 'ಕರ್ಣಾಟಕ ಪಂಚತಂತ್ರಕಿದಲ್ಲಿ ಈ ಎರಡು ರೂಪಗಳೂ ದೊರೆಯುತ್ತವೆ: "ಅಂತ್ಪಡಂ ನಿನ್ನ ಪಸಿವು ಕೆಟ್ಟು ಬಲಮಪ್ಪನ್ನೆವರಂ ಕಿರುಗಪ್ಪೆಗಳಂ ತಿನುತಿರು" ಹಾಗೂ "ಹಸಿವು ತೃಷೆಯುಳ್ಳಾತನು, ಕುರುಡನು ಆಗ ಹಗೆಯ ಮನೆಗೆ ತಿರಿದುಂಬುದಕ್ಕೆ ಹೋಹನು". "ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ ವಿಷವೇಱಿತ್ತಯ್ಯಾ ಆಪಾದಮಸ್ತಕಕ್ಕೆ; ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ" ಎಂಬ ವಚನದಲ್ಲಿ ಜೇಡರ ದಾಸಿಮಯ್ಯನು ಹಸಿವಿನ ವಿರಾಡ್ರೂಪ ಹಾಗೂ ಅನ್ನದ ನಿತ್ಯಸಮಸ್ಯೆಯನ್ನು ಅದ್ಭುತವಾಗಿ ಚಿತ್ರಿಸುತ್ತಾನೆ. "ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು, ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು; ದೇವರಿಲ್ಲ, ಭಕ್ತರಿಲ್ಲ" ಎಂಬ ಮಾರ್ಮಿಕವಾದ ಮಾತು ಅಲ್ಲಮಪ್ರಭುವಿನದು. "ಹಸಿವಾದಡುಂಬುದನು ಸತಿಯ ಸಂಭೋಗವನು ಆನಾಗಿ ನೀ ಮಾಡೆಂಬವರುಂಟೆ?" ಎಂಬ ಮರ್ಮಛೇದಕ ಮಾತು ಬಸವಣ್ಣನದು. "ಹಸಿವೆ ನೀನು ನಿಲ್ಲು ನಿಲ್ಲು; ತೃಷೆಯೇ ನೀನು ನಿಲ್ಲು ನಿಲ್ಲು .. .. ನಾನು ಚೆನ್ನಮಲ್ಲಿಕಾರ್ಜುನನ ಅವಸರದ ಓಲೆಯನೊಯ್ಯುತ್ತಿದ್ದೇನೆ" ಎಂದು ಸಹಜಪ್ರವೃತ್ತಿಗಳಿಗೆ ತಡೆಯೊಡ್ಡುವವಳು ಮಹಾದೇವಿಯಕ್ಕ. "ಜಿಂಕೆಗೂ ಹಸಿವು: ಹುಲಿಗೂ ಹಸಿವು" ಎಂಬುದು ಕೆಎಸ್ನ ಅವರ 'ತೆರೆದ ಬಾಗಿಲ' ಕವನದ ಸಾಲು. ಹಸಿವೆ ಎಂಬ ರೂಪವೂ ಇದೆ: "ಗಂಟಲೊತ್ತಿತು ಹಸಿವೆ - ಹೆಣ್ಣುಸಿರು ಹೊರಳಾಡಿತು" ಎಂಬುದು ಕವೆಂ ರಾಜಗೋಪಾಲರ 'ಕರ್ಮಕಾಂಡ' ಕವಿತೆಯ ಸಾಲು. ಹಸಿವು ಎಂಬುದು ರೂಪಕವಾಗಿ ಎಲ್ಲ ತರದ ಬಯಕೆಗಳನ್ನೂ ಸಂಕೇತಿಸುತ್ತದೆ.
=====
ಹಾಡು: ಇದು ಮೂಲತಃ ಪಾಡು ಎಂಬ ರೂಪದ್ದು; ರಾಗಬದ್ಧವಾಗಿ ಸಂಗೀತ ಹೇಳು ಎಂದು ಕ್ರಿಯಾಪದವಾಗಿಯೂ ಗೀತ ಎಂಬ ನಾಮವಾಚಕವಾಗಿಯೂ ಬಳಕೆಯಲ್ಲಿದೆ. ಇದೊಂದು ದ್ರಾವಿಡ ಪದ. ತಮಿಳು ಮತ್ತು ಮಲಯಾಳಂಗಳಲ್ಲಿ ಪಾಟು, ತೆಲುಗಿನಲ್ಲಿ ಕ್ರಿಯಾಪದವಾಗಿ ಪಾಡು ಮತ್ತು ನಾಮರೂಪದಲ್ಲಿ ಪಾಟ ಎಂಬ ರೂಪಗಳನ್ನು ತಾಳುತ್ತದೆ. ಹಳಗನ್ನಡದಲ್ಲಿ ಪಾಟ ಎಂಬುದು ಹಾಡು, ಹಾಡಿಕೆ ಎಂಬರ್ಥದಲ್ಲಿ ಬಳಕೆಯಾಗಿದೆ; ರನ್ನನ 'ಅಜಿತಪುರಾಣ'ದಲ್ಲಿ "ಪಾಟಂ ಕಾಮುಕಗಣಮೃಗಕೋಟಿಗೆ ಮನಸಿಜನ ಗೋರಿಗಾಡುವ ಪಾಟಂ" ಎಂಬ ಸಾಲಿದೆ. ಹಾಗೆಯೇ ಪಾಡುಂಗಾಱ, ಪಾಡುಕಾಱ, ಪಾಡುಂಗಾಱಿಕೆ ಮುಂತಾದ ಸಾಧಿತರೂಪಗಳು ದೊರೆಯುತ್ತವೆ. ಹೊಸಗನ್ನಡದಲ್ಲಿ ಇವು ಹಾಡಿಕೆ, ಹಾಡುಗಾರ, ಹಾಡುಗಾರ್ತಿ, ಹಾಡುಗಾರಿಕೆ ಎಂದಾಗುತ್ತವೆ. ಕೋಗಿಲೆಯ ಹಾಡು ಎನ್ನುವಾಗ ಈ ಪದಕ್ಕೆ ಮಧುರಧ್ವನಿ ಎಂಬ ಅರ್ಥವುಂಟಾಗುತ್ತದೆ.
ಹಳಗನ್ನಡದ ಪಾಡು ಹೊಸಗನ್ನಡದಲ್ಲಿ ಹಾಡು ಎಂದಾಗಿ ಹಿಂದಿನ ಅರ್ಥಗಳನ್ನು ಮುಂದುವರೆಸಿಕೊಂಡು ಬಂದಿದ್ದರೂ, ಪಾಡು ಎಂಬ ಹಳೆಯ ರೂಪವೂ ಬಳಕೆಯಲ್ಲಿದೆ, ಆದರೆ ಬೇರೆಯ ಅರ್ಥದಲ್ಲಿ. ಪಾಡು ಎಂದರೆ ಕಷ್ಟ, ಕೋಟಲೆ ಎಂಬರ್ಥಗಳಿವೆ. ಬೇಂದ್ರೆಯವರ "ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ಹೇಳುವೆನು ರಸಿಕ ನಿನಗೆ; ಕಲ್ಕುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ" ಎಂಬ ಪ್ರಸಿದ್ಧವಾದ ಸಾಲುಗಳಲ್ಲಿ ಪಾಡು-ಹಾಡುಗಳ ಅರ್ಥವ್ಯತ್ಯಾಸ ಎದ್ದು ಕಾಣುತ್ತದೆ. ಆದರೆ ಹಾಡು ಎಂಬುದಕ್ಕೆ ಇಲ್ಲಿ ಒಳ್ಳೆಯದು, ಸತ್ವ ಎಂಬ ಅರ್ಥ ಬಂದಿದೆ. ಹಾಡುಗಬ್ಬ ಎಂಬುದು ರಾಗವಾಗಿ ಹೇಳಬಲ್ಲಂತಹ ಕಾವ್ಯವನ್ನು ಸೂಚಿಸುತ್ತದೆ.
ಪಾಡು ಎಂಬುದು ಕೆಲವು ಕಡೆ ಸುಸ್ಥಿತಿ, ಒಳ್ಳೆಯದು ಎಂಬರ್ಥಗಳಲ್ಲಿಯೂ ಬಳಕೆಯಲ್ಲಿದೆ. 'ಪಾಡೈತಿ' ಎಂದರೆ ಚೆನ್ನಾಗಿದೆ ಎಂಬರ್ಥ. 'ಪಾಡದೀರೇನ್ರೀಕ?' ಎಂಬುದು ಆರೋಗ್ಯ ವಿಚಾರಿಸುವ ಶಬ್ದ. 'ಅದ ಪಾಡಕ' ಎಬಂಥ ಕಡೆ ಆ ಶಬ್ದಕೆ ಚೆನ್ನ ಎಂಬರ್ಥ ಬರುತ್ತದೆ. ಹಾಗೆಯೇ ಕಷ್ಟ ಎಂಬರ್ಥವೂ ಇದೆ: ಪಾಡಚಾಕರಿ ಎಂದರೆ ಕಷ್ಟದ ಕೆಲಸ.
=====
ಹಾದರ: ಹಳಗನ್ನಡದಲ್ಲಿದು 'ಪಾದರ' ಎಂಬ ರೂಪವನ್ನು ಹೊಂದಿತ್ತು. ಇದು ಸಂಸ್ಕೃತದ 'ಪಾರದಾರ್ಯ' ಎಂಬ ಶಬ್ದದ ತದ್ಭವ. ಇದಕ್ಕೆ ಜಾರತನ ಎಂಬರ್ಥವಿದೆ. 'ಪರದಾರ' ಎಂದರೆ ಬೇರೆಯವನ ಹೆಂಡತಿ ಎಂಬರ್ಥ; ಹೀಗಾಗಿ ಬೇರೆಯವನ ಹೆಂಡತಿಯ ಜೊತೆಗಿರಿಸಿಕೊಂಡ ಸಂಬಂಧವನ್ನೇ ಪಾರದಾರ್ಯ ಎಂದು ಕರೆದಿರುವಂತೆ ತೋರುತ್ತದೆ. ಈ ಶಬ್ದದ ಇತರ ರೂಪಗಳಾದ 'ಪಾರದಾರ' 'ಪಾರದರ' 'ಪಾರದ್ವಾರ' ಎಂಬ ರೂಪಗಳು ಹಳಗನ್ನಡ ಕಾವ್ಯಗಳಲ್ಲಿ ಬಳಕೆಯಲ್ಲಿದ್ದುವು. "ಮಹಾದುಃಖಕೆ ಪಾರದಾರಮೆ ಮೊದಲ್" ('ಧರ್ಮಾಮೃತ'); "ನೋಡುವೊಡೆ ಅವನೇಕಾಂತದೊಳಾಡುವೊಡೆ ಅದು ಪಾರದರಮೆ ದಿಟಂ" ('ಪಾರ್ಶ್ವನಾಥ ಪುರಾಣ'); 'ಕೊಲೆ ಹೊಲೆ ಪಾರದ್ವಾರವ ಪಾತಕ ಮಾಡುವರೊಳಗಿಟ್ಟುಕೊಂಡು" (ಕೋಲಶಾಂತಯ್ಯನ ವಚನ). ಪಾದರ ಶಬ್ದವನ್ನು ರನ್ನನ 'ಗದಾಯುದ್ಧ'ದ "ದೋಷಾವಸಥರ್ ಪಾದರದಿಂ ಜನಿಯಿಸಿದರ್" ಎಂಬ ಪ್ರಯೋಗದಲ್ಲಿ ಕಾಣಬಹುದು.
ಪಾದರ ಮಾಡುವವನು 'ಪಾದರಿಗ' ("ಅನ್ನೆಗಮವಳ್ ನೆರೆಮನೆಯ ಪಾದರಿಗನಂ ಬರಿಸುವುದುಂ" - ದುರ್ಗಸಿಂಹನ 'ಪಂಚತಂತ್ರ'). ಸ್ತ್ರೀಲಿಂಗರೂಪ 'ಪಾದರಿ' ("ಆ ಪಾದರಿ ಬೇಸತ್ತವೊಲಿರೆ ಪೋದಂ" - ಜನ್ನನ 'ಯಶೋಧರ ಚರಿತೆ'). (ಪಾದರಿ ಎಂಬುದು ಸಂಸ್ಕೃತದ ಪಾಟಲ ಎಂಬ ಮರ ಮತ್ತದರ ಹೂವಿಗೂ ಅನ್ವಯಿಸುವ ಪದವಾಗಿದೆ). 'ಪಾದರಿಗೆ' ಎಂಬ ರೂಪವೂ ಇದೆ ("ತುಡುಗುಣಿ ಪಾದರಿಗೆ ರಂಡೆ ಕೀೞ್ಜಾತಿಯವಳ್" - ಬ್ರಹ್ಮಶಿವನ 'ಸಮಯ ಪರೀಕ್ಷೆ'). ಜಾರತನ ಮಾಡು ಎಂಬರ್ಥದಲ್ಲಿ 'ಪಾದರಿಸು' ಎಂಬ ಪ್ರಯೋಗವಿತ್ತು ("ಜಲಜಶರಚಾಪಮಂ ನಿಲಿಸಲಾರದೆ ಬಂಧುಗಳು ತಿಳಿಯದಂತೆ ಪಾದರಿಸುತಡಕದೊಳಿರಲು" - ಕೋಳೂರು ಶಂಕರಕವಿಯ 'ನವಮೋಹನ ತರಂಗಿಣಿ").
ಹಳಗನ್ನಡಪದಗಳಲ್ಲಿನ ಆದಿ ಪಕಾರ ನಡುಗನ್ನಡದಲ್ಲಿ ಬಹುತೇಕ ಕಡೆ ಹಕಾರ ಆಗಿರುವಂತೆ, ಪಾದರ ಹಾದರವಾಗುತ್ತದೆ. "ಅನ್ಯದೈವವೆಂಬುದು ಹಾದರ ಕಾಣಿರೋ" ಎಂಬುದು ಬಸವಣ್ಣನ ವಚನ. 'ಹಾದರಗಿತಿ' ಎಂಬ ಪ್ರಯೋಗ 'ಶಬ್ದಮಣಿದರ್ಪಣ'ದಲ್ಲಿಯೇ ಇದೆ. 'ಹಾದರಗಿತ್ತಿ' ಎಂಬ ರೂಪ ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಹಾದರ ಮಾಡುವುದು ಹಾದರವಾಡು: "ಮುರಾರಿ ಗೋಪಿಯರಲ್ಲಿ ಹಾದರವಾಡಿ" ಎಂಬುದು 'ಬಸವಪುರಾಣ'ದ ಮಾತು. 'ಹಾದರವಿದ್ದೆ'ಯ ಪ್ರಸ್ತಾಪ ಕನಕದಾಸರ 'ಮೋಹನತರಂಗಿಣಿ'ಯಲ್ಲಿದೆ. ಹಾದರಿಕೆಗೆ ವಿಧಿಸುವ ಶಿಕ್ಷೆ ಗಂಡಸಿನ ತಲೆ ಕತ್ತರಿಸುವುದು, ಹೆಂಗಸಿನ ಮೂಗು ಕತ್ತರಿಸುವುದು ಎಂದು ಕ್ರಿಶ. 992 ಶಾಸನ ಹೇಳುತ್ತದೆ ("ಪಾದರಿಗೆಯ ಮೂಗನರಿದು ಪಾದರಿಗನಂ ಕೊಲ್ವುದು"). ಹಾದರದ ಪ್ರಸಂಗದಲ್ಲಿ ಸತ್ತವರಿಗಾಗಿ ಯಾರು ಅಳುತ್ತಾರೆ ಎಂದು 'ಪಂಪಭಾರತ'ದಲ್ಲಿ ಬರುತ್ತದೆ: "ಪಾರದರೊಳ್ ಸತ್ತಂಗಳಲ್ವನ್ನರಾರ್".
=====
ಹಿಡಿ: ಹಿಡಿದುಕೊ ಎಂಬ ಕ್ರಿಯಾರ್ಥದಲ್ಲಿಯೂ, ಹಿಡಿದುಕೊಳ್ಳುವಾಗ ಬೆರಳುಗಳನ್ನು ಮಡಿಸಿ ಆಗುವ ಮುಷ್ಟಿ ಎಂಬ ಅರ್ಥದಲ್ಲಿಯೂ, ಮುಷ್ಟಿಯಲ್ಲಿ ಅಡಗಿಸಿಕೊಳ್ಳಬಹುದಾದಷ್ಟು ಪ್ರಮಾಣ ಎಂಬರ್ಥದಲಿಯೂ ಈ ಪದ ಬಳಕೆಯಲ್ಲಿದೆ. ಇದರ ಮೂಲ ಪಿಡಿ ಎಂಬುದು: ಹಳಗನ್ನಡದಲ್ಲಿನ ಶಬ್ದಗಳ ಪಕಾರ ನಡುಗನ್ನಡದಲ್ಲಿ ಹಕಾರವಾಯಿತು. ಮೂಲರೂಪದಲ್ಲಿ ಪಿಡಿಕೆಯ್ ಮುಷ್ಟಿಯನ್ನು ಸೂಚಿಸುತ್ತದೆ, ಪಿಡಿಪೆಱು ಎಂದರೆ ಸೆರೆಸಿಕ್ಕು ಎಂದು, ಪಿಡಿಖಂಡ ಎಂದರೆ ಚಿಕ್ಕ ಚಿಕ್ಕ ತುಣುಕು. ಪಿಡಿಕಲ್ ಎಂಬುದು ಕುಂಬಾರನು ಮಡಕೆ ಮಾಡುವಾಗ ಕೈಯಲ್ಲಿ ಹಿಡಿದು ಬಡಿಯುವ ಸಣ್ಣ ಕಲ್ಲು ಎಂಬುದನ್ನು ಸೂಚಿಸುತ್ತದೆ. ಸ್ವೀಕರಿಸು, ಸೆರೆಹಿಡಿ, ಅವಲಂಬಿಸು, ಸ್ವಾಧೀನಪಡಿಸಿಕೊ ಮುಂತಾದ ಅರ್ಥಗಳೂ ಈ ಶಬ್ದಕ್ಕಿವೆ. ವಸ್ತುಗಳನ್ನು ಹಿಡಿಯುವ ಅರ್ಥವು ಮುಂದೆ ವಿಸ್ತಾರಗೊಂಡು ಮಾನಸಿಕ ಕ್ರಿಯೆಗಳನ್ನು ಅಥವಾ ಅಮೂರ್ತವಾದುದನ್ನು ಸೂಚಿಸಲೂ ಅನ್ವಯಗೊಂಡಿತು: 'ಅರ್ಥ ಹಿಡಿ' 'ಕಂಡುಹಿಡಿ' (ಡಿಸ್ಕವರಿ)  'ದೆವ್ವ ಹಿಡಿ' ಮುಂತಾದುವು.
ಪುರಸ್ಕಾರ ಹೊಂದು ಎಂಬ ಅರ್ಥವೂ ಈ ಪದಕ್ಕಿದೆ: "ನಮ್ಮ ರೂಪಾಯಿ ಅಮೆರಿಕದಲ್ಲಿ ಹಿಡಿಯುವುದಿಲ್ಲ" ಎಂಬ ವಾಕ್ಯವನ್ನು ನೋಡಿ. ಹಿಡಿ ಎಂಬುದಕ್ಕೆ ತೊಡಗು ಎಂಬರ್ಥವೂ ಇದೆ: "ಬೆಳಿಗ್ಗೆ ಹಿಡಿದ ಮಳೆ ಇನ್ನೂ ಬಿಟ್ಟಿಲ್ಲ" ಎಂಬುದನ್ನು ನೋಡಬಹುದು. ಹಿಡಿಹಿಡಿ ಎಂದರೆ ತೆಗೆದುಕೊ ಎಂಬರ್ಥವಿದೆ: "ಹಿಡಿಹಿಡೀಲೆ ರೊಕ್ಕಾ ತೆಗೆದು ಹಿಡಿಹಿಡಿ ಅನ್ನಾಂವಾ" ಎಂಬ ಸಾಲು ಬೇಂದ್ರೆಯವರ 'ಹುಬ್ಬಳ್ಳಿಯಾಂವ' ಕವನದಲ್ಲಿದೆ.
ವಸ್ತುಗಳನ್ನು ಹಿಡಿದುಕೊಳ್ಳುವ ಭಾಗವನ್ನು ಸೂಚಿಸಲೂ ಈ ಪದ ಬಳಕೆಯಾಗಿದೆ. ಕೈಯಲ್ಲಿ ಹಿಡಿದು ಗುಡಿಸುವ ಪೊರಕೆ ಎಂಬರ್ಥದಲ್ಲಿಯೂ ಕಠಾರಿ ಎಂಬರ್ಥದಲ್ಲಿಯೂ ಹಳೆಯ ಕಾವ್ಯಗಳಲ್ಲಿ ಈ ಪದ ಬಳಕೆಯಾಗಿದೆ. ಹಾಗೆ ಹಿಡಿದುಕೊಳ್ಳಲು ಇರುವ ಭಾಗವೇ ಹಿಡಿಕೆ ಅಥವಾ ಹಿಡಿ (ಇದನ್ನು ಕಾವು ಎಂದೂ ಕರೆಯುತ್ತಾರೆ). ಹಿಡಿದುಕೊಳ್ಳುವ ಕ್ರಿಯೆಯೇ ಹಿಡಿತ; ಹತೋಟಿ ಎಂಬರ್ಥವೂ ಇದಕ್ಕೆ ಬರುತ್ತದೆ. ಅನ್ನ, ಉಪ್ಪಿಟ್ಟು ಮುಂತಾದುವನ್ನು ಹಿಡಿಯಲ್ಲಿ ಒತ್ತಿ ಮಾಡುವ ತುತ್ತನ್ನು 'ಪಿಡಿಚೆ' ಎಂದು ಈಗಲೂ ಹೇಳುತ್ತಾರೆ.
ಪಿಡಿ ಎಂಬುದು ಪ್ರಾಣಿಗಳ ಹೆಣ್ಣನ್ನು ಸೂಚಿಸುವ ಪದವಾಗಿ ಹಳಗನ್ನಡದಲ್ಲಿಯೂ, ತಮಿಳು, ತೆಲುಗು ಮಲಯಾಳಂಗಳಲ್ಲಿಯೂ ಬಳಕೆಗೊಳ್ಳುತ್ತಿತ್ತು. ಪಿಡಿ ಎಂಬುದು ಮೊದಲು ಹೆಣ್ಣು ಆನೆಯನ್ನು ಮಾತ್ರ ಸೂಚಿಸುತ್ತಿದ್ದು, ಬರಬರುತ್ತ ಅದರ ಅರ್ಥ ವಿಸ್ತಾರಗೊಂಡಿದೆ.
====
ಹುಣಿಸೆ: ಇದು 'ಪುಳಿ' ಎಂಬ ಶಬ್ದದಿಂದ ರೂಪಿತವಾಗಿರುವ ಪದ. ಪುಳಿ+ಸೆ=ಪುಳಿಸೆ ಆಗಿ ಅದು ಮುಂದೆ ಪುಣಿಸೆ ಎಂದಾಗಿ ಈಗ ಹುಣಿಸೆ ರೂಪವನ್ನು ಪಡೆದಿದೆ. ಹಳಗನ್ನಡದಲ್ಲಿ ಪುಳಿಸೆ, ಪುಣಿಸೆ, ಪುಣುಸೆ, ಪುಣಸೆ, ಪುಳುಂಸೆ ಮುಂತಾದ ರೂಪಗಳಲ್ಲಿ ಬಳಕೆಯಾಗಿದೆ. ಪುಳಿ(ಹುಳಿ)ಯಾದ ರುಚಿಯಿರುವ ಹಣ್ಣು ಮತ್ತು ಅದರ ಮರ ಎರಡಕ್ಕೂ ಈ ಶಬ್ದ ಅನ್ವಯಿಸುತ್ತದೆ. "ಸಯ್ಯನೆ ಬನ್ದು ಪೊಲ ಪುಣಸೆ ಎವ ಕೀಲೆ ಅನ್ತೆ ಪೋಯಿ ಏ ಬಿರಿದೊರ್ಗ್ಗೆಱೆ ಮುಕೂಡಲ್" ಎಂಬ ವಾಕ್ಯ ಒಂಬತ್ತನೇ ಶತಮಾನದ ಶಾಸನವೊಂದರಲ್ಲಿ 'ಪುಣಸೆ' ರೂಪ ದೊರೆಯುತ್ತದೆ.  "ಸೂರಣದ ಗಡ್ಡೆಯಂ ಸೌವೀರದೆ ಮೇಣ್ ಕಲಸಿಕೊಂಡು ಪುಳಿಸೆಯ ಚಿಗುರಿಂ ನೀರೊಳ್ ಕುದಿಸಲ್ಕದು ಸಂಹಾರಿಕುಂ ಅಂತದಱ ವಿಷಮನಾಕ್ಷಣದಿಂ" ಎಂದು 'ಲೋಕೋಪಕಾರ' ಹೇಳುತ್ತದೆ. "ಪುಣಿಸೆಯ ಪೂವೆಲ್ಲಂ ಕಾಯಪ್ಪವೆ" ಎಂಬ ಪ್ರಶ್ನೆ 'ಧರ್ಮಾಮೃತ'ದಲ್ಲಿದೆ. ಹುಣಿಸೆ ಮರ ಬೆಳೆದ ಪ್ರದೇಶವೂ ಪುಣಿಸೆ ಎನಿಸಿಕೊಳ್ಳುತ್ತಿತ್ತು: "ಪುಣಿಸೆಯ ಮಧ್ಯದಿ ಭೂಮಿಯಂ ಮಾರುಗೊಂಡ" ಎಂಬುದು ಹನ್ನೊಂದನೆಯ ಶತಮಾನದ ಶಾಸನವೊಂದರ ಮಾತು. ಹದಿನಾಲ್ಕನೆ ಶತಮಾನದ ಒಂದು ಶಾಸನವು ಪುಣ್ಸೆ ರೂಪವನ್ನು ಬಳಸುತ್ತದೆ: "ಬಗೆವೊಡದೇನಾನುಂ ಬಾರ್ತೆಗಲದೆನಿಪರಳಿಗೊಲ್ದು ಪೊಡೆವಡುವ ನರಂ ಚಿಗುರಿಂ ಪೂವಿಂ ಕಾಯಿಂ ಸೊಗಯಿಪ ಮಾವಿಂಗೆ ಪುಣಿಸೆಗೆರಗಲ್ವೇಡಾ" ಎಂಬ ಗೇಲಿಯ ಮಾತು 'ಸಮಯ ಪರೀಕ್ಷೆ'ಯಲ್ಲಿದೆ. "ಭತ್ತ ಭ 1ಕ್ಕಂ ಹೆರ್ಜುಂಕಂ ಪುಣ್ಸೆ ಮೆಣಸಿನ ಭಾರಕ್ಕೆ ಗ 1". ಪುಣಿಸೆವಣ್ ಎಂಬ ಬಳಕೆಯೂ ಇದೆ: "ಜೇನ್ ಪುಣಿಸೆವಣ್ ಪೊಸನಾರ್ .. ಪೀಲಿಯೆಂಬಿವಂ ತುಂಬಿದ ಕಂಬಿಯಂ ತಳೆದದೇಂ ತಳರ್ದತ್ತೊ ಪುಳಿಂದ ಸಂಕುಳಂ" ಎಂಬುದು 'ರಾಜಶೇಖರವಿಳಾಸ'ದಲ್ಲಿನ ವರ್ಣನೆ.
ನಡುಗನ್ನಡದಲ್ಲಿ ಪಕಾರ ಹಕಾರವಾಗಿ ತಿರುಗಿತು: ಹುಣಸೆ, ಹುಣಿಸೆ, ಹುಣುಸೆ, ಹುಣಚಿ ಮುಂತಾದ ರೂಪಗಳಲ್ಲಿ ಈ ಪದ ಬಳಕೆಯಲ್ಲಿದೆ. "ಹುಣಿಸೆ ತಂತ್ರಿಣೀ ಚಿಂಚಾಹ್ವಂ" ಎಂದು ಹನ್ನೊಂದನೆಯ ಶತಮಾನದ ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸಮಾನಾರ್ಥಕಗಳನ್ನು ಕೊಡುತ್ತದೆ. "ಹುಣಿಸೆಯ ಕಾಯಂ ತಿಂದರಂತೆ ಚಳಿತು" ಎನ್ನುತ್ತದೆ 'ಧರ್ಮಾಮೃತ'. "ಹುಣುಸೆ ಮುಪ್ಪಡಸಿದಡೆ ಹುಳಿ ತಗ್ಗದು" ಎಂಬ ಗಾದೆಯನ್ನು ಹದಿನೆಂಟನೆಯ ಶತಮಾನದ 'ಪರಶುರಾಮ ರಾಮಾಯಣ'ವೆಂಬ ಕಾವ್ಯವು ಹೇಳುತ್ತದೆ. 'ಹೂತದ ಹುಣಸಿ' ಎಂಬ ತಮ್ಮ ಕವಿತೆಯಲ್ಲಿ ಬೇಂದ್ರೆಯವರು "ಉಗುರ್ಗೆಂಪು ಹಸಿರು ಬಿಳಿ ನಿಂಬಿ ಹುಣಸಿಯ ರೆಂಬಿ ಚಿಗತೀತೇನೊ ನಂಬಿ ಕಾಮನ ಬಿಲ್ಲಿನ ಕೊಂಬಿ" ಎಂದು ವರ್ಣಿಸುತ್ತಾರೆ. ಹುಣಿಸೆ ಹಣ್ಣು ಈಗ ನಾವು ಬಳಸುವ ಸಾಮಾನ್ಯ ರೂಪ. 'ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದ ಹಾಗೆ' ಎಂಬುದು ಪ್ರಸಿದ್ಧ ಗಾದೆ. ಸಾವಿರ ವರ್ಷದ ಹಿಂದೆ ಹುಣಿಸೆ ಈ ದೇಶದಲ್ಲಿಲ್ಲದಿದ್ದಾಗ ಅಡುಗೆಗೆ ಹುಳಿಮಾವನ್ನು ಬಳಸುತ್ತಿದ್ದರು  ಎಂದು ಬಿಜಿಎಲ್ ಸ್ವಾಮಿ ಹೇಳುತ್ತಾರೆ. ಆದರೆ ಒಂಬತ್ತನೆ ಶತಮಾನದ ಶಾಸನದಲ್ಲೇ 'ಪುಣಸೆ' ಶಬ್ದದ ಬಳಕೆಯಿತ್ತೆಂಬುದನ್ನಾಗಲೇ ನೋಡುದ್ದೇವೆ.  
=====
ಹುತ್ತ: ಇದು 'ಪುತ್ತ' ಅಥವಾ 'ಪುತ್ತು' ಎಂಬ ಶಬ್ದದ ಹೊಸಗನ್ನಡ ರೂಪ. ಪುತ್ತ ಎಂಬುದು ತಮಿಳಿನಲ್ಲಿ ಪುಱ್ಱಮ್ ಎಂಬ ರೂಪದಲ್ಲಿಯೂ, ಮಲಯಾಳಂನಲ್ಲಿ ಪುಱ್ಱ ಎಂಬಂತೆಯೂ, ತೆಲುಗಿನಲ್ಲಿ ಪುಟ್ಟ ರೂಪದಲ್ಲಿಯೂ ದೊರಕುತ್ತದೆ. ಗೆದ್ದಲು ಕಟ್ಟಿ ಹಾವು ವಾಸಿಸುವ ಜಾಗ ಎಂಬುದು ಇದರ ವಿವರಣೆ. 'ಕವಿರಾಜಮಾರ್ಗ'ದಲ್ಲಿ "ಬಿಸುಡಾಯುಧಮಂ ಪುಲ್ಲಂ ಕರ್ಚೇರು ಪುತ್ತನ್" ಎಂಬಲ್ಲಿ 'ಪುತ್ತ' ರೂಪವಿದ್ದರೆ, 'ಆದಿಪುರಾಣ'ದಲ್ಲಿನ "ಪುತ್ತಿನೊಳಗೊಯ್ಯನೆ ಕುತ್ತಿದ ಕೈಯಂ" ಎಂಬಲ್ಲಿ 'ಪುತ್ತು' ರೂಪವಿದೆ. ಆಲಂಕಾರಿಕ ಅರ್ಥದಲ್ಲಿ ನೆಲೆ ಎಂದಾಗುತ್ತದೆ: "ಇದು ಕಡು ನಾಣ ಪುತ್ತು" ('ಆದಿಪುರಾಣ').
ಈ ಶಬ್ದದಿಂದ ಅನೇಕ ನುಡಿಗಟ್ಟುಗಳಾಗಿವೆ. ಮೇಲೆ ಉಲ್ಲೇಖಿಸಿದ 'ಕವಿರಾಜಮಾರ್ಗ'ದ 'ಪುಲ್ಲಂ ಕರ್ಚೇಱು ಪುತ್ತನ್' ಎಂಬುದು ಯುದ್ಧದಲ್ಲಿ ಶರಣಾಗುವುದನ್ನು ಸೂಚಿಸುತ್ತದೆ. ಇದು 'ಗದಾಯುದ್ಧ'ದಲ್ಲಿ 'ಪುತ್ತನೇಱು' ಆಗಿದ್ದರೆ ("ಪುತ್ತನೇಱಿ ಕೊಲ್ಲದ ತುೞಿಲಾಳ್ತನಕ್ಕೆ"); 'ಪಂಚತಂತ್ರ'ದಲ್ಲಿ ಇದು 'ಪುತ್ತೇಱು' ಆಗುತ್ತದೆ ("ಪುತ್ತೇಱಿದನಂ ಕೈದುವನಿತ್ತನೇರ್ಪೆತ್ತನಂ ರಣಾಂಗಣದೊಳ್ ಬೆನ್ನಿತ್ತನನಿಱಿಯರ್"); ಹಾಗೆಯೇ 'ಪುತ್ತ' ಅಪಾಯ ಸ್ಥಳದ ಸಂಕೇತ: "ಪುಲಿಗಂಜಿ ಪುತ್ತವೇಱಿದಂತೆ" ('ಧರ್ಮಾಮೃತ'). ಪುತ್ತುಂಗಾಲ್ ಎಂದರೆ ಆನೆಕಾಲು ರೋಗ: "ಜವೆಯಂ ಗಂಧಕಮಂ ವಿಳಂಗವುನರೆದುಕೊಂಡು ನಾಡೆ ಭಾವಿಸಿ ಸರಳದ್ರವದಿದಂ ಪೂಸಿದೊಡಂ ಪುತ್ತುಂಗಾಲ ಪುತ್ತನಿರದುಪಶಮಿಕುಂ" ಎಂದು 'ಲೋಕೋಪಕಾರಂ'ನಲ್ಲಿ ಅದಕ್ಕೆ ಚಿಕಿತ್ಸೆಯನ್ನು ಹೇಳಿದೆ.
ಈ ಶಬ್ದ ಡುಗನ್ನಡದಲ್ಲಿ 'ಹುತ್ತ' ಅಥವಾ 'ಹುತ್ತು' ರೂಪ ಪಡೆಯುತ್ತದೆ. "ಹುತ್ತಕ್ಕೆ ಏಸು ಬಾಯಾದಡೇನು, ಸರ್ಪನಿಪ್ಪುದು ಒಂದೇ ಸ್ಥಾನ" ಎಂಬುದು ಬಸವಣ್ಣನ ಮಾತು. ರಾಘವಾಂಕನ 'ಹರಿಶ್ಚಂದ್ರಕಾವ್ಯ'ದಲ್ಲಿನ "ನಿಜಸುತನ ಕಂಡಳು ಹರಿಶ್ಚಂದ್ರನರಸಿ ಹುತ್ತಿನ ಮೊದಲೊಳು" ಎಂಬಲ್ಲಿ ಹುತ್ತು ರೂಪ ಪ್ರಯೋಗವಾಗಿದೆ. ಇಲ್ಲಿಯೂ ಅದು ಅನೇಕ ನುಡಿಗಟ್ಟುಗಳ ಮೂಲ. "ಮರನ ಹುತ್ತವನೇಱಿದವರ ಸಂಗರದಿ ದೈನ್ಯಬಡುವರ" ('ನಕದಾಸರ ಕನಳಚರಿತ್ರೆ') ಶರಣಾಗತಿಯ ಸೂಚನೆ; ಬಸವಣ್ಣನ ವಚನಗಳಲ್ಲಿನ "ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು" ಎಂಬಲ್ಲಿನ 'ಹುತ್ತದ ಮೇಲಣ ರಜ್ಜು' ಭ್ರಮೆಯನ್ನು ಸೂಚಿಸಿದರೆ; ಇನ್ನೊಂದೆಡೆಯ"'ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ" ಎಂಬಲ್ಲಿ 'ಹುತ್ತವ ಬಡಿಕ' ವ್ಯರ್ಥಪ್ರಯತ್ನದ ಸಂಕೇತ. "ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಆ ಅಂಥ ರೂಪುರೇಖೆ' ಎಂಬ ಗೋಪಾಲಕೃಷ್ಣ ಅಡಿಗರ ಸಾಲಿನ 'ಹುತ್ತಗಟ್ಟು' ಎಂಬುದು ಚಿತ್ತೈಕಾಗ್ರತೆಯ ಸಂಕೇತವಾಗಿದೆ.
ವಾಲ್ಮೀಕಿ ಎಂದರೆ ಹುತ್ತದಲ್ಲಿ ಹುಟ್ಟಿದವನು ಎಂದರ್ಥ. ಇದನ್ನು ಕನ್ನಡ ಕವಿಗಳು ಕನ್ನಡಿಸುತ್ತಾರೆ: "ನಾನು ಕರಣೇಂದ್ರಿಯಂಗಳಿಗೆ ಹುತ್ತದ ಮೊತ್ತದವನ" ಎಂಬ ಘಟ್ಟಿವಾಳಯ್ಯನೆಂಬೊಬ್ಬ ವಚನಕಾರನ ಮಾತಿನಲ್ಲಿರುವ 'ಹುತ್ತದ ಮೊತ್ತದವ' ಋಷಿಯನ್ನು ಸೂಚಿಸುತ್ತದೆ. ಹಾಗೆಯೇ ಮುದ್ದಣ ವಾಲ್ಮೀಕಿಯನ್ನು 'ಪುತ್ತಿನಣುಗ' 'ಪುತ್ತಿನ ಪುತ್ರ' ಎನ್ನುತ್ತಾನೆ.
=====
ಹೆಂಗಸು: ಇದು ಎರಡು ಪದಗಳು ಕೂಡಿ ಆಗಿರುವ ಶಬ್ದ: ಪೆಣ್+ಕೂಸು. ಪೆಣ್ ತಮಿಳು, ಮಲಯಾಳಂಗಳಲ್ಲದ್ದರೆ, ತುಳುವಿನಲ್ಲಿ ಪೊಣ್ಣು ಎಂದಾಗುತ್ತದೆ. ಅಂತೆಯೇ ಕೂಸು ತಮಿಳಿನಲ್ಲಿ ಕುಙು, ಎಂದಿದ್ದರೆ ತೆಲುಗಿನಲ್ಲಿ ಕೂತು(ರು) ಎಂಬ ರೂಪಗಳಲ್ಲಿ ದೊರೆಯುತ್ತದೆ. ಪೆಣ್ ಎಂಬುದಕ್ಕೆ ಹೆಣ್ಣು ಎಂಬ ಅರ್ಥ ಸಾಮಾನ್ಯ. ಆದರೆ ಕೂಸು ಎಂಬುದು ಬೇರೆ ಬೇರೆ ಕಾಲಗಳಲ್ಲಿ ವಿವಿಧ ಅರ್ಥಚ್ಛಾಯೆಗಳನ್ನು ಪಡೆದಿದೆ. ಮಗು ಎಂಬ ಅರ್ಥದಲ್ಲಿ ಈ ಶಬ್ದವು 'ಕವಿರಾಜಮಾರ್ಗ'ದಲ್ಲಿಯೇ ಬಳಕೆಗೊಂಡಿದೆ ("ಕೂಸಿನ ತಲೆಯೊಳ್ ಬಿಣ್ಪೊರೆಯಂ ಇಟ್ಟ ತೆರಂ"); ಈ ಅರ್ಥದ ಜೊತೆಗೆ 'ವಡ್ಡಾರಾಧನೆ', 'ಆದಿಪುರಾಣ'ಗಳಲ್ಲಿ ಮಗು, ಗಂಡು ಮಗು, ಹೆಣ್ಣು ಮಗು ಎಂಬರ್ಥಗಳಲ್ಲಿ ಈ ಶಬ್ದ ಬಳಕೆಯಾಗಿದೆ. 'ಪಂಪಭಾರತದಲ್ಲಿ' ಮದುವೆ ಮಾಡಿಕೊಡಲು ಹೆಣ್ಣು ಕೇಳು ಎಂಬರ್ಥದಲ್ಲಿ 'ಕೂಸಂ ಬೇಡು' ಎಂಬ ಪ್ರಯೋಗವಿದೆ  ("ಶಂತನು .. .. ದಾಶರಾಜನಲ್ಲಿಗೆ ಕೂಸಂ ಬೇಡೆ"). ಮಕ್ಕಳಾಟ ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ 'ಕೂಸಾಟ' ಎಂಬ ಶಬ್ದವಿದೆ.
ಮೊದಲು ಮಗು ಎಂಬ ಅರ್ಥವಿದ್ದುದು ಬರಬರುತ್ತ ಹೆಣ್ಣು ಮಗು ಎಂಬರ್ಥ ಪಡೆದಂತೆ ತೋರುತ್ತದೆ. "ನಮ್ಮ ಕುನ್ನಿಗೆ ಕೂಸ ಕೊಡಬೇಡ, ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ" ಎಂಬ ಬಸವಣ್ಣನ ಸಾಲಿನಲ್ಲಿ ಕೂಸು ಎಂಬುದಕ್ಕೆ ಕನ್ಯೆ, ಮದುವೆಯಾಗದ ಹುಡುಗಿ ಎಂಬ ಅರ್ಥವಿದೆ. ಅರ್ಥಸ್ಪಷ್ಟತೆಗೆ ಪೆಣ್ಗೂಸು ಎಂದು ಕರೆಯಲು ತೊಡಗಿ ('ಪೆಣ್ಗೂಸು' ಎಂಬ ಪ್ರಯೋಗ 'ವಡ್ಡಾರಾಧನೆ', 'ಪಂಪಭಾರತ', 'ಪಂಪರಾಮಾಯಣ' ಮುಂತಾದ ಕಾವ್ಯಗಳಲ್ಲಿಯೇ ಇದೆ) ಆ ಬಳಿಕ ನಡುಗನ್ನಡದಲ್ಲಿ ಹೆಂಗೂಸು ಎಂಬ ರೂಪ ಪಡೆಯಿತು: ಹರಿಹರನ 'ಬಸವರಾಜದೇವರ ರಗಳೆ'ಯಲ್ಲಿ "ನಾವು ಹೆಂಗೂಸಿಲ್ಲದೆ ಇರ್ದುದಿಲ್ಲ" ಎಂಬ ವಾಕ್ಯವಿದೆ. ಮುಂದೆ  ಈ ಶಬ್ದ ಹೆಂಗಸು ಎಂಬ ರೂಪವನ್ನು ಪಡೆದಿದೆ.
ಈಗ ಹೆಣ್ಣುಹೆಂಗಸು ಎಂಬ ಮಾತೂ ಇದೆ; ಅಸಹಾಯಕಳು ಎಂಬ ಅರ್ಥ ಇದಕ್ಕೆ ಇರುವಂತಿದೆ, ಹಾಗೆಯೇ 'ಮೂರು ಕಾಸಿನ ಹೆಂಗಸು ಎಂಬ ತಿರಸ್ಕಾರದ ಮಾತಿದೆ. ಆದರೆ ಇದು ಮೂಲತಃ 'ಮೂರು ಕೂಸಿನ ಹೆಂಗಸು' ಎಂಬ ಗೌರವಸೂಚಕ ಅಭಿವ್ಯಕ್ತಿ ಎಂದೂ ಕೆಲವರು ಹೇಳುತ್ತಾರೆ.
=====
ಹೊಟ್ಟೆ: ಇದೊಂದು ದ್ರಾವಿಡ ಪದ; ಹಳಗನ್ನಡದಲ್ಲಿದು 'ಪೊಡೆ' ಮತ್ತು 'ಪೊಟ್ಟೆ' ಎಂಬ ಎರಡು ರೂಪಗಳಲ್ಲಿಯೂ ದೊರೆಯುತ್ತದೆ. ತಮಿಳಿನಲ್ಲಿ ಪುಟೈ ಎಂದೂ ತೆಲುಗಿನಲ್ಲಿ ಪೊಡುಚು ಎಂದೂ ತುಳುವಿಲ್ಲಿ ಪೊಡೆ ಅಥವಾ ಪುಡೆ ಎಂದೂ ಆಗುತ್ತದೆ. ಕೇಶಿರಾಜನ 'ಶಬ್ದಮಣಿದರ್ಪಣ'ದಲ್ಲಿ ಪೊಡೆ ಎಂಬುದಕ್ಕೆ ಹೊಡೆಯುವುದು ಮತ್ತು ಹೊಟ್ಟೆ ಎಂಬ ಎರಡು ಅರ್ಥಗಳನ್ನು ಹೇಳಿದೆ ("ಪೊಡೆ- ಪ್ರಹರಣೇ ಕುಕ್ಷೇ ಚ"). "ಪೊಟ್ಟೆ ಬಟ್ಟಾಗಿರ್ದ ಪೆರವಟ್ಟ ನಡುವಂ ನೋಡಿ ಪೊಕ್ಕು" ಎಂಬುದು ರನ್ನನ 'ಗದಾಯುದ್ಧ'ದ ಮಾತು. 'ಪೊಟ್ಟೆವಾಯ್' ಎಂದರೆ ಹೊಟ್ಟೆ ಉಬ್ಬರಿಸಿಕೊಳ್ಳುವುದು ("ಅಂತು ಪೊಟ್ಟೆವಾಯಲ್ ತಿಂದು" - ನಾಗರಾಜನ ಕಪುಣ್ಯಾಸ್ರವಕಿ).
ಪ್ರಾಯಶಃ ಸಮಾಸಗಳಲ್ಲಿ ಪೊಡೆ ಎಂಬ ರೂಪವು ಬಳಕೆಯಲ್ಲಿತ್ತು. ಪೊಡೆಗಿಚ್ಚು ಎಂದರೆ ಹೊಟ್ಟೆಯುರಿ ("ಪೊಡೆಗಿಚ್ಚಿಂದವೆ ಜೀರ್ಣನಾದನಸುರಂ ವಾತಾಪಿ" - 'ಕರ್ಣಾಟಕ ಕಾದಂಬರಿ'). ವಿಷ್ಣುವನ್ನು ಆಂಡಯ್ಯನ 'ಕಬ್ಬಿಗರಕಾವ'ವು 'ಪೊಡೆಯಲರ' ಎನ್ನುತ್ತದೆ ("ಸಿರಿಯೊಳೊಂದಿಯುಂ ಪೊಡೆಯಲರನೆನಿಸಂ"). ಹೊಟ್ಟೆಯನ್ನು ನೆಲಕ್ಕೆ ತಾಕಿಸಿ (ಸಾಷ್ಟಾಂಗ) ನಮಸ್ಕಾರ ಮಾಡುವುದೇ 'ಪೊಡೆಮಡು'ವುದು ("ಪೊಡೆಮಡಲೆತ್ತುವ ಕೈಗಳ" 'ಯಶೋಧರ ಚರಿತೆ'); ("ನಿನಗೆ ಪೊಡೆಮಡುವೆ ಏಕೆ ಎಡೆತಡವೆ" ಎಂಬ ಮಾತು ಬೇಂದ್ರೆಯವರ 'ಗಂಗಾವತರಣ'ದಲ್ಲಿ ಬಂದಿದೆ). ಅಥವಾ 'ಪೊಡೆವಡು'ವುದು ("ಕಂಡು ಪೊಡೆವಡುವನಿತುವರಂ" - ಪಂಪನ 'ಆದಿಪುರಾಣ'). ಇವು 'ಪೊಡವಡು' 'ಪೊಡಮಡು' ಎಂಬ ರೂಪಗಳಲ್ಲಿಯೂ ಬಳಕೆಯಲ್ಲಿತ್ತು.
ನಡುಗನ್ನಡ ಕಾಲದ ನಂತರ ಹೊಟ್ಟೆ ಎಂಬ ರೂಪವು ಬಳಕೆಯಲ್ಲಿ ಬಂದಿತು. ಪುರಂದರದಾಸರ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" ಎಂಬ ಹಾಡಿನಲ್ಲಿ 'ಹೊಟ್ಟೆ' ಎಂದರೆ ಜೀವನೋಪಾಯ ಎಂಬ ಅರ್ಥ ಪಡೆಯುತ್ತದೆ. ಇದೇ 'ಹೊಟ್ಟೆಪಾಡು'. ಅಸೂಯೆ ಎಂಬರ್ಥದಲ್ಲಿ 'ಹೊಟ್ಟೆಕಿಚ್ಚು' ಎಂಬ ಪದ ಬಳಕೆಯಲ್ಲಿದೆ. 'ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ' ಎಂಬ ನುಡಿಗಟ್ಟು ಅತೀವವಾಗಿ ಮತ್ಸರಿಸುವ ವ್ಯಕ್ತಿಯ ಬಗ್ಗೆ ಆಡುವ ಮಾತು. ಈ ಅರ್ಥದಲ್ಲಿಯೇ 'ಹೊಟ್ಟೆ ಕಿವಿಚಿಕೊ' ಎಂಬ ನುಡಿಗಟ್ಟೂ ಇದೆ. 'ಒಳ್ಳೆಯದಾಗಲಿ' ಎಂಬ ಹಾರೈಕೆಯ ಅರ್ಥದಲ್ಲಿ 'ಹೊಟ್ಟೆ ತಣ್ಣಗಿರಲಿ' ಎಂಬ ನುಡಿಗಟ್ಟಿದೆ.
=====
ಹೊಸಗನ್ನಡ: ಕನ್ನಡ ಭಾಷೆ ಬಹಳ ಪ್ರಾಚೀನವಾದದ್ದು. ಭಾಷೆಯೂ ವ್ಯಕ್ತಿಯಂತೆ ಬೆಳೆಯುತ್ತದೆ, ಬದಲಾವಣೆ ಹೊಂದುತ್ತದೆ. ಅದರಂತೆ ಕನ್ನಡವೂ ತನ್ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಬೆಳೆದಿದೆ, ಬದಲಾಗಿದೆ. ಬಹಳ ಹಿಂದಿನ ಕನ್ನಡ ರೂಪ ಈಗಿನವರಿಗೆ ಅರ್ಥವಾಗುವುದೇ ಇಲ್ಲ, ಮಗು ಬೆಳೆದು ದೊಡ್ಡದಾದರೆ ಅದರ ಸ್ವರೂಪ ಪೂರ್ತಿ ಬದಲಾಗುತ್ತದಲ್ಲ, ಹಾಗೆ. ಕನ್ನಡದ ಈ ಬೆಳವಣಿಗೆಯನ್ನು ಭಾಷಾವಿಜ್ಞಾನಿಗಳು ನಾಲ್ಕು ಹಂತಗಳಾಗಿ ವಿಂಗಡಿಸುತ್ತಾರೆ: ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು. ಈ ವಿಭಜನೆ ಕರಾರುವಾಕ್ಕಾದ್ದೇನಲ್ಲ. ಆದರೂ ಅಧ್ಯಯನದ ಅನುಕೂಲಕ್ಕಾಗಿ ಹೀಗೆ ಮಾಡುತ್ತಾರೆ. ಇದರ ಪ್ರಕಾರ, ಕನ್ನಡದ ಇತ್ತೀಚಿನ ರೂಪವೇ ಹೊಸಗನ್ನಡ, ಇದು ನಮ್ಮ ಕಾಲದ ಕನ್ನಡ ಎಂದರ್ಥ. ಬ್ರಿಟಿಷ್ ಆಡಳಿತ ಬಂದ ಮೇಲೆ ನಾನಾ ರೀಪದಚರಿತೆತಿಗಳಲ್ಲಿ ನಮ್ಮ ಬದುಕು ಬದಲಾದಂತೆ ನಮ್ಮ ಭಾಷೆಯೂ ಬದಲಾಯಿತು, ಹಿಂದಿನದಕ್ಕಿಂತ ಭಿನ್ನವಾದ ರೂಪವನ್ನು ಪಡೆಯಿತು, ಕನ್ನಡದ ಈ ಹೊಸ ರೂಪವೇ ಹೊಸಗನ್ನಡ ಎಂಬುದು ಸಾಮಾನ್ಯ ತಿಳಿವಳಿಕೆ.
ಆದರೆ ಕನ್ನಡದಲ್ಲಿ ಸಿಕ್ಕಿರುವ ಮೊದಲ ಗ್ರಂಥವಾದ ಕ್ರಿಸ್ತಶಕ 850ರ 'ಕವಿರಾಜಮಾರ್ಗ'ದಲ್ಲಿ 'ಪೞಗನ್ನಡ' (ಹಳಗನ್ನಡ) ಎಂಬ ಶಬ್ದವಿದೆ. ಅಂದರೆ ತನ್ನ ಕಾಲಕ್ಕೆ ಹಿಂದಿನ ಕನ್ನಡ ಎಂಬುದು ಗ್ರಂಥಕರ್ತೃವಿನ ಅಭಿಪ್ರಾಯ, ಹಾಗಾದರೆ ತನ್ನ ಕಾಲದ್ದು ಹೊಸಗನ್ನಡ ಎಂಬುದು ಅವನ ಅಭಿಪ್ರಾಯವಿರಬೇಕು. ಆದರೆ ಹೊಸಗನ್ನಡ ಎಂಬ ಶಬ್ದವನ್ನೇನೂ ಆ ಗ್ರಂಥದಲ್ಲಿ ಬಳಸಿಲ್ಲ. ಕ್ರಿಸ್ತಶಕ 1112 ರಲ್ಲಿ ರಚಿತವಾದ ನಯಸೇನ ಕವಿಯ 'ಧರ್ಮಾಮೃತ' ಎಂಬ ಕಾವ್ಯದಲ್ಲಿ ಈ ಮಾತಿದೆ: "ಪೊಸಗನ್ನಡದಿಂ ವ್ಯಾವರ್ಣಿಸುವೆಂ ಸತ್ಕೃತಿಯನೆಂದು ಕನ್ನಡದೊಳ್ ಚಿಂತಿಸಿ.. .." ಇತ್ಯಾದಿ. ಅಂದರೆ ಈ ಕವಿಯ ದೃಷ್ಟಿಯಲ್ಲಿ ತನ್ನ ಕಾಲದ್ದು ಹೊಸಗನ್ನಡ ಎಂಬ ಭಾವನೆಯಿದೆ. ಆದರೆ ಅವನ ಕಾಲದ ಕನ್ನಡ ನಮಗೆ ಹಳಗನ್ನಡ! ಹಾಗಾದರೆ ಹಳಗನ್ನಡ ಯಾವುದು, ಹೊಸಗನ್ನಡ ಯಾವುದು? ಉತ್ತರ ಸುಲಭ: ಎಲ್ಲರಿಗೂ ತಮ್ಮ ಕಾಲದ್ದು ಹೊಸದು, ಹಿಂದಿನದೆಲ್ಲ ಹಳೆಯದು. ಹೀಗಾಗಿ ನಾವೀಗ ನಮ್ಮ ಕಾಲದ ಕನ್ನಡವನ್ನು ಹೊಸಗನ್ನಡ ಎಂದು ಕರೆದುಕೊಳ್ಳುತ್ತಿದ್ದೇವೆ. ಮುಂದೆ ಇದರ ಸ್ವರೂಪವೂ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಯನ್ನು ಕಾಣುತ್ತದೆ. ಬೇಡ ಎಂದರೆ ನಿಲ್ಲುವುದೇ? ಈಗಾಗಲೇ ಅದರ ಸ್ವರೂಪ ಢಾಳಾಗಿ ವ್ಯತ್ಯಾಸವಾಗುತ್ತಿದೆ. ಒಟ್ಟಾರೆ ಹೇಳಬಹುದಾದುದಿಷ್ಟು: ಆಯಾ ಕಾಲದ ಕನ್ನಡ ಜನರಿಗೆ ಸಮಕಾಲೀನವಾದುದು ಹೊಸಗನ್ನಡ, ಹಿಂದಿನದೆಲ್ಲ ಹಳಗನ್ನಡ.
=====

2 ಕಾಮೆಂಟ್‌ಗಳು: