ನನ್ನ ಪುಟಗಳು

23 ಅಕ್ಟೋಬರ್ 2018

ಬೆಳಗುತಿರು

 ಬೆಳಗುತಿರು 
ಅವನಂತೆ ನಾನಿಲ್ಲ
ಭವವೆಲ್ಲ ಬದಲಿಹುದು
ಭುವನಾದಿ ಜೀವಿಗಳನಳೆಯಬಹುದೇ??
ಜವರಾಯನೆಳೆದಾಗ
ಭವದೊಳಿಹ ಬವಣೆಗಳು
ಭಯಬೀಳುತಳಿದುಳಿದು ನಿಲಲುಬಹುದೇ?

ಸಂಚರಿಪ ಹಾದಿಯೊಳು
 ಮಿಂಚು ಸಿಡಿಲುಗಳಿರಲಿ
ವಂಚನೆಯ ವಾಸನೆಗೆ ನೀ ಸಿಲುಕದೆ|
ಹೊಂಚು ಹಾಕುವ ಮಂದಿ
ಸಂಚಾರಗೈದಿಹರು
ಚಂಚು ಕುಕ್ಕಿದರೇನು ನಡೆ ಮರುಗದೆ||

ಪರರ ತೆಗಳಿಕೆ ಮಂತ್ರ
ಜರೆದು ನಿಂದಿಪ ತಂತ್ರ
ಸರಿದಾರಿಯೊಳು ನಡೆವ ನಿನಗಲ್ಲವು|
ಹರಕೆಗಳು ನಿನಗುಂಟು
ಹಿರಿದು ಗುರಿ ಮುಂದಿಹುದು
ಚರಿತೆಯಲಿ ಚಿರಕಾಲ ರಾರಾಜಿಸು||

ಆಸೆಗಳ ಕೂಪದೊಳ್
ವಾಸ ಮಾಡುತ ಕಳೆದು
ವೇಷಗಳ ಬದಲಿಸಲು ಫಲವೇನಿದೆ?
ಮೋಸವೆಸಗುವ ಬದಲು
 ಪೂಷನಂತೆಹೆ ಬೆಳಗು
ದೋಷಕಳೆಯತ ಸಾಗು ತಮವ ಕಳೆದು||
                ರಚನೆ:- ನಾಖಾರ್ವಿ
(ಛಂದಸ್ಸು: ಕುಸುಮ ಷಟ್ಪದಿ )
...........................
ಅರ್ಥಗಳು 
ಜರೆ=ಬೈಯು 
ಚಂಚು=ಕೊಕ್ಕು 
ಜವರಾಯ=ಯಮರಾಜ 
ಚರಿತೆ=ಚರಿತ್ರೆ 
ಪೂಷ=ಸೂರ್ಯ 
ತಮ=ಕತ್ತಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ