ನನ್ನ ಪುಟಗಳು

ಡಿವಿಜಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಡಿವಿಜಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

05 ಏಪ್ರಿಲ್ 2022

Mankuthimmanakagga 221-240

ರಸಧಾರೆ – 221

ಅರೆಗಳಿಗೆಯನುಭವವೆ ಮಾನಸವ ಕರಗಿಸದೆ?
ಪರಿಪಕ್ವಗೊಳಿಸದೇನದು ಜೀವರಸವ?
ಉರಿ ತನಿಪುಗಳಿನಾತ್ಮ ಸಂಸ್ಕಾರಗಳನೆಸೆಪ
ಪುರುಳ ಪುಸಿಯನ್ನುವೆಯಾ- ಮಂಕುತಿಮ್ಮ

ಅರೆಗಳಿಗೆಯನುಭವವೆ = ಅರೆಗಳಿಗೆಯ+ಅನುಭವವೆ//ಪರಿಪಕ್ವಗೊಳಿಸದೇನದು = ಪರಿಪಕ್ವ + ಗೊಳಿಸದೇನು + ಅದು//ತನಿಪುಗಳಿನಾತ್ಮ= ತಣಿಪುಗಲಿನ್+ ಆತ್ಮ// ಸಂಸ್ಕಾರಗಳನೆಸೆಪ = ಸಂಸ್ಕಾರಗಳನು+ ಎಸೆಪ//ಪುಸಿಯನ್ನುವೆಯಾ = ಪುಸಿ+ ಎನ್ನುವೆಯಾ? ತನಿಪು = ಶೀತಲ //ಎಸೆಪ = ಎಸಗುವ//ಪುಸಿ = ಹುಸಿ, ಸುಳ್ಳು.

ಜೀವನದಲ್ಲಿ ಒಂದು ಅರೆಗಳಿಗೆಯಲ್ಲಿ ಆಗುವ ಅನುಭವವು ನಮ್ಮ ಮನಸ್ಸನ್ನು ಕರಿಗಿಸದೆ? ನಮ್ಮಲ್ಲಿ ಹರಿಯುವ ಜೀವರಸವನ್ನು ಪರಿಪಕ್ವಗೊಳಿಸದೇನುಅದು? ಉರಿ ಮತ್ತು ಶೀತಲತೆಗಳು ಆತ್ಮವನ್ನು ಸಂಸ್ಕರಿಸುವ ಆ ತಿರುಳನ್ನು, ಸತ್ವವನ್ನು ಹುಸಿಯನ್ನುತೀಯಾ ನೀನು? ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.

ನಮಗೆ ನಮ್ಮ ನಮ್ಮ ಜೀವನದಲ್ಲಿ ಸಾವಿರಾರು ಅನುಭವಗಳಾಗುತ್ತವೆ. ಸಾಮಾನ್ಯ ಎಲ್ಲವೂ ಸಾದಾರಣ ಅನುಭವಗಳಾಗಿರುತ್ತವೆ. ಆದರೆ ಬೆರಳೆಣಿಕೆಯಷ್ಟು ಅನುಭವಗಳು ನಮ್ಮನ್ನು ತೀವ್ರ ಚಿಂತನೆಗೆ ಒಳಪಡಿಸುತ್ತದೆ. ನಮ್ಮ ಮನಸ್ಸು ಬುದ್ಧಿಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಈ ಪರಿಣಾಮ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಲವಾರು ರಸಗಳ ಉತ್ಪತ್ತಿಯ ಪರಿಮಾಣ ಮತ್ತು ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ. ನಾವು ಯೋಚಿಸುವ ರೀತಿಯಲ್ಲಿ ಒಂದು ಮಹತ್ತರ ಬದಲಾವಣೆಗೆ ಅನುವು ಮಾಡಿಕೊಡುತ್ತದೆ.ಆ ಅನುಭವದ, ಅದರಿಂದ ನಮ್ಮಲ್ಲಿ ಮೂಡಿದ ವಿಚಾರದ, ಮತ್ತು ಆ ವಿಚಾರಗಳು ನಮ್ಮ ಮನಸ್ಸು ಬುದ್ಧಿಗಳ ಮೇಲೆ ಮಾಡುವ ಪರಿಣಾಮದಿಂದ ನಾವು ಪಕ್ವವಾಗುತ್ತೇವೆ. ಇದನ್ನೇ ಮಾನ್ಯ ಗುಂಡಪ್ಪನವರು “ಪರಿಪಕ್ವಗೊಳಿಸದೇನದು ಜೀವರಸವ” ಎಂದಿದ್ದಾರೆ.

“ಉರಿ ತನಿಪುಗಳಿನಾತ್ಮ ಸಂಸ್ಕಾರಗಳನೆಸೆಪ” ಎಂದರೆ ನಮ್ಮ ಜೀವನದಲ್ಲಿ ನಾವು ಅನುಭವಿಸುವಕಷ್ಟ ಮತ್ತು ಸುಖಗಳು ನಮ್ಮನ್ನು ಪಕ್ವವನ್ನಾಗಿಸಿ ಆತ್ಮ ಸಂಸ್ಕಾರಕ್ಕ್ಕೆ ದಾರಿಯಾಗುತ್ತದೆ ಎಂದು ಅರ್ಥ. ನೋಡಿ ಕೆಲವರ ಜೀವನದಲ್ಲಿ ಈ ಕಷ್ಟ ಸುಖಗಳ ಅನುಭವ ಒಂದು ಬಾರಿಯಾಗಬಹುದು. ಕೆಲವರ ಜೀವನದಲ್ಲಿ ಒಂದಕ್ಕಿಂತ ಹೆಚ್ಚುಬಾರಿ ಆಗಬಹುದು. ಕೆಲವರ ಜೀವನ ಒಂದು ಬೃಹಚ್ಚಕ್ರದ ( roller coaster ride ) ಆಟವಾಗಿರಬಹುದು, ಮತ್ತೂಕೆಲವರಿಗೆ ಇಡೀ ಜೀವನವೇಒಂದು ಸುಖದ ಸುಪ್ಪತ್ತಿಗೆಯಾಗಿರಬಹುದು. ಆದರೆ ಯಾರು ಯಾವುದರಿಂದ ಸುಖಪಡುತ್ತಾರೆ ಅಥವಾ ದುಃಖಪದುತ್ತಾರೆ ಎನ್ನವುದು ಅವರವರ ಸ್ವಭಾವದ ಮೇಲೆ ಅಧಾರಪಟ್ಟಿರುತ್ತದೆ. ಕೆಲವರಿಗೆ ಹಣದಲ್ಲಿ ಸುಖ ಕೆಲವರಿಗೆ ಗುಣದಲ್ಲಿ ಸುಖ.

ಆದರೆ ನಮ್ಮ ಸನಾತನದ ಪ್ರಕಾರ ಪ್ರತೀ ಜೀವಿಯೂ ತನ್ನಪೂರ್ವ ಕರ್ಮವನ್ನಾಧಾರಿಸಿಕಷ್ಟ ಸುಖಗಳನ್ನು ಅನುಭವಿಸುತ್ತಿರುತ್ತಾನೆ. ಹೀಗೆ ಕಷ್ಟ ಸುಖಗಳನ್ನು ಅನುಭವಿಸುವಾಗ, ಸಂಸ್ಕಾರವೂ ಉತ್ತಮವಾಗಿ ಈ ಕಷ್ಟ ಸುಖಗಳ ಅನುಭವದಿಂದ ಮುಕ್ತನಾಗಿ, ಒಂದು ನಿರ್ಲಿಪ್ತಭಾವ ಬಂದರೆ ಮನುಷ್ಯ ಆನಂದವನ್ನು ಅನುಭವಿಸಬಹುದು. ಜೀವನಕ್ಕೆ ಅಂಟಿಕೊಂಡಿದ್ದರೆ ಸುಖ ಅಥವಾ ದುಃಖ. ಅಂಟದೆ ಇದ್ದರೆ ಸುಖ ದುಃಖಗಳ ಭಾವದಿಂದ ಮೇಲೇರಿ ಒಂದು ಮುಕ್ತವಾದ ಮತ್ತು ಆನಂದದ ಅನುಭವ ಪಡೆಯಬಹುದು.

ರಸಧಾರೆ – 222

ಆವುದೋ ಒಳಿತೆಂದು ಆವುದೋ ಸೊಗವೆಂದು
ಅವಾವ ದಿಕ್ಕಿನೊಳಮಾವಗಂ ಬೆದಕಿ
ಜೀವ ಪರಿಧಾವಿಪವೊಲ್ ಆಗಿಪಂತರ್ವೃತ್ತಿ
ಭಾವುಕದ ನೆಲೆಯ ಕರೆ – ಮಂಕುತಿಮ್ಮ

ಒಳಿತೆಂದು = ಒಳಿತು ಎಂದು // ಸೊಗವೆಂದು = ಸೊಗ+ ಎಂದು // ಅವಾವ = ಆವ + ಆವ // ದಿಕ್ಕಿನೊಳಮಾವಗಂ = ದಿಕ್ಕಿನೊಳಂ + ಆವಗಂ// ಪರಿಧಾವಿಪವೊಲ್= ಪರಿಧಾವಿಪ+ ಒಲ್// ಆಗಿಪಂತರ್ವೃತ್ತಿ = ಆಗಿಪ + ಅಂತರ್ವೃತ್ತಿ. ಆವುದೋ= ಯಾವುದೋ// ಸೊಗವೆಂದು = ಸೊಗಸು ಎಂದು// ಆವಗಂ = ಯಾವಾಗಲೂ, ಸದಾಕಾಲ//ಪರಿಧಾವಿಪವೊಲ್ = ಓಡುವಂತೆ // ಆಗಿಪ = ಮಾಡುವ// ಅಂತರ್ವೃತ್ತಿ. = ಅಂತರಂಗದ ಭಾವ.

ಯಾವುದೋ ಒಳ್ಳೆಯದೆಂದು ಮತ್ಯಾವುದೋ ಸೊಗಸೆಂದು ಬೇರೆ ಬೇರೆ ದಿಕ್ಕಿನಲ್ಲಿ ಸದಾಕಾಲ ಹುಡುಕುತ್ತಾ ಓಡುವಂತೆ ಮಾಡುವ ನಮ್ಮ ಅಂತರ್ಯಕ್ಕೆ ಇಂಬುನೀಡುವುದು ನಮ್ಮ ನಮ್ಮ ಭಾವನೆಯ ಕೂಗು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಮನುಷ್ಯನೂ ಸೇರಿದಂತೆ, ಪ್ರತೀ ಪ್ರಾಣಿಯೂ, ತನಗೆ ಯಾವುದು ಒಳಿತೆನಿಸುತ್ತದೋ, ತನಗೆ ಯಾವುದು ಸೊಗಸೆನಿಸುತ್ತದೋ ಅದನ್ನೇ ಪಡೆಯಲು ಹುಡುಕುತ್ತದೆ. ಹೀಗೆ ಹುಡುಕಲು ಮನಸ್ಸು ಬುದ್ಧಿಗಳನ್ನು ಪ್ರೇರೇಪಿಸಿ ಹಲವಾರು ದಿಕ್ಕುಗಳಲ್ಲಿ ಅದನ್ನು ಓಡಿಸುವುದು ಪ್ರತೀ ಪ್ರಾಣಿಯ ಅಂತರಂಗದ ಭಾವ. ಈ ಅಂತರಂಗದ ಭಾವಕ್ಕೆ ಆಯಾಯಾ ವ್ಯಕ್ತಿಯ ಪರಿಸರ, ವಿದ್ಯೆ, ಸಂಸ್ಕಾರಗಳು ಕಾರಣವಾಗುತ್ತವೆ. ಹುಟ್ಟಿನಿಂದ ಸಾವಿನ ತನಕ ಎಲ್ಲರಿಗೂ ಏನೋ ಬೇಕು, ಯಾವುದೋ ಬೇಕೋ ಅವುಗಳನ್ನು ಪಡೆಯಲು ಎಂದಿಗೂ ನಿಲ್ಲದ ಬಯಕೆಗಳ ಸರಮಾಲೆ.

ಒಂದು ವ್ಯಕ್ತಿಯ ಮನದಲ್ಲಿ ಒಂದು ಬಯಕೆ ಹೇಗೆ ಉಂಟಾಗುತ್ತದೆ ಎನ್ನುವುದಕ್ಕೆ ಮಾನ್ಯ ಗುಂಡಪ್ಪನವರು ಸುಂದರವಾದ ವಿಶ್ಲೇಷಣೆ ನೀಡಿದ್ದಾರೆ ಈ ಕಗ್ಗದಲ್ಲಿ. ಇಂದ್ರಿಯಗಳ ಮೂಲಕ ಒಂದು ವಸ್ತು , ವ್ಯಕ್ತಿ ಅಥವಾ ವಿಷಯದ ಪರಿಚಯವಾಗುತ್ತದೆ. ಅಂತರ್ಯದಲ್ಲಿ ಇದು ಇಂತಹ ವಸ್ತು, ಇದು ಒಳ್ಳೆಯದು ಒಂದು ಸೊಗಸಾದದ್ದು ಎನ್ನುವ ವಿಶ್ಲೇಷಣೆ ನಡೆಯುತ್ತದೆ. ನಂತರ ಅದನ್ನು ಹೊಂದುವ ಬಯಕೆ ಉಂಟಾಗುತ್ತದೆ. ನಂತರ ಅದನ್ನು ಪಡೆಯಲು ನಾನಾ ದಿಕ್ಕಿನಲ್ಲಿ ನಮ್ಮ ಓಟ ನಡೆಯುತ್ತದೆ. ಸಿಕ್ಕರೆ ಸಂತೋಷ ಸಿಗದಿದ್ದರೆ ಅಸಂತೋಷ. ” ದ್ರುಷ್ಯಮಾಣೆ ಭವೇತ್ ಪ್ರೀತಿ:” ಎಂದರೆ ವಸ್ತುಗಳನ್ನು ನೋಡಿದರೆ ಅವುಗಳನ್ನು ಪಡೆಯ ಬೇಕೆಂಬ ಆಸೆ ಮನದಲ್ಲುಂಟಾಗುತ್ತದೆ.

ಬಯಕೆ ಉಂಟಾಗುವುದು ಬಹಳ ಸಹಜ ಗುಣ. ನಮ್ಮ ಅಸ್ತಿತ್ವಕ್ಕೆ ಅದು ಪೂರಕವಾಗಿರುತ್ತದೆ. ಆದರೆ ಆ ಅಸ್ಥಿತ್ವ ಸುಂದರವಾಗಿರಬೇಕು, ಶಾಂತವಾಗಿರಬೇಕು ಆನಂದದಿಂದಿರಬೇಕು ಎಂದಾಗ ನಮ್ಮ ಬಯಕೆಗಳೂ ಸಹ ಹಾಗೆ ಇರಬೇಕಲ್ಲವೇ. ನಾವು ಏನನ್ನು ಬಯಸುತ್ತೀವೋ ಅದನ್ನು ಪಡೆದರೆ, ಅದರಿಂದುಂಟಾಗುವ ಪರಿಣಾಮಗಳನ್ನು ನಾವೇ ಅನುಭವಿಸಬೇಕಲ್ಲವೇ. ಹಾಗಾಗಿ ಬಯಸುವಾಗ ಬಹಳ ಜಾಗರೂಕರಾಗಿರಬೇಕು.

ರಸಧಾರೆ -ಕಗ್ಗ – 223

ಒಡೆಯನಾವೆಡೆಸಾರ್ದನೆಂದುಪದವಾಸನೆಯ
ತಡಕಿಮೂಸುತಶುನಕನಲೆದಾಡುವಂತೆ
ಬಡಜಗವನೊಳಿತಕೆಂದತ್ತಿತ್ತ ಪುಡುಕಿಸುವ
ಬೆಡಗು ಶಿವನೊಡವೆಯದೊ – ಮಂಕುತಿಮ್ಮ

ಒಡೆಯನಾವೆಡೆ = ಒಡಯನು+ಆವ+ಎಡೆ//ಸಾರ್ದನೆಂದು = ಸಾರ್ದನು+ ಎಂದು//ಶುನಕನಲೆದಾಡುವಂತೆ = ಶುನಕವು + ಅಲೆದಾಡುವಂತೆ// ಬಡಜಗವನೊಳಿತಕೆಂದತ್ತಿತ್ತಶಿವನೊಡವೆಯದೊ = ಬಡ+ ಜಗವನು+ ಒಳಿತಕೆ+ಎಂದು+ಅತ್ತಿಂದಿತ್ತ//ಶಿವನೊಡವೆಯದೊ = ಶಿವನ +ಒಡವೆಯು+ ಅದೊ ಸಾರ್ದನೆಂದು = ಹೋದನೆಂದು/ಪದವಾಸನೆಯ = ಕಾಲವಾಸನೆ/ಶುನಕ+ನಾಯಿ/ಪುಡುಕಿಸುವ = ಹುಡುಕಿಸುವ/ ಬೆಡಗು = ಆಕರ್ಶಣೀಯವಾದದು.

ತನ್ನ ಒಡೆಯ ಎತ್ತ ಹೋದನೆಂದು ಅವನ ಕಾಲ ವಾಸನೆಯನ್ನು ಮೂಸುತ್ತಾ ಅಲೆಯುವ ನಾಯಿಯಂತೆ, ಈ ಜಗತ್ತಿನಲ್ಲಿ ತನಗೆ ಒಳಿತಾವುದು ಎಂದುನಾವುಹುಡುಕುವಂತೆ ಮಾಡುವ ಈ ಲೋಕಮಾಯೆಯೇ ಆ ಪರಶಿವನ ಅಲಂಕಾರದ ಒಡವೆಯೋ ಎಂದು ಒಂದು ಉದ್ಘಾರವನ್ನು ತೆಗೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

“ಬಡಜಗವ” ಎನ್ನುವ ಪದವನ್ನು ಶ್ರೀ ಗುಂಡಪ್ಪನವರು ಬಹಳ ಸುಂದರವಾಗಿ ಉಪಯೋಗಿಸಿದ್ದಾರೆ. ಜಗತ್ತು ಸಕಲ ಸಂಪತ್ತಿನಿಂದ ಕೂಡಿದ್ದರೂ “ಬಡಜಗವ” ಎಂದುಪದಪ್ರಯೋಗ ಮಾಡಿದ್ದಾರೆ. ಎಲ್ಲವೂ ಇದೆ, ಇರುವುದೆಲ್ಲವೂ ಸುಂದರವಾಗಿದೆ. ಆದರೂ ಏನೋ ಹುಡುಕಾಟ, ಏನೋ ಕೊರತೆಗಳ ಅನುಭವಿಸುವ, ಇಷ್ಟಿದ್ದರೆ ಇನ್ನೂ ಆಸೆಪಡುವ ಮತ್ತು ಬೇಕೆನ್ನುವ ನಮ್ಮಂತಹ ” ಬಡ” ಜನರಿಂದ ತುಂಬಿದ ಈ ಲೋಕ ” ಬಡಜಗತ್ತು” ಅಲ್ಲದೆ ಮತ್ತೇನು ಹೇಳಿ ವಾಚಕರೆ.

ನಮ್ಮದೆಲ್ಲ ತೃಪ್ತಿಯೇ ಇಲ್ಲದ ಜೀವನ. ಎಷ್ಟಿದ್ದರೂ ಸಾಲದ. ಏನಿದ್ದರೂ ಸಾಲದು. ನಾಯಿ ವಾಸನೆ ಹಿಡಿದು ಮೂಸುತ್ತಾ ಸದಾ ಏನನ್ನೋ ಕೆದಕಿ ಹುಡುಕುವಂತೆ ನಮ್ಮ ಬಾಳುಗಳಿವೆ ಎಂದರೆ ತಪ್ಪಾಗಲಾರದು. ನಮ್ಮ ಆಸೆಗಳ ಸರಮಾಲೆಗಳಿಗೆ ಕೊನೆಯೇ ಇಲ್ಲ. ಅನಾದಿಕಾಲದಿಂದ ಸಮಾಜವನ್ನು ಒಂದು ಸರಿದಾರಿಗೆ ತರಬೇಕೆಂದು ಪ್ರಯತ್ನಪಟ್ಟ ಸಂತರೆಲ್ಲಾ ಪ್ರತಿಪಾದಿಸಿದ್ದು ” ಆಸೆಯೇ (ದುರಾಸೆಯೂ ಸೇರಿ) ದುಃಖಕ್ಕೆ ಮೂಲ” ಎಂದು.

ಪುಸ್ತಕದಲ್ಲಿಓದುತ್ತೇವೆ, ಪ್ರವಚನ ಕೇಳುತ್ತವೆ. ಕೆಲ ಕ್ಷಣ ನಮಗೆ ” ಹೌದಲ್ಲ, ಇದೇ ಸರಿ” ಎಂದು ಅನಿಸಿದರೂ, ಮರುಕ್ಷಣವೇ ನಾಯಿ ಬಾಲದಂತೆ ನಮ್ಮ ಬುದ್ಧಿ ಮತ್ತೇನನ್ನೋ ಹುಡುಕುತ್ತದೆ. ಇದು ಜಗತ್ತಿನ ಮೇಲೆ ಮಾಯಾ ಪ್ರಭಾವ. ಈ ಮಾಯೆ ಎನ್ನುವ ವಸ್ತು ಇಲ್ಲದಿದ್ದಿದರೆ ಈ ಜಗತ್ತಿನ ರೂಪ ರೇಷೆಗಳೇ ಬೇರೆಯಾಗಿರುತ್ತಿತ್ತು, ಅಲ್ಲವೇ? ಹಾಗಾಗಿ ಈ ಜಗದ್ವ್ಯಾಪಾರವನ್ನು ನಡೆಸಿಲಿಕ್ಕಾಗಿಯೇ ಆ ಪರಮಾತ್ಮ ಈ ಮಾಯೆಯನ್ನೂ ಸೃಷ್ಟಿಸಿ, ನಮ್ಮನ್ನೂ ಸೃಷ್ಟಿಸಿ, ನಮ್ಮಿಬ್ಬರ ನಡುವೆಒಂದು ಬಾಂಧವ್ಯವನ್ನು ಇಟ್ಟು, ನಾಟಕವಾಡಿಸುತ್ತಿದ್ದಾನೆ.

ರಸಧಾರೆ -224

ಅದು ಬೇಕು ಇದು ಬೇಕು ಮತ್ತೊಂದು ಬೇಕು
ಬೆದಕುತಿರುವುದು ಲೋಕಸೊಗದಿರವನೆಳಸಿ
ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ
ಮುದಗಳಮಿತದ ನಿಧಿಗೆ – ಮಂಕುತಿಮ್ಮ

ಬೆದಕುತಿರುವುದು = ಬೆದಕುತ+ ಇರುವುದು //ಸೊಗದಿರವನೆಳಸಿ = ಸೊಗದ + ಇರವನು + ಎಳಸಿ //ಸುಖಧ್ಯಾನದೂಟೆಯೆ = ಸುಖ+ ಧ್ಯಾನದ+ಊಟೆಯ//ಮುದಗಳಮಿತದ = ಮುದಗಳ+ ಅಮಿತದ ಊಟೆಯ = ಒರತೆ, ಚಿಲುಮೆ//ಮುದಗಳ = ಸುಖಗಳ.

ಮನುಷ್ಯರ ಹೃದಯಗಳಲ್ಲಿ ಮಿತಿಯಿಲ್ಲದಸುಖಗಳಆಸೆಯ ಒರತೆ ಅಥವಾ ಊಟೆ ಬತ್ತುವುದೇ ಇಲ್ಲ. ಸದಾಕಾಲಮನಸ್ಸು “ಅದು ಬೇಕು ಇದು ಬೇಕು ಮತ್ತೊಂದು ಬೇಕು” ಎಂದು ಮತ್ತು ಅದು “ಎಲ್ಲಿ ಸಿಗುತ್ತದೆ” ಎಂದು ಹುಡುಕಾಡುತ್ತಲೇಇರುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈಕಗ್ಗದಲ್ಲಿ.

ಎಂದಿಗೂ, ಸದಾಕಾಲ ಆನಂದದಿಂದ ಇರಬೇಕೆನ್ನುವುದೇ ಮನುಷ್ಯನ ಆಸೆ. ಆದರೆ ಆನಂದವೆಂದರೇನು ಎನ್ನುವುದು ಯಾರಿಗೂ ಅರ್ಥವಾಗಿಲ್ಲ. ಯಾವುದರಿಂದ ತನಗೆ ಆನಂದ ಸಿಗುತ್ತದೆ ಎಂದೂ ಅರಿತಿಲ್ಲ. ಇದರೋಳಗೋ, ಅದರೊಳಗೋ, ಮತ್ಯಾವುದರಳೋಗೋ ಗೊತ್ತಿಲ್ಲ. ಹಾಗಾಗಿ, ಗುಂಡಪ್ಪನವರು ಹೇಳುವಂತೆ”ಬೆದಕುತಿರುವುದುಲೋಕಸೊಗದಿರವನೆಳಸಿ”. ಇಡೀ ಲೋಕದ ಜನ ಆ ಸೊಗಸು, ಆನಂದಕ್ಕೆ ಕಾರಣವಾದ ವಸ್ತು ಎಲ್ಲಿದೆ ಎಂದು ಹುಡುಕುತ್ತಲೇ ಇರುತ್ತಾರೆ.

ಒಂದು ವಸ್ತುವನ್ನೋ ವಿಷಯವನ್ನೋ ಅಥವಾ ವ್ಯಕ್ತಿಯನ್ನೂ ಕಂಡಾಗ ಮೇಲ್ನೋಟಕ್ಕೆ ಪರಿಚಯವಾದಾಗ, ಅದರ ಸಂಗ ಮಾಡುವ ಬಯಕೆ ಉಂಟಾಗಬಹುದು. ಆ ಬಯಕೆ ಗುಂಡಪ್ಪನವರು ಹೇಳುವಂತೆ “ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ ” ಹೃದಯಾಂತರಾಳದಲಿ ಒಸರುತ್ತದೆ. ಹಾಗೆ ಬಯಸಿದ್ದನ್ನು ಪಡೆಯಲು ಪ್ರಯತ್ನ ನಡೆಯುತ್ತದೆ.ಪ್ರಯತ್ನ ಫಲಕಾರಿಯಾದರೆ ” ಹಾ ಇದರಿಂದ ನನಗೆ ಆನಂದ” ಎನ್ನುವ ಭಾವ ಮನದಲ್ಲಿ ಮೂಡುತ್ತದೆ. ಹಾಗೆ ಮೂಡಿದ ಭಾವ ಕ್ಷಣಕಾಲ ಇದ್ದು ಮಾಯವಾಗುತ್ತದೆ. ಮತ್ತೆ ಮತ್ತೊಂದು ಬಯಕೆ ಒಸರುತ್ತದೆ, ಮತ್ತದೇ ಪ್ರಯತ್ನ. ಇದನ್ನೇ ಮಾನ್ಯ ಗುಂಡಪ್ಪನವರು ” ಮುದಗಳಮಿತದ ನಿಧಿಗೆ” ಎನ್ನುತ್ತಾರೆ. ಮಿತಿಯೇ ಇಲ್ಲದ ಬಯಕೆಗಳ ಸರಮಾಲೆಯನ್ನು ಹೊತ್ತು ಜೀವನ ಸಾಗಿಸುವಈ ನರಪ್ರಾಣಿಯ ಬಯಕೆಗಳು ತೀರುವುದೆಂತು?

ಈ ಬಯಕೆಗಳಿಂದ ವಾಂಛೆ ತೀರಬಹುದು, ಆದರೆ ಸತ್ಯವಾದ ಆನಂದ ಎಂದಿಗೂ ಸಿಗುವುದಿಲ್ಲ ಎಂದುಮನುಷ್ಯನಿಗೆ ಎಂದು ಸತ್ಯವಾಗಿಅರ್ಥವಾಗುತ್ತದೆಯೋ, ಹಾಗೆ ಅರ್ಥವಾದ ವಿಷಯಎಂದುದೃಢವಾಗಿಮನದಲ್ಲಿ ಬೇರೂರುತ್ತದೆಯೋ, ಹಾಗೆ ಬೇರೂರಿದ ವಿಷಯವನ್ನು ಮನುಷ್ಯ ಎಂದು ತನ್ನ ಸ್ವಾಭಾವವಾಗಿಸಿಕೊಳ್ಳುತ್ತಾನೋ, ಅಂದು ಅವನು ಈ ಬಯಕೆಗಳ ಜಪಮಣಿಮಾಲೆಯನ್ನು ಕಿತ್ತೊಗೆದು, ಸತ್ಯವಾದ, ನಿಜವಾದ ಮತ್ತು ಶಾಶ್ವತವಾದ ಆನಂದವನ್ನು ಪಡೆಯುತ್ತಾನೆ. ಅಂತಹ ಪ್ರಯತ್ನವನ್ನು ನಾವೂ ಮಾಡೋಣವೆ?

ರಸಧಾರೆ – 225

ಶರಧಿಯೊಳಗಣ ವಸ್ತುಗಳನಳಚಿ ಜಾಲಿಸುವ
ತೆರೆಯಂತೆ ವಿಶ್ವಸತ್ವದ ಲಹರಿ ನಮ್ಮ
ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ
ಭರಿಸುತಿರುವುದು ಬಾಳ – ಮಂಕುತಿಮ್ಮ

ಶರಧಿಯೊಳಗಣ = ಶರಧಿ + ಒಳಗಣ// ವಸ್ತುಗಳನಳಚಿ = ವಸ್ತುಗಳನು + ಅಳಚಿ// ಹೊರಗೊಳಗುಗಳಲಿ = ಹೊರಗೆ+ ಒಳಗುಗಳಲಿ ಶರಧಿ = ಸಾಗರ// ಅಳಚಿ = ಕೇರಿ

ಸಮುದ್ರದೊಳಗಿರುವ ವಸ್ತುಗಳನ್ನು ಕೇರಿ ಜಾಲಿಸುವ ಸಾಗರದ ತೆರೆಗಳಂತೆ, ಈ ಜಗತ್ತಿನ ಸೃಷ್ಟಿಯ ತತ್ವಗಳು ನಮ್ಮ ಒಳಗು ಹೊರಗುಗಳಲ್ಲಿ ತುಂಬಿ ಹರಿಯುತ್ತಾ ನಮ್ಮ ಜೀವನವನ್ನು ಭರಿಸುತ್ತಿದೆ ಎಂದು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮ ಭಾವನೆಗಳೂ ಸಹ ಈ ಸಮುದ್ರದ ಅಲೆಗಳಿಗಿಂತ ಯಾವ ರೀತಿಯಲ್ಲೂ ಭಿನ್ನವಲ್ಲ . ಪ್ರತೀ ಪ್ರಾಣಿಯ ಮನದಲ್ಲೂ ಭಾವನೆಯ ಅಲೆಗಳು ಏಳುತ್ತಲೇ ಇರುತ್ತವೆ. ಈ ಎಲ್ಲ ಭಾವನೆಗಳಿಗೆ ಹಲವಾರು ಕಾರಣಗಳಿರುತ್ತವೆ. ಅನುವಂಶಿಕ ಗುಣಗಳು, ನಮ್ಮ ಪರಿಸರ, ನಾವಿರುವ ಸಮಾಜ, ನಾವು ಕಲಿತ ವಿದ್ಯೆ, ನಮ್ಮ ಸ್ನೇಹಿತರ ವೃತ್ತ, ನಮ್ಮ ಬಂಧು ಬಳಗ, ಹೀಗೆ ನಮ್ಮ ಸುತ್ತಲಿರುವ ಎಲ್ಲವೂ ನಮ್ಮ ಮೇಲೆ ಪ್ರಭಾವ ಬೀರಿ “ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ” ಎಂದು ಮಾನ್ಯ ಗುಂಡಪ್ಪನವರು ಹೇಳುವಂತೆ ನಮ್ಮ ಹೊರ ನಡತೆ ಮತ್ತು ನಮ್ಮ ಅಂತರ್ಯದಲ್ಲಿ ನಡೆಯುವ ಭಾವ ಮಂಥನಕ್ಕೂ ಕಾರಣವಾಗುತ್ತದೆ. ಈ ಎಲ್ಲ ಭಾವಗಳನ್ನೂ ಧರಿಸಿ ನಾವು, ಸಮಯಕ್ಕೆ ಸರಿಯಾಗಿ ಅವುಗಳನ್ನು ಸಮುದ್ರದ ತೆರೆಗಳಂತೆ ಪ್ರಕಟಿಸುತ್ತಿರುತ್ತೇವೆ.

ಇವೆಲ್ಲವೂ ನಮಗೆ ಪರತತ್ವದಿಂದ ನಿರ್ಮಿತವಾದ ಈ ವಿಶ್ವತತ್ವದಿಂದಲೇ ಸಿಗುತ್ತದೆಯಾದ್ದರಿಂದ, ಆ ಪರತತ್ವಕ್ಕೂ ನಮ್ಮ ಈ ವಿಶ್ವತತ್ವಕ್ಕೂ ನಿಕಟ ಸಂಬಂಧವಿರುತ್ತದೆ. ಈ ಜಗತ್ತಿನ ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡು ಪ್ರಭಾವಿತವಾಗಿರುತ್ತದೆ. ಆದರೆ ನಮ್ಮ ಅರಿವಿಗೆ ಅದು ಬರುವುದೇ ಇಲ್ಲ. ಸದಾಕಾಲ ನಾವು ನಮ್ಮದೇ ಬಲದಿಂದ ” ನಾವಾಗಿದ್ದೇವೆ ” ಎಂದುಕೊಳ್ಳುತ್ತಿರುತ್ತೇವೆ. ನಮಗೆ ನಮ್ಮ ‘ಅಹಂಕಾರವು’ ಈ ಪರತತ್ವದ ಮತ್ತು ವಿಶ್ವತತ್ವದಿಂದ ನಮ್ಮ ಮೇಲೆ ಆಗುವ ಪ್ರತಿಘಳಿಗೆಯ ಪ್ರಭಾವವನ್ನು ಅರಿತುಕೊಳ್ಳಲು ಬಿಡುವುದಿಲ್ಲ ಅರಿವಿಗೆ ಬಂದರೂ ಒಪ್ಪಿಕೊಳ್ಳುವುದಿಲ್ಲ ಮತ್ತು ಒಪ್ಪಿಕೊಂಡರೂ ಅಳವಡಿಸಿಕೊಳ್ಳುವುದಿಲ್ಲ. “ಭರಿಸುತಿರುವುದು ಬಾಳ ” ಎಂಬ ಈ ಕಗ್ಗದ ಉಕ್ತಿಯಂತೆ ಈ ಭಾವಗಳು ನಮ್ಮ ಬಾಳನ್ನು ಭರಿಸುತ್ತಿದ್ದರೂ ನಾವು ಅಜ್ಞಾನದಿಂದ ಎಲ್ಲವನ್ನೂ ನಾವೇ ಮಾಡುತ್ತಿದ್ದೇವೆ ಎಂದು ಕೊಳ್ಳುತ್ತೇವೆ. ಬಹುಶಃ ನಾವು ಈ ಪರತತ್ವದ ಮತ್ತು ವಿಶ್ವತತ್ವದ ಪ್ರಭಾವವನ್ನು ಒಪ್ಪಿಕೊಂಡರೆ ನಮ್ಮ ಭಾವಗಳು ತೆರೆಗಳಿಲ್ಲದ ಸಾಗರದಂತೆ ಶಾಂತವಾಗಿ ಆನಂದದ ಅನುಭವವಾಗಬಹುದು.

ರಸಧಾರೆ – 226

ಉಸಿರವೊಲನುಕ್ಷಣಂ ಪುರುಶನೊಳವೊಗುತವನ
ಪೊಸಬನಂಗೆಯ್ದು ದೈವಿಕಸತ್ವಮವನುಂ
ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ
ಬೆಸಸುತಿಹುದೇಗಳುಂ – ಮಂಕುತಿಮ್ಮ

ಉಸಿರವೊಲನುಕ್ಷಣಂ = ಉಸಿರ+ಒಲು+ಅನುಕ್ಷಣಂ// ಪುರುಶನೊಳವೊಗುತವನ = ಪುರುಷನ+ಒಳ+ಒಗುತ +ಅವನ // ದೈವಿಕಸತ್ವಮವನುಂ = ದೈವಿಕಸತ್ವವಂ + ಅವನುಂ// ಬೆಸಸುತಿಹುದೇಗಳುಂ = ಬೆಸಸುತಿಹುದು+ ಏಗಳುಂ ಬೆಸಸುತಿಹುದು= ಬೆಸೆಯುತಿಹುದು // ಏಗಳುಂ = ಯಾವಾಗಲೂ

ಉಸಿರು ನಮ್ಮ ದೇಹದೊಳಕ್ಕೆ ಹೊಕ್ಕು, ನಮಗೆ ಪ್ರತಿ ಉಸಿರಾಟದಲ್ಲೂ ಒಂದು ಹೊಸತನವನ್ನು ನೀಡುವಂತೆ ಆ ಪರಮಾತ್ಮ ತತ್ವವು ಮನುಷ್ಯನ ಒಳಹೊಕ್ಕು ಅವನಿಗೆ ಹೊಸತನವನ್ನು ನೀಡಿ ಲೋಕಕ್ಕೆ ಹೊಸತನವನ್ನು ನೀಡಲು ದುಡಿಯುವಂತೆ ಪ್ರೇರೇಪಿಸುತ್ತದೆ. ಈ ರೀತಿಯ ಪರಸ್ಪರ ಬೆಸುಗೆ ಪರಮಾತ್ಮ ತತ್ವಕ್ಕೂ ಮನುಷ್ಯನಿಗೂ ಸದಾಕಾಲ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಒಂದು ಉಸಿರು ನಮ್ಮೊಳಗೆ ಹೋಗಿ ಹೊರಬಂದರೆ ನಮಗೆ ಮತ್ತೊಂದು ಹೊಸತನ. ಒಳಗೆ ಹೋದ ಉಸಿರು ಹೊರಬರೆದೆ ಇದ್ದರೆ ಅಥವಾ ಹೊರಗೆ ಬಂದ ಉಸಿರು ಮತ್ತೆ ಒಳಗೆ ಹೋಗದಿದ್ದರೆ ನಮ್ಮ ಅಸ್ತಿತ್ವವೇ ಕೊನೆಯಾಗುತ್ತದೆ, ಅಲ್ಲವೇ? ಹಾಗಾಗಿ ನಮ್ಮ ಪ್ರತಿಕ್ಷಣದ ಬದುಕು ಈ ಉಸಿರಿನ ಮೇಲೆಯೇ ನಿಂತಿದೆ. ಆದರೆ ಆ ಉಸಿರನ್ನು ಎಳೆದುಕೊಳ್ಳುವ ಅಥವಾ ಹೊರಹಾಕುವ ” ಉಚ್ವಾಸ- ನಿಶ್ವಾಸ” ಗಳಿಗೆ ಕಾರಣವಾದ ದೈವೀ ಶಕ್ತಿಯೇ ನಮ್ಮೊಳಗೆ ಪ್ರತಿಕ್ಷಣವೂ ಹೊಸತನವನ್ನು ತುಂಬಿ ನಮ್ಮನ್ನು ಕಾರ್ಯೋನ್ಮುಖರನ್ನಾಗಿಸಿ, ಕ್ರಿಯಾಶೀಲರನ್ನಾಗಿಸಿ ಈ ಜಗತ್ತಿಗೆ ಹೊಸತಾಗಿ ಏನಾದರೂ ನೀಡುವ ಶಕ್ತಿಯನ್ನೂ ಸಹಃ ನೀಡಿದೆ ಅಲ್ಲವೇ?

“ಪುರುಷ” ಎಂದರೆ “ಪುರೇ ಶೇತಿ ಇತಿ ಪುರುಷಃ” ಎಂದು ಅರ್ಥ. ಅಂದರೆ ನವರಂದ್ರಗಳಿಂದಾದ ಶರೀರವನ್ನು( ಪುರವನ್ನು) ಧಾರಣೆಮಾಡುವುದು ಎಂದು ಅರ್ಥ. ಇದೇ ಅರ್ಥದಲ್ಲಿ” ಪುರಂದರ ” ಎನ್ನುವ ಪದವೂ ಸಹ ಪ್ರಯೋಗದಲ್ಲುಂಟು. ಎಂದರೆ ಈ ದೇಹವನ್ನು ದರಿಸಿರುವುದು ಎಂದು ಅರ್ಥ. ಈ ದೇಹವನ್ನು ಧರಿಸಿರುವುದು ಪರಮಾತ್ಮ ಸ್ವರೂಪವಾದ ಆತ್ಮ. ಹಾಗಾಗಿ ದೇವರ ಹಲವಾರು ಹೆಸರುಗಳಲ್ಲಿ “ಪುರಂದರ” ಎನ್ನುವುದೂ ಒಂದು.

ಹಾಗಾಗಿ ಪ್ರತೀ ಪ್ರಾಣಿಯನ್ನೂ ಈ ಜಗತ್ತಿನಲ್ಲಿ ಕ್ರಿಯಾಶೀಲತೆಯಿಂದ ಸಕ್ರಿಯವಾಗಿ ಈ ಜಗತ್ತಿಗೆ ಏನಾದರೂ ಕೊಡುವಂತೆ ಮಾಡುವುದು ಕೇವಲ, ಗುಂಡಪ್ಪನವರು ಹೇಳಿದಂತೆ” ದೈವಿಕಸತ್ವಮವನುಂ ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ” ಈ ಆತ್ಮ ಶಕ್ತಿಯೇ. ನಾವು ನಮ್ಮ ಆತ್ಮ ಶಕ್ತಿಯನ್ನು ಸ್ವಪ್ರಯತ್ನದಿಂದ ಎಷ್ಟು ಎಷ್ಟು ಹೆಚ್ಚಿಸಿಕೊಂಡರೆ ನಾವು ಅಷ್ಟು ಹೆಚ್ಚು ಹೆಚ್ಚು ಈ ಜಗತ್ತಿಗೆ ನೀಡಬಹುದು ಮತ್ತು ನಮ್ಮ ಹೊಸತನ

ರಸಧಾರೆ – 227

ನೂತ್ನತೆಯ ಪೂರ್ಣತೆಯವನ್ಯೂನತೆಯ ಗಳಿಪ
ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ
ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ್ಲ
ಧನ್ಯತೆಯ ಬೆದಕಾಟ-ಮಂಕುತಿಮ್ಮ

ಪೂರ್ಣತೆಯನನ್ಯೂನತೆಯ = ಪೂರ್ಣತೆಯನು + ಅನೂನ್ಯತೆಯ // ನೂತ್ನತೆ = ಹೊಸತನ// ಅನೂನ್ಯತೆ = ಕುಂದಿಲ್ಲದ್ದು // ಬೆದಕಾಟ = ಹುಡುಕಾಟ.

ಹೊಸತನವನ್ನು ಪೂರ್ಣತೆಯನ್ನು ಕುಂದಿಲ್ಲದ್ದನ್ನು ಗಳಿಸುವ ಪ್ರಯತ್ನವೇ ಪುರುಷನ ಪ್ರಗತಿಯ ಪ್ರತೀಕ. ಪ್ರಕೃತಿಯನ್ನು ಆರಾಧಿಸುವುದು, ವಿಜ್ಞಾನ, ಕಲೆ, ಕಾವ್ಯ, ಸಾಹಿತ್ಯ, ಸಂಗೀತ ಮುಂತಾದ ವಿದ್ಯೆಗಳೆಲ್ಲವೂ ಮನುಷ್ಯ ಪರಿಪೂರ್ಣತೆಯಡೆಗೆ ನಡೆಯಲು ಬೇಕಾದ ಸಾಧನಗಳು ಮತ್ತು ಅವುಗಳ ಮೂಲಕವೇ ಪರಿಪೂರ್ಣತೆಯ ಸಾಧನೆ ಸಾಧ್ಯವೆಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಮಾಡಿದ್ದಾರೆ.

ಪೂರ್ಣತೆಯಂದರೆ, ಸಂಪೂರ್ಣ ಮತ್ತು ಅಂತಿಮ ಸತ್ಯವನ್ನು ಅರಿಯುವುದು. ಅಂದರೆ ಪರತತ್ವವನ್ನು ಅರಿಯುವುದು. ಅದನ್ನು ಅರಿಯಲು ಈ ವಿಶ್ವತತ್ವದ ಮೂಲಕವೇ ಕಲಿಯಬೇಕು. ತೈತ್ತರೀಯ ಉಪನಿಷತ್ತಿನಲ್ಲಿ ” ತಪಸಾ ಬ್ರಹ್ಮ ವಿಜಿಜ್ಞಾಸಸ್ವ” ಎಂದು ಹೇಳಲ್ಪಟ್ಟಿದೆ. ಅರ್ಥಾತ್ ” ತಪಸ್ಸಿನಿಂದಲೇ ಬ್ರಹ್ಮನನ್ನು ಅರಿತುಕೊಳ್ಳಬೇಕು ” ಎಂದು. ವಾಚಕರೆ, ತಪಸ್ಸೆಂದರೆ ಕೇವಲ ಕಾಡಿನಲ್ಲಿ ಕುಳಿತು ಕಣ್ಣು ಮುಚ್ಚಿ ಅಂತರ್ಯದಲ್ಲಿ ಪರಬ್ರಹ್ಮನನ್ನು ದ್ಯಾನ ಮಾಡುವುದಷ್ಟೇ ಅಲ್ಲ. ಬ್ರಹ್ಮನನ್ನು ಏಕೆ ಈ ಜಗತ್ತಿನಲ್ಲಿರುವ ಯಾವುದೇ ವಿದ್ಯೆಯನ್ನು ಪೂರ್ಣತಯಾ ಕಲಿಯಬೇಕೆಂದರೆ ತಪಸ್ಸನ್ನು ಮಾಡಬೇಕು. ” ತಪ ” ಎಂದರೆ ಅಜ್ಞಾನವನ್ನು ಹೋಗಲಾಡಿಸಿಕೊಂಡು ಜ್ಞಾನವನ್ನು ಉದ್ದೀಪನಗೊಳಿಸುವುದು. ತಪನ ಎಂದರೆ ದಾಹ ಎಂದರ್ಥ. ಜ್ಞಾನ ದಾಹದಿಂದ ಅರಿಯುವ ತೀವ್ರವಾದ ಆಸ್ಥೆಗೂ ತಪಸ್ಸೆಂದೇ ಹೇಳಬಹುದು. ಬೇರೆ ಬೇರೆ ವಿದ್ಯೆಗಳ ಸಾದಕರೆಲ್ಲರೂ ಅವರವರ ಕ್ಷೇತ್ರದಲ್ಲಿಯೇ ಮಾಡುವ ತಪಸ್ಸಿನಂತಹ ಸಾಧನೆಯಲ್ಲಿ ಪರಿಪೂರ್ಣತೆಯನ್ನು, ಪರತತ್ವವನ್ನು, ಪರಮಾತ್ಮನನ್ನು ಕಂಡುಕೊಂಡಿದ್ದಾರೆ.

ಒಬ್ಬ ಕಲಾವಿದ, ಒಬ್ಬ ವಿಜ್ಞಾನಿ, ಒಬ್ಬ ಕವಿ, ಒಬ್ಬ ವೈದ್ಯ, ಒಬ್ಬ ಉಪಾದ್ಯಾಯ ಹೀಗೆ ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಾಗ ಮತ್ತು ತಮ್ಮ ಕೆಲಸದಲ್ಲಿ ಪರಿಪೂರ್ಣ ಫಲಿತಾಂಶವನ್ನು ಪಡೆಯಲು, ತಪಸ್ಸಿನಂತ ಪ್ರಯತ್ನ ಮಾಡಿದಾಗ ಆ ಪರತತ್ವದ ಅನುಭವವನ್ನೇ ಪಡೆಯುತ್ತಾರೆ. ಉದಾಹರಣೆಗೆ ಒಬ್ಬ ಸಂಗೀತಗಾರ, ಒಂದು ರಾಗವನ್ನು ಪರಿಪೂರ್ಣವಾಗಿ ಸಿದ್ದಿಸಿಕೊಳ್ಳಬೇಕಾದರೆ ತಪಸ್ಸಿನಂಥ ಅಭ್ಯಾಸ ಮಾಡಬೇಕು. ಒಬ್ಬ ಗೃಹಿಣಿ ತಾನು ಹುಟ್ಟಿದ ಮನೆಯಿಂದ ಹೊರಬಂದು ಮತ್ತೊಂದು ಮನೆಯನ್ನು ತನ್ನದಾಗಿಸಿಕೊಂಡು ಅಲ್ಲಿರುವವರನ್ನೆಲ್ಲ ತನ್ನವರರನ್ನಾಗಿಸಿಕೊಂಡು ಮನೆಯ ಎಲ್ಲರ ಅಭ್ಯುದಯಕ್ಕೆ ಹೋರಾಡುವುದು ಮತ್ತು ಆ ಹೋರಾಟದಲ್ಲಿ ಯಶಸ್ಸನ್ನು ಪಡೆಯುವುದೂ ಸಹ ಒಂದು ತಪಸ್ಸಲ್ಲವೇ? ಇದನ್ನೇ ಮಾನ್ಯ ಗುಂಡಪ್ಪನವರು ” ಪೂರ್ಣತೆಯವನ್ಯೂನತೆಯ ಗಳಿಪ ಯತ್ನಮೇ ಪೌರುಷ ಪ್ರಗತಿ” ಎಂದಿದ್ದಾರೆ . ಯಾವ ಕುಂದೂ ಅಥವಾ ಕೊರತೆ ಇಲ್ಲದೆ ಯಾವುದೇ ಕ್ಷೇತ್ರದಲ್ಲಿ ಪರಿಪೂರ್ಣತೆಯನ್ನು ಪಡೆಯುವುದೆಂದರೆ ಪರಬ್ರಹ್ಮನನ್ನೇ ಅನುಭವಕ್ಕೆ ತಂದುಕೊಂಡಂತೆಯೆ ಆಗುತ್ತದೆ. ವಾಚಕರೆ ನಾವೂ ಸಹ ನಮ್ಮ ನಮ್ಮ ಕ್ಷೇತ್ರದಲ್ಲಿ ತಪಸ್ಸಿನಂತಹ ತೀವ್ರ ಸಾಧನೆಯನ್ನು ಮಾಡಿದರೆ, ಪೂರ್ಣತ್ವವನ್ನು ಪಡೆದು, ಬ್ರಹ್ಮಾನಂದವನ್ನು ಪಡೆಯಬಹುದು.

ರಸಧಾರೆ – 228

ಮತಿಯು ತಾಂ ಸತ್ಯಶುಭಗಳ ನವನವಾಂಶಗಳ
ಗತಿಯನರಸುತ ನಡೆಯೆ ಪೌರುಷಪ್ರಗತಿ
ಮತಿ ನೀತಿ ಶಾಸ್ತ್ರಗಳು ರಾಜ್ಯಸಂಧಾನಗಳು
ಮತಿಯ ಕಿಂಚಿದ್ವಿಜಯ – ಮಂಕುತಿಮ್ಮ

ಗತಿಯನರಸುತ = ಗತಿಯನು+ಅರಸುತ // ಕಿಂಚಿದ್ವಿಜಯ = ಕಿಂಚಿತ್ತು + ವಿಜಯ, ಮತಿಯು= ಬುದ್ಧಿಯು // ನವನವಾಂಶಗಳ = ಹೊಸಹೊಸ ಅಂಶಗಳ// ಗತಿಯನರಸುತ = ದಿಕ್ಕುದಿಕ್ಕುಗಳಲ್ಲಿ ಹುಡುಕುತ್ತಾ // ಕಿಂಚಿತ್ತು=ಸ್ವಲ್ಪಮಾತ್ರ.

ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಹೊಸ ಹೊಸ ವಿಚಾರಗಳನ್ನು ಹೊಸಹೊಸ ವಿಷಯ ವಸ್ತುಗಳನ್ನು ಹುಡುಕಲು ಉಪಯೋಗಿಸಿ ನಡೆದರೆ ಪುರುಷ ಪ್ರಗತಿ . ಆ ರೀತಿಯ ಪ್ರಯತ್ನದಲ್ಲಿ ಲಭಿಸಿದ ಅಲ್ಪಮಾತ್ರ ವಿಜಯವೇ ವಿಜ್ಞಾನ, ನೀತಿ ಶಾಸ್ತ್ರಗಳು, ಅವನು ಕಟ್ಟಿದ ರಾಜ್ಯಗಳು ಮುಂತಾದವುಗಳು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳುತ್ತಾರೆ.

ಪ್ರತಿದಿನವೂ ಏನಾದರೂ ಹೊಸದನ್ನು ಹುಡುಕುವ ಅಥವಾ ಮಾಡುವ ಬೆದಕಾಟದ ಪ್ರಾಣಿ ನಮ್ಮ ಮನುಷ್ಯ. ಜಗತ್ತಿನ ಸೃಷ್ಟಿಯಲ್ಲಿರುವ ಸಕಲ ಪ್ರಾಣಿಗಳಲ್ಲಿ ಮನುಷ್ಯನೊಬ್ಬನೇ ಅಲ್ಲವೇ ಅತ್ಯಧಿಕ ಬುದ್ಧಿಶಕ್ತಿಯ ಪ್ರಾಣಿ. ತಾನು ಕಾಣುವ ಪ್ರತಿಯೊಂದರಲ್ಲೂ ಏನಾದರೊಂದು ಹೊಸತನ್ನು ಹುಡುಕುವ ಇವನ ಪ್ರಯತ್ನ ಅನಾದಿ ಕಾಲದಿಂದಲೂ ನಡೆಯುತ್ತಲೇ ಇದೆ . ಸುತ್ತು ಪರಿಸರದಲ್ಲಿ ಇರುವ ಎಲ್ಲವನ್ನೂ ಕೆದಕಿ ” ಹೊಸತೇನಾದರೂ ಸಿಗುವುದೋ ಅಥವಾ ಸಿಕ್ಕದ್ದರಲ್ಲಿ ಹೊಸತೇನಾದರೂ ಮಾಡಬಹುದೇ” ಎಂದು ನೋಡುತ್ತಲೇ ಇರುತ್ತಾನೆ.

ಇಂತಹ ಹುಡುಕಾಟದಲ್ಲೇ ಮನುಷ್ಯ ಕಂಡುಕೊಂಡದ್ದು ಅಪರಿಮಿತವಾದ ಲೋಕ ಜ್ಞಾನ. ಈ ಸೃಷ್ಟಿಯಲ್ಲಿ ಎಷ್ಟು ವಿಷಯಗಳಿವೆಯೋ, ಎಲ್ಲದರಲ್ಲೂ ಇವನ ಹುಡುಕಾಟ, ಹೊಸತನದ ಅವಿಷ್ಕಾರದ ದಾಹ ನಿರಂತರ. ಈ ಜಗತ್ತಿನಲ್ಲಿ ಇವನ ಅಸ್ಥಿತ್ವದಷ್ಟೇ ಹಳೆಯದು ಇವನ ಬೆದಕಾಟದ ಚರಿತ್ರೆ. ಇದರ ಫಲವೇ ನಮ್ಮ ದೇಶದಲ್ಲಿ ವೇದಗಳು, ಉಪನಿಷತ್ತುಗಳು, ಪುರಾಣಗಳು, ವೈದ್ಯ ಶಾಸ್ತ್ರ, ಜ್ಯೋತಿಷ್ಯ, ಜ್ಯೋತಿರ್ಶಾಸ್ತ್ರ, ಅರ್ಥಶಾಸ್ತ್ರ , ನೀತಿ ಸಂಹಿತೆಗಳು, ರಾಜಕೀಯ ಶಾಸ್ತ್ರದಂತಹ ಅಪರಿಮಿತ ಜ್ಞಾನ ಭಂಡಾರ ಲಭ್ಯವಿದೆ. ಇಂತಹ ಪ್ರಯತ್ನ ಮನುಷ್ಯನಿಂದ ಇದು ಜಗತ್ತಿನಾದ್ಯಂತ ನಡೆದಿದೆ ಇವುಗಳ ಬಲದ ಮೇಲೆ ದೇಶಗಳನ್ನು ರಾಜ್ಯಗಳನ್ನು ಕಟ್ಟಿಕೊಂಡ. ಇವೆಲ್ಲ ಇವನ ಪ್ರಗತಿಯ ಪ್ರತೀಕ. ಅದರೂ ಗುಂಡಪ್ಪನವರು ” ಮತಿಯ ಕಿಂಚಿದ್ವಿಜಯ ” ಎಂದು ಈ ಕಗ್ಗದಲ್ಲಿ ಹೇಳಿದ್ದಾರೆ.

ರಸಧಾರೆ – 229

ತೊರೆಯ ತೆರೆಯಸಾಲ್ಗಳೇಳುತ ಬೀಳುತಿರುವಂತೆ
ಪರಿಯುತಿರ್ಪುದು ಪುರುಷಚೈತನ್ಯಲಹರಿ
ಅರಿಯದದು ನಿಲುಗಡೆಯ ತೊರೆಯದದು ಚಲಗತಿಯ
ಪರಬೊಮ್ಮನುಯ್ಯಲದು – ಮಂಕುತಿಮ್ಮ

ತೆರೆಯಸಾಲ್ಗಳೇಳುತ=ತೆರೆಯ+ಸಾಲುಗಳು+ಏಳುತ // ಪರಿಯುತಿರ್ಪುದು = ಪರಿಯುತ+ಇರ್ಪುದು // ಅರಿಯದದು=ಅರಿಯದು+ಅದು// ತೊರೆಯದದು = ತೊರೆಯದು+ಅದು// ಪರಬೊಮ್ಮನುಯ್ಯಲದು= ಪರಬೊಮ್ಮನ +ಉಯ್ಯಲ +ಅದು . ಪರಿಯುತ = ಹರಿಯುತ // ಪರಬೊಮ್ಮನ = ಪರಬ್ರಹ್ಮನ //ಉಯ್ಯಲ = ಉಯ್ಯಾಲೆ

ಪುರುಷ ಚೈತನ್ಯ, ನದಿಯ ತೆರೆಯಂತೆ ಏಳುತ್ತಾ ಬೀಳುತ್ತಾ ಹರಿಯುತ್ತಿದೆ. ಅದಕ್ಕೆ ತನ್ನ ನಿಲುವೆಲ್ಲಿ ಎಂದು ಗೊತ್ತಿಲ್ಲ. ಅದು ತನ್ನ ಚಲನೆಯ ಗತಿಯೂ ಗೊತ್ತಿಲ್ಲ. ಈ ಜಗತ್ತಿನಲ್ಲಿ ಹರಿಯುವ ಪರಮ ಚೈತನ್ಯದ ಚಲನೆ ಆ ಪರಮಾತ್ಮನ ಉಯ್ಯಾಲೆಯಂತಿದೆ ಎಂದು ಬಹಳ ಗಹನ ತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .

ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗೂ ಆ ಪರಮ ಚೈತನ್ಯವೇ ಕಾರಣ ಎಂದು ಒಪ್ಪಿಕೊಂಡಾಗಿದೆ. ಅದು ಮಾನವರ ಪರಿಭಾಷೆಯಲ್ಲಿ ಉತ್ಕ್ರುಷ್ಟವಾಗಿಯೂ, ಕೆಟ್ಟದ್ದಾಗಿಯೂ, ಉಗ್ರವಾಗಿಯೂ, ಶಾಂತವಾಗಿಯೂ, ಅಂದವಾಗಿಯೂ , ಕುರೂಪವಾಗಿಯೂ ಹೀಗೆ ಹಲವಾರುಬಗೆಗಳಲ್ಲಿ ಪ್ರಕಟವಾಗುತ್ತದೆ. ನದಿಯ ತೆರೆಗಳಂತೆ ಮೇಲೇಳುತ್ತಾ ಕೆಳಬೀಳುತ್ತಾ ಇರುತ್ತದೆ. ಅದರ ಗುಣಗಳನ್ನು ಅನುಭವಿಸುವುದು ನಮ್ಮ ಭಾವವಷ್ಟೇ. ಈ ಭಾವವೇ ಬದಲಾಗುತ್ತಾ ಇಡೀ ಜಗತ್ತನ್ನು ವೈವಿಧ್ಯಮಯವಾಗಿ ಕಾಣುವ ಪರಿಪಾಟ ನಮ್ಮ ಮಾನವನಿಗೆ. ಇದಕ್ಕೆ ಒಂದು ಆದಿಯೂ ಇಲ್ಲ ಅಥವಾ ಒಂದು ಅಂತ್ಯವೂ ಇಲ್ಲ. ಹುಟ್ಟಿದಾರಭ್ಯ ಸಾಯುವತಕ ನಮ್ಮ ಮನಸ್ಸುಗಳಲ್ಲಿ ಈ ರೀತಿಯ ಭಾವಗಳ ತೆರೆಗಳು ಏಳುತ್ತಲೇ ಇರುತ್ತವೆ.

“ಆದರೆ ಈ ಭಾವಗಳು ನಮ್ಮ ಭಾವಗಳೇ?” ಎಂದು ಯೋಚಿಸಿದಾಗ ನಮ್ಮ ಅರಿವಿಗೆ ಬರುವುದು ಹೀಗೆ.ಈ ಜಗತ್ತೆಲ್ಲವೂ ಆ ಪರಮಾತ್ಮನಿಂದಲೇ ವ್ಯಾಪಕವಾಗಿ ಆವೃತವಾಗಿದೆ ಎನ್ನುವುದನ್ನು ನಿಸ್ಸಂಶಯವಾಗಿ ಒಪ್ಪಿಕೊಂಡರೆ ತಾನೇ ಸೃಷ್ಟಿಮಾಡಿದ ನಮ್ಮ ದೇಹ ಮನಸ್ಸು ಬುದ್ಧಿಗಳಂತಹ ಉಪಕರಣಗಳನ್ನು ಉಪಯೋಗಿಸಿಕೊಂಡು, ತಾನೇ ಈ ಭಾವಗಳನ್ನು ಅನುಭವಿಸುತ್ತಾ ಆನಂದಿಸುತ್ತಾ ಒಂದು ಉಯ್ಯಾಲೆಯಂತಹ ಆಟವನ್ನು ಆಡುತ್ತಿದ್ದಾನೆ ಆ ಪರಮಾತ್ಮ. ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ವಿಧ್ಯಮಾನವೂ ಅವನಾಟವೆಂದು ಒಪ್ಪಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಬೇಕು. ಆಧ್ಯಾತ್ಮಿಕ ಔನ್ನತ್ಯದ ಸ್ಥರದಲ್ಲಿ ಈ ಪರಮಾತ್ಮ ತತ್ವ ಸ್ಥಿರವಾಗುತ್ತದೆ. ಎಲ್ಲಿಯ ತನಕ ನಾವು ನಮ್ಮ ದೇಹ ಮನಸ್ಸು ಬುದ್ಧಿಗಳೊಂದಿಗೆ ನಮ್ಮನ್ನು ಗುರುತಿಸಿ ಕೊಳ್ಳುತ್ತೇವೆಯೋ ಅಲ್ಲಿಯತನಕ ನಮಗೆ ಸತ್ಯದ, ಸತ್ವದ ಮತ್ತು ತತ್ವದ ದರ್ಶನವಾಗುವುದಿಲ್ಲ. ಅಂತಹ ಪ್ರಾಕೃತಭಾವದಿಂದ ನಾವು ಮೇಲೇರಲು ಪ್ರಯತ್ನ ಪಡಬೇಕು. ಪಟ್ಟರೆ ಹಂತ ಹಂತವಾಗಿ ಸಾಧನೆಯಿಂದ ಔನ್ನತ್ಯವನ್ನು ಸಾಧಿಸಬಹುದು.

ರಸಧಾರೆ- 230

ತೆರೆಯೇಳುವುದು ದೈವಸತ್ವ ನರನೊಳು ನೆರೆಯೆ
ತೆರೆ ಬೀಳುವುದು ಕರ್ಮವಿಧಿಯಿದಿರು ಪರಿಯೆ
ತೆರೆಯನಾನುತೆ ತಗ್ಗು, ತಗ್ಗುನಾನುತಲಿ ತೆರೆ
ತೆರೆತಗ್ಗುಗಳಿನೆ ತೊರೆ – ಮಂಕುತಿಮ್ಮ

ತೆರೆಯೇಳುವುದು = ತೆರೆಯು+ ಏಳುವುದು// ಕರ್ಮವಿಧಿಯಿದಿರು = ಕರ್ಮ+ ವಿಧಿಯ+ ಎದಿರು//ತೆರೆಯನಾನುತೆ= ತೆರೆಯನು + ಆನುತೆ// ತಗ್ಗುನಾನುತಲಿ = ತಗ್ಗನು + ಆನುತಲಿ, ಆನುತೆ= ಅನುಗುಣವಾಗಿ, ಹೊಂದಿಕೊಂಡಂತೆ //ತೆರೆಯೇಳುವುದು = ಭಾವ ಲಹರಿ ಏಳುವುದು.

ಮನುಷ್ಯನ ಮನಸ್ಸಿನಲ್ಲಿ ಆ ಪರಮಾತ್ಮ ತತ್ವ ತುಂಬಿದಾಗ ಒಂದು ಆಧ್ಯಾತ್ಮಿಕ ಭಾವ ಉನ್ನತವಾಗಿರುತ್ತದೆ. ಆದರೆ ಬದುಕಿನ ಕೆಲಸಕಾರ್ಯಗಳಲ್ಲಿ ಮಗ್ನರಾದಾಗ ಆ ಭಾವ ಮರೆಯಾಗಿ ನಾವು ಮತ್ತೆ ಪ್ರಾಪಂಚಿಕ ವಿಷಯಗಳಲ್ಲಿ ಬೀಳುತ್ತೇವೆ. ಮತ್ತೆ ಆ ಪಾರಮಾರ್ಥಿಕ ಭಾವ ಮನದಲ್ಲಿ ತುಂಬಿಕೊಂಡಾಗ ಮತ್ತೆ ಮೇಲೇಳುತ್ತೇವೆ ಹೀಗೆ ಏಳುತ್ತಾ ಬೀಳುತ್ತಾ ಸಾಗುವುದೇ ಜೀವನದ ಪ್ರಯಾಣ ಎಂದು ಒಂದು ಸುವಿಚಾರವನ್ನು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಆಕಾಶದಿಂದ ಬಿದ್ದ ಒಂದೊಂದು ಮಳೆಯ ಹನಿಯೂ ತನ್ನ ಗಮ್ಯವಾದ ಸಾಗರವನ್ನು ಸೇರಲು ಬೇರೆ ಹನಿಗಳೊಂದಿಗೆ ಕೂಡಿ ಒಂದು ಝರಿಯಾಗಿ ತೊರೆಯಾಗಿ ನದಿಯಾಗಿ ಹರಿಯುತ್ತದೆ. ಹಾಗೆ ಹಾರಿಯುವಾಗ, ಹಳ್ಳಗಳಲ್ಲಿ ಬಿದ್ದು ಮತ್ತೆ ಮೇಲೇರಿ ಮತ್ತೆ ತೊರೆಯಾಗಿ ಹೇಗಾದರೂ ಸರಿ ಸಮುದ್ರವನ್ನು ಸೇರುವ ತನ್ನ ಪ್ರಯತ್ನವನ್ನು ಮುಂದುವರೆಸುವಂತೆ ಆತ್ಮವೂ ಸಹ ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಹವಣಿಸುವಾಗ ಆಧ್ಯಾತ್ಮಿಕ ಭಾವ ಬರುತ್ತದೆ. ಆದರೆ ಈ ಜಗತ್ತಿನಲ್ಲಿ ಹುಟ್ಟಿದಮೇಲೆ ಬದುಕಿನ ಹೋರಾಟದಲ್ಲಿ ಆ ಭಾವ ಆಗಾಗ ಅಭಾವವಾಗಿಬಿಡಬಹುದು. ಹಾಗಾದಾಗ ಮತ್ತೆ ಜೀವನದ ಜಂಜಾಟದಲ್ಲಿ ಬೀಳಬಹುದು. ಹೋರಾಟದ ತೀವ್ರತೆ ಕಡಿಮೆಯಾದಾಗ ಮತ್ತೆ ಆ ಪಾರಮಾರ್ಥಿಕ ಭಾವ ಅಧಿಕವಾಗಬಹುದು. ಒಂದು ಹಾವುಏಣಿಯಾಟದಂತೆ, ಮೇಲೆ ಹೋಗಿ, ಕೆಳಗೆ ಇದ್ದು ಮತ್ತೆ ಮೇಲೆ ಹೋಗುವ ಮತ್ತೆ ಬೀಳುವ ಪರಿಪಾಟ ನಡೆದೇ ಇರುತ್ತದೆ ಎನ್ನುವುದೇ ಈ ಕಗ್ಗದ ಹೂರಣ.

ಆಧ್ಯಾತ್ಮದ ಭಾವ ಬಂದು ಬಿಟ್ಟರೆ ಬದುಕಿನ ಅಂಟು ಬಿಡುತ್ತದೆ. ಬದುಕಿನ ಅಂಟು ಬಿಟ್ಟರೆ ಅಧ್ಯಾತ್ಮ ಅಧಿಕವಾಗುತ್ತದೆ. ಇದು ” ಮದುವೆಯಾಗದ ಹೊರತು ಹುಚ್ಚು ಬಿಡದು: ಹುಚ್ಚು ಬಿಡದ ಹೊರತು ಮದುವೆಯಾಗದು ” ಎನ್ನುವಂತೆ ಇದೆ. ನಾವು ಏನು ಮಾಡಬೇಕೆಂದರೆ ಬದುಕಿನ ಜಂಜಾಟವನ್ನೂ ಅರಿಯಬೇಕು ಪರಮಾರ್ಥವನ್ನೂ ಅರಿಯಬೇಕು. ಇವೆರಡರ ಪ್ರಯೋಜನವನ್ನು ಅರಿಯಬೇಕು. ನಮಗೆ ಪರಮಾರ್ಥದ ಹಿತವು ಅರ್ಥವಾಗಬೇಕು.ಅದನ್ನು ಹಿಡಿದುಕೊಳ್ಳಬೇಕು. ಆಗ ನಮ್ಮ ಜೀವನದಿಯ ಪ್ರಯಾಣ ಹಳ್ಳವಿಲ್ಲದ ಮತ್ತು ಹಳ್ಳದಲ್ಲಿ ಬೀಳದ ಪ್ರಯಾಣವಾಗುತ್ತದೆ. ವಾಚಕರೆ, ನಮಗೆ ಯಾವುದುಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗೆ ಉಂಟಲ್ಲವೇ?

ರಸಧಾರೆ – 231

ಇಂದೆದ್ದ ತೆರೆ ನಾಳೆ ಬೀಳುವುದು; ಮರುವಗಲು
ಮುಂದೆ ತಾನೇಳುವುದು ಬೇರೆ ಗಾತ್ರದಲಿ
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ
ಮುಂದಹುದು ಬೆರಗೊಂದೆ – ಮಂಕುತಿಮ್ಮ

ಇಂದೆದ್ದ= ಇಂದು + ಎದ್ದ// ಮರುವಗಲು = ಮರು+ ಹಗಲು// ತಾನೇಳುವುದು = ತಾನು + ಏಳುವುದು// ನಾಳೆಗಳನೆಲ್ಲವ = ನಾಳೆಗಳನು+ಎಲ್ಲವ// ಮುಂದಹುದು = ಮುಂದು+ ಅಹುದು .

ಇಂದು ಎದ್ದ ತೆರೆ ಬೀಳುವುದು ಮತ್ತೆ ಮರುದಿವಸ ಇನ್ನೊಂದು ತೆರೆ ಬೇರೆ ಗಾತ್ರದಲಿ ಏಳುವುದು. ಹಾಗೆ ಇಂದು ನಾಳೆಗಳ ಬೇರೆ ಬೇರೆ ಗಾತ್ರದ ತೆರೆಗಳನ್ನೆಲ್ಲ ಒಟ್ಟುಗೂಡಿಸಿದರೆ ಅದರ ಹಿಂದೆ ನಮಗೆ ಒಂದು ವಿಶಾಲವಾದ ಕಡಲು ಕಾಣುವಂತೆ, ನಮ್ಮ ಮನಸ್ಸುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ, ರೂಪದಲ್ಲಿ, ಗಾತ್ರದಲ್ಲಿ ಮತ್ತು ಬೇರೆ ಸಮಯದಲ್ಲಿ, ಬೇರೆ ಬೇರೆ ಕಾರಣಗಳಿಗೆ ಎಂದ್ದಂತಹ ಪರತತ್ವದ ಭಾವಗಳನ್ನೆಲ್ಲ ಒಟ್ಟು ಮಾಡಿದರೆ ನಮಗೆ ಆ ಪರತತ್ವದಿಂದ ಪ್ರತಿರೂಪವಾದ ಪರಮಾತ್ಮನ ಅರಿವು ಮೂಡುತ್ತದೆ ಎಂದು ಒಂದು ಗಹನವಾದ ವಿಚಾರವನ್ನು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರು ಮಂಡಿಸಿದ್ದಾರೆ.

ನಮ್ಮ ಮನಸ್ಸುಗಳಲ್ಲಿ, ಶ್ರದ್ಧೆಯಿಂದಲೋ,ಭಕ್ತಿಯಿಂದಲೋ,ಭಯದಿಂದಲೋ, ಸಂಪ್ರದಾಯದ ಪಾಲನೆ ಮಾಡುವಾಗಲೋ, ಗುಂಪಿನಲ್ಲಿ ಒಂದಾಗಿಯೋ ಆ ದೇವರ ಧ್ಯಾನ ಉಂಟಾಗಬಹುದು. ಕೆಲವು ಬಾರಿ ಅದು ಸುಮ್ಮನೆ ಬಂದುಹೋಗುವ ಭಾವವಿರಬಹುದು ಅಥವಾ ತೀವ್ರತೆಯಿಂದ ಕೂಡಿದ ಚಿಂತನೆಯಾಗಿರಬಹುದು. ಕ್ಷಣಿಕವಾದ ಭಾವವಾಗಿರಬಹುದು ಅಥವಾ ಧೀರ್ಘ ಧ್ಯಾನದ ಸ್ಥಿತಿಯಾಗಿರಬಹುದು. ಹೀಗೆ ಬಂದುಹೋಗುವ ಭಾವಗಳು ನಮ್ಮಲ್ಲಿ ಸ್ಥಾಯೀ ರೂಪದಲ್ಲಿ ಇರುವುದಿಲ್ಲ. ಅದಕ್ಕೆ ಕಾರಣ ನಾವಿರುವ ಜಗತ್ತಿನ ಇಂದ್ರಿಯ ಜನ್ಯವಾದ ಸೆಳೆತಗಳು ನಮ್ಮನ್ನು ಮತ್ತೆ ಮತ್ತೆ ಸೆಳೆದು ಈ ಜಗತ್ತಿನ ಆಕರ್ಷಣೆಗೆ ತಳ್ಳುತ್ತದೆ, ಅಲ್ಲವೇ? ಒಂದು ಕಡೆ ಜಗತ್ತಿನ ಮತ್ತು ಜಗತ್ಸಂಬಂಧವಾದ ಚಿಂತನೆಗಳು, ಮತ್ತೊಂದು ಕಡೆ ಜಗತ್ತಿನ ಸೃಷ್ಟಿಕರ್ತನಾದ, ಸರ್ವಕಾರಕನಾದ, ಸರ್ವನಿಯಾಮಕನಾದ, ಸರ್ವವ್ಯಾಪಕನಾದ ಆ ಪರಮ ಚೈತನ್ಯದ ಚಿಂತೆ, ಪ್ರಮಾಣ ಮತ್ತು ಪರಿಮಾಣ ಬೇಧವಿದ್ದರೂ ಭಾವಗಳೆರಡೂ ನಮ್ಮಲ್ಲಿ ಬಂದು ಹೋಗುತ್ತವೆ.

ಪ್ರತಿಯೊಬ್ಬರಲ್ಲೂ ಪ್ರಮಾಣ ಭೇದವಿದ್ದರೂ ಹೀಗೆ ಬಂದು ಹೋಗುವ ಈ ಭಕ್ತಿಯ ಅಥವಾ ಧ್ಯಾನದ ಭಾವಗಳನ್ನು ಒಂದು ಕಡೆ ಕೇಂದ್ರೀಕರಿಸಿದರೆ ಅಥವಾ ಒಟ್ಟು ಸೇರಿಸಿದರೆ ಅವರವರ ಮಟ್ಟಿಗೆ ಅವರವರು ಏನು ಮತ್ತು ಎಷ್ಟು ಕಾಣಲು ಸಾಧ್ಯವೋ ಅಷ್ಟರ ಸಮಗ್ರ ಚಿತ್ರಣ ನಮಗೆ ಕಾಣುತ್ತದೆ. ಕಡಲ ತೀರದಲ್ಲಿ ನಿಂತು ನೋಡಿದರೆ ನಮಗೆ ಕಡಲ ವೈಶಾಲ್ಯ ಕಾಣುತ್ತದೆ. ಆದರೆ ನಾವು ನೋಡುವುದು ನಮ್ಮ ದೃಷ್ಟಿ ಎಷ್ಟು ನೋಡಬಹುದೋ ಅಷ್ಟು ಮಾತ್ರ. ಅದಕ್ಕೂ ಆಚೆ ಕಡಲಿಲ್ಲವೇ ? ನಮ್ಮ ದೃಷ್ಟಿ ಹೆಚ್ಚಾದರೆ ನಮಗೆ ಇನ್ನೂ ವಿಶಾಲವಾಗಿ ಕಾಣುತ್ತದೆ.

ಹಾಗೆಯೇ ನಮ್ಮ ನಮ್ಮ ಕ್ಷಮತೆಗೆ ಅನುಸಾರವಾಗಿ ನಾವು ಆ ಪರಮಾತ್ಮ ತತ್ವವನ್ನು ಭಾವಿಸುತ್ತೇವೆ ಮತ್ತು ಅನುಭವಿಸುತ್ತೇವೆ. ನಮ್ಮ ಮಟ್ಟಿಗೆ ಅದು ನಮ್ಮ ಅನುಭವ. ಹೆಚ್ಚು ಭಾವಿಸಿದರೆ ಹೆಚ್ಚು ಮತ್ತು ವಿಶಾಲವಾದ ಅನುಭವ ಆಗುತ್ತದೆ. ನಾವು ನಮ್ಮ ” ನೋಡುವ ಕ್ಷಮತೆಯನ್ನು” ಹೆಚ್ಚಿಸಿಕೊಂಡರೆ ನಮ್ಮ ಭಾವನೆಯೂ ಹೆಚ್ಚಾಗಿ ಪರಮಾತ್ಮ ತತ್ವದ ಮತ್ತು ಸತ್ವದ ಭಾವ ಮತ್ತು ಅನುಭವವೂ ಹೆಚ್ಚಾಗುತ್ತದೆ. ನಮ್ಮ ದೃಷ್ಟಿಯನ್ನು ವಿಶಾಲವಾಗಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಸೃಷ್ಟಿಯ ಹಿಂದಿರುವ ಆ ಪರಮ ಚೇತನದ ಸಮಗ್ರ ಚಿತ್ರವನ್ನು ಕಾಣುವ ಪ್ರಯತ್ನ ಮಾಡಬೇಕು. ಅಂತಹ ಪ್ರಯತ್ನವನ್ನು ನಾವೂ ಸಹ ಮಾಡೋಣವೆ?

ರಸಧಾರೆ – 232

ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು
ಹಾಲೊಡೆಯೆ ಕಡೆದದನು ತಕ್ರವಾಗಿಪುದು
ಹಾಳ ಹಾಳಾಗಿಪುದು ಹಳದ ಹೊಸದಾಗಿಪುದು
ಬಾಳಿಗಿದೆ ಚಿರಧರ್ಮ – ಮಂಕುತಿಮ್ಮ.

ಹಾಲೊಡೆಯೆ = ಹಾಲು + ಒಡೆಯೆ//ಕಡೆದದನು = ಕಡೆದು + ಅದನು //ಹಾಳಾಗಿಪುದು = ಹಾಳು + ಆಗಿಪುದು // ಹೊಸದಾಗಿಪುದು = ಹೊಸತು+ಆಗಿಪುದು ಬಾಳಿಗಿದೆ = ಬಾಳಿಗೆ + ಇದೆ ತಕ್ರ = ಮಜ್ಜಿಗೆ.

ಬೀಳುವುದನ್ನು ಎತ್ತಿ ನಿಲ್ಲಿಸುವುದು, ಬಿದ್ದುದ್ದನ್ನು ಕಟ್ಟಿ ನಿಲ್ಲಿಸುವುದು, ಹಾಲು ಒಡೆದರೆ( ಮೊಸರಾದರೆ) ಅದನ್ನು ಕಡೆದು ಮಜ್ಜಿಗೆಯನ್ನಾಗಿಸುವುದು, ಯಾವುದಾರೂ ವಸ್ತು ಹಾಳಾದರೆ ಹಾಗೆಯೇ ಬಿಡುವುದು, ಹಳತನ್ನು ಹೊಸದಾಗಿಸುವುದು, ಮುಂತಾದ ಕೆಲಸಗಳನ್ನು ಮಾಡುವುದೇ ಮಾನವನ ಬಾಳಿಗೆ ಶಾಶ್ವತ ಧರ್ಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಧರ್ಮವೆಂದರೆ ಸ್ವಭಾವ. ಈ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತಿ ವಸ್ತುವಿಗೂ, ಪ್ರತಿ ಪ್ರಾಣಿಗೂ ಒಂದೊಂದು ಭಿನ್ನವಾದ ಸ್ವಭಾವ ಎಂದರೆ, ಧರ್ಮವಿದೆ. ಮನುಷ್ಯನಿಗೆ ಮಾನವನಾಗಿರುವುದೇ ಸ್ವಭಾವ. ಆದರೆ ನಮ್ಮ ಮಾನವ ಮಾನವತೆಯನ್ನು ಬೆಳಗುವ ಜೊತೆಗೆ ತನ್ನ ಕಾರ್ಯಕ್ಷೇತ್ರಕ್ಕೆ ಸಾವಿರಾರು ಆಯಾಮಗಳನ್ನು ಸೇರಿಸಿಕೊಂಡಿದ್ದಾನೆ. ಇದರ ಪ್ರತಿಫಲವೇ ಅನ್ಯ ಯಾವ ಪ್ರಾಣಿಗೂ ಇಲ್ಲದ ಕಾರ್ಯ ಕ್ಷಮತೆ ಇವನದು. ಹೊಸ ಹೊಸ ವಸ್ತು ವಿಷಯಗಳನ್ನು ಕಂಡು ಹಿಡಿದುಕೊಳ್ಳುವುದು, ಅದು ಹಳತಾದರೆ ಹೊಸ ಹೊಸ ವಸ್ತುಗಳನು ಸೃಜಿಸುವುದು. ಇರುವ ವಸ್ತು ಹಾಳಾದರೆ ಸರಿಪಡಿಸುವುದು. ಯಾವುದಾದರೂ ವಸ್ತುವಿನ ರೂಪ ಕೆಟ್ಟರೆ, ಹೊಸ ರೂಪ ಕೊಡುವುದು, ಹೀಗೆ ಪ್ರತಿ ವಸ್ತುವನ್ನೂ ತನ್ನ ಉಪಯೋಗಕ್ಕೆ ತಂದುಕೊಳ್ಳುವುದು ಮಾನವನ ಸಹಜ ಗುಣ, ಹಾಗಾಗೇ ಮಾನ್ಯ ಗುಂಡಪ್ಪನವರು ಹೇಳುವ ಹಾಗೆ,” ಬಾಳಿಗಿದೆ ಚಿರಧರ್ಮ”. ಮಾನವನಿಗೆ ಇದು ನಿರಂತರ ಧರ್ಮ.

ವಾಚಕರೆ, ಈ ವಿಚಾರ ಎಲ್ಲರಗೂ ಗೊತ್ತಿರುವ ವಿಚಾರವೇ. ಇದರಲ್ಲಿ ಹೊಸತೇನೂ ಇಲ್ಲ. ಆದರೆ ಇಂತಹ ಅದ್ಭುತ ಶಕ್ತಿಯನ್ನು ಆ ಪರಮಾತ್ಮನಿಂದ ಪಡೆದ ಈ ಮನುಷ್ಯ ಇಡೀ ಜಗತ್ತಿನಲ್ಲಿ ಹೊಸತನ್ನು ಸೃಷ್ಟಿಮಾಡುವ ಭರದಲ್ಲಿ, ಮನುಕುಲಕ್ಕೆ ಮಾರಕವಾದ ವಸ್ತುಗಳನ್ನು ಹೇರಳವಾಗಿ ಸೃಷ್ಟಿಮಾಡಿಬಿಟ್ಟಿದ್ದಾನೆ. ಇನ್ನೂ ಮಾಡುತ್ತಲೇ ಇದ್ದಾನೆ. ಇವನು ಸೃಜಿಸಿದಾಗ ಇವನ ಉದ್ದೇಶ್ಯವೇನೋ ಇರುತ್ತದೆ. ಆದರೆ ಇವನ ಆವಿಷ್ಕಾರದ ಉಪಯೋಗ ದುರ್ಜನರ ಕೈಯಲ್ಲಿ ಬಿದ್ದು, ಜಗತ್ತಿನ ಜನರ ಬದುಕಿಕೆ ಮಾರಕವಾಗಿದೆ. ಇದರಿಂದ ಅನಾಹುತ ಖಂಡಿತ. ” ಬಸ್ಮಾಸುರನ ಕೈಯಲ್ಲಿ “ಬೂದಿಯಾಗಿಸುವ ವರ”ವನ್ನು ಕೊಟ್ಟಹಾಗೆ”. ಇಂತಹ ಬಸ್ಮಾಸುರರು ನಮ್ಮಾ ನಿಮ್ಮ ನಡುವೆ ಬಹಳಷ್ಟು ಜನರಿದ್ದಾರೆ. ಅವರು ತಮ್ಮ ಕೆಲಸದ “ದುರ್ಭಾರ”ದಲ್ಲಿ ತಾವೇ ನಾಶವಾಗುವ ಮುಂಚೆ ಜಗತ್ತಿಗೆ ಸಾಕಷ್ಟು ನಷ್ಟ ಮಾಡೇ ಹೋಗುತ್ತಾರೆ. ನಾವು ನಮ್ಮ ಪರಿಧಿಯೊಳಗಿನ ಸಮಾಜವನ್ನು ಸೂಕ್ತ ಮತ್ತು ಸುಮುಖವಾಗಿಸಿಕೊಂಡರೆ ಒಳಿತಲ್ಲವೇ ?

ರಸಧಾರೆ – 233

ಸೃಷ್ಟಿಯ ವಿಧಾನದಲಿ ಸೊಟ್ಟುಗಳು ನೂರಿಹವು
ನೆಟ್ಟಗಿಪೆನ್ ಅವನ್ ಎಂದು ನರರ ಚಿರದೀಕ್ಷೆ
ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು?
ನಿಷ್ಠುರಪ್ರಿಯರವರು – ಮಂಕುತಿಮ್ಮ

ನೂರಿಹವು = ನೂರು + ಇಹವು// ನೆಟ್ಟಗಿಪೆನ್ = ನೆಟ್ಟಗೆ+ಇಪೆನ್ // ಇಷ್ಟಗಳನನ್ಯೋನ್ಯವವರೇಕೆ = ಇಷ್ಟಗಳನ+ಅನ್ಯೋನ್ಯವ+ಅವರು+ಏಕೆ// ಬಗೆದಿರರು = ಬಗೆದು+ ಇರರು// ನಿಷ್ಠುರಪ್ರಿಯರವರು = ನಿಷ್ಠುರ+ಪ್ರಿಯರು+ಅವರು

ಸೊಟ್ಟುಗಳು = ನೇರವಲ್ಲದ್ದು// ನೆಟ್ಟಗಿಪೆನ್ = ನೆಟ್ಟಗಾಗಿಸುತ್ತೇನೆ// ಅನ್ಯೋನ್ಯವ = ಅನ್ಯೋನ್ಯತೆಯ// ನಿಷ್ಠುರಪ್ರಿಯರವರು = ನಿಷ್ಠುರ ಕಟ್ಟಿಕೊಳ್ಳಲು ಬಯಸುವವರು.

ಈ ಜಗತ್ತಿನ ಸೃಷ್ಟಿಯ ವಿಧಾನದಲ್ಲಿ ನೂರಾರು ಸೊಟ್ಟುಗಳು ಅಂದರೆ ಅಂಕು ಡೊಂಕುಗಳು ಇವೆ. ಅದನ್ನು ನೆರವಾಗಿಸಬೇಕೆನ್ನುವುದೇ ಮಾನವನ ಸದಾಕಾಲದ ಇಚ್ಛೆ. ಮನುಷ್ಯರು ಪರಸ್ಪರ ಇಚ್ಛೆಗಳನ್ನು ಅರಿಯಲು ವಿಫಲರಾಗುತ್ತಾರೆ . ಆದರೆ ಜಗತ್ತಿನ ಸೊಟ್ಟಗಳನ್ನು ಸರಿಪಡಿಸಲು ಮನುಷ್ಯ ಮಾಡುವ ಪ್ರಯತ್ನದಲ್ಲಿ ತಾನೂ ನಿಷ್ಠುರನಾಗಿ, ಅನ್ಯರೊಡನೆ ಹಗೆತನವನ್ನು ಕಟ್ಟಿಕೊಳ್ಳುತ್ತಾನೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಪರಮಾತ್ಮನ ಸೃಷ್ಟಿಯ ವಿಧಾನಕ್ಕೆ ಆ ಪರಮಾತ್ಮನದೇ ಒಂದು ಕಾರಣವಿದೆ. ತನಗೆ ಹೇಗೆ ಬೇಕೋ ಹಾಗೆ ತನ್ನ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾನೆ. ಆದರೆ ಮನುಷ್ಯ ” ಈ ಜಗತ್ತು ನನಗಾಗಿ ಸೃಷ್ಟಿಸಲ್ಪಟ್ಟಿದೆ ” ಎಂದು ದುರ್ಭಾವದಿಂದ ” ಈ ಜಗತ್ತಿನಲ್ಲಿರುವುದೆಲ್ಲವೂ ತನ್ನ ಉಪಯೋಗಕ್ಕಾಗಿ, ತನ್ನ ಪ್ರಯೋಜನಕ್ಕಾಗಿ ಸೃಷ್ಟಿಸಲ್ಪಟ್ಟಿದೆ” ಎಂದು ಯೋಚಿಸುತ್ತಾನೆ. ಹೀಗೆ ಯೋಚಿಸುವಾಗ ಯಾವುದಾದರೂ ವಿಷಯ ಅಥವಾ ವಸ್ತು ಇವನ ಇಂದ್ರಿಯ ಪ್ರಚೋದಿತ ಇಷ್ಟ ಅಥವಾ ಅಪೇಕ್ಷೆಗೆ ಅನುಗುಣವಾಗಿ ಇಲ್ಲದಿದ್ದರೆ, ” ಇದು ಸರಿಯಿಲ್ಲ” ” ಅದು ಸರಿಯಿಲ್ಲ” ಎಂದು ಪರಮಾತ್ಮನ ಸೃಷ್ಟಿಗೇ ವ್ಯಾಖ್ಯಾನ ಬರೆಯುವ ” ಕುಚೇಷ್ಟೆ “ಯನ್ನು ಮಾಡುತ್ತಾನೆ. ನೈಸರ್ಗಿಕ ವಿಧಾನಗಳನ್ನು ತನ್ನ ಬುದ್ಧಿಶಕ್ತಿಯಿಂದ ತಿದ್ದಲು, ಬದಲಾಯಿಸಲು ಪ್ರಯತ್ನಪಡುತ್ತಾನೆ. ಉದಾಹರಣೆಗೆ ” ಜೆನೆಟಿಕ್ ಇಂಜಿನಿಯರಿಂಗ್ ” ಎನ್ನುವ ವಿಜ್ಞಾನದ ವಿಷಯದಿಂದ ಹಲವಾರು ಸ್ವಾಭಾವಿಕ ಗಿಡ, ಮರ, ಹೂ, ಹಣ್ಣು, ಪ್ರಾಣಿಗಳನ್ನೂ ಇವನೇ ತನಗಿಷ್ಟಬಂದಂತೆ ಬದಲಾಯಿಸಿ ಅಹಂಕಾರದ ನಗೆ ನಗುತ್ತಾನೆ.” ಕ್ಲೋನಿಂಗ್” ಎಂಬ ವಿಧಾನದಿಂದ ಮನುಷ್ಯನನ್ನೇ ನಕಲು ಮಾಡಲು ಪ್ರಯತ್ನಿಸಿದ್ದಾನೆ. ಇದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ, ಮನುಷ್ಯ ಮಾತ್ರ ಪರಮಾತ್ಮನ ಸೃಷ್ಟಿಯನ್ನು ತಿದ್ದಲು ಪ್ರಯತ್ನಪಡುತ್ತಿದ್ದಾನೆ. ಇವನು ಯೋಚನೆ ಮಾಡುವುದೇ ” ಸೊಟ್ಟ”!!! ಹಾಗಾಗಿ ಇವನಿಗೆ ಎಲ್ಲವೂ ಸೊಟ್ಟಗೆ ಕಾಣುತ್ತದೆ. ನೋಡುವ ಪರಿಯ ದೋಷವಲ್ಲದೆ ಮತ್ತೇನು?

ಇನ್ನು ಪರಸ್ಪರ ಅನ್ಯೋನ್ಯತೆಯ ವಿಚಾರದಲ್ಲಿ ಗುಂಡಪ್ಪನವರು ಹೇಳಿರುವ “ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು” ವಿಷಯವನ್ನು ನೋಡೋಣ. “ಎರಡು ವ್ಯಕ್ತಿಗಳು ಸೇರಿದರೆ ಮೂರು ಅಭಿಪ್ರಾಯವಿರುತ್ತದೆ” ಎನ್ನುವ ಮಾತು ಸರ್ವವಿಧಿತ. ಒಬ್ಬರ ವಿಚಾರ, ನಡತೆ, ಅಭಿಪ್ರಾಯ ಮತ್ತೊಬ್ಬರಿಗೆ ಸಂಪೂರ್ಣವಾಗಿ ಹಿಡಿಸುವುದೇ ಇಲ್ಲ. ಎಲ್ಲೋ ಒಂದು ಭೇದವಿರುತ್ತದೆ ” ತಾನು ಹೇಳುವುದೇ ಸರಿ” ಎಂದು ಪ್ರತಿಪಾದಿಸಿ ತನ್ನ ಮತವನ್ನು ಮತ್ತು ಅಭಿಮತವನ್ನು

ದೃಪಡಿಸಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಹಾಗೆ ತಮ್ಮ ಮತವನ್ನು ಮತ್ತೊಬ್ಬರ ಮೇಲೆ ಹೇರುವ ಪ್ರಯತ್ನದಲ್ಲಿ ಹಲವರಲ್ಲಿ ನಿಷ್ಠುರವನ್ನು ಕಟ್ಟಿಕೊಳ್ಳುತ್ತಾರೆ ನಮ್ಮ ಮಾನವರು . ಇದಕ್ಕೆ ಕಾರಣವೇ “ಅಹಂಕಾರ”. ಈ ಅಹಂಕಾರದ ಕಾರಣದಿಂದ, “ನಾನು ಹೇಳಿದ್ದು ಸರಿ. ನಾನು ಹೇಳಿದ್ದು ಉತ್ತಮ. ಎಲ್ಲರೂ ನನ್ನ ವಿಚಾರವನ್ನು ಒಪ್ಪಿಕೊಳ್ಳಬೇಕು. ಅನ್ಯರ ವಿಚಾರ ಮತ್ತು ಅಭಿಪ್ರಾಯ ಉತ್ತಮವಲ್ಲ. ಅದನ್ನು ನಾನು ಗೌರವಿಸಬೇಕಿಲ್ಲ” ಎನ್ನುವಂಥಾ ಹತ್ತು ಹಲವಾರು ದುರ್ಭಾವಗಳು ಇವನಲ್ಲಿ ಬೇರೂರಿಬಿಟ್ಟಿದೆ. ಇದೇ ಕಾರಣದಿಂದ ಇವನ ಬದುಕು ಇವನ ಸುಖಜೀವನಕ್ಕೆ ಮಾರಕವಾದ, ಕೋಪ, ದ್ವೇಷ, ಅಸೂಯೆಗಳಂತಹ ವಿಷಯಗ\ಳಿಂದ ತುಂಬಿಹೋಗಿವೆ.

ಇಂತಹ ದುರ್ಭಾವಗಳನ್ನು ಬಿಟ್ಟುಅನ್ಯರ ಅಭಿಪ್ರಾಯಕ್ಕೂ ಗೌರವನೀಡುತ್ತಾ, ” ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು —ಸರ್ವಜ್ಞ” ಎಂಬ ಸರ್ವಜ್ಞ ವಚನದಂತೆ ಇದ್ದರ ಪರಮಾತ್ಮನ ಸೃಷ್ಟಿಯನ್ನು ಅಭಿನಂದಿಸಿದ ಹಾಗೆ ಅಲ್ಲವೇ ? ಅಂತಹ ಮನಃಸ್ಥಿತಿಯಲ್ಲಿ ನಮಗೆ ಯಾವುದೂ ಸೊಟ್ಟಗೆ ಕಾಣದೆ, ಎಲ್ಲರನ್ನೂ ಗೌರವಿಸುವ ಮತ್ತು ಯಾರನ್ನೂ ದ್ವೇಷಿಸದ ಮನೋಭಾವ ಬೆಳೆದೀತು!!!!!!

ರಸಧಾರೆ – 234

ಕಣ್ಣೆರಡದೇಕೆರಡುವೊಂದೆ ಪಕ್ಕದೊಳೇಕೆ?
ಬೆನ್ನೊಳೊಂದೆದೆಯೊಳೊಂದಿರಲು ಸುಕರವಲ?
ಅನ್ಯಾಯ ವಿಕಟಗಳೆನಿತೋ ಸೃಷ್ಟಿಕ್ರಮದಿ
ಸೊನ್ನೆ ಜನವಾಕ್ಕಲ್ಲಿ – ಮಂಕುತಿಮ್ಮ

ಕಣ್ಣೆರಡದೇಕೆರಡುವೊಂದೆ = ಕಣ್ಣು+ಎರಡು+ಅದೇಕೆ+ಎರಡು+ಒಂದೆ // ಪಕ್ಕದೊಳೇಕೆ= ಪಕ್ಕದೊಳು + ಏಕೆ // ಬೆನ್ನೊಳೊಂದೆದೆಯೊಳೊಂದಿರಲು=ಬೆನ್ನೊಳು + ಎದೆಯಲಿ+ಒಂದು ಇರಲು// ವಿಕಟಗಳೆನಿತೋ=ವಿಕಟಗಳು+ ಎನಿತೋ//ಜನವಾಕ್ಕಲ್ಲಿ = ಜನ+ ವಾಕ್ಕು+ಅಲ್ಲಿ // ಸುಕರವಲ = ಸುಲಭವಲ // ಜನವಾಕ್ಕು= ಜನರ ಅಭಿಮತ.

ನಮಗೆ ಎರಡು ಕಣ್ಣುಗಳು ಇವೆ. ಅವರೆಡೂ ಮುಖದಲ್ಲಿ ಪಕ್ಕ ಪಕ್ಕದಲ್ಲಿ ಇವೆ. ಅದು ಏಕೆ ಹಾಗಿದೆ? ಮುಖದಲ್ಲಿ ಒಂದು ಬೆನ್ನಲ್ಲಿ ಒಂದು ಇದ್ದಿದ್ದಿದ್ದರೆ ಸುಲಭವಾಗಿ ಹಿಂದೆ ಮುಂದೆ ಎರಡೂ ಕಡೆ ನೋಡಲು ಆಗುತ್ತಿತ್ತಲ್ಲ, ಎಂದು ಚಿತ್ರವಿಚಿತ್ರವಾಗಿ ಮನುಷ್ಯ ಯೋಚಿಸುತ್ತಾನೆ. ಆದರೆ ಹೀಗೆ ಸೃಷ್ಟಿಕ್ರಮದಲ್ಲಿ ಎಷ್ಟೋ ವಿಚಿತ್ರಗಳು ಇವೆ. ಈ ರೀತಿಯ ಸೃಷ್ಟಿಯ ವಿಚಿತ್ರಗಳನ್ನು ಪ್ರಶ್ನಿಸುವ ಅಧಿಕಾರ ಮನುಷ್ಯನಿಗೆ ಇಲ್ಲ ಎಂಬ ಮಾನ್ಯ ಗುಂಡಪ್ಪನವರ ಭಾವವೇ ಈ ಕಗ್ಗದ ಹೂರಣ.

ತನ್ನ ಸುತ್ತಲೂ ಇರುವ ಜಗತ್ತನ್ನು, ಒಂದೇ ಬಾರಿ ನೋಡಲು, ಮುಖದಲ್ಲಿ ಒಂದು, ಬೆನ್ನಲ್ಲಿ ಒಂದು ಕಣ್ಣು ಇದ್ದಿದ್ದರೆ ಸುಲಭವಾಗಿರುತ್ತಿತ್ತಲ್ಲವೇ?ಎಂದು ಯೋಚಿಸುವ ಮನುಷ್ಯರು ಹಲವರು. ಆದರೆ ಹಾಗೆ ಇದ್ದಿದ್ದರೆ ಮತ್ತೇನು ತೊಂದರೆಗಳಾಗುತ್ತಿತ್ತೋ ಏನೋ ಯಾರಿಗೆ ಗೊತ್ತು. ಬಹುಶಃ ಎದುರಿನಲ್ಲಿರುವ ವಸ್ತುವನ್ನು ನೋಡಲು ಕತ್ತನ್ನು ತಿರುಗಿಸಿ ತಿರುಗಿಸಿ ಗೋಣು ಮುರಿಯುತ್ತಿತ್ತೋ ಏನೋ? ಅಷ್ಟೇ ಅಲ್ಲದೆ ಈ ಕಣ್ಣುಗಳು ರುಂಡದಲ್ಲಿರುವುದರಿಂದ ಮತ್ತು ಬೇರೆ ಎಲ್ಲಾ ಅಂಗಗಳಿಗೂ ಸೂಕ್ತವಾದ ಸಂಪರ್ಕದೊಡನೆ ಇರುವುದರಿಂದ, ಹಾಗೇನಾದರೂ ಕಣ್ಣು ಹಿಂದೊಂದು, ಮುಂದೊಂದು ಇದ್ದಿದ್ದರೆ, ಬಹುಶಃ ಬೇರೆಲ್ಲಾ ಅಂಗಗಳ ವಿನ್ಯಾಸವನ್ನು ಮತ್ತು ಜೋಡಣಾ ಕ್ರಮವನ್ನು ಬದಲಾಯಿಸಬೇಕಿತ್ತು ಇದು ಪರಮಾತ್ಮನ ಸೃಷ್ಟಿ. ಅದಕ್ಕೊಂದು ಕ್ರಮವಿದೆ ನಮಗೆ ಅರ್ಥವಾಗದಂಥಹ ಕ್ರಮವಿದೆ. ಈ ಜಗತ್ತಿನ ಪ್ರತೀ ಸೃಷ್ಟಿಗೂ ಒಂದು ಸಮರ್ಪಕವಾದ ಕಾರಣ ಮತ್ತು ಉದ್ದೇಶ್ಯವಿದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ.

"ಅನ್ಯಾಯ ವಿಕಟಗಳೆನಿತೋ ಸೃಷ್ಟಿಕ್ರಮದಿ " ಎಂದು ಸೃಷ್ಟಿಯಲ್ಲಿ ಇರುವ ವಿಚಿತ್ರಗಳನ್ನು ಉಲ್ಲೇಖಿಸಿದ್ದ ಮಾನ್ಯ ಗುಂಡಪ್ಪನವರು, ಅದರ ಹಿಂದೆಯೇ "ಸೊನ್ನೆ ಜನವಾಕ್ಕಲ್ಲಿ" ಎಂದೂ ಹೇಳುತ್ತಾರೆ. ಎಂದರೆ ಈ ಸೃಷ್ಟಿಯ ಎಷ್ಟೋ ವಿಷಯಗಳು, ಮನುಷ್ಯ ತನಗೆ ಹೇಗೆ ಬೇಕೋ ಹಾಗೆ ಇಲ್ಲವೆಂದೂ, ಆ ಪರಮಾತ್ಮನ ಸೃಷ್ಟಿಯಲ್ಲೇ ಒಂದು ಅನ್ಯಾಯವಿದೆಯಂದೂ ಅಂದುಕೊಳ್ಳುತ್ತಾನೆ. ಅದಕ್ಕೆ ಕಾರಣವೇನೆಂದರೆ ಇವನು ಎಲ್ಲವೂ ತನ್ನ ಇಚ್ಚೆಗನುಸಾರವಾಗಿ ತನ್ನ ಪ್ರಯೋಜನಕ್ಕೆ ಸರಿಯಾಗುವಂತೆ ಇರಬೇಕು ಎಂದು ಅಂದುಕೊಳ್ಳುತ್ತಾನೆ. ಹಾಗಾಗಿ "ಇರುವುದು ಸರಿಯಿಲ್ಲ" ಎಂದುಕೊಳ್ಳುತ್ತಾನೆ. ಇವನ ಯೋಚನೆಯೇ ಅನ್ಯಾಯವೆಂದು ಅವನಿಗೆ ಅರಿವಾಗುವುದೇ ಇಲ್ಲ. ಪರಮಾತ್ಮನ ಸೃಷ್ಟಿಯೆಲ್ಲವೂ ಸಮರ್ಪಕವಾಗೇ ಇದೆ. ಪ್ರತಿಯೊಂದನ್ನೂ ಬಹಳ ಸೂಕ್ತವಾಗೆ ನಿರ್ಮಿಸಿದ್ದಾನೆ ಆ ಪರಮಾತ್ಮ. ಇದರಲ್ಲಿ ಎಲ್ಲೂ ಒಂದೇ ಒಂದು ಲೋಪವೂ ಇಲ್ಲ. ಈ ಜಗತ್ತಿನ ಪ್ರತಿವಸ್ತುವನ್ನೂ ಒಂದಕ್ಕೊಂದಕ್ಕೆ ಪೂರಕವಾಗಿ ಸೃಷ್ಟಿಸಿದ್ದಾನೆ. ಅವನ ಈ ಸೃಷ್ಟಿಯಲ್ಲಿ ಯಾವುದೇ ದೋಷವನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಹಾಗೇನಾದರೂ ದೋಷಕಂಡರೆ ಅದು ನೋಡುವವರ ದೃಷ್ಟಿಯ ದೋಷವಲ್ಲದೆ ಮತ್ತೇನು. ಇವನಿಗೆ ಪರಮಾತ್ಮನ ಜಗದ್ಸೃಷ್ಟಿಯ ವಿಷಯದಲ್ಲಿ ಚಕಾರವೆತ್ತಲು ಯಾವ ಅಧಿಕಾರವೂ ಇಲ್ಲ, ಅಲ್ಲವೇ?

ರಸಧಾರೆ – 235

ಧರೆ ಸಸ್ಯಫಲಧಿ ಜೀವಿಗೆ ಪುಷ್ಟಿಯಿತ್ತೊಡೇ೦
ಮರಳಿ ತಾಂ ಪಡೆಯಳೇನ್ ಅವನಿನರ್ಧವನು
ಧರಣಿಗೀ ನಮ್ಮೊಡಲು ಹುಯ್ಗಡುಬು ತಪ್ಪಲೆಯೋ
ಪರಮೇಷ್ಠಿ ಯುಕ್ತಿಯದು – ಮಂಕುತಿಮ್ಮ

ಪುಷ್ಟಿಯಿತ್ತೊಡೇ೦ = ಪುಷ್ಟಿ + ಯಿತ್ತೊಡೆ + ಏಂ // ಪಡೆಯಳೇನ್ = ಪಡೆಯಳ+ ಏನ್ // ಅವನಿನರ್ಧವನು = ಅವನಿನ+ಅರ್ಧವನು // ಧರಣಿಗೀ = ಧರಣಿಗೆ + ಈ // ಪುಷ್ಟಿಯಿತ್ತೊಡೇ೦ = ಶಕ್ತಿ ಕೊಟ್ಟರೇನು// ಪಡೆಯಳೇನ್ = ಪಡೆಯುವುದಿಲ್ಲವೇನು// ಅವನಿನ+ ಅವನ// ಹುಯ್ಗಡುಬು = ಆವಿ ಅಥವಾ ಹಬೆಯಿಂದ ತಯಾರಾದ ಇಡ್ಲಿ// ತಪ್ಪಲೆಯೋ = ಪಾತ್ರೆಯೋ, ಪರಮೇಷ್ಠಿ= ಸೃಷ್ಟಿಕರ್ತ.

ನಮ್ಮ ಭೂಮಿ ತಾಯಿ ಈ ಸೃಷ್ಟಿಯಲ್ಲಿರುವ ಎಲ್ಲ ಪ್ರಾಣಿಗಳಿಗೂ ಪುಷ್ಟಿಕರವಾದ ಆಹಾರವನ್ನು ಇತ್ತು, ಇತ್ತುದರ ಅರ್ಧವನ್ನು ಮತ್ತೆ ಪಡೆದು ಬಿಡುತ್ತಾಳೆ. "ತನಗೆ ಬೇಕಾದ್ದನ್ನು ನಮ್ಮಲ್ಲಿ ಬೇಯಿಸಿಕೊಳ್ಳಲಿಕ್ಕೆ ನಮ್ಮ ದೇಹವನ್ನೇನಾದರೂ ಹಬೆಯಿಂದ ಮಾಡುವ ಇಡ್ಲಿ ಪಾತ್ರೆಯಂತೆ ಸೃಷ್ಟಿಕರ್ತ ಉಪಯೋಗಿಸುತ್ತಾನೋ?" ಎಂದು ಒಂದು ಪ್ರಶೆಯನ್ನು ಕೇಳಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ಒಂದು ಮರದಲ್ಲಿ ಚಿಗುರು, ಹೂ, ಕಾಯಿ, ಹಣ್ಣು ಮತ್ತು ಬೀಜ ಉತ್ಪತ್ತಿಯಾಗಬೇಕಾದರೆ, ಆ ಮರ ತನ್ನ ಬೇರುಗಳ ಮೂಲಕ ಧರೆಯಿಂದ ಸತ್ವವನ್ನು ಹೀರಿಕೊಳ್ಳುತ್ತದೆ. ಆ ಮರದ ಎಲೆಗಳನ್ನು ಶರದೃತುವಿನಲ್ಲಿ ಉದುರುವಂತೆ ಮಾಡಿ, ಅವು ಮತ್ತೆ ಗೊಬ್ಬರದ ರೂಪದಲ್ಲಿ ಭೂಮಿಗೆ ಸತ್ವವಾಗುವುದರ ಮೂಲಕ, ಭೂಮಿ, ಎಲೆಗಳಿಗೆ ತಾನಿತ್ತ ಸತ್ವದ ಅರ್ದವನ್ನು ತಾನೇ ಪಡೆದು ಮತ್ತೆ ತನ್ನಲ್ಲಿ ಆ ಮರಕ್ಕೆ ಸಾರವನ್ನು ನೀಡುವ ಕ್ಷಮತೆಯನ್ನು ಬೆಳೆಸಿಕೊಳ್ಳುತ್ತದೆ.

ಸಮುದ್ರದ ನೀರು ತನ್ನ ಸತ್ವವನ್ನು ಆವಿಯ ರೂಪದಲ್ಲಿ ಗಗನಕ್ಕೆ ಕಳುಹಿಸಿ ಎಲ್ಲವನ್ನೂ ನೀರ ರೂಪದಲ್ಲಿ ಧರಣಿಗೆ ಸುರಿಸಿ ಅರ್ದದಷ್ಟನ್ನು ಧರಣಿಯ ಎಲ್ಲ ಗಿಡ ಮರಗಳಿಗೆ, ಪ್ರಾಣಿಪಕ್ಷಿಗಳಿಗೆ, ಕ್ರಿಮಿ ಕೀಟಗಳಿಗೆ ಉಣಬಡಿಸಿ ಮತ್ತರ್ದದಷ್ಟನ್ನು, ನದೀ ರೂಪದಲ್ಲಿ ತನ್ನ ಒಡಲಿಗೇ ಸೇರಿಸಿಕೊಳ್ಳುತ್ತದೆಯಲ್ಲವೇ? ಅದೇ ರೀತಿ ಭೂಮಿಯಲ್ಲಿ, ಅದರ ಸಾರವನ್ನು ಹೀರಿ, ಬೆಳೆಯುವ ಹಲವಾರು ಹೂ ಹಣ್ಣು ಕಾಯಿ,ಸೊಪ್ಪು ಮುಂತಾದವುಗಳೆಲ್ಲವೂ ಪ್ರಾಣಿಗಳ ದೇಹವನ್ನು ಆಹಾರದ ರೂಪದಲ್ಲಿ ಸೇರಿ, ಪಚನವಾಗಿ ಸತ್ವವನ್ನು ಮತ್ತು ಶಕ್ತಿಯನ್ನೂ ಆ ದೇಹಗಳಿಗೆ ನೀಡುತ್ತದೆ. ಹಾಗೆ ದೇಹಗಳ ಸೇರಿದ ಆಹಾರದ ಅನುಪಯುಕ್ತ ಭಾಗವು ತ್ಯಾಜ್ಯವಾಗಿ ಮತ್ತೆ ಧರಣಿಗೆ ಸೇರಿ ತ್ತದೆ ಭೂಸತ್ವವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಅಲ್ಲವೇ

ಹೀಗೆ ಪ್ರಕೃತಿ ತನಗೆ ಹೇಗೆ ಬೇಕೋ ಹಾಗೆ, ಏನು ಬೇಕೋ ಅದನ್ನು ಪಡೆದುಕೊಳ್ಳಲು ಒಂದು ಕ್ರಮವನ್ನು ನಿಯಮಿಸಿಕೊಂಡಿದೆ. ಇದು ಸೃಷ್ಟಿಕರ್ತನ ವೈಜ್ಞಾನಿಕ ಪ್ರಕ್ರಿಯೆ. ನಾವು" ನಾನು ತಿನ್ನುತ್ತೇನೆ" ಎಂದು ಹೇಳಿಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ಈ ದೇಹವನ್ನು ಧಾರಣೆ ಮಾಡಿದ ಆತ್ಮಗಳ ಸಮಗ್ರ ರೂಪವಾದ ಆ ಪರಮಾತ್ಮನು ತನಗೆ ಬೇಕಾದ್ದನ್ನು, ಬೇಕಾದ್ದಷ್ಟನ್ನು ಬೇಕಾದ ಕಡೆಯಿಂದ ತೆಗೆದುಕೊಳ್ಳುವ ಒಂದು ವ್ಯವಸ್ಥೆಯನ್ನು ತಾನೇ ಸೃಷ್ಟಿಸಿಕೊಂಡು, ಆ ವ್ಯವಸ್ತೆಯಲ್ಲಿ ಅದನ್ನು ತಾನೇ ನಡೆಸುತ್ತಾ, ಆನಂದದಿಂದ ಅನುಭವಿಸುತ್ತಿದ್ದಾನೆ.

ಹಾಗಾಗಿ ಸತ್ವವನ್ನು ಕೊಡುವಿಕೆ ಮತ್ತು ಪಡೆದುಕೊಳ್ಳುವಿಕೆಯ, ಈ ನೈಸರ್ಗಿಕ ಮತ್ತು ವೈಜ್ಞಾನಿಕ ಚಕ್ರವನ್ನು ಪರಮಾತ್ಮ ಸೃಷ್ಟಿಸಿ, ಎಲ್ಲವೂ ಸಮರ್ಪಕವಾಗಿರುವಂತೆ ಮಾಡಿ ತಾನೇ ಅದರೊಳಗೆ ಇದ್ದು ಅನುಭವಿಸುತ್ತಿದ್ದಾನೆ. ನಾವೆಲ್ಲಾ ಅವನ ಈ ಪ್ರಕ್ರಿಯೆಗೆ ನಿಮಿತ್ತಮಾತ್ರರು. ನಾವೆಲ್ಲಾ ಉಪಕರಣಗಳು ಅಷ್ಟೇ. ನಾವೂ ಈ ಚಕ್ರದ ಒಂದು ಭಾಗವಾಗಿದ್ದೇವೆ ಎಂದು, ಪರಮಾತ್ಮನಿಗೆ ತುಂಬು ಹೃದಯದ ಕೃತಜ್ಞತೆಯನ್ನು ತೋರಬೇಕು.

ರಸಧಾರೆ – 236

ತರುಜಾತಿ ಖಗಜಾತಿ ಮೃಗಜಾತಿಗಳು ನೂರು
ನರಜಾತಿ ಮಿಕ್ಕ ಜಾತಿಗಳಿಂದ ಬೇರೆ
ನರರೋಳೋರೊರ್ವನುಂ ತಾನೊಂದು ಬೇರೆ ಜಗ
ಬೆರಕೆ ಸಾಮ್ಯಾಸಾಮ್ಯ – ಮಂಕುತಿಮ್ಮ

ನರರೋಳೋರೊರ್ವನುಂ=ನರರ+ಒಳು + ಓರೋರ್ವನು//ಸಾಮ್ಯಾಸಾಮ್ಯ= ಸಾಮ್ಯ+ಅಸಾಮ್ಯ

ಗಿಡಗಳ ಜಾತಿ, ಪಕ್ಷಿಗಳ ಜಾತಿ, ಪ್ರಾಣಿಗಳ ಜಾತಿಗಳು ನೂರಾರು ಇವೆ ಆದರೆ ಮನುಷ್ಯ ಜಾತಿ ಇವೆಲ್ಲಕ್ಕಿಂತ ಭಿನ್ನ. ಪ್ರತಿಯೊಬ್ಬ ಮನುಷ್ಯನೂ ಒಂದು ಜಗದಂತೆ ಇದ್ದಾನೆ. ಇವನು ಸಾಮ್ಯದ ಮತ್ತು ಅಸಾಮ್ಯದ ಬೆರಕೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ಗಿಡಮರಗಳ, ಪಕ್ಷಿಗಳ, ಜಲಚರಗಳ, ಕ್ರಿಮಿ, ಕೀಟಗಳ ಮತ್ತು ಪ್ರಾಣಿಗಳ ಪ್ರಭೇಧಗಳು ಸಾವಿರಾರು ಉಂಟು. ಒಂದೊಂದಕ್ಕೆ ಒಂದೊಂದು ವೈಚಿತ್ರ್ಯವನ್ನಿಟ್ಟು, ಆ ಪರಮಾತ್ಮ ಈ ಜಗತ್ತನ್ನು ನಯನ ಮನೋಹರವಾಗಿ ಮಾಡಿದ್ದಾನೆ. ಎಷ್ಟೊಂದು ವಿಧಗಳು, ಪ್ರಭೇಧಗಳು, ಬಣ್ಣಗಳು, ಆಕಾರಗಳು. ಆಹಾ! ಅವನೊಬ್ಬ ಅದ್ಭುತ ಕಲಾವಿದ ಎನ್ನಲಿಕ್ಕೆ ಸಂದೇಹವೇ ಇಲ್ಲ. ಪ್ರಕೃತಿಯ ದರ್ಯವನ್ನು ಅತ್ಯದ್ಭುತವಾಗಿ ನಿರ್ಮಿಸಿ ಚೇತನದ ರೂಪದಲ್ಲಿ ಸೃಷ್ಟಿಯ ಎಲ್ಲದರಲ್ಲೂ ತಾನು ನುಸುಳಿ ಅವುಗಳ ವೈವಿಧ್ಯತೆಯನ್ನು ತಾನೂ ಅನುಭವಿಸುತ್ತಾ ಆನಂದದಿಂದಿದ್ದಾನೆ.

ಈ ಎಲ್ಲ ಸೃಷ್ಟಿಯಲ್ಲಿ ಮನುಷ್ಯ ಮಾತ್ರ ಮಿಕ್ಕ ಎಲ್ಲದಕ್ಕಿಂತ ಭಿನ್ನ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಇಲ್ಲಿ ನಾವು ನೋಡಬೇಕಾದ ಅಂಶವೆಂದರೆ ಪ್ರತಿ ಜೀವಿಗೂ ” ನಾಲ್ಕು ಅಂಶಗಳಲ್ಲಿ” ಸಾಮ್ಯ ಉಂಟು. ಒಂದು-ದೇಹ,

ಎರಡು -ಮನಸ್ಸು, ಮೂರು – ಬುದ್ಧಿ, ನಾಲ್ಕು – ಜೀವ ಅಥವಾ ಚೇತನ. ದೇಹದ ಆಕಾರ, ಮನಸ್ಸು ಬುದ್ಧಿಗಳ ವಿಕಾಸದಲ್ಲಿ ವ್ಯತ್ಯಾಸ. ಆತ್ಮದಲ್ಲಿ ಸಂಪೂರ್ಣ ಸಾಮ್ಯ. ಅನ್ಯ ಜೀವಿಗಳಿಗೂ ಮನುಷ್ಯನಿಗೂ ವ್ಯತ್ಯಾಸವೇನೆಂದರೆ, ಬೇರೆಲ್ಲ ಜೀವಿಗಳೂ ಭೂಮಿಗೆ ಸಮಾನಾಂತರವಾಗಿದ್ದರೆ( parallel) ಮನುಷ್ಯ ಮಾತ್ರ ಲಂಬವಾಗಿದ್ದಾನೆ (Perpendicular). ಅನ್ಯಪ್ರಾಣಿಗಳಿಗಿಂತ ಮನಸ್ಸು ಬುದ್ಧಿಗಳ ವಿಕಾಸದಲ್ಲಿ ಬಹಳ ಮುಂದಿದ್ದಾನೆ. ಇವನ ಆಲೋಚನೆಗಳೆಲ್ಲ ಊರ್ಧ್ವಮುಖವಾಗಿವೆ. ಮೂಲ ಸೃಷ್ಟಿಯನ್ನು ಬಿಟ್ಟರೆ ಇಲ್ಲಿರುವುದೆಲ್ಲ, ಅಂದರೆ, ಮಾತು, ಭಾಷೆ, ಕಲೆ ಸಂಗೀತ, ಸಾಹಿತ್ಯ ಮುಂತಾದವುಗಳೆಲ್ಲ, ಈ ನಮ್ಮ ಮನುಷ್ಯನ ಸೃಷ್ಟಿಯೇ ಅಲ್ಲವೇ?

“ನರರೋಳೋರೊರ್ವನುಂ ತಾನೊಂದು ಬೇರೆ ಜಗ” ಎಂದು ಗುಂಡಪ್ಪನವರು ಈ ಕಗ್ಗದಲ್ಲಿ ಹೇಳಿದ ಹಾಗೆ, ಪ್ರತಿ ಮಾನವನೂ ಒಂದೊಂದು ಭಿನ್ನ ವ್ಯಕ್ತಿತ್ವವನ್ನು ಹೊತ್ತೆ ಈ ಜಗಕ್ಕೆ ಬರುತ್ತಾನೆ. ಪ್ರತಿಯೊಬ್ಬನ ಯೋಚನೆಯೂ ಭಿನ್ನ, ಪ್ರತಿಯೊಬ್ಬನ ಕ್ರಿಯಾಶೀಲತೆಯೂ ಭಿನ್ನ. ಹಲವರು ಅತಿಕ್ರಿಯಾಶೀಲರು, ಹಲವರು ಸೋಂಬೇರಿಗಳು. ಆದರೆ ಹೆಚ್ಚು ಪ್ರತಿಶತ ಜನರ ಹುಟ್ಟು, ಜೀವನ ಮತ್ತು ಅಂತ್ಯ ಗಣನೆಗೆ ಬರದೆ, ಅವರ ಚರಿತ್ರೆ ದಾಖಲಾಗದೆಯೇ ಮುಗಿಯುತ್ತದೆ. ಕೇವಲ ಕೆಲವರು ತಮ್ಮ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳಿಂದ ಜಗದ್ವಿಖ್ಯಾತರಾಗುತ್ತಾರೆ .

ಈ ರೀತ್ತಿಯ ವಿಕಾಸದ ಹಲವಾರು ಹಂತಗಳಲ್ಲಿರುವ ಸೃಷ್ಟಿಯ ಒಂದೊಂದು ಪ್ರಭೇಧವೂ ಕೆಲವುಕಡೆ ಸಾಮ್ಯತೆಯನ್ನೂ ಕೆಲವುಕಡೆ ಸಾಮ್ಯತೆ ಇಲ್ಲದೆ ಭಿನ್ನವಾಗಿಯೂ ಇರುವುದೇ ಈ ಸೃಷ್ಟಿ. ಇದೆಲ್ಲ ಆ ಪರಮಾತ್ಮನ ಅದ್ಭುತ ಕಲಾತ್ಮಕ ಕೃತಿ. ಇಂತಹ ಜಗದಲ್ಲಿ ನಾವಿದ್ದೇವೆ ಎನ್ನುವುದೇ ಸಮಾಧಾನ. ಇದನ್ನು ಕಾಪಾಡುವ ಹೊಣೆ, ಕ್ರಿಯಾಶೀಲತೆಯಿಂದ ಕೂಡಿದ ಬುದ್ಧಿವಂತಿಕೆಯ ಮಾನವರದು ಅಲ್ಲವೇ?

ರಸಧಾರೆ – 237
ನೆಲವೊಂದೆ, ಹೊಲ ಗದ್ದೆ ತೋಟ ಮರಳೆರೆ ಬೇರೆ
ಜಲವೊಂದೆ, ಸಿಹಿಯುಪ್ಪು ಜವುಗೂಟೆ ಬೇರೆ
ಕುಲವೊಂದರೊಳೆ ಸೋದರವ್ಯಕ್ತಿಗುಣ ಬೇರೆ
ಹಲವುಮೊಂದುಂ ಸಾಜ – ಮಂಕುತಿಮ್ಮ.

ನೆಲವೊಂದೆ = ನೆಲವು + ಒಂದೆ// ಮರಳೆರೆ =ಮರಳು+ಎರೆ//ಜಲವೊಂದೆ= ಜಲವು+ ಒಂದೆ// ಜವುಗೂಟೆ = ಜವುಗು+ ಊಟೆ//ಕುಲವೊಂದರೊಳೆ = ಕುಲವು+ಒಂದರೊಳೆ //ಹಲವುಮೊಂದುಂ = ಹಲವುಂ + ಒಂದುಂ// ಎರೆ+ ಫಲವತ್ತಾದ ಭೂಮಿ// ಜವುಗೂಟೆ = ನೀರ ಒರತೆ // ಸಾಜ = ಸಾಜ.

ಮಾನ್ಯಗುಂಡಪ್ಪನವರು ಈ ಕಗ್ಗದಲ್ಲಿ ಜಗತ್ತಿನ ವೈವಿಧ್ಯತೆಯ ಒಂದು ಆಯಾಮವನ್ನು ನಮಗೆ ಪರಿಚಯ ಮಾಡುತ್ತಾರೆ. ಇಲ್ಲಿ ನೆಲವೊಂದೆ ಆದರೂ ಅದನ್ನು ಹೊಲ, ಗದ್ದೆ, ತೋಟ ಎಂದು ಅಲ್ಲಿನ ಮಣ್ಣಿನ ಗುಣ, ನೀರಿನ ಅನುಕೂಲ. ಮತ್ತು ನೀರಿನ ಗುಣದ ಆಧಾರದಮೇಲೆ ವಿಂಗಡಿಸುತ್ತಾರೆ. ಒಂದೇ ನೆಲವಾದರೂ ಒಂದೇ ರೀತಿಯ ವಾತಾವರಣವಿದ್ದರೂ, ಅಲ್ಲಿ ಬೆಳೆಯುವ ಬೆಳೆಗಳ ಮತ್ತು ಗಿಡಗಳ ವೈವಿಧ್ಯತೆ ಬಹಳ ಅದ್ಭುತ. ಇದು ಸೃಷ್ಟಿಯ ವೈವಿಧ್ಯತೆ. ಒಂದೇ ನೆಲ, ಒಂದೇ ಜಲ ಮತ್ತು ಒಂದೇ ವಾತಾವರಣವನ್ನು ಹಂಚಿಕೊಂಡರೂ ಒಂದು ಮಾವು ಮತ್ತೊಂದು ಬೇವು. ಇದೇ ರೀತಿ ಒಂದೇ ನೆಲವನ್ನು ಹಂಚಿಕೊಂಡ, ಒಂದೇ ನೀರನ್ನು ಕುಡಿವ, ಒಂದೇ ಗಾಳಿಯನ್ನು ಸೇವಿಸುವ ಮನುಷ್ಯ ಮನುಷ್ಯರಲ್ಲಿ ಎಷ್ಟೊಂದು ಬೇಧ ಎಂಬ ವಿಚಾರವನ್ನು ಸುಂದರವಾಗಿ ಪ್ರಸ್ತಾಪಮಾಡಿದ್ದಾರೆ ಮಾನ್ಯ ಡಿ .ವಿ. ಜಿ ಯವರು

ನಮ್ಮ ಮಾನವರ ವಿಚಾರವನ್ನು ತೆಗೆದುಕೊಳ್ಳೋಣ. ಒಂದು ತಾಯಿಯ ಗರ್ಭವನ್ನು ಹಂಚಿಕೊಂಡು ಜನಿಸಿದ ಮಕ್ಕಳಲ್ಲಿ ಎಷ್ಟೊಂದು ಬೇಧ. ಬಣ್ಣದಲ್ಲಿ, ಆಕಾರದಲ್ಲಿ, ರೂಪದಲ್ಲಿ, ಬುದ್ಧಿಯಲ್ಲಿ, ಸಂಸ್ಕಾರಗಳಲ್ಲಿ ಒಬ್ಬರಿದ್ದಂತೆ ಒಬ್ಬರಿಲ್ಲದಿರುವುದು ಬಹಳ ಸ್ವಾಭಾವಿಕ.ಮಕ್ಕಳಾಗಿರುವಾಗ ಒಂದೇ ರೀತಿ ಕಂಡರೂ ಬೆಳೆಬೆಳೆಯುತ್ತಾ ಭಿನ್ನವಾಗಿ ಬಿಡುತ್ತಾರೆ. ಅದಕ್ಕೆ ಅವರರವರ ಬೆಳೆಯುವ ವಾತಾವರಣ, ಅವರಿಗೆ ಸಿಗುವ ವಿದ್ಯೆ, ಸ್ನೇಹಿತರ ಮತ್ತು ಬಂಧುಗಳ ಗುಂಪು ಹೀಗೆ ಹತ್ತು ಹಲವಾರು ವಿಷಯಗಳ ಪ್ರಭಾವವೇ ಕಾರಣ. ಇದೂ ಕೂಡ ಸಹಜವೇ.

ಆದರೆ ಮನುಷ್ಯನಿಗೆ ಮಾತ್ರ ತನ್ನ ಗುಣಗಳನ್ನು ಉತ್ತಮಗೊಳಿಸಿಕೊಳ್ಳಲು, ಸು-ಸಂಸ್ಕಾರಗಳನ್ನು ಪಡೆದುಕೊಳ್ಳಲು, ಚಿಂತನೆ ಮತ್ತು ಆಲೋಚನೆಗಳಿಂದ ತನ್ನ ಮತ್ತ ಇತರರ ಜೀವನವನ್ನು ಸುಂದರವಾಗಿಸಲು ಸಾಧ್ಯವಿದೆ. ವೈವಿಧ್ಯತೆ ಸಹಜವಾದರೂ ಸಾಮ್ಯತೆಯನ್ನು ತರುವ ಸಾಧ್ಯತೆ ಇದೆ. ಇಡೀ ಜಗತ್ತಿನಲ್ಲಿ ಈ ರೀತಿಯ ಕ್ಷಮತೆ ಇರುವುದು ಕೇವಲ ಮಾನವನಿಗೆ. ಅನ್ಯ ಪ್ರಾಣಿಗಳಿಗೆ ಅದು ಸಾಧ್ಯವಿಲ್ಲ. ಮಾನವನಬಳಿ ತನ್ನ ಮತ್ತು ಇತರರ ಜೀವನವನ್ನು ತನ್ಮೂಲಕ ಒಟ್ಟು ಸಮುದಾಯವನ್ನು ಸುಂದರವನ್ನಾಗಿಸಲು ಇವನ ಬಳಿ ವೇದ, ಉಪನಿಷತ್ತು, ಪುರಾಣ, ಇತಿಹಾಸ, ಸಾಹಿತ್ಯ, ಕಲೆ ಮುಂತಾದ ಸಾಮಗ್ರಿಗಳು ಸಾಕಷ್ಟು ಇವೆ. ಆದರೆ ಇಂದಿನ ಮಾನವ ಅವುಗಳನ್ನೆಲ್ಲ ಬಿಟ್ಟು ಕೇವಲ ದನದಾಹದಿಂದ, ಸ್ವಾರ್ಥದಿಂದ ಸ್ವಾಭಾವಿಕವಾಗಿರುವ ಸಾಮ್ಯತೆಯನ್ನೂ ಸಹ ಹಾಳುಗೆಡವಿ, ಬೇಧಗಳನ್ನು ಅಧಿಕಗೊಳಿಸಿ ಇಡೀ ಜಗತ್ತನ್ನೇ ವಿನಾಶದ ಅಂಚಿಗೆ ಕೊಂಡು ಹೋಗುತ್ತಿದ್ದಾನೆ.

ವಾಚಕರೆ ನಮ್ಮ ನಮ್ಮ ವೃತ್ತದಲ್ಲಿ ನಾವು ಸಾಧ್ಯವಾದ ಮಟ್ಟಿಗೆ ಸಹಜತೆಯಿಂದ " ಸಂ ಗಚ್ಚತ್ವಂ,ಸಂ ವದತ್ವಂ" ಎನ್ನುವ ರೀತಿಯಲ್ಲಿ ನಮ್ಮ ನಮ್ಮಲ್ಲಿರುವ ಕೃತಕ ಬೇಧಗಳನ್ನು ತೊರೆದರೆ ಬಾಳು ಸುಂದರವಾದೀತು. ಅಂತಹ ಪ್ರಯತ್ನವನ್ನು ಎಲ್ಲರೂ ಮಾಡಬೇಕು.

ರಸಧಾರೆ – 238

ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ
ತನುವಂಗಗಳೊಳೊಂದು ರೂಪ ಗುಣ ಬೇರೆ
ಮನದೊಳೊಬ್ಬೊಬ್ಬನೊಂದೊಂದು ಪ್ರಪಂಚವಿಂ
ತನುವೇಕದೊಳ್ ಬಹಳ – ಮಂಕುತಿಮ್ಮ

ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ = ಮನುಜಕುಲ + ಒಂದು +ಒಬ್ಬನು+ಇನೊಬ್ಬನಂತೆ + ಇಲ್ಲ // ತನುವಂಗಗಳೊಳೊಂದು = ತನು+ ಅಂಗಗಳು+ಒಂದು // ಮನದೊಳೊಬ್ಬೊಬ್ಬನೊಂದೊಂದು = ಮನದೊಳು+ಒಬ್ಬಬ್ಬನದು+ಒಂದೊಂದು// ಪ್ರಪಂಚವಿಂತನುವೇಕದೊಳ್ = ಪ್ರಪಂಚವು+ ಇಂತು+ಅನುವು+ಏಕದೊಳ್ // ಅನುವು+ ಅನೇಕವು//

ಮನುಷ್ಯರಲ್ಲಿ ಒಬ್ಬನಿದ್ದಂತೆ ಇನ್ನೊಬ್ಬನಿಲ್ಲ. ದೇಹದ ಅಂಗಾಂಗಗಳೆಲ್ಲ ಒಂದೇ ರೀತಿ ಇದ್ದರೂ ರೂಪ ಬೇರೆ ಮತ್ತು ಗುಣಗಳೂ ಬೇರೆ ಬೇರೆ. ಮನದೊಳಗೆ ಪ್ರತಿಯೊಬ್ಬನದೂ ಒಂದೊಂದು ವಿಚಾರ. ಅದೇ ಒಂದು ಬೇರೆ ಪ್ರಪಂಚವಿದ್ದಂತೆ. ಇಡೀ ಜಗತ್ತೇ ಅನೇಕತೆಯಲ್ಲಿ ಏಕತೆಯ ರೂಪ ಎಂದು ಅನೇಕತೆಯಲ್ಲಿ ಏಕತೆಯ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಮನುಷ್ಯಕುಲದಲ್ಲಿ ಒಬ್ಬರಿದ್ದಂತೆ ಮತ್ತೊಬ್ಬರಿರುವುದಿಲ್ಲ. ಎಲ್ಲರಿಗೂ ಅವೇ ಕೈ ಕಾಲುಗಳು, ಕಣ್ಣು ಮೂಗುಗಳಿದ್ದರೂ, ಪ್ರತಿಯೊಬ್ಬರ ರೂಪ, ಅಕಾರ, ಬಣ್ಣ ಬೇರೆ ಬೇರೆ ಅಲ್ಲವೇ? ಇದು ಬಾಹ್ಯ ವ್ಯತ್ಯಾಸಗಳು. ಆಂತರಿಕವಾಗಿ ಗುಣ ವ್ಯತ್ಯಾಸವು ಅತ್ಯಧಿಕ. ಹೊರ ರೂಪದಲ್ಲಿ ಎಷ್ಟು ಭಿನ್ನತೆ ಉಂಟೋ ಅದರ ಸಾವಿರ ಪಟ್ಟು ಆಂತರಿಕ ಗುಣ ವ್ಯತ್ಯಾಸವುಂಟು. ಈ ಜಗತ್ತಿನಲ್ಲಿರುವ ಬೇರೆ ಬೇರೆ ಪ್ರದೇಶದಲ್ಲಿರುವ ಜನರಲ್ಲಿ ಸ್ವಭಾವದ ಗುಣದ ರೂಪದ ವ್ಯತ್ಯಯಗಳು ಆಯಾ ಪ್ರದೇಶದ ವಾತಾವರಣ, ಅಲ್ಲಿನ ಸಾಮಾಜಿಕ ಬೆಳವಣಿಗೆ, ಸಂಸ್ಕೃತಿಯ ವಿಕಾಸ ಮುಂತಾದವುಗಳ ಮೇಲೆ ನಿರ್ಭರವಾಗಿರುತ್ತದೆ. ನೋಡಲು ಒಂದೇ ರೀತಿ ಕಂಡರೂ ವ್ಯಕ್ತಿ ವ್ಯಕ್ತಿಗಳಲ್ಲಿ ವಿಪರೀತವಾದ ವ್ಯತ್ಯಾಸಗಳು ಇರುತ್ತವೆ. ಇವೆಲ್ಲ ಬಾಹ್ಯ ಮತ್ತು ರೂಪ ಅಥವಾ ಶಾರೀರಿಕ ವಿಷಯಗಳಿಗೆ ಅನ್ವಯವಾಗುವಂಥಾ ವಿಚಾರಗಳು.

ಇನ್ನು ಮಾನಸಿಕ ಮತ್ತು ಭೌದ್ಧಿಕ ವಿಚಾರಗಳನ್ನು ನೋಡಿದರೆ, ರೂಪದಲ್ಲಾದರೂ ಸಾಮ್ಯ ಇರುವ ವ್ಯಕ್ತಿಗಳು ಸಿಗಬಹುದು. ಆದರೆ ಸ್ವಭಾವ ಸಾಮ್ಯತೆ ಇರುವ ವ್ಯಕ್ತಿಗಳು ಸಿಗುವುದೇ ಇಲ್ಲ. ಏಕೆಂದರೆ ಒಬ್ಬಬ್ಬ ವ್ಯಕ್ತಿಯೂ ಭಿನ್ನ ವಿಚಾರಗಳ, ಯೋಚನೆಗಳ ಮತ್ತು ಆಲೋಚನೆಗಳ ಒಂದು ಬೃಹತ್ ದ್ವೀಪ. ರೂಪ ಸೌಂದರ್ಯವಿದ್ದವರಲ್ಲಿ ಭಾವ ಸೌಂದರ್ಯವಿಲ್ಲದಿರಬಹುದು. ರೂಪವಿಲ್ಲದಿರುವವರಲ್ಲಿ ಸುಂದರ ಮನಸ್ಸು ಇರಬಹುದು. ರೂಪಕ್ಕೂ ಮನಸ್ಸಿನ ಸುಂದರತೆಗೂ ಯಾವ ಸಂಬಂಧವೂ ಇಲ್ಲ ಅಲ್ಲವೇ? ಆದರೆ ಪ್ರತಿಯೊಬ್ಬರ ವಿಚಾರವೂ ಭಿನ್ನ ಭಿನ್ನ. ಪ್ರೀತಿಯ, ಸ್ನೇಹದ, ಕರುಣೆಯ, ಕೋಪದ, ದ್ವೇಷದ, ಮೋಸದ, ಕ್ರೌರ್ಯದ, ಅನುಕಂಪ ಮುಂತಾದ ಭಾವಗಳ ಸಮಗ್ರ ರೂಪವೇ ಎಲ್ಲ ಮಾನವರ ಮನಸ್ಸೂ. ಅದೇ ಒಂದು ಲೋಕ. ಲೋಕದಲ್ಲಿ ಇರುವ ಭಿನ್ನತೆಯು ಪ್ರತಿಮಾನವರಲ್ಲೂ ಪ್ರತಿಬಿಂಬಿಸುತ್ತದೆ ಮತ್ತು ಮಾನವರ ಮನಸ್ಸಿನ ಭಾವಗಳು ಲೋಕದಲ್ಲಿ ಪ್ರತಿಬಿಂಬಿಸುತ್ತದೆ. ಇದು ಪರಸ್ಪರ.

ನಮ್ಮ ಮನಸ್ಸುಗಲ್ಲಿ ಎಷ್ಟು ಶುದ್ಧವಿಚಾರಗಳಿದ್ದರೆ ಅವನ್ನು ನಾವು ಜಗತ್ತಿಗೆ ಹಾಗೇ ಬಿಂಬಿಸಬಹುದು. ಅಂದರೆ ಅನೇಕದಿಂದ ಕೂಡಿದ ಒಟ್ಟು ಸಮುದಾಯದ ಸಂಸ್ಕಾರಗಳು ಮತ್ತು ಸಂಸ್ಕೃತಿ, ಆ ಸಮುದಾಯದಲ್ಲಿರುವ ಜನರ ವೈಯಕ್ತಿಕ ಸಂಸ್ಕಾರ ಮತ್ತು ಸಂಸ್ಕೃತಿಗಳ ಮೇಲೆ ನಿರ್ಭರವಾಗಿರುತ್ತದೆ. ನಾವು ನಮ್ಮ ಸಮಾಜ ಉತ್ತಮವಾಗಿರಬೇಕೆಂದು ಆಶಿಸಿದರೆ ಮೊದಲು ನಾವು ನಮ್ಮ ಆಂತರಿಕ ಶುದ್ಧತೆಯನ್ನು ಸಾಧಿಸಬೇಕು ಮತ್ತು ಆ ಶುದ್ಧತೆಯನ್ನು ಸಮಾಜಕ್ಕೆ ಬಿಂಬಿಸಬೇಕು. ಆಗ ಇಡೀ ಸಮುದಾಯವೇ ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ ಅಂತಹ ಪ್ರಯತ್ನವನ್ನು ನಾವೂ ಮಾಡೋಣವೆ.?

ರಸಧಾರೆ – 239

ಸಮವಿಲ್ಲ ಸೃಷ್ಟಿಯಲಿ ನರನಂತೆ ನರನಿಲ್ಲ
ಕ್ಷಮೆಯುಮವಳೊಳಗಿಲ್ಲ,ಕರ್ಮದಂತೆ ಫಲ
ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತೆ
ನಮಗವಳ್ ಪ್ರಸ್ಪರ್ಧಿ – ಮಂಕುತಿಮ್ಮ

ಸಮವಿಲ್ಲ = ಸಮವು+ ಇಲ್ಲ // ಕ್ಷಮೆಯುಮವಳೊಳಗಿಲ್ಲ = ಕ್ಷಮೆಯುಂ + ಅವಳೊಳಗೆ+ಇಲ್ಲ// ನೀಮಾಗಿಸಿರಿ =ನೀಮ+ಆಗಿಸಿರಿ// ನೋಳ್ಪೆನಾನೆನುತೆ = ನೋಳ್ಪೆ +ನಾನು+ ಎನುತೆ// ನಮಗವಳ್= ನಮಗೆ+ ಅವಳ್// ನೀಮ = ನಿಯಮ // ನೋಳ್ಪೆ = ನೋಡುತ್ತೇನೆ// ಪ್ರಸ್ಪರ್ಧಿ = ಪ್ರತಿಸ್ಪರ್ಧಿ

ಅಸಮತೆಯೇ ಸೃಷ್ಟಿಯ ಗುಣ. ಹಾಗಾಗಿ ಸೃಷ್ಟಿ ಸಮವಿಲ್ಲ ಅಥವಾ ಸೃಷ್ಟಿಯಲ್ಲಿ ಸಮಾನತೆ ಇಲ್ಲ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಂತೆ ಇಲ್ಲ. ಪ್ರತಿಯೊಬ್ಬನೂ ಅವನವನ ಕರ್ಮಾನುಸಾರವಾಗಿ ತನ್ನ ಕರ್ಮಫಲವನ್ನು ಅನುಭವಿಸುತ್ತಾನೆ. ಹಾಗೇನಾದರೂ ನಾವೇನಾದರೂಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತೇನೆಂದು ಸೃಷ್ಟಿಗೆ ಒಂದು ಸ್ಪರ್ಧೆಯನ್ನು ಕೊಟ್ಟರೆ, ಸೃಷ್ಟಿಯೇ ನಮಗೆ ಪ್ರತಿಸ್ಪರ್ಧಿಯಾಗುತ್ತದೆ ಎಂದು ಮಾನ್ಯ ಗುಂಡಪ್ಪನವರು ನಮಗೆ ಅರುಹುತ್ತಾರೆ ಈ ಕಗ್ಗದಲ್ಲಿ.

ಈ ಜಗತ್ತು ಒಂದೇ ರೀತಿಯಲ್ಲಿ ಇಲ್ಲ. ಕೋಟ್ಯಾಂತರ ಭಿನ್ನತೆಗಳ ಒಟ್ಟು ಸಮೂಹವೇ ಈ ಜಗತ್ತು. ರೂಪ ಭಿನ್ನತೆಯಿಂದ ಸೃಷ್ಟಿಯಲ್ಲಿ ಕೋಟಿ ಕೋಟಿ ಭಿನ್ನತೆಗಳನ್ನು ನಾವು ನೋಡುತ್ತೇವೆ. ಆದರೆ ಒಂದೊಂದು ರೂಪದಲ್ಲೂ ಆಂತರಿಕ, ಭಾವ, ಯೋಚನೆ, ಆಲೋಚನೆ, ಗುಣ, ಸ್ವಭಾವ ಮುಂತಾದವುಗಳ ಅಪಾರ ಭಿನ್ನತೆ ನಮಗೆ ಗೋಚರವಾಗುತ್ತದೆ. "ಏಕ" ನಾಗಿದ್ದ ತಾನು "ಬಹಳ" ವಾಗಿ ಪ್ರಕಟವಾಗಬೇಕು ಎಂದು ಪ್ರಕೃತಿಯ ರೂಪವನ್ನು ಹೊತ್ತು, ಪರಮಾತ್ಮನೇ ಪ್ರಕಟವಾದಮೇಲೆ, ಇಲ್ಲಿ ಭಿನ್ನತೆಯು ಸಹಜವಲ್ಲವೇ? ಈ ರೀತಿಯ ಭಿನ್ನತೆಯನ್ನೆಲ್ಲ ಸೇರಿಸಿ ಮಾನ್ಯ ಗುಂಡಪ್ಪನವರು " ಸಮವಿಲ್ಲ ಸೃಷ್ಟಿಯಲಿ ನರನಂತೆ ನರನಿಲ್ಲ " ಎಂದಿದ್ದಾರೆ. ಪ್ರಾಣಿಗಳು ಪಕ್ಷಿಗಳು ಗಿಡಗಳು, ಮರಗಳು ಹೂಗಳು ಹಣ್ಣುಗಳು ಕೀಟಗಳು, ಕಲ್ಲು ಗುಡ್ಡಗಳು, ಪಂಚ ಭೂತಗಳು ಹೀಗೆ ಎಲ್ಲದರಲ್ಲೂ ಆ ಪರಮಾತ್ಮನೇ, ಪ್ರಕಟವಾಗಿದ್ದಾನೆ. ಅಷ್ಟೇ ಆಲ್ಲ, ಪ್ರಕೃತಿಯ ಸಹಾಯದಿಂದ ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತಿದ್ದಾನೆ. ಏಕತೆಯೂ ಅವನೇ. ಭಿನ್ನತೆಯೂ ಅವನೇ. ತನ್ನದೇ ಆದಂತ ಒಂದು ನಿಯಮವನ್ನು ಸೃಷ್ಟಿಸಿಕೊಂಡಿದ್ದಾನೆ. ಅದನ್ನು ಪ್ರಶ್ನಿಸಲು ನಮಗೆ ಅಧಿಕಾರವೂ ಇಲ್ಲ ಯೋಗ್ಯತೆಯೂ ಇಲ್ಲ.

ನಮ್ಮನ್ನೂ ಸೇರಿಸಿ ಈ ಜಗತ್ತಿನಲ್ಲಿರುವುದೆಲ್ಲ ಪ್ರಕೃತಿಯ ನಿಯಮಗಳಿಗೆ ಅಧೀನರಾಗಿ ಬಾಳಬೇಕು. ಇದಕ್ಕೆ ಯಾವರೀತಿಯ ರಿಯಾಯತಿಯೂ ಇಲ್ಲ. ಪ್ರತಿಯೊಬ್ಬರೂ ಅವರವರ ಕರ್ಮಫಲವನ್ನು ಅನುಭವಿಸಬೇಕು. ಕರ್ಮಫಲವೆಂದರೆ, ಒಂದು ಕ್ರಿಯೆಗೆ ಒಂದು ಪ್ರತಿಕ್ರಿಯೆ. ಇದು ಕರ್ಮ ಫಲ. ನಾವು ಎಂದೋ ಮಾಡಿದ ಕ್ರಿಯೆಯ ಪ್ರತಿಫಲ ಅಂದೇ ಸಿಕ್ಕಿರಬಹುದು, ಇಂದು ಸಿಗಬಹುದು ಅಥವಾ ಎಂದೋ ಸಿಗಬಹುದು. ಇದು ಬ್ರಹ್ಮ(ಸೃಷ್ಟಿಯ) ರಹಸ್ಯ. ನಮಗೆ ಸುಲಭದಲ್ಲಿ ಅರ್ಥವಾಗದು.

ಹಾಗೆ ನಾವು ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಹೋದರೆ ಪ್ರಕೃತಿಯೇ ನಮ್ಮನ್ನು ತನ್ನ ದಾರಿಗೆ ಕೊಂಡು ಹೋಗುತ್ತದೆ ಉದಾ:ಎಷ್ಟು ಆಹಾರ ತಿನ್ನಬೇಕೋ ಅಷ್ಟೇ ತಿಂದರೆ, ಅದು ಪ್ರಕೃತಿ. ಅಧಿಕವಾಗಿ ತಿಂದರೆ ಅದು ವಿಕೃತಿ. ಆಗ ಹೊಟ್ಟೆ ನೋವಾಗುತ್ತದೆ. ಹಸಿವಾಗುವುದಿಲ್ಲ, ಏನೂ ತಿನ್ನಲು ಮನಸಾಗುವುದಿಲ್ಲ. ದೇಹ ತನ್ನ ಪ್ರಕೃತಿಯನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ಏಕೆಂದರೆ ನಾವೆಲ್ಲಾ ಪ್ರಕೃತಿ ಸೃಷ್ಟಿಸಿದ ಯಂತ್ರ ಮಾನವರು ( Robots) ನಾವು ಯಂತ್ರಗಳಾದರೆ, ಪ್ರಕೃತಿ ನಮ್ಮ " ನಿಯಂತ್ರಕ". ನಾವು ಪ್ರಕೃತಿಯ ವಿರುದ್ಧವಾಗಿ ಹೋದರೆ ಅದು ನಮಗೆ ಪ್ರತಿಸ್ಪರ್ಧಿಯಾಗಿ ತನ್ನ ದಾರಿಗೆ ನಮ್ಮನ್ನು ಎಳೆದುಕೊಳ್ಳುತ್ತದೆ. ಸಾಧ್ಯವಾಗದಿದ್ದರೆ ನಮ್ಮನ್ನು ನಾಶಮಾಡಿ ತನ್ನ ನಿಯಮವು ಸುಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ. ಮನುಷ್ಯ, ಪ್ರಕೃತಿಯ ವಿರುದ್ಧವಾಗಿ ನಡೆದಾಗ ಆಗುವ ವಿಕೋಪಗಳು ಎಲ್ಲರಿಗೂ ತಿಳಿದ ವಿಷಯವೇ. ಹಾಗಾಗಿ ನಾವು ಪ್ರಕೃತಿಯ ನಿಯಮಗಿಳಿಗನುಸಾರವಾಗಿ ಬಾಳಿದರೆ ಜೀವನ, ಇಲ್ಲದಿದ್ದರೆ ನಾಶ.

ರಸಧಾರೆ – 240

ಬೆರಳುಗಳ ನೋಡುವುಗಳೊಂದರಂತೊಂದಿಲ್ಲ
ಕರಧರ್ಮಕುಚಿತವಾ ಹೆಚ್ಚು ಕಡಿಮೆಗಳು
ಪುರುಳ ಪಿಡಿವುದೆ ಬೆರಳ್ಗಳೆಲ್ಲಮೊಂದುದ್ದಮಿರೆ
ಸರಿಯಹುದು ಕಾರ್ಯದಲಿ ಮಂಕುತಿಮ್ಮ.

ನೋಡುವುಗಳೊಂದರಂತೊಂದಿಲ್ಲ = ನೋಡು+ಅವುಗಳು +ಒಂದರಂತೆ+ಒಂದಿಲ್ಲ // ಕರಧರ್ಮಕುಚಿತವಾ = ಕರ+ ಧರ್ಮಕೆ+ಉಚಿತವೂ+ಆ // ಬೆರಳ್ಗಳೆಲ್ಲಮೊಂದುದ್ದಮಿರೆ =ಬೆರಳ್ಗಳು +ಎಲ್ಲಂ +ಒಂದು+ಉದ್ದಂ+ಇರೆ// ಸರಿಯಹುದು = ಸರಿ +ಅಹುದು // ಕರಧರ್ಮಕೆ= ಕೈಗಳು ಮಾಡಬೇಕಾದ ಕೆಲಸಕ್ಕೆ// ಪುರುಳ = ವಸ್ತುವನ್ನು//ಪಿಡಿವುದೆ = ಹಿಡಿಯುವುದೇ//

ನಮ್ಮ ಕೈ ಬೆರಳುಗಳು ಒಂದೇ ಉದ್ದವಿಲ್ಲ. ಕೈಗಳು ಮಾಡಬೇಕಾದ ಕೆಲಸಕಾರ್ಯಗಳಿಗೆ ಅವುಗಳ ಉದ್ದದಲ್ಲಿರುವ ಹೆಚ್ಚು ಕಡಿಮೆಗಳು ಸರಿಯಾಗೇ ಇದೆ. ಹಾಗೇನಾದರೂ ಎಲ್ಲ ಬೆರಳುಗಳೂ ಒಂದೇ ಉದ್ದ ಇದ್ದಿದ್ದಿದ್ದರೆ, ನಾವು ಕೈಬೆರಳುಗಳಿಂದ ಯಾವ ವಸ್ತುವನ್ನಾದರೂ ಹಿಡಿಯಲು ಆಗುತ್ತಿತ್ತೇ? ಹಾಗಾಗಿ ಈ ಅಸಮತೆಯು ಕೈಗಳ ಕೆಲಸ ಕಾರ್ಯಗಳಿಗೆ ಸರಿಯಾಗೇ ಇದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಹೌದಲ್ಲವೇ ನಮ್ಮ ಕೈ ಬೆರೆಳುಗಳೇನಾದರೂ ಒಂದೇ ಉದ್ದದ್ದಾಗಿದ್ದಿದ್ದರೆ ಎಷ್ಟೊಂದು ಅಸಹಜವಾಗಿದ್ದು, ನಮ್ಮ ಕೈಯಲ್ಲಿ ಮಾಡಬೇಕಾದ ಕೆಲಸಗಳಿಗೆ ತೊಂದರೆ ಆಗುತ್ತಿರುತ್ತಿತ್ತಲ್ಲವೇ? ಹಾಗಾಗಿ ಜಗತ್ಸೃಷ್ಟಿಯಲ್ಲಿ ಯಾವ ಲೋಪವೂ ಇಲ್ಲ . ಎಲ್ಲವೂ ಸಮರ್ಪಕವಾಗೆ ಇದೆ. ಅಷ್ಟೇ ಆಲ್ಲ ಈ ಜಗತ್ತಿನಲ್ಲಿರುವ ಎಲ್ಲ ಅಸಮತೆಗಳು, ಸಮತೆಗಳು, ಆಕಾರ, ರೂಪ, ವರ್ಣ, ಗುಣ, ಬೇಧಗಳನ್ನು ಸೃಷ್ಟಿಸುವಾಗ ಆ ಪರಮಾತ್ಮ, ಸಕಾರಣವಾಗೇ, ಎಲ್ಲವನ್ನೂ ತನಗೆ ಹೇಗೆ ಬೇಕೋ ಹಾಗೆ ಸೃಷ್ಟಿಸಿಕೊಂಡು ಎಲ್ಲದರಲ್ಲೂ ತಾನೇ ಇದ್ದುಕೊಂಡು ಎಲ್ಲ ಚಿತ್ರ ವಿಚಿತ್ರ ರೂಪಗಳನ್ನೂ ಮತ್ತು ಎಲ್ಲ ವೈವಿಧ್ಯಮಯ ಗುಣಗಳನ್ನೂ ತಾನೇ ಅನುಭವಿಸುತ್ತಾ ಆನಂದದಿಂದ ಇದ್ದಾನೆ ಎನ್ನುವುದನ್ನು ನಾವು ಈಗಾಗಲೇ ಮನಗಂಡಿದ್ದೇವೆ.

ವಾಚಕರೆ, ನೋಡಿ ಈ ಜಗತ್ತಿನಲ್ಲಿರುವ ಎಲ್ಲ ಮನುಷ್ಯರು,ಪ್ರಾಣಿಗಳು, ಕ್ರಿಮಿ ಕೀಟಗಳು, ನಭೋಚರಗಳು , ಜಲಚರಗಳು, ಗಿಡ ಮರಗಳು, ಹೂಗಳು, ಹಣ್ಣುಗಳು ಎಲ್ಲವೂ ಒಂದೇ ರೂಪ, ಆಕಾರ, ಬಣ್ಣ, ವಾಸನೆ, ರುಚಿಯ,ಬುದ್ಧಿಗಳ, ಮನಸ್ಸಿನದಾಗಿದ್ದಿದ್ದರೆ, ಏಕತಾನತೆಯಿಂದ ನಮಗೆ ಈ ಜಗತ್ತು ಬೇಸರವಾಗುತ್ತಿತ್ತು. ಹಾಗಾಗಿಗೆ ಈ ವೈವಿಧ್ಯತೆ. ನಾವೂ ಸಹ ಈ ವೈವಿಧ್ಯತೆಯ ಒಂದು ಅಂಗವಲ್ಲವೇ. ಜಗತ್ತನ್ನು ಸೃಷ್ಟಿಸಿದ ಆ ಪರಮಾತ್ಮನಿಗೆ ಧನ್ಯವಾದವನ್ನು ಅರುಹೋಣ, ಅಭಿನಂದಿಸೋಣ, ಆನಂದಿಸೋಣ..

Mankuthimmanakagga-201-220

ರಸಧಾರೆ – 201

ಉರಿಯುತಿರೆ ಹೊಟ್ಟೆ ಕಿಚ್ಚಾರಿಸಲು ನೀರೆಲ್ಲಿ?
ನರಕವೆದೆಯಲಿ ನೆಲೆಸೆ ನಿದ್ದೆಗೆಡೆಯೆಲ್ಲಿ?
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ ?
ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ.

ಕಿಚ್ಚಾರಿಸಲು = ಕಿಚ್ಚ+ ಆರಿಸಲು // ನರಕವೆದೆಯಲಿ = ನರಕವು + ಎದೆಯಲಿ// ನಿದ್ದೆಗೆಡೆಯೆಲ್ಲಿ = ನಿದ್ದೆಗೆ + ಎಡೆಯಲ್ಲಿ// ಹರಿಸಲಪ್ಪುದೆ = ಹರಿಸಲು + ಅಪ್ಪುದೆ //

ಕಿಚ್ಚು = ಬೆಂಕಿ, ಉರಿ// ಎಡೆಯಲ್ಲಿ = ಅವಕಾಶವೆಲ್ಲಿ// ಹರಿಸಲು = ಹೋಗಲಾಡಿಸಲು // ಅಪ್ಪುದೆ = ಆಗುವುದೆ// ಮತ್ಸರಿಯ = ಮತ್ಸರ ಪಡುವವನ// ಕರುಬಿದನ = ಕರುಬುವವನ// ಪೊರೆಗೆ = ರಕ್ಷಣೆ.

ಹೊಟ್ಟೆಯುರಿಯನ್ನು ಆರಿಸಲು ನೀರು ಎಲ್ಲಿಹುದು? ನರಕದಂಥ ಹಿಂಸೆಯನ್ನು ನೀಡುವ ಈ ಅಸೂಯೆ ಎನ್ನವ ಉರಿ ಹೃದಯದಲಿ ನೆಲೆಸಿರುವಾಗ, ನಿದ್ದೆ ಬರಲು ಹೇಗೆ ಸಾಧ್ಯ. ಮತ್ಸರ ಪಡುವವನ ಸಂಕಟವನ್ನು ಯಾರಾದರೂ ನಿವಾರಿಸಲು ಸಾಧ್ಯವೇ? ಅಂತಹವನನ್ನು ಆ ದೇವರೇ ಕಾಪಾಡಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಯಾರಿಗೆ ಏನು, ಎಷ್ಟು ಮತ್ತು ಯಾವ ಸಮಯಕ್ಕೆ ಸಿಗಬೇಕೆನ್ನುವುದು ವಿಧಿ ಲಿಖಿತವೆನ್ನುತ್ತದೆ ನಮ್ಮ ಸನಾತನ. ಪ್ರತಿಯೊಬ್ಬರ ಅನುಭವವೂ ಅದನ್ನು ಪುಷ್ಟೀಕರಿಸುತ್ತದೆ. ಆಸೆ ಪಟ್ಟು ಸಿಕ್ಕದ್ದರಲ್ಲಿ ತೃಪ್ತಿಯಿಂದ ಜೀವನ ಮಾಡಿದವರ ಮತ್ತು ಅತಿಯಾಸೆ ಪಟ್ಟು ಅಸೂಯೆಯಿಂದ ಮತ್ತು ಅಹಂಕಾರದಿಂದ ತಮ್ಮ ಮತ್ತು ತಮ್ಮನ್ನು ನಂಬಿದವರ ಜೀವನವನ್ನು ನಾಶಮಾಡಿದವರ ದೃಷ್ಟಾಂತಗಳು ನಮಗೆ ಹೇರಳವಾಗಿ ಸಿಗುತ್ತವೆ. ಮಹಾಭಾರತದ ಧುರ್ಯೋಧನನೆ ಇದಕ್ಕೆ ಸೂಕ್ತ ಉದಾಹರಣೆ. ಹಾಗೆ ನಾವು ಆಸೆಪಟ್ಟು ನಮಗೆ ಸಿಗದಿದ್ದನ್ನು ನೆನೆದು ಮತ್ತು ಅದು ಬೇರೆಯವರಿಗೆ ಸಿಕ್ಕಿದರೆ ಕಂಡು ಅಸೂಯೆ ಪಡುವುದು ಎಷ್ಟು ಸರಿ? ಆದರೆ ಮಾನವನ ಸ್ವಭಾವವು ಹೀಗೆ ಅಸೂಯೆ ಪಡುತ್ತಲೇ ಇರುತ್ತದೆ. ಈ ಅಸೂಯೆ ಎನ್ನುವ ಬೆಂಕಿ, ಅಸೂಯೆ ಪಡುವವನನ್ನು ಒಳಗೊಳಗೇ ಸುಡುತ್ತಲೇ ಇರುತ್ತದೆ. ಈ ಬೆಂಕಿಯನ್ನು ಯಾರಿಂದಲೂ ಆರಿಸಲು ಸಾಧ್ಯವಿಲ್ಲ.

ಅಸೂಯೆ ಪಟ್ಟಾಕ್ಷಣ ನಮಗೆ ನಾವು ಬಯಸಿದ್ದು ಸಿಗುವ ಹಾಗಿದ್ದರೆ, ಅದು ಬೇರೆ ವಿಷಯ. ಹಾಗೆ ಸಿಗುವುದಿಲ್ಲವಲ್ಲ. ವಸ್ತುವಂತೂ ಸಿಗುವುದಿಲ್ಲ, ಉಳಿಯುವುದೇನು, ಕೇವಲ ನಮ್ಮನ್ನು ಸುಡುವ ಅಸೂಯೆಯ ಬೆಂಕಿ. ಇದು ಮನಸ್ಸನ್ನು ಸುಡುತ್ತದೆ ಮತ್ತು ಆ ಸುಡುವ ಮನಸ್ಸು ದೈಹಿಕ ಆರೋಗ್ಯವನ್ನೂ ಹಾಳುಗೆಡುವುತ್ತದೆ. ಚಿಂತೆ ಹತ್ತಿ ನಿದ್ದೆಯೂ ಬರುವುದಿಲ್ಲ. ಈ ಚಿಂತೆಗೆ ಕಾರಣ, ಆಸೆ ಪಡುವ ನಾವು, ನಮ್ಮ ಯೋಗ್ಯತೆ ಮತ್ತು ಸಾಮರ್ತ್ಯದ ಮಿತಿ ಎರಡನ್ನೂ ಅರಿತಿರುವುದಿಲ್ಲ. ಅನ್ಯರಿಗೆ ಅದು ಗೊತ್ತಾದರೂ ಅವರು ನಮ್ಮ ಮನಸ್ಸಿನ ಈ ತೊಳಲಾಟವನ್ನು ಹಿಂಸೆಯನ್ನು ಹೋಗಲಾಡಿಸಲಾರರು. ಕಾರಣ ನಮ್ಮ ಮನಸ್ಸನ್ನು ಅವರು ಅರಿಯಲಾರರು. ಆದರೆ ವಿವೇಚನೆಯಿಂದ ಕೂಡಿದ ಆಲೋಚನೆಯಿದ್ದರೆ, ಖಂಡಿತ ನಾವು ನಮ್ಮ ಮನಸ್ಸಿನಲ್ಲಿ ನಡೆಯುವ ಈ ತೀರಲಾರದ ಆಸೆಗಳನ್ನು ಮತ್ತು ಆ ಆಸೆಗಳಿಂದ ಉಂಟಾದ ಅಸೂಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಆದರೆ ಅದಕ್ಕೆ ನಮಗೆ ನಮ್ಮ ” ಅಹಂಕಾರ ” ಅಡ್ಡ ಬರುತ್ತದೆ. ಅಂತಹವರನ್ನು ಆ ದೇವರೇ ಕಾಪಾಡಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

” ಅನ್ಯೇಷಾಂ ಉದಯಂ ದೃಷ್ಟ್ವಾ ಯೇ ಅಭಿನಂದಂತಿ ಮಾನವಾಃ, ತೇ ವೈ ಭಾಗವತೋತ್ತಮಾಃ” ಪರರ ಅಭಿವೃದ್ಧಿಯನ್ನು ಕಂಡು ಸಂತೋಷಪಡುವವನು, ಪರಮಾತ್ಮನಿಗೆ ಪ್ರಿಯನಾಗುತ್ತಾನೆ ಎಂದು ಅರ್ಥ. “ಅಸೂಯೆ ಪಡುವವನು ಅಲ್ಲ” ಎಂದೂ ಅರ್ಥ, ಅಲ್ಲವೇ ವಾಚಕರೆ? ಹಾಗಾಗಿ ನಮ್ಮ ಮಾನಸಿಕ ಸ್ವಾಸ್ಥ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು, ನಮ್ಮ ಮಿತಿಗಳನ್ನು ಅರಿತುಕೊಂಡು, ಪೂರ್ವಕರ್ಮಾನುಸಾರ, ನಮ್ಮ ವಿಧಿಯನುಸಾರ, ನಮ್ಮ ಸಾಮರ್ಥ್ಯಕ್ಕನುಸಾರ ನಮಗೆ ಲಭ್ಯವಾದದ್ದನ್ನು ತೃಪ್ತಿಯಿಂದ ಅನುಭವಿಸಿದರೆ ಮನಸ್ಸಿಗೆ ನಿರಾಳ, ನೆಮ್ಮದಿ. ನಮಗೆ ಆಯ್ಕೆ ಮಾಡಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಮತ್ತು ಅಧಿಕಾರವುಂಟು. ನಾವೇನು ಆಯ್ದು ಕೊಂಡರೆ ಅದರನುಸಾರ ನಮಗೆ ಕಷ್ಟವೋ ಅಥವಾ ಸುಖವೋ ಸಿಗುತ್ತದೆ.


ರಸಧಾರೆ – 202

ರಾವಣನ ದಶಶಿರವದೇಂ? ನರನು ಶತಶಿರನು
ಸಾವಿರಾಸ್ಯಗಳನೊಂದರೊಳಣಗಿಸಿಹನು
ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ
ಭೂವ್ಯೋಮಕತಿಶಯನು – ಮಂಕುತಿಮ್ಮ

ದಶಶಿರವದೇಂ = ದಶ + ಶಿರವು+ಅದೇಂ // ಸಾವಿರಾಸ್ಯಗಳನೊಂದರೊಳಣಗಿಸಿಹನು = ಸಾವಿರ+ಆಸ್ಯಗಳನು+ಒಂದರ+ಒಳಗೆ+ಅಣಗಿಸಿಹನು// ಹುಲ್ಲೆಯುಮಾಗಿ = ಹುಲ್ಲೆಯುಂ+ಆಗಿ//
ಭೂವ್ಯೋಮಕತಿಶಯನು = ಭೂ+ವ್ಯೋಮಕೆ+ ಅತಿಶಯನು.
ಆಸ್ಯಗಳನು = ಮುಖಗಳನು// ಹುಲ್ಲೆಯುಂ = ಜಿಂಕೆಯೂ// ವ್ಯೋಮಕೆ = ಆಕಾಶಕ್ಕೆ.

ರಾವಣನಿಗೆ ಹತ್ತು ತಲೆಗಳಿರಬಹುದು. ಆದರೆ ನಮ್ಮ ಮನುಷ್ಯನಿಗೆ ನೂರಾರು ತಲೆಗಳು. ಸಾವಿರ ಮುಖಗಳನ್ನು ಒಂದೇ ಮುಖದಲ್ಲಿ ಅಡಗಿಸಿಟ್ಟುಕೊಂಡು ಪ್ರದರ್ಶಿಸುವ ಕ್ಷಮತೆ ಇರುವವನು ಮನುಷ್ಯ. ಹಾವಾಗಿ, ಹುಲಿಯಾಗಿ, ಕಪ್ಪೆ, ಜಿಂಕೆಯಾಗಿಯೂ ತನ್ನ ಗುಣಗಳನ್ನು ತೋರುವ ಈ ಮನುಷ್ಯ ಇಡೀ ಜಗತ್ತಿನಲ್ಲಿ ಅತಿಶಯದ ಪ್ರಾಣಿ ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ಮಾನ್ಯ ಗುಂಡಪ್ಪನವರು ಮಾನವನ ಬಹುಮುಖ “ಪ್ರತಿಭೆ” ಕುರಿತು ಈ ಕಗ್ಗದಲ್ಲೂ ಉಲ್ಲೇಖ ಮಾಡುತ್ತಾರೆ. ರಾಮಾಯಣದಲ್ಲಿ ರಾವಣನಿಗೆ ದಶಗ್ರೀವ, ದಶಕಂಠ ಎಂದೂ ಕರೆದಿದ್ದಾರೆ. ೬೪ ವಿಧ್ಯೆಗಳಲ್ಲಿ ಪಾರಂಗತನಾದ ರಾವಣ ಏಕ ಕಾಲದಲ್ಲಿ ಹತ್ತಾರು ಕೆಲಸಗಳನ್ನು ಮಾಡುವ ಕ್ಷಮತೆಯನ್ನು ಹೊಂದಿದ್ದನಾದ್ದರಿಂದ ಅವನಿಗೆ ಸೂಚ್ಯವಾಗಿ ದಶಕಂಠನೆಂದು ಕರೆದಿದ್ದಾರೆ, ವಾಲ್ಮೀಕಿ ರಾಮಾಯಣದಲ್ಲಿ. ಅಷ್ಟೇ ಅಲ್ಲ, ರಾಮ ರಾವಣ ಯುದ್ಧದಲ್ಲಿ ಒಂದು ತಲೆ ಕಡಿದರೆ ಮತ್ತೊಂದು ತಲೆ ಉದ್ಭವವಾಗುತ್ತಂತೆ. ಅದು ಕೂಡ, ಅವನ ಒಂದು ಸಾಮರ್ಥ್ಯವನ್ನು ಯಾರಾದರೂ ಮೀರಿಸಿದರೆ ಅವನ ಮತ್ತೊಂದು ಸಾಮರ್ಥ್ಯ ಕೆಲಸಮಾಡುತಿತ್ತು ಎನ್ನುವುದನ್ನು ಸೂಚ್ಯವಾಗಿ ಹಾಗೆ ಹೇಳಿದ್ದರೆ ಅಷ್ಟೇ.

ರಾವಣನಿಗೆ ಹತ್ತು ತಲೆಗಳಾದರೆ ಮನುಷ್ಯನಿಗೆ ನೂರಾರು ತಲೆಗಳಿವೆ ಎಂದು ಮನುಷ್ಯನ ಬಹು ರೂಪಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಹಾವಾಗಿ ಛಲ ಹಿಡಿಯುವ ಗುಣ , ಕೋಪಗೊಂಡು ಹುಲಿಯಂತೆ ಮತ್ತೊಬ್ಬರ ಮೇಲೆ ಎರಗುವ ಗುಣ, ಕಪ್ಪೆಯಂತೆ ತಾನುಂಟು ತನ್ನ ಪ್ರಪಂಚವುಂಟು ಎಂದು ತಮ್ಮ ಸ್ವಾರ್ಥದ ವೃತ್ತದಲ್ಲೇ ಇರುವ ಗುಣ, ಸಾತ್ವಿಕ ಗುಣಗಳನ್ನು ಸಂಪೂರ್ಣವಾಗಿ ಹೊಂದಿರುವ ಆ ಜಿಂಕೆ ಮರಿಯಂತ ಗುಣ, ಗೋವಿನಂತೆ ಮಮತೆಯ ಗುಣ, ಹೀಗೆ ಎಲ್ಲ ಗುಣಗಳನ್ನೂ ಹೊಂದಿ ಸಮಯ ಸಂದರ್ಭಕ್ಕೆ ಸರಿಯಾಗಿ ಅವುಗಳನ್ನು ಪ್ರದರ್ಶಿಸುವ ಕಲೆಯನ್ನು ಆ ಪರಮಾತ್ಮ ಕೇವಲ ಮನುಷ್ಯನಿಗಷ್ಟೇ ಕೊಟ್ಟಿದ್ದಾನೆ ಎಂದರೆ ಆಶ್ಚರ್ಯದ ವಿಷಯವೇ ಅಲ್ಲವೇ? ಈ ಗುಣ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ರೀತಿಯಲ್ಲಿ ಮತ್ತು ಬೇರೆ ಬೇರೆ ಪ್ರಮಾಣ, ಪರಿಮಾಣಗಳಲ್ಲಿ ಇರುತ್ತದೆ.

ಒಂದೇ ವ್ಯಕ್ತಿ ಒಂದೇ ಸಮಯದಲ್ಲಿ ಹಲವರೊಡನೆ ಹಲ ಬಗೆಯಲ್ಲಿ ನಡೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಒಂದೇ ವ್ಯಕ್ತಿ ಎಷ್ಟೊಂದು ವೈವಿಧ್ಯತೆಯನ್ನು ಹೊಂದಿ ವ್ಯವಹರಿಸುವುದನ್ನು ನೋಡಿ ಇಡೀ ಜಗತ್ತೇ ಚಕಿತಗೊಂಡಿದೆ ಎಂದು ಒಂದು ಅತಿಶಯವನ್ನು ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು. ಈ ರೀತಿಯ ಬಹು ಮುಖ ಮನುಷ್ಯನಿಗೆ ಬೇಕೇ? ಎಂದರೆ ಹೌದು ಬೇಕು. ಇದನ್ನೂ ಆ ಪರಮಾತ್ಮನೇ ಕೊಟ್ಟ ಗುಣವಲ್ಲವೇ? ಅವನಾಡಿಸುವ ಜಗನ್ನಾಟಕದಲ್ಲಿ, ಪಾತ್ರಗಳು ಸರಿಯಾದ ನಟನೆಯನ್ನು ಮಾಡಲು ಅವನು ನೀಡಿರುವ ಒಂದು ಪರಿಕರ ( property ) ವಲ್ಲವೇ ಈ ಬಹುಮುಖತ್ವ. ಈ ಜಗತ್ತನ್ನು ಸುಂದರವಾಗಿಡಲು ಹೆಚ್ಚು ತಿಳುವಳಿಕೆಯನ್ನೂ ಈ ಬಹುಮುಖ ಪ್ರತಿಭೆಯನ್ನೂ ಆ ಪರಮಾತ್ಮ ನೀಡಿದರೆ ಮನುಷ್ಯ “ಪರಮಾತ್ಮನ ಕಾರಣ”ವನ್ನು ಕಡೆಗಣಿಸಿ ತನ್ನ ಸ್ವಾರ್ಥಕ್ಕಾಗಿಯೇ ಅದನ್ನು ಉಪಯೋಗಿಸಿ ” ರಾವಣನಿಗಿಂತ ತಾನು ಒಂದು ಕೈ ಹೆಚ್ಚು” ಎನ್ನುವಂತೆ ನಡೆದುಕೊಳ್ಳುತ್ತಿದ್ದಾನೆ. ಕೇವಲ ಸ್ವಾರ್ಥದಿಂದ, ಈ ಜಗತ್ತಿನ ಎಲ್ಲವನ್ನೂ ತನ್ನದಾಗಿಸಿಕೊಳ್ಳಲು ಅವನು ತೋರುವ “ಬಹುಮುಖ ಪ್ರತಿಭೆ”ಯನ್ನು ನೋಡಿದರೆ ಅಸಹ್ಯವಾಗುತ್ತದೆ.

ವಾಚಕರೆ ನಾವು ಲೋಕದ ಡೊಂಕನ್ನು ತಿದ್ದಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ನಮ್ಮ ವಿಶ್ಲೇಷಣೆ ನಾವೇ ಮಾಡಿಕೊಂಡು ಸಾಧ್ಯವಾದಷ್ಟು ನಮ್ಮನ್ನು ನಾವು ತಿದ್ದಿಕೊಳ್ಳಲು ಪ್ರಯತ್ನ ಪಟ್ಟರೆ ಒಳ್ಳೆಯದು.

ರಸಧಾರೆ – 203

ತಲೆಯೊಳಗೆ ನೆರದಿಹವು ನೂರಾರು ಹಕ್ಕಿಗಳು
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು
ಕಿಲಕಿಲನೆ ಗೊರಗೊರಣೆ ಕಿರಿಚಿ ಕೂಗುತ್ತಿಹವು
ನೆಲೆಯಲ್ಲಿ ನಿದ್ದೆಗೆಲೋ ? ಮಂಕುತಿಮ್ಮ.

ನಾವು ಈ ಹಿಂದಿನ ಕಗ್ಗಗಳಲ್ಲಿ ಮನುಷ್ಯನ ಮನಸ್ಸಿನಲಿ ಒಂದೇ ಸಮಯದಲ್ಲಿ ನಡೆಯುವ ಹಲವಾರು ಯೋಚನೆಗಳ ವಿಚಾರ ಮತ್ತು ಮನುಷ್ಯನ ಗುಣಗಳ ಹಲವಾರು ಮುಖವಾಡಗಳ ವಿಚಾರವನ್ನು ನೋಡಿದ್ದೇವೆ. ಒಂದು ಬಾರಿ ಯಾವುದೇ ಮನುಷ್ಯನ ಮಸ್ತಿಷ್ಕದಲ್ಲಿ ಹೊಕ್ಕು ನೋಡಿದರೆ, ನಮಗೆ ಅಲ್ಲಿ ಭಯಂಕರವಾಗಿ ನಡೆಯುವ ಚಿತ್ರ ವಿಚಿತ್ರವಾದ ವಿಚಾರಗಳ ಕುಸ್ತಿಯು ಕಾಣುತ್ತದೆ. ಒಂದರ ಮೇಲೊಂದು ಬೀಳುತ್ತಾ, ಒಂದರೊಂದಿಗೆ ಇನ್ನೊಂದು ಗುದ್ದಾಡುತ್ತಾ, ಕೆಲವು ಸೋಲುತ್ತಾ, ಕೆಲವು ಗೆಲ್ಲುತ್ತಾ, ಸೋತದ್ದು ಮತ್ತೆ ಗೆಲ್ಲುತ್ತಾ, ಗೆದ್ದು ಸೋಲುತ್ತಾ, ಹೊಸ ಹೊಸ ಪಟ್ಟುಗಳನ್ನು ಹಾಕುತ್ತಾ, ತಮ್ಮೊಳಗೆ ತಾವೇ ಗುದ್ದಾಡುವ, ವಿವೇಕದೊಡನೆ ಮತ್ತು ಬುದ್ಧಿಯೊಡನೆ ಗುದ್ದಾಡುವ ಸಾವಿರಾರು ಯೋಚನೆಗಳ ಆಗರವೇ ನಮ್ಮ ಮನಸ್ಸಿನ ಹಂದರ. ವಾಸ್ತಿವಿಕವಾಗಿ ಯಾವ ಶಬ್ದವೂ ಆಗದಿದ್ದರೂ ನಮಗೆ ನಮ್ಮ ಮನದಲ್ಲಿ, ಗಿಳಿ – ಕಾಗೆ – ಗೂಬೆ – ಕೋಗಿಲೆಯಂತಹ ಪಕ್ಷಿಗಳು ಒಂದೇ ಬಾರಿ ಕೂಗಿದರೆ ಆಗುವ ಕಲರವವಾದಂತೆ ಭಾಸವಾಗುತ್ತದೆ . ಈ ಶಬ್ದಗಳೇ ಹಲ ವಿಧವಾದ ಆಲೋಚನೆಗಳಂತೆ ನಮ್ಮ ಮನಸ್ಸಿನಲ್ಲಿ ಹೊಕ್ಕು ರಾದ್ದಾಂತ ಮಾಡುತ್ತಿರುತ್ತದೆ. ಅಂತಹ ಕಲಸುಮೆಲೋಗರವಾದ ಆಲೋಚನೆಗಳ ಗೂಡಿನಲ್ಲಿ ಶಬ್ದವೆಲ್ಲಾ ಸ್ಥಬ್ದವಾಗಿ ನಮಗೆ ನಿದ್ದೆ ಬರುವುದು ಸಾಧ್ಯವೇ ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಒಂದು ಯೋಚನೆ ಹೋದರೆ ಮತ್ತೊಂದು ಆ ಕ್ಷಣವೇ ನುಸುಳುತ್ತದೆ. ಹಾಗೆ ಬಂದು ಹೋಗುವ ಆಲೋಚನೆಗಳನ್ನು ನಾವು ದೂರನಿಂತು ನೋಡಿ, ಅವು ಏಕೆ ಬರುತ್ತವೆ ಎಂದು ಆಲೋಚಿಸಿದರೆ, ನಮಗೆ ಕಾರಣವೇ ತಿಳಿಯುವುದಿಲ್ಲ. ಈ ಮನಸ್ಸೇ ಒಂದು ಚಿತ್ರ ವಿಚಿತ್ರ ಆಲೋಚನೆಗಳ ಗೂಡು. ಇದರಲ್ಲಿ ಕೇಳಿಬರುವ ಶಬ್ಧವನ್ನು ಸುಮ್ಮನಾಗಿಸಲೇ ನಮ್ಮ ಅಪೂರ್ವಜರು ನಮಗೆ ಪೂಜೆ, ಧ್ಯಾನ, ಯೋಗ, ಅಧ್ಯಯನ, ಭಜನೆ, ಸಂಗೀತ ಮುಂತಾದ ವಿಷಯಗಳನ್ನು ಕೊಟ್ಟಿದ್ದಾರೆ. ಯೋಗವನ್ನು ” ಚಿತ್ತ ವೃತ್ತಿ ನಿರೋದಕ ” ಎಂದು ಪರಿಭಾಷಿಸಿದ್ದಾರೆ ಎಂದಮೇಲೆ, ಮನಸ್ಸನ್ನು ಸುಮ್ಮನಾಗಿಸಬೇಕಾದ ಕಾರಣವೂ ಅವರಿಗೆ ಗೊತ್ತಿತ್ತು ಎಂದು ಅರ್ಥವಲ್ಲವೇ?

ಮನಸ್ಸಿನ ಶಬ್ದ ಜಂಗುಳಿ ಕಡಿಮೆಯಾದರೆ ಅಥವಾ ಮನಸ್ಸು ಒಂದು ಸಮಯದಲ್ಲಿ ಯಾವುದಾದರೂ ಒಂದೇ ವಿಷಯದ ಮೇಲೆ ಸಕಾರಾತ್ಮಕವಾಗಿ ಕೇಂದ್ರೀಕೃತವಾದರೆ, ಅದು ಧ್ಯಾನವಾಗುತ್ತದೆ. ಧ್ಯಾನದಲ್ಲಿ ಅನವಶ್ಯಕವಾದ ಶಬ್ಧಗಳೆಲ್ಲ ಶಾ೦ತವಾಗಿ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮೊದಮೊದಲು ಜಾಗೃತವಾಗಿರುವಾಗ ಮಾತ್ರ ಶಾಂತವಾಗಿದ್ದು ನಿದ್ದೆ ಬಂದಂತಾಗಿ, ಆ ಆಲೋಚನೆಗಳು ಕನಸಿನಲ್ಲಿ ತಮ್ಮ

ರುದ್ರನರ್ತನ ಮಾಡುತ್ತವೆ. ಆದರೆ ಧ್ಯಾನ ಧೀರ್ಘ ಮತ್ತು ದೃಢವಾದಾಗ ನಮಗೆ ಸಂಪೂರ್ಣ, ಕನಸಿಲ್ಲದ ( ಸಾವಿನಂತ ) ನಿದ್ದೆ ಬರುತ್ತದೆ.


ರಸಧಾರೆ – 204

ದೇವಾಂಶ ಪಶ್ವಂಶಗಳ ಗಂಟು ಮಾನುಷತೆ
ಧೀವಿಮರ್ಶೆಯಿನೊಂದ ಸತ್ಕರಿಸಿ ಬಳಿಸಿ
ಭಾವಪರಿಶೋಧನೆಯಿನಿನ್ನೊಂದ ದಂಡಿಪುದೆ
ಜೀವಪ್ರಕರ್ಷಗತಿ – ಮಂಕುತಿಮ್ಮ.

ಪಶ್ವಂಶಗಳ = ಪಶು + ಅಂಶಗಳ // ಧೀವಿಮರ್ಶೆಯಿನೊಂದ = ಧೀ + ವಿಮರ್ಶೆಯಿನ್+ಒಂದ// ಭಾವಪರಿಶೋಧನೆಯಿನಿನ್ನೊಂದ = ಭಾವ + ಪರಿಶೋಧನೆಯಿನ್+ಒಂದ// ಜೀವಪ್ರಕರ್ಷಗತಿ = ಜೀವ+ ಪ್ರಕರ್ಷ+ ಗತಿ

ಧೀ= ಬುಧ್ಧಿವಂತಿಕೆ// ಪ್ರಕರ್ಷ= ಪ್ರಗತಿ.

ದೇವತೆಗಳಿಗಿರುವ ಗುಣಗಳ ಮತ್ತು ಪಶುಗಳಿಗಿರುವ ಗುಣಗಳ ಮಿಶ್ರಣವೇ ಮನುಷ್ಯಗುಣ. ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಪಶುಗುಣಗಳನ್ನು ಕರಗಿಸುತ್ತಾ ದೈವೀಗುಣಗಳನ್ನು ಹೆಚ್ಚಿಸಿ ಕೊಳ್ಳುವುದೇ ಪ್ರಕರ್ಷ, ಎಂದರೆ ಪ್ರಗತಿ ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ಹಲವಾರು ಜನ್ಮಗಳಲ್ಲಿ, ಹಲವಾರು ದೇಹಗಳನ್ನು ಧರಿಸಿ, ಅವುಗಳ ಗುಣಗಳನ್ನು ತನ್ನದಾಗಿಸಿಕೊಂಡಿರುವ ಮನುಷ್ಯನಲ್ಲಿರುವ ಚೇತನ ಸಂಪೂರ್ಣವಾಗಿ ತನ್ನ ಹಳೆಯ ವಾಸನೆಗಳನ್ನು ಬಿಡದ ಕಾರಣ ಮನುಷ್ಯನಲ್ಲಿ ಆ ಪಶುಗುಣಗಳು ಇರುತ್ತವೆ. ಆದರೆ ಎಲ್ಲ ಪ್ರಾಣಿಗಳಿಗಿಂತ ಉತ್ತಮ ದೇಹವನ್ನು ಹೊಂದಿರುವ ಮನುಷ್ಯ ದೈವೀಗುಣಗಳನ್ನೂ ಹೊಂದಿರುತ್ತಾನೆ. ಆದರೆ ಪ್ರತಿ ಮನುಷ್ಯನಲ್ಲೂ ಈ ಎರಡೂ ಗುಣಗಳ ಪರಿಮಾಣ ಮತ್ತು ಪ್ರಮಾಣ ಬೇರೆ ಬೇರೆಯದಾಗಿರುತ್ತದೆ. ಹಾಗಾಗಿ ಪ್ರತೀ ಮನುಷ್ಯನ ನಡವಳಿಕೆಯೂ ಈ ಗುಣಗಳು ಮತ್ತು ಅವುಗಳ ಪ್ರಮಾಣ ಪರಿಮಾಣಗಳಗನುಗುಣವಾಗಿಯೇ ಇರುತ್ತದೆ.

ತನ್ನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಮನುಷ್ಯನಿಗೆ ಅನ್ಯ ಪ್ರಾಣಿಗಳಿಗಿಂತ ಅಧಿಕವಾದ ಬುದ್ಧಿಶಕ್ತಿಯನ್ನು ಆ ಪರಮಾತ್ಮ ಕರುಣಿಸಿದ್ದಾನೆ. ಅದನ್ನು ಉಪಯೋಗಿಸಿಕೊಂಡು ತನ್ನಲ್ಲಿರುವ ಪಶು ಗುಣಗಳನ್ನು ಕಡಿಮೆ ಮಾಡಿಕೊಳ್ಳುತ್ತಾ, ದೈವೀ ಗುಣಗಳನ್ನು ಹೆಚ್ಚು ಮಾಡಿಕೊಳ್ಳುವ ಪ್ರಯತ್ನವನ್ನು ಮನುಷ್ಯ ಮಾಡಿದರೆ ಅದು ಪ್ರಗತಿಯಾಗುತ್ತದೆ. ಹಾಗೆ ಪಶುಗುಣಗಳನ್ನು ಸಂಪೂರ್ಣವಾಗಿ ನೀಗಿಸಿಕೊಂದರೆ ಮನುಷ್ಯ

“ಮಾನವ” ನಾಗುತ್ತಾನೆ ಎಂಬುದೇ ಈ ಕಗ್ಗದ ಹೂರಣ.

ಆದರೆ ವಸ್ತುಸ್ಥಿತಿಯೇ ಬೇರೆಯಾಗಿದೆ. ಈ ಜಗತ್ತಿನ ಆಕರ್ಷಣೆಯಲ್ಲಿ ಮನುಷ್ಯ ವಿವೇಚನೆಯನ್ನು ತೊರೆದು, ಸ್ವಾರ್ಥದಿಂದ ತನ್ನಲ್ಲಿರುವ ಪಾಶವೀ ಗುಣಗಳನ್ನು ಅಧಿಕವಾಗಿಸಿಕೊಳ್ಳುತ್ತಿದ್ದಾನೆ. ಇವನ ದುರಾಸೆಗೆ ಅಂತ್ಯವೇ ಇಲ್ಲವೆಂಬಂತೆ, ಎಲ್ಲಿ ನೋಡಿದರೂ ಭಾಷೆ, ಜಾತಿ, ಧರ್ಮ, ನೀರು, ನೆಲ, ಆಕಾಶ, ಸಮುದ್ರಗಳ ಇತ್ಯಾದಿ ಕಾರಣದಿಂದ ಪ್ರಪಂಚದ ಯಾವುದಾದರೊಂದು ಮೂಲೆಯಲ್ಲಿ ಪ್ರತಿ ನಿತ್ಯ ಕದನ ಮತ್ತು ಹೋರಾಟ ನಡೆದೇ ಇರುತ್ತದೆ. “ಪಶುಗುಣಗಳನ್ನು ಸಂಪೂರ್ಣವಾಗಿ ಪಡೆದ ಆ ಪಶುಗಳಿಗಿಲ್ಲದ ಪಾಶವೀ ಭಾವದಿಂದ ಮನುಷ್ಯ ತನ್ನ ಜೀವನವನ್ನು ನರಕವಾಗಿಸಿಕೊಂಡಿದ್ದಾನೆ. ಜಗತ್ತಿನ ಜನರೆಲ್ಲಾ ಈ ಬಗ್ಗೆ ಆಲೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.”ನಾವು ಏಕೆ ಹೀಗೆ, ಶಾಂತವಾಗಿ, ಸುಂದರವಾಗಿ ಬಾಳಲು ನಮಗೆ ಸಾಧ್ಯವಿಲ್ಲವೇ” ಎಂದು ಯೋಚಿಸಬೇಕಾಗಿದೆ.

ಪ್ರತಿ ವ್ಯಕ್ತಿಯೂ ಬದಲಾಗಿ, ಇಡೀ ಸಮಾಜವೇ ಬದಲಾಗಿ, ಈ ಜಗತ್ತು ಎಲ್ಲರೂ ಶಾಂತಿಯಿಂದ ಬಾಳಲು ಆಗುವಂತೆ ಬದಲಾಗಬೇಕು. ಅದರ ಪ್ರಯತ್ನ ನಮ್ಮಿಂದಲೇ ಮೊದಲಾಗಬೇಕಲ್ಲವೇ? ಆತ್ಮಾವಲೋಕನಕ್ಕೆ ಇದು ಸರಿಯಾದ ಸಮಯವಲ್ಲವೇ?


ರಸಧಾರೆ – 205

ಕಲ್ಲಾಗಿ ನಿಲ್ಲುವನು, ಬಳ್ಳಿವೊಲು ಬಳುಕುವನು
ಮುಳ್ಳಾಗಿ ಚುಚ್ಚುವನು, ಪುಲ್ಲಸುಮವಹನು
ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು
ಕ್ಷುಲ್ಲಮಾನಸನಿವನು – ಮಂಕುತಿಮ್ಮ

ಪುಲ್ಲಸುಮವಹನು = ಫುಲ್ಲ + ಸುಮವು+ ಅಹನು// ಕಲ್ಲೋಲವಾರಿಧಿವೊಲುರವಣಿಸಿ = ಕಲ್ಲೋಲ + ವಾರಿಧಿ + ವೊಲು+ ಉರವಣಿಸಿ// ಕ್ಷುಲ್ಲಮಾನಸನಿವನು = ಕ್ಷುಲ್ಲ + ಮಾನಸನು + ಇವನು

ಫುಲ್ಲ = ಅರಳಿದ // ಅಹನು = ಇಹನು// ವಾರಿಧಿ = ಸಮುದ್ರ// ವೊಲು = ಹಾಗೆ, ಅಂತೆ// ಉರವಣಿಸಿ = ಮೇಲೆ ಬಿದ್ದು // ಕ್ಷುಲ್ಲಮಾನಸನಿವನು = ಕ್ಷುಲ್ಲಕ( ನೀಚ) ಮನಸಿನವನು

ಮನುಷ್ಯನ ಹಲವಾರು ಗುಣಗಳನ್ನು ವರ್ಣಿಸುತ್ತಾ, ಮಾನವನು ಕೆಲಬಾರಿ, ಕಲ್ಲಿನಂತೆ ಗಟ್ಟಿಯಾಗಿಯೂ, ಕೆಲಬಾರಿ ಬಳ್ಳಿಯಂತೆ ವಾಲುತ್ತಾ, ಕೆಲಬಾರಿ ಮುಳ್ಳಿನಂತೆ ಪರರನ್ನು ಚುಚ್ಚುತ್ತಾ, ಕೆಲಬಾರಿ ಅರಳಿದ ಕುಸುಮದಂತೆ ಸುಗಂಧವನ್ನು ಬೀರುತ್ತಾ, ಕೆಲಬಾರಿ ಸಮುದ್ರದ ಅಲೆಯಂತೆ ಮೇಲೆದ್ದು ಮತ್ತೆ ಕೆಳಗೆ ಬೀಳುತ್ತಾ ಸ್ಥಿರ ಮನಸ್ಸಿಲ್ಲದ ಕ್ಷುಲ್ಲಕ ಮನಸ್ಸಿನವನು ಇವನು, ಎಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಗುಹೆಯಂತಿರುವ, ಆಳವಾದ ಸಮುದ್ರದಂತಿರುವ ಈ ಮಾನವನ ಮನಸ್ಸನ್ನು ಅರಿಯುವುದು ಬಹಳ ಕಷ್ಟ. ಒಂದು ಸಮಯವಿದ್ದ ಇವನ ಮನೋಭಾವ ಮತ್ತೊಂದು ಘಳಿಗೆ ಇರುವುದಿಲ್ಲ. ಇವನ ಮನಸ್ಸು ಬಹಳ ಸೂಕ್ಷ್ಮ. ಕಷ್ಟಗಳು ಬಂದಾಗ ಇವನು ಕೆಲಬಾರಿ ಕುಸಿದೇ ಹೋಗುತ್ತಾನೆ ಅಥವಾ ಗಟ್ಟಿಯಾಗಿ ಕಲ್ಲಿನಂತೆ ಸೆಟೆದು ನಿಲ್ಲುತ್ತಾನೆ. ತನ್ನ ಕಾರ್ಯಗಳನ್ನು ಪೂರೈಸಿಕೊಳ್ಳಲು ಇವನು ಹಲವುಬಾಗಿ ಪರರ ಸಹಾಯಕ್ಕಾಗಿ “ಬಳ್ಳಿ”ಯಂತೆ ಅನ್ಯರ ಮೇಲೆ ಅಧಾರಪಡುತ್ತಾನೆ ಮತ್ತೆ ಕೆಲಬಾರಿ ಯಾರ ಸಹಾಯವೂ ಇಲ್ಲದೆ ಗೆಲ್ಲುತ್ತಾನೆ. ತನ್ನ ಕಾರ್ಯಸಾಧನೆಯ ದಾರಿಯಲ್ಲಿ ಅವನಿಗೆ ತೊಡಕಾದವರನ್ನು “ಮುಳ್ಳಿನಂತೆ ಚುಚ್ಚಿ” ತನಗಿರುವ ಅಡ್ಡಿಯನ್ನು ತೊಲಗಿಸಿಕೊಂಡು ಮುಂದುವರೆಯುತ್ತಾನೆ. ಸಫಲನಾದಾಗ ತನ್ನ ಸಫಲತೆಯ ಫಲವನ್ನು ಸ್ವಾರ್ಥದಿಂದ ತಾನೊಬ್ಬನೇ ಅನುಭವಿಸುತ್ತಾನೆ ಅಥವಾ ಒಂದು ಹೂ ಸಫಲತೆಯಿಂದ ಅರಳಿ ತನ್ನ ಸುಗಂಧವನ್ನು ಜಗಕೆಲ್ಲ ಪಸರಿಸುವಂತೆ, ತನ್ನ ಸಫಲತೆಯ ಫಲವನ್ನು ಹಲವರೊಡನೆ ಹಂಚಿಕೊಂಡು ಬಾಳುತ್ತಾನೆ. ಇವೆಲ್ಲ ಮಾನವನ ಸಹಜ ಗುಣಗಳು.

ವಿಪರ್ಯಾಸವೇನೆಂದರೆ, ತಮ್ಮ ಕಷ್ಟಗಳನ್ನು ತಾವೇ ನಿವಾರಿಸಿಕೊಳ್ಳಲು ಸಾಮರ್ಥ್ಯವಿದ್ದರೂ, ಆಲಸ್ಯದಿಂದ ಅನ್ಯರಮೇಲೆ ಆಧಾರಪಡುವವರು ನಮಗೆ ಬಹಳಷ್ಟು ಜನರು ಸಿಗುತ್ತಾರೆ. ತಮಗೆ ಯಾವ ರೀತಿಯ ತೊಂದರೆಯನ್ನು ಕೊಡದೆ ಇದ್ದರೂ ಪರರನ್ನು ಘಾಸಿಗೊಳಿಸಿ, ಅವರಿಗೆ ತೊಂದರೆಯನ್ನು ಕೊಟ್ಟಾಗಲೀ ತಮ್ಮ ಕಾರ್ಯ ಸಾಧಿಸುವವರೂ ಬಹಳಷ್ಟು ಜನ ನಮಗೆ ಸಿಗುತ್ತಾರೆ. ತಮ್ಮ ಸುತ್ತಲೂ ಕಷ್ಟದಿಂದ ಕಾರ್ಪಣ್ಯದಿಂದ ನರಳುತ್ತಿರುವ ಜನರನ್ನೂ ಕಂಡೂ ಕಾಣದಂತ ” ಕಣ್ಣಿದ್ದ ಕುರುಡ”ರೂ ಸಹ ನಮಗೆ ವಿಫುಲವಾಗಿ ಕಾಣಸಿಗುತ್ತಾರೆ. ತಮ್ಮಲ್ಲಿ ಹೇರಳವಾಗಿ ಧನವಿದ್ದರೂ ಮತ್ತಷ್ಟಕ್ಕೆ ದುರಾಸೆ ಪಡುತ್ತಾ” ಎಲ್ಲವೂ ತನಗೆ ಬೇಕು” ಎನ್ನುವ ಭಾವದಿಂದ, ತಮ್ಮ ಬುಧ್ಧಿ, ಸಾಮರ್ಥ್ಯ ಮತ್ತು ಸಂಪತ್ತು ಕೇವಲ ತನಗಾಗಿಯೇ ಎಂದುಕೊಳ್ಳುವ “ಅಪ್ಪಟ ಸ್ವಾರ್ಥಿ”ಗಳೂ ನಮಗೆ ಹೇರಳವಾಗಿ ಸಿಗುತ್ತಾರೆ.

ಈ ಜಗತ್ತಿನಲ್ಲಿ ಅನೇಕಾನೇಕ ವಿಧವಾದ ಮನೋಭಾವವುಳ್ಳ ಜನರು ಇರುತ್ತಾರೆ. ನಾವೂ ಅವರಲ್ಲಿ ಒಂದು. ನಮ್ಮ ವಿಧ್ಯೆ, ಜ್ಞಾನ ಮತ್ತು ಸಂಸ್ಕಾರಗಳು ನಮ್ಮನ್ನು ನಾವು ಅವಲೋಕಿಸಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿ, ನಾವು ಏನಾಗಬೇಕು,ಏನು ಮಾಡಬೇಕು, ಏನು ಮಾಡಬಾರದು ಎಂದು ವಿಶ್ಲೇಷಣೆ ಮಾಡಿಕೊಳ್ಳುವ ಅರಿವನ್ನು ಮೂಡಿಸಿದರೆ ಒಳ್ಳೆಯದು. ಹಾಗಲ್ಲದೆ ನಾವು ಮಾಡುವುದೇ ಸರಿ ಎನ್ನುವ ಪ್ರವೃತ್ತಿ ಬೆಳೆಸಿಕೊಂಡರೆ ನಾವು ಬದಲಾಗುವ ಸಾಧ್ಯವೇ ಇಲ್ಲ. ಹಾಗಾಗಿ ವಾಚಕರೆ, ನಾವು ಯೋಚನೆ ಮಾಡಬೇಕು. ನಾವೇನಾಗಿದ್ದೇವೆ? ನಾವೇನಾಗಬೇಕು? ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡಬೇಕು. ಇರುವ ಸ್ಥಿತಿಯಿಂದ ಉತ್ತಮವಾಗುವ ಆಸೆ ಮತ್ತು ಆಸೆಗೆ ಪೂರಕವಾದ ಪ್ರಯತ್ನ ನಡೆದರೆ ನಾವೂ ಸಹ ಉತ್ತಮ ಮಾನವರಾಗಲು ಸಾಧ್ಯ


ರಸಧಾರೆ – 206

ಸತ್ತವೆನ್ನಾಶೆಗಳು , ಗೆದ್ದೆನಿಂದ್ರಿಯಗಣವ
ಚಿತ್ತವಿನ್ನಲುಗದೆಂಬಾ ಜಂಬ ಬೇಡ
ಎತ್ತಣಿಂದಲೋ ಗಾಳಿ ಮೋಹಬೀಜವ ತಂದು
ಬಿತ್ತಲಾರದೆ ಮನದಿ – ಮಂಕುತಿಮ್ಮ.

ಸತ್ತವೆನ್ನಾಶೆಗಳು = ಸತ್ತವು+ ಎನ್ನ + ಆಸೆಗಳು // ಗೆದ್ದೆನಿಂದ್ರಿಯಗಣವ = ಗೆದ್ದೆನು + ಇಂದ್ರಿಯ+ ಗಣವ// ಚಿತ್ತವಿನ್ನಲುಗದೆಂಬಾ = ಚಿತ್ತವು+ ಇನ್ನು + ಅಲುಗದು + ಎಂಬ//

ಚಿತ್ತ = ಮನಸ್ಸು // ಎತ್ತಣಿಂದಲೋ = ಎಲ್ಲಿಂದಲೋ

“ನನಗೆ ಆಸೆಗಳು ಸತ್ತಿವೆ. ನಾನು ಇಂದ್ರಿಯಗಳನ್ನು ಗೆದ್ದಿದ್ದೇನೆ. ನನ್ನ ಮನಸ್ಸು ಇನ್ನು ಚಂಚಲವಾಗದು ” ಎಂಬ ಜಂಬ ಪಡಬೇಡ. ಯಾವುದಾದರೂ ಒಂದು ಕಾರಣದಿಂದ, ನಿನ್ನ ಮನಸ್ಸಿನಲ್ಲಿ ಮತ್ತೆ ಆಸೆಯ ಬೀಜ ಬಂದು ಮೊಳಕೆಯೊಡೆಯಬಹುದಲ್ಲ ಎಂದು ಒಂದು ವಾಸ್ತವಿಕತೆಯನ್ನು ಬಣ್ಣಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮಲ್ಲಿ ಎಷ್ಟೋಜನ ” ಅಯ್ಯೋ, ನನಗಿನ್ನೇನೂ ಬೇಡಪ್ಪ. ನನಗೆ ಯಾವ ಆಸೇನೂ ಇಲ್ಲ” ಎಂದು ಹೇಳುವವರನ್ನು ನೋಡುತ್ತೇವೆ. ಅವರೆಲ್ಲ ಸತ್ಯವಾಗಿ ಸಂಪೂರ್ಣವಾಗಿ ಆಸೆಯನ್ನು ಗೆದ್ದವರೇ. ಇಂದ್ರಿಯಗಳನ್ನು ಗೆದ್ದವರೇ ಎಂದು ಅವಲೋಕಿಸಿ ನೋಡಿದರೆ, ಅದು ಬಾರೀ ಬಾಯಿ ಮಾತು ಎಂದು ನಮಗೆ ಅರ್ಥವಾಗುತ್ತದೆ. . ಇದು ಬಹಳ ಸಹಜವಾದ ವಿಷಯ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಈ ರೀತಿಯ ವೈರಾಗ್ಯದ ಮಾತುಗಳು ಸಾಂದರ್ಭಿಕವಾಗಿ, ಆ ಸಮಯಕ್ಕೆ ಬಂದು ಹೋಗುವ ಭಾವಗಳಷ್ಟೇ ಎಂದು ಎಲ್ಲರಿಗೂ ಗೊತ್ತು. ವೈರಾಗ್ಯದಲ್ಲಿ ಹಲವಾರು ಬಗೆಗಳಿವೆ. ” ಸ್ಮಶಾನ ವೈರಾಗ್ಯ” “ಅಭಾವ ವೈರಾಗ್ಯ” ” ಪ್ರಸವ ವೈರಾಗ್ಯ” ಮುಂತಾದವು. ಇಂತಹ ವೈರಾಗ್ಯಗಳು ಕೇವಲ ತಾತ್ಕಾಲಿಕ. ಆ ಸಮಯಕ್ಕೆ ಅಷ್ಟೇ. ನಮ್ಮ ಮನಸ್ಸ್ಸುಮತ್ತೆ ಮೊದಲಿನಂತಾಗುತ್ತದೆ,.

ಕಷ್ಟಗಳು ಬಂದಾಗ ಅಥವಾ ನಮಗೆ ಹೋರಾಡುವ ಸಾಮರ್ಥ್ಯ ಕಡಿಮೆಯಾದಾಗ ಒಂದು ರೀತಿಯ ವೈರಾಗ್ಯ ಬರುತ್ತದೆ. ಆದರೆ ಹಾದಿಯ ಅಂತ್ಯದಲ್ಲಿ ಬೆಳಕು ಕಂಡಾಗ ಮತ್ತೆ ಆಸೆ ಚಿಗುರುತ್ತದೆ. ಮತ್ತೆ ನಾವು ಕಾರ್ಯ ಪ್ರವೃತ್ತರಾಗುತ್ತೇವೆ. ಮತ್ತೆ ಆಸೆಗಳ ಬೆನ್ನೇರಿ ಹೋಗುತ್ತೇವೆ. ಇದು ಮಾನವನ ಸಹಜಗುಣ. ನಾವು ಜೀವಿಸಿರುವ ತನಕ ಈ ಆಸೆಗಳ ಪ್ರಭಾವ ನಮ್ಮ ಮೇಲೆ ಸದಾ ಆಗುತ್ತಲೇ ಇರುತ್ತದೆ. ಆಸೆಗಳಿದ್ದಷ್ಟುದಿನ ನಾವು ಅವುಗಳನ್ನು ತೀರಿಸಿಕೊಳ್ಳಲಿಕ್ಕೆ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ.

ಆಸೆ ಪಡುವುದು ತಪ್ಪಲ್ಲ. ಆದರೆ ನಮ್ಮಾಸೆಯನ್ನು ನಾವು ಅರಿತು ಪಟ್ಟರೆ, ಮಿತಿಗಳನ್ನು ಅರಿತರೆ , ಅದನ್ನು ಸಾಧಿಸುವ ತೀವ್ರತೆಯನ್ನು ಬಿಟ್ಟರೆ, ಅದರಿಂದ ಬರುವ ಫಲ, ಫಲದಿಂದ ಬರುವ ಸುಖಗಳಿಗೆ ಹೆಚ್ಚು ಮಹತ್ವವನ್ನು ನೀಡದೆ ಶಾಂತವಾಗಿ ಮತ್ತು ನಿರ್ಲಿಪ್ತತೆಯಿಂದ ಇದ್ದರೆ, ಪರಿಣಾಮಗಳಿಂದಾಗುವ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇರುತ್ತದೆ. ಇದು ಪ್ರತಿಯೊಬ್ಬರಿಗೂ ವೇದ್ಯವಾದರೆ ಒಳ್ಳೆಯದು. ಅರಿಯದಿದ್ದರೆ ಮನುಷ್ಯ ಈ ಆಸೆಗಳ ವಿಷಮ ವೃತ್ತದಿಂದ ಹೊರಬರಲು ಸಾಧ್ಯವೇ ಇಲ್ಲ. ಮತ್ತೆ ಮತ್ತೆ ಆ ಆಸೆಗಳು ನಮ್ಮಲ್ಲಿ ಹೊಕ್ಕು ನಮ್ಮನ್ನು ತನ್ನ ಸೆಳೆತಕ್ಕೆ ಬೀಳಿಸಿ, ನಮ್ಮನ್ನು ನಾನಾ ರೀತಿಯಲ್ಲಿ ಪೀಡಿಸುತ್ತದೆ. ಎಚ್ಚರದಿಂದುರುವುದು ಒಳ್ಳೆಯದು.


ರಸಧಾರೆ – 207

ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ
ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ
ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ
ಕುಣಿವುದನುಕೂಲ ಬರೆ – ಮಂಕುತಿಮ್ಮ

ಹನಿಯೆರಡು = ಹನಿ+ ಎರಡು|ಅಣಗಿದ್ದು = ಅಣಗಿ + ಇದ್ದು |ನರನಾಶೆಯಂತು = ನರನ + ಆಶೆ + ಎಂತು |ಕುಣಿವುದನುಕೂಲ = ಕುಣಿವುದು+ ಅನುಕೂಲ + ಬರೆ.

ತೃಣ = ಹುಲ್ಲು |ಅಣಗಿದ್ದು = ಸುಪ್ತವಾಗಿದ್ದು

ಬೇಸಿಗೆಯಲ್ಲಿ ಒಣಗಿ ನಮಗೆ ಬರೀ ಮಣ್ಣಂತೆ ಕಾಣುವ ಹುಲ್ಲು ನಾಲ್ಕು ಹನಿ ಮಳೆ ಬಿದ್ದರೆ ಮತ್ತೆ ಚಿಗುರುವಂತೆ, ಕಷ್ಟದ ದಿನಗಳಲ್ಲಿ ಮನದ ಅಂತರ್ಯದಲ್ಲಿ, ಕಾಣದಂತೆ ಇದ್ದ ಮನುಷ್ಯನ ಆಸೆಗಳೆಲ್ಲ ಅನುಕೂಲವಾದ ಸ್ಥಿತ ಬಂದೊಡನೆಯೇ ಮತ್ತೆ ಚಿಗುರುತ್ತವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳುತ್ತಾರೆ.

ಮನುಷ್ಯನ ಅಂತರ್ಯವನ್ನು ಬೆದಕಿ ನೋಡಿದರೆ ಆಸೆ ಸಾಯುವುದೇ ಇಲ್ಲ. ಅದನ್ನೇ ದಾಸರು” ಆಸೆ ಸತ್ತಂತಿರಬಹುದು” ಎಂದರು. “ಆಸೆ ಸತ್ತಂತೆ ಇರಬಹುದು” ಅಷ್ಟೇ, ನಿಜವಾಗಿ ಆಸೆ ಸಾಯುವುದೇ ಇಲ್ಲ. ಯಾವುದೋ ವಸ್ತುವಿನ ಬಯಕೆ ಪೂರೈಸಿಕೊಳ್ಳಲು ಸಾಧ್ಯವಾದರೆ ಸರಿ. ಇಲ್ಲವಾದರೆ ಆಸೆ ಕೊನೆಯಾಗುವುದೇ ಇಲ್ಲ. ಇಂದು ಸಿಗದಿದ್ದರೆ ಮತ್ತೆ ನಾಳೆ ಪ್ರಯತ್ನ. ಈ ಪ್ರಯತ್ನ ನಿರಂತರವಾಗಿ ಸಾಗುತ್ತದೆ. ಒಂದು ಆಸೆ ಪೂರೈಸಿಕೊಳ್ಳಲಾಗದಿದ್ದರೆ, ಮತ್ತೊಂದು ಆಸೆ ಚಿಗುರೊಡೆಯುತ್ತದೆ. ಆಸೆ ತೀರದೆ ಹೋದರೆ ಅದು ಸುಪ್ತವಾಗಿ ಮನದ ಯಾವುದೋ ಮೂಲೆಯಲ್ಲಿ ಬಿದ್ದುಕೊಂಡಿರುತ್ತದೆ. ಮತ್ತೆ ಅನುಕೂಲ್ಲ ಸ್ಥಿತಿ ಬಂದರೆ ಆ ಅಸೆ ಮತ್ತೆ ಚಿಗುರಿ ಅದನ್ನು ಪೂರೈಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಇದು ಮನುಷ್ಯನ ಸಹಜ ಸ್ವಭಾವ.

ಆದರೆ ಮನುಷ್ಯನ ಆಸೆಗಳಿಗೆ ಮಿತಿಯೇ ಇರುವುದಿಲ್ಲ. ಒಂದು ಪೂರ್ಣವಾದರೆ ಮತ್ತೊಂದು ಮೊಳಕೆಯೊಡೆಯುತ್ತದೆ. ” ಇಷ್ಟಾದರೆ ಮತ್ತಷ್ಟರ ಆಸೆ. ಇದಾದರೆ ಇನ್ನೊಂದರ ಆಸೆ” ಎನ್ನುವುದು ಎಲ್ಲರಿಗೂ ತಿಳಿದ ವಿಷಯವಲ್ಲವೇ. ನಾವೆಲ್ಲರೂ ಅದೇ ಸ್ಥಿತಿಯಲ್ಲಿರುವವರು. ವಾಚಕರೆ ಇದನ್ನು ತಾವು ಇದು ಸಹಜ ಗುಣವಾದ್ದರಿಂದ “ತಪ್ಪೇನು?” ಎಂದರೆ, ಖಂಡಿತ ತಪ್ಪಿಲ್ಲ. ಹಾಗಿದ್ದರೆ ” ಆಸೆ ತಪ್ಪು” ಎಂದು ಹಲವಾರು ಜನ ಏಕೆ ವಿಶ್ಲೇಷಣೆ ಮಾಡಿದ್ದಾರೆ ಎಂದರೆ, ಆಸೆ ಜೀವನಕ್ಕೆ” ಪೂರಕ” ವಾಗಿರಬೇಕು.

ವ್ಯಕ್ತಿ , ವಸ್ತು ಮತ್ತು ವಿಷಯಾಸಕ್ತಿ ಒಂದು ವ್ಯಕ್ತಿಯ ಇಹಲೋಕದ ಜೀವನಕ್ಕೆ ಮತ್ತು ಇಲ್ಲಿನ ತೊಳಲಾಟಕ್ಕೆ ಪೂರಕವಾಗಿರಬಹುದು. ಸತ್ಯವಾದ ಆನಂದಕ್ಕೆ ಸುಖಕ್ಕೆ ಖಂಡಿತ ಅದು ಮಾರಕವೇ ಅಲ್ಲವೇ? ಅಧ್ಯಾತ್ಮಿಕ ಔನ್ನತ್ಯಕ್ಕೆ ಖಂಡಿತ

ಮಾರಕ. ಆಸೆಯನ್ನು ಬಿಡುವ ಆಸೆ ಬರಬೇಕು. ಜ್ಞಾನವನ್ನು ಪಡೆದು ಆ ಜ್ಞಾನದ ಬಲದಿಂದ ಈ ಜಗತ್ತಿನ ಮತ್ತು ಈ ಜಗತ್ತಿನ ವಸ್ತುಗಳ ಮೇಲೆ ಆಸೆಯನ್ನು ಬಿಡಬೇಕು.

ಆಸೆಯನ್ನು ಬಿಟ್ಟಾಕ್ಷಣ ಜಗತ್ತಿನಿಂದ ನಿರ್ಗಮಿಸಬೇಕು ಎಂದು ಅರ್ಥವಲ್ಲ. ಈ ಜಗತ್ತಿನಲ್ಲಿ ಇದ್ದು, ಜಗತ್ತಿನ ಆಸೆ ತೊರೆದು, ಜಗತ್ತಿನಲ್ಲಿ ವಿರಕ್ತಿ ಹೊಂದಿ ಜಗತ್ಕಾರಕನಲ್ಲಿ ರಕ್ತಿ ಬೆಳೆಸಿಕೊಂಡರೆ, ಸತ್ಯದ ದರ್ಶನವಾಗುತ್ತದೆ. ಸತ್ಯದರ್ಶನವಾದರೆ ತತ್ವ ದರ್ಶನವಾಗುತ್ತದೆ. ನಿಜವಾದ ಆನಂದ ನಮ್ಮದಾಗುತ್ತದೆ. ಹೇಳುವುದು ಬಹಳ ಸುಲಭ. ಪ್ರಯತ್ನ ಪಟ್ಟರೆ ಅಸಾಧ್ಯವಲ್ಲ. “ಸತ್ಯ ಮತ್ತು ತತ್ವದ ಆಸೆ” ಇರುವವರೆಲ್ಲರೂ ನಾವೆಲ್ಲರೂ ಆ ಪ್ರಯತ್ನವನ್ನು ಮಾಡಬೇಕು.


ರಸಧಾರೆ – 208

ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು
ಅದಕಾಗಿ ಇದಕಾಗಿ ಮತ್ತೊಂದಕಾಗಿ
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು
ಕುದಿಯುತಿಹುದಾವಗಂ – ಮಂಕುತಿಮ್ಮ

ಕುದಿಯುತಿಹುದಾವಗಂ = ಕುದಿಯುತಿಹುದು + ಆವಗಂ

ಬೆದಕಾಟ = ಪರದಾಟ/ ಚಣಚಣವು = ಪ್ರತಿ ಕ್ಷಣವೂ /ಹಸಿವು= ಆಸೆ, ಕಾಮನೆ./ಆವಗಂ = ಸದಾಕಾಲ.

ಪ್ರತೀ ಕ್ಷಣವೂ ನಾವುಗಳೆಲ್ಲ ಹೊಸ ಹೊಸ ಯೋಜನೆಗಳು, ಯೋಚನೆಗಳು, ಆಸೆಗಳು, ಆಕಾಂಕ್ಷೆಗಳನ್ನು ಹೊತ್ತು, ಇದನ್ನೋ, ಅದನ್ನೋ ಅಥವಾ ಮತ್ಯಾವುದನ್ನೋ ಪಡೆಯುವುದಕ್ಕೆ ಪರದಾಡುತ್ತಿರುತ್ತೇವೆ. ಈ ಪರದಾಟ, ಅಧಿಕಾರ ಸಂಪತ್ತು, ಅಂದ ಚೆಂದ ಅಥವಾ ಕೀರ್ತಿಗಳಂತಹ ವಿಚಾರಗಳನ್ನು ನೆನೆದು ನಮ್ಮ ಮನಸ್ಸುಗಳು ಕುದಿಯುತ್ತಿರುತ್ತವೆ ಎಂಬ ವಿಷಯವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮ ಈ ಪರದಾಟ ಬೆದಕಾಟಗಳು ಅಧಿಕಾರಕ್ಕಾಗಿ, ಸಿರಿವಂತಿಕೆಗೆ, ಅಂದ ಚೆಂದಗಳಿಗೆ, ಕೀರ್ತಿಯ ಆಸೆಗಾಗಿ ಇನ್ನೂ ಹತ್ತು ಹಲವಾರು ಕಾರಣಗಳಿಗೆ ನಡೆಯುತ್ತಲೇ ಇರುತ್ತದೆ. ಈ ಬೆದಕಾಟಗಳಲ್ಲಿ ಮನುಷ್ಯ ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ಹಾದಿಯಲ್ಲಿ ಯಾವ ಯಾವ ವೇಷಗಳನ್ನು ಹಾಕುತ್ತಾನೆ, ಎಂತೆಂತಹ ಮಾರ್ಗಗಳನ್ನು ತುಳಿಯುತ್ತಾನೆ, ಹೇಗೆಲ್ಲಾ ತನ್ನ ಬುದ್ಧಿಯನ್ನು ಉಪಯೋಗಿಸುತ್ತಾನೆಂಬುದು ಪ್ರತಿಯೊಬ್ಬರ ಅನುಭವಕ್ಕೂ ಬಂದಿರುತ್ತದೆ. ಈ ಕಾರಣಗಳಿಗಾಗಿಯೇ, ಈ ಜಗತ್ತಿನಲ್ಲಿ ಒಂದು ಮುಖ , ಪೈಪೋಟಿ, ಹೊಡೆದಾಟ, ಕೊಲೆ, ಕೊಳ್ಳೆ, ದರೋಡೆ, ಬೆದರಿಕೆ, ಅಪಹರಣಗಳಂತಹ ವೈಯಕ್ತಿಕ ಅಪರಾಧಗಳು ಮತ್ತು ಆಕ್ರಮಣ, ಯುದ್ಧ, ಭಯೋತ್ಪಾದನೆ ಮುಂತಾದ ಸಾಮೂಹಿಕ ಅಪರಾಧಗಳಿಂದ ಕೂಡಿದ್ದರೆ ಮತ್ತೊಂದು ಮುಖ ಪ್ರೇಮ, ಪ್ರೀತಿ, ಸೌಹಾರ್ದತೆ, ಬ್ರಾತ್ರುತ್ವ, ಮಿತ್ರತ್ವ, ಮುಂತಾದ ಸಕಾರಾತ್ಮಕವಾದ ನಡವಳಿಕೆಗಳಿಂದ ಕೂಡಿದೆ. ಇವೆರಡಕ್ಕೂ ಮಾನವ ಇತಿಹಾಸದಲ್ಲಿ ಹೇರಳವಾದ ಉದಾಹರಣೆಗಳು ದೊರೆಯುತ್ತವೆ.

ಪ್ರತೀ ನಿಮಿಷವೂ ನಮ್ಮಲ್ಲಿ ಹೊಸ ಹೊಸ ಆಸೆಗಳು ಅಲೆ ಅಲೆಯಂತೆ ಹುಟ್ಟುತ್ತಲೇ ಇರುತ್ತವೆ. ನಾವು ಆ ಆಸೆಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಪಡುತ್ತಲೇ ಇರುತ್ತೇವೆ. ಹಲವು ಬಾರಿ ನಮಗೆ ಯಶಸ್ಸೂ ದೊರಕುತ್ತದೆ. ಹಲವು ಬಾರಿ ನಾವು ನಿರಾಶರಾಗುತ್ತೇವೆ. ನಿತ್ಯವೂ ನಮ್ಮ ಆಸೆಗಳನ್ನು ತೀರಿಸಿಕೊಳ್ಳಲು ಪರದಾಡುತ್ತೇವೆ. ಇದನ್ನೇ ಮಾನ್ಯ ಗುಂಡಪ್ಪನವರು ” ಬೆದಕಾಟ ಬದುಕೆಲ್ಲ; ಚಣಚಣವು” ಎಂದು ನಾವು ಪಡುವ ಪರದಾಟವನ್ನು ಅಣಕವಾಡುತ್ತಾರೆ. ಇದು ವಸ್ತು ಸ್ಥಿತಿ. ಇದರಲ್ಲೇನೂ ತಪ್ಪಿಲ್ಲ. ಇದು ಈ ಜಗತ್ತಿನಲ್ಲಿ ವಿಧಿಗನುಗುಣವಾಗಿ ಪ್ರತಿಯೊಬ್ಬರ ಕರ್ಮಗಳ ಅನುಸಾರವಾಗಿ ನಡೆಯುತ್ತಿರುತ್ತದೆ.

ಈ ಬೆದಕಾಟವಿದ್ದಷ್ಟು ದಿನವೂ ಮನುಷ್ಯ ಸದಾಕಾಲ ಅವಶ್ಯಕವಾಗಿಯೋ ಅಥವಾ ಅನಾವಶ್ಯಕವಾಗಿಯೋ ಈ ಜಗತ್ತಿಗೆ ಅಂಟಿಕೊಂಡು ಸಕ್ರಿಯನಾಗಿರುತ್ತಾನೆ.ಇದೂ ಸಹಜವೇ. ಆದರೆ ಈ ಸಕ್ರಿಯತೆ, ನಮ್ಮನ್ನು ನಾವು ಈ ಜಗತ್ತಿನ ಅಂಟನ್ನು ಕಡಿಮೆ ಮಾಡಿಕೊಳ್ಳಲು, ಜ್ಞಾನ ವೃದ್ಧಿ ಮಾಡಿಕೊಳ್ಳಲು, ಆಕಾರಗಳಿಂದ ಸಿಗುವ ಆನಂದಕ್ಕಿಂತ ನಿರಾಕಾರಾನಂದವನ್ನು , ನಿಜಾನಂದವನ್ನು ಪಡೆಯಲು ಬೇಕಾದ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಪಟ್ಟರೆ ಇಹಕ್ಕೂ ಮತ್ತು ಪರಕ್ಕೂ ಸಹಾಯವಾಗುತ್ತದೆ. ಈ ಜಗತ್ತು ನಮ್ಮ ಇಂದ್ರಿಯಗಳನ್ನು ಆಕರ್ಷಿಸುತ್ತದೆ ಮತ್ತು ನಾವು ಈ ಇಂದ್ರಿಯಗಳ ಸೆಳೆತಕ್ಕೆ ಆಕರ್ಷಣೆಗೆ ಒಳಗಾಗುತ್ತೇವೆ. ಈ ಆಕರ್ಷಣೆಯೇ ನಮ್ಮನ್ನು ” ಪರದಾಡುವಂತೆ ಅಥವಾ ಬೆದಕಾಡುವಂತೆ” ಮಾಡುತ್ತದೆ. ನಾವು ಎಷ್ಷ್ಟು ಕಡಿಮೆ ಈ ಜಗತ್ತಿಗೆ ಅಂಟಿಕೊಂಡರೆ ಅಷ್ಟು ಸುಖ. ಇದನ್ನು ಪ್ರತಿಯೊಬ್ಬರೂ ಅವರವರದೇ ರೀತಿಯಲ್ಲಿ ಅರ್ಥಮಾಡಿಕೊಂಡು ಅವರವರ ಪ್ರಯತ್ನ ಪಡಬೇಕು. ಪ್ರಯತ್ನ ಪಟ್ಟರೆ ಹಿತ, ಇಲ್ಲದಿದ್ದರೆ ಈ “ಪರದಾಟ-ಬೆದಕಾಟ”ವೇ ನಮ್ಮ ನಿತ್ಯ ಪರಿಪಾಟವಾಗಿಬಿಡುತ್ತದೆ.


ರಸಧಾರೆ – 209

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ ಗಳಿಗೆಲ್ಲ
ಇನಿಸುಣಿಸು, ಬೆದೆ, ಬೆದರು – ಅಷ್ಟೇ ಜೀವಿತವು
ಮನುಜನೆಂತನಿತರಿಂ ತೃಪ್ತಿಪಡೆವನವಂಗೆ
ಕ್ಷಣ ಕ್ಷಣವು ಹೊಸ ಹಸಿವು – ಮಂಕುತಿಮ್ಮ

ಇನಿಸುಣಿಸು = ಇನಿಸು+ಉಣಿಸು// ಮನುಜನೆಂತನಿತರಿಂ = ಮನುಜನ್ + ಎಂತಂ+ಅನಿತರಿಂ// ತೃಪ್ತಿಪಡೆವನವಂಗೆ = ತೃಪ್ತಿಪಡೆವನ್+ ಅವಂಗೆ

ಉಣಿಸು= ಆಹಾರ/ ಬೆದೆ= ಬಿಸಿ/ ಬೆದರು= ಹೆದರಿಕೆ /ಅನಿತರಿಂ=ಇಷ್ಟರಿಂದ ಮಾತ್ರ

ದನ,ಸಿಂಹ, ಹುಲಿ, ಹಕ್ಕಿ, ಹಾವು, ಮೀನು ಮಂತಾದ ಪ್ರಾಣಿಗಳಿಗೆ ಹಸಿವಾದಾಗ ಆಹಾರ, ಸಂತಾನಾಭಿವೃದ್ಧಿ ಮತ್ತು ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೆ ಪೂರಕವಾದ ಅವಶ್ಯಕತೆಗಳನ್ನು ಬಿಟ್ಟರೆ ಬೇರಾವ ಆಸೆಗಳೂ ಇರದು ಮತ್ತು ಅವುಗಳ ಜೀವಿತವು ಅಷ್ಟಕ್ಕೇ ಸೀಮಿತವು. ಆದರೆ ಕೋಟ್ಯಂತರ ಆಸೆ ಆಕಾಂಕ್ಷೆಗಳ ಆಗರವೇ ಆದ ಮನುಷ್ಯ ಎಂದಿಗೂ ತೃಪ್ತನಾಗುವುದೇ ಇಲ್ಲ. ಕ್ಷಣ ಕ್ಷಣವೂ ಅವನ ಆಸೆಗಳ ಹಸಿವು ಅಧಿಕವಾಗುತ್ತಲೇ ಇರುತ್ತದೆ ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾವು ಮನುಷ್ಯನನ್ನು ಬಿಟ್ಟು ಬೇರಾವ ಪ್ರಾಣಿ, ಪಕ್ಷಿ, ಕೀಟ, ಜಂತು ಮುಂತಾದವುಗಳನ್ನು ಕೂಲಂಕುಷವಾಗಿ ಅಭ್ಯಸಿಸಿದರೆ ಈ ಪ್ರಾಣಿಗಳ ಬೆದಕಾಟ ಕೇವಲ ಮೂರು ವಿಷಯಗಳಿಗೆ ಸೀಮಿತವಾಗಿರುತ್ತದೆ ಎಂದು.ನಮಗೆ ಸುಲಭವಾಗಿ ಅರ್ಥವಾಗುತ್ತದೆ, ಆದರೆ ಮನುಷ್ಯನ ಅವಶ್ಯಕತೆಗಳನ್ನು ಪಟ್ಟಿ ಮಾಡಿದರೆ ನಮ್ಮ ಜೀವಮಾನವೆಲ್ಲ ಬರೆಯುತ್ತಾ ಹೋಗಬಹುದು. ಅವುಗಳ ಪರದಾಟ ಕೇವಲ ಮೂರು ಕಾರಣಗಳಿಗಾಗಿ ಆದರೆ ಮನುಷ್ಯನ ಬೆದಕಾಟ ೩ ಕೋಟಿ ಕಾರಣಗಳಿಗಾಗಿ. ತನ್ನ ಆಹಾರವನ್ನು ಹುಡುಕಿಕೊಳ್ಳುವುದು, ತನ್ನ ಸಂತತಿಯನ್ನು ಮುಂದುವರೆಸುವುದು ಮತ್ತು ತನ್ನನ್ನು ತಾನು ಕಾಪಾಡಿಕೊಳ್ಳುವುದ ಬಿಟ್ಟರೆ ಈ ಪ್ರಾಣಿ, ಪಕ್ಷಿ, ಕೀಟ ಮತ್ತು ಜಂತು ಸಂಕುಲಕ್ಕೆ ಅನ್ಯ ಅವಶ್ಯಕತೆಗಳೇ ಇರುವುದಿಲ್ಲ. ಆದರೆ ಮನುಷ್ಯನಿಗೆ ಈ ಮೂರೂ ಅವಶ್ಯಕತೆಗಳು ಬಹಳ ಗೌಣವಾಗಿಬಿಟ್ಟಿದೆ. ಇವುಗಳೊಟ್ಟಿಗೆ ಮನುಷ್ಯನ ಆಸೆಗಳು ಮತ್ತು ಅವಶ್ಯಕತೆಗಳು ಹತ್ತಾರು ಪಟ್ಟು ಅಧಿಕವಾಗಿದೆ.

ಮೊದಲು ಈ ಮೂರೇ ಅವಶ್ಯಕತೆಗಳನ್ನೇ ಹೊಂದಿದ್ದ ಮನುಷ್ಯ, ಈ ಅವಶ್ಯಕತೆಗಳನ್ನು ಸಮರ್ಪಕವಾಗಿ ಅಥವಾ ಸಂಪೂರ್ಣವಾಗಿ ಪೂರೈಸಿಕೊಳ್ಳಲಿಕ್ಕೆ ತನ್ನ ಬುದ್ಧಿಶಕ್ತಿಯನ್ನುಪಯೋಗಿಸಿ ಕಂಡುಕೊಂಡ ಹಲವಾರು ಮಾರ್ಗಗಳಿಂದ ಇವನ ಅವಶ್ಯಕತೆಗಳು ಬೆಳೆಯುತ್ತಾ ಹೋದವು. ಅವುಗಳನ್ನು ಪಡೆಯಲು ಅವನು ತನ್ನ ಸುತ್ತಲಿನ ಪರಿಸರವನ್ನು ಮತ್ತು ಈ ಸೃಷ್ಟಿಯಲ್ಲಿನ ಪ್ರತೀ ವಸ್ತುವನ್ನೂ ತನ್ನ ಉಪಯೋಗಕ್ಕೆ ಬಳೆಸಿಕೊಳ್ಳುತ್ತಾಹೋದ. ಈ ಪ್ರಯತ್ನದಲ್ಲಿ ಇವನು ವಿಜ್ಞಾನಿಯಾದ. ಸಾವಿರಾರು ಆವಿಷ್ಕಾರಗಳನ್ನು ಮಾಡುತ್ತಾ ತನ್ನ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಇವನ ನಿರಂತರ ಪ್ರಯತ್ನ ನಡೆದೇ ಇದೆ. ಒಂದು ನಿಟ್ಟಿನಲ್ಲಿ ಇದು ಮಾನವನ ಪ್ರಗತಿಯಂದೇ ಅಂದುಕೊಂಡರೂ, ಈ ವಿಜ್ಞಾನದ ಆವಿಷ್ಕಾರಗಳು ದುರ್ಬುದ್ಧಿಯ ಮನುಷ್ಯರ ಕೈಗೆ ಸಿಕ್ಕಾಗ ಪರಿಣಾಮ ಏನಾಗುವುದೆಂದು ವಾಚಕರ ಊಹೆಗೆ ಬಿಟ್ಟದ್ದು. ದುಷ್ಟನ ಕೈಯಲ್ಲಿ ದೊಣ್ಣೆ ಸಿಕ್ಕರೆ ಹೇಗಿರುತ್ತೋ ಹಾಗೆ. ಇದಕ್ಕೆಲ್ಲ ಕಾರಣ ಪ್ರತೀ ನಿತ್ಯ ಮನುಷ್ಯರ ಮನಸ್ಸುಗಳಲ್ಲಿ ಬುಗ್ಗೆ ಬುಗ್ಗೆಯಾಗಿ ಅಲೆ ಅಲೆಯಾಗಿ ಮೇಲೇಳುವ ಆಸೆಗಳ ಮಹಾಪೂರವೇ ಕಾರಣ. ಇದು ತಪ್ಪು ಎಂದೂ ಹೇಳಲಾಗುವುದಿಲ್ಲ.

ಇವನ ಆಸೆಗಳು ವೈಯಕ್ತಿಕ ಅವಶ್ಯಕತೆಗಳನ್ನು ಮಿತಿಯಲ್ಲಿಟ್ಟುಕೊಂಡು ಒಟ್ಟು ಸಮಾಜದ ಒಳಿತಿಗಾದರೆ ಬಹಳ ಒಳ್ಳೆಯದು. ಆದರೆ ಇವನ ಆಸೆಗಳು ಸ್ವಾರ್ಥಕ್ಕೆ, ಸ್ವಪ್ರತಿಷ್ಟೆಯನ್ನು ಮೆರೆಯುವುದಕ್ಕೆ, ಅನ್ಯರನ್ನು ಮೆಟ್ಟಿ ನಿಲ್ಲುವುದಕ್ಕೆ, ಅನ್ಯರ ನಾಶಕ್ಕೆ, ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಂಸ್ಕೃತಿ ಸಂಸ್ಕಾರಗಳ ನಾಶಕ್ಕೆ ಆದರೆ ಇದು ಕೆಡುಕಿನ ಆಸೆ. ಇದು ದುರಾಸೆ. ಇಂತಹ ಆಸೆಗಳನ್ನು ನಾವು ಸಂಪೂರ್ಣವಾಗಿ ನಮ್ಮಲ್ಲಿ ದೂರವಿಡಬೇಕು ಮತ್ತು ಅನ್ಯರಲ್ಲಿದ್ದರೆ ವಿರೋಧಿಸಬೇಕು. ಆದರೆ ಇಂದು ಕೇವಲ ಹಣದ ಭಾಷೆ ಮಾತ್ರ ಅರ್ಥವಾಗುತ್ತಿರುವ ಕಾಲದಲ್ಲಿ ಬದಲಾವಣೆ ಬಹಳ ಕಷ್ಟ. ಅದರೂ ಪ್ರಯತ್ನಪಡಬಹುದಲ್ಲವೇ?


ರಸಧಾರೆ – 210

ತಂಗಳುಣಿಸಾದೊಡಂ ಸಾಕೆನುವವನುಪವಾಸಿ
ಸಿಂಗಾರ ಸಂಗಾತಿ ಬೇಕುಂಡವನಿಗೆ
ಬಂಗಾರ ಪದವಿ ಪ್ರತಿಷ್ಠೆ ಬೇಕಾ ಬಳಿಕ
ಹಿಂಗದಾಯದೆಚಿಲುಮೆ – ಮಂಕುತಿಮ್ಮ

ತಂಗಳುಣಿಸಾದೊಡಂ = ತಂಗಳು+ ಉಣಿಸು + ಆದೊಡಂ// ಸಾಕೆನುವವನುಪವಾಸಿ = ಸಾಕು+ ಎನುವವನು+ ಉಪವಾಸಿ//ಬೇಕುಂಡವನಿಗೆ= ಬೇಕು+ ಉಂಡವನಿಗೆ//ಹಿಂಗದಾಯದೆಚಿಲುಮೆ= ಹಿಂಗದಾ+ಎದೆ + ಚಿಲುಮೆ.

ಬಹಳ ಹಸಿವಿನಿಂದಿರುವವನಿಗೆ ತಂಗಳನ್ನವಾದರೂ ತೃಪ್ತಿ ನೀಡುತ್ತದೆ. ಒಂದು ಬಾರಿ ಆ ಹಸಿವು ನೀಗಿದರೆ ಅವನಿಗೆ ಶೃಂಗಾರ, ಬಟ್ಟೆ ಬರೆ, ಸಂಗಾತಿ ಬೇಕೆನಿಸುತ್ತದೆ. ಅವುಗಳು ಸಿಕ್ಕರೆ ಮುಂದಕ್ಕೆಆಸ್ತಿಅಂತಸ್ತು ಪದವಿ ಬೇಕೆನಿಸುತ್ತದೆ, ಹೀಗೆ ಬಯಕೆಗಳ ಒರತೆ ಮನುಜನ ಮನದಲ್ಲಿ ಎಂದಿಗೂ ಹಿಂಗದು ಎಂದು ಸ್ಪಷ್ಟಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

“ಬಡತನಕೆ ಉಂಬುವ ಚಿಂತೆ, ಉಂಬುವುದಾದರೆ ಉಡುವ ಚಿಂತೆ, ಉಡುವುದಾದರೆ ಮನೆಯ ಚಿಂತೆ ಮನೆಯದಾದರೆ ಮಡದಿಯ ಚಿಂತೆ ” ಎಂದು ಶಿವಶರಣರ ಉಕ್ತಿ. ಪ್ರತೀ ಮನುಷ್ಯನಿಗೂ ಆಸೆಗಳಿರುತ್ತದೆ.ಆ ಆಸೆಗಳೇ ಅವನನ್ನು ಪುರೋಗಾಮಿಯಾಗಿಸುತ್ತದೆ, ಪ್ರಗತಿಯ ಪಥದಲ್ಲಿ ಕೊಂಡು ಹೋಗುತ್ತದೆ, ತನ್ನ ಜೀವನವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಇದಕ್ಕೆ ಕೊನೆಯಲ್ಲಿ. ಯಾರಿಗೂ ಗೊತ್ತಿಲ್ಲ. ಮನುಷ್ಯನಿಗೆಆಸೆಪಡುವುದೇ ಗೊತ್ತು, ಅದನ್ನು ನಿಲ್ಲಿಸುವುದು ಹೇಗೆ ಎಂದು ಗೊತ್ತಿಲ್ಲ. ನಮ್ಮ ಜೀವನಗಳು ಒಂದು ಬ್ರೇಕ್ ಇಲ್ಲದ ಗಾಡಿಗಳಂತೆ. ಒಂದು ಸಲ ಸ್ಟಾರ್ಟ್ ಮಾಡಿಬಿಟ್ಟರೆ ಓಡುತ್ತಲೇ ಓಡುತ್ತಲೇ ಇರುತ್ತದೆ. ನಿಲ್ಲಿಸಲು ಸಾಧ್ಯವೇ ಇಲ್ಲ. ಇದು ನಿಲ್ಲಬೇಕಾದರೆ ಒಂದು ಇದರಲ್ಲಿನ ಇಂದನ ಖಾಲಿಯಾಗಬೇಕು ಅಥವಾ ಎಲ್ಲಿಯಾದರೂಅಪಘಾತವಾಗಿ ನಿಲ್ಲಬೇಕು.

ಅಂದರೆ ನಮ್ಮ ಆಸೆಗಳ ಬುಗ್ಗೆ, ಒರತೆ, ಊಟೆ ಕಡಿಮೆಯಾಗುವುದೇ ಇಲ್ಲ. ನಿರಂತರ ಮೇಲೇಳುತ್ತಲೇಇರುತ್ತದೆ. ಈ ಆಸೆಗಳನ್ನು ಪೂರೈಸಿಕೊಳ್ಳಲು ನಾವು ಪಡುವ ಪಾಡೇ ನಮ್ಮ ಜೀವನ. “ಇದಾದರೆ ಅದು, ಅದಾದರೆ ಮತ್ತೊಂದು. ಇಷ್ಟಾದರೆ ಅಷ್ಟು, ಅಷ್ಟಾದರೆ ಮತ್ತಷ್ಟು” ಹೀಗೆ ನಡೆದೇ ಇರುತ್ತದೆ ನಮ್ಮ ಓಟ. ಬ್ರೇಕ್ ಇಲ್ಲದ ಗಾಡಿ. ಬ್ರೇಕ್ ಹಾಕಿದರೆ ಅಥವಾ ಓಟದ ವೇಗವನ್ನು ಕಡಿಮೆ ಮಾಡಿದರೆ ಸುಖ. ಆದರೆ ಎಲ್ಲಿ ಬ್ರೇಕ್ ಹಾಕಬೇಕು ಎನ್ನುವುದು ನಮಗೆ ಗೊತ್ತೇ ಇಲ್ಲ. ಅರಿಯುವ ಮಾರ್ಗಗಳು ಹಲವಾರು ಇದ್ದರೂ, ಅನ್ಯರ ಅನುಭವಗಳನ್ನು ನೋಡಿ ತಿಳಿದರೂ ನಮ್ಮ ಅನುಭವಕ್ಕೆ ಬರದೆ ನಾವು ಏನನ್ನೂ ಮಾಡಲಾರೆವು.

ವಾಚಕರೆ ಇದರ ಬಗ್ಗೆ ಎಷ್ಟು ಪುಟಗಳು ಬರೆದರೂ ಸಾಲದು. ಪ್ರತಿಯೊಬ್ಬರಿಗೂ ತಾವೇನು ಆಸೆ ಪಡುತ್ತೀದ್ದೆವೆಂಬ ಪರಿವೆ ಇರಬೇಕು. ಎಷ್ಟು ಆಸೆಪಡಬೇಕೆಂಬ ಅರಿವಿರಬೇಕು. ಸಿಕ್ಕದ್ದರಲ್ಲಿ ತೃಪ್ತಿಪಡುವ ಸಂಸ್ಕಾರವಿರಬೇಕು ಮತ್ತು ಇದು ಸಾಕು, ಇಷ್ಟು ಸಾಕು ಎಂದು ಗೆರೆ ಎಳೆಯುವ ಧೈರ್ಯ ಬರಬೇಕು. ಹಾಗೆ ಬಂದರೆ ನಮಗೆ ಸುಖ. ಇಲ್ಲದಿದ್ದರೆ ನಿರಂತರ ಆಶೆಗಳ ಪಾಶದೊಳಗೆ ಬಂದನ. ಪ್ರಯತ್ನ ಪ್ರತಿಯೊಬ್ಬರ ಇಚ್ಚೆಗೆ ಸೇರಿದ್ದು.


ರಸಧಾರೆ – 211

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ
ಕೊನೆಯಲ್ಲಿ? ಚಿಂತಿಸೆಲೊ – ಮಂಕುತಿಮ್ಮ

ತಣಿಸಲದನೊಗೆಯುವುದು = ತಣಿಸಲು + ಅದನು + ಒಗೆಯುವುದು// ಮನುಜನೇಳಿಗೆಯದರಿನ್= ಮನುಜನ+ಏಳಿಗೆ+ಅದರಿನ್// ಮನಸಿನೇಳಿಗೆಗೆ = ಮನಸಿನ+ ಏಳಿಗೆಗೆ.

ಮನುಷ್ಯನ ಮನಸ್ಸು ಬೆಳೆದಂತೆಲ್ಲ ಅವನ ಮನಸ್ಸಿನ ಹಸಿವೂ ಸಹ ಬೆಳೆಯುತ್ತದೆ. ಆ ಹಸಿವನ್ನು ಇಂಗಿಸಲು ಮನಸ್ಸು ಬಗೆ ಬಗೆಯ ಉಪಾಯಗಳನ್ನು ಹುಡುಕುತ್ತದೆ. ಈ ರೀತಿಯ ಹಸಿವು ಮತ್ತು ಆ ಹಸಿವಿನ ತಣಿಯುವಿಕೆಯಿಂದ ಮನುಷ್ಯನ ಬಾಹ್ಯ ಜೀವನ ಉತ್ತಮವಾಗಬಹುದು.ಈ ರೀತಿ ಆಸೆ ಪಡುವುದು, ಆ ಆಸೆಗಳನ್ನು ತೀರಿಸಿಕೊಳ್ಳಲು ಹಲವಾರು ಉಪಾಯಗಳನ್ನು ಮಾಡುವುದು ಮತ್ತು ಈ ಉಪಾಯಗಳಿಂದ ಉನ್ನತ ಸ್ಥಾನ ಹೊಂದುವುದು, ಹೀಗೆ ನಡೆಯುವ ಏಳಿಗೆಗೆ ಕೊನೆಯಲ್ಲಿ ಎಂದು ಒಂದು ಪ್ರಶ್ನೆಯ ಮೂಲಕ ಬಹಳ ಗಹನವಾದ ವಿಚಾರವನ್ನು ಈ ಕಗ್ಗದಲ್ಲಿ ಪ್ರಸ್ತುತ ಪಡಿಸುತ್ತಾರೆ ಮಾನ್ಯ ಗುಂಡಪ್ಪನವರು.

ನಾವು ಚಿಕ್ಕವರಾಗಿದ್ದಾಗಿನಿಂದ ಬೆಳೆದು ಯುವಕರಾಗಿ, ವಯಸ್ಕರಾಗಿ, ವಾರ್ಧಕ್ಯಕ್ಕೆ ಇಳಿದು ಜೀವನ ಅಂತ್ಯವಾಗುವ ತನಕ ಬೇರೆ ಬೇರೆ ವಯಸ್ಸಿನಲ್ಲಿ ಬೇರೆ ಬೇರೆ ರೀತಿಯ ಆಸೆಗಳು ಹುಟ್ಟುತಲೇ ಇರುತ್ತವೆ. ನಮ್ಮ ಚಿಕ್ಕಂದಿನ ಆಸೆಗಳು ಇಂದು ನಮಗೆ ಬಾಲಿಶವಾಗಿ ಕಾಣಬಹುದು. ನಮ್ಮ ಆಸೆಗಳು ನಮಗೇ ಸೇರಿದ್ದು. ನಮ್ಮ ಆಸೆಗಳಂತೆ ಅನ್ಯರ ಆಸೆಗಳಿರುವುದಿಲ್ಲ ಮತ್ತು ಅನ್ಯರಂತೆ ನಾವು ಆಸೆಪಡಲಾಗುವುದಿಲ್ಲ. ನಮ್ಮದೇ ವಿಧಾನದಲ್ಲಿ ನಾವು ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಹಲವಾರು ರೀತಿಯಲ್ಲಿ ಯೋಜನೆಗಳನ್ನು ಹಾಕುತ್ತಲೇ ಇರುತ್ತೇವೆ. ಒಂದು ಪ್ರಯತ್ನದಲ್ಲಿ ಸೋತರೆ ಮತ್ತೊಂದು ಯೋಜನೆ ಮತ್ತು ಮತ್ತೊಂದು ಪ್ರಯತ್ನ. ಹೀಗೆ ನಿರಂತರವಾಗಿ ನಡೆಯುವ ಈ ಆಸೆಪಡುವ ಮತ್ತು ಆ ಆಸೆಗಳನ್ನು ಪೂರೈಸಿಕೊಳ್ಳುವ ಪ್ರಯತ್ನಗಳ ಸರಮಾಲೆಯೇ ನಮ್ಮ ಜೀವನವೋ? ಮನಸ್ಸಿನ ಈ ಆಸೆಪಡುವ ಜಾಣ್ಮೆಗೆ ಕೊನೆಯಿಲ್ಲವೋ? ಎಂದು ಒಂದು ಸೂಕ್ತ ಪ್ರಶ್ನೆಯನ್ನು ಕೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ವಾಚಕರೆ, ನಾವು ಹೌದು ಎನ್ನಲೇ ಬೇಕು. ಈ ಭೂಮಿಯಮೇಲೆ ಇರುವ ತನಕ ಈ ಆಸೆಗಳ ಪಾಶದ ಹಿಡಿತ ನಮ್ಮನ್ನು ಬಿಡುವುದೇ ಇಲ್ಲ. ಇವುಗಳ ಮಧ್ಯೆ ನಾವು ನಲುಗಿ ಹೋಗುತ್ತೇವೆ. ಜೀವನದ ಅಂತ್ಯದಲ್ಲಿ ಒಂದು ಬಾರಿ ಹಿಂತಿರುಗಿ ನೋಡಿದರೆ, ತೃಪ್ತಿಯ ಅಥವಾ ಧನ್ಯತೆಯ ಭಾವ ಬರುವುದು ಬಹಳ ಕಡಿಮೆ ಜನಕ್ಕೆ. ಬಹಳ ಪಾಲು ಜನಕ್ಕೆ ಕೇವಲ ಒಂದು ವಿಷಾದದ ನಗೆ ಮನದಲ್ಲಿ ಮೂಡುತ್ತದೆ. ಇದರಿಂದ ಪಾರಾಗಬೇಕಾದರೆ ನಾವು ನಮ್ಮ ಆಸೆಗಳ ಗಂಟನ್ನು ಕರಗಿಸಿಕೊಳ್ಳಬೇಕು ಮತ್ತು ಮತ್ತಷ್ಟು ಆಸೆಗಳನ್ನು ಸೇರಿಸಿಕೊಳ್ಳುವುದನ್ನು ಬಿಡಬೇಕು. ಒಂದು ಹಂತದಿಂದ ತೃಪ್ತಿಯಭಾವ ಬರಬೇಕು. ಅನವಶ್ಯಕ ತುಡಿತದ ಮನಸ್ಸನ್ನು ಶಾಂತಗೊಳಿಸಬೇಕು. ಹಾಗೆ ಮಾಡಲಾದರೆ ನಮಗೆ ನಿರಾಸೆಯ ಭಾವ ಕಡಿಮೆಯಾಗಬಹುದು. ಶಾಂತಿ ನೆಮ್ಮದಿಗಳು ನಮ್ಮದಾಗಬಹುದು. ನಮ್ಮ ಪ್ರಯತ್ನ ನಾವು ಮಾಡಲೇ ಬೇಕು.


ರಸಧಾರೆ – 212

ದಿನದಿನವು ಹಳಸುವುವು ದಿನದಿನವು ಕೊಳೆಯುವುವು
ಮನುಜಕುಲದೆಲ್ಲ ಕೃತಿವಿಜಯವಿಭವಗಳು
ಅನುದಿನವು ಮತ್ತದನು ತೊಳೆದು ಹೊಸತೆನಿಸುವುದೆ
ಮನುಜಸಫಲತೆ ನಿನಗೆ – ಮಂಕುತಿಮ್ಮ

ಮನುಜಕುಲದೆಲ್ಲ = ಮನುಜ+ ಕುಲದ + ಎಲ್ಲ// ಕೃತಿವಿಜಯವಿಭವಗಳು= ಕೃತಿ + ವಿಜಯ+ ವಿಭಾವಗಳು// ಹೊಸತೆನಿಸುವುದೆ = ಹೊಸತು + ಎನಿಸುವುದೆ//

ಮನುಜಕುಲ= ಮಾನವ ಕುಲ // ವಿಭವಗಳು = ವೈಭವಗಳು //ಅನುದಿನವು = ಪ್ರತಿ ನಿತ್ಯ // ಮನುಜಸಫಲತೆ = ಮನುಷ್ಯನ ಸಾಧನೆ.

ಮನುಷ್ಯನ ಕೆಲಸಗಳು, ಸಾಧನೆಗಳು ಮತ್ತು ಅದರ ವೈಭವಗಳು ದಿನ ಕಳೆದಂತೆ ಹಳತಾಗುತ್ತಾ ಹೋಗುತ್ತದೆ ಮತ್ತು ಹಳಸುತ್ತಾ, ಕೊಳೆಯುತ್ತಾ ಹೋಗುತ್ತದೆ. ಅಂತಹ ಹಳಸಿದ ಮತ್ತು ಕೊಳೆತ ಸಾಧನೆಗಳನ್ನು ಮತ್ತೆ ತೊಳೆದು ಹೊಳಪನ್ನು ನೀಡುವುದೇ ನೀನು ಸಾಧಿಸುವ ಸಫಲತೆ, ಹೇ ! ಮಾನವ ಎಂದು ಉದ್ಘಾರವನ್ನು ತೆಗೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಮನುಷ್ಯನ ಆದಿಕಾಲದಿಂದ ಅವನು ನಿರಂತರವಾಗಿ ಏನೇನನ್ನೋ ಸಾಧಿಸುತ್ತಲೇ ಇದ್ದಾನೆ. ಅವನ ಶೋಧನೆ ಮತ್ತು ಆ ಶೋಧನೆಯ ಫಲವಾದ ಸಾಧನೆಗಳು ಅಂದಿನಿಂದ ಇಂದಿನವರೆಗೆ ಸಾಗುತ್ತಲೇ ಇದೆ. ಇವನು ಶೋಧಿಸದ ವಸ್ತುವೇ ಇಲ್ಲ. ಭಗವಂತನ ಸೃಷ್ಟಿಯಲ್ಲಿನ ಎಲ್ಲವನ್ನೂ ಇವನು ಪರೀಕ್ಷಿಸಿ, ಶೋಧಿಸಿ, ತನ್ನ ಉಪಯೋಗಕ್ಕೆ ಅದನ್ನು ಸೂಕ್ತವಾಗಿ ಮಾರ್ಪಾಡು ಮಾಡಿಕೊಂಡು ” ನಾ ಸಾಧಿಸಿದೆ, ನಾ ಜಯಿಸಿದೆ” ಎಂದು ಬೀಗುತ್ತಿದ್ದಾನೆ. ಇವನು ಇರುವುದನ್ನು ಮಾರ್ಪಾಡು ಮಾಡಿಕೊಂಡಿದ್ದಾನೆ ಹೊರತು ಇವನಿಂದ ಒಂದು ಅಕ್ಕಿ ಕಾಳನ್ನೂ ಸೃಷ್ಟಿಮಾಡಲು ಆಗುವುದಿಲ್ಲ.

ಹಾಗೆ ಇವನು ಆವಿಷ್ಕರಿಸಿದವು ಕೆಲಕಾಲಕ್ಕೆ ಹಳತಾಗಿ ಕೊಳೆತು ಹಳಸಿ ಹೋಗುತ್ತದೆ. ಮತ್ತೆ ಹೊಸ ಪೀಳಿಗೆ ಹೊಸ ಹೊಸ ವಿಷಯ ಮತ್ತು ವಸ್ತುಗಳನ್ನು ಕಂಡು ಹಿಡಿದು ಅವರೂ ಸಹ ” ನಾ ಸಾಧಿಸಿದೆ, ನಾ ಜಯಿಸಿದೆ” ಎಂದು ಬೀಗುತ್ತಾರೆ. ಕಾಲಾನುಕಾಲಕ್ಕೆ ಅವೂ ಸಹ ಕೊಳೆತು ಹಳತಾಗಿ ಹಳಸಿ ಹೋಗುತ್ತದೆ. ಹೀಗೆ ಈ ಜಗತ್ತಿನಲ್ಲಿ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ವಸ್ತುಗಳನ್ನು ತನ್ನ ಪ್ರಯೋಜನಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ಹೊಸ ಹೊಸತನ್ನು ಕಂಡುಕೊಳ್ಳುತ್ತಲೇ ಇರುತ್ತಾನೆ. ಇಷ್ಟೇ ಇವನ ಸಾಧನೆ ಮತ್ತು ಜಯ. ವಾಚಕರೆ ನೋಡಿ ಅಂದಿನ “ಬೆಂಕಿ” ಮತ್ತು “ಚಕ್ರ” ಎರಡು ಮಾನವನ ಅತೀ ಶ್ರೇಷ್ಠ ಆವಿಷ್ಕಾರಗಳು. ನಂತರದ ವಿದ್ಯುತ್ ಮತ್ತು ಇವನ ಆವಿಷ್ಕಾರಗಳ ಪಟ್ಟಿಯಲ್ಲಿನ ಪ್ರತಿಯೊಂದೂ ಸಹ ಇಂದು ಹೊಸತು, ನಾಳೆ ಹಳತು, ನಾಳಿದ್ದು ಹಳಸಿ ನಾಲ್ಕನೆಯ ದಿನ ಕೊಳೆತು ಹೋಗುತ್ತದೆ. ಅವುಗಳೇ ಮತ್ತೆ ಹೊಸ ರೂಪ ತಾಳಿ ಹೊಸದೆಂಬಂತೆ ಹೊರಬರುತ್ತದೆ. ಇವನ ಹೊಸ ಹೊಸ ವಸ್ತುಗಳ ಹಸಿವು ಇಂಗುವುದೇ ಇಲ್ಲ.

ಆದರೆ ಪರಮಾತ್ಮನ ಸೃಷ್ಟಿಯನ್ನು ನೋಡಿ. ಎಲ್ಲವೂ ನವನವೀನ. ಹಳತಾಗುವ ಸಂಭವವೇ ಇಲ್ಲ. ಎಲ್ಲವೂ ಆನಂದದಾಯಕವೇ. ನೋಡುವ ಹೃದಯವಿರಬೇಕು. ಅನುಭವಿಸುವ ಮನಸ್ಸಿರಬೇಕು. ಪ್ರತಿದಿನ ಮೂಡುವ ಭಾನುತೇಜನ ಹೊಂಗಿರಣಗಳೇ ಇದಕ್ಕೆ ಸಾಕ್ಷಿ. ಆ ಪರಮಾತ್ಮನ ಸೃಷ್ಟಿಯ ಮುಂದೆ ಮಾನವನ ಆವಿಷ್ಕಾರಗಳೆಲ್ಲ ಪೇಲವವಲ್ಲವೇ? ಆದರೂ ಮನುಷ್ಯ ತಾನು ಯಾವುದೋ ಮಹತ್ತದಾದ್ದನ್ನು ಸಾಧಿಸಿದ್ದೇನೆ, ಕಂಡುಹಿಡಿದಿದ್ದೇನೆ, ವಿಜಯವನ್ನು ಪಡೆದಿದ್ದೇನೆ, ವೈಭವದಿಂದ ಮೆರೆದಿದ್ದೇನೆ ಎಂದು ಬೀಗುವುದನ್ನು ನೋಡಿದರೆ……….. ಇರಲಿ, ಇವನ ಮಿತಿಯಲ್ಲಿ ಇವನೇನೋ ಸಾಧಿಸಿದ್ದಾನೆ. ಆದರೆ ಆ ಅಪರಿಮಿತ ಶಕ್ತಿಯುಳ್ಳ ಆ ಪರಮಾತ್ಮನ ಸೃಷ್ಟಿಯ ಮುಂದೆ ಇವನ ಸಾಧನೆಯೆಷ್ಟು ಇವನ ವಿಜಯವೆಷ್ಟು ?


ರಸಧಾರೆ – 213

ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ
ಸಾಜವನು ಬಿಟ್ಟಲುಗದಿಹುದು ಮೃಗಕೀಟ
ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು
ಯೋಜಿಪುದೆ ನರಮಹಿಮೆ – ಮಂಕುತಿಮ್ಮ.

ಸಾಜಗುಣವೆಂದುಪೇಕ್ಷಿಪೆಯ=ಸಾಜಗುಣವೆಂದು+ಉಪೇಕ್ಷಿಪೆಯ// ನಿನ್ನವಗುಣವ = ನಿನ್ನ + ಅವಗುಣವ// ಬಿಟ್ಟಲುಗದಿಹುದು = ಬಿಟ್ಟು+ ಅಲುಗದೆ+ಇಹುದು//
ಲೋಕಸಂಸ್ಥಿತಿಗದನು = ಲೋಕ + ಸಂಸ್ಥಿತಿಗೆ+ ಅದನು
ಸಾಜಗುಣ= ಸಹಜಗುಣ // ಉಪೇಕ್ಷಿಪೆಯ= ಕಡೆಗಣಿಸುತ್ತೀಯಾ?// ಅವಗುಣ= ದುರ್ಗುಣ// ಸಂಸ್ಥಿತಿಗೆ = ಸುವ್ಯವಸ್ಥೆಗೆ // ಯೋಜಿಪುದೆ = ಯೋಜನೆ ಮಾಡುವುದೆ.

ತನ್ನ ಅವಗುಣಗಳನ್ನು ತೀರಾ ಸಾಮಾನ್ಯವೆಂದು ಅಥವಾ ಸಹಜವೆಂದು ಅವುಗಳನ್ನು ಉಪೇಕ್ಷಿಸುತ್ತಾನೆ ಮನುಷ್ಯ. ಆದರೆ ಪ್ರಾಣಿ, ಪಕ್ಷಿ, ಕೀಟಗಳು ತಮ್ಮ ಸಹಜ ಗುಣವನ್ನು ಬಿಡುವುದೇ ಇಲ್ಲ. ಹೀಗೆ ಇವನ ದುರ್ಗುಣಗಳನ್ನು ದಂಡಿಸುತ ಅಥವಾ ತಿದ್ದುತ್ತಾ ಈ ಜಗತ್ತಿನಲ್ಲಿ ಮಾನವನ ಬದುಕನ್ನು ಒಂದು ವ್ಯವಸ್ಥಿತವಾದ ರೀತಿಯಲ್ಲಿ ಇಡಬೇಕೆಂದು ಯತ್ನಿಸುವುದೇ ನಿರಂತರವಾಗಿ ನಡೆದಿರುವ ಮನುಷ್ಯ ಪ್ರಯತ್ನವೆಂದು ಒಂದು ಗಹನವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಮನುಷ್ಯ ತಾನು ಮಾಡುವ ಕುಕರ್ಮಗಳನ್ನು ” ಇದೇನು ಮಹಾ, ಇವು ಮನುಷ್ಯನ ಸಹಜ ಗುಣಗಳಲ್ಲವೇ” ಎಂದು ಸಮರ್ಥಿಸಿಕೊಳ್ಳುತ್ತಾನೆ. ಮಾನವ, ಮಾನವತಾ ಪೂರ್ಣವಾದ ಸಹಜ ಗುಣಗಳನ್ನು ಮರೆತೇ ಹೋಗಿದ್ದಾನೆ. ತಾನು ಮಾಡುವ ದುಷ್ಕರ್ಮಗಳಿಗೆ ಸಹಜತೆಯ ಹಣೆಪಟ್ಟಿಯನ್ನು ಕೊಟ್ಟು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ.ಇದಕ್ಕೆ ನಮ್ಮ ಪುರಾಣ ಇತಿಹಾಸಗಳಲ್ಲಿ ಹೇರಳವಾದ ದೃಷ್ಟಾಂತಗಳು ದೊರೆಯುತ್ತವೆ. ಇಡೀ ಭಾಗವತ ಪುರಾಣ, ರಾಮಾಯಣ, ಮಹಾಭಾರತ ಪುರಾಣಗಳೆಲ್ಲವೂ, ” ಇದು ಸರಿ, ಇದು ತಪ್ಪು, ಹೀಗೆ ಮಾಡಿದರೆ ಇದು ಫಲ ಹಾಗೆ ಮಾಡಿದರೆ ಹಾಗೆ ಫಲ” ಎಂದು ಇಡೀ ಜನ ಸಮುದಾಯವನ್ನು ತಿದ್ದಲು ಮತ್ತು ಸಮಾಜವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಇಡಲು ಪ್ರಯತ್ನ ಮಾಡಿವೆ. ಇವುಗಳನ್ನು ಕಂಡುಕೊಂಡದ್ದೇ ಮನುಷ್ಯನ ಒಂದು ಮಹತ್ ಸಾಧನೆ. ಆದರೆ ವಾಚಕರೆ ನೋಡಿ ಪ್ರಾಣಿ ಪಕ್ಷಿ ಕೀಟಗಳು ಇನ್ನೂ ತಮ್ಮ ಸಹಜ ಪ್ರವೃತ್ತಿಯನ್ನೇ ಇಟ್ಟುಕೊಂಡಿವೆ. ಅವುಗಳಿಗಿಂತ ಹೆಚ್ಚು ಮತ್ತು ಉತ್ತಮ ಜ್ಞಾನವನ್ನು ಪಡೆದ ಮನುಷ್ಯ ಮಾತ್ರ ತನ್ನ ಸಹಜ ಸ್ವಭಾವ ಮತ್ತು ಗುಣಗಳನ್ನು ಬಿಟ್ಟ ತಪ್ಪು ದಾರಿ ಹಿಡಿದು, ಅದನ್ನು ತಿದ್ದಿಕೊಳ್ಳಲು ಹಲವಾರು ಮಾರ್ಗಗಳನ್ನು ಕಂಡು ಹಿಡಿದುಕೊಂಡಿದ್ದಾನೆ.

ಪ್ರಾಣಿಗಳು ಮತ್ತು ಇತರೆ ಜೀವಿಗಳು ಸಹಜತೆಯಿಂದ ಜೀವಿಸುತ್ತವೆ. ಮನುಷ್ಯಮಾತ್ರ ತಪ್ಪು ದಾರಿ ಹಿಡಿದಿದ್ದಾನೆ. ಆದರೆ ಅವನ ಮಹತ್ಸಾಧನೆ ಏನೆಂದರೆ ತಾನು ಮಾಡುವುದು ತಪ್ಪು ಎಂದು ಅರಿಯಲು ಮತ್ತು ಅದನ್ನು ತಿದ್ದಿಕೊಳ್ಳಲು ಪ್ರಯತ್ನ ಪಟ್ಟಿದ್ದಾನೆ. ಈ ಪ್ರಯತ್ನದಲ್ಲಿ ಇವನು ವೇದ ಉಪನಿಷತ್ತು, ಪುರಾಣ, ಧ್ಯಾನ, ಯೋಗ, ಸಾಹಿತ್ಯ, ಸಂಗೀತ, ಮುಂತಾದವುಗಳನ್ನು ಕಂಡುಕೊಂಡು ತನ್ನನ್ನು ತಾನು ತಿದ್ದಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದೆ ಇವನ ಸಾಧನೆ. ಹಾಗೆ ತಾನು ಮಾಡುವುದು ತಪ್ಪು ಎಂದು ಅರಿವು ಮೂಡುವುದು ಎಷ್ಟು ಜನರಿಗೆ ಸಾಧ್ಯ. ಹಾಗೆ ಅರಿವು ಮೂಡಿದವರಲ್ಲಿ, ತಮ್ಮನ್ನು ತಾವು ತಿದ್ದಿಕೊಳ್ಳಲು ಪ್ರಯತ್ನಿಸುವವರು ಎಷ್ಟುಮಂದಿ. ಹಾಗೆ ಪ್ರಯತ್ನಿಸುವವರಲ್ಲಿ ಎಷ್ಟುಜನ ಸಫಲರು ಎಂದು ನೋಡಿದರೆ ನಮಗೆ ಬಹಳ ಕಡಿಮೆ ಜನ ತಿದ್ದಿಕೊಂಡು ಶುದ್ಧರಾದವರು ಸಿಗುತ್ತಾರೆ.

ಸಹಜತೆಯನ್ನು ಉಳಿಸಿಕೊಂಡು, ಕೃತ್ರಿಮತೆಯನ್ನು ಬಿಡಬೇಕು, ದುಷ್ಕರ್ಮಗಳನ್ನು ಬಿಡಬೇಕು, ಶುದ್ಧರಾಗಬೇಕು ಎನ್ನುವ ಅರಿವುಮೂಡಬೇಕು ಮತ್ತು ಅವುಗಳನ್ನು ನೀಗಿಕೊಳ್ಳಲು ನಿರಂತರ ಪ್ರಯತ್ನವನ್ನು ನಾವು ಮಾಡಬೇಕು. ಹಾಗೆ ಮಾಡಿದರೆ ನಮ್ಮನ್ನು ಈ ಜಗತ್ತಿನಲ್ಲಿ ಸೃಷ್ಟಿಸಿದ ಆ ಪರಮಾತ್ಮನ ಇಚ್ಚೆಗೆ ನ್ಯಾಯ ಮಾಡಿದಂತಾಗುತ್ತದೆ.


ರಸಧಾರೆ -214

ಸಹಜ ನಗ್ನತೆ ನಮಗೆ, ಸಹಜ ನಖದಾಡಿಗಳು
ಬಹುಯುಗದ ಸಂಸ್ಕಾರ ವಸ್ತ್ರ ಸಿಂಗಾರ
ಸಹಜತೆ ನಿರಕ್ಷರತೆ, ವಿದ್ಯೆ ತಾಂ ಕೃತಕವಲ
ಸಹಜದಿನೆ ಕೃತಕಮುಂ – ಮಂಕುತಿಮ್ಮ

ನಖದಾಡಿಗಳು = ಉಗುರು ಗಡ್ದಗಳು// ಸಹಜದಿನೆ = ಸಹಜತೆಯಿಂದ

ನಗ್ನತೆಯು ಮನುಜನಿಗೆ ಸಹಜ. ಈ ದೇಹದಲ್ಲಿ ಉಗುರುಗಳು ಗಡ್ಡ ಮೀಸೆಗಳು ಸಹಜ. ಆದರೆ ಸಾವಿರಾರು ವರ್ಷಗಳಕಾಲದ ಸಂಸ್ಕಾರದಿಂದ ಮನುಷ್ಯ ಬಟ್ಟೆ ಹಾಕಿಕೊಳ್ಳುವುದನ್ನು, ತನ್ನನ್ನು ತಾನು

ಸಿಂಗರಿಸಿಕೊಳ್ಳುವುದನ್ನು ಕಲಿತಿದ್ದಾನೆ. ಹಾಗೆಯೇ ನಿರಕ್ಷರತೆ ಸಹಜ. ಇವನು ಅಕ್ಷರವನ್ನು ಮತ್ತು ವಿದ್ಯೆಯನ್ನು ಕಲಿತ. ಆ ಸಹಜತೆಯಿಂದ ಬಂದ ಕೃತಕತೆಯೇ ಇದು. ಹಾಗಾಗಿ ಹೊರಕಾಣುವ ಕೃತಕತೆಯು ಸಹಜತೆಯಿಂದಲೇ ಬರುತ್ತದೆ ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಹಿಂದೆ ಆದಿಕಾಲದಲ್ಲಿ ಮನುಷ್ಯ ಕಾಡುಗಳಲ್ಲಿ ಇದ್ದಾಗ, ಸಹಜವಾಗೇ ನಗ್ನವಾಗಿ ಇರುತ್ತಿದ್ದ. ಕಾಲಾನುಕಾಲಕ್ಕೆ ಸಂಸ್ಕೃತನಾಗುತ್ತ, ಸುಸಂಕೃತನಾಗುತ್ತಾ, ಬಟ್ಟೆ ಹಾಕಿಕೊಳ್ಳುವುದು, ಅಲಂಕಾರ ಮಾಡಿಕೊಳ್ಳುವುದು ಮತ್ತು ಅವುಗಳಲ್ಲಿನ ಹಲವಾರು ವಿನ್ಯಾಸಗಳನ್ನು ಕಂಡುಹಿಡಿದು ಕೊಂಡ. ಹಾಗಾಗಿ ನಗ್ನತೆಯು ಸಹಜ ಪ್ರವೃತ್ತಿ. ಅದರಮೇಲೆ ಹಾಕಿಕೊಂಡ ಬಟ್ಟೆ ಮತ್ತು ಮಾಡಿಕೊಂಡ ಅಲಂಕಾರಗಳು ಕೇವಲ ಕೃತ್ರಿಮತೆ, ಎಂದು ಗುಂಡಪ್ಪನವರು ಹೇಳುತ್ತಾರೆ.

ಹಾಗೆಯೇ ನಿರಕ್ಷರಕುಕ್ಷಿಯಾದ ಮನುಷ್ಯ ಕಾಲಾನುಕಾಲದಲ್ಲಿ ಮಾಡಿದ ಒಂದೇ ರೀತಿಯ ಶಬ್ದಗಳೇ ಆಡುವ ಭಾಷೆಯಾಯಿತು. ಆಡುವ ಭಾಷೆಯನ್ನು ಕಾಪಾಡಿಕೊಳ್ಳಲು ಅದಕ್ಕೊಂದು ಆಕಾರವನ್ನು ಮನುಷ್ಯ ಕಂಡುಕೊಂಡ. ಆ ಆಕಾರಗಳು ಕ್ರಮ ಕ್ರಮವಾಗಿ ಲಿಪಿಯಾಯಿತು. ಮೂಲ ರೂಪದ ಲಿಪಿಯು ಇಂದು ಬಹಳಷ್ಟು ಬದಲಾಗಿ ಒಂದು ಸುಂದರ ರೂಪವನ್ನು ಕಂಡುಕೊಂಡಿದೆ. ಅಂದರೆ ಅನಕ್ಷರತೆಯು ಸಹಜತೆಯಾದರೆ, ಅಕ್ಷರತೆ ಅದರ ಮೇಲೆ ತೊಟ್ಟುಕೊಂಡ ಸಿಂಗಾರದ ಉಡುಗೆ ತೊಡುಗೆ. ಈ ಜಗತ್ತಿನಲ್ಲಿ ಎಲ್ಲವೂ ಹಾಗೆಯೇ. ಸಹಜವಾದ ರೂಪ ಭಾವ ಆಲೋಚನೆಗಳಿಗೆ ಒಂದು ಕೃತ್ರಿಮತೆಯ ಲೇಪನವನ್ನು ಕೊಟ್ಟು ಸಹಜತೆಯನ್ನು ಮರೆಸುವುದೇ ಮಾನವನ ಗುಣ.

ನಮ್ಮ ಮನಸ್ಸಿನಲ್ಲಿರುವ ಭಾವ ಒಂದಾದರೆ, ನಾವು ಆಡುವ ಮಾತು, ಮಾಡುವ ಕೃತಿ ಎಲ್ಲವೂ ಬೇರೆ ಬೇರೆ. ಭಾವ ಸಹಜವಾದರೆ, ಮಾತು ಮತ್ತು ಕೃತಿ ಕೃತ್ರಿಮತೆ. ಇದನ್ನೇ ಗುಂಡಪ್ಪನವರು ” ಸಹಜದಿನೆ ಕೃತಕಮುಂ ” ಎಂದು ಸಹಜದಿಂದಲೇ ಕೃತಕವೂ ಎಂದು ಮನುಷ್ಯನ ಸ್ವಭಾವವನ್ನು ವಿಶ್ಲೇಷಣೆ ಮಾಡಿದ್ದಾರೆ. ವಾಚಕರೆ ಈ ಬದಲಾವಣೆಗಳೂ ಸಹಜವಾಗೇ ಮನುಷ್ಯನ ಅವಶ್ಯಕತೆಗಳಿಗನುಗುಣವಾಗೆ ಆಗಿವೆ ಎಂದರೆ ತಪ್ಪಲ್ಲ. ಏಕೆಂದರೆ ಇದರಿಂದ ಮಾನವನ ಸಮಾಜ ಮತ್ತು ಜೀವನ ಸುಧಾರಿತವಾಗಿದೆ ಎಂದರೆ ಒಳ್ಳೆಯದೇ ಅಲ್ಲವೇ? . ಆದರೆ ಇಂದಿನ ಸ್ಥಿತಿಯನ್ನು ನೋಡಿದರೆ ಒಂದು ವಿಷಯ ನಮಗೆ ವೇದ್ಯವಾಗುತ್ತದೆ. ಸಹಜತೆಯಿಂದ ಕೃತಕತೆ ಬಂದಿರಬಹುದು. ಆದರೆ ಸಹಜತೆ ಸಂಪೂರ್ಣ ನಾಶವಾಗಿ ಕೃತಕತೆ, ಕ್ರುತ್ರಿಮತೆಗಳೇ ರಾರಾಜಿಸುತ್ತಿರುವುದು ಮನುಷ್ಯನ ಜೀವನದ ದೌರ್ಭಾಗ್ಯ ಮತ್ತು ವಿಷಾಧನೀಯ. ಕೃತಕತೆ ಅಥವಾ ಕೃತ್ರಿಮತೆಯಿಂದ ಕ್ಲೇಶ ಹೆಚ್ಚು. ಏಕೆಂದರೆ ಮನಃಸಾಕ್ಷಿ ಎಂಬುದು ಇರುವವರೆಲ್ಲರೂ ” ತಮ್ಮ ಒಳಗು ಹೊರಗುಗಳ” ನಡುವೆ ನಡೆಯುವ ತಿಕ್ಕಾಟದಲ್ಲಿ ಪತನಹೊಂದುತ್ತಾರೆ. ನಾವು ಸಾಧ್ಯವಾದಷ್ಟು ಸಹಜತೆಯನ್ನೇ ನಮ್ಮ ಸ್ವಾಭಾವವಾಗಿಸಿಕೊಂಡು, ಕೃತಕತೆಯನ್ನು ಕೇವಲ ನಮ್ಮ ಬಾಹ್ಯ ಜೀವನಕ್ಕೆಷ್ಟು ಬೇಕೋ ಅಷ್ಟಕ್ಕೇ ಸೀಮಿತಗೊಳಿಸಿದರೆ, ಈ ” ತಿಕ್ಕಾಟ” ದಿಂದ ಹೊರಬಂದು ನೆಮ್ಮದಿಯಿಂದ ಇರಬಹುದು. ಆಯ್ಕೆ ಅವರವರಿಗೆ ಬಿಟ್ಟದ್ದು.


ರಸಧಾರೆ -215

ಇಹುದಕಿಂತೊಳಿತಿಹುದು; ಒಳಿತ ಗಳಿಸಲ್ಬಹುದು
ಸಹಸಿಸುವದಕೆನುವ ಮತಿಯಿನೆ ಪ್ರಗತಿ
ರಹಸಿಯದ ಬುಗ್ಗೆಯದು, ಚಿಮ್ಮುತಿಹುದೆಲ್ಲರೊಳು
ಸಹಜವಾ ಮತಿಕೃತಕ – ಮಂಕುತಿಮ್ಮ

ಇಹುದಕಿಂತೊಳಿತಿಹುದು = ಇಹುದಕಿಂತ + ಒಳಿತು+ ಇಹುದು // ಗಳಿಸಲ್ಬಹುದು = ಗಳಿಸಲು + ಬಹುದು // ಸಹಸಿಸುವದಕೆನುವ = ಸಹಸಿಸುವೆ + ಅದಕೆ + ಎನುವ// ಚಿಮ್ಮುತಿಹುದೆಲ್ಲರೊಳು = ಚಿಮ್ಮುತಿಹುದು+ಎಲ್ಲರೊಳು// ಸಹಜವಾ = ಸಹಜವೂ + ಆ ಸಹಸಿಸುವೆ = ಸಾಹಸಿಸುವೆ// ಮತಿಯಿನೆ – ಬುದ್ಧಿಯಿಂದಲೇ // ರಹಸಿಯದ = ರಹಸ್ಯದ // ಬುಗ್ಗೆಯದು = ಚಿಲುಮೆಯದು// ಮತಿಕೃತಕ = ಕೃತಕ ಬುದ್ಧಿ.

ಈಗ ಇರುವ ಸ್ಥಿತಿಗಿಂತ ಇನ್ನೂ ಉತ್ತಮ ಸ್ಥಿತಿ ಇದೆ, ಒಳಿತಾದ ಸ್ಥಿತಿಯನ್ನು ಪಡೆಯಬಹುದು. ಅದಕ್ಕಾಗಿ ನಾನು ಸಾಹಸ ಮಾಡುತ್ತೇನೆ ಎನ್ನುವುದೇ ಮನುಷ್ಯ ಬುದ್ಧಿ. ಆ ರೀತಿ ಹೊಮ್ಮುವ ಬುದ್ಧಿಯ ಬುಗ್ಗೆಗಳೇ ಪ್ರಗತಿಗೆ ಹಾದಿ. ಈ ರೀತಿಯ ಯೋಚನೆಗಳು ಬುಗ್ಗೆ ಬುಗ್ಗೆಯಾಗಿ, ಅಲೆ ಅಲೆಯಾಗಿ ಎಲ್ಲರಲ್ಲೂ ಸಹಜವಾಗೇ ಇರುತ್ತದೆ. ಈ ರೀತಿ ಇರುವ ಸಹಜ ಬುದ್ಧಿಯೂ ಸಹ ಸಹಜದಿಂದ ಉದ್ಭವವಾದ ಕೃತಕತನವೇ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಕ್ರಿಯಾಶೀಲತೆಯೇ ಮನುಷ್ಯನ ಗುಣ. ಆ ಕ್ರಿಯಾಶೀಲತೆಯೇ ಇವನನ್ನು ಆದಿಮಾನವನ ದೆಶೆಯಿಂದ ಇಂದಿನ ನಾಗರೀಕ ಮಾನವನನ್ನಾಗಿಸಿದೆ. ಈ ಮನುಷ್ಯನ ಸಕ್ರಿಯವಾದ ಮನಸ್ಸು ಬುದ್ಧಿಗಳೇ ಜಗತ್ತಿನಾಧ್ಯಂತ ಹಲವು ರೀತಿಯ ಪ್ರಗತಿಯನ್ನು ಸಾಧಿಸಿವೆ. ವೈಜ್ಞಾನಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಗತಿಗೆ ಈ ಕ್ರಿಯಾಶೀಲತೆಯೇ ಕಾರಣವಲ್ಲವೇ? ಇಂದು ನಾವಿರುವ ಸ್ಥಿತಿಗಿಂತ ಇನ್ನೂ ಉತ್ತಮವಾದ ಸ್ಥಿತಿಯನ್ನು ಹೊಂದುವ ನಿರಂತರ ಪ್ರಯತ್ನ ಜಗತ್ತಿನಲ್ಲಿ ಎಲ್ಲ ಕಡೆಯೂ ಎಲ್ಲ ಮಾನವರ ಮನಸ್ಸುಗಳಲ್ಲಿ ನಡೆದೇ ಇರುತ್ತದೆ ಮತ್ತು ಅದಕ್ಕೆ ಪೂರಕವಾಗಿ ಅವನ ಬುದ್ಧಿ ಕೆಲಸ ಮಾಡುತ್ತಲೇ ಇರುತ್ತದೆ. ಇದು ಅವನ ಸಹಜ ಗುಣದ ಮೇಲೆ ಹೇರಿಕೊಂಡ ಗುಣವಾದ್ದರಿಂದ ಇದೂ ಕೂಡ ಸಹಜತೆಯಿಂದ ಉದ್ಭವವಾದ ಕೃತಕ ಬುದ್ಧಿಯೇ ಎಂದು ಮಾನ್ಯ ಗುಂಡಪ್ಪನವರು ಅಭಿಪ್ರಾಯಪಡುತ್ತಾರೆ.

ವಾಚಕರೆ, ಮನುಷ್ಯನ ಬುದ್ಧಿ ಪ್ರಗತಿ ಪಥದಲ್ಲಿ ಯೋಚಿಸುತ್ತದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಈ ಪ್ರಗತಿಯ ಫಲ ಕೇವಲ ಸಜ್ಜನರ ಕೈಯಲ್ಲಿಯೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ದೌರ್ಭಾಗ್ಯವಶಾತ್ ಅದು ದುಷ್ಟ ಜನರ ಕೈಗೂ ಸೇರಿ ಅವರಿಗೆ ತಮ್ಮ ದುಷ್ಟತನದ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಸೂಕ್ತ ಸಾಧನಗಳನ್ನು ಮತ್ತು ಅನ್ಯರ ನಾಶಕ್ಕೆ ಸೂಕ್ತ ಆಯುಧಗಳನ್ನೂ ಕೊಟ್ಟಂತಾಗಿದೆ ಅಲ್ಲವೇ? ಇದೆ ವಿಪರ್ಯಾಸ. ವಿಜ್ಞಾನದ ಪ್ರಗತಿ, ರಾಜಕೀಯ ಪ್ರಗತಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಎಲ್ಲವೂ ಮನುಷ್ಯನ ಆಸೆಯನ್ನು ಇನ್ನಷ್ಟು ಹೆಚ್ಚಿಸಲು ಸಾಧಕವಾಗಿ ಮನುಷ್ಯನಲ್ಲಿ ಸ್ವಾರ್ಥ, ದ್ವೇಷ, ಅಸೂಯೆ, ಅತಿಕೃತ್ರಿಮತೆ, ಅಹಂಕಾರಗಳು ಅಧಿಕವಾಗಲು ಸಹಾಯಮಾಡಿವೆ. ಈ ಪ್ರಗತಿ ಮನುಷ್ಯನನ್ನು ಸಂಪೂರ್ಣ ವಿನಾಶದ ಅಂಚಿಗೆ ತಳ್ಳಿದೆ. ಎಂದಾದರೂ ಒಂದು ದಿನ ಇವೆಲ್ಲವೂ ಕೊನೆಯಾಗಿ, ಎಲ್ಲ ಪ್ರಗತಿಗಳೂ ಮನುಷ್ಯನಲ್ಲಿ ಮಾನವತೆಯನ್ನು ಮೆರೆಸಲು, ಎಲ್ಲರ ಬದುಕೂ ಆನಂದದಾಯಕವಾಗಲು ಪೂರಕವಾದರೆ ಅಂದು ಈ ಧರೆಗೆ ಆನಂದದ ದಿನ.


ಕಗ್ಗ ರಸಧಾರೆ – 216

ಸಿರಿ ಸೊಬಗುಗಳ ಬೆದಕು, ಕೆಳೆ ಬಲುಮೆಗಳ ಬೆದಕು
ಪರಬೊಮ್ಮ ನಾಟಕದವೇಷ ಚೇಷ್ಟೆಗಳು
ಅರಸುತಿಹ ಜೀವ ನಾಯಕನು, ನಾಯಕಿಯವನ
ಕೆರಳಿಸುವ ಮೋಹರುಚಿ – ಮಂಕುತಿಮ್ಮ

ಸಿರಿ = ಐಶ್ವರ್ಯ / ಬೆದಕು= ಹುಡುಕಾಟ, ಅರಸುವಿಕೆ / ಕೆರೆ=ಸ್ನೇಹ/ಬಲುಮೆ= ಪೌರುಷ/ಪರಬೊಮ್ಮ= ಪರಬ್ರಹ್ಮ/ ಮೋಹರುಚಿ = ಆಸೆಯ ಅನುಭವ.

ಮಾನವನಿಗಿರುವ, ಐಶ್ವರ್ಯ ಅಲಂಕಾರಗಳ ಅರಸುವಿಕೆಯ ಆಸೆ, ಸ್ನೇಹ, ಬಂಧನ ಮತ್ತು ಬಲ ಪ್ರದರ್ಶನದಆಸೆ, ಇವೆಲ್ಲವುಗಳನ್ನೂ ಮನುಷ್ಯನ ಮನಗಳಲ್ಲಿ ತುಂಬಿ ಹಲವಾರು ವೇಷಗಳನ್ನು ಹಾಕಲು ಹುರಿದುಂಬಿಸುವುದು ಕೇವಲ ಆ ಪರಮಾತ್ಮನ ಜಗನ್ನಾಟಕದ ಒಂದು ಬಾಗವಷ್ಟೇ . ಪರಮ ಚೇತನದ ಅಂಶವಾದ ಈ ಜೀವನು ಈ ನಾಟಕದ ನಾಯಕನು ಮತ್ತು ಇವನನ್ನು ಈ ನಾಟಕದಲ್ಲಿ ಪಾತ್ರವಹಿಸಲು ಪ್ರೇರೇಪಿಸುವ ನಾಯಕಿಯೇ ಹಲವಾರು ರೀತಿಯ ಆಸೆಗಳು ಮತ್ತು ಜಗತ್ತಿನ ಮೋಹಗಳೆಂದು, ಬಹಳ ಸೂಕ್ಷ್ಮವಾದ ವಿಚಾರವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಿಸಿದ್ದಾರೆ.

ಇದೊಂದು ವಿಚಿತ್ರ . ಪ್ರಾಣಿಗಳನ್ನು ಈ ಜಗತ್ತಿನಲ್ಲಿ ಸೃಷ್ಟಿಸಿ, ಅವುಗಳಮನಸ್ಸಿನಲ್ಲಿ ಆಸೆಯನ್ನುಇಟ್ಟು, ಆ ಆಸೆಗಳನ್ನು ಪೂರೈಸಿಕೊಳ್ಳಲು ಚುಂಬಕದಂತಹ ಬಯಕೆಗಳನ್ನುಕೊಟ್ಟು ಪ್ರತೀ ಜೀವಿಯೂ ತನ್ನ ತನ್ನ ಪಾತ್ರವನ್ನು ನಿರ್ವಹಿಸಲು ಪ್ರೇರೇಪಿಸುವ ಈ ಮೋಹವನ್ನೂ ಸೃಷ್ಟಿಮಾಡಿ ಈ ಜಗನ್ನಾಟಕವನ್ನು ಆಡಿಸುತ್ತಿದ್ದಾನೆ ಆ ಪರಬ್ರಹ್ಮ. ಇದೆಲ್ಲ ಒಂದು ನಾಟಕ. ಯಾವುದೂಸತ್ಯವಲ್ಲ. ಏಕೆಂದರೆ ಯಾವುದು ನಿತ್ಯವೋ ಅದು ಮಾತ್ರ ಸತ್ಯ. ನಿತ್ಯವೆಂದರೆ ನಿರಂತರವಾಗಿ ನಾಶವಾಗದೇ ಇರುವುದು. ಯಾವುದು ನಿತ್ಯವಲ್ಲವೋ ಅದು ಸತ್ಯವೂ ಅಲ್ಲ. ನಿತ್ಯನಾದ ಮತ್ತು ಸತ್ಯನಾದ ಪರಮಾತ್ಮನು ತನ್ನ ಲೀಲಾ ವಿನೋದಕ್ಕೆ ಈ ಅನಿತ್ಯವಾದ, ನಿರಂತರ ಬೇರೆ ಬೇರೆ ವೇಷಗಳನ್ನು ಧರಿಸಿ ನಟಿಸಿ ಅವನನ್ನು ರಂಜಿಸಲಿಕ್ಕಾಗಿಯೇ ಇರುವ ಈ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾನೆ.

ಅಂತಹ ಸೃಷ್ಟಿಯಲ್ಲೂ ನಾವು ಕೇವಲಪಾತ್ರಧಾರಿಗಳು. ಆದರೂ ಇದು ನಮ್ಮ ಬದುಕು, ನಾವು ಜೀವಿಸುತ್ತಿದ್ದೇವೆ, ನಾವು ಸಾಹಸ ಮಾಡುತ್ತಿದ್ದೇವೆ, ನಾವು ಸಾಧಿಸಿದ್ದೇವೆ ಎಂಬ ಹಲವಾರು” ನಾವು” ಗಳ ಪಟ್ಟಿಯನ್ನು ಅಂಟಿಸಿಕೊಂಡು ಅಹಂಕಾರದಿಂದ ಮೆರೆಯುತ್ತೇವೆ. ಮತ್ತೊಂದು ನಿಟ್ಟಿನಿಂದ ಯೋಚಿಸಿದರೆ ಈ ಅಹಂಕಾರವನ್ನೂ ಅವನೇ ಕೊಟ್ಟದ್ದಲ್ಲವೇ, ಈ ಅಹಂಕಾರದಾಟವೂ, ” ಅವನು” ಬರೆದ ನಾಟಕದ ಚಿತ್ರಕಥೆಯ ಸಾಲುಗಳೇ ಇರಬೇಕು ಎಂದು ಅನ್ನಿಸುತ್ತದಲ್ಲವೇ? ಇರಲಿ, ಅಹಂಕಾರವು ದುರಹಂಕಾರವಾಗದೆ, ಈ ನಾಟಕದಅನ್ಯ ಪಾತ್ರಗಳಿಗೆ ಉಪದ್ರವ ಕೊಡುವಂತಾಗದೆ ನಾವು ನಮ್ಮ ನಮ್ಮ ಪಾತ್ರಗಳನ್ನೂ ನಿರ್ವಹಿಸಿನೇಪತ್ಯಕ್ಕೆಸರಿದರೆ, ನಾವು ನಮ್ಮ ನಿರ್ಧಾರಿತ ಪಾತ್ರಗಳಿಗೆ ನ್ಯಾಯ ಮಾಡಿದಂತಾಗುತ್ತದೆ ಅಲ್ಲವೇ?


ರಸಧಾರೆ – 217

ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು
ಸಾಗರದ ತೆರವಂಕು, ಗಿಡಬಳ್ಳಿ ಬಳುಕು
ಮೇಘವರ್ಣಚ್ಚಾಯೆ-ಯೀಸೃಷ್ಟಿಯಿಂ ನಮ್ಮೊ
ಲಾಗಿಹುದು ರೂಪರುಚಿ – ಮಂಕುತಿಮ್ಮ.

ತೆರವಂಕು = ಅಂಕು ಡೊಂಕಾದ ಅಲೆಗಳು

ದಿಗಂತದಲ್ಲಿ ಕಾಣುವ ಬಾಗಿದಂತ ಮುಗಿಲು, ನುಣುಪಾಗಿ ಮತ್ತು ಗುಂಡಾಗಿ ಕಾಣುವ ಹುಣ್ಣಿಮೆಯ ಚಂದಿರ, ಅಂಕುಡೊಂಕಾದ ಸಾಗರದ ಅಲೆಗಳು, ಚಿತ್ರ ವಿಚಿತ್ರ ವಿನ್ಯಾಸದ ಗಿಡ ಬಳ್ಳಿಗಳ ಬಳುಕು, ಹಲ ವಿದವಾದ ವರ್ಣಗಳನ್ನು ಧರಿಸುವ ಮೋಡಗಳು, ಆ ಮೋಡಗಳ ವಿನ್ಯಾಸದಿಂದ ಭೂಮಿಯಮೇಲೆ ಬೀಳುವ ನೆರಳಿನಾಕಾರಗಳು, ಹೀಗೆ ಸೃಷ್ಟಿಯ ಹಲವಾರು ವಿಚಿತ್ರಗಳೇ ನಮ್ಮೊಳಗಿನ ರೂಪ ಮತ್ತು ರುಚಿಗಳಿಗೆ ಕಾರಣವಾಗಿವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ಮಾನವನ ರಸಿಕತೆಗೆ ಇವೆಲ್ಲ ಕಾರಣವಾಗಿದೆಯಂದರೆ, ತಪ್ಪಾಗಲಾರದು. ನೀಲಾಕಾಶ, ಆಕಾಶದಲ್ಲಿನ ಚಿತ್ರ ವಿಚಿತ್ರ ವಿನ್ಯಾಸದ ಮೋಡಗಳು, ಹುಣ್ಣಿಮೆಯ ಚಂದಿರ, ಭೋರ್ಗರೆವ ಕಡಲು, ಗಿಡ ಮರ ಬಳ್ಳಿಗಳು, ಹೂ ಹಣ್ಣುಗಳು, ಪ್ರಾಣಿ ಪಕ್ಷಿಗಳು, ಬಣ್ಣ ಬಣ್ಣದ ಚಿಟ್ಟೆಗಳು, ಕ್ರಿಮಿ, ಕೀಟಗಳು ಹೀಗೆ ಪರಮಾತ್ಮನ ಸೃಷ್ಟಿಯೆಲ್ಲವೂ ಮನುಷ್ಯನ ರಸಿಕತೆಗೆ ಪೂರಕವಾಗೆ ಇವೆ. ಕವಿಗಳಿಗೆ, ಪ್ರೇಮಿಗಳಿಗೆ, ವಾಗ್ಗೇಯಕಾರರಿಗೆ, ಚಿತ್ರಕಲಾವಿದರಿಗೆ, ಮಣ್ಣು ಮರಳಿನಲ್ಲಿ ಬೊಂಬೆ ಮಾಡುವವರಿಗೆ, ಹೀಗೆ ನಮ್ಮ ಸುತ್ತಲಿನ ಎಲ್ಲಕ್ಕೂ ಪ್ರತಿಸ್ಪಂದಿಸುವವರಿಗೆ ಸ್ಪೂರ್ತಿದಾಯಕವಾಗೆ ಇದೆ.

ಎಲ್ಲವೂ ಎಲ್ಲರನ್ನೂ ಆಕರ್ಷಿಸುವುದಿಲ್ಲ. ಕೆಲವರಿಗೆ ಸ್ಪಂದನವೇ ಇರುವುದಿಲ್ಲ. ಕೆಲವರಿಗೆ ಸ್ಪಂದನವಿರುತ್ತದೆ. ಕೆಲವರು ಆ ಸ್ಪಂದನಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ಈ ರೀತಿಯ ಪ್ರತಿಕ್ರಿಯೆಯೇ, ಮನುಷ್ಯನ ಮನಸ್ಸಿನಲ್ಲಿ ಪ್ರೀತಿ ಪ್ರೇಮಗಳನ್ನು, ಆನಂದ ಉಲ್ಲಾಸಗಳನ್ನು ಉಂಟುಮಾಡುತ್ತದೆ. ಇವನ ಪ್ರತಿ ಕ್ರಿಯೆಗೂ ಅವನು ಕಾಣುವ, ಕೇಳುವ ಮತ್ತು ಅನುಭವಿಸುವ ವಿಷಯ ವಸ್ತುಗಳಿಂದ ಉಂಟಾದ ಸ್ಪಂದನವೇ ಕಾರಣ.

ಈ ಜಗತ್ತಿನಲ್ಲಿ ಇಂದು ನಾವು ಕಾಣುವ ಸಾವಿರಾರು ವರ್ಷಗಳಿಂದ ಮನುಷ್ಯ ಸೃಷ್ಟಿಸಿದ, ಸಾಹಿತ್ಯ, ಶಿಲ್ಪ ಮತ್ತು ಚಿತ್ರ ಕಲೆ ಎಲ್ಲವೂ ಈ ರೀತಿಯ ಸ್ಪಂದನದಿಂದ ಉಂಟಾದ ಪ್ರತಿಕ್ರಿಯೆಯೇ ಆಗಿದೆ. ಅಂದಿನ ಕಾಳಿದಾಸ, ಬಾಣ, ಕುಮಾರವ್ಯಾಸ ಶೇಕ್ಸ್ ಪಿಯರ್ನಂಥಹ, ಮಹಾನ್ ಕವಿಗಳು, ಮೈಖೇಲ್ ಅಂಜೆಲೋ, ಪಿಕಾಸೋ, ರಾಜಾ ರವಿವರ್ಮನಂಥ ಕಲಾವಿದರಿಂದ ಹಿಡಿದು ಇಂದಿನ ಕವಿ ಕಲಾವಿದರ ತನಕ ಎಲ್ಲಕ್ಕೂ ಈ ಸೃಷ್ಟಿಯ ಆಕರ್ಷಣೆಯೇ ಕಾರಣ.

ಮನುಷ್ಯನ ಪರಸ್ಪರ ಸಂಭಂದಗಳ ಸಂಕೀರ್ಣತೆಗೂ ಈ ಪರಮಾತ್ಮ ಸೃಷ್ಟಿಯ ಜಗತ್ತಿನ ಪ್ರತಿಯೊಂದೂ ಕಾರಣವಾಗಿದೆ. ನಾವು ನೋಡಬೇಕು, ಒಳ್ಳೆಯದನ್ನು ಅನುಭವಿಸಬೇಕು ಒಳ್ಳೆಯ ಪ್ರತಿಕ್ರಿಯೆ ನೀಡಬೇಕು. ಪ್ರತಿಕ್ರಿಯೆ ನೀಡುವ ಶಕ್ತಿ, ಅನುಭವಿಸುವ ಬುದ್ಧಿ ಇಲ್ಲದಿದ್ದರೆ ಸುಮ್ಮನೆ ನೋಡಿ ಅಂತರ್ಯದಲ್ಲಿ ಆನಂದಿಸಬೇಕು. ಖಂಡಿತ ನಕಾರಾತ್ಮಕ ಪ್ರತಿಕ್ರಿಯೆ ನೀಡಲೇ ಬಾರದು. ಹಾಗಾದರೆ ಮಾತ್ರ ಹಲವರ ಅದ್ಭುತ ಪ್ರತಿಕ್ರಿಯೆಗಳು ಶಾಶ್ವತವಾಗಿ ಈ ಜಗತ್ತಿನಲ್ಲಿ ಇರಲು ಸಾಧ್ಯ.


ರಸಧಾರೆ – 218

ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ

ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ
ಕೆರಳಿಸುತ ಹಸಿವುಗಳ, ಸವಿಗಳನು ಕಲಿಸುವಳು
ಗುರು ರುಚಿಗೆ ಸೃಷ್ಟಿಯಲ – ಮಂಕುತಿಮ್ಮ.

ವಿಧ ವಿಧವಾದ ರೂಪಗಳಲ್ಲಿ, ಕಾಂತಿಗಳಲ್ಲಿ, ಹಲವಾರು ಇಂಪಾದ ದನಿಗಳಲ್ಲಿ, ರಸಭರಿತವಾಗಿ ಪ್ರಕಟಗೊಂಡು, ಪ್ರಕೃತಿ, ನಿಸರ್ಗಅವುಗಳಲ್ಲಿಈ ಜಗತ್ತಿನ ಜೀವಿಗಳ ಮನಸ್ಸಿನಲ್ಲಿ ಆಸೆ ಹಸಿವು ಬಯಕೆ ಮತ್ತು ರುಚಿಗಳಂಥಾ ಭಾವಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಸೃಷ್ಟಿಯೇ ರುಚಿಗಳಿಗೆ ಗುರು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡಿದ್ದಾರೆ.

ಪ್ರಪಂಚದಲ್ಲಿ ಇರುವ ಎಲ್ಲವನ್ನೂ ಸಮಗ್ರವಾಗಿ ನಿಸರ್ಗವೆಂದು ಕರೆಯುತ್ತಾರೆ. ಈ ನಿಸರ್ಗದ ಒಂದು ಭಾಗವೇ ಮನುಷ್ಯನ ಜೀವನ. ಪಂಚಭೂತಗಳಿಂದಾದ ಈ ಭೂಮಿಯ ಮೇಲಿರುವುದೆಲ್ಲ ಈ ಪಂಚಭೂತಗಳ ಮಿಶ್ರಿತ ರೂಪ. ನಮ್ಮ ಮನುಷ್ಯನೂ ಸಹ ಈ ಪಂಚಭೂತಗಳಿಂದಆದವನೇ. ಪಂಚ ಜ್ಞಾನೆಂದ್ರಿಯಗಳೂ ಮತ್ತು ಪಂಚ ಸ್ಪರ್ಶ ಇಂದ್ರಿಯಗಳಿಂದಾದ ಮನುಷ್ಯನಲ್ಲಿಈಆಕರ್ಷಣೆ ಸಹಜವಾಗೇ ಇದೆ ಅಲ್ಲವೇ? ಮನುಷ್ಯ ಜನ್ಮ ಜನ್ಮಾಂತರದಿಂದಲೂ ಇವುಗಳೆಲ್ಲದರಿಂದ ಆಕರ್ಷಿತನಾಗುತ್ತಿದ್ದಾನೆ. ಇವನಿಗೆ ಇದೇನೂ ಹೊಸದಲ್ಲ. ಆದರೆ ಪ್ರತೀ ಬಾರಿ ಜನ್ಮ ಪಡೆದಾಗಲೂ ಒಂದು ವಿಸ್ಮ್ರುತಿಯಿಂದ ಹುಟ್ಟುತ್ತಾನೆ. ಹಾಗಾಗಿ ಪ್ರತೀ ಬಾರಿಯೂ ಇವೆಲ್ಲ ಇವನಿಗೆ ಹೊಸದಾಗಿ ಕಾಣುತ್ತದೆ. ಇವಗಳಿಂದ ಆಕರ್ಷಿತನಾಗುತ್ತಾನೆ ಮತ್ತು ಅವುಗಳನ್ನು ಪಡೆಯಬೇಕೆಂಬ ಆಸೆ ಇವನಲ್ಲಿ ಹೊಮ್ಮುತ್ತದೆ.

ಮನುಷ್ಯನ ಆಸೆ ಏಕಮುಖವಾಗೂ ಇರುವುದಿಲ್ಲ. "ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ " ಎಂದು ಬೇರೆ ಬೇರೆ ರೀತಿಯ ಕಾಂತಿ ರೂಪ ರುಚಿ ಮತ್ತು ರಸಗಳಿಂದಾದ ಪ್ರಕೃತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಕರ್ಷಣೆಯಿರುತ್ತದೆ. ಪ್ರತಿಯೊಬ್ಬನ ಸ್ವಭಾವಕ್ಕೆ (DNA ) ಗೆ ಅನುಗುಣವಾಗಿ ಅವನವನ ಅಭಿರುಚಿ ಇರುತ್ತದೆ.ಅದನ್ನೇ ಮಾನ್ಯ ಗುಂಡಪ್ಪನವರು "ಕೆರಳಿಸುತ ಹಸಿವುಗಳ, ಸವಿಗಳನು " ಎಂದು ಈ ಪ್ರಕೃತಿ ತನ್ನ ಹಲವಾರು ಬಣ್ಣ ಬಣ್ಣದ ರೂಪಗಳನ್ನು ತೋರುತ್ತಾ ಮನುಷ್ಯರನ್ನು ಹೇಗೆ ತನ್ನೆಡೆಗೆ ಸೆಳೆದು ಇವರುಗಳ ಮನಸ್ಸುಗಳಲ್ಲಿ ಆಸೆಯನ್ನು ಚಿಗುರಿಸುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ. ಹಾಗಾಗಿ ಈ ಪ್ರಕೃತಿಯೇ ಮನುಷ್ಯನ ಮನದಲ್ಲಿದ ಆಸೆಗೆ ಮತ್ತು ಹಲವಾರು ರುಚಿ, ಅಭಿರುಚಿಗೆ " ಗುರು" ಎಂದು ಹೇಳುತ್ತಾರೆ.

ಮನುಷ್ಯನ ಮನಸ್ಸಿನಲ್ಲಿರುವ ಈಅಭಿರುಚಿಯೇ ಈ ಜಗತ್ತಿನ ವೈವಿಧ್ಯತೆಗೆ ಕಾರಣ. ಇವನ ಅಭಿರುಚಿಗೆ ಸಿಕ್ಕ ಎಲ್ಲವನ್ನೂಮನುಷ್ಯಸುಂದರವಾಗಿಸಲು ಪ್ರಯತ್ನಿಸಿದ್ದಾನೆ ಮತ್ತು ಆ ಸುಂದರತೆಯನ್ನು ತಾನೂ ಅನುಭವಿಸಲು ಪ್ರಯತ್ನಿಸಿದ್ದಾನೆ. ಶಬ್ದ ಸ್ಪರ್ಶ ರೂಪ ರಸ ಗಂಧ ಎಲ್ಲದರ ಮೂಲಕವೂ ಈ ಜಗತ್ತಿನಎಲ್ಲವನ್ನೂ ನೋಡಿ ಇಷ್ಟಪಟ್ಟು ಪಡೆದು ಅನುಭವಿಸಿ ಆನಂದಿಸುವ ಭಾಗ್ಯ ಮನುಷ್ಯನಿಗೆ ಮಾತ್ರ ಆ ಪರಮಾತ್ಮ ಕೊಟ್ಟಿದ್ದಾನೆ. ಇಂತಹ ಒಂದು ಗುಣವನ್ನು ಪಡೆದ ನಾವೇ ಧನ್ಯರು. ನಮ್ಮನ್ನು ರಂಜಿಸುವ ಈ ಪ್ರಕೃತಿಗೆ ಮತ್ತು ಅದನ್ನು ರುಚಿಸುತ್ತಾ ಆನಂದ ಪಡುವ ಗುಣ ನಮಗೆ ಕೊಟ್ಟ ಆ ಪರಮಾತ್ಮನಿಗೆ ನಾವು ಮನಸಾರ ವಂದಿಸೋಣ.


ರಸಧಾರೆ – 219

ಅರೆಯರೆಯೆ ನಮಗೆ ತೋರ್ಪೋಲವು ಚೆಲುವುಗಳೆಲ್ಲ
ಪರಿಪೂರ್ಣ ಸುಖ ಸತ್ವ ಸಾಗರದ ತೆರೆಗಳ್
ತರಣಿ ದೂರದೊಳಿಹನು; ಕಿರಣ ನಮಗೆಟಕುವುದು
ತೆರೆಯು ನೆರೆತದ ಕುರುಹೊ- ಮಂಕುತಿಮ್ಮ

ತೋರ್ಪೋಲವು = ತೋರ್ಪ+ ಒಲವು// ದೂರದೊಳಿಹನು = ದೂರದೊಳು + ಇಹನು // ನಮಗೆಟಕುವುದು = ನಮಗೆ ಎಟುಕುವುದು/// ತರಣಿ= ಸೂರ್ಯ.

ನಮಗೆ ಕಾಣುವ ಒಲವು ಚೆಲುವುಗಳೆಲ್ಲ, ಅರೆ ಬರೆ. ಒಂದು ಪರಿಪೂರ್ಣತೆಯ ಅಪೂರ್ಣ ರೂಪ. ಮಹಾನ್ ಸಾಗರದಲ್ಲಿ ಎದ್ದ ತೆರೆಗಳಂತೆ. ಹೇಗೆ ದೂರದಲ್ಲಿರುವ ಸೂರ್ಯನ ಕಿರಣಗಳನ್ನು ಮಾತ್ರ ನಾವು ಕಾಣುತ್ತೇವೆಯೋ, ಹೇಗೆ ಉಕ್ಕುವ ಸಾಗರದ ತೆರೆಗಳನ್ನು ಮಾತ್ರ ನಾವು ನೋಡಲಿಕ್ಕಾಗುತ್ತದೆಯೋ, ಹಾಗೆ ಪರಬ್ರಹ್ಮನ ಈ ಸೃಷ್ಟಿಯಲ್ಲಿಯೂ ಸಹ ನಾವು ನೋಡುವುದು ಕೇವಲ ಹೊರನೋಟ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ಜಗತ್ತಿನಲ್ಲಿರುವ ಎಲ್ಲವೂ ಆ ಪರಮ ಚೇತನದ ಬಲದಿಂದ ಅಸ್ಥಿತ್ವದಲ್ಲಿ ಇವೆ. ಆದರೆ ಆ ಚೇತನ ಎಂದಿಗೂ ತನ್ನ ನಿಜ ಸ್ವರೂಪವನ್ನು ನಮಗೆ ಸಮಗ್ರವಾಗಿ ತೋರುವುದಿಲ್ಲ. ತನ್ನ ಕಾರ್ಯವನ್ನು ಮತ್ತು ತನ್ನ ಇರುವಿಕೆಯನ್ನು, ಕುರುಹುಗಳ ಮೂಲಕ ನಮಗೆ ತಿಳಿಸುತ್ತದೆ. ಎಲ್ಲ ಪ್ರಾಣಿಗಳು, ಮನುಷ್ಯನನ್ನೂ ಸೇರಿ, ಮಾಡುವ ಪ್ರತೀ ಕ್ರಿಯೆಗೂ, ಆ ಪರಮ ಚೇತನದಿಂದಾದ ಸ್ಥೂಲ ರೂಪ (ಜಡ) ಮತ್ತು ಅದನ್ನು ಸಕ್ರಿಯವಾಗಿಡುವ ಸೂಕ್ಷ್ಮ ರೂಪ (ಚೇತನ) ವೇ ಕಾರಣ. ಎಲ್ಲಕ್ಕೂ ಆ ಮಹಾನ್ ಪರಮ ಚೇತನವೇ ಕಾರಣವಾಗಿದ್ದರೂ ಅದರ ಸಮಗ್ರ ರೂಪ ನಮಗೆ ಕಾಣಲು ಸಾಧ್ಯವೇ ಇಲ್ಲವೆಂಬಂತೆ ನಾವು ಅದರ ಕುರುಹುಗಳನ್ನು ಮಾತ್ರ ನೋಡುತ್ತೇವೆ.

ಉದಾಹರಣೆಗೆ, ೧೫.೨೦ ಕೋಟಿ ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಸೂರ್ಯನ ಕಿರಣಗಳು ಮತ್ತು ಆ ಕಿರಣಗಳ ಮೂಲಕ ಬರುವ ಶಾಖ ಮಾತ್ರ ಸಕಲ ಚರಾಚರಗಳಿಗೂ ಅನುಭವಕ್ಕೆ ಬರುತ್ತದೆ. ನಾವು ಕೇವಲ ಇಂದೂ ನೋಡುತ್ತೇವೆ ಮತ್ತು ಅನುಭವಿಸುತ್ತೇವೆ ಮತ್ತು ಅದರಿಂದ ಪ್ರಭಾವಿತರಾಗುತ್ತೇವೆ. ಆ ಸೂರ್ಯನ ಎಲ್ಲ ಗುಣಗಳನ್ನೂ ನಾವು ನೋಡಲು, ಪಡೆಯಲು ಮತ್ತು ಅನುಭವಿಸಲು ಸಾಧ್ಯವಿಲ್ಲ. ಒಂದು ಅಗಾಧ ಸಮುದ್ರ. ಆ ಸಮುದ್ರದಲ್ಲಿ ಒಳಪ್ರವಾಹಗಳು( under currents ) ಹಲವಾರು. ಅವುಗಳನ್ನು ನಾವು ನೋಡಲು ಸಾಧ್ಯವಿಲ್ಲ ಅಲ್ಲವೇ? ನಾವು ನೋಡುವುದು ಕೇವಲ ಶಾಂತ ಸಾಗರ ಅಥವಾ ಆಗಾಗ ಅದರ ಮೇಲೆ ಏಳುವ ಅಲೆಗಳು.

ಗಿಡ ಮರಗಳಲ್ಲಿ, ನದಿ ಸಾಗರಗಳಲ್ಲಿ, ಸಸಿ ಬಳ್ಳಿಗಳಲ್ಲಿ, ಪ್ರಾಣಿ ಪಕ್ಷಿಗಳಲ್ಲಿ, ಕ್ರಿಮಿ ಕೀಟಗಳಲ್ಲಿ, ಹೀಗೆ ಎಲ್ಲದರಲ್ಲಿಯೂ ಆ ಚೇತನನೆ ಸಕ್ರಿಯವಾಗಿದ್ದರೂ ಅದನ್ನು ನಮಗೆ ನೋಡಲಾಗುವುದಿಲ್ಲ. ನಾವು ಕೇವಲ ಬಾಹ್ಯ ರೂಪ ಮತ್ತು ಆ ರೊಪದಲ್ಲಿ ಪ್ರಕಟವಾಗುವ ಕ್ರಿಯೆ ಮತ್ತು ಭಾವಗಳನ್ನು ಮಾತ್ರ ನೋಡುತ್ತೇವೆ. ಅದಕ್ಕೆ ಕಾರಣ ಕೇವಲ ನಮ್ಮ ಜ್ಞಾನದ ಮಿತಿ. ನಮ್ಮ ಮಿತಿಯನ್ನು ಹೆಚ್ಚಿಸಿಕೊಂಡು ಅವುಗಳೆಲ್ಲದರ ಹಿಂದೆ ಅಡಗಿರುವ ಮತ್ತು ಸಕ್ರಿಯವಾಗಿರುವ ಆ ಪರಮ ಚೇತನವನ್ನು ನೋಡಲಾದರೆ, ನಮ್ಮ ಮನಸ್ಸುಗಳಲ್ಲಿ ಅಡಗಿರುವ ಬೇಧ ಭಾವಗಳನ್ನು ಅಳಿಸಬಹುದು. ಆದರೆ ನಮ್ಮ ಸ್ವಭಾವದಲ್ಲಿ ಒಂದಾಗಿ ಹೋಗಿರುವ ಈ ಬೇಧವನ್ನು ತೊಳೆಯಲು ಜ್ಞಾನದ ಹೊಳೆ ಹರಿಯಬೇಕು. ನಾವು ಜ್ಞಾನವನ್ನು ಪಡೆದರೆ, ನಮಗೆ ಇಡೀ ಸೃಷ್ಟಿಯ ಮತ್ತು ಮತ್ತು ಸೃಷ್ಟಿಕರ್ತನ ಸಮಗ್ರ ಚಿತ್ರದ ದರ್ಶನವಾಗಬಹುದು.


ರಸಧಾರೆ – 220

ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ
ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ
ಗಂಧಾನಿಲಂಗಳವು ಪರಸತ್ವಪುಷ್ಪದವು
ಸಂದೇಹವೇನೆಲವೋ – ಮಂಕುತಿಮ್ಮ
ಸತ್ಯವಲ್ಲದೊಡೆ = ಸತ್ಯ + ಅಲ್ಲದೊಡೆ// ಕುಂದುವಡೆಯದ = ಕುಂದು+ ಅಡೆಯದ//ಸತ್ಯವಿಳೆಯೊಳಿನ್ನೆಲ್ಲಿ = ಸತ್ಯವು+ಇಳೆಯೊಳು+ಇನ್ನೆಲ್ಲಿ// ಗಂಧಾನಿಲಂಗಳವು = ಗಂಧ+ ಅನಿಲಂಗಳು+ ಅವು//ಸಂದೇಹವೇನೆಲವೋ = ಸಂದೇಹವು+ಏನು+ ಎಲವೋ ಕುಂದು = ಕೊರತೆ//ಅಡೆಯದ = ಪಡೆಯದ.

ಈ ಜಗತ್ತಿನ ಸೌಂದರ್ಯ, ಬಾಂಧವ್ಯಗಳು ಸತ್ಯವಲ್ಲದಿದ್ದರೆ, ಕುಂದದ, ಕಡಿಮೆಯಾಗದ ಸತ್ಯವು ಈ ಜಗತ್ತಿನಲ್ಲಿ ಎಲ್ಲಿದೆ ಎಂದರೆ ಪುಷ್ಪದಲ್ಲಿ ಉತ್ತಮವಾದ ಸತ್ವದಂತೆ ಬಂದು ಸೇರುವ ಗಂಧದಂತೆ ಈ ಜಗತ್ತಿನಲ್ಲಿ ಪರಮಾತ್ಮ ತತ್ವದಿಂದ ಈ ಸೌಂದರ್ಯ ಬಾಂಧವ್ಯಗಳೆಲ್ಲ ಬಂದು ಸೇರಿವೆ, ಇದರಲ್ಲಿ ಸಂದೇಹವೇನೂ ಇಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಈ ಪ್ರಕೃತಿಯಸೌಂದರ್ಯ, ಚೆಲುವುಗಳು, ಮನುಷ್ಯರ ಅಂದ ಚೆಂದಗಳು ಹಲವಾರು ವಿನ್ಯಾಸದ, ಬಣ್ಣ ಬಣ್ಣಗಳ ಪ್ರಾಣಿ, ಪಕ್ಷಿ, ಕೀಟ, ಗಿಡ, ಮರ, ಬಳ್ಳಿ ಹೂಗಳು, ವಿಧ ವಿಧವಾದ ರುಚಿಗಳ ಮತ್ತು ಗುಣಗಳ ಸಾವಿರಾರು ಹಣ್ಣುಗಳು, ಹೂ ಮತ್ತು ಹಣ್ಣು ಬಿಡದೆ ಇದ್ದರೂ ಮನುಷ್ಯನಿಗೆ ಉಪಯೋಗಕ್ಕೆ ಬರುವಂಥಾ ಹಲವಾರು ಔಷದೀಯ ಗುಣಗಳುಳ್ಳ ಗಿಡ ಮರಗಳು, ಎಲ್ಲವೂ ಚೆಂದವಾಗಿವೆ. ಆದರೆ ಈ ಚೆಂದಗಳೆಲ್ಲವೂ ಈ ಭೂಮಿಯಲ್ಲಿ ಶಾಶ್ವತವಲ್ಲ. ಅಂದಗೆಡುತ್ತದೆ, ಬದಲಾಗುತ್ತದೆ ಮತ್ತೆ ಮತ್ತೆ ಚಿಗುರಿ, ಅರಳಿ ಅಂದಗಳನ್ನು ಸೂಸುತ್ತಾ ರುಚಿಗಳನ್ನು ಹೊರಗೆಡುಹುತ್ತಾ, ಜಗತ್ತನ್ನು ರಂಜಿಸುತ್ತಿದೆ. ಇದು ಪ್ರಕೃತಿಯ ನಿಯಮ. ಆ ಪರಮ ಚೇತನವೇ ಪ್ರಕೃತಿಯ ರೂಪದಲ್ಲಿ ಹೀಗೆ ಪ್ರಕಟಗೊಂಡು ಈ ಜಗತ್ತನ್ನು ರಂಜಿಸುತ್ತಿದೆ.

ಜಗತ್ತಿನಲ್ಲಿ ಎಲ್ಲಕ್ಕೂ ರುಚಿಯನ್ನು ನೀಡುವ, ಅಂದವನ್ನು ನೀಡುವ ಮತ್ತು ಅವುಗಳನ್ನು ಗುರುತಿಸಿ, ಅನುಭವಿಸುವ ಆಸೆಗಳನ್ನು ಎಲ್ಲ ಪ್ರಾಣಿಗಳಲ್ಲಿ ಉಂಟುಮಾಡಿರುವ ಆ ಪರಮ ಚೇತನವೇ, ಎಲ್ಲ ವಸ್ತುಗಳಲ್ಲಿ ಆಸೆಯಾಗಿ,ಅಂದವಾಗಿ, ರುಚಿಯಾಗಿ ಸೇರಿಕೊಂಡು, ಈ ಜಗತ್ತನ್ನು ಮತ್ತೆ ಮತ್ತೆ ಸ್ವಾಧಿಷ್ಟವಾಗಿ, ಅಂದವಾಗಿ, ಸುಂದರವಾಗಿ ಮಾಡುತ್ತಾ, ಇದೆ ಎಂದರೆ ತಪ್ಪಾಗಲಾರದು.ನಾವು ಅದರ ಕ್ರಿಯೆಯನ್ನು ನೋಡಲಾರೆವು.

ಮಲ್ಲಿಗೆ ಹೂವಿನ ರೂಪವನ್ನುನೋಡಬಹುದು, ಅದರಕೋಮಲತೆಯನ್ನು ಅಭಿನಂದಿಸಬಹುದು, ಅದರಸುಗಂಧವನ್ನು ಆಸ್ವಾಧಿಸಬಹುದು, ಆದರೆ ಅದಕ್ಕೆ ಸುಂದರ ಆಕಾರ, ಕೋಮಲತೆ ಮತ್ತು ಅದ್ಭುತ ಸುಗಂಧವನ್ನು ನೀಡಿದ ಶಕ್ತಿಯನ್ನು ನೋಡಲುಸಾಧ್ಯವೇ ? ಇಲ್ಲ ಊಹಿಸಿಕೊಳ್ಳಬಹುದು. ಅಂತರ್ಯದಲ್ಲಿ ಅನುಭವಿಸಬಹುದು. ಇವುಗಳನೆಲ್ಲ ನೋಡಿದಮೇಲೆ, ಆ ಪರತತ್ವದ ಪರ ಸತ್ವವನ್ನು “ಸಂದೇಹವೇನೆಲವೋ ” ಸಂದೇಹಿಸಲು ಸಾಧ್ಯವೇ.

ಈ ಜಗತ್ತಿನಲ್ಲಿ ನಾವು ಆ ಪರತತ್ವದ ಪರ ಸತ್ವವನ್ನು ಮತ್ತು ಅದರ ಸಂಪೂರ್ಣ ಕ್ರಿಯೆಯನ್ನು ನೋಡಿ ಅಭಿನಂದಿಸಿ ಮತ್ತು ಆನಂದ ಪಡುವುದು ಬಿಟ್ಟರೆ ನಮಗೆ ಬೇರೆ ಮಾರ್ಗ ಉಂಟೆ. ಎಲ್ಲರೂ ಯೋಚಿಸಲೇ ಬೇಕಾದ ವಿಷಯವಿದು. ನಮ್ಮ ನಮ್ಮ ಅಂತರಂಗದಲ್ಲಿ ವಿಶ್ಲೇಷಣೆ ಮಾಡಬೇಕಾದ ವಿಚಾರವಲ್ಲವೇ?

ಮುಂದಿನ ಭಾಗಕ್ಕೆ ಹೋಗಲು ಇಲ್ಲಿ ಕ್ಲಿಕ್‍ಮಾಡಿ

31 ಮಾರ್ಚ್ 2022

Mankuthimmanakagga-181-200

ರಸಧಾರೆ -181

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ I
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ II
ಕುನಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ I
ವಣುವಣುವೆ ಬಿಗಿಯುವುವೋ – ಮಂಕುತಿಮ್ಮ II

ಕ್ಷಣವೊಂದರೊಳೆ = ಕ್ಷಣ + ಒಂದರೊಳೆ // ಕ್ಷಣವನುಕ್ಷಣ = ಕ್ಷಣ + ಅನುಕ್ಷಣ// ವಣುವಣುವೆ = ಅಣು + ಅಣುವೆ

ಯಮನ ಶೂಲ ಕ್ಷಣ ಮಾತ್ರದಲ್ಲಿ ಒಂದೇ ಬಾರಿ ಕೊಲ್ಲುವುದು. ಆದರೆ ಈ ಜಗತ್ತಿನ ಮೋಹವು ನಮ್ಮಕುತ್ತಿಗೆಗೆ ಕುಣಿಕೆ ಹಾಕಿ ಅನುದಿನವೂ ಕ್ಷಣ ಕ್ಷಣವೂ ನಮ್ಮನ್ನು ಸೆಳೆಯುತ್ತಾ ಕೊಲ್ಲುತ್ತಲೇ ಇರುತ್ತದೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.

ನಮ್ಮ ಜೀವನದಲ್ಲಿ ನಾವು ಬಹಳಷ್ಟು ವ್ಯಕ್ತಿ ವಿಷಯ ಮತ್ತು ವಸ್ತುಗಳಿಗೆ ಅಂಟಿಕೊಂಡಿರುತ್ತೇವೆ. ಕೆಲವಕ್ಕೆ ನಮ್ಮ ಇಷ್ಟದಿಂದ ಮತ್ತೆ ಕೆಲವಕ್ಕೆ ಇಷ್ಟವಿಲ್ಲದಿದ್ದರೂ! ದೈಹಿಕ, ಮಾನಸಿಕ ಮತ್ತು ಭೌತಿಕ ಸಂಭಂದಗಳಿಂದ ನಮ್ಮ ನಂಟು ಈ ಜಗತ್ತಿನೊಂದಿಗೆ ನಮ್ಮ ಹುಟ್ಟಿನಿಂದ ಅಂತ್ಯದವರೆಗೆ ನಿರಂತರ. ಅನ್ಯ ಮಾರ್ಗವಿಲ್ಲ. ಇದು ಸರಿಯೇ ಎಂದು ಯೋಚಿಸಿದರೆ, ಹೌದು ಈ ಬಂಧಗಳಿಲ್ಲದೆ ಇದ್ದರೆ ಬದುಕು ನೀರಸವಾಗುತ್ತದೆ. ಆದರೆ ಯಾವುದೇ ಬಂಧನಗಳು ತಾವೇ ತಾವಾಗಿ ಉಂಟಾಗುವುದಿಲ್ಲ. ನಾವು ಹೋಗಿ ಅದನ್ನು ಹಿಡಿದುಕೊಳ್ಳುತ್ತೇವೆ. ಮೊದಲು ನಾವು ಅದನ್ನು ಇಷ್ಟಪಡುತ್ತೇವೆ. ನಂತರ ಅನಿಷ್ಟವಾದರೆ ( un -ishta ) ಅದರಿಂದ ಬಿಡುಗಡೆ, ಅಷ್ಟು ಸುಲಭವಲ್ಲ.


ನಮ್ಮ ಈ ಸಂಬಂಧಗಳು ಎಲ್ಲಿಯತನಕ ತಮ್ಮ ಶುದ್ಧತೆಯನ್ನು ಉಳಿಸಿಕೊಳ್ಳುತ್ತವೋ ಅಲ್ಲಿಯತನಕ ಅವು ಎಲ್ಲರಿಗೂ ಆನಂದವನ್ನು ನೀಡುತ್ತಿರುತ್ತವೆ. ಎಂದು ಈ ಬಂಧಗಳಿಗೆ, ಸ್ವಾರ್ಥದ, ಮೋಹದ, ಅಹಂಕಾರದ, ದೈನ್ಯತೆಯ ಲೇಪನವಾಗುತ್ತದೋ ಅಂದು ಆಪ್ಯಾಯಮಾನವಾಗಿದ್ದ ಸಂಬಂಧಗಳು ಕಲುಷಿತವಾಗಿ ನಮಗೆ ನೋವಿಗೆ ಕಾರಣವಾಗುತ್ತದೆ. ಸುಲಭದಲ್ಲಿ ಬಿಡಲಾಗದ ಬಂಧ ಸಂಬಂಧಗಳಂತೂ ಪ್ರತಿ ನಿತ್ಯ ವೇದನೆಯನ್ನು ಕೊಡುವ ಕುತ್ತಿಗೆಯ ಕುಣಿಕೆಯಂತಾಗುತ್ತದೆ. ನಮ್ಮನ್ನು ಜಗ್ಗೀ ಜಗ್ಗೀ ಹತಾಶರನ್ನಾಗಿಸುತ್ತದೆ. ಇದಕ್ಕೆ ಕಾರಣ ನಾವು ಕಟ್ಟಿ ಕೊಂಡ ಸಂಬಂಧಗಳು. ಇದನ್ನೇ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ” ಸಂಗಾತ್ ಸಂಜಾಯತೆ ಕಾಮ ಕಾಮಾತ್ ಕ್ರೋದೋಭಿಜಾಯತೆ, ಕ್ರೋದಾತ್ ಭವತಿ ಸಂಮೋಹಃ, ಸಂಮೋಹಾತ್ ಸ್ಮೃತಿ ವಿಭ್ರಮಃ, ಸ್ಮೃತಿ ವಿಭ್ರಮಾತ್ ಬುಧ್ಧಿನಾಶಃ ಬುದ್ಧಿನಾಶೋ ಪ್ರಣಶ್ಯತಿ.” ಎನ್ನುತ್ತಾನೆ. ಮೊದಲು ಸಂಗ, ನಂತರ ಆಸೆ, ದುರಾಸೆ, ಮೋಹ, ಮದ, ಅವಿವೇಕ ಮತ್ತು ಬುದ್ಧಿನಾಶ. ಹೀಗೆ ಒಂದಕ್ಕೊಂದು ಅಂಟಿಕೊಂಡು, ಸಾಂಕ್ರಾಮಿಕ ರೋಗದಂತೆ ನಮ್ಮ ಮನಸ್ಸು ಬುದ್ಧಿ ದೇಹಗಳನ್ನಾವರಿಸಿ, ನಮ್ಮನ್ನು ಅಧೋಗತಿಗೆ ತಳ್ಳುವುದು ಈ ಬಂಧನಗಳು.

ವಾಚಕರೆ, ಈ ಜಗತ್ತಿನಲ್ಲಿ ಹುಟ್ಟಿದ ಮೇಲೆ ಈ ಬಂಧನಗಳಿಂದ ಬಿಡುಗಡೆ ಇಲ್ಲ. ತಾವೇ ತಾವಾಗಿ ಉಂಟಾದ ಬಂಧನಗಳಿಂದ ಅಷ್ಟಾಗಿ ನಮಗೆ ತೊಂದರೆಗಳಿಲ್ಲ. ಬರುತ್ತವೆ ಹೋಗುತ್ತವೆ. ಆದರೆ ನಾವು ಇಷ್ಟಪಟ್ಟು ಮೋಹದಿಂದ ಗಂಟು ಹಾಕಿಕೊಂಡ ಬಂಧನಗಳಿವೆಯಲ್ಲ, ಅವು ನಮಗೆ ಅತೀ ಹಿಂಸೆಯನ್ನು ಕೊಡುತ್ತವೆ. ಹಾಗಾಗಿ ನಮ್ಮ ನಮ್ಮ ಜೀವನಗಳನ್ನು ಆನಂದಮಯವಾಗಿಸಿಕೊಳ್ಳಬೇಕಾದರೆ, ನಾವಾಗೇ ಬಂಧನಗಳಿಗೆ ಸಿಕ್ಕಿಕೊಳ್ಳದೆ, ಸ್ವಾಭಾವಿಕವಾಗಿ ಉಂಟಾದ ಬಂಧಗಳನ್ನು ಒಂದು ” ನಿರ್ಲಿಪ್ತತೆ” ಯಿಂದ ಅನುಭವಿಸಿದರೆ ಸುಖ ಇಲ್ಲದಿದ್ದರೆ ಗುಂಡಪ್ಪನವರು ಹೇಳಿದಹಾಗೆ ಒಂದು ನರಕ ಯಾತನೆ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಅದರ ನೋವು.

“ಅತಿ”ಯಾಗಿ ಯಾವುದಕ್ಕೂ ಅಂಟದೆ “ಮಿತಿ” ಗಳನ್ನು ಅರಿತು ಬಾಳಿದರೆ ” ಹಿತ” .


ರಸಧಾರೆ - 182

ಋಣದಜಾಲವನಂತ, ಕರುಮಚಕ್ರವನಂತ I
ಜನುಮಜನುಮದ ಕಥೆಯ ತಂತುಗಳನಂತ II
ಅನವರತ ನೂತನವಿದೆನಿಪ ವಿಶ್ವದ ತಂತ್ರ I
ಬಿನದ ಪರಬೊಮ್ಮಂಗೆ – ಮಂಕುತಿಮ್ಮ. II

ಋಣದಜಾಲವನಂತ = ಋಣದ+ ಜಾಲವು+ಅನಂತ// ಕರುಮಚಕ್ರವನಂತ = ಕರುಮ+ ಚಕ್ರವು+ ಅನಂತ// ತಂತುಗಳನಂತ= ತಂತುಗಳು + ಅನಂತ // ನೂತನವಿದೆನಿಪ = ನೂತನವು+ ಇದು + ಎನಿಪ

ಜಾಲವು = ಬಲೆಯು// ಕರುಮ = ಕರ್ಮ // ತಂತು = ಎಳೆ, ಹಗ್ಗ, ದಾರ,// ಅನವರತ = ಎಡೆಬಿಡದೆ, ನಿರಂತರ // ನೂತನವು = ಹೊಸದು // ಬಿನದ = ವಿನೋದ // ಪರಬೊಮ್ಮಂಗೆ = ಪರಮಾತ್ಮನಿಗೆ.

ಈ ಜಗತ್ತಿನೊಂದಿಗೆ ನಮ್ಮ ಋಣದ ಸಂಬಂಧ ಕೊನೆಯಿಲ್ಲದ್ದು, ನಾವು ಅದರೊಳಗೆ ಇದ್ದು, ನಮ್ಮನ್ನೂ ಸೇರಿಸಿಕೊಂಡು ಸುತ್ತುವ ಕರ್ಮದ ಚಕ್ರದ ಸುತ್ತಾಟ, ಕೊನೆಯಿಲ್ಲದ್ದು, ಒಂದು ಜನ್ಮದಿಂದ ಇನ್ನೊದು ಜನ್ಮಕ್ಕೆ ನಮ್ಮನ್ನು ಹೆಣೆದುಕೊಳ್ಳುವ ಸಂಕೋಲೆಗಳೂ ಕೊನೆಮೊದಲಿಲ್ಲದ್ದು. ಆದರೂ ಪ್ರತೀ ಬಾರಿಯೂ ನಮಗೆ ಇದು ಹೊಸದು ಎಂದು ಅನಿಸುವ ಈ ವಿಶ್ವದ ತಂತ್ರವನ್ನು ಆ ಪರಮಾತ್ಮ ತನ್ನ ವಿನೋದಕ್ಕಾಗಿಯೇ ಸೃಷ್ಟಿಸಿಕೊಂಡಂತಿದೆ, ಎಂದು ಒಂದು ವೇದಾಂತದ ಒಂದು ಸೂಕ್ಷ್ಮ ವಿಚಾರವನ್ನು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮ, ಕರ್ಮ ಶೇಷದ ಬಲೆಯ ವಿಸ್ತಾರ ಅಂತ್ಯವಿಲ್ಲದ್ದು. ಹಿಂದಿನ ಕರ್ಮ ಇಂದು ಅನುಭವಿಸಬೇಕು. ಇಂದಿನ ಕರ್ಮ ನಾಳೆಗೆ. ಹೀಗೆ ಹಳೆಯದನ್ನು ಕಳೆಯುತ್ತಾ ಹೊಸದನ್ನು ಸಂಚಯನಮಾಡುತ್ತಾ, ನಿರಂತರವಾಗಿ ಈ ಕರ್ಮದ ಬಲೆಯಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ಈ ನಮ್ಮ ಪೂರ್ವಜನ್ಮದ ಮತ್ತು ಈ ಜನ್ಮದ ಪೂರ್ವಕರ್ಮವೇ ನಾವು ಹೊತ್ತು ತರುವ ಅಥವಾ ಸಂಚಯನ ಮಾಡುವ ಋಣ, ಅಂದರೆ ಸಾಲ. ಈ ಸಾಲ ತೀರುವುದೇ ಇಲ್ಲ. ಹಳೆಯಸಾಲ ತೀರಿಸುವುದು, ಹೊಸ ಸಾಲ ಮಾಡುವುದು. ಒಂದು ಸಾಲಕ್ಕೆ ಮತ್ತೊಂದು ಸಾಲದ ಕೊಂಡಿ. ಹಿಂದಿನ ಜನ್ಮದ ಸಂಚಿತ ಕರ್ಮವನ್ನು ಈ ಜನ್ಮಕ್ಕೆ ತಂದು ಅದನ್ನು ಅನುಭವಿಸುತ್ತಾ, ಮತ್ತೆ ಈ ಜನ್ಮದಲ್ಲಿ ಹೊಸ ಹೊಸ ಕರ್ಮಗಳನ್ನು ಸಂಚಯನಮಾಡುತ್ತಾ, ಮುಂದಿನ ಜನ್ಮಕ್ಕೆ ಶೇಷ ಕರ್ಮವನ್ನು ಹೊತ್ತು ಹೋಗುವುದೇ ವಿಧಿ.

ಆದರೂ ಪ್ರತೀ ಜನ್ಮದಲ್ಲೂ ನಮ್ಮ ಜೀವನ, ಹುಟ್ಟೂ, ಸ್ನೇಹವೂ, ಬಾಂಧವ್ಯಗಳು, ಈ ಜಗತ್ತು, ಹೀಗೆ ಎಲ್ಲವೂ, ಹೊಸದೆಂಬ ಒಂದು ಭಾವ. ಎಷ್ಟು ಜನ್ಮ ಕಳೆದಿದ್ದೇವೋ, ಇನ್ನೂ ಎಷ್ಟುಜನ್ಮ ಕಳೆಯಬೇಕೋ ನಮಗರಿವಿಲ್ಲ, ನಮ್ಮರಿವಿಗೆ ಬರುವುದೂ ಇಲ್ಲ. ಇದು ಆ ಪರಮಾತ್ಮನಿಗೊಂದು ವಿನೋದದ ಆಟ. ನಮ್ಮನ್ನಾಡಿಸುವುದೇ ಅವನಿಗೊಂದು ವಿನೋದ. ಆದರೆ, ಇದರಿಂದ ಮುಕ್ತಿ ಇಲ್ಲವೇ? ಎಂದರೆ ಉಂಟು. ಎಲ್ಲ ಕರ್ಮಗಳನ್ನೂ ಮಾಡುತ್ತಾ “ನಾನು ಮಾಡುತ್ತಿಲ್ಲ- ಇದು ಅವನಾಟ, ನಾನೊಂದು ಕೈಗೊಂಬೆ- ಅವನಿಚ್ಚೆಯಂತೆ ಏನು ಬೇಕೋ ಅದನ್ನು ಮಾಡಿಸಲಿ” ಎಂದು ಒಂದು ನಿರ್ಲಿಪ್ತಭಾವ ತಳೆದರೆ, ನಾವು ಮುಕ್ತರಾದಂತೆಯೇ ಅಲ್ಲವೇ? ಯಾವುದರಿಂದ ಮುಕ್ತಿ? ಕರ್ಮದಿಂದಲ್ಲ, ಆದರೆ ಕರ್ಮದ ಬಂಧನದಿಂದ.

ಇದನ್ನೇ ರಾಜ ಕುಲಶೇಖರರು ತಮ್ಮ ” ಮುಕುಂದಮಾಲ ಸ್ತ್ರೋತ್ರ ರತ್ನದಲ್ಲಿ” ಯದ್ ಯದ್ ಭವ್ಯಂ ಭವತು ಭಗವನ್ ಪೂರ್ವ ಕರ್ಮಾನುರೂಪಂ, ಏತತ್ ಪ್ರಾರ್ತ್ಯಂ ಮಮ ಬಹುಮತಂ ಜನ್ಮ ಜನ್ಮಾಂತರೇಪಿ, ತ್ವತ್ ಪಾದಾಂಬೋರುಹ ಯುಗಗತಾ ನಿಶ್ಚಲಾ ಭಕ್ತಿರಸ್ತು” ಎಂದರು. ಅಂದರೆ ” ಹೇ ಪರಮಾತ್ಮ ಜನ್ಮ ಜನ್ಮಾಂತರದ ಕರ್ಮಶೇಷದ ಅನುಗುಣವಾಗಿ ನನಗೆ ಈ ಜನ್ಮದಲ್ಲಿ ಏನೆಲ್ಲಾ ನಡೆಯಬೇಕೋ, ಅದೆಲ್ಲ ನಡೆಯಲಿ. ಅದರಿಂದ ಆಗುವ ಎಲ್ಲ ಪರಿಣಾಮಗಳನ್ನೂ ನಾನು ಅನುಭವಿಸಲು ತಯಾರಾಗಿದ್ದೇನೆ, ಆದರೆ ನಾನು ಹಾಗೆ ಅನುಭವಿಸುವಾಗ, ನನ್ನ ಮನಸ್ಸು ಮಾತ್ರ ನಿನ್ನ ಪಾದಾರವಿಂದದಲ್ಲಿ ನಿಲ್ಲಲಿ” ಎಂದು ಬೇಡುತ್ತಾರೆ. ಮಹಾನ್ ಭಕ್ತರಾದ ಅವರಿಗೆ ಅಂತಹ ಭಾವ ಬಂದದ್ದು ಸಹಜವೇ. ವಾಚಕರೆ, ಅಂತಹ ಭಾವ ನಮಗೂ ಬಂದರೆ ನಾವೂ ಈ ಕರ್ಮಶೇಷದ ಬಂಧನದಿಂದ ಮುಕ್ತರಾಗಬಹುದು.

ನಾವೂ ಅಂತಹ ಪ್ರಯತ್ನವನ್ನು ಮಾಡೋಣ ಬನ್ನಿ


ರಸಧಾರೆ - 183

ಪುಣ್ಯದಿಂದ ಬಂದ ಸಿರಿ ಮದಮೋಹಗಳ ಮೂಲ.
ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ
ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು
ಧನ್ಯನುಭಯವ ಮೀರೆ – ಮಂಕುತಿಮ್ಮ

ಖಿನ್ನನಾಗಿಪ = ಖಿನ್ನನ್ + ಆಗಿಪ // ಪಾಪಫಲವಾತ್ಮಶುದ್ಧಿ = ಪಾಪ+ಫಲವು + ಆತ್ಮಶುದ್ದಿ // ಧನ್ಯನುಭಯವ = ಧನ್ಯನು+ ಉಭಯವ

ಖಿನ್ನ= ನೊಂದವ// ಅನ್ಯೋನ್ಯಜನಕಗಳು = ಪರಸ್ಪರ ಉಂಟಾಗುವವು// ಉಭಯವ = ಎರಡನ್ನೂ

ಒಬ್ಬ ವ್ಯಕ್ತಿ ಮಾಡಿದ ಪುಣ್ಯಕಾರ್ಯದಿಂದ ಅವನಿಗೆ ಸುಖ ಸಂಪತ್ತುಗಳು ಆನಂದಗಳು ಲಭಿಸುವುವು. ಹಾಗೆಯೆ ಅವನು ಮಾಡಿದ ಪಾಪಕರ್ಮಗಳಿಂದ ನೋವು ದುಃಖ ಕಷ್ಟ ಪಡೆಯುವನು. ಆದರೆ ಈ ಪಾಪ ಪುಣ್ಯಗಳನ್ನೂ ಮೀರಿ ಅವುಗಳ ಪರಿಧಿಯಿಂದ ಮೇಲೇರುವವನೆ ಧನ್ಯ, ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಈ ಜಗತ್ತಿನಲ್ಲಿ ಒಳ್ಳೆಯದನ್ನು ಮಾಡಿದರೆ ಪುಣ್ಯ, ಕೆಟ್ಟದ್ದನ್ನು ಮಾಡಿದರೆ ಪಾಪ ಎಂಬ ಒಂದು ಪ್ರತೀತಿ ಇದೆ. ಪುಣ್ಯ ಮಾಡಿದರೆ ಒಳ್ಳೆಯ ಫಲ. ಪಾಪ ಮಾಡಿದರೆ, ಕೆಟ್ಟ ಫಲವೆಂದೂ ಪ್ರತೀತಿಯಿದೆ. ಆದರೆ ಪ್ರತೀ ಮನುಷ್ಯನೂ ತಾನು ಮಾಡಿದ ಪುಣ್ಯ ಕಾರ್ಯಗಳನ್ನು ಮರೆತು, “ಆ ಕಾರ್ಯಗಳಿಂದಲೇ ಇಂದು ನಂಗೆ ಈ ಸೌಲಭ್ಯಗಳು ಲಭ್ಯವಾಗಿವೆ” ಎನ್ನುವುದನ್ನು ಮರೆತು, ” ನಾನು” ಮಾಡಿದೆ ಎಂದು ಅಹಂಕಾರವನ್ನೂ ಮದವನ್ನೂ ತೋರುತ್ತಾ, ತನ್ನ ಪುಣ್ಯ ಫಲವನ್ನು ಅನುಭವಿಸುತ್ತಾನೆ. ಹಾಗೆ ವರ್ತಿಸುತ್ತಾ ಒಂದು ವ್ಯಕ್ತಿ ಪುಣ್ಯ ಕೆಲಸಗಳನ್ನು ಮಾಡಿ ತಾನೇ ಆರ್ಜಿಸಿದ ಸಂಪತ್ತುಗಳಿಂದ ಮತ್ತು ಐಹಿಕ ಭೋಗಗಳಿಂದ ತನ್ನ ವ್ಯಕ್ತಿತ್ವಕ್ಕೆ ಕುಂದು ತಂದುಕೊಳ್ಳುತ್ತಾನೆ. ಅವನಿಗೆ ಮೋಹ ಉಂಟಾಗಿ ಮದವು ಇನ್ನೂ ಹೆಚ್ಚುತದೆ. ಈ ರೀತಿ ಅವನು ತನ್ನ ಪುಣ್ಯ ಫಲವನ್ನು ಕರಗಿಸುತ್ತಾನೆ. ಅಧೋಗತಿಗೆ ಹೋಗುತ್ತಾನೆ.

ಹಾಗೆಯೇ ಒಬ್ಬನು ಕೇವಲ ಪಾಪಕರ್ಮಗಳನ್ನೇ ಮಾಡಿದ್ದಾನೆ ಎಂದು ಇಟ್ಟುಕೊಳ್ಳಿ. ಅದರ ಫಲ ಸ್ವರೂಪವಾಗಿ, ಅವನಿಗೆ ಕಷ್ಟ, ನೋವು, ದಾರಿದ್ರ್ಯ, ಖಿನ್ನತೆ, ಹಿಂಸೆಯಂಥಾ ಎಲ್ಲ ಪಾಪ ಫಲಗಳೂ ದೊರೆಯುತ್ತವೆ. ಅವನು ಖಿನ್ನನಾಗುತ್ತಾನೆ. ತನ್ನ ತಪ್ಪುಗಳ ಅವಲೋಕನಮಾಡಿಕೊಳ್ಳುತ್ತಾನೆ.ಆ ಪಾಪ ಕರ್ಮಗಳ ಫಲವನ್ನು ಅನುಭವಿಸುತ್ತಾನೆ. ಅವನಿಗೆ ಬೇರೆ ವಿಧಿಯಿಲ್ಲ. ಹಾಗೆ ಅನುಭವಿಸುವಾಗ ಅವನು ತನ್ನ ತಪ್ಪನ್ನು ಅರಿತು ಮತ್ತೆ ಪಾಪ ಕರ್ಮಗಳನ್ನು ಮಾಡದೆ, ಒಳ್ಳೆಯ ಕೆಲಸಗಳನ್ನು ಮಾಡಲು ಧೃಢ ನಿಶ್ಚಯನಾಗಿ ಅಥವಾ ಪಾಪ ಮಾಡಬಾರದೆಂಬ ನಿಶ್ಚಯದಿಂದ ಶುದ್ಧನಾಗುತ್ತಾನೆ. ಉನ್ನತ ಗತಿಯನ್ನು ಪಡೆಯುತ್ತಾನೆ.

ಹಾಗಾಗಿ ಯಾರಾದರೂ ತುಂಬಾ ಆನಂದದಿಂದ ಇದ್ದಾರೆ, ಸುಖವಾಗಿದ್ದಾರೆ ಎಂದರೆ ಅವರು ತಮ್ಮ ಪುಣ್ಯವನ್ನು ಕರಗಿಸುತ್ತಿದ್ದಾರೆ ಎಂದೂ, ಯಾರಾದರೂ ಬಹಳ ಸಂಕಷ್ಟದಲ್ಲಿ ಇದ್ದರೆ, ಯಾತನೆ, ಖಿನ್ನತೆ, ಬಡತನ, ಹಿಂಸೆ ಅನುಭಸಿತ್ತಿದ್ದರೆ, ಅವರು ತಮ್ಮ ಪಾಪಗಳನ್ನು ಕಳೆದುಕೊಂಡು ಕರಗಿಸುತ್ತಿದ್ದಾರೆ ಎಂದೂ ಅರ್ಥ.

ಹಾಗಾಗಿ, ಯಾರು ಪುಣ್ಯ ಕೆಲಸಮಾಡಿ ಅದರ ಫಲವನ್ನು, ಸ್ವಾರ್ಥದಿಂದ ಅನುಭವಿಸದೆ, ಮದ ಮೋಹಗಳ ಭಾವದಿಂದ ಮುಕ್ತರಾಗುತ್ತಾರೋ, ಯಾರು ತನ್ನ ಪಾಪ ಕರ್ಮದಿಂದ ಸಂದ ಕಷ್ಟಗಳ ಕೋಟಲೆಯನ್ನು ಅನುಭವಿಸುವಾಗ, ಕೋಪ, ಸೇಡು, ಅಹಂಕಾರದ ಭಾವ ಬಿಟ್ಟು, ತನ್ನ ಕಷ್ಟಗಳಿಗೆ ತನ್ನನ್ನಲ್ಲದೆ, ಬೇರೆ ಯಾರನ್ನೂ ದೂಷಿಸದೆ ಪರಮಾತ್ಮನ ಇಚ್ಚೆಯಂತೆ ನಡೆವುದೆಲ್ಲ ನಡೆಯಲಿ ಎಂದು ಬಂದ ಕಷ್ಟವನ್ನು ಅನುಭವಿಸಿ ತೀರಿಸಿಬಿಡುತ್ತಾನೋ, ಇಬ್ಬರೂ ಈ ಲೋಕದಲ್ಲಿ ಧನ್ಯರು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು. ಪುಣ್ಯಫಲದ ಮದಪೂರಿತ ಅಹಂಕಾರ ಅಥವಾ ಪಾಪಫಲದ ಖಿನ್ನತೆ ಮತ್ತು ದೈನ್ಯತೆಯ ಭಾವವನ್ನು ಮೀರಿ ನಿಂತಾಗ ಮನುಷ್ಯ ಧನ್ಯನಾಗುತ್ತಾನೆ ಎನ್ನುವುದೇ ಈ ಕಗ್ಗದ ಹೂರಣ.

ನಾವೂ ಸಹ ಅಂತಹ ಭಾವಗಳಿಗೆ ಬಲಿಯಾಗದೆ, ಅದರಿಂದ ಮೀರಿ ಬೆಳೆಯುವ ಪ್ರಯತ್ನ ಮಾಡೋಣವೆ?

ರಸಧಾರೆ - 184

ನೋಡುನೋಡುತ ಲೋಕಸಹವಾಸ ಸಾಕಹುದು I
ಬಾಡುತಿಹ ಹೂಮಾಲೆ, ಗೂಢವಿಹ ಕಜ್ಜಿ II
ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ I
ನೋಡಾಡು ಹಗುರದಿಂ – ಮಂಕುತಿಮ್ಮ II

ಈ ಲೋಕದದಲ್ಲಿ ನಮ್ಮ ಬಾಳ್ವೆ ಮೊದಮೊದಲು ಆನಂದವಾಗಿರುತ್ತದೆ . ಎಲ್ಲವೂ ವಿನೂತನವಾಗಿರುತ್ತದೆ, ಎಲ್ಲವೂ ಇಷ್ಟಪಡುವಂತಿರುತ್ತದೆ. ಕಾಲಕ್ರಮೇಣ ಬಾಡುತಿಹ ಹೂ ಮಾಲೆಯಂತೆಯೋ ಅಥವಾ ಬಹಳದಿನದಿಂದ ಬಾಧಿಸುತ್ತಿರುವ ಕಜ್ಜಿಯಂತೆಯೋ, ” ಸಾಕಪ್ಪಾ ಸಾಕು” ಎಂದು ಅನ್ನಿಸತೊಡಗುತ್ತದೆ. ಹಾಗಾಗಿ ಈ ಲೋಕದ ಸಹವಾಸದಲ್ಲಿ ತುಂಬಾ ಆಳವಾಗಿ ಇಳಿಯದೆ, ಮೇಲೆ ಮೇಲೆ ಹಗುರವಾಗಿ ಓಡಾಡಿಕೊಂಡು ನಿನ್ನ ಜೀವನವನ್ನು ಬಾಳು ಎಂದು ಸೂಚನೆಯನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ.

ಸಹೃದಯರೇ, ನೋಡಿ ನಮಗೆ ಒಂದು ವಿಷಯ ಚೆನ್ನಾಗಿ ಗೊತ್ತು ಮತ್ತು ಅದುವೇ ಸತ್ಯ. ನಾವು ಈ ಜಗತ್ತಿನಲ್ಲಿ ಶಾಶ್ವತವಾಗಿ ಇರುವುದಿಲ್ಲ. ನಾವು ಈ ರೂಪದಲ್ಲಿ ಈ ಜನ್ಮದಲ್ಲಿ ಕೇವಲ ಕೆಲ ಕಾಲ ಮಾತ್ರ ಇರಲು ಸಾಧ್ಯ. ಹಾಗಿದ್ದರೂ ನಾವು ಮಾಡುವ ಕೆಲಸವೆಲ್ಲವೂ, “ನಾವು ಇಲ್ಲಿ ಇದೇ ರೂಪದಲ್ಲಿ ಶಾಶ್ವತವಾಗಿ ಇರುತ್ತೇವೆ” ಎನ್ನುವ ಒಂದು ಭ್ರಮೆಯನ್ನು ಇಟ್ಟುಕೊಂಡೆ ಮಾಡುತ್ತೇವೆ. ನಾನು ನನ್ನ ವಂಶ, ನನ್ನ ಪರಂಪರೆ, ನನ್ನ ಸಂಸಾರ, ನನ್ನ ಆಸ್ತಿ,ಮನೆ, ಮಠ ಹೀಗೆ ಎಲ್ಲವನ್ನೂ “ನಾವು ನಿರಂತರವಾಗಿ ಅನುಭವಿಸುತ್ತೇವೆ” ಎನ್ನುವ ಭ್ರಮೆಯಲ್ಲಿರುತ್ತೇವೆ .

ಈ ಜನ್ಮದಲ್ಲಿ ಈ ರೂಪ ತಳೆದು ಹುಟ್ಟಿರುವ ನಾವು, ಈ ರೂಪವನ್ನು ಬಿಟ್ಟು ಮತ್ತೊಂದು ರೂಪವನ್ನು ಧರಿಸುವಾಗ, ಎಲ್ಲಿ ಹುಟ್ಟುತ್ತೇವೆಯೋ , ಏನಾಗಿ ಹುಟ್ಟುತ್ತೇವೆಯೋ ಗೊತ್ತಿಲ್ಲ ಮತ್ತು ಅದನ್ನು ಅರಿಯುವುದೂ ಸಾಧ್ಯವಿಲ್ಲ. ಅಷ್ಟೇ ಅಲ್ಲ ಈ ಜನ್ಮದಿಂದ ಮತ್ತೊಂದು ಜನ್ಮಕ್ಕೆ ಹೋಗುವಾಗ, ಈ ಜನ್ಮದಲ್ಲಿ ಸಂಚಯಿಸಿದ ಕರ್ಮ ಶೇಷ ಮತ್ತು ವಾಸನೆಗಳನ್ನಷ್ಟೇ ಕೊಂಡು ಹೋಗಬಹುದು. ಮತ್ತೆಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ನಾವು ಆರ್ಜಿಸಿದ ವಸ್ತು, ವಿಷಯ ಮತ್ತು ವ್ಯಕ್ತಿಗಳು ಏನಾದರು, ಹೇಗಿದ್ದಾವೆ ಎನ್ನುವ ಅರಿವು ನಮಗೆ ಇದನ್ನು ಬಿಟ್ಟು ಹೋದಮೇಲೆ ಕಿಂಚಿತ್ತೂ ಇರುವುದಿಲ್ಲ. ಆದರೂ ನಾವು ಈ ಜೀವನಕ್ಕೆ ಅಂಟಿಕೊಂಡಿರುತ್ತೇವೆ. ಆಳವಾಗಿ ಇದರೊಳಕ್ಕೆ ಇಳಿದುಬಿಡುತ್ತೇವೆ.

ಜೀವನವನ್ನು ನಡೆಸುತ್ತಾ ನಡೆಸುತ್ತಾ ನಮಗೆ ಇದರ ನಿಸ್ಸಾರತೆ ಅರ್ಥವಾಗುವಾಗ, ಇದು ಒಂದು ಬಾಡುತ್ತಿರುವ ಮಲ್ಲಿಗೆ ಹೂವಿನ ದಂಡೆಯಂತೆ ಅಥವಾ ಬಹಳ ದಿನದಿಂದ ಬಾಧಿಸುತ್ತಿರುವ ಕಜ್ಜಿಯಂತೆ ಎಂದು ಅನ್ನಿಸತೊಡಗುತ್ತದೆ. ದೇಹದ ಶಕ್ತಿ ಕುಂದಿ, ಗತ ಜೀವನದ ಜ್ಞಾಪಕಗಳು ಮನಸ್ಸು ಬುದ್ಧಿಯನ್ನು ಆವರಿಸಿಕೊಂಡು, ಏನೋ ಮಾಡಬೇಕೆಂದರೂ ಏನೂ ಮಾಡಲಾಗದ ಸ್ಥಿತಿಗೆ ತಲುಪುತ್ತೇವೆ. ಈ ಸ್ಥಿತಿ ಅನಹಸೀಯ.

ಇದಕ್ಕೆ ಪರಿಹಾರವಾಗಿ ಮಾನ್ಯ ಗುಂಡಪ್ಪನವರು ನಮಗೆ ಒಂದು ಸಲಹೆಯನ್ನು ನೀಡುತ್ತಾರೆ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ, ನಾವು ತಾವರೆ ಎಲೆಯಮೇಲಿನ ನೀರಿನ ಹನಿಯಂತೆ ಜೀವನ ಮಾಡಬೇಕು. ಇದ್ದೂ ಇಲ್ಲದಹಾಗೆ ಇರಬೇಕು. ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರೂ ಅದಕ್ಕೆ ಅಂಟದ ಹಾಗೆ, ಆಳಕ್ಕೆ ಹೋಗದೆ ಇರಬೇಕು. ಆಳವಾಗಿ ಮತ್ತು ಗಾಢವಾಗಿ ಈ ಬದುಕಿಗೆ, ಸಂಸಾರಕ್ಕೆ, ಮತ್ತು ಈ ಜಗತ್ತಿಗೆ ಅಂಟದೆ ಇದ್ದರೆ ಮನಸ್ಸಿಗೆ ನೆಮ್ಮದಿ ಮತ್ತು ನಿರಾಳ. ಆದರೆ ಬಾಳ ಬೇಕು, ಸಕ್ರಿಯವಾಗಿ ಬಾಳಬೇಕು. ಈ ಬಾಳಿನ ಸತ್ಯವನ್ನಿರುತು ಬಾಳಬೇಕು. ಇದರ ನಶ್ವರತೆಯನ್ನು ಅರಿತು ಬಾಳಬೇಕು.

ಆದರೆ ಅಂತಹ ಭಾವವನ್ನು ತಳೆಯುವುದು ಮತ್ತು ಹಾಗೆ ಜೀವಿಸುವುದು, ಈ ಪ್ರಾಕೃತ ದೇಹವನ್ನು ಹೊತ್ತ ನಮ್ಮಂತಾ ಹುಲುಮಾನವರಿಗೆ ಕಷ್ಟಸಾಧ್ಯ. ಆದರೆ ಅಸಾಧ್ಯವಲ್ಲ. ಪ್ರಯತ್ನ ಪಡಬೇಕು ಅಷ್ಟೇ.


ರಸಧಾರೆ - 185

ಲೋಕ ಸಹವಾಸ

ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ?
ಮಧುರಭಾವ ಪ್ರೇಮ ದಯೆಯಲ್ಲ ಬರಿದೆ?
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ
ಬದುಕಿನಲಿ ತಿರುಳೇನು – ಮಂಕುತಿಮ್ಮ.

ಹೃದಯಜೀವನಕಿನಿತು = ಹೃದಯ+ಜೀವನಕೆ+ಇನಿತು// ವಿಧಿಯಂಗಡಿಯೊಳದನು = ವಿಧಿಯ + ಅಂಗಡಿಯೋಳು + ಅದನು ಇನಿತು = ಸ್ವಲ್ಪವೂ// ತಿರುಳೇನು = ಸ್ವಾರಸ್ಯವೇನು

ಹೃದಯವಂತಿಕೆಯಿಂದ ನಡೆಸುವ ಜೀವನಕೆ ಬೆಲೆಯೇ ಇಲ್ಲವೇ? ಅದಕ್ಕೇನೂ ಪ್ರಯೋಜನವಿಲ್ಲವೆ? ಪರಸ್ಪರ ಸವಿಯಾದ ಭಾವನೆಗಳು,ಪ್ರಮಾನುರಾಗಗಳು ದಯೆ ದಾಕ್ಷಿಣ್ಯಗಳು ಕೇವಲ ಪೊಳ್ಳೆ? ವಿಧಿಯ ಆಟದಲ್ಲಿ ಇದನ್ನೆಲ್ಲಾ ಕೆಲಸಕ್ಕೆ ಬಾರದ್ದು ಎಂದು ತಿರಸ್ಕರಿಸುವಹಾಗಿದ್ದರೆ, ಈ ಜೀವನದ ಸ್ವಾರಸ್ಯವೇನು ಎಂದು ಒಂದು ಪ್ರಶ್ನಾ ರೂಪದ ಪ್ರಸ್ತಾಪವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಮಾಡುತ್ತಾರೆ.

ಕೊಂಚಮಟ್ಟಿಗೆ ಇನ್ನೂ ನಮ್ಮ ಭಾರತೀಯ ಅಸ್ಮಿತೆಯ ಬೇರುಗಳು ಭದ್ರವಾಗಿದ್ದ ಕಾಲಕ್ಕೇ, ಇಂತಹ ಒಂದು ಪ್ರಶ್ನೆಯನ್ನು ಕೇಳುವ ಗುಂಡಪ್ಪನವರು ಇಂದು ಏನು ಹೇಳುತ್ತಿದ್ದರೋ? ಆ ಭಗವಂತನೇ ಬಲ್ಲ!!! ಇರಲಿ, ನಾವು ಇಂದಿನ ಪರಿಸ್ಥ್ತಿಯನ್ನು ನೋಡುವ . ಲಕ್ಷಕ್ಕೊಬ್ಬರಂತೆ ಯಾರಾದರೂ ಹೃದಯವಂತರು, ಸ್ವಾರ್ಥರಹಿತರು, ಮಧುರವಾದ ಪ್ರೇಮಾನುರಾಗಗಳ ಶುದ್ಧ ಭಾವವನ್ನು ಇಟ್ಟುಕೊಂಡಿರುವವರು ನಮಗೆ ಈ ಲೋಕದಲ್ಲಿ ಸಿಗಬಹುದು. ಆದರೆ ಒಟ್ಟಾರೆ ಸಮಾಜದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅವರು ಉಲ್ಲೇಖ ಮಾಡುವ ಆ ಹೃದಯವಂತಿಕೆ, ಪ್ರೇಮ,ದಯೆ, ಮಧುರಭಾವದ ಸ್ಥಳವನ್ನು ಸ್ವಾರ್ಥ, ಅಸೂಯೆ , ನಿರ್ದಯೆ, ಕಾಠಿಣ್ಯ, ನಿರ್ಲಕ್ಷ್ಯ ಮುಂತಾದವು ಆಕ್ರಮಿಸಿಕೊಂಡುಬಿಟ್ಟಿದೆ. ಕಾರಣವನ್ನು ಯಾವುದೋ ಒಂದು ನಿರ್ಧಿಷ್ಟ ವ್ಯಕ್ತಿಗೋ, ಘಟನೆಗೋ ಆರೋಪಿಸಲಾಗುವುದಿಲ್ಲ. ಕಾಲಕ್ರಮೇಣ ಎಲ್ಲವೂ ಬದಲಾಗಿದೆ. ಜೀವನ ಶೈಲಿ ಬದಲಾಗಿದೆ.

ನಮ್ಮ ದೇಶದಮೇಲೆ ಪರಕೀಯರ ಆಕ್ರಮಣದ ಕಾರಣ ಕಾಲ ಕ್ರಮಣದಲ್ಲಿ ಹತ್ತು ಹಲವಾರು ಪ್ರಭಾವಗಳಿಂದ ಸಮಾಜದಲ್ಲಿನ ವ್ಯಕ್ತಿಗಳ ಪರಸ್ಪರ ಸಂಬಂಧಗಳಲ್ಲಿ ಬದಲಾವಣೆಗಳು ಬಂದಿವೆ. ಹಣದ ಪ್ರಾಮುಖ್ಯತೆ ಹೆಚ್ಚಾಗಿದೆ, ಸಂಬಂಧಗಳೆಲ್ಲ ವ್ಯವಹಾರಗಳಾಗಿವೆ. ಪ್ರಾಪಂಚಿಕ ಭೋಗಲೋಲುಪತೆಯೇ ಹೆಚ್ಚಾಗಿ, ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ಪಡೆಯುವ, ಅವುಗಳ ಮೇಲೆ ಸ್ವಾಮಿತ್ವವನ್ನು ಸ್ಥಾಪಿಸುವ ಮತ್ತು ನಿರಂತರವಾಗಿ ತಮ್ಮದಾಗಿಸಿಕೊಂಡು ಅನುಭವಿಸುವ ಭಾವಗಳಿಂದ ನಮ್ಮ ಸಮಾಜ ಮತ್ತು ಸಂಸ್ಕಾರಗಳ ವಿಧ್ಯಮಾನಗಳು ತುಂಬಿಹೋದವು. ನಮ್ಮ ಭಾರತೀಯ ಸಮಾಜದ ಮೂಲ ತತ್ವಗಳಾದ, ಸತ್ಯ ಧರ್ಮ ನ್ಯಾಯ ನೀತಿಗಳು ನೇಪತ್ಯಕ್ಕೆ ಸರಿಯತೊಡಗಿದವು. ಇಂದು ಬಹಳ ಸತ್ಯವಂತ, ಬಹಳ ಧರ್ಮಿಷ್ಠ ನಿಗೆ ” ಹುಚ್ಚ” ನೆಂಬ ಬಿರುದನ್ನು ಕೊಡಲಾಗುತ್ತೆ. ” ಋತಂಚ ಸ್ವಾಧ್ಯಾಯ ಪ್ರವಚನೇಚ, ಸತ್ಯಂಚ ಸ್ವಾಧ್ಯಾಯ ಪ್ರವಚನೇಚ ” ಎನ್ನುವ ಉಪನಿಷತ್ತಿನ ವಾಕ್ಕುಗಳಿಗೆ ಅರ್ಥವೇ ಇಲ್ಲದಾಗಿದೆ. ಜೀವನದಲ್ಲಿ ಸ್ವಾರಸ್ಯವಿಲ್ಲದಾಗಿದೆ.

ಇಂದು ತಂದೆ ತಾಯಿ ಮತ್ತು ಮಕ್ಕಳ ನಡುವೆಯಾಗಲಿ, ಅಣ್ಣತಮ್ಮ, ಅಕ್ಕಾ ತಂಗಿಯರ ನಡುವೆಯಾಗಲೀ ಬಂಧುಬಳಗದೊಡನೆಯಾಗಲೀ, ಸ್ನೇಹಿತರೊಡನೆಯಾಗಲೀ ಪರಸ್ಪರ ಬಾಂಧವ್ಯವೇ ಇಲ್ಲ. ಎಲ್ಲ ವ್ಯವಹಾರವಾಗಿಬಿಟ್ಟಿದೆ. ಪ್ರೀತಿ – ಪ್ರೇಮಗಳು, ಸ್ನೇಹ – ಸೌಹಾರ್ದತೆಗಳು, ಮಮತೆ – ಅನುರಾಗಗಳು ಕೇವಲ ಬೂಟಾಟಿಕೆಯಾಗಿಬಿಟ್ಟಿದೆ. ಇದರ ವಿಷಯ ಮಾತನಾಡಿದರೆ, ” ಏನು ಸ್ವಾಮಿ ಮಾಡುವುದು, ಕಲಿಕಾಲ” ಎನ್ನುವ ಮಾತು ನಮಗೆ ಕೇಳಬರುತ್ತದೆ. ಬಹುಶಃ ಆ ಪರಮಾತ್ಮನಿಗೆ ಜನರನ್ನು ಬದಲಾಯಿಸುವ ಅಥವಾ ಮಾರ್ಪಾಡು ಮಾಡುವ ತಂತ್ರವಿರಬಹುದು. ವಿಧಿಯೇ ಈ ರೀತಿಯಿರಬಹುದು. ಆದರೂ ಇಂದಿಗೂ ಸತ್ಯ, ಧರ್ಮ, ನ್ಯಾಯ, ನೀತಿ, ಪ್ರೇಮ, ಅನುರಾಗ, ಮುಂತಾದ ಸದ್ಭಾವಗಳಿಗೆ ಬೆಲೆ ಇದೆ ಎಂದು ಅರಿತು ಅವುಗಳನ್ನು ಉಳಿಸಿಕೊಂಡು ಬೆಳೆಸಿಕೊಂಡರೆ, ಕಾಲಕ್ರಮೇಣ ಎಲ್ಲ ಬದಲಾಗಿ ಮತ್ತೆ ಈ ಜಗತ್ತು ಸುಂದರವಾಗಬಹುದು. ಆದರೆ ಇಡೀ ಸಮಾಜವೇ ಬದಲಾಗಬೇಕಾದರೆ ಒಂದು ದೊಡ್ಡ ಶತ್ರ ಚಿಕಿತ್ಸೆಯೇ ಬೇಕಾಗಿದೆ ಎಂದು ಅನ್ನಿಸುತ್ತದೆ. ಅದನ್ನು ಮಾಡುವವನೇ ಆ ಪರಮಾತ್ಮ. ಅವನಕೃಪೆಗಾಗಿ ಕಾಯುತ್ತಾ ಇರಬೇಕು.

ಹಾಗಾಗಿ ನಾವು ” ಸರ್ವೇ ಜನಾಃ ಸುಜನಾ ಭವಂತು ಸರ್ವೇ ಸುಜನಾಃ ಸುಖಿನಃ ಸಂತು” ಎಂದು ಹಾರೈಸುತ್ತಾ ಮುಂದಿನ ಕಗ್ಗಕ್ಕೆ ಹೋಗೋಣ.


ರಸಧಾರೆ - 186

ತಡಕಾಟ ಬದುಕೆಲ್ಲವೇಕಾಕಿಜೀವ ತ
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ
ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ
ಮಡುವೊಳೋಲಾಡುತ್ತೆ – ಮಂಕುತಿಮ್ಮ.

ಬದುಕೆಲ್ಲವೇಕಾಕಿಜೀವ = ಬದುಕು+ ಎಲ್ಲ+ ಏಕಾಕಿ + ಜೀವ // ತನ್ನೊಡನಾಡಿ = ತನ್ನ + ಒಡನಾಡಿ// ಪಿಡಿಯಲಲೆದಾಡುಗುಂ = ಪಿಡಿಯಲು+ಅಲೆದಾಡುಗುಂ // ಮಡುವೊಳೋಲಾಡುತ್ತೆ = ಮಡುವೊಳು+ಒಲಾಡುತ್ತೆ
ಮಡುವೊಳು = ಸುಳಿಯೊಳು.

ಒಂದು ಜೀವ ಬದುಕಲ್ಲಿ ಏಕಾಕಿಯಾಗಿದ್ದು ಒಡನಾಡಿ ಜೀವಗಳ ಹುಡುಕಿ ಹಿಡಿದು, ಪ್ರೀತಿ, ಕರ್ಮಶೇಷ, ಮತ್ತು ಅಪ್ಯಾಯತೆಗಳ ಬಂಧನಗಳ ಸುಳಿಯಲ್ಲಿ ಸಿಕ್ಕು ಜೀವಿಸುತ್ತದೆ ಎಂಬುದೇ ಈ ಕಗ್ಗದ ಹೂರಣ.

ಪ್ರತಿ ಜೀವಿಯೂ ಮೂಲರೂಪದಲ್ಲಿ ಏಕಾಕಿ. ತಾಯಿಯ ಗರ್ಭದಲ್ಲಿ ಸೃಷ್ಟಿಯಾದ ಭ್ರೂಣದೊಳಗೆ ಬಂದು ಸೇರಿಕೊಂಡು ಈ ಜಗತ್ತಿಗೆ ಒಂದು ರೂಪದೊಂದಿಗೆ ಬಂದು ಎರಗುತ್ತದೆ. ಎರಗಿದಾಕ್ಷಣ, ತನ್ನ ಅಸ್ತಿತ್ವವನ್ನು ಪಡೆದು, ತಾಯಿ, ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ, ಎನ್ನುವ ಬಾಂಧವ್ಯದಲ್ಲಿ ಮೊಟ್ಟಮೊದಲಿಗೆ ತನ್ನ ಸಂಬಂಧವನ್ನು ಈ ಜಗತ್ತಿನಲ್ಲಿ ಬೆಳೆಸಿಕೊಳ್ಳುತ್ತದೆ. ಬೆಳೆದು ದೊಡ್ಡದಾಗುತ್ತಾ, ಸುತ್ತಲಿನ ಪರಿಸರದೊಂದಿಗೆ, ಗಿಡ, ಮರ, ಬಳ್ಳಿ, ಪಕ್ಷಿ, ಕೀಟ ಕ್ರಿಮಿ, ನದಿ, ಬೆಟ್ಟ, ಗುಡ್ಡ, ಹೀಗೆ ತನ್ನ ಸಂಪರ್ಕ-ಸಂಬಂಧದ ಜಾಲವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ನೆರೆ ಹೊರೆ, ಸ್ನೇಹಿತರು, ಅನ್ಯ ಪ್ರಾಣಿಗಳು, ಪರಸರದಲ್ಲಿ ಇರುವ ಎಲ್ಲದರೊಟ್ಟಿಗೆ ಒಂದು ಭಾವನಾತ್ಮಕವಾದ ಸಂಬಂಧವನ್ನು ಕಟ್ಟಿಕೊಳ್ಳುತ್ತದೆ.

ಒಂದೇ ಜೀವಿಯಾದರೂ, ಹಲವರೊಡನೆ ಮತ್ತು ಹಲವೊಡನೆ ತಾನು ಕಟ್ಟಿಕೊಳ್ಳುವ ಸಂಬಂಧದ ರೂಪಗಳು ಅನೇಕ. ಪ್ರೀತಿಯ, ಪ್ರೇಮದ, ಕೋಪದ, ದ್ವೇಷದ, ಅಹಂಕಾರದ, ಅಸೂಯೆಯ, ಹೀಗೆ ಹಲವಾರು ಭಾವನೆಗಳ ತಂತುವಿನೊಂದಿಗೆ ತನ್ನ ಸಂಪರ್ಕವನ್ನು ಕಟ್ಟಿಕೊಳ್ಳುತ್ತದೆ. ಅಷ್ಟೇ ಅಲ್ಲ, ಆ ಜೀವಿಯ ಸಂಬಂಧದ ರೂಪ, ಕಾಲಕಾಲಕ್ಕೆ, ಕಾಲಧರ್ಮಕ್ಕನುಗುಣವಾಗಿ, ವಯೋಧರ್ಮಕ್ಕನುಗುಣವಾಗಿ ಮತ್ತು ಬೇರೆ ಬೇರೆ ಕಾರಣಗಳಿಗೆ, ಬೇರೆ ಬೇರೆ ರೂಪಗಳನ್ನು ತಾಳುತ್ತದೆ. ಇದೊಂದು ಸುಳಿ. ನದಿಯ ಮಡುವಿನಲ್ಲಿ ಹೇಗೆ ನೀರು ಸುತ್ತುತ್ತಾ ಇರುತ್ತದೋ ಹಾಗೆಯೇ ಜೀವಿಯೂ ಈ ಭೂಮಿಯಲ್ಲಿ ಇರುವ ತನಕ, ಎಲ್ಲರೊಂದಿಗೆ ಮತ್ತು ಎಲ್ಲದರೊಂದಿಗೆ ಚಿತ್ರ ವಿಚಿತ್ರವಾದ ಸಂಬಂಧಗಳನ್ನು ಪಡೆದುಕೊಂಡು ಸುತ್ತುತ್ತಾ ಇರುತ್ತದೆ. ಹಾಗೆ ಸುತ್ತುವುದೇ ಜೀವನ. ಇದೇ ಬದುಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಈ ಸಂಬಂಧಗಳ ಮಡುವಿನ ಸುತ್ತಾಟ ಜೀವಿಗೆ ನಿರಂತರವಾಗಿ ನಡೆದೇ ಇರುತ್ತದೆ. ಜನ್ಮಜನ್ಮಾಂತರಗಳಲ್ಲೂ ಅವ್ಯಾಹತವಾಗಿ ಸುತ್ತುತ್ತಲೇ ಇರುತ್ತದೆ. ಈ ಬಂಧನಗಳಿಂದ ಮುಕ್ತರಾಗುವ ಪ್ರಯತ್ನವೇ ಅಧ್ಯಾತ್ಮ. ಅಂದರೆ ವಾಸನಾ ರಹಿತವಾಗಿ ಮೊಟ್ಟಮೊದಲಿಗೆ ಈ ಜಗತ್ತಿನ ಸಂಪರ್ಕಕ್ಕೆ ಬಂದ ಜೀವಿ ಮತ್ತೆ ವಾಸನಾ ರಹಿತವಾಗಿ, ಕರ್ಮ ಶೇಷ ರಹಿತವಾಗಿ, ಸಂಬಂಧಗಳ ಬಂಧನದಿಂದ,ಬಂಧಿಸಿರುವ ಸಂಕೋಲೆಯ ಪ್ರತೀ ಕೊಂಡಿಯನ್ನು ಕಳಚಿಕೊಂಡು ಮತ್ತೆ ತನ್ನ ಸ್ವಸ್ಥಾನ ಸೇರುವುದೇ ಅಧ್ಯಾತ್ಮದ ಗುರಿ. ಆಗ ಇಲ್ಲಿ ಇದ್ದರೂ ಇಲ್ಲದ ಹಾಗೆ, ಅಂಟದ ಹಾಗೆ ಇರಲು ಆದರೆ, ಅದೇ ಅಧ್ಯಾತ್ಮ ಸಾಧನೆಯ ಫಲ. ಮಾತುಗಳಲ್ಲಿ ವರ್ಣಿಸಲು, ಪದಗಳಲ್ಲಿ ಬರೆಯಲು ಸುಲಭ ಆದರೆ ಆ ಸ್ಥಿತಿಯನ್ನು ತಲುಪುವುದಕ್ಕೆ ದೀರ್ಘಕಾಲದ ಸಾಧನೆ ಬೇಕು. ಅಸಾಧ್ಯವಲ್ಲ ಆದರೆ ಕಷ್ಟ ಸಾಧ್ಯ.


ರಸಧಾರೆ - 187

ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ
ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ
ಬಿಡಿಜೀವ ಸಂಗಾತಿಜೀವಗಳನರಸಿ
ಪಡೆದಂದು ಪೂರ್ಣವದು – ಮಂಕುತಿಮ್ಮ

“ನುಡಿಕಟ್ಟು”ಎನ್ನುವುದು ಒಂದು ಆಟ. ಸೂಕ್ತ ಅಕ್ಷರಗಳ ಜೋಡಣೆಯನ್ನು ಮಾಡುತ್ತಾ, ಪದಗಳ ವಿನ್ಯಾಸವನ್ನು ಮಾಡುವುದು. ಅದನ್ನಾಡುವುದಕ್ಕೆ ಉಪಯೋಗಿಸುವ ಅಕ್ಷರಗಳನ್ನು ಬರೆದ ಚೀಟಿಗಳನ್ನು ನಾವು ಆಯುವಂತೆ, ಜೀವನದಲ್ಲೂ ನಮಗೆ ಬೇಕಾದ ಸೂಕ್ತ ಸಂಗಾತಿ ಜೀವಗಳನ್ನಾರಿಸಿಕೊಂಡರೆ ಅಂದು ನಮ್ಮ ಜೀವನದ ವಿನ್ಯಾಸದ ಜೋಡಣೆ ಪೂರ್ಣವಾಗುವುದೆಂದು ಅಪ್ಪಣೆ ಕೊಡಿಸಿದ್ದಾರೆ ಮಾನ್ಯ ಗುಂಡಪ್ಪನವರು. ಈ ಕಗ್ಗದಲ್ಲಿ.

ಆ ನುಡಿಗಟ್ಟಿನಾಟದಲಿ ಅಕ್ಷರಗಳು ಸರಿಯಾಗಿ ಸಿಗದೇ ಹೋದರೆ ಪದವೂ ಆಗುವುದಿಲ್ಲ ವಿನ್ಯಾಸವೂ ಸರಿಯಾಗುವುದಿಲ್ಲ. ಸರಿಯಾದ ಅಕ್ಷರಗಳು ಸಿಕ್ಕರೆ ಪದ ಸರಿಯಾಗುತ್ತದೆ. ಹಾಗೆಯೇ ನಮ್ಮ ಜೀವನದಲ್ಲೂ ನಾವು ನಮಗೆ ಸರಿಹೊಂದುವಂತ ಜೀವಿಗಳನ್ನು ಹುಡುಕುತ್ತೇವೆ ಮತ್ತು ನಿರಂತರವಾಗಿ ಹುಡುಕುತ್ತಲೇ ಇರುತ್ತೇವೆ. ಸಿಕ್ಕರೆ ಸಂತೋಷ, ಸಿಗದಿದ್ದರೆ ಮತ್ತೆ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅರಿಯದೆ ಕೆಲವರನ್ನು ಹುಡುಕಿ ಸೇರುತ್ತೇವೆ. ಸ್ವಲ್ಪದಿನವಾದ ನಂತರ ಬೇಡವೆನಿಸುತ್ತದೆ. ಆಗ ಆ “ಪದ” ಗಳಿಂದ ಎಲ್ಲ ಅಕ್ಷರಗಳನ್ನು ತೆಗೆದುಕೊಂಡು ಮತ್ತೆ ಹೊಸ ಅಕ್ಷರಗಳನ್ನು ಹುಡುಕಿ ಮತ್ತೆ ಹೊಸ ಪದ ಜೋಡಣೆಯ ಕೆಲಸ.

ಆದರೆ ನಾವು ಹುಡುಕುವ ಮತ್ತು ಆಯ್ದುಕೊಳ್ಳುವ ಅಕ್ಷರಗಳೇ ಸರಿಯಾಗಿಲ್ಲದಿದ್ದರೆ, ಪದ ದೋಷಪೂರಿತವಾಗಿರುತ್ತದೆ. ಹಾಗೆಯೇ ನಮ್ಮ ಆಯ್ಕೆ ಸರಿಯಿಲ್ಲದಿದ್ದರೆ ಅನ್ಯರೊಡನೆ ನಮ್ಮ ಸಂಬಂಧಗಲ್ಲೂ ಸರಿಯಾಗಿರುವುದಿಲ್ಲ. ಆಗ ನಾವು ಸಾಮಾನ್ಯವಾಗಿ ನಮ್ಮ ಆಯ್ಕೆಯನ್ನು ದೂರದೆ ಅಕ್ಷರವನ್ನು ದೂರುತ್ತೇವೆ, ಪದಗಳನ್ನು ದೂರುತ್ತೇವೆ, ಅಂದರೆ ನಾವು ಮಾಡಿ ಆಯ್ಕೆ ಸರಿಯಾಗಲಿಲ್ಲವೆಂದುಕೊಳ್ಳದೆ ನಾವು ಆಯ್ಕೆ ಮಾಡಿದ ವಸ್ತುವನ್ನೋ ವಿಷಯವನ್ನೂ ಅಥವಾ ವ್ಯಕ್ತಿಯನ್ನೂ ದೂರುತ್ತೇವೆ. ಆದರೆ ಜೀವನದಲ್ಲಿ ನಮಗೆ ಸಂಪೂರ್ಣವಾಗಿ ಸರಿಹೊಂದುವಂಥಾ ವ್ಯಕ್ತಿಗಳು ಸಿಗಲು ಸಾಧ್ಯವೇ? ಬಹಳ ದುರ್ಲಭ. ಏಕೆಂದರೆ ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ ವ್ಯಕ್ತಿತ್ವ, ಭಾವನೆಗಳನ್ನು ಹೊಟ್ಟೆ ಹುಟ್ಟಿರುತ್ತಾರೆ. ಅದು ಅವರ ಸ್ವಾಭಾವವೆನ್ನಬಹುದು. ಸ್ವಭಾವ ಅಷ್ಟು ಸುಲಭವಾಗಿ ಬದಲಾಗುವುದಿಲ್ಲ. ಹಾಗಾಗಿ ಒಬ್ಬರಿಗೊಬ್ಬರು ಸಂಪೂರ್ಣ ಹೊಂದಾಣಿಕೆ ಸಾಧ್ಯವೇ ಇಲ್ಲ !!!!!

” ಇಬ್ಬರು ವ್ಯಕ್ತಿಗಳಿದ್ದರೆ – ಮೂರು ಅಭಿಪ್ರಾಯಗಳಿರುತ್ತವೆ ” ಎನ್ನುವ ಒಂದು ಮಾತಿದೆ. ಹಾಗೆ ನಮಗೆ ನಮ್ಮ ಭಾವನೆಗಳಿಗೆ ಸಂಪೂರ್ಣ ಎಕೀಭಾವ ತೋರುವ ವ್ಯಕ್ತಿ ಸಿಕ್ಕರೆ ಮತ್ತು ಅಂಥವರ ಸಾಂಗತ್ಯ ನಮಗೆ ಜೀವನ ಪೂರ್ತಿ ಲಭ್ಯವಾದರೆ ಅದು ನಮ್ಮ ಸೌಭಾಗ್ಯವೇ ಸರಿ ಆದರೆ ವಾಚಕರೆ ಅಂತಹ ಒಂದು ಆದರ್ಶ (Ideal ) ಸ್ಥತಿ ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಮತ್ತೊಬ್ಬರೊಂದಿಗೆ ಬಹಳಷ್ಟು ಹೊಂದಿಕೊಂಡು ತಮ್ಮ ಅವಶ್ಯಕತೆಗಳನ್ನು ಬದಿಗೊತ್ತಿ ತಮ್ಮ ಭಾವನೆಗಳಿಗೆ ಅತೀ ಮಹತ್ವಕೊಡದೆ, ಅನ್ಯರ ಕೊರತೆಗಳನ್ನು ಕಡೆಗಣಿಸುತ್ತಾ ಹೊಂದಿಕೊಂಡು ಹೋದರೆ ಒಂದು ಸಾಮರಸ್ಯ ಜೀವನ ಮಾಡಬಹುದು. ಇಲ್ಲದಿದ್ದರೆ ಪ್ರತಿ ನಿತ್ಯ ಸಮರಸದ ಕೊರತೆಯಿಂದ ಕೇವಲ ” ಸಮರವೇ” ಆಗುತ್ತದೆ.


ರಸಧಾರೆ - 188

ರಸರುಚಿಗಳನು ಕಲಿಸಿ ಪಕ್ವಾನಗಳ ಪಚಸಿ
ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ
ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು
ವಶನಾಗದಿಹ ನರನು? – ಮಂಕುತಿಮ್ಮ.

ಪ್ರಕೃತಿಗದಾರು + ಪ್ರಕೃತಿಗೆ+ ಅದಾರು // ವಶನಾಗದಿಹ = ವಶನು + ಆಗದಿಹ ರಸನಾ= ನಾಲಿಗೆ

ರುಚಿರುಚಿಯಾದ ರಸಭರಿತವಾದ ಅಡುಗೆಗಳನ್ನು ಮಾಡಲು ಕಲಿಸಿ, ಇವುಗಳನ್ನು ಸವಿಯುವ ತವಕದಲಿ ನಾಲಿಗೆಯಲಿ ನೀರಿಳಿಸಿ,ಹಲವಾರು ರೀತಿಯ ಪಕ್ವಾನ್ನಗಳನ್ನು ಜೀರ್ಣಿಸಿಕೊಂಡು, ಜಿಹ್ವಾ ಚಾಪಲ್ಯವನ್ನು ತೀರಿಸಿಕೊಳ್ಳಲು ಅನುವಾಗುವಂತೆ ಮತ್ತೆ ಮತ್ತೆ ಆಸೆಪದುವಂತೆ, ಪ್ರಕೃತಿಯೇ ಹತ್ತಾರು ಕಡೆಗಳಿಂದ ನಮ್ಮನ್ನು ಸೆಳೆಯುತ್ತಿರುವಾಗ ಇದಕ್ಕೆ ವಶನಾಗದವನು ಯಾರು ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.

ಆಹಾರವನ್ನು ತಿನ್ನುವುದು ಸ್ವಾಭಾವಿಕ. ಅದನ್ನು ರುಚಿರುಚಿಯಾಗಿ ಮಾಡಿ ತಿನ್ನುವುದು ರಸಿಕತೆ. ಹಾಗೆ ವಿಧ ವಿಧವಾದ ರುಚಿ ರುಚಿಯಾದ ಆಹಾರವನ್ನು ಮಾಡಲು ಬೇಕಾದ ಆಸೆ, ಆಸ್ಥೆ, ಅದಕ್ಕೆ ಬೇಕಾದ ಪರಿಕರಗಳು, ಆ ಪರಿಕರಗಳನ್ನು ಪ್ರಯೋಗಿಸಿ ಸೂಕ್ತವಾಗಿ ಉಪಯೋಗಿಸುವ ಕಲೆ ಎಲ್ಲವೂ ನಮಗೆ ಪ್ರಕೃತಿದತ್ತವಾಗಿ ಬಂದಿದೆ. ಹಾಗೆ ಬಂದ ಕಲೆಯನ್ನು ನಾವು ಮನುಷ್ಯರು ಪ್ರತಿ ನಿತ್ಯ ನೂತನ ವಿನೂತನವಾದ ಪ್ರಯೋಗಗಳನ್ನು ಮಾಡಿ ಹೊಸ ಹೊಸ ರುಚಿಕರವಾದ ಆಹಾರಗಳ ಆವಿಷ್ಕರಿಸುವ ಕೆಲಸ ಜಗತ್ತಿನಾದ್ಯಂತ ನಿರಂತರವಾಗಿ ಮಾಡುತ್ತಲೇ ಇದ್ದೇವೆ. ಇವುಗಳನೆಲ್ಲ ಅನುಭವಿಸದೆ ಇವುಗಳಿಂದ ಆಕರ್ಷಿತರಾಗೆದೆ ಇರುವವರು ಈ ಜಗತ್ತಿನಲ್ಲಿ ವಿರಳ. ಇಂದು ಜಗತ್ತಿನಲ್ಲಿ ಪಾಕಶಾಸ್ತ್ರವೇ ಒಂದು ಪ್ರಮುಖ ವ್ಯಾಪಾರೀ ಉಧ್ಯಮವಾಗಿದೆ.

ಒಂದು ಬಾರಿ ನಾವು ನಮಗೆ ಇಂದು ಇರುವ ಅಡುಗೆಯ ವಿಧಾನಗಳು ಮತ್ತು ತಯಾರಾಗುವ ವಿಧ ವಿಧವಾದ ಪಕ್ವಾನಗಳ ಯಾದಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅಷ್ಟು ದೊಡ್ಡದಾಗುತ್ತದೆ ಆ ಪಟ್ಟಿ. ಯಾರು ಯಾರಿಗೆ ಏನೇನು ಬೇಕೋ ಅದೆಲ್ಲವೂ ಇದೆ. ಪ್ರತಿಯೊಬ್ಬರನ್ನೂ ತೃಪ್ತಿಪಡಿಸುವ ಸಲಕರಣೆಗಳನ್ನು ಆ ಪರಮಾತ್ಮ ಪ್ರಕೃತಿಯ ಮೂಲಕ ನಮಗೆ ಒದಗಿಸಿದ್ದಾನೆ. ಇರಲಿ ಇದರ ಬಗ್ಗೆ ಬಹಳ ಬರೆಯಬಹುದು. ಅದೊಂದು ಸಂಶೋಧನಾ ಗ್ರಂಥವೇ ಆಗುವುದು.

ಆದರೆ ನಾವುಣ್ಣುವುದೆಲ್ಲವನ್ನೂ ನಾಲಿಗೆ ರುಚಿ ನೋಡಿ ಚೆನ್ನವೆಂದೋ ಚೆನ್ನಾಗಿಲ್ಲವೆಂದೋ ಒಂದು ನಿರಧಾರಕ್ಕೆ ಬರುತ್ತದೆ. ಆದರೆ ನಾಲಿಗೆ ಇರುವುದೇ ಮೂರು ಅಂಗುಲ. ಆ ಮೂರು ಅಂಗುಲದಲ್ಲಿ ಮೂರುಭಾಗಗಳು. ಮೊದಲನೆಯದು ಖಾರ, ನಂತರ, ಸಿಹಿ, ಕಡೆಗೆ ಕಹಿ. ಹೀಗೆ ನಮ್ಮ ನಾಲಿಗೆಯ ಮೇಲಿರುವ ರುಚಿ ಗುಳ್ಳೆಗಳು ಬೇರೆ ಬೇರೆ ರುಚಿಗಳನ್ನು ಅನುಭವಿಸಿ ತಿಳಿಸುತ್ತದೆ. ನಮಗೆ, ಯಾವುದೇ ಆಹಾರ ನಮ್ಮ ನಾಲಿಗೆಗೆ ಸಾಕುವ ತನಕ ಅದರ ರುಚಿ ಗೊತ್ತಿರುವುದಿಲ್ಲ. ಈ ನಾಲಿಗೆಯನ್ನು, ಅಂದರೆ ನಾಲಿಗೆಯ ಮೂರೂ ಭಾಗಗಳನ್ನು ದಾಟಿ ಗಂಟಲ ಬಳಿ ಬರುವಾಗ ನಾವು ತಿಂದ ಆಹಾರ ತನ್ನ ರೂಪ, ಸ್ವರೂಪ, ಹೆಸರುಗಳನ್ನೂ ಕಳೆದುಕೊಂಡು ನಮ್ಮ ಹೊಟ್ಟೆಯೊಳಕ್ಕೆ ಹೋಗಿಬಿಡುತ್ತದೆ, ಕಳೆದು ಹೋಗಿಬಿಡುತ್ತದೆ. ಅಂದರೆ ಇಷ್ಟೊಂದು ಕಷ್ಟಪಟ್ಟು ತಯಾರಿಸಿದ ಆ ಆಹಾರದ ಪ್ರಯಾಣದ ಕಾಲ ಒಂದು ನಿಮಿಷಕೂಡ ಇಲ್ಲ.

ಆದರೂ ಪ್ರತಿ ನಿತ್ಯ ನಮಗೆ ಈ ಆಹಾರದಲ್ಲಿ ಮತ್ತು ಅದರ ರುಚಿಯಲ್ಲಿ ಇಷ್ಟೊಂದು ಆಸೆ ಅಕ್ಕರೆಯನ್ನು ಪ್ರಕೃತಿ ನಮ್ಮಲ್ಲಿ ಉಂಟುಮಾಡುತ್ತದೆ ಮತ್ತು ನಮ್ಮನ್ನು ಈ ಆಕರ್ಷಣೆಗೆ ಒಳಪಡಿಸುತ್ತದೆ.ಇದನ್ನು ಪಡೆಯಲು ನಮ್ಮನ್ನು ಪರದಾಡಿಸುತ್ತದೆ, ಗೋಳಾಡಿಸುತ್ತದೆ,ಬೆವರಿಳಿಸುತ್ತದೆ. ಆದರೂ ಇಡೀ ಜಗತ್ತಿನಲ್ಲಿ ಈ ಆಹಾರದ, ಪಕ್ವಾನಗಳ, ರುಚಿಯ ಮತ್ತು ಆಹಾರದ ಸುವಾಸನೆಯಿಂದ ಆಕರ್ಷಿತರಾಗದೆ ಇರುವವರು ಯಾರೂ ಇಲ್ಲ


ರಸಧಾರೆ - 189

ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವ
ಪರಿಪರಿಯ ಫಲಮಧುರಗಳ ರಸನೆಗುಣಿಪ
ಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವ
ಗುರು ಸೃಷ್ಟಿ ರಸಿಕತೆಗೆ – ಮಂಕುತಿಮ್ಮ.

ರಸನೆಗುಣಿಪ = ರಸನೆಗೆ+ ಉನಿಪ // ರಸನೆಗುಣಿಪ = ರಸನೆಗೆ+ ಉಣಿಪ// ಕಂಠರವಗಳ = ಕಂಠ + ರವಗಳ //
ರಸನೆ= ನಾಲಿಗೆ// ಉಣಿಪ = ಉಣಬಡಿಸುವ// ಕಂಠರವ = ಕಿವಿಯಾಲಿಸುವ ನಾದ//

ಪರಿ ಪರಿಯಾದ ರೂಪ ಕಾಂತಿಗಳು, ಹೂಗಳು ಹಣ್ಣುಗಳು ತಿಂಡಿ ತಿನಿಸುಗಳು, ಪರಿಪರಿಯಾದ ಮಧುರ ನಾದಗಳು ಇವುಗಳನ್ನೆಲ್ಲ ಸೃಷ್ಟಿಸಿ ನಮ್ಮ ಮನಸ್ಸಿಗೆ ಆನಂದವೀಯುವ ಈ ಪ್ರಕೃತಿಯೇ, ಸೃಷ್ಟಿಯೇ ನಮ್ಮ ರಸಿಕತೆಗೆ ಗುರು ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಯಾವುದಾದರೂ ಒಂದು ವಸ್ತುವಿನಲ್ಲಿರುವ ಗುಣ, ರುಚಿ, ರೂಪ, ನಾದ ಮುಂತಾದವುಗಳನ್ನು ನೋಡಿ ಸವಿದು ಆಸ್ವಾದಿಸಿ ಮೆಚ್ಚುವುದು, ರಸಿಕತೆ. ಈ ರಸಿಕತೆ, ಸರ್ವೇ ಸಾಮಾನ್ಯ ಎಲ್ಲರಲ್ಲಿಯೂ ಇರುತ್ತದೆ. ಇಲ್ಲದವರೂ ಇದ್ದಾರೆ. ಆದರೆ ಈ ರಸಿಕತೆ ಎನ್ನುವುದು ಕೆಲವರಿಗೆ ಕೆಲ ವಿಷಯಗಳಲ್ಲೋ ಅಥವಾ ಯಾವುದೋ ಒಂದು ವಿಷಯದಲ್ಲೋ ಇರುತ್ತದೆ. ಕೆಲವರಿಗೆ ಸಂಗೀತ ಕೇಳುವುದರಲ್ಲಿ ರಸಿಕತೆ, ಕೆಲವರಿಗೆ ಹಾಡುವುದರಲ್ಲಿ ರಸಿಕತೆ,

ಕೆಲವರಿಗೆ ಚಿತ್ರ ಕಲೆ, ಕೆಲವರಿಗೆ ಶಿಲ್ಪಿ ಕಲೆ, ಕೆಲವರಿಗೆ ರುಚಿ ರುಚಿಯಾದ ಹಣ್ಣುಗಳನ್ನೂ ಅಥವಾ ತಿಂಡಿ ತಿನಿಸುಗಳನ್ನು ತಿಂದು ಆಸ್ವಾದಿಸುವುದರಲ್ಲಿ ರಸಿಕತೆ. ನಮ್ಮಲ್ಲಿ ಒಬ್ಬರು, ಕಾಫೀ ಕುಡಿದು, ೧೫ ನಿಮಿಷ ಬಾಯಿ ಮುಚ್ಚಿ ಕುಳಿತಿರುತ್ತಿದ್ದರು. ಏಕೆಂದು ಕೇಳಿದರೆ, “ಮಾತನಾಡಿದರೆ ಕಾಫಿಯ ಸುಗಂಧ ಬಾಯಿಂದ ಹೊರ ಹೋಗುತ್ತದೆಂದು” ಅವರ ಅಂಬೋಣ. ಈ ರೀತಿಯ ರಸಿಕರೂ ಇದ್ದಾರೆ. ಕೆಲವರು ಕಾಫೀ ಕುಡಿದಾಕ್ಷಣ ಬಾಯಿ ಮುಕ್ಕಳಿಸುವವರೂ ಇದ್ದಾರೆ. ಹೀಗೆ ಬೇರೆ ಬೇರೆಯವರಿಗೆ ಬೇರೆ ಬೇರೆಯಾದ ಅಭಿರುಚಿ.

ಮತ್ತೆ ಕೆಲವರಿಗೆ, ಪ್ರಕೃತಿಯ ಅಥವಾ ಪ್ರಕೃತಿಯಲ್ಲಿನ ಸೃಷ್ಟಿಯ ರೂಪ ಲಾವಣ್ಯಗಳನ್ನು ಕಂಡು ಅಭಿನಂದಿಸುವ, ಆರಾಧಿಸುವ, ಅಸ್ವಾಧಿಸುವ, ಪಡೆದುಕೊಳ್ಳಬೇಕೆಂದುಕೊಳ್ಳುವ ಅಥವಾ ಪಡೆದುಕೊಳ್ಳುವ, ಹೀಗೆ ಹತ್ತು ಹಲವಾರು ವಿಧದ ರಸಿಕತೆ ಇರುತ್ತದೆ. ಈ ರಸಿಕತೆ ಮಾನವನಿಗೆ ಆ ಪರಮಾತ್ಮ ನೀಡಿದ ಒಂದು ಶ್ರೇಷ್ಠ ವರ. ಬಹುಶಃ ಯಾವ ಅನ್ಯ ಜೀವಿಗೂ ಇಲ್ಲದ ಮತ್ತು ಕೇವಲ ಮಾನವನಿಗೆ ಇರುವ ಒಂದು ಗುಣವೇ ಈ ರಸಿಕತೆ.

ಈ ಪ್ರಕೃತಿಯಲ್ಲಿ ರೂಪ, ರಸ, ಗಂಧ, ನಾದ, ರುಚಿ, ಭಾವ, ಎಲ್ಲವನ್ನೂ ರಸಿಕತೆಯಿಂದ ಆಸ್ವಾಧಿಸುವ ಕ್ಷಮತೆಯನ್ನು ಮಾನವನಿಗೆ ಕೊಟ್ಟ ಸೃಷ್ಟಿಯೇ ಮನುಷ್ಯನಿಗೆ ” ರಸಿಕತೆಯ ಗುರು” ಎಂದು ಮಾನ್ಯ ಗುಂಡಪ್ಪನವರು ಹೇಳುತ್ತಾರೆ.

ವಾಚಕರೆ, ಈ ರಸಿಕತೆ ನಮ್ಮಲ್ಲಿ ಇಲ್ಲದೆ ಇದ್ದಿದ್ದರೆ ಜೀವನ ಎಷ್ಟೊಂದು ಬರಡಾಗಿ, ನೀರಸವಾಗಿರುತ್ತಿತ್ತು ಎಂದು ನಾ ಬೇರೆ ಹೇಳಬೇಕೇ. ಹಾಗಾಗಿ ಆ ರಸಿಕತೆಯನ್ನು ನಮಗೆ ನೀಡಿದ ಈ ಸೃಷ್ಟಿಗೆ ಮತ್ತು ಆ ಸೃಷ್ಟಿಕರ್ತನಿಗೆ ನಮ್ಮ ನಮನಗಳನ್ನು ಸಲ್ಲಿಸೋಣ.


ರಸಧಾರೆ - 190

ಅಮೃತಕಣವಂ ಮರ್ತ್ಯಮೃದ್ಘಟದಿ ಬಯ್ತಿರಿಸಿ
ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ
ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು
ಕ್ರಮತೆಯೋ ನಮ್ರತೆಯೋ – ಮಂಕುತಿಮ್ಮ.

ಅಮೃತಕಣವಂ = ಅಮೃತ + ಕಣವಂ// ಮರ್ತ್ಯಮೃದ್ಘಟದಿ = ಮರ್ತ್ಯ + ಮೃತ್+ಘಟದಿ// ಬಯ್ತಿರಿಸಿ = ಬಯ್ತು+ಇರಿಸಿ// ಮೋಹದುಪನೇತ್ರವಿಡಿಸಿ = ಮೋಹದ + ಉಪ+ ನೇತ್ರ+ ಇಡಿಸಿ//

ಅಮೃತ = ಸಾವಿಲ್ಲದ// ಕಣವಂ = ಕಣವನ್ನು // ಮರ್ತ್ಯ = ನಾಶವಾಗುವ // ಮೃತ್=ಮಣ್ಣಿನ// ಘಟದಿ=ಮಡಿಕೆಯಲ್ಲಿ// ಬಯ್ತು= ಬಚ್ಚಿಟ್ಟು// ವಿಮೃಶಬುದ್ಧಿಗೆ= ವಿಮರ್ಶಾತ್ಮಕವಾದ ಬುದ್ಧಿ// ಮೋಹದ = ಮಮಕಾರದ// ಉಪನೇತ್ರ = ಒಳನೋಟವನ್ನು// ಸಾಮ್ರಾಜ್ಯಮಧ್ಯದಲಿ = ಜೀವನವೆನ್ನುವ ಸಾಮ್ರಾಜ್ಯದಮಧ್ಯದಲಿ// ದುರ್ಭಿಕ್ಷವಾಗಿಪುದು = ಏನೂ ಇಲ್ಲದಂತಾಗಿಸುವುದು// ಕ್ರಮತೆಯೋ = ವಿಧಾನವೋ// ನಮ್ರತೆಯೋ = ಪ್ರಲೋಭನೆಯೋ

ನಾಶವಿಲ್ಲದ ಆತ್ಮ ಅಥವಾ ಚೇತನನನ್ನು, ನಾಶವಾಗುವಂಥಾ ಈ ದೇಹವೆಂಬ ಮಣ್ಣಿನ ಮಡಿಕೆಯಲ್ಲಿ ಬಚ್ಚಿಟ್ಟು, ವಿಮರ್ಶೆಮಾಡುವಂತಾ ಬುದ್ಧಿಶಕ್ತಿಯನ್ನೂ ಕೊಟ್ಟು ವಿವೇಚನೆಯಿಂದಲೋ ಅಥವಾ ಮೋಹದಿಂದಲೋ ತನ್ನ ಬೇಕು ಬೇಡಗಳ ವಿಮರ್ಶೆಮಾಡುತ್ತಾ ಈ ಜಗತ್ತಿಗೆ ಅಂಟಿಕೊಳ್ಳುವಂತಾ ಮನವನಿತ್ತು, ಎಲ್ಲವೂ ಇರುವಾಗ ಇದ್ದಕ್ಕಿದ್ದಂತೆಯೇ, ಏನೂ ಇಲ್ಲದಂತಾಗಿಸುವುದು, ಇದೇನು ವಿಧಾನವೋ ಅಥವಾ ಮಾನವರಿಗೆ ಒಂದು ಪ್ರಲೋಭನೆಯೋ ಎಂದು ವಿಚಾರಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಮಣ್ಣಿಂದ ಆದ ದೇಹ. ಆ ದೇಹದೊಳಗೆ ಒಂದು ಆತ್ಮ. ಈ ದೇಹಾತ್ಮ ಸಂಬಂಧಕ್ಕೆ ಪೂರಕವಾಗಿ ಪಂಚ ಭೂತಗಳಿಂದಾದ, ಮನಸ್ಸು ಬುದ್ಧಿಗಳು. ಈ ನಾಲ್ಕರಿಂದ ನಮ್ಮ ಅಸ್ಥಿತ್ವ. ಪ್ರಕೃತಿ ಸಂಬಂಧದಿಂದ, ಮನಸ್ಸು ಬುದ್ಧಿಗಳ ಪ್ರಲೋಭನೆಯಿಂದ ನಾವು ಈ ಜಗತ್ತಿಗೆ ಅಂಟಿಕೊಂಡು, ಈ ಜಗತ್ತನ್ನು ಮೋಹಿಸುತ್ತಾ ಇಲ್ಲಿರುವ ಎಲ್ಲ ವಸ್ತುಗಳನ್ನೂ ರಸಿಕತೆಯಿಂದ ಅನುಭವಿಸುತ್ತಾ ಜೀವಿಸುತ್ತೇವೆ. ನಮ್ಮ ಜೀವನಕ್ಕೆ ಒಂದು ಅಂತ್ಯ ಉಂಟು, ಎಲ್ಲವನ್ನೂ ಬಿಟ್ಟು, ಈ ದೇಹವನ್ನು ತೊರೆದು ನಾವು ಹೋಗಲೇಬೇಕೆಂದು ಅರಿತಿದ್ದರೂ, ಇಲ್ಲಿ ಜೀವಿಸುವವರೆಲ್ಲರೂ,ಈ ಜಗತ್ತಿನಲ್ಲಿ ನಾವು ನಿರಂತರವಾಗಿ ಜೀವಿಸಿರುತ್ತೇವೆ ಎಂದು ಅಂದುಕೊಳ್ಳುತ್ತೇವೆ. ಈ ಜಗತ್ತನ್ನು ಬಿಟ್ಟು ಹೋಗುವಾಗಲೂ ” ಅಯ್ಯೋ ಬಿಟ್ಟು ಹೋಗಬೇಕಲ್ಲ ” ಎಂದು ಕೊರಗುತ್ತಾ ಹೋಗುವವರೇ ಎಲ್ಲರೂ. ಇದೇ ನಮಗಿರುವ ಈ ಜಗತ್ತಿನ ಮೋಹ. ಈ ಮೋಹವನ್ನು ಕೊಟ್ಟವನೇ ಆ ಪರಮಾತ್ಮ. ಇದು ಅವನಿಗೊಂದು ಆಟ. ನಮಗೆ ಇದನ್ನೆಲ್ಲಾ ಕೊಟ್ಟು, ನಾವು ಪಡುವ ಪಾಡು ಅವನಿಗೆ ವಿನೋದ ಅಥವಾ ಈ ಜಗತ್ತನ್ನು ನಡೆಸುವ ಅವನ ವಿಧಾನವಿರಬಹುದು.

ಜೀವಿಗಳಿಗೆ ಈ ಮೋಹವನ್ನು ಕೊಟ್ಟದ್ದರಿಂದಲೇ ಈ ಜಗತ್ತಿನ ವೈವಿಧ್ಯಮಯ ಜೀವನದ ಆಟ ನಡೆಯುತ್ತಿದೆ. ಇಲ್ಲದಿದ್ದರೆ ಜಗತ್ತು, ಬಾಳು, ಜೀವನ ಎಲ್ಲವೂ ನೀರಸವಾಗಿ, ಇಡೀ ಜಗತ್ತೇ ಒಂದು ಬೆಂಗಾಡಿನಂತಿರುತ್ತಿತ್ತು. ಇದರೊಳಗೆ ರಕ್ತಿಯಿಂದ ಇರುವುದು ಒಂದು ಹಂತದ ತನಕ ಸರಿ. ಆದರೆ ಜೀವನವಿಡೀ ಈ ಮೋಹಕ್ಕೆ ಅಂಟಿಕೊಂಡಿದ್ದರೆ ಇದನ್ನೆಲ್ಲಾ ಬಿಟ್ಟು ಹೋಗುವಾಗ ತೀವ್ರ ನೋವು ಮತ್ತು ಸಂಕಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ, ಈ ಮೋಹವೆಂಬುದು ಪರಮಾತ್ಮ ಸೃಷ್ಟಿಯೇ ಆದರೂ ನಮ್ಮ ಹಿರಿಯರು ಸಾಧು ಸಂತರು, ಭಕ್ತ ಶಿಖಾಮಣಿಗಳ ಬೋಧನೆಯು ಮತ್ತು ನಮ್ಮ ವೇದ,ಉಪನಿಷತ್ತುಗಳು, ಪುರಾಣಗಳು, ಹೀಗೆ ಎಲ್ಲವೂ ಈ ಮೋಹವನ್ನು ಬಿಟ್ಟರೆ ಆತ್ಮನಿಗೆ ಸುಖವೆಂದು ಬೋಧಿಸಿದ್ದಾರೆ. ಹಾಗಾಗಿ ಅಶಾಶ್ವತವಾದ ಇಂದ್ರಿಯ ಸುಖಕ್ಕಿಂತ ನಿತ್ಯವಾದ ಸತ್ಯವಾದ ಆತ್ಮಾನಂದ ಬೇಕಾದರೆ ಈ ಮೋಹವನ್ನು ಬಿಡಬೇಕೆಂದು ನಮ್ಮ ಸನಾತನ ಧರ್ಮದ ಅಭಿಪ್ರಾಯ. ಆದರೆ ಈ ಜಗತ್ತಿನಲ್ಲಿ ರಕ್ತಿಯಿಂದಿರುವುದೋ ಅಥವಾ ವಿರಕ್ತಿಯಿಂದಿರುವುದೋ ಎನ್ನುವುದು ಪ್ರತಿಯೊಬ್ಬರ ಸ್ವಂತ ವಿಚಾರಕ್ಕೆ ಬಿಟ್ಟದ್ದು.


ರಸಧಾರೆ - 191

ಪೊಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನು
ತಡಕುವನು; ತನ್ನಾತ್ಮದುಣಿಸ ಮರೆಯುವನು
ಒಡಲಿನಬ್ಬರವೇನು? ಆತುಮದ ನಾಣ್ಚೇನು
ಪೊಡವಿಗೆದೆ ದುಮ್ಮಾನ – ಮಂಕುತಿಮ್ಮ

ಪೊಡೆಯುಣಿಸ = ಪೊಡೆ+ ಉಣಿಸ // ಮಿಗಹಕ್ಕಿಹುಳುಗಳಂದದಿ= ಮಿಗ+ಹಕ್ಕಿ +ಹುಳು+ ಗಳಂದದಿ// ತನ್ನಾತ್ಮದುಣಿಸ = ತನ್ನ+ ಆತ್ಮದ+ಉಣಿಸ// ಒಡಲಿನಬ್ಬರವೇನು = ಒಡಲಿನ + ಅಬ್ಬರವು+ ಅದೇನು // ಪೊಡವಿಗೆದೆ = ಪೋದವಿಗೆ+ ಅದೆ
ಪೊಡೆಯುಣಿಸ = ಹೊಟ್ಟೆಯಾಹಾರ, ನಾಣ್ಚೇನು= ಸಂಕೋಚ// ಒಡಲು = ದೇಹ// ಪೊಡವು = ಹೊಳಪು ಅಥವಾ ತೇಜಸ್ಸು.

ಮನುಷ್ಯನು, ಪ್ರಾಣಿ, ಹಕ್ಕಿ ಹುಳುಗಳ ರೀತಿ ತನ್ನ ಹೊಟ್ಟೆಪಾಡಿಗಾಗಿ ಆಹಾರಕ್ಕಾಗಿ ತಡಕಾಡುತ್ತಾನೆ. ಆದರೆ ಆತ್ಮಕ್ಕೆ ಬೇಕಾದ ಆಹಾರವನ್ನು ಕೊಡಬೇಕಾದ ಆಹಾರವನ್ನು ಕೊಡದೆ, ಅದನ್ನು ಸೊರಗಿಸುತ್ತಿದ್ದಾನೆ. ತೆಜೋರೂಪವಾದ ಆತ್ಮವು ಕಡೆಗಣಿಸಲ್ಪಟ್ಟಿದೆ. ಇದು ತೀರ ದುಃಖದ ವಿಚಾರ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡಿದ್ದಾರೆ.

ಮನುಷ್ಯನನ್ನು ಬಿಟ್ಟು ಬೇರೆ ಎಲ್ಲಾ ಅನ್ಯ ಪ್ರಾಣಿಗಳು, ಕೇವಲ ತಮ್ಮ ಆಹಾರವನ್ನು ಹುಡುಕುವುದು, ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಮತ್ತು ತಮ್ಮ ಸಂತತಿಯನ್ನು ಬೆಳೆಸುವ ಕಾರ್ಯದಲ್ಲಿ ಮಾತ್ರ ನಿರತರು. ಮನುಷ್ಯ ಮಾತ್ರ ಭಿನ್ನವಾಗಿ ಆಧ್ಯಾತ್ಮದ ದಾರಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಪ್ರಯತ್ನ ಪಡುವ ಸಾಮರ್ತ್ಯವನ್ನು ಹೊಂದಿದ್ದಾನೆ. ಅನ್ಯ ಪ್ರಾಣಿಗಳಿಗಿಂತ ಮನುಷ್ಯ ಎಷ್ಟೊಂದು ರೀತಿಯಲ್ಲಿ ಭಿನ್ನ ಎನ್ನುವದು ಸರ್ವರಿಗೂ ವೇಧ್ಯ. ಆ ಕಾರಣಕ್ಕಾಗಿಯೇ ಮನುಷ್ಯ ಬೇರೆ ಪ್ರಾಣಿಗಳಂತೆ ಅಲ್ಲದೆ ಊರ್ಧ್ವಮುಖನಾಗಿದ್ದಾನೆ. “ತಾನು ಆತ್ಮ” ಎಂದು ಅರಿತುಕೊಳ್ಳಲು ಪ್ರಯತ್ನ ಪಡಲು ಅವನಿಗೆ ಸಾಮರ್ತ್ಯವನ್ನು ಪರಮಾತ್ಮ ಕೊಟ್ಟಿದ್ದಾನೆ.

ಆತ್ಮಕ್ಕೆ ದೇಹವಿಲ್ಲದೆ ಇದ್ದರೆ ಅಸ್ಥಿತ್ವವೇ ಇಲ್ಲ. ಅಂದರೆ ಆತ್ಮವು ತನ್ನ ಪೂರ್ವ ಕರ್ಮಗಳನ್ನು ಕಳೆದುಕೊಳ್ಳಲು ಪುನಃ ಜನ್ಮ ಪಡೆದುಕೊಳ್ಳುವುದಕ್ಕೆ ಒಂದು ಕಾಯ ಅಥವಾ ದೇಹದ ಅವಶ್ಯಕತೆ ಇದೆ. ಅತ್ಮೋದ್ಧಾರಕ್ಕೆ ದೇಹ ಒಂದು ಉಪಕರಣವಷ್ಟೇ. ಆದರೆ ಮನುಷ್ಯ ಈ ದೇಹಕ್ಕಷ್ಟೇ ಪ್ರಾಮುಖ್ಯತೆಯನ್ನು ನೀಡಿ ಆತ್ಮಕ್ಕೆ ನೀಡಬೇಕಾದ ಗಮನವನ್ನು ಕೊಡುತ್ತಿಲ್ಲ ಎನ್ನುವುದೇ ವಿಷಾದದ ಸಂಗತಿ.

” ಇದಂ ಶರೀರಂ, ಪರಿಣಾಮ ಪೇಶಲಂ ಪತತ್ಯವಶ್ಯಂ ಶ್ಲಥ ಸಂಧಿ ಜರ್ಜರಂ” ಎಂದು ಕುಲಶೇಖರ ಆಳ್ವಾರರು ಹೇಳುತ್ತಾರೆ. ಎಂದರೆ ಕಾಲದ ಪರಿಣಾಮಗಳಿಗೊಳಗಾಗಿ ಈ ಶರೀರ ಬಿದ್ದು ಹೋಗುವುದು ಖಂಡಿತ ಎಂದು. ಇಂತಹ ದೇಹವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ, ಏನೆಲ್ಲಾ ಸಾಹಸ ಮಾಡುತ್ತಾನೆ ಮನುಷ್ಯ. ಈ ದೇಹಕ್ಕೆ ಎಷ್ಟೊಂದು ಪ್ರಾಮುಖ್ಯತೆ ಎಷ್ಟೊಂದು ರೀತಿಯ ಅಲಂಕಾರ. ಆದರೆ ನಿರಂತರವಾದ, ನಿತ್ಯವಾದ ತನ್ನ ಆತ್ಮವನ್ನು ಕಾಪಾಡಿಕೊಳ್ಳಲು ಆತ್ಮದ ಉನ್ನತಿಗೆ, ಏನನ್ನೂ ಮಾಡುವುದಿಲ್ಲ.

ದೇಹವನ್ನು ಕಾಪಾಡಿಕೊಳ್ಳುವುದು ಅವಶ್ಯ. ಆದರೆ ಅದನ್ನು ಒಂದು ಉಪಕರಣ ಎಂದು ಅರಿತು, ಅದಕ್ಕೆ ಸೀಮಿತ ಪ್ರಾಮುಖ್ಯತೆಯನ್ನು ನೀಡಿ, ದೇಹವನ್ನು ಉಪಯೋಗಿಸಿಕೊಂಡು, ಆತ್ಮವನ್ನು ಅರಿಯಲು ಪ್ರಯತ್ನಪಡಬೇಕು. ಆ ದಾರಿಯಲ್ಲಿ ಮುಂದೆ ಸಾಗಲು ನಮ್ಮ ಪೂರ್ವಜರು ಸಾವಿರಾರು ಮಾರ್ಗಗಳನ್ನು ಸ್ವಾನುಭವದಿಂದ ನಮಗೆ ತೋರಿಸಿದ್ದಾರೆ. ಆದರೆ ನಾವು ಅದನ್ನು ಕಡೆಗಣಿಸಿದ್ದೇವೆ. ಒಂದು ದಿನದ ೨೪ ಗಂಟೆಗಳಲ್ಲಿ ನಮಗೆ ೫ ನಿಮಿಷವೂ ಧ್ಯಾನಮಾಡುವ ಸಮಯವಿರುವುದಿಲ್ಲ. ನಮಗೆ ಸದಾಕಾಲ ನಮ್ಮ ಬಾಹ್ಯವಾದ ಈ ದೇಹ, ಮನಸ್ಸು ಬುದ್ಧಿಗಳ ಮೂಲಕ ಈ ಜಗತ್ತಿನೊಂದಿಗೆ ಸಂಪರ್ಕ, ಜಗತ್ತಿನ ಮೇಲೆ ಅತೀವ ಮೋಹ ಮತ್ತು ಅತೀ ರಸಿಕತೆ. ನಮಗೆ ಬೇಡದೆ ಇರುವ ವಿಷಯವೇ ಇಲ್ಲ. ನಾವು ಸದಾಕಾಲ ಬಾಹ್ಯಮುಖಿಗಳು.ಎಲ್ಲವೂ ತೋರಿಕೆ, ಆಡಂಬರ ಮತ್ತು ಡಂಬಾಚಾರ. ಅಂತರ್ಮುಖಿಗಳಾಗುವುದೇ ಇಲ್ಲ. ಇದರಿಂದ ಸತ್ಯವಾದ ಆನಂದಸ್ವರೂಪಿಯಾದ ಆತ್ಮ ಸಂಕೋಚದಿಂದ ಸೊರಗಿಹೋಗಿದೆ. ” ಆತ್ಮ”!!! ಹಂಗಂದರೇನು? ಎಂದು ಕೇಳುವ ಕಾಲ ಬಂದಿದೆ. ಇದು ವಿಷಾದನೀಯವಲ್ಲವೇ?

ವಾಚಕರೆ, ಈ ದೇಹ ಕೇವಲ ಒಂದು ಉಪಕರಣ.ಅದನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಏಕೆಂದರೆ ಈ ದೇಹದಿಂದಲೇ ಆತ್ಮಕ್ಕೆ ಮುಕ್ತಿ. ಆದ್ದರಿಂದ ಆತ್ಮವನ್ನು ಸೊರಗಲು ಬಿಡಬಾರದು, ಅಂತರ್ಮುಖಿಗಳಾಗಿ ಅದಕ್ಕೂ ಆಗಾಗ ಆಹಾರವನ್ನು ಕೊಡುತ್ತಲೇ ಇರಬೇಕು. ಅಂತಹ ಪ್ರಯತ್ನವನ್ನು ನಾವೆಲ್ಲಾ ಮಾಡೋಣ.


ರಸಧಾರೆ - 192

ದೇವದಾನವರ ರಣರಂಗ ಮಾನವಹೃದಯ
ಭಾವ ರಾಗ ಹಠಂಗಳವರ ಸೇನೆಗಳು
ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು
ಜೀವಾಮೃತವನವರು – ಮಂಕುತಿಮ್ಮ

ಹಠಂಗಳವರ = ಹಠಂಗಳು+ ಅವರ // ಭೂವಿಭವಜಯಗಳ = ಭೂ+ವಿಭವ+ಜಯಗಳ// ಜೀವಾಮೃತವನವರು + ಜೀವಾಮೃತವನು+ಅವರು

ಇಂದಿನ ಸಮಾಜದಲ್ಲಿ ಮಾನವರ ನಡವಳಿಕೆಯನ್ನು ವಿಶ್ಲೇಷನೆಮಾಡುತ್ತಾ, ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ನಡುವಿನ ಯುದ್ಧ ಪ್ರತಿ ಹೃದಯದಲ್ಲೂ ನಡೆದಿದೆ ಮತ್ತು ಜನರೆಲ್ಲಾ, ಭಾವುಕತೆ, ಕೋಪ ಮತ್ತು ಹಠವನ್ನು ಮನಗಳಲ್ಲಿ ತುಂಬಿಕೊಂಡು ಈ ಜಗತ್ತಿನಲ್ಲಿ ವೈಭವದಿಂದ ಜೀವಿಸುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ಜೀವಿಸುತ್ತಾ, ಆತ್ಮದ ವಿಚಾರವನ್ನು ತೊರೆದು, ಅದರಿಂದ ದೊರೆಯುವ ಅಮೃತದ೦ತ ಅನುಭವವನ್ನು ಮರೆತಿದ್ದಾರೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು.

ನಮ್ಮಲ್ಲಿ ವಿಫುಲವಾದ ಪೌರಾಣಿಕ ಸಾಹಿತ್ಯವಿದೆ. ಅದರಲ್ಲೆಲ್ಲಾ ಒಂದು ಸಮಾನವಾದ ವಿಚಾರವಿದೆ. ಕೆಟ್ಟದ್ದರ ಮೇಲೆ ಒಳ್ಳೆಯದಕ್ಕೆ ವಿಜಯ. ಅದನ್ನು ಬರೆದವರು, ಆಯಾ ಕಥೆಗಳ ಪಾತ್ರಗಳ ಮೂಲಕ ಈ ತತ್ವವನ್ನು ಹೇಳಿದ್ದಾರೆ. ಹಾಗೆ ನೋಡಿದರೆ ಅದು ಜಗತ್ತಿನ ಎಲ್ಲ ಮನುಜರ ಕಥೆಯೇ ಎಂದು ಅನ್ನಿಸುತ್ತದೆ. ಎಲ್ಲ ಮಾನವರ ಹೃದಯಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ನಿರಂತರ ತಿಕ್ಕಾಟ ನಡೆದೇ ಇರುತ್ತದೆ. ಪ್ರತೀ ಮನುಷ್ಯನಿಗೂ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವು ಇದ್ದು ಅದೇ ರಾಮ ಮತ್ತು ರಾವಣರ ಪಾತ್ರವನ್ನು ವಹಿಸುತ್ತಿರುತ್ತದೆ. ಗುಣದ ಪ್ರಮಾಣದ ವ್ಯತ್ಯಾಸದಿಂದ ಆ ವ್ಯಕ್ತಿಯನ್ನು ಒಳ್ಳೆಯವನೆಂದೋ ಕೆಟ್ಟವನೆಂದೋ ಕರೆಯಲಾಗುತ್ತದೆ.

ಅಂತಹವರು ಈ ಜಗತ್ತಿನಲ್ಲಿ ತಮ್ಮ ಭಾವುಕತೆ, ಪ್ರೇತಿ ಪ್ರೇಮಗಳು, ದ್ವೇಷಾಸೂಯೆಗಳು, ಕೋಪತಾಪಗಳು, ಹೀಗೆ ಹತ್ತು ಹಲವಾರು ಭಾವನೆಗಳೊಂದಿಗೆ ವೈಭವದಿಂದ ಮೆರೆಯುತ್ತಾರೆ. ತಾವೇನೋ ಇಲ್ಲಿ ಶಾಶ್ವತವಾಗಿ ಇದ್ದುಬಿಡುತ್ತಾರೇನೋ ಎನ್ನುವ ಹಾಗೆ ಮೆರೆಯುತ್ತಾರೆ. ಹಾಗೆ ಮೆರೆಯುವಾಗ ಅವರು ಆತ್ಮಾನುಸಂಧಾನದಿಂದ ದೊರೆಯುವ ನಿಜವಾದ ಮತ್ತು ಶಾಶ್ವತ ಆನಂದವನ್ನು ಪಡೆಯಲು ಮರೆಯುತ್ತಾರೆ. ಹೊರಗಿನ ಭಾವಗಳನ್ನೇ ಒಳಗೂ ತುಂಬಿಕೊಂಡು ಅಂತರ್ಮುಖಿಗಳಾಗಿ ಧ್ಯಾನ ಭಕ್ತಿ ಮತ್ತು ವಿರಕಿಯಿಂದ ದೊರೆಯಬಹುದಾದ ಆನಂದಿಂದ ವಂಚಿತರಾಗಿದ್ದಾರೆ. ಇಂದಿನ ನೂತನ ಜೀವನ ಶೈಲಿಯ ದುರಂತವೇ ಇದು. ಆತ್ಮನ ಮುಂದಿನ ಪ್ರಯಾಣಕ್ಕೆ ಯಾವ ಸಿದ್ಧತೆಯೂ ಇಲ್ಲ. ವಿಪರ್ಯಾಸವೆಂದರೆ, ಪಾಪ ಈ ಆತ್ಮ ತನ್ನ ಮೂಲವನ್ನು ಸೇರುವ ಪ್ರಯಾಣದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟರೆ, ಇಂದಿನ ಜಗತ್ತಿನ ಸಂಪರ್ಕದಿಂದ ಹತ್ತು ಹೆಜ್ಜೆ ಹಿಂದೆ ಬರುತ್ತಿದೆ. ಹೀಗಾದರೆ ಅದು ತನ್ನ ಗಮ್ಯವನ್ನು ಮುಟ್ಟುವುದು ಎಂದೋ!

ವಾಚಕರೆ, ನಾವೂ ಸಹ ಇದರ ಬಗ್ಗೆ ಯೋಚಿಸಿ, ಈ ಜಗತ್ತಿನೊಂದಿಗಿನ ರಕ್ತಿಯನ್ನು ಕಡಿಮೆಯಾಗಿಸಿ, ಆತ್ಮದ ಮುನ್ನಡೆಗೆ ಅಣಿಮಾಡಿಕೊಡಲು, ಪ್ರಯತ್ನಿಸೋಣ.


ರಸಧಾರೆ - 193

ಪರಮೇಷ್ಠಿ ನಿಜಚಾತುರಿಯನಳೆಯೆ ನಿರಮಿಸಿದ
ನೆರಡುಕೈಯಿಂದೆರಡು ಜಂತುಗಳ ಬಳಿಕ
ಇರದೆ ತಾನವನೊಂದುಗೂಡಿಸಲು ಬೆರಗಾಯ್ತು
ನರಿಯು ವಾನರವು ನರ – ಮಂಕುತಿಮ್ಮ.

ನಿಜಚಾತುರಿಯನಳೆಯೆ = ನಿಜ + ಚಾತುರಿಯನು + ಅಳೆಯೆ // ನೆರಡುಕೈಯಿಂದೆರಡು = ಎರಡು + ಕೈಗಳಿಂದ+ ಎರಡು// ತಾನವನೊಂದುಗೂಡಿಸಲು = ತಾನು+ಅವನು + ಒಂದು + ಕೂಡಿಸಲು// ಬೆರಗಾಯ್ತು = ಬೆರಗು + ಆಯ್ತು.

ಪರಮೇಷ್ಠಿ = ಬ್ರಹ್ಮ // ಚಾತುರಿಯನು = ಚಾತುರ್ಯವನು // ಅಳೆಯೆ = ಪರೀಕ್ಷಿಸಲು // ಜಂತು= ಪ್ರಾಣಿ ( ಜೀವಂತಿ ಇತಿ ಜಂತು:) ಬೆರಗು = ಆಶ್ಚರ್ಯ.

ಪರಬ್ರಹ್ಮನು ತನ್ನ ನಿಜವಾದ ಚಾತುರ್ಯವನ್ನು ಪರೀಕ್ಷಿಸಲು ತನ್ನ ಎರಡೂ ಕೈಗಳಿಂದ ಎರಡು ಪ್ರಾಣಿಗಳನ್ನು ಸೃಷ್ಟಿಸಿದನಂತೆ. ಒಂದು ನರಿ, ಇನ್ನೊಂದು ಮಂಗ. ಅವುಗಳನ್ನು ಸೃಷ್ಟಿಸಿದಮೇಲೆ, ಸುಮ್ಮನೆ ಇರದೆ, ಇವೆರಡನ್ನೂ ಒಂದಾಗಿ ಸೇರಿಸಿದನಂತೆ. ಆಶ್ಚರ್ಯವೆಂದರೆ ಅವೆರಡರ ಸಮ್ಮಿಲನದಿಂದ ಉಂಟಾದದ್ದು ನರ( ಮನುಷ್ಯ) ಪ್ರಾಣಿಯಂತೆ, ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ.

ವಿಜ್ಞಾನಿ ಡಾರ್ವಿನ್ನನ ಸಿದ್ಧಾಂತದ ಪ್ರಕಾರ ಮಂಗನಿಂದ ಮಾನವ ಎಂದಿದೆ. ಆ ಸಿದ್ಧಾಂತ ಸರಿಯಲ್ಲ ಎಂದು ಇತ್ತೀಚಿನ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಆದರೆ ನಮ್ಮ ಗುಂಡಪ್ಪನವರು ಒಂದು ವಿಚಿತ್ರವಾದ ವಿಷಯವನ್ನು ನಮ್ಮ ಮುಂದಿಟ್ಟಿದ್ದಾರೆ. ಮನುಷ್ಯ, ನರಿ ಮತ್ತು ಮಂಗನ ಮಿಶ್ರಣದಿಂದ ಆಗಿದ್ದಾನೆ ಎನ್ನುತ್ತಾರೆ. ಮನುಷ್ಯನ ಗುಣಗಳನ್ನು ವಿಶ್ಲೇಷಣೆ ಮಾಡಿ ಅವರು ಬಹುಶಃ ಈ ನಿರ್ಧಾರಕ್ಕೆ ಬಂದಿರಬಹುದು. ಏಕೆಂದರೆ ಮನುಷ್ಯನ ರೂಪ ಏನೇ ಆದರೂ, ಬಣ್ಣ ಏನೇ ಆದರೂ, ಲಿಂಗವೇನೆ ಆದರೂ, ಭಾಷೆ ಯಾವುದೇ ಆದರೂ, ದೇಶವಾವುದೇ ಆದರೂ ಮೂಲ ಗುಣಗಳು ಮಾತ್ರ ಒಂದೇ ಆಗಿವೆ ಎನ್ನುವುದು ಆಶ್ಚರ್ಯವಲ್ಲವೇ?

ಇವನಿಗೆ ಮಂಗ ಬುದ್ಧಿಯೂ ಇದೆ. ನರಿಯಂತೆ ಕುತಂತ್ರಿಯೂ ಹೌದು. ಮನುಷ್ಯನಿಗೆ, ಮಂಗನಂತೆ ಸ್ಥಿರ ಚಿತ್ತವಿಲ್ಲದೇ ನರಿಯಂತೆ ಕುಟಿಲತೆಯಿಂದಲೂ ಕೂಡಿದ್ದಾನೆ. ಮಾನವನ ಮನಸ್ಸು ಒಂದು ಕಡೆ ನಿಲ್ಲುವುದೇ ಇಲ್ಲ. ಮಂಗ ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ನೆಗೆಯುವಂತೆ, ಮನುಷ್ಯನ ಮನಸ್ಸೂ ಸಹ ನಿಮಿಷ ನಿಮಿಷಕ್ಕೂ ವಿಷಯದಿಂದ ವಿಷಯಕ್ಕೆ ಹಾರುತ್ತಿರುತ್ತದೆ. ಒಂದು ಕ್ಷಣವೂ ಸ್ಥಿರ ಚಿತ್ತವಿರುವುದಿಲ್ಲ. ಅಷ್ಟೇ ಅಲ್ಲ, ಇವನಿಗೆ ಮಂಗನನತೆಯೇ ಕುಚೇಷ್ಟೆಯನ್ನೂ ಸಹ ಮಾಡಲು ಬರುತ್ತದೆ. ಚಿಕ್ಕಂದಿನಲ್ಲಿ ಇದು ಹೆಚ್ಚು. ” ಮಗನನ್ನು ಕೊಡು ಎಂದರೆ, ದೇವರೇ ಮಧ್ಯದಲ್ಲಿ ಒಂದು ಸೊನ್ನೆಯನ್ನೂ ಇಟ್ಟು ಕೊಟ್ಟಿದ್ದೀಯಲ್ಲಾ” ಎಂದು, ನಮ್ಮಜ್ಜಿ ಹೇಳುತ್ತಿದ್ದರು, ಆದರೆ ವಯಸ್ಸಾದಂತೆ ಈ ಮಂಗ ಚೇಷ್ಟೆಗಳು ಕಡಿಮೆಯಾದರೂ ಮಂಗ ಬುಧ್ಧಿ ಕಡಿಮೆಯಾಗುವುದೇ ಇಲ್ಲ.

ಇನ್ನು ನರಿಯೋ ಪ್ರಾಣಿಗಳಲ್ಲೇ ಹೆಚ್ಚು ಬುದ್ಧಿವಂತ ಪ್ರಾಣಿ ಎಂದು ಹೆಸರು ಗಳಿಸಿದೆ. ಕುಟಿಲತೆಗೆ ಪ್ರಖ್ಯಾತಿ. ಮನುಷ್ಯನೂ ಸಹ ಆ ನರಿಯ ಬುದ್ಧಿಯನ್ನು ಹೊಂದಿದ್ದಾನೆ. ತನಗೇನು ಬೇಕೋ ಅದನ್ನು ಪಡೆದುಕೊಳ್ಳಲು ಎಲ್ಲ ರೀತಿಯ ಉಪಾಯಗಳನ್ನೂ ಮಾಡಿ ಪರರಿಂದ, ಬೇಡಿಯೋ, ಕದ್ದೋ, ಕಸಿದೋ , ವಂಚಿಸಿಯೋ, ಪಡೆದುಕೊಂಡು ಬಿಡುತ್ತಾನೆ. ಒಂದು ಕಾಗೆಯನ್ನು ವಂಚಿಸಿ ಅದರ ಬಾಯಲ್ಲಿನ ಮಾಂಸದ ತುಂಡನ್ನು ಕಸಿದ ನರಿಯ ಕತೆಯನ್ನು ನೀವೆಲ್ಲ ಓದಿರುತ್ತೀರಿ. ತೇಟ್, ಹಾಗೆಯೇ ಮನುಷ್ಯನ ಬುದ್ಧಿಯೂ. ತನ್ನ ಕಾರ್ಯ ಸಾಧನೆಗೆ ಯಾವ ಹಂತಕ್ಕೆ ಬೇಕಾದರೂ ಇಳಿದು ಬಿಡುತ್ತಾನೆ. ಎಲ್ಲ ಮಾನವರೂ ಹಾಗೆಯೇ ಎಂದಲ್ಲ. ಪ್ರಸಕ್ತ ಸಮಾಜದಲ್ಲಿ ದುಡ್ಡಿಗೆ ಹೆಚ್ಚುಮಹತ್ವವಿರುವ ಕಾಲದಲ್ಲಿ, ಅಸ್ಥಿತ್ವಕ್ಕೆ ತೀವ್ರ ಪೈಪೋಟಿಯ ಕಾಲದಲ್ಲಿ ಮನುಷ್ಯ ಈ ನರಿ ಬುದ್ಧಿಯನ್ನು ಅತಿಯಾಗಿ ಉಪಯೋಗಿಸುತ್ತಾನೆ. ಹಾಗಾಗಿ ಗುಂಡಪ್ಪನವರು, ಮನುಷ್ಯ ಮಂಗ ಮತ್ತು ನರಿಯ ಮಿಶ್ರಣ ಎಂದು ಸೂಕ್ತವಾಗೆ ಹೇಳಿದ್ದಾರೆ.

ಆದರೆ, ವಾಚಕರೆ ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಾವು ಮನುಷ್ಯರು. ಮಾನವತೆಯಿಂದ ಬಾಳಬೇಕಾದವರು. ನಾವು ನಮ್ಮಲ್ಲಿರುವ ಮಂಗನ ಚಂಚಲ ಬುದ್ಧಿಯನ್ನು ಮತ್ತು ನರಿಯ ಕುಟಿಲತೆಯನ್ನೂ ತೊರೆದು ಕೇವಲ ಮಾನವರಾಗಿ ಉಳಿಯಬೇಕು. ” ಬದುಕು-ಬದುಕಲು ಬಿಡು ” ಎನ್ನುವ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರೂ ಸಂತೋಷದಿಂದ ಸೌಹಾರ್ಧತೆಯಿಂದ ಇರಬಹುದು ಎನ್ನವುದು ನನ್ನ ಅಭಿಪ್ರಾಯ. ನೀವೂ ಸಹ ಒಪ್ಪುತ್ತೀರಲ್ಲವೇ?


ರಸಧಾರೆ - 194

ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು?
ಅಂತರಗಭೀರಗಳ ತಾನೆ ಕಂಡವನಾರ್?
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ
ಸ್ವಂತಕೇ ದುರ್ದರ್ಶ- ಮಂಕುತಿಮ್ಮ

ಅಂತರಂಗವನೆಲ್ಲ = ಅಂತರಂಗವನ್ನು+ ಎಲ್ಲ // ತೋರಿಪನಾರು = ತೋರಿಪನು+ ಯಾರು

ತಮ್ಮ ತಮ್ಮ ಅಂತರಂಗದಲ್ಲಿ ಏನಿದೆ ಎಂದು ತೋರುವವರು ಯಾರು ಅಥವಾ ಒಳಗಿರುವ ಗಂಭೀರತೆಯನ್ನು ಕಂಡವರಾರು, ವಿಚಾರ ಮತ್ತು ವಿಷಯಗಳು ಮನಸ್ಸಿನ ಮಡಿಕೆ ಮಡಿಕೆಗಳಲ್ಲಿ ತಿರುವು ತಿರುವುಗಳಲ್ಲಿ ಗಂಟು ಗಂಟುಗಳಾಗಿ ಸೇರಿಕೊಂಡುಬಿಟ್ಟಿದೆ. ನಮ್ಮ ಮನದಾಳದಲ್ಲಿರುವುದು ನಮ್ಮ ಅನುಭವಕ್ಕೇ ಬರುವುದು ಕಷ್ಟವಾಗಿದೆ, ಎಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಅಂತರಂಗದ ಆಳ ಬಹಳ ಅಗಾಧವಾಗಿದೆ. ಒಂದು ಸಮುದ್ರವೆಷ್ಟು ದೊಡ್ಡದೋ ಅಷ್ಟೇ ದೊಡ್ಡದಿರಬಹುದು ಅದರ ಆಳ ಮತ್ತು ವಿಸ್ತಾರ. ನಾವು ಅನ್ಯರಿಗೆ ನಮ್ಮ ಅಂತರಂಗವನ್ನು ಸಂಪೂರ್ಣವಾಗಿ ತೋರುವುದು ಸಾಧ್ಯವಿಲ್ಲ. ಒಂದೇ ಕ್ಷಣದಲ್ಲಿ ನಮ್ಮ ಮನಸ್ಸಿನಲ್ಲಿ ಹತ್ತು ಹಲವಾರು ವಿಚಾರಗಳು, ಆಲೋಚನೆಗಳು ತೆರೆ ತೆರೆಯಾಗಿ ಬಂದು ಹೋಗುತ್ತವಲ್ಲವೇ. ಇವೆಲ್ಲ ಒಳಗೇ ಇದ್ದು ಆಗಾಗ ಸಮುದ್ರದ ಅಲೆಗಳಂತೆ ಏರುತ್ತವೆ ಮತ್ತು ಇಳಿಯುತ್ತವೆ.ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಸಂಪರ್ಕದಿಂದ ಹೊಸದಾಗಿ ಎಷ್ಟೆಷ್ಟೋ ವಿಚಾರಗಳು ನಮ್ಮ ಮನಸ್ಸಿನೊಳಕ್ಕೆ ನುಗ್ಗುತ್ತಲೇ ಇರುತ್ತವೆ. ಹಲವು ಸ್ವಲ್ಪ ಕಾಲ ಇದ್ದು ಮರೆಯಾಗುತ್ತವೆ, ಮತ್ತೆ ಕೆಲವು ಮನಸ್ಸಿನ ಆಳದಲ್ಲಿ ಹೋಗಿ ಕುಳಿತುಬಿಡುತ್ತವೆ. ಕೆಲವು ವಿಷಯಗಳು ಶಾಶ್ವತವಾಗಿ ಅಳಿಸಿಹೊಗಿರುತ್ತವೆ. ಯಾವುದೋ ಒಂದು ವಿಚಾರ ನಮ್ಮ ಮನಸ್ಸಿಗೆ ಏಕೆ ಬಂತು ಎಂದು ಹೇಳುವುದು ಬಹಳ ಕಷ್ಟದ ಕೆಲಸ.

ಅಷ್ಟೇ ಅಲ್ಲ ಯಾವ ವಿಚಾರ ಒಳಗೆ ಬರಬೇಕು ಯಾವುದು ಬರಬಾರದು ಎಂದು ಸಾಮಾನ್ಯವಾಗಿ ನಾವು ನಿರ್ಧರಿಸಲಾಗುವುದಿಲ್ಲ ಮತ್ತು ವಿಚಾರಗಳು ನಮ್ಮ ಮನಸ್ಸಿನೊಳಕ್ಕೆ ನುಗ್ಗುವುದನ್ನು ನಾವು ನಿಯಂತ್ರಿಸಲೂ ಆಗುವುದಿಲ್ಲ.

ನಮ್ಮ ಅಂತರಂಗದ ಭಾವ ನಮಗೇ ಅರ್ಥವಾಗುವುದು ಕಷ್ಟ. ಹಾಗಂದಮೇಲೆ ಅನ್ಯರು ಅದನ್ನು ಕಾಣಲಾಗುವುದೇ. ನಾವು ಅದನ್ನು ಎಷ್ಟೇ ವಿವರಿಸಲು ಪ್ರಯತ್ನಿಸಿದರೂ ಪರರಿಗೆ ಅದು ವೇದ್ಯವಾಗುವುದಿಲ್ಲ.ಏಕೆಂದರೆ ಮಾನ್ಯ ಗುಂಡಪ್ಪನವರು ಹೇಳಿದ ಹಾಗೆ, ಅವು ನಮ್ಮ ಮನಸ್ಸಿನ ಪದರ ಪದರಗಳಲ್ಲಿ ಒಳಹೊಕ್ಕು ಗಂಟು ಗಂಟಾಗಿ, ಗೋಜಲು ಗೋಜಲಾಗಿ, ಸುರುಳಿ ಸುರುಳಿಯಾಗಿ ಸೇರಿಕೊಂಡುಬಿಟ್ಟಿರುತ್ತೆ. ಎಲ್ಲ ರೀತಿಯ ಭಾವಗಳು, ಯೋಚನೆಗಳು, ಚಿಂತೆ, ಚಿಂತನೆಗಳು, ಹೀಗೇ ಸಾವಿರ ಸಾವಿರ ವಿಷಯಗಳು ಮನಸ್ಸಿನ ಅಂತರ್ಯದಲ್ಲಿ ತುಂಬಿಕೊಂಡಿರುತ್ತದೆ. ಆದರೆ ಈ ಯೋಚನೆಗಳು ಸುಮ್ಮನೆ ಬಂದು ಹೋದರೆ ಚಿಂತೆಯಿಲ್ಲ. ಆದರೆ ಅವು ನಮ್ಮನ್ನು ಅಲುಗಾಡಿಸಿ , ನಮ್ಮ ಜೀವನವನ್ನು ಕ್ಲಿಷ್ಟತೆಗೆ ತಳ್ಳಿದರೆ ಅದು ಕಷ್ಟದ ವಿಚಾರ. ಎಲ್ಲಿಯತನಕ ನಾವು ಅವುಗಳಿಗೆ ಅಂಟದೆ ಇರುತ್ತೇವೆಯೋ ಅಲ್ಲಿಯತನಕ ಒಳ್ಳೆಯದು.

ವಾಚಕರೆ ಮನಸ್ಸನ್ನು ವಿಶ್ಲೇಷಣೆ ಮಾಡುವುದು ಸುಲಭವಲ್ಲ. ಅದನ್ನೇ ಮಾನ್ಯ ಗುಂಡಪ್ಪನವರು ” .ಸ್ವಂತಕೇ ದುರ್ದರ್ಶ” ಎಂದರು.ಆದರೂ ನಮ್ಮ ನಮ್ಮ ಪರಿಮಿತ ಮತಿಯ ಮಿತಿಯಲ್ಲಿ ನಮ್ಮ ನಮ್ಮ ಮನಸ್ಸುಗಳನ್ನು ತಹಬಂದಿಯಲ್ಲಿಟ್ಟುಕೊಂಡರೆ ಸುಖ.


ರಸಧಾರೆ - 195

ಮೊಗ ನಾಲ್ಕು ನರನಿಗಂತೆಯೇ ನಾರಿಗಂ ಬಗೆಯೆ
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು
ಸೊಗಸಿನೆಳಸಿಕೆಗೊಂದು, ತನ್ನಾತ್ಮಕಿನ್ನೊಂದು
ಬಗೆಯೆಷ್ಟೊ ಮೊಗವೆಷ್ಟು – ಮಂಕುತಿಮ್ಮ

ನರನಿಗಂತೆಯೇ = ನರನಿಗು+ಅಂತೆಯೇ // ಕಾಣಿಪುದೊಂದು = ಕಾಣಿಪುದು + ಒಂದು // ಸೊಗಸಿನೆಳಸಿಕೆಗೊಂದು = ಸೊಗಸಿನ+ಎಳಸಿಕೆಗೆ+ಒಂದು//

ತನ್ನಾತ್ಮಕಿನ್ನೊಂದು = ತನ್ನಾತ್ಮಕೆ + ಇನ್ನೊಂದು.

ನರನಿಗೆ, ನಾರಿಯನ್ನೂ ಸೇರಿ, ನಾಲ್ಕು ರೀತಿಯ ಮುಖಗಳಂತೆ. ಜಗತ್ತಿಗೆ ತೋರಲು ಒಂದು, ಮನೆಯಲ್ಲಿರುವ ಜನಗಳಿಗೆ ಒಂದು, ತನ್ನನ್ನು ತಾನಿ ನೋಡಿಕೊಳ್ಳುವುದಕ್ಕೆ ಒಂದು ಮುಖ ಮತ್ತು ಕಡೆಯದಾಗಿ ಅನ್ತಾರತ್ಮದ ಮುಖ. ಹೀಗೆ ಮನುಷ್ಯನಿಗೆ ಹಲವಾರು ಮುಖವಾಡಗಳು ಇರುತ್ತವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ.

ಪ್ರತಿ ಮನುಷ್ಯನೂ ತನ್ನನ್ನು ತಾನು ತೋರಿಸಿಕೊಳ್ಳುವುದಕ್ಕೆ ಅವನ ಅಂತರಂಗದ ವ್ಯಕ್ತಿತ್ವಕ್ಕಿಂತ ಭಿನ್ನವಾದ ಮುಖವನ್ನು ಜಗತ್ತಿಗೆ ತೋರುತ್ತಿರುತ್ತಾನೆ. ಕಾರಣಗಳು ಹಲವಾರು ಇರಬಹುದು. ತಾನು ಏನು ಎಂಬುದನ್ನು ಜಗಕ್ಕೆ ತೋರುವ ಬಯಕೆ, ಅವಶ್ಯಕತೆ ಮತ್ತು ಅನಿವಾರ್ಯತೆಗಳಿಗಾಗಿ ಜಗವು ಮೆಚ್ಚುವಂತಹ ಮುಖವಾಡವನ್ನು ಹಾಕಿಕೊಳ್ಳುತ್ತಾನೆ ಅಥವಾ ಜಗವನ್ನು ಮೆಚ್ಚಿಸಲು ಪ್ರಯತ್ನ ಪಡುತ್ತಾನೆ. ಬಹಳಷ್ಟು ಬಾರಿ ತಾನು ಏನು ಅಲ್ಲವೋ ಅದನ್ನೇ ತೋರುತ್ತಿರುತ್ತಾನೆ. ಉದಾ! ನಮ್ಮ ರಾಜಕಾರಣಿಗಳನ್ನೇ ನೋಡೋಣ. ಪ್ರತಿಯೊಬ್ಬನೂ “ಸಮಾಜ ಸೇವಕನ” ಮುಖವಾಡವನ್ನು ಧರಿಸುತ್ತಾನೆ, ಅಲ್ಲವೇ. ಇದು ಮೊದಲನೆಯ ಮುಖ.

ಇನ್ನು ತನ್ನ ಮನೆಯವರಿಗೆ ತೋರುವ ಮುಖ. ಸಂಸಾರವನ್ನು ಕಟ್ಟಿಕೊಂಡಮೇಲೆ ತನ್ನ ಮನೆಯವರನ್ನು ನೋಡಿಕೊಳ್ಳುವ , ಕಾಪಾಡುವ ಜವಾಬ್ದಾರಿಯನ್ನು ಹೆಗಲಿಗೇರಿಸಿ ಕೊಂಡಿರುತ್ತಾನೆ(ಳೆ). ಸಾಮಾನ್ಯವಾಗಿ ಕೊರತೆಗಳ ನಡುವೆಯೇ ಜೀವನವನ್ನು ಸಾಗಿಸಬೇಕಾದ ಅನಿವಾರ್ಯತೆಯಿಂದ, ತನ್ನ ಮನೆಯ ಸದಸ್ಯರನೆಲ್ಲರನ್ನೂ ಮೆಚ್ಚಿಸುವುದಕ್ಕಾಗಿ ಎಲ್ಲವೂ ಸಮರ್ಪಕವಾಗಿದೆ( ಇರದಿದ್ದರೂ) ಎನ್ನುವ ಒಂದು ಮುಖವನ್ನು ಸದಾ ಧರಿಸಿರುತ್ತಾನೆ. ಇದು ಎರಡನೆಯ ಮುಖ.

ಇನ್ನು ತನ್ನನ್ನು ತಾನೇ ನೋಡಿಕೊಳ್ಳುವ ಮುಖ. ತಾನೇನು, ತನ್ನ ಕೊರತೆಗಳು, ಸುಗುಣಗಳು, ದುರ್ಗುಣಗಳು, ಆಲೋಚನೆಗಳ ಶುದ್ಧತೆ ಮತ್ತು ಅಶುದ್ದತೆ ಯಾವ ಮಟ್ಟದಲ್ಲಿ ಇವೆ ಎನ್ನುವ ಸತ್ಯದ ಅರಿವು ಪ್ರತಿಯೊಬ್ಬರಿಗೂ ಇರುತ್ತದೆ. ಅಂತರಂಗದಲ್ಲಿ ಅದನ್ನು ಒಪ್ಪಿಕೊಂಡರೂ, ತಾನು ಅದನ್ನು ಹೊರಗೆ ತೋರಿದರೆ ತನ್ನ ಅಸ್ಥಿತ್ವಕ್ಕೇ ಧಕ್ಕೆ ಬರುತ್ತದೆಂಬ ಅರಿವೂ ಇರುತ್ತದೆ. ಇದು ತನ್ನ ಬಗ್ಗೆ ತನಗಿರುವ ಶುದ್ಧ ಅರಿವಿನ ಅಂತರಂಗದ ಮುಖ. ಇದು ಮೂರನೆಯ ಮುಖ.

ಪ್ರತಿ ಜೀವಿಯೂ ಅಧ್ಯಾತ್ಮ ಪ್ರಯಾಣದ ಯಾವುದೋ ಒಂದು ಹಂತದಲ್ಲಿ ಇರುತ್ತಾನೆ. ಪ್ರತಿ ಜೀವಿಗೂ ಅವನ ಜೀವನದ ಯಾವುದಾದರೂ ಸಮಯದಲ್ಲಿ ಈ ಜಗತ್ತಿನ ನಶ್ವರತೆಯ ಒಂದು ಆಯಾಮ ಗೋಚರಿಸುತ್ತದೆ.ಈ ಭಾವ ನಿರಂತರವಾಗಲ್ಲದಿದ್ದರೂ ಆಗಾಗ ಬಂದು ಹೋಗುವ ಭಾವವಾಗಿರಬಹುದು. ಆ ಸಮಯದಲ್ಲಿ ” ಅಯ್ಯೋ ಈ ಜಗತ್ತು ನಶ್ವರ, ನನ್ನ ಜೀವನ ಎಂದಿದ್ದರೂ ಕೊನೆಯಾಗಲೇ ಬೇಕು, ಒಂದು ದಿವಸ ಎಲ್ಲ ಬಿಟ್ಟು ಹೋಗಲೇ ಬೇಕು” ಎನ್ನುವ ಭಾವ ಬಂದು ಹೋಗಿರಬಹುದು. ಆ ಸಮಯದಲ್ಲಿ ಆ ವ್ಯಕ್ತಿ ಪರಮಾತ್ಮನನ್ನು ಅಂತರಂಗದಲ್ಲಿ ನೋಡುವ ಮುಖವನ್ನು ಹೊಂದಿರುತ್ತಾನೆ. ಇದು ನಾಲ್ಕನೆಯದು.

ಹೀಗೆ ಗುಂಡಪ್ಪನವರು ಹೇಳುವಂತೆ ಮನುಷ್ಯನಿಗೆ ನಾಲ್ಕು ಮುಖಗಳು.ವಾಸ್ತವ ಬದುಕಿನಲ್ಲಿ ಇವುಗಳ ಅನಿವಾರ್ಯತೆ ಎಲ್ಲರಿಗೂ ಗೊತ್ತಿರುವುದೇ. ಆದರೆ ಪ್ರಸಕ್ತ ಸಮಾಜದಲ್ಲಿ ಇನ್ನೂ ಹತ್ತು ಹಲವಾರು ಮುಖವಾಡಗಳನ್ನು ಧರಿಸಿ ಈ ಜಗತ್ತಿನಲ್ಲಿ ಮನುಷ್ಯ ತನ್ನ ಸ್ವಾರ್ಥ ಸಾಧನೆಯನ್ನು ಮಾಡುತ್ತಿದ್ದಾನೆ. ಇವನಿಗೆ ರಾವಣನಂತೆ ಹತ್ತೇನು, ತಲೆಗಳು ಮತ್ತು ಮುಖಗಳು, ಅದಕ್ಕೂ ಹೆಚ್ಚಿರಬಹುದು. ನಮಗೆ ಎಷ್ಟು ಮುಖಗಳಿವೆ ಎಂದು ನಾವು ಆತ್ಮಾವಲೋಕನ ಮಾಡಿಕೊಂಡು ನಮಗಿರುವ ಮುಖವಾಡಗಳನ್ನು ಕಳಚಿದರೆ, ಮನಸ್ಸಿನ ಕ್ಲಿಷ್ಟತೆ ಕಡಿಮೆಯಾಗಬಹುದು.


ರಸಧಾರೆ - 196

ಮನುಜಲೋಕವಿಕಾರಗಳನು ನೀನಳಿಸುವೊಡೆ
ಮನಕೊಂದು ದರ್ಪಣವ ನಿರವಿಸೆಂತಾನುಂ
ಅನುಭವಿಪರವರಂದು ತಮ್ಮಂತರಂಗಗಳ
ಅನುಪಮಾಸಹ್ಯಗಳ – ಮಂಕುತಿಮ್ಮ

ಮನುಜಲೋಕವಿಕಾರಗಳನು = ಮನುಜಲೋಕ + ವಿಕಾರಗಳನು// ನೀನಳಿಸುವೊಡೆ = ನೀನ್+ಅಳಿಸು+ಒಡೆ// ನಿರವಿಸೆಂತಾನುಂ = ನಿರವಿಸೆ+ ಎಂತಾನುಂ // ಅನುಭವಿಪರವರಂದು = ಅನುಭವಿಪರ್ +ಅವರ್ +ಅಂದು//

ತಮ್ಮಂತರಂಗಗಳ = ತಮ್ಮ + ಅಂತರಂಗಗಳ // ಅನುಪಮಾಸಹ್ಯಗಳ = ಅನುಪಮ+ ಅಸಹ್ಯಗಳ.
ನಿರವಿಸೆ = ನಿರ್ಮಿಸೆ// ಎಂತಾನುಂ = ಹೇಗಾದರೂ

ಮನುಜರ ಮನಸ್ಸುಗಳಲ್ಲಿರುವ ವಿಕಾರಗಳನ್ನು ಅಳಿಸಿಹಾಕಿ ಅವರಲ್ಲಿ ನಿರ್ಮಲ ಮನೋ ಪ್ರವೃತ್ತಿಯನ್ನು ಉಂಟು ಮಾಡಲು ಪ್ರಯತ್ನಿಸಿ, ಆ ಮನಸ್ಸು ತನ್ನನ್ನು ತಾನೇ ನೋಡಿಕೊಳ್ಳುವಂಥಾ ಒಂದು ಕನ್ನಡಿಯನ್ನು ತಯಾರಿಸಿದರೆ, ಆಗ ಅವರುಗಳು ತಮ್ಮ ತಮ್ಮ ಮನಸ್ಸಿನ ಭಾವನೆಗಳನ್ನು ನೋಡಿಕೊಂಡರೆ, ಅಂತರಂಗದಲ್ಲಿ ಹುದುಗಿರುವ ಹೋಲಿಸಲಾಗದಷ್ಟು ಅಸಹ್ಯಕರವಾದ ಭಾವನೆಗಳನ್ನು ಅನುಭವಿಸುತ್ತಾರೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಪ್ರತಿಯೊಬ್ಬರೂ ಒಪ್ಪಲೇಬೇಕಾದ ವಿಷಯವೆಂದರೆ, ನಮ್ಮ ನಮ್ಮ ಮನಸ್ಸುಗಳೊಳಗೆ ಯಾರಿಗೂ ಹೇಳಲಾರದಂತಾ ವಿಷಯಗಳೆಷ್ಟೋ ಅಡಗಿವೆ. ನಮ್ಮನ್ನು ಆ ವಿಷಯಗಳು ಆಗಾಗ ಒಂದು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ನಮ್ಮಲ್ಲಿರುವ ಒಳ್ಳೆಯ ಭಾವಗಳನ್ನು ಮತ್ತು ನಾವು ಮಾಡಿದ ಒಳ್ಳೆಯ ಕಾರ್ಯಗಳನ್ನು ನಾವು ಬಚ್ಚಿಟ್ಟುಕೊಳ್ಳದೆ, ಎಲ್ಲರಿಗೂ ಸಾರುತ್ತೇವೆ. ಅನ್ಯರ ಗಮನ ಮತ್ತು ಪ್ರಶಂಸೆಯನ್ನು ಗಳಿಸುವುದಕ್ಕೋಸ್ಕರ. ಆದರೆ ನಾವು ಹೇಳಿದ ಸುಳ್ಳನ್ನೋ, ಮಾಡಿದ ಕಳ್ಳತನವನ್ನೋ, ಪ್ರದರ್ಶಿಸಿದ ಕಪಟವನ್ನೋ, ನಮ್ಮ ಮನಸ್ಸಲ್ಲಿ ಬಂದ ಒಂದು ನೀಚ ಆಲೋಚನೆಯನ್ನೋ ಯಾರಿಗೂ ಹೇಳುವುದಿಲ್ಲ. ಅವುಗಳನ್ನು,ನಮ್ಮನ್ನು ಕಟ್ಟಿಕೊಂಡವರಲ್ಲೋ, ನಮ್ಮನ್ನು ಹೆತ್ತವರಲ್ಲೋ, ನಾವು ಹೆತ್ತವರಲ್ಲೋ, ಹೀಗೆ ನಮಗೆ ಬಹಳ ಆಪ್ತರು ಎಂದು ಅನ್ನಿಸಿಕೊಳ್ಳುವರಲ್ಲೂ, ಹಂಚಿಕೊಳ್ಳುವುದಿಲ್ಲ. ಏಕೆಂದರೆ ನಾವು ಸದಾಕಾಲ ನಮ್ಮ ಶುದ್ಧ ಬಿಂಬವನ್ನು ಪ್ರದರ್ಶಿಸುವುದರಲ್ಲೇ ಆಸಕ್ತರು. ಇದನ್ನು ಬಹಿರಂಗವಾಗಲ್ಲದಿದ್ದರೂ ಕಡೆಯ ಪಕ್ಷ ಅಂತರಂಗದಲ್ಲಿಯಾದರೂ, ಎಲ್ಲರೂ ಸಮ್ಮತಿಸುವ ವಿಷಯವಲ್ಲವೇ.?

ಈ ರೀತಿಯ ಮಾನಸಿಕ ವಿಕಾರಗಳನ್ನು ನಮ್ಮ ನಮ್ಮ ಮನಸ್ಸುಗಳಿಂದ ಅಳಿಸಿಹಾಕಲು ಪ್ರಯತ್ನಪಟ್ಟು ಮನದೊಳಗೆ ಅಡಗಿರುವ ವಿಚಾರಗಳನ್ನು ನೋಡಿಕೊಳ್ಳಲು ಒಂದು ಕನ್ನಡಿಯನ್ನೇನಾದರೂ ನಿರ್ಮಿಸದರೆ, ನಮಗಲ್ಲಿ ಕಾಣುವುದು ಕೇವಲ ಇಂತಹ ಕುವಿಚಾರಗಳೇ ಹೊರತು ಬೇರಲ್ಲ. ಅದನ್ನು ಕಂಡು ನಾವು ನಮ್ಮ ಅಂತರಂಗದಲ್ಲಿ ನಾವೇ ಅಸಹ್ಯಪಡುವಂಥಾ ಯಾತನಾ ಭಾವವನ್ನು ಅನುಭವಿಸಬೇಕಾಗುವುದು. ನಮ್ಮ ಮನದ ಆಳದಲ್ಲಿ ಅಡಗಿ ಕುಳಿತಿರುವ ಅಂತಹ ವಿಚಾರಗಳನ್ನು ಅರಿತು, ನಮಗೆ ನಾವೇ ಅಸಹ್ಯಪಟ್ಟುಕೊಳ್ಳುವ, ಭಾವ ನಮಗೆ ಬರುತ್ತದೆ ಅಲ್ಲವೇ?

ಆದರೆ ಪ್ರಶೆ ಏನೆಂದರೆ, ನಮ್ಮ ನಮ್ಮ ಮನಸ್ಸುಗಳಲ್ಲಿ ಆ ರೀತಿಯ ಭಾವಗಳು ಸರಿಯೇ? ತಪ್ಪೇ? ಸಹಜವೇ? ಅಸಹಜವೇ? ಎಂದು ಒಂದು ಕ್ಷಣ ಯೋಚಿಸಿದಾಗ, ನನಗೆ ತೋರುವುದು ಹೀಗೆ. ಈ ರೀತಿಯ ಆಲೋಚನೆಗಳು ಬಹಳ ಸಹಜ. ಅವೆಲ್ಲ ಒಂದೇ ಬಾರಿಗೆ, ಕಾರಣವಿಲ್ಲದೆ ಬಂದು ನಮ್ಮ ಮನಸ್ಸಿನಲ್ಲಿ ಕೂರುವಂಥಾ ವಿಚಾರಗಳಲ್ಲ. ಪೂರ್ವ ಕರ್ಮ, ಪ್ರಸ್ತುತ ಸಂಸ್ಕಾರಗಳು, ನಮ್ಮ ಸಂಗಗಳು, ನಮ್ಮ ವಿದ್ಯೆ, ನಮ್ಮ ಪರಿಸರ, ಹೀಗೆ ಹತ್ತು ಹಲವಾರು ಕಾರಣಗಳಿಂದ ನಮಗೆ ಈ ರೀತಿಯ ಆಲೋಚನೆಗಳು ಬರುತ್ತವೆ ಮತ್ತು ಬಂದ ವಿಚಾರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಇದು ಬಹಳ ಸಹಜವಾಗಿ ಆಗುವ ಪ್ರಕ್ರಿಯೆ. ನಮ್ಮ ಮನಸ್ಸಿನಲ್ಲಿ ಕೆಟ್ಟ ಅಥವಾ ನೀಚ ಆಲೋಚನೆಗಳಿವೆ ಎಂದಾಕ್ಷಣ ನಾವು ಕೊರಗಿ ಕುಗ್ಗಬೇಕಾಗಿಲ್ಲ. ಅದನ್ನು ಈ ದರ್ಪಣದಲ್ಲಿ ನೋಡಿಕೊಳ್ಳುವ ಧೈರ್ಯ ಮತ್ತು ನೋಡಿಕೊಂಡಾಗ ಅದರ ಅರಿವು, ನಮಗೆ ಆಗುತ್ತದಲ್ಲ ಅದೇ ಒಂದು ಸಾಧನೆ. ಅದು ಸರಿಯಲ್ಲ ಎಂದು ನಾವು ಒಪ್ಪಿಕೊಳ್ಳುವುದು ಮತ್ತೊಂದು ಸಾಧನೆ. ಅದನ್ನು ಅಳಿಸುವ ಮತ್ತು ಪುನಃ ಅಂತಹ ಆಲೋಚನೆಗಳು ಮತ್ತು ವಿಚಾರಗಳು ನಮ್ಮ ಮನದಲ್ಲಿ ನುಸುಳದ ಹಾಗೆ ಎಚ್ಚರ ವಹಿಸುವುದು ಒಂದು ಉತ್ತಮ ಸಾಧನೆ. ಹಾಗೆ ಅವುಗಳನ್ನು ತಡೆದು ನಮ್ಮ ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಳ್ಳಲು ನಾವು ಯಶಸ್ವಿಯಾದರೆ ಅದು ಬೃಹತ್ ಸಾಧನೆ !!!

ವಾಚಕರೆ ನಾವೂ ಸಹ ನಮ್ಮ ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಳ್ಳುವ ಪ್ರಯತ್ನ ಪಡೋಣವೇ?


ರಸಧಾರೆ - 197

ಕನಲ್ದ ಹುಲಿ ಕೆರಳ್ದ ಹರಿ ಮುಳ್ಕರಡಿ ಛಲನಾಗ
ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ
ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ
ವಣಗಿಹುವು ನರಮನದಿ – ಮಂಕುತಿಮ್ಮ

ಚೇಷ್ಟೆಗಳೆಲ್ಲವಣಗಿಹುವು = ಚೇಷ್ಟೆಗಳೆಲ್ಲವು + ಅಣಗಿಹವು

ಕೋಪಗೊಂಡ ಹುಲಿ, ಕೆರಳಿದ ಸಿಂಹ, ಮುಳ್ಳಿನ ಕರಡಿ, ಛಲ ಹಿಡಿದ ನಾಗರಹಾವು, ಚೇಷ್ಟೆಯ ಕಪಿ, ಬೇಟೆಯಾಡುವ ಸೀಳು ನಾಯಿ ಮೊದಲಾದ ಮೃಗಗಳ೦ತೆ ಹೋರಾಡುವ ಮುಖವಾಡ ಹೊತ್ತು ಘೋರವಾದ ದುಷ್ಟತೆಯಿಂದ ಕೂಡಿದ ಚೇಷ್ಟೆಗಳೆಲ್ಲ ಈ ಮಾನವನ ಮನಸ್ಸಿನಲ್ಲಿ ಅಡಗಿವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಒಬ್ಬ ಮನುಷ್ಯ ಮಾನವ ಜನ್ಮವನ್ನು ತಳೆಯುವ ಮೊದಲು ಹಲವಾರು ಪ್ರಾಣಿ, ಪಕ್ಷಿ, ಕೀಟ ಮುಂತಾದ ದೇಹಗಳನ್ನು ಧರಿಸಿ ನಂತರ ಮಾನವ ಜನ್ಮವನ್ನು ಪಡೆಯುತ್ತಾನೆ ಎಂದು ಹೇಳುತ್ತದೆ ನಮ್ಮ ಸನಾತನ. ಒಂದು ಆತ್ಮ ಮನುಷ್ಯ ಜನ್ಮಕ್ಕೆ ಎಂದು ಬಂದಿತು ಎಂದು ಹೇಳಲು ಅಸಾಧ್ಯ. ಕೆಲ ಆತ್ಮಗಳು ಬಹಳ ಹಿಂದೆ ಮತ್ತು ಕೆಲ ಆತ್ಮಗಳು ಇತ್ತೀಚಿಗೆ ಬಂದಿರಬಹುದು. ಹಾಗೆ ಇತೀಚೆಗೆ ಬಂದ ಆತ್ಮಗಳು ತಮ್ಮ ಪೂರ್ವ ಜನ್ಮದ ವಾಸನೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಳ್ಳದೆ ಇದ್ದ ಪಕ್ಷದಲ್ಲಿ ಈ ಜನ್ಮದಲ್ಲೂ ಆ ವಾಸನೆಗಳ ಛಾಯೆ ಇರುವುದಲ್ಲವೇ? ಹಾಗೆ ಇದ್ದ ಗುಣಗಳೇ ಈಗ ಪ್ರದರ್ಶಿಸಲ್ಪಡುತ್ತವೆ.

ಹಾಗಾಗಿ ನಾವು ಕೆಲವರನ್ನು ಹುಲಿಯಂತೆ ಕೋಪಗೊಳ್ಳುವವರನ್ನೂ, ಸಿಂಹದಂತೆ ಕೆರಳುವವರನ್ನೂ, ಹಾವಿನಂತೆ ಛಲ ಹಿಡಿಯುವವರನ್ನೂ, ನಾಯಿಯಂತೆ ಆಡುವವರನ್ನೂ ನಮ್ಮ ಸಮಾಜದಲ್ಲಿ ಕಾಣುತ್ತೇವೆ. ಅಷ್ಟೇ ಏಕೆ ಒಬ್ಬನೇ ವ್ಯಕ್ತಿ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ಪ್ರಾಣಿಗಳಂತೆ ಆಡುವುದನ್ನೂ ನಾವು ಕಾಣುವುದಿಲ್ಲವೇ? ” ಅವನು ಒಳ್ಳೆ ಕೋತಿ ಥರ ಆಡ್ತಾನೆ” ಅಥವಾ ” ಯಾಕೋ ಒಳ್ಳೆ ನಾಯಿ ಥರ ಆಡ್ತೀಯಾ?” ಎನ್ನುವ ಮಾತುಗಳನ್ನು ನಾವು ಬಹಳಷ್ಟು ಬಾರಿ ಕೇಳುತ್ತೇವಲ್ಲವೇ? ಇದನ್ನೇ ಮಾನ್ಯ ಗುಂಡಪ್ಪನವರು ” ಘೋರಚೇಷ್ಟೆಗಳೆಲ್ಲವಣಗಿಹುವು” ಎಂದು ಮಾನವನ ಮನಸ್ಸಿನ ಒಂದು ಮುಖವನ್ನು ವಿಶ್ಲೇಷಿಸುತ್ತಾರೆ.

ಪ್ರಾಣಿಗಳಿಗೆ ಅವು ಸಹಜ ಗುಣಗಳು. ಆದರೆ ಮನುಷ್ಯನಿಗೆ ಗುಂಡಪ್ಪನವರು ಹೇಳುವಂತೆ ಅವು ” ದುಷ್ಟ ಗುಣಗಳು”. ಪ್ರಾಣಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು, ತಮ್ಮ ಸಂತತಿಯನ್ನು ಬೆಳೆಸಲು ಮತ್ತು ತಮ್ಮ ಆಹಾರ ಹುಡುಕಲು ಮಾತ್ರ ಈ ಗುಣಗಳನ್ನು ಪ್ರದರ್ಶಿಸುತ್ತವೆ. ಆದರೆ ಮನುಷ್ಯ ದುರಾಸೆಯ, ಸ್ವಾರ್ಥದ ಮತ್ತು ಅಹಂಕಾರದ ಭಾವಗಳನ್ನು ಪ್ರದರ್ಶಿಸಲು ಈ ದುಷ್ಟ ಗುಣಗಳನ್ನು ಉಪಯೋಗಿಸುತ್ತಾನೆ. ಇಡೀ ಸೃಷ್ಟಿಯೇ ತನಗಾಗಿ ಸೃಷ್ಟಿಸಲ್ಪಟ್ಟಿದೆ ಎನ್ನುವ ದುರಹಂಕಾರ ಮನುಷ್ಯನಿಗೆ. ಸ್ವಾರ್ಥ ಸಾಧನೆಗಾಗಿ ಯಾವ ಪ್ರಾಣಿಯ ವೇಷವನ್ನಾದರೂ ಹಾಕಲು ಅಥವಾ ಯಾವುದೇ ಪ್ರಾಣಿಯ ಗುಣವನ್ನು ಪ್ರದರ್ಶಿಸಲು ಇವನು ಹೇಸುವುದಿಲ್ಲ.

ನಾವು ಮಾನವರು ಮೃಗಗಳ ಕೀಟಗಳ ಮತ್ತು ಅನ್ಯ ಪ್ರಾಣಿಗಳ ದೈಹಿಕ ಸ್ಥರವನ್ನು ಬಿಟ್ಟು ಮೇಲೆ ಬಂದಿದ್ದೇವೆ. ಅವುಗಳ ಗುಣಗಳನ್ನೂ ಸಂಪೂರ್ಣವಾಗಿ ಬಿಟ್ಟರೆ, “ನಾವು ಮಾನವರು” ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಇಲ್ಲದಿದರೆ, ನಾವು ಆ ಗುಣಗಳನ್ನು ಬಿಡದಿದ್ದರೆ, ಮತ್ತೆ ಪ್ರಾಣಿಗಳಾಗುವ ಸಂಭವ ಉಂಟು. ಹಾಗಾಗಿ ನಾವು ಬಹಳ ಜಾಗರೂಕರಾಗಿ ನಮ್ಮ ಗುಣಗಳನ್ನು ನಾವೇ ವಿಶ್ಲೇಷಣೆ ಮಾಡುತ್ತಾ, ನಮ್ಮ ಗುಣಗಳನ್ನು ಸುಧಾರಿಸಿಕೊಳ್ಳುವ ಪ್ರಯತ್ನವನ್ನು ಪಡಬೇಕು.


ರಸಧಾರೆ - 198

ಸತ್ಯವಂತನನರಸೆಲೆನುತ ಪೇಟೆಯೊಳಗೆ
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು
ತಾತ್ವಿಕಡಯೋಜೆನಿಸ್ – ಮಂಕುತಿಮ್ಮ

ಸತ್ಯವಂತನನರಸೆಲೆನುತ= ಸತ್ಯವಂತನನು+ಅರಸಲು+ ಎನುತ// ಕೆಟ್ಟುದೀ = ಕೆಟ್ಟದು + ಈ

ಈಗ್ಗೆ ೨೪೨೪ ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಜನಿಸಿದ ಡಯೋಜೆನಿಸ್ ಎಂಬ ತತ್ವಜ್ಞಾನಿಯು “ಸತ್ಯವಂತನಾದ ವ್ಯಕ್ತಿಯಾರಾದರೂ ಸಿಗುವನೋ” ಎಂದು ಹಗಲಿನ ಹೊತ್ತಿನಲ್ಲಿ ದೀವಿಗೆಯನ್ನು ಹಿಡಿದುಕೊಂಡು ಪೇಟೆಬೀದಿಗಳಲ್ಲಿ ಹುಡುಕಿದನಂತೆ. ಅವನಿಗೆ ಯಾರೂ ಸಿಗದಾಗ, “ಈ ಜಗತ್ತು ಕೆಟ್ಟು ಹೋಗಿದೆ” ಎಂದು ತನ್ನ ಮನೆಯಲ್ಲಿ ಒಂದು ತೊಟ್ಟಿಯನ್ನು ಕಟ್ಟಿಸಿ ಅದರೊಳಗೆ ವಾಸಿಸತೊಡಗಿದನಂತೆ, ಎನ್ನುತ್ತಾ ಒಂದು ವಿಡಂಬನೆಯನ್ನು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರು ಪ್ರಸ್ತಾಪ ಮಾಡಿದ್ದಾರೆ.

” ಕಿಸಾ ಗೌತಮಿಯಲ್ಲಿ” ಗೌತಮನು ” ಸಾವಿಲ್ಲದ ಮನೆಯ ಸಾಸಿವೆ ತಾ” ಎಂದನಂತೆ. ಹಾಗಲ್ಲದೆ” ಸುಳ್ಳನ್ನೇ ಹೇಳದವನ ಮನೆಯಲ್ಲಿ ಸಾಸಿವೆ ತಾ ” ಎಂದಿದ್ದರೂ ಸಮರ್ಪಕವಾಗೆ ಇರುತಿತ್ತು ಎಂದು ಅನಿಸುತ್ತದೆ. ಏಕೆಂದರೆ ಈ ಜಗತ್ತಿನಲ್ಲಿ ಎಲ್ಲೂ ಎಂದಾದರೂ, ಒಂದಾದರೂ ಸುಳ್ಳನ್ನು ಹೇಳದಿರುವಂತ ವ್ಯಕ್ತಿ ಸಿಗುವುದೇ ಇಲ್ಲ . ಇದೇ ಅನುಭವ ದಾರ್ಶನಿಕ ಡಯೋಜೆನಿಸ್ ಗೂ ಆಯಿತು. ೫೬೮ ವರ್ಷಗಳ ಹಿಂದಿನ , ನಮ್ಮ ಕನ್ನಡ ಪುರಂದರ ದಾಸರು” ಸತ್ಯವಂತರಿಗೆ ಇದು ಕಾಲವಲ್ಲ, ದುಷ್ಟ ಜನರಿಗೆ ಇದು ಸುಭಿಕ್ಷಕಾಲ ” ಎಂದು ಎಂದೋ ಹೇಳಿದ್ದಾರೆ. ಅವರಿಗೆ ಹಾಗೆ ಅಂದೇ ಅನಿಸಿದ್ದರೆ, ಇಂದಿನ ಪರಿಸ್ಥಿತಿ ಏನು ಎಂದು ವಾಚಕರೇ ಊಹಿಸಿಕೊಳ್ಳಬಹುದು.

ನಮ್ಮ ಸನಾತನದಲ್ಲಿ ” ಸತ್ಯಂ ಬ್ರೂಯಾತ್” ” ಸತ್ಯಮೇವ ಜಯತೆ” ಸತ್ಯಂ ವದ” ” ಸತ್ಯಾ ನ ಪ್ರಮದಿತವ್ಯಂ ” ಸತ್ಯ೦ ಚ ಸ್ವಾಧ್ಯಾಯ ಪ್ರವಚನೇಚ” ಎನ್ನುವ ಮತ್ತು ಸತ್ಯವನ್ನೇ ಹೇಳಬೇಕೆಂದು ಪ್ರತಿಪಾದಿಸುವ ಹಲವಾರು ಸೂಕ್ತಗಳು ಹೇರಳವಾಗಿ ಸಿಗುತ್ತದೆ. ಸತ್ಯದ ಮಹಿಮೆಯನ್ನು ಪುರಸ್ಕರಿಸಲು, ” ಹರಿಶ್ಚಂದ್ರ “ನ ಕಥೆಯನ್ನು ಬರೆಯಲಾಯಿತು. ನಮ್ಮ ಭಾರತೀಯ ನೀತಿಕತೆಗಳಲ್ಲಿ, ಸುಭಾಷಿತಗಳಲ್ಲಿ, ಶಿವ ಶರಣರ ವಚನಗಳಲ್ಲಿ, ಸತ್ಯವನ್ನೇ ನುಡಿಯಬೇಕು , ನೃತವನ್ನು ನುಡಿಯಬಾರದು ಎಂದು ಹಲವಾರು ದೃಷ್ಟಾಂತಗಳಿಂದ ಸತ್ಯದ ಮಹಿಮೆಯನ್ನು ಕೊಂಡಾಡಿದ್ದಾರೆ. ಕೇವಲ ನಮ್ಮ ಕನ್ನಡದಲ್ಲಿ ಇರುವ ” ಪುಣ್ಯಕೋಟಿಯ “ಕತೆಯೇ ಮನ ಕರಗಿಸುವಂತೆ ಸತ್ಯವಚನದ ಮಹಿಮೆಯನ್ನು ತಿಳಿಸಿದೆಯಲ್ಲ.

ತೈತ್ತರೀಯ ಉಪನಿಷತ್ತಿನಲ್ಲಿ ” ಸತ್ಯ” ಮತ್ತು ” ಋತ” ವೆನ್ನುವ ಎರಡು ಪ್ರಯೋಗಗಳು ಬರುತ್ತದೆ. ಮಾನ್ಯ ಗುಂಡಪ್ಪನವರು ಒಂದು ಸಣ್ಣ ಪುಸ್ತಕದಲ್ಲಿ ಅದನ್ನು ವಿಶ್ಲೇಷಣೆ ಮಾಡುತ್ತಾ ” ಋತ”ವೆಂದರೆ ಮನಸ್ಸಿನಲ್ಲಿ ಅಡಗಿದ ವಿಚಾರ ಮತ್ತು ಸತ್ಯವೆಂದರೆ ಆ ಮನಸ್ಸಿನೊಳಗಿನ ವಿಚಾರ ಹಾಗೆಯೇ ಪ್ರಕಟವಾದರೆ, ಹೇಳಿದರೆ ಅದು ” ಸತ್ಯ” ವೆನಿಸಿಕೊಳ್ಳುತ್ತದೆ. ಹಾಗಾದರೆ ಒಳ್ಳೆಯದೇ? ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅದು ಸಾಧ್ಯವೂ ಅಲ್ಲ. ಮನಸ್ಸಿಗೆ ಬಂದ ವಿಚಾರವನ್ನೆಲ್ಲ ಹೊರಹಾಕುತ್ತಾ ಹೋದರೆ ” ಹುಚ್ಚನೆಂಬ ” ಬಿರುದನ್ನೂ ಪಡೆದುಕೊಳ್ಳ ಬೇಕಾಗುತ್ತದೆ. ಹಾಗೆಯೇ ” ನ ಬ್ರೂಯಾತ್ ಸತ್ಯಮಪ್ರಿಯಂ” ಎಂದರೆ ಅಪ್ರಿಯವಾದ ಸತ್ಯವನ್ನು ನುಡಿಯಬೇಡ, ಎಂದೂ ಹೇಳಿದ್ದಾರಲ್ಲವೆ?

ವಾಚಕರೇ ಸತ್ಯವನ್ನು ನುಡಿದರೆ ಮನಸ್ಸಿಗೆ ನಿರಾಳ. ಸತ್ಯವನ್ನು ನುಡಿದರೆ ನಮ್ಮ ಅಂತರಂಗ ಶುದ್ಧವಾಗಿರುತ್ತದೆ. ಸತ್ಯವನ್ನು ನುಡಿಯುತ್ತೇವೆಯೋ ಇಲ್ಲವೋ ಆದರೆ ಸುಳ್ಳು ಹೇಳುವ ಅವಶ್ಯಕತೆ ನಮಗೆ ಬಾರದಿದ್ದರೆ ಅದೇ ಪುಣ್ಯ. ಯಾರಿಗೆ ಏನು ಬೇಕೋ ಅದನ್ನು ನುಡಿಯಬಹುದು. ಹಾಗೆ ನುಡಿದದ್ದರಿಂದ ಬಂದದ್ದನ್ನು ಅನುಭವಿಸಬಹುದು. ಆಯ್ಕೆ ಅವರವರಿಗೇ ಬಿಟ್ಟದ್ದಲ್ಲವೇ?


ರಸಧಾರೆ - 199

ಪದರಪದರಗಳಿಹವು ಗಂಟುಗಂಟುಗಳಿಹವು
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ
ಇದಮಿತ್ಥಂಮೆಲ್ಲಿಹುದು ಮನುಜಸ್ವಭಾವದಲಿ
ವಿಧಿಯ ಕೈ ಚಿತ್ರವಿದು – ಮಂಕುತಿಮ್ಮ

ಪದರಪದರಗಳಿಹವು = ಪದರ ಪದರಗಳು+ ಇಹವು // ಗಂಟುಗಂಟುಗಳಿಹವು = ಗಂಟು ಗಂಟುಗಳಿಹವು // ವಾಕ್ಚರ್ಯೆಗಳಲಿ = ವಾಕ್+ ಚರ್ಯೆಗಳಲಿ// ಇದಮಿತ್ಥಂಮೆಲ್ಲಿಹುದು = ಇದಮಿತ್ಥಂ + ಎಲ್ಲಿಹುದು

ವಾಕ್ಚರ್ಯೆಗಳಲಿ = ಮಾತು ಮತ್ತು ಕೃತಿಯಲಿ// ಇದಮಿತ್ಥಂ = ಇದು “ಇದೇ” ಎಂದು ಹೇಳುವುದು

ಮನುಷ್ಯನ ಹೃದಯದ ಮತ್ತು ಬುದ್ಧಿಯ ಭಾವಗಳು, ಅವನ ಮಾತುಗಳು ಮತ್ತು ಕೃತಿಗಳು ಗೋಜಲು ಗೋಜಲಾಗಿಯೂ ಸಿಕ್ಕು ಸಿಕ್ಕಾಗಿ ಗಂಟಾಗಿಯೂ ಇವೆ. ಮನುಷ್ಯರ ಸ್ವಭಾವ ” ಹೇಗೇ ” ಎಂದು ಹೇಳಲಾಗದು. ಬಹುಷಃ ಇದು ವಿಧಿಯ ಕ್ರಮದಿಂದಾದ ಚಿತ್ರವಿರಬಹುದು ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ಮನುಷ್ಯರ ಮನಸ್ಸಿನ ವಿಚಾರಗಳನ್ನು ಅರಿಯುವುದೇ ಸಾಧ್ಯವಿಲ್ಲ. ಎಲ್ಲವೂ ನಿಗೂಢ . ಅಷ್ಟೇ ಅಲ್ಲ ಗೋಜಲು, ಕಗ್ಗಂಟು. ಒಂದು ಕ್ಷಣವಿದ್ದ ವಿಚಾರ ಮತ್ತೊಂದು ಕ್ಷಣವಿಲ್ಲ. ಕೆಲ ದಿವಸಗಳಲ್ಲಿ ಇದ್ದ ಸ್ವಭಾವ ಮತ್ತೊಂದು ಕಾಲಕ್ಕೆ ಇರುವುದಿಲ್ಲ. ಬಿಡಿಸಲಾಗದ ಗಂಟುಗಳ ಹಂದರವೇ ಮನುಷ್ಯನ ಮನಸ್ಸು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಅಷ್ಟೇ ಅಲ್ಲ ಆಡುವುದು ಒಂದಾದರೆ ಮಾಡುವುದು ಇನ್ನೊಂದು. ಕ್ಷಣ ಕ್ಷಣಕ್ಕೂ ಬದಲಾಗುವ ಮನಸ್ಸಿನ ಪರಿ.

ನಾವು ನಮ್ಮ ಜೀವನದಲ್ಲಿ ಹತ್ತು ಹಲವಾರು ವ್ಯಕ್ತಿಗಳೊಡನೆ ಸಂಪರ್ಕವನ್ನು ಹೊಂದಿರುತ್ತೇವೆ. ” ಅವರು ನನಗೆ ಚೆನ್ನಾಗಿ ಗೊತ್ತು” ಎಂದು ಹಲವರು ಹೇಳುವುದನ್ನು ನಾವು ಆಗಾಗ ಕೇಳುತ್ತಲಿರುತ್ತೇವೆ. ವಿಚಿತ್ರವಲ್ಲವೇ? ನಮಗೆ ನಾವೇ ಏನು ಎಂದು ಅರ್ಥವಾಗುವುದಿಲ್ಲ. ಹಾಗಿದ್ದಮೇಲೆ ಬೇರೆಯವರನ್ನು ” ಅವರು ನನಗೆ ಚೆನ್ನಾಗಿ ಗೊತ್ತು” ಎಂದು ಹೇಳುವುದು ಎಷ್ಟು ಸೂಕ್ತ . ಪರಿಚಯ ಎನ್ನುವುದು ಸೂಕ್ತ ಪದವಾದೀತು. ಎಲ್ಲರ ಮನಸ್ಸು ಹಾಗೆ ಏಕೆ ಇರುತ್ತದೆ? ನಮಗೇಕೆ ಅರ್ಥವಾಗುವುದಿಲ್ಲ ಎನ್ನುವ ಪ್ರಶ್ನೆಗೆ ನಮಗೆ ಉತ್ತರ ಸಿಗುವುದೇ ಇಲ್ಲ.

ಇದು ಏಕೆ ಹೀಗೆ ಇದೆ ಎಂದು ವಿಚಾರವಂತರ ಮನಗಳಲ್ಲಿ ಮಂಥನ ನಡೆದೇ ಇರುತ್ತದೆ. ಆದರೆ ಉತ್ತರ ಸಿಗುವುದೇ ಇಲ್ಲ. ಪ್ರಕೃತಿಯಲ್ಲಿ ಎಷ್ಟೊಂದು ವೈವಿಧ್ಯತೆ ಇದೆಯೋ ಅಷ್ಟೊಂದು ವೈವಿಧ್ಯತೆ ಈ ಮಾನವನ ಮನಸ್ಸಿನಲ್ಲಿದೆ. ಪ್ರಕೃತಿಯ ವೈವಿಧ್ಯತೆಯನ್ನು ಸೃಷ್ಟಿಸಿದ ಪರಮ ಚೇತನವೇ ಮನುಜ ಮನಸ್ಸಿನ ವೈವಿಧ್ಯತೆಯನ್ನೂ ಸೃಷ್ಟಿಸಿದೆ ಎನ್ನುವ ಅರ್ಥದಲ್ಲೇ ಮಾನ್ಯ ಗುಂಡಪ್ಪನವರು ” ವಿಧಿಯ ಕೈ ಚಿತ್ರವಿದು ” ಎಂದಿದ್ದಾರೆ.

ವಾಚಕರೆ ಮಾನವನ ಮನಸ್ಸು ಎನ್ನುವ ಗೊಂಡಾರಣ್ಯದಲ್ಲಿ ಇರುವ ದಾರಿಗಳೆಷ್ಟೋ, ಗುಹೆಗಳೆಷ್ಟೋ, ಬೆಟ್ಟ ಗುಡ್ಡಗಳೆಷ್ಟೋ, ಸುಳಿ – ಜಲಪಾತಗಳೆಷ್ಟೋ ಯಾರೂ ಅರಿಯಲು ಸಾಧ್ಯವಿಲ್ಲ. ಪಂಚ ಭೂತಗಳೆಷ್ಟು ವಿಶಾಲವೋ, ನಿಗೂಢವೋ, ಅಷ್ಟೇ ನಿಗೂಢ ನಮ್ಮ ಮನಸ್ಸು. ಇದು ವಿಧಿಯಿಂದ ನಿರ್ಮಿತವಾದದ್ದು. ನಾವು ನಮ್ಮ ಸ್ವಪ್ರಯತ್ನದಿಂದ ಅಲ್ಪ ಸ್ವಲ್ಪ ಅರ್ಥಮಾಡಿಕೊಂಡು ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಪ್ರಯತ್ನ ಪಡಬಹುದಷ್ಟೇ!


ರಸಧಾರೆ – 200

ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ
ಹೊಟ್ಟೆ ಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್
ಹೊಟ್ಟೆ ತುಂಬಿದ ತೋಳ ಮಲಗೀತು ನೀಂ ಪೆರರ
ದಿಟ್ಟಿಸುತ ಕರುಬುವೆಯೋ – ಮಂಕುತಿಮ್ಮ

ಹೊಟ್ಟೆಯೊಂದರ = ಹೊಟ್ಟೆ+ ಒಂದರ// ಸಾಲದೆಂದೇನೋ = ಸಾಲದು +ಎಂದು + ಏನೋ// ನೆಟ್ಟಿಹನು = ನೆಟ್ಟು + ಇಹನು
ಕಿಚ್ಚಿನ = ಬೆಂಕಿಯ, ಉರಿಯ// ಪೆರರ + ಪರರ // ದಿಟ್ಟಿಸುತ = ನೆಟ್ಟ ನೋಟದಿ ನೋಡುತ// ಕರುಬುವೆಯೋ = ಕೊರಗುವೆಯೋ

ಊಟದ ಚಿಂತೆಯೊಂದು ಸಾಲದೇನೋ ಎಂಬಂತೆ, ಅಸೂಯೆ ಅಥವಾ ಹೊಟ್ಟೆಯುರಿಯ ಬೆಂಕಿಯನ್ನು ಮನುಷ್ಯರ ಮನಸ್ಸುಗಳಲ್ಲಿ ಆ ವಿಧಿಯು ನೆಟ್ಟಿದ್ದಾನೆ. ಹೊಟ್ಟೆಬಾಕತನಕ್ಕೆ ಅಥವಾ ಹಸಿವಿಗೆ ಹೆಸರಾದ ಪ್ರಾಣಿ ತೋಳ. ಆ ತೋಳವೂ ಹೊಟ್ಟೆ ತುಂಬಿದರೆ ನೆಮ್ಮದಿಯಿಂದ ನಿದ್ದೆ ಮಾಡುತ್ತದೆ, ಆದರೆ ಮನುಷ್ಯ ಮಾತ್ರ ಅನ್ಯರನ್ನು ನೋಡಿ ಕೊರಗುತ್ತಿರುತ್ತಾನೆ ಎಂದು ಮನುಷ್ಯರ ಅಸೂಯಾ ಪ್ರವೃತ್ತಿಯನ್ನು ಉಪಮೆಯ ಸಹಿತ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ತಮಗಿಂತ ಕಡಿಮೆ ಇರುವವರನ್ನು ನೋಡಿ ಗರ್ವ ಅಥವಾ ಮದ ತೋರುವ ಪ್ರವೃತ್ತಿಯಂತೆಯೇ, ನಮಗಿಂತ ಅಧಿಕ ಪಡೆದವರನ್ನು ಕಂಡು ಅಸೂಯೆ ಪಡುವುದು ಮತ್ತು ಕೊರಗುವುದೂ ಸಹ ಅರಿಷಡ್ವರ್ಗಗಳಲ್ಲಿ ಒಂದು. ಸಾಮಾನ್ಯವಾಗಿ ಎಲ್ಲ ಮನುಷ್ಯರಲ್ಲೂ ಈ ಗುಣ ಪರಿಮಾಣ ಭೇದವಿದ್ದರೂ ಇದ್ದೇ ಇರುತ್ತದೆ. “ಬಡತನಕೆ ಉಂಬುವ ಚಿಂತೆ, ಉ೦ಬುವುದಾದರೆ ಉಡುವ ಚಿಂತೆ, ಉಡುವುದಾದರೆ ಮನೆಯ ಚಿಂತೆ, ಮನೆಯದಾದರೆ ಮಡದಿಯ ಚಿಂತೆ ” ಎನ್ನುತ್ತಾರೆ ನಮ್ಮ ಶಿವ ಶರಣರು. ಮನುಷ್ಯರ ಈ ಅವಶ್ಯಕತೆಗಳ ಚಿಂತೆ ನಿರಂತರ, ಒಂದರ ನಂತರ ಒಂದು. ಒಂದಕ್ಕೂ ಇನ್ನೊಂದಕ್ಕೂ ಅಂತರವೇ ಇರುವುದಿಲ್ಲ. ” ಇಷ್ಟಾದರೆ ಅಷ್ಟರಾಸೆ” ಎಂದು ದಾಸರು ಹೇಳುವಂತೆ ಮೊದಲು ಅವಶ್ಯಕತೆಗಾಗಿ ಒಂದು ಆಸೆ ಮನಸ್ಸಲ್ಲಿ ಹುಟ್ಟುತ್ತದೆ. ಆ ಆಸೆ ಪೂರೈಸಿದರೆ ಇನ್ನೊಂದು ಆಸೆ ಹುಟ್ಟುತ್ತದೆ . ಮೊದಲು ಅವಶ್ಯಕತೆಗೆಷ್ಟು ಬೇಕೋ ಅಷ್ಟರ ಪೂರೈಕೆ ನಂತರ ಇನ್ನಷ್ಟು ಬೇಕೆನ್ನುವ ದುರಾಸೆ.

ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು “ಹೊಟ್ಟೆ” ಎಂದು ಮಾನವನ ಮೂಲ ಅವಶ್ಯಕತೆಯನ್ನು ಉಲ್ಲೇಖಿಸಿದ್ದಾರೆ. ನಮಗೆ ಹೊಟ್ಟೆಯದಷ್ಟೇ ಅಲ್ಲ, ಇನ್ನೂ ಹತ್ತು ಹಲವಾರು ಅವಶ್ಯಕತೆಗಳುಂಟು. ಪ್ರತಿ ನಿತ್ಯ ಈ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾವು ಅವುಗಳನ್ನು ಮಿತಿಗೊಳಿಸಲು ಒಂದು ಗೆರೆ ಎಳೆಯಲು ಅಸಮರ್ಥರಾಗಿದ್ದೇವೆ. ಹೀಗೆ ನಮ್ಮ ಆಸೆಗಳ ಪಟ್ಟಿ ಮತ್ತು ಒಂದೊಂದು ಆಸೆಯೂ ಗಾತ್ರದಲ್ಲಿಯೂ ಬೆಳೆಯುತ್ತಾ ಹೋಗುತ್ತದೆ. ಹಾಗೆ ಬೃಹದಾಕಾರದಲ್ಲಿ ಬೆಳೆಯುವ ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನಾವು “ಪಡುವ ಪಾಡೇನು” ಎಂದು ಒಂದು ಸರ್ತಿ ಅವಲೋಕಿಸಿಕೊಂಡರೆ ನಮಗೆ ಬಗ್ಗೆಯೇ ಅಸಹ್ಯ ಬರುತ್ತದೆ.

ನಮ್ಮ ಸಾಮರ್ಥ್ಯವನ್ನು ಉಪಯೋಗಿಸಿ ನಾವು ನಮ್ಮ ಆಸೆಗಳ ಬೆಟ್ಟವನ್ನು ಏರಿದರೆ, ಸಾಧಿಸಿದರೆ ಸರಿ. ಆದರೆ ಸಾಮರ್ಥ್ಯವಿಲ್ಲದಿದ್ದರೂ ನಮ್ಮ ಯೋಗ್ಯತೆಗೆ ಮೀರಿದ ಆಸೆ ಪಡುವುದು, ಅದನ್ನು ಪೂರೈಸಿಕೊಳ್ಳಲಿಕ್ಕಾಗಿ ಮಾಡಬಾರದ ಕೆಲಸವನ್ನು ಮಾಡುತ್ತಾ, ನಮ್ಮ ಮತ್ತು ಅನ್ಯರ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುತ್ತಾ, ಈ ಪ್ರಯತ್ನದಲ್ಲಿ ಜಯಗಳಿಸಿದರೆ ಬೀಗುತ್ತಾ, ಸೋತರೆ ಕೊರಗುತ್ತಾ ಮತ್ತಷ್ಟು ಅಸೂಯೆಯನ್ನು ಹೆಚ್ಚಿಸಿಕೊಳ್ಳುತ್ತಾ, ಗತವನ್ನು ಮೆಲುಕುಹಾಕುತ್ತಾ ಇನ್ನಷ್ಟು ಕೊರಗುವ ನಮ್ಮಂತವರು ಈ ಜಗತ್ತಿನಲ್ಲಿ ಬಹಳಷ್ಟು ಜನ ನಮಗೆ ಸಿಗುತ್ತಾರೆ.

ನಮ್ಮ ಅವಶ್ಯಕತೆ ಏನು ಎಂದು ಮೊದಲು ಅರಿಯಬೇಕು. ನಮ್ಮ ಅವಶ್ಯಕತೆ ಎಷ್ಟು ಎಂದು ಅರಿಯಬೇಕು. ಅದನ್ನು ಪೂರೈಸಿಕೊಳ್ಳಲು ನಮಗೆ ಯೋಗ್ಯತೆ ಮತ್ತು ಸಾಮರ್ಥ್ಯ ಎರಡೂ ಇವೆಯೇ ಎಂದು ಯೋಚಿಸಬೇಕು. ನಮ್ಮ ಮನಸ್ಸು ಬುಧ್ಧಿಗಳನ್ನು ಕೆಡಿಸದಂತಾ ಆಸೆಗಳನ್ನು ಪಡಬೇಕು. ಪಟ್ಟ ಆಸೆ ಎಲ್ಲವೂ ಪೂರ್ಣಗೊಳ್ಳುವುದಿಲ್ಲ. ನಾವು ಆಸೆ ಪಟ್ಟದ್ದು ಮತ್ತು ಪಟ್ಟಷ್ಟು ನಮಗೆ ಸಿಗುವುದಕ್ಕೆ, ನಮ್ಮ ಆಸೆಯಷ್ಟೇ ಅಲ್ಲ, ಅನ್ಯ ಕಾರಣಗಳೂ ಇರುತ್ತವೆ, ಹಾಗಾಗಿ ಸಿಕ್ಕಿದಕ್ಕೆ ಸಂತೋಷದಿಂದ ತೃಪ್ತಿಯಿಂದ ಇದ್ದರೆ “ಹೊಟ್ಟೆ ತುಂಬಿದ ತೋಳ ಮಲಗೀತು” ಎಂದು ಗುಂಡಪ್ಪನವರು ಹೇಳಿದಂತೆ ನಾವೂ ಮಲಗಿ ನಿದ್ದೆ ಮಾಡಬಹುದು. ಭಗವಾನ್ ಬುದ್ಧ ” ಆಸೆಯೇ ದುಃಖಕ್ಕೆ ಮೂಲ” ಎಂದ. ಆದರೆ ನನಗನ್ನಿಸುವುದು ಏನೆಂದರೆ ” ಆಸೆಯೇ ಬಾಳಿಗೆ ಮೂಲ” ಆದರೆ “ದುರಾಸೆಯೇ ದುಃಖಕ್ಕೆ ಮೂಲ” ವೆಂದರೆ ಹೆಚ್ಚು ಸಮರ್ಪಕವಾದೀತೇನೋ ಎಂದು ಆನಿಸುತ್ತದೆ.

ಹಾಗಾಗಿ ವಾಚಕರೆ, ಗೆರೆ ಎಳೆಯಬೇಕು, ನಮ್ಮ ಆಸೆಗಳಿಗೆ ನಮ್ಮ ಅವಶ್ಯಕತೆ ಮತ್ತು ಸಾಮರ್ಥ್ಯದ ಮಿತಿಯನ್ನರಿತು ಗೆರೆ ಎಳೆಯಬೇಕು. ಎಳೆದರೆ ಬಾಳು ಸುಖವಾಗಿರುತ್ತದೆ. ಇಲ್ಲದಿದ್ದರೆ ಇಲ್ಲ. ಆಯ್ಕೆ ನಮ್ಮಲ್ಲೇ ಇದೆ ಅಲ್ಲವೇ?

 ಮುಂದಿನ ಭಾಗಕ್ಕೆ ಹೋಗಲು ಇಲ್ಲಿ ಕ್ಲಿಕ್‍ಮಾಡಿ