ನನ್ನ ಪುಟಗಳು

31 ಮಾರ್ಚ್ 2022

Mankuthimmanakagga-161-180

ರಸಧಾರೆ – 161

ವಿಧಿಯ ಹೊರೆಗಳನು ತಪ್ಪಿಸಿಕೊಳ್ಳುವನೆಲ್ಲಿಹನು I
ಬೆದರಿಕೆಯನದರಿಂದ ನೀಗಿಪನು ಸಖನು II
ಎದೆಯನುಕ್ಕಾಗಿಸಾನಿಸು ಬೆನ್ನ – ತುಟಿಯ ಬಿಗಿ I
ವಿಧಿಯಗಸ , ನೀಂ ಕತ್ತೆ – ಮಂಕುತಿಮ್ಮ

ತಪ್ಪಿಸಿಕೊಳ್ಳುವನೆಲ್ಲಿಹನು = ತಪ್ಪಿಸಿಕೊಳ್ಳುವನು + ಎಲ್ಲಿಹನು // ಬೆದರಿಕೆಯನದರಿಂದ = ಬೆದರಿಕೆಯನು + ಅದರಿಂದ // ಎದೆಯನುಕ್ಕಾಗಿಸಾನಿಸು = ಎದೆಯನು+ಉಕ್ಕಾಗಿಸಿ +ಆನಿಸು
ನೀಗಿಪನು = ಹೋಗಲಾಡಿಸುವನು // ಸಖನು = ಸ್ನೇಹಿತನು

ಈ ಜಗತ್ತಿನಲ್ಲಿ ಅನಾದಿಕಾಲದಿಂದಲೂ ಹುಟ್ಟಿದವರು ಮತ್ತು ಕಾಲವಾದವರು ಯಾರೂ ಸಹ ಈ ವಿಧಿಯು ಹೇರಿಸುವ ಹೊರೆಗಳ ಭಾರಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಈ ಹೊರೆಯನ್ನು ಹೊರುವ ಹೆದರಿಕೆಯನ್ನು ನೀಗಿಸುವವನೇ ನಮ್ಮ ನಿಜವಾದ ಸ್ನೇಹಿತ. ನಮ್ಮ ಮನಸ್ಸನ್ನು( ಎದೆಯನ್ನು) ಕಬ್ಬಿಣದಂತೆ ಗಟ್ಟಿಯಾಗಿಸಿ, ಬೆನ್ನ ಮೇಲೆ ಹೊರೆ ಹೊತ್ತು, ತುಟಿಪಿಟಕ್ಕೆನ್ನದೆ ಮುಂದೆ ಸಾಗು. ಏಕೆಂದರೆ, ವಿಧಿಯು ಅಗಸನಾದರೆ ನೀನು ಕತ್ತೆಯಂತೆ ಎಂದು ಒಂದು ಸುಂದರ ಉಪಯೊಂದಿಗೆ ವಾಸ್ತವದ ಸತ್ಯವನ್ನು ಪ್ರಸ್ತಾಪಿಸಿದ್ದಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

ಈ ” ವಿಧಿ” ಯ ಹೊರೆಯನ್ನು ಮತ್ತು ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಅನುಭವಿಸಿ ತೀರಿಸಬೇಕು. ಹಿಂದಿನಿಂದ ತಂದದ್ದನ್ನು ಅನುಭವಿಸುವಾಗ ಮತ್ತಷ್ಟನ್ನು ಕಟ್ಟಿಕೊಳ್ಳುವುದು ನಮ್ಮೆಲ್ಲರ ಪರಿ. ಹೀಗೆ ನಾವು ನಮ್ಮ ನಮ್ಮ ವಿಧಿ ಲಿಖಿತವನ್ನು ಅನುಭವಿಸುವಾಗ ನಮಗೆ ಯಾರಾದರೂ ಒಂದೆರಡು ಸಾಂತ್ವನದ ಮಾತುಗಳಾಡಿದರೆ ಅವರೇ ನಮ್ಮ ನಿಜವಾದ ಸ್ನೇಹಿತರು. ನೀವು ಅಕಸ್ಮಾತ್ ಈ ವಿಧಿ ಲಿಖಿತದಲ್ಲಿ ಸುಖವನ್ನು ಅನುಭವಿಸುತ್ತಿದ್ದರೆ, ನಿಮ್ಮ ಸುಖದಲ್ಲಿ ಭಾಗಿಯಾಗಲು ಎಲ್ಲರೂ ಹಾತೊರೆಯುತ್ತಾರೆ. ಆದರೆ ನೀವು ಕಷ್ಟದಲ್ಲಿದ್ದಾಗ, ನಿಮ್ಮನ್ನು “ಮೂಸಲೂ” ಯಾರೂ ಬರುವುದಿಲ್ಲ. ಅಂತಹ ಸ್ಥಿತಿಯಲ್ಲೂ ನಿಮಗೆ ವಸ್ತುರೂಪದಲ್ಲಿ ಯಾವ ಸಹಾಯವನ್ನು ಮಾಡದಿದ್ದರೂ ನಿಮ್ಮೊಡನೆ ಇದ್ದು ನಿಮಗೆ ಸಾಂತ್ವನದ ಮಾತುಗಳನ್ನಾಡಿದರೆ ಅವರೇ ನಮ್ಮ ನಿಜವಾದ ಸ್ನೇಹಿತರು.

ಅನುಭವಿಸಿ ತೀರಿಸಬೇಕು ಎಂದು ಹೇಳಿದೆ. ಅನ್ಯ ಮಾರ್ಗವಿಲ್ಲ. ಇಂದು ಅನುಭವಿಸದಿದ್ದರೆ ನಾಳೆ ಅನುಭವಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಬಳಿ ಒಂದು ರೂಪಾಯೂ ಇಲ್ಲ. ನಾಳೆ ಹತ್ತು ಸಿಗುವುದು. ಇಂದು ಹಸಿವು. ಇಂದು ಯಾರ ಬಳಿಯಲ್ಲಾದರೂ ಹತ್ತು ಸಾಲ ತೆಗೆದುಕೊಂಡು ಉಂಡರೆ, ಅದು ವಿಧಿ ಲಿಖಿತದ ಅನುಭವನ್ನು ಮುಂದೂಡಿದಂತಾಗುತ್ತದೆ, ತೀರಿಸಿದಂತಾಗುವುದಿಲ್ಲ. ಅಲ್ಲದೆ ಇಂದು ಹಸಿದಿದ್ದು, ಆ ನೋವನ್ನು ಅನುಭವಿಸಿ, ನಾಳೆ ನಮ್ಮ ಹತ್ತರಿಂದ ಉಂಡರೆ, ಸುಖ. ಹೀಗೆಯೇ ಜೀವನದಲ್ಲಿ ಬರುವ ಎಲ್ಲವನ್ನೂ ಅನುಭವಿಸಿಯೇ ತೀರಿಸಬೇಕು. ಇಲ್ಲದಿದ್ದರೆ ಮತ್ತೊಂದು ಜನ್ಮಕ್ಕೆ, ಮಗದೊಂದು ಜನ್ಮಕ್ಕೆ ಹೊತ್ತು ಹೋಗಬೇಕು. ಒಂದು ಕಡಲೆ ಕಾಯಿ ಬೀಜವನ್ನು ಹಾಗೆ ನೆಟ್ಟರೆ ಸಸಿ. ಹುರಿದು ಬಿಟ್ಟರೆ ಮತ್ತೆ ಮೊಳಕೆ ಒಡೆಯುವುದೇ ಇಲ್ಲ. ಹಾಗೆ ನಮ್ಮ ಕರ್ಮವನ್ನು ನಿಷ್ಯೇಶವಾಗಿ ಸುಟ್ಟರೆ ಮುಕ್ತಿ, ಇಲ್ಲದಿದ್ದರೆ ಮತ್ತೆ ಮತ್ತೆ ಕರ್ಮದ ಸಂಕೋಲೆಗಳ ಜೀವನದ ಸುಳಿಯಲ್ಲೇ ಇರಬೇಕು.

ವಾಚಕರೆ ಈ “ವಿಧಿ”ಯನ್ನುವುದು ನಮ್ಮ ಮೇಲೆ ನಮ್ಮ ಪೂರ್ವಕರ್ಮಗಳ ಮೂಟೆಯನ್ನು ಹೊರಿಸುವ ಅಗಸನಂತೆ, ನಾವು ಅದನ್ನು ಹೊರುವ ಕತ್ತೆಗಳಂತೆ. ನಾವೇ ತೊಳೆದುಕೊಳ್ಳಬೇಕು, ಅನುಭವಿಸಿ ನೀಗಿಸಿಕೊಳ್ಳಬೇಕು.ಅದಕ್ಕೆ ಹಲ ಮಾರ್ಗಗಳುಂಟು. ಮುಖ್ಯವಾಗಿ ” ಸತ್ಸಂಗ”ವೇ ಇದಕ್ಕೆ ಮಾರ್ಗ. ಎಂದು ನಮ್ಮ ಕರ್ಮಗಳ ಗಂಟು ಕರಗುತ್ತದೋ ಅಂದು ನಮಗೆ ಮುಕ್ತಿ.


ರಸಧಾರೆ – 162

ಟಗರೆರಡ ಬೆಳೆಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ |
ಜಗಳವಾಡಿಸಿ ದೈವಜೀವಗಳ ಪೆಸರಿಂ ||
ನಗುತಲಿರುವನು ನೋಡಿ ಪರಬೊಮ್ಮನೇಂ ಬಿನದಿ |
ಬಿಗಿಯದಿರು ನೀಂ ಬೀಗಿ – ಮಂಕುತಿಮ್ಮ||

ಪೆಸರಿಂ = ಹೆಸರಿಂದ // ಬಿನದಿ = ಸಂತೋಷದಿಂದ// ಬಿಗಿಯದಿರು = ಗರ್ವಪಡದಿರು// ಬೀಗಿ= ಅಹಂಕಾರದಿಂದ

ವಿಧಿಯ ರೂಪದಲ್ಲಿ ಆ ದೈವ ಮತ್ತು ನಿನ್ನ ರೂಪದಲ್ಲಿ ಈ ಜೀವ ಇವೆರಡನ್ನೂ ಕೊಬ್ಬಿದ ಟಗರುಗಳಂತೆ ಬೆಳೆಸಿ ಒಂದು ಇನ್ನೊಂದರ ಮೇಲೆ ಸೆಣಸಾಡಿಸುತ್ತಾ, ಆ ಪರಮಾತ್ಮ ನಗುತ್ತಿದ್ದಾನೆ. ನೀನು ನಿನ್ನ ಅಹಂಕಾರದಿಂದ ಗರ್ವ ಪಡದಿರು, ಎಂದು ಗುಂಡಪ್ಪನವರು ಒಂದು ಸಂದೇಶ ಮತ್ತು ಒಂದು ಆದೇಶವನ್ನು ಕೊಡುತ್ತಾರೆ ಈ ಕಗ್ಗದಲ್ಲಿ.

ಒಂದು ಆ ಪರಮಾತ್ಮನಿಂದ ನಿಯಮಿಸಲ್ಪಟ್ಟ ವಿಧಿ. ನಮ್ಮನ್ನಾಡಿಸುವ ವಿಧಿ. ನಮ್ಮ ಪೂರ್ವ ಕರ್ಮಗಳ ಲೆಕ್ಕವಿಟ್ಟು ನಮ್ಮ ಪ್ರತೀ ಕೆಲಸ ಕಾರ್ಯಗಳಲ್ಲಿ ತನ್ನ ಪ್ರಭಾವವನ್ನು ಬೀರುತ್ತಾ ನಮ್ಮನ್ನಾಡಿಸುವ ವಿಧಿ . ಅದು ಒಂದು ಕೊಬ್ಬಿದ ಟಗರು. ಇನ್ನೊಂದು ನಾವು. ನಮಗೆ ನಮ್ಮ ಪೂರ್ವಕರ್ಮಗಳ ಪರಿಚಯವೂ ಇಲ್ಲ ಮತ್ತು ಲೆಕ್ಕವೂ ಇಲ್ಲ. ನಾವು ನಮ್ಮ ” ಅಹಂ” ನ್ನು ಇಟ್ಟುಕೊಂಡು ಇಲ್ಲಿ ಜೀವನವನ್ನು ನಡೆಸುವ ಹೋರಾಟ ಮಾಡುತ್ತಿದ್ದೇವೆ.

ಏಳು- ಬೀಳುಗಳು, ಸುಖ ದುಃಖಗಳು, ನೋವು – ನಲಿವುಗಳು, ಪ್ರೀತಿ -ದ್ವೇಷಗಳು ಮುಂತಾದ ಭಾವಗಳನ್ನು ಹೊತ್ತು ಹುಟ್ಟಿದಾರಭ್ಯ ಸಾಯುವತನಕ ಹೋರಾಡುತ್ತಲೇ ಇರುವ ನಾವು ಇನ್ನೊಂದು ಟಗರು. ಈ ಜಗತ್ತಿನ ನಮ್ಮ ಬದುಕೇ ಇವೆರಡರ ನಡುವಿನ ತಿಕ್ಕಾಟ. ನಾವು ನಮ್ಮ ಅಜ್ಞಾನದಿಂದ ಮತ್ತು ಅಹಂಕಾರದಿಂದ ವಿಧಿಯೊಡನೆ ಹೋರಾಡುವ ಪ್ರಯತ್ನ ಮಾಡುತ್ತೇವೆ. ಎದುರಿಗಿದ್ದರೆ ಹೋರಾಡಬಹುದು. ನಮ್ಮ ಕಣ್ಣಿಗೆ ಕಾಣದೆ ಮರೆಯಲ್ಲಿ ನಿಂತು ನಮ್ಮನ್ನು ಹೋರಾಟಕ್ಕೆ ಕರೆಯುವ ಈ ವಿಧಿಯೊಡನೆ ಹೋರಾಡಲು ಸಾಧ್ಯವೇ? ಇದು ಆ ಪರಮಾತ್ಮನ ಆಟ. ಅವನು ತನ್ನ ವಿನೋದಕ್ಕಾಗಿಯೇ ತಾನೇ ರಚಿಸಿಕೊಂಡ ಒಂದು ನಾಟಕ.

ಪರಿಹಾರವನ್ನು ಗುಂಡಪ್ಪನವರು ಸೂಚಿಸಿದ್ದಾರೆ. “ಬಿಗಿಯದಿರು ನೀಂ ಬೀಗಿ” ಎಂದರು ಅಹಂಕಾರಭಾವದಿಂದ ಗರ್ವ ಪಡದೆ ಆ ಪರಮಾತ್ಮನಿಗೆ ಶರಣಾಗಿಬಿಟ್ಟರೆ, ಪೂರ್ವ ಕರ್ಮ ಸವೆಸಲು, ಹೊಸಕರ್ಮಗಳನ್ನು ಕಟ್ಟಿಕೊಳ್ಳದೆ ಇರಲು, ಕ್ರಮೇಣ ಕರ್ಮ ಶೇಷವನ್ನು ಅಳಿಸಲು ಶಕ್ತಿಯನ್ನು ಅವನೇ ಕೊಡುತ್ತಾನೆ. ಆಗ ದ್ವಂದ್ವಗಳ ಸುಳಿಯಿಂದ ನಾವು ಹೊರಬಂದು, ಆನಂದದಿಂದ ಇರಬಹುದು.


ರಸಧಾರೆ – 163

ಮಾನುಷ್ಯಚರಿತೆಯಚ್ಚಿನ್ನವಾಹಿನಿ ಸಾಗ |
ಲಾನುಪೂರ್ವ್ಯದ ಕರ್ಮ ಋಣಶೇಷವಿನಿತು ||
ತಾನಿರಲೆಬೇಕಲ್ತೆ ಪೌರುಷಸ್ಪರ್ಧನೆಗೆ |
ಆನೆಗಂಕುಶದಂತೆ – ಮಂಕುತಿಮ್ಮ ||

ಮಾನುಷ್ಯಚರಿತೆಯಚ್ಚಿನ್ನವಾಹಿನಿ = ಮಾನುಷ್ಯಚರಿತೆ+ಅಚ್ಚಿನ್ನವಾಹಿನಿ // ಸಾಗಲಾನುಪೂರ್ವ್ಯದ = ಸಾಗಲು + ಅನುಪೂರ್ವ್ಯದ // ಋಣಶೇಷವಿನಿತು = ಋಣ +ಶೇಷವು +ಇನಿತು// ತಾನಿರಲೆಬೇಕಲ್ತೆ = ತಾನು + ಇರಲೆ+ ಬೇಕಲ್ತೆ// ಆನೆಗಂಕುಶದಂತೆ = ಆನೆಗೆ + ಅಂಕುಶದಂತೆ // 
ಅಚ್ಚಿನ್ನವಾಹಿನಿ = ನಿರಂತರ ಹರಿಯುವ // ಅನುಪೂರ್ವ್ಯದ = ಹಿಂದಿನಿಂದ ಬಂದ//

ಮನುಷ್ಯನ ಜೀವನ ಹೀಗೇ ನಿರಂತರವಾಗಿ ಸಾಗುತ್ತಿರಬೇಕಾದರೆ, ಪ್ರತೀ ಜನ್ಮದಲ್ಲೂ ಒಂದಷ್ಟು ಕರ್ಮಶೇಷ ಉಳಿಸಿಕೊಂಡಿರಬೇಕು. ನಿಷ್ಶೇಶವಾಗಿಬಿಟ್ಟರೆ ಪುನರ್ಜನ್ಮವಿರುವುದಿಲ್ಲ, ಹಾಗಾಗಿ ಒಂದಿಷ್ಟು ಋಣ ಶೇಷ ಉಳಿಯುವಂತೆ ಮಾಡಿ ಆ ಪರಮಾತ್ಮ ನಮ್ಮನ್ನು ಮತ್ತೆ ಮತ್ತೆ ಪಾತ್ರ ಧರಿಸುವಂತೆ ಮಾಡುತ್ತಾನೆ. ಆನೆಯನ್ನು ಅಂಕುಶದಿಂದ ಹತೋಟಿಯಲ್ಲಿ ಇಟ್ಟಿರುವಂತೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಎಲ್ಲ ಮಾಹಾತ್ಮರೂ ಈ ಜಗತ್ತು ಒಂದು ನಾಟಕ ಮಂದಿರ, ನಾವೆಲ್ಲಾ ಕೇವಲ ಪಾತಧಾರಿಗಳು ಮತ್ತು ನಮ್ಮನ್ನಾಡಿಸುವ ಆ ಸೂತ್ರಧಾರನೆ, ಆ ಪರಮಾತ್ಮ ಎಂದು ಅನಾದಿಕಾಲದಿಂದ ಹೇಳುತ್ತಲೇ ಬಂದಿದ್ದಾರೆ. ಈ ಜಗತ್ತಿನ ಎಲ್ಲ ಚರಾಚರ ಜೀವಿಗಳ ಜೀವನವನ್ನು ತನ್ನ ವಿನೋದಕ್ಕಾಗಿ ತಾನೇ ಸೃಷ್ಟಿಸಿ ಅವುಗಳ ನಿರಂತರತೆಯನ್ನು ಕಾಯುವುದಕ್ಕಾಗಿ ಅವುಗಳಿಗೆ ಕರ್ಮವೆಂಬ ಅಂಟನ್ನು ಇಟ್ಟು ತಾನು ಇವುಗಳ ಆಟವನ್ನು ನೋಡಿ ಆನಂದಿಸುತ್ತಿದ್ದಾನೆ ಎಂಬುದು ನಮ್ಮ ನಂಬಿಕೆ. ಹೀಗೇ ಕರ್ಮಗಳ ಕೊಂಡಿಗಳ ಬಂಧನದಿಂದಲೇ ನಮಗೆ ಜನ್ಮ ಜನ್ಮಾಂತರದ ಸಂಬಂಧ. ಇಲ್ಲಿ ಒಂದು ವಿಚಾರವನ್ನು ನಾವು ನೋಡಬೇಕು. ಆ ಪರಮಾತ್ಮನೇ ಎಲ್ಲರನ್ನೂ ಸೃಜಿಸಿ ಎಲ್ಲರೊಳಗೂ ತಾನೇ ಜೀವಾತ್ಮ ರೂಪದಲ್ಲಿ ಪ್ರವೇಶಿಸಿ ತಾನೇ ಎಲ್ಲವನ್ನೂ ಅನುಭವಿಸುತ್ತಿದ್ದಾನೆ ಎಂದಮೇಲೆ, ಇಲ್ಲಿ ನಾವು ಅನುಭವಿಸುವುದೇನು? ಆ “ನಾವು” ಎಂದರೆ ಯಾರು? ನಾವುಗಳು ಈ ” ನಾನು ” ಎನ್ನುವ ಭಾವದಿಂದ ಎಲ್ಲ ಕರ್ಮಗಳನ್ನು ನಾವು ಅನುಭವಿಸುತ್ತಿದ್ದೇವೆ, ಇದು ನನ್ನ ಕರ್ಮ ಎಂದು ಒಂದು “ಪ್ರಾಕೃತ ಅಥವಾ ವ್ಯಾವಹಾರಿಕ” ಭಾವದಿಂದ ಅಂದುಕೊಳ್ಳುತ್ತೇವೆ. ಇದು ಸಹಜ.

ಆದರೆ ಆ ಪರಮಾತ್ಮ ತನ್ನ ಆನಂದಕ್ಕಾಗಿ ರಚಿಸಿದ ಈ ಜಗನ್ನಾಟಕದಲ್ಲಿ, ನಮ್ಮದೊಂದು ಪಾತ್ರ. ಈ ಪಾತ್ರಕ್ಕೆ ಹೂರಣ ನಮ್ಮ ಕರ್ಮ. ಈ ಕರ್ಮವಿದ್ದಷ್ಟೂ ದಿನ ನಮ್ಮ ಪಾತ್ರ ನಿರಂತರ. ಈ ಪಾತ್ರವನ್ನು ಹೀಗೇ ಮುಂದುವರೆಸಿಕೊಂಡು ಹೋಗಲು ಮತ್ತು ನಮ್ಮನ್ನು ನಿಯಂತ್ರಿಸಲು, ಆನೆಗೆ ಅಂಕುಶದಂತೆ, ನಮಗೆ ಕರ್ಮಶೇಷವನ್ನು ಸದಾಕಾಲ ಇಟ್ಟಿರುತ್ತಾನೆ. ಆದರೆ ನಾವು ಈ ಜಗತ್ತಿನಲ್ಲೇ ರಕ್ತಿಯನ್ನು( ಆಸಕ್ತಿ) ತೋರುತ್ತಾ ಇರುವಷ್ಟು ದಿನ ಅವನಿಗೂ ಸಂತೋಷ. ಏಕೆಂದರೆ ನಾಟಕ ಮುಂದುವರೆಯುವುದಲ್ಲ!!! ನಾವು ವಿರಕ್ತಿಯನ್ನು ತೋರಿದರೆ, ಮತ್ತು ಜಗತ್ತಿನ ಯಾವುದನ್ನೂ ಬೇಡದೆ “ಜಗನ್ನಾಥನನ್ನೇ” ಮನದೊಳಗೆ “ಬಂದು ಕೂರೆಂದು ಬೇಡಿದರೆ” ನಮ್ಮ ಪಾತ್ರಕ್ಕೊಂದು ತೆರೆಯಳೆಯಬಹುದು, ಮುಕ್ತಿ ಪಡೆಯಬಹುದು. “ಅಂಕುಶ”ದ “ಅಂಕೆ”ಯಿಂದ ಹೊರಬರಬಹುದು.

ಹೇಳುವುದು ಸುಲಭ, ಅಭ್ಯಾಸ ಕಷ್ಟ, ಅಸಾಧ್ಯವಲ್ಲ. ಪ್ರಯತ್ನ ಪಡಬೇಕು!


ರಸಧಾರೆ – 164

ಹಳೆಯ ಮಲೆ ಹಳೆಯ ನೆಲವಾದೊಡೆಯುಮೊರತೆ ಮಳೆ I
ಹೊಳೆನೀರಿನಾವಗಂ ಪೊಸದಾಗಿಸುವವೊಲ್ II
ಹಳೆಯಕರ್ಮವ ಹೊಸದು ಕೊಚ್ಚಿ ಪೌರುಷನದಿಯ I
ಬೆಳೆಯುವುದು ನವತೆಯಲಿ – ಮಂಕುತಿಮ್ಮ II

ನೆಲವಾದೊಡೆಯುಮೊರತೆ = ನೆಲವು+ಆದೊದೊಡೆಯುಮ್+ ಮೊರೆತ // ಹೊಳೆನೀರಿನಾವಗಂ= ಹೊಳೆ + ನೀರಿಗೆ + ಆವಗಂ// ಪೊಸದಾಗಿಸುವವೊಲ್ = ಪೋಸದಾಗಿಸುವ+ ವೊಲ್ // ಮೊರೆತ = ನಿರಂತರ, ಧಾರಾಕಾರ//ಆವಗಂ = ಯಾವಾಗಲೂ // ಪೊಸದಾಗಿಸುವವೊಲ್ = ಹೊಸದಾಗಿಸುವಂತೆ // ನವತೆಯಲಿ ಹೊಸತಿನಲಿ.

ಹಳೆಯ ಭೂಮಿ ಮತ್ತು ಹಳೆಯ ಬೆಟ್ಟವಾದರೂ ಹೊಸದಾಗಿ ಸುರಿಯುವ ಮಳೆಯು ನದೀ ನೀರನ್ನು ಹೊಸದಾಗಿಸುವಂತೆ, ಹೊಸ ಕರ್ಮಗಳು ಹಳೆಯ ಕರ್ಮಗಳನ್ನು ಕೊಚ್ಚಿಕೊಂಡು ಹೋಗಿ, ಮತ್ತೆ ಹೊಸ ಹೊಸ ಕರ್ಮಗಳ ಸಾಂಗತ್ಯವನ್ನು ನಮಗೆ ನೀಡುವುದು ಎಂದು ಈ ಕಗ್ಗದಲ್ಲಿ ಕರ್ಮ ಪರಿವರ್ತನೆಯ ವೃತ್ತಾಂತವನ್ನು ಉಲ್ಲೇಖಿಸಿದ್ದಾರೆ, ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

ಈ ನಮ್ಮ ಕರ್ಮಗಳ ಸರಪಳಿ ಒಂದು ನದೀ ಪ್ರವಾಹವಿದ್ದಂತೆ. ಹೇಗೆ ಒಂದು ನದಿಯು ತನ್ನ ಸಂಪರ್ಕಕ್ಕ್ಕೆ ಬಂದ ಎಲ್ಲವನ್ನು ಸೇರಿಸಿಕೊಂಡು ಮುಂದೆ ಮುಂದೆ ಸಾಗಿ ಸಮುದ್ರವನ್ನು ಸೇರಿಕೊಳ್ಳುತ್ತದೆಯೋ ಹಾಗೆಯೇ ನಮ್ಮ ಜೀವನದಲ್ಲೂ ನಾವು ಸಂಬಂಧಪಟ್ಟ ಎಲ್ಲದರೊಡನೆ ನಮಗೆ ಕರ್ಮ ಸಂಬಂಧವೇರ್ಪಟ್ಟು ನಮ್ಮ ಜೀವನದ ಪಯಣವೂ ಸಾಗುತ್ತಿರುತ್ತದೆ. ಹಾಗೆ ಸಾಗಿದ ನದಿ ಕಡಲನ್ನು ಸೇರಿ, ಮತ್ತೆ ಆವಿಯಾಗಿ ಮೋಡವಾಗಿ ಮಳೆಯಾಗಿ ಸುರಿದಾಗ ಹೊಸ ನೀರಂತೆ ಸುರಿಯುತ್ತದೆ. ಆದರೆ ಅದು ಸುರಿಯುವ ಭೂಮಿ ಮತ್ತು ಗುಡ್ಡಗಳು ಹಳೆಯದಾದರೂ ಸುರಿಯುವ ಮಳೆ ಮತ್ತೆ ಮಳೆಯ ನೀರು ಮತ್ತು ಅದರಿಂದಾದ ನದಿಯೂ ಹೊಸದಾಗಿರುತ್ತದೆ. ಅದೇ ರೀತಿ ಕರ್ಮಗಳ ಸಂಕೋಲೆಯಿಂದ ಬಂಧಿತರಾದ ನಾವುಗಳೂ ಸಹ ಹಳೆಯಕರ್ಮಗಳ ಸಂಕೋಲೆಯ ಹಳೆಯ ಕೊಂಡಿಗಳನ್ನು ಬಿಡಿಸಿಕೊಳ್ಳುತ್ತಾ ಹೊಸಕೊಂಡಿಗಳಿಂದ ಬಂಧಿತರಾಗುತ್ತಾ ಇರುತ್ತೇವೆ. ಹಳೆಯ ಜೀವನ ಕಳೆದು ಜೀವನ ಹೊಸದಾಗುತ್ತಾ ಹೋಗುತ್ತದೆ.

ಯಾವ ಪೂರ್ವಜನ್ಮದ ಕರ್ಮ ಶೇಷದ ಪರಿಚಯ ನಮಗೆ ಇರದಿದ್ದರೂ ಅದನ್ನು ನಾವು ಅನುಭವಿಸುತ್ತಲೇ ಇರುತ್ತೇವೆ. ಆದರೆ ಹೊಸ ಕರ್ಮಗಳು ನಮಗೆ ಗೊತ್ತು, ಕೆಲವು ಅರ್ಥವಾಗುತ್ತವೆ ಮತ್ತೆ ಕೆಲವು ಅರ್ಥವಾಗುವುದಿಲ್ಲ.. ಅರ್ಥವಾಗಲಿ ಬಿಡಲಿ ನಮ್ಮ ಕರ್ಮವನ್ನು ನಾವು ಅನುಭವಿಸಿಯೇ ತೀರಬೇಕು. ಹಾಗೆ ಅನುಭವಿಸುವಾಗ, ಕುಲಶೇಕರರು ಹೇಳುವಂತೆ ” ಯದ್ ಯದ್ ಭವ್ಯಂ ಭವತು ಭಗವನ್ ಪೂರ್ವ ಕರ್ಮಾನುರೂಪಂ, ಏತತ್ ಪ್ರಾರ್ತ್ಯಂ ಮಮ ಬಹುಮತಂ ಜನ್ಮ ಜನ್ಮಾಂತರೇಪಿ, ತ್ವತ್ ದಾಂಬೋರುಹಯುಗಗತಾ ನಿಶ್ಚಲಾ ಭಕ್ತಿರಸ್ತು” ಅರ್ಥಾತ್ ” ಹೇ ಪರಮಾತ್ಮ, ಜನ್ಮ ಜನ್ಮಾಂತರದಿಂದ ನನ್ನ ಪೂರ್ವಕರ್ಮಕ್ಕನುಗುಣವಾಗಿ, ಏನೇನು ಆಗಬೇಕೋ ಅದೆಲ್ಲ ಆಗಲಿ, ಅದನ್ನೆಲ್ಲ ಅನುಭವಿಸಲು ನಾ ಸಿದ್ಧನಿದ್ದೇನೆ, ಆದರೆ ಅದನ್ನು ಅನುಭವಿಸುವಾಗ, ನನ್ನ ಮನಸ್ಸು ನಿನ್ನ ಪಾದಾರವಿಂದದಲ್ಲಿ ನಿಶ್ಚಲವಾಗಿ ನಿಲ್ಲಲಿ” ಎಂತಹ ಅದ್ಭುತ ವಿಚಾರ. ನಾ ಹಿಂದೆಯೂ ಹೇಳಿದ್ದನೆ, ಈಗಲೂ ಹೇಳುತ್ತೇನೆ, ನಮ್ಮ ಕರ್ಮಗಳನ್ನು ಅನುಭವಿಸಿಯೇ ತೀರಬೇಕು ಮತ್ತು ತೀರಿಸಬೇಕು. ಅನ್ಯಥಾ ದಾರಿಯಿಲ್ಲ. ಹಾಗೆ ಅನುಭವಿಸುವಾಗ ಹೊಸ ಕರ್ಮಗಳನ್ನು ಸಾಧ್ಯವಾದಷ್ಟು ಸಂಚಯನ ಮಾಡದೆ, ಕಟ್ಟಿಕೊಂಡದ್ದನ್ನು ಕರಗಿಸಿಕೊಂಡು ನಮ್ಮ ಹೊರುವ ಭಾರವನ್ನು ತಗ್ಗಿಸಿಕೊಂಡರೆ, ಜೀವನ ಹಗುರವಾಗುತ್ತದೆ. ಕರ್ಮ ಪೂರ್ತಿ ಖಾಲಿಯಾದಾಗ ನಮಗೆ ಮುಕ್ತಿ.

ಇದರ ಪ್ರಕ್ರಿಯೆ ಬಹಳ ಕಷ್ಟ, ನಿರಂತರ ಸಾಧನೆ ಬೇಕು, ಸಾಧಿಸಬೇಕೆಂಬ ಹಠ ಬೇಕು. ಅಸಾಧ್ಯವಲ್ಲ. ವಾಚಕರೆ ಪರಮಾತ್ಮನಿಗೆ ಶರಣಾಗಿ ಪ್ರಯತ್ನ ಪಡುವ. ಅವನ ಕೃಪೆ ಇದ್ದರೆ ಅಸಾಧ್ಯವಾವುದೂ ಇಲ್ಲ.


ರಸಧಾರೆ – 165

ಹೊಸಹೊಸದು ತಾನಾಗುತಿರ್ದೊಡಂ ತನ್ನಯ I
ಪ್ರಸವ ಪ್ರವಾಹ ಭೂಮಿಗಳ ಹಳೆತನದಿಂ II
ನಸುಸೋಂಕು ವಾಸನೆಯ ಪೊನಲೊಂದಬೇಕಲ್ತೆ I
ಹೊಸದು ಹಳದಾಗದೆ – ಮಂಕುತಿಮ್ಮ II

ತಾನಾಗುತಿರ್ದೊಡಂ = ತಾನು+ಆಗುತಿರ್ದೊಡಂ // ಪೊನಲೊಂದಬೇಕಲ್ತೆ = ಪೊನಲ್+ಒಂದುಬೇಕಲ್ತೆ, ಪೊನಲ್ = ನದಿ

ಹೊಸಮಳೆಯಿಂದ ಸೃಷ್ಟಿಯಾದ ಹೊಸನೀರಿನ ನದಿ ಹರಿಯುವುದು ಹಳೆಯ ದಾರಿಯಲ್ಲವೇ? ಅದರ ಹರಿಯುವ ಪಾತ್ರವೇನೂ ಬದಲಾಗುವುದಿಲ್ಲವಲ್ಲವೇ? ಅದು ಉಗಮವಾಗುವ ಬೆಟ್ಟವೂ ಹಲತೆ ಮತ್ತು ಅದು ಹರಿಯುವ ಭೂಮಿಯೂ ಹಳತೇ. ಹಾಗೆ ಹೊಸತನವನ್ನು ತುಂಬಿಕೊಂಡ ನದಿ ಆ ಹಳೆಯ ಭೂಮಿಯ ಗುಣಗಳನ್ನೂ ಹೊತ್ತು ಹೊಸದರಂತೆ ಹರಿಯುತ್ತದೆ. ಹಳತನ್ನು ಉಳಿಸಿಕೊಂಡು ಹೊಸ ರೂಪಧರಿಸಿ ಸಾಗುವುದೇ ಈ ಜೀವನದ ನದಿ ಎಂಬ ಅರ್ಥದಲ್ಲಿದೆ ಈ ಕಗ್ಗದ ಹೂರಣ.

ತಾಯ ಗರ್ಭದಲ್ಲಿ ಮಗುವಿನ ಅಂಕುರವಾದಾಗ, ಅದು ಹೊಸ ಮಗು. ಆದರೆ ಆ ಮಗು ತನ್ನ ತಂದೆ ಮತ್ತು ತನ್ನ ತಾಯಿಯ, ಎರಡೂ ಕಡೆಯ ಏಳುತಲೆಮಾರಿನ ಹಿಂದಿನವರಿಂದ ಬರುವ ವಂಶವಾಹಿನಿಯನ್ನು ಹೊತ್ತೇ ಬೆಳೆಯುತ್ತದೆ ಮತ್ತು ಈ ಜಗತ್ತಿಗೆ ಬರುತ್ತದೆ. ಮಗು ಹೊಸದಾದರೂ, ಅದರ ರೂಪ ಹೊಸದಾದರೂ ಅದರ ಗುಣಗಳು, ಹಳೆಯ ತಲೆಮಾರಿನ ಯಾರನ್ನೋ ಹೋಲುವುದನ್ನು ನಾವು ಕಾಣುತ್ತೇವೆ. ಒಂದು ಗರ್ಭದಲ್ಲಿ ಹುಟ್ಟಿದ ಅವಳಿ ಗಂಡು ಮಕ್ಕಳಲ್ಲಿ ಒಬ್ಬ ತಾಯಿಯ ತಂದೆಯಂತೆಯೂ ಮತ್ತು ಮತ್ತೊಬ್ಬ ತಂದೆಯ ತಂದೆಯಂತೆಯೂ ಇರುವುದನ್ನು ನಾನು ಕಂಡಿದ್ದೇನೆ. ಇಲ್ಲಿ ಮಕ್ಕಳು ಹೊಸದಾದರೂ ಹಳತಿನ ಗುಣಗಳನ್ನು ಹೊತ್ತು ತರುತ್ತಾರೆ. ಹಾಗೆಯೇ ಈ ಜೀವನದಲ್ಲಿ ನಾವು ಹೊಸತೆಂದು ಯಾವುದನ್ನು ಕರೆಯುತ್ತೇವೆಯೋ, ಅದು ಹಳತಿನ ಆಧಾರದಮೇಲೆಯೇ ಪ್ರಕಟಗೊಂಡು ಪ್ರಕಾಶಿಸುತ್ತದೆ. ಇದನ್ನು ನಾವು ಈ ಜಗತ್ತಿನ ಸಮಸ್ತದಲ್ಲೂ ಕಾಣಬಹುದು. ಗಿಡ ಮರ ಬಳ್ಳಿ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ ಹೇಗೇ ಎಲ್ಲದರಲ್ಲೂ ಕಾಣಬಹುದು .

ಸೃಷ್ಟಿಕ್ರಮದಲ್ಲಿ ಒಂದು ಬಾರಿ ಶುರುವಾಗಿಬಿಟ್ಟರೆ ಕರ್ಮಗಳ, ಗುಣಗಳ ಮತ್ತು ವಾಸನೆಗಳನ್ನು ಹೊತ್ತುಕೊಂಡು ಹರಿಯುವ ನಮ್ಮ ಜೀವನದ ಪ್ರವಾಹ ನಿರಂತರ ನಡೆಯುತ್ತದೆ. ಹಳತನ್ನು ಬಿಟ್ಟು ಹೊಸತನ್ನು ಹಿಡಿದು, ಹೊಸತನ್ನು ಹಳತಿನೊಂದಿಗೆ ಮಿಳಿತಮಾಡಿ, ಹೊಸತನ್ನು ಹಳತಾಗಿಸುತ್ತಾ, ಮತ್ತೆ ಹೊಸತನ್ನು ಪಡೆದುಕೊಳ್ಳುತ್ತಾ ನಿರಂತರ ಸಾಗುತ್ತಲೇ ಇರುತ್ತದೆ ನಮ್ಮ ರೂಪ ಬದಲಾಯಿಸುತ್ತಾ ಹೋಗುವ ಈ ಜೀವನದ ಪ್ರಯಾಣ.ಹೊಸತನ್ನು ಏನೂ ಪಡೆಯದೆ, ಇರುವುದನ್ನಲ್ಲ ಖಾಲಿ ಮಾಡಿದಾಗ ನಮ್ಮ ಪ್ರಯಾಣಕ್ಕೊಂದು ಅಂತ್ಯ ಮತ್ತು ಸದಾ ನವ ನವೀನವಾದ ಅನಂತ ವಿಶ್ವದಲ್ಲಿ ಲೀನ.

ವಾಚಕರೆ ಮನಸ್ಸು ಬುದ್ಧಿ ದೇಹಗಳಿಗೆ ರಂಜನೆಯನ್ನು ಕೊಡುವ ಈ ಜಗತ್ತಿನ ವಾಸನೆಯನ್ನು ಬಿಡುವುದು ಅಷ್ಟು ಸುಲಭವಲ್ಲ. ಪ್ರಯತ್ನಪಟ್ಟರೆ ಹೊಸದಾಗಿ ಏನನ್ನೂ ಪಡೆದುಕೊಳ್ಳದೆ, ಇರುವುದನ್ನು ಕಳೆದು ಕೊಂಡು ನಿಷ್ಶೇಶ ಕರ್ಮವಾಗಿ ಮುಕ್ತಿ ಪಡೆಯಬಹುದು. ಆದರೆ ಅದು ಹಿಂತಿರುಗಿ ನೋಡದಂತ ಪ್ರಯತ್ನವಾಗಿರಬೇಕು.

ರಸಧಾರೆ – 166

ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ
ಕಡಲೊಳೆತ್ತಲೋ ಹೊಸ ದ್ವೀಪವೇಳುವುದು
ಕಳೆಯುತೊಂದಿರಲಿಲ್ಲಿ ಬೆಳೆವು ದಿನ್ನೊಂದೆಲ್ಲೋ
ಅಳಿವಿಲ್ಲ ವಿಶ್ವಕ್ಕೆ – ಮಂಕುತಿಮ್ಮ.

ಕಡಲೊಳೆತ್ತಲೋ = ಕಡಲೊಳು + ಎತ್ತಲೋ // ದ್ವೀಪವೇಳುವುದು = ದ್ವೀಪವು + ಏಳುವುದು// ಕಳೆಯುತೊಂದಿರಲಿಲ್ಲಿ = ಕಳೆಯುತ + ಒಂದು + ಇರಲು+ ಇಲ್ಲಿ // ಬೆಳೆವುದಿನ್ನೊಂದೆಲ್ಲೊ = ಬೆಳೆವುದು + ಇನ್ನೊಂದು + ಇನ್ನೆಲ್ಲೊ

ಈ ಜಗತ್ತಿನಲ್ಲಿ ಒಂದು ಹುಳ ಸತ್ತರೆ ಹತ್ತು ಹುಟ್ಟುತ್ತವೆ. ನಾವು ಒಂದು ಸೊಳ್ಳೆಯನ್ನು ಹೊಸಕಿ ಹಾಕಿದರೆ, ಬೇರೆಲ್ಲೋ ಸಾವಿರ ಹುಟ್ಟಿರುತ್ತದೆ. ಒಂದು ಸಸಿ ನಾಶವಾದರೆ ಬದಲಾಗಿ ಸಾವಿರಾರು ಹುಟ್ಟುತ್ತವೆ. ಭೂಮಿಯ ಮೇಲ್ಮೈಯೂ ಬದಲಾಗುತ್ತಿರುತ್ತದೆ. ಎಲ್ಲೋ ಸಾಗರ ವಿಸ್ತಾರಗೊಂಡು ಕೆಲ ನೆಲಬಾಗ ಕೊಚ್ಚಿ, ಮುಚ್ಚಿಕೊಂಡು ಹೋದರೆ, ಮತ್ತೆಲ್ಲೋ ಹಲ ದ್ವೀಪಗಳು ತಲೆಯೆತ್ತುತ್ತವೆ. ಒಂದು ಎಲ್ಲೋ ಕಳೆದು ಹೋಯಿತು ಎಂದರೆ ಮತ್ತೆಲ್ಲೋ ಇನ್ನೊಂದು ಬೆಳೆದು ನಿ೦ತಿರುತ್ತದೆ. ಹೀಗೆ ಅಳಿವು, ಸುಳಿವು, ಉಳಿವುಗಳ ಪ್ರಕ್ರಿಯೆ ನಿರಂತರವಾಗಿ ಮತ್ತು ನಿರಾತಂಕವಾಗಿ ಈ ಜಗತ್ತಿನಲ್ಲಿ ನಡೆಯುತ್ತಿರುತ್ತದೆ . ಹಾಗಾಗಿ ಈ ಜಗತ್ತಿಗೆ ಅಳಿವಿಲ್ಲ ಎನ್ನುವುದೇ ಗುಂಡಪ್ಪನವರ ಈ ಕಗ್ಗದ ಹೂರಣ.

ಈ ಪ್ರಕ್ರಿಯೆ ಕೇವಲ ವಸ್ತುನಿಷ್ಟವಾದ ರೂಪಬದಲಾವಣೆಗೆ ಮಾತ್ರ ಸೀಮಿತವಲ್ಲ. ಇದು ಮನುಷ್ಯನ ಆಲೋಚನೆಗಳು, ಅವನ ಕರ್ಮಗಳು (ಕೆಲಸ ಎಂಬ ಅರ್ಥದಲ್ಲಿ) , ಅವನ ಸಂಬಂಧಗಳು ಎಲ್ಲಕ್ಕೂ ಅನ್ವಯವಾಗುತ್ತದೆ. ಮನುಷ್ಯನ ಮನದಲ್ಲಿ ಉದ್ಭವವಾಗುವ ಆಲೋಚನೆಗಳನ್ನೇ ನೋಡಿ. ಒಂದಾದಮೇಲೆ ಒಂದರಂತೆ ಹೊಸ ಹೊಸ ಆಲೋಚನೆಗಳು, ಒಂದು ಇಂಗಿದರೆ ಮತ್ತೊಂದು ಎದ್ದು ನಿಲ್ಲುತ್ತದೆ. ಅಂತ್ಯವೇ ಇಲ್ಲದ ಆಲೋಚನೆಗಳ ಸರಪಳಿ. ಕೊಂಡಿಯ ಕೊನೆಯೇ ಕಾಣದ ಯೋಚನೆಗಳು, ಆಲೋಚನೆಗಳು.

ಇದೆ ರೀತಿ ನಾವು ಮಾಡುವ ಕೆಲಸಗಳನ್ನು ನೋಡಿದರೆ, ನಮ್ಮ ಮನಸ್ಸಿನಲ್ಲಿ ಆಗುವ ಚಿತ್ತ ಬದಲಾವಣೆಗೆ ಅನುಗುಣವಾಗಿ ನಮ್ಮ ಕೆಲಸಗಳೂ ಬದಲಾಗುತ್ತಾ ಹೋಗುತ್ತವೆ. ಏನೋ ಆಗಿದ್ದವರು ಏನೋ ಆಗಿಬಿಡುತ್ತಾರೆ. ” ಬುದ್ಧಿ:ಕರ್ಮಾನುಸಾರಿಣಿ” ಎನ್ನುವ ಒಂದು ಮಾತು ಇದೆ. ಕೆಲಬಾರಿ ನಮ್ಮ ಪೂರ್ವಕರ್ಮಕ್ಕನುಗುಣವಾಗಿ ನಮ್ಮ ಬುದ್ಧಿಯೂ ಮತ್ತೆ ಕೆಲವು ಬಾರಿ ” ನಮ್ಮ ಬುದ್ಧಿ ಹಾಗೆ ಓಡುವುದು, ಹಾಗಾಗಿ ಆ ಕರ್ಮಗಳು ” ಎನ್ನುವಂತೆ ಒಟ್ಟಾರೆ ಬುದ್ಧಿ ಬದಲಾಗುತ್ತಾ ಹೋಗುತ್ತದೆ. ” ಇವರು ಯಾಕೋ ಮೊದಲಿನ ಹಾಗೆ ಇಲ್ಲ” ಎನ್ನುವ ಮಾತು ನಾವು ಆಗಾಗ ಕೇಳುತ್ತಿರುತ್ತೇವೆ. ಹಾಗೆಯೇ ನಮ್ಮ ಸಂಬಂಧಗಳೂ ಸಹ, ಇಂದು ಮಿತ್ರರು. ನಾಳೆ ಶತ್ರುಗಳು. ನಮಗೆ ಬಾಲ್ಯದ ಸ್ನೇಹಿತರು ಕಳೆದೇ ಹೋಗಿದ್ದಾರೆ. ಆದರೆ ಹೊಸ ಹೊಸ ಸ್ನೇಹಿತರು ಅಂಟಿಕೊಳ್ಳುತ್ತಾರೆ. ಪರಸ್ಪರ ಸಂಬಂಧಗಳೂ ಸಹ ಹಾಗೆಯೇ. ಈ ಕಳಕೊಳ್ಳುವ ಮತ್ತು ಹೊಸೆದುಕೊಳ್ಳುವ ಕ್ರಮ ಸ್ನೇಹದಲ್ಲಿ ನಾವು ಬಹಳವಾಗಿ ಕಾಣುತ್ತೇವೆ. ಇದೇ ರೀತಿ ಜಗತ್ತಿನ ಪ್ರತಿಯೊಂದೂ ಸಹ ಒಂದು ಅಳಿದರೆ ಹತ್ತು ಹುಟ್ಟುತ್ತವೆ. ಪ್ರಾಣಿ, ಪಕ್ಷಿ ,ಕೀಟ, ಸಸಿ, ಗಿಡ, ಋತುಮಾನಗಳು ಎಲ್ಲವೂ ಒಂದಾದಮೇಲೆ ಒಂದರಂತೆ. ಕುದಿಯುವ ನೀರಿನಲ್ಲಿ ಗುಳ್ಳೆಗಳು ಎದ್ದು ಎದ್ದು ಒಡೆದು ಒಡೆದು ಮತ್ತೆ ಮತ್ತೆ ಏಳುತ್ತಲೇ ಇರುವಂತೆ.

ಹೌದು ಸ್ವಾಮೀ, ಅದಕ್ಕೇನು ಮಾಡಬೇಕು ಎಂದರೆ ಆ ಪ್ರಶ್ನೆಗೆ ತಕ್ಷಣ ಉತ್ತರ ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದು ಪ್ರಕೃತಿ ನಿಯಮ. ಈ ಬದಲಾಗುವ ಆಲೋಚನೆಗಳು ಕರ್ಮಗಳು ಸಂಬಂಧಗಳು ಎಲ್ಲವೂ ಸಹ ಮಾನವರಲ್ಲಿ ಹೆಚ್ಚು. ಅನ್ಯ ಪ್ರಾಣಿಗಳಲ್ಲಿ ಅವು ಸೀಮಿತ. ಆದರೆ ನಾವೂ ಸಹ ಈ ಪ್ರಕೃತಿಯ ಒಂದು ಅಂಶವಾದ್ದರಿಂದ ನಾವೂ ಸಹ ಈ ಪ್ರಕ್ರಿಯೆಗೆ ಅಧೀನವಾಗಿದ್ದೇವೆ. ಎಂದೂ ಅಳಿವಿಲ್ಲದ ಈ ಅನಂತ ವಿಶ್ವದಲ್ಲಿ ಹೀಗಲ್ಲದಿದ್ದರೆ ಹಾಗೆ, ಹಾಗಲ್ಲದಿದ್ದರೆ ಮತ್ತೊಂದು ರೀತಿಯಲ್ಲಿ ಬದುಕಲೇ ಬೇಕು, ಬಾಳಲೇ ಬೇಕು, ಅನ್ಯ ಮಾರ್ಗವಿಲ್ಲ. ಆದರೆ ಆ ಬದುಕು ಪರಸ್ಪರ ಪ್ರೀತಿ ಪ್ರೇಮಗಳಿಂದ, ಸ್ನೇಹ ಸೌಹಾರ್ದತೆಯಿಂದ ಕೂಡಿದ್ದರೆ ಬದಲಾದ ಸಂದರ್ಭಗಳಲ್ಲೂ ನಾವು ಆನಂದದಿಂದಿರಬಹುದು.


ರಸಧಾರೆ – 167

ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು
ಮಿತವೃತ್ತಿ; ನರಿನಿಗಂತೆಯೆ ಕರ್ಮನಿಯತಿ
ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ
ಅತಿಚರಿತೆ ಪ್ರಕೃತಿಯಲಿ – ಮಂಕುತಿಮ್ಮ.

ಕ್ಷಿತಿಚಕ್ರ = ಭೂಭ್ರಮಣೆ // ರವಿಚಕ್ರ= ಸೂರ್ಯನ ಪಥ ಚಲನೆ. ( ಇದೂ ಸಹ ಭೂಮಿಯ ಚಲನೆಯಿಂದಲೇ) // ಮಿತವೃತ್ತಿ = ಪರಿಮಿತ ಕಾರ್ಯ //ಕ್ಷಿತಿಕಂಪ = ಭೂ ಕಂಪನ
ಅತಿಚರಿತೆ = ಎಲ್ಲೆ ದಾಟಿ ಹೋಗುವುದು, ಮಿತಿಯಿಲ್ಲದ ನಡೆ ಅಥವಾ ಅತಿ ಪ್ರಗತಿ.

ಭೂಮಿಗೆ ಎರಡು ರೀತಿಯ ಚಲನೆಗಳಿವೆ. ಒಂದು ಅದು ತನ್ನ ಅಕ್ಷೆಯ ಮೇಲೆ ಸುತ್ತುತ್ತಿರುತ್ತದೆ. ಹಾಗೆ ಸುತ್ತಿಕೊಂಡೇ ಸೂರ್ಯನ ಪರಿಭ್ರಮಣೆ ಮಾಡುತ್ತದೆ. ಈ ಎರಡೂ ಸುತ್ತುವಿಕೆಯಿಂದ ಋತು ಬದಲಾವಣೆಗಳಾಗುತ್ತವೆ. ನಮ್ಮ ಎಲ್ಲ ಕಾಲಗಣನೆ, ದಿನ, ವಾರ, ತಿಂಗಳುಗಳ ಲೆಕ್ಕಕ್ಕೆ ಈ ಸುತ್ತುವಿಕೆಯೇ ಆಧಾರ. ಆದರೆ ಅವುಗಳಿಗೆ ಅಷ್ಟುಬಿಟ್ಟರೆ ಬೇರೆ ಕೆಲಸವಿಲ್ಲ. ಅಂದರೆ ಅವುಗಳ ಪ್ರವೃತ್ತಿಗೆ ಒಂದು ಮಿತಿ ಇದೆ. ಅವು ಎಂದಿಗೂ ತಮ್ಮ ಮಿತಿಗಳನ್ನು ಮೀರಿ ಕೆಲಸ ಮಾಡಲಾರವು

ಈ ಭೂಮಿಯಲ್ಲಿ ಮನುಷ್ಯನಿಗೂ ಮತ್ತು ಅವನ ಕಾರ್ಯ ಪ್ರವೃತ್ತಿಗೂ ಇದೇ ರೀತಿಯ ಮಿತಿ ಇದೆ. ಅವನ ಕರ್ಮವೇ ಅವನಿಗೆ ಮಿತಿಯನ್ನು ನಿಯಮಿಸಿ , ಅವನನ್ನು ತನ್ನ ಪರಿಧಿಯೊಳಗಷ್ಟೇ ಕೆಲಸ ಮಾಡುವಂತೆ ಮಾಡುತ್ತದೆ. ಆದರೆ ಇವನಿಗೆ ಒಂದು ಅಪರಿಮಿತ ಬುದ್ಧಿಶಕ್ತಿಯನ್ನು ಕೊಟ್ಟುಬಿಟ್ಟಿದ್ದಾನೆ ಪರಮಾತ್ಮ. ಅದನ್ನಿಟ್ಟುಕೊಂಡು ಇವನು ಆಡುವ ಆಟಕ್ಕೆ ಮಿತಿಯೇ ಇಲ್ಲ. ಜಗತ್ತಿನ ಸೃಷ್ಟಿಕ್ರಮಕ್ಕೆ ಒಂದು ಅತಿಬುದ್ಧಿಯ ವ್ಯಾಖ್ಯಾನವನ್ನು ಇವನು ಮಾಡುತ್ತಾನೆ. ಇಲ್ಲಾಗುವ ಭೂಕಂಪಗಳಿಗೆ, ಗ್ರಹಣಗಳಿಗೆ ಇವನದೇ ಆದಂತ ಪರಿಭಾಷೆ. ರಾಹು ಕೇತುಗಳು ಗ್ರಹಣ ಕಾಲದಲ್ಲಿ ಸೂರ್ಯನನ್ನು ನುಂಗಿಬಿಡುತ್ತವೆ ಎಂದು ಒಂದು ಭ್ರಮೆಯನ್ನು ಸೃಷ್ಟಿಸಿ ಬಿಟ್ಟಿದ್ದಾನೆ. ಅಷ್ಟೇ ಅಲ್ಲ ಇವನು ತನ್ನ ಅತೀ ಬುದ್ಧಿಯನ್ನು ಉಪಯೋಗಿಸಿ ವ್ಯಾಖ್ಯಾನ ಮಾಡದೆ ಇರುವ ವಸ್ತುವೇ ಇಲ್ಲ. ಇವನ ವ್ಯಾಖ್ಯಾನವನ್ನು ಪಾಪದ ಜನರು ನಂಬುತ್ತಾರೆ ಮತ್ತು ಅವರು ತೋರುವ ಹಳ್ಳದಲ್ಲಿ ಬೀಳುತ್ತಾರೆ.ಇದನ್ನೇ ಗುಂಡಪ್ಪನವರು ” ಅತಿಚರಿತೆ ” ಎಂದರು.

” ಅತಿ ಚರಿತೆ ” ಎಂದರೆ ಮಿತಿ ಮೀರಿದ ನಡೆ ಎಂದು ಅರ್ಥ. ಇಲ್ಲಿ ನರನಿಗೆ ಎಲ್ಲವೂ ಅತಿ. ಸಹಜತೆ ಇಲ್ಲವೇ ಇಲ್ಲ. ಇವನ ಆಸೆ ಅತಿ, ಇವನ ಭ್ರಮೆಗಳು ಅತಿ, ಇವನ ಊಹೆಗಳು ಅತಿ. ಈ ರೀತಿಯ ಅತಿ ಪ್ರವರ್ತನೆಯಿಂದ ಇವನು ಈ ಜಗತ್ತನ್ನು ಹಾಳುಗೆಡುವುದರಲ್ಲಿ ತೊಡಗಿದ್ದಾನೆ. ಇವನ ಈ ಪ್ರವೃತ್ತಿಯಿಂದ ಎಲ್ಲಿ ನೋಡಿದರೂ ಆರ್ಥಿಕ, ಸಾಮಾಜಿಕ, ಧಾರ್ಮಿಕ ಅಸಮಾನತೆ ಮತ್ತು ಅತಿರೇಕತೆ. ಅರ್ಥಹೀನ ಪ್ರವೃತ್ತಿ. ಕೇವಲ ಅಂಧಾನುಕರಣೆ. ಧರ್ಮದ ಹೆಸರಿನಲ್ಲಿ ಯುದ್ಧಗಳು, ಭಾಷೆಯ ಹೆಸರಿನಲ್ಲಿ ಕಿತ್ತಾಟ, ಜಾತಿಯ ಹೆಸರಿನಲ್ಲಿ ಹೋರಾಟ, ಭೂಮಿಗಾಗಿ ಹೋರಾಟ, ನೀರಿಗಾಗಿ ಹೋರಾಟ. “ಸಮುದ್ರದಲ್ಲಿ ಮೀನು ಹಿಡಿಯಲು ಹೋದವರನ್ನು ಎಲ್ಲೆಮೀರಿ ಹೋದರೆಂದು ಬಂಧಿಸಿದ್ದಾರಂತೆ”. ಸಮುದ್ರದಲ್ಲಿ ಎಲ್ಲೆಯ ಗೆರೆ ಎಳೆಯುವಂತಾ ಅತಿ ಬುದ್ಧಿವಂತಿಕೆಯಲ್ಲದೇ ನಮ್ಮ ನರನಿಗೆ ಮಾತ್ರ ಬರುತ್ತದೆ!!!.

ಸತ್ಯ ಧರ್ಮಗಳು, ಪ್ರೀತಿ ವಿಶ್ವಾಸಗಳು, ಪ್ರೇಮ ಅನುರಾಗಗಳು, ಪರಸ್ಪರ ಕರುಣೆ ಅನುಕಂಪಗಳು ರಾಜಿಸಬೇಕಾದ ಮನುಕುಲದಲ್ಲಿ ” ಅತಿಚರಣೆ” ಆಗಿ ಸುಳ್ಳು, ಮೋಸ, ದಗಾ, ತಟವಟ, ಅತ್ಯಾಸೆ, ಅಹಂಕಾರ ಮುಂತಾದ ದುರ್ಗುಣಗಳನ್ನು ಬೆಳೆಸಿಕೊಂಡು ಇಡೀ ಜಗತ್ತನ್ನೇ ನಾಶಮಾಡಲು ಬೇಕಾದ ಎಲ್ಲ ಉಪಕರಣಗಳನ್ನೂ ಮತ್ತು ಉಪಾಯಗಳನ್ನೂ ರೂಢಿಸಿ ಕೊಂಡಿದ್ದಾನೆ . ಪರಮಾತ್ಮನ ಇಚ್ಚೆಯನ್ನು ಧಿಕ್ಕರಿಸಿದ್ದಾನೆ. ಅವನ ವಿನಾಶವನ್ನು ಅವನೇ ತಂದುಕೊಂಡಿದ್ದಾನೆ.

ಈ ಸ್ಥಿತಿ ಬದಲಾಗಬೇಕಾದರೆ ಇವನ ಮನಸ್ಸು ಬದಲಾಗಬೇಕು. ಸಾಮೂಹಿಕವಾಗಿರುವ ಇಂತಹ ಸಾಂಕ್ರಾಮಿಕ ರೋಗಕ್ಕೆ ಸಾಮೂಹಿಕ ಚಿಕಿತ್ಸೆಯೇ ನಡೆಯಬೇಕು. ಎಲ್ಲ ಸಜ್ಜನರೂ ಈ ನಿಟ್ಟಿನಲ್ಲಿ ಒಮ್ಮತದಿಂದ ಕೆಲಸಮಾಡಿದರೆ ಈ ಜಗತ್ತೂ ಸುಧಾರಿಸಬಹುದೇನೋ!


ರಸಧಾರೆ – 168

ಅನುಬಂಧ ಜೀವಜೀವಕೆ ಪುರಾಕೃತದಿಂದ
ಮನದ ರಾಗದ್ವೇಷವಾಸನೆಗಳದರಿಂ
ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು
ಕೊನೆಯಿರದ ಬಲೆಯೂ ಅದು – ಮಂಕುತಿಮ್ಮ

ರಾಗದ್ವೇಷವಾಸನೆಗಳದರಿಂ = ರಾಗ + ದ್ವೇಷ+ವಾಸನೆಗಳು+ ಆದರಿಂ

ಜೇವಿ ಜೀವಿಗಳ ಮಧ್ಯೆ ಇರುವ ಅನುಬಂಧವು ಪೂರ್ವಕರ್ಮದಿಂದಲೇ ಉಂಟಾಗುತ್ತದೆ. ಮನಸ್ಸಿನ ಕೋಪ ದ್ವೇಷ ಮತ್ತು ವಾಸನೆಗಳೂ ಸಹ ಇದರಿಂದಲೇ. ದೇಹದ ಹೊಳಪು ಅದರ ಆಕರ್ಷಣೆ ಮತ್ತು ಆ ಆಕರ್ಷಣೆ ಯಿಂದ ಉಂಟಾಗುವ ತೊಂದರೆ ತೊಡಕುಗಳು ಒಂದು ಅಂತ್ಯವಿಲ್ಲದ ಬಲೆಯೆಂತೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಿಸುತ್ತಾರೆ.

ನಾವು ಇಂತಹವರ ಮನೆಯಲ್ಲೇ ಜನಿಸಬೇಕೆಂದು ನಾವು ಹೊತ್ತು ತಂದ ಪೂರ್ವಕರ್ಮಗಳೇ ನಿರ್ಧರಿಸುತ್ತವೆಯಂತೆ. ಇಲ್ಲಿ ಜನಿಸಿದಮೇಲೆ ನಾವು ಬೆಳೆಸಿಕೊಳ್ಳುವ ಸಂಬಂಧಗಳು, ಸ್ನೇಹಗಳೂ ಸಹ ಆ ಪೂರ್ವಕರ್ಮದ ಪ್ರಭಾವದಿಂದಲೇ ಎನ್ನುತ್ತಾರೆ ಅರಿತವರು. ಅದು ಬಹಳಷ್ಟು ಮಟ್ಟಿಗೆ ನಿಜವೆನ್ನಿಸುತ್ತದೆ. ಏಕೆಂದರೆ, ನೋಡಿ ನಮ್ಮ ನಮ್ಮ ಜೀವನದಲ್ಲಿ ನಾವು ಹೇಗೆ ಮತ್ತೊಬ್ಬರೊಡನೆ ಬಂಧನಗಳನ್ನು ಬೆಳೆಸಿಕೊಳ್ಳುತ್ತೇವಲ್ಲ. ಯಾರದೋ ಸ್ನೇಹ ಉಂಟಾಗುತ್ತದೆ, ಯಾರದೋ ಬಿಟ್ಟುಹೋಗುತ್ತದೆ. ಯಾರಮೇಲೋ ಪ್ರೀತಿ, ಯಾರ ಮೇಲೋ ಕೋಪ, ಯಾರ ಮೇಲೋ ದ್ವೇಷ, ಯಾರಿಂದರೋ ತೊಂದರೆ, ಯಾರಿಗೋ ಉಪಕಾರ ಮಾಡುವುದು, ಯಾರಿಂದಲೋ ಸಹಾಯ ಪಡೆಯುವುದು ಇದು ನಿರಂತರವಾಗಿ ಸಾಯುವತಕನ ನಡೆಯುತ್ತಲೇ ಇರುತ್ತದೆ. ಯಾರದೋ ಮನೆಯಲ್ಲಿ ನಾವು ಊಟ ಮಾಡುತ್ತೇವೆ, ಯಾರೋ ನಮ್ಮಲಿ ಉಣ್ಣುತ್ತಾರೆ. ಕೆಲ ಸ್ನೇಹಿತರು ಒಂದಷ್ಟು ದಿನ ನಮ್ಮೊಡನೆ ಇರುತ್ತಾರೆ, ಕೆಲವರು ಕಳೆದೆ ಹೋಗುತ್ತಾರೆ ಎಷ್ಟು ಹುಡುಕಿದರೂ ಸಿಗುವುದಿಲ್ಲ, ಯಾರೋ ಹೊಸ ಹೊಸ ಸ್ನೇಹಿತರು ಸಿಗುತ್ತಾರೆ. ಹೀಗೆ ಸ್ನೇಹಗಳ, ಬಂಧುತ್ವದ, ಪ್ರೀತಿಯ ಪ್ರೇಮದ ಸಂಬಂಧಗಳು ನಮಗೆ ಈ ಜಗತ್ತಿನ ಯಾರ್ಯಾರೊಂದಿಗೋ ಉಂಟಾಗುತ್ತದೆ.

ಇದೆಲ್ಲ ಏಕೆ ಆಗುತ್ತದೆ, ನಾವಂದುಕೊಳ್ಳುವುದು ಏನು, ಆಗುವುದು ಏನು ಇದಕ್ಕೆಲ್ಲ ಕಾರಣವೇನು, ಎಂದು ಹುಡುಕಿದರೆ ಖಂಡಿತ ನಮಗೆ ಸ್ಪಷ್ಟವಾದ ಉತ್ತರ ಸಿಗುವುದಿಲ್ಲ. ಏಕೆಂದರೆ ನಮ್ಮನ್ನು ನಿಯಂತ್ರಿಸುವ, ನಾವು ಕಾಣದ, ನಮಗರ್ಥವಾಗದ, ವಿಧಿಯು ನಮ್ಮ ಈ ಬಂಧಗಳನ್ನೂ, ಸಂಬಂಧಗಳನ್ನೂ ನಿಯಂತ್ರಿಸುತ್ತಿರುತ್ತದೆ. ” ಋಣ” ವೆಂದರೆ ನಾವು ಪಡೆದುಕೊಂಡದ್ದು ಮತ್ತು ಆರ್ಜಿಸಿದ್ದು ಎಂದು ಅರ್ಥಬರುತ್ತದೆ. ನಮ್ಮವರು “ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ” ಎಂದುಬಿಟ್ಟರು. ಸಕಲವನ್ನೂ ಇದರೊಳಗೆ ಸೇರಿಸಬೇಕಿತ್ತು. ಆದರೆ ಸಾಂಕೇತಿಕವಾಗಿ ಮೂರನ್ನೇ ಸೇರಿಸಿದ್ದಾರೆ. ನಮಗೆ ಆಗುವುದೆಲ್ಲವೂ ಈ ” ಋಣ” ಅಥವಾ ” ಪೂರ್ವ ಕರ್ಮ” ದ ಅನುಸಾರವಾಗಿ ಎಂದು ಮನದಟ್ಟು ಮಾಡಿಕೊಳ್ಳಬೇಕು. ನಮ್ಮ ಪ್ರಮೇಯ ಸ್ವಲ್ಪ ಮಾತ್ರ ಉಂಟು. ಹಾಗಾಗಿ ಏಕೆ, ಏನು. ಹೇಗೆ, ಹೀಗೇಕೆ, ಹಾಗೇಕೆ, ಎನ್ನುವ ಪ್ರಶ್ನೆಗಳಿಗೆ ಹೆಚ್ಚು ಮಹತ್ವ ಕೊಡದೆ ಶಾಂತವಾಗಿ ಬಂದದ್ದನ್ನು ಸಮಾಧಾನದಿಂದ ಅನುಭವಿಸುವುದೇ ಲೇಸು, ಏಕೆಂದರೆ ಇದೊಂದು ಬಲೆ, ಇದರೊಳಗೆ ನಮ್ಮ ಬದುಕು. ಇಲ್ಲಿ ಇರುವಷ್ಟು ದಿನವೂ ಈ ಬಂಧ ಸಂಬಂಧಗಳ ವಿಚಿತ್ರವನ್ನು ಅನುಭವಿಸಲೇ ಬೇಕು.


ರಸಧಾರೆ – 169

ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ I
ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು II
ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ I
ಕುಣಿವ ಗರ್ದಭ ನೀನು – ಮಂಕುತಿಮ್ಮ II

ಋಣದ ಮೂಟೆಯನ್ನು ನಮ್ಮ ಮೇಲೆ ಹೊರಿಸಿ, ಅದನ್ನೂ ಸೇರಿಸಿ, ಪೂರ್ವಾರ್ಜಿತವೆಂಬ ಹುರಿಯಿಂದ ಕುಣಿಕೆ ಮಾಡಿ ನಮ್ಮ ಕೊರಳಿಗೆ, ಬಿಗಿದಿದ್ದಾನೆ ಆ ವಿಧಿ . ನಮ್ಮ ಮುಂದೆ ಒಂದು ಸಣ್ಣ ಹುಲ್ಲುಕಡ್ಡಿಯಂತ ಆಸೆಯನ್ನು ತೋರಿಸುತ್ತಾ, ನಮ್ಮ ಬಾಳನ್ನು ಎಳೆದುಕೊಂಡು ಹೋಗುತ್ತಿದ್ದಾನೆ. ಅವನ ತಾಳಕ್ಕೆ ಕುಣಿಯುವ ಕತ್ತೆ “ನೀನು” ಎಂದು ತಮಗೆ ತಾವು ಹೇಳಿಕೊಳ್ಳುತ್ತಾ ಇಡೀ ಮನುಕುಲದ ಸ್ಥಿತಿಯನ್ನು ವಿಡಂಬನಾತ್ಮಕವಾಗಿ ವರ್ಣಿಸಿದ್ದಾರೆ, ಮಾನ್ಯ ಗುಂಡಪ್ಪನವರು.

ನಾವೆಲ್ಲರೂ ನಮ್ಮ ನಮ್ಮ ಪೂರ್ವಾರ್ಜಿತ ಕರ್ಮದ ಮೂಟೆಗಳನ್ನು ಹೊತ್ತುಕೊಂಡೇ ಬಂದಿದ್ದೇವೆ. ನಮ್ಮ ಕೊರಳಿಗೆ ಈ ಮೂಟೆಯನ್ನು ವಿಧಿ ಕಟ್ಟಿಬಿಟ್ಟಿದೆ. ಇದನ್ನು ಹೊತ್ತುಕೊಂಡು ಜೀವನಸಾಗಿಸುತ್ತಾ, ಇದರಲ್ಲಿ ತಂದದ್ದನ್ನು ಅನುಭವಿಸುತ್ತಾ ಇರಬೇಕು. ಆದರೆ ಒಂದು ವಿಷಯ ಗಮನಿಸಬೇಕು. ಒಂದು ನಾವು ಪೂರ್ವ ಕರ್ಮ ಹೊತ್ತಿದ್ದೇವೆ. ಅದನ್ನು ಹೊತ್ತು ಜೀವನ ಸಾಗಿಸುವಾಗ, ವಿಧಿ, ವಸ್ತು, ವಿಷಯ ಮತ್ತು ವ್ಯಕ್ತಿಗಳಲ್ಲಿ ಆಸೆಯೆಂಬ ಒಂದು ಆಮಿಷವನ್ನು ನಮ್ಮ ಮನದಲ್ಲಿ ಇಟ್ಟು, ಹೊತ್ತು ತಂದ ಕರ್ಮದ ಗಂಟನ್ನು ಹೆಚ್ಚಿಸಿಕೊಳ್ಳುವ೦ತೆ ಮಾಡುತ್ತದೆ. ಆದರೆ ಈ ನಮ್ಮ ಆಸೆಗಳು ತೃಣದಂತೆ ಬಹಳ ಹಗುರವಾದದ್ದು. ಒಂದು ಪೂರ್ಣಗೊಂಡರೆ ಇನ್ನೊಂದು ಉದ್ಭವ, ಅದಾದರೆ ಮತ್ತೊಂದು. ಹೀಗೆ ಆಸೆಗಳ ತುಂಬದ ಚೀಲ ನಮ್ಮನ್ನು ಬಿಡದೆ ಹಿಡಿದು ಬಿಟ್ಟಿದೆ. ಅದನ್ನು ನಾವು ಹೊರುತ್ತಿದ್ದೇವೆ.

ಈ “ಆಸೆಗಳ ಅಂತ್ಯವಿಲ್ಲದ ಏಣಿ” ಹತ್ತುವ ನಾವು ಒಂದಾದ ಮೇಲೆ ಒಂದು ಮೆಟ್ಟಿಲನ್ನು ಹತ್ತುತ್ತಾ ಹತ್ತುತ್ತಾ ಹೋಗುತ್ತಲೇ ಇದ್ದೇವೆ. ಒಂದು ಹಿಡಿ ಹುಲ್ಲನ್ನು ತೋರಿಸುತ್ತಾ ಅದರಲ್ಲಿ ಆಸೆ ಹುಟ್ಟಿಸುತ್ತಾ ಭಾರವಾದ ಬಟ್ಟೆಗಳ ಹೊರೆಯನ್ನು ಹೊರುವಂತೆ ಮಾಡುವ ಅಗಸನಂತೆ ವಿಧಿ ಇದೆ. ಅಂತಹ ಭಾರವನ್ನು ಹೊರುವ ಕತ್ತೆಗಳೇ ನಾವು ಎಂದು ಸೂಚ್ಯವಾಗಿ ಗುಂಡಪ್ಪನವರು ಅಣಕವಾಡಿದ್ದಾರೆ.

ಹೌದಲ್ಲವೇ ವಾಚಕರೆ ನಮ್ಮಲ್ಲಿ ಆಸೆಗಳು ಬತ್ತುವುದೇ ಇಲ್ಲ. ಒಂದಾದಮೇಲೆ ಒಂದರಂತೆ ಮೇಲೇಳುವ, ಎಂದೂ “ಆರದ ಬುಗ್ಗೆ”ಯಂತೆ. ಈ ಆಸೆಗಳೇ ನಮ್ಮೆಲ್ಲ ಸಮಸ್ಯೆಗಳಿಗೂ ಕಾರಣವಲ್ಲವೇ. ಇದನ್ನೇ ಗೌತಮ ಬುದ್ಧನು” ಆಸೆಯೇ ದುಃಖಕ್ಕೆ ಮೂಲ” ಎಂದ. ಆದರೆ ಆಸೆ ಪಡುವುದು ತಪ್ಪಲ್ಲ. ಏಕೆಂದರೆ ಇಷ್ಟು ಸುಂದರವಾದ ಜಗತ್ತು ನೀರಸವಾಗದೆ, ಮಾನವನ ಕ್ರಿಯಾಶೀಲತೆಗೆ ಇಂಬು ಕೊಡುವುದೇ ಆ ” ಆಸೆ” . ಆದರೆ “ಏನು ಆಸೆ ಪಡಬೇಕು, ಎಷ್ಟು ಆಸೆ ಪಡಬೇಕು, ಯಾವಾಗ ಆಸೆ ಪಡಬೇಕು” ಎನ್ನುವ ವಿವೇಚನೆ ಇದ್ದರೆ ಸಮಸ್ಯೆಗಳ ತೀವ್ರತೆ ಕಡಿಮೆಯಾಗಬಹುದು. ಇಲ್ಲದಿದ್ದರೆ ನಮ್ಮ ದುಃಖಕ್ಕೆ ಕೊನೆಯೇ ಇರುವುದಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಮಿತಿಗಳನ್ನು ಅರಿತರೆ, ಅರಿತು ನಡೆದುಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ದುಃಖವೇ ಕಟ್ಟಿಟ್ಟ ಬುತ್ತಿ. ಆಯ್ಕೆ ಮಾಡಿಕೊಳ್ಳಲು ನಾವು ಸಂಪೂರ್ಣ ಸ್ವತಂತ್ರರು ಅಲ್ಲವೇ?


ರಸಧಾರೆ – 170

ಉಣುವುದುಡುವುದು ಪಡುವುದಾಡುವುದು
ಋಣಗಳೆಲ್ಲವು ಪೂರ್ವಸಂಚಿತಾಂಶಗಳು
ಹಣೆಯೊಳದು ಲಿಖಿತಮಿರೆಯುಂ ವಾಚಿಸುವವನಿಲ್ಲ
ಗೊಣಗಾಟವಳಿಸುವುದೇ ? – ಮಂಕುತಿಮ್ಮ

ಉಣುವುದುಡುವುದು = ಉಣುವುದು + ಉಡುವುದು // ಪಡುವುದಾಡುವುದು = ಪಡುವುದು + ಆಡುವುದು // ಹಣೆಯೊಳದು= ಹಣೆಯಲಿ + ಅದು // ಲಿಖಿತಮಿರೆಯುಂ = ಲಿಖಿತಂ + ಇರೆಯುಂ // ಗೊಣಗಾಟವಳಿಸುವುದೇ = ಗೊಣಗಾಟವು + ಅಳಿಸುವುದೇ.

ನಾವು ಉಣುವುದು, ಉಡುವುದು, ಆಡುವುದು, ಪಡುವುದು, ಪಾಡುವುದು, ಪರದಾಡುವುದು ಮತ್ತು ಇವುಗಳಿಗೆ ಸಂಬಂಧಪಟ್ಟ ವ್ಯಕ್ತಿಗಳಲ್ಲೆರ ಸಂಬಂಧಗಳೂ ಕೇವಲ ಋಣ ರೂಪದಲ್ಲೇ ನಮಗೆ ಸಂಧಿವೆ.ನಮ್ಮ ಹಣೆಬರಹವೇ ಈ ರೀತಿ ಇರುವಾಗ, ಅದನ್ನು ಓದಲು ಯಾರಿಗೂ ಆಗುವುದಿಲ್ಲ . ಓದಲಾಗದಿದ್ದರೂ ಅದನ್ನು ಕುರಿತು ಗೊಣಗಾಡಿದರೆ, ಬರೆದ ಬರಹ ಅಳಿಸಲಾಗುವುದೇ, ಎಂದು ಪ್ರಾರಬ್ಧ ಕರ್ಮದ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮ ಎಲ್ಲ ಕೆಲಸಗಳೂ ಒಂದು ಪೂರ್ವ ನಿರ್ಧಾರಿತ ರೀತಿಯಲ್ಲೇ ನಡೆಯುತ್ತದೆ. ಇದಕ್ಕೆ ಕಾರಣವುಂಟು ಆದರೆ ನಮಗೆ ಆ ಕಾರಣಗಳು ಗೋಚರವಾಗುವುದಿಲ್ಲ. ಗೋಚರವಾಗುವುದು ಕಾರಣವಾಗಿರುವುದಿಲ್ಲ. ನಾವಂದುಕೊಂಡದ್ದು ನಾವಂದುಕೊಂಡಹಾಗೆ ಏಕಾಗುವುದಿಲ್ಲ, ಬೇರೇನೋ ಏಕಾಗುತ್ತದೆ, ಎಂದು ನಾವು ಎಷ್ಟೇ ಯೋಚನೆ ಮಾಡಿದರೂ ಅರ್ಥವಾಗುವುದಿಲ್ಲ. ಏಕೆಂದರೆ ಕಾರಣಗಳು ನಮ್ಮದೇ ಆದರೂ ನಮ್ಮ ಅರಿವಿನಲ್ಲಿ ಇಲ್ಲದ ನಮ್ಮ ಪೂರ್ವ ಕರ್ಮಗಳಿಗೆ ಕೊಂಡಿ ಹಾಕಿಕೊಂಡಿರುತ್ತದೆ. ಅವು ಪೂರ್ವ ಸಂಚಿತ ಕರ್ಮಗಳಾಗಿರಬಹುದು ಅಥವಾ ಪೂರ್ವ ಜನ್ಮದ ನಮ್ಮ ಕರ್ಮಶೇಷವಾಗಿರಬಹುದು.

ನಮ್ಮ ನಮ್ಮ ಹಣೆ ಬರಹವನ್ನು ಯಾರಿಗೂ ಓದಲಾಗುವುದಿಲ್ಲ. ಉದ್ಧಾಮ ಜ್ಯೋತಿಷ್ಯ ಪಂಡಿತರಿಗೂ ಅರ್ಥೈಸಲಾಗದ ರೂಪ ಈ ವಿಧಿಯದ್ದು, ಹಣೆಬರಹದ್ದು. ಅವರವರಿಗೆ ತೋಚಿದ ರೀತಿಯಲ್ಲಿ ಅವರವರ ಕ್ಷಮತೆಗೆ ಅನುಗುಣವಾಗಿ ಹಾಕಿದ ಲೆಕ್ಕಾಚಾರದಿಂದ, ಏನನ್ನೋ ಹೇಳುತ್ತಾರೆ. ಅದು ಎಂದಿಗೂ ಸಂಪೂರ್ಣ ಸತ್ಯವಾಗುವುದಿಲ್ಲ. ಅವರನ್ನು ಬಿಟ್ಟು ಬೇರೆ ಇನ್ಯಾರನ್ನೋ ಕೇಳುತ್ತೇವೆ. ಅವರೂ ಸಹ ಏನನ್ನೋ ಹೇಳುತ್ತಾರೆ. ಆದರೆ ಯಾರಿಗೂ ನಮ್ಮ ಹಣೆಬರಹವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಹಾಗಾಗಿ ವಾಚಕರೆ ನಮ್ಮ ವಿಧಿಯನ್ನು ನಮಗೆ ಅರ್ಥ ಮಾಡಿಕೊಳ್ಳಲೋ ಅಥವಾ ಬದಲಾಯಿಸಲೋ ಸಾಧ್ಯವಿಲ್ಲ ಎಂದಾದಮೇಲೆ ಅದನ್ನು ಕುರಿತು ಚಿಂತಿಸುವುದಾಗಲೀ, ಗೊಣಗಾಡುವುದಾಗಲೀ ಮಾಡುವುದರಿಂದ ಏನು ಪ್ರಯೋಜನ. ಮಾನಸಿಕ ಕ್ಷೋಬೆಯ ಹೊರತು ಬೇರೇನೂ ಪ್ರಯೋಜನವಿಲ್ಲ!!!! ಅದನ್ನು ಬಂದ ಹಾಗೆ, ಅನುಭವಿಸುವುದೇ ಲೇಸು. ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲವಾದಾಗ ಸಾವಧಾನವಾಗಿ ಅನುಭವಿಸಿದರೆ, ಕಡೆ ಪಕ್ಷ ಮಾನಸಿಕ ಕ್ಷೋಬೆ ಇರುವುದಿಲ್ಲ ಅಲ್ಲವೇ? ಅಂತಹ ಪ್ರಯತ್ನವನ್ನು ನಾವೂ ಸಹ ಮಾಡೋಣವೆ?


ರಸಧಾರೆ – 171

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ
ಇಂದು ಮೃಷ್ಟಾನ್ನ ಸುಖ ; ನಾಳೆ ಭಿಕ್ಷಾನ್ನ
ಇಂದು ಬರಿಯುಪವಾಸ ; ನಾಳೆ ಪಾರಣೆ-ಯಿಂತು
ಸಂದಿರುವುದನ್ನಋಣ – ಮಂಕುತಿಮ್ಮ.

ನಮ್ಮಗೆ ದಕ್ಕುವ ಅನ್ನದ ಋಣ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಇರುತ್ತೆ ಎಂದು ಸ್ಪಷ್ಟವಾಗಿ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಸುಲಲಿತವಾಗಿ ಬರೆದಿದ್ದಾರೆ. ನಮ್ಮ ಜೀವನದಲ್ಲಿ ಇಂತಹದನ್ನು ನಾವು ಬಹಳ ನೋಡುತ್ತೇವೆ. ಇಂದು ಹಬ್ಬದ ವಾತಾವರಣ ನಾಳೆ ಸೂತಕದ ಭಾವ. ಇಂದು ಪುಷ್ಕಳ ಭೋಜನ ನಾಳೆ ಉಪವಾಸ. ಇಂದು ನಮ್ಮ ಮನೆಯಲ್ಲೇ ಊಟ. ನಾಳೆ ಇನ್ನೆಲ್ಲೋ ಇನ್ಯಾರಮನೆಯಲ್ಲೋ. ಅನ್ನದ ಋಣ ಒಂದೊಂದು ದಿನ ಒಂದೊಂದು ರೀತಿ. ಈ ಜಗತ್ತಿನ ಪರಿಯೇ ಈ ರೀತಿ.

ಇದನ್ನು ಕೇವಲ ನಾವು ತಿನ್ನುವ ಭೋಜನಕ್ಕೆ ಅಷ್ಟೇ ಅನ್ವಯಿಸಬಾರದು. ನಮಗೆ ಸಿಗುವಂಥಾ ಪ್ರತಿವಸ್ತುವಿಗೂ ಇದನ್ನು ಅನ್ವಯಿಸಿಕೊಳ್ಳಬೇಕು. ನಮಗೆ ಸಿಗುವ ಮನೆ, ಬಂಧುಗಳು, ಸ್ನೇಹಿತರು, ನಾವು ಮಾಡುವ ಕೆಲಸ. ಅದರಿಂದಾಗುವ ಪ್ರಯೋಜನಗಳು ಎಲ್ಲವೂ ನಮ್ಮ ಪೂರ್ವ ಸಂಚಿತ ಋಣಕ್ಕೆ ಸಂಬಂಧವಿಟ್ಟುಕೊಂಡೆ ಇರುತ್ತದೆ. ಇಂದು ಸಿಗುವುದು ಹಿಂದೆ ನಾವು ಗಳಿಸಿದ ವಸ್ತು, ವಿಷಯ ಮತ್ತು ವ್ಯಕ್ತಿಗಳ ಒಟ್ಟಿಗಿನ ಸಂಬಂಧವನ್ನು ಆಧರಿಸಿರುತ್ತದೆ. ಹಾಗೆಯೇ ನಮಗೆ ನಾಳೆ ಅಥವಾ ಮುಂದಿನ ಜನ್ಮದಲ್ಲಿ ಸಿಗುವುದು ಇಂದಿನ ಅಥವಾ ಈ ಜನ್ಮದ ನಮ್ಮ ಕರ್ಮಗಳನ್ನು ಆಧರಿಸಿರುತ್ತದೆ.

ಇಂದು ಏನು ಸಿಗುತ್ತಿದೆಯೋ ಅದು ಪೂರ್ವಕರ್ಮದ ಅಧಾರವಾದರೆ ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮುಂದೆ ಸಿಗುವುದು ಇಂದಿನ ಕರ್ಮದಮೇಲೆ ಆಧರಿಸಿರುತ್ತದೆ ಎಂದರೆ, ಇಂದಿನ ಕರ್ಮಗಳು ಸುಧಾರಿತ ಕರ್ಮಗಳಾದರೆ, ನಾಳಿನ ನಮ್ಮ ಬದುಕು ಸುಧಾರಿತವಾಗಿರಬಹುದು. ಅಂದರೆ ನಮಗೆ ಏನು ಬೇಕೋ, ಮುಂದೆ ನಾವು ಹೇಗಿರಬೇಕೋ ಅದನ್ನು ನಮ್ಮ ಇಂದಿನ ಕರ್ಮ ನಿರ್ಧರಿಸುವುದಾದರೆ ನಮ್ಮ ಭವಿತವನ್ನು ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ ಅಲ್ಲವೇ? ಈ ಪೂರ್ವ ಕರ್ಮ ಇಂದಿನ ನಮ್ಮ ಕೆಲಸಗಳು ಇವುಗಳನ್ನಾಧಾರಿತ ನಮ್ಮ ಭವಿಷ್ಯಕಾಲ ಇವುಗಳನ್ನು ನಂಬಿ, ಇವುಗಳನ್ನು ಅರ್ಥಮಾಡಿಕೊಂಡು, ನಮ್ಮ ಮುಂದಿನ ಜೀವನವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು ಅಷ್ಟೇ. ಫಲಾಫಲಗಳು ಪರಮಾತ್ಮನಿಚ್ಚೆ !!!


ರಸಧಾರೆ – 172

ಅರಿ ಮಿತ್ರ ಸತಿ ಪುತ್ರ ಬಂಧುಬಳಗವದೆಲ್ಲ
ಕರುಮದವತಾರಗಳೋ , ಋಣಲತೆಯ ಚಿಗುರೋ
ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ
ವುರಿಮಾರಿಯಾದೀತೋ – ಮಂಕುತಿಮ್ಮ.

ಶತ್ರು, ಮಿತ್ರ, ಹೆಂಡತಿ, ಮಗ-ಮಗಳು, ಬಂಧು, ಬಳಗವೆಲ್ಲ ನಮ್ಮ ಪೂರ್ವ ಕರ್ಮದಿಂದಲೇ ಲಭ್ಯವಾದವು ಅಥವಾ ನಾವು ಉಳಿಸಿಕೊಂಡು ಬಂದ ವಾಸನಾ ಶೇಷವೆಂಬ ಬಳ್ಳಿಯ ಹೊಸ ಹೊಸ ಚಿಗುರುಗಳೋ? ಈ ಸಂಸಾರದಲ್ಲಿ ನಾವು ಗೊತ್ತು ಗುರಿಯಿಲ್ಲದ, ತಲೆ ತಗ್ಗಿಸಿ ನಡೆಯುವ ಕುರಿಗಳಂತೆ ಇರುವಾಗ ಈ ಸಂಸಾರ ಉರಿಮಾರಿಯಾದೀತು ಎಂದು ಒಂದು ಎಚ್ಚರಿಕೆಯ ಭಾವವನ್ನು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸಿದ್ದಾರೆ.

ನಾವು ಯಾರೊಂದಿಗೋ ಮಿತ್ರತ್ವವನ್ನು ಬೆಳೆಸಿಕೊಳ್ಳುತ್ತೇವೆ. ಯಾರಲ್ಲೋ ಶತ್ರುಭಾವ, ಅಂದರೆ ಹಲವರು ನಮಗೆ ಇಷ್ಟವಾಗುತ್ತಾರೆ, ಕೆಲವರು ಇಷ್ಟವಾಗುವುದಿಲ್ಲ. ಇದು ಪೂರ್ವ ವಿಧಿತ ಎಂದು ಒಪ್ಪಲೇಬೇಕು. ಇದು ಕೇವಲ ಆಕಸ್ಮಿಕ ಮತ್ತು ಕಾಕತಾಳೀಯವೆಂದು ವಾಧಿಸುವವರೂ ಇದ್ದಾರೆ. ಆದರೆ ನಮ್ಮೆಲ್ಲ ಆಗುಹೋಗುಗಳಿಗೆ ಒಂದು ಪರಮ ಶಕ್ತಿ ಕಾರಣವೆಂದು ಒಪ್ಪಿದರೆ, ಅದರ ಅಧೀನದಲ್ಲಿರುವ ವಿಧಿಯ ಪ್ರಭಾವ ನಮ್ಮ ಮೇಲಿದೆ ಎಂದರೆ ಅದನ್ನು ಕಾಕತಾಳೀಯವಲ್ಲ , ಪೂರ್ವ ವಿಧಿತವೆಂದು ನಂಬಲೇ ಬೇಕು. ಏಕೆಂದರೆ ಬೇರೆ ಪರಿಭಾಷೆ ನಮಗೆ ಮಾಡಲು ಆಗುವುದಿಲ್ಲ. ” ಋಣಾನುಬಂಧ ರೂಪೇಣ, ಪಶು ಪತ್ನಿ ಸುತಾಲಯ” ಎಂದು ಉಕ್ತಿಯೇ ಉಂಟಲ್ಲ !!!!

ಇನ್ನು ನಾವು ಯಾರಿಗೋ ಮಗನಾಗೋ, ಮಗಳಾಗೋ ಹುಟ್ಟುತ್ತೇವೆ. ನಾವು ಯಾರ ಮನೆಯಲ್ಲಿ ಹುಟ್ಟಬೇಕು ಎಂದು ನಾವು ನಿರ್ಧಾರಮಾಡಲು ಸಾಧ್ಯವೇ? ಹಾಗೆಯೇ ನಮಗೆ ಮಕ್ಕಳಾಗುತ್ತವೆ. ಯಾರು ನಮಗೆ ಮಕ್ಕಳಾಗಿ ಹುಟ್ಟಬೇಕು ಎನ್ನುವುದನ್ನೂ ಸಹ ನಾವು ಆಯ್ಕೆಮಾಡಲಾಗುವುದೇ? ಸಾಧ್ಯವೇ ಇಲ್ಲ. ಈ ತಂದೆ ತಾಯಿ ಮತ್ತು ಮಕ್ಕಳ ಬಂಧವೂ ಪೂರ್ವಕರ್ಮದಾಧಾರದಮೇಲೆಯೇ ಆಗುತ್ತದೆ, ಎನ್ನುವುದು ನಮ್ಮ ಗಟ್ಟಿ ನಂಬಿಕೆ.

ನೋಡಿ, ನಾವು ಹುಟ್ಟಿದಾರಭ್ಯ ಸಾಯುವತನಕ ನಮಗಾಗುವ ಆಗುಹೋಗುಗಳು ನಾವು ಕಟ್ಟಿಕೊಳ್ಳುವ ಸಂಬಂಧಗಳು ಬಂಧಗಳು, ಬೆಳೆಸಿಕೊಳ್ಳುವ ರಾಗ ದ್ವೇಷಗಳು, ಪ್ರೀತಿ ವಿಶ್ವಾಸಗಳು ಎಲ್ಲವೂ ಯಾವುದೋ ಒಂದು ನಿರ್ಧಿಷ್ಟ ಪೂರ್ವನಿಯೋಜಿತವಾಗಿರುತ್ತದೆ. ಯಾರೋ ನಮಗೆ ಅನೀರಿಕ್ಷಿತವಾಗಿ ಮಿತ್ರರಾಗುತ್ತಾರೆ, ನಮ್ಮನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ, ಮೋಸ ಮಾಡಿ ಹೋಗಿಬಿಡುತ್ತಾರೆ. ಮತ್ತೆ ಸಿಗುವುದೇ ಇಲ್ಲ. ನಮ್ಮ ಅವರ ಸಂಭಂದ ಒಂದು ನಿರ್ಧಿಷ್ಟ ಕಾಲಕ್ಕೆ ಮಾತ್ರ ಇರುತ್ತದೆ. ಮತ್ತೆ ಯಾರೋ ಅರಿಯದವರು, ಯಾರಿಂದ ನಾವೇನೂ ಅಪೇಕ್ಷೆಪಡದಿದ್ದರೂ ನಮಗೆ ತುಂಬಾ ಸಹಾಯಮಾಡಿ ನಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ. ಇದೆಲ್ಲ ಪೂರ್ವ ವಿಧಿತವೆಂದೇ ನಂಬಲೇಬೇಕು ಅನ್ಯಥಾ ಮಾರ್ಗವಿಲ್ಲ.

ಆದರೆ ಇವೆಲ್ಲವನ್ನೂ ಅನುಭವಿಸುತ್ತಾ ಒಂದು ನಿರ್ಲಿಪ್ತ ಭಾವ ಬೆಳೆಸಿಕೊಂಡರೆ ಬಾಳು ಹಸನಾದೀತು. ಇಲ್ಲಿಗೆ ಅಂಟಿಕೊಂಡಿದ್ದರೆ, ಇಲ್ಲಿಯೇ ರಕ್ತರಾಗಿದ್ದರೆ ನಮಗೆ ಈ ಸಂಸಾರದ ಹಿಂಸೆ ” ಉರಿ ಮಾರಿಯಂತೆ” ಎಂದಿದ್ದಾರೆ ಶ್ರೀ ಗುಂಡಪ್ಪನವರು. ಹುಟ್ಟಿದ್ದೇವೆ, ಇರಬೇಕಾಗಿರುವುದು ಅನಿವಾರ್ಯ. ಇದ್ದರೂ ಇಲ್ಲದ ಹಾಗೆ ಇದ್ದರೆ ನೆಮ್ಮದಿ. ಇಲ್ಲದಿದ್ದರೆ “ಉರಿ ಮಾರಿಯ” ಬಿಸಿ ತಾಗಿಯೇ ತಾಗುತ್ತದೆ. ಹುಷಾರಾಗಿರಿ


ರಸಧಾರೆ – 173

ಬಂಧುಬಳಗವುಮಂತಕನ ಚಮುವೋ, ಛದ್ಮಚಮು |
ದಂದುಗದ ಬಾಗಿನಗಳವರ ನಲುಮೆಗಳು ||
ಕುಂದಿಪ್ಪುವಾತ್ಮನವರ್ಗಳುಪಕಾರಗಳು |
ಮಂದಿಗಾಗದಿರು ಬಲಿ – ಮಂಕುತಿಮ್ಮ ||

ಬಂಧುಬಳಗವುಮಂತಕನ = ಬಂಧುಬಳಗವುಂ+ಅಂತಕನ // ಬಾಗಿನಗಳವರ = ಬಾಗಿನಗಳು+ ಅವರ // ಕುಂದಿಪ್ಪುವಾತ್ಮನವರ್ಗಳುಪಕಾರಗಳು = ಕುಂದಿಪ್ಪುವವು + ಆತ್ಮನ+ ಅವರ್ಗಳ+ಉಪಕಾರಗಳು

ಅಂತಕನ=ಯಮನ // ಚಮುವೋ = ಸೈನ್ಯವೋ // ಛದ್ಮಚಮು = ವೇಷಧಾರೀ ಸೈನ್ಯ // ದುಂದುಗದ = ಕಷ್ಟ, ತೊಂದರೆಗಳಿಂದ ಕೂಡಿದ // ಬಾಗಿನಗಳು= ಕೊಡುಗೆಗಳು// ನಲುಮೆಗಳು = ಪ್ರೀತಿ ವಿಶ್ವಾಸಗಳು
ಕುಂದಿಪ್ಪುವವು = ಕುಗ್ಗಿಸುವವು // ಅವರ್ಗಳ = ಅವರುಗಳ

ನಮಗಿರುವ ಬಂಧುಗಳು ಮಾರುವೇಷದಲ್ಲಿರುವ ಯಮನ ಸೈನ್ಯದಂತಿರುವರು, ಅವರು ಮಾಡುವ ಉಪಕಾರಗಳು ಮಾತು ಅವರು ನೀಡುವ ಕೊಡುಗೆಗಳು ನಮಗೆ ನೋವುಂಟುಮಾಡಿ ನಮ್ಮ ಆತ್ಮವನ್ನು ಕುಗ್ಗಿಸುತ್ತದೆ. ಹಾಗಾಗಿ ನೀನು ಎಚ್ಚರಿಕೆಯಿಂದ ಇದ್ದು ಈ ಮಂದಿಯ ಉಪಟಳಕ್ಕೆ ಬಲಿಯಾಗದಿರು ಎಂದು ಎಚ್ಚರಿಕೆಯಮಾತನ್ನು ಆಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .

ಇದು ಬಹುಶಃ ಎಲ್ಲರಿಗೂ ಅರ್ಥವಾಗುತ್ತದೆ, ಏಕೆಂದರೆ ಇದು ಸರಿ ಸುಮಾರು ಎಲ್ಲರ ಅನುಭವವೂ ಆಗಿರುತ್ತದೆ. ಎಲ್ಲರೂ ವೇಷಧಾರಿಗಳೇ. ಅಂದರೆ ಒಳಗೊಂದು ಹೊರಗೊಂದು. ಅವರು ಹೇಳುವುದು ಒಳಭಾವವಲ್ಲ. ಅದಕ್ಕೆ ಒಂದು ಗುಪ್ತ ಯೋಜನೆಯೇ ( hidden agenda ) ಇರುತ್ತದೆ. ಅರ್ಥಮಾಡಿಕೊಂಡು ನಾವು ವರ್ತಿಸುವುದೋ ಅಥವಾ ಸ್ಪಂದಿಸುವುದೋ ಮಾಡಿದರೆ, ಕ್ಷೇಮ ಇಲ್ಲದಿದ್ದರೆ ಗುಂಡಪ್ಪನವರು ಹೇಳಿದಂತೆ ನಾವು ಅವರ ಗುಪ್ತ ಯೋಜನಗೆ ಬಲಿಯಾಗಬೇಕಾದೀತು. ಹಾಗೆ ನಾವು ಬಲಿಯಾದರೆ, ತುಂಬಾ ನೋವನ್ನು ಕ್ಷೋಬೆಯನ್ನು ಅನುಭವಿಸಬೇಕಾಗಬಹುದು.

ನಮ್ಮ ಬಂಧು ಬಳಗದಲ್ಲಿ ಅಥವಾ ಸ್ನೇಹಿತರ ಗುಂಪಿನಲ್ಲಿ ಎಲ್ಲರೂ ಹಾಗೆ ಇರುವುದಿಲ್ಲ. ಆದರೆ ಛದ್ಮ ರೂಪದಲ್ಲಿರುವವರನ್ನು ಅರಿತುಕೊಳ್ಳುವುದು ಹೇಗೆ. ನೋಡಿದರೆ ನಮಗೇನೋ ಉಪಕಾರಮಾಡುವವರಂತೆ ಕಾಣುವವರು ವಾಸ್ತವದಲ್ಲಿ ಕೇಡುಬಯಸುವ ಉದ್ಧ್ಯೇಶದಿಂದಲೇ ನಮ್ಮ ಬಳಿ ಬಂದಿರುತ್ತಾರೆ. ಇವರುಗಳನ್ನು ಅರಿಯಲು ಬಹಳ ಕಷ್ಟಪಡಬೇಕಾಗುವುದು. ಅದರೊಳಗೂ ನೀವು ಹಣವಂತರಾದರೆ ನಿಮ್ಮ ಬಳಿ ಅವರ ವರ್ತನೆಯೇ ಬೇರೆ. ನಿಮಗೆ ವಿಧೇಯರಾಗಿ, ನಿಮ್ಮನ್ನು ಪೂಸಿಹೊಡೆದು ನಿಮ್ಮಿಂದ ಏನಾದರೂ ಕಿಲುಬಿಕೊಂಡು ಹೋಗಬೇಕೆಂಬುದೇ ಅವರ ಗುರಿ. ಆದರೆ ನೀವು ನಿರ್ಗತಿಕರಾದರೆ ನೀವು ನಿಜವಾಗಿಯೂ ಕಷ್ಟದಲ್ಲಿದ್ದರೂ ನಿಮ್ಮನ್ನು ಮೂಸುವುದೂ ಇಲ್ಲ. ಇದು ಜನಗಳ ವರ್ತನೆ. ಒಂದುವೇಳೆ ನೀವು ಚೆನ್ನಾಗಿದ್ದವರು, ಸ್ತಿತಿವಂತರಾಗಿದ್ದವರು ಕಾರಣಾಂತರದಿಂದ ನೀವೇನಾದರೂ ನಿರ್ಗತಿಕರಾಗಿಬಿಟ್ಟರೆ, ಆಗ ನೋಡಬೇಕು ಅವರ ವರ್ತನೆ. ನಿಮ್ಮನ್ನು ನೋಡಿದರೆ ” ಪಾಪ “ವೆಂಬುವಂತೆ, ನಿಮ್ಮಿಂದ ದೂರ ಹೋಗುತ್ತಾರೆ. ಇವರ ವರ್ತನೆಯಿಂದ ಆತ್ಮ ಸೊರಗುತ್ತದೆ. ಮನಸ್ಸು ಕುಗ್ಗುತ್ತದೆ. ಮತ್ತೆ ಮೇಲೆ ಬಾರದಹಾಗೆ ಮುದುಡಿ ಬಿಡುತ್ತದೆ.

ಇದು ತಂದೆ ತಾಯಿಗಳೊಡನೆ ಮಕ್ಕಳ ಸಂಭಂದವಿರಬಹುದು, ಒಂದು ತಾಯಿಯ ಮಕ್ಕಳಲ್ಲಿನ ಸಂಭಂದವಿರಬಹುದು, ಹತ್ತಿರದ ಬಂಧುವರ್ಗದಲ್ಲಿರಬಹುದು ಅಥವಾ ಸ್ನೇಹಿತರಲ್ಲಿರಬಹುದು. ಏಕೆ ಹೀಗೆ ಎಂದರೆ, ಮಾನವ ಬರ ಬರುತ್ತಾ ತುಂಬಾ ಸ್ವಾರ್ಥಿಯಾಗುತ್ತಿದ್ದಾನೆ. ಅವನ ದೃಷ್ಟಿ ತೀರ ಸಂಕುಚಿತವಾಗುತ್ತಿದೆ. ಒಂದು ವಿಶಾಲ ಮನೋಭಾವದ ಕೊರತೆ ಎಲ್ಲೆಲ್ಲೂ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ವಸ್ತು ಸ್ಥಿತಿ ಒಂದೇ. ಸ್ವಾರ್ಥ, ಅಹಂಕಾರ, ಅನುಕಂಪದ ಅಭಾವ, ಕರುಣೆಯ ಅಭಾವ, ಪ್ರೀತಿಯ ಅಭಾವ, ಪರಸ್ಪರ ವಿಶ್ವಾಸದ ಅಭಾವ, ಸತ್ಯದ ಅಭಾವ. ಶ್ರದ್ಧೆಯ ಅಭಾವ, ಸತ್ಯದ ಅಭಾವಗಳೇ ಇದಕ್ಕೆ ಕಾರಣ.

ಸಹೃದಯ ವಾಚಕರೆ, ಈಗ್ಗೆ ಎಪ್ಪತ್ತು ವರ್ಷಗಳ ಹಿಂದೆಯೇ ಗುಂಡಪ್ಪನವರಿಗೆ ಈ ಭಾವ ಬಂದಿರಬೇಕಾದರೆ ಇಂದು ಅವರಿದ್ದದರೆ ಏನು ಬರೆಯುತ್ತಿದ್ದರೋ ನಾ ಅರಿಯೆ!!! ನಮ್ಮ ನಮ್ಮ ಪರಿಮಿತ ಮತಿಯ ಮಿತಿಯಲ್ಲಿ ನಾವು ನಮ್ಮ ಪರಸ್ಪರ ಸಂಬಂಧವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಲೇ ಇರಬೇಕು. ನಮ್ಮನ್ನು ನಾವು ಇಂತಹವರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಪ್ರಯತ್ನ ನಿರಂತರವಾಗಿ ಮಾಡುತ್ತಲೇ ಇರಬೇಕು.


ರಸಧಾರೆ – ೧೭೪

ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ?
ಹೊಂದಿರುವರವರ್ ಅಹಂತೆಯು ಮೊಳೆಯುವನಕ
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ?
ಬಂಧ ಮುರಿವುದು ಬಳಿಕ – ಮಂಕುತಿಮ್ಮ

ಹದಗೆಟ್ಟುದನು = ಹದ+ಕೆಟ್ಟುದನು// ನಾನೆಂಬುದೆದ್ದುನಿಲೆ= ನಾನು+ಎಂಬುದು+ ಎದ್ದುನಿಲೆ// ಹೊಂದಿರುವರವರ್ = ಹೊಂದಿರುವರು + ಅವರು

ಹದಗೆಟ್ಟುದನು = ಕೆಟ್ಟದಾದ ಸ್ಥಿತಿ // ಅಹಂತೆಯು = ಅಹಂಕಾರವು// ಮೊಳೆಯುವತನಕ = ಮನಗಳಲ್ಲಿ ಉಂಟಾಗುವ ತನಕ

ತಂದೆ ಮಕ್ಕಳ ಸಂಬಂಧವನ್ನು ಕುರಿತು ಒಂದು ಚೆಂದಾದ ಕಗ್ಗವಿದು. ಇಂದಿನ ಪ್ರಪಂಚದಲ್ಲಿ ತಂದೆಮಕ್ಕಳ ಬಾಂಧವ್ಯದ ರೂಪ ಹದಗೆಟ್ಟು ಹೋಗಿರುವುದನ್ನು ನೋಡಿ. ಈ ಸಂಬಂಧಗಳು ಮಕ್ಕಳಲ್ಲಿ ಅಹಂಕಾರ ಮೊಳೆಯುವತನಕ, ಸರಿ ಸುಮಾರಾಗಿರುತ್ತದೆ. ಹಾಗೆ ಪ್ರತಿಯೊಬ್ಬರ ಮನಸ್ಸಲ್ಲೂ ಅಹಂಕಾರ ಎದ್ದು ನಿಂತರೆ ತಂದೆಯಾರೋ ಮಕ್ಕಳಾರೋ? ಈ ಸಂಬಂಧಗಳ ಬಂಧ ಮುರಿದುಬೀಳುತ್ತದೆ ಎಂದು ಉಲ್ಲೇಖಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ರೀತಿಯ ಮಾನಸಿಕ ಒತ್ತಡದಿಂದ ತೊಳಲಾಡುತ್ತಿರುವುದರಿಂದ ಎಲ್ಲ ಪ್ರದೇಶಗಳಲ್ಲೂ ವೈದ್ಯಶಾಲೆಗಳು ಅಣಬೆಗಳಂತೆ ಎದ್ದು ನಿಲ್ಲುತ್ತಿವೆ. ಅಂತೆಯೇ ತಂದೆ ತಾಯಿಗಳ ಮತ್ತು ಮಕ್ಕಳ ನಡುವಿನ ಪರಸ್ಪರ ಸಂಬಂಧಗಳ ಸ್ವಾಸ್ಥ್ಯವೂ ಹದಗೆಡುತ್ತಿರುವುದರಿಂದ ಎಲ್ಲಾ ಕಡೆಯೂ ವೃದ್ಧಾಶ್ರಮಗಳು ಎದ್ದು ನಿಲ್ಲುತ್ತಿವೆ. ಇಂದಿನ ಯಾಂತ್ರಿಕ ಬದುಕಿನ ಕಾರಣ ಯಾರಿಗೂ ಮತ್ತೊಬ್ಬರ ಬಗ್ಗೆ ನಿಗಾ ವಹಿಸಲಾಗಲೀ, ಮುತುವರ್ಜಿ ವಹಿಸಲಾಗಲೀ ಸಮಯದ ಅಭಾವ ಒಂದು ಕಾರಣವಾದರೆ, ಮಕ್ಕಳು ದೊಡ್ಡವರಾದಮೇಲೆ ಅವರ ಜೀವನ ಸಂಗಾತಿಗಳು ಅನ್ಯರ ಮನೆಗಳಿಂದ ಅನ್ಯ ಪರಿಸರಗಳಿಂದ ಬರುತ್ತಾರಾದ್ದರಿಂದ ಮತ್ತು ಅವರದೇ ಗುಣಗಳು ಅಭ್ಯಾಸಗಳು ಮತ್ತು ಸಂಸ್ಕಾರಗಳನ್ನು ತರುತ್ತಾರಾದ್ದರಿಂದ, ಹೊಂದಾಣಿಕೆ ಕಷ್ಟವಾಗುತ್ತದೆ. ಹಿಂದಿನ ಕಾಲದಂತೆ ಹಲ್ಲು ಕಚ್ಚಿಕೊಂಡು, ಸಹಿಸಿಕೊಂಡುಹೋಗುವ ತಾಳ್ಮೆ ಇಂದಿನವರಿಗೆ ಇಲ್ಲವಾದ್ದರಿಂದ ಅಪ್ಪ-ಅಮ್ಮ ಮತ್ತು ಮಕ್ಕಳ ಪರಸ್ಪರ ಸಂಭಂದಗಳು ಹದಗೆಡುತ್ತವೆ.

ಅವಿಭಕ್ತ ಕುಟುಂಬಗಳಲ್ಲಿ ಇರಬೇಕಾದರೆ, ನಿಸ್ವಾರ್ಥ, ಸಹನೆ, ಒಪ್ಪಿಕೊಳ್ಳುವಿಕೆ, ಅಪ್ಪಿಕೊಳ್ಳುವಿಕೆ, ಬಿಟ್ಟುಕೊಡುವಿಕೆ ಮುಂತಾದ ಗುಣಗಳು ಸದಸ್ಯರೆಲ್ಲರಲ್ಲೂ ಇರಬೇಕು. ಅದು ಇಲ್ಲದಿದ್ದರೆ ದೂರಸರಿಯುವುದು ಸಹಜ. ಆ ತಂದೆ ತಾಯಿಗಳೂ ಸಹ, “ನಮಗೆ ವಯಸ್ಸಾಯಿತು, ಇನ್ನು ನಾವು ಸಾಧಿಸುವುದೇನೂ ಇಲ್ಲ. ಮಕ್ಕಳ ಸಂತೋಷಕ್ಕಾಗಿ ಇನ್ನು ಶೇಷ ಜೀವನವನ್ನು ಶಾಂತಿಯಿಂದ ಕಳೆದರೆ ಸಾಕು ಎಂದು ತಮ್ಮ ” ಅಹಂ” ಬಿಟ್ಟು ಬಾಳಿದರೆ ಮಕ್ಕಳೂ ಸಹ ಆ ತಂದೆ ತಾಯಿಯರ ಮೇಲೆ ಪ್ರೀತಿ ವಿಶ್ವಾಸವನ್ನು ಬೆಳೆಸಿಕೊಂಡು ಅವರ ಅಂತ್ಯಕಾಲದವರೆಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಸಾಧ್ಯತೆ ಇದೆ. ಇಲ್ಲದಿದ್ದರೆ, ಅಹಂಕಾರದ ಹಗ್ಗವನ್ನು ಇಬ್ಬರೂ ಕಟ್ಟಿಕೊಂಡು ” ನಾ ಹೆಚ್ಚೋ ನೀ ಹೆಚ್ಚೋ ” ಎಂದು ಎಳೆದಾಡಿದರೆ ಬಂಧನವು ಮುರಿದು ಬೀಳುವುದು ಖಂಡಿತ.

ಮಕ್ಕಳು ತಂದೆ ತಾಯಿಯರನ್ನು” ಇವರು ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲುಹಿದವರು. ನಾವಿಂದು ಹೀಗಿದ್ದೇವೆ ಎನ್ನುವುದಕ್ಕೆ ಅವರೇ ಕಾರಣ, ನಮ್ಮ ಅಸ್ತಿತ್ವವೇ ಅವರಿಂದ, ಅವರಿಗೆ ನೋವಾಗದಂತೆ ನಾವು ನಡೆದುಕೊಳ್ಳಬೇಕು” ಎಂದೂ ಮತ್ತು ಆ ತಂದೆ ತಾಯಿಯರು “ಈ ಮಕ್ಕಳು ನಾವು ಹೆತ್ತ ಮಕ್ಕಳು. ನಮ್ಮ ಜೀವನದ ಅಂತ್ಯಕಾಲಕ್ಕೆ, ಅವರ ಸುಖದಲ್ಲಿ ನಮ್ಮ ಸುಖವನ್ನು, ಅವರ ಆನಂದದಲ್ಲಿ ನಮ್ಮ ಆನಂದವನ್ನು ಕಂಡುಕೊಳ್ಳುತ್ತಾ ನಮ್ಮ ಶೇಷ ಜೀವನವನ್ನು ಶಾಂತವಾಗಿ ಕಳೆಯುವ ” ಎಂದು ಆಲೋಚನೆ ಮಾಡಿ ನಡೆದು ಕೊಂಡರೆ ಇಬ್ಬರ ಜೀವನವೂ ಸುಖವಾಗಿರುತ್ತದೆ. ಇಲ್ಲದಿದ್ದರೆ ” ಕಿತ್ತಾಡುತ್ತಾ ಒಟ್ಟಿಗಿರುವ ಬದಲು ದೂರವಿದ್ದು ಪ್ರೀತಿ ವಿಶ್ವಾಸವನ್ನು ಕಾಪಾಡಿಕೊಳ್ಳುವಾ ಎಂದೋ ಅಥವಾ ನಮ್ಮ ನಮ್ಮ ಜೀವನವನ್ನು ನಾವು ನೋಡಿಕೊಳ್ಳುವಾ ಎಂದೋ ಎಲ್ಲರೂ ಪರಸ್ಪರ ದೂರಸರಿಯುತ್ತಾರೆ.

ವಾಚಕರೆ ಇದೊಂದು ವಿಷಮ ಪರಿಸ್ಥಿತಿ ಇದರ ನಿವಾರಣೆ ಕಷ್ಟವೆನಿಸುತ್ತದೆ. ಕೇವಲ ಅಹಂಕಾರವನ್ನು ಬಿಟ್ಟರೆ ಸಾಧ್ಯ. ನಾನಂತೂ ಪ್ರಯತ್ನ ಪಡುತ್ತೇನೆ. ಮತ್ತೆ ನೀವು?


ರಸಧಾರೆ – 175

ಕಾಂಕ್ಷೆಗಳ ಭೋಧಿಸುವ ಬಂಧುಸಖರುಪಕಾರ
ಯಕ್ಷಿಯರು ಮ್ಯಾಕ್ಬತನಿಗೆಸಗಿದುಪದೇಶ
ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು ?
ಅಕ್ಷಿನಿರ್ಮಲವೇನೋ? – ಮಂಕುತಿಮ್ಮ.

ಬಂಧುಸಖರುಪಕಾರ = ಬಂಧು + ಸಖರ +ಉಪಕಾರ , ಮ್ಯಾಕ್ ಬೆತನಿಗೆಸಗಿದುಪವೇಶ = ಮ್ಯಾಕ್ಬತ್ನಿಗೆ+ಎಸಗಿದ+ ಉಪದೇಶ//

ನಮ್ಮಲ್ಲಿ ಆಸೆಗಳನ್ನು ಹುಟ್ಟಿಸುವ ಮತ್ತು ವಸ್ತು ವಿಷಯವಾಗಿ ನಮಗೆ ಭೋಧನೆಮಾಡುವ ನಮ್ಮ ಬಂಧುಗಳು, ಸ್ನೇಹಿತರು , ಕೇವಲ ಯಕ್ಷಿಣಿಯರು ಮ್ಯಾಕ್ ಬೆತ್ ನಿಗೆ ಮಾಡಿದ ಉಪದೇಶದಂತೆ ಇದೆ. ನಮ್ಮನ್ನು ಕುರಿತು ಅವರಲ್ಲಿ ವಿಶ್ವಾಸವಿದ್ದರೇನು ಅಥವಾ ಪ್ರೀತಿ ಅನುರಾಗವಿದ್ದರೇನು , ಅವರ ಉದ್ಧೇಶಗಳು ಕಲುಷಿತವಾಗಿದೆಯೇನೋ ನೋಡಿಕೋ ಎಂದು ಒಂದು ಸೂಚನೆಯನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ನೀಡುತ್ತಾರೆ.

ಇಲ್ಲಿ ಮಾನ್ಯ ಗುಂಡಪ್ಪನವರು, ಶೇಕ್ಸ್ ಪಿಯರ್ ನ ಒಂದು ದುರಂತ ನಾಟಕದ ಉಲ್ಲೇಖ ಮಾಡುತ್ತಾರೆ. ಸ್ಕಾಟ್ಲಾಂಡಿನ ದೊರೆ ಡಂಕನ್ . ಅವನ ಸೇನಾಧಿಪತಿ ಮ್ಯಾಕ್ಬತ್. ಅವನು ಒಂದುಬಾರಿ ಯುದ್ಧದಲ್ಲಿ ಗೆದ್ದು ಹಿಂತಿರುಗುತ್ತಿರುವಾಗ ಯಕ್ಷಿಣಿಯರು, ” ದಳವಾಯಿಯಾದ ನೀನು, ರಾಜ ಡಂಕನನನ್ನು ಕೊಂದು ಬಿಡು. ಆಗ ನೀನೆ ರಾಜನಾಗುತ್ತೀಯೇ” ಎಂದು ದುರ್ಭೋಧನೆ ಮಾಡುತ್ತಾರೆ. ಅದನ್ನೇ ತಲೆಯಲ್ಲಿರಿಸಿಕೊಂಡು ಅವನು ಆ ರಾಜನನ್ನು ಕೊಂದು ಪಡಬಾರದ ಕಷ್ಟದ ಕೋಟಲೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಹಾಗೆಯೇ ನಮ್ಮ ಸ್ಥಿತಿಯೂ ಆಗಬಾರದು ಎಂದು ಸೂಚ್ಯವಾಗಿ ಗುಂಡಪ್ಪನವರು ನಮ್ಮನ್ನು ಎಚ್ಚರಿಸುತ್ತಾರೆ.

ನಮಗೆ ನಮ್ಮ ಜೀವನದಲ್ಲಿ ನಮ್ಮ ಬಂಧುಗಳೋ ನಮ್ಮ ಸ್ನೇಹಿತರೋ ಹೀಗೆ ಮತ್ಯಾರೋ ಪ್ರತೀ ಸಂದರ್ಭದಲ್ಲೂ ಒಂದು ಸೂಚನೆಯನ್ನೋ ಅಥವಾ ಒಂದು ಸಲಹೆಯನ್ನೋ ಕೊಡುತ್ತಲೇ ಇರುತ್ತಾರೆ. ನಾವು ಕೇಳಲಿ ಬಿಡಲಿ, ಅವರ ಸಲಹೆಯ ಅವಶ್ಯಕತೆ ಇರಲಿ ಬಿಡಲಿ, ಪುಗಸಟ್ಟೆ ಸಲಹೆ ಕೊಡುವವರಂತೂ ಬೇಕಾದಷ್ಟು ಜನ ಸಿಗುತ್ತಾರೆ. ನಾವೂ ಸಹ ದುರಾಸೆಯಿಂದ, ಸ್ವಾರ್ಥದಿಂದ ಅಂತಹ ಸಲಹೆಗಳನ್ನು ಪೂರ್ವಾಪರ ವಿಚಾರ ಮತ್ತು ವಿವೇಚನೆಯಿಲ್ಲದೆ ಅವರು ಕೊಟ್ಟ ಸಲಹೆಗಳನ್ನು ಪಾಲಿಸುತ್ತಾ ಹೋದರೆ ತೀರ ತೊಂದರೆಗಳಲ್ಲಿ ಸಿಕ್ಕು ತೊಳಲಾಡುತ್ತೇವೆ. ನಂತರ ನಮ್ಮ ಪರಿಸ್ಥಿತಿಗೆ ಪರರನ್ನು ದೂಷಿಸುತ್ತಾ ಗೋಳಾಡುತ್ತೇವೆ. ನಾವು ನಮ್ಮ ವಿವೇಚನೆಯನ್ನು ಉಪಯೋಗಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ ಲೇಸು. ಹಿಂದಿಯಲ್ಲಿ ಒಂದು ಮಾತನ್ನು ಹೇಳುತ್ತಾರೆ” ಸಬ್ ಕೀ ಸುನೋ ಅಪನೀ ಕರೋ” ಅನ್ಯರು ಹೇಳಿದ್ದನ್ನು ಕೇಳು ಆದರೆ ನಿರ್ಧಾರ ನೀನೆ ತೆಗೆದುಕೋ. ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ನಾವು ಅನ್ಯರ ಸಲಹೆ, ಸೂಚನೆ ಗಳನ್ನೂ ಕೇಳುತ್ತಾ ಹೋದರೆ ಬಹಳ ಸಂಕಟದಲ್ಲಿ ಸಿಕ್ಕು ಕಷ್ಟಕ್ಕೆ ಬೀಳಬೇಕಾಗುತ್ತದೆ. ಅನ್ಯರು ಕೊಡುವ ಸಲಹೆ ಅವರ ಅನುಭವದ ಆಧಾರದಮೇಲೆ ನೀಡಿರಬಹುದು. ಅವರು ನಿರ್ಮಲ ಅಂತಃಕರಣದಿಂದ ಒಳ್ಳೆಯ ಉದ್ದೇಶ್ಯ ಇಟ್ಟುಕೊಂಡೇ ಹೇಳಿರಬಹುದು. ಪಾಲಿಸಿದರೆ ಪರಿಣಾಮ ಕೆಲವು ವೇಳೆ ಸರಿಯಾಗಬಹುದು. ಆಗದೆಯೂ ಇರಬಹುದು.

ಆದರೆ ನಮ್ಮನ್ನು ಪ್ರಲೋಭನೆಗಳಿಗೆ ತಳ್ಳುವಂತಾ ಸಲಹೆಗಳೇ ಬಹಳವಾಗಿ ಸಿಗುತ್ತವೆ. ಅನ್ಯರು ಒಂದು ಸಣ್ಣ ಸಲಹೆ ನೀಡಿದರೆ, ನಾವು ಅದನ್ನು ಬಹಳ ತೀವ್ರವಾಗಿ ತೆಗೆದುಕೊಂಡು, ಬಹುವಾಗಿ ಕಲ್ಪಿಸಿಕೊಂಡು ಒಂದಕ್ಕೆ ಹತ್ತನ್ನು ಮಾಡಿ, ಕೆಲಸ ಕೆಟ್ಟಾಗ ಪರರನ್ನು ದೂಷಿಸುವ ಕೆಲಸ ಮಾಡುತ್ತೇವೆ. ಅವರು ಹೇಳಿದ್ದು ಒಂದು. ಆ ಒಂದು ನಮ್ಮನ್ನು ಹತ್ತಕ್ಕೆ ಎಳೆದುಕೊಂಡು ಹೋಗುತ್ತದೆ. ನಮ್ಮ ಕರ್ಮಕ್ಕೆ ಪರರನ್ನು ದೂಷಿಸುವ, ನಮ್ಮ ವಿಧಿಯನ್ನು ಬೈಯುವ, ಗ್ರಹಚಾರದ ಕಾರಣವನ್ನು ಹೇಳುತ್ತೇವೆ. ನಾವು ಎಂದಿಗೂ ” ಆಹಾ ಇದು ನಾನು ಮಾಡಿದ ತಪ್ಪು” ಎಂದು ಒಪ್ಪಿಕೊಳ್ಳುವುದೇ ಇಲ್ಲ. ಆದ್ದರಿಂದ ವಾಚಕರೆ, ಪರರು ಹೇಳಿದ್ದು ಕೇಳುತ್ತಾ, ವಿಶ್ಲೇಷಣೆ ಮಾಡುತ್ತಾ, ನಾವು ನಮ್ಮ ನಮ್ಮ ವಿವೇಚನೆಯನ್ನು ಉಪಯೋಗಿಸಿ, ನಮ್ಮದೇ ನಿರ್ಧಾರಗಳನ್ನು ತೆಗೆದುಕೊಂಡರೆ, ಏನೇ ಆದರೂ ನಾವು ಪರರ ದೂಷಿಸುವ ಪರಿಸ್ಥಿತಿ ಬರುವುದಿಲ್ಲ. ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬಹುದು.


ರಸಧಾರೆ – 176

ಇಂಗಿತಜ್ಞಾನವಿಲ್ಲದ ಬಂಧುಪರಿವಾರ
ಹಂಗಿಸುವ ಛಲವುಳ್ಳ ಸತಿಪುತ್ರಸಖರು
ಬಂಗಾರದಸಿ ಚುಚ್ಚಿ ಸಿಂಗಾರ ಬೊಟ್ಟೆನುವ
ಮಂಗಬುದ್ಧಿಯ ಜನರು – ಮಂಕುತಿಮ್ಮ

ಬಂಗಾರದಸಿ = ಬಂಗಾರದ ಕತ್ತಿ // ಸಿಂಗಾರ ಬೊಟ್ಟೆನುವ = ಅಲಂಕಾರದ ತಿಲಕವೆನುವ ಮಂಗಬುದ್ಧಿಯ = ಕೋತಿ ಬುದ್ಧಿಯ ಜನ.

ಪರರ ಮನಸ್ಸಿನಲ್ಲಿ ಏನಿದೆ ಎಂದು ಅರಿಯದೆ ನಮಗೆ ಕೆಲಸಕ್ಕೆಬಾರದ ಬುದ್ಧಿವಾದವನ್ನು ಹೇಳುವ ಬಂಧುಗಳು ಮತ್ತು ಪರಿವಾರದವರು, ನಮ್ಮನ್ನು ಹಂಗಿಸುವ ಹಠ ಮತ್ತು ಧೈರ್ಯಮಾಡುವ ನಮ್ಮದೇ ಪತ್ನಿ, ಪುತ್ರ ಮತ್ತು ಸ್ನೇಹಿತರುಮತ್ತು ಅವರು ಮಾಡುವ ಸಲಹೆ ಸೂಚನೆಗೆ ಸರಿ ಎಂದು ನಮಗೆ ಬಲವಂತ ಹೇಗಿದೆಯೆಂದರೆ, ಚಿನ್ನದ ಕತ್ತಿಯಲ್ಲಿ ನಮ್ಮ ಹೇಗೆ ಚುಚ್ಚಿ ಅದು ಅಲಂಕಾರದ ತಿಲಕ ಎಂದು ಹೇಳುವ ಮಂಗ ಬುದ್ಧಿಯ ಜನರು ಎಂದು ಮಾನ್ಯ ಗುಂಡಪ್ಪನವರು ಟೀಕಾರೂಪದಲ್ಲಿ ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.

ಖಂಡಿತ ಯಾರಿಗೂ ಇನ್ನೊಬ್ಬರ ಮನಸ್ಸಲ್ಲೇನಿದೆ ಎಂದು ಅರಿಯುವುದು ಸಾಧ್ಯವಿಲ್ಲ. ಆದರೆ “” ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ” ಎಂಬ ಸರ್ವಜ್ಞ ವಚನದಂತೆ, ತಮ್ಮನ್ನು ಪರರ ಸ್ಥಾನದಲ್ಲಿ ಇಟ್ಟು ನೋಡಿದರೆ, ಅವರು ಕೊಡುವ ಸಲಹೆ ಸೂಚನೆಗಳು ಬದಲಾಗಬಹುದು. ಆದರೆ ಹಾಗಾಗುವುದಿಲ್ಲ. ತಾವು ಕೊಡುವ ಸೂಚನೆ ಸಲಹೆಗಳು ಪರರಿಗೆ ಉಪಯೋಗವಾಗುತ್ತೋ ಅಥವಾ ತೊಂದರೆಯಾಗುತ್ತೋ ಎಂದು ಯೋಚನೆ ಮಾಡದೆ ತಮ್ಮ ಮಂಗಬುದ್ಧಿಯಿಂದ ಪರರಿಗೆ ಸಲಹೆಗಳನ್ನು ಕೊಡುತ್ತಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಸಲಹೆಗಳನ್ನು ಪಾಲಿಸುವಂತೆ ಒತ್ತಾಯಿಸುತ್ತಾರೆ. ಅಕಸ್ಮಾತ್ ನಾವು ಅವರ ಸೂಚನೆಗಳನ್ನು ಕೇಳಿ ನಮಗೆ ಒಳ್ಳೆಯದಾದರೆ, ಅದು ಅವರ ‘ವಿಜಯ’ವೆಂಬಂತೆ ಬೀಗುತ್ತಾರೆ. ಆದರೆ ನಾವು ಅವರ ಸೂಚನೆಯನ್ನು ಪಾಲಿಸಿ ” ಕೆಟ್ಟರೆ ” ಅದು “ನಮ್ಮ ಕರ್ಮ ಅಥವಾ ಹಣೆಬರಹ” ಎಂದು ಹಣೆಪಟ್ಟಿ ಕಟ್ಟಿ ನಮ್ಮಿಂದ ಖಂಡಿತ ದೂರವಾಗುತ್ತಾರೆ. ಅಷ್ಟೇ ಅಲ್ಲ ” ನಮ್ಮ ಸಲಹೆಯನ್ನು ಸರಿಯಾಗಿ ಕೇಳಲಿಲ್ಲ” ಎಂದು ನಮ್ಮನ್ನು ಹಂಗಿಸುತ್ತಾರೆ, ಚುಚ್ಚುಮಾತನಾಡುತ್ತಾರೆ, ಅಣಕವಾಡುತ್ತಾರೆ. ನಮ್ಮ ಹೆಂಡತಿ (ಗಂಡ) , ಮಕ್ಕಳು ಅಥವಾ ಸ್ನೇಹಿತರು ಎಲ್ಲರೂ ಇದೇ ಪಟ್ಟಿಯಲ್ಲಿ ಸೇರುತ್ತಾರೆ. ನಾವು ಸೋತಾಗ ಅಥವಾ ಕೆಟ್ಟಾಗ ಎಲ್ಲರೂ ನಮ್ಮಿಂದ ದೂರಾಗುತ್ತಾರೆ.

ಹಾಗಾಗಿ ವಾಚಕರೆ, ನಮ್ಮ ವಿವೇಚನೆಯನ್ನು ಭದ್ರಪಡಿಸಿಕೊಳ್ಳಬೇಕು. ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳಬೇಕು. ಪರರ ಸಲಹೆ ಸೂಚನೆಗಳನ್ನು ಕೇಳಿದರೂ, ಅಳೆದು ಸುರಿದು ನೋಡಿ ನಮ್ಮ ನಿರ್ಧಾರವನ್ನು ನಾವೇ ತೆಗೆದುಕೊಳ್ಳಬೇಕು ಮತ್ತು ಅದರ ಪರಿಣಾಮಗಳಿಗೆ ನಾವೇ ಬಾಧ್ಯರಾಗಬೇಕು . ನಮ್ಮ ಹಣೆಗೆ ಪಟ್ಟಿಯನ್ನು ನಾವೇ ಕಟ್ಟಿಕೊಂಡರೆ ಸಮಾಧಾನ. ಆ ಅವಕಾಶವನ್ನು ಪರರಿಗೆ ಕೊಡಬಾರದು, ಅವರ ಚುಚ್ಚುಮಾತುಗಳಿಗೆ ಅವಕಾಶವೇ ಕೊಡಬಾರದು. ” ಲೋಕದ ಜನರು ಕಾಗೆಗಳಂತೆ” ಎನ್ನುವ ಒಂದು ಗಾದೆ ಮಾತಿದೆ. ಅವರು ಮಾತನಾಡುತ್ತಲೇ ಇರುತ್ತಾರೆ. ನಾವು ತಲೆ ಕೆಡಿಸಿಕೊಳ್ಳದೆ, ಸಮಾದಾನದಿಂದ ಇರಬೇಕು. ಇಂತಹ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಹಾಗಾದರೆ ನಾವು ನಮ್ಮ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು.


ರಸಧಾರೆ – 177

ಬಂಧುವುಂ ಮಿತ್ರನುಂ ಭ್ರುತ್ಯನುಂ ಶತ್ರುವೊಲೆ
ದಂಡಧರನೋಲಗಕೆ ನಿನ್ನನೆಳೆವವರೋ
ಅಂದದೊಡವೆಯ,ಮೊನೆಗಳಿಂದೆದೆಯನೊತ್ತುವಾ
ಮಂದಹಸಿತ ಕೊಲೆಯೊ – ಮಂಕುತಿಮ್ಮ.

ದಂಡಧರನೋಲಗಕೆ= ದಂಡಧರ + ಓಲಗಕೆ // ನಿನ್ನನೆಳೆವವರೋ = ನಿನ್ನನ್ನು + ಎಳೆವವರೋ// ಅಂದದೊಡವೆಯ= ಅಂದದ + ಒಡವೆಯ// ಮೊನೆಗಳಿಂದೆದೆಯನೊತ್ತುವಾ = ಮೊನೆಗಳಿಂದ+ ಎದೆಯನು+ಒತ್ತುವಾ //

ಬಂಧುವುಂ = ಬಂಧುವು // ಮಿತ್ರನುಂ = ಸ್ನೇಹಿತನು // ಭೃತ್ಯನುಂ = ಸೇವಕನು // ಶತ್ರುವೊಲೆ = ಶತ್ರುವಿನಂತೆ // ದಂಡಧರನ ಓಲಗಕೆ = ಯಮನದರ್ಬಾರಿಗೆ // ಅಂದದೊಡವೆಯ = ಚೆನ್ನಾದ ಒಡವೆಗಳ // ಮೊನೆಗಳಿಂದೆದೆಯನೊತ್ತುವಾ = ಚೂಪಾದ ಕೊನೆಗಳಿಂದ ನಮ್ಮ ಎದೆಗೆ ಒತ್ತುವಂತೆ.

ಸ್ವಾರ್ಥವಿಲ್ಲದೆ ನಮಗೆ ಸಹಾಯ ಮಾಡುವವರು ಇಡೀ ಜಗತ್ತಿನಲ್ಲೇ ಕಾಣಸಿಗುವುದು ದುರ್ಲಭ. ನಮಗೆ ಸಹಾಯ ಮಾಡುವವರೆಲ್ಲ, ತಮ್ಮದೇ ಆದ ಕಾರಣಗಳಿಗಾಗಿ ನಮಗೆ ಒದಗುತ್ತಿರುತ್ತಾರೆ. ಆದರೆ ಅವರು ಮಾಡುವ ಸಹಾಯ ಅವರಿಗೇ ಹೆಚ್ಚು ಉಪಕಾರಿಯಾಗಿ ನಮಗೆ ಕಷ್ಟಗಳ ಫಲ ಮಾತ್ರ ಸಿಗುತ್ತವೆ. ಅವರೆಲ್ಲ ನಮಗೆ ಮಿತ್ರರಂತೆ ಕಂಡರೂ ವಾಸ್ತವದಲ್ಲಿ ಅವರು ನಮಗೆ ಶತ್ರುಗಳಂತಾಗಿ, ನಮಗೆ ಯಮಲೋಕದ ಧರ್ಶನ ಮಾಡಿಸುವವರಂತೆ ಎಂದು ಒಂದು ಕಟುಸತ್ಯವನ್ನು ಅರುಹುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ.

ಹೌದು, ಈ ಜಗದಲ್ಲಿ ಸ್ವಾರ್ಥವಿಲ್ಲದೆ ಒದಗುವವರು ವಿರಳ. ನಮಗೆ ಸಹಾಯಮಾಡುವ ನೆಪದಲ್ಲಿ ತಮ್ಮ ಸ್ವಾರ್ಥವನ್ನೇ ಸಾಧಿಸುವವರೇ ಅಧಿಕ. ಅವರು ಬಂಧುಗಳೇ ಆಗಿರಲಿ, ಮಿತ್ರರೇ ಆಗಿರಲಿ ಅಥವಾ ನಮ್ಮ ಸೇವಕರೆ ಆಗಿರಲಿ, ಎಲ್ಲರ ವರ್ತನೆಯೂ ಹಾಗೇ ಇರುತ್ತದೆ. ನಮಗೆ ಒದಗುವ ಮಿತ್ರರಂತೆ ಕಂಡರೂ ಅವರು ವಾಸ್ತವದಲ್ಲಿ ನಮಗೆ ಅಹಿತವನ್ನೇ ಉಂಟುಮಾಡುವ ಶತ್ರುಗಳಂತೆ ವರ್ತಿಸುತ್ತಾರೆ. ಅವರು ಉಪಕಾರ ಮಾಡುವಂತೆ ನಟಿಸಿ, ನಮ್ಮ ಬೇಳೆ ಬೇಯಿಸಿಕೊಂಡು ” ಹೊಳೆ ದಾಟಿದ ಮೇಲೆ ಅಂಬಿಗ………..” ಎಂಬಂತೆ ನಮ್ಮನ್ನು ನಮ್ಮ ಕರ್ಮಕ್ಕೆ ಬಿಟ್ಟು ಹೊಗುವುದ ನೋಡಿದರೆ, ಇವರೇನು ನಮ್ಮನ್ನು ಯಮಸದನಕ್ಕೆ ಕೊಂಡುಹೋಗುವ ಯಮ ಕಿಂಕರರೋ ಎಂದು ಅನುಮಾನ ಬರುತ್ತದೆ.

ಹಾಗೆ ನಮಗೆ ನೋವುಂಟಾಗುವ ಇವರ ಉಪಕಾರಗಳು, ನಗು ನಗುತ್ತಾ ನಮ್ಮನ್ನು ಕೊಂದಂತೆ ಅಲ್ಲವೇ? ಇವರೆಲ್ಲ ನಮ್ಮ “ಹಿತ ಚಿಂತಕರು” ಅಂದರೆ “ನಮಗೆ ಹಿತವಾದರೆ ಆವರಿಗೆ ಚಿಂತೆಯಾಗುತ್ತದೆಯೆಂತೆ ” ಅವರ ಪ್ರಕಾರ ಅವರು ಮಾಡುವುದು ನಮಗೆ ಮಹದುಪಕಾರ. ಆದರೆ ವಾಸ್ತವದಲ್ಲಿ ಅವರು ಮಾಡುವ ಉಪಕಾರಗಳು, ಚೂಪಾದ ಮೊನೆಗಳುಳ್ಳ ಮತ್ತು ಧರಿಸಿದರೆ ನಮ್ಮ ಎದೆಗೆ ಒತ್ತುವಂಥಾ, ಚಿನ್ನದ ಒಡವೆಗಳಂತೆ ಇರುತ್ತದೆ. ನಮಗೆ ಹಿತಮಾಡುವುದ ಬಿಟ್ಟು ನಮಗೆ ತೊಂದರೆಯನ್ನೇ ಕೊಡುತ್ತದೆ.

ತೈತ್ತರೀಯ ಉಪನಿಷತ್ತು, ಅನ್ಯರಿಗೆ ಯಾವುದಾದರೂ ಒಂದು ವಸ್ತುವನ್ನೋ, ಸಲಹೆಯನ್ನೂ, ಸಹಾಯವನ್ನೂ ಕೊಡುವ ವಿಷಯದಲ್ಲಿ ಹೀಗೆ ಹೇಳುತ್ತದೆ. ಶ್ರದ್ಧೆಯಿಂದ ಕೊಡು, ಅಶ್ರದ್ಧೆಯಿಂದ ಕೊಡಬೇಡ, ಒಳ್ಳೆಯದನ್ನೇ ಕೊಡು, ಹೃತ್ಪೂರ್ವಕವಾಗಿ ಕೊಡು, ಸಂಪೂರ್ಣವಾಗಿ ಕೊಡು, ಹೆದರಿಕೆಯಿಂದ ಕೊಡು, ಹಾಗೆ ಏನು ಕೊಡುವುದು ಎಂದು ಅನುಮಾನ ಬಂದಾಗ, ಪ್ರಾಜ್ಞರನ್ನು ಸಂಪ್ರತಿಸಿ ಯೋಗ್ಯವಾದ ವಸ್ತುವನ್ನು ಕೊಡು” ಎಂದು ಹೇಳುತ್ತದೆ. ಈ ರೀತಿ ಯೋಚನೆ ಮಾಡಿ, ಒಳ್ಳೆಯ ಉಪಕಾರವನ್ನು ಮಾಡುವವರು ಇಂದು ಯಾರು ಇದ್ದಾರೆ ಹೇಳಿ. ಒಂದು ಕಾಲಕ್ಕೆ “ಪರೋಪಕಾರಂ ಇದಂ ಶರೀರಂ” ಎನ್ನುತ್ತಿದ್ದರು. ಈಗಿನ ಕಾಲಕ್ಕೆ ” ಪರಾಪಕಾರಂ ಇದಂ ಶರೀರಂ” ಎಂದು ಬದಲಾಯಿಸಿಕೊಳ್ಳುವ ಸ್ಥಿತಿ ಬಂದಿದೆ.

ಇಂತಹ ಸ್ಥಿತಿಯಲ್ಲಿ ನಾವು”ಪರರಿಂದ ಉಪಕಾರದ ಅಪೇಕ್ಷೆ ಪಡದಂಥಾ ಸ್ಥಿತಿಯನ್ನು ಕರುಣಿಸು ದೇವಾ!!!!” ಎಂದು ಬೇಡುವುದೇ ಒಳ್ಳೆಯದು.


ರಸಧಾರೆ – 178

ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ
ಪಾಶವಾಗಲ್ಬಹುದು ನನಗೆ ಮೈ ಮರೆಸಿ
ವಾಸನೆಗಳುರುಬಿ ಚಿತ್ತ ಜ್ವರಗಳಂ ಬಿತ್ತಿ
ಮೋಸದಲಿ ಕೊಲ್ಲುವುವೋ – ಮಂಕುತಿಮ್ಮ.

ದ್ವೇಷರೋಷಗಳವೊಲೆ= ದ್ವೇಷ+ ರೋಷಗಳ+ವೊಲೆ // ಪಾಶವಾಗಲ್ಬಹುದು = ಪಾಶವು+ ಆಗಲು+ ಬಹುದು // ವಾಸನೆಗಳುರುಬಿ = ವಾಸನೆಗಳು + ಉರುಬಿ

ನೇಹಮುಂ = ಸ್ನೇಹವು// ಮೋಹಮುಂ = ಪ್ರೀತಿ ಪ್ರೇಮಗಳು // ಪಾಶವು = ಒರುಳು // ವಾಸನೆಗಳು = ಅಂಟಿಕೊಳ್ಳುವ ಗುಣಗಳು// ಉರುಬಿ = ಉಕ್ಕಿ ಹರಿದು//

ಚಿತ್ತ ಜ್ವರಗಳಂ ಬಿತ್ತಿ = ಮನಸ್ಸಿನಲ್ಲಿ ತಾಪಗಳನ್ನು ಉಂಟುಮಾಡಿ //

ಈ ಜಗತ್ತಿನಲ್ಲಿ ಪರಸ್ಪರ ಸಂಬಂಧಗಳು ದ್ವೇಷ, ರೋಷ, ಪ್ರೀತಿ, ಪ್ರೇಮ ಅನುರಾಗ, ಮೋಹಗಳಿಂದ ಕೂಡಿದ್ದು ಅವುಗಳು, ನಿನಗೆ ಅರಿವಾಗದಂತೆ ನಿನ್ನ ಕುತ್ತಿಗೆಗೆ ಉರುಳಾಗವುದು. ಈ ಎಲ್ಲ ಸಂಬಂಧಗಳು ನಿನ್ನ ಮನಸ್ಸಿನಲ್ಲಿ ತಾಪವನ್ನು ಉಂಟುಮಾಡಿ ನಿನಗರಿವಿಲ್ಲದಂತೆಯೇ ನಿನ್ನನ್ನು ಕೊಳ್ಳುತ್ತದೆಯೋ ಎಂದು ಒಂದು ವಾಸ್ತವಿಕ ಸತ್ಯವನ್ನು ಸೂಚ್ಯವಾಗಿ ನಮಗೆ ಅರುಹುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮಗೆ ಯಾರಮೇಲೋ ದ್ವೇಷವುಂಟಾಗುತ್ತದೆ, ಮತ್ಯಾರಮೇಲೋ ರೋಷವುಂಟಾಗುತ್ತದೆ. ಕೆಲವರನ್ನು ನಾವು ಪ್ರೀತಿಸುತ್ತೇವೆ ಮತ್ಯಾರನ್ನೋ ನಾವು ಮೋಹಿಸುತ್ತೇವೆ. ಈ ಎಲ್ಲ ಭಾವಗಳಿಗೂ ಒಂದು ಕಾರಣವಿಲ್ಲದೆ ಇರಬಹುದು. ಕಾರಣವಿದ್ದರೂ ನಮ್ಮ ಅರಿವಿಗೆ ಬಾರದೆ ಇರಬಹುದು ಅಥವಾ ಬಂದರೂ ಅರ್ಥವಾಗದೆ ಇರಬಹುದು. . ಪರಸ್ಪರ ನಂಟಿನ ಅಂಟು ನಮಗರಿವಿಲ್ಲದ ಹಾಗೆಯೇ ಅಂಟಿಕೊಂಡು, ಆ ಅಂಟೇ, ನಮಗೆ ಅರಿವಾಗದಂತೆಯೇ, ನಮ್ಮನ್ನು ತನ್ನ ಪಾಶದಲ್ಲಿ ಸಿಕ್ಕಿಸಿಕೊಂಡುಬಿಡುತ್ತದೆ . ಈ ಪಾಶವೇ ನಮ್ಮ ಜೀವನಕ್ಕೆ-ಬದುಕಿಗೆ ಮುಳುವಾಗಿಬಿಡಬಹುದು.

ಈ ರೀತಿಯ ಸಂಬಂಧಗಳಿಂದ ಮತ್ತು ಭಾವನಾತ್ಮಕವಾದ ಬಂಧನಗಳಿಂದ ನಮಗೆ ಗೊತ್ತಿಲ್ಲದೆಯೇ, ನಾವು ಒಬ್ಬರಿಗೊಬ್ಬರು ಹೆಣೆದುಕೊಳ್ಳುತ್ತಾ ಹೋಗುತ್ತೇವೆ. ಕೆಲವರ ಒಟ್ಟಿಗೆ ನಮ್ಮ ಬಾಂಧವ್ಯ ಕೆಲ ಕಾಲ ಸುಮುಖವಾಗಿದ್ದರೆ ಮತ್ತೆ ಕೆಲಕಾಲ ಕೆಟ್ಟು ಹೋಗುತ್ತದೆ. ಧೀರ್ಘಕಾಲ ಉಳಿಯುವ ಸಂಬಂಧಗಳಿರುತ್ತವೆ ಅಲ್ಪಕಾಲದಲ್ಲಿ ಕಡಿದು ಹೋಗುವ ಸ್ನೇಹ ಸಂಬಂಧಗಳೂ ಇರುತ್ತವೆ. ಅನಿವಾರ್ಯ ಸಂಬಂಧಗಳು, ನಿರ್ಬಂಧಿತ ಸಂಬಂಧಗಳು, ಕಾಲ್ಪನಿಕ ಸಂಬಂಧಗಳು, ಹೇಗೆ ಪ್ರತಿ ಮನುಷ್ಯನೂ ಅವನ ಹುಟ್ಟಿನಿಂದ ಮರಣದ ತನಕ, ಅವನಿಗೆ ಬೇಕೋ ಬೇಡವೋ, ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲರೂಪ ಅದ ಸಂಬಂಧಗಳಿಂದ ಈ ಜಗತ್ತಿಗೆ ಕೊಂಡಿ ಹಾಕಿಕೊಂಡೇ ಇರುತ್ತಾನೆ.

ಈ ಸ್ನೇಹ ಸಂಬಂಧಗಳ ಪರಿಣಾಮ ಇವನ ಮನಸ್ಸು ಬುದ್ಧಿಗಳ ಮೇಲೆ ಅಘಾಧವಾಗಿ ಆಗಿ ಅವನ ನೆನಪುಗಳಲ್ಲಿ, ವಾಸ್ತವದಲ್ಲಿ ಮತ್ತು ಅವನ ಯೋಜನೆಗಳಲ್ಲಿ ಆವರಿಸಿಕೊಂಡುಬಿಡುತ್ತದೆ. ತತ್ಕಾರಣ ಇವನನ್ನು ಒಂದು ಕೋತಿಯಂತೆ ಆಡಿಸುತ್ತದೆ, ತಲೆ ಕೆಡಿಸುತ್ತದೆ ಮತ್ತು ಹುಚ್ಚು ಹಿಡಿಸುತ್ತದೆ. ಆ ಹುಚ್ಚಿನ ಗುಂಗು ತಲೆಯಲ್ಲಾ ತುಂಬಿ “ನಾವು” ಏನು ಮಾಡುತ್ತಿದ್ದೇವೆ ಎನ್ನುವ ಪರಿವೆಯೇ ಇಲ್ಲದಂತಾಗುತ್ತದೆ. ಏನೋ ಆಗಬೇಕಿದ್ದ ನಾವು, ನಮ್ಮ ವೈಯಕ್ತಿಕ ಸಾಮರ್ಥ್ಯವನ್ನು ಬೆಳಕಿಗೆ ತರಲಾಗದೆ, ಏನೋ ಆಗಿ ಮೋಸ ಹೋಗಿಬಿಡುತ್ತೇವೆ. ಈ ಜಗತ್ತಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ ಒಂದು ಸಾರ್ಥಕ್ಯ ಜೀವನ ನಡೆಸುವ ಭಾಗ್ಯ ಆ ಪರಮಾತ್ಮ ಕರುಣಿಸಿರುತ್ತಾನೆ. ಮಿಕ್ಕ ನಾವೆಲ್ಲ “ಸಿಂಬಳದ ಹುಳುವಿನಂತೆ” ಒದ್ದಾಡುತ್ತಿರುತ್ತೇವೆ ಅಲ್ಲವೇ?

ವಾಚಕರೆ ಯಾರಿಗೆ ತಾವೇನು ಮಾಡಬೇಕೆಂದುಕೊಳ್ಳುತ್ತಾರೋ ಅದನ್ನು ಮಾಡಲು ಆದರೆ ಅವರೇ ಧನ್ಯರು!!!!


ರಸಧಾರೆ – 179

ಕರುಮ ಬಂದಿದಿರಹುದು ಮೋಹನದ ರೂಪಿನಲಿ I
ಕಿರುನಗುವು ಕುಡಿನೋಟ ಕೊಂಕುನುಡಿಗಳು II
ಕರೆದು ತಳ್ಳುವ, ತಳ್ಕರಿಸುತೊಳಗೆ ಕಿಚ್ಚಿಡುವ I
ತರಳತೆಯದೇಂ ತಂತ್ರ – ಮಂಕುತಿಮ್ಮ II

ಬಂದಿದಿರಹುದು = ಬಂದು+ ಇದಿರು + ಇಹುದು // ತಳ್ಕರಿಸುತೊಳಗೆ = ತಳ್ಕರಿಸುತ+ ಒಳಗೆ// ತರಳತೆಯದೇಂ = ತರಳತೆಯು+ ಅದು + ಏಂ//

ಕರುಮ = ನಮ್ಮ ಪೂರ್ವ ಕರ್ಮ// ಮೋಹನ = ಮೋಹಕ್ಕೊಳಪಡಿಸುವ // ತಳ್ಕರಿಸುತ = ತಬ್ಬಿಕೊಂಡು // ತರಳತೆಯು = ಚಪಲತೆಯು

ನಮ್ಮ ಕರ್ಮವು ನಮ್ಮನ್ನು ಈ ಜಗತ್ತನ್ನು ಪ್ರೀತಿಸುವಂತೆ ಮಾಡುತ್ತದೆ. ನಮ್ಮನ್ನು ಆಕರ್ಷಿಸುತ್ತದೆ. ಆ ಆಕರ್ಷಣೆಯಲ್ಲಿ ಸಿಕ್ಕು ನಾವು ಜಗದ ಜನರ ಕುಹಕದ ಕಿರುನಗೆ, ತಿರಸ್ಕಾರದ ಕುಡಿನೋಟ ಮತ್ತು ಕೊಂಕುನುಡಿಗಳಿಗೆ ಬಲಿಯಾಗುತ್ತೇವೆ. ನಮ್ಮನ್ನು ಕರೆದಂತೆ ಮಾಡಿ ತಬ್ಬಿಕೊಂಡಂತೆ ಮಾಡಿ ಪುನಃ ತಳ್ಳಿಬಿಡುವ ಈ ಚಪಲತೆಯ ಉಪಾಯ ಅಥವಾ ಉದ್ದೇಶ್ಯ ಏನು ಎಂದು ತಿಳಿಯದಾಗಿದೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾವು ಈ ಜಗತ್ತಿಗೆ ನಮ್ಮ ಪೂರ್ವ ಕರ್ಮವನ್ನು ಕಳೆಯಲೆಂದೇ ಬರುತ್ತೇವೆ ಎಂದು ಹೇಳುತ್ತದೆ ನಮ್ಮ ಭಾರತೀಯ ಸಿದ್ಧಾಂತ. ಆ ಕರ್ಮವೇ ಈ ಜಗತ್ತಿನಲ್ಲಿ ಆಸೆ ಮತ್ತು ಆಸ್ಥೆಯನ್ನು ನಮ್ಮ ಮನಸ್ಸುಗಳಲ್ಲಿ ಉಂಟುಮಾಡಿ, ಈ ಜಗತ್ತಿನೊಂದಿಗೆ ನಂಟನ್ನೂ, ಈ ಜಗತ್ತಿನಲ್ಲಿ ನಮಗೆ ಮೋಹವನ್ನು ಉಂಟುಮಾಡುತ್ತದೆ. ಹಾಗಾಗಿ ನಮ್ಮ ಎಲ್ಲ ಕಾರ್ಯ ಕಲಾಪಗಳೂ ನಡೆಯುತ್ತವೆ. ಅಕಸ್ಮಾತ್ ಹಾಗಿಲ್ಲದಿದ್ದಿದ್ದರೆ, ಏನಾಗುತ್ತಿತ್ತು ಎಂದು ಊಹಿಸಲೂ ನಂಗೆ ಕಷ್ಟ.

ನಮಗೆ ಈ ಜಗತ್ತಿನೊಂದಿಗಿನ ಜನರೊಡನೆ ಪರಸ್ಪರ ಸಂಬಂಧಗಳು ಹೇಗಿರುತ್ತವೆಯೆಂದು ಒಮ್ಮೆ ನೋಡಿದರೆ, ನಾವು ವಸ್ತು ವಿಷಯ ಮತ್ತು ವ್ಯಕ್ತಿಗಳೊಂದಿಗೆ, ಆಕರ್ಷಿತರಾಗುತ್ತೇವೆ, ಮೋಹಿತರಾಗುತ್ತೇವೆ ಅಂಟಿಕೊಳ್ಳುತ್ತೇವೆ. ಈ ಅಂಟಿಕೊಳ್ಳುವಿಕೆ ನಮ್ಮನ್ನು ವಸ್ತು ವಿಷಯ ಮತ್ತು ವ್ಯಕ್ತಿಗಳೊಂದಿಗೆ ಸಂಬಂಧವೇರ್ಪಟ್ಟು ನಾವು ಬಹಳ ಸಂಕಷ್ಟಗಳಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಮೊದಲು ಒಂದು ವಸ್ತು ವಿಷಯ ಮತ್ತು ವ್ಯಕ್ತಿಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆ, ನಮ್ಮ ಆಸೆ ಆಕಾಂಕ್ಷೆಗಳನ್ನು ಅದರೊಟ್ಟಿಗೆ ಗಂಟು ಹಾಕಿಕೊಳ್ಳುತೇವೆ. ಕೆಲ ದಿನಗಳಬಳಿಕ ನಮಗೆ ನಿಜ ಸ್ಥಿತಿ ಅರ್ಥವಾಗುತ್ತದೆ. ಅದನ್ನು ಬಿಡುತ್ತೇವೆ, ಮತ್ತೊಂದಕ್ಕೆ ಅಂಟಿಕೊಳ್ಳುತ್ತೇವೆ.

ವ್ಯಕ್ತಿಗಳೊಂದಿಗಂತೂ ಈ ವಿಷಯ ಬಹಳ ಸತ್ಯ. ” familiarity breeds contempt ” ಎನ್ನುವ ಮಾತಿದೆ. ಹಾಗೆಯೇ ಮೊದಲು ಆಕರ್ಷಣೆ, ಅದನ್ನು ಪಡೆದುಕೊಳ್ಳುವ ಆಸೆ, ಪಡೆದಮೇಲೆ ನಿಜರೂಪದ ಅರಿವಾದಾಗ, ನಿರಾಸೆ, ಅಸಹನೆ, ಅಸಹ್ಯ,ನೋವು ಎಲ್ಲ ಉಂಟಾಗುತ್ತದೆ. ನಮ್ಮ ವೈಫಲ್ಯವನ್ನು ಕಂಡು ನಗುವವರು, ಕುಟಿಲವಾಡುವವರು, ಅಣಕವಾಡುವವರು, ನಮ್ಮನ್ನು ಅಪ್ಪಿಕೊಂಡು ಅಪ್ಯಾಯತೆ ತೋರಿದವರು ನಮ್ಮನ್ನು ದೂಡುವುದು ನಮ್ಮಿಂದ ದೂರಾಗುವುದು ಸರ್ವೇ ಸಾಮಾನ್ಯ ಎಲ್ಲರ ಜೀವನದಲ್ಲೂ ನಡೆಯುತ್ತದೆ.

ಹೀಗೆ ದಿನ ದಿನಕ್ಕೆ ಬದಲಾಗುವ ನಮ್ಮ ಸ್ಥಿತಿ ಮತ್ತು ನಮ್ಮ ಸುತ್ತಲಿನ ಜನಗಳ ವರ್ತನೆಗೆ ಕಾರಣವೆಂದು ಯೋಚಿಸಿದರೆ ನಮಗೆ ಸರಿಯಾದ ಉತ್ತರ ಸಿಗುವುದಿಲ್ಲ. ಬಹಳಷ್ಟು ಸಾರಿ ನಾವು ಪರರನ್ನು ನಮ್ಮ ಅನಿಷ್ಟಕ್ಕೆ

ಕಾರಣವಾಗಿಸುತ್ತೇವೆ ಮತ್ತೆ ಕೆಲವೇಳೆ ನಮ್ಮನ್ನೇ ದೂಷಿಸಿಕೊಳ್ಳುತ್ತೇವೆ. ಆವೇಶದಲ್ಲಿ ಹಳಹಳಿಸುತ್ತೇವೆ. ಆದರೆ ಸ್ಪಷ್ಟ ಕಾರಣ ನಮಗೆ ಕಾಣುವುದಿಲ್ಲ. ಆಗ ” ಅಯ್ಯೋ ನಮ್ಮ ಕರ್ಮಕೆಟ್ಟಿತ್ತು ” ಎಂದು ಎಲ್ಲವನ್ನೂ ನಮ್ಮ ಕರ್ಮಕ್ಕೆ ಅಂಟಿಸಿಬಿಡುತ್ತೇವೆ.

ವಾಚಕರೆ ಇದು ಎಲ್ಲರ ಸ್ಥಿತಿ. ಯಾರಿಗೂ ಇದರಿಂದ ವಿನಾಯತಿ ಇಲ್ಲ.


ರಸಧಾರೆ - 180

ಮೃತ್ಯು ತಾಂ ಬಂದು ಮೋಹಿನಿಯ ರೂಪದಿ ನಿನ್ನ I
ಚಿತ್ತವನು ಸೆರೆವಿಡಿದು ನೆತ್ತರನು ಬಸಿದು II
ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘI
ಹತ್ಯೆಯಲಿ ಹರುಷಿಪಳೋ – ಮಂಕುತಿಮ್ಮ II

ನಿನ್ನಸುವ = ನಿನ್ನ + ಅಸುವ // ಅಸುವ= ಪ್ರಾಣವನ್ನು

ಪಿಶಾಚಿಗಳಲ್ಲಿ ಮೋಹಿನಿ ಎಂಬುದು ಒಂದು ಹೆಣ್ಣು ರೂಪಿನ ಪಿಶಾಚಿ. ಅದು ಅತೀ ಸುಂದರವಾಗಿ ತನ್ನ ಪಾಶಕ್ಕೆ ಸಿಕ್ಕವನ ರಕ್ತವೀರ್ಯಗಳನ್ನೆಲ್ಲ ಕೊಂಚ ಕೊಂಚವಾಗಿ ಹೀರಿ ಶಕ್ತಿಹೀನನನ್ನಾಗಿಸಿ ದೀರ್ಘಕಾಲ ನರಳುವಂತೆ ಮಾಡಿ, ಕಡೆಗೆ ಸಾವಿನ ತೆಕ್ಕೆಗೆ ನಮ್ಮನ್ನು ನೂಕುತ್ತಾಳೆ. ಇದು ಈ ಕಗ್ಗದ ಹೂರಣ. ನಾವೆಲ್ಲಾ ಹೇಗೆ ಈ ಜೀವನದ ” ಮೋಹಿನೀ ಬಲೆಯಲ್ಲಿ” ಸಿಕ್ಕು ನಮ್ಮ ಬಾಳನ್ನು ಅಳಿವಿನೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಮಾನ್ಯ ಗುಂಡಪ್ಪನವರು.

ಇಲ್ಲಿ ಮೋಹಿನಿ ಎಂದರೆ, ನಾವು ಯಾವುದನ್ನು ಇಷ್ಟಪಟ್ಟು ಯಾವುದರ ಹಿಂದೆ ಓಡುತ್ತೇವೆಯೋ ಅದೇ ಮೋಹಿನಿ. ಈ ನಮ್ಮ ಇಷ್ಟಗಳು ನಮ್ಮನ್ನು ಕಷ್ಟದ ಸಂಕೋಲೆಯಲ್ಲಿ ಸಿಕ್ಕಿಸುತ್ತದಲ್ಲ, ಆ ಕಷ್ಟಗಳೇ ನಮ್ಮನ್ನು ಪೀಡಿಸುವ ಪಿಶಾಚಿಗಳು. ಜೀವನದಲ್ಲಿ ನಾವು ಪ್ರತಿನಿತ್ಯ ಓಡುತ್ತಿರುತ್ತೇವೆ. ಯಾವುದಾವುದರ ಹಿಂದೆಯೋ ಓಡುತ್ತಿರುತ್ತೇವೆ. ಅವುಗಳು ನಮಗೆ ಸತ್ಯವಾಗಿ ಅವಶ್ಯವೋ ಅಲ್ಲವೋ, ಹಿತವೋ ಅಹಿತವೋ, ಸಾಧ್ಯವೋ ಅಸಾಧ್ಯವೋ ಎಂಬುದರ ಪರಿವೆ ಮತ್ತು ವಿವೇಚನೆಯಿಲ್ಲದೆ ಓಡುತ್ತಿರುತ್ತೇವೆ. ಓಡಿ ಓಡಿ ಎಲ್ಲ ಏನನ್ನೂ ಪಡೆಯದೆ, ಆದರೂ ಏನನ್ನೋ ಸಾಧಿಸಿದೆವೆಂಬ ಭಾವದಲ್ಲಿ ಬೀಗುತ್ತಾ, ಶಕ್ತಿಯಲ್ಲಾ ಕುಂದಿ, ಸುಸ್ತಾಗಿ ಸಾವಿನ ತೆಕ್ಕೆಗೆ ಸೇರುತ್ತೇವೆ. ಇದು ಬಹುಶಃ ಎಲ್ಲರ ಜೀವನದ ಶೈಲಿಯೂ ಹೌದು.

ನಮ್ಮ “ಬೇಕು”ಗಳು ನಮ್ಮನ್ನು ಈ ಜಗತ್ತಿಗೆ ಬಿಡಿಸಲಾರದ ನಂಟಿಂದ ಅಂಟಿಸಿಬಿಡುತ್ತದೆ. ಗಾಯದ ಮೇಲೆ ಅಂಟಿಸಿದ ಪಟ್ಟಿಯಂತೆ. ಗಾಯ ಮಾಗುವವರೆಗೆ ತೆಗೆಯುವಹಾಗಿಲ್ಲ. ತೆಗೆಯಲು ಪ್ರಯತ್ನಪಟ್ಟರೆ ಗಾಯ ಮತ್ತೆ ರಣವಾಗುತ್ತದೆ. ಗಾಯ ಮಾಗಬೇಕು. ಮಾಗಿದರೆ ಮೇಲಂಟಿಸಿದ ಪಟ್ಟಿ ತಾನೇ ತಾನಾಗಿ ಕಳಚಿಕೊಳ್ಳುತ್ತದೆ. ಹಾಗೆಯೇ ನಾವೂ ಸಹ ಮಾಗಿದರೆ, ಅಂದರೆ ಆಂತರಿಕವಾಗಿ ಪಕ್ವವಾದರೆ, ಈ “ಬೇಕು”ಗಳು ಮಾಡುವ ಗಾಯ ಮಾಗುತ್ತದೆ. ನೋವಿಲ್ಲದ ಸ್ಥಿತಿಗೆ ತಲುಪಬಹುದು.ಆದರೆ ” ಹರಿದಾಡುವಂಥಾ ಮನವ ನಿಲಿಸುವುದು ಬಲು ಕಷ್ಟ” ಎಂದು ದಾಸರು ಅಪ್ಪಣೆ ಕೊಡಿಸಿದ್ದಾರೆ. ಇಂತಹಮನಸ್ಸನ್ನು ಪಕ್ವವಾಗಿಸಬೇಕು. ಈ “ಮೋಹಿನಿ”ಯ ಹಿಡಿತದಿಂದ ಹೊರಬರಬೇಕು.

” ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಎರಡು ವಸ್ತುಗಳು ಇರಲು ಸಾಧ್ಯವಿಲ್ಲ” ಇದು ಭೌತಶಾಸ್ತ್ರದ ಸಿದ್ಧಾಂತ. ಅದರ ಪ್ರಕಾರ, “ಮೋಹಿನಿ”ಗೆ ವಿರುದ್ಧವಾದ ನಿರ್ಲಿಪ್ತತೆಯ ದೇವತೆಯನ್ನು ಮನಸ್ಸಿನಲ್ಲಿ ಪ್ರತಿಷ್ಠಾಪಿಸಿದರೆ. ಆ ಪಿಶಾಚಿ ಓಡುವ ಸಂಪೂರ್ಣ ಸಾಧ್ಯತೆ ಇದೆ. ಪ್ರಯತ್ನ ಮಾಡಬೇಕು ಅಷ್ಟೇ. ವಾಚಕರೆ ನಾವು ನಮ್ಮ ನಮ್ಮ ಪೂರ್ವ ಕರ್ಮದ ಅನುಸಾರವಾಗಿ ಏನಾದರೂ ಮಾಡುತ್ತಲೇ ಇರಬೇಕು. ಆದರೆ ನಮ್ಮನ್ನು ಸನ್ಮಾರ್ಗಕ್ಕೆ ಕೊಂಡು ಹೋಗುವ ಕೆಲಸ ಮಾಡಿದರೆ, ಜೀವನ ಆನಂದದಾಯಕವಾಗಿರಬಹುದು.

 ಮುಂದಿನ ಭಾಗಕ್ಕೆ ಹೋಗಲು ಇಲ್ಲಿ ಕ್ಲಿಕ್‍ಮಾಡಿ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ