ನನ್ನ ಪುಟಗಳು

29 ಸೆಪ್ಟೆಂಬರ್ 2016

10ನೇ ತರಗತಿ ಪದ್ಯಪಾಠ-4 ಕೌರವೇಂದ್ರನ ಕೊಂದೆ ನೀನು(10th_Kannada _Poem-Kouravendrana_konde_neenu)

ಕುಮಾರವ್ಯಾಸನ ಪರಿಚಯ
 
ಕುಮಾರವ್ಯಾಸ ಕಂಬ
ಕುಮಾರವ್ಯಾಸನ ಕಾಲ: ಕ್ರಿ.ಶ. ೧೩೫೦-೧೪೦೦
ಸ್ಥಳ : ಗದುಗಿನ ಕೋಳಿವಾಡ (ಈಗಿನ ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲೂಕಿನ ಕೋಳಿವಾಡ)
ಆರಾಧ್ಯದೈವ: ಗದುಗಿನ ವೀರನಾರಾಯಣ
ಕೃತಿ: ‘ಕರ್ಣಾಟಭಾರತ ಕಥಾಮಂಜರಿ’ ಇದಕ್ಕೆ ಕನ್ನಡಭಾರತ, ಗದುಗಿನ ಭಾರತ ಎಂಬ ಹೆಸರುಗಳೂ ಇವೆ.
ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.

ಕುಮಾರವ್ಯಾಸನ ಕಾಲದ ಬಗ್ಗೆ ಚರ್ಚೆ

  • ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ.
  • ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣಕವಿ. ಇವನ ಕಾಲ ಸುಮಾರು ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ ‘ಕೃಷ್ಣರಾಜ ಭಾರತ’ಎಂಬ ಕೃತಿಯನ್ನು ರಚಿಸಿದ್ದಾನೆ.
  • ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ ‘ತೊರವೆ ರಾಮಾಯಣ’ ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ‘ಕೃಷ್ಣರಾಯ ಭಾರತ’ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ.
  • ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ.
  • ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸಂಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ.. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ.
  • ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ.
  • ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ).
  • ಕುಮಾರವ್ಯಾಸನು ‘ಕರ್ಣಾಟ ಭಾರತ ಕಥಾಮಂಜರಿ’ ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು” ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ.
  • ಈ ದಿಶೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು.

ಕುಮಾರವ್ಯಾಸನ ಊರು

ಹುಟ್ಟೂರು ಈಗಿನ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳೀವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್. ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ.

ವಂಶಾವಳಿ

ಈ ವಂಶಾವಳಿಯಂತೆ, ವೀರನಾರಾಯನೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ > ಗಾಮುಂಡ > ಗೌಡ ಎಂದು ನಿರ್ಣಯಿಸಿದ್ದಾರೆ. ಆನವ್ಮತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ.
  • ವಂಶಾವಳಿ :
  • ||ಶ್ರೀ ವೀರನಾರಾಯಣ ಪ್ರಸನ್ನಃ||
  • ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ.
  • ೨.ತಿರುಮಲಯ್ಯ.
  • ೩. ಲಕ್ಕರಸಯ್ಯ.
  • ೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ ?
  • ೪-೧ ನೇ ವೀರನಾರಾಯಣ ನೇ ಕುಮಾರವ್ಯಾಸ
  • ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ

ಕೃತಿಗಳು

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ.
ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:
  • “ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!)
  • “ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ)
  • “ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ)
  • “ಅರಿವಿನ ಸೆರಗು ಹಾರಿತು”
ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃ‍ಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;
ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:
ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!
  • ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ.

ಪ್ರಭಾವ

ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.
“ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ವೀರನಾರಾಯಣನ ಕಿಂಕರಗೆ”

“ವೀರನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು
ಚಾರು ಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ”


ಕೌರವೇಂದ್ರನ ಕೊಂದೆ ನೀನು ಪದ್ಯದ ಸಾರಾಂಶ
ಪೂರ್ವಕಥೆ(ಹಿನ್ನೆಲೆ)
             ''ದಾಯಾದಿ ಮತ್ಸರ ಸರ್ವ ನಾಶಕ್ಕೆ ಹೇತು'' ಎಂಬ ಮಾತಿನಂತೆ ಕೌರವರು ಮತ್ತು ಪಾಂಡವರ ನಡುವೆ ವೈಮನಸ್ಯ ಬೆಳೆದು ಹೆಮ್ಮರವಾಗಿ ಮೋಸದ ಪಗಡೆಯಾಟವಾಡಿ ಕೌರವರು ಪಾಂಡವರನ್ನು ರಾಜ್ಯಭ್ರಷ್ಟರಾಗಿ ಮಾಡಿದರು. ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಅನುಭವಿಸುವ ಸಂದರ್ಭ ಎದುರಾಯಿತು. ವನವಾಸ ಮತ್ತು ಅಜ್ಞಾತವಾಸದ ಸಂದರ್ಭದಲ್ಲಿಯೂ ಕೌರವರಿಂದ ಎದುರಾದ ಎಲ್ಲ ತೊಂದರೆಗಳನ್ನೂ ಎದುರಿಸಿ, ಅದನ್ನು ಯಶಸ್ವಿಯಾಗಿ ಮುಗಿಸಿ ಬಂದ ಪಾಂಡವರು ತಮ್ಮ ಪಾಲಿನ ರಾಜ್ಯವನ್ನು ಕೇಳಲು ಕೌರವರ ಬಳಿ ಬಂದಾಗ ದುರ್ಯೋಧನನನು ‘ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದನು. 
           ಆದ್ದರಿಂದ ರಾಜ್ಯವನ್ನು ಮರಳಿ ಪಡೆಯಲೋಸುಗ ಕೌರವರ ಬಳಿಗೆ ಧರ್ಮರಾಯನು ಸಂಧಾನಕ್ಕಾಗಿ ಶ್ರೀ ಕೃಷ್ಣನನ್ನು ಕಳುಹಿಸುತ್ತಾನೆ. ಶ್ರೀಕೃಷ್ಣನು ವಿದುರನ ಮೂಲಕ ದುರ್ಯೋಧನನ ಬಲವನ್ನು ಕುಗ್ಗಿಸುವ ಪ್ರಯತ್ನ ಮಾಡಿದಾಗ ತುಂಬಿದ ಸಭೆಯಲ್ಲಿ ದುರ್ಯೋಧನನು ವಿದುರನನ್ನು ಹೀಗೆಳೆಯುತ್ತಾನೆ. ಕುಪಿತನಾದ ವಿದುರ ತನ್ನ ಬಿಲ್ಲನ್ನು ಮುರಿದು ಯುದ್ಧದಿಂದ ವಿಮುಖನಾಗುತ್ತಾನೆ. ಆದರೆ ಯುದ್ಧ ನಿಲ್ಲಿಸುವ ಸಂಧಾನದ ಪ್ರಯತ್ನ ವಿಫಲವಾಗುತ್ತದೆ. ಯುದ್ಧವೊಂದೇ ಪರಿಹಾರ ಎಂಬ ತೀರ್ಮಾನಕ್ಕೆ ಬಂದಾಗ ಕೌರವ ಸೇನೆಯಲ್ಲಿ ದುರ್ಯೋಧನನಿಗೆ ನಿಷ್ಠನಾಗಿದ್ದು ಪಾಂಡವರನ್ನು ಸೋಲಿಸಬಲ್ಲ ಬಲಶಾಲಿ ಕರ್ಣನಿಂದ ಪಾಂಡವರನ್ನು ರಕ್ಷಿಸಲೇಬೇಕೆಂದು ಸಂಕಲ್ಪ ಮಾಡಿದ ಶ್ರೀಕೃಷ್ಣನು ಅದಕ್ಕಾಗಿ ಉಪಾಯವೊಂದನ್ನು ಸಿದ್ಧಪಡಿಸಿ ತನ್ನೊಂದಿಗೆ ಕರ್ಣನನ್ನು ಕರೆದೊಯ್ಯತ್ತಾನೆ. ಆಗ ಅವರಿಬ್ಬರ ನಡುವೆ ನಡೆದ ಸಂವಾದವೇ ಪ್ರಸ್ತುತ ಭಾಗ.

ಇನತನೂಜನ ಕೂಡೆ ಮೈದುನ
ತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಎನಗೆ ನಿಮ್ಮಡಿಗಳಲಿ ಸಮಸೇ
ವನೆಯೆ ದೇವ ಮುರಾರಿಯಂಜುವೆ
ವೆನಲು ತೊಡೆ ಸೋಂಕಿನಲಿ ಸಾರಿದು ಶೌರಿಯಿಂತೆಂದ ||೧||


        ರಾಕ್ಷಸ ಸಂಹಾರಕನಾದ (ದನುಜ ರಿಪು) ಕೃಷ್ಣನು ಸೂರ್ಯನ ಮಗ(ಇನತನೂಜ) ನಾದ ಕರ್ಣನೊಡನೆ ಮೈದುನತನದ ಸರಸದಿಂದ (ಪ್ರೀತಿಯಿಂದ) ಬರಸೆಳೆದು ರಥದ ಪೀಠದಲ್ಲಿ ಕುಳ್ಳಿರಿಸಿದನು. ಆಗ ಅದನ್ನು ನಿರೀಕ್ಷಿಸದ ಕರ್ಣನು ''ನಿಮ್ಮೊಡನೆ ನಾನು ಸರಿಸಮಾನನಾಗಿ ಕುಳಿತುಕೊಳ್ಳಬಹುದೇ? ದೇವ ಮುರಾರಿ, ನನಗೇಕೋ ಭಯವಾಗುತ್ತಿದೆ'' ಎಂದು ಹೇಳಲು, ಶ್ರೀಕೃಷ್ಣನು(ಶೌರಿ) ಅವನ ಪಕ್ಕಕ್ಕೆ ತೊಡೆ ಸೋಕುವಂತೆ ಕುಳಿತು ಹೀಗೆಂದನು.

ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆ ಸಂ
ವಾದಿಸುವಡನ್ವಯಕೆ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದರಿವಿಲ್ಲೆನುತ ದಾನವ
ಸೂದನನು ರವಿಸುತನ ಕಿವಿಯಲಿ ಬಿತ್ತಿದನು ಭಯವ ||೨||


          ಕರ್ಣ, ಕೌರವರು ಯಾದವರಿಗೆ ಭೇದವಿಲ್ಲ. ವಿಚಾರ ಮಾಡಿ ನೋಡಿದರೆ ಇಬ್ಬರೂ ಒಂದೇ ವಂಶದವರು. (ಯಯಾತಿಯ ಮಕ್ಕಳು ಪುರು, ಯದು, ಪುರುವಿನ ವಂಶದವರು ಕೌರವರು. ಯದುವಿನ ವಂಶದವರು ಯಾದವರು) ನಿನ್ನಾಣೆಯಾಗಿಯೂ ನೀನೇ ರಾಜ (ಮೇದಿನಿಪತಿ) ಆದರೆ ನಿನಗೆ ಅದರ ಅರಿವಿಲ್ಲ ಎಂದು ಹೇಳುವ ಮೂಲಕ ದಾನವರ ವೈರಿಯಾದ ಶ್ರೀಕೃಷ್ಣನು ರವಿಸುತ (ಕರ್ಣ)ನ ಕಿವಿಯಲ್ಲಿ ಭಯವನ್ನು ಬಿತ್ತಿದನು.

ಲಲನೆ ಪಡೆದೀಯೈದು ಮಂತ್ರಂ
ಗಳಲಿ ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಠಿರದೇವ ಮೂರನೆಯಾತ ಕಲಿಭೀಮ
ಫಲುಗುಣನು ನಾಲ್ಕನೆಯಲೈದನೆ
ಯಲಿ ನಕುಲ ಸಹದೇವರಾದರು
ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು ||೩||


       ಪಾಂಡವರ ತಾಯಿಯಾದ ಕುಂತಿಯು ದೂರ್ವಾಸ ಮುನಿಗಳಿಂದ ಪಡೆದ ಐದು ಮಂತ್ರಗಳಲ್ಲಿ ನೀನು ಮೊದಲನೆಯವನು, ನಿನ್ನ ನಂತರದಲ್ಲಿ ಜನಿಸಿದವನು ಯುಧಿಷ್ಠಿರ(ಧರ್ಮತರಾಯ), ಮೂರನೆಯವನು ಶೂರನಾದ ಭೀಮನು, ಅರ್ಜುನನು(ಫಲುಗುಣ) ನಾಲ್ಕನೆಯವನು ಆನಂತರದಲ್ಲಿ ಮಾದ್ರಿಯಲ್ಲಿ (ಪಾಂಡುವಿನ ಎರಡನೇ ಪತ್ನಿಗೆ ಮೊದಲ ಪತ್ನಿಯಾದ ಕುಂತಿಯು ದಯಪಾಲಿಸಿದ ಒಂದು ಮಂತ್ರದ ಕೃಪೆಯಿಂದ) ಒಂದು ಮಂತ್ರದಿಂದ ನಕುಲ ಸಹದೇವರು ಜನಿಸಿದರು ಎಂದು ಶ್ರೀ ಕೃಷ್ಣನು ಕರ್ಣನಿಗೆ ಅವನ ಜನ್ಮ ವೃತ್ತಾಂತವನ್ನು ಹೇಳಿದನು .

ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಪಾಂಡವ
ಜನಪ ಕೌರವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ ||೪||


         ನಿನಗೆ ಹಸ್ತಿನಾಪುರದ(ಹಸ್ತನಾವತಿ) ರಾಜನ ಹಿರಿಮೆಯನ್ನುಕೊಡಿಸುವೆನು. ಪಾಂಡವ ಕೌರವ ರಾಜರೆಲ್ಲರೂ ನಿನ್ನನ್ನು ಓಲೈಸುವರು. ಈ ಎರಡೂ ಸಂತತಿಯವರೂ ನಿನಗೆ ಸೇವಕರೆನಿಸಿಕೊಳ್ಳುವ ಹಿರಿಮೆಯನ್ನು ತಿರಸ್ಕರಿಸಿ ನೀನು ದುರ್ಯೋಧನನ ಬಾಯ್ದಂಬುಲಕೆ(ಬಾಯಿಯಲ್ಲಿ ಅಗಿದು ಉಗುಳುವ ತಾಂಬೂಲ) ಕೈಯೊಡ್ಡುವುದು ಸರಿಯೇ ? ಹೇಳು ಎಂದು ಶ್ರೀಕೃಷ್ಣನು ಕರ್ಣನನ್ನು ಪ್ರಶ್ನಿಸುತ್ತಾನೆ.

ಎಡದ ಮೈಯಲಿ ಕೌರವೇಂದ್ರರ
ಗಡಣ ಬಲದಲಿ ಪಾಂಡು ತನಯರ
ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸವ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ ||೫||
         ನಿನ್ನ ಎಡ ಭಾಗದಲ್ಲಿ ಕೌರವನ ಸಮೂಹದವರು, ಬಲ ಭಾಗದಲ್ಲಿ ಪಾಂಡವರ ಸಮೂಹ (ಪಾಂಡು ರಾಜನ ಮಕ್ಕಳು), ಇದಿರಿನಲ್ಲಿ ಮಾದ್ರಿ, ಮಾಗಧ, ಯಾದವಾದಿಗಳು ಇವರೆಲ್ಲರ ನಡುವೆ ನೀನು ಓಲಗದಲ್ಲಿ ಶೋಭಿಸುವ ನೀನು ಇಂತಹ ಮಹಾಸೌಭಾಗ್ಯವನ್ನು ಅತ್ತ ಎಸೆದು ಕುರುಪತಿ (ಕೌರವ/ದುರ್ಯೋಧನ) ನಿನಗೇನಾದರೂ ಹೇಳಿದರೆ 'ಜೀಯಾ, ಮಹಾಪ್ರಸಾದ' ಎಂದು ಒಪ್ಪಿಕೊಳ್ಳುವುದು ನಿನಗೆ ಕಷ್ಟವಾಗುವುದು ಎಂದು ಶ್ರೀಕೃಷ್ಣನು ಕರ್ಣನಿಗೆ ಹೇಳಿದನು.

ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶದ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ||೬||
           ಕರ್ಣನ ಕೊರಳ ನರಗಳು ಹಿಗ್ಗಿದವು (ಗದ್ಗದ) ಕಣ್ಣಿರು ಧಾರೆಯಾಗಿ ಸುರಿಯಿತು. ಅವನು ಬಹಳವಾಗಿ ನೊಂದು ''ಅಯ್ಯೋ! ಕುರುಪತಿಗೆ ಕೇಡಾಯಿತು'' ಎಂದು ತನ್ನ ಮನದೊಳಗೆ ಅಂದುಕೊಂಡು ''ಕೃಷ್ಣನ ದ್ವೇಷದ ಬೆಂಕಿ ಹೊಗೆಯಾಡಿದ ಮೇಲೆ ಅದು ಪೂರ್ತಿಯಾಗಿ ಸುಡದೆ ಹಾಗೇ ಬಿಡುವುದೇ? ಬರಿದೆ ನನ್ನ ಜನ್ಮವೃತ್ತಾಂತವನ್ನು ಹೇಳಿ ಕೊಂದನು. ಹೆಚ್ಚು ಮಾತೇನು?'' ಎಂದು ಚಿಂತಿಸಿದನು .

ಏನು ಹೇಳೈ ಕರ್ಣ ಚಿತ್ತ
ಗ್ಲಾನಿ ಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿಕೊಂಬುದು ಸೇರದೆ
ಹಾನಿಯಿಲ್ಲೆನ್ನಾಣೆ ನುಡಿ ನುಡಿ
ಮೌನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯೆ ಬಯಸುವನಲ್ಲ ಕೇಳೆಂದ ||೭||


        (ಕರ್ಣನು ಮನಸ್ಸಿನಲ್ಲಿ ಚಿಂತಿಸುತ್ತಿರುವುದನ್ನು ನೋಡಿ) ಏನು ಹೇಳು ಕರ್ಣ? ನಿನ್ನ ಮನಸ್ಸಿನ ಜಡತ್ವಕ್ಕೆ, ವ್ಯಾಕುಲತೆಗೆ ಕಾರಣವೇನು? ಕುಂತಿಪುತ್ರರಿಂದ ಸೇವೆ ಮಾಡಿಸಿಕೊಳ್ಳುವುದು ನಿನಗೆ ಇಷ್ಟವಾಗುವುದಿಲ್ಲವೇ? ನನ್ನಾಣೆ, ಏನೂ ಹಾನಿ ಇಲ್ಲ, ಮಾತನಾಡು. ಮೌನವೇಕೆ? ಈ ದಡ್ಡತನ ಬೇಡ, ನಿನ್ನ ಹಾನಿಯನ್ನು(ಅಪದೆಸೆ, ಕೇಡು) ನಾನು ಬಯಸುವವನಲ್ಲ; ಕೇಳು.” ಎಂದು ಕೃಷ್ಣನು ಕರ್ಣನಿಗೆ ಸಾಂತ್ವನ ಹೇಳುತ್ತಾನೆ.

ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ.
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ||೮||


           “ಅಯ್ಯೋ ಮರುಳು ಕೃಷ್ಣನೇ, ಈ ಭೂಮಿ ರಾಜ್ಯದ ಸಂಪತ್ತಿಗೆ ನಾನು ಸೋಲುವವನಲ್ಲ. ಕೌಂತೇಯರು(ಪಾಂಡವರು), ಕೌರವರು ನನಗೆ ಸೇವೆ ಮಾಡಬೇಕೆನ್ನುವುದರಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ(ಇಚ್ಛೆಯಿಲ್ಲ). ನನ್ನನ್ನು ಸಲಹಿದ ನನ್ನ ಒಡೆಯನಿಗೆ (ದಾತಾರ-ದಾತೃ) ‘ಶತ್ರುಗಳ ತಲೆಯನ್ನು ಕಡಿದು ಒಪ್ಪಿಸುವೆನು’ ಎನ್ನು ಆತುರದಲ್ಲಿದ್ದೆನು. ಆದರೆ ನೀನು ಕೌರವೇಂದ್ರನನ್ನು ಕೊಂದುಹಾಕಿದೆ” ಎಂದು ಕರ್ಣನು ನೋವಿನಿಂದ ಶ್ರೀಕೃಷ್ಣನಿಗೆ ಹೇಳಿದನು.

ವೀರ ಕೌರವರಾಯನೇ ದಾ
ತಾರನಾತನ ಹಗೆಯ ಹಗೆ ಕೈ
ವಾರವೇ ಕೈವಾರವಾದಂತಹೆನು ಕುರುನೃಪತಿ
ಶೌರಿ ಕೇಳೈ ನಾಳೆ ಸಮರದ
ಸಾರದಲಿ ತೋರುವೆನು ನಿಜಭುಜ
ಶೌರಿಯದ ಸಂಪನ್ನತನವನು ಪಾಂಡುತನಯರಲಿ ||೯||

       ವೀರ ಕೌರವರಾಯನೇ(ದುರ್ಯೋಧನನೇ) ನನಗೆ ಒಡೆಯನು, ಆತನ ಶತ್ರುಗಳೇ ನನ್ನ ಶತ್ರುಗಳು, ಅವನ ಅಭಿಮಾನವೇ (ಹೊಗಳಿಕೆಯೇ) ನನಗೆ ಅಭಿಮಾನ. ಅವನಿಗೆ ಆಗುವುದೇ ನನಗೆ ಆಗಲಿ, ಕೃಷ್ಣನೇ ಕೇಳು, ನಾಳೆ ಯುದ್ಧಭೂಮಿಯಲ್ಲಿ ನನ್ನ ಭುಜಬಲಶೌರ್ಯದ ಪರಾಕ್ರಮವನ್ನು ಪಾಂಡುತನಯ(ಪಾಂಡವರು)ರ ಮೇಲೆ ತೋರುವೆನು ಎಂದು ಕರ್ಣನು ಹೇಳಿದನು.

ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ ||೧೦||


          ನಾಳೆ ಬರಲಿರುವ ಭಾರತ(ಮಹಾಭಾರತ)ಯುದ್ಧವು ಮಾರಿಗೆ ಔತಣವಾಗುವುದು. ಆ ಯುದ್ಧದಲ್ಲಿ ಚತುರಂಗ ಬಲವನ್ನು ಸೋಲಿಸಿ, ಅಸಂಖ್ಯಾತ ಯೋಧರನ್ನು ಸಾಯಿಸಿ, ನನ್ನ ಒಡೆಯ ದುರ್ಯೋಧನನಿಗಾಗಿ (ಅವಸರಕ್ಕಾಗಿ=ಸಮಯಕ್ಕಾಗಿ) ನನ್ನ ದೇಹವನ್ನು ಅರ್ಪಿಸುವೆನು(ಪ್ರಾಣಬಿಡುವೆನು) ನಿನ್ನ ಧೀರರಾದ ಪಾಂಡವರನ್ನು ಸೂರ್ಯನಾಣೆಯಾಗಿಯೂ ಯಾವುದೇ ಕಾರಣಕ್ಕೂ ನೋಯಿಸುವುದಿಲ್ಲ ಎಂದು ಕರ್ಣನು ಶ್ರೀಕೃಷ್ಣನಿಗೆ ಹೇಳಿದನು.

ಈ ಪದ್ಯಕ್ಕೆ ಪೂರಕವಾದ ವಿಡಿಯೋ ವೀಕ್ಷಿಸಿ

ವೀಡಿಯೋ ಕೃಪೆ: ಶ್ರೀ ಎಂ.ಬಿ.ಕರಡ್ಡಿ, ಸರಕಾರಿ ಪ್ರೌಢಶಾಲೆ ಶ್ಯಾಗೋಟಿ ಜಿ:ಗದಗ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ