ನನ್ನ ಪುಟಗಳು

08 ನವೆಂಬರ್ 2013

ಅವ್ಯಯಗಳು

ಅವ್ಯಯಗಳು
(೧) ಅವನು ಚೆನ್ನಾಗಿ ಓದಿದನು.
(೨) ಅವಳು ಚೆನ್ನಾಗಿ ಓದಿದಳು.
(೩) ಅವರು ಚೆನ್ನಾಗಿ ಓದಿದರು.
(೪) ಅದು ಚೆನ್ನಾಗಿ ಓದುತ್ತದೆ.
ಮೇಲಿನ ವಾಕ್ಯಗಳಲ್ಲೆಲ್ಲಾ ಬಂದಿರುವ ‘ಚೆನ್ನಾಗಿ’ ಎಂಬ ಪದವನ್ನು ವಿಚಾರಿಸಿರಿ.  ಅದು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲೂ, ಏಕವಚನ, ಬಹುವಚನಗಳಲ್ಲೂ ಯಾವ ವ್ಯತ್ಯಾಸವನ್ನೂ ಹೊಂದದೆ ಒಂದೇ ರೀತಿಯಾಗಿದೆ.  ‘ಚೆನ್ನಾಗಿ’ ಎಂಬುದರ ಮೇಲೆ ಯಾವ ವಿಧವಾದ ಪ್ರತ್ಯಯಗಳನ್ನೂ ಹಚ್ಚಲಾಗುವುದಿಲ್ಲ.  ಇದು ನಾಮಪದ ಹಾಗು ಕ್ರಿಯಾಪದಗಳ ಹಾಗೆ ರೂಪದಲ್ಲಿ ಯಾವ ಭೇದವನ್ನೂ ಹೊಂದುವುದಿಲ್ಲ; ಇದ್ದ ಹಾಗೆಯೇ ಯಾವಾಗಲೂ ಇರುತ್ತದೆ.  ಹೀಗೆ ಲಿಂಗ, ವಚನ, ವಿಭಕ್ತಿಗಳಿಂದ ಯಾವ ವ್ಯತ್ಯಾಸವನ್ನೂ ಹೊಂದದ ಅನೇಕ ಶಬ್ದಗಳನ್ನು ಭಾಷೆಯಲ್ಲಿ ಬಳಸುತ್ತೇವೆ.  ಸುಮ್ಮನೆ, ನೆಟ್ಟಗೆ, ಮೆಲ್ಲಗೆ, ಸುತ್ತಲೂ, ತರುವಾಯ, ಇಲ್ಲ – ಇಂಥವೆಲ್ಲ ಇದೇ ವರ್ಗಕ್ಕೆ ಸೇರಿದವುಗಳು.  ಇಂಥವುಗಳನ್ನು ಅವ್ಯಯ ಎಂದು ಕರೆಯುತ್ತಾರೆ.  ಇಂಥ ಅವ್ಯಯಗಳ ಬಗೆಗೆ ಸಾಮಾನ್ಯ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

"ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ, ಏಕರೂಪವಾಗಿರುವ ಶಬ್ದಗಳು ಅವ್ಯಯಗಳೆನಿಸುವುವು."
ಇಂಥ ಅವ್ಯಯಗಳನ್ನು - () ಸಾಮಾನ್ಯಾವ್ಯಯ () ಅನುಕರಣಾವ್ಯಯ () ಭಾವಸೂಚಕಾವ್ಯಯ (ನಿಪಾತಾವ್ಯಯ) () ಕ್ರಿಯಾರ್ಥಕಾವ್ಯಯ () ಸಂಬಂಧಾರ್ಥಕಾವ್ಯಯ () ಕೃದಂತಾವ್ಯಯ () ತದ್ಧಿತಾಂತಾವ್ಯಯ () ಅವಧಾರಣಾರ್ಥಕಾವ್ಯಯ - ಇತ್ಯಾದಿಯಾಗಿ ಗುಂಪುಗಳನ್ನು ಮಾಡಬಹುದು.
ಇವುಗಳ ವಿವರಗಳನ್ನು ಕೆಳಗೆ ನೋಡಿರಿ:-
() ಸಾಮಾನ್ಯಾವ್ಯಯಗಳು:- ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳು ವಂಥ ಅವ್ಯಯಗಳು ಸಾಮಾನ್ಯಾವ್ಯಯಗಳು. ಇವು ಪ್ರಾಯಶಃ ಕ್ರಿಯೆಗೆ ವಿಶೇಷಣಗಳಾಗಿರುತ್ತವೆ.
ಉದಾಹರಣೆಗೆ: ಚೆನ್ನಾಗಿ, ನೆಟ್ಟಗೆ, ತಟ್ಟನೆ, ಬಿಮ್ಮನೆ, ಬಿಮ್ಮಗೆ, ಸುಮ್ಮನೆ, ಸುಮ್ಮಗೆ, ಕಮ್ಮನೆ, ಕಮ್ಮಗೆ, ಬೇಗನೆ, ಮೆಲ್ಲಗೆ, ಮೆಲ್ಲನೆ, ಸೊಗಸಾಗಿ, ಸಲೆ, ಕರಂ, ಹಾಗೆ, ಹೀಗೆ, ಅಂತು, ಇಂತು, ಬೇರೆ, ಬಳಿಕ, ತರುವಾಯ, ಇನ್ನು, ಒಡನೆ, ಕೂಡಲೆ, ಬೇಗ, ಸುತ್ತಲು-ಇತ್ಯಾದಿಗಳು.

() ಅನುಕರಣಾವ್ಯಯಗಳು:- ಅರ್ಥವಿಲ್ಲದ ಧ್ವನಿವಿಶೇಷಣಗಳನ್ನು ತಾನು ಕೇಳಿದಂತೆ ಪುನಃ ಅನುಕರಣ ಮಾಡಿ ಹೇಳುವ ಶಬ್ದಗಳೆಲ್ಲ ಅನುಕರಣಾವ್ಯಯಗಳೆನಿಸುವುವು.
ಉದಾಹರಣೆಗೆ: ನೀರು ದಬದಬ ಬಿದ್ದಿತುಪಟಪಟ ಮಳೆ ಸುರಿಯಿತು.
ಇಲ್ಲಿ ‘ದಬದಬ ಪಟಪಟ’ ಇವು ಅನುಕರಣಾವ್ಯಯಗಳು.  ಇದರಂತೆ ಚಟಚಟ, ಕರಕರ, ಚುರುಚುರು, ಸಿಮಿಸಿಮಿ, ಧಗಧಗ, ತಟತಟ, ರೊಯ್ಯನೆ, ಸುಯ್ಯನೆ, ಧಿಗಿಲನೆ, ಭೋರನೆ, ಘುಳುಘುಳು, ಗುಡುಗುಡು, ದಡದಡ-ಇತ್ಯಾದಿ.

() ಭಾವಸೂಚಕಾವ್ಯಯಗಳು (ನಿಪಾತಾವ್ಯಯಗಳು):- ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ-ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಕೆಲವು ಅರ್ಥವಿಲ್ಲದ ಶಬ್ದಗಳನ್ನು ಬಳಸುತ್ತೇವೆ.  ಇವನ್ನು ಭಾವಸೂಚಕಾವ್ಯಯಗಳೆನ್ನುವರು.  ಇವಕ್ಕೆ ನಿಪಾತಾವ್ಯಯಗಳೆಂದೂ ಹೆಸರು.
ಉದಾಹರಣೆಗೆ: ಎಲಾ! ಅಯ್ಯೋ! ಅಕ್ಕಟಾ! ಅಕಟಕಟಾ! ಆಹಾ! ಭಲೇ! ಭಲಾ! ಭಳಿರೇ! ಛೇ! ಥೂ! ಅಬ್ಬಾ! ಅಹಹಾ! ಆಹಾ! ಓಹೋ! ಹೋ! ಹೋಹೋ! ಅಃ! ಎಲೆಲಾ! ಓ! ಏ! ಆಃ! ಹಹಹ! ಇತ್ಯಾದಿ.

() ಕ್ರಿಯಾರ್ಥಕಾವ್ಯಯಗಳು:- ಕ್ರಿಯಾಪದದ ಸ್ಥಾನದಲ್ಲಿ ನಿಂತು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಕೆಲವು ಅವ್ಯಯಗಳು ಕ್ರಿಯಾರ್ಥಕಾವ್ಯಯಗಳೆನಿಸುವುವ.
ಉದಾಹರಣೆಗೆ: ಉಂಟು, ಬೇಕು, ಬೇಡ, ಅಲ್ಲ, ಅಹುದು, ಹೌದು, ಸಾಕು, ಇಲ್ಲ-ಇತ್ಯಾದಿಗಳು.

() ಸಂಬಂಧಾರ್ಥಕಾವ್ಯಯಗಳು:- ಎರಡು ಪದಗಳನ್ನಾಗಲಿ, ಅಥವಾ ಹಲವು ಪದ ಸಮುಚ್ಚಯಗಳನ್ನಾಗಲಿ, ವಾಕ್ಯಗಳನ್ನಾಗಲಿ, ಜೋಡಿಸುವಂಥ ಮತ್ತು ಸಂಬಂಧಗೊಳಿಸುವಂಥ ಶಬ್ದಗಳು ಸಂಬಂಧಾರ್ಥಕಾವ್ಯಯಗಳು.
ಉದಾಹರಣೆಗೆ: ಊ, ಉಂ, ಮತ್ತು, ಅಥವಾ, ಆದ್ದರಿಂದ, ಆದುದರಿಂದ, ಅಲ್ಲದೆ.

(i) ಪದಗಳನ್ನು ಜೋಡಿಸುವಿಕೆ:-
() ರಾಮನೂ (), ಭೀಮನೂ (), ಸೀತೆಯೂ () ಬಂದರು.
() ರಾಮನುಂ (ಉಂ), ಭೀಮನುಂ (ಉಂ), ಸೀತೆಯುಂ (ಉಂ) ಬಂದರ್.
ಮೇಲಿನ ವಾಕ್ಯಗಳಲ್ಲಿ ರಾಮ ಭೀಮ ಸೀತೆಯರನ್ನು ಮಧ್ಯದಲ್ಲಿರುವ ಊ ಎಂಬ ಸಂಬಂಧಾರ್ಥಕಾವ್ಯಯವೂ ಮತ್ತು ಉಂ ಎಂಬ ಸಂಬಂಧಾರ್ಥಕಾವ್ಯಯವೂ ಜೋಡಿಸಿವೆ (ಸಂಬಂಧಗೊಳಿಸಿವೆ).

(ii) ಎರಡು ಪದಗಳನ್ನು ಜೋಡಿಸುವಿಕೆ:-
ಅವನು ಬರುವುದೂ () ಬೇಡ; ಕೆಲಸವಾಗುವುದೂ () ಬೇಡ.
ಮೇಲಿನ ಉದಾಹರಣೆಯಲ್ಲಿ ಬರುವುದು+ಊ, ಆಗುವುದು+ಊ ಎಂಬಲ್ಲಿ ಊ ಬಂದಿರುವುದರಿಂದ ಎರಡೆರಡು ಪದಗಳನ್ನು ಜೋಡಿಸುವ ಈ ಊ ಕಾರವು ಪದಸಮುಚ್ಚಯವನ್ನು ಜೋಡಿಸಿದಂತಾಯಿತು.

(iii) ಅವನು ಮತ್ತು ನೀನು ಇಬ್ಬರೂ ಹೋಗಿರಿ:
ಇಲ್ಲಿ ‘ಮತ್ತು’ ಎಂಬುದು ಅವನು, ನೀನು ಎಂಬೆರಡು ಪದಗಳನ್ನು ಸಂಬಂಧಗೊಳಿಸಿವೆ.

(iv) ತಂದೆತಾಯಿಗಳ ಸೇವೆ ಮಾಡಬೇಕು ಮತ್ತು ಅವರ ಆಜ್ಞೆಯನ್ನು ಪಾಲಿಸಬೇಕು.
ಇಲ್ಲಿ ‘ಮತ್ತು’ ಎಂಬುದು ಎರಡು ವಾಕ್ಯಗಳನ್ನು ಸಂಬಂಧಗೊಳಿಸಿದೆ.  ಇವುಗಳ ಹಾಗೆಯೆ ಉಳಿದ ಸಂಬಂಧಾರ್ಥಕಾವ್ಯಯಗಳ ಬಗೆಗೆ ಕೆಳಗಿನ ಉದಾಹರಣೆಗಳನ್ನು ನೋಡಿರಿ.

(v) (ಅ) ಆದ್ದರಿಂದ-ಅವನು ಬರಲಿಲ್ಲ ಆದ್ದರಿಂದ ನಾನು ಬರಲಿಲ್ಲ.
(ಆ) ಆದರೆ-ಮಳೆಬಂದಿತು ಆದರೆ ಕೆರೆ ತುಂಬಲಿಲ್ಲ.
(ಇ) ಆದುದರಿಂದ-ಅವನು ಬರಲಿಲ್ಲ ಆದುದರಿಂದ ಕೊಡಲಿಲ್ಲ.
(ಈ) ಇನ್ನೂ-ಹತ್ತು ಮೂಟೆ ಬಂತು, ಇನ್ನೂ ಐದು ಮೂಟೆ ಬರಬೇಕು.
(ಉ) ಹಾಗಾದರೆ-ನೀನು ಬರಬೇಕೆ? ಹಾಗಾದರೆ ಬೇಗ ಬಾ.
(ಊ) ಅಥವಾ-ಒಂದು ಮೂಟೆ ಅಕ್ಕಿ ಕೊಡು, ಅಥವಾ ನೂರಐವತ್ತು ರೂಪಾಯಿಕೊಡು.
(ಋ) ಆಗ-ನೀನು ಇಲ್ಲಿಗೆ ಬಾ, ಆಗ ಎಲ್ಲವೂ ಸರಿ ಹೋಗುತ್ತದೆ.
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದ ಅವ್ಯಯಗಳು ಎರಡು ವಾಕ್ಯಗಳನ್ನು ಸಂಬಂಧಗೊಳಿಸಿದ ಸಂಬಂಧಾರ್ಥಕಾವ್ಯಯಗಳೆಂದು ತಿಳಿಯಬೇಕು.

() ಕೃದಂತಾವ್ಯಯ:-  () ತದ್ಧಿತಾಂತವ್ಯಯ:- ಈ ಎರಡೂ ಜಾತಿಯ ಅವ್ಯಯ ಪ್ರಭೇದಗಳನ್ನು ಕೃದಂತ ತದ್ಧಿತಾಂತ ಪ್ರಕರಣಗಳಲ್ಲಿ ವಿಶದವಾಗಿ ತಿಳಿದಿದ್ದೀರಿ.  ಆ ಪ್ರಕರಣವನ್ನು ಪುನಃ ನೋಡಿ ಇವುಗಳ ವಿಷಯವಾಗಿ ಜ್ಞಾಪಿಸಿಕೊಳ್ಳಿರಿ.

() ಅವಧಾರಣಾರ್ಥಕಾವ್ಯಯ:- ಒಂದು ನಿಶ್ಚಯಾರ್ಥದಲ್ಲಿ ಬರುವ ಅವ್ಯಯವೇ ಅವಧಾರಣಾರ್ಥಕಾವ್ಯಯ.  ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದೇ ಅವಧಾರಣೆಯೆನಿಸುವುದು.
ಉದಾಹರಣೆಗೆ:
(i) ಅದೇ ನನ್ನ ಪುಸ್ತಕ.
ಈ ವಾಕ್ಯದಲ್ಲಿ (ಅದು+ಏ) ದಕಾರದ ಮುಂದಿರುವ ‘ಏ’ ಕಾರವೇ ಅವಧಾರಣಾರ್ಥಕಾವ್ಯಯವೆನಿಸುವುದು.  ಇದರಂತೆ-
(ii) ನಾನೇ ಅದನ್ನು ಬರೆದೆನು.
ಇಲ್ಲಿ (ನಾನು+ಏ) ನಾನೇ ಎಂದು ಬರವಣಿಗೆಯನ್ನು ಮಾಡಿದ ವಿಷಯದಲ್ಲಿ ನಿಶ್ಚಯಿಸಿ ಹೇಳುವುದರಿಂದ ‘ಏ’ ಎಂಬುದು ಅವಧಾರಣಾರ್ಥಕಾವ್ಯಯವೆನಿಸಿತು.

[1] ಕ್ರಿಯಾರ್ಥಕಾವ್ಯಯಗಳ ಬಗೆಗೆ ಹಿಂದಿನ ಕ್ರಿಯಾಪದ ಭಾಗದಲ್ಲಿ ತಿಳಿದಿದ್ದೀರಿ.  ಅಲ್ಲಿ ಬಂದಿರುವ ಕ್ರಿಯಾರ್ಥಕಾವ್ಯಯಗಳ ಬಗ್ಗೆ ಕ್ರಿಯಾಪದ ಭಾಗದಲ್ಲಿ ನೋಡಿರಿ.
[2] ಉ ಎಂಬ ಸಂಬಂಧಾರ್ಥಕಾವ್ಯಯವು ಹಳಗನ್ನಡದಲ್ಲಿ ಬರುತ್ತದೆ.  ಹೊಸಗನ್ನಡದ ಊ ಎಂಬುದು ಇದಕ್ಕೆ ಸಮಾನವಾದ ಸಮುಚ್ಚಯಾವ್ಯಯ.  ಹಳೆಗನ್ನಡದಲ್ಲಿ ಈ ಉಂ ಎಂಬುದು ಒಮ್ಮೊಮ್ಮೆ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವುದು.  ಉದಾ: ರಾಮ+ಉಂ+ಅಂ=ರಾಮನಾಮಂ, ಭೀಮನಾಮಂ-ಇತ್ಯಾದಿ.  ರಾಮನನ್ನೂ, ಭೀಮನನ್ನೂ ಎಂದು ಇವುಗಳ ಅರ್ಥ.

14 ಕಾಮೆಂಟ್‌ಗಳು:

  1. ಅವಧಾರಣಾರ್ಥಕಾವ್ಯಯಗಳಿಗೆ ಇನ್ನೂ ಕೆಲವು ಉದಾಹರಣೆಗಳನ್ನು
    ಕೊಡಿ.

    ಪ್ರತ್ಯುತ್ತರಅಳಿಸಿ
  2. ಸರ್ ನೀವು ಕನ್ನಡ ಭಾಷಾ ದಾಹಿಗಳ ಕಾಮಧೇನು ಸರ್ ನಿಮ್ಮ್ ಈ ಕಾರ್ಯ ನಿಜಕ್ಕೂ ಅವಿಸ್ಮರಣಿಯ,ಧನ್ಯವಾದಗಳು ಸರ್🙏🙏

    ಪ್ರತ್ಯುತ್ತರಅಳಿಸಿ
  3. ಸರ್ ಸಂಭೋಧಕಾವ್ಯಯ ದ ಬಗ್ಗೆ ತಿಳಿಸಿಕೊಡಿ

    ಪ್ರತ್ಯುತ್ತರಅಳಿಸಿ