ನನ್ನ ಪುಟಗಳು

05 ಫೆಬ್ರವರಿ 2021

10ನೇ ತರಗತಿ-ಕನ್ನಡ-ಪದ್ಯ-04-ಕೌರವೇಂದ್ರನ ಕೊಂದೆ ನೀನು-ಸಾರಾಂಶ

ಕೌರವೇಂದ್ರನ ಕೊಂದೆ ನೀನು ಪದ್ಯದ ಸಾರಾಂಶ

ಪೂರ್ವಕಥೆ(ಹಿನ್ನೆಲೆ)
             ''ದಾಯಾದಿ ಮತ್ಸರ ಸರ್ವ ನಾಶಕ್ಕೆ ಹೇತು'' ಎಂಬ ಮಾತಿನಂತೆ ಕೌರವರು ಮತ್ತು ಪಾಂಡವರ ನಡುವೆ ವೈಮನಸ್ಯ ಬೆಳೆದು ಹೆಮ್ಮರವಾಗಿ ಮೋಸದ ಪಗಡೆಯಾಟವಾಡಿ ಕೌರವರು ಪಾಂಡವರನ್ನು ರಾಜ್ಯಭ್ರಷ್ಟರಾಗಿ ಮಾಡಿದರು. ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಅನುಭವಿಸುವ ಸಂದರ್ಭ ಎದುರಾಯಿತು. ವನವಾಸ ಮತ್ತು ಅಜ್ಞಾತವಾಸದ ಸಂದರ್ಭದಲ್ಲಿಯೂ ಕೌರವರಿಂದ ಎದುರಾದ ಎಲ್ಲ ತೊಂದರೆಗಳನ್ನೂ ಎದುರಿಸಿ, ಅದನ್ನು ಯಶಸ್ವಿಯಾಗಿ ಮುಗಿಸಿ ಬಂದ ಪಾಂಡವರು ತಮ್ಮ ಪಾಲಿನ ರಾಜ್ಯವನ್ನು ಕೇಳಲು ಕೌರವರ ಬಳಿ ಬಂದಾಗ ದುರ್ಯೋಧನನನು ‘ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದನು. 
           ಆದ್ದರಿಂದ ರಾಜ್ಯವನ್ನು ಮರಳಿ ಪಡೆಯಲೋಸುಗ ಕೌರವರ ಬಳಿಗೆ ಧರ್ಮರಾಯನು ಸಂಧಾನಕ್ಕಾಗಿ ಶ್ರೀ ಕೃಷ್ಣನನ್ನು ಕಳುಹಿಸುತ್ತಾನೆ. ಶ್ರೀಕೃಷ್ಣನು ವಿದುರನ ಮೂಲಕ ದುರ್ಯೋಧನನ ಬಲವನ್ನು ಕುಗ್ಗಿಸುವ ಪ್ರಯತ್ನ ಮಾಡಿದಾಗ ತುಂಬಿದ ಸಭೆಯಲ್ಲಿ ದುರ್ಯೋಧನನು ವಿದುರನನ್ನು ಹೀಗೆಳೆಯುತ್ತಾನೆ. ಕುಪಿತನಾದ ವಿದುರ ತನ್ನ ಬಿಲ್ಲನ್ನು ಮುರಿದು ಯುದ್ಧದಿಂದ ವಿಮುಖನಾಗುತ್ತಾನೆ. ಆದರೆ ಯುದ್ಧ ನಿಲ್ಲಿಸುವ ಸಂಧಾನದ ಪ್ರಯತ್ನ ವಿಫಲವಾಗುತ್ತದೆ. ಯುದ್ಧವೊಂದೇ ಪರಿಹಾರ ಎಂಬ ತೀರ್ಮಾನಕ್ಕೆ ಬಂದಾಗ ಕೌರವ ಸೇನೆಯಲ್ಲಿ ದುರ್ಯೋಧನನಿಗೆ ನಿಷ್ಠನಾಗಿದ್ದು ಪಾಂಡವರನ್ನು ಸೋಲಿಸಬಲ್ಲ ಬಲಶಾಲಿ ಕರ್ಣನಿಂದ ಪಾಂಡವರನ್ನು ರಕ್ಷಿಸಲೇಬೇಕೆಂದು ಸಂಕಲ್ಪ ಮಾಡಿದ ಶ್ರೀಕೃಷ್ಣನು ಅದಕ್ಕಾಗಿ ಉಪಾಯವೊಂದನ್ನು ಸಿದ್ಧಪಡಿಸಿ ತನ್ನೊಂದಿಗೆ ಕರ್ಣನನ್ನು ಕರೆದೊಯ್ಯತ್ತಾನೆ. ಆಗ ಅವರಿಬ್ಬರ ನಡುವೆ ನಡೆದ ಸಂವಾದವೇ ಪ್ರಸ್ತುತ ಭಾಗ.

ಇನತನೂಜನ ಕೂಡೆ ಮೈದುನ
ತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಎನಗೆ ನಿಮ್ಮಡಿಗಳಲಿ ಸಮಸೇ
ವನೆಯೆ ದೇವ ಮುರಾರಿಯಂಜುವೆ
ವೆನಲು ತೊಡೆ ಸೋಂಕಿನಲಿ ಸಾರಿದು ಶೌರಿಯಿಂತೆಂದ ||೧||


        ರಾಕ್ಷಸ ಸಂಹಾರಕನಾದ (ದನುಜ ರಿಪು) ಕೃಷ್ಣನು ಸೂರ್ಯನ ಮಗ(ಇನತನೂಜ) ನಾದ ಕರ್ಣನೊಡನೆ ಮೈದುನತನದ ಸರಸದಿಂದ (ಪ್ರೀತಿಯಿಂದ) ಬರಸೆಳೆದು ರಥದ ಪೀಠದಲ್ಲಿ ಕುಳ್ಳಿರಿಸಿದನು. ಆಗ ಅದನ್ನು ನಿರೀಕ್ಷಿಸದ ಕರ್ಣನು ''ನಿಮ್ಮೊಡನೆ ನಾನು ಸರಿಸಮಾನನಾಗಿ ಕುಳಿತುಕೊಳ್ಳಬಹುದೇ? ದೇವ ಮುರಾರಿ, ನನಗೇಕೋ ಭಯವಾಗುತ್ತಿದೆ'' ಎಂದು ಹೇಳಲು, ಶ್ರೀಕೃಷ್ಣನು(ಶೌರಿ) ಅವನ ಪಕ್ಕಕ್ಕೆ ತೊಡೆ ಸೋಕುವಂತೆ ಕುಳಿತು ಹೀಗೆಂದನು.

ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆ ಸಂ
ವಾದಿಸುವಡನ್ವಯಕೆ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದರಿವಿಲ್ಲೆನುತ ದಾನವ
ಸೂದನನು ರವಿಸುತನ ಕಿವಿಯಲಿ ಬಿತ್ತಿದನು ಭಯವ ||೨||


          ಕರ್ಣ, ಕೌರವರು ಯಾದವರಿಗೆ ಭೇದವಿಲ್ಲ. ವಿಚಾರ ಮಾಡಿ ನೋಡಿದರೆ ಇಬ್ಬರೂ ಒಂದೇ ವಂಶದವರು. (ಯಯಾತಿಯ ಮಕ್ಕಳು ಪುರು, ಯದು, ಪುರುವಿನ ವಂಶದವರು ಕೌರವರು. ಯದುವಿನ ವಂಶದವರು ಯಾದವರು) ನಿನ್ನಾಣೆಯಾಗಿಯೂ ನೀನೇ ರಾಜ (ಮೇದಿನಿಪತಿ) ಆದರೆ ನಿನಗೆ ಅದರ ಅರಿವಿಲ್ಲ ಎಂದು ಹೇಳುವ ಮೂಲಕ ದಾನವರ ವೈರಿಯಾದ ಶ್ರೀಕೃಷ್ಣನು ರವಿಸುತ (ಕರ್ಣ)ನ ಕಿವಿಯಲ್ಲಿ ಭಯವನ್ನು ಬಿತ್ತಿದನು.

ಲಲನೆ ಪಡೆದೀಯೈದು ಮಂತ್ರಂ
ಗಳಲಿ ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಠಿರದೇವ ಮೂರನೆಯಾತ ಕಲಿಭೀಮ
ಫಲುಗುಣನು ನಾಲ್ಕನೆಯಲೈದನೆ
ಯಲಿ ನಕುಲ ಸಹದೇವರಾದರು
ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು ||೩||


       ಪಾಂಡವರ ತಾಯಿಯಾದ ಕುಂತಿಯು ದೂರ್ವಾಸ ಮುನಿಗಳಿಂದ ಪಡೆದ ಐದು ಮಂತ್ರಗಳಲ್ಲಿ ನೀನು ಮೊದಲನೆಯವನು, ನಿನ್ನ ನಂತರದಲ್ಲಿ ಜನಿಸಿದವನು ಯುಧಿಷ್ಠಿರ(ಧರ್ಮತರಾಯ), ಮೂರನೆಯವನು ಶೂರನಾದ ಭೀಮನು, ಅರ್ಜುನನು(ಫಲುಗುಣ) ನಾಲ್ಕನೆಯವನು ಆನಂತರದಲ್ಲಿ ಮಾದ್ರಿಯಲ್ಲಿ (ಪಾಂಡುವಿನ ಎರಡನೇ ಪತ್ನಿಗೆ ಮೊದಲ ಪತ್ನಿಯಾದ ಕುಂತಿಯು ದಯಪಾಲಿಸಿದ ಒಂದು ಮಂತ್ರದ ಕೃಪೆಯಿಂದ) ಒಂದು ಮಂತ್ರದಿಂದ ನಕುಲ ಸಹದೇವರು ಜನಿಸಿದರು ಎಂದು ಶ್ರೀ ಕೃಷ್ಣನು ಕರ್ಣನಿಗೆ ಅವನ ಜನ್ಮ ವೃತ್ತಾಂತವನ್ನು ಹೇಳಿದನು .

ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಪಾಂಡವ
ಜನಪ ಕೌರವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ ||೪||


         ನಿನಗೆ ಹಸ್ತಿನಾಪುರದ(ಹಸ್ತನಾವತಿ) ರಾಜನ ಹಿರಿಮೆಯನ್ನುಕೊಡಿಸುವೆನು. ಪಾಂಡವ ಕೌರವ ರಾಜರೆಲ್ಲರೂ ನಿನ್ನನ್ನು ಓಲೈಸುವರು. ಈ ಎರಡೂ ಸಂತತಿಯವರೂ ನಿನಗೆ ಸೇವಕರೆನಿಸಿಕೊಳ್ಳುವ ಹಿರಿಮೆಯನ್ನು ತಿರಸ್ಕರಿಸಿ ನೀನು ದುರ್ಯೋಧನನ ಬಾಯ್ದಂಬುಲಕೆ(ಬಾಯಿಯಲ್ಲಿ ಅಗಿದು ಉಗುಳುವ ತಾಂಬೂಲ) ಕೈಯೊಡ್ಡುವುದು ಸರಿಯೇ ? ಹೇಳು ಎಂದು ಶ್ರೀಕೃಷ್ಣನು ಕರ್ಣನನ್ನು ಪ್ರಶ್ನಿಸುತ್ತಾನೆ.

ಎಡದ ಮೈಯಲಿ ಕೌರವೇಂದ್ರರ
ಗಡಣ ಬಲದಲಿ ಪಾಂಡು ತನಯರ
ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸವ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ ||೫||
         ನಿನ್ನ ಎಡ ಭಾಗದಲ್ಲಿ ಕೌರವನ ಸಮೂಹದವರು, ಬಲ ಭಾಗದಲ್ಲಿ ಪಾಂಡವರ ಸಮೂಹ (ಪಾಂಡು ರಾಜನ ಮಕ್ಕಳು), ಇದಿರಿನಲ್ಲಿ ಮಾದ್ರಿ, ಮಾಗಧ, ಯಾದವಾದಿಗಳು ಇವರೆಲ್ಲರ ನಡುವೆ ನೀನು ಓಲಗದಲ್ಲಿ ಶೋಭಿಸುವ ನೀನು ಇಂತಹ ಮಹಾಸೌಭಾಗ್ಯವನ್ನು ಅತ್ತ ಎಸೆದು ಕುರುಪತಿ (ಕೌರವ/ದುರ್ಯೋಧನ) ನಿನಗೇನಾದರೂ ಹೇಳಿದರೆ 'ಜೀಯಾ, ಮಹಾಪ್ರಸಾದ' ಎಂದು ಒಪ್ಪಿಕೊಳ್ಳುವುದು ನಿನಗೆ ಕಷ್ಟವಾಗುವುದು ಎಂದು ಶ್ರೀಕೃಷ್ಣನು ಕರ್ಣನಿಗೆ ಹೇಳಿದನು.

ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶದ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ||೬|| 
           ಕರ್ಣನ ಕೊರಳ ನರಗಳು ಹಿಗ್ಗಿದವು (ಗದ್ಗದ) ಕಣ್ಣಿರು ಧಾರೆಯಾಗಿ ಸುರಿಯಿತು. ಅವನು ಬಹಳವಾಗಿ ನೊಂದು ''ಅಯ್ಯೋ! ಕುರುಪತಿಗೆ ಕೇಡಾಯಿತು'' ಎಂದು ತನ್ನ ಮನದೊಳಗೆ ಅಂದುಕೊಂಡು ''ಕೃಷ್ಣನ ದ್ವೇಷದ ಬೆಂಕಿ ಹೊಗೆಯಾಡಿದ ಮೇಲೆ ಅದು ಪೂರ್ತಿಯಾಗಿ ಸುಡದೆ ಹಾಗೇ ಬಿಡುವುದೇ? ಬರಿದೆ ನನ್ನ ಜನ್ಮವೃತ್ತಾಂತವನ್ನು ಹೇಳಿ ಕೊಂದನು. ಹೆಚ್ಚು ಮಾತೇನು?'' ಎಂದು ಚಿಂತಿಸಿದನು .

ಏನು ಹೇಳೈ ಕರ್ಣ ಚಿತ್ತ
ಗ್ಲಾನಿ ಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿಕೊಂಬುದು ಸೇರದೆ
ಹಾನಿಯಿಲ್ಲೆನ್ನಾಣೆ ನುಡಿ ನುಡಿ
ಮೌನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯೆ ಬಯಸುವನಲ್ಲ ಕೇಳೆಂದ ||೭||


        (ಕರ್ಣನು ಮನಸ್ಸಿನಲ್ಲಿ ಚಿಂತಿಸುತ್ತಿರುವುದನ್ನು ನೋಡಿ) ಏನು ಹೇಳು ಕರ್ಣ? ನಿನ್ನ ಮನಸ್ಸಿನ ಜಡತ್ವಕ್ಕೆ, ವ್ಯಾಕುಲತೆಗೆ ಕಾರಣವೇನು? ಕುಂತಿಪುತ್ರರಿಂದ ಸೇವೆ ಮಾಡಿಸಿಕೊಳ್ಳುವುದು ನಿನಗೆ ಇಷ್ಟವಾಗುವುದಿಲ್ಲವೇ? ನನ್ನಾಣೆ, ಏನೂ ಹಾನಿ ಇಲ್ಲ, ಮಾತನಾಡು. ಮೌನವೇಕೆ? ಈ ದಡ್ಡತನ ಬೇಡ, ನಿನ್ನ ಹಾನಿಯನ್ನು(ಅಪದೆಸೆ, ಕೇಡು) ನಾನು ಬಯಸುವವನಲ್ಲ; ಕೇಳು.” ಎಂದು ಕೃಷ್ಣನು ಕರ್ಣನಿಗೆ ಸಾಂತ್ವನ ಹೇಳುತ್ತಾನೆ.

ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ.
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ||೮||


           “ಅಯ್ಯೋ ಮರುಳು ಕೃಷ್ಣನೇ, ಈ ಭೂಮಿ ರಾಜ್ಯದ ಸಂಪತ್ತಿಗೆ ನಾನು ಸೋಲುವವನಲ್ಲ. ಕೌಂತೇಯರು(ಪಾಂಡವರು), ಕೌರವರು ನನಗೆ ಸೇವೆ ಮಾಡಬೇಕೆನ್ನುವುದರಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ(ಇಚ್ಛೆಯಿಲ್ಲ). ನನ್ನನ್ನು ಸಲಹಿದ ನನ್ನ ಒಡೆಯನಿಗೆ (ದಾತಾರ-ದಾತೃ) ‘ಶತ್ರುಗಳ ತಲೆಯನ್ನು ಕಡಿದು ಒಪ್ಪಿಸುವೆನು’ ಎನ್ನು ಆತುರದಲ್ಲಿದ್ದೆನು. ಆದರೆ ನೀನು ಕೌರವೇಂದ್ರನನ್ನು ಕೊಂದುಹಾಕಿದೆ” ಎಂದು ಕರ್ಣನು ನೋವಿನಿಂದ ಶ್ರೀಕೃಷ್ಣನಿಗೆ ಹೇಳಿದನು.

ವೀರ ಕೌರವರಾಯನೇ ದಾ
ತಾರನಾತನ ಹಗೆಯ ಹಗೆ ಕೈ
ವಾರವೇ ಕೈವಾರವಾದಂತಹೆನು ಕುರುನೃಪತಿ
ಶೌರಿ ಕೇಳೈ ನಾಳೆ ಸಮರದ
ಸಾರದಲಿ ತೋರುವೆನು ನಿಜಭುಜ
ಶೌರಿಯದ ಸಂಪನ್ನತನವನು ಪಾಂಡುತನಯರಲಿ ||೯||

       ವೀರ ಕೌರವರಾಯನೇ(ದುರ್ಯೋಧನನೇ) ನನಗೆ ಒಡೆಯನು, ಆತನ ಶತ್ರುಗಳೇ ನನ್ನ ಶತ್ರುಗಳು, ಅವನ ಅಭಿಮಾನವೇ (ಹೊಗಳಿಕೆಯೇ) ನನಗೆ ಅಭಿಮಾನ. ಅವನಿಗೆ ಆಗುವುದೇ ನನಗೆ ಆಗಲಿ, ಕೃಷ್ಣನೇ ಕೇಳು, ನಾಳೆ ಯುದ್ಧಭೂಮಿಯಲ್ಲಿ ನನ್ನ ಭುಜಬಲಶೌರ್ಯದ ಪರಾಕ್ರಮವನ್ನು ಪಾಂಡುತನಯ(ಪಾಂಡವರು)ರ ಮೇಲೆ ತೋರುವೆನು ಎಂದು ಕರ್ಣನು ಹೇಳಿದನು.

ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ ||೧೦||


          ನಾಳೆ ಬರಲಿರುವ ಭಾರತ(ಮಹಾಭಾರತ)ಯುದ್ಧವು ಮಾರಿಗೆ ಔತಣವಾಗುವುದು. ಆ ಯುದ್ಧದಲ್ಲಿ ಚತುರಂಗ ಬಲವನ್ನು ಸೋಲಿಸಿ, ಅಸಂಖ್ಯಾತ ಯೋಧರನ್ನು ಸಾಯಿಸಿ, ನನ್ನ ಒಡೆಯ ದುರ್ಯೋಧನನಿಗಾಗಿ (ಅವಸರಕ್ಕಾಗಿ=ಸಮಯಕ್ಕಾಗಿ) ನನ್ನ ದೇಹವನ್ನು ಅರ್ಪಿಸುವೆನು(ಪ್ರಾಣಬಿಡುವೆನು) ನಿನ್ನ ಧೀರರಾದ ಪಾಂಡವರನ್ನು ಸೂರ್ಯನಾಣೆಯಾಗಿಯೂ ಯಾವುದೇ ಕಾರಣಕ್ಕೂ ನೋಯಿಸುವುದಿಲ್ಲ ಎಂದು ಕರ್ಣನು ಶ್ರೀಕೃಷ್ಣನಿಗೆ ಹೇಳಿದನು.

************









52 ಕಾಮೆಂಟ್‌ಗಳು:

  1. ಕೃಷ್ಣರಿಗೆ ಶೌರಿ ಅಂತ ಯಾಕೆ ಕರೆಯುತ್ತಾರೆ please ಹೇಳಿ

    ಪ್ರತ್ಯುತ್ತರಅಳಿಸಿ
  2. Nange English nali bhari thank you anta helake barutade sir enome thank you sir🙏

    ಪ್ರತ್ಯುತ್ತರಅಳಿಸಿ
  3. ಥ್ಯಾಂಕ್ಸ್ ಸರ್ 10ನೇ ತರಗತಿ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಿದೆ

    ಪ್ರತ್ಯುತ್ತರಅಳಿಸಿ