ನನ್ನ ಪುಟಗಳು

ಶ್ರೀರಾಮಾಯಣ ದ‍ರ್ಶನಂ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶ್ರೀರಾಮಾಯಣ ದ‍ರ್ಶನಂ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

23 ಜುಲೈ 2018

ಶ್ರೀರಾಮಾಯಣ ದರ್ಶನಂ : ಅಯೋಧ್ಯಾ ಸಂಪುಟಂ : ಸಂಚಿಕೆ 2 - ಶಿಲಾತಪಸ್ವಿನಿ

ಸಂಚಿಕೆ ೨ – ಶಿಲಾತಪಸ್ವಿನಿ
ಮೆಯ್‌ಸಿರಿಗೆ ಷೋಡಶ ವಸಂತ ವೀಚಿಯನೊತ್ತಿ
ಪ್ರವಹಿಸಿತು ಕಾಲನದಿ ರಾಮ ಲಕ್ಷ್ಮಣ ಭರತ
ಶತ್ರುಘ್ನ ಜೀವನದಿ. ಜೌವನ ರಸದ ಬಿಣ್ಪುಮಂ
ಬಿಜ್ಜೆಯಾಳದ ಗುಣ್ಪುಮಂ ಮೆರೆವ ವಿಗ್ರಹಂ
ಶೋಭಿಸಿದುದೋಜಸ್ವಿಗಳ್ಗೆ. ದಶರಥನೃಪಂ
ಮಕ್ಕಳ್ಗೆ ಮದುವೆಯಂ ನೆನೆದನಾಸಾರಮಂ
ನೆನೆವಂತುಟೊಕ್ಕಲಿಗನುತ್ತು ಬಿತ್ತಂ ಬಿತ್ತಿ
ಹರಗಿ. ವನಘನರಾಶಿಯಾಶಾ ದಿಗಂತದೊಳ್
ವರ್ಷದಾಶೀರ್ವಾದ ಮುದ್ರೆಯಿಂದೇರ್ದುದೆನೆ
ಬಂದನೋಲಗಕೆ ವಿಶ್ವಾಮಿತ್ರ ಮುನಿವರಂ,    ೧೦
ಚಂಡತೇಜಸ್ವಿ. ದೊರೆ ಕುಲಪುರೋಹಿತರಿಂದೆ
ಋಷಿಗರ್ಘ್ಯಮಂ ಕೊಡಿಸಿ, ಪಾಳಿಯಿಂದಡಿತಡಿಗೆ
ಮಣಿಯೆ, ಕುಶಿಕೋದ್ಭವಂ : “ನೃಪಾಲಶಾರ್ದೂಲ, ಕೇಳ್,
ಸಿದ್ಧ್ಯರ್ಥಮಾನೊಂದು ಜನ್ನಮಂ ಕೈಕೊಂಡು
ತೊಡಗಿಹೆನ್. ಅದಂ ಮಾಂಸರುಧಿರೌಫದಿಂ ಕಿಡಿಸಿ
ಕಾಡುವರ್ ತಾಟಕಿಯ ಮಕ್ಕಳ್ ಸುಬಾಹುವುಂ
ಮಾರೀಚನುಂ. ಕಳುಹು ರಕ್ಷೆಗೆನ್ನೊಡನೆ ನಿನ್ನಾ
ಜ್ಯೇಷ್ಠನಂ, ಕಾಕಪಕ್ಷಧರ ಕಲಿ ರಾಮನಂ,
ಶ್ರೇಷ್ಠನಂ. ಕರಿಯ ಕೊಲ್ಲುವ ಹರಿಗೆ ಮರಿಯೆಂಬ
ಶಂಕೆ ತಾನೇಕೆ? ಕಾಕುತ್ಸ್ಥ, ಯಮಪಾಶದಿಂ    ೨೦
ಪಾಪಕರ್ಮಂ ಮೊದಲೆ ಬಿಗಿದ ಪಿಶಿತಾಶರಂ
ತೇಜಸ್ವಿ ರಾಮನಾತನ ಮಹಾ ಶಕ್ತಿಯಿಂ
ಮೇಣೆನ್ನ ಗುಪ್ತ ದೈವಿಕಬಲದ ಮಹಿಮೆಯಿಂ
ಸಂಹರಿಸಿ, ಧರ್ಮಲಾಭಕೆ ಯಶೋದೀಪ್ತಿಯಂ
ಮೆರೆವನಯ್. ವರಮೆಂದು ನಂಬು ಮದ್ವಚನಮಂ.
ಪಡೆವೆ ಚಿರಕೀರ್ತಿಯಂ. ಗುರು ವಸಿಷ್ಠಾದ್ಯರಂ
ಬೆಸಗೊಂಡು ತಿಳಿ. ಪೊತ್ತು ತಾಂ ಪತ್ತು ಸೂಳಂ ಕಳಿದ
ಮರುವಗಲೆ ಆ ನಿನ್ನ ರಾಜೀವಲೋಚನಂ
ಪಿಂತಿರುಗಿ ಬರ್ಪನಯ್, ಬಹುಳ ಕಲ್ಯಾಣದಿಂ,
ಸಾಕೇತ ಜನಮನ ವನಧಿ ಪೆರ್ಚುವೋಲಂತೆ.”           ೩೦
ಹಣ್ಣೆಗೆಳಸಿದ ಕಣ್ಗೆ ಹುಳಿ ಸಿಡಿದವೋಲಾಯ್ತು;
ಜೇನಿಗೆಳಸಿದ ಜಿಹ್ವೆ ಕಹಿ ನೆಕ್ಕಿದಂತಾಯ್ತು;
ಸವಿಗೊರಲನಾಕರ್ಣಿಸಲ್ ಕಿವಿಯನಿತ್ತವಗೆ
ಕಾಯಿಸಿದ ಕಬ್ಬಿಣವ ಕರಗಿ ಹೊಯ್ದಂತಾದುದಯ್
ದಶರಥಗೆ, ಕುಶಿಕತನಯನ ಪೇಳ್ದ ಕೂರ್ನುಡಿಗೆ.
“ಕೃಪೆದೋರ್, ಮಹಾಮುನಿಯೆ ! ಮೊಗ್ಗಿನಿಂದಿರಿಯುವರೆ
ಕಗ್ಗಲ್ಲ ಬಂಡೆಯಂ? ಕದಳಿಯೆಳಕಂದಿನಿಂ
ಸಿಡಿಲು ತಡೆಯಲಹುದೆ? ಮುದ್ದಿನ ಕುಮಾರನಿಂ,
ಯುದ್ಧಾನುಭವವಿಲ್ಲದಿಹ ಮುಗ್ಧ ರಾಮನಿಂ,
ಕ್ರೂರಿಗಳ್ ಕೋಪಿಗಳ್ ವಜ್ರ ದೃಢದೇಹಿಗಳ್  ೪೦
ರಣವಿದಗ್ಧರನೆಂತು ಗೆಲಲಹುದೊ? ಮನ್ನಿಸೆನ್ನಂ.
ತಿಳಿಯದೆಳಪಸುಳೆ ತಾಂ ಕೊಲೆಯಹುದು ನಿರ್ನೆರಂ.
ಶಿಶುವೇಕೆ? ನಾನೆ ಬಹೆನತಿ ಬಲ ಸಮನ್ವಿತಂ,
ನಿರ್ವಿಘ್ನಮೆಸಗೆ. ಪೇಳ್, ಮುನಿಮಹೇಶ್ವರನೆ, ಆ
ದಾನವರದಾರ್? ಪೆಸರೇನ್? ಬಲಮೆನಿತ್ತವರ್ಗೆ?”
“ಲಂಕಾ ಕನಕಲಕ್ಷ್ಮಿಯನ್ನಾಳ್ವ ವಿಷ್ಣುವೆನೆ
ಕಲಿ, ಬಲಿಷ್ಠಂ, ಮಹಾ ದೈತ್ಯನಿರ್ದಪನಲ್ಲಿ
ದೂರ ತೆಂಕಲಲಿ, ನರ ಸುರ ಕಿನ್ನರರ್ಗೆಲ್ಲರ್ಗೆ
ಕಿವಿ ಭಯಂಕರದ ರಾವಣನೆಂಬ ಪೆಸರಿಂದೆ.
ಪೌಲಸ್ತ್ಯವಂಶಜಂ; ದ್ರಾವಿಡ ತಪಸ್ಸಿನಿಂ         ೫೦
ಮೃಡನಿಂ ಬರಂಗಳಂ ಪಡೆದನೆಂಬರ್ ಕಣಾ!
ದಿಗ್ಗಜ ದಶಂಗಳದಟಿರ್ಪುದಾತಂಗೆ, ಮೇಣ್
ದಶಶಿರಂ ತಾನೆಂಬರಯ್. ನಂಟರಾ ದೈತ್ಯಂಗೆ
ಮಾರೀಚ ಮೊದಲಪ್ಪ ಖಲ ನಿಶಾಚರರನಿಬರಂ;
ಸರ್ಪವೈರಿಗಳಾರ್ಯರಪ್ಪೆಮಗೆ.” ಋಷಿ ನುಡಿದು
ಮುಗಿವ ಮುನ್ನಮೆಯೆ ವಸುಧಾಧಿಪಂ : “ಶಿವ ಶಿವಾ,
ಸಾಲ್ಗುಮಾ ಕಥೆ, ಗುರುವೆ; ಬಲ್ಲೆನಾನೆಲ್ಲಮಂ
ಕೇಳ್ದು. ಕೀನಾಶನಣಲೊಳಗೆ ಕೈ ದುಮ್ಮಿಕ್ಕಿ
ಕೋರೆಯಂ ಕೀಳ್ವಾ ಪರಾಕ್ರಮಿಯಿದಿರ್ ನಾನೆ
ನಿಲಲಾರೆನೈ. ಮುದ್ದು ಮಗುವಂತಿರಲಿ. ಸುದ್ದಿ ೬೦
ಪರ್ವಿದೊಡೆ ರಾವಣನ, ಯಕ್ಷಕಿನ್ನರ ದೇವ
ಗಂಧರ್ವರೆರ್ದೆಗಳುಂ ತಳ್ಳಂಕಗೊಳ್ಳುವುವೊ
ಬೆರ್ಚ್ಚಿ. ಶಿಶು ರಾಮನೇಗೈವನೈ, ಧರ್ಮಜ್ಞ, ಪೇಳ್.
ಸುಂದೋಪಸುಂದರೆಂಬರ್ಗೆ ಮಾರೀಚಾದಿ
ಸೋದರರ್ ಮಕ್ಕಳ್; ಸಮರ ಯಮರ್ ! ರಾಮನಂ
ಕಳುಹಲಾರೆನೊ ದಿಟಂ; ಕ್ಷಮಿಸೈ, ತಪೋಧನಾ !”
ಮಕ್ಕಳಕ್ಕರೆಯಿಂದೆ ತೊದಲುತೊದಲಕ್ಕರಂ
ನುಡಿದು ಕೈಮುಗಿದು ಕಂಬನಿಗರೆವನಂ ನೋಡಿ,
ಗುರು ವಸಿಷ್ಠಂ : “ಇಕ್ಷ್ವಾಕು ಕುಲಧರ್ಮಮೂರ್ತಿ,
ಋಷಿಕೃಪಾಶೀರ್ವಾದಮಿದು ಕಣಾ ! ರಾಮನಂ           ೭೦
ಕಳುಹು ನಿಶ್ಶಂಕೆಯಿಂ. ಭಾಳನೇತ್ರಂಗೆ ತಾಂ
ಸದೃಶನೀ ಕೌಶಿಕಂ. ಕಂದನೀತನ ರಕ್ಷೆಯೊಳ್,
ಪ್ರಳಯಾಗ್ನಿ ಚಕ್ರಕೇಂದ್ರದೊಳಿರ್ಪ ಸುಧೆಯವೊಲ್,
ನಿತ್ಯಂ ಸುರಕ್ಷಿತಂ. ಸಕಲ ಮಂತ್ರಾಸ್ತ್ರವಿದನೀ
ರಣಕಲಾ ಪಂಡತಂ ತಾನೆ ಗುರುವಹನೆನಲ್
ಧನ್ಯನೈಸಲೆ ರಾಮಚಂದ್ರಂ ! ತಪೋಬಲಂ
ಕುಶಿಕಾತ್ಮಜಂಗೆ ನಿಗ್ರಹಕಿರ್ಪೊಡಂ, ನಿನ್ನ
ತನುಜಾತರಭ್ಯುದಯಕಾಗಿ ಬಂದಿಹನಿಂದು ಕೇಳ್
ಸಾಕೇತಪುರಿಗೆ, ನೆರಮಂ ಬೇಳ್ಪ ಬೇಳಂಬದಿಂ”.
ಆಪ್ತವಾಕ್ಯಂಗೇಳ್ದು ಸಂತೃಪ್ತನಾಗಿ, ದೊರೆ       ೮೦
ಬರಿಸಿದನು, ದೂತರಂ ಕಳುಹಿ, ಲಕ್ಷ್ಮಣಸಹಿತನಾ
ರಾಮನಂ ಪರಸುತಿರೆ ಗುರುಹಿರಿಯರೆಲ್ಲರುಂ
ಶಿರವನಾಘ್ರಾಣಿಸುತೆ, ಪೂವೆರಚಿ, ಹಿತವೇಳ್ದು,
ಶಂಖದುಂದುಭಿ ರವದ ಮಂಗಳಂ ಮೊಳಗುತಿರೆ,
ವಪು ಚಾರು ಧನ್ವಿಗಳನಾ ಪುತ್ರಯುಗ್ಮಮಂ
ಬೀಳ್ಕೊಟ್ಟನೈ ನ್ಮಪತಿ ಯತಿಯೊಡನೆ. ಮುದದಿಂದೆ
ನಡೆ ನಡೆದು ಮುಂಬರಿದು ಆ ಮೂವರೊಂದುವರೆ
ಯೋಜನವನುತ್ತರಿಸಿ, ಸೇರೆ ಸರಯೂ ನದಿಯ
ದಕ್ಷಿಣ ತಟವನಲ್ಲಿ, ಸವಿಗೊರಳ ನೇಹದಿಂ
ನೀಡಿದನು ಕುಶಿಕತನಯಂ ರಾಮಚಂದ್ರಂಗೆ,  ೯೦
ಮಂಗಳಸ್ನಾತಂಗೆ, ಮಂತ್ರ ಸದ್ವಿದ್ಯೆಯಂ.
ರಘುಜರ್ ನದೀತಟದ ತೃಣಶಯ್ಯೆಯೊಳ್ ಮಲಗಿ
ಜಲದ ಜೋಗುಳವೆರಸಿ ರಿಸಿನುಡಿಯನಾಲಿಸುತೆ
ನಕ್ಷತ್ರಮಯ ವಿಪುಲಗಗನದ ವಿಭಾವರಿಯ
ಕಳೆದರಯ್, ಸುಸ್ವಪ್ನಮಯ ಸುಖದ ನಿದ್ರೆಯಲಿ.
ಪ್ರಾಚೀ ದಿಗಂಗನೆಯ ಕಣ್ದೆರಹಿನೊಳ್ಬೆಳಗೊ,
ಕನಕ ಮೇರುವನೇರಿಬಹ ತೇರನೆಳೆಯುತಿಹ
ತಪನ ಹಯ ಖುರಪಟುದಿನೆದ್ದ ಹೊಂದೂಳಿಯೋ,
ಕತ್ತಲೆಯನಟ್ಟಿ ಬರ್ಪಿನನ ನಾರಾಚದಿಂ
ಗಾಯಗೊಂಡಿರ್ಪಿರುಳ್ ಕಾರ್ದ ನೆತ್ತರ್ ಸೋರ್ವ        ೧೦೦
ಸೋನೆ ತುಂತುರ್ ಮಳೆಯೊ ಪೇಳೆನಲ್, ಮರುದಿನಂ
ಬೆಳಗಾದುದಿಂದ್ರ ದಿಕ್ತಟದಿ. ತುಂಬಿತ್ತೊಡನೆ
ವನದೇಶಮಂ ಲಕ್ಷಪಕ್ಷಿಯುಲಿ. ರಾಜಿಸಿತು
ಸರಯೂ ನದಿಯ ವಕ್ಷಮೋಕುಳಿಯ ಕಾಂತಿಯಿಂ
ತಳಿಸಿ. ಋಷಿಯೊಡನೆ ಮಿಂದರು ರಾಮಲಕ್ಷ್ಮಣರ್,
ಶೀತ ಸುಂದರ ಸುಖದ ಸಲಿಲದಲಿ ! ಕುವರರಿಗೆ
ತಮ್ಮರಮನೆಯ ಸಿರಿಯೆ ಬಡತನಂ ತಾನಾಯ್ತಲಾ
ಕಾಡಿನ ಸೊಗದ ಸರಿಸದಲಿ ! ಬಂಡೆಯಿಂ ದುಮುಕಿ
ನೀರ್ಗೆ, ಮೇಣೊಬ್ಬರೊಬ್ಬರ ಮೊಗಕೆ ನೀರೆರಚಿ,
ನಲಿದಾಡಿದರ್ ಸ್ಪರ್ಧೆಯಿಂದೀಸಿ. “ಗುರುದೇವ,          ೧೧೦
ನಿಮ್ಮ ಕರುಣೆಯಿನೆಮಗೆ ಲಭಿಸಿತೀ ವನಸುಖಂ.
ದಾರಿದ್ರ್ಯಮಲ್ತೆ ಆ ನಾಗರಿಕ ಜೀವನಂ
ಈ ವನ್ಯ ಸಂಸ್ಕೃತಿಯ ಮುಂದೆ?” ಎಂದ ರಾಮನಂ
ಕುರಿತಾ ಮಹರ್ಷಿ ಮಂತ್ರಿಸಿದನಿಂತು :
“ದಿಟವೊರೆದೆ,
ಹೇ ವತ್ಸ, ಗಿರಿವನಪ್ರೀತಿ ತಾಂ ದೈವಕೃಪೆ ದಲ್.
ಜಗದೀಶ್ವರನ ಮಹಿಮೆ ಸಂವೇದ್ಯವಹುದಿಲ್ಲಿ
ಭವ್ಯ ಸೌಂದರ್ಯ ಶೀಲದ ವನ್ಯ ಶಾಂತಿಯಲಿ.
ಉಪನಿಷತ್ತಿನ ಮಹಾ ಮಂತ್ರಾನುಭವಗಳುಂ
ಹೃದ್ಗಮ್ಯವಿಲ್ಲಿ. ಚಿತ್ತಕೆ ಸಮಾಧಿಯನಿತ್ತು
ಹರಿದಂತ ವಿಶ್ರಾಂತ ಹರಿತ ಕಾನನಮಯಂ ತಾಂ       ೧೨೦
ಪರ್ವತಶ್ರೇಣಿ ಪರ್ವಿದೆ ನೋಡು ಶಿವನಂತೆವೋಲ್,
ಧ್ಯಾನ ಮಾಳ್ಪಗೆ ಹೃಷ್ಟರೋಮತೆಯನಿತ್ತು. ಅದೊ,
ಬಣ್ಣದ ಮುಗಿಲ್ ಗಗನ ಪಟದಲ್ಲಿ ತೇಲುತಿದೆ
ದೇವರೆ ಪೆಸರ್ ಬರೆದ ಮುದ್ರೆಯೋಲ್. ಕರೆಯುತಿದೆ ಕಾಣ್
ನಮ್ಮಾತ್ಮಮಂ ಕಲೋಪಾಸನೆಗೆ. ರಘುಜ ಕೇಳ್,
ಸೃಷ್ಟಿ ಸೌಂದರ್ಯದೊಲ್ಮೆಯೆ ಸೃಷ್ಟಿಕರ್ತಂಗೆ
ಪೂಜೆಯಯ್. ರಸಜೀವನಕೆ ಮಿಗಿಲ್ ತಪಮಿಹುದೆ?
ರಸಸಿದ್ಧಿಗಿಂ ಮಿಗಿಲೆ ಸಿದ್ಧಿ ? ಪೊಣ್ಮೆದೆ ಸೃಷ್ಟಿ
ರಸದಿಂದೆ; ಬಾಳುತಿದೆ ರಸದಲ್ಲಿ; ರಸದೆಡೆಗೆ ತಾಂ
ಪರಿಯುತಿದೆ; ಪೊಂದುವುದು ರಸದೊಳೈಕ್ಯತೆವೆತ್ತು     ೧೩೦
ತುದಿಗೆ. ರಸಸಾಧನಂಗೆಯ್ಯದಿರುವುದೆ ಮೃತ್ಯು.
ಆನಂದರೂಪಮಮೃತಂ ರಸಂ!”
ಋಷಿಮಂತ್ರಮಂ
ಕೇಳ್ದು ಬಾಲಕರಾತ್ಮ ಭಾವನೋಜ್ವಲರಾಗಿ
ರವಿಗರ್ಘ್ಯಮೆತ್ತಿದರ್, ಗಾಯತ್ರಿ ಘೋಷದಿಂ
ಜೇಂಕರಿಸಲಡವಿ.
ಅಲ್ಲಿಂದೆ ಮೇಣ್ ಮುಂಬರಿದು
ಕಾಮಾಶ್ರಮಂಬೊಕ್ಕು ಋಷಿಗಳಾತಿಥ್ಯಮಂ
ಕೈಕೊಂಡು, ಮುನಿಯಿಂದೆ ಕಮನೀಯ ಕಥೆಗಳಂ
ಕೇಳುತಿರುಳಂ ಕಳೆದು, ಮುಂಬೆಳಗಿನೊಳಗೆಳ್ದು
ನಡೆದು ಗಂಗಾತೀರಮಂ ಸೇರ್ದು, ದೋಣಿಯಿಂ
ದಾಂಟಿ, ಪೊಕ್ಕರ್ ಮಹಾ ಭೀಷಣ ಭಯಂಕರದ          ೧೪೦
ನಿಬಿಡ ಘೋರಾರಣ್ಯಮಂ. ಹಳುವ ಹೊಕ್ಕೊಡನೆ
ತರುಣನೆದೆ ನಡುಗಿ ವಿಶ್ವಾಮಿತ್ರನಂ ಕುರಿತು
ಲಕ್ಷ್ಮಣಂ : “ಮೌನಶಿಲೆಯಂ ಧ್ವನಿಕ್ರಕಚದಿಂ
ಗರ್ಗರಿಸಿ ಕೊಯ್ವಂತೆವೋಲ್, ಗುರುವೆ, ಚೀರುತಿವೆ
ಜೀರುಂಡೆಗಳ್, ಕರ್ಣಕರ್ಕಶಂ. ಶಕುನಿಗಳ್
ಕೂಡೆ ಕೂಗುತಿವೆ ದುಶ್ಶಕುನಮಂ, ಕಾಡಿನೀ
ಕಳ್ತಲೆಯೊ ಕಾನನ ನಿಶಾಚರಿಯ ಕರ್ಮೊಗದ
ಪುರ್ಬುಗಂಟೆಂಬಂತೆವೋಲ್ ನೀರವಕ್ರೌರ್ಯದಿಂ
ನಿಟ್ಟಿಸಿದೆ, ನೋಳ್ಪರನಣಕಿಪಂತೆ. ಗುರುವೆ, ಪೇಳ್,
ಕಾಡಾವುದಿದಕೆ ಪೆಸರೇನ್ ?”
“ತಾಟಕಾ ವನಂ  ೧೫೦
ತಾನಿದು ಕಣಾ! ಋಷಿಯ ಶಾಪದಿಂ ಸುಂದಸತಿ,  ಆ
ಮಾರೀಚನಬ್ಬೆ, ಜಕ್ಕಿಣಿಯಾಗಿ ಪುಟ್ಟಿ ಈ
ಪೆರ್ಬನವನಂಡಲೆಯುತಿಹಳು ತಾಟಕೆಯೆಂಬ
ಘೋರ ರಾಕ್ಷಸ ರೂಪದಿಂ.”
ತೆಕ್ಕನೆಯೆ ಕೇಳ್ದುದಯ್
ಚೀತ್ಕಾರವೊಂದು, ಗಿರಿಯಟವಿ ಚೀತ್ಕರಿಸಿದಂತೆ.
“ಅವಳೆ ತಾಟಕೆ ! ಬರ್ಪಳದೊ ! ಹೆದೆಗೆ ಬಾಣಮಂ
ಪೂಡಿ ನಿಲ್ಲಿಂ !” ಗುರುವಿನಾಣತಿಗೆ ಬಾಲಕರ್
ಬತ್ತಳಿಕೆಯಿಂ ತುಡುಕಿ ನಾರಾಚಮಂ, ಪೂಡಿ
ಸಿಂಜಿನಿಗೆ, ಸೆಳೆದು ನಿಂದರ್ ಜವಳಿಗಣ್ಗಳೋಲ್.
ಭೂಕಂಪ ಕಾಲದೊಳ್ ಶಿಖರದೌನ್ನತ್ಯದಿಂ     ೧೬೦
ಕಣಿವೆ ಕಿಬ್ಬಿಗುರುಳ್ದು ಬೀಳ್ವ ಪೆರ್ಬಂಡೆ ತಾಂ
ತಳ್ಪಲ್ಗಿಡುಮರಂಗಳಂ ನುರ್ಚ್ಚುನುರಿಗೆಯ್ದು
ನುರ್ಗಿ ಬರ್ಪಂತೆವೋಲ್ ಬಂದಳ್ ಮಹಾಘೋಷದಿಂ
ಕಿಡಿಯಿಡುವ ರೋಷದಿಂ ಕೋರೆದಾಡೆಗಳಸುರಿ,
ತಾಟಕೆ, ಕರಾಳೆ! ಮುಡಿಗೆದರಿದಳ್ ಮುಂಗಾರೆನಲ್.
ಕೊರಳೆತ್ತಿ ಮೊಳಗಿದಳ್. ಕಣ್‌ಸುಳಿಸಿ ಮಿಂಚಿದಳ್.
ಬೀಸಿದಳ್ ದೆಸೆದೆಸೆಗೆ ಬಿರುಗಾಳಿಯಂತೆವೋಲ್.
ದಿಕ್ತಟಂಗಿಡುವಂತೆ ಧೂಳಿಯಂ ಮುಸುಗಿದಳ್.
ಆಲಿಕಲ್ ಮಳೆಗರೆದಳಾ ಮಾಯಾಮಯೀ ಕೂಟ
ಯುದ್ಧಪ್ರವೀಣೆ. ಲಕ್ಷ್ಮಣ ರಾಮರಸ್ತ್ರಾಳಿಗಳ್    ೧೭೦
ತೂರುತಿರೆ ದೆಸೆದೆಸೆಗೆ, ರಾಕ್ಷಸಿಯ ಪೀನತನು ತಾಂ
ಮಳೆಗರೆದುದಯ್, ಹೊಳೆಹೊಳೆಗಳಾಗಿ ಕೆನ್ನೀರುಗಳ್
ಪರಿಯೆ. ಬಿದ್ದಳ್ ನೆಲಕೆ ಕರ್‌ಮುಗಿಲ್ ಬೀಳ್ವಂತೆ.
ರಾಕ್ಷಸಿಯ ರೂಪವಾನುತೆ ಬಂದ ಬಿರುವಳೆಯೆ
ಹೊಯ್ದು ಹೊಳವಾದಂತೆ, ಹೊರಗೊಳಗೆ ತಿಳಿಯಾಯ್ತು
ರಾಮ ಲಕ್ಷ್ಮಣ ಋಷಿಯರಾತ್ಮಲೋಕತ್ರಯಂ.
ಕಳೆಯುತಾ ರಜನಿಯಂ ತಾಟಕಾವನದೊಳಲ್ಲಿಂ
ಮರುದಿನಂ ಚಲಿಸಿದರ್ ಕೌಶಿಕ ತಪೋವನಕೆ.
ನಿಚ್ಚ ಪಚ್ಚೆಯ ಪಸುರ್‌ಬನದಿಂದೆಸೆವ ಮಲೆಯ
ತೋಳ್ತಳ್ಕೆಯೊಳ್, ನೀಳಿಯಾಗಸವನೆರ್ದೆಯಲ್ಲಿ          ೧೮೦
ರನ್ನಗನ್ನಡಿಯಂತೆ ತೊಟ್ಟ ವನದೇವತಾ
ಹೃದಯ ಲೋಚನಮೆನಲ್ ಮೆರೆವ ವಿಸ್ತಾರದಾ
ಸ್ಫಟಿಕ ನಿರ್ಮಲ ಸರೋವರ ಸುಭಗ ತೀರದಲಿ
ಶೋಭಿಸಿದುದಾ ಮುನಿ ನಿಕೇತನಂ.
ಐತಂದರಂ
ಸಂಕಟ ನಿವಾರಕರನೀಕ್ಷಿಸಿ ತಪೋಧನರ್
ಮನೆಗೆ ಬಿಜಯಂಗೈದ ಮಂಗಳದ್ವಯಗಳಂ
ಮುದ್ದಿಸಿದರುಪಚರಿಸಿದರ್ ದಶರಥ ಕುಮಾರರಂ.
ಮರುವಗಲ್ ತೊಡಗಿದನ್ ಕುಶಿಕತನಯಂ ಯಜ್ಞಮಂ.
ದುಪ್ಷಶಿಕ್ಷಣ ದೀಕ್ಷಿತರ ರಾಮಲಕ್ಷ್ಮಣರ
ಕೋದಂಡ ಠಂಕಾರ ಮಂತ್ರ ಚಿಚ್ಛಕ್ತಿಯ          ೧೯೦
ಶರಾಘಾತಕಳಿದನ್ ಸುಬಾಹು. ಮಾರೀಚನುಂ
ಏರ್ವಡೆದು, ದೇಹಮುರುಳಲ್ ಪ್ರಾಣಮೋಡುವೊಲ್
ಕೆಟ್ಟೋಡಿದನ್. ಋಷಿಯಭೀಷ್ಟಂ ಸಿದ್ಧಿಯಪ್ಪಂತೆ
ದಿನಂ ಮೂರರೊಳ್ ಮುಗಿದುದಯ್ ಮಖಂ.
ಕೆಲದಿನಕೆ
ಮಿಥಿಳೆಯಿಂ ಯಾತ್ರೆಬಂದುದು ಮುನಿಗಳಾಶ್ರಮಕೆ
ಧರಣಿಪತಿ ಜನಕನ ಮಹಾಕ್ರತು ಸುಕೃತವಾರ್ತೆ.
ರಾಮಲಕ್ಷ್ಮಣರೊಡನೆ ಪೊರಮಟ್ಟನಾಯೆಡೆಗೆ
ಮುನಿಪುಂಗವಂ, ವಿಧಿನಿಯಂತ್ರದಲಿ. ಹಾದಿಯಲಿ
ಹೇಳಿದನು, ಜನಕರಾಜಗೆ ದಿವಿಜ ಕೃಪೆಯಿಂದೆ
ಲಭಿಸಿರ್ಪ ಹರಧನುಸ್ಸಿನ ಕಥಾಚರಿತಮಂ.     ೨೦೦
ಕೇಳ್ದ ರಾಮಂಗೆ ಶಿವಶಕ್ತಿ ಸಂಚರಿಸಿದೊಲ್
ಪುಲಕಿಸಿತು ಮೆಯ್ : ತನ್ನ ಹೃದಯೇಶ್ವರಿಯನನ್ಯ
ಕಾಪುರುಷರಿಂ ಪೊರೆವ ಹರಕೃಪಾ ರೂಪಿಯೇಂ
ಚಾಪಮಾತ್ರಮೆ ಪೇಳ್ ? ಶಿವೇಚ್ಛಾಪ್ರಣಾಲಿಯೆ ದಿಟಂ !
ಕಣಿವೆಗಳನಿಳಿದದ್ರಿಗಳನಡರಿ ಬರುತಿರಲ್,
ಗೌತಮನ ವಾಙ್ಮಹಿಮೆಯೋ ಮೇಣಹಲ್ಯೆಯ
ತಪೋಬಲಮೊ ಕಾಣೆನಟವಿಯ ಕುಟಿಲ ಪಥದಲಿ
ಹಠಾತ್ತೆನಲ್ ಭ್ರಷ್ಟಮಾದುದು ಪರಿಚಿತಾಧ್ವಮಾ
ಕುಶಿಕ ಸೂನುವಿಗೆ. ತಾರಾಗಣಮೆ ತೋರ್ಬೆರಳ್         ೨೧೦
ತಾನಾಗೆ, ದೆಸೆಯರಿತು, ಕಳ್ತಲೊಳೆ ನಡೆದರಯ್
ಸಾಹಸದ ಕಣ್ಣೂಹೆಯಿಂ. ಪೂರೈಸಿದುದು ರಾತ್ರಿ.
ಕಣ್ದೆರೆದಳುಷೆ ಮೂಡಣಂಬರದಿ ಪಾಂಥರ್ಗೆ
ಗೋಚರಿಸಿತೊಂದು ಋಷಿವನ ಸದೃಶ ಕಾನನಂ.
ಪೊಕ್ಕರದನೇನೆಂಬೆನಾ ಮಹಾ ಶಕುನಮಯ
ದುಃಖಗರ್ಭಿತ ಮೌನಮಂ ! ಹಾಡದಿವೆ ಹಕ್ಕಿ.
ನಲಿದಾಡದಿವೆ ಮಿಗಂ. ಸಂಚರಿಸದಿದೆ ಗಾಳಿ.
ತನಿಗಂಪನೀಯದಿವೆ ಮರಗೋಡಿನೊಳ್ ಮಲರ್.
ಚಲಿಸವೆಲೆ ಪುಲ್ಲೆಸಳ್. ಆವ ದುಃಖವೊ ಅಲ್ಲಿ
ಕೊನೆಗಾಣದಂತಮಂ ದಿನಮುಂ ನಿರೀಕ್ಷಿಪೊಲ್
ಮೂಗುವಟ್ಟಿರ್ದ ಬನಮೆಸೆದುದಾ ಪಥಿಕರ್ಗೆ    ೨೨೦
ಬರೆದಂತೆ ನೀರವಂ, ಕೊರೆದಂತೆ ನಿಶ್ಚಲಂ,
ನಿಶ್ಶಬ್ದತಾ ಕುಂಭಕಸ್ಥಿತಿಯ ಯತಿನಾದದೋಲ್.
ರಾಮಾಯಣದೊಳತಿಮನೋ ಋತದ ಸಂಘಟನೆ
ಸಂಭವಿಸಲಿರ್ಪ ತಾಣಂ ತಾನದೆಂದರಿವರೇಂ?
ಗೌತಮ ಮಹಾಮುನಿಯ ಶಾಪದಿನಹಲ್ಯೆ ತಾಂ
ವರ್ಷ ಶತಮಾನಂಗಳಿಂದೆ ಜಡರೂಪದಿಂ,
ನಿಷ್ಠುರ ಶಿಲಾತಪಸ್ವಿನಿಯಾಗಿ, ಕನಿಕರದ
ಕಣ್ಗೆ ಬಾಹಿರೆಯಾಗಿ, ಜಗದ ನಿರ್ದಾಕ್ಷಿಣ್ಯ
ವಿಸ್ಮೃತಿಗೆ ತುತ್ತಾಗಿ, ವಜ್ರಮೌನದ ಅಚಿನ್
ನಿದ್ರೆಯಿಂದೆಳ್ಚರುವ ಬಯಕೆಯಿಂದೊರಗಿರ್ದ  ೨೩೦
ಸುಕ್ಷೇತ್ರಮಂ ಪ್ರವೇಶಿಸಿದುದೆ ತಡಂ, ಮರುಗಿ
ಕರಗಿದುದು ರಾಮಾತ್ಮವನಿಮಿತ್ತ ಶೋಕದಿಂ.
ಕಣ್ಗಳಿಂ ಪರಿದುದಯ್ ನೀರ್. ತಾಯಿ ಕೌಸಲ್ಯೆ
ಗೋಳಿಡುತೆ ತನ್ನ ಪೆಸರಂ ಪಿಡಿದು ಕರೆವವೊಲ್
ಕಲ್ಗಳಿಂ ಪುಲ್ಗಳಿಂ ಮರಮರದ ಹೃದಯದಿಂ
ಮೂಡಿ ಕೇಳ್ದುದು ಸಂಕಟಂ ರಾಮನೊರ್ವಂಗೆ.
ಕುಳಿರ್ಗಾಳಿ ಬೀಸಲ್ಕೆ ತಳಿರ ತುದಿಯೊಳಗಿರ್ದು
ತಳಿಸುವಿರ್ಪನಿ ತರತರನೆ ಕಂಪಿಸುವ ತೆರದಿ, ಕೇಳ್,
ಸ್ಪಂದಿಸಿದುದವನ ಮೆಯ್ ಚಿನ್ಮಯಾವೇಶದಿಂ.
ಕೈವೆರಸಿ ನಡುಗಿದುದು ಪಿಡಿದ ಬಿಲ್. ಕುಣಿದತ್ತು          ೨೪೦
ಬತ್ತಳಿಕೆ ಬೆನ್ನಮೇಲ್. ತಲೆಯ ಮೇಲಾಡಿದುದು
ಕಾಕಪಕ್ಷದ ಕುರುಳ್, ಗಾಳಿಗೊಲಿಯುವ ಬಳ್ಳಿ
ಜೋಲ್ವಂತೆವೋಲ್. ವಕ್ಷಮೇದಿದುದು ಸುಯ್ಗಳಿಂ.
ಚೆಲ್ಲಿತಯ್ ತೇಜಂ ವದನದಿಂದೆ ! ನೋಡುತಿರೆ,
ಬಾಹ್ಯಸಂಜ್ಞಾ ಶೂನ್ಯನೆಂಬಂತೆ ರಘುನಂದನಂ
ನರ್ತಿಸಲ್ ತೊಡಗಿದನು ಭಾವದ ಸಮಾಧಿಯಿಂ
ಮಧುಮತ್ತನಂತೆ. ಪೇಳೇನೆಂಬೆನದ್ಭುತಂ:
ಸ್ತಬ್ಧ ಗಿರಿವನ ಧರಣಿ ಸಪ್ರಾಣಿಸಿತು ಕೂಡೆ
ಚೈತ್ರಲಕ್ಷ್ಮೀ ಸ್ಪರ್ಶಮಾದಂತೆ. ಬೀಸಿದನ್
ಪುಣ್ಯಪವನಂ ತರುವರಂಗಳ ನಾಳನಾಳದೊಳ್         ೨೫೦
ಶಕ್ತಿ ಸಂಚರಿಸೆ. ತುಂಬಿತು ಕೊಂಬೆಕೊಂಬೆಯಂ
ಫುಲ್ಲಪಲ್ಲವ ರಾಶಿ ರಾಶಿ, ಪರಿಮಳಮಯಂ
ನವರುಚಿರ ಕುಸುಮಸಂಕುಲಮೆಸೆದುವೆತ್ತಲುಂ
ಸುಗ್ಗಿಯಾಣ್ಮನ ಸಗ್ಗದೋಲಗಸಾಲೆ ಸಮೆದಂತೆ.
ಕಾಜಾಣಮುಲಿದುದಯ್. ನಲಿದುದು ನವಿಲ್. ಪಿಕಂ
ಪಾಡಿದುದು. ಪಕ್ಕಿಯಿಂಚರದೊಡನೆ ಸಂಗಮಿಸಿ
ತುಂಬಿಮೊರೆ ತುಂಬಿ ಝೇಂಕರಿಸಿತೋಂಕಾರಮಂ.
ಸುಳಿ ಸುಳಿದುವೈ ಚಿನ್ನಚುಕ್ಕಿಯ ಚಿಗರೆ ಚೆಲ್ವಾಗಿ,
ಪ್ರಾಣಮಯಮಾಯ್ತನ್ನಮಯ ಜಗಂ. ಭೋಂಕನೆ
ಮನೋಮಯತೆವೆತ್ತು, ವಿಜ್ಞಾನಮಯಮಂ ಪೊಕ್ಕು,    ೨೬೦
ದುಮುಕಿತಾನಂದಮಯದೊಳ್, ಕೋಶಕೋಶಂಗಳಂ
ಮೀಂಟಿ ನೆಗೆನೆಗೆದುತ್ತರಿಸಿ ದಾಂಟಿ, ತಗುಳ್ದುದಾ
ಅಲೌಕಿಕಂ ನೋಳ್ಪರ್ಗಮನುಭೂತಿ. ನೋಡುತಿರೆ,
ಚಲಿಸಿದನು ರಾಮನೊಯ್ಯೊಯ್ಯನೆಯೆ ನೃತ್ಯಶೀಲಂ,
ಮುಂದೆ. ಹಿಂಬಾಲಿಸಿದರಿತರರುಂ ಮಂತ್ರಬಲದಿಂ
ಬದ್ಧರಾದಂತೆ. ನೆರೆದುದು ಚೈತ್ರ ಸೌಂದರ್ಯಮಂ
ಬಾನತ್ತಣಿಂದಿಳಿದ ಗಂಧರ್ವ ಮಧುರಗೇಯಂ,
ಅಶರೀರ ಲಕ್ಷ ವೀಣಾ ತಂತ್ರಿಯಂ ಮಿಡಿದು
ಮೇಳಗೈದಂತೆ,
ಮೆರೆದುದು ಮುಂದೆ ಪಳುವದೊಳ್,
ವನಭಿತ್ತಿಗೆದುರಾಗಿ, ಸುತ್ತಣೊರಲೆಯ ಪುತ್ತು   ೨೭೦
ತಬ್ಬಿರ್ದ ಕಲ್ಬಂಡೆಯೊಂದು, ಹಾವಸೆ ಹಬ್ಬಿ,
ಮುತ್ತಿದ ಬಿದಿರ್ಮೆಳೆಯ ವನಮಾತೃವಕ್ಷದಲಿ.
ಸತಿಯ ರಕ್ಷೆಗೆ ತಾನೆ ರೂಪಮಂ ತಾಳ್ದುದೆನೆ
ಪತಿಯ ಶಾಪಂ, ಶಿಲೆಯ ಮೇಲೊರಗಿ ಕಿಚ್ಚುಗಣ್ಣಿಂ
ನಿಚ್ಚಮುಂ ಕಾಪಿರ್ದ ಕರ್‌ಪಳದಿ ಪಟ್ಟೆಯಾ
ಪೆರ್ಬುಲಿಯದೊಂದು ಬರ್ಪವರ ಕಾಣಲೊಡಮಾ
ತಾಣದಿಂದೆದ್ದು ಮಿಂಚಂತೆ ಕಣ್ಗೆ ಮರೆಯಾಯ್ತು.
ಋಷಿಕೃಪಾವಚನದೊಲ್ ರಾಮನೇರ್ದನು ಬಂಡೆಯಂ,
ಲಾಸ್ಯಮಂ ತೊಡಗಿ. ಒಯ್ಯನೆ ಚರಣಚುಂಬನಕೆ
ಕಲ್ಲೆ ತಾಂ ಬೆಣ್ಣೆಯಾಯ್ತೆನೆ ಕಂಪಿಸಿತು ಬಂಡೆ, ೨೮೦
ಪ್ರೇಮ ಸಾಮೀಪ್ಯದಿಂ ಸಾನ್ನಿಧ್ಯದಿಂ ಮತ್ತೆ
ಸಂಸರ್ಗದಿಂ ತಲ್ಲಣಂಗೊಳ್ಳುವಬಲೆಯೋಲ್.
ಬಿಲ್ಲು ಬೆರಗಾಗಿ ನೆರೆದವರೆಲ್ಲರೀಕ್ಷಿಸಿರೆ,
ಬೆಂಗದಿರನುರಿಗೆ ಕರ್ಪೂರಶಿಲೆಯಂತೆವೋಲ್
ದ್ರವಿಸಿತಾ ಕರ್ಬಂಡೆ : ದಿವ್ಯ ಮಾಯಾ ಶಿಲ್ಪಿ
ಕಲ್ಪನಾ ದೇವಿಯಂ ಕಲ್ಲಸೆರೆಯಿಂ ಬಿಡಿಸಿ
ಕೃತಿಸಿದನೆನಲ್, ರಘುತನೂಜನಡಿದಾವರೆಗೆ
ಹಣೆಮಣಿದು ನಿಂದುದೊರ್ವ ತಪಸ್ವಿನೀ ವಿಗ್ರಹಂ,
ಪಾಲ್‌ಬಿಳಿಯ ನಾರುಡೆಯ, ಕರ್ಪಿರುಳ ಸೋರ್ಮುಡಿಯ,
ಪೊಳೆವ ನೋಂಪಿಯ ಮೊಗದ ಮಂಜು ಮಾಂಗಲ್ಯದಿಂ.           ೨೯೦
ಪೆತ್ತ ತಾಯಂ ಮತ್ತೆ ತಾನೆ ಪಡೆದಂತಾಗೆ
ನಮಿಸಿದನೊ ರಘುಜನುಂ ಗೌತಮಸತಿಯ ಪದಕೆ,
ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ !
ಇಂದ್ರನಳುಪಿಂಗಳ್ಕಿ ಪತಿಯ ಶಾಪಕೆ ಸಿಲ್ಕಿ
ಕಲ್ಲಾದಹಲ್ಯೆಯಂ ಸಿರಿಯಡಿಯ ಸೋಂಕಿಂದೆ
ಮರಳಿ ಪೆಣ್ ಮಾಡಿದಾ ರಾಮೋತ್ತಮಾಂಗಕ್ಕೆ
ಘೇಯೆಂದು ದೇವತೆಗಳರಳುಮಳೆಗರೆದರಯ್,
ದುಂದುಭಿ ರವಂಗಳಂ ಮೊಳಗಿ. ಕಲ್ಲಾದರೇನ್?
ತೀವ್ರತಪದಿಂದೆ ಚೇತನ ಸಿದ್ಧಿಯಾಗದೇಂ
ಜಡಕೆ? ಕಲ್ಲಾದ ಪೆಣ್ಣರಕೆ ತಾಂ ಕೌಶಿಕಗೆ        ೩೦೦
ಬಟ್ಟೆದಪ್ಪಿಸಿ ಸೆಳೆಯದೇನಿಹುದೆ, ಪೇಳ್, ಚರಣಮಂ
ಶ್ರೀರಾಮನಾ? ಮುನಿಜನಂ ಪರಸಿ ಕೊಂಡಾಡುತಿರೆ
ರಾಮಪದ ಮಹಿಮೆಯಂ ತೋರ್ದಹಲ್ಯೆಯ ತಪೋ
ಗೌರವವನಾ ಗೌತಮಂ ಬಂದನಲ್ಲಿಗೆ ಶಿವಂ
ಬರ್ಪಂತೆವೋಲ್. ಕೂಡೆ ಪಾಳ್‌ಪೋಗಿರ್ದುದಾ ಬನಂ
ಪ್ರಾಣಮಯ ಪಾವನಾಶ್ರಮವಾಯ್ತು. ನೊರೆಯ ಮುತ್ತಂ
ಚೆಲ್ಲಿ ಪರಿದುದು ಮೊರೆವ ನಿರ್ಝರಿಣಿ. ಹೂ ತುಂಬಿ
ತೆಳುಗಾಳಿಗೊಲೆದು ತಲೆದೂಗಿತಾ ವನಧರಣಿ.
ಹರಿಣನಂ ಬಳಿಸಾರ್ದು ಮೊಗಂ ನೆಕ್ಕಿ ಮೆಯ್‌ತಿಕ್ಕಿ
ಸೊಗಸಿದುವು ಹರಿಣಿ! ಪದತಲಕೆ ಮುಡಿಯಿಟ್ಟಳಂ        ೩೧೦
ದಿವ್ಯ ಸಹಧರ್ಮಿಣಿಯನೆತ್ತಿ, ಕಣ್ಣೀರ್ವೊರಸಿ,
ಕರೆದನು ತಪೋಧನಂ ಹರ್ಷಾಶ್ರುವಂ. ಪೇಳ್ವುದೇಂ
ರಾಮನಾನಂದಮಂ? ಗೌತಮಾಲಿಂಗನದಿ
ಮೈಮರೆದನಯ್, ಭಕ್ತಿಯಪ್ಪುಗೆಗೆ ಭಗವಂತನೋಲ್.
ಕಳೆಯುತಾ ರಾತ್ರಿಯಂ ಗೌತಮಾಶ್ರಮದಲ್ಲಿ
ಮುಂದೆ ನಡೆದರು ಮಿಥಿಲೆಗಾಗಿ. ನಾನಾ ಕಥಾ
ಶ್ರವಣದಿಂದಧ್ವಶ್ರಮಂಗಳಂ ನೀಗುತಂ,
ಬ್ರಹ್ಮರ್ಷಿ ವಚನ ತತ್ತ್ವಾಮೃತವನೀಂಟುತಂ,
ಪ್ರಕೃತಿ ಸೌಂದರ್ಯ ರತಿಯಿಂಪನನುಭವಿಸುತಂ
ಬರಬರಲ್ ಶೋಭಿಸಿತು ಮುಂದೆ, ಸಂಪತ್ತಿನಿಂ            ೩೨೦
ಶ್ರೀಯುತ ಕುಬೇರನಲಕಾವತಿಗೆ ಮಲೆತುದೆನೆ
ರಂಜಿಸುತ್ತಿರ್ದಾ ವಿದೇಹದ ರಾಜಧಾನಿ.
ರಾಮಂಗೆ ಪುಳಕಿಸಿರೆ ಮೆಯ್ ಚಿತ್ತದೆಚ್ಚರಕೆ
ತಿಳಿಯದಿಂಪಿಂದೆ, ಪೊಕ್ಕರ್ ಮಹಾ ಮಿಥಿಳೆಯಂ,
ಮುತ್ತುರತ್ನಕೆ ಶರಧಿಯಂ ಪುಗುವರೋಲ್. ಜನಂ
ಕಿಕ್ಕಿರಿದು ಸುರಿದುದು ವಿದೇಶ ದೇಶಂಗಳಿಂ
ಜನಕರಾಜನ ಮಖದ ಸಂಭ್ರಮಕೆ. ಪಟ್ಟಣದ
ಬೀದಿಯಲಿ ಕೌಶಿಕನೊಡನೆ ರಾಮಲಕ್ಷ್ಮಣರ್
ಸಾಗುತಿರೆ, ಮಂದಿ ನಿಂದುದು ದಿಟ್ಟಿನಟ್ಟು, ಕೇಳ್,
ಬಾಲಕರ ಭದ್ರಾಕೃತಿಗೆ ಕಣ್‌ಮನಂ ಸೋಲ್ತು.  ೩೩೦
ದೊರೆಯಾಳುಗಳ್ ಬಂದು ಪೊಳೆವತಿಥಿಗಳ್ಗೆರಗಿ
ಜನ್ನಸಾಲೆಯ ಬಳಿಯ ಪಂದಳಿರ ಪಂದರದಿ
ಸಮೆದ ಬೀಡಾರಕವರಂ ಪುಗಿಸಿ, ಪರಿದರ್
ಮಹರ್ಷಿ ವಿಶ್ವಾಮಿತ್ರನಾಗಮನ ವಾರ್ತೆಯಂ
ರಾಜರ್ಷಿಗರುಹಲ್ಕೆ. ಕೇಳ್ದೊಡನೆ ಬಂದನಾತಂ;
ಪೊಕ್ಕನಾ ಪರ್ಣಕುಟಿಯಂ. ಚಂದ್ರಸೂರ್ಯರ್ವೆರಸಿ
ಗಗನಮಿರ್ಪಂತೆ ಲಕ್ಷ್ಮಣರಾಮರೊಡನಿರ್ದ
ಕೌಶಿಕಂಗೆರಗಿದನ್ : ‘ಧನ್ಯನಾಂ, ಪುಣ್ಯಮಾಯ್ತೀ
ಮಿಥಿಲೆ’. ಸಂಭಾಷಿಸುತ್ತಿರೆ, ನೃಪನ ಕಣ್‌ಪರಮೆ
ರಾಮ ರೂಪದ ಚಾರು ಕುಟ್ಮಲಾಕರ್ಷಣೆಗೆ     ೩೪೦
ಸಿಲ್ಕಿರ್ದುದಂ ಕಂಡು, ನಸುನಗುತೆ ಕುಶಿಕತನಯಂ
ನುಡಿದನಿಂತಾ ಜನಕರಾಜನ ಕಿವಿಗೆ ಜೇನು
ಹೊಯ್ವಂತೆ :
“ಮಹಿಮೆ ಮಹಿಮೆಯ ಕಣ್ಗೆ ಮರೆಯಹುದೆ,
ರಾಜರ್ಷಿ? ಸದೃಶರೊಳ್ ನೆಟ್ಟುದಯ್ ನಿನ್ನ ಚಿತ್ತಂ.
ರಾಮ ಲಕ್ಷ್ಮಣರಿವರ್ ದಶರಥನ ಮಕ್ಕಳ್ ಕಣಾ.”
ಎಂದು ಮೊದಲಾಗವರ ಸಿರಿಮೆಯ್ಮೆಗಳನೊರೆದು
ಮತ್ತೆ “ನೃಪವರ, ಹರನ ಕೋದಂಡಮಂ ತೋರ್ಪ
ನೆವದಿನಿವರಂ ತಂದೆನೀಯೆಡೆಗೆ ತೋರಿಸಾ
ಶಿವಚಾಪಮಂ. ಕಣ್ದಣಿಯೆ ಕಾಣ್ಗೆ. ಮರಳವೇಳ್ಕುಂ
ಬೇಗಮಾ ಕೋಸಲಕೆ. ಕಾತರದಿ ಕಾಯುತಿಹರೈ          ೩೫೦
ತಂದೆ ತಾಯ್ವಿರ್. ದಶರಾತ್ರಿಯವಧಿಯಂ ಪೂಣ್ದು
ಕರೆತಂದೆನಿವರನೆನ್ನಾ ಯಜ್ಞಮಂಗಳಕೆ.”
ಮುನಿವರನ ನುಡಿಗೇಳ್ದನವನಿಪತಿ. ಸುಖರಸಂ
ತೀವಿದಾ ತನ್ನ ಹೃದಯವನೊರೆಯಲಾಶಿಸಿದ
ಜನಕನಿಂಗಿತವರಿತು ಕೌಶಿಕಂ ಕುವರರಿಗೆ
ಸನ್ನೆಗೆಯ್ದನ್, ಬಳಿಯೆ ಕಂಗೊಳಿಸುತಿರ್ದೊಂದು
ನಗುವ ಪೂದೋಂಟಮಂ ತೋರ್ದು. ಕಿವಿಮರೆಯಾಗೆ
ರಾಮ ಲಕ್ಷ್ಮಣರೊರೆದನವನೀಶನಿಂತು ಮನಮಂ:
“ತಿಮಿರದಿ ತೊಳಲ್ವಂಗೆ ತಣ್ಗದಿರನೈತಂದು
ಸೊಡರ್ವಿಡಿದವೋಲಾಯ್ತು ನಿನ್ನ ಬರವಿಂದೆನಗೆ,         ೩೬೦
ಮುನಿವರೇಣ್ಯ. ರಾಮನಂ ಕಂಡೆನಗದೇನಾಯ್ತೊ
ಪೇಳಲರಿಯೆಂ. ಮಲರ್ದ್ದುದು ಬಾಡಿದೊಂದಾಶೆ.
ಯಜ್ಞಾರ್ಥಮೊರ್ಮೆ ನಾಂ ನೆಲನನುಳುತಿರಲಲ್ಲಿ
ಕುಳದ ನೇಗಿಲ್‌ಗೆರೆಯ ಬೈತಲೆಯ ಬಟ್ಟೆಯೊಳ್
ರನ್ನದೊಟ್ಟಿಲೊಳಿರ್ದ ಶಿಶುರತ್ನಮಂ ಕೊಂಡು,
ಪೆಣ್ಗೂಸದಂ ಮಗಳ್‌ಗೆತ್ತು ಸಲಹಿದೆನೊಲಿದು
ಸೀತೆಯೆಂಬಭಿಧಾನಮಂ ಪ್ರೀತಿಯಿಂ ತೊಡಿಸಿ.
ರತಿ ಮನ್ಮಥರ ಮಾತೆಯೆಂಬಂತೆ ಬಳೆದಳು ಕುವರಿ
ಪಾರ್ಥಿವ ಕುಮಾರ ಕಂದರ್ಪರಾ ಕಣ್ಮೀನ್ಗಳಂ
ಸೆಳೆಯುವ ಸರೋವರದ ಚಾರು ನೀರೇಜದೋಲ್.      ೩೭೦
ಪಂತದಿಂ ಪಾಡಿನಿಂದೊಬ್ಬರೊಬ್ಬರ ಕಾಡಿ
ಕರುಬಿಂದೆ ಬಂದರಿಲ್ಲಿಗೆ ಧರಾಪುತ್ರಿಯಂ
ಕೈವಿಡಿಯೆ ಬೇಡಿ, ಮೇಣ್ ಬಲ್‌ಪಡೆಗಳಂ ಕೂಡಿ.
ಏಗೆಯ್ಯಲರಿಯದಾಂ ಹರನನರ್ಚಿಸುತಿರಲ್ :
ಶಿವಕಾರ್ಮುಕವನೆತ್ತಿ ಕೊಪ್ಪಿಗೇರಿಸಿ ನಾರಿಯಂ,
ನಾರಾಚಮಂ ಪೂಡಿ, ಕಿವಿವರೆಗೆ ಸೆಳೆದೆಸುವ
ವೀರಂಗೆ ನೀರೆಯಂ ಧಾರೆಯೆರೆಯೆಂದೊರೆದುದೈ
ವಾಣಿ. ಬಂದರಸರ್ಗೆ ದೇವವಾಣಿಯನರುಹಿ
ವೀರಶುಲ್ಕೆಯನಾಗಿ ಸಾರಿದೆನಯೋನಿಜಾ
ಕನ್ಯೆಯಂ. ವಜ್ರದುರ್ಕ್ಕಿನ ಮೇರುಭಾರದಾ     ೩೮೦
ರುದ್ರ ಕೋದಂಡಮಂ, ಗುರುವೆ, ನಾನಿನ್ನೆಗಂ
ಕಾಣೆನಲುಗಾಡಿಸಿದ ಸಾಹಸಿಗರಂ, ಕೇಳಾ
ವೀರನೊರ್ವಂ ವಿನಾ ! ಲಂಕಾಪುರವನಾಳ್ವನಾ
ದಶಶಿರ ಬಿರುದುವೊತ್ತಂ, ರಾವಣನಿದಂ ಕೇಳ್ದು
ಬಂದನಿಲ್ಲಿಗೆ ಪುಷ್ಪಕಾರೂಢನಾಗಿ, ಕೇಳ್,
ಗೆಲ್ದು ಸೀತೆಯನುಯ್ವ ಕಳ್ಗೆ ಮಿದುಳಂ ಮಾರಿ.
ರುಂದ್ರ ರಾಕ್ಷಸ ಮೂರ್ತಿಯಂ ಕಂಡು ಗೋಳಿಟ್ಟಳಯ್
ಸೀತೆ, ರೋದಿಸಿತಖಿಲ ಮಿಥಿಲೆಯುಂ, ಕೋಮಳೆಗೆ
ಬೇಡುತೆ ಮಹಾದೇವನಂ. ಪರಶಿವನ ಕೃಪೆ ಕಣಾ !
ಪರ್ವತೋಪಮ ಕರ್ಬುರಂ ದಿಗ್ಗಜದ ಮಾಳ್ಕೆಯಿಂ       ೩೯೦
ನೆಲಂ ನಡುಗೆ ಜಗ್ಗಜಗ್ಗನೆ ನಡೆದು, ಕೈತುಡುಕಿ
ನೆಗಹಿದನ್ ಹರಧನುವನಸು ಗದ್ಗದಿಸೆ ಜಗಕೆ.
ಗೊಲೆಗೆ ಹೆದೆಯೇರುತಿರೆ, ಸೀತೆಯ ಸುಕೃತವಲಾ,
ಚಾಪ ಭಾರಕೆ ಕರಂ ತತ್ತರಿಸಿ, ತನು ಬೆವರಿ,
ಚಿತ್ತ ಪಲ್ಲಟವಾಗಿ, ಕೈಲಾಸಮಂ ಪಿಡಿದು
ತೊನೆದ ದೈತ್ಯಂ ಕುಸಿದು ಬಿದ್ದನು, ಪರ್ವತಾಗ್ರಂ
ಪ್ರಳಯದಶನಿಗೆ ಕೆಡೆದು ಬೀಳ್ವಂತೆ ! ಲಂಕೇಶ್ವರಂ
ತನ್ನ ಬಿಂಕದ ಭಂಗಕುರೆ ಮುಳಿದು ಪಿಂತಿರುಗಿದನ್,
ಮತ್ತೆ ತಪದಿಂ ಬಲ್ಮೆಯಂ ಪಡೆದು ಬಹೆನೆಂಬ
ಕಡು ಸೂರುಳಂ ಗುಡುಗುಡಿಸಿ ಪೂಣ್ದು. ಗುರುವೆ, ಕೇಳ್,            ೪೦೦
ದಶಕಂಠನತಿದೃಢ ಮನಸ್ಕನಯ್. ಇನ್ನೊಮ್ಮೆ ಆ
ರಕ್ಕಸಂ ಬರ್ಪ ಮುನ್ನಮೆ ಮನುಜವೀರಂಗೆ ನಾಂ
ಕುವರಿಯಂ ಕೊಡುವ ಕಾತರ ಮನದಿ ಕುದಿಯುತಿರ್ಪೆಂ.”
ಅತ್ತಲಾ ಪೂದೋಂಟದೊಳ್ ಮದನನೊಡಗೂಡಿ
ಮಧುನೃಪಂ ವಿಧಿವಿಲಾಸಕೆ ತನ್ನ ಕೈಂಕರ್ಯಮಂ
ಸಲ್ಲಿಸುವ ಸಿರಿಗಜ್ಜದೊಳ್ ತೊಡಗಿ, ನೋಟದಿಂ
ನೋಟಕ್ಕೆ ನಡೆದು, ಸಿಂಗರಿಸಿದನು ಬೇಟಮಂ
ಪೊತ್ತಿಸುವ ಸಿರಿಯ ರಾಗಂಗಳಿಂ ಗಂಧಂಗಳಿಂ,
ಮಿರುಮಿರುಗಿ ಮೆರೆವವೊಲ್, ಕರೆವವೊಲ್, ತರತರದ
ಪೂವೆಲೆಗಳಂ. ಬಂದಳಲ್ಲಿಗೆ ಸೀತೆ, ತಂಗೆಯರ್          ೪೧೦
ಊರ್ಮಿಳಾ ಮಾಂಡವಿ ಶ್ರುತಕೀರ್ತಿಯರ್‌ವೆರಸಿ,
ಗಿಳಿವಿಂಡನಣಕಿಸುವವೋಲ್, ಬಣ್ಣದೆಲೆಗಳುಂ
ಪೂಗಳುಂ ನಾಣ್ಚಿ ತಲೆಬಾಗುವೋಲ್. ಕಾಲಪುರುಷಂ
ರೋಮ ಹರ್ಷಿತನಾಗುವಂತೆ ಮೈಥಿಲಿ ನಿಂದು
ನೋಡಿದಳ್, ಮಲ್ಲಿಗೆಯ ಹೊದರ ಮರೆಯಿಂ, ಕೊಳನ
ತಿಳಿನೀರ್ಗೆ ಕಲ್ಲೆಸೆಯುವಾಟದಲಿ ಲಕ್ಷ್ಮಣನ
ಕೆಲನಿರ್ದ ರಾಮ ಮೋಹಕ ಮೂರ್ತಿಯಂ. ಮೊಗಂ
ಬೆಟ್ಟದಾವರೆಗೆ ಬೈಗಾದವೋಲೋಕುಳಿಯ
ರಾಗಮಂ ತಳೆದುದಾಕೆಯ ಮನೋರಾಗಮಂ
ಪ್ರತಿಬಿಂಬಿಪೋಲ್. ನಿತ್ಯಮುಂ ತನಗೆ ಕನಸಿನೊಳ್     ೪೨೦
ಕಾಣುತಿರ್ದಾ ನೀಲದೇಹನಂ ವಿಸ್ಮಯದಿ
ನೋಡಿದಳ್, ಕಣ್‌ಸಿಲ್ಕಿ, ಪೆಸರರಿಯದಜ್ಞಾತನಂ,
ರೂಪವಾರಾಶಿಯಿಂದೆದ್ದ ರವಿಮದನನೊಲ್
ರಮಣೀಯನಂ. ಜನಕನೌರಸ ಕುಮಾರ್ತೆಯರ್
ಕಾರಣವನರಿಯಲೆಳಸಲ್, ಸೀತೆ ನಿಡುಸುಯ್ದು,
ಕಡುಸೇದೆಯಿಂದಲ್ಲಿ ನಿಲ್ಲಲಾರದೆ ತಿರುಗಿ
ನಡೆದಳರಮನೆಗೆ. ಊರ್ಮಿಳೆ ಕಣ್ಣನೊರಸಿದಳ್.
ಅಕ್ಕರೆಗೆ ತಬ್ಬಿ ತನ್ನಕ್ಕನಂ, ಪೇಳಕ್ಕ ಪೇಳ್,
ದುಗುಡಮೇಕೆಂದಳುತೆ ಕೇಳಲ್ಕೆ, ಇಂತೊರೆದಳಾ
ವೈದೇಹಿ ತನ್ನಾತ್ಮಮಂ :
“ತಂಗೆ, ನಾನಿನ್ನೆಗಂ         ೪೩೦
ಪೇಳ್ದೆನಿಲ್ಲೊಂದಾತ್ಮವಿಷಯಮಂ. ಬಾಲ್ಯದಿಂ ಕೇಳ್,
ನನಗರ್ಥವಾಗದೊಂದನುಭವಂ ತಾಂ ನಿಚ್ಚಮುಂ
ಬಂದೆನ್ನನೊಳಕೊಳ್ವುದವ್ : ಗಗನ ಮಂಡಲಮೆ
ಬಂದೆನ್ನ ಮೆಯ್ಯಪ್ಪುತೆರ್ದೆಯೊಳಗೆ ಸೇರ್ವಂತೆ;
ಕಡಲುಕ್ಕಿ ಮೇರೆ ಮೀರುತೆ ಪಾಯ್ದು ಮುಳುಗಿಸಲ್
ನಾನೆ ಕಡಲೊಡತಿಯಪ್ಪಂತೆ; ಪೃಥಿವಿಯೆ ಕರಗಿ
ಪೆಣ್ ಪಸುಳೆಯಾಗುತೆನ್ನಯ ತೊಡೆಯ ತೊಟ್ಟಿಲೊಳ್
ನಲಿವಂತೆ; ತೊರೆ ಬನಂ ಭೂಮಿ ಬಾನ್ ಗಿರಿಪಂಕ್ತಿ
ಪಗಲಿಗುಳ್ ಚುಕ್ಕಿ ತಿಂಗಳ್ ನೇಸರೆಲ್ಲಮುಂ
ಮೆಯ್ಯಾಗುತಾಂ ತ್ರೈಭುವನ ಲಕ್ಷ್ಮಿಯಪ್ಪಂತೆ. ೪೪೦
ಬೆದರಿದೆನ್ ಮೊದಮೊದಲ್. ಪೇಳಲೆಂದೆಳಸಿದರೆ
ತೊದಲಾಯ್ತು. ಮೂಗಿ ಕಂಡದ್ಭುತದವೋಲಾಯ್ತು
ಕೇಳನುಭವಂ! ಲಂಕೆಯಧಿಪತಿ ದಶಾನನಂ
ನಮ್ಮಯ್ಯನೆಡೆಗೆ ಹರಚಾಪಮಂ ಮುರಿಯಲ್ಕೆ
ಬಂದ ದುರ್ದಿನದಂದು ರಾತ್ರಿ, ಶಶಿಮೌಳಿಯಂ
ಕಣ್ಣೀರ್ಗಳಭಿಷೇಕದಿಂದೆ ಜಾನಿಪವೊಳ್ತು,
ಮತ್ತೊಮ್ಮೆ ತನಗಾದುದನುಭವಂ, ಏನೆಂಬೆನಾ
ತಿರೆ ಕಡಲ್ ಚುಕ್ಕಿ ಬಾನುಗಳೆಲ್ಲವೊಂದಾಗಿ
ನನ್ನ ಮೆಯ್ಗವತರಿಸಿದೋಲ್. ಪ್ರಜ್ಞೆ ನಿದ್ರಿಸಿರೆ;
ನಿಃಸಂಜ್ಞಳಾದೆನಗೆ ಕಣಸಾದುದಾ ದರ್ಶನದಿ  ೪೫೦
ಮೈದೋರ್ದುದೀ ಸರ್ವ ಲೋಕ ರಮಣೀಯತಾ
ನೀಲ ಮೇಘ ಶ್ಯಾಮಮೂರ್ತಿ. ಆ ರಾತ್ರಿಯಿಂ
ದಿನದಿನಂ ಸ್ವಪ್ನದೊಳ್ ಗೋಚರಿಸಿತಾ ವಿಗ್ರಹಂ,
ಗುರುತಿಸಿದೆನಾ ರೂಪಮಂ ನಮ್ಮ ಪೂದೋಂಟದೊಳ್
ಕೊಳನ ತಡಿಯೊಳ್ ನಿಂದ ಗಗನೋಪಮಾಂಗದಾ
ನೀಲ ಕಾಂತಿಯ ತರುಣ ವಿಗ್ರಹದಿ.”
ಮಿಥಿಳೇಂದ್ರ
ಧರಣಿಸಂಭೂತೆ ಊರ್ಮಿಳೆಯೊಡನೆ ಮಾತಾಡಿ
ಮುಗಿವನಿತರೊಳ್ ಕೆಳದಿಯರ್ ಬಂದರೋಡೋಡಿ;
ತಂದರಿಂಪಿನ ವಾರ್ತೆಯಂ : “ಅಕ್ಕ, ನೀನಲ್ಲಿ
ಕಂಡವಗೆ ರಾಮನೆಂಬಭಿಧಾನಮಿಹುದಂತೆ !”            ೪೬೦
“ರವಿಕುಲದರಸು ದೇವ ದಶರಥ ಪುತ್ರನಂತೆ !”
“ತಾನಯೋಧ್ಯೆಗೆ ಸ್ವಾಮಿಯಹನಂತೆ !” “ಬಿಲ್ಮುರಿಯೆ,
ನಿನಗವನಿನಿಯನಂತೆ!” “ಬಲ ಪರೀಕ್ಷೆಗೆ ನಾಳೆ
ದಿನವಂತೆ !” “ಏಳಕ್ಕ ! ಬಾರಕ್ಕ ಬಿಲ್ ಮುರಿವವೋಲ್
ಪಾರ್ವತಿಯನಾರಾಧಿಪಂ!” “ದಿಟಂ ಶಿವನ ಸೋಲ್!”
ಹರ ಶರಾಸನವಂತೆ ! ತೆಗೆ, ಪರೀಕ್ಷೆಯದೇಕೆ
ತಾನೊಲಿದ ನಲ್ಲಂಗೆ? ಜಗದೇಕವೀರಂಗೆ
ಪದ್ಧತಿಯ ಪಾಳ್ ತೊಡರುಮೆಡರೇಕೆ? ತುಕ್ಕಡರಿ
ಮುರಿಯಲಾ ರುದ್ರಚಾಪಂ ! – ಎನುತೆ ಸೀತಾಕನ್ಯೆ
ಮನದಿ ನೆನೆದಳೊ, ಮರೆತು ತನ್ನನಂದಿನವರೆಗೆ          ೪೭೦
ಬೇರೆ ಬಣಗರಸರಿಂ ಮತ್ತೆ ಲಂಕೇಶನಿಂ
ದಶರಥ ತನುಜಗಾಗಿ ಕಾಯ್ದಿತ್ತದೆಂಬುದಂ.
ಹಿಂದೆ ರಾವಣನಂದು ಬಂದಾಗಳ್ ‘ಓ ಧನುವೆ,
ಕಾಪಾಡು ಬಾಲೆಯಂ; ಕೈಮುಗಿವೆ ಕಾಲ್ಗೆರಗಿ;
ಮುರಿಯದಿರ್; ಬಾಗದಿರ್; ಸುರಮೇರು ಭಾರದಿಂ
ದೈತ್ಯನೆತ್ತದ ತೆರದಿ ಭಾರಗೊಂಡಬಲೆಯಂ
ಪೊರೆ’ – ಎಂದೆರೆವ ತರುಣಿ ತಾನಿಂದು – ‘ಹಗುರಾಗು
ಗರಿಯಂತೆ; ಬಾಗು ಬಳ್ಳಿಯ ತೆರದಿ; ರಾಮಂಗೆ
ಮುರಿದು ಬೀಳ್, ಓ ಧನುವೆ !’ ಎಂದು ಪರಿಪರಿಯಿಂದೆ
ಬಿನ್ನಹಂಗೈದಳೆನೆ, ನಿಂದಾ ಸ್ತುತಿಗಳೆಲ್ಲಮಾ   ೪೮೦
ಸಮಯವರ್ತಿಗಳಲ್ತೆ? ರಾಮನ ಬಲಕೆ ತನ್ನ
ಪ್ರೇಮದ ಬಲವನೀಯಲೆಂದು ನೋಂಪಿಯ ನೋಂತು
ಹೃತ್‌ಪದ್ಮದಿಂದೆ ಭೂಜಾತೆ ಗಿರಿಜೇಶನಂ
ಪೂಜಿಸಿದಳಾ ರಾತ್ರಿ, ನಿದ್ದೆ ನೈವೇದ್ಯಮಂ
ನೀಡಿ.
ತಳಿರಿದುದು ಮಂಬೆಳಗಿಂದ್ರದಿಕ್ತಟದಿ.
ನೆರೆದುದು ಜನಂ ಜನ್ನಸಾಲೆಯಲಿ. ತಿಮಿರಾರಿ
ಮೈದೋರಿದನು, ತನ್ನ ಸಂತಾನದೇಳಿಗೆಗೆ
ಕಾರಣಂ ತಾನಪ್ಪ ಸಾಹಸವನೀಕ್ಷಿಸುವ
ವಾತ್ಸಲ್ಯದುದ್ವೇಗದಿಂದರುಣಮುಖಿಯಾಗಿ,
ಮೂಡುವೆಟ್ಟಿನ ಮುಡಿಯ ಕೋಡಿನಲಿ. ಬಹುಮಂದಿ      ೪೯೦
ಬಲಶಾಲಿಗಳ್ ತಿಣಿಕಿ ತಂದಿಟ್ಟ ಕಾರ್ಮುಕದ
ಭೀಮ ಭೀಷ್ಮತೆಯುಜ್ವಲಿಸಿದತ್ತು ರೌದ್ರಮಾ
ತರುಣ ನವ ತರಣಿಯ ಕಿರಣದರುಣದಾತಪದಿ.
ನೆರೆದ ಮಹಿಳಾ ಜನದ ಮಧ್ಯೆ ತರುಣಿಯರೊಡನೆ
ಚಿತ್ತದುದ್ವೇಗ ಶೂಲದ ಮೇಲೆಯೆಂಬಂತೆ
ಕುಳಿತಿರ್ದ ಧರಣಿಜೆಗೆ ಗದಗದಿಸಿತೆದೆ, ತನ್ನ
ಮನದನ್ನ ರಾಘವನ ವಿಜಯ ವಿಷಯದಿ ಶಂಕೆ
ಭರವಸೆಗಳುಯ್ಯಾಲೆಯಂ ತೂಗಿ. ನೋಡುತಿರೆ,
ಕೌಶಿಕನ ಪಾರ್ಶ್ವದಿಂದೆದ್ದನು ರಘೂದ್ವಹಂ,
ಮಖಧೂಮ ಮುಖದಿಂ ಶಿಖಿಜ್ವಾಲೆಯೇಳ್ವವೋಲ್.      ೫೦೦
ನಯನಾಭಿರಾಮನಂ ಕಂಡೊಡನೆ ಘೇ ಉಘೇ
ಉಲಿದು ಕೈಪರೆಯಿಕ್ಕಿತಯ್ ಜನಂ. ತುಂಬುಹೊಳೆ
ಮರವಿಡಿದು ಕಾಡಾದ ದಡಗಳೆರಡರ ನಡುವೆ
ಮುಂಬರಿಯುವಂತೆ, ನಡೆದನು ರಾಮನಿಂಬಾದ
ಗಾಂಭೀರ್ಯದಿಂ, ಹರಧುನುವಿನೆಡೆಗೆ. ಮರುಗಿದುದು
ಸೌಮ್ಯನಂ ಕಂಡು ಮುದುಕರ ಮನಂ; ತಾಯ್ವಿರ್ಗೆ
ಕರಿಗಿದತ್ತೆರ್ದೆ : ಚಂದ್ರಚೂಡ ಕೋದಂಡದೆಡೆಯೊಳ್
ಲಲಿತ ರಾಮನ ಬಾಲ ಮೂರ್ತಿಯಂ ನೋಡಿ ‘ಹಾ !
ಧನುವೆಲ್ಲಿ ? ಶಿಶುವೆಲ್ಲಿ ? ಸಿಡಿಲೆತ್ತ ? ಹೂವೆತ್ತ ?
ಕಾಳಾಹಿಯಂ ಹರಿಣಶಿಶು ತಿವಿದು ಕೋಡಿಂದೆ ತಾಂ     ೫೧೦
ಕೊಲಲಹುದೆ ? ಗೆಲಲಹುದೆ ? ಬರ್ದುಕುವುದೆ ? ಹಾ’ ಎಂಬ
ಲಲನೆಯರ ಹೆಂಗರುಳ್ ಕುದಿಯೆ, ಹೋಹಾತನಂ
ಕಂಗಳಿಂದಪ್ಪಿದರೊ, ಸೊಬಗನಾಲಿಂಗಿಪೋಲ್, ಮೇಣ್
ಅಶುಭಮಂ ಪರಿಹರಿಪವೋಲ್ ! ಭೈರವ ಮುಹೂರ್ತಮಂ
ಸರ್ವೇಂದ್ರಿಯಂಗಳಿಂ ಚಿತ್ತದಿಂದಾತ್ಮದಿಂ
ಸಂವೀಕ್ಷಣಂಗೈದು ನೆರೆದಿರ್ದ ಪರಿಷತ್ತು
ನಿಶ್ಶಬ್ದತೆಯ ಕಡಲೊಳಳ್ದತ್ತು, ಬಣ್ಣದೊಳ್
ಕೆತ್ತಿ ಬರೆದಂತೆ. ಶಾಂತಿಸ್ಥೈರ್ಯಧೈರ್ಯನಿಧಿ ತಾಂ
ಶ್ರೀರಾಮನಾ ಧನುವಿನೆಡೆ ನಿಂತದರ ಮಹಾ
ಗಾತ್ರಮಂ ದೃಷ್ಟಿಸಿದನಾಪಾದಮಸ್ತಕಂ,        ೫೨೦
ತನ್ನಳವನದರ ಬಲ್ಮೆಗೆ ತೂಗಿ ನೋಳ್ಪಂತೆ.
ಕಿರುನಗೆಯ ಮಲರ ಸುಳಿವೊಂದರಳುತಿರೆ ಮೊಗದಿ,
ತಿರುಗಿ, ದಿಟ್ಟಿಯನಟ್ಟಿ, ನೆರೆದ ಸಭೆಯಂ ಕುರಿತು
ಕೈಮುಗಿದನೊರ್ಮೆ. ಮನದೊಳೆ ಮಣಿದು ಗುರುಜನಕೆ
ಕೈಮುಗಿದನಿರ್ಮೆ. ಶಂಕರ ಚರಣ ಪಂಕಜಕೆ
ಬಗೆಯ ಪೂಜೆಯ ಸಲಿಸುತಕ್ಷಿಪಕ್ಷಿಯನಟ್ಟಿ
ಪೀತಾಂಬರವನುಟ್ಟ ಲಲಿತಾಂಗಿಯರ ಮಧ್ಯೆ
ತರತರದ ರನ್ನದೊಡಮೆಯ ಪೊಗರನೇಳಿಸುತೆ,
ಹಸುರು ಕಾಡಿನೊಳಸುಗೆ ಹೂವಂತೆಸೆಯುತಿರ್ದಾ
ತನ್ನ ಮೀನಾಕ್ಷಿಯಂ ಮೈಥಿಲಿಯನೊಯ್ಯನೆಯೆ           ೫೩೦
ಕೋಮಳ ಕಟಾಕ್ಷದಿಂದೀಕ್ಷಿಸಿ, ಶರಾಸನಕೆ
ತಿರುಗಿದನ್ ಮತ್ತೆ. ಬಿಲ್ಲಿಗೆ ಬಾಗಿ, ಹಣೆಚಾಚಿ
ನಮಿಸಿ, ನಿಮಿರ್ದನ್ ಪ್ರಾಣಮಯನಾಗಿ.
ಪೇಳಲೇಂ ?
ರವಿಕುಲನ್ ಮಣಿದೇಳುತಿರೆಯಿರೆ ಹಠಾತ್ತನೆಯೆ
ರಾರಾಜಿಸಿತು ಜಾನಕಿಯ ಕಣ್ಗೆ ಶಿವಮೂರ್ತಿ ತಾಂ
ಕೋದಂಡದಿಂ ಮೂಡಿ ಮೈದೋರಿ ! ಶಶಿಧರಂ,
ಫಣಿಭೂಷಣಂ, ದೇವ ಗಂಗೋತ್ತಮಾಂಗಂ,
ಪಿಂಗಲ ಜಟಾಜೂಟ ಕೂಟಂ ತ್ರೆಣೇತ್ರಂ,
ವಿಭೂತಿ ಶೋಭಿತ ಕಳೇಬರನ್, ಇಭ ದುಕೂಲಾಂಗಿ,
ಶಂಕರ ಭಯಂಕರ ಪಿನಾಕಿ, ಕೇಳ್, ಕರವೆತ್ತಿ   ೫೪೦
ಪರಸುತಿಕ್ಷ್ಯಾಕು ಕುಲ ಸಂಜಾತನಂ, ಕಾರ್ಮಿಂಚು
ಮೋಡದೊಳಡಗುವಂತೆ ಮರೆಯಾದನೊರ್ಮೊದಲೆ
ಚಾಪ ಮಧ್ಯದೊಳೈಕ್ಯಮಾಗಿ :
ಐರಾವತಂ
ದೇವೇಂದ್ರನಂ ಪೊತ್ತು ದಿಕ್ಪಾಲ ಪುರಗಳಿಗೆ,
ಮತ್ತೆ ವೈಕುಂಠಕ್ಕೆ ಮತ್ತೆ ಕೈಲಾಸಕ್ಕೆ,
ಸತ್ಯಲೋಕಕೆ, ಮತ್ತೆ ತೆರಳುತಲ್ಲಿಂ ಮರಳಿ
ಬರ್ಪುದಮರಾವತಿಗೆ, ಸುರವಾದ್ಯ ನಿಸ್ವನಕೆ
ಬಿಂಕದಿಂ ಬೀಗಿ : ಬೀಳ್ಕೊಳುತ್ತಿರಲಿಂದ್ರನಂ
ವರುಣಂ ಸ್ವಹಸ್ತದಿಂದಮೆ ತನ್ನ ಮೈಮೇಲೆ
ಕೈಯನಾಡಿದನಲ್ತೆ? ಅಗ್ನಿ ನೀಡಿದನಲ್ತೆ
ತನ್ನಂಗಳದ ಮರದ ಮಾಂದಳಿರ ಚೆಂದೊಂಗಲಂ ?
ಮೇಣಾ ಕುಬೇರನುಂ ಸೊಂಡಿಲ್ಗಳಂ ನೀವಿ
ಸೋಂಕಿಗೆ ಸೊಗಂಬಡೆದನಲ್ತೆ ? ಮಾಹೇಶ್ವರಂ
ಬೆಳ್ಳಿಬೆಟ್ಟದ ತಳ್ಪಲೆಳೆವುಲ್ಲನೆಳೆದಿತ್ತು
ರತ್ನಖಚಿತಂ ದೀರ್ಘದಂತಂಗಳೆರಡುಮಂ
ಬಣ್ಣಿಸಿದನಲ್ತೆ ? ತನಗಾರು ಹೊಯಿಕಯ್ಯೆಂದು,
ಬೇರೆಬೇರೆಯ ಲೋಕದಾಹಾರಮಂ ಸವಿದ
ತೃಪ್ತಿಗೆ ಮನಂ ಮಿಕ್ಕು, ಶಚೀದೇವಿಯರಮನೆಯ
ಮರಕತದ್ವಾರದೆಡೆ ಸಗ್ಗದೊಡೆಯನನಿಳಿಸಿ,
ಕನಕ ಶೃಂಖಲೆಯಿಂ ಬಿಡುತೆಗೊಂಡು, ಸ್ವೇಚ್ಛೆಯಿಂ      ೫೬೦
ಪರಿತಂದು, ರತ್ನಧೂಳಿಯ ಮಳಲ ಪಾತ್ರದೊಳ್
ಪ್ರವಹಿಸುವಮರನದೀ ದುಗ್ಧ ತೀರ್ಥದೊಳೊಡನೆ
ದುಮ್ಮಿಕ್ಕುವುದು, ಸುಧೆಯ ತೆರೆ ದಡಕ್ಕವ್ವಳಿಸಿ
ಮೊರೆಯೆ. ಆ ಪಾಲ್ಗಲ್ಲ ಪೆರ್ಬಂಡೆ ಪಾಲ್ವೊಳೆಯ
ಮಿಂದು, ನಂದನ ವನದ ಕಲ್ಪದ್ರುಮಕೆ ನಡೆದು
ಬಂದು, ಮೆಯ್ ತಿಕ್ಕುವುದು ಕ್ರೀಡಾ ವಿನೋದದಿಂ.
ದೈತ್ಯಾಕೃತಿಯ ದೇವತರು ಬೃಹನ್ಮಸ್ತಕಂ
ಶಾಖೋಪಶಾಖಾ ಪ್ರಸಾರ ವಿನ್ಯಾಸದಿಂ
ತೂಗಿ ತೊನೆದಪುದೆಡಕೆ ಬಲಕೆ, ಚೀರ್ವುದು ದಿವಿಜ
ಖಗವೃಂದಮಿಂದ್ರನಾನೆಯ ಘೀಂಕೃತಿಯ ರವಕೆ         ೫೭೦
ಬೆರ್ಚಿ ಗಾರಾಗಿ. ಹೆಬ್ಬಳ್ಳಿ ಹಂಬುವ ತೆರದಿ
ಹೆಮ್ಮರನ ಮೆಯ್ಗೆ, ಕಲ್ಪದ್ರುಮದ ಗಾತ್ರಮಂ
ತನ್ನ ನೀಳ್ದೀರೈದು ಸೊಂಡಿಲ್ಗಳಿಂ ಸುತ್ತಿ,
ಕ್ಷೀರ ಫೇನ ಶ್ವೇತ ಗೀರ್ವಾಣ ವಾರಣಂ
ಮತ್ತ ವೈಖರಿಯಿಂದೆ ಜರ್ಗ್ಗಿಸೆಳೆವುದು, ಮರಂ
ಬಳ್ಳಿಯಾಗುತೆ ಬಳ್ಕುವಂತೆ !
ರಘುಕುಲ ಖಮಣಿ
ಬಿಳಿಯಾನೆ ಸೊಂಡಿಲಂದದ ನೀಳ ತೋಳಿಂದೆ
ತುಡುಕಿದನು ಕಲ್ಪಭೂರುಹ ಸದೃಶ ಚಾಪಮಂ
ಸೀತಾಫಲದ ಬಯಕೆಯಿಂದೆ. ಬಾಗಿದುದ್ ಬಿಲ್,
ಹಂಬಿನೋಲ್. ಹೆದೆ ಏರಿದುದು. ಪೂಡಿ ಬಾಣಮಂ       ೫೮೦
ಸೆಳೆಯುತಿರೆ ಕಿವಿಯನ್ನೆಗಂ, ಕರ್ಬು ಮುರಿವಂತೆ
ಮುರಿದುದಾ ಹರನ ಧನು ತಾಂ ಸಿಡಿಲ ಸದ್ದೊದರಿ.
ಜಾನಕಿಯ ಸುಖದಕ್ಷಿಯಿಂದಿಕ್ಷುರಸಧಾರೆ
ಸೋರ್ದುದಯ್. ಹರ್ಷವೀಚಿಗಳವ್ವಳಿಸಿದವೋಲ್
ಘೋಷಿಸಿತು ಘೇ ರವದೊಳಾ ನೆರೆದ ನರಶರಧಿ.
ಬಿಡದೆ ಪೂವಳೆ ಬಿಳ್ದುದಾಲಿಕಲ್ ಕರೆವಂತೆ,
ತರತರದ ಪರಿಮಳದ ಮೇಣ್ ವಿವಿಧ ವರ್ಣದಾ
ವರ್ಷ ಶೈಲಿಯಲಿ ! ಹರ್ಷಾಶ್ರು ಸುರಿಯುತಿರೆ, ಜನಕಂ
ತಡೆಯಲಾರದೆ ತುಂಬಿ ತುಳುಕುವ ಮಧುರ ಸುಖಕೆ
ಋಷಿಪದಕೆ ಮಣಿದನಯ್, ಕೃತಜ್ಞತಾಭಾರದಿಂ           ೫೯೦
ಬಾಗಿ. ಹುಟ್ಟಿಯನುಳಿದ ಹೆಜ್ಜೇನ ಹುಳುಹಿಂಡು
ದಟ್ಟಯಿಸಿ ಮೊರೆವಂತಿರಿರ್ದ ಜನ ಸಂದಣಿಯ
ನಡುವೆ ನಡೆದಪ್ಪಿದನು ರಘುಕುಲೋದ್ದೀಪನಂ,
ತನ್ನಿಷ್ಟದೇವತೆಯನಾಲಿಂಗಿಪಂತೆವೋಲ್.
ಅನಿತರೊಳ್, ಸಂಭ್ರಮಿತ ಸಖಿಯರ ನಡುವೆ, ಸೀತೆ ತಾಂ
ಕರದೊಳ್ ವಿಜಯಮಾಲೆಯಂ ಪಿಡಿದು, ಮೋಹಿನಿಯೊ
ತ್ರೈಭುವನ ರತಿಯೊ ವೈಯಾರ ಸುಂದರಿಯೊ ಮೇಣ್
ತುಹಿನ ಗಿರಿಶಿವ ಶಿರದ ಮಾನಸ ಸರೋವರದಿ
ಸಂಭವಿಸಿ ವನದೇವಿಯರ ಸೇವೆಯೊಳ್ ಸಂದು
ಮುಂಬರಿದು ಸಾಗರನನಪ್ಪುವಾ ತವಕದಿಂ    ೬೦೦
ಪ್ರವಹಿಪಾ ಜಾಹ್ನವಿಯ ಹೊನಲೊ ಹೇಳೆಂಬಿನಂ
ಹರಿದು ಬಂದಳು ರಾಮ ಮನ್ಮಥ ಶರಧಿತಟಿಗೆ.
ಪೊಣ್ಮುತಿರೆ ಸುಖರಸದ ಮಧುರ ಮಂಗಳ ಗೀತೆ
ವಾದ್ಯ ವೈವಿಧ್ಯ ವಿದ್ಯಾಶ್ರುತಿಯ ನಣ್ಪಿಂದೆ,
ರಾಮಂಗೆ ಮಾಲೆಸೂಡಿದಳೊ ಸೀತಾಕನ್ಯೆ,
ಭೂರಮೆ ಸಮುದ್ರಂಗೆ ಬೆಳ್ಪೆರೆಗಳಂ ಕೋದು
ಪೂದಂಡೆವೋಲ್ ಗೈದ ಬಾನ್ದೊರೆಯ ದಾಮಮಂ
ಹಾಯ್ಕಿದಳೆನಲ್ಕೆ !
ವಿಶ್ವಾಮಿತ್ರ ಮುನಿವರಂ
ಸಮ್ಮತಿಸೆ, ಮಿಥಿಳೇಂದ್ರನಾಜ್ಞೆಯಂತಾಳುಗಲ್
ಸಾಕೇತಪುರಿಗೆಯ್ದಿದರ್, ಮೂರಿರುಳ್ ಮೂರ್ಪಗಲ್     ೬೧೦
ನಿಲ್ಲದೆ ಪಯಣಗೈದು. ಸುತರಾಗಮನ ಚಿಂತೆ
ಮಸಗಿರ್ದ ದಶರಥಗೆ ಬಿನ್ನೈಸಿದರ್ ಶುಭದ
ವಾರ್ತೆಯಂ. ಕಡಲುಕ್ಕುವಂತುಕ್ಕಿತು ಅಯೋಧ್ಯೆ.
ಸಂತಸಕೆ ತಡಿಯಿಲ್ಲದಾದಳಾ ಕೌಸಲ್ಯೆ
ಮಗನಭ್ಯುದಯಕೆ : ನೆನೆದಳು ಬಗೆಯಲಂಪೇರೆ
ಚೆಲ್ವಿನೊಲ್ವಿನ ಸೊಸೆಯ ಗುಣಶೀಲರೂಪಮಂ,
ಮಗನ ಮಂಗಳ ಮೂರ್ತಿಯೆಡೆಯಲ್ಲಿ ! ಪಡೆವೆರಸಿ,
ಪರಿವಾರದೊಡನೆ, ಮಕ್ಕಳ್ ಕೂಡಿ ಮಹಿಷಿಯರ್
ಗುರು ಮಂತ್ರಿ ಬಂಧು ಬಾಂಧವ ಮುಖ್ಯಪೌರರುಂ
ಬರಲೊಡನೆ, ದಶರಥಂ ತಾನೆಯ್ದಿದನು ಮಿಥಿಳೆಯಂ   ೬೨೦
ನಾಲ್ಮೆ ದಿನಮಣಿ ಮುಳುಗುವನಿತರಲಿ. ಬೀಗರಂ
ವಿಭವದೊಳಿದಿರ್ಗೊಂಡು ಸಂಭ್ರಮಿಸಿತಯ್ ಮಿಥಿಳೆ.
ನಿಮಿವಂಶಜರ ಕೂಡೆ ಕೊಳುಕೊಡೆ ರವಿಕುಲರ್ಗೆ
ಪಣೆಗೆ ತಿಲಕಂ ಬಂದ ತೆರನಾದುದೆಂಬಂತೆ
ಸಮನಿಸಿತು ಮದುವೆ ಸೀತಾರಾಮರಿಗೆ. ಭೂಮಿ
ನಲಿದತ್ತು. ಸೊಗಸಿದುದು ದೇಶದೇಶದ ಜನಂ,
ಸಂಭ್ರಮಕೆ ಸಂಭ್ರಮವೆ ಸಂಘಟಿಸಿತೆಂಬಂತೆ,
ಕಲ್‌ಸಕ್ಕರೆಗೆ ಜೇನು ಸೋರ್ದಂತೆ. ನೆಲದೆರೆಯ
ಜನಕರಾಜನ ಹೃದಯದಿಂಗಿತಕೆ ಮನಮೊಪ್ಪಿ
ಸೌಮಿತ್ರಿಯೂರ್ಮಿಳೆಯನೊಪ್ಪಿದನ್, ಹೂಗೆಲಸಿ         ೬೩೦
ಸುಗ್ಗಿಮೊಗ್ಗನ್ನಪ್ಪುವಂತೆ. ಶತ್ರುಘ್ನಂಗೆ, ಕೇಳ್,
ಶ್ರುತಕೀರ್ತಿ ತಾನಾದಳೊಲ್ಮೆವೆಂಡಿತಿ. ಕೈಕೆ ತಾಂ
ಮಾಂಡವಿಯನೆರ್ದೆಯನ್ನಳಂ ಪಡೆದಳೈ ತನ್ನ
ಸುಂದರ ತನೂಜ ಭರತಂಗೆ.
ಇಂತೊಚ್ಚತಂ
ಪಗಲೇಳುಮಿರುಳೇಳುಮೆಸೆದತ್ತು ಬಿರ್ದಿನೊಸಗೆ,
ಬರ್ದಿಲರೂರಂ ಸೂರೆಗೊಳ್ವಂತೆ. ತರುವಾಯಮಾ
ಮಿಥಿಳೆಯಿಂ ಸಾಕೇತಪುರಕೆ ನಡೆದುದು ಮದುವೆಯಾ
ದಿಬ್ಬಣದ ಮೆರವಣಿಗೆ ಹೇಳಲದನೇನೆಂಬೆ ?
ನೆಲದರಸರಿರ್ವರ ಸಿರಿಗಳೊಂದುಗೂಡಿದೊಡೆ
ಶಿವಸಖ ಕುಬೇರಂ ಪುರಂದರಗೆ ಕೈಗೊಟ್ಟು    ೬೪೦
ಅಮರೆಯಿಂದಲಕೆವಯಣಂ ನಡೆವೊಲಾಯ್ತಲಾ
ಮರುದಿಬ್ಬಣದ ಮೆರವಣಿಗೆ ಜಾತ್ರೆ.
ಪಟ್ಟೆಮಡಿ
ತೇರಾನೆ ರನ್ನಗಂಬಳಿ ಗೋವು ಕಾಲಾಳು
ಮುತ್ತು ಪವಳಂ ತೊತ್ತು ಮೊದಲಪ್ಪ ತರತರಂ
ಸಿರಿಯ ಬಳುವಳಿವೊತ್ತು, ಜನಕನೃಪನಂ ಮರಳಿ
ಮಿಥಿಳಾ ಪುರಿಗೆ ಬೀಳುಕೊಟ್ಟು, ದೊರೆವಟ್ಟೆಯಂ
ಪಿಡಿದು ಮಂಗಳವರೆಯ ನಾದಕ್ಕೆ ನಡೆನಡೆಯೆ
ನಿಡುವೊಸಗೆ, ತೆಕ್ಕನೆಯ ತೋರ್ದುವುತ್ಪಾತ ತತಿ :
ಶಕುನಿ ಚೀರಿದವು ದುಶ್ಶಕುನಮಂ; ಜನಕೆ ಕಣ್
ಕಂಪಿಸಿತು; ಕುದುರೆ ಕೆನೆದುವು ರೋದಿಪಂದದಲಿ.        ೬೫೦
ಬೆದರುತಿರೆ ದಶರಥಂ ಬೀಸತೊಡಗಿತು ಗಾಳಿ
ಬಿರುಸಾಗಿ, ಭೂಮಿಯದಿರಿತು. ಪಣ್ಣಿಡಿದ ಮರಂ
ತಿರೆಗುರುಳಿದುವು ಲಕ್ಕಲೆಕ್ಕದಲಿ. ನುಂಗಿದುದು
ಕೃಷ್ಣ ಜಲಧರ ರಾಹು ರವಿಯಂ. ಚತುರ್ದಿಕ್ಕುಗಳ್
ಕಳ್ತಲೆಯ ಕಾಡಿಗೆಯ ಮೆತ್ತಿನಿಂದಿಲ್ಲಾದುವಯ್.
ರೋಷಭೀಷಣವಾಯ್ತು ಸಿಡಿಲುಮಿಂಚಿಟ್ಟಳಂ
ಕರ್‌ಧೂಳಿ ಬೊಮ್ಮಮಂ ಪರ್ವಿ. ಮೈ ಮರೆಯುತಿರೆ
ಸೇನೆ, ಸಂಮ್ಮೋಹ ಭಸ್ಮವನೆರಚಿದರೆನಲ್ಕೆ,
ಕಾಣಿಸಿತ್ತದ್ಭುತಂ ದಶರಥ ದೊರೆಯ ಕಣ್ಗೆ :
ಕಾರ್ಗೆ ಕಾಯಂ ಮೂಡಿದಂತೆ ಮೂಡಿತು ಮುಂದೆ        ೬೬೦
ಭೃಗುವಂಶಿ ಜಮದಗ್ನಿತನಯ ಭೈರವ ಮೂರ್ತಿ,
ಕಂಡರ್ಗೆ ಬರ್ದುಕು ಕಳವಳಿಸೆ. ಕಾಲಾಗ್ನಿಯೊಳ್
ಮುಳುಗುತೆ ಹದಂಗೊಂಡ ಕಾಳಾಹಿಸಂಕುಲಂ
ಜೋಲ್ವಂತೆ ಜೋಲ್ದುವು ಜಟಾಳಿ. ಭೀಷ್ಮತೆವೆತ್ತು
ರಂಜಿಸಿತು ಹೆಗಲಿನೊಳ್ ಕೆಂಗೊಡಲಿ. ಕೈಗಳಲಿ
ಮಿಂಚಿದುವು ವಿಷ್ಣುಕೋದಂಡ ಬಾಣಾಳಿಗಳ್,
ಕಣ್ಗಿರಿಯುವಂತೆ. ಬೆಚ್ಚಿರೆ ಸೈನ್ಯ ಸರ್ವಮುಂ,
ಶ್ರೀರಾಮನೊರ್ವನೆಯೆ ತನ್ನೊಸಗೆದೇರಿಳಿದು
ನಡೆದಂ ಶರತ್ಕಾಲ ಸುಪ್ರಸನ್ನತೆಯಂತೆವೋಲ್,
ಕೊಡಲಿಗೊರವನ ಕಡುಪಿನೆಡೆಗೆ. ತವಿದುದೊ ಗಾಳಿ.    ೬೭೦
ಪರಿದುದೊ ಮುಗಿಲ್ ಕೂಡೆ. ಪರಶುರಾಮನ ಮೊಗಕೆ
ಮಲರಿದುದೊ ಮುಗುಳುನಗೆ ! ಶೈಶವ ಸರಲ ಶಾಂತಿ
ಸೌಂದರ್ಯಗಳ್ಗೆ ಸೋಲದರೊಳರೆ ಲೋಕದೊಳೆನಲ್
ರಾಮಂಗೆ ತಾಂ ಮೆಚ್ಚುಗೊಟ್ಟನು ವಿಷ್ಣುಚಾಪಮಂ
ಜಮದಗ್ನಿಸೂನು, ಲೋಕಂ ನಿನ್ನಿಂದಮಾವಗಂ
ನಿರ್ವಿಘ್ನಮಕ್ಕೆಂದು ಪರಸಿ. ಸುಡಲೆಂದು ಕಿಡಿ ತಾಂ
ಬರಲೊಡಂ, ಪಿಡಿಯಲದೆ ಮಾಣಿಕಮಾಗಿ, ಬಡತನಂ
ಪೋಪಂತೆ ಪೋದನಾ ಪರಶುರಾಮಂ. ದಶರಥಂ
ಪಿರಿಯ ಮಗನಂ ತಬ್ಬಿ ಮೂಸಿದನು ಮಂಡೆಯಂ,
ಬಗೆಯಲಂಪಿಂಗೆ ಕಣ್ ತೊಯ್ವಿನಂ. ಒಸಗೆ ನಡೆದುದು  ೬೮೦
ಮುಂದೆ ಸಾಕೇತಪುರಕಾಗಿ. ಪನ್ನೀರಿರ್ಪಿನಿಂ
ತಣ್ಣಸಂಬಡೆದಿರ್ದು ನಲ್‌ಗಂಪುವೆತ್ತಲರ
ಹರಹಿಂದೆ ಮೇಣ್ ತೋರಣ ಪಸುರ್ಪಿಂದೆ ಸಿಂಗರಂ
ಬಡೆದಿರ್ದ ಬೀದಿಗಳಲೆಲ್ಲೆಲ್ಲಿಯುಂ ಕಿಕ್ಕಿರಿದ
ಮಂದಿ, ಬದ್ದವಣದಿಂ ಮೇಣ್ ಸುಸ್ವರಸ್ವಾಗತದ
ಸಂಗೀತದಿಂ, ವಧೂವರರನಿದಿರ್ಗೊಂಡುದಯ್,
ಶಶಿಯುದಯಸಮಯಾಬ್ಧಿ ವಾಹಿನಿಯನಾಲಿಂಗಿಪೋಲ್.
******

24 ಮೇ 2018

ಶ್ರೀರಾಮಾಯಣ ದರ್ಶನಂ: ಲಂಕಾ ಸಂಪುಟಂ: ಸಂಚಿಕೆ 14 - ಅದ್ವಿತೀಯಮಾ ದ್ವಿತೀಯಂ ದಿನಂ


ಅದ್ವಿತೀಯಮೆನೆ ಮೂಡಿತಾ ದ್ವಿತೀಯಂ ದಿನಂ:
ಪ್ರಾಣಮಂ ಪೀರ್ವ ಘೋರಾಶೀವಿಷಾಸ್ತ್ರಮಂ
ಗೆಲ್ದು ಮೇಲೆಳ್ದ ವಾನರ ಸಿಂಹನಾದಂಗಳಂ
ಕೇಳುತಾಶ್ವರ್ಯದಿಂ ರೋಷದಿಂ ರಾವಣಂ
ಮಿಳ್ತುನೇಮವನಿತ್ತು ಕಳುಹಿದನು ತನ್ನಾಯ್ದ
ಕಟ್ಟಾಳ್ಗಳೊಡೆಯರ್ಕಳಂ, ಕದನಯಜ್ಞಕ್ಕೆ.
ಅದ್ವಿತೀಯಮೆನೆ ಮೂಡಿತಾ ದ್ವಿತೀಯಂ ದಿನಂ!
ಲಂಕೇಶ್ವರನ ಭೀಷಣಾಜ್ಞಾಕಿರೀಟಮಂ
ಪೊತ್ತ ಭಾರಕೆ ಮತ್ತ ಬಿಂಕಕೆ ಪಿಂಗಿ ಪೊಂಗಿ
ತನ್ನ ಪೆರ್ಪಡೆಯೊಡನೆ ಧೂಮ್ರಾಕ್ಷರಾಕ್ಷಸಂ ೧೦
ಬಂದು ಬಿದ್ದನು ಶತಬಲಿಯ ಮೇಲೆ, ಕಾಳ್ಕೋಣಗಳ್
ಪೇರಾನೆವಿಂಡಂ ಕೆಣಕುವಂತೆ. ಹೊತರೆಯ
ಬೆಟ್ಟನೆತ್ತಿಯ ಕಲ್ಲರೆಯ ಮೊರಡುಗೋಡಂತೆ
ಭೀಮತನು; ಕಾಡನಂಡಲೆವ ಬಿರುಗಾಳಿಯೋಲ್
ಭೀಮಕಲಿ; ತಟಮಂ ಕೊರೆದು, ತರುಗಳನುರಳ್ಳಿ,
ತಿಳಿಯಂ ಕದಡಿ ಕೊಚ್ಚಿ, ಪರಿವ ಮುಘಾರ್ವೋನಲ
ಪೊಳೆಯಂತೆವೋಲ್ ಭೀಮ ಕರ್ಮಿ; ಆ ದೈತ್ಯನಂ
ತಾಗಿ ಹೊದಕುಳಿಗೊಂಡು ಬೇಗುದಿದುದೈ ವ್ಯೋಮ
ಗಾಮಿಗಳ ಮೇಣ್ ಕಾಮರೂಪಿಗಳ ಶತಬಲಿಯ
ಭೀಮಸೇನಾಬ್ಧಿ. ಪಡೆ ಮಡಿದುದಂ , ೨೦
ಸೋಲ್ತುದಂ ಕಾಣುತಾ ಸೇನಾನಿ ಶತಬಲಿಯೆ
ಮಾರಾಂತನಸುರವೀರಂಗೆ. ಮರುಕೊಳಿಸಿ ಧೈರ್ಯಂ,
ಮುತ್ತಿದುದು ಮತ್ತೆ ಕಪಿಸೇನೆ ದಶದಿಶೆಗಳಿಂ
ಸ್ಧೂಮ್ರಾಕ್ಷನ ವರೂಥಮಂ. ಕಿತ್ತ ಮರಗಳಿಂ
ಬೀಸಿ ಬಡಿದರು ಮುರಿಯೆ ತೇರ್ಗಾಲಿ. ಗಿರಿಗಳಿಂ
ಬಂಡೆಗುಂಡರೆಗಳಂ ಪೊತ್ತಿತ್ತಿ, ಬಾನ್ಗೇರಿ,
ಗುರಿಬಿಡಲ್ ಸತ್ತುವು ರಧಾಶ್ವಗಳ್, ಬೆನ್ನ್ಮುರಿದು,
ನೆತ್ತಿಯ ಪಿಸುಳ್ದು . ತೇರುಡಿಯೆ ರಿಪುಬೃಹದ್‌ವಪು
ವರೂಥದಿಂ ದಿಮ್ಮನೆಯೆ ಧುಮ್ಮಿಕಿದುದು ನೆಲಕೆ,
ದಿಗ್ಗಜಕೆ ಬೆನ್ ಜಗ್ಗೆನಲ್ ! ಪೇಳ್ವುದೇನಾ ೩೦
ಮಹದ್‌ದೃಶ್ಯಮಂ? ನೋಡಿದುದು ನಿಬ್ಬೆರಗುವೋಗಿ
ರಾಕ್ಷಸ ಭಯಂಕರಾಕಾಮಂ ಕಪಿಧ್ವಜಿನಿ:
ಹೆಗ್ಗಂಟೆಗಳ ಹಂತಿ ತೂಗಿದೊಡ್ಯಾಣಮಂ
ಸುತ್ತಿರ್ದ ಸೊಂಟದಿಂ ಜೋಲ್ದುದು ಮಹಾಭೀಳ
ನಗ್ನಖಡ್ಗಂ. ಕಣೆಹಂದಿಗಳ ಗೊಂಚಲೆಂಬಂತೆ
ನೇಲ್ದುವೈ ಮುದ್ಗರಂಗಳ ಗೋಷ್ಠಿ. ತಿಮಿರದ
ತಿಮಿಂಗಿಲದ ಖರ್ಷರೋಪಮ ಚರ್ಮಮಂ ಕೊರೆದು
ಸಮೆದುದೆನೆ, ಮೆರದುದೆಡಗೈ ರೌದ್ರಮುಷ್ಠಿಯಲಿ
ಖಡುಗಮಿಗದೊಗಲಿನ ಕರಿಗುರಾಣಿ. ‘ಪರಿಘಮುಖಿ’
ಬಲ್ಗದೆಯದೊಂದು, ಬಲಗೈಯ ಭೈರವನೆನಲ್, ೪೦
ತೂಗಿ ತೊನೆದುದು ತನ್ನ ಫಣಿಯ ಪೊದೆಯಂತಿರ್ದ
ಪೆರ್ಮಂಡೆಯಂ. ನೋಡಿತಯ್ ನಿಬ್ಬೆರಗು ಬಡಿದು
ಧೂಮ್ರಾಕ್ಷನುಗ್ರವಿಗ್ರಹವನಾ ಸುಗ್ರೀವ
ಸೇನಾಸಮಗ್ರಂ!
ಬಳ್ಳಿಯ ಮಿಂಚು ಬಲ್‌ಮೆಯ್ಯ
ಮೋಡದೊಳ್ ಸಂಚರಿಸದಂ ಸುತ್ತುವರಿವವೊಲ್
ಚಲಿಸಿ ಶತಬಲಿ ತವಿಸಿದನು ರಾಕ್ಷಸಸ್ಥೂಲ
ಸಾಮರ್ಥ್ಯಮಂ. ರಕ್ಕಸನ ಗದೆಗೆ ರಕ್ಕಸನ
ತನುವೆ ಗುರಿಯಾಯ್ತು; ಖಡುಗಂ ತೊಯ್ದುದಾತನದೆ
ರುಧಿರದಿಂ; ರಕ್ಕಸನ ಮುದ್ಗರಂಗಳ ಹತಿಗೆ
ರಕ್ಕಸನ ಸೇನೆಯಾಹುತಿಯಾಯು. ಹರೆಗಡಿದ ೫೦
ಹೆಮ್ಮರಂ ಬುಡಗಡಿಯೆ ಬೀಳ್ವವೋಲುರುಳಲಾ
ಧೂಮ್ರಾಕ್ಷ ದೈತ್ಯಕಾಯಂ ಪೆಡಂಮೆಟ್ಟಿತಯ್
ಗಾಯಗೊಂಡಳಿದುಳಿದಸುರಸೇನೆ.
ಅತ್ತಲಾ
ದಕ್ಷಿಣದ್ವಾರದೊಳ್ ಮೇಲ್ವಾಯ್ದ ವಜ್ರದಂಷ್ಟ್ರನ
ಪಡೆಗೆ ನಡೆದತ್ತಿದಿರ್ ವಾಲಿಪುತ್ರನ ದಳಂ,
ಕಾಳ್ಗಿರ್ಚ್ಛೆಗಿದರ್ ನಡೆವ ಮತೊಂದು ಪೆರ್ಚುಗೆಯ
ಕಾಳ್ಗಿರ್ಚ್ಚೆನಲ್. ಕೂಡೆ ಪೊತ್ತಿದುದು ಧಗಧಗಿಸಿ
ಸಮರಾಧ್ವರಾಗ್ನಿ. ಬೇಳ್ದತ್ತಿರ್ಕಡೆಯ ಸೈನಿಕಂ.
ಕಾಣುತ್ತದಂ ಮುನ್ನುಗ್ಗಿದನು ವಜ್ರದಂಷ್ಟ್ರಂ
ತ್ರಿಶೂಲಾಂಕುಶದಿ ತನ್ನಡರ್ದ ಮತ್ತೇಭಮಂ ೬೦
ತಿವಿತಿವಿದರಿಯ ಮೇಲೆ. ಪಡುಮಲೆಯ ಮುಡಿಯೇರಿ
ಮುಂಗಾರ್ ಗುಡುಗಿ ಮುಂಬಾಯ್ವವೋಲ್ ಬಂದವನ
ಬಿರುಬಿಗಾರದೆಯೆ ತತ್ತರಿಸಿದತ್ತಂಗದನ
ಪಡೆಯಡವಿ. ಕಿಡಿಗರೆವ ತನ್ನ ಕರಚಕ್ರಮಂ
ಗಿರ್ರನೆ ತಿರುಗಿಸುತ್ತಾ ಕರ್ಬುರಂ ಕೆಯ್‌ಗೊಯ್ವ
ಪೇರೊಕ್ಕಲಿಗನಂತೆ ತರಿದೊಟ್ಟಿದನು ಬಣಬೆಯಂ
ಹಗೆಯ ತಲೆಮೆದೆಗಳಿಂ. ಹೆದರಿ ಹಿಂಜರಿದುದೈ
ಹರಿವಾಹಿನಿ! ಕಂಡದಂ ಕೋಧತಾಮ್ರಾಕ್ಷನಾ
ಕಪಿಯೂಧಪಂ ವಾಲಿಸೂನು ದೃಢಗಮನದಿಂ
ಮುಂಬರಿದನರಿಯ ಸರಿಸಕೆ ಕರಿಕರೋಪಮ ೭೦
ಹಸ್ತದೊಳ್ ಪಿಡಿದೆತುತೊಂದುಗ್ರಮಂ, ಬೃಹದ್
ಗಾತ್ರಮಂ, ರೌದ್ರರೋಚಿಯ ನಿಶಿತ ಪರಶುವಂ,
ಸುಘೋರಮಂ.
ಪಡುಮಲೆಯ ಕಾಡೊಳೊಂಟಿಗ ಪಂದಿ
ಮಲೆವುದೆಂಟುಟೊ ತನ್ನನಡಹಾಯ್ದ ಪೆರ್ಬ್ಬುಲಿಗೆ,
ಸೆಡೆತನಂತುಟೆ ವಜ್ರದಂಷ್ಟ್ರಂ ಪುರಂದರ
ಸುತನ ಸುತಗೆ ಹೂಂಕರಿಸಿದನ್, ದಾಡೆಗಡಿದನ್,
ಕೆಂಗಣ್ಗಳಿಂ ನೋಡಿದನ್ ತನ್ನನೆವೆಯಿಡದೆ
ನೋಳ್ಪಾತನಂ ; ನವಿರ್ ನಿಮಿರಿದನ್, ಸುಯ್ಸುಯ್ದು
ಕೋರೆಗಳಿನಿರಿವಂತೆ ದಂಷ್ಟ್ರಮಯ ಚಕ್ರದಿಂ
ಘರ್ಘರ ಧ್ವನಿ ಪೊಣ್ಮೆ ಬೀಸಿ ಪೊಯ್ದನ್, ಬರ್ಪ ೮೦
ಚಕ್ರಯುಧಕೆ ತನ್ನ ಕೈಯ ಖರ್ಪರವೊಡ್ಡಿ
ಬಲ್ಗೊಡಲಿಯಿಂದಿಟ್ಟನಂಗದನಿಭದ ಮೂರ್ಧ್ನಿ
ಬಿರಿದು ಮಿದುಳಂ ವಾಂತಿಗೈವಂತೆ . ತತ್ತರಿಸಿ,
ಕೋಡೊತ್ತಿ. ಮಗ್ಗುಲಿಕ್ಕಿತು ಮತ್ತವಾರಣಂ.
ನೆಗೆದು ಚಂಗನೆ ನೆಲಕೆ, ಕಂಗನೆ ಕನಲಿ, ಕಯ್ಗೆ
ಸಿಲ್ಕಿದ ಕೈದುವಂ, ಮುಸಲಮಂ, ತುಡುಕಿಪಿಡಿದು,
ಮೇಲ್ವಾಯ್ವ ರಾಕ್ಷಸನ ತಲೆಗೆ ಕಲಿ ವಾನರಂ
ಗುರಿವೀಸಲೊಡನೆ ತೊಪ್ಪನೆ ತೊಯ್ದು ಕೆಂಪಾಯ್ತು
ರಾಕ್ಷಸ ರುಧಿರಸಿಕ್ತಮಾ ಸಿತ ಪರಶು ಜಿಹ್ವೆ.
ಚಿಪ್ಪಿಡೆದುದಸುರ ಮಂಡೆಗೆ; ಭಯಂಕರಮಾಗೆ ೯೦
ಕಣ್ ಬಸಿದುದಂತಸ್ಥಮಂ ; ಬಿದ್ದನವನಿಗೆ
ನಿಶಾಚರಂ; ಕೂಡೆ ಬಿದ್ದುದು ಧೈರ್ಯಮಸುರರಿಗೆ;
ಹಗೆಯ ಹಳು ಬಯಲೇಳೆ ನುಗ್ಗಿ ಸವರಿದನಂಗದಂ;
ಪೌರುಷಾತಪಕೆ ಕುದಿಕುದಿದಾವಿಯಾದುದೆನೆ,
ಮುಗಿಲವೊಲ್ ಸಗ್ಗಕ್ಕೇರ್ದುದು ಶತ್ರು ಜೀವನಂ!
ಅತ್ತಲುತ್ತರದಲ್ಲಿ ಕೋಂಟೆಯ ದಿಡ್ದಿವಾಗಿಲಂ,
ಕರ್ಬ್ಬುನದ ಚಪ್ಪಡಿಗಳಿಂದೆ ಕೈಗೈದುದಂ.
ರಾಕ್ಷಸಕುಲದ ರಾಕ್ಷಸಬಲದ ಕಟ್ಟಾಳುಗಳ್
ತೆರೆದರಯ್, ನೂರ್ವರ್, ಪೊಣ್ಮಲ್ ಮಹಾಸ್ವನಂ
ಚಕಿತಗೊಳ್ವಂತೆವೋಲ್ ಕಪಿಚಮೂ. ಬೀಸಿದರ್ ೧೦೦
ಸೇತುವಂ ಕಂದಕಕೆ, ಯಂತ್ರಕರ್ಮಂಗಳಿಂ
ಪೆಣೆದ ದಿಮ್ಮಿಯ ಸಂಕ ಸಾಲ್ಗಳಿಂ. ನಡೆದುದೈ,
ಭೋರ್ಗರೆದುದೈ, ಪರಿದುದೈ ಪಡೆವೊನಲ್, ಲಂಕಾ
ಸರೋವರಂ ಕೋಡಿದೆಗೆದಂತೆ. ಲಂಕೇಶ್ವರನ
ಮೆಚ್ಚಿನ ಚಮೂಪತಿ ಅಕಂಪನಂ ತಾನಿಂತು
ಸಾಗಿದನು ತನ್ನ ನಚ್ಚಿನ ಪಟುಭಟರ
ವಾಹಿನಿಯೊಡನೆ ವೀರರದೇವ ವಾನರ ನಳನ
ಸೇನಾಸಮುದ್ರ ಸಮ್ಮುಖಕೆ. ಸೇನಾಪತಿಯ
ಕಯ್ಯ ಹೊಂಗೋಲ್ಗುಡಿಯ ಸನ್ನೆಯಾಣತಿಯಂತೆ
ತನ್ನ ದಳಸಹಿತಾ ದರೀಮುಖಂ ಮುನ್ನುಗ್ಗಿದನ್, ೧೧೦
ತಾಗಿದನ್, ತಳ್ಳಿದನ್, ತಡೆದನ್ ಅಕಂಪನನ
ಬಲ್‌ಸೇನೆಯಂ. ಮಸೆದುದು ಗಾಳಿ; ಮುಸುಗಿತು ಧೂಳಿ;
ಅಗುರ್ವಿಸಿತ್ತಯ್ ಕದನ ಕೋಲಾಹಲದ ಕೇಳಿ.
ಕೇಳ್ದುದಲ್ಲದೆ ಕಂಡುದಿಲ್ಲೊಂದುಮಾ ಸಮರ
ಮಂಡಲದ ಭೈರವ ರಣಕ್ರೀಡೆ.
ಪಿಂಗಿದುದು
ನೆತ್ತರ್ಮಳೆಗೆ ರಜಂ; ಕೆಸರೆದ್ದುದೈ ನೆಲಂ;
ಶವಮಯಂ ತಾನಾಯ್ತು ಶಿವಮಯ ವಸುಂಧರೆಯ
ಮೆಯ್. ಕಂಡರಾಶ್ಚರ್ಯಮಂ ಸಕಲಸೈನಿಕರ್
ದರೀಮುಖಾಕಂಪನರ ಕೈದುವಿಲ್ಲದ ಕೈಯ
ಮಹಮದ್‌ಯುದ್ಧಮಂ:
ರಾಕ್ಷಸ ಸದೃಶ ವಾನರಂ ೧೨೦ಪೆಸರಿಂ ಮಾತ್ರಮಲ್ಲದೆಯೆ ದಿಟದಿಂ ದರೀಮುಖಂ!
ಮೇಣಂತೆವೊಲ್, ವಾನರ ಸದೃಶ ರಾಕ್ಷಸಂ
ಪೆಸರಿಂದೆ ಮಾತ್ರಮಲ್ಲಯ್, ದಿಟದಿಂದಕಂಪನಂ!
ಬಾಯ್ದೆರೆದ ಪಾತಾಳದಾಕಳಿಕೆಯೆಂಬವೋಲ್
ದರಿಭಯಂಕರಮಾಗಿ ನಿಂದನ್ ದರೀಮುಖಂ!
ಆಕಾಶದೆತ್ತರಕೆ ಶಿಖರಮೆತ್ತಿರ್ದವೋಲ್
ಗಿರಿಭಯಂಕರಮಾಗಿ ನಿಂದನ್ ಅಕಂಪನಂ!
ಆನೆ ಸೊಂಡಿಲ ತೂಗುವಂದದಿ ತೂಗಿದರ್
ತೋಳ್ಗಳಂ. ಸಿಂಹ ಸಿಂಹವ ಕೆಣಕುವಂದದಿ
ಕೆಣಕಿದರ್ ಕಣ್ಗಳಿಂ. ಪುಲಿ ಪುಲಿಗೆ ಮಲೆವಂತೆ, ೧೩೦
ಫಣಿ ಫಣಿಗೆ ಸುಯ್ವಂತೆ, ಸುಯ್‌ಸುಯ್ದು, ಮಲೆಮಲೆತು,
ಗೂಳಿಸೆಣಸಿದನಿರ್ವನೊರ್ವಂಗೆ. ತೆಕ್ಕನೆಯೆ
ಕಂಡರೆಲ್ಲರ್ ಗಿರಿ ಬಿದ್ದುದಂ ದರಿಗೆ ! ನೋಡಿದರ್,
ಓಡಿದರ್ ಮೈಂದದ್ವಿವಿದ ನಳರ್ ನೆರವೀಯೆ
ತಮ್ಮವಗೆ. ನಗುತಿರ್ದ್ದನಾ ಮಲ್ಲಗಾಳೆಗದ
ಕೋವಿದಂ, ಬಿದ್ದಂತೆ ನಟಿಸುತರಿಭಾಟನ ಕೀಲ್
ಮುರಿದು ಕೊಂದೆದ್ದಾ ದರೀಮುಖಂ!
ಅಕಂಪನಂ
ಪಡೆವೆರಸಿ ಮಡಿದುದಂ ಕೇಳ್ದು ದೈತ್ಯೇಂದ್ರಂ
ಪ್ರಹಸ್ತನಂ, ರಾಕ್ಷಸ ಸಮಸ್ತ ಸೇನಾಧ್ಯಕ್ಷನಂ,
ಬಳಿಯಟ್ಟಿ ಬರಿಸಿ ಬೆಸಸಿದನಿನಿತು ಖಿನ್ನಂ ೧೪೦
ತನ್ನಮರ್ಷಮಯ ವಿಮರ್ಶೆಯಂ :
ನಾನೇಗಳುಂ
ಪಗೆಬಲ್ಮೆಯಂ ಕಿರಿದು ಭಾವಿಸಿದೆನಿಲ್ಲದೊಡಂ,
ಕೇಳ್ ಪರಮಸೇನಾನಿ, ವನಚರರ ಮೇಣ್ ನರರ
ಸಮರ ಸಾಮರ್ಥ್ಯಮಿನಿತಧಿಕಮಾದುವೆ ದಿಟಂ
ಸೋಜಿಗಂ! ಬಿದ್ದುದಯ್ ಮೊದಲ ದಿನದಾಜಿಯೊಳೆ
ನಮ್ಮ ಸೈನ್ಯದೊಳೇಳು ಗುಲ್ಮಂಗಳಿಗೆ ಮಿಗಿಲ್
ತುಳಿಲಾಲ್‌ಬಲಂ. ಶಕ್ರಸೇನೆಯಂ ತನ್ನತುಳ
ವಿಕ್ರಮದಿ ಬಿರುಗಾಳಿಯಿದಿರ ತರಗೆಲೆಗೆಯ್ದ
ಮೇಘನಾದನ ಮಾಯೆಯುಂ ಮೋಘಮಾದುದೆನೆ
ಏನನೆಂಬೆನು ನಮ್ಮ ದುರ್ವಿಧಿಗೆ? ಎರಡನೆಯ ೧೫೦
ದಿನದಿಂದಿನೀ ರಣದ ಕಥೆಯುಂ ವ್ಯಥೆಯನೇ
ತಂದೊಡ್ಡುತಿದೆ. ವಜ್ರದಂಷ್ಟ್ರ ಧೂಮ್ರಾಕ್ಷರ್,
ಮಹಾಕಲಿ ಅಕಂಪನಂ, ಯುದ್ಧವಿದ್ಯಾ ಪರಮ
ಪಾರಂಗತರ್. ಕಳೆದುಕೊಂಡುದವರಂ ನಮ್ಮ
ಪಕ್ಷಂ, ವಿಹಂಗಮಂ ಕಳೆದುಕೊಳ್ವಂತೆವೋಲ್
ಪಕ್ಷಂಗಳಂ, ಪಗಲ್‌ನೆತ್ತಿಯೊಳಿರ್ಪುದಿನ್ನುಮ್;
ರಣವಿಶಾರದ, ಬೈಗು ಪಡುವಣ ಮಲೆಯ ತಲೆಗೆ
ತೆಂಗದಿರನಂ ಮುಡಿಯ ಮಣಿ ಮಾಡುವನಿತರೊಳ್
ನೂಂಕವೇಳ್ಕುಂ, ಕೇಳ್, ಕಪಿಧ್ವಜಿನಿಯಂ ಈ
ತ್ರಿಕೂಟಾಚಲದ ಸಾನುವಿಂದಾ ಸುವೇಲಾದ್ರಿ ೧೬೦
ಕಂದರದ ನರಕನಿಮ್ನತೆಗೆ!”
ರಣಪಂಡಿತಂ
ರಾಜಾಜ್ಞೆಗೂ ಪ್ರಹಸ್ತಂ, ಸರ್ವರಾಕ್ಷಸ
ಪ್ರಮುಖಸೇನಾನಿ ನಸು ಕುಗ್ಗಿದನ್, ಬಾಗಿದನ್,
ಕೈಮುಗಿದು ಬಿನ್ನಯ್ಸಿದನ್ ರಾಜರಾಜೇಶ
ಮಕುಟಂಗಳಡಿಸೋಂಕುವಾತಂಗೆ :
ರಾಜೇಂದ್ರ,
ಕಲಿಗೆ ಸಂಗ್ರಾಮಮಿರ್ಪುದು ಕಲಾನಿಪುಣಂಗೆ
ಸಂಗೀತದಂತೆವೋಲವರೋಹಣಂ ಪ್ರಿಯಂ,
ಮೇಣಂತೆ ಮಧುರಮಾರೋಹಣಂ! ಕೇಳೊಂದೆರಳ್
ಕದನಮಂ ಗೆಲ್ದ ಮಾತ್ರದಿ ಪೂರ್ಣಯುದ್ಧಮಂ
ಗೆಲ್ವರೇನ್? ಸೈನಿಕವರೇಣ್ಯರಂ, ಪಟುಭಟ ೧೭೦
ವರಿಷ್ಠರಂ, ಅತಿರಥ ಮಹಾರಥ ಶ್ರೇಷ್ಠರಂ
ವೆರಸಿ ನಾನೆಯೆ ರಣಾಧ್ವರದ ದೀಕ್ಷೆಯನಿಂದು
ಕೈಕೊಂಡಪೆನ್. ಸೂರ್ಯನಸ್ತಾಚಲಕೆ ನಡೆವ
ಮುನ್ನಮೆ ವನೇಚರ ಚಮೂ ಸಮಸ್ತಂಗಳಂ
ನಿನ್ನಾಜ್ಞೆಯಂತೆಳ್ಚುವೆನ್ ಸುವೇಲಾಚಲದ
ಕಂದಕಕೆ. ಕೇಳೆನ್ನ ಪೂಣ್ಕೆಯನ್ : ಯುದ್ಧಮಂ
ಗೆಲ್ದು ಬಹೆನಲ್ಲದಿರೆ ಬೆಳ್ವೆಯಾದಪೆನಿಂದು
ರಣ ಹುತವಹಂಗೆ!”
ವೀರೋಚಿತಂ ಕೃಪೆಯಿಂ
ಕಟಾಕ್ಷಿಸುತೆ, ಮನ್ನಣೆಯ ಮಾಡುತುಡುಗೊರೆಗಳಂ
ನೀಡಿ, ಕಳುಹಿಸಿದನು ರಾವಣನಸುರಸೇನಾನಿಯಂ ೧೮೦
ಮರಣನಟ ನಾಟಕ ರಣಕ್ರಿಯೆಗೆ, ಪ್ರಭುವಿಂದೆ
ಸನ್ಮಾನಮಂ ಪಡೆದ ಉತ್ತೇಜನಕೆ ಉರ್ಬ್ಬಿ,
ಪೊದೆಯ ಪುರ್ಬ್ಬಿನ ಪುರಿಯ ಮೀಸೆಯ ರಣಾವೇಶಿ
ಆ ಪ್ರಹಸ್ತಂ ಬೆಸನನಟ್ಟಿದನು ದಳದಳಕೆ,
ಮೊನೆಯ ಕೆನೆಗೆಣೆಯ ಕಡುಗಲಿಗಳಂ ಕೂಡಿ
ನುಗ್ಗಲಂದಿನ ಸಗ್ಗಸಂಗರಕೆ. ನೆರೆದುದಾಳ್;
ನೆರದುದಶ್ವಂ; ನೆರೆದುದುರಥಂ; ನೆರೆದುದಾನೆ;
ನೆರದುದು ತಿಗ್ಮ ನಾನಾಯುಧದ ಪಂಕ್ತಿ. ನೆರೆದುದೂರ್,
ನೋಟದೌತಣಕೆ, ಮೇಣ್, ಪಣ್ಣಿದುದು ಪೊಂದೇರ್,
ಮಹೋನ್ನತಂ, ಗಿರಿಚೂಡಭವ್ಯಂ, ವಸಂತವನ ೧೯೦
ಚೂತತರು ಚಾರು ಹರನ ಕೊರಳಿನ ಗರಳಮಂ
ಕರ್ದ್ದಿಂಗಳೊಂದು ಕರ್ಪಿಗೆ ಹೆಪ್ಪೆರದು ಕಡೆದು
ಪಡೆದವೆನೆ, ಪೊಳೆದುವಾ ತೇರ್ನೊಗಕೆ ಪೆಗಲಾಂತ
ಮಿಂಚುಗಪ್ಪಿನ ಮಹಾತೇಜಿಗಳ್. ಮಿಳಿರ್ದತ್ತು
ಮಧ್ಯಾಹ್ನ ಮಿಹಿರ ಛವಿಯಲಿ, ಮಹಿಯ ರವಿಯೆನೆ,
ಮಿಸುನಿ ಸೂತ್ರದಿ ನೆಯ್ದ ಧೋತ್ರದಹಿಕೇತನಂ
ಸ್ಯಂದನಾಗ್ರದಲಿ. ರಥಮಂ ಪ್ರದಕ್ಷಿಣಂಗೆಯ್ದ,
ಬಾನ್ಗೇರಿ ಪರಿಮಳದ ಧೂಮಗಳ್, ಭೋರ್ಗರೆಯೆ
ರಣಭೇರಿ ದುಂದುಭಿ ನಿನಾದಗಳ್, ಗೆಲ್ಲುಲಿಯೆ
ಜನತುಮುಲ ಜಯಘೋಷಗಳ್ ದೈತ್ಯಸೇನಾನಿ ೨೦೦
ತೇರೇರಿದನು ಮಿಳ್ತುಕೂರೊಸಗೆ ದಿಬ್ಬಣದ
ರಣಕೆ. ರಾಹುರೋಷಂ ಶೊಣಿತಾಕ್ಷಾದಿಗಳ್;
ನರಾಂತಕ, ಸಮುನ್ನತ, ಮಹಾನಾದನಾ ಕುಂಭಹನು,
ಸುಪ್ತಘ್ನ, ಮಕರಾಕ್ಷ, ದುರ್ಮುಖ, ಮಹೋದರರ್;
ಸಾಲ್‌ನಡೆದರಿತರ ದಳನಾಯಕರವನ ಹಿಂದೆ,
ಯಮಭೀಕರಂ.
ದೆಸೆದೆಸೆಗೆ ದಳದೊಡೆಯರಂ ನಿಲ್ಲಿಸಿ,
ಕಲಿಸಿ, ಸಮರವ್ಯೂಹಮಂ ಬಲಿಸಿ, ತಾಂ ಸ್ವಯಂ
ವಾನರರಖಿಲ ಮಹಾ ಸೇನಾನಿ, ಅಗ್ನಿಜಂ,
ನೀಲನಿರ್ದಾ ದುರ್ಗಮದ ವಜ್ರಧರ ದಿಶೆಗೆ
ದುರ್ಗಪೂರ್ವದ್ವಾರದಿಂ ಪಾಯ್ದನಾ ಪ್ರಹಸ್ತಂ, ೨೧೦
ದಾನವ ಧನುರ್ಧರರ ದಿಗಿಭಧೀರಂ! ಏರ್ದು
ಕೋಂಟೆಯೆಳ್ತರದೊಂದು ಕೊತ್ತಳಕೆ, ನೆತ್ತಿಯಿಂ
ನೋಡುತಿರ್ದನು ಕಲಿ ಕುತೂಹಲಿ ದಶಾನನಂ
ಬಿತ್ತರದ ಲಂಕೆಯಂ ಬಳಸಿ ಭೋರಿಡುತಿರ್ದ್ದ
ವಾನರರ ರಾಕ್ಷಸರ ಸೇನೆಗಳ ಸಾಗರದ
ಸಂಘಟ್ಟಣೆಯ ಸಂಚಲನ ವಲನ ವೈಖರಿಯ
ವಿನ್ಯಾಸಮಂ. ಶುಕಂ ಸಾರಣಂವೆರಸಿ ಬಳಿಯೋಳ್
ನಿಂದು ಬಣ್ಣಿಸುತಿರಲ್ ಪರಿಚಯದ ರಿಪುದಳದ
ವೀರರ್ಕಳಂ, ಕಿವಿಗೆ ಬಂದುದು ಭಯಂಕರದ
ಕೋಲಾಹಲಂ; ಕಂಡುದೊಡನೆಯೆ, ತರಂಗಗಳ್ ೨೨೦
ಮಸೆದ ಕಡಲಿಗೆ ಮಗುಚುವೋಲ್, ಚಮೂಚಲನಗಳ್,
ತೆರೆಗೆ ತೆರೆ ಮಲೆತವ್ವಳಿಪ ಭೀಮಶೈಲಿಯ
ಬೃಹಚ್ಛಂದದಿಂ. ಸ್ಪರ್ಧಿಸಿದುವೊಡನೆ ಧೂಳ್ಮುಗಿಲ್
ಮೇಲ್ ನೆಗೆವ ನಾದಸಿಂಹಂಗಳಂ. ಮಹೋಗ್ರಮಾ
ತೊಡಗಿದುದು ಸಂಗ್ರಾಮ ಮಂದರ ಮಥನಕಾರ್ಯಂ!
ಕೆಲವೊಳ್ತನಂತರಂ ಕುದಿಬಗೆಯ ರಾವಣಣ
ಬೆಸಸಿದನು ಕರೆದು ಬಳಿಯಿರ್ದ ವೇಗಾಯ್ನನಂ;
ಓಡು, ಸಾರಣ, ನೋಡಿ ಬಂದೊರೆ ರಣಸ್ಥಿತಿಯ
ನಾಡಿಯಂ. ಮುಸುಗಿತು ರಜೋಮೇಘಮಿರ್ಬ್ಬನಿಯ
ಮಂಜಿನೋಲ್. ಕೋಲಾಹಲಂ ಕೇಳ್ವುದಾಹವಂ ೨೩೦
ಕಾಣದಿನಿತುಂ.” ಮೂಡಿದುವು ರೆಂಕೆ ಸಾರಣನ
ಭುಜಕೆ; ಕೊಡೆಗೆದರಿ ಹಾರುತ್ತಿಳಿದನಾ ಕದನ
ಮೇದಿನಿಗೆ. ತುಸುವೊಳ್ತನಂತರಂ, ಸಾರಣಂ
ಬಾರದಿಹ ಕಾರಣವನರಿಯಲ್ಕೆ ಕಾತರಿಸಿ
ದಶಶಿರಂ “ನಡೆ ನೀನ್, ಶುಕ, ತಳುವಿದನ್ ಸಾರಣಂ.
ತವಕದಿಂ ತಾ ಸಮರವಾರ್ತೆಯಂ.” ಶುಕನತ್ತ
ಮರೆಯಾಗಲಿತ್ತಲಸುರೇಶ್ವರಂ ಕೊತ್ತಳದ
ನೆತ್ತಿಯಂ ಶತಪಥಂ ತುಳಿಯುತ್ತಲೀಕ್ಷಿಸಿರೆ
ಗಾಳಿವಟ್ಟೆಯ ತುಂಬಿ ಬಾನ್ ಮುಟ್ಟಲೇರಿರ್ದ
ರಣರಜೋವಿಸ್ತೀರ್ಣಮಂ ಮೇಣ್ ಕ್ಷಣಕ್ಷಣಕೆ ೨೪೦
ಬಿತ್ತರಂಗೊಂಡು ವಾರ್ಧಿಯ ಮೇಲೆ ಗಡಿಯಾಗೆ
ವರ್ಧಿಸುತ್ತಿರ್ದದರ ಮೇರೆಯಂ, ದೂತನೊರ್ವನ್
ಬಂದು, ಕಯ್ಮುಗಿದು, ರಾಣಿಯ ಕರೆಯನರುಹಿದನ್
ಶೃಂಗಾರ ವಿನಯಶಾಲಿಗೆ, ಮಯತನೂಜೆಯ
ಮನೋವಲ್ಲಭಂಗೆ. ಕರೆಗಿನಿತು ಮೊಗಗುಂದಿದನ್;
ನೋಡಿದನು ರಣಮಹಿಯ ಕಡೆಗೆ. ಕೊತ್ತಳವಿಳಿದು
ಕಿಂಕರ್ ಬಳಸಿಬರೆ ನಡೆದನರಮನೆಗಾಗಿ,
ಹಸಿದುಮಿರ್ಕಗೆ ನಡೆವ ಹಸಿಗಾಯದೆಕ್ಕಲನವೋಲ್.
ಹೊಮ್ಮಣೆಯ ಮೇಲೆ ಹೊಂದಳಿಗೆಯಲಿ ಕಮ್ಮನೆಯ
ರಾಜಭೋಜನವಿರಲದಂ ಯಂತ್ರಕರ್ಮವೆನೆ ೨೫೦
ಕೆಮ್ಮನೆಯೆ ಕಬಳಿಸುತ್ತಿರ್ದ ಚಿಂತಾ ಮಗ್ನನಂ
ಸೋದ್ವಿಗ್ನನಂ ಕಂಡು, ಪತಿಸೇವೆಗನುವಾಗಿ
ಚವರಿ ಬಿಜ್ಜಣವಿಡಿದು ಬಾಗಿರ್ದ ಮಯಕುವರಿ,
ಹೆದರುತಂಜುತೆ ಮೆಲ್ಲನೆಯೆ ಮಾತು ತೆಗೆದಳಾ
ದಿನದ ರಣವಾರ್ತೆಯಂ ಕೇಳ್ವ ನೆವದಿ. ಹೇಳ್ದನತಿ
ಸಂಗ್ರಹದಿ ತಿಳಿದನಿತುಮಂ. ಹೇಳುತಿರೆ ಹಣೆಗೆ
ಬೆವರು ಹನಿಮೂಡಿದುದ ನೋಡಿ ಮಂಡೋದರಿಗೆ
ಸುಯ್‌ವೆರಸಿ ಚಿಮ್ಮಿದುದು ಕಣ್ಣೀರ್. ದುಕೂಲದಿಂ
ವಿಧಿಯ ಲಿಖಿತವನೊರಸಲಾಶಿಸುವಳೆಂಬಂತೆ
ತೂಲ ಮೃದುವೆನಲುಜ್ಜಿದಳ್ ಪತಿ ಲಲಾಟಮಂ, ೨೬೦
ತೊಡೆವವೋಲ್ ಪ್ರತಿಕೂಲಮಂ.
ನನ್ನ ಹಣೆಯಿರಲಿ;
ನಿನ್ನ ಕಣ್ಣೊರಸಿಕೊಳ್, ಲಂಕೇಶ್ವರಿ, ರಣಭೀತಿ
ನಿನಗೇಕೆ? ಇಂದರಾತಿಯನೆಮ್ಮ ದುರ್ಗದಿಂ
ವೇಲಾದ್ರಿಕಂದರಕೆ ನೂಂಕಿ ಬರದಿರದೆಮ್ಮ
ಸೈನ್ಯಂ. ಪ್ರಹಸ್ತಂ ಸಮರ್ಘ ರಣಪಂಡಿತಂ.
ಸಮಸ್ತ ಶಸ್ತ್ರಾಸ್ತ್ರ ಸಂಗ್ರಾಮ ವಿಭುವಾತನಂ
ಕಳಕೆ ಕಳುಹಿದ ಬಳಿಕ, ರಮಣಿ, ನಗೆಗೇಡಲಾ
ರಿಪುಭಯಂ?”
ಆ ಅಳ್ಕು ನನಗಿದುದೆ. ನಿನ್ನ ಕಯ್
ಹಿಡಿದೆನಗೆ?”
ಮತ್ತೇಕೆ ಸುಯ್ವೆ?”
ಇಂದುದಯದೊಳ್
ನೀಂ ರಾಮನರ್ಧಾಂಗಿಯಂ ಕಂಡುದುಂಟೈಸೆ?” ೨೭೦
ಕಂಡುದುಂಟಾ ನಿರಶನ ಕೃಶಾಂಗಿಯಂ.”
ಪಿಂತೆ
ಅಂತೇಗಳುಂ ನೀಂ ಪೋದುದಿಲ್ಲೇಕಾಂತಮಂ
ಬೆಸಸಿ.”
ಅನಲೆಯಿರ್ದಳ್! ಸನಿಹಮಿರ್ದಳ್ ತ್ರಿಜಟೆ?
ಏಕಾಂತಮೇನಲ್ಲಿ? ಪೇಳ್ದೆನಾಕೆಗೆ ಪೋದ
ರಾತ್ರಿಯ ರಣದ ವಿಜಯವಾರ್ತೆಯಂ : ಕಪಿಸೇನೆ
ರಾಮಲಕ್ಷ್ಮಣಸಹಿತ ಮಗನ ಮಾಯೆಗೆ ಸಿಲ್ಕಿ
ಭೂಮಿಗತವಾದುದುಂ. ಮರುಳುನಗೆ ನಕ್ಕಳಾ
ಹೊಟ್ಟೆಗಿಲ್ಲದೆ ಮಿದುಳ್‌ಕದಡಿದಾ ಸಂಭ್ರಾಂತೆ!”
ಪೇಳ್ದಳೆನಗನಲೆ ಬೇರೊಂದು ಕಥೆಯಂ.” ಎಂದಾ
ಮಹೀಯಸಿಯ ಮುಖಭಾವಮಂ ನಿಡಿದು ನಿಟ್ಟಿಸುತೆ ೨೮೦
ತೆರದನೊಯ್ಯನೆ ತನ್ನ ಹೃದಯಮಂ. ಕಲಂಕಿರ್ದ
ಕಾಸಾರಮಾದುದಸುರನ ಮುಖಂ;
ಕಳೆದಿರುಳ್
ಕನಸಾದುದೊಂದೆನಗೆ, ರಾಣಿ, ಕಂಡೆನದರೊಳ್
ಮರಳಿ ಆ ಭೀಕರದ ದೃಶ್ಯಮಂ, ನಿರ್ಭಾಗ್ಯೆ
ವೇದಮತಿ ಚಿತೆಯೇರ್ದುದಂ. ಕಣ್ಣ ಮುಂದುರಿದು
ಭಸ್ಮದವಳಿಮರಾಶಿಯಾದುದಾ ಸುಂದರಿಯ
ತನುರೂಪರಾಶಿ. ನೋಡುತ್ತಿರಲ್ಕಾನದಂ
ತೀಡಿದತ್ತೊಂದು ಮೆಲ್ಲೆಲರೂದಿ ಬೂದಿಯಂ.
ತವಿದ ಮೃತಭಸ್ಮರಾಶಿಯಿನೊಯ್ಯನೊಯ್ಯನೆಯೆ
ಕವಿಕರ್ಮ ರಮಣೀಯಮಮೃತಮೂರ್ತಿಯದೊಂದು ೨೯೦
ಭವಿಸಿದುದು. ಗುರುತಿಸಿದೆನಾ ಮೂರ್ತಿಯಲಿ ಈ
ಮಹಾ ತಪಸ್ವಿನಿ ಸೀತೆಯಂ. ಕಾರಣವನರಿಯೆ;
ನಡುಗಿ ಕಣ್ದೆರೆದೆದ್ದು, ಬೆಮರ್ದ ಮೆಯ್ಯಂ ಕಂಡು,
ನನ್ನೊಳಗೆ ನಾಂ ನಕ್ಕೆನಾ ಸ್ವಪ್ನಚೇಷ್ಟಿತಕೆ!
ಹುಸಿಯ ಕನಸಿನ ಶಂಕೆಯಂ ನಿವಾರಿಸಲೆಂದು
ಹೋಗಿ ಕಂಡೆನು ಜನಕಜಾತೆಯಂ. ಕಂಡಾ
ಕೃಶಾಂಗಿಯಂ ಶಂಕೆ ತೊಲಗಿದುದೆನಗೆ. ಇವಳೆಲ್ಲಿ?
ಅವಳೆಲ್ಲಿ? ಮತಿ ನಿದ್ದೆಗೆಯ್ದಂದು ಮಿದು ಮಿದುಳ್
ಕಡೆದೆಬ್ಬಿಸುವುದೀ ವಿಕಾರಂಗಳಂ!”
ಪ್ರಭೂ,
ಮನದಾಳದಿಂದಾತ್ಮಧರ್ಮಮಿತ್ತೆಳ್ಚರಿಕೆ ತಾಂ ೩೦೦
ಕನಸಿನಂದದಿ ಬಂದುದಲ್ತೆ? ನಿನ್ನಾತ್ಮಮಂ,
ನಿದ್ರೆಯ ಕೃಪೆಯೊಳಹಂಕಾರದಿಂ ಬಿಡುತೆಯಂ
ಪಡೆದ ನಿನ್ನಂತರಾತ್ಮನ ಶುದ್ಧಸಂದೇಶಮಂ.
ದಿಕ್ಕರಿಸದಿರ್ ಕಪಿಸೈನ್ಯಕಲ್ತೆಮ್ಮ ಸೈನ್ಯಂ
ಕ್ಷಯಿಸುತಿರ್ಪುದು ಪತಿವ್ರತೆಯ ದೈನ್ಯಕೆ ಕಣಾ!”
ಎನುತೆ ರಾವಣನ ಕಣ್ ತನ್ನ ಕಣ್ಣಿಗೆ ನಡಲ್
ಮುಂಬರಿದಳಿಂತಾ ಮಹಾರಾಜ್ಞಿ : “ನನಗನಲೆ
ಪೇಳ್ದುದಂ ಪೇಳ್ದಪೆನ್, ನೀಂ ಕಂಡ ಕನಸಿಗಿಂ
ಮಿಗಿಲಪ್ಪುದಂ. ತ್ರಿಜಟೆ ತನ್ನ ಕೈಂಕರ್ಯಮಂ
ಮುಗಿಸಿ ಮಲಗಿದಳಂತೆ. ದೇವಿ ಕಣ್ಮುಚ್ಚದೆಯೆ ೩೧೦
ಭೀಷ್ಮಮೌನವನಾಂತು ತನ್ನೊಳಗೆ ತಾಂ ಪೊಕ್ಕ
ಯೋಗಿನಿಯವೋಲಿರಲ್ ಕಂಡುದನಲೆಯ ಕಣ್ಗೆ
ಪರ್ಣಶಾಲೆಯ ತುಂಬಿದೊಂದನುಪಮಜ್ಯೋತಿ.
ರೋಮಾಂಚ ಕಂಚುಕಿತ ಗಾತ್ರೆ ನೋಡುತ್ತಿರಲ್,
ಬಾಹ್ಯಸಂಜ್ಞಾಶೂನ್ಯೆ ಆ ಸೀತೆ ತೊಡಗಿದಳಾರೊ
ನುಡಿಸಿದವೊಲಾಗಿ ಸಂವಾದಮಂ. ಆ ಪೂಜ್ಯೆ
ಅಲ್ಲಿರ್ದಮೆಲ್ಲೆಲ್ಲಿಯುಂ ಚರಿಸುತಿರ್ದಂತೆ.
ಅಲ್ಲಿರ್ದುಮೆಲ್ಲಮಂ ಕಾಣುತಿರ್ದಂತೆ, ಮೇಣ್
ಅಲ್ಲಿ ತಾಟಸ್ಥ್ಯಮಂ ತಾಳ್ದಳೋಲಿರ್ದೊಡಂ
ದೂರಮಿರ್ದ್ದಿತರರ ಜಗತ್‌ಕ್ರಿಯಾಚಕ್ರಮಂ ೩೨೦
ನಡೆಪವೋಲಾಚರಿಸುತಿರ್ದಳಂ ಕಂಡನಲೆ
ಮೆಯ್ಮರೆತಳಂತೆ ಭಯರಸವಶೆ! ಅನಂತರಂ
ಹದಿಬದೆಯ ಕಯ್ಯ ಸೋಂಕಿಗೆ ಅನಲೆ ಕಣ್ದೆರೆಯೆ,
ರಾಮಸತಿ ‘ಅಭೀತೆಯಾಗೆಲೆ ವತ್ಸೆ, ನೀಂ ಕಂಡ
ದೈವಿಕಕೆ. ನಿನ್ನಯ್ಯನುಪಕೃತಿಗೆ ಬರ್ದುಕಿತೌ
ನನ್ನಯ್ದೆದಾಳಿ. ಕಂಟಕಮೊಂದು ಕಳೆದುದೌ
ಪ್ರಭು ರಾಮಚಂದ್ರಂಗೆ!’ ಎನುತೆ ಸಂತೈಕೆಯಂ
ಪೇಳ್ದ ಪಾವನೆಯ ಪದತಲಕೆ ನಮಿಸಿದಳಂತೆ
ನಮ್ಮನಲೆ!”
ಸತಿಯ ಮಾತಿಗೆ ಸುಯ್ದು ಧಶಶಿರಂ :
ಅನಲೆ! ನಮಗನಲೆಯೆ ದಿಟಂ! ರಾಮ ಪಕ್ಷಕಾ ೩೩೦
ತಂದೆ; ಸೀತೆಯ ಪಕ್ಷಕೀ ಮಗಳ್! ಇರ್ವರುಂ
ದ್ರೋಹಿಗಳ್! ಅಕ್ಕರೆಯೆ ನನಗಿಕ್ಕಿದುರಿಯಾಯ್ತು!
ಬೇಡವೆಂದೆನ್. ಬಿಡದೆ ಬೇಡಿದಳ್; ಕಾಡಿದಳ್.
ನೋಡೊಬರಿವಾಸೆಗಾಣತಿಯಿತ್ತೆನೊಪ್ಪಿದೆನ್;
ಮಾಡಿದಳ್ ಮನೆಯನ್ ಅಶೋಕವನದೊಳ್! ಕಟ್ಟು
ಕತೆಗಳನ್ ಕಟ್ಟಿ, ಕಣ್ಣಾರೆ ಕಂಡುದೆನುತ್ತೆ,
ಮತಿಗೆಟ್ಟು ನಂಬುವಳ್; ನಂಬಿಸುವಳಿತರರಂ;
ಪೆಣ್ಗಳೊಳ್ ಪ್ರಕಟಿಸುವಳಪಧೈರ್ಯಮಂ! ಆ ಅಣುಗಿ
ಬೆಪ್ಪಾಡಿದುದನೆಲ್ಲಮಂ ನೀನುಮೊಪ್ಪಿದೆಯಲಾ,
ಅದೆ ಸೋಜಿಗಂ! ನಿನ್ನೆ ಬದುಕಿದನಲಾ ಶತ್ರು; ೩೪೦
ಇಂದಿನ ರಣದಿ ಕಾಣ್ಬೆ ನಿನ್ನ ತಲೆಗೆಟ್ಟನಲೆಯಾ
ಕಟ್ಟಿರ್ಪ ಕತೆಯ ಪೊಳ್ಳಂ;”
ಬಂದನನಿತರೊಳ್
ಸಾರಣಂ. ರಣವಾರ್ತೆಯಂ ತಂದ ಚಾರನಂ
ತರವೇಳ್ದನುಣುಮನೆಗೆ: “ಬೇಗನೊರೆ ವಾರ್ತೆಯುಂ,
ವೇಗವಾಯ್ಲ.” ಎಂದ ದೈತ್ಯೇಂದ್ರಂಗೆ ಧೂಳಿಡಿದು
ಬೆಮರೆಳ್ದ ಬೇಹಿನಾಳ್, ವದನಮುತ್ಸಾಹಮಂ
ಸೂಸುತಿರೆ, ಕಯ್ಮುಗಿದು ಕಥನಗೈದನು ಕದನ
ವೃತ್ತಾಂತಮಂ: “ಜೀಯ, ತೊತ್ತುವೋದಳು ನಮಗೆ
ಜಯವನಿತೆ! ಹಿಂದುಹಿಂದಕೆ ಸರಿದು ಓಡುತಿದೆ
ಸರ್ವತ್ರಮಾ ರಿಪುವ್ಯೂಹಂ, ಸರೋವರಂ ೩೫೦
ಬೇಸಗೆಯ ಜಳಜಮಿತ್ರನ ಝಳಕೆ ದಡಮಂ
ವಿಸರ್ಜಿಸುವವೋಲ್. ಪೇಳ್ವೆನೇಂ ಪ್ರಹಸ್ತಾಸುರನ
ಶೌರ್ಯರವಿಯಾಟೋಪಮಂ! ಧನುರ್ಧರನಾಗಿ,
ಠಂಕಾರ ನಿರ್ಘೋಷದಿಂ ಭಯಂಕರನಾಗಿ,
ಬಾಣಾಗ್ನಿಯಿಂ ರಿಪುಪ್ರಾಣಕಾನನಕೆ ತಾಂ
ದಾವಾಗ್ನಿಯಾಗಿ ಪೊಕ್ಕನ್ ವಾನರರ ಮಹಾ
ಸೇನಾಧಿಪತಿ ನೀಲನಿರ್ದೆಡೆಗೆ. ಕೊಂದುದು
ನರಾಂತಕನನಾ ದ್ವಿವಿದವಾನರನಿಟ್ಟದೊಂದು ಪೆರ್
ಬಂಡೆಗಲ್. ತಾಗಿದನು ಕುಂಭಹನು ದ್ವಿವಿದನಂ;
ಕೆಡೆದನ್ ವನೇಚರಂ ರಾಕ್ಷಸ ಮುಸಲ ಹತಿಗೆ. ೩೬೦
ಮೈಂದಂ ಸಮುನ್ನತ ಮಹಾನಾದರಿರ್ವರಂ
ತನ್ನುಪಚಮೂಪತಿಗಳಂ ಕಡಿದು ತನ್ನುರುವ
ಕಡಿತಲೆಗ ಬಲಿಗೊಟ್ಟುದಂ ಕಂಡು ನಮ್ಮ ಕಲಿ,
ನಿಮ್ಮಾನೆ, ತೇರ್ವಾಯ್ದನೈ ಪ್ರಹಸ್ತಂ, ಕೊಂದು
ಸಾಸಿರವನಾ ಮೈಂದಸಮ್ಮುಖಕೆ. ವೀರನಾ
ಕಪಿವರನವನ ತೇರ ತೇಜಿಗಳನುರುಳಿಸಲ್,
ತಥದಿಂ ಧುಮುಕುತೊಂದು ರಣವಾರಣವನೇರಿ
ಕೂಗಿದನು ಶಾರ್ದೂಲ ಗುಲ್ಮಾಧಿಪಗೆ ತನ್ನ
ಸಂಕೇತಮಂ, ಕೂಡೆ ಮಾಯಾಪ್ರವೀಣರಾ
ಶಾರ್ದೂಲನಾಳುಗಳ್ ಶೈಲಖಂಡೋಪಮದ ೩೭೦ಸಿಡಿಲೊಡಲ ಸಿಡಿಗುಂಡುಗಳ ರೂಪಮಂ ಧರಿಸಿ
ಗಿರಿಗಳೋಲುರುಳತೊಡಗಿದರರಿಯನರೆಯಟ್ಟಿ, ಮೇಣ್
ಮಲೆತವರನರೆದು! ಚೀತ್ಕಾರಮೆದ್ದುದು ಹಗೆಯ
ಥಟ್ಟನಲಿ, ಪಡೆವಳರ ಕರೆಗಿನಿತು ಕಿವಿಗೊಡದೆ
ಹಿಂಜರಿಯತೊಡಗಿದಾ ಕಪಿಸೇನೆಯಂ ನೀಲನುಂ
ತಡೆಯಲಾದರೆ, ಸರಿಯಲಾಣಾತಿಯನಿತ್ತನಯ್
ಆಯಕಟ್ಟಿನ ಬೇರೆ ತಾಣದೊಳ್ ವ್ಯೂಹಮಂ
ಬಲಿದು ಮಾರಾಂತು ನಿಲ್ವಾಸೆಯಿಂ!”
ಹಸನ್ಮುಖಿ
ದಶಾನನಂ, ಸನ್ನೆಯಿಂ ಸಾರಣನ ಸುಮ್ಮನಿಸಿ,
ನೋಡಿದನು ಮಂಡೋದರಿಯ ಮೂಖವನಿಂಗಿತ ೩೮೦
ಕಟಾಕ್ಷದಿಂ: “ಕೇಳ್ದೆಯೇನ್, ದೇವಿ, ಸಾರಣನೆಂದ
ರಣವರದಿಯಂ? ನಿಶ್ಯಂಕಿಯಾಗಿನ್ನಾದೊಡಂ? —
ನಡೆ ನೀನ್, ಚರಾಗ್ರಗಣಿ. ಕಾಯುತಿರೆ ನನಗಾಗಿ
ಕೊತ್ತಳದ ನೆತ್ತಿಯೊಳ್.” ಅವಸರದೊಳೂಟಮಂ
ಪೂರೈಸಿದನ್. ತಂದ ವೀಳಯವನೊಲ್ಲದೆಯೆ
ಸತಿಗೆಂದನೌಪಚಾರಿಕಮೆನಲ್: “ಸೀತೆಯಂ
ಸಾಯದವೊಲೆಂತಾದಡಂ ಪೊರೆಯವೇಳ್ಕುಮಾ
ಅನಲೆಗೆನ್ನಾಜ್ಞೆಯಂ ಪೇಳ್, ದೇವಿ. ಇನ್ನೆನಗೆ
ರಣದ ಮೋಹವೆ ಮೋಹಮಾ ಜಾನಕಿಯ ಮೇಲೆ
ಮುನ್ನಿರ್ದ ಮೋಹಮೆಲ್ಲಂ ತಿರುಗಿಹುದು ರಣದ ೩೯೦
ಮಧುರತರ ಸಾಹಸಕೆ!”
ಹೋಹಾತನಂ, ತನ್ನ
ಜೀವ ಜೀವಾತುವಂ, ಪುರುಹೂತ ಜೇತನಂ,
ಪ್ರಾಣೇಶನಂ ನೋಡುತಾ ಮೇಘನಾದನ ಮಾತೆ
ಮದನಹರನಂ ಮತಮಾತನರ್ಧಾಂಗಿಯಂ
ಪ್ರಾರ್ಥಿಸಿದಳಿನಿಯನಾತ್ಮೋದ್ಧಾರಭಿಕ್ಷೆಯಂ
ಬೇಡಿ.
ಕೊತ್ತಳವೇರಿ ಕಣಕೆ ಕಣ್ ಕೀಲಿಸಿರೆ
ಲಂಕೇಶ್ವರಂ, ದಿನೇಶ್ವರನುಮಾ ಪಡುಮಲೆಯ
ತಲೆಯ ಕೋಡಂ ಮೆಟ್ಟಿ ನಿಂದಿರಲ್, ತಂದನು ಶುಕಂ
ಅದ್ಭುತ ವಿಜಯವಾರ್ತೆಯಂ, ಸುಗ್ರೀವಸೈನ್ಯಂ
ತ್ರಿಕೂಟಮಂ ತ್ಯಜಿಸಿ ವೇಲಾದ್ರಿಕಂದರಕೆ  ೪೦೦
ಪೆಡಂಮೆಟ್ಟಿ ನಿಂದಿರ್ದುದಂ. ಬಂದನಿನ್ನೊರ್ವನಾಳ್
ಶುಕನ ಬೆಂಬಳಿಯೆ; ಪೇಳ್ದನ್ ಪ್ರಹಸ್ತನಳಿವಂ,
ನೀಲ ಹಸ್ತ ಗದಾಭಿಘಾತ ಸಂಜಾತಮಂ.
ಪ್ರಥಮ ಸೇನಾಪತಿಯ ಮೃತ್ಯುವಾರ್ತೆಗೆ ಮನಂ
ತತ್ತರಿಸಿ ದ್ಯೆತ್ಯೇಂದ್ರನುತ್ತರಿಪ ಮುನ್ನಮೆಯೆ
ತಂದನಿನ್ನೊರ್ವಂ ದುರಂತ ವೃತ್ತಾಂತಮಂ,
ಕೋದಂಡಪಾಣಿ ರಘರಾಮ ದೋರ್ದಂಡದಿಂ
ಪೊಯ್ವೊಡೆದ ರಕ್ಕಸರ ಪಡೆ ಕೆಟ್ಟು, ಕಂಗೆಟ್ಟು,
ರಣಧರಣಿಯೊಳ್ ಬಿಟ್ಟುಕಳೆದು ಲೆಕ್ಕಂಗೆಟ್ಟ
ಶವಂಗಳಂ, ಸೇನಾನಿಗಳ ಕಳೇವರಂಗಳಂ ೪೧೦
ತುಳಿತುಳಿದಿರದೆ ಲಂಕೆಯ ಕಡೆಗೆ ಪೆಡಂಮೆಟ್ಟಿ
ದೌಡೋಡಿ ಬರುತಿರ್ಪುದಂ!
ನೇಸರನ್ನೆಗಂ
ಪಡುಮಂಚಕಿಳಿದೊರಗಿದನ್. ದಶಶಿರನ ಮತಿಗೆ
ಮಂಕು ಕವಿದಂತೆ ಕವಿದುದು ರಾತ್ರಿವರ್ಣಂ
ಧರಿತ್ರಿಯಂ. “ಕರೆ ಮಹಾಪಾರ್ಶ್ವನಂ. ಬರವೇಳ್
ಬಳಾರಿಜಿತುವಂ. ಬಳಿಯನಟ್ಟಾ ನಿಕುಂಭಂಗೆ.
ದುರ್ಗರಕ್ಷಣೆಗೆ ಪೇಳ್ ಕುಂಭನಂ. ತ್ರಿಶಿರಂಗೆ
ಬೆಸಸು ಪೆರ್ಬಾಗಿಲ್ಗಳಂ ಬಲಿಸಿ ನಿಲ್ವಂತೆ
ನುರಿತ ಮೀಸಲ್ಪಡೆಗಳಿಂ. ಪೇಳ್ ಸುಪಾರ್ಶ್ವಂಗೆ
ಪೊಸ ಪಡೆಗಳಂ ಕೂಡಿ ನಡೆದು ನೆರವಾಗಲಾ ೪೨೦
ಸ್ಖಲಿತ ಹೃದಯದೊಳೋಡಿಬರುತಿಹ ನಮ್ಮ ಸೈನ್ಯಕ್ಕೆ!”
ಇಂತಿತ್ತು ತನ್ನಾಜ್ಞೆಯಂ, ಕೊತ್ತಳವನಿಳಿದು
ಉದ್ವಿಗ್ನ ಚಿತ್ತನಲ್ಲಿಂ ನಡೆದನಾಳೋಚನೆಗೆ
ಸಚಿವ ಮಂದಿರಕೆ. ಕಿಕ್ಕಿರಿದಿರ್ದುದಾ ಸಭೆ
ಮಹಾಮಾತ್ಯರಿಂ. ಚಿಂತೆ ಮುಸುಗಿರ್ದಾನನಗೆ
ಪೇಳ್ದರೊಮ್ಮತದಿಂ ದಿಶಾನನಂಗೀ ಹದನ:
ಮತದ ಭಿನ್ನತೆಗಿಲ್ಲಿ ತಾವಿಹಿದೆ? ಕಟ್ಟು ಸೇನಾ
ಪಟ್ಟಮಂ ಶಕ್ತಿಸಾಧಕನತುಲ ವಿಕ್ರಮ
ಮಹಾಪಾರ್ಶ್ವ ದಳಪತಿಗೆ. ಅಂದು ಸಭೆಯಲಿ ಆ
ವಿಭೀಷಣನ ಪಕ್ಷದಿ ನಿಂದು ನುಡಿದುದನಿಂದು ೪೩೦
ನೆನೆಯದಿರು. ಮನ್ನಣೆಯ ಮಾಡದಿರಲರ್ಹತೆಗೆ,
ತಾನೆ ತನ್ನದನೆ ಕೊಂದಂತೆ, ಹಗೆಗುಪಕೃತಿಯಲಾ!
ವಿಲಯವೇಗದಿ ನುಗ್ಗಿ ಬಹ ಕಪಿಧ್ವಜಿನಿಯಂ
ಇಂದಿನಿರುಳಲಿ ತಡೆವ ಬಲವಾ ಮಹಾಪಾರ್ಶ್ವ
ಸತ್ತ್ವಸಂಯಮಕಲ್ಲದನ್ಯರ್ಗೆ, ನೀನೊರ್ವನಾ
ಕುಂಭಕರ್ಣನದೊರ್ವನುಳಿಯೆ, ದಿಟಮಸದಳಂ.
ನಿದ್ರಾಸಮಾಧಿಯೊಳ್ ಮಗ್ನನ್ ಸಹೋದರಂ.
ನೀಂ ದೊರೆ. ಸಮರ್ಥರಿರೆ ಸೇವಕರ್, ಬೆಸಸುವುದೆ
ಕರ್ತವ್ಯಮಾಜ್ಞಾ ಸಮರ್ಥಂಗಾ ಪ್ರಭುಶಕ್ತಿ
ಯುಕ್ತಂಗೆ!”
ಸಮ್ಮತಿಸಿದನ್ ಸಚಿವರಾಡಿತಕೆ. ೪೪೦
ಬಳಿಯಟ್ಟಿದನ್ ಮಹಾಪಾರ್ಶ್ವಂಗೆ. ಬಂದನಾ
ಶಕ್ತಿಪೂಜೆಯೊಳಿರ್ದ ಭಾಳನೇತ್ರಸಮಾನನಾ
ದೈತ್ಯಸೇನಾಧಿಪಂ. ನಮಸ್ಕರಿಸಿದಾತಂಗೆ
ನೀಡಿ ಸಮಪೀಠಮಂ ಮನ್ನಣೆಯ ಮಾಡಿದನ್;
ಹೇಳಿದನು ಸಚಿವರಿತ್ಯರ್ಥಮಂ, ಮತ್ತಮದೆ
ತನ್ನಾಜ್ಞೆಯಂ.
ಜೀಯ, ಅಂದಾ ವಿಭೀಷಣಂ
ಪೇಳ್ದುದಂ ನೆನೆ . ಇಂದುಮಂದೆಂದುದನೆ ನಿನಗೆ
ಬಿನ್ನಯ್ಸುವೆನ್. ನಮ್ಮ ದೌರ್ಬಲ್ಯಮಿರ್ಪುದೀ
ನಮ್ಮ ಸೈನ್ಯದೊಳಲ್ತು, ರಾಜೇಂದ್ರ ಆದೋಡಾ
ಮಾತೀಗಳಪ್ರಸಂಗಂ ನನಗೆ; ಮೇಣ್ ನನ್ನ ೪೫೦
ಸ್ವಾಮಿನಿಷ್ಠೆಗೆ ತಕ್ಕುದಲ್ತು. ನಿನ್ನಾಜ್ಞೆಯಂ
ಸರ್ವ ಸೇನಾಧಿಪತ್ಯದ ಮಹಾ ಪಟ್ಟಮಂ
ಮುಡಿಯೊಳಾಂತೆನ್. ತಡೆಯುವೆನ್ ರಾಮಸಂಗ್ರಾಮ
ಶಕ್ತಿಯಂ ನಾಳೆ ಪೊಳ್ತರೆ ನೇಸರೇಳ್ವನ್ನೆಗಂ.
ಬಳಿಕಮಲ್ಲಿಂದೆ ಮೇಲ್ ಆಯು ತೀರ್ವನ್ನೆಗಂ
ದುಡಿದಪೆನ್. ಮಡಿವೆನಲ್ಲದೆ ನಿನ್ನ ತೇರ್ ನೊಗಕೆ
ಪೆಗಲಾಂತು, ಮರಳಿ ಲಂಕೆಗೆ ಪುಗೆನ್. ತನ್ನ ಮಿತಿ
ತಾನರಿದನೆಂದುಂ ದೊರೆಗೆ ಪುಸಿಯ ಭರವಸೆಯ
ಬಲೆಯನೊಡ್ಡನ್.”
ಮಹಾಪಾರ್ಶ್ವ ಹೃದಯವನರಿತು,
ಕಲಿ ಕಲಿಗೆ ಕೊಡುವ ಕಣ್‌ಮೆಚ್ಚುಗೆಯ ಕಾಣ್ಕೆಯಂ ೪೬೦
ಸಲಿಸಿ : “ನೀನೆಂದುದದು ದಿಟಮಾದೊಡಂ. ನಮಗೆ
ಯುದ್ಧಮಲ್ಲದೆ ಬೇರೆ ಮೋಕ್ಷಕೆಲ್ಲಿದೆ ಬಟ್ಟೆ,
ಪೇಳ್, ಸಾಧಕವರೇಣ್ಯ? ನಡೆ ಪೋಗು; ಈ ಇರುಳ್
ತಡೆ ರಾಮಶಕ್ತಿಯ ಕಪಿಧ್ವಜಿನಿಯಂ. ನಾಳೆ
ಕುಂಭಕರ್ಣನನೆಬ್ಬಿಪೆನ್, ಕೇಳ್, ಅಕಾಲದೊಳ್
ಪ್ರಳಯರುದ್ರನೆಬ್ಬಿಸುವವೋಲ್!” ಎನ್ನುತ್ತಾ
ಪುಲಸ್ತ್ಯಜಂ ಬೀಳುಕೊಟ್ಟನು ಮಹಾಪಾರ್ಶ್ವನಂ
ರಣಮೇದಿನಿಯ ರುದ್ರವೇದಿಕೆಗೆ. ಧಳಧಳಧಳಂ
ಧರೆ ನಡುಗೆ ಕಿವಿಗೆ ಬಂದುದು ಧೀರಮಾ ನಿಶಾ
ನಿಶ್ಯಬ್ಧ ಭೈರವಂ, ಕೇಳ್, ಸಮರಭೇರೀ ರೌರವಂ! ೪೭೦








*************