ನನ್ನ ಪುಟಗಳು

27 ನವೆಂಬರ್ 2013

ಸಾರ್ಥಕ ರಕ್ಷಣೆ (ಪದ್ಯ-5)

ವಾದಿರಾಜರ ಪರಿಚಯ
ಶ್ರೀ ವಾದಿರಾಯರು
ಹಯಗ್ರೀವ
 ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ನಡೆದ  ಒಂದು ಸಂಗತಿ ಇದು.
ನಮ್ಮ ಕನ್ನಡ ನಾಡಿನಲ್ಲಿ ಉಡುಪಿಯ ಹೆಸರನ್ನು ಯಾರು ಕೇಳಿಲ್ಲ? ಅದು ಪ್ರಸಿದ್ಧ ಯಾತ್ರಾಸ್ಥಳ. ಅಲ್ಲಿನ ಶ್ರೀಕೃಷ್ಣನ ದೇವಾಲಯಕ್ಕೆ ಭಾರತದ ಮೂಲೆ ಮೂಲೆಯಿಂದ ಅಪಾರ ಜನ ಬರುತ್ತಾರೆ.
ಶ್ರೀಕೃಷ್ಣನ ಪೂಜೆಯನ್ನು  ಎಂಟು ಮಠಗಳ ಸ್ವಾಮಿಗಳು ಮಾಡುತ್ತಾರೆ. ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದವರು ಶ್ರೀ ಆನಂದತೀರ್ಥರು; ಇವರನ್ನು ಮಧ್ವಾಚಾರ್ಯರು ಎಂದೂ ಕರೆಯುತ್ತಾರೆ.
ಶ್ರೀ ಮಧ್ವಾಚಾರ್ಯರಿಗೆ ಶ್ರೀ ಕೃಷ್ಣನ ಪೂಜೆ ಎಂದೆಂದಿಗೂ ನಡೆದುಕೊಂಡು ಬರಬೇಕು ಎಂದು ಅಪೇಕ್ಷೆ. ಇದಕ್ಕಾಗಿ ಎಂಟು ಮಠಗಳನ್ನು  ಸ್ಥಾಪಿಸಿದರು. ಇವುಗಳಲ್ಲಿ ಒಂದು ’ಸೋದೆ ಮಠ’ ಎಂಬುದು.
ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಈ ಮಠದಲ್ಲಿ ಒಬ್ಬ ಸ್ವಾಮಿಗಳಿದ್ದರು.
ತಿರುಪತಿಯ ಹೆಸರು ಕೇಳಿದ್ದೀರಲ್ಲ? ಉಡುಪಿಯ ಹಾಗೆಯೇ ಬಹು ಪ್ರಸಿದ್ಧವಾದ ಯಾತ್ರೆಯ ಸ್ಥಳ ಇಲ್ಲಿನ ಶ್ರೀ ವೆಂಕಟೇಶ್ವರ ದೇವಾಲಯವೂ ಭಾರತದಲ್ಲೆಲ್ಲ ಪ್ರಸಿದ್ಧ. ಇಲ್ಲಿಗೂ ಸಾವಿರಾರು ಜನ ಭಕ್ತರು ಬರುತ್ತಾರೆ. ಸೋದೆ ಮಠದ ಯತಿಗಳು ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ತಿರುಪತಿಗೆ ಬಂದರು.
ಶ್ರೀ ವೆಂಕಟೇಶ್ವರನ ದೇವಸ್ಥಾನ ಬೆಟ್ಟದ ಮೇಲಿದೆ. ಯತಿಗಳು ದೂರದಿಂದ ಮೊದಲನೆಯ ಬಾರಿ ಬೆಟ್ಟವನ್ನು ನೋಡಿದಾಗ ಅದು ಸಾಲಿಗ್ರಾಮದ ಹಾಗೆ ಕಂಡಿತಂತೆ. ಸಾಲಿಗ್ರಾಮ ಶಿಲೆ ವಿಷ್ಣುವಿನ ಭಕ್ತರಿಗೆ ತುಂಬ ಪವಿತ್ರ.
ಯತಿಗಳಿಗೆ ಚಿಂತೆಯಾಯಿತು. ಸಾಲಿಗ್ರಾಮದ ಮೇಲೆ ಕಾಲಿಟ್ಟು ಹತ್ತುವುದು ಎಷ್ಟು ಅಪಚಾರ! ದೊಡ್ಡ ತಪ್ಪು! ಆದರೆ ಬೆಟ್ಟ ಹತ್ತದೆ ಶ್ರೀ ವೆಂಕಟೇಶ್ವರನ ದರ್ಶನ ಆಗುವಂತಿಲ್ಲ. ಬೆಟ್ಟವನ್ನು ಅಂಬೆಗಾಲಿಡುವ ಮಗುವಿನ ಹಾಗೆ ಮೊಳಕಾಲಿನಲ್ಲಿ ಹತ್ತಿದರಂತೆ ಯತಿಗಳು.
ಅನಂತರ ದೇವಸ್ಥಾನಕ್ಕೆ ಹೋಗಿ, ಶ್ರೀ ವೆಂಕಟೇಶ್ವರನ ದರ್ಶನ ಮಾಡಿದರು.  ಸಾಲಿಗ್ರಾಮಹ ಮಾಲೆಯನ್ನೆ ದೇವರಿಗೆ ಅರ್ಪಿಸಿದರು.
ಆಗ ಅವರು ಶ್ರೀ ವೆಂಕಟೇಶ್ವರನ ಮೂರ್ತಿಗೆ ಸಮರ್ಪಿಸಿದ ಮಾಲೆಯನ್ನು ಈಗಲೂ ಕಾಣಬಹುದು.
                 ಶ್ರೀ ಮಧ್ವಾಚಾರ್ಯರು
ಪುಣ್ಯಕರ್ಮ ಎಂದರೆ ಒಳ್ಳೆಯ ಕೆಲಸ; ಪಾಪಕರ್ಮ ಎಂದರೆ ಕೆಟ್ಟ ಕೆಲಸ. ನಾವು ಒಳೆಯ ಕೆಲಸ ಮಾಡಿದರೆ ಕೆಲಸ ಮಾಡಿದರೆ ಫಲ ಒಳ್ಳೆಯದು ಕೆಟ್ಟ ಕೆಲಸ ಮಾಡಿದರೆ ಫಲ ಕೆಟ್ಟದ್ದು. ಹಾಗಾದರೆ ಒಳ್ಳೆಯದು ಎಂದರೇನು, ನಾವು ಇಲ್ಲಿ ಬದುಕಬೇಕಾದ ರೀತಿ ಹೇಗೆ ಎಂಬ ಪ್ರಶ್ನೆಗಳು ಏಳುತ್ತವೆ.
ಆದರೆ ಈ ಪ್ರಶ್ನೆಗಳಿಗೆ ಉತ್ತರ ಮಾತ್ರ ಅಷ್ಟು ಸುಲಭವಲ್ಲ. ಅದಕ್ಕೆ ಉತ್ತರ ಕೊಡಲು ಬಹುಮಂದಿ ಬುದ್ಧಿವಂತರು ಬಹು ಕಾಲದಿಂದ ಪ್ರಯತ್ನ ಮಾಡಿದ್ದಾರೆ. ಮಾನವರ ಬದುಕು ಹಸಾಗಬೇಕಾದರೆ, ಒಳ್ಳೆಯದು ಎನಿಸಿಕೊಳ್ಳಬೇಕಾದರೆ ನಾವು ಅನುಸರಿಸಬೇಕಾದ ಮಾರ್ಗ ಯಾವುದು ಎಂಬುದನ್ನು ಬೋಧಿಸಿದ್ದಾರೆ.
ಈ ಬಗೆಯ ಧರ್ಮಬೋಧೆ ಮಾಡಿದ ಭಾರತೀಯ ದರ್ಶನಕಾರರಲ್ಲಿ ಶ್ರೀ ಮಧ್ವಾಚಾರ್ಯರು (೧೨೩೭-೧೩೧೮) ಬಹು ದೊಡ್ಡವರಲ್ಲಿ ಒಬ್ಬರು. ಇವರು ಭಾರತದಲ್ಲೆಲ್ಲ ಸಂಚಾರ ಮಾಡಿದರು. ಭಗವಂತನಲ್ಲಿ ಭಕ್ತಿ ಇಡಿ, ಒಳ್ಳೆಯವರಾಗಿ ಬಾಳಿ ಎಂದು ಉಪದೇಶ ಮಾಡಿದರು.
ಸೋದೆ ಮಠವೆಂಬುದು ಶ್ರೀ ಮಧ್ವಾಚಾರ್ಯರಿಂದ ಹದಿನೆಂಟನೆಯ ತಲೆಯವರಾದ ಶ್ರೀ ವಾದಿರಾಜತೀರ್ಥ ಶ್ರೀಪಾದಂಗಳವರ ಕಾಲದಲ್ಲಿ ಅವರಿಂದ ಆ ಹೆಸರು ಪಡೆಯಿತು. (ಸೋದೆ ವಾದಿರಾಜರ ಮಠ ಎಂದೂ ಹೇಳುತ್ತಾರೆ.) ವಾದಿರಾಜರು ಎಂಟು ಮಠಗಳಲ್ಲಿ ಒಂದು ಮಠದ ಯತಿಶ್ರೇಷ್ಠರು ಆದರೂ ಕಾರಣಾಂತರದಿಂದ ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಬಳಿ ಇರುವ ಸೋದೆಯಲ್ಲಿ ಬಹುಕಾಲ ನೆಲೆಸಿದರು. ಅವರ ಅವತಾರ ಅಲ್ಲೇ ಪೂರ್ಣವಾಗಿ ಅವರ ವೃಂದಾವನವೂ ಅಲ್ಲೇ ಸ್ಥಪಿತವಾಯಿತು. ಆದ್ದರಿಂದ ಅವರಿಗೆ ಸೋದೆ ವಾದಿರಾಜರು ಎಂದು ಹೆಸರಾಯಿತು. ಅವರ ಮಠಕ್ಕೆ ಸೋದೆ ಮಠ ಎಂದೂ ಹೆಸರಾಯಿತು. ಇವರಿಗಿಂತ ಮುಂಚೆ ಈ ಮಠಕ್ಕೆ ಕುಂಭಾಸಿ ಮಠ ಎಂಬ ಹೆಸರಿದ್ದಿತು.
ವಾದಿರಾಜರು ಬಹು ದೊಡ್ಡ ವಿದ್ವನ್ಮಣಿಗಳು, ಸಮಾಜ ಸುಧಾರಕರು, ವಾದಿಗಳಲ್ಲಿ ರಾಜರು, ಪವಾಡ ಪುರುಷರು, ವರ ಕವಿಗಳು-ಎಂದು ಇತಿಹಾಸದಲ್ಲಿ ಸುಪ್ರಸಿದ್ಧರು.
             ‘ಮಗುವಾದರೆ ಮಠಕ್ಕೆ ಕೊಡುವಿರ?
ಉಡುಪಿ-ಕುಂದಾಪುರ ಮಾರ್ಗದಲ್ಲಿ ಕೋಟೇಶ್ವರ ಎಂಬ ಪ್ರಸಿದ್ಧ ಕ್ಷೇತ್ರವಿದೆ. ಅಲ್ಲಿಗೆ ಸಮೀಪದಲ್ಲಿ ಕುಂಭಾಸಿ ಕ್ಷೇತ್ರಕ್ಕೆ ಈಶಾನ್ಯದಲ್ಲಿ ಹೂವಿಕೆರೆ ಎಂಬ ಒಂದು ಸಣ್ಣ ಹಳ್ಳಿ. ಅಲ್ಲಿ ಹದಿನೈದನೆಯ ಶತಮಾನದಲ್ಲಿ (ಎಂದರೆ ಸುಮಾರು ಐದು ನೂರು ವರ್ಷಗಳ ಹಿಂ‌‌ದೆ) ಶ್ರೀ ರಾಮಾಚಾರ್ಯ-ಗೌರಮ್ಮ ಎಂಬ ಸಾತ್ವಿಕ ದಂಪತಿಗಳು ಸುಖವಾಗಿ ವಾಸ ಮಾಡಿಕೊಂಡಿದ್ದರು. ಅವರ ವಾಸ ಹೂವಿನಕೆರೆಗೆ ಸೇರಿದ ತಮ್ಮ ಸ್ವಂತ ಜಮೀನಿನ ಮಧ್ಯೆಯೇ ಒಂದು ಕುಟೀರದಲ್ಲಿ. ಹಣ, ದೊಡ್ಡ ಸ್ಥಾನ ಈ ಬಗೆಯ ಯಾವ ಆಸೆಯೂ ಅವರಿಗೆ ಇರಲಿಲ್ಲ. ದೇವರು ಕೊಟ್ಟುದರಲ್ಲೇ ಅವರಿಗೆ ತೃಪ್ತಿ. ಆದರೆ ಅವರ ಮನಸ್ಸಿಗೆ ಮಾತ್ರ ಸಮಾಧಾನವಿರಲಿಲ್ಲ. ಇದಕ್ಕೆ ಕಾರಣ ಅವರಿಗೆ ಮಕ್ಕಳಿರಲಿಲ್ಲ. ಒಂದು ಮಗುವಾದರೆ ಸಂತೋಷದಿಂದ ಸಂಸಾರ ಮಾಡಬಹುದು ಎನ್ನುವ ಹಂಬಲ ಅವರಿಗೆ.
ಹತ್ತಿರವೇ ಇದ್ದ ಕುಂಭಸಿಯಲ್ಲಿ ಶ್ರೀ ವಾಗೀಶ ತೀರ್ಥರೆಂಬ ತಪಸ್ವಿಗಳು ವಾಸವಾಗಿದ್ದರು. ಈ ದಂಪತಿಗಳು ಅಲ್ಲಿಗೆ ಹೋದರು. ಆ ಮಠದ ಭೂವರಾಹ ದೇವರಲ್ಲಿ ಸೇವೆ ಸಲ್ಲಿಸಿದರು. ನಮಗೆ ಒಂದು ಮಗುವನ್ನು ಕೊಡು ಎಂದು ಬೇಡಿಕೊಂಡರು. ದೇವರಿಗೆ ಹರಕೆ ಮಾಡಿಕೊಳ್ಳುವ ಪದ್ಧತಿ ಇಲ್ಲವೆ? ಗೌರಮ್ಮ ಭೂವರಾಹ ದೇವರಿಗೆ ಹರಕೆಯನ್ನು ಹೊತ್ತುಕೊಂಡಳು, ನನಗೆ ಮಗ ಹುಟ್ಟಿದರೆ ನಿನಗೆ ಲಕ್ಷಾಲಂಕಾರ ಸೇವೆ ಮಾಡಿಸುತ್ತೇನೆ ಎಂದು! ಸ್ವಾಮಿಗಳಲ್ಲೂ ಗಂಡ ಹೆಂಡತಿ ತಮ್ಮ ಆಸೆಯನ್ನು ತೋಡಿಕೊಂಡರು.
ಶ್ರೀ ವಾಗೀಶತೀರ್ಥರು ನಿಮಗೆ ಗಂಡು ಮಗುವಾದರೆ ಅದನ್ನು ಮಠಕ್ಕೆ ಕೊಡುವಿರ? ಎಂದು ಕೇಳಿದರು.
ಈ ಪ್ರಶ್ನೆಯನ್ನು ಕೇಳಿ  ಗಂಡ ಹೆಂಡತಿಗೆ ಅಷ್ಟೇನೂ ಸಂತೋಷವಾಗಲಿಲ್ಲ. ತಮಗೆ ಮಗು ಬೇಕು ಎಂದು ಬೇಡಿಕೊಳ್ಳುತ್ತಿರುವುದು ಮಗುವನ್ನು ಬೇರೆಯವರಿಗೆ ಕೊಡುವುದಕ್ಕೆ? ಆದರೆ ಸ್ವಾಮಿಗಳು ಕೇಳುತ್ತಿದ್ದಾರೆ. ಗಂಡ ಹೆಂಡತಿ ಉತ್ತರ ಕೊಡಲು ತೋರದೆ ಸುಮ್ಮನೆ ನಿಂತರು. ಸ್ವಾಮಿಗಳು ಯೋಚಿಸಿ ಮತ್ತೆ ಹೇಳಿದರು; ಮಗು ಮನೆಯಲ್ಲಿ ಹುಟ್ಟಿದರೆ ನಿಮಗೆ, ಹೊರಗೆ ಹುಟ್ಟಿದರೆ ನಮ್ಮ ಮಠಕ್ಕೆ, ಎನು ಹೇಳುತ್ತೀರಿ?
ಸ್ವಾಮಿಗಳು ಕೇಳಿದರೆ ಇಲ್ಲ ಎನ್ನುವುದು ಹೇಗೆ ಎಂದು ದಂಪತಿಗಳು ಯೋಚಿಸುತ್ತಿದ್ದರು. ಈ ಮಾತನ್ನು ಕೇಳಿ ಗೌರಮ್ಮನ ಮನಸ್ಸು ಸ್ವಲ್ಪ ಸಮಾಧಾನಪಟ್ಟಿತು. ಮಗು ಮನೆಯ ಹೊರಗೆ ಹುಟ್ಟುವ ಸಂಭವವೆಲ್ಲಿ? ಆದ್ದರಿಂದ ಸ್ವಾಮಿಗಳ ಮಾತನ್ನು ಒಪ್ಪಿದರೂ ಮಗು ನಮಗೇ. ಸ್ವಾಮಿಗಳಿಗೂ ನಾವು ಅವರ ಮಾತನ್ನು ಒಪ್ಪಿದರೂ ಮಗು ನಮಗೇ. ಸ್ವಾಮಿಗಳಿಗೂ ನಾವು ಅವರ ಮಾತು ಕೇಳಲಿಲ್ಲ ಎಂಬ ಬೇಸರವಿಲ್ಲ ಎಂಬುದೇ ಆ ಸಮಾಧಾನಕ್ಕೆ ಕಾರಣ.
“ಆಗಬಹುದು” ಎಂದು ಹೇಳಿ ನಮಸ್ಕಾರ ಮಾಡಿ ಹಿಂದಕ್ಕೆ ಬಂದರು.
ಇದಾದ ಕೆಲ ಕಾಲದ ತರುವಾಯ ಗೌರಮ್ಮ ಗರ್ಭಿಣಿಯಾದಳು. ರಾಮಾಚಾರ್ಯರು, ಅವರ ಹೆಂಡತಿ ಯೋಚನೆ ಮಾಡಿದರು. ಗಂಡು ಕೂಸು ಹುಟ್ಟಿದರೆ ಅದನ್ನು ಮಠಕ್ಕೆ ಒಪ್ಪಿಸುವುದು ಹೇಗೆ? ಆದ್ದರಿಂದ ಮಗು ಯಾವ ಕಾರಣಕ್ಕೂ ಮನೆಯ ಹೊರಗೆ ಹುಟ್ಟಬಾರದು ಎಂದು ತೀರ್ಮಾನಿಸಿದರು. ಗೌರಮ್ಮನೂ ಸದಾ ಜಾಗೃತಳಾಗಿದ್ದು ಮನೆಯಲ್ಲೇ ಇರುವುದಾಗಿ ತೀರ್ಮಾನಿಸಿದಳು.
ಮನುಷ್ಯ ತಾನೊಂದು ನೆನೆದರೆ ದೈವ ತಾನೊಂದು ಬಗೆಯುವುದು ಎನ್ನುತ್ತಾರೆ. ನಾವು ಎಷ್ಟೋ ಎಚ್ಚರಿಕೆಯಿಂದ ಒಂದು ಪ್ರಯತ್ನ ಮಾಡಿ, ಖಂಡಿತ ಹೀಗೆಯೇ ಆಗುತ್ತದೆ ಎಂದು ಲೆಖ್ಖ ಹಾಕುತ್ತೇವೆ, ಅದು ತಪ್ಪಿ ಹೋಗುತ್ತದೆ ಎಂಬುದು ಬಹುವೇಳೆ ನಮ್ಮ ಅನುಭವಕ್ಕೆ ಬರುವುದಲ್ಲವೆ? ರಾಮಾಚಾರ್ಯ ದಂಪತಿಗಳಿಗೂ ಅದು ಚೆನ್ನಾಗಿ ಅನುಭವಕ್ಕೆ ಬಂದಿತು.
            ಗೌರಿ ಗದ್ದೆ
ಗೌರಮ್ಮನಿಗೆ ಪ್ರಸವ ಕಾಲ ಹತ್ತಿರ ಬಂದಂತೆ ಮನಸ್ಸು ಜಾಗೃತವಾಗಿದ್ದು ಕಳವಳವೂ ಆಗುತ್ತಿದ್ದಿತು. ಶಾಲೀವಾಹನ ಶಕ ೧೪೦೨ ಶಾರ್ವರೀ ಸಂವತ್ಸರ (ಕ್ರಿಸ್ತಶಕ ೧೪೮೦)  ಮಾಘ ಶುದ್ಧ ದ್ವಾದಶಿಯ ದಿನ. ಅಂದು ಸಾಧನೆ ದ್ವಾದಶಿ, ಎಂದರೆ ಬೇಗನೆ ಎಲ್ಲರ ಊಟ ಆಗಬೇಕು. ರಾಮಾಚಾರ್ಯರ ಮನೆಯಲ್ಲಿ ಬೆಳಗಿನ ಝಾವದಲ್ಲೇ ಎದ್ದು ಅಡಿಗೆ-ಪೂಜಾ ಕಾರ್ಯಗಳಲ್ಲಿ ನಿರತರಾದರು. ಇನ್ನೂ ಪೂರ್ತಿ ಬೆಳಗಾಗಿಲ್ಲ, ಎಲ್ಲರೂ ಭೋಜನಕ್ಕೆ ಕುಳಿತರು. ಆ ಸಮಯದಲ್ಲಿ ಒಂದೆರಡು ದನಗಳು ಗದ್ದೆಯ ಒಳಕ್ಕೆ ಬಂದವು. ಸೊಂಪಾಗಿ ಬೆಳೆದು ನಿಂತಿದ್ದ ಹಚ್ಚ ಹಸಿರ ಪಚ್ಚೆ ಪೈರನ್ನು ಮೇಯಲು ಪ್ರಾರಂಭಿಸಿದವು. ಇದನ್ನು ಮನೆಯೊಳಗಿನಿಂದಲೇ ಗೌರಮ್ಮ ಕಂಡಳು. ಪಾಪ, ಪೈರಿನ ಕಡೆ ಲಕ್ಷ್ಯ ಹೆಚ್ಚು ಹೋಯಿತು. ಉಳಿದ ವಿಚಾರವೆಲ್ಲ ಮರೆತು ಹೋಯಿತು. ತಾನೇ ದನಗಳನ್ನು ಓಡಿಸಲು ಮನೆಯಿಂದ ಹೊರಗೆ ಧಾವಿಸಿದಳು. ಇದನ್ನು ಉಳಿದವರು ಯಾರೂ ಗಮನಿಸಲೂ ಇಲ್ಲ.
ಮನೆಯಿಂದ ಕೊಂಚ ದೂರ ಗದ್ದೆಯ ಅಂಚಿಗೆ ಹೋಗಿ ಗೌರಮ್ಮ ದನ ಓಡಿಸಿದಳು. ಅಲ್ಲಿಂದ ಮನೆಯ ಕಡೆ ಹೊರಟಳು. ಆದರೆ ಗೌರಮ್ಮನಿಗೆ ಆಯಾಸವಾಯಿತು. ಏನು ಮಾಡುವುದು? ಅಲ್ಲೇ ಒಂದು ಮರ. ಸ್ವಲ್ಪ ಆಯಾಸ ಕಡಿಮೆ ಆದ ಮೇಲೆ ಎದ್ದು ಹೋಗುತ್ತೇನೆ ಎಂದುಕೊಂಡಳು, ಮರದ ಕೆಳಗೆ ಕುಳಿತಳು. ಸೂರ್ಯೋದಯವಾಗುವ ಸುಮೂಹರ್ತದಲ್ಲೇ ಮನೆಯಲ್ಲಿ ಯಾರಿಗೂ ತಿಳಿಯದೆ ಗದ್ದೆ ಬಯಲು ಮರದ ಕೆಳಗೆ- ಮನೆಯ ಹೊರಗಡೆ ಮಗು ಹುಟ್ಟಿಬಿಟ್ಟಿತು! ಮಗು ಮುದ್ದಾಗಿತ್ತು. ಆಶ್ಚರ್ಯವಾಗುವ ಕಳೆ ಮುಖದಲ್ಲಿ.
ಶ್ರೀ ವಾಗೀಶತೀರ್ಥರಿಗೆ ಮಾತು ಕೊಟ್ಟು ಆಗಿ ಹೋಗಿತ್ತು, ಮಗು ಮನೆಯ ಹೊರಗೆ ಹುಟ್ಟಿದರೆ ಅದನ್ನು ಮಠಕ್ಕೆ ಒಪ್ಪಿಸುತ್ತೇವೆ ಎಂದು. ಗಂಡ ಹೆಂಡತಿ ಮಗುವನ್ನು ಸ್ವಾಮಿಗಳಿಗೆ ಒಪ್ಪಿಸಿದರು.
ವಾಗೀಶರು ಮಗುವಿಗೆ ತಾವು ಪೂಜಿಸುತ್ತಿದ್ದ ಭೂವರಾಹ ಸ್ವಾಮಿಯ ಹೆಸರನ್ನೇ ಇಟ್ಟರು. ಭೂವರಾಹ ಹುಟ್ಟಿದ ಈ ಗದ್ದೆಗೆ ಈಗಲೂ ಗೌರೀ ಗದ್ದೆಯೆಂದೇ ಹೆಸರಿದೆ. ಇಲ್ಲಿ ಬೆಳೆದ ಅಕ್ಕಿಯನ್ನೆ ಈಗಲೂ ಶ್ರೀ ವಾದಿರಾಜರ ಆರಾಧನೆಯಂದು ನಿವೇದನೆ ಮಾಡು ಪದ್ಧತಿಯೂ ಇದೆ. ಈ ಗದ್ದೆಯಲ್ಲೇ ಅವರು ಹುಟ್ಟಿದ ಸ್ಥಳದಲ್ಲಿ ಈಗ ವಾದಿರಾಜರ ಗುಡಿಯೂ ಇದೆ.
            ಬಾಲ್ಯಅಸಾಧಾರಣ ಗುಣ
ಭೂವರಾಹ ಶ್ರೀಮಠದ ಶಿಶುವೇ ಆದರೂ ತಾಯಿಯ ಲಾಲನೆ-ಪಾಲನೆಯಲ್ಲೇ ಮಗುವನ್ನು ಬಿಡಲಾಯಿತು. ಭೂವರಾಹ ಮೂರ್ತಿಗೆ ಮಾಡಿದ ಅಭಿಷೇಕದ ಹಾಲು ನಿತ್ಯವೂ ಹೂವಿನಕೆರೆಗೆ ಈ ಮಗುವಿಗಾಗಿ ಹೋಗುತ್ತಿತ್ತು. ಮೂರನೆಯ ವರ್ಷದಲ್ಲೇ ಅಕ್ಷರಾಭ್ಯಾಸ ಪ್ರಾರಂಭಿಸಿ ಐದನೆಯ ವಯಸ್ಸಿನಲ್ಲೇ ಬ್ರಹ್ಮೋಪದೇಶವೂ ತಂದೆಯವರಿಂದಲೇ ನಡೆಯಿತು. ಅನಂತರ ಮಗವನ್ನು ಶ್ರೀ ಮಠಕ್ಕೆ ಕರೆಸಿಕೊಂಡು ವಿದ್ಯಾಭ್ಯಾಸಕ್ಕೆ ಏರ್ಪಾಡು ಮಾಡಿದರು. ಚಿಕ್ಕ ಗುರುಗಳಾಗಿದ್ದ ಶ್ರೀ ವಿದ್ಯಾನಿಧಿ ತೀರ್ಥರೇ ಭೂವರಾಹನ ಗುರುಗಳು. ಹುಡುಗ ಬುದ್ಧಿವಂತ, ಬಹು ಚ          ಟುವಟಿಕೆಯವನು. ಅವನ ಬುದ್ಧಿಶಕ್ತಿಯಿಂದ ವಿದ್ಯಾ ಗುರುಗಳಿಗೆ ಬಹು ಸಂತೋಷ. ವಾಗೀಶತೀರ್ಥರು ಇವನ ಜಾತಕವನ್ನು ಬರೆಸಿ ಪರೀಶೀಲಿಸಿದಾಗ ಬಹು ಸೊಗಸಾಗಿ ಮಾತನಾಡುವ ಶಕ್ತಿ, ವಾದದಲ್ಲಿ ಗೆಲ್ಲುವ ಶಕ್ತಿ ಈತನಿಗಿವೆ, ಮುಂದೆ ಸಂನ್ಯಾಸಿಯಾಗುತ್ತಾನೆ ಎಂದು ಅವರಿಗೆ ತೋರಿತು. ಭೂವರಾಹನಿಗೂ ಸನ್ಯಾಸ ಆಶ್ರಮ ಕೊಡುವುದಾಗಿ ಯೋಚಿಸಿದರು. ಆದರೂ ಒಂದು ಮಾಡಿ ನೋಡಬೇಕು ಎನ್ನಸಿತು. ಪರೀಕ್ಷೆ ನಡೆಸಿದರು.

ಬಾಲಕ ಭೂವರಾಹ ’ನಾವು ಹಣ್ಣನ್ನು ಮುಟ್ಟಬಾರದು’ಎಂದು ಗೆಳೆಯರಿಗೆ ಹೇಳಿದ.
ಒಂದು ಕೋಣೆಯಲ್ಲಿ ಗುರಗಳು ಹಲವು ಬಗೆಯ ಹಣ್ಣುಗಳನ್ನು ಇಡಿಸಿದರು. ಭೂವರಾಹನ ಜೊತೆಯ ಅನೇಕ ಬಾಲಕರನ್ನು ಕರೆದು, ಆ ಹಣ್ಣುಗಳಲ್ಲಿ ಯಾವುದನ್ನಾದರೂ ನಾವು ತಿನ್ನಬಹುದು-ಗುರುಗಳಿಗೆ ಮಾತ್ರ ತಿಳಿಸಬಾರದು; ನಿನ್ನ ಮೇಲಿನ ಮಮತೆಯಿಂದ ಅವರು ನಮ್ಮನ್ನು ಆಕ್ಷೇಪಿಸಲಾರರು ಎಂದು ಭೂವರಾಹನಿಗೆ ಹೇಳಿ ಕರೆದುಕೊಂಡು ಹೋಗಿ. ಆಗ ಅವನೇನು ಹೇಳುವನೋ ನನಗೆ ಬಂದು ತಿಳಿಸಿ ಎಂದರು!
ಓರಗೆಯ ಹುಡುಗರು ಹಾಗೆಯೇ ಮಾಡಿದರು. ಹಣ್ಣುಗಳನ್ನು ತಿನ್ನೋಣ; ಗುರುಗಳಿಗೆ ಹೇಗೆ ಗೊತ್ತಾಗುತ್ತದೆ? ಗೊತ್ತಾದರೂ ಅವರು ಬಯ್ಯುವುದಿಲ್ಲ, ಗುರುಗಳಿಗೆ ನಿನ್ನನ್ನು ಕಂಡರೆ ತುಂಬ ಪ್ರೀತಿ ಎಂದರು. ಆ ಬಾಲಕ ಅದನ್ನು ಒಪ್ಪಲಿಲ್ಲ. ಗುರುಗಳಿಗೆ ಗೊತ್ತಾಗಲಿ ಬಿಡಲಿ, ನಾವು ಹಣ್ಣನ್ನು ಮುಟ್ಟಬಾರದು. ನಾವು ಅದನ್ನು ಅವರ ಅಪ್ಪಣೆ ಇ‌ಲ್ಲದೆ ತೆಗೆದುಕೊಳ್ಳಬಾರದು ಎಂದು ಖಂಡಿತವಾಗಿ ನುಡಿದ.
ಗುರುಗಳು ಇನ್ನೊಂದು ಪರೀಕ್ಷೆ ಮಾಡಿದರು. ಒಂದು ಕೋಣೆಯಲ್ಲಿ ಪುಸ್ತಕ, ಹಣ್ಣು ಮುಂತಾದ ಅನೇಕ ಬಗೆಯ ಪದಾರ್ಥಗಳನ್ನಿರಿಸಿದರು. ವಿವಿಧ ವಯಸ್ಸಿನ ಹಲವು ಬಾಲಕರನ್ನು ಕರೆದು, ನಿಮಗೆ ಏನು ಬೇಕೋ ತೆಗೆದುಕೊಳ್ಳಿ ಎಂದರು. ಕೆಲವರು ತಿಂಡಿಯನ್ನು ಆರಿಸಿದರು, ಕೆಲವರು ಹಣ್ಣುಗಳಿಗೆ ಕೈಚಾಚಿದರು. ಭೂವರಾಹ ಮಾತ್ರ ಒಳ್ಳೆಯ ಶಾಸ್ತ್ರಗ್ರಂಥವೊಂ‌ದನ್ನು ಆರಿಸಿ ತೆಗೆದುಕೊಂಡು ಬಂದನಂತೆ!
ಒಮ್ಮೆ ಶಾಲೆಯಲ ಹತ್ತಿರವೇ ಬಯಲಾಟ ನಡೆಯುತ್ತಿತ್ತು. ಬಯಲಾಟವನ್ನು ನೋಡಲು ಹೋಗೋಣವೆಂದು ಅವನ ಜೊತೆಯ ಹುಡುಗರು ಬಲಾತ್ಕರಿಸಿದಾಗ ಅದಕ್ಕೂ ಭೂವರಾಹ ಒಪ್ಪಲಿಲ್ಲ. ಗುರುಗಳ ಅಪ್ಪಣೆಯಿಲ್ಲದೆ ಹೋಗಬಾರದು ಎಂದ.
             ಸನ್ಯಾಸ ದೀಕ್ಷೆ
ಭೂವರಾಹ ವ್ಯಾಸಂಗದ ಆಸಕ್ತಿ, ಶುದ್ಧವಾದ ಅಭಿರುಚಿ, ಪ್ರಾಮಾಣಿಕತೆ, ತೇಜಸ್ಸು ಮುಂತಾದವುಗಳ ಕಂಡು ಕೇಳಿ ಗುರುಗಳಿಗೆ ತುಂಬ ಸಂತೋಷವಾಯಿತು ಆತನಿಗೆ ಏಳನೆಯ ವಯಸ್ಸಿನಲ್ಲಿಯೇ ಸನ್ಯಾಸಾಶ್ರಮ ಕೊಟ್ಟರು. ’ವಾದಿರಾಜ ತೀರ್ಥ’ ಎಂದು ನಾಮಕರಣ ಮಾಡಿದರು. ಶಾಸ್ತ್ರ-ಸಿದ್ಧಾಂತ ಮುಂತಾದವುಗಳ ಪಾಠ ಹೇಳಲು ಪ್ರಾರಂಭಿಸಿದರು. ಬಹು ಸ್ವಲ್ಪ ಕಾಲದಲ್ಲಿ ವಾದಿರಾಜರು ಎಲ್ಲ ಶಾಸ್ತ್ರಗಳ ಸಾರವನ್ನೂ ಗ್ರಹಿಸಿ ಅಪಾರ ವಿದ್ವತ್ತನ್ನು ಪಡೆದುಕೊಂಡರು. ಯತಿಗಳಿಗೆ ಉಚಿತವಾದ ಪ್ರಣವ ಮಂತ್ರ ಮೊದಲಾದುವನ್ನು ಶ್ರದ್ಧಾ ಭಕ್ತಿಗಳಿಂದ ನಿತ್ಯವೂ ಸಹಸ್ರಾರು ಬಾರಿ ಜಪ ಮಾಡಿದರು. ಮಂತ್ರ ಸಿದ್ಧಿಯನ್ನು ಸಂಪಾದಿಸಿ ಮಹಾಮಹಿಮರಾದರು. ಇದರೊಂದಿಗೇ ವಾದಿರಾಜರು ಹಯಗ್ರೀವ ದೇವರ ಉಪಾಸನೆಯನ್ನು ಬಹು ಭಕ್ತಿಯಿಂದ ಮಾಡಿ, ಆ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾದರು.
ಶ್ರೀ ವಾದಿರಾಜರು ಮಾಡಿದ ಒಂದು ಕೆಲಸ ವಿಶೇಷವಾದುದು. ಗುರುಗಳ ಅಪ್ಪಣೆಯನ್ನು ಪಡೆದು ಅವರು ಭಾರತದ ಪುಣ್ಯಕ್ಷೇತ್ರಗಳಿಗೆ ಹೋದರು, ಪ್ರತಿಯೊಂದು ಕಡೆಯೂ ಭಕ್ತಿಯಿಂದ ದೇವರ ಪೂಜೆ ನಡೆಸಿದರು. ಭಾರತದಲ್ಲಿ ಎಷ್ಟು ಪವಿತ್ರ ಸ್ಥಳಗಳಿವೆ, ಅಲ್ಲವೆ? ಸಾವಿರಾರು ಜನರು ಇಂತಹ ಸ್ಥಳಗಳಿಗೆ ಹೋಗಿ ಬರುತ್ತಾರೆ. ಅವರಿಗೆ ಆ ಸ್ಥಳಗಳ ವಿಷಯ ತಿಳಿಯುವುದು ಹೇಗೆ? ಪ್ರತಿಯೊಂದು ಸ್ಥಳದ ಪರಿಚಯ ಮಾಡಿ ಕೊಡುವವರು ಯಾರು? ವಾದಿರಾಜರು ಇತರ ಯಾತ್ರಿಕರಿಗೆ ಸಹಾಯವಾಗಲಿ ಎಂದು ತೀರ್ಥಪ್ರಬಂಧ ಎಂಬ ಪುಸ್ತಕವನ್ನು ಸಂಸ್ಕೃತದಲ್ಲಿ ಬರೆದರು. (ಆಗ ಭಾರತದಲ್ಲಿ ಎಲ್ಲ ಕಡೆಗಳಲ್ಲಿಯೂ ಉಪಯೋಗದಲ್ಲಿದ್ದ ಭಾಷೆ ಎಂದರೆ ಸಂಸ್ಕೃತ ತಾನೆ?) ಯಾವ ಕ್ಷೇತ್ರವಾದ ಮೇಲೆ ಯಾವ ಕ್ಷೇತ್ರಕ್ಕೆ ಹೋಗಬೇಕು; ಪ್ರತಿ ಸ್ಥಳದಲ್ಲಿ ನೋಡಬೇಕಾದುದೇನು, ಮಾಡಬೇಕಾದುದೇನು; ಆ ಕ್ಷೇತ್ರ ಏಕೆ ಮುಖ್ಯ – ಈ ಎಲ್ಲ ವಿಚಾರಗಳನ್ನು ಈ ಗ್ರಂಥ ತಿಳಿಸುತ್ತದೆ. ಈ ’ತೀರ್ಥಪ್ರಬಂಧ’ ಯಾತ್ರಿಕರ ಕೈಪಿಡಿ ಎನ್ನಬಹುದು. ಸುಮಾರು ನಾಲ್ಕು ನೂರ ಐವತ್ತು ವರ್ಷಗಳ ಹಿಂದೆ ಈ ಯತಿಗಳು ಹೀಗೆ ಇತರ ಯಾತ್ರಿಕರ ಕಷ್ಟಸುಖಗಳ ವಿಷಯ ಯೋಚನೆ ಮಾಡಿ ಪುಸ್ತಕ ಬರೆದರು.
            ದೇವರೇ ವಿಷ ತಿಂದ
ವಾದಿರಾಜರು ದೇವರ ಅನುಗ್ರಹದಿಂದ ಉಳಿದುಕೊಂಡ ಕಥೆಯೂ ಬಹು ಸ್ವಾರಸ್ಯವಾಗಿದೆ. ವಾದಿರಾಜರ ಉಪಾಸನಾಮೂರ್ತಿ ಹಯವದನ ಮೂರ್ತಿ ಎಂದು ಆಗಲೇ ಹೇಳಿದೆಯಷ್ಟೆ. ಈ ಕುದುರೆ ಮುಖದ ದೇವರಿಗೆ ಅವರು ನಿತ್ಯವೂ ’ಮಡ್ಡಿ’ (ಹಯಗ್ರೀವ)ಯನ್ನು ನಿವೇದನೆ ಮಾಡುತ್ತಿದ್ದರು. ಒಂದು ದೊಡ್ಡ ಹರಿವಾಣದ ತುಂಬ ಈ ಭಕ್ಷ್ಯವನ್ನು ತುಂಬಿ ಅದನ್ನು ತಲೆಯ ಮೇಲಿಟ್ಟುಕೊಂಡು ಕುಳಿತು ಹಯವದನನನ್ನು ಸ್ಮರಿಸುತ್ತಿದ್ದರು. ಹಯವದನ ಸುಂದರವಾದ ಬಿಳಿಯ ಬಣ್ಣದ ಕುದುರೆಯ ರೂಪದಿಂದ ಬಂದು ವಾದಿರಾಜರ ಎರಡು ಭುಜಗಳ ಮೇಲೂ ತನ್ನೆರಡು ಮುಂಗಾಲುಗಳನ್ನು ಇರಿಸಿಕೊಂಡು ಅವರ ತಲೆಯ ಮೇಲಿದ್ದ ಹಯಗ್ರೀವವನ್ನು ಮೆಲ್ಲುತ್ತಿದ್ದನಂತೆ. ವಾದಿರಾಜರ ಈ ಭಂಗಿಯ ಚಿತ್ರವನ್ನು ಈಗಲೂ ಅನೇಕ ಕಡೆ ನೋಡಬಹುದು.
ತಟ್ಟೆಯಲ್ಲಿದ್ದ ಹಯಗ್ರೀವವನ್ನು ತಿಂದು ಭಕ್ತರಿಗಾಗಿ ಸ್ವಲ್ಪ ಪ್ರಸಾದವನ್ನು ಉಳಿಸುತ್ತಿದ್ದುದು ವಾಡಿಕೆಯಾಗಿತ್ತು. ಆದರೆ ಒಮ್ಮೆ ತಟ್ಟೆ ಪೂರ್ತಿ ಖಾಲಿಯಾಯಿತು. ನೆಕ್ಕಿ ನಿಕ್ಕಿ ಹಯಗ್ರೀವವನ್ನು ಪೂರೈಸಿಬಿಟ್ಟಿದ್ದ ಹಯವದನಸ್ವಾಮಿ. ಇಂದೇಕೆ ಪ್ರಸಾದ ದಯಪಾಲಿಸಲಿಲ್ಲ ದೊರೆ ಎಂದು ವಾದಿರಾಜರು ಚಿಂತಿಸಿದರು. ಅಂದು ಅವರಿಗೆ ಸ್ವಪ್ನ ಸೂಚನೆಯಾಯಿತು. ನಿನಗಾಗದವರು ಇಂದಿನ ನೈವೇದ್ಯದಲ್ಲಿ ವಿಷ ಹಾಕಿದ್ದುದರಿಂದ ನಾನೇ ಅದನ್ನು ಪೂರ್ತಿ ಸ್ವೀಕರಿಸಿದ್ದೇನೆ. ವಿಷದಿಂದ ಹಸಿರಾಗಿರುವ ನನ್ನ ಪ್ರತಿಮೆ ನಲವತ್ತೆಂಟು ದಿನಗಳ ’ಗುಳ್ಳ’ದ  ನಿವೇದೆಯಿಂದ ಪರಿಹಾರವಾಗುತ್ತದೆ” ಎಂದು!
ಉಡುಪಿಯ ಬಳಿ ಒಂದು ಹಳ್ಳಿಯ ಭೂಮಿಯಲ್ಲಿ ಮಾತ್ರ ಬೆಳೆಯುವ ಈ ಕಾಯಿ ವಾದಿರಾಜಗುಳ್ಳ ಎಂದು ಈಗಲೂ ಪ್ರಸಿದ್ಧವಾಗಿದೆ. ವಾದಿರಾಜರು ಈ ಗುಳ್ಳದ ಕಾಯಿಯನ್ನು ದಿನವೂ ಅರ್ಪಿಸಿ ಪೂಜಿಸಿದರು.  ತರುವಾಯ ಹಯವದನ ಮೂರ್ತಿಯ ಹಸಿರೆಲ್ಲ ಹೋಗಿ ಕಂಠದಲ್ಲಿ ಮಾತ್ರ ಹಸಿರು ಉಳಿಯಿತು.
              ಶ್ರೀ ಹಯವದನ
ಈ ಹಯಗ್ರೀವ ಪ್ರತಿಮೆ ವಾದಿರಾಜರಲ್ಲಿ ಬಂದು ಸೇರಿದ್ದು ಕೂಡ ಒಂದು ಪವಾಡವೇ ಆಗಿದೆ.
ಅಕ್ಕಸಾಲಿಯೊಬ್ಬ ಗಣಪತಿಯ ವಿಗ್ರಹವನ್ನು ಮಾಡುವ ಉದ್ದೇಶದಿಂದ ಪಂಚಲೋಹ ಕಾಯಸಿ ಎರಕ ಹೊಯ್ದನು. ಆದರೆ ಅಚ್ಚು ಗಣಪತಿಯದೇ ಆಗಿದ್ದರೂ, ತೆಗೆದು ನೋಡಿದಾಗ ಅದು ಗಜಗ್ರೀವದ ಬದಲು ಹಯಗ್ರೀವ ಮೂರ್ತಿಯಾಗಿತ್ತು! ಅಕ್ಕಸಾಲಿಗ ಕೋಪಗೊಂಡು ಕೆಂಪಗೆ ಇನ್ನೂ ಬಿಸಿಯಲ್ಲೇ ಇದದ ಹಯಗ್ರೀವ ವಿಗ್ರಹವನ್ನು ಸುತ್ತಗೆಯಿಂದ ಜಜ್ಜತೊಡಗಿದನು. ಆದರೆ ಅದು ಆ ಏಟಿಗೆ ಸ್ವಲ್ಪವೂ  ಬಗ್ಗಲಿಲ್ಲ!

ಹಯವದನ ಬಿಳಿಯ ಕುದುರೆಯ ರೂಪದಿಂದ ಬರುತ್ತಿದ್ದನಂತೆ.
“ನನ್ನನ್ನು ವಾದಿರಾಜರಿಗೆ ಅರ್ಪಿಸು” ಎಂದು ಸೂಚನೆಯಾಯಿತು. ಮೆರವಣಿಗೆಯಿಂದ ಕೊಂಡೊಯ್ದು ಮಠಕ್ಕೆ ಒಪ್ಪಿಸಲು, ವಾದಿರಾಜರು ಭಕ್ತಿಯಿಂದ ಹಯವದನನನ್ನು ಬರಮಾಡಿಕೊಂಡು ಪೂಜಿಸಲು ಪ್ರಾರಂಭಿಸಿದರು.
ಆ ಸ್ವರ್ಣಕಾರ ಗುಂಪಿನವರೆಲ್ಲಾ ವಾದಿರಾಜರ ಶಿಷ್ಯರಾದರು. ಈಗಲೂ ಈ ವಂಶಸ್ಥರೆಲ್ಲಾ ಸೋಕೆ ಮಠದ ಶಿಷ್ಯರೇ ಆಗಿದ್ದಾರೆ.
ಈ ಹಯವದನ ವಾದಿರಾಜರ ಜೀವನದಲ್ಲಿ ಅನೇಕ ವಿಚಿತ್ರ ಲೀಲೆಗಳನ್ನು ತೋರಿದ್ದಾನೆ. ಒಮ್ಮೆ ಪಂಢರಪುರದಲ್ಲಿ ಸ್ವಾಮಿಗಳು ಬಿಡಾರ ಮಾಡಿದಾಗ, ಹಯವದನ ದೇವದಿವ್ಯಾಶ್ವ ರೂಪದಲ್ಲಿ ಬಂದು ಹೊಲದಲ್ಲಿ ಕಡಲೆ ಪೈರನ್ನು ಮೇಯಲಾರಂಭಿಸಿದನಂತೆ. ಆ ಕುದುರೆಯನ್ನು ಹಿಡಿಯಲು ಜನ ಪ್ರಯತ್ನಪಟ್ಟರು. ಅದು ವಾದಿರಾಜರ ಬಿಡಾರದವರೆಗೂ ಬಂದು ಅದೃಶ್ಯವಾಯಿತು. ಆ ಹೊಲದೊಡೆಯ ಸ್ವಾಮಿಗಳಲ್ಲಿ ದೂರಿಕೊಂಡನು.
ವಾದಿರಾಜರು ನಮ್ಮ ಮಠದಲ್ಲಿ ಕುದುರೆಯಿಲ್ಲ ಎಂದರು. ಮರುದಿನ  ಆ ಬಿಳಿ ಕುದುರೆ ಅದೇ ಹೊಲಕ್ಕೆ ದಾಳಿಯಿಟ್ಟತು. ಯಜಮಾನನೇ ಅಟ್ಟಿಸಿಕೊಂಡು ಬಂದನು. ಸ್ವಾಮಿಗಳ ಪೂಜೆ ನಡೆಯುವ ಕಾಲಕ್ಕೆ ಸರಿಯಾಗಿ ಬಂದು ಕುದುರೆಯು ಪೂಜೆಯನ್ನು ನೋಡುತ್ತ ಕುಳಿತಿದ್ದ ನೂರಾರು ಜನರನ್ನು ಭೇದಿಸಿಕೊಂಡು ಬಂದಿತು. ಪೂಜಾಪೀಠದಲ್ಲಿ ವಿರಾಜಮಾನಾಗಿದ್ದ ಹಯಗ್ರೀವ ಮೂರ್ತಿಯಲ್ಲಿ ಐಕ್ಯವಾದಂತೆ ಭಾಸವಾಯಿತು. ಜಮೀನ್ದಾರ ಈ  ಅಚ್ಚರಿಯನ್ನು ವಾದಿರಾಜರಲ್ಲಿ ನಿವೇದಿಸಿಕೊಂಡಾಗ, ಗುರುಗಳೆಂದರು:
“ನೀನು ಪುಣ್ಯವಂತ. ಆದ್ದರಿಂದಲೇ ಹಯವದನ ನಿನಗೆ ದರ್ಶನ ವಿತ್ತಿದ್ದಾನೆ. ಇದರಿಂದ ನಿನಗೆ ತುಂಬ ಒಳ್ಳೆಯದಾಗುವುದು.”
ಹೀಗೆ ವಾದಿರಾಜರ ಗಾಢವಾದ ಭಕ್ತಿ, ಇದರಿಂದ ದೇವರು ಅವರಿಗೆ ಅನುಗ್ರಹ ಮಾಡಿದ್ದು ಇವನ್ನು ಕುರಿತು ಇಂದಿಗೂ ಜನರ ಬಾಯಲ್ಲಿ, ಸ್ಮರಣೆಯಲ್ಲಿ ಅನೇಕ ಕಥೆಗಳು ಉಳಿದುಬಂದಿವೆ.
              ಭೂತವನ್ನು ಗೆದ್ದ ಮಹಿಮೆ
ಶ್ರೀ ವಾದಿರಾಜರು ಒಳ್ಳೆಯವರಿಗೆ ಸಹಾಯ ಮಾಡುತ್ತಿದ್ದರು, ಕೆಟ್ಟವರಿಗೆ ಶಿಕ್ಷಿಸುತ್ತಿದ್ದರು, ಅವರಿಗೆ ವಿಶೇಷ ಶಕ್ತಿ ಇತ್ತು ಎಂದು ಅನೇಕ ಸ್ವಾರಸ್ಯವಾದ ಕಥೆಗಳನ್ನು ಹೇಳುತ್ತಾರೆ. ಅವರು ಹಲವು ಪವಾಡಗಳನ್ನು ಮಾಡಿದರು ಎಂದೂ ಕಥೆಗಳಿವೆ. ಈ ಪವಾಡಗಳನ್ನು ಮಾಡಲು ಅವರಿಗೆ ಒಬ್ಬ ಭೂತರಾಜನ ಸಹಾಯವಿತ್ತು ಎಂದೂ ಹೇಳುತ್ತಾರೆ.
ನಾರಾಯಣಾಚಾರ್ಯ ಎಂಬ ಒಬ್ಬ ಶಿಷ್ಯ ಇವರ ಬಳಿ ವ್ಯಾಸಂಗಮಾಡಿ ದೊಡ್ಡ ವಿದ್ವಾಂಸನಾದನು. ಆದರೆ ಆತನಿಗೆ ವಿದ್ಯೆಯಿಂದ ವಿನಯ ಬರಲಿಲ್ಲ.
ಮದ ಅಧಿಕವಾಯಿತು. ಮಠಕ್ಕೆ ಯಾರು ಬಂದರೂ ಅವರ ಅವಮಾನ ಮಾಡುವುದೇ ಆತನಿಗೆ ಸಂತೋಷದ ಕೆಲಸ, ಎಲ್ಲರನ್ನೂ ಆಕ್ಷೇಪಿಸುವುದೇ ಒಂದು ಚಟ. ಇದು  ಗುರುಗಳಾದ ವಾದಿರಾಜರ ಗಮನಕ್ಕೆ ಬಂದಿತ್ತು. ಅವನಿಗೆ ಬುದ್ಧಿ ಕಲಿಸಲು ಸರಿಯಾದ ಸಮಯಕ್ಕಾಗಿ ಅವರು ಮೌನದಿಂದ ಕಾಯುತ್ತಿದ್ದರು. ನಾರಾಯಣಾಚಾರ್ಯ ಸಾಕ್ಷಾತ್ ಗುರುಗಳನ್ನೂ ತೀಕ್ಣವಾಗಿ ಆಕ್ಷೇಪಣೆ ಮಾಡುತ್ತ ಬಂದನು. ಒಮ್ಮೆ ವ್ಯಾಸ ಮುನಿಗಳೆದುರಿಗೇ ವಾದಿರಾಜರನ್ನೇ ಈತ ನಿಂದಿಸಿದ. ಗುರುಗಳಿಗೆ ಈ ಅವಿಧೇಯ ದುಷ್ಟ ಶಿಷ್ಯನಿಗೆ ಶಿಕ್ಷೆಯಾಗಬೇಕು ಎನಿಸಿತು. ಅವನನ್ನು “ಬ್ರಹ್ಮ ರಾಕ್ಷಸನಾಗು” ಎಂದು ಶಪಿಸಿದರಂತೆ!
ಕಥೆ ಇಲ್ಲಿಗೆ ಮುಗಿಯಲಿಲ್ಲ; ಇನ್ನೂ ಇದೆ.
ನಾರಾಯಣಾಚಾರ್ಯ ಬ್ರಹ್ಮರಾಕ್ಷಸನಾದರೂ, ಹಿಂದಿನ ವಾಸನೆ ಆತನಿಗೆ ತಪ್ಪಲಿಲ್ಲ. ವಿಜಯನಗರದ ಹತ್ತಿರ ಬಂದು ದಾರಿಯಲ್ಲಿ ಮರದ ಮೇಲೆ ಈ ನಾರಾಯಣ ಬೊಮ್ಮರಕ್ಕಸ ಕುಳಿತ. ಆ ದಾರಿಯಲ್ಲಿ ಬಂದವರನ್ನೆಲ್ಲಾ ಹೆದರಿಸಿ ಅರ್ಥವಾಗದ ಒಂದು ಪ್ರಶ್ನೆಯನ್ನು ಘರ್ಜಿಸುತ್ತಿದ್ದನು. “ಆ ಕಾ ಮಾ ವೈ ಕೋ ನ ಸ್ನಾತಃ?” ಎಂಬುದು ಪ್ರಶ್ನೆ. ಈ ಪ್ರಶ್ನೆಯೇ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಪ್ರಶ್ನೆಗೆ ಉತ್ತರ ಹೇಳಲಿಲ್ಲವೆಂಬ ನೆವದಿಂದ ಅವರನ್ನು ಪೀಡಿಸುತ್ತಿದ್ದನು. ಅನೇಕರು ರಕ್ತಕಾರಿ ಪ್ರಾಣ ಬಿಡುತ್ತಿದ್ದರು.
ಈ ವಿಷಯ ವಾದಿರಾಜರ ಕಿವಿಗೆ ಬಿದ್ದಿತು. ಈ ಬ್ರಹ್ಮ ರಾಕ್ಷಸನಿಂದ ಜನರನ್ನು ಕಾಪಾಡಬೇಕು ಎಂದು ಅವರು ಉದ್ದೇಶಪೂರ್ವಕವಾಗಿಯೇ ಆ ದಾರಿಯಲ್ಲಿ ಬಂದರು. ಅವರಿಗೂ ಆ ಘರ್ಜನೆ ಕೇಳಿತು, ವಾದಿರಾಜರು ಜ್ಞಾನಿಗಳು, ಈ ಶಿಷ್ಯನ ವೃತ್ತಾಂತವೆಲ್ಲಾ ಅವರಿಗೆ ತಿಳಿಯಿತು. ಅವರು ನಸುನಗುತ್ತ ಉತ್ತರಿಸಿದರು. ರಕ್ಕಸನ ಪ್ರಶ್ನೆ ಹೀಗೆ: “ಆಷಾಡ, ಕಾರ್ತೀಕ,ಮಾಘ ಮತ್ತು ವೈಶಾಖ ಮಾಸಗಳಲ್ಲಿ ಯಾರು ವಿಧಿಯ ಅನುಸಾರವಾಗಿ ಸ್ನಾನ ಮಾಡುವುದಿಲ್ಲ?” ಎಂದು. ವಾದಿರಾಜರು ಹೇಳಿದರು, “ನೀನೇ ಮಾಡುವುದಿಲ್ಲ” ಎಂದು! ತನ್ನ  ಪ್ರಶ್ನೆಯನ್ನು ಅರ್ಥಮಾಡಿಕೊಂಡವರು ಯಾರು ಎಂದು ಬ್ರಹ್ಮರಾಕ್ಷಸ ಬೆರಗಾದ. ಅನಂತರ ಗುರುಗಳನ್ನು ಗುರುತಿಸಿ ಅವರಿಗೆ ಶರಣಾಗತನಾದ. “ನೀವು ಹೇಳಿದಂತೆ ಕೇಳಿಕೊಂಡಿರುತ್ತೇನೆ” ಎಂದು ಒಪ್ಪಿದ.
ಅಂದಿನಿಂದ ವಾದಿರಾಜರ ಪವಾಡಗಳು ಅಧಿಕವಾದವು. ಮಹಿಮೆ ಅಗಾಧವಾಯಿತು.
ಈಗಲೂ ಸೋದೆಯಲ್ಲಿ “ನಾರಾಯಣ ಭೂತ” ಎಂಬ  ಭೂತದ ಪೂಜೆ ನಡೆಯುತ್ತದೆ. ಈ ನಾರಾಯಣ ಭೂತ ನಾರಾಯಣಾಚಾರ್ಯನೇ, ಗುರುಗಳ ದಯೆಯಿಂದ ಅವನ ಶಾಪ ಕಳೆಯಿತು, ಈಗ ಪೂಜೆ ನಡೆಯುತ್ತಿದೆ ಎಂದು ಹೇಳುತ್ತಾರೆ.
               ವ್ಯವಸ್ಥೆಯಲ್ಲಿ ಎತ್ತಿದ ಕೈ
ಕನ್ನಡನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಹಯ ಪ್ರಸಿದ್ಧವಾದ ಸ್ಥಳ. ಇಲ್ಲಿ ಮಂಜುನಾಥ ಸ್ವಾಮಿಯ ದೇವಾಲಯ ಇದೆ. ಪ್ರತಿನಿತ್ಯ ಸಾವಿರಾರು ಮಂದಿ ಯಾತ್ರಿಕರು ಬರುತ್ತಾರೆ. ಮಂಜುನಾಥ ‌ಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪಿಸಿದವರು ಶ್ರೀ ವಾದಿರಾಜರು. ಇಲ್ಲಿ ಪೂಜೆಗಳು ಸರಿಯಾಗಿ ನಡೆಯುವಂತೆ ವ್ಯವಸ್ಥೆ ಮಾಡಿದವರು ಅವರೇ. ಇಂದಿಗೂ ಈ ದೇವಾಲಯದಲ್ಲಿ ಪೂಜೆ ಮಾಡುವವರು ಮಾಧ್ವ ಅರ್ಚಕರೇ.
ವಾದಿರಾಜರು ಮಹಾ ತಪಸ್ವಿಗಳು, ಮಹಾವಿದ್ವಾಂಸರು. ದೇವಾಲಯ, ಮಠ ಮೊದಲಾದ ಸಂಸ್ಥೆಗಳು ಹೀಗೆ ನಡೆಯಬೇಕು ಎಂದು ಏರ್ಪಾಡು ಮಾಡುವುದರಲ್ಲಿಯೂ ಬಹು ಸಮರ್ಥರು. ಯಾವ ಕೆಲಸವಾದರೂ ಕ್ರಮವಾಗಿ, ಒಪ್ಪವಾಗಿ ನಡೆಯಬೇಕು. ಇದಕ್ಕೆ ವ್ಯವಸ್ಥೆ ಬೇಕು. ಯಾರು ಒಂದು ಕೆಲಸವನ್ನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಲ್ಲ ಸ್ಪಷ್ಟವಾಗಿರಬೇಕು. ಇಂತಹ ಏರ್ಪಾಟನ್ನು ಮಾಡುವುದರಲ್ಲಿ ವಾದಿರಾಜರು ಎತ್ತಿದ ಕೈ.
                  ಪರ್ಯಾಯೋತ್ಸವ
’ಪರ್ಯಾಯೋತ್ಸವ’ ಎಂದು ಕೇಳಿದ್ದೀರ?
ಉಡುಪಿಯಲ್ಲಿ ಶ್ರೀಕೃಷ್ಣನಿಗೆ ಎಂಟು ಮಠಗಳ ಸ್ವಾಮಿಗಳು ಪೂಜೆ ಮಾಡುತ್ತಾರೆ, ಪ್ರತಿ ಮಠದ ಯತಿಗಳು ಎರಡು ವರ್ಷ ಶ್ರೀ ಕೃಷ್ಣನ ಪೂಜೆ ಮಾಡಬೇಕು, ಸರದಿ ಪ್ರಕಾರ ಎಂಟು ಮಠಗಳವರೂ ಪೂಜೆ ನಡೆಸಬೇಕು (ಎಂದರೆ ಪ್ರತಿ ಮಠಕ್ಕೆ ಹದಿನಾಲ್ಕು ವರ್ಷಕ್ಕೆ ಒಂದು ಸಲ ಪೂಜೆ ನಡೆಸುವ ಅವಕಾಶ ಬರಬೇಕು.) ಎಂದು ಶ್ರೀ ವಾದಿರಾಜರು ವ್ಯವಸ್ಥೆ ಮಾಡಿದರು. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅವರು ಹೇಳಿದಂತೆ ಇಂದೂ ನಡೆಯುತ್ತದೆ. ಎರಡು ವರ್ಷಕ್ಕೆ ಒಂದು ಸಲ ಒಬ್ಬ ಸ್ವಾಮಿಗಳು ಮತ್ತೊಬ್ಬರಿಗೆ ಶ್ರೀ ಕೃಷ್ಣನ ಪೂಜೆಯ ಕರ್ತವ್ಯವನ್ನು ವಹಿಸಿಕೊಡುತ್ತಾರೆ. ಇದು ಸಂಕ್ರಾಂತಿಯಾದ ಮೇಲೆ ಎರಡನೆಯ ಮತ್ತು ಮೂರನೆಯ ದಿನ ನಡೆಯುತ್ತದೆ. ಇದು ’ಪರ್ಯಾಯೋತ್ಸವ’.
              ಯಾರೂ ಕೀಳಲ್ಲ
ಕೋಟ ಮತ್ತು ಕೋಟೇಶ್ವರ ಗ್ರಾಮಗಳಲ್ಲಿ ಬೇರೆ ಬೇರೆ ಜಾತಿಯವರಲ್ಲಿ ವಾದ ಹುಟ್ಟಿತು. ಜಗಳ ಬೆಳೆದು ಅನಾಹುತವಾಗುತ್ತದೆ ಎಂಬ ಸ್ಥಿತಿ ಬಂದಿತು. ಅದನ್ನು ತಿಳಿದ ವಾದಿರಾಜರು ಅಲ್ಲಿಗೆ ಹೋಗಿ ಅವರನ್ನು ಸಮಾಧಾನ ಮಾಡಿದರು. ಕೋಟೇಶ್ವರದಲ್ಲಿ ಕೀಳು ಎ‌ನ್ನಿಸಿದ್ದವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು, ಅವರನ್ನು ಮೇಲಕ್ಕೆತ್ತಿದರು.
ಅಕ್ಷರ ಬಾರದೆ, ತುಳುಭಾಷೆ ಮಾತ್ರ ಬರುತ್ತಿದ್ದ  ಹಿಂದುಳಿದ ’ಅಸ್ಪೃಶ್ಯರು’ ಕೆಲವರಿದ್ದರು. ವಾದಿರಾಜರು ಅವರಿಗಾಗಿ ತುಳುಭಾಷೆಯಲ್ಲಿಯೇ ದೇವರನಾಮಗಳನ್ನು ರಚಿಸಿದರು.
ಕನಕದಾಸರು ಬಹು ದೊಡ್ಡ ಭಕ್ತರು. ಅವರು ಕೀಳು ಕುಲದಲ್ಲಿ ಹುಟ್ಟಿದವರು ಎಂದು ಕೆಲವರು ಅವರನ್ನು ಗೌರವದಿಂದ ಕಾಣಲಿಲ್ಲ. ಅವರು ಉಡುಪಿಗೆ ಬಂದಾಗ ಅವರನ್ನು ದೂರ ಇಟ್ಟರು. ಇದು ವಾದಿರಾಜರಿಗೆ ತಿಳಿದಾಗ, ಅವರು ಕನಕದಾಸರನ್ನು ಕರೆಸಿ ಮಾತನಾಡಿದರು. ಇತರರಿಗೆ ಅವರ ಘನತೆಯನ್ನು ತಿಳಿಸಿಕೊಟ್ಟರು.
            ರಾಜನನ್ನು ಉದ್ಧರಿಸಿದರು
ವಾದಿರಾಜರು ಉಡುಪಿಯಲ್ಲಿದ್ದವರು. ಸೋದೆಯಲ್ಲಿ ನೆಲೆಸಿದ ಕಾರಣ ಕಥೆಯೂ ಸ್ವಾರಸ್ಯವಾಗಿದೆ.
ಕಾರವಾರ ಜಿಲ್ಲೆಯ ಸಿರಸಿಗೆ ಹನ್ನೆರಡು ಮೈಲಿ ದೂರದಲ್ಲಿರುವ ಸೋಂದ ಮೂರು ಲಕ್ಷ ಪ್ರಜಾಸಂಖ್ಯೆಯ ಅರಸಪ್ಪನಾಯಕನ ರಾಜಧಾನಿಯಾಗಿತ್ತು. ಇದಕ್ಕೆ ಹತ್ತಿರವೇ ಶಾಲ್ಮಲೀ ನದಿ ಹರಿಯುತ್ತದೆ. ಸುತ್ತ ಮಲೆನಾಡಿನ ಪ್ರಕೃತಿ ಸೌಂದರ್ಯ ಮೆರೆಯುತ್ತದೆ.
ಅರಸಪ್ಪನಾಯಕ ನೆರೆಯ ರಾಜರೊಂದಿಗೆ ಒಮ್ಮೆ ಯುದ್ಧ ಮಾಡಬೇಕಾಯಿತು. ಯುದ್ಧದಲ್ಲಿ ಸೋತುಹೋದ. ಹೆಂಡತಿಯ ಸಮೇತ ಅರಣ್ಯದ ಪಾಲಾದನು.
ಕಾಡಿನಲ್ಲಿ ಅಲೆಯುತ್ತ ಬಂದ ಅರಸಪ್ಪ ಮಧ್ಯೆ ಒಂದೆಡೆ ಅಚ್ಚರಿಯಿಂದ ನಿಂತ.
ಮುಖದಲ್ಲಿ ತೇಜಸ್ಸು ತುಳುಕಾಡುತ್ತಿದ್ದ ಸನ್ಯಾಸಿಗಳೊಬ್ಬರು ತಪಸ್ಸು ಮಾಡುತ್ತಿದ್ದರು. ಅವರನ್ನು ನೋಡುತ್ತ ಅರಸಪ್ಪನಿಗೆ ಭಕ್ತಿ ಉಕ್ಕಿ ಬಂದಿತು. ಹೆಂಡತಿಯೊಡನೆ ಮುಂದೆ ಬಂದು ಅವರ ಪಾದಗಳಿಗೆ ನಮಸ್ಕರಿಸಿದ.
ತಪಸ್ಸು ಮಾಡುತ್ತಿದ್ದವರು ವಾದಿರಾಜರು. ಕಣ್ತೆರೆದು ನೋಡಿದರು. ಅರಸಪ್ಪ ತನ್ನ ಶೋಚನೀಯ ಸ್ಥತಿಯನ್ನು ಬಿನ್ನವಿಸಿಕೊಂಡ, ತನ್ನನ್ನು ಹೇಗಾದರೂ ಕಾಪಾಡಬೇಕೆಂದು ಕೇಳಿಕೊಂಡ.
ದುಷ್ಟ ಗುರುವಿನ ದುರುಪದೇಶದಿಂದ ಅರಸಪ್ಪ ಅನೇಕ ಅಯೋಗ್ಯ ಕಾರ್ಯಗಳನ್ನು ಮಾಡಿದ್ದ-ಅವೇ ಅವನ ಈ ದುಸ್ಥಿತಿಗೆ ಕಾರಣವೆಂದು ವಾದಿರಾಜರಿಗೆ ತಿಳಿಯಿತು. ಆದರೂ ತಮಗೆ ಶರಣಾಗತನಾದವನನ್ನು ರಕ್ಷಿಸುವುದು ಧರ್ಮ, ಅವನೂ ಪಶ್ಚಾತ್ತಾಪದಿಂದ ತುಂಬಿದ್ದಾನೆ. ಎನ್ನಿಸಿತು. ಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿ, “ಈಗ ಹೋಗಿ ಯುದ್ಧ ಮಾಡು, ವಿಜಯಿಯಾಗುವೆ” ಎಂದರು.
ಹಿಂದೆ ಬಲವಾದ ಸೈನ್ಯವನ್ನೆ ಕಟ್ಟಿಕೊಂಡು ಯುದ್ಧಕ್ಕೆ ಹೋಗಿದ್ದ ಅರಸಪ್ಪ. ಶಕ್ತಿವಂತರಾದ ಶತ್ರುಗಳ ಕೈಯಲ್ಲಿ ಸೋತಿದ್ದ. ಈಗ, ನಾಲ್ಕು ಕೆಂಪು ಮಂತ್ರಾಕ್ಷತೆ ಕಾಳನ್ನು ಕೈಯಲ್ಲಿ ಹಿಡಿದು ಯುದ್ಧಕ್ಕೆ ಹೋಗುವುದೇ?
ಮತ್ತೆ ಗುರುಗಳ ಮುಖ  ಕಂಡು, ’ಅವರು ಹೇಳಿದುದೇ ನನಗೆ ಅಪ್ಪಣೆ’ ಎಂದುಕೊಂಡ.
                 ಒಬ್ಬನೇ ಯುದ್ಧಕ್ಕೆ ಹೊರಟ
ಅವನ ಬೇಡಿಕೆಯಿಲ್ಲದೇ ದೊಡ್ಡ ಅಶ್ವಸೇನೆಯೊಂದು ನೆಲದಿಂದ ಸಿಡಿದೆದ್ದು ಸಹಾಯಕ್ಕೆ ನಿಂತಿತು! ವಾದಿರಾಜರಿಗೆ ವಿಧೇಯನಾಗಿದ್ದ ಭೂತರಾಜನ ಬಳಗ ಅಶ್ವಗಳನ್ನು ಉಪಯೋಗಿಸಿಕೊಂಡು ಸೋದೆಯನ್ನಾಕ್ರಮಿಸಿದ್ದ ಶತ್ರು ಸೇನೆಯನ್ನು ಹೊಡೆದೋಡಿಸಿತು. ಅರಸಪ್ಪ ನಾಯಕನಿಗೆ ಪ್ರಯಾಸವಿಲ್ಲದೆಯೇ ರಾಜ್ಯವನ್ನು ಹಿಂತುರುಗಿಸಿ ಸೋದೆಯ ಕೆರೆಯೊಳಗೆ ಹೋಗಿ ಲೀನವಾಯಿತು!
ಅರಸಪ್ಪ ವಾದಿರಾಜರ ದಯೆಯಿಂದ ಹೀಗೆ ನಿರಾಯಾಸವಾಗಿ ತನ್ನ ರಾಜ್ಯವನ್ನು ಪಡೆದ. ಹೃದಯದಲ್ಲಿ ಭಕ್ತಿ ಮತ್ತು ಕೃತಜ್ಞತೆ ಉಕ್ಕಿದವು. ಅವರ ನೆಚ್ಚಿನ ಶಿಷ್ಯನಾದನು.
ನನ್ನನ್ನು ಉದ್ಧಾರ ಮಾಡಿ ತಾವು ಇಲ್ಲಿಯೆ ನಿಲ್ಲಬೇಕು. ತಮ್ಮ ಸೇವಕ ನಾನು. ನನ್ನದೆಲ್ಲವನ್ನೂ ತಮಗೆ ಧಾರೆ ಎರೆಯಲು ನಾನು ಸಿದ್ಧ ಎಂದು ಬೇಡಿ ನಮಸ್ಕರಿಸಿದ. ವಾದಿರಾಜರು ಒಪ್ಪ ಅಲ್ಲಿ ನಿಂತರು. ಸೋದೆಯಲ್ಲಿ ತಮ್ಮ ಮಠವೊಂದನ್ನು ಕಟ್ಟಸಿದರು.
ಹೀಗೆ ವಾದಿರಾಜರು ಸೋದೆಗೆ ಬಂದುದಕ್ಕೆ ಒಂದು ಕಥೆಯನ್ನು ಇಂದಿಗೂ ಜನ ಹೇಳುತ್ತಾರೆ. ಸೋದೆಯಲ್ಲಿ ’ಹಯಗ್ರೀವ ಸರೋವರ’ ಎಂಬ ಕೆರೆ ಇದೆ. ಭೂತರಾಜ ಇದೇ ಕೆರೆಯಲ್ಲಿ ಮಾಯವಾದದ್ದು ಎನ್ನುತ್ತಾರೆ.
              ತ್ರಿವಿಕ್ರಮ ಪ್ರತಿಷ್ಠೆ
ವಾದಿರಾಜರು ಬದರೀ ಯಾತ್ರೆ ಮಾಡಿದರು. ಹಿಂತುರುಗಿ ಬಂದ ಮೇಲೆ ಸೋದೆಯನ್ನು ಪವಿತ್ರ ಕ್ಷೇತ್ರವನ್ನಾಗಿ ಮಾಡಬೇಕು ಎಂದು ತೋರಿತು. ಬದರಿಯಲ್ಲಿದ್ದ ಲಕ್ಷ್ಮೀ-ತ್ರಿವಿಕ್ರಮ ಮೂರ್ತಿಗಳನ್ನು ಶಿಲಾರಥ ಸಮೇತ ತರಿಸಿ ಕ್ರಿಸ್ತ ಶಕ ೧೫೮೨ರಲ್ಲಿ (ಶಾಲೀವಾಹನ ಶಕ ೧೫೦೪) ವೈಶಾಕ ಶುದ್ಧ ಪೂರ್ಣಿಮೆಯಂದು ಸೋದೆಯಲ್ಲಿ ಪ್ರತಿಷ್ಠೆ ಮಾಡಿದರು.


ವಾದಿರಾಜರು ಅರಸಪ್ಪನಿಗೆ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.
ತ್ರಿವಿಕ್ರಮ ದೇವರ ರಥೋತ್ಸವವನ್ನು ಹದಿನೇಳು ವರ್ಷಗಳ ಕಾಲ ಅವರೇ ನೆರವೇರಿಸಿದರು. ಅದಲ್ಲದೆ ಆಕಾಶ ಗಂಗ, ಅಮೃತ ಗಂಗ, ಪಾತಾಳ ಗಂಗ, ಶೀತಲ ಗಂಗ ಮತ್ತು ಧವಳ ಗಂಗ ಎಂಬ ಹೆಸರಿನ ಪಂಚ ಗಂಗಾ ಪ್ರತಿಷ್ಠೆಯನ್ನು ಮಾಡಿ ಅಲ್ಲಿ ನೀರಿಗೆ ಯಾವಾಗಲೂ ಕೊರತೆಯಿಲ್ಲದಂತೆ ಮಾಡಿದರು. ಧವಳ ಗಂಗೆಯ ದಡಗಳಲ್ಲಿ ಈಶ್ವರ ಲಿಂಗ, ವೀಣಾಪಾಣೊ, ಮಾರುತಿ, ಕೊಳಲ ಕೃಷ್ಣರನ್ನು ಪ್ರತಿಷ್ಠಾಪಿಸಿದರು. ಮತ್ತೊಂದು ದಂಡೆಯಲ್ಲಿ ತಾವು ಪ್ರಪಂಚವನ್ನು ಬಿಡುವಾಗ ಪ್ರವೇಶ ಮಾಡಲು ಶಿಲಾ ವೃಂದವನವನ್ನು ನಿರ್ಮಾಣ ಮಾಡಿಸಿದರು. ಸೋದೆ ಕ್ಷೇತ್ರದಲ್ಲಿ ಶ್ವೇತದ್ವೀಪ, ಅನಂತಾಸನ ಮತ್ತು ವೈಕುಂಠ ಎಂಬ ಮೂರು ಭಾಗಗಳು; ಈ ಕ್ಷೇತ್ರ ಇಂದಗೂ ಪವಿತ್ರಾಗಿಯೂ ಪ್ರಶಾಂತವಾಗಿಯೂ ಇದೆ.
              ಸಾಧನೆಗಳು
ವಾದಿರಾಜರು ತಮ್ಮ ಅನೇಕ ಅಪೂರ್ವ ಸಾಧನೆಗಳಿಂದ ಬಹು ಪ್ರಸಿದ್ಧರಾದರು. ಜನರಿಗೆ ಒಳ್ಳೆಯದಾಗಲಿ ಎಂದೇ ಅವರು ಅನೇಕ ಕೆಲಸಗಳನ್ನು ಮಾಡಿದರು. ೧೪೮೦ರಲ್ಲಿ ಹುಟ್ಟಿದ ಅವರು ಒಂದು ನೂರ ಇಪ್ಪತ್ತು ವರ್ಷಗಳು ಬಾಳಿದರು. ಅವರ ಜೀವನವೆಲ್ಲ ದೇವರ ಧ್ಯಾನ, ಪೂಜೆ, ಇತರರಿಗೆ ಒಳ್ಳೆಯ ದಾರಿ ತೋರಿಸುವುದು, ಕಷ್ಟದಲ್ಲಿರುವವರಿಗೆ ಸಹಾಯಮಾಡುವುದು ಇವುಗಳಲ್ಲಿಯೇ ಕಳೆಯಿತು. ಅವರ ವಿಷಯವಾಗಿ ಎಷ್ಟೋ ಕಥೆಗಳನ್ನು ಭಕ್ತರು ಹೇಳುತ್ತಾರೆ ಅನೇಕರ ಕಷ್ಟಗಳನ್ನು ಕಳೆದರು, ಕೆಟ್ಟವರ ಅಹಂಕಾರವನ್ನು ಮುರಿದರು ಎಂಬುದು ಈ ಕಥೆಗಳ ಹೂರಣ. ಬಹುಮಂದಿ ಶಿಷ್ಯರಿಗೆ ವಿದ್ಯೆ ಕಲಿಸಿದರು. ಅವರು ರಚಿಸಿದ ಗ್ರಂಥಗಳು ಸಂಖ್ಯೆಯಿಂದಲೂ, ಯೋಗ್ಯತೆಯಿಂದಲೂ ದೊಡ್ಡವು. ವಾದಿರಾಜರು ಬಹು ದೊಡ್ಡ ವಿದ್ವಾಂಸರಾಗಿದ್ದರು. ಸಂಸ್ಕೃತ-ಕನ್ನಡ ಎರಡೂ ಭಾಷೆಗಳಲ್ಲಿ ಸೊಗಸಾದ ಕೃತಿಗಳನ್ನು ರಚಿಸಿದ್ದಾರೆ.
                  ಸದ್ಗ್ರಂಥಗಳು
ಕನ್ನಡದಲ್ಲಿ ಲಕ್ಷ್ಮೀ ಶೋಭಾನೆ, ವೈಕುಂಠ ವರ್ಣನೆ, ಹರಿಭಕ್ತಿ ಲತಾ, ಗುಂಡಕ್ರಿಯೆ, ಸ್ವಪ್ನಪದ, ಮಹಾಭಾರತ ತಾತ್ಪರ್ಯ ನಿರ್ಣಯ ಟೀಕೆ, ಕೀರ್ತನೆಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಯುಕ್ತಿಮಲ್ಲಿಕಾ, ರುಕ್ಮಿಣೀಶ ವಿಜಯ, ಭಾರತ ಲಕ್ಷಾಲಂಕಾರ, ಮಧ್ವಾಷ್ಟಕ, ಭೂಗೋಲ ನಿರ್ಣಯ, ಗುರ್ವರ್ಥ ದೀಪಿಕಾ, ಗುರುಭಾವ ಪ್ರಕಾಶಿಕಾ, ಕವಿಕದಂಬ ಕಂಠಭೂಷಾ, ಶ್ರೀ ಶ್ರೀಶಗುಣ ದರ್ಪಣ, ದುರ್ಗಾಸ್ತೋತ್ರ, ಶ್ರೀಕೃಷ್ಣ ಸ್ತುತಿ, ಶ್ರೀ ಲಕ್ಷ್ಮೀಸ್ತುತಿ, ದಶಾವತಾರ ಸ್ತೋತ್ರ, ಹಯಗ್ರೀವ ಸ್ತೋತ್ರ ಮುಂತಾದ ಕೃತಿಗಳು ಪ್ರಸಿದ್ಧವಾಗಿವೆ.
                  ಗ್ರಂಥಗುಣ
ವಾದಿರಾಜರ ಗ್ರಂಥಗಳಲ್ಲಿಲ ಮಾತುಗಳ ಸೊಗಸು ವಿಶಿಷ್ಟ ಗುಣ. ಹಯಗ್ರೀವ ದೇವರಲ್ಲಿ ವಾದಿರಾಜರಿಗೆ ತುಂಬಾ ಭಕ್ತಿ. ಅಶ್ವಧಾಟಿಯಲ್ಲಿ ಅವರು ರಚಿಸಿರುವ ಅನೇಕ ಕೃತಿಗಳನ್ನು ಹೇಳುತ್ತಿದ್ದರೆ-ಹಾಡುತ್ತಿದ್ದರೆ ಕೇಳುವವರ ಮನಸ್ಸಿನಲ್ಲಿ ಭಕ್ತಿ ಉಕ್ಕುತ್ತದೆ. ಸಾಮಾನ್ಯ ಜನರ ಮನಸ್ಸಿಗೆ ತಟ್ಟುವ ಹಾಗೆ ಸುಂದರವಾದ ಕೃತಿಗಳನ್ನು ಅವರು ಬರೆದರು; ಪಂಡಿತರು ಮೆಚ್ಚುವಂತೆಯೂ ಕಾವ್ಯವನ್ನು ಬರೆಯುವ ಶಕ್ತಿ ಅವರಿಗಿತ್ತು. ಅವರ ರುಕ್ಮಿಣೀಶ ವಿಜಯ ಎಂಬ ಕಾವ್ಯವನ್ನು ಮಹಾ ವಿದ್ವಾಂಸರೂ ಮೆಚ್ಚುತ್ತಾರೆ. ಇದನ್ನು ಅವರು ಬರೆದುದನ್ನು ಕುರಿತೇ ಒಂದು ಕಥೆ ಇದೆ.
ಮಾಘ ಎಂಬ ಕವಿ ಶಿಶುಪಾಲ ವಧೆ ಎಂಬ ಕಾವ್ಯವನ್ನು ಬರೆದ. ಶ್ರೀಕೃಷ್ಣನು ಶಿಶುಪಾಲನನ್ನು ಕೊಂದು ರುಕ್ಮಿಣಿಯನ್ನು ಮದುವೆಯಾದದ್ದು ಇದರ ಕಥೆ. ಇದನ್ನು ಅನೇಕ ವಿದ್ವಾಂಸರು ಹೊಗಳಿದರು. ಪೂನಾ ನಗರದಲ್ಲಿ ಈ ಕಾವ್ಯವನ್ನು ಆನೆಯ ಮೇಲಿಟ್ಟು ಮೆರವಣಿಗೆ ಮಾಡಿ ಗೌರವಿಸಲು ಏರ್ಪಾಟಾಗಿತ್ತು. ವಾದಿರಾಜರು ” ಈ ಕಾವ್ಯದಲ್ಲಿ ಅನೇಕ ದೋಷಗಳಿವೆ” ಎಂದರು. ಹಲವರಿಗೆ ಕೋಪ ಬಂದಿತು: ಇದಕ್ಕಿಂತ ಒಳ್ಳೆಯ ಕಾವ್ಯ ಇವರು ಬರೆಯಬಲ್ಲರೆ? ಎಂದು ಆಕ್ಷೇಪಣೆ ಮಾಡಿದರು. ವಾದಿರಾಜರು ಅದೇ ಕಥೆಯನ್ನು ತೆಗೆದುಕೊಂಡು ಸುಂದರವಾದ ಕಾವ್ಯ ಬರೆದರು. ಅಲ್ಲದೆ, ’ಶಿಶುಪಾಲವಧೆ’ ಎಂಬ ಹೆಸರಿನಲ್ಲಿ ಸಾವಿನ ಪ್ರಸ್ತಾಪ ಇದೆ: ಶ್ರೀಕೃಷ್ಣನ ಮದುವೆಯ ಕಥೆಯ ಹೆಸರಿನಲ್ಲಿ ಇದು ಬೇಡ ಎಂದು ರುಕ್ಮಿಣೀಶ ವಿಜಯ ಎಂದು ಮಂಗಳವನ್ನು ಸೂಚಿಸುವ ಹೆಸರನ್ನು ಕೊಟ್ಟರು. ಹದಿನೇಳೇ ದಿನಗಳಲ್ಲಿ ಕಾವ್ಯವನ್ನು ಮುಗಿಸಿದರು. ಇಲ್ಲಿ ಒಂದು ಸೊಗಸೆಂದರೆ ಒಂದೇ ವಾಕ್ಯಕ್ಕೆ ಬೇರೆ ಬೇರೆ ಅರ್ಥಗಳು ಇರುತ್ತವೆ ವಾಕ್ಯ ಓದಿದಾಗ ಈ ಹಲವು ಅರ್ಥಗಳು ಮನಸ್ಸಿಗೆ ಬರುತ್ತವೆ. ಪೂನಾ ನಗರದ ವಿದ್ವನ್ಮಣಿಗಳು ಅದನ್ನು ಪರಿಶೀಲಿಸಿ ತಲೆದೂಗಿ ಅದಕ್ಕೆ ವಿಶೇಷ ಮರ್ಯಾದೆಯನ್ನು ಮಾಡಿದರು. ಈ ಕಾವ್ಯ ವಾದಿರಾಜರು ಎಂತಹ ದೊಡ್ಡ ಕವಿಗಳು, ಅವರ ಭಕ್ತಿ ಎಷ್ಟು ಆಳವಾದದ್ದು ಎಂಬುದನ್ನು ತೋರಿಸುತ್ತದೆ.
ಮಹಾಭಾರತ ಲಕ್ಷಾಲಂಕಾರವೆಂಬ ಗ್ರಂಥ ಅಪೂರ್ವ ಇತಿಹಾಸ ಉಳ್ಳದ್ದಾಗಿದೆ. ತಾಯಿ ಗೌರಮ್ಮ ಗಂಡು ಮಗು ಹುಟ್ಟಿದರೆ ಭೂವರಾಹ ಸ್ವಾಮಿಗೆ ಲಕ್ಷಾಲಂಕಾರ ಮಾಡಿಸಿ ಸಮರ್ಪಿಸುವೆನೆಂದು ಹರಕೆ ಹೊತ್ತಿದ್ದಳಷ್ಟೆ? ಹರಕೆ ನಡೆಸಲು ಸಾಧ್ಯವೇ ಎಂಬ ಆಲೋಚನೆಯೇ ಮಾಡಲಿಲ್ಲ. ಮಗುವಿನ ಆಸೆಯಿಂದ ಮಾಡಿಕೊಂಡ ಹರಕೆಯಿದು. ದೇವರಿಗೆ ಲಕ್ಷಾಭರಣ ಮಾಡಿಸುವ ಚೈತನ್ಯ ಆ ಕುಟುಂಬಕ್ಕಿರಲಿಲ್ಲ. ಅದು ಹಾಗೇ ಉಳಿದಿತ್ತು. ಮಗ ಬಹು ಪ್ರಸಿದ್ಧ ಪಂಡಿತಾದ, ದೊಡ್ಡ ಪೀಠಾಧಿಪತಿಯಾದ, ಮಹಿಮಾವಂತನಾದ. ತಾಯಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆಗ ತನ್ನ ಬಹು ದಿನಗಳಿಂದ ಉಳಿದಿದ್ದಲ ಹರಕೆಯ ವಿಷಯವನ್ನು ಮಗನಲ್ಲಿ ಹೇಳಿಕೊಂಡಳು. ವಾದಿರಾಜರು ಅಪೂರ್ವ ಶ್ರೇಷ್ಠ ರೀತಿಯಲ್ಲಿ ತಾಯಿಯ ಹರಕೆಯನ್ನು ಸಲ್ಲಿಸಿಕೊಟ್ಟರು.
ಮಹಾಭಾರತದಲ್ಲಿ ದೊಡ್ಡ ವಿದ್ವಾಂಸರಿಗೂ ಅರ್ಥವಾಗದ ಕೆಲವು ಭಾಗಗಳಿವೆ. ವಾದಿರಾಜರು ಈ ಭಾಗಗಳು ಅರ್ಥವಾಗುವಂತೆ ಒಂದು ಗ್ರಂಥವನ್ನೆ ಬರೆದು, ಅದನ್ನೇ ಭೂವರಾಹ ಸ್ವಾಮಿಗೆ ಅರ್ಪಿಸಿದರು. ಭಾರತವನ್ನು ಬರೆದ ಶ್ರೀ ವೇದವ್ಯಾಸರ ಹೃದಯವನ್ನು ಹೊರಗೆಡಹುವ ‌ಗ್ರಂಥವಾಯಿತು ಇದು. ವಾದಿರಾಜರು ಲಕ್ಷ ಆಭರಣಗಳನ್ನು ಮಾಡಿ ದೇವರಿಗೆ ಒಪ್ಪಸಬಹುದಾಗಿತ್ತು. ಆ ಶಕ್ತಿ ಅವರಿಗೆ ಇತ್ತು. ಅವರ ಕಾಲಕ್ಕೆ ಅವರ ಮಠ ಸಂಪತ್ತಿನಿಂದ ತುಂಬಿತ್ತು. ಎಷ್ಟೋ ಆಭರಣಗಳನ್ನು ಮಾಡಿಸಿ ಹಯವದನನನ್ನೂ ಭೂವರಾಹನನ್ನೂ ಅಲಂಕರಿಸಿ ಪೂಜಿಸಿದ್ದರು. ಆದರೆ ಮಹಾಭಾರತದಂತಹ ಬಹು ಪವಿತ್ರ ಗ್ರಂಥ ಜನರಿಗೆ ಅರ್ಥವಾಗುವಂತೆ ಮಾಡಿದರೆ ದೇವರಿಗೂ ಸಂತೋಷ, ಲಕ್ಷ ಆಭರಣಕ್ಕಿಂತ ಇಂತಹ ಸೇವೆಯಿಂದಲೇ ಭಗವಂತನಿಗೆ ತೃಪ್ತಿ ಎನ್ನಿಸಿತು ಅವರಿಗೆ. ಇವರ ಸೇವೆ ಹೊಸ ರೀತಿಯದು, ಜ್ಞಾನವೇ ಬೆಳಕು, ಜ್ಞಾನಕ್ಕೆ ಸಮಾನವಾದುದಿಲ್ಲ ಎಂಬುದನ್ನು ತೋರಿಸಿಕೊಡುವ ಸೇವೆ.
ಶ್ರೀ ಶ್ರೀಶಗುಣದರ್ಪಣ ಎಂಬುದು ಮಹಾಲಕ್ಷ್ಮೀ ಸ್ತುತಿ.ಇದನ್ನು ಈಗಲೂ ಸೋದೆಯ ತ್ರಿವಿಕ್ರಮ ದೇವರ ಗುಡಿಯಲ್ಲಿರುಮ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಮಾಡುವಾಗ ಪಠಿಸುವ ಪದ್ಧತಿಯಿದೆ.
ಇದು ರಚನೆಯಾದುದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಒಮ್ಮೆ ಕಡುಬಡವನೊಬ್ಬ ವಾದಿರಾಜರ ಬಳಿಗೆ ಬಂದು ದುಃಖ ದೈನ್ಯಗಳಿಂದ ತನ್ನ ದಾರಿದ್ರ್ಯ ರೋಗಕ್ಕೆ ಲಕ್ಷ್ಮೀಸ್ತುತಿಯೇ ಚಿಕಿತ್ಸೆ ಎಂದು ತಿಳಿದರು.  ತಾವೇ ಒಂದು ಸ್ತುತಿಯನ್ನು ರಚಿಸಿ, ಅವನಿಗೆ ಉಪದೇಶ ಮಾಡಿದರು. ’ಇದನ್ನು ಭಕ್ತಿಯಿಂದ ಪಾರಾಯಣ ಮಾಡು’ ಎಂದು ಅಪ್ಪಣೆ ಮಾಡಿದರು. ಶ್ರೀ ಶ್ರೀಶಗಣದರ್ಪಣವೆಂಬ ಈ ಲಕ್ಷ್ಮೀನರಾಯಣರ ಸ್ತೋತ್ರ ಸಂಪತ್ತನ್ನು ಕರುಣಿಸಿತು; ಭಕ್ತಿಯಿಂದ ಪಾರಾಯಣ ಮಾಡುತ್ತದದ ಅವನ ಸುತ್ತಲೂ ಬಂಗಾರದ ಮಳಯೇ ಸುರಿಯಿತು ಎಂದು ಹೇಳುತ್ತಾರೆ. ಇದರಿಂದ ವಾದಿರಾಜರ ಶಕ್ತಿ ಅಲ್ಲದೆ ಬಡವರಲ್ಲಿ ಅವರಿಗಿದ್ದ ಕರುಣೆಯೂ ತಿಳಿಯುತ್ತದೆ.
ಲಕ್ಷ್ಮೀಶೋಭಾನೆ ಎಂಬ ಅವರ ಕೃತಿ ಕನ್ನಡದಲ್ಲಿದೆ, ಇದು ಸತ್ತವರನ್ನೇ ಎತ್ತಿ ಬದುಕಿಸಿದ ಸಂಜೀವಿನಿ ಎಂದು ಪ್ರಸಿದ್ಧವಾಗಿದೆ.
ಅರಸಪ್ಪನಾಯಕನ ಅಳಿಯ ಸತ್ತುಹೋದ. ಆಗ ವಾದಿರಾಜರು ಲಕ್ಷ್ಮೀಶೋಭಾನೆಯನ್ನು ಹಾಡಿ ಲಕ್ಷ್ಮೀನಾರಾಯಣರನ್ನು ಪ್ರಾರ್ಥಿಸಿ, ಅವನನ್ನು ಬದುಕಿಸಿದರು ಎಂದು ಹೇಳುತ್ತಾರೆ. ದೇವತೆಗಳೂ ರಾಕ್ಷಸರೂ ಸಮುದ್ರವನ್ನು ಕಡೆದರು; ಸಮುದ್ರದಿಂದ ಲಕ್ಷ್ಮೀದೇವಿ ಎದ್ದು ಬಂದಳು ಎಂಬ ಕಥೆ ಶ್ರೀಬದ್ಭಾಗವತದಲ್ಲಿ ಬರುತ್ತದೆ. ನೂರೆಂಟು ನುಡಿಗಳ ಈ ಶೋಭಾನೆ ಹಾಡು ಬಹಳ ಸರಳವಾದ ರೀತಿಯಲ್ಲಿ ಈ ಅಮೃತ ಮಂಥನ ಕಥೆಯನ್ನು ನಿರೂಪಿಸುತ್ತದೆ. ಶ್ರೀದೇವಿಯ ಈ ಸ್ತ್ರೋತ್ರವನ್ನು ಮಾಡಿದ ವಧೂವರರಿಗೆ ಲಕ್ಷ್ಮೀದೇವಿ ದೀರ್ಘ ಆಯುಸ್ಸನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಹೀಗೆ ಶ್ರೀ ವಾದಿರಾಜರ ಕೃತಿಗಳು ಒಂದೊಂದೂ ಮಹಮೆಯುಳ್ಳವಾಗಿವೆ.
ಆ ಕಾಲದಲ್ಲಿ ವಿಜಯನಗರಕ್ಕೆ ವೆಂಕಟಪತಿ ಎನ್ನುವವನು ರಾಜ. ಅವನ ಆಸ್ಥಾನದಲ್ಲಿ ಅನೇಕರು ಮಹಾಪಂಡಿತರು ಇದ್ದರು. ಒಮ್ಮೆ ರಾಜನು, ಆ ಪಂಡಿತರ ಜೊತೆಗೆ ವಾದ ಮಾಡುವಂತೆ ವಾದಿರಾಜರನ್ನು ಪ್ರಾರ್ಥಿಸಿದ. ಇದ್ದಕ್ಕಿದ್ದ ಹಾಗೆ ಈ ಪ್ರಾರ್ಥನೆ ಬಂದಿತು. ಆದರೂ ವಾದಿರಾಜರು ಅವರೆಲ್ಲರನ್ನೂ ಸೋಲಿಸಿದರು. ರಾಜ ಅವರ ಬುದ್ಧಿಶಕ್ತಿಯನ್ನು ಮೆಚ್ಚಿಕೊಂಡು, ಅವರಿಗೆ ’ಪ್ರಸಂಗಾಭರಣ ತೀರ್ಥರು’ ಎಂದು ಬಿರುದನ್ನು ಸಮರ್ಪಿಸಿದ. ಆ ಕಾಲದಲ್ಲಿ ದೆಹಲಿಯಲ್ಲಿ ಆಳುತ್ತಿದ್ದ ಮೊಘಲ್ ಚಕ್ರವರ್ತಿ ಬಾಬರನೂ ವಾದಿರಾಜರಿಗೆ ಗೌರಮ ಸಲ್ಲಿಸಿದ.
                       ವೃಂದಾವನ
ಇಷ್ಟೆಲ್ಲಾ ಅಪೂರ್ವ ಅನರ್ಘ್ಯ ಕಾರ್ಯಗಳನ್ನು ಸಾಧಿಸಿ ಮಹಾಮಹಿಮರಾದ ಶ್ರೀ ವಾದಿರಾಜರು ನೂರಿಪ್ಪತ್ತು ವರ್ಷಗಳಷ್ಟು ದೀರ್ಘ ಕಾಲ ಭೂಮಿಯ ಮೇಲೆ ವಾಸವಾಗಿದ್ದು ಬಹು ಜನರನ್ನು ಉದ್ಧರಿಸಿದರು. ಸಶರೀರರಾಗಿ ಕ್ರಿಸ್ತ ಶಕ ೧೮೦೦ರಲ್ಲಿ ಫಾಲ್ಗುಣ ಬಹುಳ ತೃತೀಯ ದಿನದಂದು ವೃಂದಾವನ ಪ್ರವೇಶ ಮಾಡಿದರು.
ಅವರು ವೃಂದಾವನದಲ್ಲಿ ಕುಳಿತು ಮುನ್ನೂರ ಎಪ್ಪತ್ತೆರಡು ವರ್ಷಗಳು ಕಳೆದುಹೋಗಿವೆ. ಈಗಲೂ ಭಕ್ತರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಅವರ ವೃಂದಾವನಕ್ಕೆ ಪೂಜೆ ಸಲ್ಲಿಸುತ್ತಾರೆ. ವೃಂದಾವನದ ಹೊರವಲಯದ ಪಕ್ಕದಲ್ಲೇ ಭೂತರಾಜರ ಗುಡಿಯಿದೆ. ಅವರು ತಪಸ್ಸು ಮಾಡುತ್ತಿದ್ದ ಸ್ಥಳ ಈಗಲೂ ‘ತಪೋವನ’ ಎಂದು ಪ್ರಸಿದ್ಧವಾಗಿದೆ. ಸಾವಿರಾರು ಮಂದಿ ಭಕ್ತರು ಈ ಸ್ಥಳಗಳನ್ನು ಸಂದರ್ಶಿಸಿ ಪುನೀತರಾಗಿ ಬರುತ್ತಾರೆ. ಸೋದೆ ಒಂದು ಶಾಂತಿಯ ತವರಾಗಿದೆ.
(ಲೇಖನ ಕೃಪೆ: ಕಣಜ)
ಸಂತ ಶಿಶುನಾಳ ಶರೀಫರ ಪರಿಚಯ


ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ.ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾದಿದರು. ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.
             ಕೆಲವು ವರ್ಷಗಳ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು.ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು.
         ಶರೀಫರ ಮರಣದ ತರುವಾಯ ಅವರ ಅಂತ್ಯಕ್ರಿಯೆಯು ಹಿಂದು ಹಾಗು ಮುಸಲ್ಮಾನ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ. ಕನ್ನಡದ ಖ್ಯಾತ ಹಾಡುಗಾರ ಶ್ರೀ ಅಶ್ವಥ್ಥರು ಇವರ ಅನೇಕ ಪದಗಳನ್ನು ಹಾಡಿದ್ದಾರೆ.
          ಶಿಶುನಾಳ ಶರೀಫರನ್ನು ಕರ್ನಾಟಕದ ಕಬೀರ್ ದಾಸ್ ಎಂದು ಕರೆಯಲಾಗುತ್ತದೆ. ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ. ಕರ್ನಾಟಕದ ಮೊದಲನೆಯ ಮುಸ್ಲಿಂ ಕವಿ ಎಂಬ ಖ್ಯಾತಿ ಕೂಡ ಅವರಿಗಿದೆ.ಇಮಾಮ್ ಸಾಹೇಬ್ ಮತ್ತು ಹಾಜುಮಾ ಎಂಬ ದಂಪತಿಗಳ ಮಗನಾಗಿ ಜನಿಸಿದ ಶರೀಫರ ಹುಟ್ಟೂರು ಧಾರವಾಡ ಜಿಲ್ಲೆಯ ಶಿಶುನಾಳ ಎಂಬ ಚಿಕ್ಕ ಗ್ರಾಮ. ಅಲ್ಲಿಯೇ ಕನ್ನಡ ಮತ್ತು ಉದು ಕಲಿತು ಕನ್ನಡ ಉಪಾಧ್ಯಾಯನಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು. ಶರೀಫರು ಫಾತೀಮಾ ಎಂಬಾಕೆಯನ್ನು ಮದುವೆಯಾದರು. ಒಂದು ಹೆಣ್ಣು ಮಗುವಾಯಿತು.ಸ್ವಲ್ಪ ಕಾಲದ ನಂತರ ಮಗು ತಾಯಿ ಇಬ್ಬರೂ ಗತಿಸಿದರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು. ಕೊನೆಗೆ ಗೋವಿಂದ ಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು. ಅಡವಿ ಸ್ವಾಮಿ ಹಾಗೂ ಸಿದ್ದಾರೂಢ ಸ್ವಾಮಿಗಳ ಪ್ರಭಾವವೂ ಅವರ ರಚನೆಗಳಲ್ಲಿ ಕಂಡುಬರುತ್ತದೆ. (ಮಾಹಿತಿ ಕೃಪೆ: ಕನ್ನಡ ಕನ್ನಡಿಗ ಕರ್ನಾಟಕ)



ಶಿಶುನಾಳ ಶರೀಫರ ಪ್ರಸಿದ್ಧ ತತ್ವಪದಗಳು
 ಶಿಶುನಾಳ ಶರೀಫರು ತಮ್ಮ ತತ್ವಪದಗಳಿಂದಾಗಿ ಕರ್ನಾಟಕದ ತುಂಬ ಖ್ಯಾತರಾಗಿದ್ದಾರೆ. ಇವರ ಜೀವನದ ವಿವರಗಳು ಇಂತಿವೆ:
          ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿರುವ ಶಿಶುನಾಳವು ಈಗಲೂ ಸಹ ಒಂದು ಸಣ್ಣಹಳ್ಳಿ. ಈ ಹಳ್ಳಿಯಲ್ಲಿ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಹಾಗು ಅವರ ಹೆಂಡತಿ ಹಜ್ಜೂಮಾ ದಂಪತಿಗಳು ಜೀವಿಸುತ್ತಿದ್ದರು.
           ಈ ದಂಪತಿಗಳಿಗೆ ಅನೇಕ ವರ್ಷಗಳವರೆಗೆ ಮಕ್ಕಳಿಲ್ಲದ್ದರಿಂದ, ಹುಲಗೂರಿನಲ್ಲಿದ್ದ ಸಂತ ಖಾದರ ಷಾವಲಿ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅದರ ಫಲವಾಗಿ ಕ್ರಿ.ಶ. ೧೮೧೯ನೆಯ ಇಸವಿಯ ಮಾರ್ಚ ತಿಂಗಳಿನ ೭ನೆಯ ದಿನಾಂಕದಂದು ಮಹಮ್ಮದ ಶರೀಫ ಜನಿಸಿದರು.
          ಶರೀಫರು ಶಿಶುನಾಳದಲ್ಲಿಯೇ ಇದ್ದ ಕೂಲಿಮಠದಲ್ಲಿ ಕಲಿತು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಶಿಶುನಾಳದ ಅಕ್ಕಪಕ್ಕದಲ್ಲಿದ್ದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರಿಬೂದಿಹಾಳ, ಗುಂಜಳ ಹಳ್ಳಿಗಳ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲವು ವರ್ಷ ಕೆಲಸ ಮಾಡಿದರು.
           ಕೆಲ ಕಾಲಾನಂತರ ಕೆಲಸ ಬಿಟ್ಟ ಶರೀಫರು ತಮ್ಮ ಹಳ್ಳಿಯಲ್ಲಿಯೇ ಆಧ್ಯಾತ್ಮಚಿಂತನೆಯಲ್ಲಿ ಮಗ್ನರಾಗಿದ್ದರು. ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ಆಧ್ಯಾತ್ಮ ಚರ್ಚೆಯಲ್ಲಿ ತೊಡಗಿರುತ್ತಿದ್ದರು.
        ಈ ಸಮಯದಲ್ಲಿ ಅವರಿಗೆ ಕಳಸದ ಗೋವಿಂದ ಭಟ್ಟರ ಭೆಟ್ಟಿಯಾಯಿತು. ಗೋವಿಂದ ಭಟ್ಟರಿಂದ ಶರೀಫರಿಗೆ ಉಪದೇಶವಾಯಿತು. ಸ್ವಜಾತಿ ಬಾಂಧವರಿಗೆ ಇದು ಸರಿ ಬರಲಿಲ್ಲ. ಆದರೆ ಶರೀಫರು ತಮ್ಮ ಗುರುವಿನ ಸಂಗವನ್ನು ಬಿಡಲಿಲ್ಲ.
ತಮ್ಮ ಗುರುವನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪಲ್ಲ||
ಕರ ಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರ ಬೋಧಿಸಿ ಕರವಿಟ್ಟು ಶಿರದೊಳು ||||

ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||||

ಗುರುವರ ಗೋವಿಂದ ಪರಮಗಾರುಡಿಗ ನೀ
ನಿರುತಿಹೆ ತಿಳಿಯದು ನರರಿಗೆ ಪರಿಯಿದು ||||

ಕೆಲಕಾಲದ ನಂತರ ಶರೀಫರಿಗೆ ಕುಂದಗೋಳದ ನಾಯಕ ಮನೆತನದ ಫಾತಿಮಾಳೊಡನೆ ಮದುವೆಯಾಯಿತು.
ಶರೀಫರಿಗೆ ತಮ್ಮ ಹೆಂಡತಿಯ ಬಗೆಗಿರುವ ಮರ್ಯಾದೆಯ ಭಾವವು ಅವರು ರಚಿಸಿದ ಈ ಹಾಡಿನಲ್ಲಿ ಕಂಡುಬರುತ್ತದೆ:

ನನ್ನ ಹೇಣ್ತೆ ನನ್ನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ ||ಪಲ್ಲ||

ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ ||ಅನುಪಲ್ಲ||

ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನ್ನ ಹೇಣ್ತೆ ಮತ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ್ನ ಹೇಣ್ತೆ ||||

ಅತ್ತಿಗಿ ನಾದುನಿ ನನ್ನ ಹೇಣ್ತೆ
ನಮ್ಮತ್ಯಾಗಿ ನಡಿದೀಯೇ ನನ್ನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದೆ ನನ್ನ ಹೇಣ್ತೆ
ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ್ನ ಹೇಣ್ತೆ ||||

ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡೆದೆಲ್ಲ ನೀ ನನ್ನ ಹೇಣ್ತೆ
ಬಾಳೊಂದು ಚಲ್ವಿಕೆ ನನ್ನ ಹೇಣ್ತೆ
ಆಳಾಪಕೆಳಸಿದೆ ನನ್ನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ್ನ ಹೇಣ್ತೆ ||||

ಮಂಗಳರೂಪಳೆ ನನ್ನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ್ನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ್ನ ಹೇಣ್ತೆ
ಕುಶಲದಿ ಕೂಡಿದ ನನ್ನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ್ನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ ||||

ಶರೀಫರ ಸಂಸಾರದಲ್ಲಿ ಇಷ್ಟು ಚೆನ್ನಾಗಿ ಹೊಂದಿಕೊಂಡದ್ದಷ್ಟೇ ಅಲ್ಲ, ಅವರ ಹೆಂಡತಿ ಅವರ ಆಧ್ಯಾತ್ಮ ಸಾಧನೆಯಲ್ಲಿಯೂ ಅವರಿಗೆ ಜೊತೆಗಾತಿಯಾಗಿರಬಹುದು.

ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆಎನ್ನುವ ಸಾಲುಗಳು ಸ್ಥೂಲದೇಹಕ್ಕಷ್ಟೇ ಅಲ್ಲ, ಸೂಕ್ಷ್ಮದೇಹ ಹಾಗೂ ಕಾರಣದೇಹಗಳಲ್ಲೂ ತಾವು ಜೊತೆಯಾಗಿರೋಣ ಎಂದು ಶರೀಫರು ತಮ್ಮ ಹೆಂಡತಿಗೆ ಕರೆ ಕೊಡುವದನ್ನು ತೋರಿಸುತ್ತವೆ.

ಕೆಲಕಾಲದ ನಂತರ ಶರೀಫರಿಗೆ ಒಂದು ಹೆಣ್ಣು ಮಗು ಜನಿಸಿ, ಬೇಗನೇ ಮರಣವನ್ನಪ್ಪುತ್ತದೆ. ಅವರ ಹೆಂಡತಿ ಫಾತಿಮಾ ಸಹ ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತಾಳೆ. ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರ ಮಾವ ಅವರಿಗೆ ಹೇಳಿ ಕಳಿಸುತ್ತಾರೆ. ಆದರೆ, ಶರೀಫರು ಈಗ ಎಲ್ಲಾ ಮಾಯಾಬಂಧಗಳಿಂದ ಮುಕ್ತರಾಗಿದ್ದರು. ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಅವರು ಭಾಗವಹಿಸಲಿಲ್ಲ. ಅವರ ಮನೋಭಾವನೆ ಈ ಹಾಡಿನಲ್ಲಿ ವ್ಯಕ್ತವಾಗಿದೆ:

ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ನ್ಯಾಕೋ ||ಪಲ್ಲ||
ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ ||ಅನುಪಲ್ಲ||

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವದ್ಯಾಕೋ ||||

ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ ||||

ಇನ್ನು ಮುಂದೆ ಶರೀಫರ ಜೀವನವು ಪೂರ್ಣವಾಗಿ ಪಾರಮಾರ್ಥಿಕ ಸಾಧನೆಗೆ ಮೀಸಲಾಯಿತು. ಮಗಳು, ಮಡದಿ, ತಂದೆ,ತಾಯಿ ಹಾಗು ಕೊನೆಗೆ ಗುರು ಗೋವಿಂದ ಭಟ್ಟರ ನಿಧನದ ನಂತರ, ಶರೀಫರು ಪುಣ್ಯಕ್ಷೇತ್ರಗಳ ಯಾತ್ರೆ ಹಾಗು ಪುಣ್ಯಜೀವಿಗಳ ಭೆಟ್ಟಿಯಲ್ಲಿ ಕಾಲ ಕಳೆದರು. ನವಲಗುಂದದ ನಾಗಲಿಂಗಪ್ಪನವರು ಹಾಗೂ ಗರಗದ ಮಡಿವಾಳಪ್ಪನವರು ಶರೀಫರಿಗೆ ಅತ್ಯಂತ ಆಪ್ತರಾಗಿದ್ದರು.
ಆ ಅವಧಿಯಲ್ಲಿ ಇಳಿವಯಸ್ಸಿನಲ್ಲಿದ್ದ ಶ್ರೀ ಚಿದಂಬರ ಸ್ವಾಮಿಗಳ ಹಾಗು ಬಾಲಲೀಲಾ ಮಹಾಂತ ಶಿವಯೋಗಿಗಳ ದರ್ಶನ ಪಡೆದರು.
ಅಲ್ಲದೆ ಸಮಕಾಲೀನರಾದ ಅಗಡಿಯ ಶೇಷಾಚಲ ಸ್ವಾಮಿಗಳು, ಅವರಾದಿ ಫಲಾಹಾರ ಸ್ವಾಮಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿಯ ಶ್ರೀ ಅಡವಿ ಸ್ವಾಮಿಗಳು ಹಾಗು ವಿಶ್ವಕರ್ಮದ ಪ್ರಭುಸ್ವಾಮಿಗಳು ಇವರೆಲ್ಲರ ಸತ್ಸಂಗವನ್ನು ಪಡೆದರು.
ತಮ್ಮ ಕೊನೆಯ ದಿನಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳನ್ನು ಸಂದರ್ಶಿಸಿದಾಗ ಸ್ವಾಮಿಗಳಿನ್ನೂ ಚಿಕ್ಕವರಿದ್ದರು.

ಶರೀಫರು ಯಾವುದೇ ಕೆಲಸ ಮಾಡದೆ, ಆತ್ಮಚಿಂತನೆಯಲ್ಲಿ ಮಗ್ನರಾಗಿ ಇರುತ್ತಿದ್ದರಿಂದ ಸಾಕಷ್ಟು ನಿಂದನೆಯನ್ನು ಎದುರಿಸಬೇಕಾಯಿತು. ಸಾಲಗಾರರ ಕಾಟದಿಂದ ಮುಕ್ತರಾಗಲು, ಶಿಶುನಾಳದಲ್ಲಿದ್ದ ತಮ್ಮ ಹೊಲವನ್ನು ಮಾರಬೇಕಾಯಿತು. ಇದೆಲ್ಲವನ್ನೂ ಶರೀಫರು ದೇವರ ದಯವೆಂದೇ ಭಾವಿಸಿದರು:

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ ||ಪಲ್ಲ||
ಪರಾತ್ಪರನಾದ ಗುರುವಿನ
ಅಂತಃಕರಣ ಒಂದು ಬಿಡದಿರಲಿ ||ಅನುಪಲ್ಲ||

ಬಡತನೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ ||||

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದೆಯಲಿ
ಬಂಡು ಮಾಡಿ ಜನರು ನಗಲಿ ||||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಅಂಬಲಿ ಎನಗೆ ಸಿಗದೆ ಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮ್ಯಾಲೆ ಬೀಳಲಿ ||||

ವ್ಯಾಪಾರುದ್ಯೋಗ ಇಲ್ಲದಾಂಗಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದು ಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ ||||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯ ಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ ||||

ತಮ್ಮ ಕೊನೆಗಾಲವನ್ನು ಅರಿತ ಶರೀಫರು, ಶರಣರ ಪದ್ಧತಿಯಂತೆ ವಿಭೂತಿ ವೀಳ್ಯೆಮಾಡಿಸಿಕೊಂಡು ದೇಹತ್ಯಾಗ ಮಾಡಲು ಬಯಸಿದರು. ಈ ವಿಧಾನದ ಪ್ರಕಾರ ಜಂಗಮ ಪಾದಪೂಜೆ ಹಾಗು ಶರೀಫರ ಮಸ್ತಕದ ಮೇಲೆ ಜಂಗಮನ ಪಾದವಿಟ್ಟು ಶಿವಸಾಯುಜ್ಯ ಮಂತ್ರಪಠಣ ಮಾಡುವ ಅವಶ್ಯಕತೆ ಇತ್ತು. ಶರೀಫರ ಹಣೆಯ ಮೇಲೆ ಪಾದವಿಡಲು ಯಾವ ಜಂಗಮ ಒಪ್ಪಿಯಾರು? ಕೊನೆಗೆ ಹಿರೇಮಠದ ಕರಿಬಸವಯ್ಯನವರು ಶರೀಫರ ಇಚ್ಛೆಯನ್ನು ಪೂರ್ಣಗೊಳಿಸಿದರು. ಆ ಕ್ಷಣವೇ ಶರೀಫರು ಓಂಕಾರದಲ್ಲಿ ಲೀನವಾದರು:(ಕ್ರಿ.ಶ.೧೮೮೯ನೆಯ ಮಾರ್ಚ ೭ನೆಯ ದಿನಾಂಕ.)

ಬಿಡತೇನಿ ದೇಹ ಬಿಡತೇನಿ ||ಪಲ್ಲ||

ಬಿಡತೇನಿ ದೇಹವ ಕೊಡತೇನಿ ಭೂಮಿಗೆ
ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||||

ಪಾವಕಾಗುಹುತಿ ಮಾಡಿ ಜೀವನದಸು
ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||||

ಅವನಿಯೊಳು ಶಿಶುನಾಳಧೀಶನೆ ಗತಿಯೆಂದು
ಜವನಬಾಧೆಗೆದ್ದು ಶಿವಲೋಕದೊಳು ದೇಹಾ ಬಿಡತೇನಿ ||||

ಶರೀಫರ ಅಂತ್ಯಕ್ರಿಯೆಯನ್ನು ಹಿಂದು ಹಾಗು ಮುಸ್ಲಿಮರು ಕೂಡಿಯೇ ಮಾಡಿದರು. ಶರೀಫರ ತಂದೆ,ತಾಯಿಗಳ ಸಮಾಧಿಯ ಪಕ್ಕದಲ್ಲಿಯೇ ಶರೀಫರ ಸಮಾಧಿಯಾಯಿತು. ಈ ಗದ್ದುಗೆಯು ಯಾವುದೇ ಧರ್ಮದ ಮಾದರಿಯಲ್ಲಿ ಇಲ್ಲ. ವಿಶಾಲವಾದ ಕಟ್ಟೆ, ಅದಕ್ಕೆ ನೆರಳು ನೀಡುವ ಮರ ಇವೇ ಅವರ ಗದ್ದುಗೆ.
ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಹಾಗು ಬಲಭಾಗದಲ್ಲಿ ಹಿಂದೂಗಳು ತಮ್ಮ ಪದ್ಧತಿಯ ಪ್ರಕಾರ ಪೂಜೆ ಸಲ್ಲಿಸುತ್ತಾರೆ.

ಗುಡಿಯ ನೋಡಿರಣ್ಣಾ ದೇಹದ
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||||

೧.ಸ್ನೇಹ ಮಾಡಬೇಕಿಂತವಳ!

ಸ್ನೇಹ ಮಾಡಬೇಕಿಂಥವಳ! - ಒಳ್ಳೇ
ಮೋಹದಿಂದಲಿ ಬಂದು - ಕೂಡುವಂಥವಳ

ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!

ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.

ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!


೨.ಒಳ್ಳೇ ನಾರಿ ಕಂಡೆ
ಒಳ್ಳೇ ನಾರಿ ಕಂಡೆ - ಈಗಲೆ
ಒಳ್ಳೇ ನಾರಿ ಕಂಡೆ,
ಇಳೆಯ ತಳದಿ ತಪದೊಳು ನಿಂತು
ಕಳೆಯ ಋಷಿಗಳ ಮರಳು ಮಾಡುವ

ಕೈಯು ಕಾಲು - ಉಸುರು
ಮೈಯಿ ಮೊದಲೆ ಇಲ್ಲ;
ಚೆಲ್ಲುತ ಪರಮಾನಂದ ಎದಿಯೊಳು
ಎಲ್ಲವ ಬಿಡಿಸಿ ಕರುಣದಿ ಕಾಯುವ

ಮುಟ್ಟಲು ಕೊಲ್ಲುವಳೋ - ಕಾಮನ
ಕಟ್ಟಿ ಆಳುತಿಹಳೊ ;
ಬಟ್ಟಕುಂಚಕ, ಬರೆದಿಟ್ಟ ಕುಪ್ಪಸಕ
ನಟ್ಟು ಮನಸು ನಡೆಗೆಟ್ಟು ನಿಂತಿತೋ.

ಮೀಸಲು ನಗೆಯುವಳು - ಶಿಶುನಾಳಾ
ಧೀಶಗೆ ಸೋತವಳು ;
ವಾಸಿಸಿ ಗುಡಿಪುರದಿ - ಗೋವಿಂದನ
ದಾಸರನ್ನು ತಾ ಸೆಳೆಯುತಲಿಹಳು.


೩.ಅತ್ತ ಇತ್ತ ಹರಿದಾಡುವ ಮನಸಿಗೆ.

ಅತ್ತ ಇತ್ತ ಹರಿದಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.

ಕಡುವಿಷಯದಿ ಸಂಸಾರಕೆ ಮರುಗುತ
ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.

ಸಿರಿ ಸಂಪದ ಸೌಭಾಗ್ಯ ತನಗೆ ಬಲು
ಹಿರಿದಾಗಲಿಬೇಕೆಂಬುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.

ವಸುಧೆಯೊಳಗೆ ಶಿಶುನಾಳಾಧೀಶನ
ಹೆಸರು ಮರೆತು ಕೊಸರ್‍ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.


೪.ಅಗ್ಗದ ಅರವಿ ತಂದು.

ಅಗ್ಗದ ಅರಿವಿ ತಂದು
ಹಿಗ್ಗಿ ಹೊಲಿಸಿದೆ ಅಂಗಿ
ಹೆಗ್ಗಣ ಒಯ್ತವ್ವ ತಂಗಿ ಈ ಅಂಗಿ.

ಅಗಣಿತ ವಿಷಯದ
ಆರುಗೇಣೀನ ಕವಚ
ಬಗಲಿನ ಬೆವರನು ಕುಡಿದು
ಸಿಗದೆ ಹೋಯಿತವ್ವ ತಂಗಿ ಈ ಅಂಗಿ.

ಬುದ್ದಿಗೇಡಿಗಳಾಗಿ
ನಿದ್ದಿ ಕೆಡಿಸಿಕೊಂಡು
ಎದ್ದು ನೋಡಲು ಕರ್ಮದ
ಗುದ್ದಿನೊಳಡಗಿತ್ತವ್ವ ತಂಗಿ ಈ ಅಂಗಿ.

ಕಳೆದೆನೀಪರಿ ರಾತ್ರಿ
ಬೆಳಗಾಗೋ ಸಮಯದಿ
ಚೆಲುವ ಶಿಶುನಾಳಾಧೀಶನು
ಉಳುವಿ ಕೊಟ್ಯಾನವ್ವ ತಂಗಿ ಈ ಅಂಗಿ. 

ಭಾರತೀಯರಿಗೆ ತತ್ವಜ್ಞಾನವು ರಕ್ತಗತವಾಗಿ ಬಂದಿದೆ. ಧರ್ಮಗ್ರಂಥಗಳನ್ನು ಓದದೇ ಇರುವ ಭಾರತೀಯರು ಸಹ ಪುನರ್ಜನ್ಮಗಳಲ್ಲಿ ನಂಬಿಕೆ ಇಡುತ್ತಾರೆ. ಭಗವದ್ಗೀತೆಯ ತಿರುಳನ್ನು ಭಾರತೀಯರು ಬಾಲ್ಯಸಂಸ್ಕಾರದ ಮೂಲಕವೇ ಬಲ್ಲರು. ಆ ಗ್ರಂಥದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶದಲ್ಲಿ ಪುನರ್ಜನ್ಮದ ವ್ಯಾಖ್ಯೆ ಈ ರೀತಿಯಾಗಿ ಬಂದಿದೆ:
“ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾ-
ನ್ಯನ್ಯಾನಿ ಸಂಯಾತಿ ನವಾನಿ ದೇಹೀ”
(=ಮನುಷ್ಯರು ಹಳೆಯ ಬಟ್ಟೆಗಳನ್ನು ತೆಗೆದುಬಿಟ್ಟು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುವಂತೆ, ಜೀವಿಗಳು ಹಳೆಯ ದೇಹವನ್ನು ತ್ಯಜಿಸಿ, ಹೊಸ ದೇಹಗಳನ್ನು ಪಡೆಯುತ್ತಾರೆ.)
ಇದೇ ತತ್ವಜ್ಞಾನವನ್ನು ಶಿಶುನಾಳ ಶರೀಫರು ತಮ್ಮ “ಅಗ್ಗದರವಿ ತಂದು…” ಎನ್ನುವ ಗೀತೆಯಲ್ಲಿ ಸರಳವಾಗಿ ಹಾಡಿದ್ದಾರೆ. ಈ ಗೀತೆಯ ಪೂರ್ಣಪಾಠ ಹೀಗಿದೆ:

ಅಗ್ಗದರವಿ ತಂದು
ಹಿಗ್ಗಿ ಹೊಲಸಿದೆನಂಗಿ
ಹೆಗ್ಗಣ ವೈತವ್ವ ತಂಗೀ ಈ ಅಂಗೀ ||ಪಲ್ಲ||

ಅಗಣಿತ ವಿಷಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿತವ್ವ ತಂಗೀ ಈ ಅಂಗೀ ||||

ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ ||||

ಕಳೆದೆನೀಪರಿ ರಾತ್ರಿ
ಬೆಳಗಾಗೊ ಸಮಯದಿ
ಚೆಲುವ ಶಿಶುನಾಳಾಧೀಶ-
ನುಳುವಿ ಕೊಟ್ಟಾನವ್ವ ತಂಗೀ ಈ ಅಂಗೀ ||||

ಈ ಗೀತೆಯ ಪಲ್ಲವನ್ನು ಗಮನಿಸೋಣ :
ಅಗ್ಗದರವಿ ತಂದು
ಹಿಗ್ಗಿ ಹೊಲಸಿದೆನಂಗಿ
ಹೆಗ್ಗಣ ವೈತವ್ವ ತಂಗೀ ಈ ಅಂಗೀ||ಪಲ್ಲ||

ಶರೀಫರು ಹೊಸದೊಂದು ಜನ್ಮ ಪಡೆಯುವದನ್ನು ಹೊಸ ಅಂಗಿಯನ್ನು ಹೊಲೆಯಿಸಿಕೊಳ್ಳುವದಕ್ಕೆ ಹೋಲಿಸುತ್ತಿದ್ದಾರೆ. ಆದರೆ ಈ ಹೊಸ ಅಂಗಿಗಾಗಿ ಅವರು ಉತ್ತಮ ಬಟ್ಟೆಯನ್ನು ಖರೀದಿಸಿಲ್ಲ. ಅಗ್ಗದ ಅರವಿಯನ್ನು ತಂದಿದ್ದಾರೆ. ಅಗ್ಗದ ಬಟ್ಟೆ ಎಂದರೇನು? ಅಗ್ಗದ ಬಟ್ಟೆ ಒರಟು ಒರಟಾಗಿರುತ್ತದೆ ; ಇದಕ್ಕೆ ಒಳ್ಳೆಯ ಗುಣಗಳು ಇರುವದಿಲ್ಲ. ಬಟ್ಟೆಗೆ ಒಳ್ಳೆಯ ಗುಣಗಳು ಬರಬೇಕಾದರೆ, ಆ ಬಟ್ಟೆಯನ್ನು ಸರಿಯಾಗಿ ಸಂಸ್ಕರಿಸಬೇಕಾಗುತ್ತದೆ.  ಅದರಂತೆ ಒಳ್ಳೆಯ ಜನäವನ್ನು ಪಡೆಯಲು ಒಳ್ಳೆಯ ಸಂಸ್ಕಾರ, ಒಳ್ಳೆಯ ಕರ್ಮಗಳ ನೆರವು ಬೇಕಾಗುತ್ತದೆ. ಆದರೆ ಅರಿವೆ ಎಂತಹದೇ ಇರಲಿ, ಹೊಸ ಅಂಗಿ ತೊಡುವದೇ ಹುರುಪಿನ ವಿಷಯವಾಗಿರುತ್ತದೆ. ಹಳೆಯ ಜನä ತ್ಯಜಿಸಿದ ಆತ್ಮವು ಹೊಸ ಜನäಕ್ಕಾಗಿ ಮಿಡುಕಾಡುತ್ತಲೇ ಇರುತ್ತದೆ. ತನ್ನ ಪೂರ್ವಕರ್ಮಗಳಿಗೆ ಹಾಗು ಪೂರ್ವಸಂಸ್ಕಾರಗಳಿಗೆ ತಕ್ಕಂತಹ ಹೊಸ ಜನä ದೊರೆತ ತಕ್ಷಣ ಅದು ಹಿಗ್ಗುತ್ತದೆ. ಇದನ್ನೇ ಶರೀಫರು ಹೊಸದಾದ ಅಂಗಿಯನ್ನು ಹಿಗ್ಗಿನಿಂದ ಹೊಲಿಸಿದೆ ಎಂದು ಹೇಳುತ್ತಾರೆ.

ಶರೀಫರೇನೊ ತಮ್ಮ ಕರ್ಮಗಳಿಗೆ ಹಾಗು ಸಂಸ್ಕಾರಕ್ಕೆ ಅನುಗುಣವಾದ ಅಗ್ಗದ ಅರಿವೆಯನ್ನು ಪಡೆದುಕೊಂಡರು. ದೈವವು ಅವರಿಗೆ ಹೊಸ ಅಂಗಿಯನ್ನು ಹೊಲೆದು ಕೊಟ್ಟಾಗ, ಶರೀಫರು ಹಿಗ್ಗಿದರು. ಆದರೆ ಈ ಅಂಗಿಯನ್ನು ಜೋಪಾನವಾಗಿ ಇಟ್ಟುಕೊಳ್ಳಲು ಅವರಿಂದ ಆಗಲಿಲ್ಲ. ಈ ಅಂಗಿಯನ್ನು ಹೆಗ್ಗಣವೊಂದು ಒಯ್ದು ಬಿಟ್ಟಿತಂತೆ. ಹೆಗ್ಗಣವು ಬಹಳ ಚಾಲಾಕು ಪ್ರಾಣಿ. ರಾತ್ರಿಯ ಸಮಯದಲ್ಲಿ ಯಜಮಾನನು ನಿದ್ರೆಯಲ್ಲಿರುವಾಗ ಹೆಗ್ಗಣವು ಮನೆಯ ಗೋಡೆಗೆ ಕನ್ನ ಹಾಕಿ, ಮನೆಯಲ್ಲಿಟ್ಟ ಪದಾರ್ಥಗಳನ್ನು ಹಾಳು ಮಾಡುವದು. ಹೆಗ್ಗಣದ ಉಪದ್ರವ ತಪ್ಪಿಸಬೇಕಾದರೆ, ಯಜಮಾನನು ತನ್ನ ಮನೆಯನ್ನು ಭದ್ರವಾಗಿಟ್ಟುಕೊಳ್ಳಬೇಕು. ಹೆಗ್ಗಣವು ಗುದ್ದು ತೋಡಿ ಒಳಗೆ ಬರದಂತೆ ಕಾಯಬೇಕು. ಅಂದರೆ ಮಾತ್ರ ಆತನು ತನ್ನ ಪ್ರೀತಿಯ ಅಂಗಿಯನ್ನು ಕಾಯಬಲ್ಲನು.

ಇದು ಯಾವ ಹೆಗ್ಗಣ? ಬಲಿಷ್ಠವಾದ ಅರಿಷಡ್ವರ್ಗಗಳ ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗು ಮತ್ಸರಗಳ ಸಮೂಹಕ್ಕೆ ಶರೀಫರು ಹೆಗ್ಗಣ ಎಂದು ಕರೆಯುತ್ತಾರೆ. ಮನಸ್ಸು ಎನ್ನುವ ಮನೆಗೆ ಈ ಅರಿಷಡ್ವರ್ಗಗಳು ಕಳ್ಳತನದಿಂದ ಕನ್ನ ಕೊರೆಯುತ್ತವೆ. ಆಗ ಮನಸ್ಸಿನಲ್ಲಿಯ ಒಳ್ಳೆಯ ಗುಣಗಳು ಹಾಗು ಉತ್ತಮ ಸಂಸ್ಕಾರಗಳು ನಾಶವಾಗುತ್ತವೆ. ನೀಚ ಕರ್ಮಗಳು ಘಟಿಸುತ್ತವೆ. ಈ ಜನ್ಮವೆಂಬ ಅಂಗಿಯನ್ನು ಈ ಅರಿಷಡ್ವರ್ಗಗಳು ಹೊತ್ತೊಯ್ದು ಹಾಳು ಮಾಡುತ್ತವೆ. ಹಾಲು ಉಕ್ಕಿದ ಮೇಲೆ ಹಳಹಳಸಿದಂತೆ, ‘ಹೆಗ್ಗಣವು ಈ ಅಂಗಿಯನ್ನು ಒಯ್ದಿತಲ್ಲ’ ಎಂದು ಶರೀಫರು ವ್ಯಥೆ ಪಡುತ್ತಾರೆ.ಇದೇ ಮಾತನ್ನು ಪುರಂದರದಾಸರೂ ಸಹ ಹೀಗೆ ಹೇಳಿದ್ದಾರೆ :
 “ಮಾನವ ಜನ್ಮ ಬಲು ದೊಡ್ಡದು
ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ!”

ಮೊದಲನೆಯ ನುಡಿ ಹೀಗಿದೆ:
ಅಗಣಿತ ವಿಷಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿತವ್ವ ತಂಗೀ ಈ ಅಂಗೀ||||

ಆರು ಗೇಣಿನ ಕವಚ ಎಂದರೆ ಸ್ಥೂಲ ದೇಹ. ಈ ಸ್ಥೂಲ ದೇಹಕ್ಕೆ ಸುಖ ಕೊಡುವ ವಿಷಯಗಳನ್ನಷ್ಟೇ ಮಾನವನು ಬಯಸುತ್ತಾನೆ. ಉದಾಹರಣೆಗೆ ಪರಿಶ್ರಮದಿಂದ ದುಡಿದು ತಿನ್ನುವದು ಮನುಷ್ಯನಿಗೆ ಬೇಡ. ಸೋಮಾರಿತನವೇ ಆತನ ದೇಹಕ್ಕೆ ಸುಖ ನೀಡುತ್ತದೆ. ಮಾದಕ ಪದಾರ್ಥಗಳ ಸೇವನೆಯು ಕೆಟ್ಟದ್ದೆಂದು ಗೊತ್ತಿದ್ದರೂ ಸಹ ದೇಹವು ಅದನ್ನು ಬಯಸುತ್ತದೆ. ಲೆಕ್ಕವಿಲ್ಲದಷ್ಟಿರುವ ಇಂತಹ ದೈಹಿಕ ಬಯಕೆಗಳಿಗೆ ಶರೀಫರು ‘ಅಗಣಿತ ವಿಷಯ’ ಎನ್ನುತ್ತಾರೆ. ಕೇವಲ ವಿಷಯಸುಖಕ್ಕೇ ಮನಸ್ಸು ನೀಡಿದರೆ, ಅದು ದೇಹವನ್ನು ಬೇಕಾರ ಮಾಡುತ್ತದೆ. ಶರೀಫರು ಅದನ್ನು ಬಗಲಿನಿಂದ ಬರುವ ಬೆವರಿಗೆ ಹೋಲಿಸುತ್ತಾರೆ. ಈ ಬಗಲ ಬೆವರು ಅರ್ಥಾತ್ ಕೊಳೆಯಾದ ಬಯಕೆಗಳು ಈ ಅಂಗಿಯನ್ನು ಕಡಿದು ಹಾಕುತ್ತವೆ. ನಮಗೆ ದೊರೆತ ಅಂಗಿಯ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೇ ನಾವು ‘ಸಿಗದೇ ಹೋಯಿತವ್ವ ತಂಗೀ’ ಎಂದು ವ್ಯಥೆ ಪಡಬೇಕಾಗುತ್ತದೆ.

ಎರಡನೆಯ ನುಡಿ ಹೀಗಿದೆ :
ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ ||||

ಈ ರೀತಿಯಾಗಿ ಜೀವಿಯು ಪ್ರಾಪಂಚಿಕ ವಿಷಯಸುಖಗಳಲ್ಲೇ  ಮಗ್ನವಾದಂತಹ ಕಾಲವನ್ನು  ರಾತ್ರಿಗೆ ಹೋಲಿಸಲಾಗುತ್ತದೆ. ಬುದ್ಧಿವಂತ ಮಾನವನು ರಾತ್ರಿಯಲ್ಲಿ ನಿದ್ರಿಸಬೇಕು ಎಂದು ಶರೀಫರು ಹೇಳುತ್ತಾರೆ. ಇದರರ್ಥವೆಂದರೆ ಮಾನವನು ಪ್ರಾಪಂಚಿಕ ಸುಖಗಳನ್ನು ಬಯಸಬಾರದು. ಆದರೆ ಇದಕ್ಕೆ ವಿಪರೀತವಾಗಿ, ಬುದ್ಧಿಗೇಡಿ ಮಾನವನು ರಾತ್ರಿಯ ವ್ಯವಹಾರಗಳಲ್ಲಿ ಮುಳುಗುತ್ತಾನೆ.  ನಿದ್ರೆಯನ್ನು ಕೆಡಸಿಕೊಳ್ಳುತ್ತಾನೆ.ಅಂದರೆ ಆಧ್ಯಾತ್ಮಿಕ ವ್ಯವಹಾರದ ಬದಲಾಗಿ ಪ್ರಾಪಂಚಿಕ ವ್ಯವಹಾರದಲ್ಲಿ ಮುಳುಗುತ್ತಾನೆ.  ಬೆಳಗಾದ ಬಳಿಕ ಅಂದರೆ ಹೊಸ ಜನ್ಮ ಪಡೆಯುವ ಸಮಯದಲ್ಲಿ, ಅವನಿಗೆ ತನ್ನ ಕರ್ಮಫಲ ಕಾಣಿಸುವದಿಲ್ಲ. ಅದು ಅವನ ಮನೆಯ ಮೂಲೆಯಲ್ಲಿ ಗುದ್ದು ಮಾಡಿಕೊಂಡು, ಅಡಗಿಕೊಂಡು ಕೂತಿರುತ್ತದೆ. ಆತನು ಹೊಸ ಜನ್ಮವನ್ನು ಪಡೆಯಲು ಸಿದ್ಧನಾದಾಗ, ಅವನ ಪೂರ್ವಜನ್ಮದ ಈ ಕರ್ಮವು ಆತನನ್ನು ಬೆಂಬತ್ತಿ ಬರುತ್ತದೆ. (ಈ ಕರ್ಮಕ್ಕೆ ‘ಪ್ರಾರಬ್ಧ ಕರ್ಮವೆನ್ನುತ್ತಾರೆ.)
ಈ ಕರ್ಮಬಂಧನದ ಚಕ್ರದಿಂದ ಬಿಡುಗಡೆ ಇಲ್ಲವೆ? ಇದಕ್ಕೆ ಉತ್ತರ ಕೊನೆಯ ನುಡಿಯಲ್ಲಿದೆ.
ಕಳೆದೆನೀಪರಿ ರಾತ್ರಿ
ಬೆಳಗಾಗೊ ಸಮಯದಿ
ಚೆಲುವ ಶಿಶುನಾಳಾಧೀಶ-
ನುಳುವಿ ಕೊಟ್ಟಾನವ್ವ ತಂಗೀ ಈ ಅಂಗೀ||||

ಕೇವಲ ಒಂದು ಜನ್ಮದಲ್ಲಿ ಅಲ್ಲ, ಇಂತಹ ಅನೇಕ ಜನ್ಮಗಳಲ್ಲಿ ಪ್ರಾಪಂಚಿಕ ಆಮಿಷಗಳಿಗೆ ಕೆಲವೊಮ್ಮೆ ಬಲಿಯಾಗುತ್ತ, ಕೆಲವೊಮ್ಮೆ ಈ ಆಮಿಷಗಳ ವಿರುದ್ಧ ಹೋರಾಡುತ್ತ ಶರೀಫರು ರಾತ್ರಿ  ಎನ್ನುವ (=ಪ್ರಪಂಚದಲ್ಲಿ ಇರುವ ) ಅವಧಿಯನ್ನು ಕಳೆದಿದ್ದಾರೆ. ಈ ಹೋರಾಟದ ಫಲವಾಗಿ, ಈಗ ಪರಮಾತ್ಮನ ಅನುಗ್ರಹವಾಗುವ ಸಮಯ ಬಂದಿದೆ. ಇಂತಹ ಅನುಗ್ರಹ ಮಾಡುವ ಪರಮಾತ್ಮನು ನಿಷ್ಕಲಂಕನಾದವನು, ಹೀಗಾಗಿ ಆತನಲ್ಲಿ ದಿವ್ಯ ಸೌಂದರ್ಯವಿದೆ. ಆದುದರಿಂದಲೇ ಆತನು ‘ಚೆಲುವ’ನು. ಇಂತಹ ಚೆಲುವ ಶಿಶುನಾಳಾಧೀಶನು ಶರೀಫರ ಶ್ರದ್ಧೆಯಿಂದ ಪ್ರೀತನಾಗಿ ಅವರಿಗೆ ಅನುಗ್ರಹಿಸಿದ್ದಾನೆ. ಅವರಿಗೆ ಲಭ್ಯವಾದ ಈ ಅಂಗಿಯು (=ಜನ್ಮವು) ಹಾಳಾಗದಂತೆ ಅದನ್ನು ಅವರಿಗೆ ಪರಮಾತ್ಮನು ಉಳುವಿ (=ಉಳಿಸಿ) ಕೊಟ್ಟಿದ್ದಾನೆ. ಈ ಅಂಗಿಯು ವಿಕಾರಗಳಿಂದ ಕೂಡಿದ ಸ್ಥೂಲ ಶರೀರವಲ್ಲ. ಅರಿಷಡ್ವರ್ಗಗಳೆನ್ನುವ ಹೆಗ್ಗಣದಿಂದ ಬಾಧೆ ಪಡುತ್ತಿರುವ ಶರೀರವಲ್ಲ. ಪರಮಾತ್ಮನಲ್ಲಿಯೇ ಮಗ್ನವಾದ ಸೂಕ್ಷ ಶರೀರವಿದು.

ಶರೀಫರ ಗೀತೆಗಳ ವೈಶಿಷ್ಟ್ಯ:
ಶರೀಫರ ಅನೇಕ ಗೀತೆಗಳು ಒಂದು ಭೌತಿಕ ದೃಶ್ಯದ ವರ್ಣನೆಯೊಂದಿಗೆ ಪ್ರಾರಂಭವಾಗುತ್ತವೆ. ‘ಗಿರಣಿ ವಿಸ್ತಾರ ನೋಡಮ್ಮ’, ‘ಬಿದ್ದೀಯಬೆ ಮುದುಕಿ’, ‘ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ’, ‘ತೋಟವ ನೋಡಿದ್ಯಾ’ ಹಾಗು ‘ಅಗ್ಗದರವಿ ತಂದು’ ಮೊದಲಾದ ಗೀತೆಗಳು ಈ ವರ್ಗಕ್ಕೆ ಸೇರಿದವು. ಗೀತೆ ಮುಂದುವರಿದಂತೆ ಭೌತಿಕ ವರ್ಣನೆಯು ಪಾರಭೌತಿಕ ವರ್ಣನೆಯಲ್ಲಿ ಬದಲಾಗುತ್ತದೆ.

ಶರೀಫರ ಗೀತೆಗಳ ಮತ್ತೊಂದು ವೈಶಿಷ್ಟ್ಯವೆಂದರೆ ಗ್ರಾಮೀಣ ಪದಗಳ ಬಳಕೆ. ಉಚ್ಚತಮ ತತ್ವಜ್ಞಾನವನ್ನೂ ಸಹ ಶರೀಫರು ಹಳ್ಳಿಯ ದಿನಬಳಕೆಯ ಪದಗಳಲ್ಲಿಯೇ ಹೇಳುತ್ತಾರೆ. ಹೀಗಾಗಿ ಈ ತತ್ವಜ್ಞಾನವು ಕೇಳುಗರ ಮನಸ್ಸನ್ನು ನೇರವಾಗಿ ಪ್ರವೇಶಿಸುತ್ತದೆ ಹಾಗು ಗಾಢ ಪರಿಣಾಮವನ್ನು ಮಾಡುತ್ತದೆ.

ಮೂರನೆಯದಾಗಿ ಶರೀಫರು ತಮ್ಮ ಅನೇಕ ಗೀತೆಗಳಲ್ಲಿ ‘ತಂಗಿ’ ಎಂದು ಸಂಬೋಧಿಸಿರುವದನ್ನು ಕಾಣಬಹುದು. ಇದರ ಕಾರಣಗಳನ್ನು ಹೀಗೆ ಊಹಿಸಬಹುದು:
ಗಂಡಸರಿಗಿಂತ ಹೆಣ್ಣು ಮಕ್ಕಳಿಗೆ ಪ್ರಪಂಚದ ಜೊಂಜಾಟ, ವ್ಯಾಪ ಜಾಸ್ತಿಯಾಗಿರುತ್ತದೆ. ಆದರೂ ಸಹ ದೈವಿಕತೆಯ ಬಗೆಗಿನ ಒಲವು ಗಂಡಸರಿಗಿಂತ ಹೆಣ್ಣುಮಕ್ಕಳಲ್ಲಿಯೇ ಜಾಸ್ತಿ. ಅಲ್ಲದೆ ಅಣ್ಣ ಹಾಗು ತಂಗಿಯರಲ್ಲಿ ಇರುವ ಸತ್ತೆ ಹಾಗು ಅಕ್ಕರೆ ಇತರರಲ್ಲಿ ಕಂಡು ಬರುವದಿಲ್ಲ. ಆದುದರಿಂದ ಶರೀಫರು ತತ್ವಬೋಧನೆಯ ಪದಗಳನ್ನು ‘ತಂಗಿ’ಗೆ ಸಂಬೋಧಿಸಿ ಹಾಡಿದ್ದಾರೆ.

(ಟಿಪ್ಪಣಿ: ಈ ಗೀತೆಯ ವ್ಯಾಖ್ಯಾನ ಬರೆಯುವಾಗ ಸಲಹೆ, ಸೂಚನೆ ನೀಡಿದ ನನ್ನ ಅರ್ಧಾ೦ಗಿನಿ ಶ್ರೀಮತಿ ವನಮಾಲಾ ಇವರಿಗೆ ನಾನು ಕೃತಜ್ಞನಾಗಿದ್ದೇನೆ.)


೫.ಮೋಹದ ಹೆಂಡತಿ ತೀರಿದ ಬಳಿಕ.
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರದ ಬೀಗನ
ಮಾತಿನ ಹಂಗೊಂದೆನಗ್ಯಾಕೋ?

ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವುದು ಭಯವ್ಯಾಕೋ?
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವುದ್ಯಾಕೋ?

ತಂದೆ ಗೋವಿಂದ ಗುರುವಿನ ಸೇವಕ
ಕುಂದಗೋಳಕೆ ಬಂದು ನಿಂತನ್ಯಾಕೋ ?
ಬಂಧುರ ಶಿಶುನಾಳಾಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನವು ಸಾಕೋ.


೬.ಬಿದ್ದಿಯಬ್ಬೇ ಮುದುಕಿ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದೀಯಬೇ ಮುದುಕಿ ಬಿದ್ದೀಯಬೇ.

ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.

ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು
ಉಟ್ಟುದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ.

ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ,
ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.


೭.ಹುಟ್ಟಿದ ಹೊಲಿಮನಿ.
ಹುಟ್ಟಿದ ಹೊಲಿಮನಿ
ಬಿಟ್ಟರೆ ಖಾಲಿಮನಿ
ಎಷ್ಟಿದ್ದರೇನಿದು ಗಳಿಗಿ ಮನಿ.

ವಸ್ತಿ ಇರುವ ಮನಿ
ಗಸ್ತಿ ತಿರುಗೋ ಮನಿ
ಶಿಸ್ತಿಲೆ ಕಾಣುವ ಶಿವನ ಮನಿ.

ಚಿಂತೆ ಕಾಂತೆಯ ಮನಿ
ಸಂತಿ ಸವತಿಯ ಮನಿ
ಅಂತು ಬಲ್ಲವರಿಗೆ ಆಡೂ ಮನಿ.

ಒಂಬತ್ತು ದ್ವಾರ ದಾಟಿ
ಗಂಟಿಕ್ಕಿ ಹೋಗುವಾಗ
ಗಂಟೆ ಬಾರಿಸಿದಂತೆ ಗಾಳಿಮನಿ.

ವಸುಧೆಯೊಳಗೆ ನಮ್ಮ
ಶಿಶುನಾಳಧೀಶನ
ಹಸನಾದ ಪದಗಳ ಹಾಡೂ ಮನಿ.


೮.ಸೋರುತಿಹುದು ಮನೆಯ ಮಾಳಿಗಿ.

ಸೋರುತಿಹುದು ಮನೆಯ ಮಾಳಿಗಿ
ಅಜ್ನಾನದಿಂದ
ಸೋರುತಿಹುದು ಮನೆಯ ಮಾಳಿಗಿ.

ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ.

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ.

ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ.

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶನ ತಾನು
ನಿಂತು ಪೊರೆವನು ಎಂದು ನಂಬಿದೆ.

ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಸಾಧಕರು, ತಾವು ಈ ದರ್ಶನಕ್ಕೆ ಅರ್ಹರೊ ಎಂದು ತಮ್ಮನ್ನೆ ಪರೀಕ್ಷಿಸಿಕೊಳ್ಳುವದು ಸಹಜ. ಕನ್ನಡ ನಾಡಿನಲ್ಲಿ ಬಾಳಿದ, ಇಲ್ಲಿಯ ನಾಡಿಗರ ಮನಸ್ಸನ್ನು ಬೆಳಗಿದ ಇಬ್ಬರು ಅನುಭಾವಿಗಳಾದ ಬಸವಣ್ಣ ಹಾಗೂ ಶರೀಫರು ಇಂತಹ ಭಾವನೆಗಳನ್ನು ತಮ್ಮ ವಚನ ಹಾಗೂ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ.

ಇವರಲ್ಲಿ ಮೊದಲಿಗರಾದ ಬಸವಣ್ಣನವರ ವಚನವನ್ನೇ ಗಮನಿಸಿರಿ:

“ಮನೆಯೊಳಗೆ ಮನೆಯೊಡೆಯನಿದ್ದಾನೊ
, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ
, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ
, ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ
, ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ
ಕೂಡಲಸಂಗಮ ದೇವಾ!”

ಬಸವಣ್ಣನವರು ತಮ್ಮ ತನು ಹಾಗೂ ಮನವನ್ನು ಮನೆಗೆ ಹೋಲಿಸಿ
, ಈ ಮನೆಯಲ್ಲಿ ಕೇವಲ ಕಸ ಕಡ್ಡಿ ತುಂಬಿಕೊಂಡಿದೆ; ಈ ಮನೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಒಡೆಯನು ಇಲ್ಲವಲ್ಲ ಎಂದು ವಿಷಾದಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸುವ ಒಡೆಯ ಅಂದರೆ ತಿಳಿವನ್ನು ಪಡೆದ ಆತ್ಮ ಅಥವಾ ಪರಮಾತ್ಮ.

ಇದರಂತೆಯೆ
, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಳಿದ ಶರೀಫರು ಸಹ ಮನೆಯನ್ನು ಮನಸ್ಸಿಗೆ ಅಥವಾ Selfಗೆ ಹೋಲಿಸಿ ಹಾಡಿದ್ದಾರೆ. ಶರೀಫರ ಹಾಡು ಹೀಗಿದೆ:

ಸೋರುತಿಹದು ಮನಿಯ ಮಾಳಿಗಿ
, ಅಜ್ಞಾನದಿಂದ
ಸೋರುತಿಹದು ಮನಿಯ ಮಾಳಿಗಿ
||ಪಲ್ಲ||

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ
||||

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ
||||

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ
||||

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ
||||

ಶರೀಫರು ಜೀವಿಸಿದ್ದ ಬೆಳವಲ ನಾಡಿನಲ್ಲಿ ಮಳೆ ಕಡಿಮೆ. ಆದುದರಿಂದ ಮನೆಯ ಮೇಲ್ಭಾಗವು (
roof) ಮಣ್ಣಿನದಾಗಿರುತ್ತಿತ್ತು. ಇದಕ್ಕೆ ಮೇಲ್ಮುದ್ದಿಯ ಮನೆ ಎಂದು ಹೇಳುತ್ತಾರೆ. ಈ ಮೇಲ್ಮುದ್ದಿಗೆ ಆಧಾರ ಎಂದು ಕೆಳಭಾಗದಲ್ಲಿ ಕಟ್ಟಿಗೆಯ ತೊಲೆ ಹಾಗೂ ಜಂತಿಗಳನ್ನು ಬಳಸಿರುತ್ತಾರೆ.
ಮಣ್ಣಿನ ಮೇಲ್ಮುದ್ದಿಯಾಗಿರುವದರಿಂದ
, ಇಲ್ಲಿ ಹುಲ್ಲು ಬೆಳೆಯುವದು ಸ್ವಾಭಾವಿಕ. ತೇವಾಂಶದಿಂದಾಗಿ ತೊಲೆ ಹಾಗೂ ಜಂತಿಗಳು ಕೆಡುವದೂ ಸಹ ಸ್ವಾಭಾವಿಕ. ಇದರಿಂದಾಗಿ ಮನೆಯ ಮಾಳಿಗೆ ಸೋರಲು ಪ್ರಾರಂಭವಾಗುತ್ತದೆ.
ಈ ಮೇಲ್ಮುದ್ದಿಯನ್ನು ಮಳೆಗಾಲಕ್ಕಿಂತ ಮೊದಲೇ ದುರಸ್ತು ಮಾಡಬೇಕಾಗುತ್ತದೆ.

ಈ ಹಾಡಿನಲ್ಲಿ ಶರೀಫರು ತಮ್ಮ
self ಅಥವಾ ಮನಸ್ಸನ್ನು ಒಂದು ಮನೆಗೆ ಹೋಲಿಸಿ ಹಾಡಿದ್ದಾರೆ. ಈ ಮನೆಯ ಮಾಳಿಗೆ ಗಟ್ಟಿಯಾಗಿ ಉಳಿದಿಲ್ಲ, ಅದೀಗ ಸೋರುತ್ತಿದೆ. ಸೋರುವಿಕೆಗೆ ಅಜ್ಞಾನವೇ ಕಾರಣವೆಂದು ಶರೀಫರು ಮೊದಲಿನಲ್ಲಿಯೇ ಸಾರಿ ಬಿಡುತ್ತಾರೆ. ಈ ಅಜ್ಞಾನದ ಸ್ವರೂಪವೇನು? ಆತ್ಮಜ್ಞಾನವಿಲ್ಲದಿರುವದೇ ಅಜ್ಞಾನ! ಸೋರುವಿಕೆ ಎಂದರೇನು? ಮನೆಯನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲದಂತೆ, ಹೊರಗಿನ ಕಸಕಡ್ಡಿ, ಹುಳಹುಪ್ಪಡಿ ಇವೆಲ್ಲ ಮನೆಯ ಒಳಗೆ ಪ್ರವೇಶ ಪಡೆಯುವದು ಅಂದರೆ ವಿಕಾರಗಳು ಮನಸ್ಸನ್ನು ಪ್ರವೇಸಿಸುವದು.

ಹಾಗಾದರೆ
, ಈ ಮಾಳಿಗೆಯನ್ನು ಸರಿಪಡಿಸಲು ಶರೀಫರಿಗೆ ಇರುವ ತೊಂದರೆ ಏನು? ಈ ಹಾಡಿನ ಮೊದಲನೆಯ ನುಡಿಯಲ್ಲಿ ಶರೀಫರು ತಮ್ಮ ಅಸಹಾಯಕತೆಯನ್ನು ವಿವರಿಸಿದ್ದಾರೆ:

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ
||

ಸೋರುತ್ತಿರುವ ಮನೆಯ ಮಾಳಿಗೆಯ ದಾರು(=ಮರ=
timber)ಅನ್ನು ಗಟ್ಟಿ ಮಾಡುವವರು ಯಾರೂ ಇಲ್ಲ. ಮನೆಯನ್ನು ಕಾಳಕತ್ತಲೆಯು ಆವರಿಸಿರುವದರಿಂದ, ಮೆಟ್ಟಲು ಹತ್ತಿ, ಮಾಳಿಗೆಯನ್ನು ಏರಲು ಶರೀಫರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಇವರು ಮೇಲೆ ಏರುವದು ಹೇಗೆ? ಮೇಲ್ಮುದ್ದಿಯ ತೊಲೆ ಹಾಗೂ ಜಂತಿಗಳನ್ನು ಸರಿಪಡಿಸುವದು ಹೇಗೆ?

ಎರಡನೆಯ ನುಡಿಯಲ್ಲಿ ಶರೀಫರು ಈ ಮಾಳಿಗೆಯು ಎಷ್ಟರಮಟ್ಟಿಗೆ ನಾದುರಸ್ತ ಆಗಿದೆ ಎನ್ನುವದನ್ನು ವರ್ಣಿಸಿದ್ದಾರೆ:

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ
||

ಈ ಮನೆಯ ಮಾಳಿಗೆಯ ತೊಲೆ ಮುರಿದಿದೆ
; ಜಂತಿಗೆ ಹುಳುಕು ಹತ್ತಿದೆ; ಹುಳ ಕೊರೆದದ್ದರಿಂದ ಜಂತಿ ಹಾಗೂ ತೊಲೆಗಳನ್ನು ಜೋಡಿಸುವ ಕೀಲಗಳು ಸಡಿಲುಗೊಂಡಿವೆ.ಅವುಗಳ ಮೇಲೆ ಹೊದಿಸಿದ ಚಪ್ಪರ ಹರಿದಿದೆ. ಬೆಳಕು ಬರಲೆಂದು ನಿರ್ಮಿಸಲಾದ ಜೀರುಗಿಂಡಿಯು (=ಸಣ್ಣ ಬೆಳಕಿಂಡಿಯು) ಹಾಳಾಗಿ ಹೋಗಿದೆ. ಅರ್ಥಾತ್ ಮಾಳಿಗೆ ಪೂರ್ಣವಾಗಿ ನಾದುರಸ್ತ ಆಗಿದೆ.
ಮಾಳಿಗೆಯ ಸಂಕೇತದ ಮೂಲಕ ಶರೀಫರು ತಮ್ಮ ಮನಸ್ಸೂ ಸಹ ಈ ಮಾಳಿಗೆಯಂತೆ ನಾದುರಸ್ತ ಆಗಿದೆ. ತಮ್ಮ ಮನಸ್ಸಿಗೆ ಬೆಳಕನ್ನು ಕೊಡುವ ಬೆಳಕಿಂಡಿ ಹಾಳಾಗಿ ಹೋಗಿದ್ದರಿಂದ ಒಳಗೆಲ್ಲ ಕತ್ತಲೆ ಕವಿದಿದೆ ಎಂದು ಹೇಳುತ್ತಿದ್ದಾರೆ. ಆದರೇನು
, ಶರೀಫರಿಗೆ ದುರಸ್ತಿಗಾಗಿ ಮೇಲಕ್ಕೆ ಹತ್ತುವದೇ ಅಸಾಧ್ಯವಾಗಿದೆ.
ಈ ರೀತಿಯಾಗಿ ಮಾಳಿಗೆಯು ನಾದುರಸ್ತ ಆಗಿದ್ದರ ಪರಿಣಾಮವೇನು ಎನ್ನುವದನ್ನು ಶರೀಫರು ಮೂರನೆಯ ನುಡಿಯಲ್ಲಿ ಹೀಗೆ ವರ್ಣಿಸಿದ್ದಾರೆ:

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ
||

ಮೇಲ್ಮುದ್ದಿಯು ಕೆಟ್ಟು ಹೋಗಿ
, ತೇವಾಂಶ ಜಾಸ್ತಿಯಾಗಿದ್ದರಿಂದ ಅಲ್ಲಿ ಕರಕಿ ಹುಲ್ಲು ಬೆಳೆದು ಬಿಟ್ಟಿದೆ. ಕರಕಿಯು ಬಹಳ ಗಟ್ಟಿಯಾದ ಹುಲ್ಲಿನ ಜಾತಿ. ಎಷ್ಟು ಕಿತ್ತಿ ಒಗೆದರೂ ನಿರ್ಮೂಲವಾಗುವದಿಲ್ಲ. ಅದೇ ರೀತಿಯಾಗಿ, ಶರೀಫರ ಮನಸ್ಸಿನಲ್ಲಿಯೂ ಸಹ ವಿಷಯಗಳೆಂಬ ವಿಕಾರಗಳು ಕರಕಿ ಹುಲ್ಲಿನಂತೆ ಗಟ್ಟಿಯಾಗಿ ಬೆಳೆದು ನಿಂತಿವೆ. (‘ಕಸವು ಹತ್ತಿ’ ಎನ್ನುವದನ್ನು ‘ಗಟ್ಟಿಯಾಗಿ’ ಅಥವಾ ‘ಕಸಕಡ್ಡಿ ಬೆಳೆದು’ ಎನ್ನುವ ಎರಡೂ ಅರ್ಥಗಳಲ್ಲಿ ತಿಳಿಯಬಹುದು.) ಇಂತಹ ವಿಕಾರಗಳು ಇದ್ದಲ್ಲಿ ಈ ಭವದ ದುರಿತಗಳು ಅಂದರೆ ಸಂಸಾರದ ಕೇಡುಗಳು, ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಳ್ಳುತ್ತವೆ. ಕಸವನ್ನು ತೆಗೆದು ಹಾಕದ ಹೊರತು, ಇರುವೆಗಳು ಹೋಗುವದಿಲ್ಲ. ಇರುವೆಗಳು ಮುತ್ತಿದ್ದರಿಂದ ಮೇಲ್ಮುದ್ದಿಯ ಮಣ್ಣೆಲ್ಲ ಏಕರೂಪವಾಗಿ ಬಿಟ್ಟಿದೆ. ಅದೇ ರೀತಿಯಾಗಿ, ಸಂಸಾರದ ಕೇಡುಗಳಿಂದ ಶರೀಫರ ಮನೋದ್ರವ್ಯವೆಲ್ಲ ಏಕರೂಪವಾಗಿ ವಿಕಾರಗೊಂಡಿದೆ.

ಆದರೆ
, ಶರಿಫರು ಎದೆಗುಂದಿಲ್ಲ. ಅವರಿಗೆ ಗುರುಕರುಣೆಯು ಲಭಿಸುವ ಧೈರ್ಯವಿದೆ. ತಮ್ಮ ಗೆಳೆತಿಗೆ ಶರೀಫರು ಈ ಭರವಸೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ
||

ಶರೀಫರು ಯಾರಿಗೆ ‘ಕಾಂತೆ’ ಎಂದು ಹೇಳುತ್ತಿದ್ದಾರೆ
? ಅವರ ಅನೇಕ ಕವನಗಳು ಈ ಕಾಂತೆಗೆ ಸಂಬೋಧಿತವಾಗಿವೆ. ಕಾಂತೆ ಎಂದರೆ ಆಪ್ತ ಗೆಳತಿ ಎಂದು ತಿಳಿಯಬಹುದು. ತಮ್ಮ ಮನದ ಮಾತುಗಳನ್ನು ಯಾರಿಗೆ ಹೇಳಬಹುದೊ ಅಂತಹ confidante ಈ ಕಾಂತೆ. ತಮ್ಮ ಅಂತರಾತ್ಮಕ್ಕೇ ಶರೀಫರು ಕಾಂತೆ ಎಂದು ಕರೆಯುತ್ತಿದ್ದಾರೆ ಎನ್ನಬಹುದು.
ಹುಬ್ಬಿ ಮಳೆಯು ಶ್ರಾವಣ ಮಾಸದಲ್ಲಿ ಬರುತ್ತದೆ. ಶ್ರಾವಣ ಮಾಸವೆಂದರೆ ಮಳೆ ಧೋಧೋ ಎಂದು ಸುರಿಯುವ ಕಾಲ. ಗುರುಕಾರುಣ್ಯವೂ ಸಹ ಶರೀಫರಿಗೆ ಪೂರ್ಣವಾಗಿ ಒಲಿದು ಬರಲಿದೆ ಎನ್ನುವದರ ಸೂಚನೆಯನ್ನು ಶರೀಫರು ಇಲ್ಲಿ ನೀಡುತ್ತಿದ್ದಾರೆ. ಅದರ ಪೂರ್ವಸೂಚನೆಯಾಗಿ ಶಿಶುವಿನಾಳ ಗ್ರಾಮಕ್ಕೆ ಮೋಡಗಳು ಒಲಿದು ಬಂದಿವೆ ಎಂದು ಶರೀಫರು ಹೇಳುತ್ತಿದ್ದಾರೆ.

೯.ತರವಲ್ಲ ತಗಿ ನಿನ್ನ ತಂಬೂರಿ.

ತರವಲ್ಲ ತಗಿ ನಿನ್ನ ತಂಬೂರಿ - ಸ್ವರ
ಬರದೆ ಬಾರಿಸದಿರು ತಂಬೂರಿ ;
ಸರಸ ಸಂಗೀತದ ಕುರುಹುಗಳರಿಯದೆ
ಬರದೆ ಬಾರಿಸದಿರು ತಂಬೂರಿ.

ಮದ್ದಲಿ ದನಿಯೊಳು ತಂಬೂರಿ - ಅದ
ತಿದ್ದಿ ನುಡಿಸಬೇಕೊ ತಂಬೂರಿ ;
ಸಿದ್ದ ಸಧಕರ ಸುವಿದ್ಯೆಗೆ ಒದಗುವ
ಬುದ್ದಿವಂತಗೆ ತಕ್ಕ ತಂಬೂರಿ.

ಬಾಳಬಲ್ಲವರಿಗೆ ತಂಬೂರಿ - ದೇವ
ಭಾಳಾಕ್ಷ ರಚಿಸಿದ ತಂಬೂರಿ ;
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ.

ಸತ್ಯ ಶರಧಿಯೊಳು ತಂಬೂರಿ - ನಿತ್ಯ
ಉತ್ತಮರಾಡುವ ತಂಬೂರಿ ;
ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕೆ ತಂಬೂರಿ.

ಹಸನಾದ ಮ್ಯಾಳಕೆ ತಂಬೂರಿ - ಇದು
ಕುಶಲರಿಗೊಪ್ಪುವ ತಂಬೂರಿ.
ಶಿಶುನಾಳಧೀಶನ ಓದುಪುರಾಣದಿ
ಹಸನಾಗಿ ಬಾರಿಸೊ ತಂಬೂರಿ.


೧೦.ದುಡ್ಡು ಕೆಟ್ಟದ್ದು ನೋಡಣ್ಣ.

ದುಡ್ಡು ಕೆಟ್ಟದ್ದು ನೋಡಣ್ಣ - ದುಗ್ಗಾಣಿಗೆ
ಹೆಡ್ಡನಾಗಬೇಡೋ, ತಿಂದೀ ನೀ ಮಣ್ಣ !

ದುಡ್ಡು ಕೆಟ್ಟದ್ದೊ ಹೆಡ್ಡ ಮೂಢಾತ್ಮ
ದೊಡ್ಡ ದೊಡ್ಡವರನ್ನೆ ಹೆಗ್ಗಾಲು ಇಡಿಸಿತು.
ದುಡ್ಡು ಕೆಟ್ಟದ್ದು ನೋಡಣ್ಣ

ಹೆಣ್ಣಿನ ಪೂಜೆಗೆ ಇಳಿಸಿ - ಮಣ್ಣಿನ
ಸಂತೇಲಿ ಇಲ್ಲದ ಮರ್ಯಾದೆ ಕೊಡಿಸಿ
ಮಿಣ್ಣನೆ ತಿಂದೀತು ಒಳಗ - ಮೆಲ್ಲನೆ
ಥಣ್ಣಗ ಮಾಡೀತು ಬೆಂಕಿಯ ಕಿಡಿ.

ರೊಕ್ಕ ಮುಕ್ಕಿಸೀತು ಮಣ್ಣು - ಅದ
ತಕ್ಕಂತೆ ಬಳಸಲು ತೆರೆಸೀತು ಕಣ್ಣು
ಮುಕ್ಕುವ ಚಪಲ ಏಕಿನ್ನು - ಮುಕ್ಕಿ
ಬಿಕ್ಕಳಿಸಲು ಕುಡಿಸೀತು ನೀರನ್ನು.

ಆಸೆ ಬಿದ್ದು ಮನದ ಮಾರಿ
ಹೊಂಟ್ಯಳೊ ಹುಡುಕುತ್ತ ನೂರೆಂಟು ಕೇರಿ
ಕಾಸು ಕಾಸನ್ನೂ ಹೆಕ್ಕಿ - ಮೂಳಿ
ಶಿಶುನಾಳಾಧಿಶನ ಮರೆತಾಳು ಸೊಕ್ಕಿ.

೧೧.ಕೂ ಕೂ ಎನುತಿದೆ ಬೆಳವಾ.

ಕೂ ಕೂ ಎನುತಿದೆ ಬೆಳವಾ-ಬಂದು
ಹೊಕ್ಕಿತು ಭವವೆಂಬ ದುಖಃದ ಹಳುವ

ಪುರುಷನ ಬುಟ್ಟೀಲಿ ಇಟ್ಟು- ಬಹು
ಹರುಷದಿ ಹಳ್ಳದೂಳ್ ತೇಲಾಕ ಬಿಟ್ಟು
ಮನವೆಂಬ ಗೂಡಿನೊಳಿಟ್ಟು- ತನ್ನ
ತನುವೆಂಬ ಮರ್ಅದೊಳು ಹಾರಾಕ ಬಿಟ್ಟು

ಆನಂದದೊಳು ತಾನಿರಲು- ಸ್ವಾ
ನಂದಿ ರೆಖ್ಖೆಯ ಕೆದರುತಲಿರಲು,
ಜ್ನಾನದ ಬೆಳಕಿನೊಳಿಹುದು- ದೇವ
ಶಿಶುನಾಳಾಧೀಶ ಗೋವಿಂದನ ವರವು.


೧೨.ಮನಸೇ ಮನಸಿನ ಮನಸ ನಿಲ್ಲಿಸುವುದು.

ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳೀಯುವ ಮನ ಬ್ಯಾರೆಲೊ ಮನಸೇ.

ತನುತ್ರಯದೊಳು ಸುಳಿದಾಡುವ ಜೀವದ
ಗುಣವರಿತರೆ ನಿಜ ಬ್ಯಾರೆಲೊ ಮನಸೇ.

ದಶದಿಕ್ಕಿಗೆ ಹಾರಾಡುವ ಹಕ್ಕಿಯು
ವಶವಾಗಲಾಪರಿ ಬ್ಯಾರೆಲೊ ಮನಸೇ.

ಗೋವಿಂದ ಗುರುವಿನ ಚರಣ ಕಮಲದವಳು
ಗಾನಗೈಯೆಲೊ ಭ್ರಮರಾಳೀಯ ಮನಸೇ.

ವಿಷಯಗಳಲಿ ಸುಖಬಯಕೆ ಬಯಸಿ ಬಲು
ಕಸಿವಿಸಿಗೊಂಬುವುದೇತಕೊ ಮನಸೇ.

ಇಳೆಯೊಳು ಶಿಶುನಾಳಾಧೀಶ ನಿರ್ಮಲನ
ತಿಳಿದರೆ ಒಳಹೊರಗೊಂದೆಲೊ ಮನಸೇ.


೧೩.ಅಳಬೇಡ ತಂಗಿ ಅಳಬೇಡ.

ಶಿಶುನಾಳ ಶರೀಫರು ೪೦೦ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಗೀತೆಗಳು ಸಂದರ್ಭಾನುಸಾರವಾಗಿ ಹೊರಹೊಮ್ಮಿದ ಹಾಡುಗಳು. ಇಂತಹ ಹಾಡುಗಳಲ್ಲಿ “ಬಿದ್ದೀಯಬೆ ಮುದುಕಿ”, “ಗಿರಣಿ ವಿಸ್ತಾರ ನೋಡಮ್ಮ” , “ಅಳಬೇಡ ತಂಗಿ ಅಳಬೇಡ” ಮೊದಲಾದವು ಪ್ರಸಿದ್ಧವಾದ ಹಾಡುಗಳಾಗಿವೆ.

ಶರೀಫರು ಒಮ್ಮೆ ತಮ್ಮ ಊರಿನಲ್ಲಿ ನಡೆದು ಹೋಗುತ್ತಿದ್ದಾಗ
, ಅದೇ ಮದುವೆಯಾದ ಹುಡುಗಿಯನ್ನು ಗಂಡನ ಮನೆಗೆ ಕಳಸಿ ಕೊಡುತ್ತಿರುವ ನೋಟವನ್ನು ನೋಡಿದರು. ಶರೀಫರ ಕಾಲದಲ್ಲಿ ಬಾಲ್ಯವಿವಾಹಗಳೇ ನಡೆಯುತ್ತಿದ್ದವು. ಹೀಗಾಗಿ, ಗಂಡನ ಮನೆಗೆ ಹೋಗುತ್ತಿರುವ ಹುಡುಗಿ ಅಳುವದು ಸಾಮಾನ್ಯ ದೃಶ್ಯವಾಗಿತ್ತು.

ಆಗ ಶರೀಫರ ಬಾಯಿಂದ ಹೊರಹೊಮ್ಮಿದ ಹಾಡು: ಅಳಬೇಡ ತಂಗಿ ಅಳಬೇಡ.
ಆ ಹಾಡು ಹೀಗಿದೆ:

ಅಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ
||ಪಲ್ಲ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
ಮಿಡಕ್ಯಾಡಿ ಮದಿವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ
||||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂದು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ
||||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತ
s
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತಾದೆವ್ವ ಗೌರಿ
||||
..................................

ಹಾಡು ಪ್ರಾರಂಭವಾಗುವದು ಸಮಾಧಾನಪಡಿಸುವ ಮಾತುಗಳಿಂದ:
“ತಂಗೆವ್ವಾ
, ನೀ ಎಷ್ಟs ಅತ್ತರೂ, ಅದರಿಂದ ಏನೂ ಪ್ರಯೋಜನ ಇಲ್ಲ.
ಇಲ್ಲಿ ಕೂಡಿದವರು ನಿನ್ನನ್ನು ಕಳಸುವವರೇ ಹೊರತು
, ಉಳಿಸಿಕೊಳ್ಳೋರಲ್ಲಾ”.
ಈ ಮಾತುಗಳಲ್ಲಿಯ ವ್ಯಂಗ್ಯವನ್ನು ಗಮನಿಸಬೇಕು. ತೊಂದರೆ ಕೊಟ್ಟವನನ್ನು ಅಥವಾ ಅಪಕಾರ ಮಾಡಿದವನನ್ನು ಬೈಯಲು ಉಪಯೋಗಿಸುವ ಪದಪುಂಜವಿದು : “ ಏನಪಾ
, ನಮ್ಮನ್ನೇನ ಕಳಸಬೇಕಂತ ಮಾಡಿಯೇನ?”

ಆದರೆ
, ಇಲ್ಲಿ ಕಳಿಸುತ್ತಿರುವದು ಗಂಡನ ಮನೆಗೆ, ಅಂದರೆ ಸಂಸಾರವೆಂಬ ಮಾಯಾಲೋಕಕ್ಕೆ. ಇಂತಹ ಮಾಯಾಪ್ರಪಂಚಕ್ಕೆ ಈ ಹುಡುಗಿಯನ್ನು ನೂಕುತ್ತಿರುವವರ ಸಡಗರ ನೋಡಿರಿ:
“ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
”.

ಗಂಡನ ಮನೆಗೆ ಕಳಿಸುವಾಗ ಮಗಳ ಉಡಿಯಲ್ಲಿ ಅಕ್ಕಿ ತುಂಬಿ ಕಳಿಸುವ ಸಂಪ್ರದಾಯವಿದೆಯಲ್ಲವೆ
?
ಹಾಗಾಗಿ
, ಈ ಹುಡುಗಿಯ ಉಡಿಯಲ್ಲಿ ಖಡಕ್ಕಾಗಿ (=full) ಅಕ್ಕಿ ತುಂಬಿ, ಬಳಿಕ ದುಡುಕುತ್ತ(=ಜೋರಿನಿಂದ) ಅವಳನ್ನು ಮುಂದೆ ನೂಕಿದರಂತೆ!
ಇದೆಲ್ಲ ಹುಡುಗಿಗೂ ಬೇಕಾದದ್ದೆ! ಅವಳು ಮಿಡುಕಿ
, ಮಿಡುಕಿ ಅಂದರೆ ಹಂಬಲಿಸಿ ಮದುವೆಯಾದವಳು.
ಈ ಮಾಯೆಯ ಸಂಸಾರವನ್ನು ತಾನೇ ಹುಡುಕಿ ಹೊಕ್ಕವಳು.
ಒಮ್ಮೆ ಹೊಕ್ಕ ಮೇಲೆ ಮುಗಿಯಿತು.
ಇನ್ನು ಅವಳಿಗೆ ಮರಳುವ ಮಾರ್ಗವಿಲ್ಲ.
This is path of no return.
ಈಗಾಗಲೇ ಅವಳಿಗೆ ಮಿಂಡರು ಗಂಟು ಬಿದ್ದಿದ್ದಾರೆ.
ಮಿಂಡರು ಅಂದರೆ ಮನಸ್ಸನ್ನು ಹಾದಿಗೆಡಿಸುವ ಪ್ರಲೋಭನೆಗಳು.

ತನ್ನಲ್ಲಿ ಸಂಪತ್ತು ಕೂಡಬೇಕು
, ತನ್ನ ಅಂತಸ್ತು ಇತರರಿಗಿಂತ ಹೆಚ್ಚಾಗಬೇಕು, ತಾನು ಸರೀಕರೆದುರಿಗೆ ಮೆರೆಯಬೇಕು, ಇಂತಹ ಸಾಮಾನ್ಯ ಅಪೇಕ್ಷೆಗಳು ಮನಸ್ಸನ್ನು ಸನ್ಮಾರ್ಗದಿಂದ ದೂರ ಸರಿಸುವದರಿಂದ ಇವೆಲ್ಲ ಮಿಂಡರಿದ್ದ ಹಾಗೆ.
ದೇವರ ಆಲೋಚನೆ ಅಂದರೆ ಪಾತಿವ್ರತ್ಯ
; ಇತರ ಆಲೋಚನೆಗಳು ಹಾದರ.
ಇಷ್ಟೇ ಅಲ್ಲದೆ
, ಇವಕ್ಕೆಲ್ಲ ಪ್ರೋತ್ಸಾಹ ಕೊಡುವ ‘ಐವರು ರಂಡೆಯರು’ ಅಂದರೆ ನಮ್ಮ ಪಂಚ ಇಂದ್ರಿಯಗಳು : ಕಣ್ಣು, ಕಿವಿ, ಮೂಗು,ನಾಲಗೆ ಹಾಗು ಚರ್ಮ.
ಈ ಐದು ಇಂದ್ರಿಯಗಳೂ ಸಹ ಸುಖಾಪೇಕ್ಷೆ ಮಾಡುತ್ತವೆ
, ಅಲ್ಲವೆ?

“ಇಷ್ಟೆಲ್ಲ ಬಂಧನಗಳು ಇದ್ದಾಗ
, ಇಲ್ಲಿ ಬಂದಿರುವ ಬಂಧುಗಳ ಕಾಲಿಗೆ ಬಿದ್ದರೆ, ನಿನಗೆ ಸದ್ಗತಿ ಹೇಗೆ ಸಿಕ್ಕೀತು, ತಂಗೆವ್ವಾ? ಇನ್ನು ನಿನಗೆ ಮಾಯಾಸಂಸಾರ ತಪ್ಪದು. ಮೋಜು ಬಯಸಿ ಮದಿವ್ಯಾದಿ, ಈಗ ಮೋಜನ್ನು ಅನುಭವಿಸು”, ಎಂದು ಶರೀಫರು ಹೇಳುತ್ತಾರೆ.

ಶರೀಫರು ಆ ಹುಡುಗಿಗೆ ಈ ಮಾಯಾಸಂಸಾರದಲ್ಲಿದ್ದ ಉತ್ಸಾಹವನ್ನು
, ಆಸಕ್ತಿಯನ್ನು ಗಮನಿಸಿ ಈ ರೀತಿ ಹೇಳುತ್ತಾರೆ:
“ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ”
ದಡಿ ಅಂದರೆ ಅಂಚು. ರಂಗೀಲಿ(=ರಂಗಿನಲ್ಲಿ) ಅಂದರೆ ಉತ್ಸಾಹದಿಂದ ರೇಶಿಮೆ ಸೀರೆ ಉಟ್ಟಿದ್ದಾಳೆ.
ಆದರೆ
, ಈ ಹುಡುಗಿ ಹಂಗನೂಲಿನ ಪರವಿಯನ್ನು ಮರೆತು ಬಿಟ್ಟಿದ್ದಾಳೆ.
ಹಂಗನೂಲು ಅಂದರೆ
, ಕೈಯಿಂದ ತಯಾರಿಸಿದ ಹತ್ತಿಯ ನೂಲು. ಅದರ ಪರವಿಯನ್ನು ಈ ಹುಡುಗಿ ಮರೆತಿದ್ದಾಳೆ. ಪರವಿ ಅಂದರೆ ಪರವಾಹ್ ಅನ್ನುವ ಉರ್ದು ಪದ ಅಂದರೆ ಕಾಳಜಿ, ಚಿಂತೆ, care, bother.
ಹೇಗೆ ಕೈಮಗ್ಗದ ಹತ್ತಿಯ ಬಟ್ಟೆ ನಿಸರ್ಗಸಹಜವಾಗಿದೆಯೊ ಹಾಗೆಯೇ ದೇವರ ನೆನಪು ನಮ್ಮ ಮನಸ್ಸಿಗೆ ಹತ್ತಿರವಾದದ್ದು. ಕೃತಕ ಹಾಗು ಆಡಂಬರದ ರೇಶಿಮೆ ಸೀರೆ ಎಂದರೆ ಸಂಸಾರದ ವೈಭವ. ಈ ವೈಭವಕ್ಕೆ ನೀನು ಮನಸೋತರೆ
, ನೀನು ಮಂಗಳಮೂರುತಿ ದೇವರ ಸಾನ್ನಿಧ್ಯಕ್ಕೆ ಹೊರತಾಗುತ್ತೀ ಎಂದು ಶರೀಫರು ಎಚ್ಚರಿಸುತ್ತಾರೆ.
ಶರೀಫರು ‘ಮಂಗಳಮೂರುತಿ’ ಎನ್ನುವ ಪದವನ್ನು ಉದ್ದೇಶಪೂರ್ವಕವಾಗಿ ಬಳಸಿದ್ದಾರೆ. ಏಕೆಂದರೆ
, ultimately ನಮಗೆ ಮಂಗಳವಾಗುವದು ಪಾರಮಾರ್ಥಿಕ ಚಿಂತನೆಯಿಂದಲೇ ಹೊರತು, ಸಾಂಸಾರಿಕ ಆಡಂಬರದಿಂದಲ್ಲ.

ಲೌಕಿಕ ಪ್ರತಿಮೆಗಳಿಗೆ ಆಧ್ಯಾತ್ಮಿಕ ಅರ್ಥವನ್ನು ನೀಡುವದು ಶರೀಫರ ವೈಶಿಷ್ಟ್ಯವಾಗಿದೆ. ಮಿಂಡೇರ ಬಳಗ
, ರೇಶಿಮೆ ಸೀರಿ ಮೊದಲಾದ ಪ್ರತಿಮೆಗಳು ಅಚ್ಚ ದೇಸಿ ಪ್ರತಿಮೆಗಳು. ಇದರ ಜೊತೆಗೇ ಮಾಯದ ಮರದಂತಹ ಅಚ್ಚರಿಯ ಪ್ರತಿಮೆಗಳನ್ನೂ ಅವರು ಸಂಯೋಜಿಸುತ್ತಾರೆ. ಈ ರೀತಿಯಲ್ಲಿ ಶರೀಫರು ಲೌಕಿಕವಾಗಿ ಪ್ರಾರಂಭಿಸಿದ ಹಾಡನ್ನು ಆಧ್ಯಾತ್ಮಿಕ ಚಿಂತನೆಗೆ ಅತ್ಯಂತ ಸಹಜವಾಗಿ ತಿರುಗಿಸುತ್ತಾರೆ.

೧೪.ಕೋಡಗನ್ನ ಕೋಳಿ ನುಂಗಿತ.

‘ಕೋಡಗನ್ನ ಕೋಳಿ ನುಂಗಿತ’ ಇದು ಶರೀಫರ ಒಡಪಿನ ಅಥವಾ ಬೆಡಗಿನ ಹಾಡು.
ಇಂತಹ ಹಾಡುಗಳನ್ನು ಶರೀಫರಲ್ಲದೆ
, ಕನಕದಾಸರು ಹಾಗೂ ಪುರಂದರದಾಸರೂ ಸಹ ರಚಿಸಿದ್ದಾರೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಿನ್ನ ಒಳಗೊ’ ಎನ್ನುವ ಕನಕದಾಸರ ಹಾಡನ್ನು ಉದಾಹರಣೆಗೆ ನೋಡಬಹುದು.

ಅದರಂತೆ ಪುರಂದರದಾಸರ ಈ ರಚನೆ ಸಹ ಪ್ರಸಿದ್ಧವಿದೆ:
“ಸುಳ್ಳು ನಮ್ಮಲ್ಲಿಲ್ಲವಯ್ಯಾ
ಸುಳ್ಳೆ ನಮ್ಮನಿ ದೇವರು
”.
………………………………………………………….
‘ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ ಶರಿಫರು ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
ಕೋಳಿಯ ಕೂಗು ಬೆಳಗಿನ ಸೂಚನೆ. ಶರೀಫರ ಹಾಡಿನಲ್ಲಿ ಇದು ಆಧ್ಯಾತ್ಮಿಕ ಬೆಳಗನ್ನು ಸೂಚಿಸುವ ಕೋಳಿ. ಆಧ್ಯಾತ್ಮಿಕ ಜ್ಞಾನೋದಯವು ಕೋಡಗದಂತಿರುವ ಮನಸ್ಸನ್ನು ನುಂಗಿ ಹಾಕುತ್ತದೆ ಎಂದು ಶರೀಫರು ಹೇಳುತ್ತಾರೆ.

ಪುರಂದರದಾಸರೂ ಸಹ ತಮ್ಮ ಒಂದು ರಚನೆಯಲ್ಲಿ ಮರ್ಕಟದಂತಿರುವ ಮನಸ್ಸನ್ನು ಡೊಂಕು ಬಾಲದ ನಾಯಿಗೆ ಹೋಲಿಸಿದ್ದಾರೆ. ತಿದ್ದಲು ಎಷ್ಟೇ ಪ್ರಯತ್ನಿಸಿದರೂ ಸಹ ಈ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಉಳಿಯುತ್ತದೆ. ಅರ್ಥಾತ್ ಈ ಮನಸ್ಸಿಗೆ ಜ್ಞಾನೋದಯವಿನ್ನೂ ಆಗಿಲ್ಲ. ಪುರಂದರದಾಸರ ಈ ಹಾಡಿನಲ್ಲಿ ಒಂದು ವಿಶೇಷತೆ ಇದೆ. ಹಾಡಿನ ಪಲ್ಲವನ್ನು ನೋಡೋಣ:

“ಡೊಂಕು ಬಾಲದ ನಾಯಕರೆ
,
ನೀವೇನೂಟವ ಮಾಡಿದಿರಿ
?” ||ಪಲ್ಲ||

ಡೊಂಕು ಬಾಲದ ನಾಯಕರು ಎಂದರೆ ‘ನಾಯಿ’ ಎನ್ನುವದು ತಿಳಿದ ವಿಷಯವೇ.
ಆದರೆ ‘ನಾಯಕರು’ ಎನ್ನುವಲ್ಲಿ ಒಂದು ಹೆಚ್ಚಿನ ಅರ್ಥವಿದೆ.
ಪುರಂದರದಾಸರ ಪೂರ್ವಾಶ್ರಮದ ಹೆಸರು: ಶ್ರೀನಿವಾಸ ನಾಯಕ.
ದಾಸರು “ಡೊಂಕು ಬಾಲದ ನಾಯಕರೆ” ಎನ್ನುವಾಗ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿದ್ದಾರೆ !
. . .. .. . . . . . . .. . . . . . . . . . .. . . . . . . .

ಶರೀಫರ ರಚನೆಯ ಪೂರ್ತಿ ಪಾಠ ಹೀಗಿದೆ:

ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ
||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ
||||

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ
||||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ
||||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ
||||

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ
||||
. . .. . . . . .. . . . . . . .. . . . . . . . .. . .

ಶರೀಫರು ಆಧುನಿಕ ಕಾಲದ ಕವಿಗಳಂತೆ
, ಮುಚ್ಚಿದ ಕೋಣೆಯಲ್ಲಿ ಕುಳಿತು, ಪೆನ್ನು ಅಥವಾ ಪೆನ್ಸಿಲಿನಿಂದ ಕವನ ಬರೆಯುವ ಕವಿ ಅಲ್ಲ. ತಮ್ಮ ಸುತ್ತ ನೆರೆದಿರುವ ಜನಸಮುದಾಯದ ಎದುರಿಗೆ ಸ್ಫೂರ್ತಿಯುತವಾಗಿ ಕವನ ಹಾಡುವದು ಅವರ ಪದ್ಧತಿ. ಜನಸಮುದಾಯಕ್ಕೆ ಜ್ಞಾನದ ಬೆಳಕು ಸಿಗಲಿ ಎನ್ನುವದು ಅದರ ಉದ್ದೇಶ.
ಹೀಗಾಗಿ ಇವರ ಕವನಗಳ ರಚನೆಯನ್ನು ಗಮನಿಸಿದಾಗ
, ಕೆಲವೊಂದು ಕವನದ ಸಾಲುಗಳಲ್ಲಿ repetitiveness ಕಾಣುವದು ಸಹಜ.

‘ಕೋಡಗನ್ನ ಕೋಳಿ ನುಂಗಿತ’ ಕವನದ ಎಲ್ಲಾ ನುಡಿಗಳಲ್ಲಿ ಕಂಡು ಬರುವದು ಒಂದೇ ಅರ್ಥ.
ಮೊದಲ ನುಡಿಯ ನಂತರ
, ಕವನ ಮುಂದೆ ಸಾಗಿದಂತೆ ಅರ್ಥದ ಬೆಳವಣಿಗೆ ಸಾಗುವದಿಲ್ಲ.
ಆದರೆ ಆ ಕಾರಣಕ್ಕಾಗಿ ಕವನದ ಸೌಂದರ್ಯವೇನೂ ಕಡಿಮೆಯಾಗಿಲ್ಲ.

ಕವನದ ಪಲ್ಲದಲ್ಲಿ ಕವಿಯು ‘ಕೋಳಿ ಅಂದರೆ ಆಧ್ಯಾತ್ಮಿಕ ಜ್ಞಾನೋದಯವು ಕೋಡಗವನ್ನು ಅಂದರೆ ಮಂಗನಂತಿರುವ ಮನಸ್ಸನ್ನು ತಿಂದು ಹಾಕಿದೆ’ ಎಂದು ಹೇಳುತ್ತಾರೆ. ಇದೇ ಮಾತನ್ನು ಮುಂದಿನ ನುಡಿಯಲ್ಲಿ
, ವಿಭಿನ್ನ ರೂಪಕಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಾರೆ:

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ
||||

ಆಡು ಅಂದರೆ ಜ್ಞಾನ. ಇದು ಸಣ್ಣದು . ಸಂಸಾರದ ಆಸೆಗಳಿಗೋ ಆನೆಯ ಬಲ.
ಇಂತಹ ಆನೆಯನ್ನು ಆಡಿನಂತಿರುವ ಜ್ಞಾನ ತಿಂದು ಹಾಕಿಬಿಡುತ್ತದೆ ಎಂದು ಶರೀಫರು ಹಾಡುತ್ತಾರೆ.

(ಈ ಸಂದರ್ಭದಲ್ಲಿ ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಳ್ಳಬಹುದು:
“ತಮಂಧ ಘನ
, ಜ್ಯೋತಿ ಕಿರಿದೆನ್ನಬಹುದೆ?” )

ಗೋಡೆ ಎಂದರೆ ಮನಸ್ಸಿನ ಭಿತ್ತಿ. ಜ್ಞಾನೋದಯದ ನಂತರ
, ಈ ಗೋಡೆಯ ಮೇಲೆ, ಎಷ್ಟೇ ಸುಣ್ಣ ಹಚ್ಚಲಿ, ಯಾವುದೇ ಬಣ್ಣ ಹಚ್ಚಲಿ, ಅದನ್ನು ಗೋಡೆಯೇ ತಿಂದು ಹಾಕಿ ಬಿಡುತ್ತದೆ. ಗೋಡೆಯ surface ಮತ್ತೂ ನಿರ್ವರ್ಣವಾಗಿ, ಶುಭ್ರವಾಗಿಯೇ ಉಳಿಯುತ್ತದೆ.

ಆಡಲು ಬಂದ ಪಾತರದವಳು ಅಂದರೆ ಕುಣಿಯಲು ಬಂದ ನರ್ತಕಿ
, ಅರ್ಥಾತ್ ಸಂಸಾರದಲ್ಲಿ ಆಡಲು ಬಂದ ಜೀವಾತ್ಮ. ಮದ್ದಲೆ ಅಂದರೆ ಪರಮಾತ್ಮ ಬಾರಿಸುತ್ತಿರುವ ಜ್ಞಾನದ ಮದ್ದಲೆ.

ಈ ರೂಪಕಕ್ಕೆ ಒಂದು ವಿಶಿಷ್ಟ ಹಿನ್ನೆಲೆ ಇದೆ. ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’ ಕಾವ್ಯದಲ್ಲಿ ಅಲ್ಲಮನಿಗೂ
, ಮಾಯಾದೇವಿಗೂ ಸ್ಪರ್ಧೆ ಏರ್ಪಡುತ್ತದೆ. ಅಲ್ಲಮ ಮದ್ದಲೆ ಬಾರಿಸುತ್ತಿದ್ದಂತೆ, ಅದರ ತಾಳಕ್ಕೆ ತಕ್ಕಂತೆ ಕುಣಿಯಲು ಮಾಯಾದೇವಿಗೆ ಸಾಧ್ಯವಾಗುವದಿಲ್ಲ. ಅವಳು ಸೋಲೊಪ್ಪಿಕೊಳ್ಳುತ್ತಾಳೆ.

‘ಪ್ರಭುಲಿಂಗ ಲೀಲೆ’ ಶರೀಫರಿಗೆ ಪ್ರಿಯವಾದ ಕಾವ್ಯ.
ತಾವೇ ಮಾಡಿಕೊಂಡ ಇದರ ಹಸ್ತಪ್ರತಿಯೊಂದನ್ನು ಅವರು ಯಾವಾಗಲೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರಂತೆ.

ಎರಡನೆಯ ನುಡಿಯಲ್ಲಿ ಶರೀಫರು ಸಂಸಾರದಲ್ಲಿರುವ ಸಾಧಕನ ಪ್ರಗತಿಯ ರೀತಿಯನ್ನು ವರ್ಣಿಸಿದ್ದಾರೆ:

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ
||||

ಒಳ್ಳು ಹಾಗೂ ಬೀಸುವ ಕಲ್ಲುಗಳನ್ನು ಶರೀಫರು ಸಂಸಾರಕ್ಕೂ
, ಒನಕೆ ಹಾಗೂ ಬೀಸುವ ಕಲ್ಲಿನ ಗೂಟವನ್ನು ಸಾಧಕನ ಕರ್ಮಗಳಿಗೂ ಹೋಲಿಸಿದ್ದಾರೆ. ಕುಟ್ಟಲಿಕೆ ಬಂದ ಮುದುಕಿ ಅಂದರೆ ಈ ಸಂಸಾರದಲ್ಲಿ ಬಂದು, ಕರ್ಮಗಳಿಂದ ಪಕ್ವವಾದ ಜೀವಾತ್ಮ.
ಈ ಜೀವಾತ್ಮ
is hammered on the anvil of life.
ಆದರೆ ಆತ ಪಕ್ವವಾದಾಗ
, ಆತನ ಕರ್ಮಗಳು ಕರಗಿ ಹೋಗುತ್ತವೆ.
ಇಂತಹ ಜೀವಾತ್ಮನನ್ನು ನೊಣದಷ್ಟು ಸಣ್ಣಗಿನ ಜ್ಞಾನ ತಿಂದು ಹಾಕುತ್ತದೆ.

ಮೂರನೆಯ ನುಡಿಯಲ್ಲಿ ಶರೀಫರು ಸಂಸಾರ ಹಾಗೂ ಕರ್ಮಗಳನ್ನು ಬೇರೊಂದು ರೀತಿಯಲ್ಲಿ ವರ್ಣಿಸುತ್ತಾರೆ:

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ

ಮಗ್ಗವೆಂದರೆ ಸಂಸಾರ. ಮಗ್ಗವನ್ನು ಕಟ್ಟಿರುವ ಹಗ್ಗವೆಂದರೆ ಸಂಸಾರಕ್ಕೆ ಜೋತು ಬೀಳುವ ಮನಸ್ಸು.
ಮಗ್ಗದಲ್ಲಿ ಒಮ್ಮೆ ಅತ್ತ(=ಒಳ್ಳೆಯದರತ್ತ) ಒಮ್ಮೆ ಇತ್ತ(=ಕೆಡುಕಿನತ್ತ) ಸರಿಯುವ ಲಾಳಿ ಎಂದರೆ ಜೀವಾತ್ಮನೆಸಗುವ ಕರ್ಮಗಳು.
ಜ್ಞಾನವನ್ನು ಬಯಸುವ ಸಾಧಕನು ಈ ಸಂಸಾರದಲ್ಲಿ ಸಿಲುಕಲಾರ.
ಆತನ ಮನಸ್ಸು ಈ ಸಂಸಾರವನ್ನು ತಿಂದು ಹಾಕುತ್ತದೆ ಅಂದರೆ ನಾಶ ಮಾಡುತ್ತದೆ ಎಂದು ಶರೀಫರು ಹೇಳುತ್ತಾರೆ.
ಇದಾದ ಮೇಲೆ ಸಂಸಾರವೆನ್ನುವ ಮಗ್ಗದಲ್ಲಿ ನೇಯಲು ಕುಳಿತ ಅಣ್ಣನನ್ನು ಅಂದರೆ ಜೀವಾತ್ಮನನ್ನು ಮಗ್ಗದ ಕೆಳಗಿರುವ ಕುಣಿ (=
space excavated below the loom for footwork) ನುಂಗಿ ಹಾಕುತ್ತದೆ.
ಅಂದರೆ ಆತನಿಗೆ ಜ್ಞಾನೋದಯವಾಗುತ್ತದೆ !

ನಾಲ್ಕನೆಯ ನುಡಿಯಲ್ಲಿಯೂ ಸಹ ಇದೇ ವಿಷಯವನ್ನು ಶರೀಫರು ಬೇರೆ ರೂಪಕಗಳ ಮೂಲಕ ವಿವರಿಸುತ್ತಾರೆ:

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ

ಹೊಲವನ್ನು ಊಳಲು ಎತ್ತಿನ ಕೊರಳಿಗೆ ಜತ್ತಗಿ (=ನೊಗಕ್ಕೆ ಹಾಗು ಎತ್ತಿನ ಕೊರಳಿಗೆ ಕಟ್ಟುವ ಪಟ್ಟಿ) ಕಟ್ಟಿರುತ್ತಾರೆ.
ಸಂಸಾರವೆಂಬ ಹೊಲವನ್ನು ಊಳಲು ಬಂದ ಎತ್ತು ಇದು.
ಇದು ತನ್ನನ್ನು ನೊಗಕ್ಕೆ ಅಂದರೆ ಕರ್ಮಗಳಿಗೆ ಬಂಧಿಸಿದ ಜತ್ತಗಿ ಅಂದರೆ ಕರ್ಮಪಾಶವನ್ನೆ ತಿಂದು ಹಾಕಿದೆ. (ಸಾಧನೆಯ ಸಹಾಯದಿಂದ).

ಬಾನ ಅಂದರೆ ದೇವರೆದುರಿಗೆ ಇಟ್ಟ ಎಡಿ
, ನೈವೇದ್ಯ.
ಹೊಲದಲ್ಲಿ ದೇವರ ಎದುರಿಗೆ ಇಡಲಾದ ಈ ನೈವೇದ್ಯದ ಅನ್ನವನ್ನು ಬತ್ತವೇ ತಿಂದು ಹಾಕಿದೆ.
ಅರ್ಥಾತ್ ಈ ಸಾಧಕನ ಕರ್ಮಪಾಕಗಳು ಶಿಥಿಲವಾಗುತ್ತಿವೆ.
ಈ ಸಾಧಕನು ಮುಕ್ಕಟೆಯಾಗಿ (ಬೇಗ ಬೇಗನೇ)
, ಹೊಲವನ್ನು ಊಳುತ್ತಿದ್ದಾನೆ. ಅವನನ್ನು ಮೇಳಿ (=?) ನುಂಗಿ ಹಾಕಿದೆ. ಮೇಳಿ ಅಂದರೆ ಒಕ್ಕಲುತನದ ಸಾಧನವಿರಬಹುದು.

ಐದನೆಯ ನುಡಿಯಲ್ಲಿ ಶರೀಫರು ಸಾಧಕನು ಆಧ್ಯಾತ್ಮದ ಕೊನೆ ಮುಟ್ಟಿದ್ದನ್ನು ವಿವರಿಸಿದ್ದಾರೆ:

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ

ಬಹುಶ: ಗುಡ್ಡ ಎಂದರೆ ಅನಾದಿ-ಅನಂತನಾದ ಚಿತ್ ಸ್ವರೂಪನಾದ ಪರಮಾತ್ಮ.
ಈ ಪರಮಾತ್ಮನು ಗುಡ್ಡದಲ್ಲಿಯೆ ಇರುವ ಗಂವ್ಹರವನ್ನು (=ಗವಿಯನ್ನು) ಅಂದರೆ ಅನಾದಿ-ಅನಂತವಾದ ಸಂಸಾರವನ್ನು ನುಂಗಿದ್ದಾನೆ.
ಈ ಸಂಸಾರವು ತನ್ನಲ್ಲಿರುವ ಇರಿವೆಯನ್ನು ಅಂದರೆ ಕಾಲ ದೇಶದಿಂದ ಬಂಧಿತನಾದ ಅಸ್ತಿತ್ವವನ್ನು ಅಂದರೆ ಜೀವಾತ್ಮನನ್ನು ನುಂಗಿ ಹಾಕಿದೆ.
ಇದರರ್ಥವೆಂದರೆ ಪರಮಾತ್ಮನಲ್ಲಿ ಜೀವಾತ್ಮ ಲೀನವಾಗಿದೆ.
ಇದೇ ಮಾತನ್ನು ಶರೀಫರು ಹೀಗೂ ಹೇಳಿದ್ದಾರೆ:
‘ಗುರುಗೋವಿಂದನ ಪಾದ ಆತ್ಮ ನುಂಗಿತ
’.

ಶರೀಫರ ಈ ಒಡಪಿನ ಗೀತೆಯಲ್ಲಿರುವ ಒಂದು ರಚನಾವೈಶಿಷ್ಟ್ಯವನ್ನು ಗಮನಿಸಬೇಕು.
ಪ್ರತಿಯೊಂದು ನುಡಿಯಲ್ಲಿ ಮೊದಲ ಎರಡು ಸಾಲುಗಳು ನಿರ್ಜೀವ ಉಪಕರಣಗಳನ್ನು ಬಣ್ಣಿಸುತ್ತವೆ.
ಉದಾ: ಒಳ್ಳು
, ಒನಕೆ, ಬಿಸುವ ಕಲ್ಲು. ಗೋಡೆ, ಹಗ್ಗ, ಮಗ್ಗ ಇತ್ಯಾದಿ.
ಪ್ರತಿ ನುಡಿಯ ಕೊನೆಯ ಸಾಲಿನಲ್ಲಿ ಜೀವಾತ್ಮನ ವರ್ಣನೆ ಇದೆ
;
ಉದಾ: ಪಾತರದವಳು
, ಮುದಕಿ, ಅಣ್ಣ ಹಾಗು ಆತ್ಮ .

ಈ ರೀತಿಯಾಗಿ
, ಸಂಸಾರದಲ್ಲಿಳಿದ ಸಾಧಕನ ಜ್ಞಾನೋದಯವಾಗುತ್ತಿರುವ ಘಟ್ಟದಿಂದ ಪ್ರಾರಂಭಿಸಿ, ಆತ ಪರಮಾತ್ಮನಲ್ಲಿ ಲೀನವಾಗುವ ಘಟ್ಟದವರೆಗಿನ ವರ್ಣನೆ ಇಲ್ಲಿದೆ.
ಆದರೆ
, ಕವನದಲ್ಲಿ ಸಾಧಕನ ಹಂತಹಂತದ ಬೆಳವಣಿಗೆಯನ್ನು ತೋರಿಸಿಲ್ಲ.
ವಿಭಿನ್ನ ರೂಪಕಗಳನ್ನು ಉಪಯೋಗಿಸುತ್ತ
, ಅದೇ ಸಾರವನ್ನು ಶರೀಫರು ಮತ್ತೆ ಮತ್ತೆ ಹೇಳಿದ್ದಾರೆ.
ಇದರಲ್ಲಿ ತಪ್ಪೇನೂ ಇಲ್ಲ.
ಏಕೆಂದರೆ ಇದು ಕೋಣೆಯಲ್ಲಿ ಕುಳಿತು ರಚಿಸಿದ ಕವನವಲ್ಲ .
ತಮ್ಮ ಎದುರಿಗೆ ನೆರೆದು ನಿಂತಿರುವ ಸಾಮಾನ್ಯ ಹಳ್ಳಿಗರನ್ನು ಉದ್ದೇಶಿಸಿ
, ಸ್ಫೂರ್ತಿ ಉಕ್ಕಿದಾಗ ಹಾಡಿದ ಹಾಡಿದು.
ಹಾಡು ಕೇಳುತ್ತಿರುವ ಸಾಮಾನ್ಯ ಹಳ್ಳಿಗನಿಗಾಗಿ ಅವನ ಹೃದಯಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಹಾಡಿದ ಹಾಡಿದು.
 

೧೫. ಗಿರಣಿ ವಿಸ್ತಾರ ನೋಡಮ್ಮ.

ಶರೀಫರದು ವಿಮರ್ಶಾತ್ಮಕವಾದ ಹರಿತ ದೃಷ್ಟಿ.
ತಾವು ಹೋದಲ್ಲೆಲ್ಲ ತಮ್ಮ ಕಣ್ಣಿಗೆ ಬಿದ್ದ ವಸ್ತುಗಳ ಮೇಲೆ ಅವರದೊಂದು ವಿಮರ್ಶಾತ್ಮಕ ಗೀತೆ ಹೊರಬರುತ್ತಿತ್ತು.

ಹುಬ್ಬಳ್ಳಿಯಲ್ಲಿ ಆಗ ತಾನೇ ಹತ್ತಿಯನ್ನು ಹಿಂಜುವ ಗಿರಣಿ (
ginning mill) ಪ್ರಾರಂಭವಾಗಿತ್ತು.
ಆ ಕಾಲದಲ್ಲಿ ಇಂತಹ ಯಾಂತ್ರಿಕ ಗಿರಣಿ ನಮ್ಮವರಿಗೆ ಸೋಜಿಗದ ವಸ್ತುವಾಗಿತ್ತು.
ಶರೀಫರೂ ಸಹ ಈ ಗಿರಣಿಯನ್ನು ಕಂಡು
, ಬೆರಗಾಗಿ ಅದನ್ನು ತಮ್ಮ ಸಖಿಗೆ ವರ್ಣಿಸುತ್ತಿದ್ದಾರೆ.
ಅವರ ಕವನದ ಪೂರ್ತಿಪಾಠ ಹೀಗಿದೆ:
…………………………………………………………..
ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ
||ಪಲ್ಲ||

ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ
||ಅ.ಪ.||

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ
, ಹೊಗಿಯ ಬಿಂಬವೋ ||||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು
||||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ
||||

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ
||||
............................................
ಶರೀಫರ ಹಾಡುಗಳ ಪದ್ಧತಿಯನ್ನು ಗಮನಿಸಿರಿ.
ಅವರ ಅನೇಕ ಹಾಡುಗಳು ಪ್ರಾರಂಭವಾಗುವದು ಒಬ್ಬ ಹೆಣ್ಣುಮಗಳು ತನ್ನ ಗೆಳತಿಗೆ ವಿಷಯವೊಂದನ್ನು ಬಣ್ಣಿಸುವ ರೀತಿಯಲ್ಲಿ.

ಶರೀಫರು ಶಿಶುನಾಳಧೀಶನಲ್ಲಿ ಪತ್ನೀಭಾವವನ್ನು ಇಟ್ಟುಕೊಂಡವರು.
ಆದುದರಿಂದ ಜೀವಾತ್ಮರೆಲ್ಲರೂ ಶಿಶುನಾಳಧೀಶನ ಪತ್ನಿಯರೇ.
ಹೀಗಾಗಿ ಅವರು ತಮ್ಮ ಆಪ್ತ ಗೆಳೆಯರನ್ನು ಸಖೀಭಾವದಲ್ಲಿ ನೋಡುವದು ಸಹಜವೇ ಆಗಿದೆ.

ಅದಲ್ಲದೆ
, ಗೆಳತಿಯರ ನಡುವೆ ನಡೆಯುವ ಆಪ್ತಸಲ್ಲಾಪದಲ್ಲಿ ಯಾವುದೇ ಭಿಡೆ, ಸಂಕೋಚ, ದೊಡ್ಡಿಸ್ತನ ಇರುವದಿಲ್ಲ.
ಇದು ಒಂದು
absolutely free inter-action.
ಇದೇ ಮಾತನ್ನು ಗೆಳೆಯರ ಬಗೆಗೆ ಹೇಳಲು ಆಗುವದಿಲ್ಲ.

ಆದುದರಿಂದ ಈ ಹಾಡಿನ ಮೊದಲಲ್ಲಿ ಶರೀಫರು ತಮ್ಮ ಗೆಳತಿಗೆ ‘ಶರಣಿ’ ಎಂದು ಕರೆಯುತ್ತಾರೆ.
ಅಂದರೆ ಈ ವ್ಯಕ್ತಿಯೂ ಸಹ ದೇವಭಕ್ತಳೇ ಆಗಿರಬೇಕಾಯಿತು.
ಈ ಆಪ್ತನನ್ನು ಶರೀಫರು ತಮ್ಮ ಬದಿಯಲ್ಲಿ ಕರೆದು ಕೂಡಿಸಿಕೊಂಡು
, ಹುಬ್ಬಳ್ಳಿಯಲ್ಲಿ ಹೊಸದಾಗಿ ಪ್ರಾರಂಭವಾದ ಗಿರಣಿಯ ಬಗೆಗೆ ಕೌತುಕದಿಂದ ವರ್ಣಿಸಲು ಪ್ರಾರಂಭಿಸುತ್ತಾರೆ:

“ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ”

ಬ್ರಿಟಿಶರ ಆಳಿಕೆ ಭಾರತದಲ್ಲಿ ಪ್ರಾರಂಭವಾದದ್ದರಿಂದಲೇ ಯಾಂತ್ರಿಕ ಗಿರಣಿಗಳು ಇಲ್ಲಿ ಸ್ಥಾಪನೆಯಾದವು. ಈ ಹಿನ್ನೆಲೆಯನ್ನು ಶರೀಫರು ತಮ್ಮ ಹಾಡಿನ ಪ್ರಾರಂಭದಲ್ಲಿ ಹೇಳುತ್ತಾರೆ:

“ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ”

೧೮೫೭ರಲ್ಲಿ ನಡೆದ ಹೋರಾಟದ ಬಳಿಕ ವ್ಹಿಕ್ಟೋರಿಯಾ ರಾಣಿಯು ಭಾರತದ ಚಕ್ರವರ್ತಿನಿಯೆಂದು ಘೋಷಿಸಿಕೊಂಡಳು.
ಆ ಸಮಯದಲ್ಲಿ ಮರಾಠಾ ಸಾಮ್ರಾಜ್ಯವೆಲ್ಲ ಬ್ರಿಟಿಶರ ಆಡಳಿತಕ್ಕೊಳಪಟ್ಟು ಮುಂಬಯಿ ಪ್ರಾಂತವೆಂದು ಕರೆಯಲ್ಪಡುತ್ತಿತ್ತು.
೧೮೧೭ರಲ್ಲಿ (ಹಳೆ)ಹುಬ್ಬಳ್ಳಿಯನ್ನು ಸಾಂಗ್ಲಿ ಸಂಸ್ಥಾನಿಕರು ಬ್ರಿಟಿಶರಿಗೆ ಮಾರಿದರು.
೧೮೩೦ನೆಯ ಇಸವಿಯಲ್ಲಿ ಮುಂಬಯಿ ಪ್ರಾಂತದ ಭಾಗವಾಗಿ ಧಾರವಾಡ ಜಿಲ್ಲೆ ನಿರ್ಮಾಣವಾಯಿತು.
೧೮೮೮ರಲ್ಲಿ ಧಾರವಾಡದಲ್ಲಿ ರೇಲವೆ ಪ್ರಾರಂಭವಾಯಿತು.
ಆಬಳಿಕ ಅಮೆರಿಕದಿಂದ ಆಮದಾದ ಹತ್ತಿಯ ಬೀಜಗಳಿಂದ ಈ ಭಾಗದಲ್ಲಿ ಹೊಸ ತರದ ಹತ್ತಿಯನ್ನು ಬೆಳೆಯುವದು ಪ್ರಾರಂಭವಾಯಿತು.
ಹತ್ತಿಯನ್ನು ಹಿಂಜುವ ಕಾರಖಾನೆಗಳು ಪ್ರಾರಂಭವಾದವು.
ಸಾರ್ವಜನಿಕ ಶಾಲೆಗಳು ಪ್ರಾರಂಭವಾಗಿ ಸಾರ್ವತ್ರಿಕ ಶಿಕ್ಷಣ ಸುರುವಾಯಿತು.
ಇದರಿಂದ ಎಲ್ಲೆಡೆಯೂ ಹೊಸ ಗಾಳಿ ಬೀಸಲಾರಂಭಿಸಿತು.
ಬ್ರಿಟಿಶರು ತಮ್ಮ ಆರ್ಥಿಕ ಸ್ವಾರ್ಥಕ್ಕಾಗಿಯೇ ಭಾರತದಲ್ಲಿ ಆಧುನಿಕತೆಯನ್ನು ತಂದಿರಬಹುದು.
ಆದರೆ ಜನಸಾಮಾನ್ಯರಿಗೆ ಮಾತ್ರ ಇದು ಹೊಸ ಯುಗದ ಪ್ರಾರಂಭವೆನ್ನುವಂತೆ ತೋರುತ್ತಿತ್ತು.

ಆದುದರಿಂದ ಶರೀಫರು ಧರಣಿಪತಿಯಾದ
, ಭೂಮಂಡಲದ ರಾಣಿಯಾದ, ಕರುಣಾಪೂರ್ಣಳಾದ ವ್ಹಿಕ್ಟೋರಿಯಾ ರಾಣಿ ತನ್ನ ಆಧೀನದಲ್ಲಿರುವ ಈ ರಾಜ್ಯಕ್ಕೆ ತರಿಸಿದ ಘನಚೋದ್ಯವಿದು ಎಂದು ಈ ಗಿರಣಿಯನ್ನು ಬಣ್ಣಿಸುತ್ತಾರೆ.
ಇಂತಹ ಒಂದು ಆಧುನಿಕ ಯಾಂತ್ರಿಕ ಸಾಧನವನ್ನು ಇಲ್ಲಿಯ ಸಾಮಾನ್ಯ ಜನತೆ ಈಮೊದಲು ನೋಡಿರಲಿಲ್ಲ. ಅವರಿಗೆ ಇದೊಂದು ಸೋಜಿಗದ ವಸ್ತು.
ಆದುದರಿಂದ ಶರೀಫರು ಇದನ್ನು ಘನಚೋದ್ಯವೆಂದು ಕರೆದಿದ್ದಾರೆ.

ಚೀನಾದಿಂದ ಸಹ ಆ ಕಾಲಕ್ಕೆ ಸಕ್ಕರೆ
, ರೇಶಿಮೆ ಮೊದಲಾದ ವಸ್ತುಗಳು ಇಲ್ಲಿ ಆಮದಾಗುತ್ತಿದ್ದವು.
ಚೀನಾದ ಔದ್ಯೋಗಿಕ ಜಾಣ್ಮೆಯ ಬಗೆಗೆ ಭಾರತೀಯರಿಗೆ ಗೌರವವಿತ್ತು.
ಆದುದರಿಂದ ಈ ಗಿರಣಿಯನ್ನು ಚೀನಾದ ವಿದ್ಯೆಯಿರಬಹುದೆ ಎನ್ನುವ ಅನುಮಾನವನ್ನು ಶರೀಫರು ವ್ಯಕ್ತಪಡಿಸುತ್ತಾರೆ.

ಈ ಆಧುನಿಕ ಯಂತ್ರಸಾಧನೆಯು ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ವಿಸ್ಮಯವನ್ನು ಶರೀಫರು ಈಗ ತಮ್ಮ ಸಖಿಗೆ ಬಿಚ್ಚಿ ಹೇಳುತ್ತಾರೆ:

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ
, ಹೊಗಿಯ ಬಿಂಬವೋ ||

ಕಲ್ಲಿದ್ದಲನ್ನು ಕಾಯಿಸಿ
, ಬಾಯ್ಲರುಗಳ ಮುಖಾಂತರ ನೀರನ್ನು ಉಗಿಯನ್ನಾಗಿ ಪರಿವರ್ತಿಸಿ, ಚಕ್ರಗಳನ್ನು ತಿರುಗಿಸುವ ಈ ಯಂತ್ರವನ್ನು ಶರೀಫರು ಅರ್ಥ ಮಾಡಿಕೊಂಡಿರಬಹುದು.
ಆದುದರಿಂದಲೇ ಅವರು ಜಲ
, ಅಗ್ನಿ, ವಾಯು ಒಂದಾಗಿ ಎಂದು ಬಣ್ಣಿಸುತ್ತಾರೆ.
ಗಿರಣಿಯ ಚಿಮಣಿಗಳಿಂದ ಹೊರಡುವ ಹೊಗೆಯ ಕಂಬವೂ ಸಹ ಅವರ ದೃಷ್ಟಿಗೆ ಚಲುವಾಗಿಯೇ ಕಂಡು ಬೆರಗನ್ನು ಉಂಟು ಮಾಡುತ್ತದೆ.

ಇದೇನೊ ಗಿರಣಿಯನ್ನು ಚಾಲಿಸುವ ಚೈತನ್ಯವಾಯಿತು.
ಗಿರಣಿಯ ಒಳಗಿರುವ ಚಮತ್ಕಾರ ಏನು ಎನ್ನುವದನ್ನು ಶರೀಫರು ಈಗ ತಮ್ಮ ಸಖಿಗೆ ಈ ರೀತಿಯಾಗಿ ಹೇಳುತ್ತಾರೆ:

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು
||

ಒಳಗಿನ ಚಕ್ರಕ್ಕೆ ಒಂಬತ್ತು ಹಲ್ಲುಗಳಿದ್ದು
, ಅದರಲ್ಲಿ ನೂಲಿಗೆ ಆಧಾರವಾಗಿ (=ಸೂತ್ರಾಧಾರ) ಲಾಳಿ ಇದೆ. ಈ ಲಾಳಿಯಲ್ಲಿ ಮೂರು ಕೊಳವಿಗಳು ಇದ್ದು ಅವು ನೂಲಿನ ಎಳೆಯನ್ನು ತುಂಬುತ್ತಾ ಇವೆ.
ಶರೀಫರು ಹೇಳುವಂತೆ ಆ ಗಿರಣಿಯಲ್ಲಿ ಒಂಬತ್ತು ಹಲ್ಲುಗಳ ಚಕ್ರ ಹಾಗೂ ಮೂರು ಕೊಳವಿಗಳ ಲಾಳಿ ಇದ್ದವೊ ಇಲ್ಲವೊ ಎನ್ನುವದು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ.
ಆದರೆ
, ಗಿರಣಿಯ ಪ್ರತೀಕದಲ್ಲಿ ಈ ವರ್ಣನೆಯನ್ನು ಶರೀಫರು ಜೀವಾತ್ಮನಿಗೆ ಹೋಲಿಸಿ ಹೇಳಿರುವದು ಮೇಲ್ನೋಟಕ್ಕೇ ತಿಳಿದು ಬಿಡುತ್ತದೆ.

ಜಲ
, ಅಗ್ನಿ ಹಾಗೂ ವಾಯುಗಳು ಒಂದಾಗಿ ನೆಲದಿಂದ (=ಪೃಥ್ವಿ) ಗಗನಕ್ಕೆ ಮುಟ್ಟುತ್ತವೆ ಎಂದರೆ ಪಂಚಮಹಾಭೂತಗಳು (=ಪೃಥ್ವಿ,ಅಪ್,ತೇಜ,ಆಕಾಶ,ವಾಯು) ಒಂದಾಗಿ ಜೀವಿಗೆ ರೂಪ ಕೊಟ್ಟಿವೆ ಎನ್ನುವದು ಶರೀಫರ ಒಡಪಿನ ಮಾತು.
ಈ ಶರೀರದಲ್ಲಿ ಒಂಬತ್ತು ರಂಧ್ರಗಳು ಇರುವದಾಗಿ ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಶರೀಫರು ಅದನ್ನೇ ಒಂಬತ್ತು ದಳಗಳ ಚಕ್ರ ಅಂದರೆ ಯಂತ್ರಸಾಧನೆ ಎಂದು ಕರೆದಿರಬಹುದು.
ಈ ಯಂತ್ರದಲ್ಲಿ ಮೂರು ಕೊಳವಿಯ ಲಾಳಿಯು ಸೂತ್ರಾಧಾರವಾಗಿ ಅಥವಾ ಸೂತ್ರಧಾರನಾಗಿ ಎಳೆಯನ್ನು ತುಂಬುತ್ತಿದೆ.
ಎಳೆ ಅಂದರೆ ಶ್ವಾಸೋಛ್ವಾಸ.
ಎಳೆಯನ್ನು ತುಂಬುತ್ತದೆ ಅಂದರೆ ಜೀವನದ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತ ನಡೆಯಿಸುತ್ತಿದೆ.
ತುಂಬಾ ಮಹತ್ವದ ಲಾಳಿಯಾಯಿತು ಇದು!
ಇದರ ಮೂರು ಕೊಳಿವೆಗಳು ಯಾವವು
?
ಇಡಾ
, ಪಿಂಗಲಾ ಹಾಗೂ ಸುಷುಮ್ನಾ ಎನ್ನುವ ಮೂರು ನಾಡಿಗಳೇ ಈ ಮೂರು ಕೊಳಿವೆಗಳು.
ಈ ಮೂರು ನಾಡಿಗಳಲ್ಲಿ ಶ್ವಾಸವನ್ನು ನಿಯಂತ್ರಿಸುವದರ ಮೂಲಕ ಯೋಗಿಯು ಪ್ರಾಣಾಯಾಮದ ಸಿದ್ಧಿಯನ್ನು ಪಡೆಯುತ್ತಾನೆ.

ಆ ನಾಡಿಗಳಲ್ಲಿ ಸಂಚರಿಸಿದ ಶ್ವಾಸವು ಹಿಂಜಿ ಅಂದರೆ ಶುದ್ಧವಾಗಿ ಹಂಜಿಯಾಗುತ್ತದೆ.
ಹಂಜಿ ಅಂದರೆ ಹಿಂಜಲ್ಪಟ್ಟಂತಹ ಅರಳೆ.

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ
||

ಹಿಂಜಿದ ಅರಳಿಯನ್ನು ದಾರದ ಎಳೆ ಮಾಡಲು ಎರಡು ಗಾಲಿಗಳು ಬೇಕಾಗುತ್ತವೆ.
ಮೂಲಬ್ರಹ್ಮ ಅಂದರೆ ಯಾವುದೇ ಗುಣಸ್ವಭಾವ ಇಲ್ಲದ ನಿರ್ಗುಣ ಬ್ರಹ್ಮ.
ನಿರ್ಗುಣ ಬ್ರಹ್ಮ ಅಂದರೆ ಶುದ್ಧವಾದ
, ಹಿಂಜಿದ ಅರಳಿ.
ಇಡಾ ಹಾಗೂ ಪಿಂಗಳಾ ಎನ್ನುವ ಎರಡು ಗಾಲಿಗಳಲ್ಲಿ(= ನಾಡಿಗಳಲ್ಲಿ) ಸಂಚರಿಸಿ ಶುದ್ಧವಾದ ಶ್ವಾಸವು
ಹಿಂಜಿದ ಅರಳಿಯಂತೆ ಅಥವಾ ನಿರ್ಗುಣ ಬ್ರಹ್ಮನಂತೆ ಇರುತ್ತದೆ.
ಇದು ಸುಷುಮ್ನಾ ನಾಡಿಯಲ್ಲಿ ಸಂಚರಿಸಿದಾಗ ದಾರದ ಕುಕ್ಕಡಿ ತಯಾರಾಗುತ್ತದೆ.
ಕುಕ್ಕಡಿ ಅಂದರೆ ನೂಲಿನ ಅಳತೆ.
ಇದು ತಕಲಿ
, ಚರಕಾ ಅಥವಾ ಯಂತ್ರದ ಕೊನೆಯಲ್ಲಿ ತಯಾರಾಗುವ ನೂಲಿನ ಗಂಟು.

ಇಲ್ಲಿಯವರೆಗೆ ನೂಲು ತಯಾರಾದಂತಾಯ್ತು.
ಇದರಿಂದ ತಯಾರಾದ ಅರಿವೆ ಎಂತಹದೆಂತೀರಿ
?

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ
||

ಪಟ್ಟೆ ಅಂದರೆ ರೇಶಿಮೆ ಸೀರೆ.
ಇದು ಪರಮಾನ ಎನ್ನುವ ಪಟ್ಟೆ.
ಪರಮ ಅಂದರೆ ಶ್ರೇಷ್ಠ ಅಥವಾ ದಿವ್ಯ ಎನ್ನುವ ಅರ್ಥದಲ್ಲಿ ಶರೀಫರು ಹೇಳುತ್ತಿದ್ದಾರೆಯೆ
?
ಅಲ್ಲದೆ ಫರ್ಮಾನ್ ಎನ್ನುವ ಉರ್ದು ಪದಕ್ಕೆ ರಾಜಾಜ್ಞೆ ಎನ್ನುವ ಅರ್ಥವಿದೆ.
ಈ ದಿವ್ಯವಾದ ರೇಶಿಮೆ ಸೀರೆಯ ಮೇಲೆ ಪರಮಾತ್ಮನ ರಾಜಾಜ್ಞೆಯನ್ನು ನೇಯಿಸಿ ಮಾರಾಟಕ್ಕೆ ಇಡಲಾಗಿದೆ ಎನ್ನುವ ಅರ್ಥ ಇಲ್ಲಿ ಇರಬಹುದು.
ಇಂತಹ ದಿವ್ಯವಾದ ಪಟ್ಟೆಯನ್ನು ಆಸ್ಥೆಯುಳ್ಳವರು ಯಾರಾದರೂ ಅಂದರೆ ಭಕ್ತರು ಕೊಳ್ಳಬಹುದು.

ವಿಶ್ವಕ್ಕೆ ನೇಯ್ಗೆಯನ್ನು ಕಲಿಸಿದವನು ದೇವಾಂಗ ಋಷಿ.
ಆ ದೇವಾಂಗ ಋಷಿಯಿಂದ(=ಪರಮಾತ್ಮನಿಂದ) ಈ ಹಚ್ಚಡ(= ಹೊದಿಕೆ) ನೇಯಲ್ಪಟ್ಟಿತು.
ಆದುದರಿಂದ ಇಡೀ ಲೋಕವೆ ಈ ಹಚ್ಚಡವನ್ನು ಮೆಚ್ಚಿಕೊಂಡಿದೆ.
ಪರಮಾತ್ಮನ ಆಣತಿಗಳನ್ನು ಪಾಲಿಸುವ ಭಕ್ತಜನರು ಅವನ ಕೃಪೆಯೆನ್ನುವ ಈ ಹಚ್ಚಡವನ್ನು ಹೊಚ್ಚಿಕೊಂಡು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬಹುದು ಎನ್ನುವುದು ಶರೀಫರ ಇಂಗಿತ.

ಈ ರೀತಿಯಾಗಿ ಗಿರಣಿಯ ಭೌತಿಕ ವರ್ಣನೆಯಿಂದ ಪ್ರಾರಂಭವಾದ ಈ ರಚನೆ
, ಗಿರಣಿಯನ್ನು ಮಾನವನಿಗೆ ಹೋಲಿಸಿ, ಅವನ ಒಳಿತನ್ನು ಅವನಿಗೆ ನೆನಪಿಸುವದರೊಂದಿಗೆ ಮುಕ್ತಾಯವಾಗುತ್ತದೆ.

[ಟಿಪ್ಪಣಿ:
ಇಲ್ಲಿ ಶರೀಫರು ವ್ಹಿಕ್ಟೋರಿಯಾ ರಾಣಿಯನ್ನು ಕರುಣಾಮಯಿಯಾದ ಭೂಮಂಡಲ-ಚಕ್ರವರ್ತಿನಿ ಎಂದು ಕರೆದಿರುವದು ಒಂದು ಅನುಮಾನಕ್ಕೆ ಕಾರಣವಾಗಿದೆ.
ಶರೀಫರು ವಸಾಹತುವಾದಿ ಬ್ರಿಟಿಶ್ ಆಳಿಕೆಯ ಪರವಾಗಿದ್ದರೆ ಎನ್ನುವದೆ ಆ ಅನುಮಾನ.
ಈ ಅನುಮಾನದ ವಿಶ್ಲೇಷಣೆ ಮಾಡಲು ಭಾರತದ ಮೇಲಾದ ಪರಕೀಯ ಆಕ್ರಮಣಗಳನ್ನು ಗಮನಿಸಬೇಕು.
ಪರ್ಶಿಯನ್ನರು
, ತುರುಕರು, ಮಂಗೋಲರು, ಮುಗಲರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು.
ಈ ಆಕ್ರಮಣದ ಬಗೆಗೆ ಭಾರತೀಯರಲ್ಲೆ ಎರಡು ಭಿನ್ನ ಅಭಿಪ್ರಾಯಗಳಿದ್ದವು.
“ಜಾಣ ಹಾಗು
practical” ಅಭಿಪ್ರಾಯವೆಂದರೆ, ಪರಕೀಯರ ಜೊತೆಗೆ ಸಂಧಾನ ಮಾಡಿಕೊಂಡು, ರಾಜ್ಯದ ಅಮಾಯಕ ಜನತೆಯನ್ನು ಸಂಕಟಕ್ಕೆ ಒಳಪಡಿಸದಿರುವದು.
ಅಕಬರನ ಜೊತೆಗೆ ರಾಜಿಯಾದ ರಾಜಾ ಮಾನಸಿಂಗನು ಈ ಧೋರಣೆಯ ಅಧ್ವರ್ಯು.
ಪರಕೀಯರ ಪ್ರಭುತ್ವವನ್ನು ಒಪ್ಪಿಕೊಂಡು ಆತ್ಮಗೌರವ ಕಳೆದುಕೊಳ್ಳುವದಕ್ಕಿಂತ
, ಹೋರಾಡಿ ಸಾಯುವದು ಮೇಲು ಎನ್ನುವ ಧೋರಣೆಯನ್ನು ವ್ಯಕ್ತಪಡಿಸಿದ ಏಕಾಕಿ ರಾಜನೆಂದರೆ ರಾಣಾ ಪ್ರತಾಪಸಿಂಹ.
ಅಕಬರನ ನಂತರದ ತುರುಕರ ಅತ್ಯಾಚಾರ ಅತಿಯಾದಾಗ
, ಶಿವಾಜಿ ಇಲ್ಲಿಯ ನಾಡ ಮಕ್ಕಳಿಗಾಗಿ ಹೋರಾಡಿ, ಮರಾಠಾ ರಾಜ್ಯ ಸ್ಥಾಪನೆ ಮಾಡಿದ.
ಅದಕ್ಕೂ ಮೊದಲೇ ವಿಜಯನಗರ ರಾಜ್ಯ ಸ್ಥಾಪನೆಯಾಗಿತ್ತು.

ಅದಾಗ್ಯೂ ಸಹ ಭಾರತದ ಬಹುಭಾಗದಲ್ಲಿ ವಿದೇಶೀಯರ ಆಡಳಿತವೇ ಜಾರಿಯಲ್ಲಿತ್ತು.
ಭಾರತೀಯನಾಗಿ ಪರಿವರ್ತಿತನಾಗಿದ್ದನು ಎಂದು ಹೊಗಳಲ್ಪಟ್ಟ ಅಕಬರನ ಆಸ್ಥಾನದ ಒಂಬತ್ತು ಮುಖ್ಯರಲ್ಲಿ ಏಳು ಜನ ವಿದೇಶೀಯರೇ(=ಪರ್ಶಿಯನ್ನರು) ಇದ್ದರು ಎನ್ನುವದನ್ನು ಗಮನಿಸಿದರೆ
, ಭಾರತದ ಆಡಳಿತವು ಪರಕೀಯರಿಂದ ನಿಯಂತ್ರಿತವಾಗುತ್ತಿತ್ತು ಹಾಗೂ ಭಾರತವು ಪರಕೀಯರ ಆಳಿಕೆಯನ್ನು ಒಪ್ಪಿಕೊಂಡಿತ್ತು ಎನ್ನುವದು ಸ್ಪಷ್ಟವಾಗುತ್ತದೆ.

ಅದರಂತೆಯೇ ಬ್ರಿಟಿಶ್ ಆಳಿಕೆಯನ್ನು ಸಹ ಭಾರತೀಯರು ಒಪ್ಪಿಕೊಂಡರು.
ತುರುಕರ ಆಳಿಕೆಗಿಂತ ಬ್ರಿಟಿಶರ ಆಳಿಕೆಯಲ್ಲಿ ಭಾರತದಲ್ಲಿ ಅನೇಕ ಮೂಲಭೂತ ಬದಲಾವಣೆಗಳು ಬಂದವು.
ಜನಸಾಮಾನ್ಯರು ಬಹುಶಃ ಇದನ್ನು ಸಂತೋಷದಿಂದ ಸ್ವಾಗತಿಸಿರಬಹುದು.
ಅಷ್ಟೇ ಏಕೆ
, ಗೋಪಾಲಕೃಷ್ಣ ಗೋಖಲೆ, ಮೋತಿಲಾಲ ನೆಹರೂ ಮಹಾತ್ಮಾ ಗಾಂಧಿಯವರಂತಹವರೂ ಕೂಡ ಮೊದಲಲ್ಲಿ ಬ್ರಿಟಿಶ್ ಆಳಿಕೆಯನ್ನು ವಿರೋಧಿಸಿರಲಿಲ್ಲ ಎನ್ನುವದನ್ನು ಗಮನಿಸಬೇಕು.
ಬ್ರಿಟಿಶರು ಯಾವ ರೀತಿಯಲ್ಲಿ ಭಾರತದ ಆರ್ಥಿಕ ಶೋಷಣೆಯನ್ನು ಮಾಡಿದರು ಎನ್ನುವದು ಜನಸಾಮಾನ್ಯರಿಗೆ ಹೊಗಲಿ
, ಪಂಡಿತರಿಗೇ ಅರ್ಥವಾಗಿರಲಿಲ್ಲ. ಇದರ ಒಂದು ಉದಾಹರಣೆ ಹೀಗಿದೆ:

ಬ್ರಿಟಿಶರು ಭಾರತವನ್ನು ವ್ಯಾಪಾರಕ್ಕೆಂದು ಪ್ರವೇಶಿಸಿದಾಗ
, ಒಂದು ಪೌಂಡಿನ ಬೆಲೆ ಒಂದು ರೂಪಾಯಿಯ ಬೆಲೆಗಿಂತ ಕಮ್ಮಿಯಾಗಿತ್ತು. ಬ್ರಿಟಿಶರು ಇಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ತಮ್ಮ ಪಾರ್ಲಿಮೆಂಟಿನಲ್ಲಿ ಒಂದು ಶಾಸನ ಮಾಡಿ, ರೂಪಾಯಿ ಬೆಲೆಯ ಅಪಮೌಲ್ಯ ಮಾಡಿದರು.
ಇದರಿಂದಾಗಿ ಭಾರತದಿಂದ ಬ್ರಿಟನ್ನಿಗೆ ಹೋಗುವ ಸಾಮಗ್ರಿಗಳು ಸೋವಿಯಾದವು.
ಭಾರತಕ್ಕೆ ಬ್ರಿಟನ್ನಿನಿಂದ ಆಮದಾದ ವಸ್ತುಗಳು ದುಬಾರಿಯಾಗಿ ಬ್ರಿಟಿಶರಿಗೆ ಅಪಾರ ಲಾಭವಾಗತೊಡಗಿತು. ಇದನ್ನು ಅರ್ಥ ಮಾಡಿಕೊಂಡ ಏಕಮೇವ ವ್ಯಕ್ತಿಯಂದರೆ ಮೋತಿಲಾಲ ನೆಹರೂ.
ಅವರು ಅನೇಕ ಭಾರತೀಯ ಗಣ್ಯರಿಗೆ ಈ ಅನರ್ಥವನ್ನು ತಿಳಿಸಿ ಪತ್ರ ಬರೆದರು.
ಆದರೆ ಭಾರತೀಯ ಗಣ್ಯರಿಗೆ ಇದು ಅರ್ಥವಾಗಲೇ ಇಲ್ಲ.
(ಆಧಾರ :ಶ್ರೀ ಬಿ. ಆರ್. ನಂದಾರವರು ಬರೆದ ಪುಸ್ತಕ
, The Nehrus.)

ಬ್ರಿಟಿಶರ ಬಹುಮುಖ ಶೋಷಣೆಯ ಮತ್ತೊಂದು ಉದಾಹರಣೆ ಹೀಗಿದೆ:
ಮೈಸೂರಿನಲ್ಲಿ ತಯಾರಾಗುತ್ತಿದ್ದ ಮೈಸೂರು ಸ್ಯಾಂಡಲ್ ಸೋಪ್ ನಿರ್ಮಾಣಕ್ಕೆ ಆಸ್ಟ್ರೇಲಿಯಾದಿಂದ ಕುರಿಗಳ ಕೊಬ್ಬು(=
sheep tallow) ಆಮದಾಗುತ್ತಿತ್ತು!
ನಾವು ಸ್ವದೇಶಿ ನಿರ್ಮಿತಿ ಎಂದು ತಿಳಿದ ಸಾಬೂನಿನ ಬೆಲೆಯ ಬಹುಭಾಗವು ಬ್ರಿಟಿಶ್ ಕೊಲೊನಿ ಆಸ್ಟ್ರೇಲಿಯಾದ ಉದ್ಧಾರಕ್ಕಾಗಿ ಹೋಗುತ್ತಿತ್ತು ಎನ್ನುವದನ್ನು ಗಮನಿಸಿದಾಗ ಭಾರತದ ಆರ್ಥಿಕ ಶೋಷಣೆಯ ಕಲ್ಪನೆ ಬಂದೀತು.

ಇವೆಲ್ಲ ವಿಚಾರಗಳು ಆರ್ಥಿಕ ಪಂಡಿತರಿಗೇ ತಿಳಿದಿರಲಿಲ್ಲ.
ಅಲ್ಲದೆ ರಾಜಕಾರಣ ಹಾಗು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಘಟಾನುಘಟಿಗಳೂ ಸಹ ಬ್ರಿಟಿಶ್ ಪ್ರಭುತ್ವವನ್ನು ಒಪ್ಪಿಕೊಂಡಿದ್ದರು.
ಅಂದ ಮೇಲೆ ಶರೀಫರೂ ಸಹ ಅಂತಹದೇ ಅಭಿಪ್ರಾಯ ಹೊಂದಿದ್ದರೆ ಆಶ್ಚರ್ಯವಾಗಬಾರದು.]

೧೬. ಬಿದ್ದೀಯಬೆ ಮುದುಕಿ.

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಬಿದ್ದೀಯಬೆ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ
ಬಿದ್ದೀಯಬೆ ಮುದುಕಿ
||||

ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ
||||

ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ
ಬಿದ್ದೀಯಬೆ ಮುದುಕಿ
||||

ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೆ ಮುದುಕಿ
||||

ಶರೀಫರು ೧೯ನೆಯ ಶತಮಾನದ ಹಳ್ಳಿಗಾಡಿನಲ್ಲಿ ಬೆಳೆದವರು.
ಅದಾಗಲೇ
, ಧಾರವಾಡದ ಸುತ್ತಮುತ್ತಲಿನ ಪ್ರದೇಶವೆಲ್ಲ ಬ್ರಿಟಿಶರ ಆಡಳಿತಕ್ಕೆ ಒಳಪಟ್ಟಿತ್ತು.
ಹತ್ತಿಯ ಗಿರಣಿ
, ರೇಲವೇ ಮೊದಲಾದ ಆಧುನಿಕ ಯಾಂತ್ರಿಕ ಸೌಕರ್ಯಗಳು ಆಗತಾನೇ ಪ್ರಾರಂಭವಾಗಿದ್ದವು.

ಶರೀಫರು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಕಾಲ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು.
ಆದರೆ ಇವರ ಮನೋಧೋರಣೆಗೆ ನೌಕರಿಯು ಒಗ್ಗದ ವಿಷಯವಾಗಿತ್ತು.
ಅದನ್ನೂ ಬಿಟ್ಟುಕೊಟ್ಟು
,ಹಳ್ಳಿ ಹಳ್ಳಿ ತಿರುಗುತ್ತ, ಪಾರಮಾರ್ಥಿಕ ಚಿಂತನೆಯಲ್ಲಿಯೇ ಕಾಲ ಕಳೆಯತೊಡಗಿದರು.

ನಿಷ್ಠುರ ಸ್ವಭಾವದ ಶರೀಫರು ತಮಗೆ ಸರಿಕಾಣದ ಯಾವುದನ್ನು ಕಂಡರೂ ತಕ್ಷಣವೇ ಟೀಕಿಸುತ್ತಿದ್ದರು.
ತಮ್ಮ ಸಮಕಾಲೀನರಾದ ನವಲಗುಂದದ ಅಜಾತ ನಾಗಲಿಂಗಸ್ವಾಮಿಗಳು ಪಲ್ಲಕ್ಕಿಯಲ್ಲಿ ಕುಳಿತು ಹೋಗುತ್ತಿದ್ದಾಗ
,
“ ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ”
ಎಂದು ಛೇಡಿಸಿದ್ದರು.

ಶರೀಫರ ಹಾಡುಗಳೂ ಸಹ ಹಳ್ಳಿಗರ ಹಾಡುಗಳೇ.
ಅದರಲ್ಲಿ ಶಿಷ್ಟಭಾಷೆಯ ಬಳಕೆ ಇಲ್ಲ.
ಸಹಜಸ್ಫೂರ್ತಿಯಿಂದ
, ಹೃದಯದಿಂದ ಹೊರಹೊಮ್ಮಿದ ಹಾಡುಗಳು ಇವು.
ಅನೇಕ ವೇಳೆ ತಮ್ಮ ಕಣ್ಣೆದುರಿನಲ್ಲಿ ಕಂಡ ಘಟನೆಯಿಂದ ಈ ಹಾಡುಗಳು ಪ್ರೇರಿತವಾಗಿವೆ.
ಅಂತಹ ಹಾಡುಗಳಲ್ಲಿ ಒಂದು : “ಬಿದ್ದೀಯಬೆ ಮುದುಕಿ
”.

ಹುಲಗೂರು ಇದು ಶಿಗ್ಗಾವಿ ತಾಲೂಕಿನಲ್ಲಿರುವ ಒಂದು ಹಳ್ಳಿ.
ಹಜರತ್ ಶಾ ಖಾದರಿ ಎನ್ನುವ ಸಂತರ ಗೋರಿ ಇಲ್ಲಿದ್ದು ಇದು ಮುಸಲ್ಮಾನರಿಗೆ ಯಾತ್ರಾ ಸ್ಥಳವಾಗಿದೆ.
ಪ್ರತಿ ರವಿವಾರ ಈ ಹಳ್ಳಿಯಲ್ಲಿ ಸಂತೆ ನಡೆಯುತ್ತಿತ್ತು.
ಇಂತಹ ಒಂದು ಸಂತೆಯಲ್ಲಿ ಶರೀಫರು ಒಬ್ಬ ಮುದುಕಿಯನ್ನು ನೋಡುತ್ತಾರೆ.
ವಯಸ್ಸಿಗೆ ಸಹಜವಾದ ಪಕ್ವತೆಯನ್ನು ತೋರದ ರೀತಿಯಲ್ಲಿ ಆ ಮುದುಕಿ ವ್ಯವಹರಿಸುವದನ್ನು ಕಂಡು ಶರೀಫರಿಗೆ ಬೇಸರವಾಗಿರಬಹುದು.
ಆಗ ಶರೀಫರು ಮುದುಕಿಗೆ ಎಚ್ಚರ ಕೊಡುವ ಧಾಟಿಯಲ್ಲಿ ಹಾಡುತ್ತಾರೆ:
“ಬಿದ್ದೀಯಬೇ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ!”

“ನೀನು ವಯಸ್ಸಾದ ಮುದುಕಿ
, ನೀನು ಬಿದ್ದರೆ ಒಳ್ಳೆ ಪೆಟ್ಟು ತಿನ್ನುತ್ತೀ.
ಏಕೆ ಇಂತಹ ಅಸಹಜ ಹಾರಾಟ ನಿನ್ನದು
?
ಮನೆಯಲ್ಲಿ ಕೂಡುವದನ್ನು ಬಿಟ್ಟು ಈ ಸಂತೆಗೆ ಏಕೆ ಬಂದೆ
?
ಈ ಗದ್ದಲದಲ್ಲಿ ನೀನು ಬಿದ್ದರೆ ನಿನ್ನನ್ನು ಕೇಳುವವರು ಯಾರೂ ಇಲ್ಲ.
ಎಂತಹ ಬುದ್ಧಿಗೇಡಿ ಮುದುಕಿಯಾಗಿರುವೆ ನೀನು” ಎಂದು ಶರೀಫರು ಅವಳನ್ನು ಬೈಯುತ್ತಾರೆ.
“ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ”

ಈ ಮುದುಕಿಯು ಬಲು ಒಯ್ಯಾರದ ಮುದುಕಿ.
ತನ್ನ ಬುಟ್ಟಿಯಲ್ಲಿ ಜರದ ಪಟ್ಟೆಯ ಸೀರೆಯನ್ನು ಇಟ್ಟುಕೊಂಡು ಬಂದಿದ್ದಾಳೆ.
(ಪಟ್ಟಿ ಎಂದರೆ ರೇಶಮೆ ಸೀರೆ ಎನ್ನುವ ಅರ್ಥವೂ ಇದೆ.)
ಸಂತೆಯಲ್ಲಿ ನೆರೆದವರ ಎದುರಿಗೆ ತನ್ನ ಪಟ್ಟೆಯ ಸೀರೆಯನ್ನು ಉಟ್ಟುಗೊಂಡು ಜಂಭ ಪಡಬೇಕೆನ್ನುವದು ಅವಳ ಆಸೆ.
ಆದರೆ ಇವಳು ಸೀರೆಯನ್ನು ತೆಗೆಯುವ ಹೊತ್ತಿನಲ್ಲಿ ಗಂಟಿಚೌಡೇರು (=ಗಂಟುಕಳ್ಳರು) ಇವಳ ಚೀಲವನ್ನೇ ಕತ್ತರಿಸಬಹುದಲ್ಲ!
ಅದಕ್ಕಾಗಿಯೇ ಶರೀಫರು ಎಚ್ಚರಿಕೆ ನೀಡುತ್ತಾರೆ:
“ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ”

ಶರೀಫರು ಸಂತೆಯ ರೂಪಕವನ್ನು ಸಂಸಾರಕ್ಕೆ ಹೋಲಿಸುತ್ತ
, ಈ ಸಂಸಾರಕ್ಕೆ ಬಂದ ಎಲ್ಲ ಜೀವಿಗಳಿಗೂ ಎಚ್ಚರಿಕೆ ನೀಡುತ್ತಿದ್ದಾರೆ.
ಸಂತೆಯಲ್ಲಿ ಹೇಗೊ
, ಹಾಗೆಯೇ ಸಂಸಾರದಲ್ಲೂ ಸಹ, ಜೀವಿಯು ಎಚ್ಚರದಿಂದ ಇರಬೇಕು.
ಇಲ್ಲಿ ಜಾರಿ ಬಿದ್ದರೆ ಎಬ್ಬಿಸಲು ಯಾರೂ ಸಹಾಯ ಮಾಡುವದಿಲ್ಲ.
ಪೂರ್ವಜನ್ಮದ ಪುಣ್ಯದಿಂದಾಗಿ(= ತಲೆಯ ಮೇಲಿನ ಬುಟ್ಟಿ)
, ಈ ಜನ್ಮದಲ್ಲಿ ಇವಳಿಗೆ ಒಂದಿಷ್ಟು ಭೋಗ (=ಪಟ್ಟೆ ಸೀರೆ) ದೊರಕಿದೆ.
ಆದರೆ
, ಇಳಿವಯಸ್ಸಾದರೂ ಸಹ ಸಂಸಾರದಲ್ಲಿಯೇ ಮಗ್ನರಾಗಿ, ತನ್ನ ದೊಡ್ಡಸ್ತಿಕೆಯನ್ನೇ ಮೆರೆಯುತ್ತ ಹೋದರೆ, ತಮ್ಮಲ್ಲಿರುವ ಈ ಜನ್ಮದ ಯತ್ಕಿಂಚಿತ್ ಪುಣ್ಯಬಲವೂ(=ಕೈಯಲ್ಲಿಯ ಚೀಲ) ಸಹ ಗಂಟುಕಳ್ಳರ(=ಪುಣ್ಯದಿಂದ ದೊರೆಯುವ ಫಲಗಳು) ಮೂಲಕ ಮಾಯವಾಗುವದು.

ಅದಕ್ಕಾಗಿ
, ಮನಸ್ಸನ್ನು ದೇವರಲ್ಲಿ ಇಡಬೇಕೆ ಹೊರತು ಸಂಸಾರದ ವಾಸನೆಗಳಲ್ಲಿ ಅಲ್ಲ.
ಇದನ್ನು ತಿಳಿಯದ ಜೀವಿಯು ಪಿಸರುಗಣ್ಣಿನ
, ಪಿಚ್ಚುಗಣ್ಣಿನ ಮುದುಕಿ ಇದ್ದಂತೆ.
ಅವಳಿಗೆ ಹಸನಾದ(=
clear) ದೃಷ್ಟಿಯು ಇಲ್ಲ.
ಅಲ್ಲದೆ
, ಸಾಧನೆಯನ್ನು ಕೈಕೊಳ್ಳುವ ವಯಸ್ಸೂ ಸಹ ಉಳಿದಿಲ್ಲ.
ಆದುದರಿಂದ
, ಮನಸ್ಸನ್ನು ದೇವರ ಕಡೆಗೆ ತಿರುಗಿಸಿ ಜನ್ಮ ಸಾರ್ಥಕ ಮಾಡಿಕೊಳ್ಳುವದೇ ಲೇಸು.

“ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೇ ಮುದುಕಿ
||”

ಮುದುಕಿಯ ರೂಪಕದಿಂದ ಶರೀಫರು ನಮಗೆಲ್ಲರಿಗೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.
೧೭.ಎಲ್ಲರಂಥವನಲ್ಲ ನನ ಗಂಡ. 

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ
||ಪಲ್ಲ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ
||ಅ.ಪ.||

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ
||||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ
||||

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ
||||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ
||||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ
||||
………………………………………………………………………
ಭಕ್ತಿಮಾರ್ಗದಲ್ಲಿ ಭಕ್ತ ಮತ್ತು ಭಗವಂತನ ನಡುವೆ ಐದು ಬಗೆಯ ಸಂಬಂಧಗಳನ್ನು ಗುರುತಿಸಲಾಗಿದೆ:
೧) ದಾಸ ಭಾವ
೨) ಸಖ್ಯ ಭಾವ
೩) ಮಧುರ ಭಾವ
೪) ವಾತ್ಸಲ್ಯ ಭಾವ
೫) ವಿರೋಧ ಭಾವ

ಭಕ್ತಿಮಾರ್ಗದ ಸಾಧಕರು ಈ ಎಲ್ಲ ಪಥಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ.
ಶರೀಫರ ಹಾಡುಗಳಲ್ಲಿ ಸಹ ಈ ವಿಭಿನ್ನ ಪ್ರಕಾರಗಳ ವರ್ಣನೆಯನ್ನು ಕಾಣಬಹುದು.

“ಎಲ್ಲರಂಥವನಲ್ಲ ನನ ಗಂಡ” ಎನ್ನುವ ಹಾಡಿನಲ್ಲಿ ಶರೀಫರು ಪರಮಾತ್ಮನನ್ನು ಪತಿಗೆ ಹಾಗೂ ಜೀವಾತ್ಮರಾದ ತಮ್ಮನ್ನು ಸತಿಗೆ ಹೋಲಿಸಿಕೊಂಡು ಹಾಡಿದ್ದಾರೆ.
ಮಧುರ ಭಕ್ತಿಯ ಈ ಸಾಧನಾಮಾರ್ಗದಲ್ಲಿ ತಮಿಳುನಾಡಿನ ಆಂಡಾಳ್
, ಕರ್ನಾಟಕದ ಅಕ್ಕ ಮಹಾದೇವಿ ಹಾಗೂ ರಾಜಸ್ಥಾನದ ಮೀರಾಬಾಯಿ ಪ್ರಸಿದ್ಧರಾಗಿದ್ದಾರೆ.
ವೀರಶೈವ ದರ್ಶನದಲ್ಲಿಯೂ ಸಹ “ ಶರಣ ಸತಿ
, ಲಿಂಗ ಪತಿ” ಎನ್ನುವದು ಸುಪ್ರಸಿದ್ಧವಾದ ಹೇಳಿಕೆಯೇ ಆಗಿದೆ.
ಆಧುನಿಕ ಕಾಲದಲ್ಲಿ ಮಧುರಚೆನ್ನರೂ ಸಹ ಸಾಧನೆಯ ಪಥದಲ್ಲಿ ಪರಮಾತ್ಮನನ್ನು ತಮ್ಮ “ನಲ್ಲ” ಎಂದು ಗ್ರಹಿಸಿ ಬರೆದ “ನನ್ನ ನಲ್ಲ” ಕಾವ್ಯವು ಕನ್ನಡದ ಅದ್ಭುತ ಕಾವ್ಯಗಳಲ್ಲೊಂದಾಗಿದೆ.

ಶರೀಫರ ಕವನ ಪ್ರಾರಂಭವಾಗುವದು ತಮ್ಮ ಗಂಡನ ಬಗೆಗೆ ಅವರಿಗಿರುವ ಬೆರಗು ಹಾಗು ಮೆಚ್ಚುಗೆಯ ಸಾಲುಗಳಿಂದ:
“ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ”

ಈತ ಬಲ್ಲಿದನಾದ ಗಂಡ ಎಂದು ಇವನ ಹೆಂಡತಿಗೆ ಅಭಿಮಾನವಿದೆ.
ಯಾತರಲ್ಲಿ ಬಲ್ಲಿದ
?
ತನ್ನ ಹೆಂಡತಿಯನ್ನು ತನಗೆ ಬೇಕಾದಂತೆ ತಿದ್ದುವದರಲ್ಲಿ ಈತ ಬಲ್ಲಿದ
, ಅಂದರೆ ಜಾಣ!
ಅಷ್ಟೇ ಅಲ್ಲ. ಅವಳನ್ನು ಪರಿವರ್ತಿಸುವ ಈ ಕಾರ್ಯವನ್ನು ಆತ ‘ಪುಂಡ’ತನದಿಂದ
, agressively ಮಾಡುತ್ತಾನೆ.
ಹೆಂಡತಿಗೆ ಈ ವಿಷಯದಲ್ಲಿ ಸ್ವಲ್ಪವೂ ಸ್ವಾತಂತ್ರ್ಯ ಎನ್ನುವದಿಲ್ಲ.
ಆದರೆ ಅವಳಿಗೆ ಅಸಮಾಧಾನವೂ ಇಲ್ಲ.
ಇದರಲ್ಲಿ ತನ್ನ ಹಿತವೇ ಇದೆ ಎಂದು ಅರಿತ ಅವಳು ಗಂಡನ ಇಂತಹ ವರ್ತನೆಯನ್ನು ಮೆಚ್ಚಿಕೊಂಡಿದ್ದಾಳೆ.

ತನ್ನ ಗಂಡನಾದ ಪರಮಾತ್ಮ ಯಾವ ರೀತಿಯಲ್ಲಿ ತನ್ನನ್ನು ತಿದ್ದಿದ ಎಂದು ಶರೀಫರು ಹೀಗೆ ಹೇಳುತ್ತಾರೆ.
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ
||

ಹೊಸದಾಗಿ ಮದುವೆಯಾದ ಹೆಂಡತಿ (--ಹಳೆಯ ಸಾಂಪ್ರದಾಯಕ ಸಮಾಜದಲ್ಲಿ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಿರಿ
—) ತನ್ನ ಪತಿಯೊಡನೆ ತನ್ನ ಚಿಕ್ಕ ಪುಟ್ಟ ಬಯಕೆಗಳನ್ನು ಹೇಳಿಕೊಳ್ಳಲು ಬಯಸುತ್ತಾಳೆ. ಅವಳಿಗೆ ಬಾಯಿ ತೆರೆಯಲೇ ಅವಕಾಶ ಕೊಡದಂತೆ, ಈ ಪುಣ್ಯಾತ್ಮ ಮಾತು ಮಾತಿಗೆ (=ಸೊಲ್ಲು ಸೊಲ್ಲಿಗೆ) ಇವಳನ್ನು ಬಯ್ಯುತ್ತಾನೆ. ಇವಳು ಮನೆಯ ಬಿಟ್ಟು ಹೊರಗೆ ಕಾಲಿಡಬಾರದೆನ್ನುವ ಉದ್ದೇಶದಿಂದ ಅವಳ ಕಾಲನ್ನೇ ಮುರಿದು ಬಿಟ್ಟಿದ್ದಾನೆ.

ಶರೀಫರು ಹೊಸದಾಗಿ ಪರಮಾತ್ಮನ ಜೊತೆ ಮದುವೆಯಾಗಿದ್ದಾರೆ.
ತನ್ನಂತಹ ನೆರೆಹೊರೆಯವರೊಡನೆ ಮಾತನಾಡುವ ಹಾಗು ತನ್ನ ಸಂಸಾರದ ದೊಡ್ಡಸ್ತನವನ್ನು ಹೆಮ್ಮೆಯಿಂದ ಹೇಳಿಕೊಂಡು
, ಬೀಗುವ ಮನಸ್ಸು ಈ ಹೆಂಡತಿಗೆ ಇದೆ.
ಆದರೆ ಮನೆಯ ಯಜಮಾನನಿಗೆ ಇದು ಬಿಲ್ಕುಲ್ ಬೇಕಾಗಿಲ್ಲ.
ಸರಿ
, ಆತ ಇವಳ ಕಾಲನ್ನೇ ಮುರಿದು ಬಿಟ್ಟ.
ಆಧ್ಯಾತ್ಮಿಕ ಅರ್ಥದಲ್ಲಿ ಹೇಳುವದಾದರೆ
, ತನ್ನ ಸರಿಕರಾದ ಇತರ ಕೆಲವು ಸಂತರಿಗೆ (ಉದಾ: ಅಜಾತ ನಾಗಲಿಂಗ ಸ್ವಾಮಿಗಳಿಗೆ) ಬಂದಂತಹ ದೊಡ್ಡಸ್ತಿಕೆ ಹಾಗು ಪ್ರಸಿದ್ಧಿ ಶರೀಫರಿಗೆ ಬರದಂತೆ, ಆ ಪರಮಾತ್ಮ ನೋಡಿಕೊಂಡ.
ಇದು ಹೆಂಡತಿಗೂ ಒಪ್ಪಿಗೆಯಾದ ಸಂಗತಿಯೇ!

ಇಷ್ಟಾದ ಮೇಲೆ ಇಂತಹ ಸುಗುಣ ಸಂಪನ್ನ ಗಂಡನೊಡನೆ ತನ್ನ ಒಗೆತನ ಹೇಗೆ ಪ್ರಾರಂಭವಾಯಿತೆಂದು ಶರೀಫರು ಹೇಳುತ್ತಾರೆ:

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ
||

ಶರೀಫರಿಗೆ ಇನ್ನೂ ಆಧ್ಯಾತ್ಮದ ಗಂಧ ಬಡೆದಿರಲಿಲ್ಲ.
ಅವರು ತಮ್ಮ ತಂದೆ ತಾಯಿಯ ಮನೆಯಲ್ಲಿ
, ಅಂದರೆ ವಿಷಯ ಭಾವನೆ ತುಂಬಿದ ಸಂಸಾರದಲ್ಲಿಯೇ ಇದ್ದರು.
ಅವರಿಗೆ ಮೂವರು ಪ್ರೀತಿಯ ಗೆಳೆಯರು.
ಈ ಮೂವರೆಂದರೆ
, ಪ್ರತಿಯೊಂದು ಜೀವಿಗೆ ಸಂಚಲನೆ ನೀಡುವ ಮೂರು ಗುಣಗಳು:
(೧) ತಮಸ್ (೨) ರಜಸ್ ಹಾಗು (೩) ಸತ್ವ
ಪ್ರತಿ ಜೀವಿಯ ಜನ್ಮಾಂತರಗಳಲ್ಲಿ ತಮೋಗುಣ ಕಡಿಮೆಯಾಗುತ್ತ
, ಸತ್ವಗುಣ ಅಧಿಕವಾಗುತ್ತ ಹೋಗಬೇಕು.

ಅದಲ್ಲದೆ ಅವರ ಮೂರು ಪ್ರಕಾರದ ಕರ್ಮಗಳು ಅವರನ್ನು ಬೆಂಬತ್ತಿವೆ:
(೧) ಸಂಚಿತ (೨) ಪ್ರಾರಬ್ಧ ಹಾಗೂ (೩) ಆಗಾಮಿ

(ಟಿಪ್ಪಣಿ:
ಈ ಗುಣಗಳ ಮಿಶ್ರಣಕ್ಕೆ ಸರಿಹೋಗುವಂತೆ ಹಾಗೂ ಕರ್ಮಗಳಿಗೆ ಅನುಸಾರವಾಗಿ ಪ್ರತಿ ಜೀವಿಗೆ ಒಂದು ದೇಹ ದೊರಕುತ್ತದೆ.
‘ಗಣಪತಿ ಅಥರ್ವ ಶೀರ್ಷ’ದಲ್ಲಿ ಬರುವ ಈ ಸಾಲನ್ನು ಗಮನಿಸಿರಿ:
“ತ್ವಂ ಗುಣತ್ರಯಾತೀತಃ
, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತಃ”
ಗಣಪತಿಯು ಸತ್ವ
, ರಜಸ್ ಹಾಗೂ ತಮಸ್ ಎನ್ನುವ ಮೂರೂ ಗುಣಗಳಿಗೆ ಅತೀತನಾಗಿರುವದರಿಂದ ಅವನು ಮೂರೂ ದೇಹಗಳಿಗೆ (=ಸ್ಥೂಲ, ಸೂಕ್ಷ್ಮ ಹಾಗೂ ಕಾರಣದೇಹಗಳಿಗೆ) ಅತೀತನಾಗಿದ್ದಾನೆ.
ದೇಹವಿಲ್ಲದವನಿಗೆ ಕಾಲವೆಲ್ಲಿಯದು
?
ಆ ಕಾರಣದಿಂದ ಆತನು ಭೂತ
, ವರ್ತಮಾನ ಹಾಗೂ ಭವಿಷ್ಯತ್ ಎನ್ನುವ ಮೂರು ಕಾಲಗಳಿಗೂ ಸಹ ಅತೀತನಾಗಿದ್ದಾನೆ.
ದೇಹ ಹಾಗೂ ಕಾಲಗಳಿಂದ ಬದ್ಧನಾಗದವನಿಗೆ ಕರ್ಮಬಂಧನವೆಲ್ಲಿಯದು
?
ಹಾಗಾಗಿ ಪರಮಾತ್ಮನಿಗೆ ಕರ್ಮಬಂಧನವಿಲ್ಲ.)

ಈ ರೀತಿಯಾಗಿ ಶರೀಫರು ತಮ್ಮ ಮೂರು ಗುಣಗಳೊಡನೆ ಪ್ರೀತಿಯಿಂದ ಇರುತ್ತಿರಲು
, ಈ ಗುಣಗಳಲ್ಲಿ ಸತ್ವಗುಣವೇ ಅಧಿಕವಾಗಿದ್ದರಿಂದ, ಅವರು ಮೈನೆರೆಯುವ ಸಮಯ ಬಂದಿತು.
ಅರ್ಥಾತ್
, ಈ ವಿಷಯ ಸಂಸಾರವನ್ನು ಬಿಟ್ಟು, ಆಧ್ಯಾತ್ಮಿಕ ಸಂಸಾರ ಹೂಡುವ ಅವಸ್ಥೆ ಅವರಿಗೆ ಪ್ರಾಪ್ತವಾಯಿತು.
ಅದೂ ಹೇಗೆ
? ಮಾಯದಿಂದ ಅಂದರೆ ಅವರಿಗೇ ಅರಿವಾಗದಂತೆ!
ಆದರೆ ಚಿಕ್ಕ ಹುಡುಗಿಯೊಬ್ಬಳು ಮದುವೆಯಾಗುವಾಗ ಸಂಭ್ರಮದ ಜೊತೆಗೇ ಹೆದರಿಕೆಯನ್ನೂ ಅನುಭವಿಸುತ್ತಾಳೆ.
ಅದಕ್ಕಾಗಿಯೇ ಶರೀಫರು
,
“ಘಾತವಾಯಿತು ಯವ್ವನವು ಬರಲು”
ಎಂದು ಹೇಳುತ್ತಾರೆ.

ಶರೀಫರಿಗೇನೊ ಸ್ವಲ್ಪ
apprehension ಇರಬಹುದು.
ಆದರೆ ತನಗೆ ತಕ್ಕ ಕನ್ಯೆಯನ್ನು ಶೋಧಿಸುತ್ತಿರುವ ವರಮಹಾಶಯ ಸುಮ್ಮನೇ ಕೂತಾನೆ
?
‘ವೆಂಕಟೇಶ ಕಲ್ಯಾಣ’ದಲ್ಲಿ ವೆಂಕಟೇಶನು ಮದುವೆಯ ಪ್ರಸ್ತಾಪಕ್ಕಾಗಿ ತಾನೇ ದೂತೆಯಾಗಿ ಕೊರವಂಜಿಯ ವೇಷದಲ್ಲಿ ಬಂದದ್ದನ್ನು ನೆನಪಿಸಿಕೊಳ್ಳಿರಿ.
ಅದೇ ರೀತಿಯಾಗಿ
, ಪರಮಾತ್ಮನೂ ಸಹ ಈ ಕನ್ಯೆಯೊಡನೆ ಮದುವೆಯಾಗಲು ಗುರುರೂಪದಲ್ಲಿ ಬರುತ್ತಾನೆ.
ಆ ಗುರುವೇ ಗೋವಿಂದ ಭಟ್ಟರು.

ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ
||

ಗುರು ಗೋವಿಂದ ಭಟ್ಟರು ಶರೀಫರ ಮದುವೆಯನ್ನು ಪರಮಾತ್ಮನ ಜೊತೆಗೆ ಮಾಡಿದ್ದಷ್ಟೇ ಅಲ್ಲ
, ಶೋಭನ ಶಾಸ್ತ್ರವನ್ನೂ ಸಹ ಮಾಡಿದರು.
ಪರಮಾತ್ಮನೊಡನೆ ಮೈಹೊಂದಿಕೆಯನ್ನು ಮಾಡಿಸಿಕೊಟ್ಟರು.
ಪರಮಾತ್ಮ ಹಾಗೂ ಶರೀಫರು ಪ್ರೀತಿಯಲ್ಲಿ ಒಂದಾದರು.

ಈ ವರ್ಣನೆಯು ಗುರು ಗೋವಿಂದ ಭಟ್ಟರು ಶಕ್ತಿಪಾತದ ಮೂಲಕ ಶರೀಫರಲ್ಲಿ ಕುಂಡಲಿನಿಯನ್ನು ಜಾಗೃತಗೊಳಿಸಿದುದರ ಸೂಚನೆಯಾಗಿದೆ.

ಇದೀಗ ಶರೀಫರ ಹೊಸ ಸಂಸಾರ (ಪರಮಾತ್ಮನೊಡನೆ) ಪ್ರಾರಂಭವಾಯಿತು.
ಸರಿ
, ಶರೀಫರ ತವರು ಮನೆಯ ಸುದ್ದಿಯೇನು?
ಹೊಸ ಗಂಡ ಈ ವಿಷಯದಲ್ಲಿ ತುಂಬಾ
possessive.
ಶರೀಫರಿಗೆ ಅರಿಷಡ್ವರ್ಗವೆನ್ನುವ ಆರು ಮಂದಿ ಅಕ್ಕ ತಂಗಿಯರಿದ್ದರು.
(ಕಾಮ
, ಕ್ರೋಧ, ಮೋಹ, ಲೋಭ, ಮದ ಹಾಗು ಮಾತ್ಸರ್ಯ.)
ಅಲ್ಲದೆ ಅವರಿಗೆ ಐದು ಜನ ಪ್ರಿತಿಯ ಸೋದರರು.
(ಐದು ಕರ್ಮೇಂದ್ರಿಯಗಳು ಹಾಗು ಅವಕ್ಕೆ ಪೂರಕವಾದ ಐದು ಜ್ಞಾನೇಂದ್ರಿಯಗಳು:
ಕಣ್ಣು-ನೋಟ
, ಕಿವಿ-ಶ್ರವಣ, ಮೂಗು-ವಾಸನೆ, ನಾಲಗೆ-ರುಚಿ, ಚರ್ಮ-ಸ್ಪರ್ಶ).
ಅವರೆಲ್ಲರನ್ನೂ ಈತ ಅಗಲಿಸಿಯೇ ಬಿಟ್ಟ.
ಅಂದರೆ
, ಈ ಸಾಧನಗಳು ಅವರನ್ನು ವಿಷಯ ಸಂಸಾರಕ್ಕೆ ಎಳೆಯಲು ಸಾಧ್ಯವಾಗಲಿಲ್ಲ.

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ

ತನ್ನ ಹೆಂಡತಿ ತನ್ನ ನೆದರನ್ನು(=ನಜರನ್ನು
, ನೋಟವನ್ನು) ಎಲ್ಲೂ ಹೊರಳಿಸಕೂಡದು;
ಅವಳು ತನ್ನನ್ನೇ ಸದಾಕಾಲ ನೋಡುತ್ತಿರಬೇಕು ಎನ್ನುವದು ಈ ಗಂಡನ ಅಭಿಲಾಶೆ.
ಹಾಗೆಂದು ಇದರಲ್ಲಿ ಆತನ ಬಲವಂತಿಕೆಯೇನಿಲ್ಲ.
ಅವನ ಆಟಕ್ಕೆ ಇವಳೇ ಮರುಳಾಗಿದ್ದಾಳೆ.

ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
||

ಪರಮಾತ್ಮನ ಜೊತೆಗಿನ ಸಂಸಾರದ ಸುಖವನ್ನು ಶರೀಫರು ಹೀಗೆ ಬಣ್ಣಿಸುತ್ತಾರೆ:

ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ
||

ಈ ಸಾಲುಗಳು ಆಧ್ಯಾತ್ಮಿಕ ಅನುಭವವನ್ನು ಸೂಚಿಸುತ್ತಿದ್ದು
, ಅವುಗಳ ಅರ್ಥ ಆಧ್ಯಾತ್ಮಸಿದ್ಧಿ ಪಡೆದವನಿಗೆ ಮಾತ್ರ ಗೊತ್ತಾದೀತು.
(ಬಲ್ಲವನೇ ಬಲ್ಲ ಬೆಲ್ಲದ ಸವಿಯ!)
ಪರಮಾತ್ಮನು ತನ್ನ ಸಾಮರಸ್ಯದ ಸುಖವನ್ನು ಕೊಡುವದಲ್ಲದೇ
, ತಾನು ಜಗಿದ ತಾಂಬೂಲದ ರಸದ ಗುಟುಕನ್ನು ಶರೀಫರ ಬಾಯಿಯಲ್ಲಿ ಅಕ್ಕರತೆಯಿಂದ ಇಡುತ್ತಿದ್ದಾನೆ.
ಅಂದರೆ ಪರಮಾತ್ಮನು ಪ್ರೇಮವನ್ನಲ್ಲದೆ
, ಪೋಷಣೆಯನ್ನೂ(=ಜ್ಞಾನವನ್ನೂ) ಸಹ ನೀಡುವನು.
ಅಕ್ಕರತಿಯಿಂದ ಎನ್ನುವ ವಿಶೇಷಣವನ್ನು ಗಮನಿಸಿರಿ.
ಇದು ಗಂಡ ಹೆಂಡತಿಯ ಪ್ರೇಮಕ್ಕಿಂತ ಹೆಚ್ಚಾಗಿ ಪೋಷಕ-ಪೋಷಿತ ಭಾವವನ್ನು ತೋರಿಸುವದು.
ಆದುದರಿಂದ ಶರೀಫರು ಪರಮಾತ್ಮನಿಗೆ ‘ಬಹು ಸುಗುಣನೀತಾ’ ಎಂದು ಕರೆದಿದ್ದಾರೆ.

ಹೆಂಡತಿಗೆ ಅಚ್ಛಚ್ಛೆ ಮಾಡಿದರೆ ಸಾಕೆ
?
ಈ ಚಿಕ್ಕ ಹುಡುಗಿಗೆ ಒಳ್ಳೆಯ ರೀತಿಯಲ್ಲಿ ಬದುಕು ಮಾಡುವದನ್ನು ಕಲಿಸಬೇಡವೆ
?
ಪರಮಾತ್ಮನು ಶರೀಫರು ಎನ್ನುವ ತನ್ನ ಹೊಸ ವಧುವಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಿದನೆನ್ನುವದನ್ನು ನೋಡಿರಿ:

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ
||

ಪರಮಾತ್ಮನೇನೊ ಈ ಚಿಕ್ಕ ಹೆಂಡತಿಗೆ ಮನೆಯ ಮಾಡಿ ಕೊಟ್ಟ.
ಗಂಡನಿಲ್ಲದ ವೇಳೆ ಈಕೆ ಮನೆಯ ಹೊರಗೆ ಹೋಗಬಹುದಲ್ಲವೆ
?
ಸರಿ
, ಹೊರಗೆ ಹೋಗದಂತೆ ಅವಳ ಸೊಂಟವನ್ನೆ ಮುರಿದು ಬಿಟ್ಟ.
ಅವಳು ಹೋಗದಿದ್ದರೇನು
?
ಅವಳನ್ನು ಭೆಟ್ಟಿಯಾಗಲು
, ಸಮಯಸಾಧಕರು ಮನೆಯ ಒಳಗೆ ಬರಬಹುದಲ್ಲವೆ?
ಅದುದರಿಂದ ಈ ಚಿಕ್ಕ ಹುಡುಗಿಯ ಎದುರಿಗೆ ಪಂಟು ಮಾತನ್ನಾಡಿ(=
bogus talk) ಇವಳನ್ನು ಹಾದಿ ತಪ್ಪಿಸುವವರು ಬರದಂತೆ ಆತ ವ್ಯವಸ್ಥೆ ಮಾಡಿದ.
(ಅಂದರೆ ಕ್ಷುದ್ರಸಾಧನೆಗಳು ಸಿಗದಂತೆ ಮಾಡಿದ.)
ಅದರಂತೆ ಗಂಟುಗಳ್ಳರು ಮನೆಗೆ ಬರದಂತೆ ಮಾಡಿದ.
ಈ ಚಿಕ್ಕ ಹುಡುಗಿ ತನ್ನ ಸಾಧನೆಯ ಮೂಲಕ ಒಂದಿಷ್ಟು ದುಡ್ಡನ್ನು (=ಸಾಧನಾಫಲವನ್ನು) ಜತನ ಮಾಡಿ ಇಟ್ಟುಕೊಂಡಿದ್ದಾಳೆ.
ಇವಳಿಗೆ ಏನೇನೊ ಕೊಡಿಸುವ ಆಸೆ ಹುಟ್ಟಿಸಿ
, ಇವಳು ಕೂಡಿಸಿಟ್ಟುಕೊಂಡ ದುಡ್ಡನ್ನು ಹೊಡೆಯುವ ಗಂಟುಗಳ್ಳರು ದೂರವಿರುವಂತೆ ಆತ ವ್ಯವಸ್ಥೆ ಮಾಡಿದ.
ಈ ಪಂಟು ಮಾತಿನವರು ಹಾಗೂ ಗಂಟುಗಳ್ಳರು ಸಣ್ಣಪುಟ್ಟ ಕಳ್ಳರು.
ಆದರೆ ೧೮ ಜನ ಕುಂಟಲಗಿತ್ತಿಯರು (ಅಂದರೆ ಗಿರಾಕಿಗಳನ್ನು ಹೊಂದಿಸಿಕೊಡುವ
pimp ಹೆಂಗಸರು) ಗಂಟು ಬಿದ್ದರೆ ಏನು ಮಾಡುವದು?

(ಟಿಪ್ಪಣಿ:
ಶ್ರೀಚಕ್ರಕ್ಕೆ ೯ ಆವರಣಗಳಿವೆ. ಮೊದಲನೆಯ ಆವರಣದಲ್ಲಿ ಅಂದರೆ ಭೂಪುರದಲ್ಲಿ ಅಣಿಮಾ
, ಲಘಿಮಾ ಮೊದಲಾದ ೧೮ ಸಿದ್ಧಿಗಳು ಇರುತ್ತವೆ. ಈ ಚಕ್ರದಲ್ಲಿ ಸಿದ್ಧಿ ಪಡೆದವನಿಗೆ ಅಣಿಮಾ ಅಂದರೆ ಅತಿ ಸೂಕ್ಷ್ಮವಾಗುವ, ಲಘಿಮಾ ಅಂದರೆ ಭಾರವಿಲ್ಲದಂತಾಗುವ ಮೊದಲಾದ ಸಿದ್ಧಿಗಳು ಸಾಧಿಸುತ್ತವೆ.
ಈ ಸಿದ್ಧಿಗಳಲ್ಲಿಯೇ ಮೋಜು ಅನುಭವಿಸುತ್ತ ಕುಳಿತರೆ
, ಮುಂದಿನ ಸಾಧನೆಗೆ ವ್ಯತ್ಯಯವಾಗುವದು.
ಈ ಸಿದ್ಧಿಗಳನ್ನು ಶರೀಫರು ಕುಂಟಲಗಿತ್ತಿಯರು ಎಂದು ಕರೆಯುತ್ತಾರೆ.
ಈ ಸಿದ್ಧಿಗಳು ಸಾಧಕನ ಮನಸ್ಸನ್ನು ಪರಮಾತ್ಮನಿಂದ ಬೇರೆಡೆಗೆ ಸೆಳೆಯುವವು.)

ಆದುದರಿಂದ ಈ ಸಿದ್ಧಿಗಳು ಶರೀಫರಿಗೆ ಲಭಿಸದಂತೆ ಮಾಡಿ
, ಪರಮಾತ್ಮನು ತನ್ನ ಚಿಕ್ಕ ಪತ್ನಿಯಾದ ಶರೀಫರನ್ನು ರಕ್ಷಿಸಿದ.
ಅದಕ್ಕಾಗಿಯೇ ಶರೀಫರು “ಎನ್ನ ಕರವ ಪಿಡಿದಾ” ಎಂದು ಪ್ರೀತಿಯಿಂದ ಪರಮಾತ್ಮನನ್ನು ನೆನಸುತ್ತಾರೆ.
ಆತ ಇವಳ ಕರ ಪಿಡಿದದ್ದು ಇವಳಿಗೆ ಅವಲಂಬನ ಕೊಟ್ಟು ಇವಳನ್ನು ಮುನ್ನಡೆಸಲಿಕ್ಕಾಗಿ.

ಈ ಎಲ್ಲ ಸಿದ್ಧಿಗಳು ಸ್ವತಃ ಕುಂಟ ಹಾಗೂ ಕುರುಡರಿದ್ದಂತೆ.
ಅವು ಸಾಧಕನನ್ನು ಸಾಧನೆಯ ಮಾರ್ಗದಲ್ಲಿ ನಡೆಸಲಾರವು.
ಆದುದರಿಂದ ಈ ಸಿದ್ಧಿಗಳಿಗೆ ಆತ ಗಂಟಲಗಾಣನಾದ.
ಅಂದ ಮೇಲೆ
, ಶರೀಫರಿಗೆ ತನ್ನ ಗಂಡನ ಮೇಲೆ ಅಭಿಮಾನಪೂರ್ವಕ ಪ್ರೇಮ ಉಕ್ಕದಿದ್ದೀತೆ?
ಆ ಸಂತೋಷ ಭಾವದಲ್ಲಿಯೇ ಶರೀಫರು ಹಾಡುತ್ತಾರೆ:
“ತಕ್ಕವನೆ ಸಿಕ್ಕಾ
” !

ತವರು ಮನೆಯನ್ನು ಬಿಡಿಸಿ
, ಅತ್ತೆಯ ಮನೆಗೆ ಕರೆತಂದ ಈ ಗಂಡ ಈಗ ಅತ್ತೆಮಾವರ ಮನೆಯನ್ನೂ ಸಹ ಬಿಡಿಸುತ್ತಿದ್ದಾನೆ.

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ

ತವರುಮನೆಯೆಂದರೆ ವಿಷಯ ಸುಖಗಳ ಮನೆಯಾಯಿತು. ಈ ಅತ್ತೆಮಾವರ ಮನೆ ಯಾವುದು
?
ಸತ್ ಹಾಗೂ ಅಸತ್ ಇವು ದೇವರ ಎರಡು ಸೃಷ್ಟಿಗಳು. ಅಸತ್ ಅಂದರೆ
unreal. ಸತ್ ಅಂದರೆ real.
ಅಸತ್ ಅಥವಾ
unreal ಸೃಷ್ಟಿಯು ಕಾಲಮಿತಿಗೆ ಒಳಪಟ್ಟದ್ದು.

“ನಾನು ಕೆಲ ವರ್ಷಗಳ ಹಿಂದೆ ಚಿಕ್ಕ ಹುಡುಗನಾಗಿದ್ದೆ. ಆದರೆ ಈಗ ನಾನು ಚಿಕ್ಕ ಹುಡುಗನಲ್ಲ.”
ಆದುದರಿಂದ ನಾನು ಹುಡುಗ ಎನ್ನುವದು ಕಾಲಮಿತಿಗೆ ಒಳಪಟ್ಟ
reality.ನಾನು ಸತ್ತೂ ಹೋಗುವೆ.
ಆದುದರಿಂದ ಈ ದೇಹವು ಕಾಲಮಿತಿಗೆ ಒಳಪಟ್ಟ
reality. ಇದು ಅಸತ್ ಸೃಷ್ಟಿ.

ಆದರೆ ಆತ್ಮ ಎನ್ನುವದು ಯಾವಾಗಲೂ ಇರುವಂತಹದು.
ಆದುದರಿಂದ ಅದು ಸತ್ ಸೃಷ್ಟಿ.
ಆತ್ಮನಿಗೆ ಪುರುಷ ಎನ್ನುತ್ತಾರೆ.
(ಪುರುಷ ಅಂದರೆ ಗಂಡಸು ಅನ್ನುವ ಅರ್ಥ ಇಲ್ಲಿಲ್ಲ. ಪುರುಷ ಅಂದರೆ ಉಪಭೋಕ್ತಾ ಆತ್ಮ.)
ಪ್ರಕೃತಿ ಅಂದರೆ ಬದಲಾಗುತ್ತಿರುವ ಅಸತ್ ಸೃಷ್ಟಿ.
ಅಸತ್ ಸೃಷ್ಟಿಯು ಈ ಜೀವಿ ಇಳಿದು ಬಂದಿರುವ ತವರುಮನೆ.
ಅಲ್ಲಿಂದ ಈ ಜೀವಿ ದೈವಿ ಭಾವವೇ ನಿತ್ಯವಾಗಿರುವ ಸತ್ ಸೃಷ್ಟಿಗೆ ಪ್ರವೇಶಿಸುತ್ತದೆ.
ಈ ಸೃಷ್ಟಿಯು ಸತ್ ಸೃಷ್ಟಿಯೇ ಆಗಿರಲಿ
, ನಿತ್ಯ ಸೃಷ್ಟಿಯೇ ಆಗಿರಲಿ, ಆದರೆ ಇದೂ ಸಹ ಆತ್ಮನ ಕೊನೆಯ ನಿಲ್ದಾಣ ಅಲ್ಲ.
ಪರಮಾತ್ಮನೊಳಗೆ ಒಂದಾಗುವದೇ ಜೀವಾತ್ಮನ ಕೊನೆಯ ಗತಿ.
ಆದುದರಿಂದ ಆತ ಜೀವಾತ್ಮನ ಮೂರು ವಾಸನಾಶರೀರಗಳಾದ ಸ್ಥೂಲ
, ಸೂಕ್ಷ್ಮ ಹಾಗೂ ಕಾರಣ ಶರೀರಗಳನ್ನು ನಾಶ ಪಡಿಸುತ್ತಾನೆ. ಆ ಶರೀರಗಳ ಸಂಯೋಜಕರಾದ ಐದು ಕೋಶಗಳನ್ನು (ಅನ್ನಮಯ ಕೋಶ, ಪ್ರಾಣಮಯ ಕೋಶ, ಜ್ಞಾನಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶಗಳನ್ನು) ದೂರಪಡಿಸುತ್ತಾನೆ. ಬಳಿಕ ತನ್ನ ಭಕ್ತನನ್ನು ವಿದೇಹಿಯನ್ನಾಗಿ ಮಾಡಿ ತನ್ನ ಸಾನ್ನಿಧ್ಯಕ್ಕೆ ಕರೆದೊಯ್ಯುತ್ತಾನೆ.
ಅಲ್ಲಿ ದೇಹನಾಶವಾಗಿ ಕೇವಲ ಭಾವ ಮಾತ್ರ ಉಳಿದುಕೊಳ್ಳುತ್ತದೆ.
ಅದನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ
||

ಶಿವನು ಪ್ರಭೆಯ ಮೂಲ
; ಶಕ್ತಿಯೇ ಪ್ರಭೆ.
ಪರಮಾತ್ಮನು ಶರೀಫರನ್ನು ಈಗ ಸತ್ ಲೋಕದಿಂದ ಮೇಲಕ್ಕೆ ಎತ್ತಿ ಪ್ರಭಾಲೋಕದಲ್ಲಿ ಇರಿಸುತ್ತಾನೆ.
ಈ ಲೋಕದಲ್ಲಿ ಪರಮಾತ್ಮನು ಶರೀಫರಿಗೆ ‘ಎನಗೊತ್ತಿನವನು
’.
‘ಎನಗೊತ್ತಿನವನು’ ಎನ್ನುವ ಪದ ಅತ್ಯಂತ ಅನ್ಯೋನ್ಯತೆಯನ್ನು ಹಾಗು ವಿಶ್ವಾಸವನ್ನು ಸೂಚಿಸುವ ಪದ.
ಈ ಪದವು ಎನಗೆ ಗೊತ್ತಿನವನು ಹಾಗೂ ಎನಗೆ ಒತ್ತಿನವನು ಎನ್ನುವ ಎರಡೂ ಅರ್ಥಗಳನ್ನು ಸೂಚಿಸುತ್ತದೆ. ಎನಗೆ ಗೊತ್ತಿನವನು ಅಂದರೆ ನಾನು ಅವನನ್ನು ಸಂಪೂರ್ಣವಾಗಿ ಬಲ್ಲೆ ಎಂದು ಹೇಳಿದಂತೆ. ಎನಗೆ ಒತ್ತಿನವನು ಎಂದರೆ ನನಗೆ ಅತ್ಯಂತ ಹತ್ತಿರವಾದವನು ಎಂದು ಹೇಳಿದಂತೆ.

ಈ ಪ್ರಭಾಲೋಕದಲ್ಲಿ ಶರೀಫರ ಮನಸ್ಸು ಬೇರೆಲ್ಲೂ ಹೋಗದು
; ಪರಮಾತ್ಮನನ್ನು ಒಂದು ಗಳಿಗೆ ಸಹ ಅಗಲಿ ಇರದು. ಪರಮಾತ್ಮನು ಶರೀಫರನ್ನು ತನ್ನ ಸಾನ್ನಿಧ್ಯದಲ್ಲಿಯೆ (=ಗೊತ್ತಿನಲ್ಲಿಯೆ) ಇಟ್ಟುಕೊಂಡು, ಅವರಿಗೆ ಮುತ್ತಿನ ಮೂಗುತಿಯ ಕೊಟ್ಟನು. ಅಂದರೆ ಶರೀಫರು ಈಗ ಪರಮ ಪತಿವ್ರತೆ ಎಂದು ಹೇಳಿದಂತಾಯಿತು.ತನ್ನನ್ನು ಇಷ್ಟೆಲ್ಲ ತಿದ್ದಿ ಇಂತಹ ಪತಿವ್ರತೆ ಹೆಂಡತಿಯನ್ನಾಗಿ ಮಾಡಿಕೊಂಡ ಪರಮಾತ್ಮನನ್ನು ಶರೀಫರು ‘ಅವನೇನು ದಿಟ್ಟನೇ’ ಎಂದು ಬಣ್ಣಿಸುತ್ತಾರೆ

ಶರೀಫರು ಈ ಪದವಿಯನ್ನು ಪಡೆಯುವ ಯೋಗ್ಯತೆಯುಳ್ಳ ಇತರ ಭಕ್ತರನ್ನು
, ತನ್ನ ಸಖಿಯರೆಂದು ಗ್ರಹಿಸಿ ಹೀಗೆ
ಹೇಳುತ್ತಾರೆ:

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ
||

ತಮ್ಮ ಈ ಸಿದ್ಧಿಗೆ ತಮ್ಮ ಪೂರ್ವಪುಣ್ಯವು ಎಷ್ಟು ಕಾರಣವೋ
, ಪರಮಾತ್ಮನ ಕರುಣೆಯೂ ಅಷ್ಟೇ ಕಾರಣವೆಂದು
ಶರೀಫರು ಹೇಳುತ್ತಾರೆ.
ಪರಮಾತ್ಮ ಬೇರೆ ಅಲ್ಲ
, ಸದ್ಗುರು ಬೇರೆ ಅಲ್ಲ.
ಆತ ಕಾಲ ಕೂಡಿದಾಗ
, ಭಕ್ತನನ್ನು ತಾನಾಗಿಯೇ ಏಕಾಂತ ಮಂದಿರದಲ್ಲಿ ಕರೆದೊಯ್ದು (---ಗುರುವು ಉಪದೇಶವನ್ನು ಏಕಾಂತದಲ್ಲಿ ಕೊಡುತ್ತಾನೆ---) ಸದ್ಗತಿಗೆ ಹಚ್ಚುತ್ತಾನೆ.
ಅದರಿಂದಾಗಿ ಭಕ್ತನ ಭ್ರಾಂತಿ ಹಾಗೂ ಈ ಜಗದ ದುರಿತ ಪರಿಹಾರವಾಗುತ್ತವೆ.
ಸದ್ಗತಿಯನ್ನು ಹೇಗೆ ಪಡೆದೇನು ಎನ್ನುವ ಭಕ್ತನ ಚಿಂತೆ ಮಾಯವಾಗುತ್ತದೆ.
…………………………………………………………………………………
ಕನ್ನಡ ನಾಡಿನಲ್ಲಿ ಓಡಾಡಿ
, ಹಳ್ಳಿಯ ಕನ್ನಡದಲ್ಲಿಯೆ ಮಹತ್ತತ್ವ ಸಾರಿದ ಶರೀಫರ ಬೋಧನೆ ನಮ್ಮನ್ನೂ ಸದ್ಗತಿಗೆ ಹಚ್ಚಲಿ.

(ಟಿಪ್ಪಣಿ:
ಖ್ಯಾತ ಓಡಿಸ್ಸಿ ನರ್ತನ ವಿದುಷಿಯಾದ ಸಂಯುಕ್ತಾ ಪಾಣಿಗ್ರಾಹಿಯವರು ಬೆಂಗಳೂರಿನಲ್ಲಿ ಕೇಳಿದ ಒಂದು ಪ್ರಶ್ನೆಯನ್ನು ಇಲ್ಲಿ ಉದ್ಧರಿಸುವದು ಅಪ್ರಸ್ತುತವಾಗಲಾರದು:
“ ಎಲ್ಲಾ ಕಲೆಗಳಲ್ಲಿ ಪರಮಾತ್ಮನನ್ನು ಪತಿಗೆ ಹಾಗೂ ಭಕ್ತನನ್ನು ಸತಿಗೆ ಏಕೆ ಹೋಲಿಸುತ್ತಾರೆ
; ಪರಮಾತ್ಮನನ್ನು ಪತ್ನಿಗೆ ಹಾಗೂ ಭಕ್ತನನ್ನು ಪತಿಗೆ ಏಕೆ ಹೋಲಿಸಬಾರದು? ”

ಇದಕ್ಕೆ ಉತ್ತರ ಸ್ಪಷ್ಟವಿದೆ:
ದುರ್ದೈವದಿಂದ ನಮ್ಮದು ಪುರುಷ ಪ್ರಧಾನ ಸಮಾಜ ಹಾಗೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆ.
ಇಂತಹ ಸಮಾಜವ್ಯವಸ್ಥೆಯಲ್ಲಿ
, ಗಂಡಸಿನದು super ordinate ಸ್ಥಾನ ಹಾಗೂ ಹೆಣ್ಣಿನದು
sub ordinate ಸ್ಥಾನ.
ಸಂಸ್ಕೃತದಲ್ಲಿ ಪತ್ನಿಗೆ ‘ಭಾರ್ಯಾ’ ಹಾಗೂ ಪತಿಗೆ ‘ಭರ್ತಾ’ ಎನ್ನುವ ಪದಗಳಿರುವದನ್ನು ಗಮನಿಸಿರಿ.
‘ಭಾರ’ ಅಂದರೆ
load, ಒಜ್ಜೆ.
ಭರ್ತಾ ಅಂದರೆ ಒಜ್ಜೆ ಹೊರುವವನು. ಭಾರ್ಯಾ ಅಂದರೆ ಹೊರಬೇಕಾದ ಒಜ್ಜೆ.
ಸುಮಾರು ಎರಡು ಶತಮಾನಗಳ ಹಿಂದಿನ ಇಂತಹ ಒಂದು ಸಾಂಪ್ರದಾಯಕ ಸಮಾಜದಲ್ಲಿ ಬಾಳಿದ ಸಂತರು
, ಆ ಸಮಾಜದ ಗುಣ,ಲಕ್ಷಣಗಳನ್ನು ಅಳವಡಿಸಿಕೊಂಡಿರುವ ಕವಿಗಳು, ಭಗವಂತನನ್ನು ಭರ್ತಾ(=ಪಾಲಕ) ಎಂದು ತಿಳಿದವರು, ತಮ್ಮನ್ನು ಭಾರ್ಯಾ ಎಂದೇ ಭಾವಿಸಬೇಕಲ್ಲವೆ?

ಭಾರತದಲ್ಲಿ ಮಾತ್ರ ಇಂತಹ
conservative society ಇತ್ತು ಎಂದೇನಲ್ಲ.
ಸುಮಾರು ನೂರು ವರ್ಷಗಳ ಹಿಂದಿನ ಇಂಗ್ಲಿಶ್ ಲೇಖಕಿಯರನ್ನೇ ಗಮನಿಸಿರಿ.
ಅವರೆಲ್ಲರೂ
male supremacyಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡವರೇ!
ಉದಾಹರಣೆಗೆ ಹೇಳಬೇಕೆಂದರೆ ಸುಪ್ರಸಿದ್ಧ ಇಂಗ್ಲಿಶ್ ಲೇಖಕಿಯಾದ
Daphne du Maurier.
ಇವಳು ಬರೆದ
Frenchman’s Creek ಕಾದಂಬರಿಯು ಈ ಧೋರಣೆಯ ಜ್ವಲಂತ ಉದಾಹರಣೆಯಾಗಿದೆ.

ಇಂತಹ ಒಂದು ಪರಿಸ್ಥಿತಿಗೆ ಕಾರಣವೇನು
?
ಗಂಡಸು ಹೆಂಗಸಿಗೆ ಯಾವತ್ತು ಬಳೆ(=ಬೇಡಿ) ತೊಡಿಸಿದನೊ
, ಆ ದಿನದಿಂದ ಹೆಂಗಸರ social conditioning ಪ್ರಾರಂಭವಾಯಿತು.
ಸೆರೆಯಾಳುಗಳು ತಮ್ಮನ್ನು ಸೆರೆ ಹಿಡಿದವರನ್ನೇ ಆರಾಧಿಸುವ
Stockholm Complexಗೆ ಹೆಂಗಸರು ಬಲಿಯಾದರು.

ಈ ಲಕ್ಷಣವನ್ನು ಮೈಗೂಡಿಸಿಕೊಂಡಂತಹ ಒಂದು ಕಾದಂಬರಿ:
Frenchman’s Creek;
ಈ ಸಾಮಾಜಿಕ ಲಕ್ಷಣವನ್ನು ಪ್ರದರ್ಶಿಸುವಂತಹ ಆಧ್ಯಾತ್ಮಿಕ ಕವನ: ಎಲ್ಲರಂಥವನಲ್ಲ ನನ ಗಂಡ.

೧೮. ತರವಲ್ಲ ತಗಿ ನಿನ್ನ ತಂಬೂರಿ. 
ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ
||ಪಲ್ಲ||

ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ
||ಅ.ಪ.||

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ
||||

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ
||||

ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ
||||

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ
||||

ಕನ್ನಡ ಕವಿಗಳು ಸುಸಂಯೋಜಿತ
, ಸಮರಸಪೂರ್ಣ ಬದುಕನ್ನು ವರ್ಣಿಸಲು ತಂಬೂರಿಯ ಪ್ರತಿಮೆಯನ್ನು ಬಳಸುತ್ತಲೇ ಬಂದಿದ್ದಾರೆ.
ಶರೀಫರು ತಂಬೂರಿಯ ಪ್ರತಿಮೆಯನ್ನು ಸಾಧಕನ ಮನಸ್ಸಿಗೆ ಹೋಲಿಸಿ ಹಾಡಿದ್ದಾರೆ.

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ
||ಪಲ್ಲ||
ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ
||ಅ.ಪ.||

ದೇವರನ್ನು ಮನಸ್ಸಿನಲ್ಲಿ ತುಂಬಿಕೊಂಡು
, ತನ್ನ ಬಾಳನ್ನು ದೇವರಿಗೆ ಅರ್ಪಿಸಿ ಬದುಕುವದೇ ನಿಜವಾದ ಸಾಧನೆ.
ಈ ರೀತಿಯಾಗಿ ಮಾಡಲು ಅರಿಯದವನು
, ದೇವರು ಕೊಟ್ಟ ತಂಬೂರಿಯನ್ನು ಸರಿಯಾಗಿ, ಸುಸ್ವರದಲ್ಲಿ ಬಾರಿಸುತ್ತಿಲ್ಲ; ಆತನಿಗೆ ಸರಸ ಸಂಗೀತದ ಕುರುಹೇ ಗೊತ್ತಿಲ್ಲ! ಅವನು ತನ್ನ ಮನಸ್ಸೆಂಬ ತಂಬೂರಿಯನ್ನು ಅಪಸ್ವರದಲ್ಲಿ ಬಾರಿಸುತ್ತಾನೆ. ಅಂಥವನು ಸಾಧನೆಯಿಂದ ತನ್ನ ಮನಸ್ಸು ಪಕ್ವವಾಗುವ ತನಕ ಕಾಯಬೇಕು.

ಚಾಮರಸ ಕವಿ ಬರೆದ “ಪ್ರಭುಲಿಂಗ ಲೀಲೆ”ಯಿಂದ ತುಂಬಾ ಪ್ರಭಾವಿತರಾದ ಶರೀಫರು ತಮ್ಮ ಕವನಗಳಲ್ಲಿ ಮದ್ದಲೆಯ ಪ್ರತಿಮೆಯನ್ನು ಬಳಸಿದಾಗೆಲ್ಲ
, ಆ ಮದ್ದಲೆಯನ್ನು ಬಾರಿಸುವವನು ಸ್ವತಃ ಪ್ರಭುವೇ ಎನ್ನುವ ಭಾವವನ್ನು ತಾಳಿರುತ್ತಾರೆ. ಆ ಕಾರಣದಿಂದಲೇ ಅವರು,
“ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ”
ಎಂದು ಹೇಳುವಾಗ
, ಸ್ವತಃ ಭಗವಂತನೇ, ಈ ಬಾಳಿನ ಯೋಜನೆಯನ್ನು ರೂಪಿಸಿದವನು;ಆತ ಬಾರಿಸುತ್ತಿರುವ ಮದ್ದಲೆಗೆ ತಕ್ಕಂತೆ ನಾವು ತಂಬೂರಿಯನ್ನು ನುಡಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.
“ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ”
ಈ ರೀತಿಯಾಗಿ ಸಾಧಕನು ತನ್ನ ಮನಸ್ಸಿನ ತಂಬೂರಿಯನ್ನು ದೇವನ ಮದ್ದಲೆಗೆ ಹೊಂದಿಸಿಕೊಂಡರೆ
, ಆತ ಸಿದ್ಧ ಸಾಧಕನಾಗುತ್ತಾನೆ, ಬುದ್ಧಿವಂತನಾಗುತ್ತಾನೆ.

ಶರೀಫರು ಶಾಕ್ತ ಪಂಥದ ಸಾಧಕರು. ಈ ಪಂಥದಲ್ಲಿ “ವಿದ್ಯೆ” ಎಂದರೆ ಶಾಕ್ತವಿದ್ಯೆ.
ಈ ವಿದ್ಯೆಯನ್ನು ಸಾಧಿಸಿದವನಿಗೆ ಅನೇಕ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುವವು.
ಇಂತಹ ಸಿದ್ಧಿಗಳು ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗ ಸ್ವಾಮಿಗಳಿಗೆ
, ಗರಗದ ಮಡಿವಾಳಪ್ಪನವರಿಗೆ ಪ್ರಾಪ್ತವಾಗಿದ್ದವು.
ಶರೀಫರಿಗೆ ಬಹುಶಃ ಇಂತಹ ಸಿದ್ಧಿಗಳು ದೊರೆತಿರಲಿಕ್ಕಿಲ್ಲ. ಅವರ ಕವನ ಒಂದರಲ್ಲಿ ಇದರ ಸೂಚನೆ ದೊರೆಯುತ್ತದೆ:

“ಎಲ್ಲರಂಥವನಲ್ಲ ನನಗಂಡಾ
ಬಲ್ಲಿದನು ಪುಂಡಾ
.........
…………………..
ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ”

ಆದುದರಿಂದ ಬುದ್ಧಿವಂತನಾದವನು
, ಈ ಸಿದ್ಧಿಗಳನ್ನು ಮೋಜಿಗಾಗಿ ಅಥವಾ ಸ್ವಾರ್ಥಕ್ಕಾಗಿ ಬಳಸದೆ, ಆತ್ಮೋನ್ನತಿಗಾಗಿ ಬಳಸಬೇಕು.

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ

ಈ ತಂಬೂರಿಯು ಬಾಳಾಕ್ಷದೇವನು ನಿರ್ಮಿಸಿದ ತಂಬೂರಿ. ಶರೀಫರು ಇಲ್ಲಿ
pun ಉಪಯೋಗಿಸಿದ್ದಾರೆ. ಬಾಳಾಕ್ಷ ಅಂದರೆ ಭಾಲಾಕ್ಷ, ಅಂದರೆ ಶಿವ. ಇದು ನೇರವಾದ ಅರ್ಥ. ಒಳಗೆ ಹುದುಗಿದ ಅರ್ಥವೆಂದರೆ, ಬಾಳಿಗೆ ಅಕ್ಷನಾದ ಅಂದರೆ ಕಣ್ಣಾದ ದೇವನು. ಇದರ ಹಂಚಿಕೆಯನ್ನು ಅಂದರೆ ರಚನೆಯ ವಿಧಾನವನ್ನು, ಚಾತುರ್ಯವನ್ನು ತಿಳಿಯದೇ ಬಾರಿಸಲು ಹೊರಟವನು ತಾಳಗೇಡಿಯಾಗುತ್ತಾನೆ.

ಈ ಬಾಳು ದೇವನ ದೇಣಿಗೆ ಎನ್ನುವದನ್ನು ಅರಿತುಕೊಂಡು
, ದೇವರು ನೀಡಿದ ಬುದ್ಧಿಶಕ್ತಿ, ಶ್ರದ್ಧೆ, ಭಕ್ತಿ ಇವುಗಳನ್ನು ಸಮರಸಗೊಳಿಸಿ, ಯಾವುದಕ್ಕೂ ಆಸೆಪಡದೆ ಬಾಳಿದರೆ, ಅದು ಸಮಂಜಸವಾದ ಬಾಳು.
ಇಂತಹ ಬಾಳಿನಲ್ಲಿ ಮಾತ್ರ ಬಾಳಾಕ್ಷ ಕೊಟ್ಟ ತಂಬೂರಿಯ ಸುನಾದ ಹೊರಡಲು ಸಾಧ್ಯ.

ಇಂತಹ ತಂಬೂರಿಯನ್ನು ಸತ್ಯವಂತರಿಗಲ್ಲದೆ ಬೇರೊಬ್ಬರಿಗೆ ನುಡಿಸಲು ಸಾಧ್ಯವಾದೀತೆ
?
ಆದುದರಿಂದ ಉತ್ತಮರಿಗೆ ಮಾತ್ರ ಸರಿಯಾಗಿ ನುಡಿಸಲು ಸಾಧ್ಯವಾಗುವ ತಂಬೂರಿ ಇದು.

“ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ”

ಬತ್ತೀಸ ರಾಗಗಳು ಅಂದರೆ ಶಾಸ್ತ್ರೀಯ ಸಂಗೀತದ ಮೂವತ್ತೆರಡು ಮೂಲರಾಗಗಳು.
ಈ ಎಲ್ಲ ರಾಗಗಳಲ್ಲಿ ಬಾರಿಸಲು ಪ್ರಯತ್ನಿಸಿದರೂ
, ರಾಗದ ಬಗೆಯನ್ನು (=ಮನಸ್ಸು, ಲಕ್ಷಣ) ತಿಳಿಯದೆ, ಬಾರಿಸುವವನು ಕತ್ತೆ ಇದ್ದಂತೆ.

ಈ ತಂಬೂರಿಯು ಅಸಮ(=
unequalled, matchless) ಸುಮೇಳದಲ್ಲಿ (=orchestra, harmony) ನುಡಿಸಬೇಕಾದ ತಂಬೂರಿ.
ಇದನ್ನು ಕುಶಲರೇ ನುಡಿಸಬಲ್ಲರು.
ಆ ಕೌಶಲ್ಯವನ್ನು ಪಡೆಯುವ ಬಗೆ ಹೇಗೆ
?
ಶಿಶುನಾಳಧೀಶನಾದ ದೇವನಲ್ಲಿ ಮನಸ್ಸಿಟ್ಟು
, ಅವನನ್ನೇ ಓದಿ, ಅವನನ್ನೇ ಅರಿತು, ಬಾಳನ್ನು ಹಸನಾದ(=clean) ರೀತಿಯಲ್ಲಿ ಬಾಳಿದರೆ, ಈ ತಂಬೂರಿ ಆ ಸಾಧಕನಿಗೆ ಕರಗತವಾಗುವದು.

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ

(ಶರೀಫರು ಅಸಮ ಸುಮೇಳ ಎನ್ನುವಾಗ
, ಒಂದು apparent ವಿರೋಧಾರ್ಥ ಬಳಸಿದ್ದಾರೆ:
ಅಸಮ ಸುಮೇಳ=
Disharmonius orchestra)

ಹುಟ್ಟುತ್ತಲೆ
, ಪ್ರತಿ ಜೀವಿಯೂ ಅಪಾರ ಸಾಧನೆ ಮಾಡಬಲ್ಲ ಮನಸ್ಸನ್ನು ದೇವರಿಂದ ಪಡೆಯುತ್ತಾನೆ.
ಅದು ದೇವರು ಆತನಿಗೆ ಕೊಟ್ಟ ತಂಬೂರಿ.
ಅದರಂತೆ ಈ ಬಾಳೂ ಸಹ ತಂಬೂರಿಯೆ.
ಬಾಳಿನ ಪ್ರತಿ ಕರ್ಮವೂ ಈ ತಂಬೂರಿಯನ್ನು ನುಡಿಸಿದಂತೆ.
ಬಾಳಿನಲ್ಲಿ ದೊರೆಯಬಹುದಾದ ಸಾಮರ್ಥ್ಯಗಳು ಹಾಗೂ ಸಿದ್ಧಿಗಳು ಈ ತಂಬೂರಿಯ ಭಾಗಗಳೇ.
ಇವೆಲ್ಲವನ್ನು ಸರಿಯಾಗಿ ಬಳಸಿ
, ಪ್ರಭುವಿನ ಮದ್ದಲೆಗೆ ಸರಿಯಾಗಿ ತಂಬೂರಿ ನುಡಿಸಿದರೆ, ಸುಸ್ವರ ಹೊರಡುವದು.
ಈ ಸುಸ್ವರದಿಂದ ಮಹದಾನಂದ ದೊರೆಯುವದು.

ಅದರ ಬದಲಾಗಿ ತನ್ನ ಸಾಮರ್ಥ್ಯವನ್ನು ದುರುಪಯೋಗಿಸಿಕೊಂಡರೆ
, ತಂಬೂರಿಯಲ್ಲಿ ಅಪಶ್ರುತಿ ಹೊರಡುವದು.
ಇದೇ ಶರೀಫರ ಸಂದೇಶ.


೧೯. ಚೋಳ ಕಡಿತು, ನನಗೊಂದು ಚೋಳ ಕಡಿತು.
‘ಚೋಳ ಕಡಿತು, ನನಗೊಂದು ಚೋಳ ಕಡಿತು’ – ಇದು ಶರೀಫರು ರಚಿಸಿದ ಗೀತೆ.
ಸಾಮಾನ್ಯವಾಗಿ ಕುಂಡಲಿನಿ ಶಕ್ತಿಯನ್ನು ಅಂದರೆ ಮನುಷ್ಯನಲ್ಲಿ ನಿಹಿತವಾದ ದೈವಿ ಶಕ್ತಿಯನ್ನು ಸರ್ಪರೂಪವಾಗಿ ಕಲ್ಪಿಸುತ್ತಾರೆ. ಈ ಕವನದಲ್ಲಿ ಶರೀಫರು ತಮ್ಮ ಬದುಕನ್ನು ಬದಲಾಯಿಸಿದ ಘಟನೆಯನ್ನು
, ಅದಕ್ಕೆ ಕಾರಣವಾದ ಶಕ್ತಿಯನ್ನು ಚೋಳಿನ ರೂಪದಲ್ಲಿ ಬಣ್ಣಿಸಿದ್ದಾರೆ. ಶರೀಫರ ಗೀತೆಯ ಪೂರ್ಣಪಾಠ ಹೀಗಿದೆ:

ಚೋಳ ಕಡಿತು ನನಗೊಂದು ಚೋಳ ಕಡಿತು
ಕಾಳಕತ್ತಲದೊಳಗೆ ಕೂತಿತ್ತು
, ನನಕಂಡ ಬಂತು ||ಪಲ್ಲ||

ಎಷ್ಟು ದಿನದ ಸಿಟ್ಟು ಇಟ್ಟಿತ್ತು
, ತೀರಿಸಿ ಬಿಟ್ಟಿತು
ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು
ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು
||||

ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು
||||

ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು
, ಹುಚ್ಚು ಹಿಡಿದಂಗಾತು ||||

ಆಧ್ಯಾತ್ಮಪಥದಲ್ಲಿ ಸಾಗಿದವರ ಜೀವನದಲ್ಲಿ ನಡೆಯುವ ಒಂದೆರಡು ಘಟನೆಗಳಿಂದಾಗಿ ಅವರ ಜೀವನವೇ ಬದಲಾಗಿ ಬಿಡುತ್ತದೆ. ಇಂತಹ ಸಂದರ್ಭವನ್ನು ಅನೇಕ ಸಾಧಕರು ಕಾವ್ಯದ ಮೂಲಕ ವರ್ಣಿಸಿದ್ದೂ ಉಂಟು.
ತಮ್ಮ ಬದುಕಿನಲ್ಲಿಯ ಇಂತಹ ಘಟನೆಯೊಂದನ್ನು ಶರೀಫರು “ಚೋಳ ಕಡಿತು ನನಗೊಂದು ಚೋಳ ಕಡಿತು
”.
ಎನ್ನುವ ಚಿಕ್ಕ ಗೀತೆಯಲ್ಲಿ ಬಣ್ಣಿಸಿದ್ದಾರೆ.

ಯಾವ ಜೀವಿಗೂ ತನ್ನ ಮುಂದಿನ ಕ್ಷಣದ ಭವಿಷ್ಯದ ಅರಿವಿರುವದಿಲ್ಲ. ಭವಿಷ್ಯವೆಂದರೆ ಕಪ್ಪುಕತ್ತಲೆಯೇ ಸೈ. ಇಂತಹ ಕಪ್ಪು ಕತ್ತಲೆಯಲ್ಲಿ ತನ್ನ ಬಲಿಯನ್ನು ಜಪ್ಪಿಸಿಕೊಂಡು ಈ ಚೋಳು ಕೂತಿರುತ್ತದೆ. ಬಲಿಗೆ ಚೋಳು ಕಾಣಲಿಕ್ಕಿಲ್ಲ. ಆದರೆ ಚೋಳಿಗೆ ಬಲಿಯು ಸುಸ್ಪಷ್ಟ.
ಆದುದರಿಂದ ಇದನ್ನು “ಕಾಳಕತ್ತಲದೊಳಗೆ ಕೂತಿತ್ತು
, ನನಕಂಡ ಬಂತು” ಎಂದು ಶರೀಫರು ಬಣ್ಣಿಸುತ್ತಾರೆ.

ಈ ಚೋಳು ಅಕಸ್ಮಾತ್ತಾಗಿ ಶರೀಫರನ್ನು ಕಂಡದ್ದಲ್ಲ. ಅದು ಎಷ್ಟೋ ದಿನದಿಂದ ಇವರ ಮೇಲೆ ಸಿಟ್ಟು ಇಟ್ಟುಕೊಂಡು ಕಾಯುತ್ತ ಕೂತಿದೆ. ಆದುದರಿಂದಲೇ ಚೋಳು ಕಚ್ಚಿಸಿಕೊಂಡ ಬಳಿಕ ಶರೀಫರು ವಿಸ್ಮಯಗೊಳ್ಳುತ್ತಾರೆ. “ಎಷ್ಟು ದಿನದ ಸಿಟ್ಟು ಇಟ್ಟಿತ್ತು
, ಈಗ ತೀರಿಸಿ ಬಿಟ್ಟಿತು”, ಎನ್ನುತ್ತಾರೆ.
ಈ ಚೋಳಿಗೆ ಶರೀಫರ ಮೇಲೆ ದೀರ್ಘಕಾಲದ ಸಿಟ್ಟು ಯಾಕೆ ಎನ್ನುವ ಪ್ರಶ್ನೆ ಬರುತ್ತದೆ.
 
ಶರೀಫರ ಜನ್ಮಾಂತರಗಳ ಕರ್ಮಫಲವೇ ಈ ಚೋಳು. ಆದುದರಿಂದ ಅದರ ಸಿಟ್ಟು ಎಷ್ಟೋ ಜನ್ಮಗಳ ಸಿಟ್ಟು. ಈ ಚೋಳು ಕಡಿದ ಸಂಗತಿಯನ್ನು ಅಥವಾ ಅದರ ನೋವನ್ನು ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ
, ಕರ್ಮಫಲವನ್ನು ಬದಲಿಸಲು ಯಾರೂ ತಮಗೆ ಸಹಾಯ ಮಾಡಲಾರರು ಎನ್ನುವದು ಶರೀಫರ ಮನಸ್ಸಿಗೆ ಅನುಭವವಾಗುತ್ತದೆ. ಅದಕ್ಕೇ ಸ್ವಗತದಲ್ಲಿ ಎಂಬಂತೆ ಶರೀಫರು ನುಡಿಯುತ್ತಾರೆ: 
“ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು
”.

ಚೋಳಿನ ಕಡಿತದಷ್ಟು ಶರೀಫರ ಮನಸ್ಸಿಗೆ ಆಘಾತ ಕೊಡುವ ಯಾವ ಘಟನೆ ನಡೆದಿರಬಹುದೆನ್ನುವ ಸೂಚನೆ ಮುಂದಿನ ಸಾಲಿನಲ್ಲಿ ಸಿಗುತ್ತದೆ:
“ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ”

ಶರೀಫರ ಮೊದಲ ಹಾಗೂ ಒಂದೇ ಸಂತತಿಯಾದ ಹೆಣ್ಣು ಕೂಸು
, ಅವರ ಹೆಂಡತಿಯ ತವರು ಮನೆಯಲ್ಲಿ ಜನಿಸಿ, ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತದೆ. ಇದೊಂದು ತೀವ್ರ ದುಃಖದ ಅನುಭವ. ಅದಕ್ಕೇ ‘ಇದರ ಕಷ್ಟ ಶಿವನೇ ಬಲ್ಲ’ ಎಂದು ಶರೀಫರು ದುಃಖದಿಂದ ಹೇಳುತ್ತಾರೆ. ಇದು ಎದೆಯಲ್ಲಿ ಮುಳ್ಳು ಚುಚ್ಚಿದಂತಹ ಅನುಭವವಾಗಿರಬೇಕು. ಆ ಸಮಯದಲ್ಲಿ ಅಧ್ಯಾತ್ಮದ ಕಡೆಗೆ ಹೆಚ್ಚೆಚ್ಚಾಗಿ ತಿರುಗಿದ ಶರೀಫರು ‘ಮಾಯವಾಗಿ ಹೋತು’ ಎಂದು ಹೇಳುತ್ತಾರೆ.

ಈ ‘ಮಾಯವಾಗಿ ಹೋತು’ ಎನ್ನುವ ವಾಕ್ಯ ಅನೇಕ ಅರ್ಥಗಳಿಂದ ಕೂಡಿದೆ. ಇದೀಗ ಹುಟ್ಟಿದ ಕೂಸು ಕೆಲವೇ ದಿನಗಳಲ್ಲಿ ಮಾಯವಾಗಿ ಹೋಯಿತು ಎನ್ನುವದು ಒಂದು ಅರ್ಥ. ಚುಚ್ಚಿದ ಮುಳ್ಳು ಮಾಯವಾಗಿ ಹೋಯಿತು ಎಂದು ತಿಳಿದರೆ ಸಂಸಾರದಲ್ಲಿ ಯಾವದೂ ಶಾಶ್ವತವಲ್ಲ
; ಸುಖ ಹಾಗೂ ದುಃಖಗಳು ಬರುತ್ತವೆ ಹಾಗೂ ಹೋಗುತ್ತವೆ ಎನ್ನುವದು ಮತ್ತೊಂದುಅರ್ಥ. ಸಂಸಾರದಲ್ಲಿ ಮುಳುಗಿದ ಶರೀಫರಿಗೆ ಕವಿದ ಮೋಹದ ಮಾಯೆ ಮಾಯವಾಗಿ ಹೋಯಿತು ಎನ್ನುವದು ಮೂರನೆಯ ಅರ್ಥ. 

ಇಂತಹ ದುಃಖದ ಅನುಭವದ ನಂತರ ಶರೀಫರು ಇದೀಗ ಕಣ್ಣು ತೆರೆದ ವ್ಯಕ್ತಿ. ಹೀಗಾಗಿ ಆ ಚೋಳನ್ನು ಕೇವಲ ಆಘಾತ ನೀಡುವ ಕರ್ಮಫಲವೆಂದು ತಿಳಿಯದೆ
, ಜ್ಞಾನದ ಬೆಳಕು ನೀಡುವ ಶಕ್ತಿಯೆಂದು ಅವರು ಭಾವಿಸುತ್ತಾರೆ. ಈ ಚೋಳು ಕೇವಲ ಕಷ್ಟ ಕೊಡುವ ಚೋಳಲ್ಲ, ಕಷ್ಟದ ಮೂಲಕ ಪರಮಜ್ಞಾನದ ಕಡೆಗೆ ಮನಸ್ಸನ್ನು ತಿರುಗಿಸುವ ಚೋಳು ಎನ್ನುವದು ಅವರಿಗೆ ಅರಿವಾಗುತ್ತದೆ. ಅದರ ನಿಜಸ್ವರೂಪ ಅವರಿಗೆ ಈಗ ನಿಚ್ಚಳವಾಗತೊಡಗಿದೆ. ಈ ಗೂಢಾರ್ಥ ಅವರ ಮುಂದಿನ ನುಡಿಗಳಲ್ಲಿ ಸ್ಪಷ್ಟವಾಗಿದೆ.

“ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು
” 

ಈ ಚೋಳು ಇರುವ ಮೂರು ದೇಹಗಳು ಅಂದರೆ ಸ್ಥೂಲ ಶರೀರ
, ಸೂಕ್ಷ್ಮ ಶರೀರ ಹಾಗೂ ಕಾರಣಶರೀರಗಳು. ಸ್ಥೂಲಶರೀರವೆಂದರೆ ಯಾವುದೇ ಒಂದು ಜನ್ಮದಲ್ಲಿ ನಮಗಿರುವ ದೇಹ. ಸೂಕ್ಷ್ಮಶರೀರವೆಂದರೆ ವಾಸನಾಶರೀರ. ಇದು ಸ್ಥೂಲಶರೀರವು ನಾಶವಾದ ನಂತರವೂ ಉಳಿದಿರುವ ವಾಸನೆಗಳ ಹಾಗೂ ಕರ್ಮಫಲಗಳ ಶರೀರ. ಕಾರಣಶರೀರವೆಂದರೆ ಆತ್ಮವು ದೇಹವನ್ನು ಧರಿಸಲು ಬೇಕಾಗುವ ಮೂಲ ಪ್ರೇರಣಾ ಶರೀರ. ಈ ಮೂರೂ ದೇಹಗಳಲ್ಲಿ ಈ ಚೋಳು ಇರುತ್ತದೆ ಎಂದು ಶರೀಫರು ಹೇಳುತ್ತಾರೆ. ಅಂದರೆ, ಈ ಚೋಳು ನಮಗೆ ಹೊರಗಿನದಲ್ಲ, ನಮ್ಮಲ್ಲೇ ಸದಾಕಾಲ ಇರುವಂಥಾದ್ದು. ನಮ್ಮನ್ನು ತಪ್ಪು ಮಾರ್ಗದಿಂದ ಬಿಡಿಸಿ ಸನ್ಮಾರ್ಗಕ್ಕೆ ಹಚ್ಚುವಂಥಾದ್ದು. ಈ ಚೋಳಿಗೆ ಇರುವ ಸ್ವಭಾವ ಯಾವುದು ಎಂದರೆ ‘ಪರಮಾತ್ಮನಾದದೊಳು ತಾನು ಬೆಳೆದಿತ್ತ’. 
ಯಾವಾಗಲೂ ಪರಮಾತ್ಮನನ್ನು ಚಿಂತಿಸುತ್ತ ಅದೇ ನಾದದಲ್ಲಿ
, ಅದೇ ಧ್ಯಾನದಲ್ಲಿ ಇರುವ ಜೀವಿ ಇದು. ಹಾಗಿದ್ದರೆ ಇದಕ್ಕೆ ನೋವು ಕೊಡುವ ಕೊಂಡಿ ಏಕೆ ಇದೆ ಎಂದು ಕೇಳಬಹುದು. ಮನುಷ್ಯನಿಗೆ ನೋವಿನ ಅನುಭವವಾಗದೇ ಅವನ ಮನಸ್ಸು ಪರಮಾರ್ಥದ ಕಡೆಗೆ ಹೊರಳದು. ಆದುದರಿಂದ ನಮ್ಮ ಒಳಗೇ ಇರುವ ಈ ಜ್ಞಾನಶಕ್ತಿಯು ಚೋಳಿನ ರೂಪ ಧರಿಸಿರುತ್ತದೆ. ಸಕಾಲದಲ್ಲಿ ನೋವಿನ ಕೊಂಡಿಯಿಂದ ಚುಚ್ಚಿ, ನಮ್ಮನ್ನು ಎಚ್ಚರಕ್ಕೆ ತರುತ್ತದೆ. ಸರಿಯಾದ ಸಮಯದಲ್ಲಿ ಇದು ಸಾರಿ ಬಂದು ಅಂದರೆ ಧಾವಿಸಿ ಬಂದು, ಶರೀಫರನ್ನು ನೋಡಿತು. ಆ ಚೋಳು ನೋಡಿದ್ದೇ ಒಂದು ಅನುಗ್ರಹ! ಆ ಚೋಳಿನಲ್ಲಿರುವ ಬೆಳಕು ಎಂತಹದಂದರೆ, ಮೂರು ಲೋಕಗಳನ್ನೂ ಬೆಳಗುವ ಬೆಳಕು ಅದು. ಮೂರು ಲೋಕಗಳೆಂದರೆ ಸ್ವರ್ಗ, ಮರ್ತ್ಯ ಹಾಗೂ ಪಾತಾಳ. ಆತ್ಮವು ತನ್ನ ವಿವಿಧ ಅವಸ್ಥೆಗಳಲ್ಲಿ ಈ ಲೋಕಗಳಲ್ಲಿ ವಾಸಿಸುತ್ತದೆ. ಯಾವುದೇ ಲೋಕದಲ್ಲಿರಲಿ, ಅಲ್ಲಿ ಈ ಎಚ್ಚರಿಕೆ ನೀಡುವ ಚೋಳು ಆತ್ಮವನ್ನು ದಿಟ್ಟಿಸುತ್ತಲೇ ಇರುತ್ತದೆ. ಹಾಗು ಈ ಮೂರೂ ಲೋಕಗಳ ಮೇಲಿರುವ ಉನ್ಮನಿ ಅವಸ್ಥೆಯಲ್ಲಿ ಈ ಚೋಳು ಹಾರಿ ಐಕ್ಯವಾಗುತ್ತದೆ. (ಉನ್ಮನಿ ಅವಸ್ಥೆ ಎಂದರೆ ಸಾಧನೆಯ ಒಂದು ಅವಸ್ಥೆ. ಈ ಅವಸ್ಥೆಯಲ್ಲಿ ಸಾಧಕನ ಪ್ರಜ್ಞೆಯು ಲೋಕಸಾಮಾನ್ಯ ಸ್ಥಿತಿಯಲ್ಲಿ ಇರುವದಿಲ್ಲ. ಹೀಗಾಗಿ ಆ ವ್ಯಕ್ತಿಯು ಜನರ ಕಣ್ಣಿಗೆ ಹುಚ್ಚನಂತೆ ಕಾಣಬಹುದು. ರಾಮಕೃಷ್ಣ ಪರಮಹಂಸರು ಈ ಅವಸ್ಥೆಯಲ್ಲಿ ಇದ್ದಾಗ ಹುಚ್ಚರಂತೆ ವರ್ತಿಸುತ್ತಿದ್ದರು ಎಂದು ಹೇಳಲಾಗುತ್ತದೆ.) 

ಈಗಿನ ಆಧುನಿಕ ಮನೆಗಳಲ್ಲಿ ಚೋಳು ಕಾಣಸಿಗುವದಿಲ್ಲ. ಆದರೆ ಮೊದಲು ಹಳ್ಳಿಗಳಲ್ಲಿ ಕಟ್ಟಿರುತ್ತಿದ್ದ ಮಣ್ಣಿನ ಮನೆಗಳಲ್ಲಿ ಇವು ಸಾಮಾನ್ಯವಾಗಿರುತ್ತಿದ್ದವು. ಮನೆಯ ಕೋಣೆಗಳ ಮೂಲೆಗಳಲ್ಲಿ ಇವು ಸಿಗುತ್ತಿದ್ದವು. ಶರೀಫರು ತಮ್ಮ ಈ ಚೋಳು ದೇವರ ಕೋಣೆಯ ಮೂಲೆಯೊಳಗಿತ್ತು ಎಂದು ಹೇಳುತ್ತಾರೆ. ಅಂದರೆ ಈ ಚೋಳನ್ನು ನೀವು ಕಾಣಬೇಕಾದರೆ ಅಥವಾ ಈ ಚೋಳಿನಿಂದ ಕಡಿಸಿಕೊಳ್ಳಬೇಕಾದರೆ
, ದೇವರ ಕೋಣೆಯೊಳಗೆ ನೀವು ಪ್ರವೇಶಿಸಬೇಕು ಅರ್ಥಾತ್ ನಿಮ್ಮ ಮನಸ್ಸು ಪರಮಾತ್ಮದ ಕಡೆಗೆ ತಿರುಗಬೇಕು! ದೇವರ ಮನೆ ಎಂದರೆ ಮನುಷ್ಯನ ಮನಸ್ಸು ಎಂದೂ ಅರ್ಥವಾಗಬಹುದು. ಅಲ್ಲಿ ಈ ಚೋಳು ಆಧಾರ ಹಿಡಿದು ಕೊಂಡಿಯನ್ನು ಮೇಲ್ಮುಖವಾಗಿ ಮಾಡಿಕೊಂಡಿತ್ತು. 
“ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು
, ಹುಚ್ಚು ಹಿಡಿದಂಗಾತು ”

ಶರೀಫರು ಈ ಸಾಲಿನಲ್ಲಿ ಯೋಗಸಾಧನೆಯ ಪರಿಭಾಷೆಯನ್ನು ಬಳಸುತ್ತಾರೆ. ಆಧಾರ ಎಂದರೆ ಮೂಲಾಧಾರ ಚಕ್ರ. ಅಲ್ಲಿ ಈ ಚೋಳು ಊರ್ಧ್ವಮುಖಿಯಾಗಿತ್ತು ಅಂದರೆ ಇದರ ಗಮನ ಮೂಲಾಧಾರದ ಮೇಲಿರುವ ಚಕ್ರಗಳತ್ತ ಇದೆ. (ಮೂಲಾಧಾರದ ಮೇಲಿನ ಚಕ್ರಗಳು ಹೀಗಿವೆ: ಸ್ವಾಧಿಸ್ಠಾನ
, ಮಣಿಪೂರ, ಅನಾಹತ, ವಿಶುದ್ಧಿ ಹಾಗೂ ಆಜ್ಞಾಚಕ್ರ.) ಸಾಧಕನನ್ನು ಮೇಲ್ಮುಖವಾಗಿ ಕರೆದೊಯ್ಯುವ ಶಕ್ತಿ ಇದು. ತನ್ನ ಸಮಯ ಬರುವವರೆಗೆ ಇದು ಸ್ಥೂಲದೇಹದಲ್ಲಿ ಅಂದರೆ ಜ್ಞಾನವಿಹೀನ ದೇಹದಲ್ಲಿ ನಿದ್ರಿಸುತ್ತಿರುತ್ತದೆ. (ಕುಂಡಲಿನಿ ಶಕ್ತಿಯು ಮೂಲಾಧಾರದಲ್ಲಿ ಸರ್ಪರೂಪದಲ್ಲಿ ಮಲಗಿರುತ್ತದೆ ಎನ್ನುವದು ಯೋಗಶಾಸ್ತ್ರದ ಪರಿಭಾಷೆ.) ಹಾಗೂ ಕಲಿಕರ್ಮವನ್ನು ಅಂದರೆ ದುಷ್ಕರ್ಮಗಳನ್ನು ನುಂಗುತ್ತ ತಕ್ಕ ಸಮಯಕ್ಕಾಗಿ ಕಾಯುತ್ತಿತ್ತು. ಸಮಯ ಬರುವ ವರೆಗೂ ಈ ಚೋಳು ಪರಮಾತ್ಮನ ಧ್ಯಾನದಲ್ಲಿಯೇ ಮಗ್ನವಾಗಿತ್ತು. ಅರ್ಥಾತ್ ಪರಮಾತ್ಮನ ಹೊರತಾಗಿ ಈ ಶಕ್ತಿಗೆ ಮತ್ತೇನೂ ಬೇಕಾಗಿಲ್ಲ. ಅಂತಹ ಚೈತನ್ಯ ವು ಕುಟುಕಿದಾಗ, ಶರೀಫರು ತಮಗೆ ಎಚ್ಚರಾಯಿತು, ಅಷ್ಟೇ ಅಲ್ಲ ಹುಚ್ಚು ಹಿಡಿದ ಹಾಗಾಯಿತು ಎಂದು ಹೇಳುತ್ತಾರೆ. 
ಪರಮಾರ್ಥದ ಜ್ಞಾನ ದೊರೆತ ಬಳಿಕ ಜೀವಿಯು ಪರಮಾತ್ಮನ ಹುಚ್ಚಿನಲ್ಲಿ ಮುಳುಗುವದು ಸಹಜವೇ ಆಗಿದೆ!

[ಟಿಪ್ಪಣಿ:
ಪರಮಾರ್ಥದ ಜ್ಞಾನಕ್ಕಾಗಿ ನೋವಿನ ಅನುಭವ ಅನಿವಾರ್ಯವೇನೊ
? ಕರ್ನಾಟಕದ ಇನ್ನಿಬ್ಬರು ಸಂತರ ಬಾಳಿನಲ್ಲಿಯೂ ಇಂತಹ ವಿಷಾದಕರ ಘಟನೆಗಳು ನಡೆದಿವೆ. ಮೊದಲನೆಯವರು ಬಸವಣ್ಣ. ತಮ್ಮ ಮಗ ಸಂಗಬಸವಣ್ಣ ನಿಧನ ಹೊಂದಿದಾಗ ಅವರು ಉದ್ಗರಿಸಿದ ವಚನ ಹೀಗಿದೆ:
“ಪಕ್ವವಾದ ಫಲವಿರಲು ಕಸುಕಾಯನೆತ್ತಿಕೊಂಡನು ಶಿವನು
”.
ಪರಮಾತ್ಮನು ವಯಸ್ಸಾದ ತನಗೆ ಸಾವು ಕೊಡುವ ಬದಲು ಚಿಕ್ಕ ಬಾಲಕನಿಗೆ ಸಾವು ಕೊಟ್ಟನಲ್ಲ ಎನ್ನುವ ಈ ವಚನದಲ್ಲಿ ವ್ಯಕ್ತವಾಗುವ
anguish ಹಾಗೂ resignation to God’s will ಇವು ಬೇರೆ ಯಾವ ಭಾಷೆಯ ಸಾಹಿತ್ಯದಲ್ಲೂ ಸಿಗಲಿಕ್ಕಿಲ್ಲ.
ಎರಡನೆಯವರು ಪುರಂದರದಾಸರು. ತಮ್ಮ ಮಗನ ಮರಣದ ಸಂದರ್ಭದಲ್ಲಿ ಇವರು ಹಾಡಿದ ಗೀತೆಯೂ ಸಹ ಶೋಕರಸದ ಅನನ್ಯ ಗೀತೆಯಾಗಿದೆ:
“ಗಿಳಿಯು ಪಂಜರದೊಳಿಲ್ಲ
ಬರಿದೆ ಪಂಜರವಾಯಿತಲ್ಲ!
”]


೨೦. ಎಡಿ ಒಯ್ಯನು ಬಾರೆ ದೇವರಿಗೆ
ಇಂದು ಈದ ಮಿಲಾದ ಹಬ್ಬ. ಇಸ್ಲಾಮ ಧರ್ಮದ ಪ್ರವರ್ತಕರಾದ ಮೊಹಮ್ಮದ ಪೈಗಂಬರರ ಹುಟ್ಟುದಿನ.
ಮುಸ್ಲಿಮ್ ಶಿವಯೋಗಿ ಎಂದು ಕರೆಯಬಹುದಾದ ಶಿಶುನಾಳ ಶರೀಫರು ಹಿಂದು ಹಾಗು ಮುಸ್ಲಿಮ ಧರ್ಮಗಳಲ್ಲಿ ಸಾಧಿಸಿದ ಸಾಮರಸ್ಯವನ್ನು ಅರಿಯಬೇಕಾದರೆ ಅವರು ರಚಿಸಿದ ಈ ಹಾಡನ್ನು ನೋಡಬಹುದು:

ಎಡಿ ಒಯ್ಯನು ಬಾರೆ ದೇವರಿಗೆ
ಎಡಿ ಒಯ್ಯನು ಬಾರೆ ||ಪಲ್ಲ||

ಎಡಿ ಒಯ್ಯನು ಬಾ
ಮಡಿಹುಡಿಯಿಂದಲಿ
ಪೊಡವಿಗಧಿಕ ಎನ್ನ
ಒಡಿಯ ಅಲ್ಲಮನಿಗೆ ||ಅನುಪಲ್ಲ||

ಕರ್ಮದ ಕುರಿ ಕೊಯ್ಸಿ ಅದಕೆ
ಗುರುಮಂತ್ರವ ಜಪಿಸಿ
ಅರುವಿನ ಎಡಿಯನು
ಕರದೊಳು ಪಿಡಿಕೊಂಡು
ಸ್ಥಿರವಾದ ದೇವರು
ಇರುವ ಮಸೀದಿಗೆ ||||

ಆದಿ ಅಲ್ಲಮ ಗುರುವು ದೊಡ್ಡ
ಪಾದಗಟ್ಟಿ ಏರು
ದಿಮಿ ದಿಮಿ ಸದ್ಗುರು
ಆದಿ ಶಿಶುನಾಳ
ಸಾಧು ಇರುವ ಬ್ರಹ್ಮ-
ನಾದ ಮಸೀದಿಗೆ  ||||

(ಸಾಹಿತ್ಯ, ವಿಮರ್ಶೆ ಮತ್ತು ಮಾಹಿತಿ ಕೃಪೆ: ಸಲ್ಲಾಪ)


***********************************
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ