ನನ್ನ ಪುಟಗಳು

31 ಡಿಸೆಂಬರ್ 2021

ವಡ್ಡಾರಾಧನೆ - ಧರ್ಮಘೋಷ ಭಟಾರರ ಕಥೆ | Vaddaradhane-Dharmaghosha Bhatarara kathe

 ಧರ್ಮಘೋಷ ಭಟಾರರ ಕಥೆಯಂ ಪೇೞ್ವೆಂ :

ಗಾಹೆ || ಚಂಪಾ ಎ ಮಾಸಖವಣಂ ಕರಿತ್ತು ಗಂಗಾತಟಮ್ಹಿ ಎ
ಘೋರಾ ಎ ಧಮ್ಮಘೋಷೋ ಪಡಿವಣ್ಣೋ ಉತ್ತಮಂ ಅಟ್ಠಂ ||

*ಚಂಪಾ ಎ – ಚಂಪೆಯೆಂಬ ಪೊೞಲೊಳ್, ಮಾಸಖವಣಂ ಕರಿತ್ತು – ಮಾಸೋಪವಾಸಂ ಗೆಯ್ದು. ಗಂಗಾ ತಟಮ್ಹಿ – ಗಂಗಾ ಮಹಾನದಿಯ ತಡಿಯೊಳ್, ತಣ್ಹಾ ಎ – ನೀರೞ್ಕೆಯಿಂದಂ, ಘೋರಾಎ – ಆದಮಾನುಂ ಕಡಿದಪ್ಪುದಱಂದಂ, ಧಮ್ಮಘೋಸೋ – ಧರ್ಮಘೋಷನೆಂಬ ಭಟ್ಟಾರಕಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯುಂ*

ಅದೆಂತೆಮದೊಡೆ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಕೌಶಂಬಿಯೆಂಬುದು ನಾಡಲ್ಲಿ ವಾರಣಾಸಿಯೆಂಬುದು ಪೊೞಲದನಾಳ್ರ್ವೆಂ ಕೀರ್ತಧರನೆಂಬೊನರಸನಾತನ ಮಹಾದೇವಿಯರ್ಕಳ್ ಆರತಿ ರತಿಯೆಂಬೊರಾ ಇರ್ವರ್ಗಂ ಮಕ್ಕಳ್ ದರ್ಮಘೋಷನುಂ ಧರ್ಮಕೀರ್ತಿಯುಮೆಂಬೊರಂತವರ್ಗಳಿಷ್ಪ ಮಿಷಯಕಾಮಭೋಗಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಂ ಗ್ರ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರಾ ವಾರಣಾಸಿಗೆ ವಂದು ಬಹಿರುದ್ಯಾನವನದೊಳ್ ಸಟಿಕ ಶಿಲಾತಲದ ಮೇಗೆ ಪಂಥಾತಿಚಾರ ನಿಮಯಮಂಗೆಯ್ದಿರ್ದಗುಣೋತ್ತವ್ಮರೆಂಬ ಭಟಾರರಂ ವನಕ್ರೀಡೆಗೆ ವೋದ ಧರ್ಮಘೋಷನುಂ ಧರ್ಮಕೀರ್ತಿಕುಮಾರನುಂ ಕಂಡು ಬಂದಿಸಿ ಭಟಾರಾ ಎಮಗೆ ಧರ್ಮಮಂ ಪೇೞಮೆಂದೊಡೆ ಭಟಾರರಿಂತೆಂದು ಧರ್ಮಮಂ ಪೇೞ್ದರ್ :

ಧರ್ಮಘೋಷ ಋಷಿಗಳ ಕಥೆಯನ್ನು ಹೇಳುವೆನು – (ಧರ್ಮಘೋಷನೆಂಬ ಋಷಿ ಚಂಪಾಪುರದಲ್ಲಿ ಮಾಸೋಪವಾಸವನ್ನು ಮಾಡಿ, ಗಂಗಾ ಮಹಾನದಿಯ ತೀರದಲ್ಲಿ ಅತ್ಯಂತ ತೀವ್ರವಾಗಿರುವ ಬಾಯಾರಿಕೆಯಿಂದ ಕೂಡಿ ಶ್ರೇಷ್ಠವಾದ ದರ್ಶನ ಜ್ಞಾನಚಾರಿತ್ರದಲ್ಲಿ ಕೌಶಂಬಿಯನ್ನು ಮಾಡಿದನು.) ಅದು ಹೇಗೆಂದರೆ – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕೌಶಂಬಿಯೆಂಬ ನಾಡಿದೆ. ಅಲ್ಲಿ ವಾರಣಾಸಿಯೆಂಬ ಪಟ್ಟಣವಿದೆ. ಅದನ್ನು ಕೀರ್ತಿಧರನೆಂಬ ರಾಜನು ಆಳುತ್ತಿದ್ದನು. ಅವನಿಗೆ ಆರತಿ, ರತಿ ಎಂಬವರು ರಾಣಿಯರು. ಈ ಇಬ್ಬರು ರಾಣಿಯರಲ್ಲಿ ಧರ್ಮಘೋಷ, ಧರ್ಮಕೀರ್ತಿ, ಎಂಬಿಬ್ಬರು ಮಕ್ಕಳು. ಅಂತು ಅವರು ತಮಗೆ ಇಷ್ಟವಾದ ವಿಷಯದಲ್ಲಿ ಬಯಸಿದ ಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗಿರಲು ಗುಣೋತ್ತಮರೆಂಬ ಋಷಿಗಳು ಗ್ರ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳೆಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಬರತಕ್ಕವರು, ವಾರಾಣಸಿಗೆ ಬಂದರು. ಅಲ್ಲಿ, ಪಟ್ಟಣದ ಹೊರಗಿನ ಉದ್ಯಾನದಲ್ಲಿ ಚಂದ್ರಕಾಂತ ಶಿಲಾತಳದ ಮೆಲೆ ಕುಳಿತು ತಮ್ಮ ದಾರಿಯಲ್ಲಿ ಆಗಿರಬಹುದಾದ ಅತಿಚಾರ (ಧರ್ಮವಿರುದ್ಧವಾದ ಕೃತ್ಯ)ಗಳ ಪ್ರಾಯಶ್ಚಿತ್ತಗಳೆನಿಸಿದ ಪಂಥಾತಿಚಾರ ನಿಯಮಗಳನ್ನು ಆಚರಿಸುತ್ತಿದ್ದರು. ಆ ವೇಳೆಯಲ್ಲಿ ಉದ್ಯಾನ ಕೇಳಿಗೆಂದು ಹೋಗಿದ್ದ ಧರ್ಮಘೋಷನೂ ಧರ್ಮಕೀರ್ತಿಯೂ ಋಷಿಗಳನ್ನು ಕಂಡು ವಂದನಗೈದರು. “ಪೂಜ್ಯರೇ, ನಮಗೆ ಧರ್ಮೋಪದೇಶವನ್ನು ಮಾಡಿ” ಎಂದು ಕೇಳಿಕೊಂಡರು. ಆಗ ಭಟಾರರು ಈ ರೀತಿಯಾಗಿ ಧರ್ಮವನ್ನು ವಿವರಿಸಿ ಹೇಳಿದರು –

ವೃತ್ತ || ಕೋ ಧರ್ಮಪ್ರವರೋ ದಯಾತ್ಮಸುಭಗಃ ಕಃ ಸ್ಯಾನ್ನರಃ ಪಂಡಿತಃ
ಕಾ ಯೋಷಿದ್ವಶಗಾ ಕಲಿಷ್ಕಯತಿ (?) ಚೇತ್ ಕ್ರೋಧೋ – ಶುಭಸ್ಯೋದಯಃ
ಕಾ  ಲಕ್ಷ್ಮೀರವಿಚಾರ ಕಾರ್ಯಘಟನಾ ಕಿಂ ಮಿತ್ರಮಾತ್ಯಾ –  ತ್ಮನಃ
ಕಿಂ ಸೌಡ್ಯಿಂ ಭುವಿ ಶಾಸ್ತ್ರವಾಚನಮತಿಃ ಕಾ ವಾ ಗತಿರ್ನಿರ್ವೃತಿಃ ||

ಸಮ್ಯಕ್ತ್ವೋತ್ತಮ ಹಸ್ತಿ ಮಸ್ತಕ ಗತಃ ಸ್ಮಜ್ಞಾನಕೇತು ವ್ರಜೋ
ನಾನಾಶೀಲಗುಣವ್ರತತೋರುಪೃತನಃ ಸ್ವಾಧ್ಯಾಯ ಶಂಖಧ್ವನಿಃ
ಭಾಸ್ವತ್ಸಂವರ ಭೂರಿ ಚಾರುಕವಚೋ ನಾತೀವ ತೀಕ್ಷ್ಣಾಯುಧಃ
ಸೇವ್ಯೋ ಧರ್ಮಮಹಾನೃಪೋ ಬುಧಭಗಟೈಃ ಸ್ವರ್ಮೋಕ್ಷವೃತ್ತಿಪ್ರದಃ ||

ಶ್ಲೋಕ || ಧರ್ಮಾರ್ಥಕಾಮಮೋಕ್ಷಾಣಾಂ ಯಸ್ಯೈಕೋ – ಪಿ ನ ವಿದ್ಯತೇ
ಅಜಾಗಲ ಸ್ತನಸ್ಯೈವ ತಸ್ಯ ಜನ್ಮ ನಿರರ್ಥಕಂ ||

ವೃತ್ತ || ಯೇಷಾಂ ನ ವಿದ್ಯಾ ನ ತಪೋ ನ ದಾನಂ
ನಾಪ್ಯೇವ ಶೀಲಂ ನ ಗುಣೋ ನ ಧರ್ಮಃ
ತೇ ಮರ್ತ್ಯಲೋಕೇ ಭುವಿ ಭಾರಭೂತಾ
ಮನುಷ್ಯರೂಪೇಣ ಮೃಗಾಶ್ಚರಂತಿ ||

         – ಧರ್ಮದಲ್ಲಿ ಅತ್ಯಂತ ಶ್ರೇಷ್ಠನು ಯಾರು ? – ದಯೆಯಿಂದ ಕೂಡಿದ ಆತ್ಮ ಸೌಭಾಗ್ಯವುಳ್ಳವನು. ಮನುಷ್ಯನು ಯಾವನು ? – ಪಾಂಡಿತ್ಯವುಳ್ಳವನು. ಹೆಂಗಸು ಯಾವಳು ? – ವಶವರ್ತಿಯಾಗಿರುವವಳು. ಕೋಪದಿಂದ ಎನಾಗುತ್ತದೆ? – ಅಶುಭವುಂಟಾಗುತ್ತದೆ. ಅಲಕ್ಷ್ಮಿ(ದಾರಿದ್ರ್ಯ)ಯಾವುದು? – ವಿಚಾರವಿಲ್ಲದೆ ಕೆಲಸ ಮಾಡುವುದು. ತನ್ನ್ನ ಮಿತ್ರನು ಯಾವನು? – ತಾನೇ. ಲೋಕದಲ್ಲಿ ಸುಖ ಯಾವುದು? – ಶಾಸ್ತ್ರವನ್ನು ಓದುವ ಬುದ್ಧಿ. ಗತಿ (ಗುರಿ)ಯಾವುದು? – ಮೋಕ್ಷವು. ಸಮ್ಯಕ್ತ್ವವೆಂಬ ಆನೆಯ ತಲೆಯ ಮೆಲೆ ಕುಳಿತಿರುವ, ಸುಜ್ಞಾನವೆಂಬ ಧ್ವಜಸಮೂಹವುಳ್ಳ, ಹಲವು ಬಗೆಯ ಶೀಲ ಗುಣವ್ರತಗಳೆಂಬ ಸೈನ್ಯವುಳ್ಳ, ಶಾಸ್ತ್ರಾಭ್ಯಾಸವೆಂಬ ಶಂಖಧ್ವನಿಯುಳ್ಳ, ಹೊಳೆಯುವ ಸಂವರವೆಂಬ ಅತಿಸುಂದರವಾದ ಕವಚವುಳ್ಳ, ಅತಿ ತೀಕ್ಷ್ಣವಾದ ಆಯುಧಗಳಿಲ್ಲದ, ಸ್ವರ್ಗ ಮೋಕ್ಷಗಳ ಸ್ಥಿತಿಯನ್ನು ಕೊಡುವ, ಧರ್ಮವೆಂಭ ಮಹಾರಾಜನು ವಿದ್ವಾಂಸರೆಂಬ ಸೈನಿಕ್ಪರಿಂದ ಸೇವೆಗೊಳ್ಳವುವನಾಗಿದ್ದಾನೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ವಿಧದ ಪುರುಷಾರ್ಥಗಳಲ್ಲಿ ಒಂದು ಕೂಡಾ ಯಾರಿಗೆ ಇಲ್ಲವೋ ಅವನ ಜನ್ಮ ಮೇಕೆಯ ಕೊರಳ ಮೊಲೆಯಂತೆ ಪ್ರಯೋಜನವಿಲ್ಲದುದು. ಯಾರಿಗೆ ವಿದ್ಯೆಯಿಲ್ಲವೋ ತಪಸ್ಸಿಲ್ಲವೋ ದಾನಗುಣವಿಲ್ಲವೋ ಶೀಲ ಕೂಡ ಇಲ್ಲವೋ ಧರ್ಮವಿಲ್ಲವೋ ಅವರು ಮೈತಿಹೊಂದುವ ಸ್ವಭಾವವುಳ್ಳ ಈ ಲೋಕದಲ್ಲಿ ಭಾರವಾಗಿ ಪರಿಣಮಿಸಿರುವವರು. ಅವರು ಮನುಷ್ಯರ ರೂಪದಲ್ಲಿರುವ ಮೃಗಗಳಾಗಿ ವರ್ತಿಸುತ್ತಾರೆ. ಒಂದನ್ನು ಮತ್ತೊಂದು ತಿನ್ನುತ್ತ ಕ್ರಿಮಿಗಳು ಬದುಕುತ್ತ ಇರುವುದಿಲ್ಲವೇನು? ಪರಲೋಕದ ಪ್ರಾಪ್ತಿಗೆ ವಿರೋಧವಾಗದ ರೀತಿಯಿಂದ ಯಾವನು ಜೀವಿಸುತ್ತಾನೋ ಅವನು ಸಾರ್ಥಕವಾಗಿ ಜೀವಿಸುತ್ತಾನೆ. ಯಾವ ಕಾರ್ಯದಿಂದ ಜನನಿಂದೆಯುಂಟಾಗುವುದೋ

ಶ್ಲೋಕ || ಕ್ರಿಮಯಃ ಕಿಂ ನ ಜೀವಚಿತಿ ಭಕ್ಷಯಿತ್ವಾ ಪರಸ್ಪರಂ
ಪರಲೋಕಾವಿರುದ್ಧೇನ ಯೋ ಜೀವತಿ ಸ ಜೀವತಿ ||
ಅಪವಾದೋ ಭವೇದ್ಯೇನ ಯೇನ ಚಾಪ್ರತ್ಯಯೋ ಭವೇತ್

ನರಕೋ ಗಮ್ಮತೇ ಯೇನ ತತ್ಕರ್ಮ ನ ಸಮಾಚರೇತ್ ||

        ಇಂತು ಸಂಕ್ಷೇಪದಿಂ ಭಟಾರರ್ ಧರ್ಮಮಂ ಪೇೞೆ ಕೇಳ್ದಿರ್ವ್ವರ್ಗ್ಗಂ ವೈರಾಗ್ಯಮಾಗಿ ತಾಯುಂ ತಂದೆಯುಂ ಸ್ವಜನ ಬಂಧುವರ್ಗಮುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂ ಗಳಂ ತೊಱೆದು ಗುಣೋತ್ತಮ ಭಟಾರರ ಪಕ್ಕದೆ ತಪಂಬಟ್ಟು ಪನ್ನೆರಡು ವರ್ಷಂಬರೆಗಂ ಗುರುಗಳೊಡನಿರ್ದು ಪ್ರಥಮನುಯೋಗ ಚರಣಾನುಯೋಗ ಕರಣಾನುಯೋಗ ದ್ರವ್ಯಾನು ಯೋಗಂಗಳಂ ಕಲ್ತು ಶಾಸ್ತ್ರಪಾರರಗರಾಗಿ ಭಟಾರರಂ ಬೆಸಗೊಂಡವರನುಮತದಿಂದಿರ್ವರುಂ ಬೇಱೆ ವೇಱೆ ವಿಹಾರಿಸಲ್ ತಗುಳ್ದು ಗ್ರಾಮ ನಗರಖೇಡ ಖರ್ವಡ ಮಡಂಬ ಪತ್ತನ ದ್ರೋಣಾ ಮುಖಂಗಳಂ ವಿಹಾರಿಸುತ್ತಂ ಚಂಪಾನಗರಕ್ಕೆ ಪೋಗಿ ತಾಮರೆಗೊಳದ ತಡಿಯ ಮಱೆಯೊಳಿರ್ವರುಂ ಮಾಸೋಪವಾಸಮಗೆಯ್ದು ಪಾರಣೆಯ ದಿವಸದಂದು ಚಂಪಾನಗರದ ಶ್ರಾವಕರ್ಕಳೆಲ್ಲಂ ನಮ್ಮ ನೋಂತುದನಱವರದು ಕಾರಣದಿಂ ನಮಗೆ ಪಾರಣೆಯಂ ಮಾೞಗಳಯಥಾಕರ್ಮದ ದೋಷಂ ಸಾರ್ತರ್ಕುಮದಱಂ ನಾಮಿಲ್ಲಿ ಚರಿಗೆವುಗದೆ ಗಂಗೆಯ ತಡಿಯೊಳಿರ್ದ ತುಱುಪಟ್ಟಿಗೆ ಪೋಪಮೆಂದಿರ್ವರುಂ ಪೋಪರ್ ಅನ್ನೆಗಮಾ ತುರುಪಟ್ಟಿಯುಮಲ್ಲಿಂದೆರ್ದು ನಾಡೆ ಗೆಂಟು ಪೋದತ್ತು

            ಮತ್ತೆ ಯಾವ ಕಾರ್ಯದಿಂದ ನರಕಕ್ಕೆ ಹೋಗಬೇಕಾಗುವುದೋ ಆ ಕಾರ್ಯವನ್ನು ಮಾಡಬಾರದು. ಹೀಗೆ ಸಂಕ್ಷೇಪವಾಗಿ ಋಷಿಗಳು ಧರ್ಮವನ್ನು ತಿಳಿಸಿದರು. ಅದನ್ನು ಕೇಳಿದ ಇಬ್ಬರಿಗೂ ವೈರಾಗ್ಯವುಂಟಾಯಿತು. ಅವರು ತಮ್ಮ ತಾಯಿ, ತಂದೆ, ಸ್ವಜನರು, ಬಂಧುಗಳ ಸಮೂಹವನ್ನು ಬಿಟ್ಟು, ಅವರಿಗೆ ಮನೋವ್ಯಥೆಯಿಲ್ಲದಂತೆ ಮಾಡಿ ಬಾಹ್ಯ ಮತ್ತು ಆಭ್ಯಂತರ ಎಂಬ ಎರಡೂ ಬಗೆಯ ಪರಿಗ್ರಹಗಳನ್ನು ತೊರೆದರು. ಗುಣೋತ್ತಮ ಋಷಿಗಳ ಬಳಿಯಲ್ಲಿ ದ್ವಾದಶವಿಧದ ತಪಸ್ಸನ್ನು ಸ್ವೀಕರಿಸಿದರು . ಹನ್ನೆರಡು ವರ್ಷಗಳವರೆಗೂ ಗುರುಗಳ ಒಟ್ಟಿಗಿದ್ದು ಪ್ರಥಮಾನುಯೋಗ, ಚರಣಾನುಯೋಗ, ಕರಣಾನುಯೋಗ, ದ್ರವ್ಯಾನುಯೋಗಗಳನ್ನು ಕಲಿತು ಶಾಸ್ತ್ರಗಳಲ್ಲಿ ಪಾರಂಗತರಾದರು. ಆಮೇಲೆ ಋಷಿಗಳನ್ನು ಕೇಳಿಕೊಂಡು ಅವರ ಅನುಮತಿಯನ್ನು ಪಡೆದು ಇಬ್ಬರೂ ಬೇರೆ ಬೇರೆಯಾಗಿ ಸಂಚಾರಮಾಡಲು ಹೊರಟರು. ಗ್ರಾಮ, ನಗರ, ಬೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಚಂಪಾನಗರಕ್ಕೆ ಹೋದರು. ಅಲ್ಲಿ ತಾವರೆಕೊಳದ ತೀರದಲ್ಲಿ ಮರೆಯಾಗಿ ಇಬ್ಬರೂ ಒಂದು ತಿಂಗಳ ಉಪವಾಸವನ್ನು ಮಾಡಿದರು. “ಪಾರಣೆಯ ದಿವಸ ಚಂಪಾನಗರದ ಶ್ರಾವಕರೆಲ್ಲರೂ ನಾವು ವ್ರತಮಾಡಿರುವುದನ್ನು ತಿಳಿದಾರು. ಅದರಿಂದಾಗಿ ನಮಗೆ ಪಾರಣೆಮಾಡುವಾಗ ಸರಿಯಾದ ರೀತಿಯಲ್ಲಿ ಕರ್ಮವನ್ನು ಮಾಡದೆ ದೋಷ ಬಂದು ಸೇರುವುದು. ಆದುದರಿಂದ ನಾವು ಇಲ್ಲಿ ಭಿಕ್ಷೆಗಾಗಿ ಮನೆಗಳನ್ನು ಪ್ರವೇಶಿಸುವುದು ಬೇಡ. ನಾವು ಗಂಗಾತೀರದಲ್ಲಿದ್ದ ಹಸುಗಳ ಹಟ್ಟಿಗೆ ಹೋಗೋಣ” – ಎಂದುಕೊಂಡು ಅವರಿಬ್ಬರೂ ಗಂಗಾತೀರಕ್ಕೆ ಹೋದರು. ಅಷ್ಟರಲ್ಲಿ ಗಂಗಾತೀರದ ಹಸುಗಳ ಹಟ್ಟಿ ಆ ಸ್ಥಳದಿಂದ ಬೇರೊಂದು ಕಡೆಗೆ ಬಹಳ ದೂರಕ್ಕೆ ಹೋಗಿದ್ದಿತು. 

            ಪೋದೊಡೆ ಧರ್ಮಕೀರ್ತಿ ಭಟಾರರ್ ಪೆಱತೊಂದು ತುಱುಪಟ್ಟಿಗೆ ಪೋದರ್ ಧರ್ಮಘೋಷಭಟಾರರ್ ಪೋಗಲಾಱದೆ ಗಂಗೆಯ ತಡಿಯ ಮರದ ಕೆೞಗೆ ಪಸಿವು ನೀರೞ್ಕೆಯಿಂ ಸೇದೆಗೆಟ್ಟು ಬಸಮೞದಿರ್ದೊರಂ ಗಂಗಾದೇವತೆ ಕಂಡನುಕಂಪೆಯುಂ ಭಕ್ತಿಯುಂ ಕರಣಾಗಿ ಸರ್ವಾಭರಣ ಭೂಷಿತೆಯಾಗಿ ದಿವ್ಯಮಪ್ಪ ಶ್ವೇತವಸ್ತ್ರಮನುಟ್ಟು ಸುವರ್ಣಮಯಮಪ್ಪ ಪಿರಿಯ ಕರಗಮಂ ತೆಕ್ಕನೆ ತೀವಿ ತಣ್ಣೆದವುಂ ಸುಗಂಧಮಪ್ಪ ನೀರ್ಗಳಂ ತಂದು ಧರ್ಮಘೋಷ ಭಟಾರರನಿಂತೆದಳ್ ಭಟಾರಾ ಪ್ರಾಸುಕಮಪ್ಪ ನೀರಂ ಪೊೞ್ತದೊಳ್ ಬಂದುದಂ ಕುಡಿದು ನಿಮ್ಮ ಸೇದೆಯನಾಱಸಿಂ ನಿಮಗರಮನೆಗೆ ಪೋಗಿ ಕೂೞಂ ತಂದಪೆನನ್ನೆವರಂ ನೀರಂ ಕುಡಿದು ತೃಷೆಯಂ ಪಿಂಗಿಸುವ್ಯದೆಂದೊಡೆ ಭಟಾರರಾಮೊಲ್ಲೆವಬ್ಬಾ ಕುಡಿಯಲ್ಕಾಗದೆಂದೊಡೆ ಗಂಗಾದೇವತೆ ಪೂರ್ವವಿದೇಹಕ್ಕಿ ಪೋಗಿ ಸೀಮಂಧರ ತೀರ್ಥಂಕರ ಪರಮದೇವರಂ ಕಂಡು ಬಂದಿಸಿ ಇಂತೆಂದು ಬೆಸಗೊಂಡಳ್ ಭಟಾರಾ ಒರ್ವರ್ ಋಷಿಯರ್ ನೀರೞ್ಕೆಯಿಂದಂ ಕರಂ ಸೇದೆಗೆಟ್ಟು ಬಸಮೞದಿರ್ದೊರಂ ಕಂಡು ಪಿರಿದೊಂದು ಪೊನ್ನ ಕರಗಮಂ ತೆಕ್ಕನೆ ತೀವಿಯದಮಾನುಂ ತಣ್ಣಿದುವುಂ ಕಮ್ಮಿದುವುಮಪ್ಪ ನೀರ್ಗಳಂ ಪೊೞ್ತದೊಳ್ ಕೊಂಡು ಪೋಗಿ ಕುಡುಯಲೆಱೆಯೆ ಕೊಳ್ದರಿಲ್ಲೆಂದೊಡೆ ಭಟಾರರೆಂದರ್ ಪ್ರಾಸುಕಮಾದೊಡಂ ಪೊೞ್ತದೊಳ್ ತಂದೊಂಡಂ ದೇವರ್ಕ್ಕಳ ದೇವಿಯರ್ಕ್ಕಳ ಕೈಯೊಳ್ ಋಷಿಯರ್ಕ್ಕಳ್ಗುಣಲುಂ ಕುಡಿಯಲುಂ ತಗದು 

            ಹಾಗೆ ಹೋದುದರಿಂದ ಧರ್ಮಕೀರ್ತಿ ಮುನಿಗಳು ಬೇರೆ ಒಂದು ಹಸು ಹಟ್ಟಿಗೆ ಹೋದರು. ಧರ್ಮಘೋಷಭಟಾರರು ಬೇರೆ ಕಡೆ ಹೋಗಲಾರದೆ ಗಂಗಾನದೀ ತೀರದ ಮರದ ಬುಡದಲ್ಲಿ ಹಸಿವು ಬಾಯರಿಕೆಗಳಿಂದ ಆದ ಆಯಾಸದಿಂದ ಕೆಟ್ಟು ಶಕ್ತಿಗುಂದಿದ್ದರು. ಅವರನ್ನು ಗಂಗಾದೇವಿ ನೋಡಿ ದಯೆಯ ಕಾರಣವಾಗಿ ಎಲ್ಲ ಆಭರಣಗಳಿಂದ ಅಲಂಕಾರಮಾಡಿಕೊಂಡು ದಿವ್ಯವಾದ ಬಿಳಿಯುಡುಪನ್ನು ಧರಿಸಿಕೊಂಡು ಚಿನ್ನದ ದೊಡ್ಡಕಲಶವನ್ನು – ಅದರಲ್ಲಿ ತಣ್ಣಗಾದುದೂ ಸುವಾಸನಾಯುಕ್ತವೂ ಆದ ನೀರನ್ನು ಪೂರ್ಣವಾಗಿ ತುಂಬಿಸಿಕೊಂಡು, ತೆಗೆದುಕೊಂಡು ಬಂದು ಧರ್ಮಘೋಷ ಭಟಾರರೊಡನೆ ಹೀಗೆಂದಳು – “ಋಷಿಗಳೇ, ಜೀವರಹಿತವಾಗಿರುವ ನೀರನ್ನು, ಚಿನ್ನದ ಪಾತ್ರೆಯಲ್ಲಿ ಬಂದುದನ್ನು ಕುಡಿದು ನಿಮ್ಮ ಆಯಾಸವನ್ನು ಶಮನಮಾಡಿಕೊಳ್ಳಿರಿ. ನಿಮಗಾಗಿ ನಾನು ಅರಮನೆಗೆ ಹೋಗಿ ಅನ್ನವನ್ನು ತರುವೆನು. ಅಲ್ಲಿಯವರೆಗೆ ನೀರನ್ನು ಕುಡಿದು ಬಾಯಾರಿಕೆಯನ್ನು ಪರಿಹಾರಮಾಡಿಕೊಳ್ಳಿರಿ “ ಹೀಗೆ ಗಂಗಾದೇವತೆ ಹೇಳಿದಾಗ ಧರ್ಮಘೋಷ ಮುನಿಗಳು” ನಾವು ಅದನ್ನು ಸ್ವೀಕರಿಸಲೊಲ್ಲೆವಮ್ಮಾ! ಕುಡಿಯಲಿಕ್ಕಾಗದು“ ಎಂದರು. ಆಗ ಗಂಗಾದೇವತೆ ಪೂರ್ವವಿದೇಹ ರಾಜ್ಯಕ್ಕೆ ಹೋಗಿ ಸೀಮಂಧರ ತೀರ್ಥಂಕರರನ್ನು, ಶ್ರೇಷ್ಠ ದೇವರಾದ ಅವರನ್ನು ಕಂಡು ನಮಸ್ಕರಿಸಿ ಹೀಗೆ ಕೇಳಿದಳು – “ಪೂಜ್ಯರೇ, ಒಬ್ಬರು ಋಷಿಗಳು ಬಾಯಾರಿಕೆಯಿಂದ ಬಹಳ ಆಯಾಸಗೊಂಡು ಶಕ್ತಿಗುಂದಿದ್ದರು. ಅವರನ್ನು ನಾನು ಕಂಡು, ತಣ್ಣಗಾದ ಮತ್ತು ಸುವಾಸನೆಯುಳ್ಳ ನೀರನ್ನು ದೊಡ್ಡದಾದ ಒಂದು ಚಿನ್ನದ ಕಲಶದಲ್ಲಿ ಪೂರ್ಣವಾಗಿ ತುಂಬಿಸಿಕೊಂಡು ತೆಗೆದುಕೊಂಡು ಹೋದೆನು. ಕುಡಿಯುವುದಕ್ಕಾಗಿ ನೀರನ್ನು ಹೊಯ್ದಾಗ ಅವರು ನೀರನ್ನು ಸ್ವೀಕರಿಸಲಿಲ್ಲ” ಎಂದಳು. ಆಗ ಸೀಮಂಧರ ಸ್ವಾಮಿಗಳು – “ನೀನು ಕೊಂಡುಹೋದ ನೀರು ಪ್ರಾಸುಕ (ಜೀವರಹಿತ) ವಾಗಿದ್ದರೂ ಚಿನ್ನದ ಪಾತ್ರೆಯಲ್ಲಿ ಕೊಂಡುಹೋಗಿದ್ದರೂ ಋಷಿಗಳು ದೇವರುಗಳ ಮತ್ತು ದೇವಿಯರುಗಳ ಕೈಯಿಂದ ಬಂದುದನ್ನು ಉಣ್ಣಬಾರದು, ಕುಡಿಯಲೂ ಬಾರದು. 

      ನಿಮಗೆ ಸಮ್ಯಕ್ತ್ವಮುಂ ಪೂಜೆಯುಂ ಋಷಿಯರ್ಕಳ್ಗೆ ಪ್ರಾತಿಹಾರ್ಯಮಂ ಗೆಯ್ವುದುಂ ನಿಮ್ಮಭಿಪ್ರಾಯಮಿನಿತೆಯೆಂದು ಪೇೞ್ದೊಡೆ ತೀರ್ಥಂಕರ ಪರಮದೇವರ ಮಾತಂ ಕೇಳ್ದು ಬೇಗಂ ಗಂಗಾದೇವತೆ ಧರ್ಮಘೋಷಭಟಾರರ್ಗೆ ತಣ್ಣಿತಪ್ಪ ಗಾಳಿಯುಂ ಸುಗಂಧಜಲವರ್ಷಮುಮಂ ಮಾಡಿದೊಡಾಪ್ಯಾಯನಮಾಗಿ ಶುಕ್ಲಧ್ಯಾನಮಂ ಧ್ಯಾನಿಸಿ ಘಾತಿಕರ್ಮಂಗಳಂ ಕಿಡಿಸಿ ಕೇವಲಜ್ಙಾನಿಯಾದೊಡೆ ಚತುರ್ವಿಧಮಪ್ಪ ದೇವನಿಕಾಯಂ ಬಂದರ್ಚಿಸಿ ಪೂಜಿಸಿ ಪೋದೊಡವರುಂ ಬೞಕ್ಕಘಾತಿಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದರ್ ಮತ್ತಮವರಿಂ ಕಿಱಯರ್ ಧರ್ಮಕೀರ್ತಿ ಭಟಾರರ್ ಪೆಱತೊಂದು ತುಱುಪಟ್ಟಗೆ ಪೋದೊಡಾ ತುಱುಪಟ್ಟಿಯುಮಲ್ಲಿಂದೆರ್ದು ಪೆಱತೊಂದು ದೆಸೆಗೆ ನಾಡೆ ಗೆಂಟು ಪೋದೊಡೆ ನಿರಾಶೆಯಾಗಿ ಪಸಿವುಂ ನೀರೞ್ಕೆಯಿಂದಂ ಬಾದಿಸೆಪಟ್ಟೊರಾಗಿ ಸೇದೆಗೆಟ್ಟು ಬಸಮೞದು ಶುಭಪರಿಣಾಮಕ್ಕೆ ಸಂದೊರಂ ಮುನ್ನಿನ ದೇವತೆ ಕಂಡಱದು ಪ್ರತಿಬೋಧಿಸಲ್ ತಗುಳ್ದವರುಂ ತಿಳಿಪಲಾಱದೆ ಮತ್ತೆ ಪೂರ್ವವಿದೇಹಕ್ಕೆ ಪೋಗಿ ಸೀಮಂಧರ ತೀರ್ಥಕರ ಪರಮಸ್ವಾಮಿಯಂ ಕಂಡು ಪೊಡೆವಟ್ಟು ಅವರ ಸಮಾವಸ್ಥೆಯೆಲ್ಲಮಂ ಭಟಾರರ್ಗ್ಗೆ ಪೇೞ್ದು ಸಮಾಸಂಧಾನೋಪಾಯಮಂ ಬೆಸಗೊಂಡೊಡೆ 

        ನಿಮ್ಮಂಥವರು ಜೈನಧರ್ಮವನ್ನು ತಿಳಿಯಬಹುದು. ಪೂಜೆಮಾಡಬಹುದು, ಋಷಿಗಳಿಗೆ ದೇವತೆಗಳು ಮಾಡತಕ್ಕ ಪ್ರಜೆ ಮಾಡಬಹುದು. ಇಷ್ಟು ಮಾತ್ರವೇ ನಿಮಗೆ ಅರ್ಹತೆ” ಯೆಂದರು. ಗಂಗೆಯು ಅವರ ಮಾತನ್ನು ಕೇಳಿ ಬೇಗ ಹೋದಳು. ಧರ್ಮಘೋಷಮುನಿಗಳಿಗೆ ತಂಗಾಳಿಯನ್ನೂ ಸುವಾಸನೆಯ ನೀರಿನ ಮಳೆಯನ್ನೂ ಉಂಟುಮಾಡಿದಳು. ಆಗದು ಧರ್ಮಘೋಷರಿಗೆ ಹಿತವಾಯಿತು. ಅವರು ಶುಕ್ಲಧ್ಯಾನವನ್ನು ಮಾಡಿ, ಘಾತಿಕರ್ಮಗಳನ್ನು ನಾಶಪಡಿಸಿ ಕೇವಲ ಜ್ಞಾನವನ್ನು ಪಡೆದರು. ನಾಲ್ಕು ವಿಧವಾದ ದೇವತೆಗಳ ಸಮೂಹವು ಅಲ್ಲಿಗೆ ಬಂದು ಭಟಾರರ್ನನು ಅರ್ಚಿಸಿ ಪೂಜಿಸಿ ಹಿಂದೆರಳಿದರು. ಧರ್ಮಘೋಷ ಋಷಿಗಳು ಆಮೇಲೆ ಅಘಾತಿಕರ್ಮಗಳನ್ನೂ ನಾಶಪಡಿಸಿ ಮೋಕ್ಷವನ್ನೈದಿದರು. ಅನಂತರ, ಅವರ ತಮ್ಮಂದಿರಾದ ಧರ್ಮಕೀರ್ತಿ ಭಟಾರರು ಬೇರೊಂದು ತುರು(ಹಸು) ಹಟ್ಟಿಗೆ ಹೋದಾಗ, ಆ ತರುಹಟ್ಟಿ ಅಲ್ಲಿಂದ ಎದ್ದು ಬೇರೊಂದು ಕಡೆಗೆ ಬಹಳವಾಗಿ ದೂರಕ್ಕೆ ಹೋಗಿದ್ದಿತು. ಇದರಿಂದ ಅವರಿಗೆ ನಿರಾಶೆಯುಂಟಾಯಿತು. ಹಸಿವು ಬಾಯಾರಿಕೆಗಳು ಅವರನ್ನು ಬಾಸಿದವು. ಆಯಾಸದಿಂದ ಕೆಟ್ಟು, ಶಕ್ತಿಗುಂದಿ ಅವರು ಶುಭಫಲವನ್ನು ಪಡೆದುಕೊಂಡಿರಲು, ಹಿಂದಿನ ಗಂಗಾದೇವತೆ ಕಂಡು, ತಿಳಿದು, ಅವರಿಗೆ ಅರಿವನ್ನು ಉಂಟುಮಾಡಲು ತೊಡಗಿದರೂ ತಿಳಿಸಲಾರದವಳಾದಳು. ಆಕೆ ಹಿಂದಿನಂತೆ ಪೂರ್ವವಿದೇಹಕ್ಕೆ ಹೋಗಿ ಪರಮಸ್ವಾಮಿಯಾದ ಸೀಮಂಧರ ತೀರ್ಥಂಕರರನ್ನು ಕಂಡು ಸಾಷ್ಟಾಂಗವಂದನೆ ಮಾಡಿ, ಅವರ ಸಮ್ಮತೆಯ ಸ್ಥಿತಿಯೆಲ್ಲವನ್ನೂ ಹೇಳಿದಳು. ಅವರನ್ನು ಏಕಾಗ್ರತೆಗೆ ಸೇರಿಸುವ ಉಪಾಯವೇನೆಂದು ಕೇಳಿದಳು. 

       ಸರ್ವಜ್ಞರಿಂತೆಂದು ಪೇೞ್ದರಾಸನ್ನಭವ್ಯರ್ ಮೂಱನೆಯ ಭವದೊಳ್ ಮೋಕ್ಷಕ್ಕೆ ವೋಪರೆಂದು ಸೀಮಂಧರ ತೀರ್ಥಂಕರ ಪರಮದೇವರ್ ಪೇೞ್ದರೆಂಬುದಂ ಕೇಳ್ದಾಗಡೆ ಅಶುಭ ಪರಿಣಾಮಮಂ ತೊಱೆದು ನೀಗಿ ಶುಭ ಪರಿಣಾಮದೊಳ್ ಕೂಡಿ ಸಮಾಯನೊಡೆಯರಪ್ಪರ್ ನೀಂ ಬೇಗಂ ಪೋಗಿ ಪ್ರತಿಬೋಸೆಂದು ಪೇೞ್ದೊಡೆ ಗಂಗಾದೇವತೆಯಂತೆಗೆಯ್ವೆನೆಂದು ಪೊಡೆವಟ್ಟು ಪೋಗಿ ಆ ರಿಸಿಯರನೆಯ್ದಿ ಇಂತೆಂದಳ್ ಭಟಾರಾ ನೀಮೀ ಭವದಿಂ ತೊಟ್ಟು ಮೂಱನೆಯ ಭವದೊಳ್ ಕರ್ಮಕ್ಷಯಂ ಗೆಯ್ದು ಕೇವಳ ಜ್ಞಾನಿಯಗಿ ಮೋಕ್ಷಕ್ಕೆ ವೋದಪಿರೆಂದು ಸೀಮಂಧರ ತೀರ್ಥಂಕರ ಪರಮದೇವರ್ ಪೇೞ್ದರೆಂದೊಡಾ ಮಾತಂ ಧರ್ಮಕೀರ್ತಿ ಭಟಾರರ್ ಕೇಳ್ದು ಉನ್ಮಾರ್ಗದಿಂದ ಮನಮನುಡುಗಿ ಸನ್ಮರ್ಗದೊಳ್ ನಿಱಸಿ :

        ಗಾಹೆ || ಹಾ ದುಟ್ಠು ಕಯಂ ಹಾ ದುಟ್ಠು ಕಾರಿಯಂ ಹಾ ದುಟ್ಠು ಅಣುಮೋದಿಯಂ
                     ಜೀವೋ ಅಂತೋ ಅಂತೋ ದಜ್ಝ ಇ ಪಚ್ಛತ್ತಾವೇಣ ವೇವಂತೋ

        ಎಂದು ಪೊಲ್ಲದಂ ಬಗೆದೆನೆಂದು ತನ್ನಂ ತಾಂ ಪೞಯುತ್ತಂ ಸೀಮಂಧರ ಸ್ವಾಮಿಗಳ ನಮಗ್ರಹಣಂಗೊಂಡಾಗಳಾ ಶುಭಪರಿಣಾಮದಿಂ ಪಿಂಗಿ ಶುಭ ಶುದ್ಧ ಪರಿಣಾಮದೊಳ್ ಕೂಡಿ ಮಿಕ್ಕ ರತ್ನತ್ರಯಂಗಳನಾರಾಸಿ ಪದಿನಾಱನೆಯ ಕಲ್ಪದೊಳ್ ಉತ್ಕೃಷ್ಟಮಪ್ಪ ಇರ್ಪ್ಪತ್ತೆರಡು ಸಾಗರೋಪಮಾಯುಷ್ಯಮನ್ರೆಡೆಯೊನಚ್ಚುತೆಂದ್ರನಾಗಿ ಪುಟ್ಟಿದಂ ಮತ್ತಂ ಪೆಱರುಮಾರಾಧ ಕರಪ್ಪವರ್ಗಳ್ ಧರ್ಮಘೋಷಭಟಾರರಂ ಮನದೊಳ್ ಬಗೆದು ಪಸಿವುಂ ನೀರೞ್ಕೆ ಮೊದಲಾಗೊಡೆಯ ಪರೀಷಹಂಗಳಂ ಸೈರಿಸಿ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ

        ಅಗ ತೀರ್ಥಂಕರರು ಹೀಗೆಂದರು – “ಧರ್ಮಕೀರ್ತಿ ಮುನಿಗಳು ಅಸನ್ನ ಭವ್ಯರು (ಮೋಕ್ಷಕ್ಕೆ ಹೋಗಲು ಅರ್ಹರು). ಮೂರನೆಯ ಜನ್ಮದಲ್ಲಿ ಮೋಕ್ಷಕ್ಕೆ ಹೋಗುವರೆಂದು ಸೀಮಂಧರ ತೀರ್ಥಂಕರ ಪರಮದೇವರು ಹೇಳಿದರು – ಎಂಬುದನ್ನು ಕೇಳಿದ ಕೂಡಲೇ ಅಶುಭವನ್ನೆಲ್ಲ ತೊರೆದುಬಿಟ್ಟು ಶುಭಫಲದಲ್ಲಿ ಸೇರಿ ಚಿತ್ತೈಕಾಗ್ರತೆಯನ್ನು ಉಳ್ಳವರಾಗುವರು. ನೀನು ಬೇಗನೆ ಹೋಗಿ ಅವರಿಗೆ ಎಚ್ಚರಿಸು ( ಈ ಅರಿವನ್ನುಂಟುಮಾಡು)“. ಹಾಗೆ ತೀರ್ಥಂಕರು ಹೇಳಲು ಗಂಗಾದೇವಿ “ಹಾಗೆಯೇ ಮಾಡುವೆನು” ಎಂದು, ನಮಸ್ಕರಿಸಿ ಹೋಗಿ ಆ ಋಷಿಗಳ ಬಳಿಗೆ ಹೋಗಿ ಹೀಗೆಂದಳು – “ಪೂಜ್ಯರೇ, ನೀವು ಈ ಜನ್ಮದಿಂದ ತೊಡಗಿ ಮೂರನೆಯ ಜನ್ಮದಲ್ಲಿ ಕರ್ಮವನ್ನು ನಾಶಗೊಳಿಸಿ ಕೇವಲಜ್ಞಾನವನ್ನು ಪಡೆದು ಮೋಕ್ಷಕ್ಕೆ ಹೋಗುವಿರಿ – ಎಂದು ಸೀಮಂಧರ ತೀರ್ಥಂಕರ ಪರಮದೇವರು ಹೇಳಿದ್ದಾರೆ ” – ಹೀಗೆ ಗಂಗಾದೇವತೆ ಹೇಳಲು ಆ ಮಾತನ್ನು ಧರ್ಮಕೀರ್ತಿ ಋಷಿಗಳು ಕೇಳಿ, ದುಷ್ಟಮಾರ್ಗದಿಂದ ಮನಸ್ಸನ್ನು ಹಿಂದೆಗೆದು ಸನ್ಮಾರ್ಗದಲ್ಲಿ ನೆಲೆಗೊಳಿಸಿದರು. (ಅಯ್ಯೋ ದುಷ್ಟಕಾರ್ಯ ಮಾಡಲ್ಪಟ್ಟಿತು, ಅಯ್ಯೋ ದುಷ್ಟಕಾರ್ಯ ಮಾಡಿಸಲ್ಪಟ್ಟಿತು, ಅಯ್ಯೋ ದುಷ್ಟಕಾರ್ಯವು ಅನುಮೋದಿಸಲ್ಪಟ್ಟಿತು. ಇವನು ಒಳಗೊಳಗೆ ನಡುಗುತ್ತ ಪಶ್ಚಾತ್ತಾಪದಿಂದ ಸುಡುತ್ತ ಇರುತ್ತಾನೆ.) ಹೀಗೆನ್ನುತ್ತ, ಕೆಟ್ಟುದನ್ನು ಯೋಚಿಸಿದೆನೆಂದು ತನ್ನನ್ನು ತಾನೇ ನಿಂದಿಸುತ್ತ ಸೀಮಂಧರ ಸ್ವಾಮಿಗಳ ಹೆಸರನ್ನು ಕೇಳಿದಾಗ ಅಮಂಗಳಕರವಾದ ಫಲವು ಪರಿಹಾರವಾಗಿ ಮಂಗಲವೂ ಶುದ್ಧವೂ ಆದ ಫಲದಲ್ಲಿ ಸೇರಿ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳೆಂಬ ರತ್ನತ್ರಯವನ್ನು ಆಚರಿಸಿ ಹದಿನಾರನೆಯ ಸ್ವರ್ಗದಲ್ಲಿ ಅತ್ಯಂತ ಶ್ರೇಷ್ಠವೆನಿಸುವ ಇಪ್ಪತ್ತೆರಡು ಸಾಗರಕ್ಕೆ ಸಮಾನವಾದ ಆಯುಷ್ಯವನ್ನುಳ್ಳ ಅಚ್ಚುತೇಂದ್ರನಾಗಿ ಹುಟ್ಟಿದರು. ಆರಾಧಕರಾಗಿರತಕ್ಕ ಬೇರೆಯವರು ಕೂಡ, ಧರ್ಮಘೋಷಭಟಾರರನ್ನು ಮನಸ್ಸಿನಲ್ಲಿ ಭಾವಿಸಿ, ಹಸಿವು ಬಾಯಾರಿಕೆ ಮುಂತಾಗಿ ಇರುವ ಪರೀಷಹಗಳನ್ನು ಸಹಿಸಿ, ಸಮ್ಯಗ್ ದರ್ಶನ, ಸಮ್ಯಗ್ ಜ್ಞಾನ, ಸಮ್ಯಗ್ ಚಾರಿತ್ರಗಳನ್ನು ಸಾಸಿ ಸ್ವರ್ಗಮೋಕ್ಷ ಸುಖಗಳನ್ನು ಪಡೆಯಲಿ !

*****ಕೃಪೆ: ಕಣಜ****




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ