ನನ್ನ ಪುಟಗಳು

09 ಮೇ 2018

'ಯಮನ ಸೋಲು'-ದೃಶ್ಯ-3

ದೃಶ್ಯ ೩
(ಅದೇ ಅರಣ್ಯ. ಸಂಧ್ಯಾಕಾಲದ ಸಮಯ ಯಮದೂತ ಯಕ್ಷ ಬರುತ್ತಾರೆ.)
ದೂತ
ಬೈಗಾಗುತಿದೆ ನೋಡು. ನಮ್ಮ ಕಜ್ಜದ ಹೊತ್ತು
ಬಳಿಯಾಗುತಿದೆ, ಯಕ್ಷ.
ಯಕ್ಷ
ಮುದ್ದಾದ ಪ್ರೇಮಿಗಳು!
ಶುದ್ಧಾತ್ಮರಾಗಿಹರು!
ದೂತ
ಹೌದು. ಆದರೇಂ?
ಯಮನೂರು ದಯೆಯ ಬೀಡಲ್ಲ. ನಿಷ್ಪಕ್ಷ —
ಪಾತವಾಗಿಹ ಧರ್ಮದೂರು. ಯಮಪಾಶ ಕಂಬನಿಗೆ
ಕರಗುವಂತಹುದಲ್ಲ. ರೋದನಕೆ ಮರುಳಾಗ
ದೆಂದಿಗೂ ಸಂಖ್ಯೆಯಿಲ್ಲದ ವಿಧವೆಯರ ಕಣ್ಣ
ನೀರಿನೊಳು ನಲಿನಲಿದು ಮಜ್ಜನಂಗೈದ
ಪಾಶವದು. ಗಣನೆಯಿಲ್ಲದ ಮಾತೆಯರ ದುಃಖ
ವಾಹಿನಿಯೊಳಾಳ್ದು ಕಲ್ಲಾದ ಪಾಶವದು. ೧೦
ಕೋಟಿ ವೀರರ ರಕ್ತವಂ ಕುಡಿದು ಕೊಬ್ಬಿರುವ
ಪಾಶ. ಶತಕೋಟಿ ನೀರೆಯರ ಶಾಪಗಳ
ಸಹಿಸಿ ಪಾಷಾಣವಾಗಿಹ ಪಾಶ. ಋಷಿವರರ,
ಯೋಗಿಗಳ, ಅವತಾರಪುರುಷರನು ವಿನಯ
ಭಕ್ತಿಗಳಿಂದ ಎಳೆದೊಯ್ದ ಪಾಶವದು. ಇಂತಿರುವು
ದೀ ನೀರ ನೀರೆಯರ ಗೋಳಿಗಂಜುವುದೆ?
ಯಕ್ಷ
ಯಾರೊ ಬರುತಿಹರಲ್ಲಿ ವೃಕ್ಷಗಳ ಮರೆಯಲ್ಲಿ:
ಅಡಗೋಣ!
ದೂತ
ನಿಲ್ಲಲ್ಲಿ, ಯಕ್ಷ. ಅದೃಶ್ಯ
ರಾವುಗಳು; ಅಶ್ರುತವು ಎಮ್ಮ ನುಡಿ. ಅವರೇ
ಬರುತಿಹರು. ಅರುಗಾಗಿ ನಿಲ್ಲು. ೨೦
(ಪಕ್ಕಕ್ಕೆ ಹೋಗುತ್ತಾರೆ. ಸತ್ಯವಾನ್ ಸಾವಿತ್ರಿಯ ಕೈಹಿಡಿದು ಬರುತ್ತಾನೆ.)
ಸತ್ಯವಾನ್
ಪ್ರಯತಮೆ,ಸಂಜೆ ಸನ್ನಿಹಿತವಾಗುತಿದೆ.
ನೋಡಲ್ಲಿ, ಭಾಸ್ಕರನ ತಸ್ಕರನ ತೆರದಿಂದ
ಅಸ್ತಾಚಲದ ಶಿಖರದಲ್ಲಿಳಿದಿಳಿದು ಹೋಗು —
ತಿಹನು. ನೋಡದೋ ಸಂಜೆವೆಣ್ಣರಚಿರುವ
ಕುಂಕುಮದ ಓಕುಳಿಯ ಹೋಲುವಾ ಮುಗಿಲೊಡ್ಡು!
ಹಿಂದಕಾಗುವೆ ಏಕೆ? ಬಹಳ ಬಳಲಿದೆ ಇಂದು.
ನಾ ನಿನ್ನ ಕರೆತಂದುದೇ ತಪ್ಪು.
ಸಾವಿತ್ರಿ
(ಪ್ರಾಣೇಶ,)
ಪತಿಯ ಪದದೊಳು ನಡೆವ ಸತಿಗೆ ಬಳಲಿಕೆ ಎಲ್ಲಿ?
ಕಷ್ಟವೆ ಮಹಾಪ್ರಸಾದ ಎಂದು ತಿಳಿದಿರುವೆ
ನಾನು.
ಸತ್ಯವಾನ್
ಆ ಜಿಂಕೆಗಳ ಗುಂಪ ನೋಡಿದೆಯಾ, ೩೦
ತರಳೆ! ಅಂಜದೇ ಬೆದರದೇ ಕತ್ತೆತ್ತಿ
ನಮ್ಮನೇ ನೋಡುತಿವೆ, ನೋಡು.
ಸಾವಿತ್ರಿ
ಸತ್ಯೇಂದ್ರ,
ಪಕ್ಕದೊಳು ಹುಲಿಯಿದ್ದರದನು ಅವು ಬಲ್ಲುವೇ?
ಯಾರು ಬಲ್ಲರು? ನಾವು ಅವರ ತಿಳಿವಂತೆಯೇ
ಅವುಗಳೆಮ್ಮನು ತಿಳಿಯುವುವೊ ಏನೊ!
ಸತ್ಯವಾನ್
ಸಾವಿತ್ರಿ,
ಇದ್ದಕಿದ್ದಂತೆ ತಲೆ ತಿರುಗುತಿಹುದಲ್ಲ!
ಕಾರಣವನರಿಯೆ; ಸ್ವಲ್ಪ ಹಿಡಿದುಕೊ ನನ್ನ.
(ಸಾವಿತ್ರಿ ಹಿಡಿದುಕೊಳ್ಳುತ್ತಾಳೆ)
ಸಾವಿತ್ರಿ
(ಸ್ವಗತ)
ಹೇ ದೇವ, ಹೇ ದೇವ, ಪತಿಯ ಕಾಪಾಡು.
ನಿರ್ಗತಿಕಳಾಗಿಹೆನು.
(ಗಟ್ಟಿಯಾಗಿ)
ಸತ್ಯೇಂದ್ರ! ಸತ್ಯೇಂದ್ರ!
ಸತ್ಯವಾನ್
ತಲೆನೋವು ಹೆಚ್ಚತ್ತಲಿದೆ ರಮಣಿ; ಮಲಗುವಂ —  ೪೦
ತಾಗುತಿದೆ. ಒರಗಿಕೊಳ್ಳವೆ ಸ್ವಲ್ಪ, ಸಾವಿತ್ರಿ.
(ಸಾವಿತ್ರಿಯ ತೊಡೆಯ ಮೇಲೆ ತಲೆಯನಿಟ್ಟು ಮಲಗುತ್ತಾನೆ.)
ನಿನ್ನಂಕವೆನಗಿಂದು ತಲೆಗಿಂಬು. ನಾಚಿಕೆಯೆ,
ಸಾವಿತ್ರಿ, ನಿನಗೆ?
ಸಾವಿತ್ರಿ
ಇಲ್ಲ ಮಲಗೆನ್ನಿನಿಯ.
(ಸ್ವಗತ)
ಶಿವ ಸೀವಾ, ಮೃತ್ಯುವಿನ ಮುಂದೆಯೂ ನಾಚಿಕೆಯೆ?
(ಗಟ್ಟಿಯಾಗಿ)
ಪ್ರಿಯತಮ, ಏನಾಗುತಿದೆ ಹೇಳು.
ಸತ್ಯವಾನ್
ಏನಿಲ್ಲ,
ಗಾಢ ನಿದ್ದೆಯು ಬರುತಲಿದೆ, ರಮಣಿ,
ಸಾವಿತ್ರಿ
ಮಲಗು,
ಸತ್ಯೇಂದ್ರ.
(ಸ್ವಗತ)
ಜವನಿದ್ದೆಯಾಗದಿರಲೀ ನಿದ್ದೆ!
(ಗಟ್ಟಿಯಾಗಿ)
ನಾನು ತಲೆಯುಜ್ಜುವೆನು, ಮಲಗು.
(ಮಲಗುತ್ತಾನೆ.)
ಎಲೆ ವನಸ್ಥಗಳಿರ,
ಎಲೆ ನೀಲ ಗಗನವೇ, ಎಲೆ ತಾಯೆ ಭೂದೇವಿ,
ಕರುಣಮಯ ನಿರ್ಜರರೆ, ನನ್ನ ನೆರವಿಗೆ ಬನ್ನಿ. ೫೦
ನಿಮ್ಮ ಆಶಿರ್ವಾದಳ ತನ್ನಿ. ನನ್ನೆದೆಯ
ಜೀವದಂಬುಧಿಯಿಂದು ಬತ್ತಿಹೋಗುವ ಕಾಲ
ಬಂದಿಹುದು. ಚೈತನ್ಯಮಯರಲ್ಲವೇ ನೀವು?
ಜಡರಲ್ಲ, ಜಡರಲ್ಲ, ನಿಮಗು ವೇದನೆಯುಂಟು!
ಗೊರವಂಕವೇ, ನನ್ನ ದುಃಖವನು ಲೆಕ್ಕಿಸದೆ
ಬರಿದೆ ಹಾಡುವೆ ಏಕೆ? ಕೋಗಿಲೆಯೆ, ಮೃತ್ಯುವ —
ನ್ನೋಡಿಸುವ ಮಂತ್ರವನು ಜಪಿಸು. ಪತಿವ್ರತಾ
ಧರ್ಮವೇ, ಬಂದೆನ್ನ ಕಾಪಾಡು. ಸತ್ಯವೇ,
ಸತ್ಯವಾನನ ಸಖನೇ, ಬಾ ಬೇಗ, ಕಾಪಾಡು.
ತರು ಗುಲ್ಮ ಲತೆಗಳಿರ, ವನಗಳಿರ, ಬಂದೆನ್ನ ೬೦
ರಕ್ಷಸಿರಿ.
(ಬಿಸುಸುಯ್ದು)
ನನ್ನ ಗೋಳನು ಕಂಡು ಮರುಗುವವ —
ರಾರಿಲ್ಲ! ವಿಶ್ವವೆ ಅಲಕ್ಷದಿಂದಿಹುದು!
ಸತ್ಯೇಂದ್ರ, ಮಾತಾಡು! ಸತ್ಯವಾನ್, ಮಾತಾಡು!
ಪರಮೇಶ, ಪರಮೇಶ, ಕಾಪಾಡು, ಕಾಪಾಡು!


*************



1 ಕಾಮೆಂಟ್‌: