ನನ್ನ ಪುಟಗಳು

27 ಏಪ್ರಿಲ್ 2018

ಮಲೆನಾಡಿನ ಚಿತ್ರಗಳು : ಅಣ್ಣಪ್ಪನ ರೇಷ್ಮೆ ಕಾಯಿಲೆ

ಅಣ್ಣಪ್ಪನ ರೇಷ್ಮೆ ಕಾಯಿಲೆ
ಬೇಸಗೆಯ ನಡುಹಗಲು. ಬಿಸಿಯ ಬಿಸಿಲು ಹಸುರು ಮಲೆಗಳ ಮೇಲೆ ಹುಲುಸಾಗಿ ಮಲಗಿತ್ತು. ಹೆಗ್ಗೋಟೆಯ ಹೆಗ್ಗೋಡೆಗಳಂತೆ ಸುತ್ತಲೂ ಎತ್ತರವಾಗಿ ಎದ್ದ ಗಿರಿಗಳಿಂದ ಸಂಕುಚಿತವಾದಂತೆ ತೋರುತ್ತಿದ್ದ ತಿಳಿಯಾಳದ ಬಾನಿನಲ್ಲಿ ಬೂರುಗದರಳೆಯಂತಿದ್ದ ತುಂಡುಮೋಡಗಳು ಸೋಮಾರಿಯ ಮೆದುಳಿನಲ್ಲಿ ಅಲೆದಾಡುವ ಕನಸುಗಳಂತೆ ತೇಲುತ್ತಿದ್ದುವು. ಹಕ್ಕಿಗಳು ಬಿಸಿಲಿನ ಬೇಗೆಗೆ ಬಸವಳಿದು ಮರಗಳಲ್ಲಿ ಮರೆಯಾಗಿ ಕನವರಿಸುವುವೋ ಎಂಬಂತೆ ಕಿಚಿಮಿಚಿ ಮಾಡುತ್ತಿದ್ದುವು. ಎಲ್ಲಿಯೋ ಒಂದು ಮರಕುಟಿಗನ ಹಕ್ಕಿ ಮಾತ್ರ ಅಡವಿಯ ಬಡಗಿಯಂತೆ ಕೊಟ್‌ಕೊಟ್ ಸದ್ದು ಮಾಡುತ್ತಿತ್ತು. ನಾನು ಊಟ ಮುಗಿಸಿಕೊಂಡು ನಮ್ಮ ಮನೆಯ ಉಪ್ಪರಿಗೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹವಣಿಸುತ್ತಿದ್ದೆ. ಗಿ – ನನ್ನೊಡನೆ ಇದ್ದರು. ಅಷ್ಟರಲ್ಲಿ ಮಾಯ ಓಡಿಬಂದು ಕಣ್ಣಿನಲ್ಲಿ ನೀರು ಸುರಿಸುತ್ತ “ಅಣ್ಣಪ್ಪನಿಗೆ ಕಾಯಿಲೆ ಜೋರಾಗಿದೆ, ಉಳಿಯುವಂತಿಲ್ಲ. ನಿಮ್ಮನ್ನು ಬರಹೇಳಿದ” ಎಂದನು. ನಾನು, ಗಿ – ಇಬ್ಬರೂ ಉದ್ವೇಗದಿಂದ ಎದ್ದೆವು. ಪ್ರಕೃತಿ ಮಾತ್ರ ನಿಶ್ಚಿಂತ ಉದಾಸೀನವಾಗಿತ್ತು.

ಮಾಯ ಅಣ್ಣಪ್ಪನ ತಮ್ಮ. ಅಣ್ಣಪ್ಪ ನಮ್ಮ ಒಕ್ಕಲು. ಬಹಳ ವಿನೋದಶೀಲ ಅವನದು. ಸತ್ಯವಂತ, ಪ್ರಾಮಾಣಿಕ. ನಮ್ಮ ಹಿರಿಯರ ಕಾಲದಿಂದಲೂ ನಮ್ಮ ಗದ್ದೆಮಾಡಿಕೊಂಡು ಗುತ್ತಿಗೆಯನ್ನು ಸಲ್ಲಿಸುತ್ತ ಯೋಗ್ಯನಾಗಿದ್ದ ಮನುಷ್ಯ. ಅವನದು ಯಾವಾಗಲೂ ನಗುಮುಖ. ಸಾಮಾನ್ಯವಾಗಿ ಬಡವರಲ್ಲಿ, ಅದರಲ್ಲಿಯೂ ಮಲೆನಾಡಿನ ಸಾಹುಕಾರರ ಗಾಣಕ್ಕೆ ಸಿಕ್ಕಿಬದ್ದಿರುವ ಬಡವರಲ್ಲಿ ಸುಲಭವಲ್ಲದ ನಗುಮುಖ. ನನಗಿನ್ನೂ ನೆನಪಿದೆ. ಅವನೊಂದು ದಿನ ಏನನ್ನೋ ಕಡೆಯುವ ಕೆಲಸದಲ್ಲಿದ್ದ, ಅವನಿಗ ಸಹಾಯವಾಗಿದ್ದವನು ಒಬ್ಬ ಚಿಕ್ಕ ಹುಡುಗ. ಬಹಳಹೊತ್ತು ಕೆಲಸ ಮಾಡಬೇಕಾದ್ದರಿಂದ ಹುಡುಗನ ಉತ್ಸಾಹ ಬತ್ತುವ ಸ್ಥಿತಿಗೆ ಬರಲು, ಅಣ್ಣಪ್ಪ ಕತೆ ಹೇಳಲು ತೊಡಗಿದ. ಹುಡುಗನ ಕೈ ಚುರುಕಾಯಿತು. ನಾನು ಮರೆಯಲ್ಲಿದ್ದು ಆ ಕತೆಯನ್ನು ಆಲಿಸಿ ಬಹಳ ನಕ್ಕು ಬಿಟ್ಟೆ. ಆ ಕಥೆ ಮತ್ತಿಂತೆಂದೊಡೆ –

ಒಂದೂರಿನಲ್ಲಿ ಒಬ್ಬನು ರಾತ್ರಿ ಮಲಗಿದ್ದಾಗ ಒಂದು ಓಡುಹುಳು ಅವನ ಕಿವಿಯೊಳಗೆ ನುಗ್ಗಿತಂತೆ. ಅದು ಕಿವಿಯನ್ನು ಕೊರೆದು ಕೊರೆದು ತಲೆಯನ್ನು ಪ್ರವೇಶಿಸಿತು. ಅಲ್ಲಿ ಅದಾಗಲೆ ಗಬ್ಬವಾಗಿದ್ದುದರಿಂದ, ಮರಿಹಾಕಿ, ಸಂಸಾರ ಹೂಡಿತು. ತಾಯಿ ಮರಿಗಳಿಗೆ ಅವನ ಮೆದುಳೇ ಆಹಾರವಾಯಿತು. ಹೀಗೆ ಆ ಮರಿಗಳು ತಲೆಯ ತಿರುಳನ್ನು ತಿಂದು ತಿಂದು ಕಡೆಗೆ ಬರಿಯ ತಲೆಯೋಡು ಮಾತ್ರ ಉಳಿಯಿತು. ಆದರೂ ಆ ಮನುಷ್ಯ ಎಂದಿನಂತೆ ಕೆಲಸ ಮಾಡುತ್ತಿದ್ದನಂತೆ. ಒಂದು ದಿನ ಒಬ್ಬ ಪೊಲೀಸಿನವನು ಅಲ್ಲಿಗೆ ಬಂದು ಅವನನ್ನು ಕೂಗಿದನಂತೆ. ಆ ಮನುಷ್ಯ ಏನೋ ಕೆಲಸದ ಮೇಲಿದ್ದುದರಿಂದ ಬೇಗನೆ ಬರಲಾಗಲಿಲ್ಲ. ಪೊಲೀಸು ಮಹಾಶಯನಿಗೆ ಕೋಪಬಂದು ಗಟ್ಟಿಯಾಗಿ ರೇಗಿ ಕೂಗಲು ಆ ಮನುಷ್ಯ ಭೀತಿಯಿಂದ ಹೊರಗೆ ಬಂದನಂತೆ. ಅವನು ಹೊರಗೆ ಬರಲು ಪೊಲೀಸಿನವನು “ಏನೋ! ಏಕೆ ಬರಲಿಲ್ಲವೋ ನಾನು ಕರೆದ ಕೂಡಲೆ?” ಎಂದು ಕೆನ್ನೆಗೆ ಬಲವಾಗಿ ಹೊಡೆದನಂತೆ. ಹೊಡೆಯಲು, ತಿರುಳಿಲ್ಲದ ಕರಟದಂತಿದ್ದ ಆ ತಲೆಬುರುಡೆ ದೇಹದ ಮೇಲಿಂದ ಉರುಳಿಬಿದ್ದು ಒಡೆದೇ ಹೋಯಿತಂತೆ!

ಈ ಕತೆಯನ್ನು ಕೇಳುತ್ತಿದ್ದ ಹುಡುಗ ಬಿಲ್ಲುಂಬೆರಗಾಗಿ ಬಾಯಿ ತೆರೆದು ಕಣ್ಣರಳಿಸಿ ಅಣ್ಣಪ್ಪನ ಮುಖವನ್ನೇ ನೋಡುತ್ತಿದ್ದ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗ “ನಿಜವಾಗಿಯೂ ನಡೆದುದು ಹೌದೇನೊ, ಅಣ್ಣಪ್ಪಾ?” ಎಂದ. ಅಣ್ಣಪ್ಪ ತಾನೇ ಈ ಕೇಸು ವಿಚಾರಣೆಯಾದಾಗ ಸಾಕ್ಷಿ ಹೇಳಿದ್ದೆ ಎಂದನು. ಹುಡುಗ ಸುಮ್ಮನಾದ. ನಾನು ನಗುತ್ತ ಹೊರಟುಹೋದೆ. ಅಣ್ಣಪ್ಪ ಕತೆಗಾರ ಹೌದೋ ಅಲ್ಲವೋ ತಿಳಿಯದು ನನಗೆ; ನಗೆಗಾರನೆಂಬುದೇನೋ ನಿರ್ವಿವಾದವಾದುದು.

ಅಣ್ಣಪ್ಪನ ಗುಡಿಸಲಿಗೂ ನಮ್ಮ ಮನೆಗೂ ಸುಮಾರು ನಾಲ್ಕು ಫರ್ಲಾಂಗುಗಳು ದೂರವಿರಬಹುದು. ನಾನು, ಗಿ – ಆ ಉರಿಬಿಸಿಲಲ್ಲಿ ಹೊರಟೆವು. ನಮ್ಮ ಕೂಡೆ ಮಾಯನೂ ಖಿನ್ನವದನನಾಗಿ ಬರುತ್ತಿದ್ದನು. ಅವನೊಡನೆ ಕಾಯಿಲೆಯ ವಿವರಣೆ ಏನೆಂದು ಕೇಳಿದೆವು.

“ಎರಡು ವಾರದಿಂದ ನೆಲಹಿಡಿದಿದ್ದಾನೆ. ಎಲುಬು ಚರ್ಮ ಎರಡೆ ಇದೆ. ಆಗಾಗ ಬಾಯಲ್ಲಿ ರಕ್ತಕಾರುತ್ತಾನೆ. ಮೇಲುಸಿರೆಳೆಯುತ್ತಿದ್ದಾನೆ” ಎಂದು ವ್ಯಸನಸೂಚಕವಾದ ಸ್ವರದಿಂದ ಹೇಳಿದ.

“ಔಷಧಿ ಏನು ಮಾಡಿದಿರಿ?”

“ಚೌಡಿಯ ಕಾಟ ಎಂದರು. ಭಟ್ಟರ ಹತ್ತಿರ ನಿಮಿತ್ತ ಕೇಳಿಸಿದ್ದಾಯಿತು. ಭಸ್ಮ ಕೊಟ್ಟರು; ಅದನ್ನು ತಿನ್ನಿಸಿದೆವು. ಆಮೇಲೆ ಪಂಜರೊಳ್ಳಿ ದೆವ್ವಕ್ಕೆ ಕೋಳಿ ಕೊಟ್ಟೆವು” ಎಂದು ಪ್ರಾರಂಭಿಸಿದನು. ನನಗೆ ರೇಗಿತು.

“ಔಷಧಿ ಏನು ಮಾಡಿದ್ದೀರಿ”? ಎಂದು ಕೇಳಿದರೆ, ‘ಚೌಡಿ, ಭಟ್ಟ, ಭಸ್ಮ, ಕೋಳಿ!’ – ಅಯ್ಯೋ ಮುಟ್ಟಾಳ! ಕಾಯಿಲೆಗೆ ಭಷಧಿ ಕೊಡಬಾರದೇನೋ” ಎಂದೆ.

“ಔಷಧಿಯನ್ನೂ ಕೊಟ್ಟರು” ಎಂದನು.

“ಯಾರು?” ಎಂದೆ.

“ನೆರೆಮನೆ ಮಂಜಣ್ಣ” ಎಂದನು.

ನನಗೆ ಇನ್ನೂ ಸಿಟ್ಟುಬಂದಿತು. ಮಲೆನಾಡಿನಲ್ಲಿ ‘ನನಗೆ ನಾನೇ ವೈದ್ಯನಾಗಿಬಿಟ್ಟೆ!’ ಎಂದುಕೊಂಡು ಔಷಧಿಕೊಟ್ಟು ಅನೇಕ ರೋಗಿಗಳನ್ನು ವೈಕುಂಠಧಾಮಕ್ಕೆ ಕಳುಹಿಸುವವರು ಬಹಳ ಮಂದಿ ಇದ್ದಾರೆ. ಜನಗಳು ಕಾಯಿಲೆಯಾದರೆ ಮೊದಲು ದೆವ್ವಕ್ಕೆ ಹೇಳಿಕೊಳ್ಳುತ್ತಾರೆ. ಆಮೇಲೆ ಸರ್ವಜ್ಞಮೂರ್ತಿಗಳಾದ ಭಟ್ಟರು, ಶಾಸ್ತ್ರಿಗಳು ಮುಂತಾದವರೊಡನೆ ನಿಮಿತ್ತ ಕೇಳಿಸಿ, ಅವರು ಕೊಟ್ಟ ಬೂದಿಯನ್ನು ಹಚ್ಚುತ್ತಾರೆ ಅಥವಾ ತಿನ್ನಿಸುತ್ತಾರೆ. ತರುವಾಯ ತನಗೆ ತಾನೆ ವೈದ್ಯನಾಗಿಬಿಟ್ಟ ಯವನೋ ಒಬ್ಬನಿಂದ ಏನೋ ಔಷಧಿ ಕೊಡಿಸುತ್ತಾರೆ. ಕಡೆಯಲ್ಲಿ ರೋಗಿ ಅಪರಿಹಾರ್ಯವಾದ ದುರವಸ್ಥೆಗಿಳಿದ ಮೇಲೆ ಆಸ್ಪತ್ರೆಗೆ ಓಡುತ್ತಾರೆ. ಡಾಕ್ಟರು ಏನಾದರೂ ಔಷಧಿ ಕೊಟ್ಟರೆ ಅದನ್ನು ಕುಡಿಸುತ್ತಾ, ತಮಗೆ ತಿಳಿದ ಮದ್ದುಗಳನ್ನೂ ತಿನ್ನಿಸುತ್ತಾ, ದೆವ್ವಭೂತಗಳಿಗೆ ಹರಕೆ ಒಪ್ಪಿಸುತ್ತಾ, ಸಾಕಾದಷ್ಟು ಅಪಥ್ಯಮಾಡುತ್ತಾ, ಅದೃಷ್ಟವಶದಿಂದ ರೋಗಿ ಬದುಕಿದರೆ, ಅದನ್ನು ಭಟ್ಟರ ಭಸ್ಮಕ್ಕೂ ದೆವ್ವದ ಕೃಪೆಗೂ ಆರೋಪಿಸಿ, ರೋಗಿ ಸತ್ತರೆ ಅದನ್ನು ಆಸ್ಪತ್ರೆ ಡಾಕ್ಟರ ಔಷಧಿಗೆ ಆರೋಪಿಸಿ, ತಮ್ಮ ಅನುಭವದ ಜ್ಞಾನಭಂಡಾರವನ್ನು ಇತರರಿಗೂ ಹಂಚುತ್ತಾರೆ. ಹೀಗೆ ಅವಿವೇಕ ನಾಚಿಕೆಮುಳ್ಳಿನಂತೆ ಬೆಳೆಯುತ್ತ ಹೋಗುತ್ತದೆ.

ನಾವು ಅಣ್ಣಪ್ಪನ ಗುಡಿಸಲನ್ನು ಸೇರಿದೆವು. ಕಿರುಜಗಲಿಯ ಕೆಸರುಹಲಗೆಯ ಮೇಲೆ ತೊಗಲು ಅಂಟಿದ ಎಲುಬಿನ ಗೂಡಿನಂತೆ ಅಣ್ಣಪ್ಪ ಮುದ್ದೆಯಾಗಿ ಮುದುರಿಕೊಂಡು ಕೂತಿದ್ದ! ಮೈಮೇಲೆ ಬಟ್ಟೆಯಿಲ್ಲ. ಒಂದು ಚಿಂದಿ ಕಂಬಳಿ ಅವನಿಗೆ ಸ್ವಲ್ಪ ದೂರದಲ್ಲಿ ಮುದುರಿಬಿದ್ದಿತ್ತು. ತಲೆಕೂದಲು ಕೆದರಿ ವಿಕಾರವಾಗಿತ್ತು. ನನ್ನನ್ನು ನೋಡಿದ ಕೂಡಲೆ ಕೈ ಮುಗಿದು ಬಿಕ್ಕಿ ಬಿಕ್ಕಿ ಅಳಲು ತೊಡಗಿದ. ಅವನಿಗೆ ಮಾತಾಡಲು ಉಸಿರೇ ಇರಲಿಲ್ಲ. ನೋಟಿ ಭಯಾನಕವಾಗಿತ್ತು. ನನಗೆ ನಮ್ಮ ದೇಶದ ದಾರಿದ್ರ್ಯವೇ ಮೂರ್ತಿಮತ್ತಾಗಿ ನನ್ನೆದುರು ಬಂದಂತಾಯಿತು. ಹೊಟ್ಟೆಯ ಅಳಲನ್ನು ಹಾಗೆಯೆ ತಿಂದುಕೊಂಡು ಕೆಸರುಹಲಗೆಯ ಮೇಲೆ ಕುಳಿತುಕೊಳ್ಳಲು ಹವಣಿಸುತ್ತಿದ್ದೆ. ಅಷ್ಟರಲ್ಲಿ ಅಣ್ಣಪ್ಪ ಪಾತಾಳ ಧ್ವನಿಯಿಂದ “ಅಯ್ಯಾ, ಮೇಲೆ ಕುಳಿತುಕೊಳ್ಳಿ” ಎಂದು ಅಲ್ಲಿದ್ದ ಒಂದು ಮೊರಡಾದ ಕಾಲುಮಣಿಯನ್ನು ತೋರಿಸಿದ. ನಾನು ಅದರ ಮೇಲೆ ಕುಳಿತುಕೊಂಡೆ. ಸ್ವಲ್ಪಹೊತ್ತು ಮಾತಾಡಲು ಬಾಯೇ ಬರಲಿಲ್ಲ.

ಲೋಕರೂಢಿಯ ದೃಷ್ಟಿಯಿಂದ ಎಷ್ಟೇ ಅಲ್ಪವಾದುದಾಗಲಿ ಎಷ್ಟೇ ಮಹತ್ತಾದುದಾಗಲಿ ಪ್ರತಿಯೊಂದು ವಸ್ತುವನ್ನೂ ಪ್ರತಿಯೊಂದು ಸನ್ನಿವೇಶವನ್ನೂ ವಿರಾಟ್ ದೃಷ್ಟಿಯಿಂದ ನೋಡಲೆಳಸುವುದು ನನಗೊಂದು ಹುಚ್ಚು. ಹಾಗೆ ನೋಡಿದರೆ ಅಲ್ಪತ್ವಮಹತ್ವಗಳೆಲ್ಲ ಮಾಯವಾಗಿ ಸಮತ್ವ ಮೂಡುತ್ತದೆ; ಮ್ಮ ಅಹಂಕಾರವೂ ತಗ್ಗಿ, ಅಣುವಿನಿಂದ ಹಿಡಿದು ಆಕಾಶದವರೆಗೂ, ಅಜ್ಞಾತವಾದ ಇರುವೆಯಿಂದ ಜಗದ್ವಿಖ್ಯಾತನಾದ ಮಹಾತ್ಮನವರೆಗೂ ಎಲ್ಲರೂ ಎಲ್ಲವೂ ಮಹಿಮಾಮಯವಾಗಿ, ಅನಿರ್ವಚನೀಯವಾದ, ಅಪಾರವಾದ ವಿಶ್ವವ್ಯೂಹದಲ್ಲಿ ಸರ್ವಸಮತ್ವದ ಮತ್ತು ಸರ್ವಮಹತ್ವದ ಅನುಭವವುಂಟಾಗಿ, ಹೃದಯದಲ್ಲಿ ನಿಶ್ಚಲತೆಯೂ ಆನಂದವೂ ಶಾಂತಿಯೂ ಮೈದೋರುತ್ತವೆ. ಪ್ರತಿಯೊಂದು ವಸ್ತುವಿನ ಪೂರ್ಣ ಪ್ರಯೋಜನ ವ್ಯಕ್ತವಾಗುವುದು ಅಂತಹ ವಿರಾಟ್ ದೃಷ್ಟಿಯಿಂದಲೆ. ಸೃಷ್ಟಿಯೆಲ್ಲವೂ ಒಂದು ಮಹಾಜಾಲದಂತೆ ಎಂದೂ ಪ್ರತಿಯೊಂದು ವಸ್ತುವೂ ಜಡವಾಗಿರಲಿ ಚೇತನವಾಗಿರಲಿ ಪರಸ್ಪರೋಪಜೀವಿಯೆಂದೂ ಅನೇಕ ಶತಮಾನಗಳ ಹಿಂದೆ ಮೃತ್ಯು ಮುಖಿಯಾಗಿದ್ದ ರಾವಣನ ಆರ್ತನಾದ ನಾಳೆ ಸಾಯಲಿರುವ ನೊಣವೊಂದರ ರೋದನಕ್ಕೂ ನಾಳೆ ಅರಳಲಿರುವ ಕುಸುಮವೊಂದರ ಸೌಂದರ್ಯಕ್ಕೂ ಹೇಗೋ ಸಂಬಂಧಪಟ್ಟಿದೆಯೆಂದೂ ನನ್ನ ದೃಢವಾದ ನಂಬುಗೆ. ಆದ್ದರಿಂದ ಬಣ್ಣ ಬಣ್ಣದ ಸಣ್ಣ ಹಕ್ಕಿಯೊಂದು ಯಾರೂ ಕಾಣದಂತೆ ಮಲೆನಾಡಿನ ಕಾಡಿನ ಒಂದು ಮರದಲ್ಲಿ ಕುಳಿತು ಪ್ರಾತಃಕಾಲದ ಸ್ವರ್ಣೋತ್ಸವದಲ್ಲಿ ಇಂಪಾಗಿ ಗಾನಗೈಯುತ್ತಿದ್ದರೆ ನಾನು ಆ ಸನ್ನಿವೇಶವನ್ನು ಸರ್ವಕಾಲ ಸರ್ವದೇಶರಚಿತವಾದ ವಿರಾಟ್ ರಂಗದ ಭಿತ್ತಿಯಲ್ಲಿಟ್ಟು ನೋಡಿ ಕೇಳಿ ನಲಿಯುತ್ತೇನೆ. ಹಾಗೆ ಮಾಡುವುದರಿಂದ ಸನ್ನಿವೇಶದ ಮಹತ್ವ ನೂರ್ಮಡಿಯಾಗುತ್ತದೆ. ಅದು ಜಗತ್ತಿನಲ್ಲಿ ನಡೆಯುವ ಮತ್ತಾವ ಮಹದ್ವ್ಯಾಪಾರಕ್ಕೂ ಕೀಳಾಗುವುದಿಲ್ಲ. ಬ್ರಹ್ಮವ್ಯೂಹದಲ್ಲಿ ಷೇಯ್ಸ್‌ಪಿಯರಿನ ನಾಟಕ ರಚನೆ ಎಷ್ಟು ಮುಖ್ಯವೊ, ಮೊನ್ನೆ ನಡೆದ ಘೋರಯುದ್ಧ ಎಷ್ಟು ಅನಿವಾರ್ಯವೋ, ಅದೂ ಅಷ್ಟೇ ಮುಖ್ಯ. ಅಷ್ಟೇ ಅನಿವಾರ್ಯ ಎಂಬುದು ತನ್ನ ನಂಬುಗೆ. ಭುವನ ಕವಿಯ ಭವ್ಯಸ್ವರಮೇಲದಲ್ಲಿ ರನ್ನ ಒಂದು ಲಲಿತರಾಗವಾದರೆ ಗೂಬೆ ಕೂಡ ಒಂದು ಕೀಚುದನಿ!

ಅಣ್ಣಪ್ಪನ ಗುಡಿಸಲಿನಲ್ಲಿ ಕಾಲುಮಣಿಯ ಮೇಲೆ ಕುಳಿತು ಇಂತಹ ಸ್ವಪ್ನ ಸಮುದ್ರದಲ್ಲಿ ತೇಲತೊಡಗಿದನು. ಆ ಬಡವನ ರೋಗದ ವಿಷಮಾವಸ್ಥೆ ಭರತ ಖಂಡದ ಸ್ವಾತಂತ್ರ್ಯ ಸಂಗ್ರಾಮದಂತೆಯೆ ಮುಖ್ಯವಾಗಿ ಕಂಡಿತು. ಹೊರಗೆ ನೋಡಿದ. ಮಲೆನಾಡಿನ ಹೆಬ್ಬನ ಹೆಬ್ಬೆಟ್ಟಗಳು ಸಾಲುಸಾಲಾಗಿ ಅನಂತವಾಗಿ ಹಬ್ಬಿದ್ದುವು. ಆ ಪರ್ಣಸಮುದ್ರದ ತರಂಗಗಳ ಮೇಲೆ ನಡುಹಗಲಿನ ಉರಿಬಿಸಿಲು ಪಸರಿಸಿತ್ತು. ಮೇಲೆ, ಅನಂತವಾಗಿದ್ದರೂ ಸಾಂತವಾಗಿ ಕಾಣುತ್ತಿದ್ದ ನೀಲಾಕಾಶದಲ್ಲಿ ಅನೇಕ ಕೋಟಿ ಮೈಲಿಗಳ ದೂರದಲ್ಲಿ ಸೂರ್ಯ ಹೊಳೆಯುತ್ತಿದ್ದನು. ಗುಡಿಸಲಿನ ಕೊಳಕಾದ ಅಂಗಳದಲ್ಲಿ ತಿಪ್ಪೆಯ ಮೇಲೆ ಹೇಂಟೆಯೊಂದು ಮಣ್ಣನ್ನು ಕೆದರಿ ಕೆದರಿ ತನ್ನ ಹೂಮರಿಗಳಿಗೆ ತಿಂಡಿ ತಿನ್ನಿಸುತ್ತಿತ್ತು: ಹುಳು ಹಪ್ಪಣೆಗಳನ್ನು! ತನ್ನ ಯಜಮಾನನ ರೋಗದ ವಿಚಾರ ಅದಕ್ಕೆ ಗೊತ್ತಾದಂತೆ ತೋರಲಿಲ್ಲ! ಕಂತ್ರಿನಾಯಿಯೊಂದು ಅಲ್ಲಿಯೇ ಪಕ್ಕದಲ್ಲಿ ಮಲಗಿ ಮೈಮೇಲೆ ಕುಳಿತು ಪೀಡಿಸುವ ನೊಣಗಳನ್ನು ಬಾಯಿಹಾಕಿ ಅಟ್ಟಿಕೊಳ್ಳುತ್ತಿತ್ತು. ಎದುರುಗಡೆ ಗದ್ದೆಯ ಬಯಲಿನಲ್ಲಿ ಕೆಲವು ಕಾಲ್ನಡೆಗಳು ಮೇಯುತ್ತಿದ್ದುವು. ಕಾಲದ ಆಳದಲ್ಲಿ ಮುಳುಗಿ ದೇಶದ ವಿಸ್ತಾರದಲ್ಲಿ ಸಂಚರಿಸಿದೆ. ಪುನಃ ವಿರಾಟ್ ರಂಗದ ಭಿತ್ತಿಯಲ್ಲಿ ಅಣ್ಣಪ್ಪನ ರೇಷ್ಟೆ ಕಾಯಿಲೆಯನ್ನು ಚಿತ್ರಿಸಿದೆ – ಸಿಂಧುವಿನಲ್ಲಿ ಒಂದು ಬಿಂದು! ಈ ವಿಚಿತ್ರಸೃಷ್ಟಿಯ ಉದ್ದೇಶ, ಸುಖದುಃಖಗಳ ಅರ್ಥ, ಆ ಬಡವನೂ ಲೋಕರೂಢಿಯ ದೃಷ್ಟಿಗೆ ಅಲ್ಪನೂ ಆದ ಅಣ್ಣಪ್ಪನ ಜನ್ಮ ಜೀವಿತಗಳ ಉದ್ದೇಶ, ಅರ್ಥ: – ಏನೇನೋ ನೂರು, ಸಾವಿರ, ಲಕ್ಷ, ಕೋಟಿ ಭಾವನೆಗಳು ‘ದರ್ಶನ’ದಲ್ಲಿ ಮಿಂಚಿದುವು. ನನಗೊಂದೂ ಬಗೆಹರಿಯಲಿಲ್ಲ. ನಮ್ರನಾದೆ; ದೀನನಾದೆ; ನಿಟ್ಟುಸಿರುಬಿಟ್ಟು ಮುಂದಿನ ಕರ್ತವ್ಯಕ್ಕೆ ಸಿದ್ಧನಾದೆ.

ಬತ್ತಲೆ ಕೂತಿದ್ದ ಅಣ್ಣಪ್ಪ! ಅವನು ಕೂತಿದ್ದ ಎಂಬುದನ್ನು ಕೇಳಿ ನೀವು ಕಾಯಿಲೆ ಅಷ್ಟೇನೂ ಜೋರಾಗಿರಲಿಲ್ಲ ಎಂದು ತಿಳಿದುಬಿಟ್ಟೀರಿ. ಆಸ್ಪತ್ರೆಯಲ್ಲಾದರೆ ಅಂತಹ ರೋಗಿಯನ್ನು ಸ್ವಲ್ಪ ಅಲುಗಾಡಲೂ ಕೂಡ ಬಿಡರು. ಅವನನ್ನು ನೋಡಿದರೆ ಶ್ಮಶಾನಕ್ಕೆ ತಾನೇ ಹೊರಡಲು ಸಿದ್ಧನಾಗಿ ಕುಳಿತಂತೆ ತೋರುತ್ತಿತ್ತು. ನಾನು ಮಾಯನ ಕಡೆ ತಿರುಗಿ “ಇದೇನೋ ಇದು? ಅವನಿಗೆ ಮಲಗಲು ಹಾಸಿಗೆ ಇಲ್ಲವೇನೋ?” ಎಂದೆ. ಮಾಯ “ಹಾಸಿಗೆ ಬೇಡ ಎಂದ. ಬಹಳ ಉರಿಯಂತೆ” ಎಂದು ಅಲ್ಲಿ ಬಿದ್ದಿದ್ದ ಚಿಂದಿಕಂಬಳಿಯನ್ನೇ ಹಾಸಿದನು. ನಾನು ಅಣ್ಣಪ್ಪನಿಗೆ ಮಲಗಲು ಹೇಳಿದೆ. ಅವನು ಪುನಃ ಅದೇ ಪ್ರೇತವಾಣಿಯೋ ಎಂಬಂತಿರುವ ಪಾತಾಳಸ್ವರದಿಂದ “ಅಯ್ಯಾ, ನಾನು ಸಾಯುತ್ತೇನೆ. ನನ್ನ ಸಾಲಕ್ಕೆ ನನ್ನ ಮನೆಯ ದನ ಕರು ಪಾತ್ರೆ ಎಲ್ಲದರ ಪಟ್ಟಿಯನ್ನು ತೆಗೆದುಕೊಳ್ಳಿ” ಎಂದನು. ನನಗೆ ಎದೆಯಿರಿದಂತಾಯಿತು. “ಅದೆಲ್ಲಾ ಹಾಗಿರಲಿ! ನೀನು ಮಲಗಿಕೋ ಮೊದಲು” ಎಂದು ಗದರಿ ಹೇಳಿದೆ. ನನ್ನ ಬಲಾತ್ಕಾರಕ್ಕೆ ಮಲಗಿಕೊಂಡ. ಅವನು ಮಲಗಿಕೊಂಡ ರೀತಿಯನ್ನು ನೋಡಿದರೆ, ಮಲಗುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಸಂಪೂರ್ಣವಾಗಿ ಹತಾಶನಾದಂತೆ ತೋರಿತು.

ನಾನು ಅವನ ಕಾಯಿಲೆಯ ಪ್ರಸ್ತಾಪವನ್ನು ತೆಗೆದರೆ ಅವನು ಸಾಲದ ಮಾತನ್ನೇ ತೆಗೆಯುತ್ತಿದ್ದನು. “ಅಯ್ಯಾ, ನನ್ನ ಋಣ ತೀರಿದ್ದನ್ನು ನೋಡಿ ಸುಖವಾಗಿ ಸಾಯುತ್ತೇನೆ. ನನ್ನ ದನ ಕರು ಪಾತ್ರೆ ಎಲ್ಲ ಪಟ್ಟಿಮಾಡಿ” ಎಂಬುದೇ ಅವನ ಪಲ್ಲವಿಯಾಯಿತು. ಗಿ – ಯವರು ಬಹಳವಾಗಿ ಹೇಳಿದರು, ಸಾಲದ ಚಿಂತೆ ಬೇಡ ಎಂದು. ನಾನೂ ಹೇಳಿದೆ “ನೀನು ಸಾಯುವುದಿಲ್ಲ: ಏನೂ ಇಲ್ಲ. ಸುಮ್ಮನೆ ಮಲಗಿಕೋ. ಡಾಕ್ಟರಿಗೆ ನಾನೇ ಕಾಗದ ಬರೆದು ಔಷಧಿ ತರಿಸಿ ಕೊಡುತ್ತೇನೆ” ಎಂದೆ. ನನ್ನ ಮಾತಿನ ಎರಡನೆಯ ಅಂಶವನ್ನು ನಂಬಿದನೇ ಹೊರತು ಮೊದಲನೆಯ ಭಾಗದಲ್ಲಿ ಅವನಿಗೆ ನಂಬುಗೆ ಇದ್ದಂತೆ ತೋರಲಿಲ್ಲ. ಕಡೆಗೆ ಅವನ ಕಾಟವನ್ನು ತಡೆಯಲಾರದೆ ಗಿ – ಯವರಿಗೆ ಹೇಳಿದೆ “ಒಂದು ಪಟ್ಟಿಮಾಡಿ” ಎಂದು. ಅವರೂ ಪಟ್ಟಿಯನ್ನು ಬರೆಯುವಂತೆ ನಟಿಸಿದರು. ನಡು ನಡುವೆ ಅಣ್ಣಪ್ಪ ಮಾತನಾಡಲು ಯತ್ನಿಸಿದನು. ನಾನು ರೇಗಿದಂತೆ ನಟಿಸಿ ಅವನು ಸುಮ್ಮನೆ ಮಲಗುವಂತೆ ಮಾಡಿದೆ. ಒಂದು ಬಟ್ಟೆಯನ್ನೂ ಹೊದಿಸುವಂತೆ ಮಾಡಿದೆ. ಏಕೆಂದರೆ ಅವನಿಗೆ ಬಂದಿದ್ದುದು ನ್ಯೂಮೋನಿಯಾ ಕಾಯಿಲೆ. ಅವನಿಗಿದ್ದ ಕಷ್ಟಸಹಿಷ್ಣುತೆ ಇಲ್ಲದಿದ್ದರೆ ಅವನಾಗಲೆ ಹಣವಾಗಿರಬೇಕಿತ್ತು. ಹಳ್ಳಿಗರಿಗೆ ಕಾಯಿಲೆಗಳಿಗಿರುವ ಜಾತಿ ಭೇದ ತಿಳಿಯದು. ಅವರಿಗೆ ನ್ಯೂಮೋನಿಯಾ ಆಗಲಿ, ಟೈಫಾಯ್ಡ್ ಆಗಲಿ, ಮಲೇರಿಯಾ ಆಗಲಿ, ಏನೇ ಆಗಲಿ, ಎಲ್ಲವೂ ಬರಿಯ ಕಾಯಿಲೆ. ನ್ಯೂಮೋನಿಯಾವನ್ನು ರೇಷ್ಮೆ ಕಾಯಿಲೆ ಎಂದು ಅವರಲ್ಲಿ ತಿಳಿದವರು ಕರೆಯುತ್ತಾರೆ. ಬಹುಶಃ “ಶ್ಲೇಷ್ಠಜ್ವರ” “ರೇಷ್ಮೆ ಕಾಯಿಲೆ” ಆಗಿರಬೇಕೆಂದು ತೋರುತ್ತದೆ.

ಪಟ್ಟಿಬರೆಯುವ ನಾಟಕವನ್ನು ಪೂರೈಸಿ ಅವನಿಗೆ ಧೈರ್ಯ ಹೇಳಿ, ಬುದ್ಧಿ ಹೇಳಿದೆವು. ಅವನು ಏಳದಂತೆ ನೋಡಿಕೊಳ್ಳಬೇಕೆಂದು ಮಾಯನಿಗೆ ಹೇಳಿದೆವು. ಕಡೆಗೆ ಡಾಕ್ಟರಿಗೊಂದು ವಿಶದವಾದ ಕಾಗದ ಬರೆದು ಒಬ್ಬ ಆಳನ್ನು ಔಷಧಿಗೆಂದು ಕಳುಹಿಸಿದೆವು. ಸಾಯಂಕಾಲ ಪುನಃ ಬಂದು ನೋಡುತ್ತೇವೆ ಎಂದು ಹೇಳಿ ಹೊರಟೆವು. ದಾರಿಯಲ್ಲಿ ಬರುತ್ತಾ ಅಣ್ಣಪ್ಪನಿಗಾಗಿ ಮನಸ್ಸಿನಲ್ಲಿಯೆ ನಮ್ರನಾಗಿ ಭಗವಂತನನ್ನು ಪ್ರಾರ್ಥಿಸಿದೆ. ಮನೆಗೆ ಬಂದ ಮೇಲೆ ರೋಗಿಯ ಪಥ್ಯಕ್ಕಾಗಿ ಕೆಲವು ಪದಾರ್ಥಗಳನ್ನು ಕಳುಹಿಸಿದೆವು.

ಸಾಯಂಕಾಲ ರೋಗಿಯನ್ನು ನೋಡಲು ಹೋದೆವು!

   ಮುಂದಿನ ಭಾಗ : http://kannadadeevige.blogspot.com/p/blog-page_87.html   ಮಲೆನಾಡಿನ ಗೋಪಾಲಕರು


**********

1 ಕಾಮೆಂಟ್‌: