ನನ್ನ ಪುಟಗಳು

27 ಡಿಸೆಂಬರ್ 2018

8ನೇ ತರಗತಿ ಗದ್ಯ - ನೀರುಕೊಡದ ನಾಡಿನಲ್ಲಿ (8th-Prose Neerukodada nadinalli)




           ಶ್ರೀಮತಿ ನೇಮಿಚಂದ್ರ ಅವರು ಚಿತ್ರದುರ್ಗದಲ್ಲಿ ಜುಲೈ ೧೬, ೧೯೫೯ರಂದು ಜನಿಸಿದರು. ತಂದೆ ಪ್ರೊ. ಜಿ. ಗುಂಡಣ್ಣ, ತಾಯಿ ತಿಮ್ಮಕ್ಕ. ಪ್ರಾರಂಭಿಕ ಶಿಕ್ಷಣ ತುಮಕೂರು, ಮೈಸೂರು. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಬಿ.ಇ. ಪದವಿ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಎಂ.ಎಸ್. ಪದವಿ. ಬೆಂಗಳೂರಿನ ಎಚ್.ಎ.ಎಲ್ ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಚಿಂತನಪೂರ್ಣ ಲೇಖನ, ಪುಸ್ತಕಗಳನ್ನು ಬರೆಯುತ್ತಿದ್ದಾರೆ.

       ನೇಮಿಚಂದ್ರ ಅವರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ವೈಶಿಷ್ಟ್ಯಪೂರ್ಣ ಬರಹಗಳನ್ನು ನೀಡುತ್ತಾ ಬಂದಿದ್ದಾರೆ. ‘ನೇಮಿಚಂದ್ರರ ಕಥೆಗಳು’ ಒಂದು ದೊಡ್ಡ ಸಂಕಲನವಾಗಿ ಹೊರಬಂದಿದೆ. ಹಿಂದೆ ಬಿಡಿ ಸಂಕಲನಗಳಾಗಿ ‘ನಮ್ಮ ಕನಸುಗಳಲ್ಲಿ ನೀವಿದ್ದೀರಿ’, ‘ಮತ್ತೆ ಬರೆದ ಕಥೆಗಳು’, ‘ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ’ ಇತ್ಯಾದಿ ರೂಪಗಳಲ್ಲಿ ಬಂದ ಈ ಸಂಕಲನದಲ್ಲಿನ ಕಥೆಗಳು ಓದುಗರನ್ನು ಅಪಾರವಾಗಿ ಸೆಳೆದಿವೆ.
      ನೇಮಿಚಂದ್ರರ ಕಾದಂಬರಿಗಳೂ ಜನಪ್ರಿಯತೆ ಗಳಿಸಿಕೊಂಡಿವೆ. ವಿಜ್ಞಾನದ ವಸ್ತುಗಳನ್ನು ಒಳಗೊಂಡ ಅವರ ಕಥಾ ಹರಹು ಕನ್ನಡ ಸಾಹಿತ್ಯ ಲೋಕಕ್ಕೇ ಒಂದು ಮೆರುಗು ತಂದಿದೆ. ಯಾವುದೇ ಒಂದು ಕಥಾ ವಸ್ತುವನ್ನು ರೂಪಿಸುವಾಗ ಅದರ ಹಿನ್ನೆಲೆಯನ್ನು ಅತ್ಯಂತ ಸನಿಹದಲ್ಲಿ ಅನುಭವಿಸಿ ಬರೆಯುವುದಕ್ಕಾಗಿ ಅವರು ನಡೆಸಿದ ತಿರುಗಾಟ ಮತ್ತು ಅಭಿವ್ಯಕ್ತಿಸಿರುವ ರೀತಿ ಅಚ್ಚರಿ ಹುಟ್ಟಿಸುವಂತದ್ದು. ಮೆಚ್ಚುವಂತದ್ದು. ಇದಕ್ಕೊಂದು ಉದಾಹರಣೆ ಕನ್ನಡಿಗರ ಮಾನಸದಲ್ಲಿ ಭಿತ್ತಿಗೊಂಡಿರುವ ನೇಮಿಚಂದ್ರರ ‘ಯಾದ್ ವಶೇಮ್’. ಮಹಾಯುದ್ಧ ಕಾಲದ ಹಿನ್ನೆಲೆಯನ್ನು ಇಟ್ಟುಕೊಂಡು ಚಿತ್ರಿತವಾಗಿರುವ ಈ ಕಥೆಯಲ್ಲಿನ ಹುಡುಗಿ ಅಂದಿನ ನಾಜಿ ರಕ್ಕಸರ ಕೈಯಿಂದ ತಪ್ಪಿಸಿಕೊಂಡು ನಮ್ಮ ಹಳೆಯ ಬೆಂಗಳೂರಿನಲ್ಲಿ ಬೆಳೆಯುತ್ತಾಳೆ. ತನ್ನ ಕಳೆದುಹೋದ ಕುಟುಂಬವನ್ನು ಅರಸುತ್ತ ಹೊರಟ ಈ ಹುಡುಗಿ ಜರ್ಮನಿ, ಅಮೆರಿಕವನ್ನು ಸುತ್ತಿ, ಕಡೆಗೆ ಯುದ್ಧಗ್ರಸ್ಥವಾದ ಇಸ್ರೇಲ್ - ಪ್ಯಾಲೆಸ್ಟೇನಿನ ವಾತಾವರಣದಲ್ಲಿ ಬಂದಿಳಿಯುವುದು ಚಿಂತನಪೂರ್ಣ ಮತ್ತು ಅದು ಓದಿಸಿಕೊಂಡು ಹೋಗುವ ರೀತಿಯಲ್ಲಿಯೇ ಹೇಳುವುದಾದರೆ ರೋಚಕ ಚಿತ್ರಣವಾಗಿದೆ. ಇದಕ್ಕಾಗಿ ನೇಮಿಚಂದ್ರರು ಸಂಬಂಧಪಟ್ಟ ದೇಶಗಳಿಗೆ, ಸ್ಥಳಗಳಿಗೆ ಅಲೆದಿದ್ದಾರೆ.
      ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವೆನಿಸುತ್ತವೆ. ‘ಮೇರಿ ಕ್ಯೂರಿ’, ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕರಾದ ‘ಡಾ. ಇದಾಸ್ಕಡರ್’, ‘ಥಾಮಸ್ ಆಲ್ವ ಎಡಿಸನ್’, ‘ನೊಬೆಲ್ ವಿಜೇತ ಮಹಿಳೆಯರು’, ‘ಮಹಿಳಾ ವಿಜ್ಞಾನಿಗಳು’ ಜನಪ್ರಿಯವೆನಿಸಿವೆ.
      ನೇಮಿಚಂದ್ರರ ಚಿಂತನಶೀಲ ಮನಸ್ಸು ವೈವಿಧ್ಯಪೂರ್ಣವಾಗಿದ್ದು ಸಾಮಾಜಿಕ ಚಿಂತನೆಗಳಲ್ಲೂ ಅಪಾರವಾದ ಪಾತ್ರ ನಿರ್ವಹಿಸಿವೆ. ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು’ ಈ ನಿಟ್ಟಿನಲ್ಲಿ ಒಂದು ಗಮನಾರ್ಹ ಕೃತಿ. ‘ನನ್ನ ಕಥೆ-ನಮ್ಮ ಕಥೆ’ ಎಂಬುದು ಮಹಿಳೆಯೊಬ್ಬಳು ಮನೆಯಲ್ಲಿನ ದೌರ್ಜನ್ಯದ ವಿರುದ್ಧ ಬಂಡೇಳುವ ಕಥೆಯೊಂದರ ಅನುವಾದವಾಗಿದೆ.
ಹೇಮಲತಾ ಮಹಿಷಿ ಅವರೊಡನೆ ಅವರು ನಿರೂಪಿಸಿರುವ ‘ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ’ ಪುಸ್ತಕವು ಬಾಲ್ಯವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾನು ಮಾಡಿದ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕೆಲಸಕ್ಕಾಗಿ, ರಾಕ್ಷಸೀಯ ದೌರ್ಜನ್ಯಕ್ಕೆ ಬಲಿಯಾದ ಭಾಂವ್ರಿ ದೇವಿ ಅವರು ನ್ಯಾಯಕ್ಕಾಗಿ ಕಾದು ಕುಳಿತ ಕಥೆ. ನಮ್ಮ ಸಮಾಜದ ಹಿತ್ತಲಿನ ಸಾಮ್ರಾಜ್ಯದ ಕರಾಳತೆಯನ್ನು ರಾಚಿಸುವಂತಿದೆ.
        ಸ್ವಾತಂತ್ರ ಪೂರ್ವದ ಕನ್ನಡದ ಮಹಾನ್ ಕವಯತ್ರಿ ‘ಬೆಳೆಗೆರೆ ಜಾನಕಮ್ಮ’, ‘ನೋವಿಗದ್ದಿದ ಕುಂಚ’ ಎಂಬ ಮಹಾನ್ ಡಚ್ ಕಲಾವಿದ ವ್ಯಾನ್ ಗೋನ ಅವರ ಜೀವನ ಚರಿತ್ರೆ ಇವೆಲ್ಲಾ ನೇಮಿಚಂದ್ರ ಇನ್ನಿತರ ವಿಶಾಲ ಆಸಕ್ತಿಗಳನ್ನು ತೋರುತ್ತವೆ.         *‘ಒಂದು ಕನಸಿನ ಪಯಣ’, ‘ಪೆರುವಿನ ಪವಿತ್ರ ಕಣಿವೆಯಲ್ಲಿ’ ಕೃತಿಗಳು ನೇಮಿಚಂದ್ರರ ಪ್ರವಾಸ ಕಥನಗಳಾಗಿವೆ.
ನೇಮಿಚಂದ್ರರ ವಿಚಾರ ಪೂರ್ಣ ಲೇಖನಗಳಾದ ‘ಸಾಹಿತ್ಯ ಮತ್ತು ವಿಜ್ಞಾನ’, ‘ಬದುಕು ಬದಲಿಸಬಹುದು’, ‘ದುಡಿವ ಹಾದಿಯಲ್ಲಿ ಜೊತೆಯಾಗಿ’, ‘ಮಹಿಳಾ ಅಧ್ಯಯನ’, ‘ನಿಮ್ಮ ಮನೆಗೊಂದು ಕಂಪ್ಯೂಟರ್, ‘ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೋಟರ್ಸ್’ , ‘ಮಹಿಳಾ ಲೋಕ’ (ಸಂಪಾದಿತ) ಇವೆಲ್ಲಾ ನೇಮಿಚಂದ್ರರ ಚಿಂತನಪೂರ್ಣ ಬರಹಗಳ ಮತ್ತಷ್ಟು ವಿಶಾಲತೆ, ಆಳ, ಬದುಕಿನ ಕುರಿತಾದ ವಿಶಾಲ ದೃಷ್ಟಿಗಳನ್ನು ಅಭಿವ್ಯಕ್ತಿಸುತ್ತವೆ. ನೇಮಿಚಂದ್ರರು 'ತರಂಗ' ಮುಂತಾದ ನಿಯತಕಾಲಿಕೆಗಳಲ್ಲಿ ಆಗಾಗ ನಡೆಸಿರುವ ಸಂದರ್ಶನ ಲೇಖನಗಳು, ‘ಉದಯವಾಣಿ’ ಮುಂತಾದ ಪತ್ರಿಕೆಗಳಲ್ಲಿ ಮೂಡುತ್ತಿರುವ ಅಂಕಣಗಳು ಕೂಡಾ ಸುದೀರ್ಘ ವ್ಯಾಪ್ತಿಯ ಆಳದ್ದಾಗಿವೆ.

ಸಾಹಿತ್ಯ/ಕೃತಿಗಳು

ಕಾದಂಬರಿಗಳು:
  • ಯಾದ್ ವಶೇಮ್ (ನವಕರ್ನಾಟಕ ಪಬ್ಲಿಕೇಶನ್ಸ್, ೨೦೦೭)
ಕಥಾಸಂಕಲನ:
  • ನಮ್ಮ ಕನಸುಗಳಲ್ಲಿ ನೀವಿದ್ದೀರಿ
  • ಮತ್ತೆ ಬರೆದ ಕಥೆಗಳು
  • ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ
  • ನೇಮಿಚಂದ್ರರ ಕಥೆಗಳು
ಜೀವನ ಚರಿತ್ರೆ:
  • ಬೆಳಗೆರೆ ಜಾನಕಮ್ಮ ಬದುಕು-ಬರಹ (ಸಂಪಾದಿತ)
  • ನೋವಿಗದ್ದಿದ ಕುಂಚ - ವ್ಯಾನ್ ಗೋ ಜೀವನ ಚಿತ್ರ
  • ಬೆಳಕಿಗೊಂದು ಕಿರಣ ಮೇರಿ ಕ್ಯೂರಿ
  • ಥಾಮಸ್ ಆಲ್ವಾ ಎಡಿಸನ್
  • ಡಾ.ಈಡಾ ಸ್ಕಡರ್
  • ನೊಬೆಲ್ ಪ್ರಶಸ್ತಿ ವಿಜೇತ ಮಹಿಳಾ ವಿಜ್ಙಾನಿಗಳು
  • ನನ್ನ ಕಥೆ... ನಮ್ಮ ಕಥೆ...
  • ಕಾಲು ಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು
  • ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು
ಪ್ರವಾಸ ಕಥನ:
  • ಒಂದು ಕನಸಿನ ಪಯಣ
  • ಪೆರುವಿನ ಪವಿತ್ರ ಕಣಿವೆಯಲ್ಲಿ
ಇತರೆ:
  • ಸಾಹಿತ್ಯ ಮತ್ತು ವಿಜ್ಞಾನ
  • ಬದುಕು ಬದಲಿಸಬಹುದು (ಅಂಕಣ ಸಂಗ್ರಹ)
  • ದುಡಿವ ಹಾದಿಯಲಿ ಜೊತೆಯಾಗಿ (ದುಡಿವ ದಂಪತಿಗಳಿಗಾಗಿ)
  • ಮಹಿಳಾ ಅಧ್ಯಯನ
  • ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್
  • ನಿಮ್ಮ ಮನೆಗೊಂದು ಕಂಪ್ಯೂಟರ್
  • ಮಹಿಳಾ ಲೋಕ (ಸಂಪಾದಿತ)
  • ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ (ಹೇಮಲತಾ ಮಹಿಷಿ ಅವರೊಡನೆ)

ಪ್ರಶಸ್ತಿ ಗೌರವಗಳು:
  • 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ.
  • ‘ಯಾದ್ ವಶೇಮ್’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2007ರ ಗೌರವ ಪ್ರಶಸ್ತಿ ಮತ್ತು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ 2009 ‘ಅಕ್ಕ’ ಪ್ರಶಸ್ತಿ.
  • 'ಮತ್ತೆ ಬರೆದ ಕಥೆಗಳು' ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ವಿಜ್ಞಾನ ಸಾಹಿತ್ಯ, ಮಹಿಳಾ ಅಧ್ಯಯನಕ್ಕಾಗಿ 'ಸಂದೇಶ ಪ್ರಶಸ್ತಿ' ದೊರೆತಿದೆ.
  • 'ಒಂದು ಕನಸಿನ ಪಯಣ' ಕೃತಿಗೆ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಪ್ರಶಸ್ತಿ.
  • ಕನ್ನಡ ಸಾಹಿತ್ಯ ಅಕಾಡೆಮಿ ಜೀವಮಾನದ ಪ್ರಶಸ್ತಿ 
  • ಅತ್ತಿಮಬ್ಬೆ ಪ್ರಶಸ್ತಿ, ೨೦೧೫

***********ಲೇಖಕರ ಪರಿಚಯದ ಮಾಹಿತಿ ಕೃಪೆ: ವಿಕಿಪೀಡಿಯಾ**********

ಪಠ್ಯಾಂಶದಲ್ಲಿರುವ ಕ್ಲಿಷ್ಟಾಂಶಗಳು
(ಸಂಗ್ರಹ: ವಿಶ್ವನಾಥ್ ಕೆ ವಿ. ಸರ್ಕಾರಿ ಪ್ರೌಢಶಾಲೆ, ಶ್ರೀನಿವಾಸಪುರ, ಚನ್ನರಾಯಪಟ್ಟಣ ತಾ, ಹಾಸನ ಜಿಲ್ಲೆ)

೧. ಮ್ಯಾಗ್ಡೊನಾಲ್ಡ್: ೧೯೪೦ ರಲ್ಲಿ  ರಿಚರ್ಡ್‌ ಮತ್ತು ಮುರೈಸ್ ಮ್ಯಾಗ್ಡೊನಾಲ್ಡ್ ಅವರು  ಅಮೇರಿಕದ ಕ್ಯಾಲಿಪೋರ್ನಿಯದಲ್ಲಿ ಸ್ಯಾನ್ ಬರ್ನಾರ‍್ಡಿನೊ ರೆಸ್ಟೋರೆಂಟ್ ತೆರೆದರು. ೩೫೦೦೦ ಕ್ಕೂ ಹೆಚ್ಚು ಕಡೆಗಳಲ್ಲಿ  ಪ್ರಪಂಚದ ಉದ್ದಗಲಕ್ಕೂ ಹರಡಿವೆ. ಇವು ಫಾಸ್ಟ್ ಪುಡ್ ಹೋಟೆಲ್‌ಗಳಾಗಿವೆ. ಇವು ಬಾಗಿದ ಬಿಲ್ಲಿನಾಕಾರದ ಸಂಕೇತಗಳನ್ನು ಇವು ಹೊಂದಿವೆ.ಇಲ್ಲಿ ಎಲ್ಲಾ ತರಹದ ಕುರುಕಲು ತಿಂಡಿಗಳು ಸಿಗುತ್ತವೆ. ಮ್ಯಾಗ್ಡೊನಾಲ್ಡ್ ಸಮೂಹ ಸಂಸ್ಥೆಯಾಗಿ ಸುಮಾರು ೪೪೦೦೦೦ ಉದ್ಯೋಗಿಗಳನ್ನು ಒಳಗೊಂಡಿದೆ.

೨. ಸ್ಯಾಂಡ್‌ವಿಚ್: ಬ್ರೆಡ್‌ನ ಎರಡು ಹೋಳುಗಳ ನಡುವೆ ಹೂರಣಗಳನ್ನು ಒಳಗೊಂಡಿರುವ ಆಹಾರ ಪದಾರ್ಥವೇ ಸ್ಯಾಂಡ್ವಿಚ್. ಈ ಹೂರಣವನ್ನು  ಹಣ್ಣು, ತರಕಾರಿ, ಸೊಪ್ಪು, ಬೆಣ್ಣೆ ಮತ್ತು ಮಾಂಸದಂತಹ ಪದಾರ್ಥಗಳಿಂದ ತಯಾರಿಸುತ್ತಾರೆ. ಸ್ಯಾಂಡ್‌ವಿಚ್ ಕುರಿತು ಮೊದಲಿಗೆ ೧೮ನೇ ಶತಮಾನದಲ್ಲಿ ಇಂಗ್ಲೆಂಡಿನ ಎಡ್ವರ್ಡ್ ಗಿಬ್ಬೊನ್ ಎಂಬಾತ ತಮ್ಮ ನಿಯತಕಾಲಿಕೆಯಲ್ಲಿ  "ಬ್ರೆಡ್ಡು ತುಂಡುಗಳ ನಡುವೆ ಮಾಂಸದ ತುಂಡುಗಳನ್ನು ಹಾಕಿ ತಿನ್ನುವುದು" ಎಂದು ಬರೆದಿದ್ದಾನೆ.

೩.ಬರ್ಗರ್ : ಇದು ಮೂಲತಃ ಅಮೆರಿಕದ ತಿನಿಸಾಗಿದ್ದು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಉಬ್ಬಿದ  ಬನ್ನುಗಳ ಮಧ್ಯೆ ಹಣ್ಣು, ತರಕಾರಿ, ಸೊಪ್ಪು, ಬೆಣ್ಣೆ ಮತ್ತು ಮಾಂಸದಂತಹ ಪದಾರ್ಥಗಳನ್ನು ಹಾಕಿ ತಯಾರಿಸುತ್ತಾರೆ.

೪. ಫ್ರೆಂಚ್ ಫ್ರೈಸ್ : ಅಮೆರಿಕ ದೇಶದ ಸೈನಿಕರು ಬೆಲ್ಜಿಯಂ ದೇಶದ ಮೇಲೆ ಒಂದನೇ ಮಹಾಯುದ್ದದ ಸಂದರ್ಭದಲ್ಲಿ ಯುದ್ದಕ್ಕೆ ಹೋದಾಗ  ಸೈನಿಕರಿಗೆ ತಿನ್ನಲು ಊಟ ಸಿಗದಿದ್ದಾಗ ಆಲುಗೆಡ್ಡೆಯಿಂದ ತಯಾರಿಸಿದ ಬೆರಳಿನಾಕರದ / ಚೌಕಕಾರದ ರೀತಿಯ ಕುರುಕಲು ತಿಂಡಿಯನ್ನು ತಿಂದರು. ಆ ದೇಶದಲ್ಲಿ ಫ್ರೆಂಚ್ ಭಾಷೆ ಇರುವುದರಿಂದ ಅಮೆರಿಕದ ಸೈನಿಕರು ಆ ಕುರುಕಲು ತಿಂಡಿಗೆ ಫ್ರೆಂಚ್ ಪ್ರೈಸ್ ಎಂದು ಕರೆದರಂತೆ. ಆದ್ದರಿಂದ ಆ ತಿಂಡಿಗೆ ಫ್ರೆಂಚ್ ಫ್ರೈಸ್ ಎಂಬ ಹೆಸರು ಬಂತು

೫. ಕೋಲಾ : ಕೋಲಾ ಎಂಬುದು ಮರ. ಇದು ಪಶ್ಚಿಮ ಆಫ್ರಿಕಾ, ಅಮೆರಿಕ ಮತ್ತು ಭಾರತದ ಅಸ್ಸಾಂ ಕಾಡುಗಳಲ್ಲಿ ಕಂಡುಬರುತ್ತದೆ. ಈ ಮರಗಳು ಸುಮಾರು ೨೫ ಮೀಟರ್ ಎತ್ತರ ಬೆಳೆಯುತ್ತವೆ. ಈ ಮರದ ಕಾಯಿಗಳಿಂದ ಮತ್ತು ಹಣ್ಣುಗಳಿಂದ ರಾಸಾಯನಿಕ ವಸ್ತುಗಳೊಂದಿಗೆ ಕೋಲಾವನ್ನು ತಯಾರಿಸುತ್ತಾರೆ. ೧೯ನೇ ಶತಮಾನದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಜಾನ್ ಪೆಂಬರ್ಟನ್ ಈ ಪಾನೀಯವನ್ನು ಆವಿಷ್ಕರಿಸಿದನು. ಮೊದಲಿಗೆ ಇದೊಂದು ಔಷಧ ನಂತರ ಪಾನೀಯ.

೬. ಸ್ಟಲ್ ವಾಟರ್ : ಸ್ಟಲ್ ವಾಟರ್ ಎಂದರೆ ತೊಟ್ಟಿಯಲ್ಲಿ ತುಂಬಿದ ನೀರು.ಈ ನೀರು ಸಮುದ್ರದ ನೀರನ್ನು ಶುದ್ದೀಕರಿಸಿ ಮಾಡಿದ್ದಾಗಿದೆ. ದಾರಿಯಲ್ಲಿ ಹೋಗುವ ಪ್ರಾಣಿಗಳು(ಕುದುರೆಗಳು)ಕುಡಿಯಲು ಈ ನೀರನ್ನು ಉಪಯೋಗಿಸುತ್ತಾರೆ. ಈ ನೀರನ್ನು ಹಾರ್ರ‍್ಸ‍ ವಾಟರ್ ಎಂದೂ ಕರೆಯುತ್ತಾರೆ.

೭. ಸ್ಪಾರ್ಕ್ಲಿಂಗ್ ವಾಟರ್ : ಹೊಳೆಯುವ ನೀರನ್ನು ಸ್ಪಾರ್ಕ್ಲಿಂಗ್ ವಾಟರ್ ಎಂದು ಕರೆಯುತ್ತಾರೆ. ಇದಕ್ಕೆ ಸೋಡಾ ವಾಟರ್, ಕಾರ್ಬೋನೆಟೆಡ್ ವಾಟರ್ ಎಂದೂ ಕರೆಯುತ್ತಾರೆ. ಉದಾಹರಣೆಗೆ ಕೋಕೋ ಕೋಲಾ, ಸ್ಪ್ರೈಟ್, ಸೆವೆನ್ ಅಪ್.

೮. ಸೈಕಾಲಜಿಕಲ್ ವಾರ್ ಫೇರ್ : ಜನರನ್ನು ಒಂದು ವಿಷಯದ ಅಥವಾ ಒಂದು ವಸ್ತುವಿನ ಕಡೆಗೆ ಮುಗಿ ಬೀಳುವಂತೆ ಮನೋವೈಜ್ಞಾನಿಕವಾಗಿ  ನಂಬಿಕೆ ಉಂಟು ಮಾಡುವುದೇ ಸೈಕಾಲಜಿಕಲ್ ವಾರ್ ಫೇರ್. ವಿವಿಧ ಕಂಪನಿಗಳು ತಾವು ತಯಾರಿಸಿದ ವಸ್ತುಗಳನ್ನು ಜನರು ಕೊಂಡುಕೊಳ್ಳುವ ಹಾಗೆ ಮನಸ್ಸು ಮಾಡಿಸುವುದೇ ಸೈಕಾಲಜಿಕಲ್ ವಾರ್ ಫೇರ್.  ಉದಾಹರಣೆಗೆ  ಜಾಹೀರಾತುಗಳು.

೯.ಜಾಗತೀಕರಣ: ಇಡೀ ಜಗತ್ತೇ ಒಂದು ಎಂದು ಅರ್ಥ. ಜಗತ್ತೇ ಒಂದು ಊರು ಎಂದೂ ಹೇಳಬಹುದು. ಜಾಗತೀಕರಣವೆಂದರೆ ಒಂದು ದೇಶದ ಆರ್ಥಿಕತೆಯನ್ನು ಜಾಗತಿಕ ಆರ್ಥಿಕತೆಯೊಂದಿಗೆ ಸಮನ್ವಯ ಮಾಡುವ ಒಂದು ಪಕ್ರಿಯೆ.


************


8 ಕಾಮೆಂಟ್‌ಗಳು:

  1. ಮಾಹಿತಿ ತುಂಬಾ ಉಪಯುಕ್ತವಾಗಿವೆ. ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  2. ಸೆಪ್ಟೆಂಬರ್ 23,2022 8:00 ಪ್ರೂವಾಹಹ್ನ ಪ್ರತ್ಯುತ್ತರ.

    ಪ್ರತ್ಯುತ್ತರಅಳಿಸಿ