ನನ್ನ ಪುಟಗಳು

08 ನವೆಂಬರ್ 2013

ಸಂಧಿಗಳು

ಸಂಧಿಗಳು
ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ.  ಊರು ಊರು” ಎಂಬೆರಡು ಶಬ್ದಗಳನ್ನು ಊರೂರು' ಎಂದು ಕೂಡಿಸಿಯೇ ಮಾತನಾಡುತ್ತೇವೆ.  ಅವನು + ಅಲ್ಲಿ ಎಂಬೆರಡು ಶಬ್ದ ರೂಪಗಳನ್ನು ಅವನಲ್ಲಿ ಎಂದು ಕೂಡಿಸಿ ಹೇಳುತ್ತೇವೆ.  ಮೇಲೆ ಹೇಳಿರುವ ಊರು + ಊರು ಎಂಬ ಶಬ್ದಗಳನ್ನೂ, ಅವನು + ಅಲ್ಲಿ' ಎಂಬ ಪ್ರಕೃತಿ ಪ್ರತ್ಯಯಗಳನ್ನೂ ಕೂಡಿಸಿಯೇ ಹೇಳುತ್ತೇವೆ.  ಅಂದರೆ, ಅವನ್ನು ಸಂಧಿಸಿಯೇ ಹೇಳುತ್ತೇವೆ.  ಒಮ್ಮೊಮ್ಮೆ ಶಬ್ದ ಶಬ್ದಗಳನ್ನು ಬಿಡಿಬಿಡಿಸಿ ಹೇಳಿದರೂ, ಪಕೃತಿ ಪ್ರತ್ಯಯಗಳನ್ನು ಮಾತ್ರ ಸಂಧಿಸಿಯೇ ಹೇಳುತ್ತೇವೆ.  ಅವನ್ನು ಬಿಡಿಬಿಡಿಯಾಗಿ ಹೇಳಲಾಗುವುದೇ ಇಲ್ಲ.   ಈ ಕೆಳಗೆ ನೋಡಿ:-
ಪ್ರಕೃತಿ+ಪ್ರತ್ಯಯ=ಕೂಡಿಸಿದ ರೂಪ
ಆಡು+ಇಸು=ಆಡಿಸು
ಮರ+ಅನ್ನು=ಮರವನ್ನು
ಪುಸ್ತಕ+ಇಂದ=ಪುಸ್ತಕದಿಂದ
ದೇವರು+ಇಗೆ=ದೇವರಿಗೆ
ಪದಗಳನ್ನು ಕೂಡಿಸಿಯಾದರೂ ಹೇಳಬಹುದು ಅಥವಾ ಬಿಡಿಬಿಡಿಯಾಗಿಯೂ ಹೇಳಬಹುದು.
ಪದ+ಪದ=ಕೂಡಿಸಿದ ರೂಪ-ಕೂಡಿಸದ ರೂಪ
ಅವನ+ಅಂಗಡಿ=ಅವನಂಗಡಿ-ಅವನ ಅಂಗಡಿ
ಅವನಿಗೆ+ಇಲ್ಲ=ಅವನಿಗಿಲ್ಲ-ಅವನಿಗೆ ಇಲ್ಲ
ಹಣ್ಣಿನ+ಅಂಗಡಿ=ಹಣ್ಣಿನಂಗಡಿ-ಹಣ್ಣಿನ ಅಂಗಡಿ
ಪದ+ಪದ=ಕೂಡಿಸಿದ ರೂಪ -ಕೂಡಿಸದ ರೂಪ
ಅವನ+ಅಂಗಡಿ=ಅವನಂಗಡಿ-ಅವನ ಅಂಗಡಿ
ಅವನಿಗೆ+ಇಲ್ಲ=ಅವನಿಗಿಲ್ಲ-ಅವನಿಗೆ ಇಲ್ಲ
ಹಣ್ಣಿನ+ಅಂಗಡಿ=ಹಣ್ಣಿನಂಗಡಿ-ಹಣ್ಣಿನ ಅಂಗಡಿ
ಮೇಲೆ ಹೇಳಿರುವ ಅನೇಕ ಉದಾಹರಣೆಗಳಲ್ಲಿ ಪ್ರಕೃತಿ ಪ್ರತ್ಯಯಗಳನ್ನು ಸೇರಿಸುವಲ್ಲಿ ಅವನ್ನು ಕೂಡಿಸಿಯೇ ಹೇಳುತ್ತೇವಲ್ಲದೆ ಬಿಡಿಬಿಡಿಸಿ ಹೇಳಲು ಬರುವಂತೆಯೇ ಇಲ್ಲ.  ಆಡು ಇಸು ಎಂದು ಯಾರು ಹೇಳುವುದಿಲ್ಲ.  ಪುಸ್ತಕ ಅನ್ನು ತಾ ಎನ್ನಬಾರದು.  ಆಡಿಸು ಪುಸ್ತಕವನ್ನು ಹೀಗೆ ಕೂಡಿಸಿಯೇ ಹೇಳಬೇಕು.  ಆಡಿಸು ಎಂಬಲ್ಲಿ (ಆಡು+ಇಸು) ಉ+ಇ ಸ್ವರಗಳು ಸಂಧಿಸುತ್ತವೆ.  ಪುಸ್ತಕ+ಅನ್ನು ಎಂಬಲ್ಲಿ ಅ+ಅ ಸ್ವರಗಳು ಪರಸ್ಪರ ಸಂಧಿಸುತ್ತವೆ.  ಅವೆರಡೂ ಸಂಧಿಸುವಾಗ ಮೊದಲಿನ ಸ್ವರಗಳು ಎರಡೂ ಕಡೆ ಹೋಗುತ್ತವೆ.  ಈ ಸಂಧಿಸುವಿಕೆಯು ಕಾಲವಿಳಂಬವಿಲ್ಲದೆ ಹಾಗೆ ಆಗುತ್ತದೆ.  ಇವು ಪ್ರಕೃತಿ ಪ್ರತ್ಯಯಗಳ ಸಂಧಿಸುವಿಕೆಯನ್ನು ತಿಳಿಸುವ ಉದಾಹರಣೆಗಳು.
ಅವನ ಅಂಗಡಿ ಎಂಬ ಪದಗಳನ್ನು ಬೇಕಾದರೆ ಸಂಧಿಯಾಗುವಂತೆ ಅವನಂಗಡಿ ಎಂದಾದರೂ ಹೇಳಬಹುದು; ಅಥವಾ ಕಾಲವನ್ನು ಸ್ವಲ್ಪ ವಿಳಂಬ ಮಾಡಿ ಅವನ ಅಂಗಡಿ ಎಂದಾದರೂ ಹೇಳಬಹುದು.  ಅದು ಹೇಳುವವನ ಇಚ್ಛೆಯನ್ನು ಅವಲಂಬಿಸಿರುತ್ತದೆ.  ಅವನಂಗಡಿ ಎನ್ನುವಾಗ (ಅವನ+ಅಂಗಡಿ) ಇಲ್ಲಿ ಸಂಧಿಸುವ ಸ್ವರಗಳು ಅ+ಅ ಎಂಬುವು.  ಇವುಗಳಲ್ಲಿ ಮೊದಲಿನ ಅಕಾರವನ್ನು ತೆಗೆದುಹಾಕುತ್ತೇವೆ.  ಆದ್ದರಿಂದ ಎರಡು ಅಕ್ಷರಗಳು ಸಂಧಿಸುವಿಕೆಯೇ ಸಂಧಿಯೆನಿಸುವುದೆಂದಹಾಗಾಯಿತು.  ಇದರ ಸೂತ್ರವನ್ನು ಹೀಗೆ ಹೇಳಬಹುದು:-
(೧೫) ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲದಂತೆ ಸೇರುವುದೇ ಸಂಧಿಯೆನಿಸುವುದು.
(i) ಸ್ವರದ ಮುಂದೆ ಸ್ವರ ಬಂದು ಹೀಗೆ ಸಂಧಿಯಾದರೆ ಸ್ವರಸಂಧಿಯೆನ್ನುತ್ತೇವೆ.
(ii) ಸ್ವರದ ಮುಂದೆ ವ್ಯಂಜನ ಬಂದು ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ವ್ಯಂಜನಸಂಧಿಯೆನ್ನುತ್ತೇವೆ.
(iii) ಹೀಗೆ ಸಂಧಿಯಾಗುವಾಗ ಹಲಕೆಲವು ವ್ಯತ್ಯಾಸಗಳು ಆ ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವುವು. ಅವನ್ನೇ ಸಂಧಿಕಾರ‍್ಯಗಳು ಎನ್ನುತ್ತೇವೆ.  ಅವುಗಳನ್ನು ಈ ಮುಂದೆ ತಿಳಿಯೋಣ.
. ಲೋಪಸಂಧಿ
ಊರು + ಅಲ್ಲಿ ಎಂಬಲ್ಲಿ ಉ ಎಂಬ ಸ್ವರದ ಮುಂದೆ ಅ ಎಂಬ ಸ್ವರ ಬಂದಿದೆ.  ಕೂಡಿಸಿ ಬರೆದರೆ ಊರ್ ಅಲ್ಲಿ = ಊರಲ್ಲಿ ಎಂದಾಯಿತು.  ಅಂದರೆ ರಕಾರದಲ್ಲಿರುವ ಉ ಕಾರ ಬಿಟ್ಟುಹೋಯಿತು.  ಇದರ ಹಾಗೆ ಕೆಳಗಿನ ಇನ್ನೂ ಕೆಲವು ಉದಾಹರಣೆಗಳನ್ನು ನೋಡಿರಿ:-
ಮಾತು + ಇಲ್ಲ = ಮಾತಿಲ್ಲ (ಉಕಾರ ಇಲ್ಲದಾಯಿತು)
(ಉ + ಇ)
ಆಡು + ಇಸು = ಆಡಿಸು (ಉಕಾರ ಇಲ್ಲದಾಯಿತು)
(ಉ + ಇ)
ಬೇರೆ + ಒಬ್ಬ = ಬೇರೊಬ್ಬ (ಎಕಾರ ಇಲ್ಲದಾಯಿತು)
(ಎ + ಒ)
ನಿನಗೆ + ಅಲ್ಲದೆ = ನಿನಗಲ್ಲದೆ (ಎಕಾರ ಇಲ್ಲದಾಯಿತು)
(ಎ + ಅ)
ನಾವು + ಎಲ್ಲಾ = ನಾವೆಲ್ಲಾ (ಉಕಾರ ಬಿಟ್ಟುಹೋಯಿತು)
(ಉ + ಎ)
ಮೇಲಿನ ಉದಾಹರಣೆಗಳಲ್ಲೆಲ್ಲಾ, ಎರಡು ಸ್ವರಗಳು ಸಂಧಿಸುವಾಗ ಮೊದಲನೆಯ ಸ್ವರವು ಇಲ್ಲದಂತಾಗುವುದು (ಲೋಪವಾಗುವುದು) ಕಂಡು ಬರುತ್ತದೆ.  ಆದರೆ ಕೆಲವು ಕಡೆಗೆ ಸ್ವರದ ಮುಂದೆ ಸ್ವರವು ಬಂದಾಗ ಲೋಪ ಮಾಡಿದರೆ ಅರ್ಥವು ಕೆಡುವುದು.  ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ:-
ಮನೆ + ಇಂದ – ಇಲ್ಲಿ ಲೋಪಮಾಡಿದರೆ ಮನಿಂದ ಎಂದಾಗುವುದು
(ಎ + ಇ)
ಗುರು + ಅನ್ನು – ಇಲ್ಲಿ ಲೋಪಮಾಡಿದರೆ ಗುರನ್ನು ಆಗುವುದು
(ಉ + ಅ)
ಹಾಗಾದರೆ ಅರ್ಥವು ಹಾಳಾಗುವಲ್ಲಿ ಲೋಪ ಮಾಡಬಾರದು. ಅಲ್ಲಿ ಬೇರೆ ವಿಧಾನವನ್ನು (ಮಾರ್ಗವನ್ನು) ಅನುಸರಿಸಬೇಕಾಗುವುದು.  ಹಾಗಾದರೆ ಒಟ್ಟಿನಲ್ಲಿ ಲೋಪಸಂಧಿಗೆ ಸೂತ್ರವನ್ನು ಹೀಗೆ ಹೇಳಬಹುದು:-
(೧೬) ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿಯೆಂದು ಹೆಸರು.
ಉದಾಹರಣೆಗೆ:-
ಊರು + ಅಲ್ಲಿ = ಊರಲ್ಲಿ (ಉಕಾರ ಲೋಪ)
(ಉ + ಅ)
ದೇವರು + ಇಂದ = ದೇವರಿಂದ (ಉಕಾರ ಲೋಪ)
(ಉ + ಇ)
ಬಲ್ಲೆನು + ಎಂದು = ಬಲ್ಲೆನೆಂದು (ಉಕಾರ ಲೋಪ)
(ಉ + ಎ)
ಏನು + ಆದುದು = ಏನಾದುದು (ಉಕಾರ ಲೋಪ)
(ಉ + ಆ)
ಇವನಿಗೆ + ಆನು = ಇವನಿಗಾನು (ಎಕಾರ ಲೋಪ)
(ಎ + ಆ)
ಅವನ + ಊರು = ಅವನೂರು (ಅಕಾರ ಲೋಪ)
(ಅ + ಊ)

. ಆಗಮ ಸಂಧಿ
ಮೇಲೆ ಹೇಳಿದ ಲೋಪಸಂಧಿಯನ್ನು ಅರ್ಥವು ಕೆಡದಂತಿದ್ದರೆ ಮಾತ್ರ ಮಾಡಬೇಕು, ಇಲ್ಲದಿದ್ದರೆ ಮಾಡಬಾರದು ಎಂದು ತಿಳಿದಿದ್ದೀರಿ.
ಮನೆ + ಅನ್ನು ಎಂಬಲ್ಲಿ ಲೋಪ ಮಾಡಿದರೆ ಮನನ್ನು ಆಗುವುದು,
ಗುರು + ಅನ್ನು ಎಂಬಲ್ಲಿ ಲೋಪ ಮಾಡಿದರೆ ಗುರನ್ನು ಆಗುವುದು
ಎಂಬುದನ್ನು ಹಿಂದೆ ತಿಳಿದಿದ್ದೀರಿ.  ಹಾಗಾದರೆ ಮನೆ + ಅನ್ನು, ಗುರು + ಅನ್ನು ಇವು ಕೂಡುವಾಗ ಪದದ ಮಧ್ಯದಲ್ಲಿ ಸ್ವರದ ಮುಂದೆ ಸ್ವರ ಬಂದಿದೆಯಾದ್ದರಿಂದ ಅವನ್ನು ಬಿಡಿ ಬಿಡಿಸಿ ಅನ್ನಲೂ ಕೂಡ ಯೋಗ್ಯವಾಗುವುದಿಲ್ಲ.  ಆಗ ಆ ಎರಡೂ ಸ್ವರಗಳ ಮಧ್ಯದಲ್ಲಿ ಕೂಡಿಸಿ ಹೇಳಲು ಅನುಕೂಲವಾಗುವಂತಹ ಯ್ಕಾರವನ್ನೋ, ವ್ ಕಾರವನ್ನೋ ಹೊಸದಾಗಿ ಸೇರಿಸಿದಾಗ ಉಚ್ಚಾರಮಾಡಲು ಅನುಕೂಲವಾಗುವುದು.  ಹೀಗೆ ಹೊಸದಾಗಿ ಸೇರುವ ಅಕ್ಷರವೇ ಆಗಮಾಕ್ಷರ.  ಹಾಗೆ ಹೊಸ ಅಕ್ಷರವನ್ನು ಸೇರಿಸಿ ಹೇಳುವ ಸಂಧಿಯೇ ಆಗಮಸಂಧಿ.  ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ:-
ಯಕಾರಾಗಮ ಬರುವುದಕ್ಕೆ
ತೆನೆ+ಅನ್ನು=ತೆನೆ+ಯ್+ಅನ್ನು=ತೆನೆಯನ್ನು
ಕೈ+ಅನ್ನು=ಕೈ+ಯ್+ಅನ್ನು=ಕೈಯನ್ನು
ಚಳಿ+ಅಲ್ಲಿ=ಚಳಿ+ಯ್+ಅಲ್ಲಿ=ಚಳಿಯಲ್ಲಿ
ಮಳೆ+ಇಂದ=ಮಳೆ+ಯ್+ಇಂದ=ಮಳೆಯಿಂದ
ಗಾಳಿ+ಅನ್ನು=ಗಾಳಿ+ಯ್+ಅನ್ನು=ಗಾಳಿಯನ್ನು
ಕೆರೆ+ಅಲ್ಲಿ=ಕೆರೆ+ಯ್+ಅಲ್ಲಿ=ಕೆರೆಯಲ್ಲಿ
ಮರೆ+ಇಂದ=ಮರೆ+ಯ್+ಇಂದ=ಮರೆಯಿಂದ
ವಕಾರಾಗಮ ಬರುವುದಕ್ಕೆ
ಗುರು+ಅನ್ನು=ಗುರು+ವ್+ಅನ್ನು=ಗುರುವನ್ನು
ಪಿತೃ+ಅನ್ನು=ಪಿತೃ+ವ್+ಅನ್ನು=ಪಿತೃವನ್ನು
ಮಗು+ಇಗೆ=ಮಗು+ವ್+ಇಗೆ=ಮಗುವಿಗೆ
+ಉಂಗುರ=+ವ್+ಉಂಗುರ=ಆವುಂಗುರ
+ಊರು=+ವ್+ಊರು=ಆವೂರು
+ಒಲೆ=+ವ್+ಒಲೆ=ಆವೊಲೆ
ಪೂ+ಅನ್ನು=ಪೂ+ವ್+ಅನ್ನು=ಪೂವನ್ನು
ಮೇಲೆ ತೋರಿಸಿರುವ ಯಕಾರಗಮ, ವಕಾರಾಗಮ ಸಂಧಿ ಬಂದಿರುವ ಸ್ಥಳಗಳಲ್ಲೆಲ್ಲ ಲೋಪಸಂಧಿಯನ್ನು ಮಾಡಿ ಹೇಳಲೂಬಾರದು, ಬರೆಯಲೂ ಬಾರದು.  ಹಾಗೆ ಲೋಪ ಮಾಡಿದರೆ ಅರ್ಥವು ಹಾಳಾಗುವುದೆಂದು ಕಂಡಿದ್ದೀರಿ.  ಆದುದರಿಂದ ಈ ಆಗಮಸಂಧಿಗೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೧೭) ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು.
ಯಕಾರಾಗಮ ವಕಾರಾಗಮ ಎಲ್ಲೆಲ್ಲಿ ಬರುತ್ತವೆಂಬುದನ್ನು ತೀಳಿಯೋಣ:-
() ಯಕಾರಾಗಮ ಸಂಧಿ:-
ಆ, ಇ, ಈ, ಎ, ಏ, ಐ ಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ಮಧ್ಯದಲ್ಲಿ ಯ್ ಕಾರವು ಆಗಮವಾಗುವುದು.
ಉದಾಹರಣೆಗೆ:-
[1]ಕಾ+ಅದೆ =ಕಾ+ಯ್+ಅದೆ=ಕಾಯದೆ
(ಆ+ಅ)
ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು
(ಇ+ಅ)
[2]ಮೀ+ಅಲು=ಮೀ+ಯ್+ಅಲು=ಮೀಯಲು
(ಈ+ಅ)
ಕೆರೆ+ಅನ್ನು=ಕೆರೆ+ಯ್+ಅನ್ನು=ಕೆರೆಯನ್ನು
(ಎ+ಅ)
[3]ಮೇ+ಇಸು=ಮೇ+ಯ್+ಇಸು=ಮೇಯಿಸು
(ಏ+ಇ)
ಮೈ+ಅನ್ನು=ಮೈ+ಯ್+ಅನ್ನು=ಮೈಯನ್ನು
(ಐ+ಅ)

(೨) ವಕಾರಾಗಮ ಸಂಧಿ:-
(i) , , , ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ವ್ ಕಾರವು ಆಗಮವಾಗಿ ಬರುವುದು.
ಉದಾಹರಣೆಗೆ:-
ಮಡು+ಅನ್ನು=ಮಡು+ವ್+ಅನ್ನು=ಮಡುವನ್ನು
(ಉ+ಅ)
ಪೂ+ಇಂದ=ಪೂ+ವ್+ಇಂದ=ಪೂವಿಂದ
(ಊ+ಇ)
ಮಾತೃ+ಅನ್ನು=ಮಾತೃ+ವ್+ಅನ್ನು=ಮಾತೃವನ್ನು
(ಋ+ಅ)
ಗೋ+ಅನ್ನು=ಗೋ+ವ್+ಅನ್ನು=ಗೋವನ್ನು
(ಓ+ಅ)

(ii) ಅಕಾರದ ಮುಂದೆ ಅಕಾರವೇ ಬಂದರೆ ವ್ ಕಾರಾಗಮವಾಗುವುದು. (ಪ್ರಕೃತಿ ಪ್ರತ್ಯಯ ಸೇರುವಾಗ ಮಾತ್ರ ಈ ಸಂಧಿಯಾಗುವುದು)
ಉದಾಹರಣೆಗೆ:-
ಹೊಲ+ಅನ್ನು=ಹೊಲ+ವ್+ಅನ್ನು=ಹೊಲವನ್ನು
ನೆಲ+ಅನ್ನು= ನೆಲ+ವ್+ಅನ್ನು=ನೆಲವನ್ನು
ಕುಲ+ಅನ್ನು=ಕುಲ+ವ್+ಅನ್ನು=ಕುಲವನ್ನು
ತಿಲ+ಅನ್ನು=ತಿಲ+ವ್+ಅನ್ನು=ತಿಲವನ್ನು
ಮನ+ಅನ್ನು=ಮನ+ವ್+ಅನ್ನು=ಮನವನ್ನು

(iii) ಆ ಎಂಬ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ನಡುವೆ ವ ಕಾರವು ಆಗಮವಾಗಿ ಬರುವುದುಂಟು.  (ಸಂಧಿಯನ್ನು ಮಾಡದೆಯೂ ಹೇಳಬಹುದು)
ಉದಾಹರಣೆಗೆ:-
ಆ + ಉಂಗುರ = ಆ + ವ್ + ಉಂಗುರ = ಆವುಂಗುರ
ಆ + ಊಟ = ಆ + ವ್ + ಊಟ = ಆವೂಟ
ಆ + ಒಂಟೆ = ಆ + ವ್ + ಒಂಟೆ = ಆವೊಂಟೆ
ಆ + ಓಟ = ಆ + ವ್ + ಓಟ = ಆವೋಟ
ಸಂಧಿ ಮಾಡದಿರುವುದಕ್ಕೆ-ಆ ಉಂಗುರ, ಆ ಊಟ, ಆ ಒಂಟೆ, ಆ ಓಟ (ಹೀಗೂ ಹೇಳಬಹುದು)

(iv) ಶಬ್ದದ ಮುಂದೆ , , , ಓ ಗಳು ಬಂದರೆ, ಯಕಾರಾಗಮ ವನ್ನಾದರೂ ಮಾಡಬಹುದು; ಅಥವಾ ವಕಾರಾಗಮವನ್ನಾದರೂ ಮಾಡಬಹುದು
ಉದಾಹರಣೆಗೆ:-
ಈ + ಉದಕ = ಈ + ಯ್ + ಉದಕ=ಈಯುದಕ
ಈವುದಕ
ಈ + ಊರು = ಈ + ಯ್ + ಊರು=ಈಯೂರು
ಈವೂರು
ಈ + ಊಟ = ಈ + ಯ್ + ಊಟ=ಈಯೂಟ
ಈವೂಟ
ಈ + ಒಲೆ = ಈ + ಯ್ + ಒಲೆ=ಈಯೊಲೆ
ಈವೊಲೆ
ಈ + ಒಂಟೆ = ಈ + ಯ್ + ಒಂಟೆ=ಈಯೊಂಟೆ
ಈವೊಂಟೆ
ಈ + ಓಕುಳಿ = ಈ + ಯ್ + ಓಕುಳಿ=ಈಯೋಕುಳಿ
ಈವೋಕುಳಿ
ಈ + ಓಲೆ = ಈ + ಯ್ + ಓಲೆ=ಈಯೋಲೆ
ಈವೋಲೆ
ಈ ಮೇಲೆ ಹೇಳಿದ ಕಡೆಗಳಲ್ಲಿ ಸಂಧಿಗಳನ್ನು ಮಾಡದೆಯೆ ಈ ಉದಕ, ಈ ಊರು, ಈ ಒಂಟೆ, ಈ ಓಲೆ ಹೀಗೆಯೂ ಬರೆಯಬಹುದು
(v) ಕಾರದ ಮುಂದೆ ಸ್ವರ ಬಂದರೆ ವ ಕಾರಾಗಮ ಬರುವುದೆಂದು ಹಿಂದೆ ಹೇಳಿದೆಯಷ್ಟೆ.  ಆದರೆ ಕೆಲವು ಕಡೆ ಯಕಾರಾಗಮ ಬರುವುದುಂಟು.
ಉದಾಹರಣೆಗೆ:-
ಗೋ + ಅನ್ನು = ಗೋವನ್ನು (ವಕಾರಾಗಮ ಬಂದಿದೆ)
(ಓ + ಅ)
ನೋ + ಅಲು = ನೋಯಲು (ಯಕಾರಾಗಮ ಬಂದಿದೆ)
(ಓ + ಅ)

. ಆದೇಶ ಸಂಧಿ
ಇದುವರೆಗೆ ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿಯೋ, ಆಗಮಸಂಧಿಯೋ ಆಗುವ ವಿಚಾರ ನೋಡಿದೆವು.  ಈಗ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ‍್ಯ ನಡೆಯುವುದೆಂಬುದನ್ನು ತಿಳಿಯೋಣ.
ಮಳೆ + ಕಾಲ = ಮಳೆಗಾಲ (ಮಳೆ + ಗ್‌ಆಲ)
ಚಳಿ + ಕಾಲ = ಚಳಿಗಾಲ (ಚಳಿ +ಗ್‌ಆಲ)
ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್‌ಆವರೆ)
ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್‌ಎಟ್ಟು)
ಕಣ್ + ಪನಿ = ಕಂಬನಿ (ಕಂ + ಬ್‌ಅನಿ)
ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ಉತ್ತರಪದ] ದ ಮೊದಲನೆಯ ಕ ಕಾರಕ್ಕೆ ಗ ಕಾರ ಬಂದಿದೆ.  ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ.  ಬೆಟ್ಟ + ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ಕಾರಕ್ಕೆ ಕಾರ ಬಂದಿದೆ.  [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ] ಕಣ್ + ಪನಿ ಎಂಬಲ್ಲಿ ಪ ಕಾರಕ್ಕೆ ಬ ಕಾರ ಬಂದಿದೆ.  ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು.   ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.
(೧೮) ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು.
ಹಾಗಾದರೆ ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರುವುದು? ಎಂಬುದನ್ನು ವಿವರವಾಗಿ ತಿಳಿಯೋಣ.
(i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕ ತ ಪ ವ್ಯಂಜನಗಳಿಗೆ ಕ್ರಮವಾಗಿ ಗ ದ ಬ ವ್ಯಂಜನಗಳು ಆದೇಶವಾಗಿ ಬರುವುವು.
ಉದಾಹರಣೆಗೆ:-
ಹುಲ್ಲು + ಕಾವಲು=*ಹುಲ್ಲು + ಗ್ ಆವಲು=ಹುಲ್ಲುಗಾವಲು
(ಕಕಾರಕ್ಕೆ ಗಕಾರಾದೇಶ)
ಹಳ + ಕನ್ನಡ=ಹಳ + ಗ್ ಅನ್ನಡ=ಹಳಗನ್ನಡ
(ಕಕಾರಕ್ಕೆ ಗಕಾರಾದೇಶ)
ಕಳೆ + ಕೂಡಿ=ಕಳೆ + ಗ್ ಊಡಿ=ಕಳೆಗೂಡಿ
(ಕಕಾರಕ್ಕೆ ಗಕಾರಾದೇಶ)
ಎಳೆ + ಕರು=ಎಳೆ + ಗ್ ಅರು=ಎಳೆಗರು
(ಕಕಾರಕ್ಕೆ ಗಕಾರಾದೇಶ)
ಮನೆ + ಕೆಲಸ=ಮನೆ + ಗ್ ಎಲಸ=ಮನೆಗೆಲಸ
(ಕಕಾರಕ್ಕೆ ಗಕಾರಾದೇಶ)
ಮೈ + ತೊಳೆ=ಮೈ + ದ್ ಒಳೆ=ಮೈದೊಳೆ
(ತಕಾರಕ್ಕೆ ದಕಾರಾದೇಶ)
ಮೇರೆ + ತಪ್ಪು=ಮೇರೆ + ದ್ ಅಪ್ಪು=ಮೇರೆದಪ್ಪು
(ತಕಾರಕ್ಕೆ ದಕಾರಾದೇಶ)
ಕಣ್ + ಪನಿ=ಕಣ್ + ಬ್ ಅನಿ=ಕಂಬನಿ
(ಪಕಾರಕ್ಕೆ ಬಕಾರಾದೇಶ)
ಬೆನ್ + ಪತ್ತು=ಬೆನ್ + ಬ್ ಅತ್ತು=(ಬೆಂಬತ್ತು)
(ಪಕಾರಕ್ಕೆ ಬಕಾರಾದೇಶ)
ಕೆಲವು ಕಡೆ ಈ ಆದೇಶಗಳು ಬಾರದೆ ಇರುವುದೂ ಉಂಟು
ಮನೆ + ಕಟ್ಟು     =        ಮನೆಕಟ್ಟು
ತಲೆ + ಕಟ್ಟು      =        ತಲೆಕಟ್ಟು
(ii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪ ಬ ಮ ವ್ಯಂಜನಗಳಿಗೆ ವ ಕಾರವು ಆದೇಶವಾಗಿ ಬರುವುದು
ಉದಾಹರಣೆಗೆ:-
ನೀರ್ + ಪೊನಲ್=ನೀರ್ + ವ್ ಒನಲ್ = ನೀರ‍್ವೊನಲ್
(ಪಕಾರಕ್ಕೆ ವಕಾರಾದೇಶ)
ಎಳ + ಪೆರೆ=ಎಳ + ವ್ ಎರೆ = ಎಳವರೆ
(ಪಕಾರಕ್ಕೆ ವಕಾರಾದೇಶ)
ಬೆಮರ್ + ಪನಿ=ಬೆಮರ್ + ವ್ ಅನಿ = ಬೆಮರ್ವನಿ
(ಪಕಾರಕ್ಕೆ ವಕಾರಾದೇಶ)
ಬೇರ್ + ಬೆರಸಿ=ಬೇರ್ + ವ್ ಎರಸಿ = ಬೇರ‍್ವೆರಸಿ
(ಬಕಾರಕ್ಕೆ ವಕಾರಾದೇಶ)
ಕಡು + ಬೆಳ್ಪು=ಕಡು + ವ್ ಎಳ್ಪು =  ಕಡುವೆಳ್ಪು
(ಬಕಾರಕ್ಕೆ ವಕಾರಾದೇಶ)
ಎಳ + ಬಳ್ಳಿ=ಎಳ + ವ್ ಅಳ್ಳಿ = ಎಳವಳ್ಳಿ
(ಬಕಾರಕ್ಕೆ ವಕಾರಾದೇಶ)
ಮೆಲ್ + ಮಾತು=ಮೆಲ್ + ವ್ ಆತು = ಮೆಲ್ವಾತು
(ಮಕಾರಕ್ಕೆ ವಕಾರಾದೇಶ)
ನೆಲೆ + ಮನೆ=ನೆಲೆ + ವ್ ಅನೆ = ನೆಲೆವನೆ
(ಮಕಾರಕ್ಕೆ ವಕಾರಾದೇಶ)
ಇದರ ಹಾಗೆ…….ಕಿಸುವಣ್, ಎಸರ‍್ವೊಯ್ದು, ಚೆಲ್ವೆಳಕು, ಕೆನೆವಾಲ್, ಕೈವಿಡಿ, ನೆರೆವೀದಿ, ಪೊರೆವೀಡು ಇತ್ಯಾದಿಗಳಲ್ಲಿ ವಕಾರಾದೇಶ ಬಂದಿರುವುದನ್ನು ಗಮನಿಸಿರಿ.
ಈ ಆದೇಶವು ಕೆಲವು ಕಡೆ ಬರುವುದಿಲ್ಲ.  ಅದಕ್ಕೆ ಉದಾಹರಣೆ:-
ಕಣ್ + ಬೇಟ = ಕಣ್ಬೇಟ (ಕಣ್ವೇಟ ಆಗುವುದಿಲ್ಲ)
ಕಿಳ್ + ಪೊಡೆ = ಕಿಳ್ಪೊಡೆ (ಕಿಳ್ವೊಡೆ ಆಗುವುದಿಲ್ಲ)
ಪಾಳ್ + ಮನೆ = ಪಾಳ್ಮನೆ (ಪಾಳ್ವನೆ ಆಗುವುದಿಲ್ಲ)
(iii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಸಕಾರಕ್ಕೆ ಸಾಮಾನ್ಯವಾಗಿ ಕೆಲವು ಕಡೆ ಚಕಾರವೂ, ಕೆಲವು ಕಡೆ ಜಕಾರವೂ, ಕೆಲವು ಕಡೆ ಛಕಾರವೂ ಆದೇಶವಾಗಿ ಬರುವುದುಂಟು. ಆದರೆ ಪೂರ್ವಪದದ ಕೊನೆಯಲ್ಲಿ ಯ್, ಲ್ ಗಳು ಇರಬಾರದು.
ಉದಾಹರಣೆಗೆ:-
() ಸಕಾರಕ್ಕೆ ಚಕಾರ ಬರುವುದಕ್ಕೆ__ಇನ್ + ಸರ = ಇನ್ + ಚ್ ಅರ = ಇಂಚರ
ನುಣ್ + ಸರ = ನುಣ್ + ಚ್ ಅರ = ನುಣ್ಚರ
() ಸಕಾರಕ್ಕೆ ಜಕಾರ ಬರುವುದಕ್ಕೆ__ಮುನ್ + ಸೆರಂಗು = ಮುನ್ + ಜ್ ಎರಂಗು = ಮುಂಜೆರಂಗು
ಮುನ್ + ಸೊಡರ್ = ಮುನ್ + ಜ್ ಒಡರ್ = ಮುಂಜೊಡರ್
ತಣ್ + ಸೊಡರ್ = ತಣ್ + ಜ್ ಒಡರ್ = ತಣ್ಜೊಡರ್
() ಸಕಾರಕ್ಕೆ ಛಕಾರ ಬರುವುದಕ್ಕೆ__
ಇರ್ + ಸಾಸಿರ = ಇರ್ + ಛ್ ಆಸಿರ = ಇರ್ಚ್ಛಾಸಿರ
ಪದಿನೆಣ್ + ಸಾಸಿರ = ಪದಿನೆಣ್ + ಛ್ ಆಸಿರ = ಪದಿನೆಣ್ಛಾಸಿರ
ನೂರ್ + ಸಾಸಿರ = ನೂರ್ + ಛ್ ಆಸಿರ = ನೂರ್ಛಾಸಿರ
ಕೆಲವು ಕಡೆ ಈ ಸಕಾರಕ್ಕೆ ಯಾವ ಆದೇಶಗಳೂ ಬಾರದಿರುವುದುಂಟು.
ಬಾಯ್ + ಸವಿ = ಬಾಯ್ಸವಿ, ಬೆಳ್ಸರಿ, ಕಣ್ಸೋಲ, ಕಣ್ಸ್‌ವಿ, ಮೆಲ್ಸರ, ಮೆಯ್ಸವಿ, ಬಲ್ಸೋನೆ.

[1] ‘ಕಾ’ ಎಂಬುದು ‘ರಕ್ಷಣೆ ಮಾಡು’ ಎಂಬರ್ಥದಲ್ಲಿ ಏಕಾಕ್ಷರಧಾತು.  ಹೊಸಗನ್ನಡದಲ್ಲಿ ‘ಕಾ’ ಧಾತು ‘ಕಾಯ್’ ಆಗುವುದೆಂದು ಕೆಲವರು ಒಪ್ಪುತ್ತಾರೆ.
[2] ಮೀ ಎಂಬುದೂ ಕೂಡ ಸ್ನಾನಮಾಡು ಎಂಬರ್ಥದ ಕನ್ನಡ ಏಕಾಕ್ಷರ ಧಾತು.
[3] ಮೇ ಎಂಬುದೂ ಕೂಡ ಪಶುಗಳ ಆಹಾರ ಭಕ್ಷಣೆಯ ಅರ್ಥದಲ್ಲಿ ಏಕಾಕ್ಷರ ಧಾತುವಾಗಿದೆ.
[4] ಆ ಶಬ್ದವೆಂದರೆ, ಕೆಲವು ಕಡೆ ಅವನು, ಅವಳು, ಅದು ಎಂಬ ಸರ್ವನಾಮಗಳಿಗೆ ಆ ಎಂಬುದು ಆದೇಶವಾಗಿ ಬರುವುದು.  ಹಾಗೆ ಆದೇಶವಾಗಿ ಬಂದ ಆಕಾರವೇ ಆ ಶಬ್ದವೆನಿಸುವುದು.  ಉದಾ.:-ಅವನು+ಗಂಡಸು= ಆ ಗಂಡಸು; ಅವಳು+ಹೆಂಗಸು=ಆ ಹೆಂಗಸು; ಅದು+ಕಲ್ಲು= ಆ ಕಲ್ಲು ಇದರಂತೆ ಕೆಲವು ಕಡೆ – ಇವನು+ಗಂಡಸು=ಈ ಗಂಡಸು; ಇವಳು+ಹೆಂಗಸು=ಈ ಹೆಂಗಸು; ಇದು+ಕಲ್ಲು=ಈ ಕಲ್ಲು – ಇತ್ಯಾದಿ ಕಡೆಗಳಲ್ಲಿ ಇವನು, ಇವಳು, ಇದು ಎಂಬುದಕ್ಕೆ ಈ ಆದೇಶವಾಗಿ ಬಂದರೆ ಇದನ್ನು ಈ ಶಬ್ದವೆನ್ನುವರು
[5] ಎರಡು ಪದಗಳಲ್ಲಿ ಮೊದಲನೆಯ ಪದ ಪೂರ್ವಪದ; ಎರಡನೆಯ ಪದ ಉತ್ತರಪದ.  ಸಮಾಸದಲ್ಲಿ ಹೀಗೆ ಹೇಳುವುದು ವಾಡಿಕೆ.  ಮಳೆಯ + ಕಾಲ-ಎಂಬೆರಡು ಪದಗಳಲ್ಲಿ ಮಳೆಯ ಎಂಬುದು ಪೂರ್ವಪದ; ಕಾಲ ಎಂಬುದು ಉತ್ತರ ಪದ ಹೀಗೆ ತಿಳಿಯಬೇಕು
[6] ಸಮಾಸ ಎಂದರೇನು? ಎಂಬುದನ್ನು ಮುಂದೆ ಸಮಾಸ ಪ್ರಕರಣ ಎಂಬ ಹೆಸರಿನ ಭಾಗದಲ್ಲಿ ವಿವರಿಸಿದೆ.  ಆಗ ಸ್ಪಷ್ಟವಾಗಿ ತಿಳಿದುಬರುವುದು.  ಈಗ ಸಂಧಿಕಾರ‍್ಯಗಳನ್ನಷ್ಟು ಗಮನಿಸಿದರೆ ಸಾಕು.
* ಇಲ್ಲಿ ಹುಲ್ಲು + ಕಾವಲು-ಎಂಬಲ್ಲಿ ಹುಲ್ಲು + ಕ್ + ಆವಲು = ಹುಲ್ಲುಗ್‌ಆವಲು = ಹುಲ್ಲುಗಾವಲು ಎಂದು ಕ್ ವ್ಯಂಜನಕ್ಕೆ ಗ್ ವ್ಯಂಜನ ಬಂದಿದೆ ಎಂದು ತಿಳಿಯಬೇಕು.  ಇದರಂತೆ ಉಳಿದವುಗಳನ್ನೂ ತಿಳಿಯಬೇಕು.
[7] ಪ ಬ ಮ ವ್ಯಂಜನಗಳಿಗೆ ಎಂದರೆ ಪ್, ಬ್, ಮ್‌ಗಳಿಗೆ ಎಂದೂ, ವಕಾರವೆಂದರೆ ವ್ ಎಂಬ ವ್ಯಂಜನವೆಂದೂ ತಿಳಿಯಬೇಕು.  ಉಚ್ಚಾರಣೆಯ ಸೌಲಭ್ಯ ದೃಷ್ಟಿಯಿಂದ ಪ ಬ ಮ ವ-ಇತ್ಯಾದಿ ಬರೆದಿದೆ.  ಆದೇಶ ಬರುವುದು ಕೇವಲ ವ್ಯಂಜನಾಕ್ಷರಕ್ಕೇ ಎಂದು ಎಲ್ಲ ಕಡೆಗೂ ತಿಳಿಯಬೇಕು.
ಪ್ರಕೃತಿ ಭಾವ
ಇದುವರೆಗೆ ಕನ್ನಡದ ಸಂಧಿಗಳಾದ ಲೋಪ, ಆಗಮ, ಆದೇಶ ಸಂಧಿಗಳ ವಿಚಾರವಾಗಿ ತಿಳಿದಿರಿ.  ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮಗಳಲ್ಲಿ ಯಾವುದಾದ ರೊಂದು ಸಂಧಿಯಾಗಬೇಕು ಎಂದು ಹಿಂದೆ ಹೇಳಲಾಯಿತು.  ಆದರೆ ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ:-
ಅಹಹಾ + ಎಷ್ಟು ಚೆನ್ನಾಗಿದೆ?
ಅಯ್ಯೋ + ಇದೇನು?
ಓಹೋ + ಇದೇನು?
ಓಹೋ + ಅವನು ಬಂದನೇ?
ಅಕ್ಕಾ + ಇತ್ತ ಬಾ
ಮೇಲಿನ ನಾಲ್ಕು ವಾಕ್ಯಗಳನ್ನು ನೋಡಿರಿ. ಅಹಹಾ + ಎಷ್ಟು ಚೆನ್ನಾಗಿದೆ, ಆ ಕಾರಕ್ಕೆ (ಹ್ ವ್ಯಂಜನದ ಮುಂದಿನ ಆಕಾರಕ್ಕೆ) ಎ ಕಾರ ಪರವಾಗಿದೆ (ಎದುರಿಗೆ ಬಂದಿದೆ).  ಹಿಂದೆ ಹೇಳಿದ ನಿಯಮದ ಪ್ರಕಾರ ಇಲ್ಲಿ ಯಕಾರಾಗಮವಾಗಬೇಕಾಗಿತ್ತಲ್ಲವೆ? ಅದರಂತೆ, ಅಯ್ಯೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ.  ಓಹೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ, ಅಕ್ಕಾ + ಇತ್ತ ಎಂಬಲ್ಲಿಯೂ ಆ ಕಾರದ ಮುಂದೆ ಇ ಕಾರ ಬಂದಿದೆ.  ಈ ನಾಲ್ಕೂ ಕಡೆಯಲ್ಲೂ ಸ್ವರದ ಮುಂದೆ ಸ್ವರ ಬಂದಿದ್ದರೂ ಲೋಪವನ್ನಾಗಲಿ, ಆಗಮವನ್ನಾಗಲಿ ಮಾಡಲೇಬಾರದು.  ಅವು ಹೇಗಿವೆಯೋ ಹಾಗೇ ಬಿಡಬೇಕು.  ಹೀಗೆ ಇದ್ದ ರೀತಿಯಲ್ಲೇ ಇರುವುದಕ್ಕೆ ಪ್ರಕೃತಿಭಾವ ಎಂದು ವ್ಯಾಕರಣದಲ್ಲಿ ಹೇಳುತ್ತಾರೆ.  ಆದ್ದರಿಂದ ಪ್ರಕೃತಿ ಭಾವಕ್ಕೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-
(೧೯) ಸ್ವರದ ಮುಂದೆ ಸ್ವರವು ಬಂದರೂ, ಕೆಲವು ಕಡೆಗಳಲ್ಲಿ ಲೋಪ, ಆಗಮ ಮೊದಲಾದ ಸಂಧಿಕಾರ‍್ಯಗಳಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿ ಭಾವವೆನ್ನುವರು.
ಹಾಗಾದರೆ ಎಂಥ ಕಡೆ ಈ ಪ್ರಕೃತಿಭಾವ ಬರುವುದೆಂಬುದನ್ನು (ಸಂಧಿಕಾರ‍್ಯವಾಗದಿರು ವಿಕೆಯನ್ನು) ಗಮನಿಸಿರಿ:-
(i) ಪ್ಲುತಸ್ವರಗಳ ಮುಂದೆ ಸ್ವರಪರವಾದರೆ ಸಂಧಿಕಾರ‍್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಅಣ್ಣಾ()+ಇತ್ತಬಾ=ಅಣ್ಣಾ, ಇತ್ತ ಬಾ
ದೇವರೇ()+ಇನ್ನೇನು ಗತಿ=ದೇವರೇ, ಇನ್ನೇನು ಗತಿ
ಅಮ್ಮಾ()+ಅದು ಬೇಕು=ಅಮ್ಮಾ, ಅದು ಬೇಕು
ರಾಮಾ()+ಅಲ್ಲಿ ನೋಡು=ರಾಮಾ, ಅಲ್ಲಿ ನೋಡು
ಗುರುವೇ()+ಉದ್ಧರಿಸು=ಗುರುವೇ, ಉದ್ಧರಿಸು
(ii) ಭಾವಸೂಚಕಾವ್ಯಯಗಳಾದ ಅಹಹಾ! ಅಬ್ಬಾ! ಅಯ್ಯೋ! ಅಕ್ಕಟಾ! ಓಹೋ! ಛೇ! __ ಇತ್ಯಾದಿ ಶಬ್ದಗಳ ಮುಂದೆ ಸ್ವರ ಪರವಾದಾಗ ಸಂಧಿ ಕಾರ‍್ಯಗಳಾಗುವುದಿಲ್ಲ.
(ಬಹುಶಃ ಈ ಭಾವಸೂಚಕಾವ್ಯಯಗಳೆಲ್ಲ ಸ್ವರಾಂತಗಳಾಗಿರುತ್ತವೆ.  ಇವುಗಳ ಮುಂದೆ ಸ್ವರ ಬಂದರೆ ಪ್ರಕೃತಿಭಾವ ಬರುವುದು)
ಉದಾಹರಣೆಗೆ:-
ಅಯ್ಯೋ + ಅವನಿಗೇನಾಯಿತು?  = ಅಯ್ಯೋ! ಅವನಿಗೇನಾಯಿತು?
ಅಬ್ಬಾ + ಅದು ಹಾವೇ?  =  ಅಬ್ಬಾ! ಅದು ಹಾವೇ?
ಅಕ್ಕಟಾ + ಇಂದ್ರನಿಗೆ ಹಾನಿಯೇ?  = ಅಕ್ಕಟಾ! ಇಂದ್ರನಿಗೆ ಹಾನಿಯೇ?
ಓಹೋ + ಅವನೇನು?  =  ಓಹೋ! ಅವನೇನು?
ಎಲಾ + ಅಧಮನೇ?  =  ಎಲಾ! ಅಧಮನೇ
ಛೇ + ಅದೆಲ್ಲಿ  =  ಛೇ! ಅದೆಲ್ಲಿ.

(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ಸಂಧಿಕಾರ್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಆ + ಅಂಗಡಿ = ಆ ಅಂಗಡಿ
ಆ + ಅರಸು = ಆ ಅರಸು
ಆ + ಐಶ್ವರ್ಯ = ಆ ಐಶ್ವರ್ಯ
ಆ + ಆಡು = ಆ ಆಡು
ಆ + ಆಕಳು = ಆ ಆಕಳು
ಆ + ಔನ್ನತ್ಯ = ಆ ಔನ್ನತ್ಯ
ಆ + ಔದಾರ‍್ಯ = ಆ ಔದಾರ್ಯ

[1] ಪ್ಲುತಸ್ವರವೆಂದರೆ ಸಂಬೋಧನೆಯಲ್ಲಿ ಬರುವ ಸ್ವರ.  ಈ ಉದಾಹರಣೆಗಳಲ್ಲಿ(೩) ಈ ಗುರುತಿನಿಂದ ಸೂಚಿಸಿರುವ ಸ್ವರಗಳೆಲ್ಲ ಪ್ಲುತಗಳೆಂದು ತಿಳಿಯಬೇಕು.  ಹಿಂದೆ ಸ್ವರಗಳನ್ನು ಹೇಳಿದ ಕಡೆ ಅಂದರೆ ಸಂಜ್ಞಾಪ್ರಕರಣದಲ್ಲಿ ಈ ವಿಷಯ ತಿಳಿಸಿದೆ.
[2] ಈ ಭಾವಸೂಚಕಾವ್ಯಯಗಳನ್ನು ನಿಪಾತಾವ್ಯಯಗಳೆಂದೂ ಕರೆಯುವರು.
           
            ಇದುವರೆಗೆ ಕನ್ನಡ ಭಾಷೆಯಲ್ಲಿ ಬರುವ ಲೋಪ, ಆಗಮ, ಆದೇಶ ಸಂಧಿಗಳ ಬಗೆಗೆ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮ ಸಂಧಿಗಳಾಗುತ್ತವೆ. ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದರೆ ಆಗುವ ಆದೇಶ ಸಂಧಿಗಳ ಸ್ಥೂಲಪರಿಚಯ ಮಾಡಿಕೊಂಡಿರಿ. ಅನಂತರ ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇರುವ ಪ್ರಕೃತಿಭಾವವನ್ನೂ ಅರಿತಿರಿ. ಇದನ್ನು ಕೆಳಗೆ ಸೂಚಿಸಿರುವ ರೇಖಾ ಚಿತ್ರಗಳ ಮೂಲಕ ಸ್ಥೂಲವಾಗಿ ನೆನಪಿನಲ್ಲಿ ಇಟ್ಟುಕೊಳ್ಳಿರಿ.
() ಕನ್ನಡ ಸಂಧಿಗಳು
ಲೋಪ ಸ್ವರ+ಸ್ವರ-ಪೂರ್ವದ ಸ್ವರಕ್ಕೆ ಅರ್ಥಹಾನಿಯಾಗದಾಗ ಲೋಪಆಗಮ ಸ್ವರ+ಸ್ವರ-ಮಧ್ಯದಲ್ಲಿ
ಯಕಾರ ಅಥವಾ
ವಕಾರಾಗಮ         
ಆದೇಶ  ಸ್ವರ+ವ್ಯಂಜನ, ವ್ಯಂಜನ+ವ್ಯಂಜ ೧. ಉತ್ತರಪದದ ಆದಿಯ ಕ ತ ಪ ಗಳು ಗ ದ ಬ ಗಳಾಗುತ್ತವೆ.
೨.  ಪ ಬ ಮ ಗಳಿಗೆ ವಕಾರ ಆದೇಶವಾಗುತ್ತದೆ.
೩.  ಸ ಕಾರಕ್ಕೆ ಚ ಜ ಛ ಗಳು ಆದೇಶವಾಗುತ್ತವೆ.
() ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದಿರುವುದು ಪ್ರಕೃತಿಭಾವ

ಸಂಸ್ಕೃತ ಸಂಧಿಗಳು

. ಸಂಸ್ಕೃತ ಸ್ವರ ಸಂಧಿಗಳು

() ರಾಮಾಯಣವು ಮಹೋನ್ನತ ಗ್ರಂಥ.
() ಸೂರ್ಯೋದಯ ಸಮಯವು ಅತ್ಯಂತ ಮನೋಹರವಾದುದು.
ಮೇಲಿನ ಈ ಎರಡೂ ವಾಕ್ಯಗಳು ಕನ್ನಡ ವಾಕ್ಯಗಳೇ ಅಲ್ಲವೆ?  ಆದರೆ ಇದರಲ್ಲಿ ಸಂಸ್ಕೃತದಿಂದ ಬಂದ ಶಬ್ದಗಳೇ ಹೆಚ್ಚಾಗಿವೆ.  ರಾಮಾಯಣ  ಮಹೋನ್ನತ  ಗ್ರಂಥ  ಸೂರ‍್ವೋದಯ ಸಮಯ ಅತ್ಯಂತ ಮನೋಹರ -ಹೀಗೆ ಈ ಏಳೂ ಶಬ್ದಗಳು ಸಂಸ್ಕೃತ ಶಬ್ದಗಳೇ ಆಗಿವೆ.  ಹೀಗೆ ನಮ್ಮ ಭಾಷೆಯಲ್ಲಿ ಸಾವಿರಾರು ವರ್ಷಗಳಿಂದ ಸಂಸ್ಕೃತದ ಅನೇಕ ಶಬ್ದಗಳು ಬಂದು ಸೇರಿವೆ.  ನಮ್ಮ ಕವಿಗಳು ತಮ್ಮ ಕಾವ್ಯಗಳಲ್ಲಿ ಲೆಕ್ಕವಿಲ್ಲದಷ್ಟು ಸಂಸ್ಕೃತ ಶಬ್ದಗಳನ್ನು ಸೇರಿಸಿ ಕಾವ್ಯ ಬರೆದಿದ್ದಾರೆ. ಆದ್ದರಿಂದ ಸಂಸ್ಕೃತದಿಂದ ಕನ್ನಡಕ್ಕೆ ಬಂದು ಬಳಸಲ್ಪಡುತ್ತಿರುವ ಶಬ್ದಗಳ ಸಂಧಿಕಾರ‍್ಯಗಳೇನೆಂಬುದನ್ನು ಕನ್ನಡ ಭಾಷಾಜ್ಞಾನದ ದೃಷ್ಟಿಯಿಂದ ತಿಳಿಯುವುದು ಉಪಯುಕ್ತವಾದುದು.
ಎರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯೇ ಆಗುತ್ತದೆ.  ಒಂದು ಸಂಸ್ಕೃತ ಶಬ್ದವು ಕನ್ನಡ ಶಬ್ದದೊಡನೆ ಸೇರಿ ಸಂಧಿಯಾದರೆ ಕನ್ನಡ ಸಂಧಿಯೇ ಆಗುತ್ತದೆ.
ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾಗಿ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾಗಿ ವ್ಯಂಜನ ಸಂಧಿಗಳೂ ಆಗುವುವು.  ಮೊದಲು ಸ್ವರಸಂಧಿಗಳ ವಿಚಾರ ತಿಳಿಯೋಣ.

() ಸವರ್ಣ ದೀರ್ಘ ಸಂಧಿ
(ಅ) ವಿದ್ಯಾಭ್ಯಾಸ ಮಾಡಿದನು.
(ಆ) ರಾಮಾಯಣವನ್ನು ಓದು.
(ಇ) ಹರೀಶ್ವರನು ಕನ್ನಡ ಕವಿ.
(ಈ) ಗುರೂಪದೇಶವನ್ನು ಪಡೆ.
ಈ ವಾಕ್ಯಗಳಲ್ಲಿ ವಿದ್ಯಾಭ್ಯಾಸ ರಾಮಾಯಣ ಹರೀಶ್ವರ ಗುರೂಪದೇಶ ಈ ಶಬ್ದಗಳಲ್ಲಿ ಆಗಿರುವ ಸಂಧಿಕಾರರ್ಯಗಳನ್ನು ಗಮನಿಸಿರಿ.
ವಿದ್ಯಾ + ಅಭ್ಯಾಸ = ವಿದ್‌ಯ್ + ಆ + ಭ್ಯಾಸ = ವಿದ್ಯಾಭ್ಯಾಸ  (ಆ + ಅ)
ಇಲ್ಲಿ ಆ ಎಂಬ ಸ್ವರದ ಮುಂದೆ ಅ ಎಂಬ ಸ್ವರ ಬಂದಿದೆ.  ಈ ಎರಡೂ ಸ್ವರಗಳು ಸವರ್ಣಸ್ವರಗಳು, ಅಂದರೆ ಸಮಾನ ಸ್ಥಾನದಲ್ಲಿ ಹುಟ್ಟಿದವುಗಳು.  ಒಂದು ಹ್ರಸ್ವ, ಒಂದು ದೀರ್ಘ ಅಷ್ಟೆ.
ಇವು ಹೀಗೆ ಒಂದರ ಮುಂದೆ ಒಂದು ಬಂದಾಗ ಅವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಅದರದೇ ಒಂದು ದೀರ್ಘಸ್ವರವು ಬರುವುದು.  ಹೀಗೆ ಬರುವುದು ಆದೇಶವೆಂದು ಹಿಂದೆ ತಿಳಿದಿದ್ದೀರಿ.  ಇದರ ಹಾಗೆಯೇ ಹರೀಶ್ವರ ಶಬ್ದವು-
ಹರಿ + ಈಶ್ವರ = ಹರ್ + ಈ + ಶ್ವರ = ಹರೀಶ್ವರ-ಎಂಬಲ್ಲಿ (ಇ + ಈ)
ಇ ಕಾರದ ಮುಂದೆ ಈ ಕಾರ ಬಂದಿದೆ.  ಇವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಈ ಎಂಬ ದೀರ್ಘಸ್ವರ ಆದೇಶವಾಗಿ ಬರುವುದು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೦) ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಉದಾಹರಣೆಗೆ:-
ದೇವ + ಅಸುರ = ದೇವಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(ಅ + ಅ)
ಸುರ + ಅಸುರ = ಸುರಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(ಅ + ಅ)
ಮಹಾ + ಆತ್ಮಾ = ಮಹಾತ್ಮ (ಆಕಾರಕ್ಕೆ ಆಕಾರ ಪರವಾಗಿ ಒಂದು ದೀರ್ಘಸ್ವರ ಆದೇಶ)
(ಆ + ಆ)
ಕವಿ + ಇಂದ್ರ = ಕವೀಂದ್ರ (ಇಕಾರಕ್ಕೆ ಇಕಾರ ಪರವಾಗಿ ಈಕಾರಾದೇಶ)
(ಇ + ಇ)
ಗಿರಿ + ಈಶ = ಗಿರೀಶ (ಇಕಾರಕ್ಕೆ ಈಕಾರ ಪರವಾಗಿ ಈಕಾರಾದೇಶ)
(ಇ + ಈ)
ಲಕ್ಷೀ + ಈಶ = ಲಕ್ಷೀಶ (ಈಕಾರಕ್ಕೆ ಈಕಾರಪರವಾಗಿ ಈಕಾರಾದೇಶ)
(ಈ + ಈ)
ಗುರು + ಉಪದೇಶ = ಗರೂಪದೇಶ (ಉಕಾರಕ್ಕೆ ಉಕಾರ ಪರವಾಗಿ ಊಕಾರಾದೇಶ)
(ಉ + ಉ)
ವಧೂ + ಉಪೇತ = ವಧೂಪೇತ (ಊಕಾರಕ್ಕೆ ಉಕಾರಪರವಾಗಿ ಊಕಾರಾದೇಶ)
(ಊ + ಉ)

() ಗುಣಸಂಧಿ
(ಅ) ಸುರೇಶನು ಬಂದನು.
(ಆ) ದೇವೇಂದ್ರನ ಸಭೆ.
(ಇ) ಮಹೇಶನನ್ನು ನೋಡು.
(ಈ) ಸೂರ್ಯೋದಯವಾಯಿತು.
(ಉ) ವಾಲ್ಮೀಕಿ ಮಹರ್ಷಿಗಳು ಬಂದರು
ಈ ವಾಕ್ಯಗಳಲ್ಲಿರುವ ಸುರೇಶ, ದೇವೇಂದ್ರ, ಮಹೇಶ, ಸುರ್ಯೋದಯ, ಮಹರ್ಷಿ ಈ ಶಬ್ದಗಳನ್ನು ಬಿಡಿಸಿ ಬರೆದರೆ ಹೇಗಾಗುವುವು ನೋಡಿರಿ.
ಸುರ + ಈಶ = ಸುರೇಶ (ಅ + ಈ = ಏ)
(ಅ + ಈ)
ದೇವ + ಇಂದ್ರ = ದೇವೇಂದ್ರ (ಅ + ಇ = ಏ)
(ಅ + ಇ)
ಮಹಾ + ಈಶ = ಮಹೇಶ (ಆ + ಈ = ಏ)
(ಆ + ಈ)
ಸೂರ‍್ಯ + ಉದಯ = ಸೂರ‍್ಯೋದಯ (ಅ + ಉ = ಓ)
(ಅ + ಉ)
ಮಹಾ + ಋಷಿ = ಮಹರ್‌ಷಿ (ಆ + ಋ = ಆರ್)
(ಆ + ಋ)
ಎಲ್ಲಾ ಉದಾಹರಣೆಗಳಲ್ಲೂ ಪೂರ್ವದ ಸ್ವರವು ಅ ಅಥವಾ ಆ ಆಗಿವೆ.  ಪರದಲ್ಲಿ (ಎದುರಿನಲ್ಲಿ) ಇ, ಈ, ಉ, ಋ ಇತ್ಯಾದಿ ಸ್ವರಗಳಿವೆ.  ಇ ಅಥವಾ ಈ ಪರವಾದಲ್ಲೆಲ್ಲಾ ಏ ಕಾರ ಬಂದಿದೆ.  ಉ ಪರವಾದಲ್ಲಿ ಓ ಕಾರ ಬಂದಿದೆ.  ಋ ಪರವಾದಲ್ಲಿ ಅರ್ ಕಾರ ಬಂದಿದೆ.  ಅಂದರೆ ಪೂರ್ವದ ಮತ್ತು ಪರದ ಎರಡೂ ಸ್ವರಗಳು ಹೋಗಿ ಅವುಗಳ ಸ್ಥಾನದಲ್ಲಿ ಏ ಓ ಅರ್ ಗಳು ಆದೇಶಗಳಾಗಿ ಬಂದಿವೆ ಎಂದ ಹಾಗಾಯಿತು.  ಇದಕ್ಕೆ ಸಾಮಾನ್ಯ ಸೂತ್ರವನ್ನು ಹೀಗೆ ಹೇಳಬಹುದು.
(೨೧) ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು.
ಉದಾಹರಣೆಗೆ:-
ಸುರ + ಇಂದ್ರ = ಸುರೇಂದ್ರ (ಅಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಅ + ಇ)
ಧರಾ + ಇಂದ್ರ = ಧರೇಂದ್ರ (ಆಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಆ + ಇ)
ಮಹಾ + ಈಶ್ವರ = ಮಹೇಶ್ವರ (ಆಕಾರಕ್ಕೆ ಈಕಾರ ಪರವಾಗಿ ಏಕಾರಾದೇಶ)
(ಆ + ಈ)
ಚಂದ್ರ + ಉದಯ = ಚಂದ್ರೋದಯ (ಅಕಾರಕ್ಕೆ ಉಕಾರ ಪರವಾಗಿ ಓಕಾರಾದೇಶ)
(ಅ + ಉ)
ಏಕ + ಊನ = ಏಕೋನ (ಅಕಾರಕ್ಕೆ ಊಕಾರ ಪರವಾಗಿ ಓಕಾರಾದೇಶ)
(ಅ + ಊ)
ದೇವ + ಋಷಿ = ದೇವರ್ಷಿ (ಅಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(ಅ + ಋ)
ಮಹಾ + ಋಷಿ = ಮಹರ್ಷಿ (ಆಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(ಆ + ಋ)

() ವೃದ್ಧಿ ಸಂಧಿ
(೧) ಅವನು ಏಕೈಕ ವೀರನು.
(೨) ಕೃಷ್ಣದೇವರಾಯ ಅಷ್ಟೈಶ್ವರ‍್ಯದಿಂದ ಕೂಡಿದ್ದನು.
(೩) ಹಿಮಾಲಯದಲ್ಲಿ ವನೌಷಧಿಗಳುಂಟು.
(೪) ನಾರಣಪ್ಪ ಮಹೌನ್ನತ್ಯದಿಂದ ಕೂಡಿದ ಕವಿ.
ಈ ಮೇಲಿನ ವಾಕ್ಯಗಳಲ್ಲಿ ಬಂದಿರುವ ಏಕೈಕ, ಅಷ್ಟೈಶ್ವರ‍್ಯ, ವನೌಷದಿ, ಮಹೌನ್ನತ್ಯ ಪದಗಳನ್ನು ಬಿಡಿಸಿ ಬರೆದರೆ ಅವು ಈ ಕೆಳಗಿನಂತೆ ಆಗುವುವು:-
ಏಕ + ಏಕ = ಏಕ್ + ಐಕ (ಅ + ಏ + ಐ)
(ಅ + ಏ)
ಅಷ್ಟ + ಐಶ್ವರ‍್ಯ = ಅಷ್ಟ್ + ಐಶ್ವರ‍್ಯ = ಅಷ್ಟೈಶ್ವರ‍್ಯ (ಅ + ಐ = ಐ)
(ಅ + ಐ)
ವನ + ಓಷಧಿ = ವನ್ + ಔಷಧಿ = ವನೌಷಧಿ (ಅ + ಓ = ಔ)
(ಅ + ಓ)
ಮಹಾ + ಔನ್ನತ್ಯ = ಮಹ್ + ಔನ್ನತ್ಯ = ಮಹೌನ್ನತ್ಯ (ಆ + ಔ = ಔ)
(ಆ + ಔ)
ಪೂರ್ವದಲ್ಲಿ ಎಲ್ಲ ಕಡೆಗೂ ಅ ಅಥವಾ ಆ ಸ್ವರಗಳಿವೆ. ಎದುರಿಗೆ ಏ, ಐ, ಓ, ಔ ಪರವಾಗಿವೆ.  ಏ ಅಥವಾ ಐ ಪರವಾದಾಗ ಒಂದು ಐ ಕಾರವೂ, ಓ ಅಥವಾ ಔ ಪರವಾದಾಗ ಒಂದು ಔ ಕಾರವೂ ಆದೇಶಗಳಾಗಿ ಅಂದರೆ ಆ ಎರಡೂ ಸ್ವರಗಳ ಸ್ಥಾನದಲ್ಲಿ ಬಂದಿವೆ.  ಹಾಗಾದರೆ ಇದರ ಸೂತ್ರವನ್ನು ಹೀಗೆ ಹೇಳಬಹುದು:-
    ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.
ಉದಾಹರಣೆಗೆ:-
ಲೋಕ + ಏಕವೀರ = ಲೋಕೈಕವೀರ (ಅಕಾರಕ್ಕೆ ಏಕಾರ ಪರವಾಗಿ ಐಕಾರಾದೇಶ)
(ಅ + ಏ)
ಜನ + ಐಕ್ಯ = ಜನೈಕ್ಯ (ಅಕಾರಾಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಅ + ಐ)
ವಿದ್ಯಾ + ಐಶ್ವರ‍್ಯ = ವಿದ್ಯೈಶ್ವರ‍್ಯ (ಆಕಾರಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಆ + ಐ)
ಜಲ + ಓಘ = ಜಲೌಘ (ಅಕಾರಕ್ಕೆ ಓಕಾರ ಪರವಾಗಿ ಔಕಾರಾದೇಶ)
(ಅ + ಓ)
ಘನ + ಔದಾರ‍್ಯ = ಘನೌದಾರ‍್ಯ (ಅಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಅ + ಔ)
ಮಹಾ + ಔದಾರ‍್ಯ = ಮಹೌದಾರ‍್ಯ (ಆಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಆ + ಔ)

() ಯಣ್ ಸಂಧಿ
ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ.  ಅದರ ಪ್ರಕಾರ ಯಣ್ ಎಂದರೆ ಯ ವ ರ ಲ ಈ ನಾಲ್ಕು ವ್ಯಂಜನಗಳು. ಯಣ್ ಸಂಧಿಯೆಂದರೆ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದೇ ಆಗಿದೆ.  ಈ ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆಂಬುದನ್ನು ನೋಡಿರಿ:-
(೧) ಅವನು ಅತ್ಯಂತ ಪರಾಕ್ರಮಿ.
(೨) ಈ ಮನ್ವಂತರದಲ್ಲಿ ನಡೆಯಿತು.
(೩) ನಮ್ಮದು ಪಿತ್ರಾರ್ಜಿತವಾದ ಆಸ್ತಿ.
ಈ ಮೂರು ವಾಕ್ಯಗಳಲ್ಲಿ ಬಂದಿರುವ ಅತ್ಯಂತ ಮನ್ವಂತರ ಪಿತ್ರಾರ್ಜಿತ ಈ ಶಬ್ದಗಳನ್ನು ಬಿಡಿಸಿ ಬರೆದರೆ:-
(೧) ಅತಿ + ಅಂತ = ಅತ್ + ಯ್ + ಅಂತ = ಅತ್ಯಂತ (ಇ + ಅ = ಯ್‌ಅ)
ಇಲ್ಲಿ ಇಕಾರದ ಸ್ಥಳದಲ್ಲಿ ಯ್ ಕಾರಾದೇಶವಾಗಿದೆ.
(೨) ಮನು + ಅಂತರ = ಮನ್‌ವ್ + ಅಂತರ = ಮನ್ವಂತರ (ಉ + ಅ =ವ್‌ಅ)
ಇಲ್ಲಿ ಉಕಾರದ ಸ್ಥಾನದಲ್ಲಿ ವ್ ಕಾರಾದೇಶವಾಗಿದೆ.
(೩) ಪಿತೃ + ಆರ್ಜಿತ = ಪಿತ್‌ರ್ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ್‌ಆ)
ಇಲ್ಲಿ ಋಕಾರದ ಸ್ಥಾನದಲ್ಲಿ ರ್ ಕಾರಾದೇಶವಾಗಿದೆ.
ಹಾಗಾದರೆ ಪೂರ್ವದಲ್ಲಿರುವ ಇ, ಉ, ಋ ಕಾರಗಳಿಗೆ, ಕ್ರಮವಾಗಿ ಯ್, ವ್, ರ್ ಗಳು ಆದೇಶವಾಗಿ ಬಂದಿವೆಯೆಂದ ಹಾಗಾಯಿತು.  ಎದುರಿಗೆ ಎಂಥ ಸ್ವರಗಳು ಇರಬೇಕೆಂಬುದಕ್ಕೂ ಒಂದು ನೇಮವಿದೆ.  ಅತಿ + ಇಚ್ಛಾ ಹೀಗೆ ಇಕಾರದ ಮುಂದೆ ಇಕಾರವೇ ಬಂದಿದ್ದರೆ ಅತೀಚ್ಛಾ ಎಂದು ಸವರ್ಣದೀರ್ಘ ಸಂಧಿಯಾಗುತ್ತಿತ್ತು.  ಆದ್ದರಿಂದ ಸವರ್ಣಸ್ವರ ಎದುರಿಗೆ ಬರಬಾರದೆಂದ ಹಾಗಾಯಿತು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
(೨೩) , , , , ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
ಉದಾಹರಣೆಗೆ:-
ಅತಿ + ಅವಸರ = ಅತ್ಯವಸರ    (ಇಕಾರಕ್ಕೆ ಯ್ ಕಾರಾದೇಶ)
(ಇ + ಅ)
ಜಾತಿ + ಅತೀತ = ಜಾತ್ಯಾತೀತ  (ಇಕಾರಕ್ಕೆ ಯ್ ಕಾರಾದೇಶ)
(ಇ + ಅ)
ಕೋಟಿ + ಅಧೀಷ = ಕೋಟ್ಯಧೀಶ (ಇಕಾರಕ್ಕೆ ಯ್ ಕಾರಾದೇಶ)
(ಇ + ಅ)
ಗತಿ + ಅಂತರ = ಗತ್ಯಂತರ       (         “          )
(ಇ + ಅ)
ಪ್ರತಿ + ಉತ್ತರ = ಪ್ರತ್ಯುತ್ತರ       (         “          )
(ಇ + ಉ)
ಪತಿ + ಅರ್ಥ = ಪತ್ಯರ್ಥ           (         “           )
(ಇ + ಅ)
ಅತಿ + ಆಶೆ = ಅತ್ಯಾಶೆ            (         “           )
(ಇ + ಆ)
ಅಧಿ + ಆತ್ಮ = ಅಧ್ಯಾತ್ಮ          (           “           )
(ಇ + ಆ)
ಗುರು + ಆಜ್ಞೆ = ಗುರ‍್ವಾಜ್ಞೆ       (ಉಕಾರಕ್ಕೆ ವ್ ಕಾರಾದೇಶ)
(ಉ + ಆ)
ಮನು + ಆದಿ = ಮನ್ವಾದಿ        (ಉಕಾರಕ್ಕೆ ವ್ ಕಾರಾದೇಶ)
(ಉ + ಆ)
ವಧೂ + ಆಭರಣ = ವಧ್ವಾಭರಣ (ಊಕಾರಕ್ಕೆ ವ್ ಕಾರಾದೇಶ)
(ಊ + ಆ)
ವಧೂ + ಅನ್ವೇಷಣ = ವಧ್ವನ್ವೇಷಣ (ಊಕಾರಕ್ಕೆ ವ್ ಕಾರಾದೇಶ)
(ಊ + ಅ)
ಪಿತೃ + ಅರ್ಥ = ಪಿತ್ರರ್ಥ          (ಋ ಕಾರಕ್ಕೆ ರ್ ಕಾರಾದೇಶ)
(ಋ + ಅ)
ಮಾತೃ + ಅಂಶ = ಮಾತ್ರಂಶ    (           “           )
(ಋ + ಅ)
ಕರ್ತೃ + ಅರ್ಥ = ಕರ್ತ್ರರ್ಥ        (         “           )
(ಋ + ಅ)

. ಸಂಸ್ಕೃತ ವ್ಯಂಜನ ಸಂಧಿಗಳು
() ಜಶ್ತ್ವಸಂಧಿ
ಜಶ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಜಬಗಡದ ಈ ಐದು ವ್ಯಂಜನಗಳನ್ನು ತಿಳಿಸುವ ಒಂದು ಸಂಜ್ಞೆ.  ಜಶ್ತ್ವ ಎಂದರೆ ಈ ಐದು ವರ್ಣಗಳಾದ ಜಬಗಡದ ವ್ಯಂಜನಗಳು ಆದೇಶವಾಗಿ ಬರುವುದು ಎಂದು ಅರ್ಥ.  ಯಾವ ಅಕ್ಷರಕ್ಕೆ ಇವು ಆದೇಶವಾಗಿ ಬರುತ್ತವೆ? ಎಂಬ ಬಗೆಗೆ ತಿಳಿಯೋಣ.
(೧) ದಿಗಂತದಲ್ಲಿ ಪಸರಿಸಿತು.
(೨) ಅಜಂತ ಎಂದರೆ ಸ್ವರಾಂತ ಎಂದು ಸಂಜ್ಞೆ.
(೩) ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಉಂಟು.
(೪) ಆ ಹುಡುಗನ ಹೆಸರು ಸದಾನಂದ ಎಂದು.
(೫) ಅಬ್ಧಿ ಎಂದರೆ ಸಾಗರಕ್ಕೆ ಹೆಸರು.
ಈ ವಾಕ್ಯಗಳಲ್ಲಿ ಬಂದಿರುವ ದಿಗಂತ, ಅಜಂತ, ಷಡಾನನ, ಸದಾನಂದ, ಅಬ್ಧಿ ಈ ಶಬ್ದಗಳನ್ನು ಬಿಡಿಸಿ ಬರೆದರೆ__
ದಿಕ್ + ಅಂತ = ದಿಗ್ + ಅಂತ = ದಿಗಂತ (ಪೂರ್ವದ ಕಕಾರಕ್ಕೆ ಗಕಾರಾದೇಶ)
(ಕ್ + ಅ = ಗ್‌ಅ)
ಅಚ್ + ಅಂತ = ಅಜ್ + ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
(ಚ್ + ಅ = ಜ್‌ಅ)
ಷಟ್ + ಆನನ = ಷಡ್ + ಆನನ = ಷಡಾನನ (ಟಕಾರಕ್ಕೆ ಡಕಾರಾದೇಶ)
(ಟ್ + ಅ = ಡ್‌ಅ)
ಸತ್ + ಆನಂದ = ಸದ್ + ಆನಂದ = ಸದಾನಂದ (ತಕಾರಕ್ಕೆ ದಕಾರಾದೇಶ)
(ತ್ + ಆ = ದ್‌ಆ)
ಅಪ್ + ಧಿ = ಅಬ್ + ಧಿ = ಅಬ್ಧಿ (ಪಕಾರಕ್ಕೆ ಬಕಾರಾದೇಶ)
(ಪ್ + ಧಿ = ಬ್‌ಧಿ)
ಮೇಲಿನ ಈ ಐದೂ ಉದಾಹರಣೆಗಳನ್ನು ಲಕ್ಷ್ಯವಿಟ್ಟು ನೋಡಿದಾಗ, ಪೂರ್ವಶಬ್ದದ ಅಂತ್ಯದಲ್ಲಿರುವ  ಕ್, ಚ್, ಟ್, ತ್, ಪ್ ಗಳಿಗೆ ಕ್ರಮವಾಗಿ ಗ್, ಜ್, ಡ್, ದ್, ಬ್ ಗಳು ಆದೇಶಗಳಾಗಿ ಬಂದಿವೆ.  ಈ ಪೂರ್ವ ಶಬ್ದದಲ್ಲಿರುವ ವರ್ಗಪ್ರಥಮವರ್ಣಗಳಿಗೆ ಅದೇ ವರ್ಗದ ಮೂರನೆಯ ವರ್ಣಗಳು ಆದೇಶಗಳಾಗಿ ಬರುವ ಸಂಧಿಯು ಸಂಸ್ಕೃತ ಶಬ್ದಗಳೇ ಎರಡೂ ಆಗಿದ್ದಾಗ ಮಾತ್ರ ಬರುವುದು.  ಕನ್ನಡದಲ್ಲೂ ಕತಪ ಗಳಿಗೆ ಗದಬ ಗಳು ಆದೇಶವಾಗಿ ಬರುವುದುಂಟು.  ಆದರೆ ಕತಪ ಗಳು ಉತ್ತರಪದದ ಆದಿಯಲ್ಲಿರಬೇಕು.  ಇದು ಕೇವಲ ಕನ್ನಡದ ಆದೇಶಸಂಧಿಯೆಂದು ತಿಳಿಯಬೇಕು.  ಹೀಗೆ ಪೂರ್ವ ಶಬ್ದದ ಕೊನೆಯ ಕಚಟತಪ ಗಳಿಗೆ ಗಜಡದಬ ಗಳು ಆದೇಶವಾಗಿ ಬರುವುದೇ ಜಶ್ತ್ವಸಂಧಿಯೆನಿಸುವುದು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
(೨೪) ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು. ಪ್ರಾಯಶಃ ಎಂದು ಹೇಳಿರುವುದರಿಂದ ಕಖ, ಚಛ, ಟಠ, ತಥ, ಪಫ, , , , , , , ಮ ಅಕ್ಷರಗಳು ಪರವಾದರೆ (ಎದುರಿಗೆ ಬಂದರೆ) ಮೂರನೆಯ ಅಕ್ಷರಗಳು ಆದೇಶವಾಗಿ ಕೆಲವು ಕಡೆ ಬರುವುದಿಲ್ಲ. ಅಂದರೆ ಜಶ್ತ್ವಸಂಧಿಯಾಗುವುದಿಲ್ಲ.
ಉದಾಹರಣೆಗೆ:-
ವಾಕ್+ದೇವಿ=ವಾಗ್‌ದೇವಿ=ವಾಗ್ದೇವಿ(ಕಕಾರಕ್ಕೆ ಗಕಾರಾದೇಶ)
ವಾಕ್+ದಾನ=ವಾಗ್‌ದಾನ=ವಾಗ್ದಾನ(           ”            )
ವಾಕ್+ಅಧಿಪ=ವಾಗ್‌ಅಧಿಪ=ವಾಗಧಿಪ(           ”            )
ದಿಕ್+ದೇಶ=ದಿಗ್‌ದೇಶ=ದಿಗ್ದೇಶ(           ”            )
ದಿಕ್+ದಿಗಂತ=ದಿಗ್‌ದಿಗಂತ=ದಿಗ್ದಿಗಂತ(           ”            )
ದಿಕ್+ದೇವತೆ=ದಿಗ್‌ದೇವತೆ=ದಿಗ್ದೇವತೆ(           ”            )
ಅಚ್+ಅಂತ=ಅಜ್‌ಅಂತ=ಅಜಂತ(ಚಕಾರಕ್ಕೆ ಜಕಾರಾದೇಶ)
ಅಚ್+ಆದಿ=ಅಜ್‌ಆದಿ=ಅಜಾದಿ(           ”            )
ಷಟ್+ಆನನ=ಷಡ್‌ಆನನ=ಷಡಾನನ(ಟಕಾರಕ್ಕೆ ಡಕಾರಾದೇಶ)
ಷಟ್+ಅಂಗ=ಷಡ್‌ಅಂಗ=ಷಡಂಗ(           ”            )
ಷಟ್+ಅಂಗನೆ=ಷಡ್‌ಅಂಗನೆ=ಷಡಂಗನೆ(           ”            )
ವಿರಾಟ್+ರೂಪ=ವಿರಾಡ್‌ರೂಪ=ವಿರಾಡ್ರೂಪ(           ”            )
ಸತ್+ಉದ್ದೇಶ=ಸದ್‌ಉದ್ದೇಶ=ಸದುದ್ದೇಶ(ತಕಾರಕ್ಕೆ ದಕಾರಾದೇಶ)
ಸತ್+ಉತ್ತರ=ಸದ್‌ಉತ್ತರ=ಸದುತ್ತರ(           ”            )
ಚಿತ್+ಆನಂದ=ಚಿದ್‌ಆನಂದ=ಚಿದಾನಂದ(           ”            )
ಸತ್+ಭಾವ=ಸದ್‌ಭಾವ=ಸದ್ಭಾವ(           ”            )
ಸತ್+ಉದ್ಯೋಗ=ಸದ್‌ಉದ್ಯೋಗ=ಸದುದ್ಯೋಗ(           ”            )
ಅಪ್+=ಅಬ್‌ಜ=ಅಬ್ಜ(ಪಕಾರಕ್ಕೆ ಬಕಾರಾದೇಶ)
ಅಪ್+=ಅಬ್‌ದ=ಅಬ್ದ(ಪಕಾರಕ್ಕೆ ಬಕಾರಾದೇಶ)
ಅಪ್+ಅಂಶ=ಅಬ್‌ಅಂಶ=ಅಬಂಶ(ಪಕಾರಕ್ಕೆ ಬಕಾರಾದೇಶ)
ಅಪ್+ಧಿ=ಅಬ್‌ಧಿ=ಅಬ್ಧಿ(ಪಕಾರಕ್ಕೆ ಬಕಾರಾದೇಶ)
ಜಶ್ತ್ವಸಂಧಿಯಾಗದಿರುವುದಕ್ಕೆ ಉದಾಹರಣೆಗಳು
ದಿಕ್+ಚಕ್ರ=ದಿಕ್ಚಕ್ರಇಲ್ಲಿ ಎಲ್ಲಿಯೂ ಮೂರನೆಯ ವರ್ಣದ ಆದೇಶವಿಲ್ಲ
ದಿಕ್+ತಟ=ದಿಕ್ತಟ
ಸತ್+ಕವಿ=ಸತ್ಕವಿ
ದಿಕ್+ಸೂಚಿ=ದಿಕ್ಸೂಚಿ
ವಾಕ್+ಪತಿ=ವಾಕ್ಪತಿ

() ಶ್ಚುತ್ವ ಸಂಧಿ
ಶ್ಚು ಎಂದರೆ ಶಕಾರ ಚವರ್ಗಾಕ್ಷರಗಳು.  (ಶ್=ಶಕಾರ, ಚು=ಚ ಛ ಜ ಝ ಞ) ಈ ಆರು ಅಕ್ಷರಗಳೇ ಶ್ಚು ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ.  ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು.  ಹಾಗಾದರೆ ಇವು ಯಾವ ಅಕ್ಷರಗಳಿಗೆ ಯಾವಾಗ ಅದೇಶವಾಗಿ ಬರುತ್ತವೆಂಬುದನ್ನು ಯೋಚಿಸೋಣ.
ಮನಸ್ + ಶುದ್ಧಿ = ಮನಶ್ + ಶುದ್ಧಿ = ಮನಶ್ಶುದ್ಧಿ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಯಶಸ್ + ಚಂದ್ರಿಕೆ = ಯಶಶ್ + ಚಂದ್ರಿಕೆ = ಯಶಶ್ಚಂದ್ರಿಕೆ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಲಸತ್ + ಚಿತ್ರ = ಲಸಚ್ + ಚಿತ್ರ = ಲಸಚ್ಚಿತ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
ಸತ್ + ಚಿತ್ರ = ಸಚ್ + ಚಿತ್ರ = ಸಚ್ಚಿತ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
ಬೃಹತ್ + ಛತ್ರ = ಬೃಹಚ್ + ಛತ್ರ = ಬೃಹಚ್ಛತ್ರ
(ತಕಾರಕ್ಕೆ ಛಕಾರ ಪರವಾಗಿ, ತಕಾರಕ್ಕೆ ಚಕಾರಾದೇಶ)
ಮೇಲಿನ ಎಲ್ಲ ಉದಾಹರಣೆಗಳನ್ನು ಗಮನವಿಟ್ಟು ನೋಡಿರಿ.  ಶಬ್ದದ ಅಂತ್ಯದಲ್ಲಿ ಸಕಾರ ಇಲ್ಲವೆ ತವರ್ಗದಲ್ಲಿನ ಐದು ಅಕ್ಷರಗಳಲ್ಲಿ ಯುವುದಾದರೊಂದು ಅಕ್ಷರವಿರುತ್ತದೆ.  ಪರದಲ್ಲಿ (ಎದುರಿನಲ್ಲಿ) ಶಕಾರ ಇಲ್ಲವೆ ಚವರ್ಗದಲ್ಲಿನ ಯಾವುದಾದರೊಂದು ಅಕ್ಷರವಿದೆ.  ಹೀಗೆ ಇವು ಒಂದಕ್ಕೊಂದು ಸಂಧಿಸಿದಾಗ ಸ ಕಾರವಿದ್ದಲ್ಲೆಲ್ಲ ಶಕಾರವು, ತವರ್ಗದ ಅಕ್ಷರಗಳಿದ್ದಲ್ಲೆಲ್ಲ ಚವರ್ಗದ ಅಕ್ಷರಗಳು ಆದೇಶಗಳಾಗಿ ಬಂದಿವೆ.  ಅಂದರೆ_
ಸ ತ ಥ ದ ಧ ನ  ಗಳಿಗೆ__
ಶ ಚ ಛ ಜ ಝ ಞ ಅಕ್ಷರಗಳು ಆದೇಶವಾಗಿ ಬರುತ್ತವೆ ಎಂದ ಹಾಗಾಯಿತು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೫) ಸಕಾರತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ (ಎದುರಿಗೆ ಬಂದಾಗ) ಸಕಾರಕ್ಕೆ ಶಕಾರವೂ, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬರುತ್ತವೆ.
ಪಯಸ್ + ಶಯನ = ಪಯಶ್ + ಶಯನ = ಪಯಶ್ಶಯನ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಂಚಲ = ಮನಶ್ + ಚಂಚಲ = ಮನಶ್ಚಂಚಲ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಾಪಲ್ಯ = ಮನಶ್ + ಚಾಪಲ್ಯ = ಮನಶ್ಚಾಪಲ್ಯ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಶರತ್ + ಚಂದ್ರ   = ಶರಚ್ + ಚಂದ್ರ = ಶರಚ್ಚಂದ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
ಜಗತ್ + ಜ್ಯೋತಿ = ಜಗಚ್ + ಜ್ಯೋತಿ = ಜಗಜ್ಜ್ಯೋತಿ
(ತಕಾರಕ್ಕೆ ಜಕಾರ ಪರವಾಗಿ ತಕಾರಕ್ಕೆ ಚಕಾರಾದೇಶ, ಅನಂತರ ಜಕಾರಾದೇಶ)
ಯಶಸ್ + ಶರೀರಿ = ಯಶಶ್ + ಶರೀರಿ = ಯಶಶ್ಶರೀರಿ
ಇದರ ಹಾಗೆ-ಚಲಚ್ಚಿತ್ರ, ಚಲಚ್ಚಾಮರ, ಜ್ವಲಜ್ಜ್ಯೋತಿ, ಬೃಹಜ್ಜ್ಯೋತಿ, ಮನಶ್ಯಾಂತಿ, ಮನಶ್ಚಪಲ ಇತ್ಯಾದಿಗಳು.

() ಅನುನಾಸಿಕ ಸಂಧಿ
ಙ, ಞ, ಣ, ನ, ಮ-ಈ ಐದು ಅಕ್ಷರಗಳು ಅನುನಾಸಿಕಾಕ್ಷರಗಳೆಂದು ಹಿಂದಿನ ಸಂಜ್ಞಾಪ್ರಕರಣದಲ್ಲಿ ತಿಳಿಸಿದೆ.  ಈ ಅನುನಾಸಿಕಾಕ್ಷರಗಳು ಆದೇಶವಾಗಿ ಬರುವ ಸಂಧಿಯೇ ಅನುನಾಸಿಕ ಸಂಧಿಯೆನಿಸುವುದು.  ಹಾಗಾದರೆ ಇವು ಯಾವ ಅಕ್ಷರಕ್ಕೆ ಯಾವಾಗ ಆದೇಶವಾಗಿ ಬರುತ್ತವೆ? ಯಾವ ಅಕ್ಷರ ಪರವಾಗಿರಬೇಕು? ಎಂಬ ಬಗೆಗೆ ತಿಳಿಯೋಣ.
(೧) ವಾಕ್ + ಮಯ = ವಾಙ್ + ಮಯ = ವಾಙ್ಮಯ
(ಇಲ್ಲಿ ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ ಙಕಾರಾದೇಶವಾಗಿದೆ)
(೨) ಷಟ್ + ಮುಖ = ಷಣ್ + ಮುಖ = ಷಣ್ಮುಖ
(ಇಲ್ಲಿ ಟಕಾರಕ್ಕೆ ಮಕಾರ ಪರವಾಗಿ ಟಕಾರಕ್ಕೆ ಣಕಾರಾದೇಶವಾಗಿದೆ)
(೩) ಸತ್ + ಮಾನ = ಸನ್ + ಮಾನ = ಸನ್ಮಾನ
(ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ)
(೪) ಅಪ್ + ಮಯ =  ಅಮ್ + ಮಯ = ಅಮ್ಮಯ
(ಇಲ್ಲಿ ಪಕಾರಕ್ಕೆ ಮಕಾರ ಪರವಾಗಿ ಪಕಾರಕ್ಕೆ ಮಕಾರಾದೇಶವಾಗಿದೆ)
ಮೇಲಿನ ಈ ಉದಾಹರಣೆಗಳನ್ನು ಅವಲೋಕಿಸಿದಾಗ ಪೂರ್ವಶಬ್ದದ ಕೊನೆಯಲ್ಲೆಲ್ಲ ವರ್ಗದ ಮೊದಲನೆಯ ಅಕ್ಷರಗಳಾದ ಕ್, ಟ್, ತ್, ಪ್ ಇತ್ಯಾದಿ ಅಕ್ಷರಗಳಿವೆ.  ಎದುರಿಗೆ ಅನುನಾಸಿಕಾಕ್ಷರ ಬಂದಿದೆ.  ಆದ ಕಾರಣದಿಂದ ಈ ವರ್ಗದ ಮೊದಲನೆಯ ಅಕ್ಷರಗಳಾದ     ಕ ಟ ತ ಪ ಇತ್ಯಾದಿ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕಾಕ್ಷರ (ಐದನೆಯ ವರ್ಣ) ಆದೇಶವಾಗಿ ಬಂದಿದೆಯೆಂದು ತಿಳಿಯಬೇಕು.  ಅಂದರೆ ವರ್ಗದ ಮೊದಲನೆಯ ವ್ಯಂಜನಕ್ಕೆ ಅದರದೇ ಆದ ಅನುನಾಸಿಕಾಕ್ಷರ ಬರುವಿಕೆಯೇ ಅನುನಾಸಿಕ ಸಂಧಿಯೆನಿಸುವುದು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೬) ವರ್ಗ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ, ಅವುಗಳಿಗೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶಗಳಾಗಿ ಬರುತ್ತವೆ.
ಉದಾಹರಣೆಗೆ:-
ದಿಕ್ + ನಾಗ = ದಿಙ್ + ನಾಗ = ದಿಙ್ನಾಗ
(ಕಕಾರಕ್ಕೆ ನಕಾರ ಪರವಾಗಿ ಙಕಾರಾದೇಶ)
ಷಟ್ + ಮಾಸ = ಷಣ್ + ಮಾಸ = ಷಣ್ಮಾಸ
(ಟಕಾರಕ್ಕೆ ಮಕಾರ ಪರವಾಗಿ ಣಕಾರಾದೇಶ)
ವಾಕ್ + ಮಾಧುರ‍್ಯ = ವಾಙ್ + ಮಾಧುರ‍್ಯ = ವಾಙ್ಮಾಧುರ‍್ಯ
(ಕಕಾರಕ್ಕೆ ಮಕಾರ ಪರವಾಗಿ ಙಕಾರಾದೇಶ)
ಚಿತ್ + ಮಯ = ಚಿನ್ + ಮಯ = ಚಿನ್ಮಯ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಚಿತ್ + ಮೂಲ = ಚಿನ್ + ಮೂಲ = ಚಿನ್ಮೂಲ
(ತಕಾರಕ್ಕೆ ಮಕಾರಪರವಾಗಿ ನಕಾರಾದೇಶ)
ಸತ್ + ಮಣಿ = ಸನ್ + ಮಣಿ = ಸನ್ಮಣಿ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಇದರಂತೆ, ವಾಙ್ಮೂಲ, ವಾಙ್ಮಾನಸ, ಉನ್ಮಾದ, ತನ್ಮಯ ಇತ್ಯಾದಿ

(ವಿವರಗಳು:- [1] ಅಆ, ಇಈ, ಉಊ, ಋೠ ಈ ಸ್ವರಗಳು ಸವರ್ಣ ಸ್ವರಗಳು.  ಅಅ, ಅಆ, ಆಆ, ಆಅ-ಹೀಗೆ ಬಂದರೂ ಸವರ್ಣ ಸ್ವರಗಳು.  ಈಈ, ಇಇ, ಈಇ, ಇಈ-ಹೀಗೆ ಬಂದರೂ ಸವರ್ಣ ಸ್ವರಗಳು. ಇದರ ಹಾಗೆಯೇ ಉಊ, ಋೠ ಗಳ ಸವರ್ಣ ಸ್ವರಗಳ ವಿಚಾರ ಕೂಡ.
[2] ಅ ಆ ಕಾರಗಳಿಗೆ ಎಂದರೆ, ಅ ಅಥವಾ ಆ ಕಾರಗಳಲ್ಲಿ ಯಾವುದಾದರೊಂದು ಸ್ವರಕ್ಕೆ ಎಂದರ್ಥ.  ಏ ಐ ಕಾರಗಳು ಪರವಾದರೆ ಎಂದರೆ, ಏ ಅಥವಾ ಐ ಕಾರಗಳಲ್ಲಿ ಯಾವುದಾದರೂ ಒಂದು ಪರವಾದರೆ ಎಂದು ಅರ್ಥ.
[3] ಯಣ್ ಎಂದರೆ ಯ ವ ರ ಲ ಈ ನಾಲ್ಕು ಅಕ್ಷರಗಳೆಂದು ಹಿಂದೆ ತಿಳಿಸಿದೆಯಷ್ಟೆ.  ಲ ಕಾರವು ಆದೇಶವಾಗಿ ಬರುವ ಉದಾಹರಣೆಗಳು ಕನ್ನಡ ಭಾಷೆಯಲ್ಲಿ ಇಲ್ಲವಾದ್ದರಿಂದ ಸೂತ್ರದಲ್ಲಿ ಅದನ್ನು ಕೈಬಿಟ್ಟಿದೆ.
[4] ಅಚ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಸ್ವರ ಎಂದು ಅರ್ಥ.  ಅಜಂತ ಎಂದರೆ ಸ್ವರಾಂತವೆಂದು ತಿಳಿಯಬೇಕು.
[5] ಅಬ್ಜ=ಕಮಲ
[6] ಅಬ್ದ=ಮೋಡ
[7] ಅಬಂಶ=ನೀರಿನ ಅಂಶ
[8] ಅಬ್ಧಿ=ಸಮುದ್ರ (ಅಪ್ ಅಂದರೆ ನೀರು)
[9] ಅಪ್‌ಮಯ=ನೀರಿನ ಮಯ, ಅಂದರೆ ಜಲಮಯ ಎಂದು ಅರ್ಥ.
[10] ಚಕಾರಕ್ಕೆ ಞ ಕಾರ ಆದೇಶವಾಗಿ ಬರುವ ಉದಾಹರಣೆಗಳು ಪ್ರಸಿದ್ಧವಲ್ಲವಾದ್ದರಿಂದ ಆ ಉದಾಹರಣೆ ಕೊಟ್ಟಿಲ್ಲ.
[11] ದಿಙ್ನಾಗ=ದಿಕ್ಕುಗಳಲ್ಲಿರುವ ಆನೆ (ಅಷ್ಟದಿಗ್ಗಜಗಳು)
[12] ವಾಙ್ಮಾಧುರ‍್ಯ=ಮಾತಿನ ಮಾಧುರ‍್ಯ
[13] ವಾಙ್ಮೂಲ=ಮಾತಿನ ಮೂಲ; ವಾಙ್ಮಾನಸ=ಮಾತು, ಮನಸ್ಸು; ಉನ್ಮಾದ=ವಿಶೇಷ ಮದದಿಂದ ಕೂಡಿದ; ತನ್ಮಯ=ಬೆರೆಯುವಿಕೆ.)

ಇದುವರೆಗೆ ಸಂಸ್ಕೃತ ಸ್ವರಸಂಧಿ ಮತ್ತು ವ್ಯಂಜನಸಂಧಿಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿದಿರುವಿರಿ.  ಅದರ ಸಾರಾಂಶವನ್ನು ಈ ಕೆಳಗಿನ ಪಟ್ಟಿಯಲ್ಲಿ ಮತ್ತೊಮ್ಮೆ  ಓದಿ  ನೆನಪಿನಲ್ಲಿಡಿರಿ.
ಸಂಸ್ಕೃತ ಸಂಧಿಗಳು
ಸ್ವರಸಂಧಿಗಳುವ್ಯಂಜನಸಂಧಿಗಳು
(i) ಸವರ್ಣದೀರ್ಘಸಂಧಿ
(ದೀರ್ಘಸ್ವರಾದೇಶ)
(i) ಜಶ್ತ್ವಸಂಧಿ
(ಜಬಗಡದ ಆದೇಶ)
(ii) ಗುಣಸಂಧಿ
(ಏ, ಓ, ಅರ್ ಆದೇಶ)
(ii) ಶ್ಚುತ್ವಸಂಧಿ
(ಶಕಾರ ಚವರ್ಗಾದೇಶ)
(iii) ವೃದ್ಧಿಸಂಧಿ
(ಐ, ಔ ಆದೇಶ)
(iii) ಅನುನಾಸಿಕಸಂಧಿ
(ಙ,ಞ,ಣ,ನ,ಮ ಗಳ ಆದೇಶ)
(iv) ಯಣ್‌ಸಂಧಿ
(ಯ, ವ, ರ ಆದೇಶ)




ಸಂಧಿಗಳು-ಅಭ್ಯಾಸ ಪ್ರಶ್ನೆಗಳು
೧. ಸಂಧಿ ಎಂದರೇನು?
೨. ದೇವರು + ಅಲ್ಲಿ, ಊರು + ಊರು, ಜಾತ್ರೆ + ಆಯಿತು, ಗುರು + ಅನ್ನು, ಹೊಲ + ಅನ್ನು ಇದನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ.
೩. ಯಕಾರಾಗಮ ವಕಾರಾಗಮ ಸಂಧಿಗಳು ಎಲ್ಲೆಲ್ಲಿ ಬರುತ್ತವೆ, ತಿಳಿಸಿರಿ.
೪. ಪಿತೃ + ಅನ್ನು, ಮಾತೃ + ಅನ್ನು, ಮನೆ + ಅನ್ನು, ಗಿರಿ + ಅನ್ನು, ಸಿರಿ + ಅನ್ನು  ಇವನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ.  ಇಲ್ಲಿ ಲೋಪ ಮಾಡಿದ್ದರೆ ಹೇಗೆ ರೂಪಗಳಾಗುತ್ತಿದ್ದವು?
೫. ಅವನಲ್ಲಿ, ಊರನ್ನು, ದೇವರಲ್ಲಿ, ಮನೆಯಲ್ಲಿ, ಗುರುವನ್ನು, ಮಾತೃವನ್ನು, ಶತ್ರುವನ್ನು, ಮನವನ್ನು ಈ ಪದಗಳಲ್ಲಿರುವ ಸಂಧಿಗಳನ್ನು ಬಿಡಿಸಿ ಬರೆದು ಯಾವ ಯಾವ ಸಂಧಿಗಳೆಂಬುದನ್ನು ಹೆಸರಿಸಿರಿ.
೬. ಈ ಕೆಳಗೆ ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಶಬ್ದದಿಂದ ತುಂಬಿರಿ:-
(i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕತಪ ಗಳಿಗೆ ____________
(ii) ಮಳೆ + ______ = ಮಳೆಗಾಲ,           ಇನಿದು + _______ = ಇಂಚರ
ನೀರ್ + ______ = ನೀರ‍್ವೊನಲ್,         ಬೇರ್ + _______ = ಬೇರ‍್ವೆರಸಿ
(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ____________
(iv) ಸ್ವರದ ಮುಂದೆ ಸ್ವರ ಬಂದರೂ ಕೆಲವು ಕಡೆ ಲೋಪ, ಆಗಮ, ಆದೇಶಗಳು ಆಗುವುದಿಲ್ಲ.  ಇದಕ್ಕೆ ___________
(v) ಸ್ವರಕ್ಕೆ ಸ್ವರವು ಪರವಾದಾಗ ಅರ್ಥಕ್ಕೆ ಹಾನಿ ಬಾರದಿದ್ದರೆ __________ ಸ್ವರವು ಲೋಪವಾಗುವುದು.
(vi) _______  ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯಕಾರಾಗಮವಾಗುವುದು.
(vii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪಬಮ ಗಳಿಗೆ _______ ವು ಆದೇಶವಾಗಿ ಬರುವುದು.
(viii) ಭಾವಸೂಚಕಾವ್ಯಯಗಳ ಮುಂದೆ ಸ್ವರ ಬಂದರೆ __________
(ix) ಪ್ಲುತಕ್ಕೆ ಸ್ವರ ಪರವಾದರೆ ______________
೭. ಈ ಕೆಳಗಿನ ವಾಕ್ಯಗಳಲ್ಲಿ ದೋಷಗಳಿವೆ.  ಅವನ್ನು ತಿದ್ದಿ ಹೇಳಿರಿ:-
(i) ಪ್ಲುತಸ್ವರವೆಂದರೆ, ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಸ್ವರ.
(ii) ಆಗಮ ಸಂಧಿಯೆಂದರೆ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದು.
(iii) ವ್ಯಂಜನಗಳು ಅ ಕಾರದಿಂದ ಔ ಕಾರದವರೆಗೆ ಹದಿನಾಲ್ಕು.
(iv) ಒಂದು ವ್ಯಂಜನದ ಮುಂದೆ ಇನ್ನೊಂದು ವ್ಯಂಜನ ಬಂದಾಗ ಲೋಪಸಂಧಿಯಾಗುವುದು.
೮. ಈಕೆಳಗೆ ಬಿಟ್ಟಿರುವ ಸ್ಥಳಗಳ ಮುಂದೆ ಆವರಣದಲ್ಲಿ ಕೊಟ್ಟಿರುವ ಸರಿಯಾದ ಒಂದು ಉತ್ತರವನ್ನು ಆರಿಸಿ ಬರೆಯಿರಿ.
(i) ಊರೂರು= (ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ)
(ii) ಮನೆ+ಅನ್ನು=(ಆಗಮ ಸಂಧಿ, ಆದೇಶಸಂಧಿ, ಲೋಪಸಂಧಿ)
(iii) ಅ ಶಬ್ದದ ಮುಂದೆ ಅಕಾರ ಪರವಾದರೆ (ಲೋಪಸಂಧಿ, ಆಗಮಸಂಧಿ, ಸಂಧಿಯಾಗುವುದಿಲ್ಲ)
(iv) ನಿಪಾತಾವ್ಯಯದ ಮುಂದೆ ಸ್ವರ ಬಂದರೆ ಎನಿಸುವುದು. (ಪ್ರಕೃತಿಭಾವ, ಆಗಮ, ಆದೇಶ)
(v) ಇಕಾರಕ್ಕೆ ಸ್ವರ ಪರವಾದರೆ (ಯಕಾರಾಗಮ, ವಕಾರಾಗಮ, ಲೋಪವಾಗುವುದು)
(vi) ಸ್ವರಕ್ಕೆ ಸ್ವರ ಪರವಾದರೆ ಸ್ವರವು ಲೋಪವಾಗುವುದು. (ಪೂರ್ವದ, ಮಧ್ಯದ, ಉತ್ತರದ)
(vii) ಪ್ಲುತಸ್ವರಕ್ಕೆ ಸ್ವರ ಪರವಾದರೆ  ಬರುವುದು. (ಯಕಾರಾಗಮ, ವಕಾರಾಗಮ, ಪ್ರಕೃತಿಭಾವ)
(viii) ಪ್ಲುತಸ್ವರವೆಂದರೆ (ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ, ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ, ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ)
(ix) ಆದೇಶವೆಂದರೆ (ಒಂದು ಅಕ್ಷರದ ಸ್ಥಳದಲ್ಲಿ ಬರುವ ಬೇರೊಂದು ಅಕ್ಷರ, ಹೊಸದಾಗಿ ಬರುವ ಅಕ್ಷರ, ಇಲ್ಲದಂತಾಗುವ ಅಕ್ಷರ)

155 ಕಾಮೆಂಟ್‌ಗಳು:

  1. ಭಸ್ಮಾಸುರ ಇದನ್ನು ಬಿಡಿಸಿ ಸಂಧಿಯ ಹೆಸರು ತಿಳಿಸಿ

    ಪ್ರತ್ಯುತ್ತರಅಳಿಸಿ
  2. ತಣ್ಣೀರ್ದಳೆದು ಈ ಪದ ಬಿಡಿಸಿ ಬರೆಯುವದು ಹೇಗೆ?

    ಪ್ರತ್ಯುತ್ತರಅಳಿಸಿ
  3. ಮನೋರಂಜನೆ ಇದು ಯಾವ ಸಂಧಿಗೆ ಉದಾ ತಿಳಿಸಿ ಸರ್.

    ಪ್ರತ್ಯುತ್ತರಅಳಿಸಿ
  4. ಧನ್ಯವಾದಗಳು ಸಾರ್ ಅನುನಾಸಿಕ ಸಂಧಿಗೆ ಇನ್ನಷ್ಟು ಉದಾಹರಣೆ ಕೊಡಿ ಸಾರ್

    ಪ್ರತ್ಯುತ್ತರಅಳಿಸಿ
  5. ರಾಮಾಯಣ ಹಾಗೂ ನಾರಾಯಣ ಬಿಡಿಸಿ ಬರೆದು ಸಂಧಿ ತಿಳಿಸಿ

    ಪ್ರತ್ಯುತ್ತರಅಳಿಸಿ
  6. ವಲ್ಕಲಾವೃತ,ದ್ರವ್ಯಾರ್ಥಿ. ಇವು ಯಾವ ಸಂಧಿ.

    ಪ್ರತ್ಯುತ್ತರಅಳಿಸಿ
  7. ನೀವು ನಾವು ಕೇಳಿದ ಪ್ರಶ್ನೆಗೆ ಉತ್ತರಿಸಿದರೆ ಚೆನ್ನಾಗಿರುತ್ತಿತ್ತು

    ಪ್ರತ್ಯುತ್ತರಅಳಿಸಿ
  8. Managanda ,paramoccha vishveshwara,prashnottara, athyunnatha ,paramoushada,dinacharane,vidhyarthi,ivu yaava Sandi sir

    ಪ್ರತ್ಯುತ್ತರಅಳಿಸಿ
  9. ಕಣ್ಣರಳಿಸು ಯಾವ ಬಿಡಿಸಿ ಬರೆದು ಸಂದಿ ತಿಳಿಸಿ sir plez

    ಪ್ರತ್ಯುತ್ತರಅಳಿಸಿ
  10. ಜೀವನಕೇಕೆ ಪದವು ಲೋಪ ಸಂಧಿ ಅಥವ ಸವಣ೯ಧೀಘ೯ ಸಂಧಿ?

    ಪ್ರತ್ಯುತ್ತರಅಳಿಸಿ
  11. ಅಪಘಾತವಾದಾಗ ಇದು ಯಾವ ಸಂಧಿಗೆ ಉದಾಹರಣೆ ಹೇಳಿ ಸರ್

    ಪ್ರತ್ಯುತ್ತರಅಳಿಸಿ
  12. ಕೊರೋನಾ ಇದು ಯಾವ ಸಂಧಿ ಆಗುತ್ತದೆ ಸಾರ್ ದಯವಿಟ್ಟುತಿಳಿಸಿ ಗುರುಗಳೇ

    ಪ್ರತ್ಯುತ್ತರಅಳಿಸಿ
  13. ಉಪಧ್ಯಾಯರು ಇದು ಯಾವ ಸಂಧಿಗೆ ಉದಾಹರಣೆ ಹೇಳಿ ಸರ್

    ಪ್ರತ್ಯುತ್ತರಅಳಿಸಿ
  14. ಸಂಧಿ ಬಿಡಿಸಿ ಹೆಸರಿಸಿ
    ಕಡಿದೊಗೆದು
    ಉನ್ನತೋನತ
    ಪತ್ರಿಕೋದ್ಯಮಿ
    ಲಕ್ಷೋಪಲಕ್ಷ
    ಹಿಮಾದ್ರಿ
    ಹಾಡೊಮ್ಮೆ
    ಹಿಂದೊಮ್ಮೆ
    ನವೋದಯ
    ಹತ್ತೆಂಟು
    ಕೆಲವೊಂದು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಕಡಿದು+ಒಗೆದು=ಕಡಿದೊಗೆದು. ಲೋಪ ಸಂಧಿ ಉನ್ನತ+ಉನ್ನತ=ಉನ್ನತೋನ್ನತ. ಗುಣ ಸಂಧಿ. ಪತ್ರಿಕ+ಉದ್ಯಮಿ=ಪತ್ರಿಕೋದ್ಯಮಿ. ಗುಣ ಸಂಧಿ. ಲಕ್ಷ+ಉಪಲಕ್ಷ=ಲಕ್ಷೋಪಲಕ್ಷ. ಗುಣ ಸಂಧಿ. ಹಿಮ+ಅದ್ರಿ=ಹಿಮಾದ್ರಿ. ಸವರ್ಣ ದೀರ್ಘ ಸಂಧಿ. ಹಾಡು+ಒಮ್ಮೆ=ಹಾಡಮ್ಮೆ. ಲೋಪ ಸಂಧಿ. ಹಿಂದೆ+ಒಮ್ಮೆ=ಹಿಂದೊಮ್ಮೆ. ಲೋಪ ಸಂಧಿ. ನವ+ಉದಯ=ನವೋದಯ. ಗುಣ ಸಂಧಿ. ಹತ್ತು+ಎಂಟು=ಹತ್ತೆಂಟು. ಲೋಪ ಸಂಧಿ. ಕೆಲವು+ಒಂದು=ಕೆಲವೊಂದು. ಲೋಪ ಸಂಧಿ

      ಅಳಿಸಿ
  15. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  16. ಆಗಮ ಸಂಧಿ ಅಲ್ಲಿ ಬಕರಾಗಮ ಮತ್ತೆ ನಕಾರಾಗಮ ಸಂಧಿ ಗೆ ಉದಾಹರಣೆ ಕೊಡಿ

    ಪ್ರತ್ಯುತ್ತರಅಳಿಸಿ
  17. ಚಿತ್+ಆನಂದ =ಚಿದಾನಂದ
    ತ್+ದ್=ಜಶ್ತ್ವ ಸಂಧಿ

    ಪ್ರತ್ಯುತ್ತರಅಳಿಸಿ
  18. ಹಿಮ್ಮದಿಗಳಲ್ಲ್ಲಿ ಯಾವ ಸಂಧಿ

    ಪ್ರತ್ಯುತ್ತರಅಳಿಸಿ
  19. ಸಪ್ತ ಸ್ವರಗಳು ಯಾವ ಸಂದಿಗೆ ಉದಾಹರಣೆ

    ಪ್ರತ್ಯುತ್ತರಅಳಿಸಿ
  20. ಸಭಾಂಗಣ ಇದು ಯಾವ ಸಂದಿಗೆ ಉದಾಹರಣೆ ಯಾಗಿದೆ

    ಪ್ರತ್ಯುತ್ತರಅಳಿಸಿ