ನನ್ನ ಪುಟಗಳು

27 ಏಪ್ರಿಲ್ 2018

ಮಲೆನಾಡಿನ ಚಿತ್ರಗಳು : ತೋಟದಾಚೆಯ ಭೂತ

ತೋಟದಾಚೆಯ ಭೂತ
ಪಾಠಕ, ನೀನು ಎಲ್ಲಿಯಾದರೂ ನಮ್ಮ ಮನೆಯವನಾಗಿದ್ದರೆ (ಅದೃಷ್ಟವಶದಿಂದ ಆಗಿಲ್ಲ) ಈ ಪ್ರಬಂಧದ ನಾಮಾಂಕಿತವನ್ನು ಓದಿ ನಗುವ ಬದಲು ಅದನ್ನು ಭಯಭಕ್ತಿಗಳಿಂದ ಪೂಜಿಸುತ್ತಿದ್ದೆ. ಈಗಲಾದರೂ ನಗಬೇಡ. ಖಂಡಿತ ನಗಬೇಡ. ತೋಟದಾಚೆಯ ಭೂತದ ಮಹಿಮೆ ಸಾಮಾನ್ಯವೆಂದು ತಿಳಿಯಬೇಡ. ಉಡುಪಿ ಕೃಷ್ಣ, ತಿರುಪತಿ ವೆಂಕಟರಮಣ ಮೊದಲಾದವರೆಲ್ಲರೂ ಒಬ್ಬರ ತಲೆಯ ಮೇಲೊಬ್ಬರು ಹತ್ತಿಕೊಂಡು ಬಂದರೂ ನಮ್ಮ ತೋಟದಾಚೆಯ ಭೂತದ ಮೊಳಕಾಲಿಗೆ ಮುಟ್ಟುವುದಿಲ್ಲ. ನಿನಗೆ ಪುಣ್ಯವಿಲ್ಲ. ನಮ್ಮ ಅಜ್ಜಮ್ಮನ ಉಪದೇಶ ಕೇಳುವುದಕ್ಕೆ! ನಿನಗೆ ಅವರ ಉಪನ್ಯಾಸ ಕೇಳುವ ಸುಕೃತ ಇದ್ದಿದ್ದರೆ, ಭೂತದ ಮಹಿಮೆ ಚೆನ್ನಾಗಿ ಗೊತ್ತಾಗುತ್ತಿತ್ತು. ನನಗಂತೂ ಈ ಜನ್ಮದಲ್ಲಿ ದೇವರು ಕೊಟ್ಟಿದ್ದು ಅಜ್ಜಮ್ಮನ ಉಪದೇಶ ಕೇಳುವ ಸೌಭಾಗ್ಯ ಒಂದೇ ಎಂದು ಭಾವಿಸಿದ್ದೇನೆ! ಈ ಪ್ರಬಂಧ ನನ್ನ ಸ್ವಂತ ಪ್ರತಿಭೆಯ ಫಲವಲ್ಲ, ನಮ್ಮ ಅಜ್ಜಿಯ ಉಪನ್ಯಾಸಮಾಲೆಯಿಂದ ಸಂಗ್ರಹಿಸಿದ್ದು. ಈ ಅನುವಾದಕ್ಕೆ ಎಂದೆಂದಿಗೂ ಮೂಲಗ್ರಂಥದ ವೈಭವ, ಮೈಸಿರಿ, ಓಜಸ್ಸು, ಸರಳತೆ ಈ ಮಹಾ ಗುಣಗಳು ಬರುವುದಿಲ್ಲವೆಂದು ನಾನು ಬಲ್ಲೆ. ಅಷ್ಟೇ ಅಲ್ಲದೆ ಎಲ್ಲಕ್ಕೂ ಬಹುಮುಖ್ಯವಾದ ನಮ್ಮ ಅಜ್ಜಿಯ ಪವಿತ್ರ ವ್ಯಕ್ತಿತ್ವ ಇದರಲ್ಲಿ ಬಿಟ್ಟುಹೋಗಿರುವುದು. ಆದರೂ ಗಲಭೆ ಮಾಡದೆ ದೇಶಾಭಿವೃದ್ಧಿಗೆ ಶ್ರಮಪಡುತ್ತಿರುವ ನಮ್ಮ ಅಜ್ಜಿಯ ಅನುಭವ, ಪ್ರತಿಭೆ ಇವುಗಳನ್ನು ಪಾಠಕರಿಗೆ ಪರಿಚಯ ಮಾಡಿಕೊಡಬೇಕೆಂಬ ಕುತೂಹಲದಿಂದ ಈ ಮಹಾ ಕೆಲಸಕ್ಕೆ ಕೈಹಾಕಿದ್ದೇನೆ. ನಮ್ಮ ಅಜ್ಜಿಯ ಆಶೀರ್ವಾದಬಲದಿಂದ ಕಾರ್ಯ ಸಾಂಗವಾಗಿ ನೆರವೇರುವುದರಲ್ಲಿ ಸಂದೇಹವಿಲ್ಲ.

ಪಾಠಕನೆ, ಎಲ್ಲರೂ ‘ದೇವರ ಕೃಪೆಯಿಂದ’ ಎಂದು ಬರೆಯುತ್ತಾರೆ. ನಾನು ಮಾತ್ರ ‘ಅಜ್ಜಿಯ ಆಶೀರ್ವಾದಬಲದಿಂದ’ ಎಂದು ಬರೆದುದಕ್ಕೆ ಆಶ್ಚರ್ಯ ಪಡೆಬೇಡ. ಈಗಿನ ಕಾಲದಲ್ಲಿ ದೇವರು ಎಂದರೆ ನಮಗೆಲ್ಲಾ ಬೇಸರ. ಶತಮಾನಗಳಿಂದಲೂ ದೇವರು ದೇವರು ಎಂದು ಬಡುಕೊಂಡು ಮನಸ್ಸಿಗೆ ಜಿಡ್ಡುಹತ್ತಿಹೋಗಿದೆ. ಉದಾಹರಣೆಗಾಗಿ ನಾನು ಐದುವರ್ಷಗಳಿಂದ “ದೇವರಾಣೆ” ಹಾಕವುದನ್ನು ಬಿಟ್ಟು “ಸೈತಾನ ಆಣೆ” ಹಾಕುತ್ತಿದ್ದೇನೆ! ಕೊಟ್ಟ ಭಾಷೆ ತಪ್ಪುವುದರಲ್ಲಿ ಮೊದಲಿಗಿಂತಲೂ ಈಗ ಎಷ್ಟೋ ಪ್ರವೀಣನಾಗಿದ್ದೇನೆ ಎಂದು ಎಲ್ಲರೂ ಹೇಳುತ್ತಾರೆ! ನನಗೆ ಮೊದಲಿಗಿಂತಲೂ ಹೆಚ್ಚಾಗಿಯೆ ಮಂಗಳವಾಗಿದೆಎಂದು ಹೇಳಬೇಕು. ಅದೂ ಅಲ್ಲದೆ ಅಜ್ಜಿಯ ಆಶೀರ್ವಾದವೇನು ಅವರಷ್ಟು ಬಲಹೀನವೆಂದು ತಿಳಿಯಬೇಡ. ಅವರ ಆಶೀರ್ವಾದ ಬಲದಿಂದಲೇ ತೀರ್ಥಹಳ್ಳಿಗೆ ಹೋಗಿಬಂದೆ. ಅದು ಗೊತ್ತಾದುದು ಹೇಗೆಂದರೆ, ಆ ದಿನ ಅನ್ನ ಬಲವೇ ಇಲ್ಲದೆ ತನ್ನ ಬಲವೇ ಅಡಗಿತ್ತು! ಊಟವೇ ಸಿಕ್ಕಲಿಲ್ಲ. ಒಂಬತ್ತು ಮೈಲಿ ಹೋಗಿ ಬಂದದ್ದು ಅವರ ಆಶೀರ್ವಾದಬಲದಿಂದಲೆ! ಒಂದು ಸಾರಿ ಮನೆಗೆ ಬಂದ ಬುಡಬುಡುಕೆಯವನ್ನು ಓಡಿಸಿ, ಅವನು ಕೊಟ್ಟ ಶಾಪಗಳನ್ನೆಲ್ಲಾ ಜೈಸಿದೆ. ಅವರ ಆಶೀರ್ವಾದ ಬಲದಿಂದಲೆ ಒಂದಾವರ್ತಿ ಇಪ್ಪತ್ತು ರೊಟ್ಟಿಗಳನ್ನು ತಿನ್ನುತ್ತೇನೆಂದು ಜೂಜು ಕಟ್ಟಿ ಜೀವದಿಂದ ಬಚಾವಾಗಿ ಬಂದೆ. ಆವೊತ್ತು ನನ್ನ ಗತಿ ಮುಗಿಯಿತೆಂದೇ ತಿಳಿದಿದ್ದೆ. ನ್ನನ ಮುಂದೆ ಇಪ್ಪತ್ತು ರೊಟ್ಟಿಗಳ ದೊಡ್ಡ ರಾಶಿ ಹಾಕಿ, ಕೇಳಿದಷ್ಟು ತುಪ್ಪಹಾಕಿ, ಬಲಗಡೆ ಇಬ್ಬರು ಎಡಗಡೆ ಇಬ್ಬರು ಕುಳಿತುಬಿಟ್ಟರು, ತೋಟದಾಚೆ ಭೂತದ ದೂತರೋ ಎನ್ನುವ ಹಾಗೆ ಕಾಡು, ಓಬು, ಸುಬ್ಬು, ತಿಮ್ಮು! ನಾನೂ ಆ ದಿವಸದವರೆಗೂ ಇಪ್ಪತ್ತು ರೊಟ್ಟಿ ಎಂದರೆ ಎಷ್ಟಾಗುವುದೆಂಬುದನ್ನು ಗ್ರಹಿಸಿಯೇ ಇರಲಿಲ್ಲ. ನಿರಾಯಾಸವಾಗಿ ಮುಕ್ಕಿ ಎದ್ದುಬಿಡಬಹುದೆಂದು ತಿಳಿದಿದ್ದೆ. ಆದರೆ ಕಲ್ಪನಾ ರಾಜ್ಯದಿಂದ ಕಾರ್ಯರಂಗಕ್ಕೆ ಬರಲು ಎದೆ ಹಾರಿಯೇ ಹೋಯಿತು. ಒಂದು ರೊಟ್ಟಿ ಪೂರೈಸಿ ಇನ್ನರ್ಧ ತಿನ್ನುವುದರೊಳಗಾಗಿ ಹೊಟ್ಟೆ ತುಂಬಿ ಮನದಲ್ಲಿಯೇ ಕೆಟ್ಟೆನಲ್ಲಾ ಎಂದುಕೊಂಡೆ. ಎರಡನೆಯದರಲ್ಲಿ ಉಳಿದರ್ಧವನ್ನು ಹೇಗೋ ಮಾಡಿ ಬಲಾತ್ಕಾರದಿಂದ ಗಂಟಲ ಕೆಳಕ್ಕೆ ನೂಕಿದೆ. ಮೂರನೆಯದರಲ್ಲಿ ಒಂದು ತುಂಡನ್ನು ತೆಗೆದು ತುಪ್ಪದಲ್ಲಿ ಅದ್ದಿ ಬಾಯಲ್ಲಿ ಹಾಕಿದ್ದೆ. ಅಷ್ಟರಲ್ಲಿ ಜಠರ ಅಪರಾಧಿಯಾದ ಎರಡನೆಯದನ್ನು ನಿರಪರಾಧಿಯಾದ ಒಂದನೆಯದರ ಸಮೇತ ತನ್ನ ರಾಜ್ಯದಿಂದ ಗಡೀಪಾರು ಮಾಡಿಬಿಟ್ಟಿತು. ಅಂದು ನನ್ನ ದುರವಸ್ಥೆಯನ್ನು ನೋಡಿ ಅಜ್ಜಮ್ಮ, ಪಹರೆಯವರನ್ನು ಚೆನ್ನಾಗಿ ಬೈದು, ನನ್ನನ್ನು ಜೂಜಿನ ಕಟ್ಟೆಯಿಂದ ಬಿಡಿಸಿದರು. ಇವೇ ಮೊದಲಾದ ಅನುಭವಗಳಿಂದ ಅಜ್ಜಿಯ ಆಶೀರ್ವಾದ ಒಂದರಲ್ಲಿ ನನಗೆ ಪೂರಾ ನಂಬಿಕೆ ಹುಟ್ಟಿದೆ. ಇವೆಲ್ಲಾ ಉಪವಿಷಯಗಳಾಯಿತು. ಇನ್ನು ಮುಖ್ಯ ವಿಷಯಕ್ಕೆ.

ಮಸಲ, ನಾನು ಒಬ್ಬ ದೊಡ್ಡ ಪ್ರಬಂಧಕಾರನೆಂದು ಇಟ್ಟುಕೋ! ಆಗುವುದಿಲ್ಲ. ನನಗೆ ಗೊತ್ತು; ಆದರೂ ಮಾತಿಗೆ ಇಟ್ಟುಕೋ! ಮಸಲ, ಈ ಪ್ರಬಂಧ ಬಹು ಸುಪ್ರಸಿದ್ಧವಾಯಿತೆಂದು ಇಟ್ಟುಕೋ! ಅದೂ ಸಂದೇಹವೇ! ಪರವಾ ಇಲ್ಲ, ಇಟ್ಟುಕೋ! ಮಸಲ, ನೀನು ಇದನ್ನು ಓದಿದೆಯೆಂದು ಇಟ್ಟುಕೋ! ನೀನು ಓದುವುದೂ ನನಗೆ ಗೊತ್ತು ! ಆದರೂ ಇಟ್ಟುಕೋ ! ಸದ್ಯಕ್ಕೆ ಎಲ್ಲಾ ‘ಮಸಲ’ವಷ್ಟೆ? ಮುಸಲವಲ್ಲ; ಮುಸಲವಾದರೆ ಕಷ್ಟ. ಅದನ್ನು ಹೊರುವುದು! ಮಸಲ, ನಿನಗೆ ತೋಟದಾಚೆಯ ಭೂತವನ್ನು ನೋಡಲೇಬೇಕೆಂದು ಚಪಲಹುಟ್ಟಿತು ಅಂತ ಇಟ್ಟುಕೋ! ಮಸಲ, ನಿನ್ನ ಹತ್ತಿರ ರೈಲು ಮೋಟಾರುಗಳ ಛಾರ್ಜು ಕೊಡಲು ದುಡ್ಡಿತ್ತು ಎಂತ ಎಟ್ಟುಕೋ! ನನಗೆ ಗೊತ್ತು, ಅದಕ್ಕೆ ಸ್ವಲ್ಪ ಅಭಾವ ಈಗಿನ ಕಾಲದಲ್ಲಿ; ಆದರೆ ನಾನು ಹೇಳಿದ್ದು ಮಸಲದ ದುಡ್ಡು. ಅದು ಎಲ್ಲರ ಹತ್ತಿರವೂ ಸಾಧಾರಣವಾಗಿ ಇದ್ದೇ ಇರುತ್ತದೆ. ಮಸಲ, ಮೇಲೆ ಹೇಳಿದ ನಿಬಂಧನೆಗಳೆಲ್ಲಾ ನಮ್ಮ ಅಜ್ಜಿಯ ಆಶೀರ್ವಾದಬಲದಿಂದ ಕೈಗೂಡಿದುವೆಂದು ಇಟ್ಟುಕೋ! ಇಷ್ಟೆಲ್ಲವನ್ನೂ ಕಳೆಯದೆ ದುರ್ವ್ಯಯ ಮಾಡದೆ ಇಟ್ಟುಕೊಂಡರೆ ನೀನು ನಮ್ಮ ಮನೆಗೆ ಬರುವೆ ಎಂದು ಇಟ್ಟುಕೊಳ್ಳೋಣ.

ನೀನು ನಮ್ಮ ಮನೆಗೆ ಬಂದಾಗ ನಾನೇ (ಪುಣ್ಯವಶದಿಂದ ಕಾಡಿಗೆ ಹೋಗದೆ ಮನೆಯಲ್ಲಿದ್ದರೆ) ನಿನ್ನ ಜೊತೆ ತೋಟದಾಚೆಯ ಭೂತದ ಬಳಿಗೆ ‘ನಾನೇ’ ಖುದ್ದು ಬರುತ್ತೇನೆ. ನಮ್ಮ ಮನೆಯ ಮುಂಭಾಗದಲ್ಲಿಯೆ ಅಡಕೆ ತೋಟ ಉಂಟು, ಬಾಳೆ ತೋಟವೂ ಅದರಲ್ಲಿಯೆ ಅಡಕವಾಗಿದೆ. ಬೇಸಗೆಯಲ್ಲಿ ಅಡಕೆ ಮರಗಳ ಬುಡಗಳಿಗೆ ನೆರಳುಬಂದು ತಂಪಾಗಲೆಂದು ಅಡಕೆತೋಟಗಳಲ್ಲಿ ಬಾಳೆ ಗಿಡಗಳನ್ನು ನಿಬಿಡವಾಗಿ ಬೆಳೆಯಿಸುತ್ತಾರೆ. ಅದೂ ಅಲ್ಲದೆ, ಬಾಳೆಯ ಮರದ ಗಡ್ಡೆಗಳು ಸ್ವಾಭಾವಿಕವಾಗಿ ಜಲಮಯವಾಗಿರುವುದರಿಂದ ಅಡಿಕೆ ಮರದ ಬುಡಗಳಿಗೆ ತೇವವೂ ದೊರಕಿ ದಂತಾಗುತ್ತದೆ. ತೋಟವನ್ನು ದಾಟಿದರೆ ಓರೆಯಾಗಿ ಬೆಟ್ಟವನ್ನಡರಿರುವ ದಟ್ಟಡವಿಯ ಸೆರಗಿಗೆ ಬರುತ್ತೇವೆ. ಅಲ್ಲಿ ಮರಗಳು ಪೊದೆಗಳು ವಿರಳವಾಗಿರುತ್ತವೆ. ತೋಟದ ಅಂಚಿನಲ್ಲಿ ಮಾತ್ರ ದಟ್ಟವಾಗಿ ಬೆಳೆದ ಒಂದು ಮರಗಳ ಗುಂಪು ಕಂಡುಬರುತ್ತದೆ. ಆ ತೋಪೇ ನಮ್ಮ “ಭೂತರಾಯನ ಬನ.” ಅಲ್ಲಿಗೆ ಹೋಗಿ ನೋಡಿದರೆ ವಿಶೇಷವೇನೂ ತೋರುವುದಿಲ್ಲ. ಒಂದು ದೊಡ್ಡ ರಂಜದ ಮರದ ಬುಡದಲ್ಲಿ ಒಂದು ಕಾಡು ಕಲ್ಲು ಕಂಡುಬರುತ್ತದೆ. “ಮರದ ಬುಡದ ಕಾಡು ಕಲ್ಲು” ಎಂದರೆ ಭೂತ ರಾಯನ ಬಂಗಲೆಯ ವರ್ಣನೆ ಮುಗಿಯುತ್ತದೆ!

ಭೂತರಾಯನ ಪ್ರತಿನಿಧಿಯಾದ ಆ ಕಾಡುಕಲ್ಲಿಗೆ ಪ್ರತಿವರ್ಷವೂ ಹರಕೆ ಸಲ್ಲುವುದು. ಆಗ ಅನೇಕ ಕುರಿಕೋಳಿಗಳ ಬಲಿಯಾಗುವುದು, ಭೂತಕ್ಕೆ ಬಲಿ ಎಂದರೆ ಬಹಳ ವಿಶ್ವಾಸದಂತೆ. ಊರಿನವರೆಲ್ಲಾ, ಕನ್ನಡ ಜಿಲ್ಲೆಯಿಂದ ಬಂದ ಕೂಲಿಯಳುಗಳೂ ಸೇರಿ, ಅದಕ್ಕೆ ಪರಮಭಕ್ತರು. ದನಕರುಗಳಿಗೆ ರೋಗಬಂದರೆ ಒಂದು ಕೋಳಿಯನ್ನೋ ಅಥವಾ ಒಂದು ತೆಂಗಿನಕಾಯಿಯನ್ನೋ ಅಥವಾ ಮೂರು ಕಾಸನ್ನೋ ರೋಗಿಯಾದ ಪ್ರಾಣಿಗೆ ಪ್ರದಕ್ಷಿಣೆ ಬರಿಸಿ, ಭೂತರಾಯನಿಗೆ “ಹೇಳಿಕೊಂಡು” ಮುಡುಪು ಕಟ್ಟುವರು. ರೋಗಕ್ಕೆ ಅನೇಕ ಔಷಧಗಳನ್ನು ಕೊಡುವರು. ಔಷಧದಿಂದ ರೋಗ ಗುಣವಾದರೂ ಕೀರ್ತಿಯೆಲ್ಲಾ ಭೂತರಾಯನಿಗೆ.

ಉದಾಹರಣೆಗಾಗಿ ನಡೆದ ಒಂದು ಸಂಗತಿ ಹೇಳುತ್ತೇನೆ. ಒಂದು ದಿನ ಸಂಜೆಯ ಸಮಯ. ನಾನು ಉಪ್ಪರಿಗೆಯ ಮೇಲೆ ಶ್ರೀಯುತ ಲೋಕಮಾನ್ಯ ಬಾಲಗಂಗಾಧರ ತಿಲಕರವರ “ಗೀತಾರಹಸ್ಯ” ಓದುತ್ತಾ ಕುಳಿತಿದ್ದೆ, ಅಲ್ಲಿಯೆ ಸಮೀಪದಲ್ಲಿ ಬೇಟೆಗಾರ ಪುಟ್ಟಣ್ಣ ತೋಟಾ ಕೋವಿಗಳನ್ನು ಕಳಚಿ ನಳಿಗೆಗಳನ್ನೆಲ್ಲಾ ಚೆನ್ನಾಗಿ ಉಜ್ಜಿ ಎಣ್ಣೆ ಹಚ್ಚುತ್ತಿದ್ದ. ಹಠಾತ್ತಾಗಿ ನಮ್ಮ ಬಾಣಸಿಗ ಭೀಮ (ಅವನ ನಿಜವಾದ ಹೆಸರು ನಂಜ ಎಂದು; ಅವನ ಹೊಟ್ಟೆಬಾಕತನ ನೋಡಿ ಹಾಗೆಂದು ಅಡ್ಡ ಹೆಸರಿಟ್ಟೆವು) ಏದುತ್ತಾ ಓಡಿ ಬಂದು “ಒಂದು ಎಮ್ಮೆಕರು ಸಾಯಲಿಕ್ಕಾಗಿದೆ; ಬಿದ್ದು ಒದ್ದುಕೊಳ್ಳುತ್ತಿದೆ!” ಎಂದು ಬಹಳ ಕಕ್ಕುಲತೆಯಿಂದ ನುಡಿದ. ನಾನು ಪುಟ್ಟಣ್ಣ ಕೊಟ್ಟಿಗೆಗೆ ಓಡಿದೆವು. ಬಡಪ್ರಾಣಿಯ ಹೊಟ್ಟೆ ಊದಿತ್ತು. ಬಾಯಲ್ಲಿ ನೊರೆ ಬೀಳುತ್ತಿತ್ತು. ಕಣ್ಣು ಹರಳುಗಳು ಎವೆಯ ಒಳಗಾಗಿದ್ದುವು. ಅದರ ಸ್ಥಿತಿ ಶೋಚನೀಯವಾಗಿತ್ತು. ಅಲ್ಲಿಗೆ ಬಂದ ನಮ್ಮ ದೊಡ್ಡಮ್ಮನವರು “ಇದು ಭೂತರಾಯನ ಚೇಷ್ಟೆ, ಒಂದು ಕಾಯಿ ಸುಳಿದಿಟ್ಟು ಹೇಳಿಕೊಳ್ಳಿ” ಎಂದರು. ಪುಟ್ಟಣ್ಣ ಕರುವಿನ ಬೆನ್ನಮೇಲಿದ್ದ ಕೂದಲು ಹಿಡಿದೆಳೆದು ಅದರ ಮುಸುಡಿಯನ್ನು ತನ್ನ ಮೂಗಿನಬಳಿ ಇಟ್ಟುನೋಡಿ “ಇದು ಮತ್ತೇನೂ ಅಲ್ಲ, ಬಳ್ಳಿ ಮುಟ್ಟಿದ್ದು” ಎಂದು ಗುಡ್ಡದ ಕಡೆ ಓಡಿ ಹೋದ. ಬಳ್ಳಿ ಮುಟ್ಟಿದದು ಎಂದರೆ ಹಾವು ಕಡಿಯುವುದು ಎಂದರ್ಥ! ಹಾವು ಕಡಿದಿದೆ ಎಂದು ಹೇಳುವುದು ಅಮಂಗಳಕರವೆಂಬ ಭೀತಿಯಿಂದ “ಬಳ್ಳಿ ಮುಟ್ಟಿದೆ” ಎನ್ನುತ್ತಾರೆ. ಪುಟ್ಟಣ್ಣ ಗುಡ್ಡದಿಂದ ಔಷಧ ತರುವಷ್ಟರಲ್ಲಿ ನಂಜ ಒಳಗಿನಿಂದ ಒಂದು ತೆಂಗಿನಕಾಯಿ ತಂದು ಅದನ್ನು ಕರುವಿಗೆ ‘ಸುಳಿದು’ (ಪ್ರದಕ್ಷಿಣೆಬರಿಸಿ), “ಭೂತರಾಯ, ಏನಿದ್ದರೂ ಇದರ ಮೇಲೆಯೇ ನಿಲ್ಲಲಿ! ಏನು ಮುಟ್ಟು ಚಿಟ್ಟು ಆಗಿದರೂ ಎಲ್ಲಾ ಹರಕೆಯ ದಿನ ಭಟ್ಟರಿಂದ ಶುದ್ಧಿ ಮಾಡಿಸುತ್ತೇವೆ” ಎಂದು ತೋಟದ ದಿಕ್ಕಿಗೆ ಕೈಮುಗಿದು ಮುಡುಪು ಕಟ್ಟಿದನು. ನಿಂತಿದ್ದವರೆಲ್ಲರೂ “ಈಗ ಕರು ಸ್ವಲ್ಪ ಒದ್ದಾಟ ಕಮ್ಮಿ ಮಾಡಿತು. ಭೂತರಾಯನ ಚೇಷ್ಟೆಯೇ ಹೌದು!” ಎಂದು ಒಬ್ಬರ ಮಾತನ್ನು ಒಬ್ಬರು ಸಮರ್ಥಿಸಿದರು. ಸುಮ್ಮನೆ ನಿಂತಿದ್ದ ನಾನು ನಗುವನ್ನು ತಡೆಯಲಾರದೆ “ಹೌದು ಹೌದು, ಭೂತರಾಯನ ಚೇಷ್ಟೆಯೇ! ಔಷಧಿ ಮಾಡದೆ ಇನ್ನೊಂದು ತೆಂಗಿನಕಾಯಿಯನ್ನು ಮುಡುಪು ಕಟ್ಟಿದರೆ ಬಹುಶಃ ಒದ್ದಾಟವೇ ನಿಲ್ಲಬಹುದು” ಎಂದ.

ಅಷ್ಟರಲ್ಲಿ ಪುಟ್ಟಣ್ಣ ಬಾಯಿಯಲ್ಲಿ ಏನನ್ನೋ ಅಗಿಯುತ್ತಾ ಬಂದು ಅದನ್ನು ಕರುವಿನ ನಾಸಿಕದ್ವಾರದೊಳಗೂ ಕಣ್ಣಿನೊಳಗೂ ಉಗಿದು, ಬಾಲವನ್ನು ಎಳೆದು ಬೆನ್ನೆಲುಬನ್ನು ಚೆನ್ನಾಗಿ ನೀಳಮಾಡಿ ನೀವಿದನು. ಕರು ಐದು ನಿಮಿಷದೊಳಗಾಗಿ ಎದ್ದು ನಿಂತಿತು. ಎಲ್ಲರೂ ಭೂತರಾಯನ ಶಕ್ತಿಯನ್ನೇ ಕುರಿತು ಸಂಭಾಷಣೆ ಮಾಡುತ್ತಾ ತೆರಳಿದರು. ಪುಟ್ಟಣ್ಣನ ಔಷಧವನ್ನು ಮಾತ್ರ ಮರೆತುಬಿಟ್ಟರು; ಅದು ಅವರ ಮೆದುಳಿಗೆ ಹತ್ತಲಿಲ್ಲ. ಎಲ್ಲರೂ ಹೊರಟು ಹೋದಮೇಲೆ ಪುಟ್ಟಣ್ಣನನ್ನು ಕುರಿತು “ಅದೇನು ಎಲೆಯೋ ನೀನು ಅಗಿಯುತ್ತಾ ಬಂದದ್ದು?” ಎಂದು ಕೇಳಿದೆ. ಅದಕ್ಕೆ ಅವನು “ಔಷಧದ ಹೆಸರು ಯಾವಾಗಲೂ ಹೇಳಬಾರದು. ಹೇಳಿದರೆ ಅದರ ಶಕ್ತಿಯೇ ಹೋಗಿಬಿಡುತ್ತದೆ” ಎಂದನು.

ನಮ್ಮ ಭೂತರಾಯನಿಗೆ ಈಗ ಇರುವ ಶಕ್ತಿಗಿಂತಲೂ ಹಿಂದೆ ಇದ್ದ ಶಕ್ತಿ ಅತಿಶಯವಂತೆ. ಬಹುಶಃ ಆಧುನಿಕರೆಲ್ಲಾ ಪ್ರಾಚೀನರಿಗಿಂತ ಹೇಗೆ ಹೀನತರ ಸ್ಥಿತಿಯಲ್ಲಿ ಇದ್ದಾರೆಯೋ ಹಾಗೆಯೆ ಭೂತರಾಯನ ಆಧುನಿಕ ಮಹಿಮೆ ಪ್ರಾಚೀನಮಹಿಮೆಗಿಂತ ನಿಕೃಷ್ಟಗತಿಗೆ ಇಳಿದಿರಬಹುದೆಂದು ತೋರುತ್ತದೆ. ಪಾಪ! ಕಲಿರಾಯನ ನಿರಂಕುಶಪ್ರಭುತ್ವದಿಂದ ನಮ್ಮ ಭೂತರಾಯನಿಗೂ ಕೂಡ ಉಳಿಗತಿ ಇಲ್ಲ.

ಭೂತರಾಯನಿಗೆ ಇದ್ದ ಇಂದಿನ ಶಕ್ತಿಮಹಿಮೆಗಳನ್ನು ದೃಷ್ಟಾಂತ ಪಡಿಸಲು, ಅಜ್ಜಮ್ಮ ಬಹು ಸ್ವಾರಸ್ಯವಾದ ಕಥೆಗಳನ್ನು ಹೇಳುತ್ತಿದ್ದರು. ನಮ್ಮ ಕಣ ಮನೆಯಿಂದ ಸುಮಾರು ಒಂದುವರೆ ಫರ್ಲಾಂಗು ದೂರದಲ್ಲಿದೆ. ಸುಗ್ಗಿ ಕಾಲದಲ್ಲಿ ಪೈರನ್ನು ಒಕ್ಕಿದ ತರುವಾಯ ತೂರಿದ ಬತ್ತವನ್ನು ಅಲ್ಲಿಯೆ ರಾಶಿಮಾಡಿ ಇಟ್ಟು ಮನೆಗೆ ಬರುತ್ತಾರೆ. ಬೆಳಗ್ಗೆ ಅದನ್ನು ಹೊತ್ತು ಕಣಜಕ್ಕೆ ಸುರಿಯುತ್ತಾರೆ. ಇದು ಬಹುಕಾಲದಿಂದಲೂ ನಡೆದುಬಂದ ವಾಡಿಕೆ. ಒಂದು ದಿನ ರಾತ್ರಿ ಕೆಲವು ಜನ ಕಳ್ಳರು ಬಂದು ಬತ್ತವನ್ನು ಕಳಲೆಳಸಿದರಂತೆ. ಅವರು ಕೆಲವು ಮೂಟೆಗಳಿಗೆ ಬತ್ತ ತುಂಬಿದ್ದರಂತೆ; ಇಬ್ಬರು ಬತ್ತ ಅಳೆಯುತ್ತಿದ್ದರಂತೆ; ಕೆಲವರು ಮೂಟೆ ತೆಗೆದು ಬೆನ್ನಮೇಲೆ ಹಾಕಿಕೊಂಡಿದ್ದರಂತೆ; ಬೆಳಗಾಗುವವರೆಗೂ ಅವರೆಲ್ಲರೂ ಹಾಗೆಯೆ ನಿಷ್ಪಂದವಾಗಿ ನಿಂತು ಬಿಟ್ಟಿದ್ದರಂತೆ! ಕಡೆಗೆ ನಮ್ಮ ಅಜ್ಜಯ್ಯ ಹೋಗಿ ಭೂತರಾಯನಿಗೆ ಹೇಳಿಕೊಳ್ಳಲು ಮಂತ್ರಮುಗ್ಧರಾದ ಅವರಿಗೆ ವಿಮೋಚನೆಯಾಯಿತಂತೆ! ಆಮೇಲೆ ಕಳ್ಳರನ್ನು ಚೆನ್ನಾಗಿ ಬೆನ್ನು ಮುರಿಯುವಂತೆ ಹೊಡೆದು ಅಟ್ಟಿದರಂತೆ!

ಮತ್ತೊಂದು ಸಾರಿ ನಮ್ಮ ಮನೆಯಲ್ಲಿ ಯಾರಿಗೋ “ಅಮ್ಮ” (ಸಿಡುಬು) ಎದ್ದಿತ್ತಂತೆ. ಆಗ ಎಲ್ಲರೂ ಮನೆಬಿಟ್ಟು ಬೇರೆ ಕಡೆ ಇದ್ದರಂತೆ. ಆಗ ತೋಟಕ್ಕೆ ಭೂತರಾಯನೇ ಕಾವಲಿರಬೇಕೆಂದು ಅಜ್ಜಯ್ಯ ಹೇಳಿಕೊಂಡಿದ್ದರಂತೆ. ತೋಟದಲ್ಲಿ ವೀಳ್ಯದೆಲೆ ಹಂಬು ಬಹಳ ಇದ್ದುವಂತೆ. ಯಾವನೋ ಕಳ್ಳ ಎಲೆ ಕೊಯ್ಯಲು ಅಡಕೆಮರ ಹತ್ತಿ ಭೂತದಿಂದ ತಡೆಯಲ್ಪಟ್ಟವನಾಗಿ ಮೂರು ದಿನ ಅಲ್ಲಿಯೇ ಇದ್ದು. ಕಡೆಗೆ ಅಜ್ಜಯ್ಯನಿಂದ ಬದುಕಿದನಂತೆ! ಹೀಗೆಯೆ ಮತ್ತೊಂದು ಸಾರಿ ಮನೆಯನ್ನು ಕೊಳ್ಳೆ ಹೊಡೆಯಲು ದರೋಡೆಕಾರರು ಬಂದಾಗ ಭೂತ ಮನೆಯ ಸುತ್ತಲೂ ತನ್ನ ಮಾಯೆಯಿಂದ ಸಾವಿರಾರೇಕೆ ಲಕ್ಷಾಂತರ ಪಂಜುಗಳನ್ನಿರಿಸಿ ದರೋಡೆಕಾರರಿಗೆ ಅರಿಗಳು ಅಮಿತವಾಗಿರುವರೆಂಬ ಭ್ರಾಂತಿಯನ್ನು ಹುಟ್ಟಿಸಿ ಅವರನ್ನು ಹೆದರಿಸಿ ಓಡಿಸಿತಂತೆ. ಇಷ್ಟಾದರೂ ಮನೆಯವರೆಲ್ಲ ಗಾಢನಿದ್ರೆಯಲ್ಲಿದ್ದುದರಿಂದ ಒಬ್ಬರಿಗೂ ನಡೆದ ಸಂಗತಿ ಗೊತ್ತೇ ಆಗಲಿಲ್ಲವಂತೆ! ಅನಂತರ ಗೊತ್ತಾದುದು ಹೇಗೋ ಆ ಶಿವನೇ ಬಲ್ಲ.

ಮೊದಲು ಸತ್ಯದ ಕಾಲವಾಗಿದ್ದಾಗ ದಿನವೂ ಭೂತರಾಯ ಮನೆಯ ಸುತ್ತ ಪಹರೆ ನೋಡಿಕೊಂಡು ಹೋಗುತ್ತಿದ್ದನಂತೆ. ತನ್ನ ಕಬ್ಬಿಣದ ದೊಣ್ಣೆಯಿಂದ ಹೆಬ್ಬಾಗಿಲಿಗೆ ಹೊಡೆದು ಅಜ್ಜಯ್ಯನನ್ನು ಮಾತಾಡಿಸುತ್ತಿದ್ದನಂತೆ. “ಇದೇ ಭೂತರಾಯ ಕಬ್ಬಿಣದ ದೊಣ್ಣೆ ಕುಟ್ಟುತ್ತಿದ್ದ ಬಂಡೆ” ಎಂದು ಈಗಲೂ ತೋಟದಲ್ಲಿರುವ ಒಂದು ಅರೆಯನ್ನು ತೋರಿಸುತ್ತಾರೆ. ಕೆಲವರು ಆ ಅರೆಯಲ್ಲಿರುವ ಒರಳು ಭೂತರಾಯ ದೊಣ್ಣೆ ಬಡಿದೇ ಆದುದೆಂದು ಹೇಳುತ್ತಾರೆ. ಉಳಿದವರು ಅದನ್ನು ಖಂಡಿಸಿ ಅದು “ಕಲ್ಲುಕುಟಿಗ” ನೆಂಬ ಮತ್ತೊಂದು ದೆವ್ವದ ಕಾರ್ಯವೆಂದು ಸಾಧಿಸುತ್ತಾರೆ. ಈ ವಿವಾದ ಅನಾದಿಯಾದುದು. ಅದರ ಸ್ವಭಾವ ನೋಡಿದರೆ ಅನಂತವಾದುದ್ದು ಎಂದೂ ಹೇಳಿಬಿಡಬಹುದು. ಹಳ್ಳಿಯ ವಿದ್ವಾಂಸರುಗಳು ವಾಕ್ಕಲಹಕ್ಕೆ ತೊಡಗಿದರೆ ತೀರ್ಮಾನದ ಬಾಬತ್ತೇ ಇಲ್ಲ. ನಿರ್ಣಯದ ಮಾತಂತೂ ಕೇಳಲೇಬಾರದು. (ನಗರದವರು?)

ಒಂದು ಸಾರಿ ಅಜ್ಜಮ್ಮ ರಾತ್ರಿ ಕೊಟ್ಟಿಗೆಗೆ ಹೋಗಿಬರುವಾಗ ಬಾವಿ ಕಟ್ಟೆಯ ಮೇಲೆ ಭೂತರಾಯ ಶ್ವೇತಾಂಬರಧಾರಿಯಾಗಿ “ಆಕಾಶಕ್ಕೂ ಭೂಮಿಗೂ” ಒಂದಾಗಿ ನಿಂತಿದ್ದನಂತೆ. ಧೈರ್ಯಶಾಲಿಗಳಾದ ಅಜ್ಜಮ್ಮನವರೂ ಕೂಡ ಎದೆಹಾರಿ ಮೂರ್ಛೆಹೋದರಂತೆ.

ಪಾಠಕಮಹಾಶಯ, ಇಷ್ಟರಲ್ಲಿಯೆ ನಿನಗೆ ಭೂತದ ಮಹಿಮೆ ಗೊತ್ತಾಗಿರಬಹುದು; “ತೋಟದಾಚೆಯ ಭೂತ” ಅಸಾಧಾರಣವಾದುದು ಎಂಬ ಸತ್ಯವನ್ನು ಈ ಪ್ರಬಂಧ ನಿನಗೆ ಚೆನ್ನಾಗಿ ಮನಗಾಣಿಸಿರದಿದ್ದರೆ ಅದು ಪ್ರಬಂಧದ ತಪ್ಪಲ್ಲ; ನಿನ್ನ ತಪ್ಪು. ನೀನು ಅತಿ ನವೀನವಾಗಿದ್ದೀಯೆ! ಅತ್ಯಾಧುನಿಕನು ಸದಾ ಸಂಶಯಾತ್ಯನು. ಆದರೆ ಎಚ್ಚರಿಕೆ! “ಸಂಶಯಾತ್ಮಾ ವಿನಶ್ಯತಿ.”

ನಾನೂ ನೀನೂ ನಂಬದಿದ್ರೂ ಹಳ್ಳಿಯಲ್ಲಿ ಪ್ರತಿಯೊಬ್ಬನೂ ಭೂತದ ಮಹಿಮೆಯಲ್ಲಿ ನಮ್ಮಿಂದ ಗ್ರಹಿಸಲಸದಳವಾದ ನಂಬಿಕೆ ಇಟ್ಟಿದ್ದಾನೆ. ಭೂತದ ವಿಷಯವಾದ ಕತೆಗಳು ನಿಜವಾಗಿ ನಡೆದವೆಂದೇ ಅವನ ಬಲವಾದ ನಂಬಿಕೆ. ಹೆಚ್ಚೇನು? ಈ ನಂಬಿಕೆಯ ಮೇಲೆಯೆ ಅವನು ಜೀವಿಸುತ್ತಾನೆ. ನಿನಗೂ ನನಗೂ ಭೂತವೆಂದರೆ ಮಾತಿನ ಮಟ್ಟಿಗೆಷ್ಟೋ ಅಷ್ಟೆ! ನಮಗೆ ಅದೊಂದು ಪರಿಹಾಸ್ಯಮಾಡಿ ನಗಬಹುದಾದ ತೃಣವಿಷಯ. ಆದರೆ ಹಳ್ಳಿಯವನ ಜೀವನದಲ್ಲಿ ಭೂತ ಎಂದೆಂದಿಗೂ ಅಗಲಿಸಕೂಡದ ನಿತ್ಯವಾಗಿರುವ ಚಿರಾಂಶವಾಗಿದೆ. ಆದ್ದರಿಂದ, ಪಾಠಕಮಹಾಶಯ, ಹಳ್ಳಿಯವನು ಮೂಢನೆಂದು ತಿರಸ್ಕರಿಸಬೇಡ. ಮುಕ್ಕಾಲುಪಾಲು ಜಗತ್ತನ್ನು ಮೌಢ್ಯವೇ ಕಾಪಾಡುತ್ತಿರುವುದು. ಮುಕ್ಕಾಲು ಪಾಲು ಜಗತ್ತಿಗೆ ಮೌಢ್ಯವೇ ಆನಂದವಾಗಿರುವುದು. 
ಜ್ಞಾನದೇವತೆಯೊಲಿಯದಾತನ ಮಧುರಮೌಢ್ಯವ ಹರಸಲಿ:
ಜ್ಞಾನಕೆಳಸಿ ತ್ರಿಶಂಕುವಾಗದ ತೆರದೊಳಾತನನಿರಿಸಲಿ!
*********


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ