ನನ್ನ ಪುಟಗಳು

11 ನವೆಂಬರ್ 2020

10ನೇ ತರಗತಿ ಕನ್ನಡ ಗದ್ಯ-01-ಶಬರಿ-ಸಾರಾಂಶ

ಶಬರಿ ಗೀತ ನಾಟಕದ ಸಾರಾಂಶ
'ಜನಪ್ರಿಯ ವಾಲ್ಮೀಕಿ ರಾಮಾಯಣ'ದ ಅರಣ್ಯಕಾಂಡದಲ್ಲಿರುವ 'ಶಬರಿಯ ಸಿದ್ಧಿ' ಭಾಗದಲ್ಲಿ ಶಬರಿಯ ಕಥೆ ಹೀಗಿದೆ....


        ಕಬಂಧನು ಸ್ವರ್ಗವನ್ನು ಸೇರಿದಮೇಲೆ ರಾಮಲಕ್ಷ್ಮಣರು ಪಶ್ಚಿಮ ದಿಕ್ಕನ್ನು ಹಿಡಿದು ಅವನು ತೋರಿಸಿದ ಮಾರ್ಗವನ್ನು ಅನುಸರಿಸಿ ನಡೆದರು. ನಾನಾ ಬಗೆಯ ಗಿಡಮರಗಳನ್ನು ನೋಡುತ್ತ, ಜೇನಿಗೆ ಸಮನಾದ ಹಣ್ಣುಗಳನ್ನು ಸವಿಯುತ್ತ, ಸುಗ್ರೀವನನ್ನು ನೋಡುವ ತವಕದಿಂದ ಪಂಪಾ ಸರೋವರ ಪಶ್ಚಿಮ ದಡವನ್ನು ಸೇರಿ ಅಲ್ಲಿದ್ದ ಶಬರಿಯ ಆಶ್ರಮವನ್ನು ಕಂಡರು. ಆಶ್ರಮವನ್ನು ಸೇರಿ ತನ್ನ ಸಮೀಪಕ್ಕೆ ಬಂದ ರಾಮಲಕ್ಷ್ಮಣರನ್ನು ನೋಡಿ ಶಬರಿ ಎದ್ದು ಕೈಮುಗಿದು ಅವರನ್ನು ಅರ್ಘ್ಯಪಾದ್ಯಗಳಿಂದ ಉಪಚರಿಸಿದಳು. ಆ ಬಳಿಕ ಶ್ರೀರಾಮನು ಆಕೆಯನ್ನು ಕುರಿತು “ಅಮ್ಮ ಶಬರಿ, ನಿನ್ನ ತಪ್ಪಸ್ಸು ಯಾವ ತಡೆಯೂ ಇಲ್ಲದೆ ನೆರವೇರುತ್ತಿದೆಯ? ಗುರು ಶುಶ್ರೂಷೆಯ ಫಲ ಸಫಲ ಹೊಂದತೆ?” ಎಂದು ಕೇಳಿದನು. 

    ಶಬರಿ ಎದ್ದು ನಿಂತು “ರಾಮಚಂದ್ರ, ನಿನ್ನ ದರ್ಶನದಿಂದ ನನ್ನ ತಪಸ್ಸು ಫಲಿಸಿತು. ದೇವೋತ್ತಮನಾದ ನಿನ್ನನ್ನು ಪೂಜಿಸಿ ನನ್ನ ಬಾಳು ಸಾರ್ಥಕವಾಯಿತು. ನಿನ್ನ ಅನುಗ್ರಹಕ್ಕೆ ಪಾತ್ರಳಾದ ನನಗೆ ಅಕ್ಷಯ ಲೋಕಗಳು ದೊರಕುವುವು. ನೀನು ಚಿತ್ರಕೂಟದಲ್ಲಿದ್ದಾಗಲೆ ಇಲ್ಲಿದ್ದ ಋಷಿಗಳು ಸ್ವರ್ಗಕ್ಕೆ ತೆರಳಿದರು. ನಿನ್ನ ಬರುವಿಕೆಗಾಗಿಯೆ ನಾನು ಕಾದಿದ್ದೆ. ಪಂಪಾಸರೋವರದ ತೀರದಲ್ಲಿ ಬೆಳೆದ ಹಣ್ಣುಗಳನ್ನು ನಿನಗಾಗಿಯೇ ಸಂಗ್ರಹಿಸಿ ಇಟ್ಟಿದ್ದೇನೆ. ಅದನ್ನು ಸ್ವೀಕರಿಸಿ ನನ್ನನ್ನು ಅನುಗ್ರಹಿಸಿ” ಎಂದಳು.
ಆಗ ರಾಮಲಕ್ಷ್ಮಣರು ಆ ಆಶ್ರಮದಲ್ಲಿ ಮತಂಗಋಷಿಗಳು ಪ್ರಭಾವವನ್ನು ನೋಡಬಯಸಿದರು. ಶಬರಿ ಅವರನ್ನು ಅಲ್ಲಿಗೆ ಕರೆದೊಯ್ದು ಋಷಿಗಳ ಮಹಿಮೆಯನ್ನು ಅವರಿಗೆ ತೋರಿಸಿದಳು. “ರಘುನಂದನ, ಜಿಂಕೆಗಳಿಂದಲೂ ಪಕ್ಷಿಗಳಿಂದಲೂ ಕೂಡಿದ ಈ ಮತಂಗವನವನ್ನು ನೋಡು. ಭಾವಿತಾತ್ಮರಾದ ನಮ್ಮ ಗುರುಗಳು ಯಜ್ಞಮಾಡುತ್ತಿದ್ದ ಈ ಸ್ಥಳವನ್ನೂ ನೋಡು. ಅವರ ತಪಃಪ್ರಭಾವದಿಂದ ಯಜ್ಞವೇದಿಗಳು ಇನ್ನೂ ಹೊಳೆಯುತ್ತಿವೆ. ಅವರು ಮರಗಳಲ್ಲಿ ಆರಹಾಕಿದ ನಾರುಮುಡಿಗಳು ಇನ್ನೂ ಹಸಿ ಹಸಿಯಾಗಿವೆ. ಅವರು ಪೂಜೆಮಾಡಿದ ಹೂಮಾಲೆ ಇನ್ನೂ ಬಾಡದಾಗಿದೆ. ಈ ವನವನ್ನೆಲ್ಲ ನೋಡಿದೆಯಲ್ಲವೆ ನೀನು? ಇನ್ನು ಅಪ್ಪಣೆಯಾದರೆ ಈ ಕಳೇಬರವನ್ನು ವಿಸರ್ಜಿಸಿ ನಾನು ಸೇವಿಸುತ್ತಿದ್ದ ಋಷಿಗಳ ಬಳಿಗೆ ಹೋಗುತ್ತೇನೆ. ”
ಶಬರಿಯ ಮಾತನ್ನು ಕೇಳಿ ರಾಮನಿಗೆ ಸಂತೋಷವಾಯಿತು. ಅಂತೆಯೆ ಆಕೆ ಮಾಡಿದ ಉಪಚಾರದಿಂದ ತೃಪ್ತಿಯೂ ಉಂಟಾಯಿತು. ಆ ಬಳಿಕ ಶಬರಿಯ ದೇಹತ್ಯಾಗಕ್ಕೆ ರಾಮನು ಅಪ್ಪಣೆ ಕೊಡಲು, ಆಕೆ ತನ್ನ ದೇಹವನ್ನೂ ಯಜ್ಞೇಶರನಿಗೆ ಅರ್ಪಿಸಿದಳು. ತತ್‌ಕ್ಷಣವೆ ಅಗ್ನಿಗೆ ಸಮಾನವಾದ ದಿವ್ಯದೇಹವನ್ನೂ ವಸ್ತ್ರಾಲಂಕಾರಗಳನ್ನೂ ಧರಿಸಿ ಶೋಭಿಸುತ್ತ ಪುಣ್ಯಾತ್ಮರಿರುವ ಲೋಕವನ್ನು ಕುರಿತು ತೆರಳಿದಳು.
    ಶಬರಿ ಹೊರಟು ಹೋದಮೇಲೆ, ರಾಮನು ಲಕ್ಷ್ಮನನ್ನು ಕುರಿತು, “ವತ್ಸ, ಸೋಜಿಗವನ್ನುಂಟುಮಾಡುವ ಈ ಆಶ್ರಮವನ್ನು ನೋಡಿ, ಹಾಗೂ ಇಲ್ಲಿಯ ತೀರ್ಥಗಳಲ್ಲಿ ಮಿಂದು, ಪಿತೃಗಳನ್ನು ತೃಪ್ತಿಪಡಿಸಿದುದಾಯಿತು. ಇಲ್ಲಿಗೆ ನಮ್ಮ ಅಶುಭ ಕೊನೆಗೊಂಡಿತು; ನಮಗೆ ಕಲ್ಯಾಣವಾಗುವ ಕಾಲ ಹತ್ತಿರವಾಯಿತು. ಆದಕಾರಣ ಋಷ್ಯಮೂಕಪರ್ವತಕ್ಕೆ ಹೋಗಿ ಸುಗ್ರೀವನನ್ನು ನೋಡಲು ಕಾತರನಾಗಿದ್ದೇನೆ. ಅವನಿಂದ ನಮಗೆ ಸೀತೆ ದೊರಕಬೇಕಾಗಿದೆ” ಎಂದು ಹೇಳಿ ಅವನನ್ನು ತ್ವರೆಗೊಳಿಸಿದನು. ಅಲ್ಲಿಂದ ಆ ರಾಜಕುಮಾರರಿಬ್ಬರೂ ಹೊರಟು, ಅನೇಕ ಗಿಡಮರಗಳಿಂದಲೂ ಬಳ್ಳಿಗಳಿಂದಲೂ ಸುತ್ತುವರಿದು, ಕಮಲಗಳಿಂದ ಕೂಡಿದ ಸ್ವಚ್ಚವಾದ ಪಂಪಾಸರೋವರವನ್ನು ನೋಡಿದರು. ಆ ಸರೋವರದ ಚೆಲುವು ಶ್ರೀರಾಮನ ಮನಸ್ಸನ್ನು ಸೆಳೆಯಿತು. ವಿರಹಯಾತನೆಯಿಂದ ಪೀಡಿತನಾದ ಶ್ರೀರಾಮನು ಸೀತೆಯನ್ನು ನೆನೆನೆನೆದು ಲಕ್ಷ್ಮಣನೊಡನೆ ಬಹಳ ಹೊತ್ತು ಆ ಸರೋವರದ ಚೆಲುವನ್ನೂ ಸುತ್ತಣ ವನದ ಸೌಂದರ್ಯವನ್ನೂ ಬಣ್ಣಿಸಿ. ನೋಡಿ ಆಸ್ವಾದಿಸುತ್ತಿದ್ದನು.










31 ಕಾಮೆಂಟ್‌ಗಳು: