ನನ್ನ ಪುಟಗಳು

10 ನವೆಂಬರ್ 2020

10ನೇ ತರಗತಿ ಕನ್ನಡ-ಗದ್ಯ-6-ಯುದ್ಧ-ಸಾರಾಂಶ

ಯುದ್ಧ ಪಾಠದ ಸಾರಾಂಶ

ಪೀಠೀಕೆ: ’ಯುದ್ಧ’ ಇತಿಹಾಸದ ಉದ್ದಕ್ಕೂ ಇರುವಂತಹದ್ದೇ ಆಗಿದೆ. ಸಾಮ್ರಾಜ್ಯ ವಿಸ್ತರಣೆ, ಲೋಭ, ಶಕ್ತಿಯ ಪ್ರದರ್ಶನ, ಕೌಟುಂಬಿಕ ಕಲಹಗಳು, ದ್ವೇಷ ಸಾಧನೆ ಮುಂತಾದವು ಯುದ್ಧಕ್ಕೆ ಕಾರಣವಾಗುತ್ತವೆ. ಈ ಯುದ್ಧದ ಭೀಕರತೆಯು ಧರ್ಮ, ದೇಶಗಳ ಭೇದವಿಲ್ಲದೆ ಭಾಗಿಯಾದ ಸೈನಿಕರಿಗೂ ಅವರ ಕುಟುಂಬ ವರ್ಗದವರಿಗೂ ಹಾಗೂ ದೇಶಕ್ಕೂ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಇದರ ನಡುವೆ ಯುದ್ಧದಲ್ಲಿ ನೊಂದವರು ಧರ್ಮಭಿನ್ನತೆ, ದೇಶಭಿನ್ನತೆ, ವೈರಿ-ಮಿತ್ರ ಎಂಬುದನ್ನೆಲ್ಲ ಪರಿಗಣಿಸದೆ ಪರಸ್ಪರರು ಸಂಕಷ್ಟ ಪರಿಹಾರಕ್ಕೆ, ರಕ್ಷಣೆಗೆ ತೊಡಗುವ ಮಾನವೀಯ ಮೌಲ್ಯಯುತ ನಡೆವಳಿಕೆಗಳು ಪ್ರಸ್ತುತ ಕಥೆಯಲ್ಲಿ ಮನೋಜ್ಞವಾಗಿ ಮೂಡಿಬಂದಿವೆ. 

ಸಾರಾಂಶ: ಎರಡು ದೇಶಗಳ ನಡುವೆ ಯುದ್ಧನಡೆಯುತ್ತಿತ್ತು. ದೇಶದ ಗಡಿ ಭಾಗದಲ್ಲಿ ಸಮುದ್ರದ ಮೇಲಿನ ಆಕಾಶದಲ್ಲಿ ಹಾರುತ್ತಿದ್ದ ಯುದ್ಧ ವಿಮಾನವು ಗ್ರೌಂಡ್ ನೊಂದಿಗೆ ಸಂಪರ್ಕ ಕಡಿದುಕೊಂಡಿತು. ಅವರಿಗೆ ತಾವು ಎಲ್ಲಿ ಹೋಗುತ್ತಿದ್ದೇವೆ ತಿಳಿಯಲಿಲ್ಲ. ಅದು ವೈರಿ ದೇಶದಲ್ಲಿ ಹಾರಾಡುತ್ತಿತ್ತು ಆಗ ರಾಹಿಲ ಎಂಬ ವೈದ್ಯ ಸೈನಿಕನು ತನ್ನ ಬಳಿ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಹಿಡಿದುಕೊಂಡಿದ್ದನು. ಆ ಸಮಯದಲ್ಲಿ ವೈರಿಗಳ ವೈಮಾನಿಕ ದಾಳಿಯಿಂದಾಗಿ ವಿಮಾನವು ನುಚ್ಚುನೂರಾಗಿ ನದಿ ಮೇಲೆ ಬಿದ್ದಿತು. ಅದರಲ್ಲಿದ್ದ ವೈದ್ಯ ಸೈನಿಕನೊಬ್ಬನಿಗೆ ಕಾಲಿಗೆ ತೀವ್ರ ಪೆಟ್ಟಾಗಿದ್ದರೂ ಕಷ್ಟಪಟ್ಟು ನೀರಿನಲ್ಲಿ ಈಜಿ ದಡ ಸೇರಿದನು. ಅವನು ಹೇಗೋ ಕಷ್ಟಪಟ್ಟು ಹೊರಬಂದಾಗ ಮಿಂಚು ಮಿಂಚಿದಾಗ ಸಮೀಪದಲ್ಲಿ ಒಂದು ಒಂಟಿ ಮನೆ ಕಾಣಿಸಿತು. ಧಾರಾಕಾರವಾಗಿ ಸುರಿಯುತ್ತಿದ್ದ ಮಳ:ಎಯಿಂದ ರಕ್ಷಿಸಿಕೊಳ್ಳಲು ಹಾಗೂ ತನ್ನ ಕಾಲಿಗೆ ಆರೈಕೆ ಮಾಡಿಕೊಳ್ಳಬೇಕೆಂದು ತೆವಳಿಕೊಂಡು ಮನೆಯ ಬಳಿ ಹೋಗುತ್ತಿದ್ದಾಗ ಅಲ್ಲಿ ಒಂದು ಹೆಂಗಸಿನ ಆರ್ತನಾದ, ಚೀರಾಟ ಕೇಳಿಸಿತು. ಯುದ್ಧದ ಸಂದರ್ಭದಲ್ಲಿ ರಾತ್ರಿವೇಳೆ ಶತ್ರುಗಳ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್‌ಔಟ್’ ನಿಯಮವನ್ನು ಪಾಲಿಸಲಾಗುತ್ತಿದ್ದ ಆ ಸಂದರ್ಭದಲ್ಲಿ ಆ ಮನೆಯಲ್ಲಿ ಏನಾಗುತ್ತಿರಬಹುದು ಎಂದು ಊಹಿಸುತ್ತಾ ತೆವಳಿಕೊಂಡು ಮನೆಯ ಹತ್ತಿರ ಹೋದನು. 

    “ಅಮ್ಮಾ ಬಾಗಿಲು ತೆಗೆಯಿರಿ” ಎಂದು ಅಂಗಲಾಚುತ್ತಾ ಬಾಗಿಲು ತಟ್ಟಿದಾಗ ವಯಸ್ಸಾದ ಮುದುಕಿಯೊಬ್ಬಳು ಬಾಗಿಲು ತೆಗೆದು ತನ್ನ ಕೈಲಿದ್ದ ದೀಪವನ್ನು ಆತನ ಮುಖದ ಬಳಿಗೆ ತಂದು ಅನುಮಾನ ದೃಷ್ಟಿಯಿಂದ “ಯಾರಪ್ಪಾ ನೀನು? ನಮ್ಮ ಕಡೆಯವನು ತಾನೇ? ಎಂದು ಕೇಳಿದಳು. ಆಗ ರಾಹಿಲನು “ ನಾನು ಯುದ್ಧ ಮಾಡುವ ಮೂರ್ಖರ ಕಡೆವನಲ್ಲ, ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು” ಎಂದು ಹೇಳುವಷ್ಟರಲ್ಲೆ ಒಳಗಿನಿಂದ ಮಹಿಳೆಯ ಚೀರಾಟವನ್ನು ಕೇಳಿ ಅವಳು ಯಾರೆಂದು ಕೇಳಿದಾಗ ಮುದುಕಿಯು ‘ಆಕೆ ತನ್ನ ಸೊಸೆ, ಹೆರಿಗೆ ಬೇನೆಯಿಂದ ನರಳುತ್ತಿದ್ದಾಳೆ, ಈ ಯುದ್ಧದ ಸಮಯದಲ್ಲಿ ಡಾಕ್ಟರನ್ನೋ ಸೂಲಗಿತ್ತಿಯನ್ನೋ ಕರೆದು ತರಲು ಸಾಧ್ಯವಿಲ್ಲವೆಂದು ನಿರಾಸೆ ವ್ಯಕ್ತಪಡಿಸಿದಾಗ ಅವನು ತಾನು ಸಹಾಯ ಮಾಡುವುದಾಗಿ ಹೇಳುತ್ತಾನೆ. 

ಅಂತೆಯೇ ರಾಹಿಲನು ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಪರೀಕ್ಷಿಸಿದಾಗ ಅವಳಿಗೆ ಸುಲಭವಾಗಿ ಹೆರಿಗೆಯಾಗುವುದು ಸಾಧ್ಯವಿಲ್ಲವೆಂದು ದೃಢಪಟ್ಟಿತು. ಮಗು ಮತ್ತು ತಾಯಿಯನ್ನು ಬದುಕಿಸಬೇಕಾದರೆ ಆಸ್ಪತ್ರೆಗೆ ಹೋಗಬೇಕು ಆದರೆ ಅದು ಈಗ ಸಾಧ್ಯವಿಲ್ಲವಾದ್ದರಿಂದ ಬಹಳ ಪ್ರಯತ್ನಪಟ್ಟು ಹೇಗೋ ಮಗುವನ್ನು ಒರ ತೆಗೆದನು. ಆದರೆ ಮಗು ಬದುಕಿರಲಿಲ್ಲ. 

    ಆಗ ಮುದುಕಿ ಮತ್ತು ಆಕೆಯ ಸೊಸೆ ಬಹಳ ಗೋಳಾಡಿದರು. ಮುದುಕಿಯಿಂದ ಎರಡು ಪುಟ್ಟ ಹಲಗೆ ಹಾಗೂ ಬಟ್ಟೆಯನ್ನು ಪಡೆದುಕೊಂಡು ಮುರಿದಿದ್ದ ತನ್ನ ಕಾಲಿಗೆ ಕಟ್ಟಿಕೊಂಡನು. ಮೂಳೆ ಮುರಿದಿಲ್ಲವೆನಿಸಿತು. ತಾನು ಬರುವುದು ಸ್ವಲ್ಪ ತಡವಾಗಿದ್ದರೂ ಅವಳ ಸೊಸೆ ಬದುಕುತ್ತಿರಲಿಲ್ಲ ಎಂದು ಹೇಳುತ್ತಾ ತನಗೆ ಸುಸ್ತಾಗಿದ್ದು ಮಲಗಲು ಜಾಗ ನೀಡಬೇಕೆಂದು ಬೇಡಿದನು. 

ಅದೇ ಸಮಯಕ್ಕೆ ಆ ದೇಶದ ಸೈನಿಕರು ಶತ್ರು ಸೈನಿಕರನ್ನು ಹುಡುಕಿಕೊಂಡು ಅಲ್ಲಿಗೆ ಬಂದು ಬಾಗಿಲು ಬಡಿದಾಗ ರಾಹಿಲನು ದೈನ್ಯತೆಯಿಂದ ಮುದುಕಿಯನ್ನು ನೋಡಿದನು. ಅವನು ತಮ್ಮ ಕಡೆಯವನಲ್ಲ ಎಂದು ತಿಳಿಯಿತು. ಕೋಪ ಬಂದಿತು. ಆದರೆ ಅವಳಿಗೆ ಆತನ ಕಣ್ಣುಗಳು ಯುದ್ಧಕ್ಕೆ ಹೋದ ಅವಳ ಮಗನ ಕಣ್ಣುಗಳಂತೆಯೇ ಕಂಡಿತು. ಅವನು ಬಾಗಿಲು ತೆಗೆಯಬೇಡಿ ಎಂದು ಕೈಸನ್ನೆ ಮಾಡಿದನು. 

    ಹೊರಗೆ ಸೈನಿಕರು ಬಾಗಿಲು ತೆಗೆಯಿರಿ ಎಂದು ಗರ್ಜಿಸುತ್ತಿದ್ದರು. ಕೂಡಲೇ ಅವನ್ನು ಸೊಸೆಯ ಮಂಚದ ಕೆಳಗೆ ಅವತುಕೊಳ್ಳಲು ತಿಳಿಸಿ, ನಿರ್ಜೀವವಾಗಿದ್ದ ಮಗುವನ್ನು ಸೊಸೆಯ ಕೋಣೆಯ ಬಾಗಿಲಿನಲ್ಲಿ ಮಲಗಿಸಿ ಬಾಗಿಲು ತೆರೆದಳು. ಸೈನಿಕರ ಉಡುಪಿನಲ್ಲಿದ್ದ ನಾಲ್ಕೈದು ಜನರು, "ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ?" ಎಂದು ಕೇಳುತ್ತಾ ಒಳನುಗ್ಗಿದರು. 

    ಮುದುಕಿಯು ಯಾರೂ ಇಲ್ಲವೆಂದು ಹೇಳಿದರೂ ಕೇಳದೆ ಮನೆಯನ್ನು ಹುಡುಕಲು ಮುಂದಾದಾಗ “"ಹೂಂ...ನೋಡಿ; ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ! ಈ ಯುದ್ಧ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ? ಯಾರಿಗಾಗಿ, ಯಾತಕ್ಕಾಗಿ ಈ ಯುದ್ಧ? ಅದನ್ನಾದರೂ ಹೇಳಿರಲ್ಲ?" ಎಂದು ಜೋರಾಗಿ ಅಳತೊಡಗಿದಳು. 

    ಮಗುವಿನ ಮೃತದೇಹ ನೋಡಿ ಅವರೆಲ್ಲಾ ಹೊರಟುಹೋದರು. ನಂತರ ಮುದುಕಿಯು ರಾಹಿಲನಿಗೆ ಆರಾತ್ರಿ ಉಳಿದುಕೊಳ್ಳಲು ಅವಕಾಶಮಾಡಿಕೊಟ್ಟಳು. ತಾನು ಮದುವೆಯಾಗಿ ಬಂದದ್ದು, ಆಗಲೂ ನಡೆದ ಯುದ್ಧ ಮತ್ತು ಅದರ ಅನಾಹುತಗಳನ್ನು ರಹೇಳಿಕೊಂಡು ವ್ಯಥೆಪಟ್ಟಳು. 

    ತನ್ನ ಮಗ ಇನ್ನೂ ಚಿಕ್ಕವನಿದ್ದಾಗ ಆತನ ತಂದೆ ಯುದ್ಧಕ್ಕೆ ಹೋದವನು ಹಿಂದಿರುಗಿ ಬರಲಿಲ್ಲ. ಅದೇ ರೀತಿ ಮಗನೂ ಈಗ ಯದ್ಧಕ್ಕೆ ಹೋಗಿದ್ದಾನೆ. ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾಗಿದ್ದಳು. ಮಗುವನ್ನು ನೋಡಲು ಮಗನು ಕಾತರನಾಗಿದ್ದನು. ಅವನು ಹಿಂದಿರುಗಿ ಬಂದಿದ್ದರೆ ಸಾಕಾಗಿತ್ತು, ಮಗು ತೀರಿಹೋದ ವಿಷಯವನ್ನು ತಿಳಿದು ಆತನು ಎಷ್ಟು ಸಂಕಟ ಪಡುವನೋ ಎಂದು ದುಃಖಿಸಿದಳು.


**********ಕನ್ನಡ ದೀವಿಗೆ******

11 ಕಾಮೆಂಟ್‌ಗಳು: