ನನ್ನ ಪುಟಗಳು

13 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಟಿಪ್ಪಣಿಗಳು

ಮಹಾರಾಣಿ ವಾಣಿ ವಿಲಾಸ : ಇವರು ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಮಹಾರಾಣಿ.  ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿ. ಇವರ ನಿಜವಾದ ಹೆಸರು ಕೆಂಪನಂಜಮ್ಮಣ್ಣಿ, ನಂತರ ವಾಣಿವಿಲಾಸ ಸನ್ನಿಧಾನ ಎಂದು ಹೆಸರಾಗಿದ್ದರು.

*****

ರೀಜೆಂಟ್ : ಇದು ಆಂಗ್ಲ ಭಾಷೆಯ ಪದ, ರೀಜೆಂಟ್ ಎಂದರೆ ರಾಜಪ್ರತಿನಿಧಿ. ಪಟ್ಟಾಭಿಷಿಕ್ತರಾದ ರಾಜರು ಅಪ್ರಾಪ್ತ ವಯಸ್ಕರಾಗಿದ್ದಾಗ, ರಾಜಕಾರ್ಯ ನಿಮಿತ್ತ ವಿದೇಶ / ಬೇರೆ ರಾಜ್ಯ ಪ್ರವಾಸದಲ್ಲಿದ್ದಾಗ ಅಥವಾ ತೀವ್ರತರವಾದ ಕಾಯಿಲೆಯಿಂದ ಕೂಡಿದ್ದಾಗ ರಾಜಕಾರ್ಯಗಳನ್ನು ನೋಡಿಕೊಳ್ಳಲು ನೇಮಿಸಲ್ಪಡುತ್ತಾರೆ. ರಾಜರು ಅಧಿಕಾರ ವಹಿಸಿಕೊಳ್ಳುವವರೆಗೆ ರಾಜ್ಯದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.
*****
ಸರ್.ಕೆ. ಶೇಷಾದ್ರಿ ಅಯ್ಯರ್ : 
ಕೆ. ಶೇಷಾದ್ರಿ ಅಯ್ಯರ್
ಇವರ ಮೂಲ ಕೇರಳ. ಇವರು ಮೈಸೂರು ಅರಸರ ಬಳಿ ದಿವಾನರಾಗಿ ೧೮೮೩ ರಿಂದ ೧೯೦೧ ರ ವರೆಗೆ ಸೇವೆಸಲ್ಲಿಸಿದರು. ಅವರೊಬ್ಬ ಸಮರ್ಥ ವಕೀಲರು. 'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಸರಕಾರ' ಒಡೆಯರ್ ರಾಜಪರಿವಾರಕ್ಕೆ ತಾನು ಹಿಂದೆ ಕಸಿದುಕೊಂಡಿದ್ದ ರಾಜ್ಯದ ಎಲ್ಲಾ ಅಧಿಕಾರವನ್ನು ಮತ್ತೆ ಒಪ್ಪಿಸಿ ಆಗಿನ ರಾಜರನ್ನು ಸಿಂಹಾಸನವನ್ನೇರಲು ಆದೇಶ ನೀಡಿದ್ದು, ೧೮೮೧ ರಲ್ಲೇ. ಆಸಮಯದಲ್ಲಿ ನೇಮಿಸಲ್ಪಟ್ಟ (ಮುಖ್ಯ ಮಂತ್ರಿ)(ಅಮಾತ್ಯ) ಅಥವಾ ದಿವಾನರಲ್ಲಿ 'ಶೇಷಾದ್ರಿ ಅಯ್ಯರ್' ಎರಡನೆಯವರು. ಮೈಸೂರು ರಾಜ್ಯದಲ್ಲಿ ಅತಿಹೆಚ್ಚು ಸಮಯ ಅಧಿಕಾರದಲ್ಲಿದ್ದ ದಿವಾನರೆಂಬ ಹೆಸರಿಗೆ ಪಾತ್ರರಾಗಿದ್ದರು. ಬೆಂಗಳೂರನ್ನು ಆಧುನಿಕರಣಮಾಡಲು ಪ್ರಯತ್ನಿಸಿ ಸಫಲರಾದರು.
*****

ವರ್ಧಂತಿ : ಜಯಂತಿ, ಹುಟ್ಟುಹಬ್ಬ
*****

ಆಯವ್ಯಯ : ಬಜೆಟ್, ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಆ ವರ್ಷದ ಖರ್ಚು ವೆಚ್ಚಗಳ ಅಂದಾಜನ್ನು ಯೋಜನಾಬದ್ಧವಾಗಿ ಹಾಗೂ ವಿವರವಾಗಿ ಸಿದ್ಧಪಡಿಸುವುದು ಹಾಗೂ ಅದನ್ನು ಸರ್ಕಾರದ ಎಲ್ಲಾ ಜನಪ್ರತಿನಿಧಿಗಳ ಎದುರು ಮಂಡಿಸಲಾಗುವುದು.
*****
ಠರಾವು : ನಿರ್ಣಯ, ತೀರ್ಮಾನ
*****
ಮೇಲ್ಮನೆ : ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ - ವಿಧಾನ ಪರಿಷತ್ತು;   ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ - ರಾಜ್ಯಸಭೆ
*****
ಆಡಳಿತ ವಿಕೇಂದ್ರೀಕರಣ : ಮೇಲ್ಮಟ್ಟದಲ್ಲಿ ಹಲವು ಅಧಿಕಾರಗಳು ಕೆಲವೇ ಅಧಿಕಾರಿಗಳ ಕೈಯಲ್ಲಿದ್ದಾಗ ಆಡಳಿತ ಹಾಗೂ ಅದರ ಅನುಷ್ಠಾನ ಕ್ಲಿಷ್ಟವಾಗುವುದಲ್ಲದೆ ಅಭಿವೃದ್ಧಿ ಕಾರ್ಯಗಳು ನಿಧಾನವಾಗುತ್ತದೆ. ಆದ್ದರಿಂದ ಅಧಿಕಾರವನ್ನು ಹಲವು ವಿಭಾಗಗಳಾಗಿ - ಉಪವಿಭಾಗಗಳಾಗಿ ವಿಂಗಡಿಸುವುದು. 
        ಉದಾಹರಣೆಗೆ : ಇಡೀ ಜಿಲ್ಲೆಗೆ ಜಿಲ್ಲಾ ಪಂಚಾಯತಿ ಇದ್ದರೂ ಅದರ ಅಧಿಕಾರವನ್ನು ತಾಲೂಕುವಾರು ವಿಂಗಡಿಸಿ ಆಡಳಿತವನ್ನು ಸುಗಮಗೊಳಿಸಲು ಪ್ರತಿ ತಾಲೂಕಿಗೂ ತಾಲೂಕು ಪಂಚಾಯಿತಿಯನ್ನು ಸ್ಥಾಪಿಸಲಾಗಿದೆ ಹಾಗೆಯೇ ಅದನ್ನು ಮತ್ತೆ ವಿಭಾಗಿಸಿ ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಲಾಗಿದೆ - ಇದೇ ಆಡಳಿತ ವಿಕೇಂದ್ರೀಕರಣ.
*****
ದೇವದಾಸಿ ಪದ್ಧತಿ / ಬಸವಿ ಪದ್ಧತಿ / ಗೆಜ್ಜೆ ಪೂಜೆ
        ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತಿತ್ತು. ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ. ಪ್ರಾಚೀನ ಬ್ಯಾಬಿಲೋನಿಯ, ಸೈಪ್ರೆಸ್, ಫಿನಿಷಿಯ, ಗ್ರೀಸ್, ಮೆಸಪೊಟೇಮಿಯ, ಈಜಿಪ್ಟ್, ಸಿರಿಯ ಅರೇಬಿಯ, ಮುಂತಾದ ಮಧ್ಯಪ್ರಾಚ್ಯಗಳಲ್ಲಿ ಹಾಗೂ ಆಗ್ನೇಯ ಏಷ್ಯದಲ್ಲಿ ಈ ಪದ್ಧತಿ ರೂಡಿಯಲ್ಲಿತ್ತು. ಒಂದು ಕಾಲಕ್ಕೆ ಸಮಗ್ರ ಭಾರತದಲ್ಲೆಲ್ಲ ಈ ಪದ್ಧತಿ ಪ್ರಚಾರದಲ್ಲಿದ್ದಿರಬೇಕೆಂದು ಕಾಣುತ್ತದೆ. ಉತ್ತರ ಭಾರತದಲ್ಲಿ ಇದರ ಪ್ರಚಾರ ವಿಶೇಷವಾಗಿತ್ತೆಂದು ಹೇಳಲು ಸಮರ್ಥನೀಯ ದಾಖಲೆಗಳು ಇಲ್ಲವಾಗಿವೆ.
        ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗ ಎಂಬ ಮಾತುಗಳು ಬರುತ್ತವೆ. ವಿಗ್ರಹದ ದೇಹಕ್ಕೆ ಸಲ್ಲುವ ಭೋಗ, ಎಂದರೆ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಇತ್ಯಾದಿಗಳು ಅಂಗಭೋಗಗಳು. ಗರ್ಭಗುಡಿಯ ಮುಂದಿನ ರಂಗದ ಮೇಲೆ ಎಂದರೆ ದೇವತಾ ಮೂರ್ತಿಯ ಮುಂದೆ ಸುಂದರಿಯರಿಂದ ನಡೆಯುವ ಗೀತ, ನೃತ್ಯಗಳೇ ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಉಪಕರಣಗಳು ಎಂಬುದಾಗಿ ಎಂ. ಚಿದಾನಂದಮೂರ್ತಿಯವರು ಅಭಿಪ್ರಾಯಪಡುತ್ತಾರೆ. ಈ ಸಂಪ್ರದಾಯವನ್ನು ಮೊದಮೊದಲು ಬ್ರಾಹ್ಮಣರು ವಿರೋಧಿಸಿದರೂ ರಾಜರು ಒತ್ತಾಯ ಪೂರ್ವಕವಾಗಿ ಇದನ್ನು ಜಾರಿಗೆ ತಂದಿದ್ದರ ಫಲವಾಗಿ ಅವರ ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗಲಿಲ್ಲವೆಂದು ಆಳ್ತೇಕರ್ ಅವರ ಅಭಿಪ್ರಾಯ.
        ದೇವದಾಸಿ ಪದ್ಧತಿ ಯಾವ ಮಹತ್ತ್ವದ ಉದ್ದೇಶಗಳನ್ನಿಟ್ಟುಕೊಂಡು ಹುಟ್ಟಿತೋ ಆ ಉದ್ದೇಶಗಳೆಲ್ಲ ಈಗ ನಿರ್ನಾಮವಾಗಿ ಹೋಗಿವೆ. ಈಗ ಈ ವೃತ್ತಿ ತನ್ನ ಗೌರವವನ್ನು ಕಳೆದುಕೊಂಡು ವೇಶ್ಯಾವೃತ್ತಿ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಕಲೆ ಹಾಗೂ ದೇವರ ಹೆಸರಿನಲ್ಲಿ ವಿಷಯಸುಖವನ್ನು ಪ್ರಧಾನ ಮಾಡಿಕೊಂಡು ಬೆಳೆದು ನಿಂತ ಈ ಪದ್ಧತಿಯನ್ನು ಜನತೆಯೇ ಮೂಲೋಚ್ಚಾಟನೆಗೊಳಿಸಲು ಸಿದ್ಧವಾಯಿತು. 1934 ರಲ್ಲಿ ಭಾರತೀಯ ದಂಡವಿಧಾನದ 373 ಮತ್ತು 375 ರ ವಿಧಿಗಳನ್ನು ದೇವದಾಸಿ ಪದ್ಧತಿಯ ಮೇಲು ಅನ್ವಯಿಸುವ ದಿಶೆಯಲ್ಲಿ ಸಂಶೋಧನೆ ನಡೆಸಿತು. 1937 ರಲ್ಲಿ ಮದ್ರಾಸ್ ವಿಧಾನ ಪರಿಷತ್ತು ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡಲು ಸರ್ವಾನುಮತದಿಂದ ವಿಧೇಯಕವೊಂದನ್ನು ಅಂಗೀಕರಿಸಿತು. ಅದರಲ್ಲಿ ಗೌರವಾನ್ವಿತ ಸೇವದಾಸಿಯರನ್ನು ದಾಸ್ಯದಿಂದ ಮುಕ್ತಗೊಳಿಸಡುವ ಸಲಹೆ ನೀಡಲಾಯಿತು. ಆ ಬಳಿಕ ಹಿಂದೂ ದೇವಾಲಯಗಳಲ್ಲಿ ಸ್ತ್ರೀಯರನ್ನು ಸೇವೆಗಾಗಿ ಅರ್ಪಿಸುವ ಪದ್ಧತಿಯನ್ನು ಕಾನೂನಿನಿಂದ ಕೊನೆಗೊಳಿಸುವ ಕ್ರಮವನ್ನು ಕೈಗೊಳ್ಳಲಾಯಿತು. ಅಲ್ಲದೆ ದೇವದಾಸಿಯರಾಗಿ ಕೆಲಸ ಮಾಡುತ್ತಿದ್ದ ಸ್ತ್ರೀಯರಿಗೆ ವಿಧಿಸಮ್ಮತ ವಿವಾಹಕ್ಕೆ ವ್ಯವಸ್ಥೆಗಳನ್ನು ಏರ್ಪಡಿಸಿತು. ಭಾರತದ ಇತರ ಸಂಸ್ಥಾನಗಳು ಈ ಕ್ರಮವನ್ನು ಜರೂರಾಗಿ ಅನುಸರಿಸಲು ಮುಂದೆ ಬಂದವು. ಹೀಗಿದ್ದರೂ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇದರ ಚಿಹ್ನೆಗಳು ಈಗಲೂ ಉಳಿದಿವೆ. ಏಕೆಂದರೆ ಈ ಪದ್ಧತಿಗಿರುವ ಧಾರ್ಮಿಕ ಪರಿವೇಷ ಇದನ್ನು ತೊಡೆದುಹಾಕಲು ಕಷ್ಟಸಾಧ್ಯವನ್ನಾಗಿಸಿದೆ.

*****
ಜನ್ಮ ಶತಮಾನೋತ್ಸವ : ವಯಸ್ಸು ನೂರು ವರ್ಷ ಪೂರ್ಣಗೊಂಡಾಗ ಮಾಡುವ ಉತ್ಸವ ಅಥವಾ ಹುಟ್ಟುಹಬ್ಬ
*****
ಇಂಟರ್ ಮೀಡಿಯಟ್ : ಎಸ್.ಎಸ್.ಎಲ್.ಸಿ. ನಂತರದ ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ)
*****
ಮುಕ್ತಕಂಠ : ತೆರೆದ ಮನಸ್ಸು, ಮನಸ್ಸಿನಲ್ಲಿ ಒಂದು ಬಾಯಿಯಲ್ಲಿ ಇನ್ನೊಂದನ್ನು ಹೇಳದೆ ಹೃದಯ ಪೂರ್ವಕವಾಗಿ ಹೇಳುವ ಮಾತು, ಸ್ವಾಭಾವಿಕವಾದ ಮೆಚ್ಚುಗೆಯ ಮಾತು. ಎಂಬ ಅರ್ಥಗಳಲ್ಲಿ ಬಳಸಲಾಗುತ್ತದೆ.
*****
ಮಾರಿಕಣಿವೆ ಜಲಾಶಯ : ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸಮೀಪದಲ್ಲಿದೆ. ಈ ಜಲಾಶಯದ ಹೆಸರು "ವಾಣಿವಿಲಾಸ ಸಾಗರ",  ಜಲಾಶಯದ ಮೇಲೆ ಒಂದು ಕೋನದಲ್ಲಿ ನಿಂತು ನೋಡಿದರೆ ನಿಂತಿರುವ ನೀರು ಭಾರತದ ನಕ್ಷೆಯಂತೆ ಕಾಣುತ್ತದೆ.


************
ಸಂಜೀವಿನಿ :  ಅಂದು. ಲಕ್ಷ್ಮಣನು ಯುದ್ದದಲ್ಲಿ ಅಸುನೀಗಿದಾಗ ಆತನನ್ನು ಮರುಜೀವಗೊಳಿಸಲು ರಾಮನ ಭಂಟನಾದ ಕೇಸರಿತನಯ, ಮಹಾಜ್ಞಾನಿ, ಮಹಾಬುದ್ದಿವಂತನೆಂದು ಕರೆಸಿಕೊಳ್ಳುವ ಹನುಮಂತನು ಹೊತ್ತು ತಂದ ಸಂಜೀವಿನಿ ಪರ್ವತದಲ್ಲಿದ್ದ ಸಸ್ಯದಿಂದಾಗಿ ಪ್ರಾಣ ಉಳಿಯಿತು. ಎನ್ನುವ ವಿಚಾರ ತಿಳಿದೇ ಇದೆ!! ಕೇವಲ 5 ಬಗೆಯ ಔಷಧೀಯ ಸಸ್ಯವನ್ನು ತರುವ ಬದಲು ಈಡೀ ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಹನುಮಂತನು ಆ ಪರ್ವತವನ್ನು ಏಕೆ ತಂದನು ತಿಳಿದಿದೆಯೇ? 


    ಸಂಜೀವಿನಿ ಸಸ್ಯವನ್ನು ತರಲು ಹೊರಟ ಹನುಮಂತನಿಗೆ, ಹಿಮಾಲಯದಲ್ಲಿರುವ ಸಂಜೀವಿನಿ ಪರ್ವತ ತಲುಪಿದಾಗ ಆತನಿಗೆ ಅಲ್ಲಿರುವ ಎಲ್ಲ ಸಸ್ಯಗಳು ಕೂಡ ಸಂಜೀವಿನಿಯಂತೆಯೇ ಗೋಚರಿಸಿದವು. ಭಾರತದಲ್ಲಿರುವ ಸುಮಾರು 18,000 ಪುಷ್ಪಸಸ್ಯಗಳ ರಾಶಿಯಿಂದ 'ಸಂಜೀವಿನಿ' ಎಂಬ ಏಕೈಕ ಪ್ರಭೇದವನ್ನು ಹುಡುಕುವುದು ಸರಳವಾದ ವಿಚಾರವೇನಲ್ಲ. ಹಾಗಾಗಿ ಈಡೀ ಷರ್ವತವನ್ನೇ ಹೊತ್ತು ತಂದ ಹನುಮಂತನು ಲಕ್ಷ್ಮಣನನ್ನು ಮಾತ್ರ ಅಲ್ಲದೇ ತಮ್ಮ ಸೈನ್ಯದಲ್ಲಿ ಅಸುನೀಗಿದ ಅದೆಷ್ಟೋ ಸೈನಿಕರ ಪ್ರಾಣವನ್ನು ಉಳಿಸುವಲ್ಲಿ ಸಹಕಾರಿಯಾಗುವಂತೆ ಮಾಡಿದೆ!!

*****ಪೂರಕ ಮಾಹಿತಿ ಕೃಪೆ: ಕಹಳೆ ನ್ಯೂಸ್****

ಆಡು ಮುಟ್ಟದ ಸೊಪ್ಪಿಲ್ಲ : ಇದು ಒಂದು ಗಾದೆಮಾತು, ಹಸು, ಎಮ್ಮೆ, ಕುರಿ, ಕುದುರೆ ಮುಂತಾದ ಸಸ್ಯಾಹಾರಿ ಪ್ರಾಣಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ವಿಧದ ಹುಲ್ಲು, ಸೊಪ್ಪುಗಳನ್ನು ಮೇಯುವ ಪ್ರಾಣಿ ಆಡು ಅಥವಾ ಮೇಕೆ. ಆದ್ದರಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಬಗ್ಗೆ ಮಾತನಾಡುವಾಗ ಈ ಗಾದೆ ಮಾತನ್ನು ಬಳಸುತ್ತಾರೆ. ಹೇಗೆ ಆಡು ಮುಟ್ಟದ ಸೊಪ್ಪಿಲ್ಲವೋ ಹಾಗೆಯೇ ವಿಶ್ವೇಶ್ವರಯ್ಯನವರು ಬಹುಮುಖ ವ್ಯಕ್ತಿತ್ವ ಎಂದು ತಿಳಿಸುವಾಗ ಈ ಗಾದೆಯನ್ನು ಉಲ್ಲೇಖಿಸಲಾಗಿದೆ.
 ********

ಭಾರತ ರತ್ನ : ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇರಬಹುದು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.
ಹೆಚ್ಚಿನ ಮಾಹಿತಿಗಾಗಿ ಈ ಚಿತ್ರವನ್ನು ಕ್ಲಿಕ್ ಮಾಡಿ
ಭಾರತ ರತ್ನ ಪದಕ

************
ಗೌರವ ಡಾಕ್ಟರೇಟ್ :  ಸಾಮಾನ್ಯವಾಗಿ ಡಾಕ್ಟರೇಟ್ ಪಡೆಯಬೇಕಾದರೆ ಪಿ.ಎಚ್.ಡಿ. ಅಧ್ಯಯನ ಮಾಡಿ ಮಹಾ ಪ್ರಬಂಧ ಮಂಡಿಸಬೇಕು. ಆದರೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಸಾಧಕರಿಗೆ ವಿಶ್ವವಿದ್ಯಾನಿಲಯಗಳು ಈ ಪದವಿಯನ್ನು ನೀಡುತ್ತವೆ. ಹೀಗೆ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ವಿಶ್ವವಿದ್ಯಾನಿಲಯಗಳು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಂತಾಗುತ್ತದೆ.
************

ಮೆಮೋರೀಸ್ (memories) ಆಫ್ ಮೈ ವರ್ಕಿಂಗ್ ಲೈಫ್ : ಇದು ವಿಶ್ವೇಶ್ವರಯ್ಯನವರ ಆತ್ಮಕಥೆ. ಈ ಕೃತಿಯಲ್ಲಿ ಸರ್.ಎಂ.ವಿ. ಅವರು ತಮ್ಮ ಸೇವಾವಧಿಯಲ್ಲಿನ ವಿಸ್ತಾರವಾದ ಅನುಭವ ಹಾಗೂ ಘಟನಾವಳಿಗಳನ್ನು ವಿವರಿಸಿದ್ದಾರೆ. ಇದು ಆಂಗ್ಲಭಾಷೆಯಲ್ಲಿದೆ.
************










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ