ನನ್ನ ಪುಟಗಳು

ದಾಸಸಾಹಿತ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ದಾಸಸಾಹಿತ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

23 ಮಾರ್ಚ್ 2018

ವ್ಯಾಸರಾಯರು

 

ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.
               ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

ಕೃತಿಗಳು:-
ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. /ಹರಿಸರ್ವೋತ್ತಮ ವಾಯು ಜೀವೋತ್ತಮ /

ಕೀರ್ತನೆಗಳು:-

 ಚಂದ್ರಿಕಾಚಾರ್ಯರ ಪಾದ ದ್ವಯಕೆ/
 ಎರುಗುವೆ ಪ್ರತಿವಾಸರಕೆ /ಪ/

 ನವ ವೃಂದಾವನ ಮಧ್ಯದಿ ಶೋಭಿಪ
  ನವವಿಧ ವರಗಳ ನೀಡುತ ಸತತ/
 ನವ ಮಣಿ ಮುಕುಟ ಮಸ್ತಕದಿ ಶೋಭಿಪ
  ನವ್ಯ ಜೀವನ ಶುಭಫಲ ಕೋರುತ/
 ನಂಬಿದ ಭಕ್ತರ ದೋಷಗಳೆಣಿಸದೆ ಸುಂದರ ರಘುಪತಿ ರಾಮನ ತೋರಿದ /೧/

 ವಿಜಯ ಮೂರುತಿ ರಾಮನ ಧ್ಯಾನಿಸಿ
  ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ/
 ವಿಜಿಯಿಸಿ ಸ್ಥಾಪಿಸಿ ಮಧ್ವಮತದ ದ್ವಿಗವಿಜಯ ತತ್ವ ತಿರುಳನು ಸಾರಿ
  ಅಕಳಂಕ ಚರಿತ ಶ್ರೀರಾಮ ಚಂದಿರನ ಮಹಿಮೆಯ ಇಳೆಯೊಳು ಸಾಧಿಸಿ ತೋರಿದ /೨/

 ಯಾಂತ್ರಿಕ ತನದಿ ತಾಪವೆನಿಸುವ
  ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ/
 ಮಂತ್ರಾಕ್ಷತೆಯ ಮಹಿಮೆಯ ತೋರಿದ ಚಿತ್ತದಲಿಟ್ಟು ಚಂದ್ರಿಕಾ ರಚಿಸಿ/
 ಪಂಚಮುಖದ ಪ್ರಾಣೇಶ ವಿಠ್ಠಲ ಪಂಚಮಂತ್ರದಿಂದ ಪೂಜಿಸಿ ಯತಿಸಿದ /೩/
ಉಗಾಭೋಗಗಳು

    ೧

ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ
ಗೋಪೀಜನಜಾರನೆಂದರೆ ಸಾಲದೇ

ಚೋರತ್ವದಲಿ ಮಾಡಿದ ಪಾಪಗಳಿಗೆಲ್ಲ

ನವನೀತ ಚೋರನೆಂದರೆ ಸಾಲದೇ

ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ

ಮಾವನ ಕೊಂದವನೆಂದರೆ ಸಾಲದೇ

ಪ್ರತಿ ದಿವಸ ಮಾಡಿದ ಪಾಪಗಳಿಗೆಲ್ಲ

ಪತಿತಪಾವನನೆಂದರೆ ಸಾಲದೇ

ಇಂತಿಪ್ಪ ಮಹಿಮೆಯೊಳೊಂದನಾದರೂ ಒಮ್ಮೆ

ಸಂತತ ನೆನೆವರ ಸಲಹುವ ಸಿರಿಕೃಷ್ಣ


    ೨

ನಿನ್ನ ಎಂಜಲನುಟ್ಟು ನಿನ್ನ ಬೆಳ್ಳುಡೆಯುಟ್ಟು

ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ

ನಿನ್ನ ಓಲೈಸಲೇಕೋ ಕೃಷ್ಣ

ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು

ನಿನ್ನ ಓಲೈಸಲೇಕೋ ಕೃಷ್ಣ

ದಿನಕರನುದಿಸಿ ಕತ್ತಲು ಪೋಗದಿದ್ದರೆ

ಹಗಲೇನೋ ಇರುಳೇನೂ ಕುರುಡಗೆ ಸಿರಿಕೃಷ್ಣ



**********ಮಾಹಿತಿ ಕೃಪೆ: ವಿಕಿಪೀಡಿಯಾ***********

09 ಡಿಸೆಂಬರ್ 2017

8ನೇ ತರಗತಿ ಜೀವನ ದರ್ಶನ:- ದಾಸರ ಪರಿಚಯ ಮತ್ತು ಪದ್ಯದ ಸಾರಾಂಶ


*ಜೀವನ ದರ್ಶನ*

ಜೀವನ ದರ್ಶನ ಪದ್ಯಭಾಗದಲ್ಲಿ ಶ್ರೀಪಾದರಾಜರು, ಗೋಪಾಲದಾಸರು ಮತ್ತು ವಿಜಯದಾಸರ ಕೀರ್ತನೆಗಳಿವೆ.
ಶ್ರೀಪಾದರಾಜರ ಪರಿಚಯ
 ಪ್ರಕೃತ "ಭಕ್ತಿಬೇಕು ವಿರಕ್ತಿಬೇಕು....." ಎಂಬ ಕೀರ್ತನೆಯನ್ನು ಡಾ.ಜಿ.ವರದರಾಜರಾವ್ ಅವರು ಸಂಪಾದಿಸಿರುವ ’ಶ್ರೀಪಾದರಾಜರ ಕೃತಿಗಳು’ ಎಂಬ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಶ್ರೀಪಾದರಾಜರು (ಚಿತ್ರ ಕೃಪೆ: ಕನ್ನಡ ಒನ್ ಇಂಡಿಯಾ)

ಕಾಲ: ೧೪೦೪ ರಿಂದ ೧೫೦೨
ಶ್ರೀಪಾದರಾಜರ ಜನ್ಮ ಸ್ಥಳ : ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು.
ಮೂಲ ಹೆಸರು : ಲಕ್ಷ್ಮೀನಾರಾಯಣ.
ತಂದೆಯ :  ಶೇಷಗಿರಿಯಪ್ಪ. ತಾಯಿ : ಗಿರಿಯಮ್ಮ.

ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ.
ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
  • ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
  • ಭೂಷಣಕೆ ಭೂಷಣ
  • ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.
(ಮಾಹಿತಿ ಕೃಪೆ: ವಿಕಿಪೀಡಿಯಾ)
*******
ಗೋಪಾಲದಾಸರು
https://guroraghavendra.files.wordpress.com/2011/06/gopaladasaru-e1310738234872.jpg
ಇವರ ಕಾಲ ಕ್ರಿ.ಶ. ೧೭೨೧. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ  ಮೊಸರುಕಲ್ಲಿನಲ್ಲಿ ಜನಿಸಿದರು.
ತಂದೆ ಮುರಾರಿ, ತಾಯಿ ವೆಂಕಮ್ಮ, ಗುರುಗಳು ವಿಜಯದಾಸರು.
ಇವರದು ಸಾಮಾನ್ಯವಾದ ರೈತ ಕುಟುಂಬ.
ಇವರ ಮೊದಲ ಹೆಸರು ಬಾಗಣ್ಣ. 
ತುಂಬಾ ಬಡತನದಲ್ಲಿದ್ದ ಇವರು ಜೋತಿಷ್ಯವನ್ನು ಹೇಳುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು.
ಇವರ ಅಂಕಿತನಾಮ  'ಗೋಪಾಲವಿಠಲ'. ಇವರ ೯೬ ಕೀರ್ತನೆಗಳು, ೭೦ ಸುಳಾದಿಗಳು, ೨೧ ಉಗಾಭೋಗಗಳು ಉಪಲಬ್ದವಾಗಿವೆ.



ಮತ್ತಷ್ಟು ಪರಿಚಯ:
            ಹರಿದಾಸ ಸಾಹಿತ್ಯ ಶ್ರೀ ಪಾದರಾಜರಿಂದ ಮೊದಲಾಗಿ ವ್ಯಾಸರಾಯರು ವಾದಿರಾಜರುಗಳಿಂದ ಉಳಿದು ಬೆಳೆದು ಪುರಂದರ ಹಾಗೂ ಕನಕದಾಸರುಗಳಿಂದ ಉನ್ನತಿಯನ್ನು ಕಂಡು ನಂತರ ಕೆಲಕಾಲ ಅಜ್ಞಾತವಾಸವನನುಭವಿಸಿತು. ಮುಂದೆ ನೂರಾರು ವರ್ಷಗಳ ನಂತರ ಶ್ರೀ ರಾಘವೇಂದ್ರಸ್ವಾಮಿಗಳ ನೇತೃತ್ವದಲ್ಲಿ ಪುನಃ ದಾಸಕೂಟವೂ ಪ್ರಾರಂಭವಾಯಿತು. ಅವರ ಪ್ರೇರಣೆಯಿಂದ ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು ಮುಂತಾದವರು ಬೆಳಕಿಗೆ ಬಂದರು. ಹೀಗೆ ದಾಸ ಸಾಹಿತ್ಯದ ಮರುಹುಟ್ಟು, ಬೆಳವಣಿಗೆಗೆ ಕಾರಣರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ರಚನೆಗಳು ವಿಜಯದಾಸರಿಂದ ಪ್ರಾರಂಭವಾಯಿತು ಎನ್ನಲಾಗಿದೆ.
           ಹೀಗೆ ರಾಯರ ಪ್ರಭಾವದಿಂದ ಪ್ರಸಿದ್ಧಿ ಪಡೆದ ವಿಜಯದಾಸರ ಪ್ರಮುಖ ಶಿಷ್ಯರು ಶ್ರೀ ಗೋಪಾಲದಾಸರು. ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರೆಂದರೆ ಭಾಗಣ್ಣ. ಭಾಗಣ್ಣ ಗಾಯತ್ರಿ ಮಂತ್ರ ಸಾಧನೆ ಮಾಡಿ ಜನರಿಗೆ ಭವಿಷ್ಯ ಹೇಳಿ ತನ್ನ ಜೀವನ ಸಾಗಿಸುತ್ತಿದ್ದರು . ಆ ಕಾಲದಲ್ಲಿ ಅವರು ವೆಂಕಟಕೃಷ್ಣ ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು. ಆಗ ವೆಂಕಟೇಶನ ಭಕ್ತರೂ ಹಾಗೂ ಪುರಂದರದಾಸರ ಶಿಷ್ಯರೂ ಆದ ವಿಜಯದಾಸರು ಭಾಗಣ್ಣನನ್ನು ಭೇಟಿಯಾದರು. ಅವರಿಂದ ‘ಗೋಪಾಲವಿಠಲ’ ಎಂಬ ಅಂಕಿತವನ್ನು ಪಡೆದು ಭಾಗಣ್ಣ ಅಂದಿನಿಂದ ಗೋಪಾಲದಾಸರೆಂಬ ಹೆಸರಿಗೆ ಪಾತ್ರರಾದರು. ಸಾಮಾನ್ಯವಾಗಿ ಗುರುಗಳು ತಮ್ಮ ಶಿಷ್ಯನಿಗೆ ಅಂಕಿತವನ್ನು ಕೊಡುವಾಗ ಅಂಕಿತಪದವೊಂದನ್ನು ರಚಿಸುತ್ತಾರೆ. ಅದು ಹೊಸ ಶಿಷ್ಯನ ಅಂಕಿತದಿಂದ ಪ್ರಾರಂಭವಾಗಿ ಗುರುಗಳ ಅಂಕಿತದೊಂದಿಗೆ ಕೊನೆಗೊಳ್ಳುತ್ತದೆ. ಗೋಪಾಲದಾಸರಿಗೆ ಸಂಬಂಧಪಟ್ಟ ವಿಜಯದಾಸರು ರಚಿಸಿದ ಅಂಕಿತ ಪದ ಹೀಗಿದೆ
.
ಗೋಪಾಲವಿಠಲ ನಿನ್ನ ಪೂಜೆಮಾಡುವೆನು
ಕಾಪಾಡೊ ಈ ಮಾತನು ||ಪ||


ಅಪಾರ ಜನುಮದಲಿಡಿವನಮ್ಯಾಲೆ
ನೀ ಪ್ರೀತಿಯನು ಮಾಡಿ ನಿಜದಾಸರೊಳಿಡು ||ಅ.ಪ||


ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ
ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ
ಮಂಕು ಜನುಮಜನುಮದಲಿದ್ದ
ಪಂಕವಾರವ ತೊಲಗಿಸಿ
ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು
ಸಂಕಟಗಳಟ್ಟಿ ದಾರಿಗೆ ವೆಂಕಟಕೃಷ್ಣನು ನೀನೆ
ವಿಜಯವಿಠಲ ಎಂದು
ಅಂಕುರವ ಪಲ್ಲೈಸಿ ಫಲಪ್ರಾಪ್ತಿಯಾಗಲೋ||


ಅಂಕಿತ ಪಡೆದಬಳಿಕ ಗೋಪಾಲದಾಸರು ‘ಗೋಪಾಲವಿಠಲ’ ಅಂಕಿತದಿಂದ ಕೃತಿರಚನೆ ತೊಡಗಿದರು. ನಂತರ ಇವರು ತಾವೇ ತಮ್ಮ ತಮ್ಮಂದಿರಿಗೆ ವರದಗೋಪಾಲವಿಠಲ (ಸೀನಪ್ಪದಾಸರು), ಗುರುಗೋಪಾಲವಿಠಲ (ದಾಸಪ್ಪದಾಸರು), ತಂದೆಗೋಪಾಲವಿಠಲ (ರಂಗಪ್ಪದಾಸರು) – ಎಂಬ ಅಂಕಿತನಾಮಗಳನ್ನು ಕೊಟ್ಟರು.

ಒಮ್ಮೆ ಉತ್ತರಾಧಿಮಠದ ಮಠಾಧಿಪತಿಗಳಾದ ಶ್ರೀ ಸತ್ಯಬೋಧರು ಈ ಅಣ್ಣ ತಮ್ಮಂದಿರನ್ನು ಪರೀಕ್ಷಿಸಲು ಮೂವರು ಸೋದರರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಮೂವರೂ ಕೂಡಿ ಒಂದೇ ಪದವನ್ನು ರಚಿಸುವಂತೆ ಆಜ್ಞಾಪಿಸಿದರು. ಆಗ ‘ಮಾರ ಮದಘನ ಸಮೀರ‘ ಎಂಬ ಕೃತಿಯ ಪಲ್ಲವಿ, ಅನುಪಲ್ಲವಿ ಹಾಗೂ ಮೂರನೆಯ ಚರಣವನ್ನು ಗೋಪಾಲದಾಸರು, ಒಂದು ಮತ್ತು ಎರಡನೆಯೆ ಚರಣಗಳನ್ನು ಸೀನಪ್ಪದಾಸರು ಹಾಗೂ ದಾಸಪ್ಪದಾಸರೂ ರಚಿಸಿದರು. ಈ ಸೋದರರ ಅಪರೋಕ್ಷ ಜ್ಞಾನವನ್ನು ಕಂಡ ಮಠಾಧಿಪತಿಗಳು, “ನೀವು ಮೂವರೂ ನಮ್ಮ ಮಠಕ್ಕೆ ಕಾಮದೇನು, ಕಲ್ಪವೃಕ್ಷ, ಚಿಂತಾಮಣಿಗಳಂತೆ ಇರುವಿರಿ” ಎಂದು ಕೊಂಡಾಡಿದರು.

ಅನಂತರ ಉಡುಪಿಯ ಕೃಷ್ಣನ ದರ್ಶನಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮಂಡಗದ್ದೆಯ ಭೀಮ ಎಂಬ ದರೋಡೆಕೋರನನ್ನು ಸನ್ಮಾರ್ಗಕ್ಕೆ ತಂದು ಉದ್ಧರಿಸಿದರೆಂಬ ಖ್ಯಾತಿ ಅವರಿಗೆ ಇದೆ. ಉತ್ತನೂರಿನಲ್ಲಿ ಶ್ರೀನಿವಾಸಾಚಾರ್ಯರೆಂಬುವರ (ಭಾವಿ ಜಗನ್ನಾಥ ದಾಸರು) ಬಳಿ ಬಂದರು. ಅವರು ಹೊಟ್ಟೆನೋವಿನಿಂದ ನರಳುತ್ತಿದ್ದುದನ್ನು ನೋಡಿ ಅವರಿಗೆ ಎರಡು ಜೋಳದ ರೊಟ್ಟಿಗಳನ್ನು ಪ್ರಸಾದವೆಂದು ಕೊಟ್ಟರು. ಅದನ್ನು ತಿಂದ ಶ್ರೀನಿವಾಸಾಚಾರ್ಯರಿಗೆ ಹೊಟ್ಟೆನೋವು ತಕ್ಷಣ ಮಾಯವಾಯಿತಂತೆ.

ಪ್ರತಿವರ್ಷದಂತೆ ಗೋಪಾಲದಾಸರು ತಿರುಪತಿಯ ಬ್ರಹ್ಮೋತ್ಸವಕ್ಕೆ ಹೊರಟಾಗ ಶ್ರೀನಿವಾಸಾಚಾರ್ಯರೂ ಅವರ ಜೊತೆಯಲ್ಲಿ ಹೊರಟರು. ಕಾಲುನಡಿಗೆಯಲ್ಲೇ ಬೆಟ್ಟ ಹತ್ತಿದ ಪರಿಣಾಮವಾಗಿ ಶ್ರೀನಿವಾಸಾಚಾರ್ಯರು ಸುಸ್ತಾಗಿ ಸಾಯುವ ಸ್ಥಿತಿಗೆ ಬಂದಾಗ ಗೋಪಾಲದಾಸರು ಗುರುಗಳಾದ ವಿಜಯದಾಸರನ್ನು ನೆನೆದು ಅವರ ಆದೇಶದ ಮೇರೆಗೆ ಧನ್ವಂತ್ರಿಯ ಸ್ತೋತ್ರ ಮಾಡಿ ತಮ್ಮ ಆಯಸ್ಸಿನಲ್ಲಿ ನಲವತ್ತು ವರ್ಷಗಳನ್ನು ಶ್ರೀನಿವಾಸಾಚಾರ್ಯರಿಗೆ ದಾನ ಮಾಡಿದರೆಂದು ಪ್ರತೀತಿ. ಈ ಪ್ರಸಂಗವನ್ನು ರಂಗಪ್ಪ ದಾಸರು ಹೀಗೆ ವರ್ಣಿಸಿದ್ದಾರೆ,

“ಕುಂಡಲಾಗಿರಿಯಲ್ಲಿ ವಿಪ್ರನು ಕಂಡು ವಿಜಯದಾಸರ ದಂಡ ನಮನವ ಮಾಡಿ
ಕೇಳ್ದನುದ್ದಂಡ ಕ್ಷಯರೋಗ ಕಳಿತ್ವರಾ ಹರುಷದಿಂದುತ್ತುನೂರು ಸೇರಲುಪರಿ
ಹರಾಗುವದೆಂದನು ಬರಲು ಭಕ್ರಯವೊಳಗೆ ನಾಲ್ವತ್ತೋರುಷ ಆಯುವನಿತ್ತನು.”


ಜಗನ್ನಾಥದಾಸರು ತಮ್ಮ ರೋಗ ವಾಸಿಯಾದದ್ದು, ಅಪಮೃತ್ಯು ಪರಿಹಾರವಾದದ್ದು ಗೋಪಾಲದಾಸರ ಅನುಗ್ರಹದಿಂದಲೇ ಎಂಬ ಅಚಲ ವಿಶ್ವಾಸವನ್ನು ತಮ್ಮ ಕೀರ್ತನೆಯೊಂದರಲ್ಲಿ ವ್ಯಕ್ತಪಡಿಸಿದ್ದಾರೆ.

ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನು ನಿಶ್ಚಯ ||ಪ||
ಘೋರವ್ಯಾಧಿಗಳ ನೋಡಿ
ಭೂರಿಕರುಣವ ಮಾಡಿ
ತೋರಿದರಿವರೇ ಉದ್ಧಾರಕರೆಂದಂದದಿ
ನಾರಭ್ಯ ತವಪಾದ ಸೇರಿದೆ ಸಲಹೆಂದು ||೧||
ಅಪಮೃತ್ಯುವನು ಪರಿದೆ ಎನ್ನೊಳಗಿದ್ದ
ಅಪರಾಧಗಳ ಮರೆದೆ
ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದ ||೨||


ಕೇವಲ ನಲವತ್ತು ವರುಷಗಳ ಜೀವಿಸಿದ ಗೋಪಾಲದಾಸರು ತಮ್ಮ ಅಲ್ಪ ಜೀವಿತಾವಧಿಯಲ್ಲೇ ಅನೇಕ ರಚನೆಗಳನ್ನು ರಚಿಸಿದರು. ಅವರು ದೈವಾದೀನರಾದಾಗ ಅವರ ತಮ್ಮ ವರದಗೋಪಾಲವಿಠಲರು ತಮ್ಮ ಅಣ್ಣನ ಬಗ್ಗೆ “ಅಣ್ಣ ಭಾಗಣ್ಣ ನೀ ಕಣ್ಣಿಗೆ ಮರೆಯಾಗಿ ಪುಣ್ಯಲೋಕವ ಸೇರಿದೆಯಾ” ಎಂಬ ಕೀರ್ತನೆಯನ್ನು ರಚಿಸಿದ್ದಾರೆ. ಹಾಗೂ “ಲೇಸಾಗಿ ಭಜಿಸುವೆ ಗೋಪಾಲದಾಸರ” ಎನ್ನುವ ತಮ್ಮ ಇನ್ನೊಂದು ಕೃತಿಯಲ್ಲಿ ಗೋಪಾಲದಾಸರ ಜನನ, ವಿಜಯದಾಸರಲ್ಲಿ ಅವರ ಶಿಷ್ಯತ್ವ, ತೀರ್ಥಯಾತ್ರೆಯ ವೈಭವ, ಪದಗಳ ರಚನೆ ಮುಂತಾದವುಗಳನ್ನು ವಿವರಿಸಿದ್ದಾರೆ.

[ಆಧಾರ:- ಡಾ. ಟಿ.ಎನ್. ನಾಗರತ್ನ ಅವರು ಸಂಪಾದಿಸಿರುವ ಶ್ರೀ ಗೋಪಾಲದಾಸರ ಕೃತಿಗಳು ]
*******

ವಿಜಯ ದಾಸರ ಪರಿಚಯ
 
ಇವರ ಕಾಲ ಕ್ರಿ.ಶ. ಸುಮಾರು (೧೬೮೨ - ೧೭೫೫)
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೇಕನಪರಿವಿಯಲ್ಲಿ ಜನಿಸಿದರು.
ಮೊದಲಿನ ಹೆಸರು ದಾಸಪ್ಪ.
ತಂದೆ ಶ್ರೀನಿವಾಸ ತಾಯಿ ಕೂಸಮ್ಮ ದಂಪತಿಗಳ ಮಗನೇ ವಿಜಯದಾಸರು.
ತುಂಬಾ ಬಡತನವನ್ನು ಅನುಭವಿಸುತ್ತಿದ್ದ ಕುಟುಂಬ ಇವರದು.
ಕಾಶಿಯಲ್ಲಿ ನಾಲ್ಕುವರ್ಷಗಳು ಸಂಸ್ಕೃತ ಅಧ್ಯಯನ ಮಾಡುತ್ತಾರೆ.
ಪುರಂದರದಾಸರು ಇವರಿಗೆ ದೀಕ್ಷೆಯಿತ್ತ ಗುರುಗಳು.
ಇವರ ಅಂಕಿತನಾಮ ವಿಜಯವಿಠಲ.

ಮತ್ತಷ್ಟು ಮಾಹಿತಿ:-
         ವಿಜಯದಾಸರು ಹರಿದಾಸ ಕೂಟದಲ್ಲಿ 18ನೇ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ಇವರು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೇಕಲಪರಿ ಎಂಬ ಗ್ರಾಮದವರು. ಶ್ರೀನಿವಾಸಪ್ಪ ಮತ್ತು ಕೂಸಮ್ಮ ಎಂಬ ಬಡ ಬ್ರಾಹ್ಮಣ ದಂಪತಿಗಳ ಹಿರಿಯ ಮಗನಾಗಿ 1683ರಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ದಾಸಪ್ಪ. ಬಡತನದ ಬೇಗೆಯಲ್ಲಿ ಬೆಂದ ಇವರನ್ನು 'ಕೂಸಿ ಮಗ ದಾಸ' ಎಂದು ಹಗುರವಾಗಿ ಹೀಯಾಳಿಸಿ ಜನ ಕರೆಯುತ್ತಿದ್ದರು. ಈ ಅವಮಾನ ಮತ್ತು ಬಡತನದ ಬೇಗೆ ಸಹಿಸಲಾರದೇ ಚಿಕ್ಕ ವಯಸ್ಸಿನಲ್ಲಿಯೇ ದೇಶಾಂತರ ಹೊರಟು ಕಾಶಿ ಕ್ಷೇತ್ರಕ್ಕೆ ಬಂದರು. ಅಲ್ಲಿ ಹಲವಾರು ಸಾಧು ಸಂತರ ಸತ್ಸಹವಾಸ ಮಾಡಿ, ಪವಿತ್ರ ಗಂಗಾಸ್ನಾನ ಮಾಡುತ್ತಾ ವಿರಾಗಿಯಾಗಿ ಜೀವನ ಸಾಗಿಸುತ್ತಿದ್ದರು. ನಾಲ್ಕು ವರುಷಗಳ ನಂತರ ಸ್ವಂತ ಊರಿಗೆ ಮರಳಿದರು. ಅಲ್ಲಿ ಅವರಿಗೆ ಅರಳಮ್ಮ ಎಂಬುವರೊಡನೆ ವಿವಾಹವಾಯಿತು. ಅಲ್ಲಿ 16 ವರ್ಷಗಳ ಕಾಲ ಸಾಂಸಾರಿಕ ಬದುಕು ನಡೆಸಿದರು. ನಂತರ ತಮ್ಮ 32ನೇ ವಯಸ್ಸಿನಲ್ಲಿ ಈ ಜೀವನದ ಜಂಜಾಟಗಳನ್ನು ಸಹಿಸಲಾರದೇ ಮತ್ತೆ ಕಾಶಿ ಕ್ಷೇತ್ರಕ್ಕೆ ಹಿಂದಿರುಗಿದರು. ಗಯಾದಲ್ಲಿ ಹೆತ್ತವರ ಶ್ರಾದ್ಧ ಮಾಡಿ ಪಿತೃ ಋಣ ತೀರಿಸಿ ಸಾಧು ಸಂತರೊಂದಿಗೆ ಓಡಾಡುತ್ತಾ ನಿಷ್ಠೆಯಿಂದ ತಪಸ್ಸನ್ನಾಚರಿಸಿದರು. ಒಮ್ಮೆ ಇವರಿಗೆ ಸ್ವಪ್ನದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು ದರ್ಶನ ನೀಡಿ, ಶ್ರೀ ವೇದವ್ಯಾಸರ ದರ್ಶನ ಮಾಡಿಸಿ “ವಿಜಯ” ಎಂಬ ಬೀಜಾಕ್ಷರವನ್ನು ಬರೆದು ಅನುಗ್ರಹಿಸಿದಂತಾಯಿತು. ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದ ಆಕ್ಷಣವೇ ಇವರಲ್ಲಿ ಜ್ಞಾನ ಪ್ರಕಾಶವಾಯಿತು. ಗುರುಗಳ ಅನುಗ್ರಹದಿಂದ “ವಿಜಾಯದಾಸ”ರಾದ ಅವರು ಆಡಿದ ಪ್ರತಿ ಮಾತು ಹಾಡಾಗಿ ಹರಿಯಿತು. ಆಗ ಅವರ ರಚನೆಯೊಂದು ಹೀಗಿದೆ,

ಅಂತರಂಗದ ಕದವು ತೆರೆಯಿತಿಂದು
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೋ ಎನಗೆ|| |ಅಂತರಂಗದ|
ಸ್ವಮೂರ್ತಿಗಳ ಮಧ್ಯೆ ಸಚ್ಚಿದಾನಂದೈಕ ರವಿಧರೆಯರಿಂದಲಾಗಿಂಗಿತ್ವತಿ
ಕಮಲಾ ಜಾಜಿಗಳಿಂದ ಸ್ತುತಿಸಿಕೊಳ್ಳುತ ಹೃದಯ
ಕಮಲದ ಒಳಗಿರುವ ವಿಜಯವಿಠಲನ ಕಂಡೆ|| |ಅಂತರಂಗದ||

ಹೀಗೆ ಪುರಂದರ ದಾಸರ ಅನುಗ್ರಹದಿಂದಲೇ ವಾಗ್ಗೇಯಕಾರ ಸಾಮರ್ಥ್ಯವನ್ನು ಪಡೆದು , ಪುರಂದರ ದಾಸರನ್ನೇ ತಮ್ಮ ಮಾನಸಿಕ ಗುರುವಾಗಿ ಸ್ವೀಕರಿಸಿದವರು ಶ್ರೀ ವಿಜಯದಾಸರು. ಇವರ ಅಮೂಲ್ಯವಾದ ರಚನೆಗಳಿಂದಲೇ ಪುರಂದರ ದಾಸರ ಜೀವನವನ್ನು ಚಿತ್ರಿಸಲು ಸಾಧ್ಯವಾಯಿತು. ಇವರು ವಿಜಯ ವಿಠಲ ಎಂಬ ಅಂಕಿತದೊಡನೆ 25,000 ಕೃತಿಗಳನ್ನು ರಚಿಸಿ ಪುರಂದರರ 4,75,000 ರಚನೆಗಳನ್ನು 5,00,000ಕ್ಕೆ ಪೂರ್ಣಮಾಡಿದರೆಂದು ಪ್ರತೀತಿ ಇದೆ. ಇವರದ್ದು ಸುಮಾರು 1200 ರಚನೆಗಳ ಮಾತ್ರ ದೊರಕಿವೆ. ಅವುಗಳಲ್ಲಿ ಉಗಾಭೋಗಗಳು 70 ಆದರೆ ಸುಳಾದಿಗಳ ಸಂಖ್ಯೆ 580. ಹೀಗಾಗಿ ಇವರನ್ನು ಸುಳಾದಿ ವಿಜಯದಾಸರು ಎಂದು ಜನ ಗುರುತಿಸುತ್ತಿದ್ದರು. ಕಂಕಣಾಕಾರ ಸುಳಾದಿ, ಹಬ್ಬದ ಸುಳಾದಿ, ಹರಿದಾಸ ಲಕ್ಷಣ ಸುಳಾದಿ, ಶ್ರೀ ಕೃಷ್ಣ ಮಹಿಮೆಗಳನ್ನು ತಿಳಿಸುವ ಸುಳಾದಿ ಮುಂತಾದ ವಿಷಯಾಧಾರಿತ ಸುಳಾದಿಗಳನ್ನು ಹಾಡಿದ್ದಾರೆ. ವೇದ ಉಪನಿಷತ್ತಿನ ಸಾರವನ್ನೆಲ್ಲ ತಮ್ಮ ರಚನೆಗಳಲ್ಲಿ ಇಳಿಸಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮನೆಂದರೆ ಅಪಾರ ಭಕ್ತಿ. ಅವನನ್ನು ಮುಟ್ಟಿ ಭಜಿಸುವ ಸೌಭಾಗ್ಯಕ್ಕಾಗಿ ಕೃಷ್ಣನನ್ನು ಹಾಡಿ ಕೊಂಡಾಡಿದರು.

ಕೃಷ್ಣಾ... ಕೃಷ್ಣಾ….
ಭಕ್ತಜನಪಾಲಕ
ಭಕ್ತಿ ಸುಖದಾಯಕ
ಮುಕ್ತೀಶ ದೀನಬಂಧು|| ||ಕೃಷ್ಣ||
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ|
ಸತ್ಯವತಿ ಸುತನೇ ಕಾಯೋ ಕೃಷ್ಣಾ ಕೃಷ್ಣಾ||ಭಕ್ತ||
ಆನಂದ ತೀರ್ಥಮುನಿಯ ದ್ಯಾನಿಪರ ಸಂಘ
ಆನಂದದಲಿ ನಿಲ್ಲಿಸೋ ಕೃಷ್ಣಾ ಕೃಷ್ಣಾ
ದೀನ ಗಣ ಮಂದಾರ ನೀನೆಂದು ನಂಬಿದೆನೋ
ಸಾನುರಾಗದಿ ಕಾಯೋ ಕೃಷ್ಣಾ ಕೃಷ್ಣಾ|| ಭಕ್ತ||
ಕೆಟ್ಟ ಜನರ ಸಂಘ ಇಷ್ಟು ದಿನವು ಮಾಡಿ
ನಷ್ಟವಾಗಿ ಪೋದೆನೋ ಕೃಷ್ಣಾ ಕೃಷ್ಣಾ
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ
ಇಷ್ಟಗಳ ಎನಗೆ ಕೊಡಿಸೋ ಕೃಷ್ಣಾ ಕೃಷ್ಣಾ||ಭಕ್ತ||
 
ವಿಜಯದಾಸರು ಪವಾಡ ಪುರುಷರಾಗಿ ಮೆರೆದ ದಂತಕಥೆಗಳು ಅನೇಕ ಇವೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ನೋಡೋಣ
ಒಮ್ಮೆ ತಿರುಪತಿ ತಿರುಮಲೆಯಲ್ಲಿ ರಥೋತ್ಸವ. ಜನಜಂಗುಳಿಯೆಲ್ಲ ರಥದ ಮುಂದೆ ಕಿಕ್ಕಿರಿದಿದೆ. ಪೂಜೆ ಪುನಸ್ಕಾರಗಳಲ್ಲಾ ನಡೆಯುತ್ತಿದೆ. ಗೋವಿಂದ ನಾಮಸ್ಮರಣೆ ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಂತರ ಭಕ್ತರೆಲ್ಲಾ ಸೇರಿ ರಥವನ್ನೆಳೆಯಲು ಪ್ರಾರಂಭಿಸಿದರು. ಆದರೆ ರಥದ ಚಕ್ರ ಒಂದರ್ಧ ಇಂಚಿನಷ್ಟೂ ಅಳ್ಳಾಡಲಿಲ್ಲ. ಜನಗಳಿಗೆ ಆಶ್ಚರ್ಯ. ತುಂಬಿದ ಜನರೆಲ್ಲಾ ರಥಕ್ಕೆ ಕಟ್ಟಿದ ಹಗ್ಗವನ್ನು ತಮ್ಮ ಶಕ್ತಿ ಮೀರಿ ಎಳೆಯುತ್ತಿದ್ದಾರೆ . ಕೊನೆಗೆ ಆನೆಗಳ ಕೈಯಲ್ಲಿ ಎಳೆಸಿದರೂ ರಥ ಜರುಗಲಿಲ್ಲ. ಆಗ ಯಾರೋ, “ಅಯ್ಯೋ ವಿಜಯದಾಸರು ಇಲ್ಲಿಲ್ಲ. ಅದಕ್ಕೆ ರಥ ಮುಂದೆ ಚಲಿಸುತ್ತಿಲ್ಲ.” ಎಂದು ಕೂಗಿದರು. ಆಗ ವಿಜಯದಾಸರನ್ನು ಹುಡುಕಿ ಕರೆತರಲು ಕೆಲವರು ಹೋದರಂತೆ. ಅವರನ್ನು ಅಲ್ಲಿ ಇಲ್ಲಿ ಹುಡುಕಿ ಅಂತೂ ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿ ಕಂಡರು. ದೇವರ ಮುಂದೆ ಕುಳಿತು ಗೋವಿಂದನ ನಾಮಸ್ಮರಣೆಯಲ್ಲಿ ತಲ್ಲೀನರಾಗಿ ಹೋಗಿದ್ದರು ವಿಜಯದಾಸರು. ಅಲ್ಲಿ ಬಂದ ಜನ ಮೂಕವಿಸ್ಮಿತರಾಗಿ ಅಲ್ಲೇ ನಿಂತರು. ನಂತರ ಅವರನ್ನು ರಥ ಚಲಿಸುವಂತೆ ಮಾಡಬೇಕೆಂದು ಕೇಳಿಕೊಂಡರು. ಆಗ ಅವರು ರಥದ ಬಳಿ ಬಂದು “ಸಾಗಿಬಾರಯ್ಯಾ ಭವರೋಗ ವೈದ್ಯ” ಎಂದು ಕೂಗಿ ಕರೆದರಂತೆ. ಆಗ ರಚಿಸಿದ ಅವರ ರಚನೆ ಒಂದು ಹೀಗೆ ಇದೆ.

ಬಾಬಾ ಭಕುತರ ಹೃದಯ ಮಂದಿರ
ಬಾಬಾ ಜಗದೋದ್ಧಾರ
ಬಾಬಾ ವೆಂಕಟಾಚಲವಿಹಾರ
ಬಾಬಾ ಅನೇಕಾವತಾರ ನೀ ರಘುರಾ||ಬಾಬಾ||
ಧಕ್ಷ ಕಮಲಾಕ್ಷ ರಾಕ್ಷಸಕುಲಚಿತ್ತ
ಲಕ್ಷ್ಮಣಾಗ್ರಜ ಲಕ್ಷ್ಮಿ ವಾಸ್ನಾ
ಪಕ್ಷಿ ವಾಹನಾ ಪೂರ್ಣ ಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವಪರ ಅಕ್ಷಯವಂತ
ಶುಕ್ಲಾಂಬರಧರ ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೆರ ತಕ್ಷಣದಲಿ ತಂದ
ಅಕ್ಕರ ಪುರುಷ ಗೋವಿಂದ||ಬಾಬಾ||
ಬಂಗಾರ ರಥದೊಳು ಶೃಂಗಾರ ಪಾದ ಶ್ರೀ
ಮಂಗಳಾಂಗ ಕಾಳಿಂಗ ರಂಗ ನರಸಿಂಗ
ಅಂಗಾ ಸಜ್ಜನಕ ಸಾರಂಗ ರಥಾಂಗಪಾಣಿ
ಸಂಗನಿಸಂಗಮ ತಂದ ವಿಹಂಗ
ಪ್ರಬಂಧ ನಾಯಕ ಪರಿಪಾಲ,
ಸಂಗೀತ ಲೋಲ, ಗೋಪಾಂಗನೆಯರ
ಅಂತರಂಗ ಸಂತಾಪವಿದೂರ||ಬಾಬಾ||
ಭಕ್ತಾವತಾರದ ದೊರೆಯೇ ಹರಿಯೇ
ಧನ ಸಿರಿಯೇ ನಾನು ಮತ್ತೊಬ್ಬರನು ಹೀಗೆ ಕಾಣೆ
ನೃತ್ತರ ಸಂಗಡ ಓಡಾಡುವ ದೊರೆಯೇ
ಬೆನ್ನ ಹತ್ತಿ ಆಡುವ ಮರಿಯೇ
ಚಿತ್ತದೊಲ್ಲಭನಮ್ಮ ವಿಜಯ ವಿಠಲರೇ
ಯತ್ನ ನೋಡಲು ನಿನಗೆ ಸರಿಯೇ
ಅತ್ತಿತ್ತ ಹೋಗದೇ ಇತ್ತ ಬಾರಯ್ಯಾ
ಬೆನ್ಹತ್ತಿ ವೆಂಕಟ ದೊರೆಯೇ||ಬಾಬಾ||

 
ವಿಜಯದಾಸರು ಬೇಡಿದ ಮೇಲೆ ಇನ್ನು ರಥ ನಿಲ್ಲುವುದುಂಟೇ! ಕೂಡಿದ್ದ ಜನರ ಹರ್ಷೋದ್ಗಾರದೊಂದಿಗೆ ರಥ ಚಲಿಸಿಯೇ ಬಿಟ್ಟಿತು. ಹೀಗೆ ಅವರ ಅನೇಕ ಪವಾಡಗಳ ಬಗ್ಗೆ ಕಥೆಗಳು ಇವೆ. ಅವರ ಶಿಷ್ಯರಾದ ಶ್ರೀ ಮೋಹನದಾಸರಿಗೆ ಜೀವದಾನ ಮಾಡಿದ್ದು, ನೀರಡಿಕೆಯಿಂದ ಬಳಲುತ್ತಿದ್ದ ಕತ್ತೆಗೆ ತಮ್ಮ ಸ್ನಾನಕ್ಕೆಂದು ಇಟ್ಟುಕೊಂಡಿದ್ದ ನೀರನ್ನು ಕುಡಿಸಿ ನಂತರ ಚಿಲುಮೆಯಲ್ಲಿ ನೀರು ಬರುವಂತೆ ಮಾಡಿ ಆಹ್ನಿಕಗಳನ್ನು ಪೂರೈಸಿದುದು, ತನ್ನ ಪರಮಾಪ್ತ ಗೆಳೆಯರಾದ ಕೇಶವರಾಯರ ಮಗನನ್ನು ಬದುಕಿಸಿ ಅವರನ್ನು ಪುತ್ರ ಶೋಕದಿಂದ ಪಾರು ಮಾಡಿದುದು, ಹೀಗೆ ಹತ್ತು ಹಲವಾರು.
ಸಮಾಜದಿಂದ ಬಹಿಷ್ಕೃತಳಾದ ಶ್ರೀಮಂತ ಮಹಿಳೆಯ ಆತಿಥ್ಯ ಸ್ವೀಕರಿಸಿ, ಆಕೆಯ ಶವ ಸಂಸ್ಕಾರಗಳನ್ನು ತಾನೇ ನಿಂತು ಮಾಡಿದರು. ಇಂತಹಾ ಅನೇಕ ಬಗೆಗಳ ಜನಸೇವೆಯನ್ನೂ ಮಾಡಿದ್ದಾರೆ.

ಒಟ್ಟಿನಲ್ಲಿ ಹರಿದಾಸ ಸಾಹಿತ್ಯ ಚರಿತ್ರೆಯಲ್ಲಿ ಶ್ರೀ ವಿಜಯದಾಸರ ಕಾಲ ವಿಶೇಷ ಮಹತ್ವವನ್ನು ಪಡೆದಿದೆ. ಇವರು ತಮ್ಮ ಶಾಸ್ತ್ರ ಗರ್ಭಿತವಾದ ಸುಳಾದಿಗಳಲ್ಲಿ ಸ್ವಧರ್ಮ ನಿಷ್ಠೆಯನ್ನು ತೋರಿಸಿದ್ದಾರೆ. ಇವರ ರಚನೆಗಳಲ್ಲಿ ಮಾನವನ ನಿತ್ಯ ಜೀವನದ ಬಗ್ಗೆ ವಿಶ್ಲೇಷಣೆ ಇದೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಾದಿಗಳ ವಸ್ತು ವಿಷಯಗಳ ಬಗ್ಗೆ ಉಲ್ಲೇಖಗಳಿವೆ. ಭಗವಂತನ ಲೀಲಾ ವಿನೋದಗಳ ಬಗ್ಗೆ ವೈವಿಧ್ಯಮಯ ಚಿತ್ರಣಗಳಿವೆ. ಇವರ ಇಬ್ಬರು ಪ್ರಮುಖ ಶಿಷ್ಯರು ಎಂದರೆ ದಾಸಪರಂಪರೆಯನ್ನು ಬೆಳೆಸಿದ ಮೋಹನದಾಸರು ಹಾಗೂ ಗೋಪಾಲದಾಸರು. ಇವರು 1755ರಲ್ಲಿ ದೇಹತ್ಯಾಗ ಮಾಡಿದರು.

ಪದ್ಯಭಾಗದ ಸಾರಾಂಶ
ಶ್ರೀಪಾದರಾಜರ ಕೀರ್ತನೆ
ಈ ಕೀರ್ತನೆಯಲ್ಲಿ ಶ್ರೀಪಾದರಾಜರು ಮುಕ್ತಿಯನ್ನು ಬಯಸುವವರಿಗೆ ವಾತಾವರಣ ಹೇಗೆ ಅನುಕೂಲವಾಗಿರಬೇಕು ಎಂದು ತಿಳಿಸಿದ್ದಾರೆ. ಇವರ ಕೀರ್ತನೆಗಳಲ್ಲಿ ಆತ್ಮಶೋಧನೆ, ಭಗವಂತನ ಆರಾಧನೆ, ದ್ವೆ ತತತ್ತ್ವ ಪ್ರತಿಪಾದನೆ ಮತ್ತು ಲೋಕನೀತಿ, ನೀತಿಬೋಧನೆಗಳು ಅಡಕವಾಗಿವೆ.

ಭಕ್ತಿ ಬೇಕು ವಿರಕ್ತಿ ಬೇಕು ಸರ್ವ
ಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ       // ಪ //
ಮುಕ್ತಿಯನ್ನು ಬಯಸುವವನಿಗೆ ಭಕ್ತಿ, ವಿರಕ್ತಿ ಮತ್ತು ಭೌತಿಕ, ಬೌದ್ಧಿಕ, ಆಧ್ಯಾತ್ಮಿಕ ಮುಂತಾದ ಸರ್ವಶಕ್ತಿಗಳೂ ಬೇಕು.
ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕು
ಮತಿವಂತನಾಗಬೇಕು ಮತ ಒಂದಾಗಬೇಕು   // ೧ //
ಅರ್ಥಮಾಡಿಕೊಂಡು ನಡೆಯುವ, ಒಮ್ಮತದ ಅಭಿಪ್ರಾಯವಿರುವ ಅನುಕೂಲವಾದ ಹೆಂಡತಿ, ಬುದ್ಧಿವಂತನೂ
ಗುಣವಂತನೂ ಆದ ಮಗ ಇರಬೇಕು. ||||
ಜಪದ ಜಾಣುವೆ ಬೇಕು ತಪದ ನೇಮವೆ ಬೇಕು
ಉಪವಾಸ ವ್ರತ ಬೇಕು ಉಪಶಾಂತವಿರಬೇಕು            // ೨ //
ನಿಷ್ಠೆಯಿಂದ ಕೂಡಿದ ಜಪ-ತಪ-ನೇಮಗಳನ್ನು ಮಾಡಬೇಕು. ಉಪವಾಸ ವ್ರತ ಮಾಡುವ ಮತ್ತು ನೆಮ್ಮದಿ-ಸಮಾಧಾನಗಳನ್ನು ಹೊಂದಿರಬೇಕು.

ಸುಸಂಗ ಹಿಡಿಯಲೆಬೇಕು ದುಸ್ಸಂಗ ಬಿಡಬೇಕು
ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು         // ೩ //  
ಸಜ್ಜನರ ಸಂಗ ಮಾಡಬೇಕು. ದುರ್ಜನರ ಸಂಗವನ್ನು ಬಿಡಬೇಕು. ದೇವರನ್ನು ಭಕ್ತಿ-ನಂಬಿಕೆಗಳಿಂದ ನೆನೆಯಬೇಕು.
      
ಗೋಪಾಲದಾಸರ ಕೀರ್ತನೆ
ಗೋಪಾಲದಾಸರು ಈ ಕೀರ್ತನೆಯಲ್ಲಿ- ದೇವರು ಭಕ್ತ ಪರಾಧೀನ. ಅನಾಥರಕ್ಷಕ. ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ ಅವರ ಸಂಕಷ್ಟಗಳನ್ನು        ಪರಿಹರಿಸುತ್ತಾನೆ. ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು ಸಂಕಷ್ಟಗಳನ್ನು ನಿವಾರಿಸುವ ಗುಣ ಈ ಪರಮಾತ್ಮನದು. ಆದುದರಿಂದ ಆ ಭಗವಂತನ್ನು ಹೃದಯಕಮಲದಲ್ಲ್ಲಿಟ್ಟು ಆರಾಧಿಸಬೇಕು. ನಂಬಿಕೆಟ್ಟವರಿಲ್ಲ. ನಂಬಿಕೆ, ಪ್ರೀತಿ, ದೃಢಸಂಕಲ್ಪಗಳು ಸದಾ ಅಚಲವಾಗಿರಬೇಕು ಎಂದು ಹೇಳಿದ್ದಾರೆ.

ಈತನೀಗ ನಮ್ಮ ದೇವನು                                                        ಪ.
ಪ್ರೀತಿಯಿಂದಲಿ ಸ್ಮರಿಸುವವರ | ಪಾತಕಗಳ ಪರಿಹರಿಪ                        ಅ.ಪ
ನಮ್ಮ ಈ ದೇವರು ಯಾರು ಪ್ರಿತಿಯಿಂದ ತನ್ನನ್ನು ಸ್ಮರಿಸುವರೋ ಅವರ ಪಾಪಗಳನ್ನು ಪರಿಹರಿಸಿ ಕಾಪಾಡುತ್ತಾನೆ.

ಅಕ್ರೂರನ ಪ್ರೀತನೀತ | ಶಂಖಚಕ್ರ ಧರಿಸಿದಾತ
ನಕ್ರಬಾಧೆಯ ತರಿದು ತನ್ನ | ಭಕ್ತರನ್ನು ಕಾಯಿದಾತ     // ೧ //
ಕಂಸನ ಅಷ್ಟಮಂತ್ರಿಗಳಲ್ಲಿ ಒಬ್ಬನಾದ ಅಕ್ರೂರ ಕೃಷ್ಣನ ಪ್ರೀತಿಯ ಗೆಳೆಯ. ಶಂಖ-ಚಕ್ರಗಳನ್ನು ಧರಿಸಿದವನು. ಮೊಸಳೆಯನ್ನು ಕೊಂದು ಅದರಿಂದ ಭಾದಿತರಾದ ತನ್ನ ಭಕ್ತರನ್ನು ಕಾಪಾಡಿದನು.

ಅಜಮಿಳನ ಸಲಹಿದಾತ | ವ್ರಜದಗೋವು ಕಾಯಿದಾತ
ಭಜಿಸುವವರ ಬಿಡನು ಪ್ರೀತ | ತ್ರಿಜಗದೊಳಗೆ ಮೆರವದಾತ      // ೨ //
ಅಜಮಿಳ ಎಂಬ ಪಾಪಿ ಕೊನೆಗಾಲದಲ್ಲಿ ನಾರಾಯಣ ಎಂದು ಕೂಗಿದಾಗ ಅವನ ಪಾಪಗಳನ್ನೆಲ್ಲ ಪರಿಹರಿಸಿದನು. ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋವುಗಳನ್ನೂ ಯದುಕುಲವನ್ನೂ ಸಂರಕ್ಷಿಸಿದನು. ಮೂರು ಲೋಕಗಳಲ್ಲೂ ಮೆರೆಯುತ್ತಾ ತನ್ನನ್ನು ಜಪಿಸುವ(ಭಜಿಸುವ) ಭಕ್ತರನ್ನು ಬಿಡದೆ ಕಾಪಾಡುವವನು.

ಸಕಲ ಗುಣ ಪೂರ್ಣನೀತ | ಸಕಲ ದೋಷ ದೂರನೀತ
ಸಕಲಾನಂದ ಪೂರ್ಣನೀತ | ಭಕುತಿ ಮಂತ್ರಕೊಲಿವದಾತ       // ೩ //
ಸಕಲ ಗುಣಗಳಿಂದ ಪರಿಪೂರ್ಣನೂ ಸಕಲ ದೋಷಗಳಿಂದ ದೂರ ಇರುವವನೂ ಸಕಲ ಆನಂದವನ್ನು ಹೊಂದಿರುವವನೂ ಭಕ್ತರ ಮಂತ್ರಕ್ಕೆ (ಸ್ತುತಿಗೆ) ಒಲಿಯುವವನೂ ಆಗಿದ್ದಾನೆ.

ಅನಾಥ ಬಾಂಧವನೀತ | ಅನಾದಿ ಕಾಲದವನಾತ
ಅನಾದಿ ಮೊರೆಯ ಕೇಳಿ | ಆ ನಿಮಿಷದೊಳು ಒದಗಿದಾತ          // ೪ //
ದಿಕ್ಕಿಲ್ಲದ ಅನಾಥರ ಬಂಧುವಾಗಿದ್ದಾನೆ. ಹುಟ್ಟು-ಸಾವುಗಳಿಲ್ಲದ, ಆದಿ-ಅಂತ್ಯಗಳಿಲ್ಲದವನು. ಕಷ್ಟದಲ್ಲಿದ್ದ ಭಕ್ತರ ಮೊರೆಯನ್ನು ಕೇಳಿದ ಕೂಡಲೆ ಬಂದು ಕಾಪಾಡಿದವನು.

ಕಮಲಮುಖಿಯ ರಮಣನೀತ | ಕಮಲಾಸನಜನಕನೀತ
ಕಮಲಾಕ್ಷ ಗೋಪಾಲವಿಠಲ ಹೃತ್ | ಕಮಲದೊಳು ನಿಲುವದಾತ. // ೫ //
ಇವನು ಕಮಲದಂತೆ ಸುಂದರವಾದ ಮುಖ ಹೊಂದಿರುವ ಲಕ್ಷ್ಮೀಯ ಒಡೆಯನಾದವನು. ಕಮಲಾಸನನಾದ ಬ್ರಹ್ಮನ ತಂದೆಯಾಗಿದ್ದಾನೆ. ಕಮಲದಂತ ಕಣ್ಣುಗಳನ್ನು ಹೊಂದಿರುವ ಈತ ಭಕ್ತರ ಹೃದಯ ಕಮಲದಲ್ಲಿ ನೆಲೆಸುತ್ತಾನೆ.

ವಿಜಯದಾಸರ ಕೀರ್ತನೆ
ಮುಕ್ತಿಗಳಿಸುವಲ್ಲಿ ಮಾನವನ ಜನ್ಮದ ಸಾರ್ಥಕತೆ ಇದೆ. ಈ ಭೂಲೋಕದ ಜನ್ಮಾಂತರಗಳಿಂದ ಮುಕ್ತನಾಗಲು ಸದಾ ಹರಿ ನಾಮಸ್ಮರಣೆ ಮಾಡಬೇಕು. ಅಚಲವಾದ ದೃಢ ಭಕ್ತಿಯಿಂದ ದೈವ ಸಾಕ್ಷಾತ್ಕಾರವಾಗುತ್ತದೆ. ಭಕ್ತಿ-ಭಕ್ತ ಒಂದಾದಾಗ ಮಾತ್ರ ಮುಕ್ತಿ ಸಾಧ್ಯವೆಂಬುದನ್ನು ವಿಜಯದಾಸರು ಈ ಕೀರ್ತನೆಯ ಮೂಲಕ ದೇವರಲ್ಲಿ ನಿವೇದಿಸಿಕೊಂಡಿದ್ದಾರೆ.

ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ         ಪ.
ನಾದಮೂರ್ತಿ ಮೋದದಿಂದ ನಿನ್ನ ಪಾದ ಭಜಿಸುವೆ       ಅ.ಪ
ಶ್ರೀಹರಿಯೇ, ನಾದ ಮೂರ್ತಿಯೇ, ನೀನು ಸದಾ ನನ್ನ ಹೃದಯದಲ್ಲಿ ವಾಸಮಾಡು. ನಿನ್ನ ಪಾದವನ್ನು ಬಹಳ (ಮೋದದಿಂದ) ಆನಂದದಿಂದ ಭಜಿಸುತ್ತಾ ಪೂಜಿಸುತ್ತೇನೆ.

ಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ | ಧ್ಯಾನದಿಂದ ಭಜಿಸುವೆ        // ೧ //
ಶ್ರೀಹರಿಯೇ, ನನ್ನ ಜ್ಞಾನ ಎಂಬ ನವರತ್ನ ಮಂಟಪದ ಮಧ್ಯದಲ್ಲಿ ನಾದಲೋಲನಾದ ನಿನ್ನನ್ನು ಕುಳ್ಳಿರಿಸಿ, ಧ್ಯಾನ-ಭಕ್ತಿಗಳಿಂದ ಭಜಿಸುತ್ತಾ ಪೂಜಿಸುತ್ತೇನೆ.

ಭಕ್ತಿರಸವೆಂಬ ಮುತ್ತು ಮಾ | ಣಿಕ್ಯದ ಹರಿವಾಣದಿ
ಮುಕ್ತನಾಗಬೇಕುಯೆಂದು ಮುತ್ತಿನಾರತಿ ಎತ್ತುವೆ          // ೨ //
ಶ್ರೀಹರಿಯೇ, ಭಕ್ತಿರಸ ಎಂಬ ಮುತ್ತು, ಮಾಣಿಕ್ಯಗಳು ತುಂಬಿದ ಹರಿವಾಣದಲ್ಲಿ(ತಟ್ಟೆಯಲ್ಲಿ) ಮುಕ್ತಿಪಡೆದು ಮುಕ್ತನಾಗಬೇಕೆಂದು ಮುತ್ತಿನ ಆರತಿಯನ್ನು ನಿನಗೆ ಎತ್ತುತ್ತೇನೆ.

ನಿನ್ನ ನಾಮ ಬಿಡುವನಲ್ಲ | ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯವಿಠಲ ಕೇಳೊ ನಿನ್ನ ಭಕ್ತರ ಸೊಲ್ಲ            // ೩ //
ಶ್ರೀಹರಿಯೇ, ನಾನು ನಿನ್ನ ನಾಮವನ್ನು ಬಿಡುವವನಲ್ಲ. ಆದ್ದರಿಂದ ನನ್ನನ್ನು ನೀನು ಬಿಡುವುದು ಸರಿಯಲ್ಲ. ಘನ ಮಹಿಮಾನ್ವಿತನಾದ ವಿಜಯ ವಿಠಲನೇ ಈ ನಿನ್ನ ಭಕ್ತರ ಮೊರೆಯನ್ನು ಕೇಳು.


******* 




13 ಮಾರ್ಚ್ 2016

೨೦.ಶ್ರೀಪಾದರಾಜ (ಶ್ರೀಪಾದರಾಯ)

ಶ್ರೀಪಾದರಾಜರು 
ಇವರ ಕಾಲ: ೧೩೮೯ - ೧೪೮೭
ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು ಹಾಗು ದ್ವೈತ ತತ್ವಶಾಸ್ತ್ರದ ಪ್ರತಿಪಾದಕರು.
ಇವರ ಕೀರ್ತನೆಗಳ ಅಂಕಿತ: ರಂಗವಿಠಲ

ಜೀವನ

ಶ್ರೀಪಾದರಾಜರ ಜನ್ಮ ಸ್ಥಳ ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ.
ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
  • ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
  • ಭೂಷಣಕೆ ಭೂಷಣ
  • ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.

ಶ್ರೀಪಾದರಾಯರ ಬಗ್ಗೆ ಮತಷ್ಟು : ‘ಕಣಜ’ದಿಂದ 
ಭೌಂ…. ಭೌಂ…. ಭೌಂ…. ಭೌಂ….’
ಶಬ್ದ ಕೇಳಿ ಬಂತು. ಇದೇನು, ಈ ತರಹದ ಶಬ್ದ ಕೇಳಿ ಬರುತ್ತಿದೆ? ದನ ಕಾಯುತ್ತಿದ್ದ ಹುಡುಗರೆಲ್ಲರೂ ಅತ್ತಕಡೆಗೆ ತಿರುಗಿ ನೋಡಿದರು. ಮೇನೆಯೊಂದು ಬರುತ್ತಿತ್ತು. ಮೇನೆ ಹೊತ್ತಿದ್ದವರು ಭೌಂ…. ಭೌಂ….  ಶಬ್ದ ಮಾಡುತ್ತಿದ್ದರು. ಹಾಗೆ ಬರುತ್ತಿದ್ದ ಮೇನೆ ಇವರ ಕಡೆಗೇ ಬಂದಿತು. ಮತ್ತು ಇವರ ಮುಂದೆಯೇ ನಿಂತಿತು. ಒಳಗೆ ಕುಳಿತಿದ್ದವರು ಒಬ್ಬರು ಯತಿಗಳು. ಅವರ ದೇಹವಾದರೋ ಬಂಗಾರದಂತೆ ಮಿನುಗು ತ್ತಿತ್ತು. ಮುಖವಾದರೋ ಸೌಮ್ಯವಾಗಿ, ತೇಜಪುಂಜವಾಗಿ ಬೆಳಗುತ್ತಿತ್ತು. ಹುಡುಗರು ನೋಡುತ್ತಿದ್ದಂತೆ ಆ ಯತಿ ಗಳು ಮಾತನಾಡಿದರು :
“ಮಕ್ಕಳೇ, ಊರು ಇಲ್ಲಿಂದ ಇನ್ನೆಷ್ಟು ದೂರವಿದೆ?”
ಬಾಲಕನೊಬ್ಬ ಮುಂದೆ ಬಂದ :
“ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ನಾವು ಮೇಯಿಸುತ್ತಿರುವ ದನಗಳನ್ನು ನೋಡಿ” ಎಂದು ಉತ್ತರ ಕೊಟ್ಟ.

ಯತಿಗಳಿಗೆ ಮೆಚ್ಚುಗೆ
ಯತಿಗಳಿಗೆ ಆಶ್ಚರ್ಯವಾಯಿತು. ತಮ್ಮ ಪ್ರಶ್ನೆಗೆ ಈ ಬಾಲಕ ಕೊಟ್ಟ ಉತ್ತರವಾದರೋ ಸಾಮಾನ್ಯ ರೀತಿ ಯಲ್ಲಿರಲಿಲ್ಲ. ಹೊತ್ತನ್ನು ನೋಡಿದರು; ಆ ವೇಳೆ ಗಾಗಲೇ ಸೂರ್ಯ ಮುಳುಗುತ್ತಿದ್ದ. ಬಾಲಕರಾದರೋ ವಯಸ್ಸಿನಲ್ಲಿ ತೀರ ಚಿಕ್ಕವರು; ಅವರು ಮೇಯಿಸುತ್ತಿದ್ದ ಪ್ರಾಣಿಗಳಾದರೋ ಮಂದಗಾಮಿಗಳಾದ ದನಕರು ಗಳು. ಸೂರ್ಯ ಮುಳುಗುವ ಹೊತ್ತಿನಲ್ಲಿ ಈ ಚಿಕ್ಕ ಬಾಲಕರು, ಮಂದಗಾಮಿಗಳಾದ ದನಕರುಗಳನ್ನು ಮೇಯಿಸುತ್ತಿರಬೇಕಾದರೆ, ಊರು ತೀರ ಹತ್ತಿರ ದಲ್ಲಿಯೇ ಇರಬೇಕು;
ಈ ಉತ್ತರವನ್ನು ನೆನೆಸಿಕೊಳ್ಳುತ್ತಿ ದ್ದಂತೆ ಯತಿಗಳಿಗೆ ಹೆಚ್ಚು ಹೆಚ್ಚು ಆಶ್ಚರ್ಯವಾಗುತ್ತಿತ್ತು; ಮೆಚ್ಚುಗೆಯಾಗುತ್ತಿತ್ತು. ಎಂತಹ ಕುಶಾಗ್ರ ಬುದ್ಧಿ ಈ ಬಾಲಕನದು!
ಇದು ನಡೆದುದು ಶ್ರೀರಂಗಕ್ಷೇತ್ರದಲ್ಲಿ. ಮೇನೆ ಯಲ್ಲಿ ಕುಳಿತ ಯತಿಗಳು ಸ್ವರ್ಣವರ್ಣತೀರ್ಥರು. ಶ್ರೀರಂಗದ ಯಾತ್ರೆಗೆಂದು ಅವರು ಹೊರಟಿದ್ದರು. ‘ಸ್ವರ್ಣವರ್ಣ’ ಎಂದರೆ ಬಂಗಾರದ ಬಣ್ಣ ಎಂದು ಅರ್ಥ. ಯತಿಗಳ ಶರೀರ ಬಂಗಾರದಂತೆ ಹೊಳೆಯುತ್ತಿ ದ್ದುದರಿಂದ ಅವರಿಗೆ ‘ಸ್ವರ್ಣವರ್ಣತೀರ್ಥ’ರೆಂದೇ ಹೆಸರು ಬಂದಿತು.
‘ಯಾರೀ ಹುಡುಗ?’
ಕರ್ನಾಟಕದ ಕೊಡಗು ಸೀಮೆಯ ಬ್ರಹ್ಮಗಿರಿಯಲ್ಲಿ ಹುಟ್ಟಿ, ‘ದಕ್ಷಿಣಗಂಗೆ’ ಎಂದೇ ಹೆಸರು ಪಡೆದ ಕಾವೇರಿ ತಾಯಿ ಮೂರು ಕಡೆಗಳಲ್ಲಿ ಕವಲಾಗಿ ಒಡೆದು, ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗಗಳನ್ನು ಸೃಷ್ಟಿಮಾಡಿದ್ದಾಳೆ. ಮೈಸೂರಿನ ಬಳಿಯ ಶ್ರೀರಂಗಪಟ್ಟಣವೇ ಕಾವೇರಿಯ ಆದಿರಂಗ; ಶಿವನಸಮುದ್ರವೇ ಮಧ್ಯರಂಗ; ತಮಿಳುನಾಡಿನ ತಿರುಚಿರಪಳ್ಳಿಯ ಸಮೀಪದಲ್ಲಿರುವ ಶ್ರೀರಂಗವೇ ಅಂತ್ಯರಂಗ.
ಮಕ್ಕಳನ್ನು ಮಾತನಾಡಿಸಿದ ಸ್ವರ್ಣವರ್ಣತೀರ್ಥರು ಊರನ್ನು ಪ್ರವೇಶಿಸಿದ ತಕ್ಷಣವೇ ‘ಆ ಬಾಲಕ ಯಾರಿರಬಹುದು?’ ಎಂದು ವಿಚಾರ ಮಾಡಿದರು. ಅವನ ತಂದೆ-ತಾಯಿಗಳಿಗೆ ಹೇಳಿ ಕಳುಹಿಸಿದರು.
ಹುಡುಗನ ತಂದೆ ಶೇಷಗಿರಿಯಪ್ಪ, ತಾಯಿ ಗಿರಿಯಮ್ಮ. ತುಂಬ ಬಡತನದಲ್ಲಿ ಅವರು ಜೀವನ ನಡೆಸುತ್ತಿದ್ದರು. ‘ತೋಟಂತಿಲ್ಲಾಯ’ ಮನೆತನದವರೆಂದು ಅವರಿಗೆ ಹೆಸರು, ಅಂದರೆ ತೋಟದ ಮನೆಯವರು ಎಂದರ್ಥ. ತೋಟದ ಕೆಲಸಗಳನ್ನು ಮಾಡುತ್ತಾ ಬಂದದ್ದರಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು.
ಈ ದಂಪತಿಗಳಿಗೆ ಒಬ್ಬನೇ ಮಗ. ಅವನು ಹುಟ್ಟಿದ್ದು ೧೪೦೬ರಲ್ಲಿ. ಹುಟ್ಟಿದ ಹನ್ನೆರಡನೆಯ ದಿನ ಮಗನಿಗೆ ಲಕ್ಷ್ಮೀನಾರಾಯಣ ಎಂದು ನಾಮಕರಣ ಮಾಡಿದರು. ಹುಡುಗನಿಗೆ ಯೋಗ್ಯ ಶಿಕ್ಷಣ ಕೊಡಿಸಲು ತಂದೆ ತಾಯಿಗಳಿಗೆ ಅನುಕೂಲವಿಲ್ಲದಿದ್ದುದರಿಂದ ಅವನನ್ನು ದನಕಾಯಲು ಬಿಟ್ಟಿದ್ದರು.
‘ಸ್ವಾಮಿಗಳು ಕೂಡಲೇ ಬರಬೇಕೆಂದು ಕರೆ ಕಳುಹಿಸಿದ್ದಾರೆ’ ಎಂದು ಸ್ವಾಮಿಗಳ ಕಡೆಯವರು ಬಂದು ಹೇಳುತ್ತಲೇ ಹುಡುಗನ ತಂದೆತಾಯಿಗಳಿಗೆ ಹೆದರಿಕೆ ಯಾಯಿತು. ‘ಏನು ಅಚಾತುರ್ಯವಾಯಿತೋ, ಹುಡುಗ ಏನು ತಪ್ಪು ಮಾಡಿದನೋ!’ ಎಂದು ಯೋಚಿಸುತ್ತ ಸ್ವಾಮಿಗಳಿದ್ದ ಕಡೆಗೆ ಬಂದರು. ಅವರಿಗೆ ನಮಸ್ಕಾರ ಮಾಡಿದರು.
ಮಗು ನಿಮ್ಮದೇ?
“ಲಕ್ಷ್ಮೀನಾರಾಯಣ ಎನ್ನುವ ಬಾಲಕ ನಿಮ್ಮ ಮಗ ತಾನೆ?” ಎಂದು ಪ್ರಶ್ನಿಸಿದರು ಸ್ವರ್ಣವರ್ಣ ಯತಿಗಳು.
“ಹೌದು, ನಮ್ಮ ಮಗನೇ” ತಾಯ್ತಂದೆಯರು ಅಂಜುತ್ತಾ ಹೇಳಿದರು!
“ಅವನನ್ನು ನಮ್ಮ ವಶಕ್ಕೆ ಒಪ್ಪಿಸಿಕೊಡಿ. ಬಾಲಕನ ಸಮಸ್ತ ಜವಾಬ್ದಾರಿಯೂ ನಮ್ಮದಾಗಿರಲಿ” ಎಂದರು ಸ್ವರ್ಣವರ್ಣತೀರ್ಥರು.
ಶೇಷಗಿರಿಯಪ್ಪ ಮತ್ತು ಗಿರಿಯಮ್ಮನವರಿಗೆ ಇದು ಅನಿರೀಕ್ಷಿತ ಪ್ರಸಂಗವಾಗಿತ್ತು. ಅವರಿಗೆ ಒಬ್ಬನೇ ಮಗ. ಅವನನ್ನು ಸ್ವಾಮಿಗಳ ವಶಕ್ಕೆ ಒಪ್ಪಿಸಿ ದೂರ ಕಳುಹಿಸಿ ಅವನನ್ನು ಬಿಟ್ಟಿರುವುದು ಹೇಗೆ ಎಂದು ದುಃಖ. ಜತೆಗೆ ಮುಂದೆ ತಮ್ಮ ಗತಿ ಏನು ಎಂಬ ಯೋಚನೆ. ಯೋಚಿಸುತ್ತ ನಿಂತ ಆ ದಂಪತಿಗಳನ್ನು ಕುರಿತು ಸ್ವರ್ಣವರ್ಣ ಯತಿಗಳು ಹೇಳಿದರು.
“ನಿಮ್ಮ ಮಗ ಶುಭ ಲಕ್ಷಣಗಳಿಂದ ಕೂಡಿದ್ದಾನೆ. ನಮ್ಮ ದೇಶದ ಕುಲದೀಪಕನಾಗುವ ಅವನನ್ನು ದನಕಾಯಲು ಬಿಟ್ಟಿರುವಿರಲ್ಲ! ಅವನ ಬಗೆಗೆ ನೀವು ಕಳವಳವನ್ನು ಬಿಡಿ. ನಿಶ್ಚಿಂತೆಯಿಂದ ಬಾಲಕನನ್ನು ನಮ್ಮ ವಶಕ್ಕೆ ಒಪ್ಪಿಸಿ” ಎಂದ ಅವರು ನಡೆದ ಸಂಗತಿಯನ್ನು ವಿವರಿಸಿದರು.
ಶೇಷಗಿರಿಯಪ್ಪ-ಗಿರಿಯಮ್ಮ ಸ್ವಾಮಿಗಳಿಗೆ ನಮಸ್ಕರಿಸಿ ದರು.
“ಮಗು ನಿಮ್ಮದೇ, ನಮ್ಮದಲ್ಲ. ಅನುಗ್ರಹಿಸಬೇಕು” ಎಂದರು.
ಅಂದಿನಿಂದ ಆ ಬಾಲಕ ಸ್ವರ್ಣವರ್ಣತೀರ್ಥರ ಸಾಕುಮಗನೆನಿಸಿಕೊಂಡ. ಆಗ ಅವನ ವಯಸ್ಸು ಇನ್ನೂ ಐದು ವರ್ಷ.

ಶಿಕ್ಷಣ
ಲಕ್ಷ್ಮೀನಾರಾಯಣನನ್ನು ಜತೆಯಲ್ಲಿ ಕರೆದು ಕೊಂಡು ಗುರುಗಳು ಸಂಚಾರ ಹೊರಟರು. ಅವನಿಗೆ ಏಳನೆಯ ವರ್ಷದಲ್ಲಿ ಉಪನಯನವನ್ನು ಮಾಡಿದರು. ಮುಂದೆ ವಿದ್ಯಾಭ್ಯಾಸವನ್ನು ಕೊಡಿಸಿದರು. ಲಕ್ಷ್ಮೀನಾರಾಯಣ ವೇದಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಆ ಎಳೆಯ ವಯಸ್ಸಿಗೇ ಅವನ ಜ್ಞಾನ ಅಪಾರವಾಗಿತ್ತು. ಜೊತೆಗೆ ವೈರಾಗ್ಯವೂ ಅವನಲ್ಲಿ ನೆಲಸಿತ್ತು. ಗುರುಗಳಾದ ಸ್ವರ್ಣವರ್ಣತೀರ್ಥರು ತಾವೇ ಲಕ್ಷ್ಮೀ ನಾರಾಯಣನಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟರು. ಅಲ್ಲಿಂದ ಮುಂದೆ ಲಕ್ಷ್ಮೀನಾರಾಯಣ ‘ಲಕ್ಷ್ಮೀನಾರಾಯಣ ಮುನಿ’ ಎನ್ನಿಸಿಕೊಂಡ. ಈ ತೇಜೋವಂತ ಬಾಲಮುನಿಗೆ ಇನ್ನೂ ಹೆಚ್ಚಿನ ಶಿಕ್ಷಣದ ಅಗತ್ಯವಿತ್ತು. ಆಗಿನ ಕಾಲದಲ್ಲಿ ಮಹಾ ಪಂಡಿತ ರೆನ್ನಿಸಿಕೊಂಡಿದ್ದವರು ಮಂತ್ರಾಲಯದ ಯತಿಗಳಾಗಿದ್ದ ಶ್ರೀ ವಿಭುದೇಂದ್ರತೀರ್ಥರು. ಬಾಲಮುನಿಯನ್ನು ಕರೆದು ಕೊಂಡುಬಂದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರಲ್ಲಿ ಬಿಡಲಾಯಿತು. ಸಕಲ ವೇದ ಶಾಸ್ತ್ರಗಳನ್ನೂ ಲಕ್ಷ್ಮೀ ನಾರಾಯಣ ಮುನಿ ಅಧ್ಯಯನ ಮಾಡಿ ಸಂಪೂರ್ಣ ವಾಗಿ ತಿಳಿದುಕೊಂಡ. ತರ್ಕ, ನ್ಯಾಯಗಳಲ್ಲಿ ಗಟ್ಟಿಗನಾದ.
ಶ್ರೀಪಾದರಾಜರು
ಒಮ್ಮೆ ವಿಭುದೇಂದ್ರತೀರ್ಥರು ತಮ್ಮ ಶಿಷ್ಯರೊಡನೆ ಸಂಚಾರಮಾಡುತ್ತಾ ಕೊಪ್ರ ಎಂಬ ಗ್ರಾಮಕ್ಕೆ ಬಂದರು. ಕೊಪ್ರ ಎನ್ನುವುದು ಈಗಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿದೆ. ಇದೇ ಹೊತ್ತಿಗೆ ಸರಿಯಾಗಿ ಉತ್ತರಾದಿ ಮಠದ ಶ್ರೀಗಳಾದ ಶ್ರೀ ರಘುನಾಥ ತೀರ್ಥರು ತಾವೂ ಸಂಚಾರ ಮಾಡುತ್ತಾ ಅದೇ ಕೊಪ್ರ ಗ್ರಾಮಕ್ಕೆ ಬಂದರು. ಇಬ್ಬರು ಯತಿಗಳ ಸಮಾಗಮವಾಯಿತು. ಉಭಯ ಕುಶಲೋಪರಿಗಳು ಜರುಗಿದವು. ಶ್ರೀ ರಘುನಾಥತೀರ್ಥರ ಕಣ್ಣುಗಳು ಅಲ್ಲಿಯೇ ತೇಜಃಪುಂಜನಾಗಿ ಕಾಣಿಸುತ್ತಿದ್ದ ಬಾಲಮುನಿಯ ಮೇಲೆ ಹರಿದವು.

‘ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ದನಗಳನ್ನು ನೋಡಿ.’
“ಏನೇನು ಓದಿದ್ದೀರಿ?” ಎಂದು ಕುತೂಹಲಕ್ಕಾಗಿ ಪ್ರಶ್ನೆ ಹಾಕಿದರು. ಪ್ರಶ್ನೆ ಕೇಳಿದ್ದೆ ತಡ ಬಾಲಮುನಿ, ಮಧ್ವಾಚಾರ್ಯರ ಗ್ರಂಥಗಳನ್ನೂ ಸುಧಾ ವ್ಯಾಖ್ಯಾನ ವನ್ನೂ ನಿರರ್ಗಳವಾಗಿ ಒಪ್ಪಿಸಿದನಲ್ಲದೆ, ತನ್ನ ಶಾಸ್ತ್ರ ಪಾಂಡಿತ್ಯವನ್ನೂ ನಿವೇದನೆ ಮಾಡಿದ. ಬಾಲಕನ ಮೇಧಾಶಕ್ತಿಯನ್ನೂ ವಿದ್ಯಾಪ್ರೌಢಿಮೆಯನ್ನೂ ಕಂಡು ರಘುನಾಥತೀರ್ಥರು ತಲೆದೂಗುತ್ತಾ ಮತ್ತೆಮತ್ತೆ ಪ್ರಶಂಸೆಗಳನ್ನು ಮಾಡಲು ಆರಂಭಿಸಿದರು.
ತನಗಿಂತ ಹಿರಿಯರೂ ಜ್ಞಾನಸಂಪನ್ನರೂ ಆದ ಯತಿಗಳು ತನ್ನನ್ನು ಈ ರೀತಿ ಹೊಗಳುತ್ತಿರುವುದನ್ನು ಕಂಡು ಬಾಲಮುನಿಗೆ ತೀರಾ ಸಂಕೋಚವೆನಿಸಿತು. ವಿನಯದಿಂದ ಕೈಜೋಡಿಸಿ, “ತಾವು ಮಹಾ ಜ್ಞಾನಿಗಳು. ಮಹಾ ಸಂಸ್ಥಾನವೊಂದರ ಅಪತಿಗಳು. ನಾನೋ ಕೇವಲ ಬಾಲಸಂನ್ಯಾಸಿ. ತಾವು ಶ್ರೀಪಾದಂಗಳವರು, ನನ್ನಂಥವನ ಗುಣಕಥನ ಮಾಡಬಾರದು” ಎಂದರು.
ಶ್ರೀರಘುತೀರ್ಥರಿಗೆ ಬಾಲಸಂನ್ಯಾಸಿಯ ವಿನಯ ಸೌಜನ್ಯಗಳು ತುಂಬ ಮೆಚ್ಚುಗೆಯಾದವು. ಬಹು ಸಂತೋಷದಿಂದ,
“ನಾವು ಶ್ರೀಪಾದಂಗಳವರಾದರೆ, ನೀವು ಶ್ರೀಪಾದ ರಾಜರು” ಎಂದು ಹೇಳಿದರು.
ಅಂದಿನಿಂದ ಲಕ್ಷ್ಮೀನಾರಾಯಣ ಮುನಿ ‘ಶ್ರೀಪಾದರಾಜರು’ ಎಂದೇ ಪ್ರಖ್ಯಾತರಾದರು.
ಶ್ರೀ ವಿಭುದೇಂದ್ರತೀರ್ಥರಲ್ಲಿ ಶ್ರೀಪಾದರಾಜರ ವಿದ್ಯಾಭ್ಯಾಸ ಮುಗಿದಿತ್ತು. ಗುರುಕಾಣಿಕೆಯನ್ನು ಸಲ್ಲಿಸಿ ಶ್ರೀರಂಗದಲ್ಲಿದ್ದ ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರ ಬಳಿಗೆ ಹಿಂದಿರುಗಿದರು.

ಪೀಠ ಬೆಳಗಲು
ಸ್ವರ್ಣವರ್ಣರ ಆನಂದಕ್ಕಂತೂ ಪಾರವೇ ಇಲ್ಲ. ತಾವು ಕರೆದುಕೊಂಡು ಹೋಗಿ ಬಿಟ್ಟ ಲಕ್ಷ್ಮೀನಾರಾಯಣ ಬಾಲಮುನಿ ಇದೀಗ ‘ಶ್ರೀಪಾದರಾಜರು’ ಎಂಬ ಬಿರುದನ್ನು ಪಡೆದು ಬಂದಿದ್ದಾನೆ. ವಿದ್ಯೆ, ವಿನಯ, ವೈರಾಗ್ಯ, ಗಾಂಭೀರ್ಯಗಳ ತೇಜಸ್ಸಿನಿಂದ ಬೆಳಗುತ್ತಿದ್ದಾನೆ. ಸ್ವರ್ಣವರ್ಣರು ಶ್ರೀಪಾದರಾಜನನ್ನು ಕಂಡು ಉಬ್ಬಿ ಹೋದರು.
ಈ ಹೊತ್ತಿಗೆ ಅವರಿಗೂ ತುಂಬ ವಯಸ್ಸಾಗಿತ್ತು. ತಮ್ಮ ಅನಂತರ ಪೀಠಕ್ಕೆ ಬರಲು ಇಂಥ ಶಿಷ್ಯನಿಗಿಂತ ಬೇರೊಬ್ಬರುಂಟೆ! ಶ್ರೀಪಾದರಾಜರಿಗೇ ತಮ್ಮ ಸಂಸ್ಥಾನ ಸಲ್ಲತಕ್ಕದ್ದೆಂದು ಸ್ವರ್ಣವರ್ಣರು ನಿಶ್ಚಯಿಸಿಕೊಂಡರು. ಶ್ರೀಪಾದರಾಜರಿಗೇ ತಮ್ಮ ಪೀಠವನ್ನು ಅರ್ಪಿಸ ಬೇಕೆಂದು ಅವರಿಗೆ ಕನಸು ಬೇರೆ ಬಿದ್ದಿತ್ತಂತೆ.
ಸ್ವರ್ಣವರ್ಣರು ಶ್ರೀಪಾದರಾಜರ ತಂದೆತಾಯಿಗಳಿಗೆ ಹೇಳಿಕಳುಹಿಸಿದರು, ಬರಮಾಡಿಕೊಂಡರು. ತಮ್ಮ ಮನಸ್ಸಿ ನಲ್ಲಿರುವ ನಿರ್ಧಾರವನ್ನು ತಿಳಿಯಪಡಿಸಿದರು. ಎಲ್ಲರ ಒಪ್ಪಿಗೆ ಪಡೆದು ಸಂತೋಷದಿಂದ ತಮ್ಮ ಪೀಠದ ಮೇಲೆ ಶ್ರೀಪಾದರಾಜರನ್ನು ಕೂಡಿಸಿ ಪಟ್ಟಾಭಿಷೇಕ ನಡೆಸಿದರು.
ಪೀಠಕ್ಕೆ ಬಂದಾಗ ಶ್ರೀಪಾದರಾಜರಿಗೆ ವಯಸ್ಸು ಇನ್ನೂ ಹದಿನಾಲ್ಕು ವರ್ಷ. ಮುಂದೆ ಸ್ವಲ್ಪಕಾಲದಲ್ಲಿ ಸ್ವರ್ಣವರ್ಣತೀರ್ಥರು ಕಾಲವಾದರು. ಶ್ರೀರಂಗಕ್ಷೇತ್ರಕ್ಕೆ ಹೋದವರು ಇಂದಿಗೂ ಸ್ವರ್ಣವರ್ಣರ ವೃಂದಾವನ ವನ್ನು ಅಲ್ಲಿ ಕಾಣಬಹುದು.
ಎಳೆಯ ಬಾಲಕನೊಬ್ಬನಲ್ಲಿದ್ದ ವಿಶೇಷ ಪ್ರತಿಭೆಯನ್ನು ಗುರುತಿಸಿ, ಅವನನ್ನು ಸಕಲಶಾಸ್ತ್ರ ಪಾರಂಗತನನ್ನಾಗಿ ಮಾಡಿ ಕನ್ನಡದೇಶ ಮತ್ತು ಭಾಷೆಗೆ ಶ್ರೀಪಾದರಾಜನೆಂಬ ಮಹಿಮಾನ್ವಿತನನ್ನು ಕೊಟ್ಟ ಶ್ರೇಯಸ್ಸು ಸ್ವರ್ಣವರ್ಣ ತೀರ್ಥರಿಗೆ ಸಲ್ಲುತ್ತದೆ.

ದಾಸಸಾಹಿತ್ಯದ ಅರುಣೋದಯ
ಶ್ರೀಪಾದರಾಜರು ತಮ್ಮ ಅಪಾರ ಮಹಿಮೆ, ವಿದ್ವತ್ತುಗಳಿಂದ ಶೋಭಿಸುತ್ತಾ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ರಚನೆ ಮಾಡಿದರು. ಕರ್ನಾಟಕದ ನೆಲದಲ್ಲಿ ಧರ್ಮಜಾಗೃತಿ ಯನ್ನು ಉಂಟುಮಾಡಿದರು. ತಮ್ಮ ಕೀರ್ತನೆಗಳನ್ನು ಸಂಗೀತಬದ್ಧವಾಗಿ ರಚಿಸಿದರಲ್ಲದೆ, ತಾವೇ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು, ತಾಳಗಳನ್ನು ಹಾಕುತ್ತಾ ನರ್ತನ ಮಾಡಿದರು. ರಾಗ, ತಾಳ, ಲಯಗಳಿಂದ ತುಂಬಿದ ಶ್ರೀಪಾದರಾಜರ ಭಗವನ್ನಾಮ ಸಂಗೀತ ಕೃತಿಗಳು ನಮ್ಮ ಕನ್ನಡ ಭಾಷೆಗೆ ಒಂದು ವಿಶೇಷ ಕೊಡುಗೆ. ‘ಶ್ರೀಪಾದ ರಾಜರಿಂದ ದಾಸಸಾಹಿತ್ಯದ ಅರುಣೋದಯ’ ಎಂದೇ ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರೆಯಲಾಗಿದೆ.
ನಮ್ಮ ಭರತಖಂಡದಲ್ಲಿ ಭಕ್ತಿಮಾರ್ಗವೆನ್ನುವುದು ಬಹು ದೊಡ್ಡ ಸಂಪ್ರದಾಯ. ನಮ್ಮ ಕರ್ನಾಟಕ ಭೂಮಿ ಯಲ್ಲಿಯೇ ಅದು ಜನಿಸಿತ್ತೆನ್ನುವುದು ನಮಗೆಲ್ಲ ಹೆಮ್ಮೆ. ಮಧ್ವಾಚಾರ್ಯರು ಇದರ ಆದಿ ಪ್ರವರ್ತಕರು. ಅವರನ್ನೇ ಗುರುವಾಗಿಟ್ಟುಕೊಂಡು ವೈಷ್ಣವ ದಾಸಪಂಥ ಕರ್ನಾಟಕದಲ್ಲೆಲ್ಲ ಭಕ್ತಿ ಪ್ರಚಾರ ಮಾಡಿತು. ಇದರ ಪ್ರಭಾವ ಉತ್ತರದ ಬಂಗಾಳ ದೇಶದವರೆಗೂ ವ್ಯಾಪಿಸಿತು. ಭಕ್ತಿ ಸಂಪ್ರದಾಯ ಎಂದರೇನು? ಭಗವಂತನಲ್ಲಿ ಗಾಢವಾದ ಪ್ರೇಮವೇ ಭಕ್ತಿ. ಹೃದಯದಲ್ಲಿ ಉಕ್ಕಿ ಬರುವಂತಹ ಭಾವನಾಲಹರಿಗಳನ್ನು ಯಾವ ಮುಚ್ಚು ಮರೆಯಿಲ್ಲದೆಯೇ ಭಗವಂತನಲ್ಲಿ ತೋಡಿಕೊಳ್ಳ ಲಾಗುತ್ತದೆ. ಅತ್ಯುತ್ಕಟ ಭಾವನೆಗಳು, ಸರಳವಾದ ಹೃದಯ, ಪ್ರೇಮ ಪುರಸ್ಸರವಾದ ಮಾತುಗಳು – ಇವು ಭಕ್ತಿಮಾರ್ಗದವರ ಲಕ್ಷಣ. ಈ ಭಕ್ತಿ ಸಂಪ್ರದಾಯ ನಮ್ಮ ಕನ್ನಡ ದೇಶದಲ್ಲಿ ೧೩ರಿಂದ ೧೮ನೆಯ ಶತಮಾನ ಗಳವರೆಗೂ ತುಂಬು ಪ್ರವಾಹದಂತೆ ಹರಿ ಯಿತು. ಲೋಕ ಕಲ್ಯಾಣದೃಷ್ಟಿಯೇ ಇವರದು. ಇವರನ್ನು ‘ದಾಸಕೂಟದವರು’ ಎಂದು ಕರೆಯ ಲಾಯಿತು. ಇವರ ಕೃತಿಗಳನ್ನೆಲ್ಲ ‘ದಾಸಸಾಹಿತ್ಯ’ ಎಂದು ಹೇಳಲಾಯಿತು. ಕನ್ನಡನಾಡಿನ ಪುರಂದರರು ತ್ಯಾಗರಾಜರಿಗಿಂತಲೂ ಬಹಳ ಹಿಂದಿನವರು. ತ್ಯಾಗರಾಜರ ತಾಯಿ ತಮ್ಮ ಮನೆಯಲ್ಲಿ ಪುರಂದರರ ಕೀರ್ತನೆಗಳನ್ನು ಹಾಡುತ್ತಿದ್ದರಂತೆ. ಪುರಂದರದಾಸರಿ ಗಿಂತಲೂ ಹೆಚ್ಚು ಹಿಂದಿನವರು ಶ್ರೀಪಾದರಾಜರು.
ನಮಸ್ತೇ ಶ್ರೀಪಾದರಾಜಾಯ
ನಮಸ್ತೇ ವ್ಯಾಸಯೋಗಿನೇ |
ನಮಃ ಪುರಂದರಾರ್ಯಾಯ
ವಿಜಯಾರ್ಯಾ ಯತೇ ನಮಃ ||
ಎಂದೇ ಶ್ರೀಪಾದರಾಜರಿಗೆ ಆದ್ಯಪಟ್ಟವನ್ನು ಕಟ್ಟಲಾ ಗಿದೆ. ದಾಸ ಸಾಹಿತ್ಯದಲ್ಲಿ ಪ್ರಸಿದ್ಧವಾದ ವ್ಯಾಸತೀರ್ಥರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು – ಹೀಗೆ ಇವರೆಲ್ಲರಿಗೂ ಗುರು ಸಮಾನರಾಗಿ ಇರತಕ್ಕವರು ಶ್ರೀಪಾದರಾಜರು. ದಾಸ ಸಾಹಿತ್ಯದ ಪಿತಾಮಹರೆಂದೇ ಅವರನ್ನು ಕರೆಯಲಾಗಿದೆ.

ತಿಳಿಗನ್ನಡದಲ್ಲಿ ಕೃತಿಗಳು
ತಮ್ಮ ಗುರುಗಳಾದ ಸ್ವರ್ಣವರ್ಣತೀರ್ಥರ ಜತೆಯಲ್ಲಿ ಹಲವು ವರ್ಷಗಳ ಕಾಲವೇ ಶ್ರೀಪಾದರಾಜರು ತಮಿಳು ದೇಶದ ಶ್ರೀರಂಗದಲ್ಲಿ ಇದ್ದರಷ್ಟೆ. ತಮಿಳರು ಶ್ರೀವೈಷ್ಣವ ಪ್ರಬಂಧಗಳನ್ನು ತಮ್ಮ ತಾಯಿನುಡಿಯಾದ ತಮಿಳು ಭಾಷೆಯಲ್ಲಿಯೇ ಅಕ್ಕರೆಯಿಂದ ಸಂಗೀತ ಸಾಹಿತ್ಯಬದ್ಧವಾಗಿ ರಚಿಸುತ್ತಿದ್ದುದನ್ನೂ ಹಾಡುತ್ತಿದ್ದುದನ್ನೂ ಶ್ರೀಪಾದರಾಜರು ಕಂಡಿದ್ದರು. ಸಾಮಾನ್ಯ ಜನರ ಹೃದಯವನ್ನು ನೇರವಾಗಿ ಮುಟ್ಟಲು ಮಾತೃಭಾಷೆಗಿಂತ ಬೇರೆ ಸಾಧನವೇ ಇಲ್ಲವೆಂಬುದನ್ನು ಅವರು ಅರಿತಿ ದ್ದರು. ಶ್ರೀವೈಷ್ಣವ ಪ್ರಬಂಧಗಳಂತೆಯೇ ತಮ್ಮ ಸ್ವಭಾಷೆ ಕನ್ನಡ ದಲ್ಲಿಯೂ ಕೃತಿರಚನೆಗಳನ್ನು ಮಾಡಬೇಕೆಂದು ಶ್ರೀಪಾದ ರಾಜರು ನಿರ್ಧರಿಸಿದರು. ಅದುವರೆಗೂ ದೊಡ್ಡದೊಡ್ಡ ವಿಷಯಗಳನ್ನು ಹೇಳಬೇಕಾದರೆ ಸಂಸ್ಕೃತ ಭಾಷೆಯೊಂದೇ ಯೋಗ್ಯತೆಯುಳ್ಳದ್ದೆಂದು ಪಂಡಿತರೂ ಸಾಹಿತ್ಯ ರಚನ ಕಾರರೂ ನಂಬಿದ್ದರು. ಆದರೆ ಶ್ರೀಪಾದರಾಜರು ತಾವು ಸಂಸ್ಕೃತದಲ್ಲಿ ಘನ ಪಂಡಿತರಾಗಿದ್ದರೂ ‘ವಾಗ್ವಜ್ರ’ ಎಂಬ ತಮ್ಮ ಕೃತಿಯನ್ನು ಸಂಸ್ಕೃತ ಭಾಷೆಯಲ್ಲೆ ರಚಿಸಿದ್ದರೂ ಚತುಶ್ಶಾಸ್ತ್ರಗಳನ್ನು ಓದಿದವರಾಗಿದ್ದರೂ ತಮ್ಮ ಅಂತರಂಗದ ಭಾವನಾಲಹರಿಗಳಿಗೆ, ಭಗವಂತನ ಭಕ್ತಿಗೆ ತಮ್ಮ ತಾಯ್ನುಡಿಯಾದ ಕನ್ನಡವೇ ಯೋಗ್ಯ, ಸರ್ವಶ್ರೇಷ್ಠ ವೆಂದು ತಿಳಿದರು. ತಮ್ಮ ಮಾತೃಭಾಷೆಗೆ ಶ್ರೀಪಾದರಾಜರು ಸಲ್ಲಿಸಿದಂತಹ ಗೌರವ, ಮಹತ್ವದ ಕಾಣಿಕೆ ಇದು. ಶ್ರೀಪಾದರಾಜ ಯತಿಗಳನ್ನು ನಾವು ಸ್ಮರಿಸಿಕೊಳ್ಳುವುದು ಕನ್ನಡ ಭಾಷೆಗೆ ಅವರು ಸಲ್ಲಿಸಿದಂತಹ ಈ ಪ್ರೀತಿ ಅಭಿಮಾನಗಳಿಂದ.
ಶ್ರೀಪಾದರಾಜರು ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರು ಕಾಲವಾದ ಮೇಲೆ ಶ್ರೀರಂಗ ದಿಂದ ನೇರವಾಗಿ ಮುಳಬಾಗಲು ಮಠಕ್ಕೆ ಬಂದರು. ಮುಳಬಾಗಲು ಕೋಲಾರ ಜಿಲ್ಲೆಯಲ್ಲಿದೆ. ಅಂದು ಈ ಮುಳಬಾಗಲು ಸಾಳ್ವ ನರಸಿಂಹನ ರಾಜ್ಯಾಕಾರಕ್ಕೆ ಸೇರಿತ್ತು. ಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬ ರಾಗಿದ್ದ ಪದ್ಮನಾಭತೀರ್ಥ ಎಂಬವರು ಈ ಮುಳ ಬಾಗಲು ಮಠವನ್ನು ಸ್ಥಾಪಿಸಿದವರು. ಶ್ರೀಪಾದರಾಜರ ಗುರುಗಳಾಗಿದ್ದ ಸ್ವರ್ಣವರ್ಣತೀರ್ಥರು ಈ ಮಠದ ಯತಿಗಳಲ್ಲಿ ಎಂಟನೆಯವರಾಗಿದ್ದರು. ಮುಂದೆ ಮುಳ ಬಾಗಲು ಮಠವೇ ಶ್ರೀಪಾದರಾಜರ ಸಮಸ್ತ ಕಾರ್ಯ ಕ್ಷೇತ್ರವಾಯಿತು. ಉನ್ನತ ವಿದ್ಯಾಪೀಠವೊಂದನ್ನು ಅವರು ಇಲ್ಲಿ ಸ್ಥಾಪನೆ ಮಾಡಿದರು. ತತ್ತ್ವಶಾಸ್ತ್ರ, ಸಂಗೀತ ಶಾಸ್ತ್ರ, ನೃತ್ಯ ಶಾಸ್ತ್ರಗಳನ್ನು ಶ್ರೀಪಾದರಾಜರು ಚೆನ್ನಾಗಿ ಬಲ್ಲವ ರಾಗಿದ್ದರು. ಸಂಸ್ಕೃತ ವಿದ್ಯಾಭ್ಯಾಸಕ್ಕೂ ಸಂಗೀತ ಕಲಾ ಭ್ಯಾಸಕ್ಕೂ ಮುಳಬಾಗಿಲು ಪ್ರಸಿದ್ಧ ಕೇಂದ್ರವಾಯಿತು.

ವ್ಯಾಸಯೋಗಿಗಳು
ಈ ವಿದ್ಯಾಪೀಠದಲ್ಲಿ ಅಧ್ಯಯನಮಾಡಲು ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರತೊಡಗಿದರು. ಹೀಗೆ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಮುಖ್ಯರಾದವರು – ವ್ಯಾಸತೀರ್ಥರು. ಇವರು ವಿದ್ಯಾಭ್ಯಾಸಕ್ಕೆ ಬಂದಾಗ ಶ್ರೀಪಾದರಾಜರಿಗೆ ೫೪ ವರ್ಷ ವಯಸ್ಸು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ಸಮೀಪದಲ್ಲಿ ಅಬ್ಬೂರು ಎಂಬ ಗ್ರಾಮವಿದೆ. ಇಲ್ಲಿ ಮಹಾತಪಸ್ವಿಗಳಾದ ಬ್ರಹ್ಮಣ್ಯ ತೀರ್ಥರೆಂಬ ಯತಿಗಳಿದ್ದರು. ಈ ಬ್ರಹ್ಮಣ್ಯತೀರ್ಥರು ಶ್ರೀಪಾದರಾಜರ ತಾಯಿಯ ಅಕ್ಕನ, ಅಂದರೆ ದೊಡ್ಡಮ್ಮನ ಮಗ. ಬ್ರಹ್ಮಣ್ಯತೀರ್ಥರ ಸಾಕು ಮಗನೇ ವ್ಯಾಸಯೋಗಿ. ಶ್ರೀಪಾದರಾಜರ ಬಳಿ ವಿದ್ಯಾಭ್ಯಾಸಕ್ಕೆಂದು ಬ್ರಹ್ಮಣ್ಯತೀರ್ಥರು ವ್ಯಾಸಯೋಗಿಯನ್ನು ಕಳುಹಿಸಿ ಕೊಟ್ಟಿದ್ದರು. ಸುಮಾರು ಹನ್ನೆರಡು ವರ್ಷಗಳ ಕಾಲ ವ್ಯಾಸಯೋಗಿಗಳು ಶ್ರೀಪಾದರಾಜರಲ್ಲಿ ವಿದ್ಯಾರ್ಜನೆ ಮಾಡಿದರು.
ವ್ಯಾಸಯೋಗಿಗಳ ವಿದ್ಯಾಭ್ಯಾಸ ನಡೆಯುತ್ತಿದ್ದ ಸಮಯ ದಲ್ಲಿ ಒಮ್ಮೆ ಒಂದು ವಿಚಿತ್ರ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಗುರುಗಳು ಹೇಳಿ ಕೊಟ್ಟ ಪಾಠವನ್ನೇ ಗಾಢವಾಗಿ ಮನನಮಾಡುತ್ತಿದ್ದ ವ್ಯಾಸಯೋಗಿಗೆ ನಿದ್ರೆ ಹತ್ತಿತು. ಎಲ್ಲೋ ಹೊಂಚು ಹಾಕುತ್ತಿದ್ದ ಒಂದು ಹೆಬ್ಬಾವು ವ್ಯಾಸಯೋಗಿ ಮಲಗಿದ್ದ ಗುಹೆಗೆ ನುಗ್ಗಿ, ವ್ಯಾಸಯೋಗಿಯನ್ನು ಕಾಲಕಡೆಯಿಂದ ನುಂಗುತ್ತಿತ್ತು. ಇನ್ನಿತರ ಶಿಷ್ಯರು ಇದನ್ನು ಕಂಡು ಹೌಹಾರಿದರು. ಕೂಡಲೆ ಗುರುಗಳಿಗೆ ಸುದ್ದಿ ಮುಟ್ಟಿಸಿದರು. ಶ್ರೀಪಾದರಾಜರು ಬಂದು ನೋಡು ತ್ತಾರೆ, ಮಹಾಸರ್ಪವೊಂದು ವ್ಯಾಸಯೋಗಿಯನ್ನು ಬಾಯ್ತೆರೆದು ನುಂಗುತ್ತಿದೆ. ಕೂಡಲೆ ಸರ್ಪದೊಡನೆ ಅದರ ಭಾಷೆಯಲ್ಲಿಯೇ ಮಾತನಾಡ ತೊಡಗಿದರು. ಸರ್ಪ ಮೆಲ್ಲಗೆ ಹಿಂಜರಿಯುತ್ತಾ ಹಾಗೆಯೇ ಬಿಟ್ಟು ಹೋಯಿತು. ತನ್ನ ಭಾಷೆಯಲ್ಲಿಯೇ ತನ್ನನ್ನು ಮಾತ ನಾಡಿಸಿದ್ದು ಸರ್ಪಕ್ಕೆ ಸಂತೋಷವಾಯಿತಂತೆ. ಈ ಪ್ರಸಂಗವನ್ನು ಶ್ರೀನಿತೀರ್ಥ ಎಂಬವರು ತಾವು ಬರೆದಂತಹ ‘ಶ್ರೀಪಾದರಾಜಾಷ್ಟಕ’ ಎಂಬ ಶ್ಲೋಕದಲ್ಲಿ ವರ್ಣನೆ ಮಾಡಿದ್ದಾರೆ :
‘ಶ್ರೀವ್ಯಾಸರಾಜ ಪಣಿಬಂಧ ನಿವಾರಕಾಯ ತದ್ಭಾಷಯೈವ ಫಣಿರಾಜ ಸಂತೋಷಕಾಯ ಶ್ರೀಮತ್ಸುರತ್ನ ಖಚಿತೋದ್ವಲ ಕುಂಡಲಾಯ ಶ್ರೀಪಾದರಾಜ ಗುರುವೇ ನಮಃ ಶುಭಾಯ’ ಬಹು ಆದರದಿಂದ ಶಿಷ್ಯ ವ್ಯಾಸತೀರ್ಥರಿಗೆ ಶ್ರೀಪಾದರಾಜರು ಸಕಲ ಶಾಸ್ತ್ರಗಳನ್ನು ಬೋಸಿದರು. ಈ ಶಿಷ್ಯನೋ ಮಹಾಮೇಧಾವಿ. ಶಿಕ್ಷಣ ಮುಗಿದ ಮೇಲೆ ಶ್ರೀಪಾದರಾಜರು ಶಿಷ್ಯ ವ್ಯಾಸರಾಜ ರೊಡನೆ ಮೊದಲು ಭೇಟಿ ಕೊಟ್ಟಿದ್ದು ಚನ್ನಪಟ್ಟಣದ ಸಮೀಪದಲ್ಲಿರುವ ಅಬ್ಬೂರಿಗೆ. ವಿದ್ಯಾಪ್ರೌಢಿಮೆಯಿಂದ ತೇಜಃಪುಂಜನಾದ ವ್ಯಾಸಯೋಗಿಯನ್ನು ತಾವೇ ಸ್ವತಃ ಬ್ರಹ್ಮಣತೀರ್ಥರಿಗೆ ಒಪ್ಪಿಸಿಕೊಡುವುದು ಶ್ರೀಪಾದರಾಜರ ಅಪೇಕ್ಷೆಯಾಗಿತ್ತು. ಬ್ರಹ್ಮಣ್ಯತೀರ್ಥರ ಸಾಕುಮಗ ನಲ್ಲವೇ ವ್ಯಾಸರಾಜರು? ಶಿಷ್ಯನ ಮೇಲೆ ಶ್ರೀಪಾದರಾಜ ರಿಗೆ ಅದೆಷ್ಟು ಪ್ರೀತಿಯೆಂದರೆ ‘ಇದಿರದಾವನು ನನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸ’ ಎಂದು ತಾವೇ ತಮ್ಮ ಶಿಷ್ಯನನ್ನು ಕುರಿತು ಕೀರ್ತನೆಯೊಂದನ್ನು ರಚಿಸಿದ್ದಾರೆ. ಗುರುವಿನಿಂದಲೇ ಹೊಗಳಿಸಿಕೊಳ್ಳು ವಂತಹ ಪುಣ್ಯ, ಮಹಿಮೆ, ವಿದ್ವತ್ತು, ಸಚ್ಚಾರಿತ್ರ  ವ್ಯಾಸರಾಜರದು.

ಸಂಪುಟದಲ್ಲಿ ಮೋಹಕ ವೇಣುಗೋಪಾಲ ಮೂರ್ತಿ

ವೇಣುಗೋಪಾಲನ ದರ್ಶನ
ಒಮ್ಮೆ ಹೀಗಾಯಿತು: ಗುರು-ಶಿಷ್ಯರು ಜತೆಗೂಡಿ ಸಂಚಾರ ಕೈಗೊಂಡಿದ್ದಾಗ ಪಂಢರಾಪುರದ ಭೀಮಾ ನದಿಯ ತೀರದಲ್ಲಿ ಬಹುಕಾಲದಿಂದ ಮರಳಿನಲ್ಲಿ ಹೂತು ಹೋಗಿದ್ದ ವಿಗ್ರಹಗಳಿದ್ದ ಎರಡು ಸಂಪುಟಗಳು ದೊರೆತವು. ಹಾಗೆ ಹೂತಿರುವುದು ಶ್ರೀಪಾದರಾಜರಿಗೆ ಕನಸಿನಲ್ಲಿ ಕಂಡಂತಾಯಿತಂತೆ. ಆ ಸ್ಥಳದಲ್ಲಿ ಹುಡುಕಿ ನೋಡಿದಾಗ ಎರಡು ಸಂಪುಟಗಳು ಕಣ್ಣಿಗೆ ಕಂಡವು. ಅವುಗಳಲ್ಲಿ ಒಂದು ಸಂಪುಟವನ್ನೇನೋ ಕೂಡಲೆ ತೆರೆಯಲು ಸಾಧ್ಯವಾಯಿತು. ಅದರೊಳಗೆ ‘ರಂಗವಿಠಲ’ ಮೂರ್ತಿಯಿತ್ತು. ಇನ್ನೊಂದು ಸಂಪುಟವನ್ನು ತೆರೆಯಲು ಯತ್ನಿಸಿದಾಗ, ಏನು ಮಾಡಿದರೂ ಅದು ಬರಲಿಲ್ಲ. ಅದನ್ನು ಹಾಗೆಯೇ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಒಮ್ಮೆ ಗುರು ಶ್ರೀಪಾದರಾಜರಿಗೆ ದೇಹಾಲಸ್ಯದ ಕಾರಣದಿಂದಾಗಿ ಪೂಜೆಮಾಡಲು ಸಾಧ್ಯವಾಗದೆ, ಆ ದಿನದ ಪೂಜೆಯನ್ನು ಶಿಷ್ಯ ವ್ಯಾಸರಾಜರಿಗೆ ಒಪ್ಪಿಸಿದರು. ವ್ಯಾಸರಾಜರಿಗೋ ಅದೊಂದು ಅಪೂರ್ವ ಸುಸಂ, ಅಗಾಧ ಸಂತೋಷ. ಎಲ್ಲ ದೇವತಾ ವಿಗ್ರಹಗಳನ್ನೂ ಪೂಜೆಗೆ ಅನುಗೊಳಿಸಿ, ಅದುವರೆಗೂ ತೆರೆಯಲು ಬಾರದಿದ್ದ, ಭೀಮಾನದೀ ತೀರದಲ್ಲಿ ದೊರಕಿದ್ದ ಸಂಪುಟವನ್ನು ತೆರೆಯಲು ಹೋದಾಗ ಅದು ತಟಕ್ಕನೆ ಬಾಯ್ದೆರೆದುಕೊಂಡಿತು. ಸಂಪುಟದ ಒಳಗೆ ನೋಡಿದರೆ ಮೋಹಕ ವೇಣು ಗೋಪಾಲ ಮೂರ್ತಿ. ತುಟಿಗೆ ಕೊಳಲಿಟ್ಟು, ಕಾಲಿಗೆ ಗೆಜ್ಜೆಕಟ್ಟಿ ಝಣತ್ಕಾರ ಮಾಡುತ್ತಾ ತ್ರಿಭಂಗಿಯಲ್ಲಿ ನಿಂತು ನೃತ್ಯ ಮಾಡುತ್ತಿದ್ದಾನೆ. ಕೊಳಲ ಇಂಪಾದ ನಾದ ಎಲ್ಲೆಡೆಗೂ ತುಂಬಿಕೊಂಡಿದೆ. ವ್ಯಾಸರಾಜರ ಮೈ ಜುಮ್ಮೆಂದಿತು. ಆ ದಿವ್ಯ ಮೂರ್ತಿಯ ಗೆಜ್ಜೆ ಶಬ್ದದಲ್ಲಿ, ವೇಣುನಾದದಲ್ಲಿ ಮೈಮರೆತು, ಅಲ್ಲಿಯೇ ಕೈಗೆ ಸಿಕ್ಕಿದ ಎರಡು ಸಾಲಿಗ್ರಾಮಗಳನ್ನು ಎತ್ತಿಕೊಂಡು ತಾಳ ಹಾಕುತ್ತಾ, ಕುಣಿಯಲಾರಂಭಿಸಿದರು. ವೇಣುಗೋಪಾಲ ಬಲಗಾಲಿನ ಮೇಲೆ ಎಡಗಾಲನ್ನಿಟ್ಟು ಅಪೂರ್ವ ಭಂಗಿಯಲ್ಲಿ ಕುಣಿಯುತ್ತಿದ್ದ. ಭಕ್ತಿಯ ಉನ್ಮಾದದಲ್ಲಿ ವ್ಯಾಸರಾಜರು ಕುಣಿದರು… ಕುಣಿದರು. ಕುಣಿಯು ತ್ತಲೇ ಇದ್ದರು. ಇದನ್ನು ಕಂಡ ಇನ್ನಿತರ ಶಿಷ್ಯರು ಕೂಡಲೇ ಶ್ರೀಪಾದರಾಜರ ಬಳಿಗೆ ಓಡಿಹೋದರು; ನಡೆಯುತ್ತಿರುವುದನ್ನು ತಿಳಿಸಿದರು. ಗುರುಗಳು ಓಡಿ ಬಂದು ನೋಡಿದರು. ಇದುವರೆಗೂ ತೆರೆಯಲಾಗದಿದ್ದ  ಸಂಪುಟ ತೆರೆದಿದೆ. ವೇಣುಗೋಪಾಲ ಕಾಲುಗೆಜ್ಜೆಗಳನ್ನು ಶಬ್ದ ಮಾಡುತ್ತಾ ಕೊಳಲ ನಾದ ಮಾಡುತ್ತಾ ಕುಣಿಯುತ್ತಿದ್ದಾನೆ. ಅವನ ಜತೆಗೆ ವ್ಯಾಸರಾಜರೂ ಕುಣಿದಾಡುತ್ತಿದ್ದಾರೆ.
“ವ್ಯಾಸರಾಜರೇ, ನೀವೇ ಧನ್ಯರು. ನಿಮ್ಮಿಂದ ನನಗೂ ವೇಣುಗೋಪಾಲನ ದಿವ್ಯದರ್ಶನವಾಯಿತು. ನಿಮಗೆ ಅನುಗ್ರಹಿತವಾದ ಈ ವೇಣುಗೋಪಾಲ ಮೂರ್ತಿಯನ್ನು ನೀವೇ ಇಟ್ಟುಕೊಂಡು ಪೂಜಿಸಿ” ಎಂದು ಶ್ರೀಪಾದರಾಜರು ಆ ವೇಣುಗೋಪಾಲ ಸಂಪುಟ ವನ್ನು ವ್ಯಾಸರಾಜರಿಗೇ ಕೊಟ್ಟುಬಿಟ್ಟರು. ಈಗಲೂ ಈ ವಿಗ್ರಹ ಕುಂದಾಪುರದ ವ್ಯಾಸರಾಜ ಮಠದಲ್ಲಿದೆ.
ಶ್ರೀಪಾದರಾಜರು ತಾವು ರಚಿಸಿದ ಉಗಾಭೋಗ ವೊಂದರಲ್ಲಿ ವ್ಯಾಸರಾಜರಿಗೆ ಕಂಡ, ವ್ಯಾಸರಾಜರಿಂದ ತಾವೂ ಕಾಣಲು ಸಾಧ್ಯವಾದ ಆ ದಿವ್ಯ ವೇಣುಗೋಪಾಲ ಮೂರ್ತಿಯನ್ನು ಈ ರೀತಿ ವರ್ಣನೆ ಮಾಡಿದ್ದಾರೆ :
ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು
ಪಾಲಿಸಯ್ಯ ಭಾಗ್ಯವಿತ್ತು ಭಕ್ತವತ್ಸಲ
ನಿತ್ಯಪೂರ್ಣ ಮಂಗಳವಿತ್ತು ನಿತ್ಯದಿ ಕಲ್ಯಾಣವಿತ್ತು
ನಿತ್ಯ ಸಲಹೊ ವ್ಯಾಸಮುನಿ ವಂದ್ಯ ಗೋಪಿನಾಥನೆ
ತುರುಬಿನ ಮ್ಯಾಲೆ ತುರುಬಿನ ಮೊಲ್ಲೆಮಲ್ಲಿಗೆ ಕುಸುಮಗಳ ರಂಗಾ
ಕೊರಳಲ್ಲಿ ಕಂಠೀಸರ ವನಮಾಲೆ ವರಕಲ್ಪತರುವನೆನ್ನೀ ರಂಗಾ
ಕರದಲ್ಲಿ ವೇಣು ಬೆರಳಲ್ಲಿ ಮೀಟುತ ಮರಿದುಂಬಿ ಝೇಂಕಾರ ರಂಗಾ
ಸರಿಗಮಪದನಿಸ ಸನಿದಪಮಗರಿಸ ಅಧರದಲೂದುತಿರೆ ರಂಗಾ
ಸಿರಿಯರಸನು ಸಿರಿಪತಿ ರಂಗವಿಠಲ ಸರಸದಿ ವೇಣುನಾದ ಮಾಡಿದ.

ಅಹಂಕಾರಿಗಳ ತೇಜೋವಧೆ
ಶ್ರೀಪಾದರಾಜರು ಮುಂದೆ ಭಾರತದ ಪವಿತ್ರ ಕ್ಷೇತ್ರಗಳನ್ನೆಲ್ಲ ಸಂಚಾರ ಮಾಡಿದರು. ಅವರು ಹೋದ ಕಡೆಯಲ್ಲೆಲ್ಲ ವಿದ್ವತ್‌ಸಭೆಗಳು, ಚರ್ಚಾಗೋಷ್ಠಿಗಳು ನಡೆದವು. ಎಲ್ಲ ಕಡೆಯಲ್ಲೂ ಶ್ರೀಪಾದರಾಜರು ತಮ್ಮ ವಿದ್ಯಾಪ್ರೌಢಿಮೆಯನ್ನು ಮೆರೆಯಿಸಿ, ಜಯಮಾಲೆ ಗಳನ್ನು ಸಂಪಾದನೆ ಮಾಡಿದರು. ಅವರು ಕಾಶಿಗೆ ಹೋಗಿದ್ದಾಗ ಒಂದು ವಿಶೇಷ ಪ್ರಸಂಗ ನಡೆಯಿತು. ಕಾಶಿಯಲ್ಲಿನ ಕೆಲವು ವಿದ್ಯಾಂಸರು ತುಂಬ ದುರಹಂಕಾರಿಗಳಾಗಿದ್ದರು. ವಿದ್ಯಾಗರ್ವದಿಂದ ಮೆರೆಯುತ್ತಿದ್ದರು. ವಿದ್ಯೆಗೆ ವಿನಯ ಭೂಷಣ ಇದೆ ಎಂಬುದನ್ನೇ ಅವರು ಮರೆತಂತಿತ್ತು. ಶ್ರೀಪಾದರಾಜ ರನ್ನು ವಾದಕ್ಕೆ ಎಳೆದು, ಅವರ ಮುಖ ಭಂಗಮಾಡಿ, ಅವರಿಂದ ಜಯಪತ್ರ ಬರೆಸಿಕೊಳ್ಳಬೇಕು ಎಂದು ಅವರ ಹಂಚಿಕೆಯಾಗಿತ್ತು. ಶ್ರೀಪಾದರಾಜರಿಗೆ ಇದು ತಿಳಿಯಿತು. ವಾದಕ್ಕೆ ಅವರು ಹೆದರುವವರಲ್ಲ. ಆದರೆ ಕೆಲವು ಷರತ್ತುಗಳನ್ನು ಹಾಕಿದರು. ಈ ವಿದ್ವತ್ ಸಭೆ ಒಬ್ಬ ಮಹಾರಾಜರ ಸಮ್ಮುಖದಲ್ಲಿ ನಡೆಯಬೇಕು. ವಿದ್ವಾಂಸರು ಒಂದು ವೇಳೆ ವಾದದಲ್ಲಿ ಸೋತು ಹೋದದ್ದೇ ಆದರೆ ಸಂನ್ಯಾಸವನ್ನು ಸ್ವೀಕರಿಸಬೇಕು – ಇವೇ ಆ ಷರತ್ತುಗಳು. ‘ಇದೇನು ಮಹಾ’ ಎಂದು ಕೊಂಡರು ಆ ಗರ್ವಿಷ್ಠ ವಿದ್ವಾಂಸರು. ವಾದ ಪ್ರಾರಂಭ ವಾದಾಗ ನಿಮಿಷನಿಮಿಷಕ್ಕೂ ಅವರು ಸೋಲುತ್ತಾ ಬಂದು, ಕಡೆಗೆ ಪೂರ್ಣ ಪರಾಜಿತರಾದರು. ಷರತ್ತಿನಂತೆ ಕಾಶಿಯ ಈ ವಿದ್ವಾಂಸರು ಸಂನ್ಯಾಸವನ್ನು ಸ್ವೀಕಾರ ಮಾಡಬೇಕಿತ್ತು. ಹಾಗೆ ಮಾಡಲಿಲ್ಲ; ಅದಕ್ಕೆ ಬದಲು ಶ್ರೀಪಾದರಾಜರ ಮೇಲೆ ಕೆಲವು ದುಷ್ಟ ಪ್ರಯೋಗಗಳನ್ನು ಮಾಡಿದರು – ಅಂದರೆ ಅವರ ನಾಲಿಗೆಯೇ ಕಟ್ಟಿಹೋಗುವಂತೆ ಮಾಟಮದ್ದುಗಳನ್ನು ಮಾಡಿದರು. ಶ್ರೀಪಾದರಾಜರಿಗೆ ಇದು ಅರ್ಥ ವಾಯಿತು. ಕೂಡಲೇ ಹಯಗ್ರೀವ ಮಂತ್ರವನ್ನು ಉಚ್ಚಾರಣೆ ಮಾಡುತ್ತಾ ಈ ದುಷ್ಟಶಕ್ತಿಯಿಂದ ಪಾರಾದರು.

ಸಾಳ್ವ ನರಸಿಂಹನ ಉದ್ಧಾರ
ಇನ್ನೊಂದು ಮಹತ್ವದ ಪ್ರಸಂಗ ಶ್ರೀಪಾದರಾಜರ ಜೀವನದಲ್ಲಿ ನಡೆಯಿತು.
ವಿಜಯನಗರದ ದೊರೆಗಳಿಗೆ ಅನನಾಗಿದ್ದ ಸಾಳ್ವ ನರಸಿಂಹನೆಂಬ ದಂಡನಾಯಕ ಪೆನುಗೊಂಡೆ ಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ಇವನಿಗೆ ಚಿತ್ತೂರು, ಉತ್ತರ ಆರ್ಕಾಟು, ಕಡಪಾಗಳ ಜತೆಗೆ ಪ್ರಸಿದ್ಧ ಕ್ಷೇತ್ರವಾದ ತಿರುಪತಿಯೂ ಸೇರಿತ್ತು. ತಿರುಪತಿಗೆ ವಿಜಯನಗರದ ಅರಸುಗಳ ಭದ್ರ ಬೆಂಬಲ ವಿದ್ದುದರಿಂದ ಸಾಳ್ವ ನರಸಿಂಹನ ಆಜ್ಞೆಯನ್ನು ತಿರುಪತಿ ಕ್ಷೇತ್ರದ ಅರ್ಚಕರು ಹೆಚ್ಚು ಗಮನಕ್ಕೆ ತಂದುಕೊಳ್ಳುತ್ತಿರ ಲಿಲ್ಲ. ತಿರುಪತಿ ಸ್ವಾಮಿಯ ಬಂಗಾರದ ವಾಹನಗಳ ಮೇಲೆ ಈ ಅರ್ಚಕರು ತಮ್ಮ ಮಕ್ಕಳನ್ನು ಕೂರಿಸಿ ಮೆರವಣಿಗೆ ಮಾಡುತ್ತಿದ್ದರು. ಸಾಳ್ವ ನರಸಿಂಹನಿಗೆ ಅರ್ಚಕರ ಈ ಬಗೆಯ ಉದ್ಧಟ ಧೋರಣೆ ಸರಿಬೀಳ ಲಿಲ್ಲ. ಅರ್ಚಕರನ್ನು ಹಲವು ಬಾರಿ ಎಚ್ಚರಿಸಿದ. ಆದರೆ ಅವರು ಎಚ್ಚೆತ್ತುಕೊಳ್ಳಲಿಲ್ಲ. ಒಂದು ಕಠಿಣವಾದ ಆಜ್ಞೆ ಯನ್ನು ಕೂಡ ಹೊರಡಿಸಿದ. (ಈ ಆಜ್ಞೆ ಕ್ರಿ.ಶ. ೧೪೬೭ ರಲ್ಲಿ ಹೊರಟಿತೆಂದು ಚರಿತ್ರಕಾರರ ರಾಬರ್ಟ್ ಸಿವೆಲ್ ಎಂಬವನು ಬರೆಯುತ್ತಾನೆ.) ಇದನ್ನು ಆ ಅರ್ಚಕರು ಅಷ್ಟು ಗಮನಕ್ಕೆ ತಂದುಕೊಳ್ಳಲೇ ಇಲ್ಲ. ಕೆಲವು ಕಾಲ ಕಳೆಯಿತು. ಒಮ್ಮೆ ತಿರುಪತಿ ದೇವರ ವಾಹನದ ಚಿನ್ನದ ಗರುಡನ ಮೇಲೆ ಅರ್ಚಕರ ಮಗನೊಬ್ಬನನ್ನು ಕೂರಿಸಿ ಮೆರವಣಿಗೆ ಮಾಡಿದರು ಎಂಬ ಸುದ್ದಿ ತಿಳಿಯಿತು. ಸಾಳ್ವ ನರಸಿಂಹನಿಗೆ ಕೋಪ ಉಕ್ಕೇರಿತು. ಕೂಡಲೇ ಹೊರಟು ಸಾಲಾಗಿ ಅರ್ಚಕರನ್ನು ತನ್ನ ಕತ್ತಿಗೆ ಬಲಿ ಕೊಟ್ಟ.
ಕೋಪದಲ್ಲಿ ಅರ್ಚಕರನ್ನು ಕೊಂದಿದ್ದೇನೋ ಆಯಿತು. ಆದರೆ ಅವನಿಗೆ ಕೊಲೆಯ ಪಾಪ ತಗಲಿ ಕೊಂಡಿತು. ಇದೇ ಪ್ರಬಲ ಚಿಂತೆಯಾಗಿ ಅವನನ್ನು ಕಾಡ ತೊಡಗಿತು. ಅದೇ ವೇಳೆಗೆ ತನ್ನ ಮಾಂಡಲಿಕದಲ್ಲಿಯೇ ಇದ್ದ ಮುಳಬಾಗಲಿನಲ್ಲಿ ಶ್ರೀಪಾದರಾಜ ಯತಿಗಳು ಇರುವುದು ಗೊತ್ತಾಯಿತು. ಒಡನೆಯೇ ಸಾಳ್ವ ನರಸಿಂಹ ಮುಳಬಾಗಲಿಗೆ ಧಾವಿಸಿ, ಶ್ರೀಪಾದರಾಜರಿಗೆ ಅಡ್ಡಬಿದ್ದು, ತನ್ನ ಪಾಪವನ್ನು ನಿವಾರಿಸಬೇಕೆಂದು ಬೇಡಿಕೊಂಡ. ಶ್ರೀಪಾದರಾಜರು ತಮ್ಮ ಯೋಗಮಹಿಮೆಯಿಂದ ಪೂಜೆಯ ಕಾಲದಲ್ಲಿ ಸಾಳ್ವ ನರಸಿಂಹನ ಮೇಲೆ ಶಂಖದಿಂದ ನೀರನ್ನು ಚಿಮುಕಿಸಿ, “ನಿನ್ನ ಪಾಪ ನಿವಾರಣೆಯಾಯಿತು ಹೋಗು” ಎಂದರು.

‘ಸುಖ ಪ್ರಾರಬ್ಧ’
ಸಾಳ್ವ ನರಸಿಂಹ ಇದನ್ನು ಮರೆಯಲಿಲ್ಲ. ಮುಂದೆ ಇವನೇ ವಿಜಯನಗರ ಸಿಂಹಾಸನವನ್ನು ಏರಿದಾಗ (ಕ್ರಿ.ಶ. ೧೪೮೫ರಿಂದ ೧೪೯೭) ಶ್ರೀಪಾದರಾಜರನ್ನು ವಿಜಯನಗರ ರಾಜಧಾನಿಗೆ ಕರೆಸಿಕೊಂಡು, ರತ್ನ ಖಚಿತ ಸಿಂಹಾಸನದ ಮೇಲೆ ಕೂರಿಸಿ, ರತ್ನಾಭಿಷೇಕವನ್ನು ನಡೆಯಿಸಿದ. ಶ್ರೀಪಾದರಾಜರು ಸಂನ್ಯಾಸಿಗಳು. ಆದರೂ ಸಿಂಹಾಸನಾರೋಹಣ ಮಾಡಿದರು. ಮೈಗೆ ಸುಗಂಧ ದ್ರವ್ಯವಗಳನ್ನು ಹಚ್ಚಿಕೊಂಡರು. ರತ್ನಖಚಿತ ಕವಚ, ಕಂಕಣ, ಕುಂಡಲಗಳನ್ನು ತೊಟ್ಟುಕೊಂಡರು. ಮುತ್ತಿನಹಾರ, ತುರಾಯಿಗಳನ್ನು ತೊಟ್ಟುಕೊಂಡರು. ಪ್ರತಿದಿನವೂ ಅರವತ್ತು ಬಗೆಯ ಭಕ್ಷ್ಯ ಭೋಜ್ಯಗಳನ್ನು ಮಾಡಿ ಅವರಿಗೆ ಬಡಿಸಲಾಗುತ್ತಿತ್ತು. ಇದೊಂದು ‘ಸುಖ ಪ್ರಾರಬ್ಧ’ ಎಂದು ಹೇಳಲಾಗಿದೆ. ಎಂದರೆ ಸಂನ್ಯಾಸಿಯಾದರೂ ಸುಖಗಳನ್ನು ಪಡುವುದು. ಇದನ್ನು ಕೇವಲ ವೈರಾಗ್ಯದ ಮನಸ್ಸಿನಿಂದ ಮಾತ್ರವೇ ಶ್ರೀಪಾದರಾಜರು ಸ್ವೀಕರಿಸುತ್ತಿದ್ದರು. ಸುಖಕ್ಕಾಗಿ ಆಸೆ ಪಡಲಿಲ್ಲ. ಈ ಭೋಗಗಳಿಂದ ಸಂತೋಷಪಡಲಿಲ್ಲ.
ಸಂನ್ಯಾಸಿಗಳು ಇಷ್ಟೆಲ್ಲ ವೈಭವ ಪಡೆಯುತ್ತಿರುವು ದನ್ನು ಕಂಡು ಕೆಲವರು ಕುಹಕಿಗಳು ಅಪಹಾಸ್ಯ ಮಾಡಿದರು. ಹೊರಗೆ ಇಷ್ಟೆಲ್ಲ ವೈಭವಗಳು, ಬಗೆ ಬಗೆಯ ಭಕ್ಷ್ಯಭೋಜ್ಯಗಳು ಇದ್ದರೂ ಶ್ರೀಪಾದರಾಜರ ಮನಸ್ಸು ಒಳಗೆ ಹೇಗಿರುತ್ತಿತ್ತು ಎಂಬುದನ್ನು ಈ ನಿಂದಕರು ತಿಳಿಯಲು ಸಾಧ್ಯವಾಗಲಿಲ್ಲ. ಈ ಸಂದರ್ಭ ದಲ್ಲಿ ಒಂದು ವಿಶೇಷ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಈ ನಿಂದೆಗಳನ್ನು ಕೇಳಿ ಶ್ರೀಪಾದರಾಜರು ತಾವು ಹಚ್ಚಿ ಕೊಳ್ಳುತ್ತಿದ್ದ ಸುಗಂಧದ್ರವ್ಯಗಳನ್ನು ಒಮ್ಮೆ ನಿಲ್ಲಿಸಿಬಿಟ್ಟರು. ಹಾಗೆ ನಿಲ್ಲಿಸಿದ್ದೆ ತಡ ಆ ಕುಹಕಿಗಳ ಮೈಯಲ್ಲೆಲ್ಲ ನಾನಾ ರೀತಿಯ ತಾಪಗಳು ತೋರಿಕೊಂಡು ಅದನ್ನು ಸಹಿಸುವುದೇ ಅವರಿಗೆ ದುಸ್ಸಾಧ್ಯವಾಯಿತು. ಶ್ರೀಪಾದರಾಜರ ಮಹಿಮೆ ತಿಳಿಯದೆ ಅಜ್ಞಾನದಿಂದ ತಾವು ನಡೆದುಕೊಂಡದ್ದಕ್ಕಾಗಿ ಅವರ ಕ್ಷಮಾಪಣೆ ಬೇಡಿದರು.

ಸಾಳ್ವ ನರಸಿಂಹ ಶ್ರೀಪಾದರಾಜರಿಗೆ ರತ್ನಾಭಿಷೇಕ ನಡೆಸಿದ.

ಇಟ್ಟಾಂಗೆ ಇರುವೆನು ಹರಿಯೆ
ಈ ಎಲ್ಲ ‘ಸುಖ ಪ್ರಾರಬ್ಧ’ಗಳನ್ನು ಅನುಭವಿಸು ವಾಗ ತಮ್ಮ ಮನಸ್ಸು ಹೇಗಿರುತ್ತಿತ್ತು, ಏತಕ್ಕಾಗಿ ಅವನ್ನೆಲ್ಲ ತಾವು ಅನುಭವಿಸಿದರು ಎನ್ನುವುದನ್ನು ಶ್ರೀಪಾದರಾಜರೇ ತಮ್ಮ ಒಂದು ಕೀರ್ತನೆಯಲ್ಲಿ ವಿವರಿಸಿದ್ದಾರೆ. ‘ದೇವರು ಹೇಗೆ ಹೇಗೆ ಇಟ್ಟಿರುತ್ತಾನೋ ಹಾಗೆಯೇ ನಾನಿರುತ್ತೇನೆ’ ಎಂಬುದು ಈ ಕೀರ್ತನೆಯ ಅರ್ಥ. ಅವನ ಕರುಣೆ ಇದ್ದರೆ ಸಣ್ಣಕ್ಕಿ ಅನ್ನ, ಬೆಣ್ಣೆಕಾಸಿದ ತುಪ್ಪ, ಚಿನ್ನದ ಹರಿವಾಣದಲ್ಲಿ ಊಟ, ಪೀತಾಂಬರ, ಜರಿಯಂಚಿನ ಶಾಲು, ಛತ್ರಚಾಮರ ಸೇವೆ, ಚಂದದ ಮಂಚ ಇವೆಲ್ಲವೂ ಲಭ್ಯವಾಗುತ್ತವೆ; ಅವನ ಕರುಣೆ ತಪ್ಪಿತೋ ಕದನ್ನ ಸಿಗುವುದೂ ಕಷ್ಟ. ಕೌಪೀನ, ಪಾದರಕ್ಷೆಗಳೂ ದೊರೆಯಲಾರವು – ಎನ್ನುತ್ತಾರೆ ಈ ಕೀರ್ತನೆಯಲ್ಲಿ ಶ್ರೀಪಾದರಾಜರು. ಆ ಕೀರ್ತನೆ ಹೀಗಿದೆ :

ಇಟ್ಹಾಂಗೆ ಇರುವೆನು ಹರಿಯೆ ಎನ್ನ ದೆರೆಯೆ   ||ಪ||
ಸಣ್ಣ ಶಾಲ್ಯೋದನ ಬೆಣ್ಣೆಕಾಸಿದ ತುಪ್ಪ
ಚಿನ್ನದ ಹರಿವಾಣದಲಿ ಭೋಜನ
ಘನ್ನ ಮಹಿಮ ನಿನ್ನ ಕರುಣ ತಪ್ಪಲು ಕ-
ದನ್ನಕ್ಕೆ ಬಾಯ್ ಬಿಡಿಸುವಿಯಲ್ಲೋ ಸ್ವಾಮಿ   || ೧ ||
ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೊ
ಕಪಿಲಹರೇ, ನಿನ್ನ ಕೃಪೆಯು ತಪ್ಪಿದ ಮೇಲೆ
ಹೇ ಪಿನಾಕಿವಂದ್ಯ ಕೌಪೀನ ದೊರೆಯದೊ   || ೨ ||
ಚಂದ್ರಶಾಲೆ ಚಂದ್ರಕಿರಣದಿಂದೊಪ್ಪುವ
ಚಂದದ ಮಂಚದೋಳ್ ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ-
ಮಂದಿರದೊಳು ತೋಳ್ತಲೆದಿಂಬು ಮಾಡಿಸುವಿ         || ೩ ||
ನರಯಾನದೊಳು ಕ್ಷಣ ನರವರನೆನಿಸುವಿ
ವರಛತ್ರ ಚಾಮರ ಹಾಕಿಸುವಿ
ಕರುಣನಿಧೇ ನಿನ್ನ ಕರುಣ ತಪ್ಪಿದ ಮೇಲೆ
ಚರಣಭರಣ ಪಾದರಕ್ಷೆಯು ದೊರೆಯದೋ   || ೪ ||
ಗಂಗಾಜನಕ ಪಾಂಡುರಂಗ ನಿನ್ನ ಭಕುತರ
ಸಂಗವಿರಲಿ ದುಷ್ಟಸಂಗ ಬೇಡಾ
ಅಂಗನೆಯರ ಕೂಡಾ ನಂಗಬಾಣನೆ ಶಿಲ್ಕಿ
ಭಂಗವ ತರಲಾರೆ ರಂಗವಿಠಲ ಕಾಯೋ     || ೫ ||

ಭಗವಂತ ಹೇಗೆ ಇರಬೇಕೆಂದು ಹೇಳುವನೋ ಹಾಗೆ ಮಾನವ ಇರಬೇಕಾದುದು ಧರ್ಮ. ಅವನು ಸುಖ ಕೊಟ್ಟರೆ ಸಂತೋಷದಿಂದ ಸ್ವಾಗತಿಸೋಣ; ದುಃಖ ಕೊಟ್ಟರೆ ಅದನ್ನು ಸಂತೋಷದಿಂದ ತೆಗೆದುಕೊಳ್ಳೋಣ ಎನ್ನುವುದೇ ಶ್ರೀಪಾದರಾಜರ ಈ ಕೀರ್ತನೆಯ ಹಿಂದಿ ರುವ ಅರ್ಥ. ಜೀವನ ಧರ್ಮ ರಹಸ್ಯವನ್ನು ಅವರು ಚೆನ್ನಾಗಿ ಇಲ್ಲಿ ವಿಷದಪಡಿಸಿದ್ದಾರೆ. ಹೊರಗೆಲ್ಲ ವೈಭವ ಗಳಿದ್ದರೂ ಒಳಗೆ ಅವರು ದೃಢ ವೈರಾಗ್ಯವನ್ನು ಹೊಂದಿದ್ದರು.

ಕೀರ್ತನೆಗಳು
ಅವರು ಧರ್ಮಪೀಠವೊಂದರಲ್ಲಿ ಕುಳಿತಿದ್ದರು, ಮಹಾ ಮಹಿಮರಾಗಿದ್ದರು. ಮಾತ್ರವಲ್ಲ, ವಿಶೇಷವಾಗಿ ಕನ್ನಡ ನಾಡಿನಲ್ಲಿ, ಕನ್ನಡ ಭಾಷೆಯಲ್ಲಿ ಒಂದು ಹೊಸ ಬಗೆಯ ಸಾಹಿತ್ಯ ಪರಂಪರೆಯನ್ನೆ ಸೃಷ್ಟಿಸಲು ಅವರು ಆದಿಪುರುಷರಾದರು ಎನ್ನುವುದು ತುಂಬ ಮುಖ್ಯ ಸಂಗತಿ. ಕನ್ನಡದಲ್ಲಿ ಸಂಗೀತಕೃತಿ ರಚನೆಗೆ ಅವರೇ ಸೂರ್ತಿದಾಯಕರಾದರು. ಇವರಿಗೂ ಹಿಂದೆ ನರಹರಿ ತೀರ್ಥ ಎಂಬುವರಿದ್ದರು. ಅವರು ಕೂಡ ಕನ್ನಡದಲ್ಲಿ ಕೀರ್ತನೆಗಳನ್ನು ಮಾಡಿದ್ದಾರೆ. ಆದರೆ ನಮಗೆ ಸಿಕ್ಕಿರುವುದು ಕವಲ ಒಂದೋ ಎರಡೋ ಅಷ್ಟೆ. ಶಾಸ್ತ್ರೀಯ ಸಂಗೀತದಲ್ಲಿ ಪಲ್ಲವಿ, ಅನುಪಲ್ಲವಿಗಳನ್ನು ಇಟ್ಟುಕೊಂಡು ವ್ಯಾಪಕವಾಗಿ ಕನ್ನಡದಲ್ಲಿ ಕೃತಿ ರಚನೆ ಮಾಡಿದ ಮೊದಲ ಕೀರ್ತಿ ಶ್ರೀಪಾದರಾಜರಿಗೇ ಸಲ್ಲ ಬೇಕು. ಅದರಿಂದಲೇ ಶ್ರೀಪಾದ ರಾಜರ ಹಸರು ಅಷ್ಟೊಂದು ಗಮನಾರ್ಹವಾಗಿರುವುದು. ‘ರಂಗವಿಠ್ಠಲ’ ಎಂಬ ಅಂಕಿತವನ್ನಿಟ್ಟುಕೊಂಡು ನೂರಾರು ಕೀರ್ತನೆ ಗಳನ್ನು ಶ್ರೀಪಾದರಾಜರು ಮಾಡಿದ್ದಾರೆ. ಸರಳವಾದ ಶೈಲಿ, ಮೃದುಮೃದುವಾದ ಭಾಷೆ, ಭಕ್ತಿರಸದಿಂದ ತುಂಬಿತುಳು ಕಾಡುತ್ತಿರುವ ಅವರ ಕೀರ್ತನೆಗಳು ಕೇಳಲು ತುಂಬ ಮನೋಹರವಾಗಿರುತ್ತವೆ. ರಾಗದ ಹೆಸರುಗಳನ್ನು ಸೇರಿಸಿಕೊಂಡೇ ಅವರು ರಚಿಸಿರುವ ಕೀರ್ತನೆಯೊಂದು, ಹೇಗೆ ಸಂಗೀತದಲ್ಲಿ ಅವರ ಜ್ಞಾನ ಅಪಾರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಹಾಡಿ ಕೊಳ್ಳಲು ಈ ಕೀರ್ತನೆ ತುಂಬ ಇಂಪಾಗಿರುವುದರಿಂದ ಅದನ್ನಿಲ್ಲಿ ಕೊಡಲಾಗಿದೆ.

ಲಾಲಿ ಗೋವಿಂದ ಲಾಲಿ, ಕೌಸಲ್ಯ
ಬಾಲ ಶ್ರೀರಾಮ ಲಾಲೀ
ಲಾಲಿ ಮುನಿವಂದ್ಯಲಾಲಿ, ಜಾನಕೀ
ರಮಣ ಶ್ರೀರಾಮ ಲಾಲೀ || ಪ ||
ಪಲ್ಲವಾಧರೆಯರೆಲ್ಲ ಈ ಶಿಶುವ
ತುಲ್ಯ ವರ್ಜಿತವೆನುತಲಿ
ಸಲ್ಲಲಿತ ಗಾನದಿಂದ ತೂಗಿದರು
ಕಲ್ಯಾಣಿ ರಾಗದಿಂದ ||
ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದ ಭೈರವಿಂದ ||
ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವಗಾಂಧಾರದಿಂದ ||

ಕಾವ್ಯಗಳು
ಕೇವಲ ಬಿಡಿ ಗೀತಗಳನ್ನೆ ಅಲ್ಲದೆ ಶ್ರೀಪಾದರಾಜರು ಗೋಪಿಗೀತಾ, ವೇಣುಗೀತಾ, ಭ್ರಮರಗೀತಾ, ಶ್ರೀ ಲಕ್ಷ್ಮೀ ನರಸಿಂಹ ಪ್ರಾರ್ದುಭಾದಂಡಕ, ರುಕ್ಮಿಣೀ-ಸತ್ಯಭಾಮ ವಿಲಾಸ ಮತ್ತು ಮಧ್ವನಾಮ ಎಂಬೆಲ್ಲ ಕನ್ನಡ ಕಾವ್ಯಗಳನ್ನು ರಚಿಸಿದ್ದಾರೆ. ತಾಯಿ ಯಶೋದೆ ಹೇಗೆ ತನ್ನ ಮಗನಾದ ಬಾಲಕೃಷ್ಣನನ್ನು ಪರಿಪರಿಯಿಂದ ಕೂಗಿರ ಬಹುದು, ತನ್ನ ತಾಯಿ ಹೃದಯದ ಪ್ರೀತಿಯನ್ನು ಹರಿಸಿರಬಹುದು ಎಂಬೆಲ್ಲ ಭಾವಗಳನ್ನು ತುಂಬಿ ಕೊಂಡು ಶ್ರೀಪಾದರಾಜರು ವಾತ್ಸಲ್ಯಭಾವದಿಂದ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ಹಾಗೆಯೇ ಮಧುರ ಭಾವ, ಸಮರ್ಪಣಭಾವಗಳುಳ್ಳ ಕೀರ್ತನೆಗಳನ್ನೂ ಮಾಡಿದ್ದಾರೆ. ಒಮ್ಮೆ ದೇವರಲ್ಲಿ ದೈನ್ಯವಾಗಿ ನಡೆದು ಕೊಳ್ಳುವುದು, ಇನ್ನೊಮ್ಮೆ ದೇವರೊಡನೆ ಸರಸವಾಡು ವುದು ಮತ್ತೊಮ್ಮೆ ದೇವರನ್ನು ನಿಂದಿಸಿ ಸ್ತುತಿ ಮಾಡು ವುದು, ಇನ್ನೊಮ್ಮೆ ದೇವರ ಮಹಿಮಾತಿಶಯಗಳನ್ನು ವರ್ಣಿಸುವುದು – ಹೀಗೆ ಹತ್ತಾರು ರೀತಿ ತಮ್ಮ ಅಂತರಂಗ ಭಾವನೆಗಳನ್ನು ಶ್ರೀಪಾದರಾಜರು ತಮ್ಮ ಕೃತಿಗಳಲ್ಲಿ ತೋಡಿಕೊಂಡಿದ್ದಾರೆ. ಅನೇಕ ಉಗಾಭೋಗಗಳನ್ನು ಅವರು ರಚಿಸಿದರು. ಗೀತಗೋವಿಂದದ  ಶ್ಲೋಕಗಳನ್ನು ಸಂಗೀತ ರೂಪದಲ್ಲಿ ಕನ್ನಡದಲ್ಲಿ ವೃತ್ತನಾಮಗಳಂತೆ ಬರೆದರು. ಕಾಲಿಗೆ ಗೆಜ್ಜೆ ಕಟ್ಟಿ, ಪೂಜಾ ಸಮಯಗಳಲ್ಲಿ ಹಾಡಿಕೊಂಡು ನರ್ತಿಸುವ ಸಲುವಾಗಿಯೇ ಕೀರ್ತನೆಗಳನ್ನು ರಚಿಸಿದರು. ಕನ್ನಡ ದೇಶದಲ್ಲಿ ಗೆಜ್ಜೆ ಕಟ್ಟಿ ಹಾಡುತ್ತಾ ನರ್ತಿಸುವ ಸಂಪ್ರದಾಯ ಶ್ರೀಪಾದರಾಜರಿಂದಲೇ ಪ್ರಾರಂಭ ವಾಯಿತು. ಸಪ್ತತಾಳಗಳನ್ನು ಬಳಸಿಕೊಂಡು ಸುಳಾದಿ ಗಳನ್ನು ಮೊತ್ತಮೊದಲಿಗೆ ರಚಿಸಿದ ಕೀರ್ತಿಯೂ ಶ್ರೀಪಾದರಾಜರದೇ. ಹೀಗೆ ಹಲವು ಅಂಶಗಳಲ್ಲಿ ಅವರು ನಮ್ಮ ಕನ್ನಡ ದೇಶಕ್ಕೆ ಪ್ರಥಮ ಪುರುಷರಾಗಿದ್ದಾರೆ ಮತ್ತು ಪ್ರಾತಃಸ್ಮರಣೀಯರಾಗಿದ್ದಾರೆ.
ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳ ಬೇಕಾದರೆ ಒಂದೇ ಒಂದು ಮಾರ್ಗ. ಅದು ಸಂಗೀತ- ಗಾನ- ಇದರಿಂದ ಮಾತ್ರವೇ ದೇವರು ಸುಲಭವಾಗಿ ಒಲಿಯಲು ಸಾಧ್ಯ ಎಂದು ಶ್ರೀಪಾದರಾಜರು ನಂಬಿದ್ದರು.
ಗಾನದ ಪರಂಪರೆಯನ್ನೇ ಕರ್ನಾಟಕದಲ್ಲಿ ಪ್ರಾರಂಭ ಮಾಡಿದವರು ಶ್ರೀಪಾದರಾಜರು.
ಅವರ ಕೀರ್ತನೆಗಳು ಬರಿಯ ವೇದಾಂತವಲ್ಲ, ಕೇವಲ ಭಕ್ತಿರಸವೇ ಅಲ್ಲ, ಹೇಗೆ ಕಾವ್ಯಶಕ್ತಿಯಿಂದ ಕೂಡಿದೆ ಎನ್ನುವುದನ್ನು ಈ ಉದಾಹರಣೆಯಿಂದ ಕಾಣಬಹುದು:

ಭೂಮಿಯನ್ನು ಚಿನ್ನದ ತೊಟ್ಟಿಲು ಮಾಡಿ
ಸೋಮ ಸೂರ್ಯರೆಂಬ ಕಲಶವ ಹೂಡಿ
ನೇಮದಿ ವೇದಗಳ ಸರಪಣಿ ಮಾಡಿ
ಆ ಮಹಾಕಾಶಕ್ಕೆ ಕೊಂಡಿಗಳ ಹಾಕು ||

ಭೂಮಿಯೇ ಒಂದು ಚಿನ್ನದ ತೊಟ್ಟಿಲಂತೆ; ಅದಕ್ಕೆ ಸೂರ್ಯ-ಚಂದ್ರರನ್ನೇ ಕಲಶವಾಗಿ ಮಾಡುವುದಂತೆ; ವೇದಗಳೆಂಬ ಜ್ಞಾನವನ್ನೇ ಸರಪಣಿಯಾಗಿ ಮಾಡುವು ದಂತೆ; ಆ ಮಹಾ ಆಕಾಶಕ್ಕೇ ಕೊಂಡಿಗಳನ್ನು ಹಾಕುವು ದಂತೆ – ಇದಕ್ಕೆ ಭೂಮಿಯೆಂಬ ಚಿನ್ನದ ತೊಟ್ಟಿಲನ್ನು ತೂಗಿ ಬಿಟ್ಟಾಗ ಚಿತ್ರ ಅದೆಷ್ಟು ಭವ್ಯ ಹಾಗೂ ಅರ್ಥವತ್ತಾದುದು ಎಂಬುದನ್ನು ನೋಡಿ.

ಮನಮುಟ್ಟುವ ಉಪದೇಶ
ಸುಲಭವಾದ ಕನ್ನಡದಲ್ಲಿ ನೆನಪಿಡಲು ಸುಲಭ ವಾಗುವಂತೆ ಸಂಗೀತದ ಸವಿ ಬೆರೆಸಿ ಜನಕ್ಕೆ ಮಾರ್ಗ ದರ್ಶನ ಮಾಡಿದರು ಶ್ರೀಪಾದರಾಜರು. ಮನುಷ್ಯ ಹುಟ್ಟಿದುದಕ್ಕೆ ತನ್ನ ಬಾಳನ್ನು ಸಾರ್ಥಕ ಮಾಡಿಕೊಳ್ಳ ಬೇಕು, ಜೀವನದಲ್ಲಿ ಯಾವುದು ನಿಜವಾಗಿ ಒಳ್ಳೆಯದು ಮತ್ತು ಮುಖ್ಯ, ಯಾವುದು ಆಕರ್ಷಕವಾಗಿ ಕಂಡರೂ ನಿಜವಾಗಿ ಕೆಟ್ಟದು ಮತ್ತು ಅಮುಖ್ಯ ಎಂಬುದನ್ನು ಒಂದು ಹಾಡಿನಲ್ಲಿ ಹೇಳಿದ್ದಾರೆ. ಬದುಕಿನಲ್ಲಿ ಏನನ್ನೂ ಮಾಡದೆ, ಹೆಂಡತಿ ಮಕ್ಕಳ ಸುಖವನ್ನೇ ಮುಖ್ಯ ಎಂದುಕೊಂಡು ದುಡಿದು ಬಾಳನ್ನು ಸವೆಸುವವರನ್ನು ವರ್ಣಿಸಿದ್ದಾರೆ.

ಕುರುಡ ನಾಯಿ ಸಂತೆಗೆ ಬಂತಂತೆ |
ಅದು ಏಕೆ ಬಂತೋ ||
ಖಂಡಸಕ್ಕರೆ ಹಿತವಲ್ಲಂತೆ ಖಂಡಾ ಎಲುಬು ಕಡಿಯಿತಂತೆ ||
ಹೆಂಡಿರುಮಕ್ಕಳ ನೆಚ್ಚಿತಂತ ಕೊಂಡು ಹೋಗುವಾದಾರಿಲ್ಲವಂತೆ ||
ನಾನಾಜನ್ಮವೆತ್ತಿತಂತೆ ಮಾನವನಾಗಿ ಪುಟ್ಟಿತಂತೆ |
ಕಾನನ ಕಾನನ ತಿರುಗಿತಂತ ತಾನು ತನ್ನ ಮರೆತಿತಂತೆ ||
ಮಂಗನ ಕೈಯ ಮಾಣಿಕ್ಯದಂತೆ ಹಾಂಗೂ ಹೀಂಗೂ ಕಳೆಯಿತಂತೆ |
ರಂಗವಿಠ್ಠಲನ ಮರೆತಿತಂತೆ ಭಂಗ ಬಹಳ ಪಟ್ಟಿತಂತೆ ||
(ಕಾನನ ಎಂದರೆ ಕಾಡು)
ಯಾರೂ ಯಾರಿಗೆ ಜೀವನದಲ್ಲಿ ಏನೇನು ಭೂಷಣ, ಒಳ್ಳೆಯದನ್ನು ಮಾಡುತ್ತದೆ, ಕೀರ್ತಿಯನ್ನು ತರುತ್ತದೆ ಎಂದು ‘ಭೂಷಣಕೆ ಭೂಷಣ ಇದು ಭೂಷಣ’ ಎಂಬ ಹಾಡಿನಲ್ಲಿ ಹೇಳಿದ್ದಾರೆ. ಅದರ ಕೆಲವು ಪಂಕ್ತಿಗಳು ಇವು :
ನಾಲಿಗೆಗೆ ಭೂಷಣ ನಾರಾಯಣ ನಾಮ |
ಕಾಲಿಗೆ ಭೂಷಣ ಹರಿಯಾತ್ರೆಯು ||
ದಾನವೇ ಭೂಷಣ ಇರುವ ಹಸ್ತಂಗಳಿಗೆ |
ಜ್ಞಾನವೇ ಭೂಷಣ ಮಾನವರಿಗೆ ||

ಶ್ರೀಪಾದರಾಜರು ತುಂಬ ತೊಂಬತ್ತೆಂಟು ವರ್ಷಗಳ ವರೆಗೆ ಬದುಕಿದ್ದರು. ಅವರು ಕಾಲವಾದದ್ದು – ಅಂದರೆ ವೃಂದಾವನ ಪ್ರವೇಶಮಾಡಿದ್ದು ೧೫೦೪ರ ಏಪ್ರಿಲ್ ೧೪ರಂದು. ಈಗಲೂ ಮುಳಬಾಗಲಿಗೆ  ಹೋದರೆ ಶ್ರೀಪಾದರಾಜರ ವೃಂದಾವನ ನರಸಿಂಹತೀರ್ಥದ ದಂಡೆಯಲ್ಲಿರುವುದು ಕಂಡು ಬರುತ್ತದೆ. ಅವರ ಹೆಸರಿನಲ್ಲಿ ಈಗಲೂ ವರ್ಷ ಕ್ಕೊಮ್ಮೆ ರಥೋತ್ಸವ ಜರಗುತ್ತದೆ. ಈ ಮಹಾತ್ಮರನ್ನು ಕನ್ನಡನಾಡು ಮರೆಯುವುದು ಸಾಧ್ಯವೇ ಇಲ್ಲ. ದಾಸ ಸಾಹಿತ್ಯವೆಂಬ ದಡಗಳಲ್ಲಿ ಸಾಹಿತ್ಯ ಸಂಗೀತಗಳನ್ನು ತುಂಬಿ ಭಕ್ತಿರಸವೆಂಬ ಪೂರ್ಣ ಪ್ರವಾಹವನ್ನೇ ಹರಿಸಲು ಕಾರಣರಾದವರು ಶ್ರೀಪಾದರಾಜರು.
ಅಗೋ, ಶ್ರೀ ವ್ಯಾಸತೀರ್ಥರು ಅವರಿಗೆ ನಮಿಸುತ್ತಿ ದ್ದಾರೆ. ಅವರ ಜೊತೆಗೆ ನಾವೂ ನಮಿಸೋಣ ಬನ್ನಿ :
ಸಿರಿಕೃಷ್ಣ ದಿವ್ಯಪಾದಾಬ್ಜ ಚಿಂತಾಲೋಲ
ವರ ಹೇಮವರ್ಣ ಮುನಿಪತಿಯ ಸುಕುಮಾರ
ಗುರುಕುಲ ತಿಲಕ ಶ್ರೀಪಾದರಾಯ ಅಮಿತೋದ್ಧಾರ
ಶರಣಜನ ಸುರಧೇನು ಭಕ್ತಮಂದಾರ.

ಶ್ರೀಪಾದರಾಜರ ಹಾಡುಗಳು

ಮಹಿಮೆ ಸಾಲದೆ ಇಷ್ಱೆ ಮಹಿಮೆ ಸಾಲದೆ ||ಪ||
ಅಹಿ‌ಶಯನನ ಒಲುಮೆಯಿಂದ ಮಹಿಳೊಮ್ಮೆ ಶ್ರೀಪಾದರಾಯರ ||ಅ.ಪ||
ಮುತ್ತಿನ ಕವಚ ಮೇಲ ತುರಾಯಿ ರತ್ನ ಕೆತ್ತಿದ ಕರ್ಣ ಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೇರದು ಬರಲು ||೧||
ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಖಂಗಳನ್ನ ಭುಂಜಿಸಿ
ನರರು ನಗಲು ಶ್ರೀ ಕೃಷ್ಣನ ಪರಮದಿಂದ ಹುಸಿಯಮಾಡಿದ ||೨||
ವಿಪ್ರಗೆ ಬ್ರಹ್ಮತ್ಯೆ ದೋಷ ಬರಲು ಕ್ಷಿಪ್ತ ಶಂಖೊದಕದಿ ಕಳೆದು
ಅಪ್ರ ಬುದ್ಧರು ದೊಷಿಸೆ ಗೇರೆಣ್ಣೆ ಕಪ್ಪು ಹಸನ ಶುಭ್ರ ಮಾಡಿದ ||೩||

 ++++++++

ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ
ಎನ್ನಮನ ನಿನ್ನಲ್ಲಿ ಎರಗಿಸೋ
ಎನ್ನ ಮನ ನಿನ್ನ ಚರಣದೊಳೊಮ್ಮೆ ಇಟ್ಟು
ಸಲಹು ರಂಗವಿಠಲ||

+++++++++

ಆಡಲು ಪೋಗೊಣು ಬಾರೊ ರಂಗ
ಕೂಡಿ ಯಮುನಾ ತೀರದಲ್ಲಿ ||ಪ||
ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು ||೧||
ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ ||೨||
ಪುಂಡರೀಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ
ನಿಮಗೆ ಓಲೆ ಬರೆದಳಂತೆ||೩||
ಕೌರವರು ಪಾಂಡವರು
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠಲ ಬರಬೇಕಂತೆ ||೪||

+++++++

( ನಾಟಿ ರಾಗ ಖಂಡಛಾಪು ತಾಳ)
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ||
ಶಿರದಲೊಪ್ಪುವ ನೀಲಕುಂತಳಕೆ ಶರಣು
ಸಿರಿ ಸಹೋದರನರ್ಧದವಳಿಗೆ ಶರಣು ||ಅ.ಪ||
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪುದರ್ವಣನಿಭ ಕಪೋಲಗಳಿಗೆ ಶರಣು ||೧||
ಕುಂದಕುಟ್ಮಲ ಪೋಲ್ವ ದಂತಪಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು ||೨||
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು




*********ಮಾಹಿತಿ ಕೃಪೆ: ಸಂಪದ, ಕಣಜ, ವಿಕಿಪೀಡಿಯಾ**********